Connect with us

ನೆಲದನಿ

‘ಶರಣ ಶ್ರೇಷ್ಠ ಅಂಬಿಗರ ಚೌಡಯ್ಯ’ ರ ಬಗ್ಗೆ ನೀವಿಷ್ಟು ತಿಳಿಯಲೇ ಬೇಕು..!

Published

on

ತೀಕ್ಷ್ಣವಚನಗಳಿಂದ ಶರಣರ ವಚನಕ್ರಾಂತಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ಅಂಬಿಗರ ಚೌಡಯ್ಯ. ಬಸವ ಬಾನಂಗಳದಲ್ಲಿ ಶಿವಶರಣರೆಂಬ ಅಮೂಲ್ಯ ನಕ್ಷತ್ರಗಳು ಮಿನುಗಿದವು. ಈ ನಕ್ಷತ್ರಗಳಲ್ಲಿ ಧ್ರುವತಾರೆಯಂತೆ ಮಿನುಗಿದವರು ಚೌಡಯ್ಯ. ನ್ಯಾಯನಿಷ್ಠುರಿ, ಖಂಡಿತವಾದಿ ಎನಿಸಿದ ಅವರ ಜಯಂತಿಯನ್ನು ಇದೇ ಜ. 21 ಮಂಗಳವಾರದಂದು ರಾಜ್ಯಾದ್ಯಂತ ಆಚರಿಸಲಾಯಿತು.

ಭಾರತದ ಸಂವಿಧಾನ, ಸಂಸತ್ತು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಸುಮಾರು ಏಳು ಶತಮಾನಗಳಷ್ಟು ಮೊದಲೇ ಮುನ್ನುಡಿ ಬರೆದವರು 12ನೇ ಶತಮಾನದ ಶಿವಶರಣರು. ಪ್ರಜೆಗಳಿಗೆ ಪರಮಾಧಿಕಾರ, ವ್ಯಕ್ತಿಸ್ವಾತಂತ್ರ್ಯ ಹಾಗೂ ಮೂಲಭೂತ ಹಕ್ಕುಗಳಿಗೆ ಸರ್ವಸಮಾನತೆಯೆಂಬ ಕನ್ನಡಿ ಹಿಡಿದವರೇ ಅವರು. ತಮ್ಮ ವಚನಗಳ ಮೂಲಕ ಶರಣರು ಅಂದು ಸಾರಿದ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಶಿವಪುರದಲ್ಲಿ (ಇಂದಿನ ಚೌಡದಾನಪುರ) ಜನಿಸಿದ ಈ ಮಹಾಶಿವಶರಣರಿಗೆ ಉದ್ದಾಲಕರೆಂಬ ಗುರುಗಳು. ‘ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ’ ಎಂಬ ವಚನಕ್ಕೆ ತಕ್ಕಂತೆ ಇರುವ ಧರ್ಮಪತ್ನಿ ಮತ್ತು ಪುರವಂತ ಎಂಬ ಪುತ್ರ. ಸದ್ಗುರುವಿನ ಕೃಪಾಕಟಾಕ್ಷದಿಂದ ಶ್ರೇಷ್ಠ ತತ್ವಜ್ಞಾನಿಯಾದ ಇವರು ವಚನಗಳನ್ನು ರಚಿಸಿ ಶಿವಶರಣರ ಪಂಕ್ತಿಯಲ್ಲಿ ಅಗ್ರಸ್ಥಾನಕ್ಕೇರಿದರು.

ಚೌಡದಾನಪುರದಲ್ಲಿ ಪೂರ್ವ ಪಶ್ಚಿಮವಾಹಿನಿಯಾಗಿ ಹರಿಯುತ್ತಿರುವ ತುಂಗಭದ್ರಾನದಿಯಲ್ಲಿ ದೋಣಿ ಮೂಲಕ ನದಿ ದಾಟಿಸುವ ಕಾಯಕ ಮಾಡುತ್ತ ವಚನಗಳನ್ನು ರಚಿಸಿದ್ದಾರೆ. ಗುರುವಿನ ಘನಕೃಪೆಗೆ ಪಾತ್ರರಾಗಿ ಅವರ ಮೂಲಕ ಲಿಂಗಾಂಗ ಸಾಮರಸ್ಯವನ್ನರಿತು ಅಪಾರ ಪಾಂಡಿತ್ಯವನ್ನು ಗಳಿಸಿದರು. ಕಲ್ಯಾಣದ ಕೀರ್ತಿಯನ್ನು ಕೇಳಿ ಅನುಭವಮಂಟಪಕ್ಕೆ ಬಂದ ಈ ಶರಣದಂಪತಿಯನ್ನು ಶರಣ ಪ್ರಮಥರೆಲ್ಲ ಆದರದಿಂದ ಬರಮಾಡಿಕೊಂಡರಂತೆ. ಬಸವಪ್ರಭುವನ್ನು ಕಂಡು ಆನಂದಪರವಶರಾಗಿ ಭಕ್ತಿಯಿಂದ ಕೈ ಮುಗಿದ ಚೌಡಯ್ಯನವರು;

‘ಬಸವಣ್ಣನೇ ಭಕ್ತ ಪ್ರಭುದೇವರೇ ಜಂಗಮರು
ಇಂತೆಂಬ ಭೇದವಿಲ್ಲಯ್ಯ, ಅರಿವೇ ಗುರು,
ಗುರುವೇ ಪರಶಿವನು ಇದು ತಿಳಿದವನೇ
ಪರಂಜ್ಯೋತಿಯೆಂದ ಅಂಬಿಗರ ಚೌಡಯ್ಯ’

ಎಂಬ ವಚನದ ಮೂಲಕ ಮನಸಾರೆ ಹೊಗಳಿದ್ದಾರೆ. ಶಿವಶರಣರ ಸಂಗದಲ್ಲಿ ಕಾಲಕಳೆದು ಪರಿಪಕ್ವರಾದ ಇವರು ರಚಿಸಿದ ವಚನಗಳು ಹಸಿಗೋಡೆಯಲ್ಲಿ ಹರಳು ಎಸೆದಂತಿವೆ. ಇವರ ವಚನಗಳನ್ನು ಕಂಡ ಕವಿ ಕಾವ್ಯಾನಂದರು ‘ನಿಜದ ನಗಾರಿ ನಿರ್ಭಯತೆಯ ಭೇರಿ ಈ ಅಂಬಿಗರ ಚೌಡಯ್ಯ’ ಎಂದಿದ್ದಾರೆ. ಮುಪ್ಪಿನ ಷಡಕ್ಷರಿಯವರು ತಮ್ಮ ಸುಬೋಧ ಸಾಗರದಲ್ಲಿ ‘ಅಂಬಿಗರ ಚೌಡಯ್ಯನ ಮುಂಬಾಗಿಲನ್ನು ಕಾಯುವ ನಂಬಿಗೆಯ ಸೇವಕರು ಕುಂಭಿನಿಯೊಳಗಿನ್ನು ಸರಿಯದಾರು?’ ಎಂದು ಹಾಡಿ ಹರಸಿದ್ದಾರೆ.

ಘನಲಿಂಗದೇವನು (1480) ‘ಡೋಹರ ಕಕ್ಕಯ್ಯ, ಮಾದಾರ ಚೆನ್ನಯ್ಯ, ಅಂಬಿಗರ ಚೌಡಯ್ಯಯಿಂತಿಪ್ಪ ಶಿವಶರಣರ ಮನೆ ಬಾಗಿಲನಿಕ್ಕುವ ಸೊಣಗನ ಮಾಡಿ ಎನ್ನಿರಿಸಯ್ಯ ಎಂದು ತಮ್ಮ ವಚನವೊಂದರಲ್ಲಿ ಹೇಳಿರುವುದೇ ಇದಕ್ಕೆ ನಿದರ್ಶನವಾಗಿದೆ. ಮಹಾಕವಿ ಷಡಕ್ಷರಿಯವರು ತಮ್ಮ ‘ಬಸವರಾಜ ವಿಜಯ’ದಲ್ಲಿ ‘ನಿಡುಗುಡಿಮಾರನಂಬಿಗರ ಚೌಡಯ್ಯ’ ಎಂದು ಸ್ಮರಿಸಿದ್ದರೆ, ಮಹಾಲಿಂಗ ವಿರಚಿತ ಗುರುಬೋಧಾಮೃತದ ‘ಕುಂಬಾರ ಗುಂಡಯ್ಯ, ಅಂಬಿಗರ ಚೌಡಯ್ಯ, ಕೆಂಭಾವಿಯೊಳಗೆ ಮೆರೆವ ಬೋಗಣ್ಣನಿಗೆ ಸಂಭ್ರಮದೊಳೆರಗಿ ನಮಿಸುವೆ’ ಎಂಬ ಪದಗಳು ಹೃದಯರ್ಸಯಾಗಿವೆ.

ಮಹಾಶಕ್ತಿಸಂಪನ್ನರಾದ ಅಂಬಿಗರ ಚೌಡಯ್ಯನವರ ಮಹಿಮೆಯಿಂದ ಸರ್ಪ ಕಚ್ಚಿ ಮೃತಪಟ್ಟ ಸೈನಿಕನು ಮರುಜೀವ ಪಡೆದ. ಕ್ಷಯ, ಕುಷ್ಠರೋಗಿಗಳು ಗುಣಮುಖರಾದರು. ಅವರು ನುಡಿದ ವಾಣಿಯಿಂದ ಭಕ್ತರ ಸಕಲ ಬೇಡಿಕೆಗಳು ಈಡೇರಿದವು. ಚೌಡಯ್ಯನವರ ಪಾರಮಾರ್ಥ ಸಾಧನೆಯನ್ನು ಕಂಡು ಮಾರುಹೋದ ಗುತ್ತಲ ಅರಸನು ಅವರಿಗೆ ದಾಸೋಹಕ್ಕೆಂದು ಶಿವಪುರಕ್ಕೆ ಹೊಂದಿಕೊಂಡಿರುವ ಭೂಮಿಯನ್ನು ಕಾಣಿಕೆಯಾಗಿ ನೀಡಿದನು.

ತಮಗೆ ನೀಡಿದ ಈ ಭೂಮಿಯನ್ನು ಚೌಡಯ್ಯನವರು ತಮ್ಮ ಮಗ ಪುರವಂತ ಹಾಗೂ ಶಿವದೇವರಿಗೆ ದಾನವಾಗಿ ನೀಡಿದರು. ಅದೇ ಕಾರಣಕ್ಕಾಗಿ ಶಿವಪುರಕ್ಕೆ ‘ಚೌಡಯ್ಯ ದಾನಪುರ’ ಎಂಬ ಹೆಸರು ಬಂದಿತೆಂದು ಹೇಳಲಾಗುತ್ತಿದ್ದು, ಅದೇ ಇಂದು ಚೌಡದಾನಪುರವಾಗಿದೆ. ಬಸವಣ್ಣನವರ ಗರಡಿಯಲ್ಲಿ ಪಳಗಿದ ಇವರ ಅನುಭವವು ಅಮೃತಧಾರೆಯಾಗಿ ವಚನಗಳ ರೂಪದಲ್ಲಿ ಹರಿದುಬಂದಿವೆ. ನಿಜವಾದ ಭಕ್ತನಾರು? ಎಂಬುದನ್ನು ಕುರಿತು ತಮ್ಮ ವಚನದಲ್ಲಿ

‘ಓಡುವಾತ ಲೆಂಕನಲ್ಲ ಬೇಡುವಾತ ಭಕ್ತನಲ್ಲ
ಓಡಲಾಗದು ಲೆಂಕನು, ಬೇಡಲಾಗದು ಭಕ್ತನು
ಓಡೆನಯ್ಯ, ಬೇಡೆನಯ್ಯ ಎಂದ ಅಂಬಿಗರ ಚೌಡಯ್ಯ’ಎಂದು ಸಾರಿದ್ದು ಅಮೋಘವಾಗಿದೆ.

ಪರಮಾತ್ಮನ ನಿಜಸ್ವರೂಪವನ್ನು ಕುರಿತು

ಅಸುರ ಮಾಲೆಗಳಿಲ್ಲ, ತ್ರಿಶೂಲ ಡಮರುಗವಿಲ್ಲ
ಬ್ರಹ್ಮಕಪಾಲವಿಲ್ಲ ಭಸ್ಮಭೂಷಣನಲ್ಲ
ವೃಷಭ ವಾಹನನಲ್ಲ, ಋಷಿಯ ಮಗಳೊಡನಿರ್ದಾತನಲ್ಲ
ಎಸಗುವ ಸಂಸಾರದ ಕುರುಹಿಲ್ಲದಾತಂಗೆ
ಹೆಸರಾವುದೆಂದಾತ ಅಂಬಿಗರ ಚೌಡಯ್ಯ’
ಎಂದಿದ್ದಾರೆ.

ಸ್ಥಿತಪ್ರಜ್ಞರಾದ ಅವರು ಕೊನೆಯಲ್ಲಿ ಚೌಡದಾನಪುರದ ನದಿಯ ದಡದಲ್ಲಿ ಸಮಾಧಿಸ್ಥರಾದರೆಂದು ತಿಳಿದುಬರುತ್ತದೆ. ಆದ್ದರಿಂದ ಈ ನದಿದಡದಲ್ಲಿರುವ ದಿಬ್ಬದ ಮೇಲಿರುವ ಸಮಾಧಿಯನ್ನು ‘ಅಂಬಿಗರ ಚೌಡಯ್ಯನವರ ಸಮಾಧಿ’ ಎಂದು ಗುರುತಿಸಲಾಗಿದೆ. ಪ್ರತಿವರ್ಷ ಅಂಬಿಗರ ಚೌಡಯ್ಯನವರ ಜಯಂತಿಯ ನಿಮಿತ್ಯ ಸಂಕ್ರಮಣದ ಪರ್ವ ಕಾಲದಲ್ಲಿ ಬಹು ಸಡಗರ ಸಂಭ್ರಮದಿಂದ ಇಲ್ಲಿ ಜಾತ್ರಾಮಹೋತ್ಸವವು ಜರಗುತ್ತಲಿತ್ತು. ಈಗ ಪ್ರತಿವರ್ಷ ಜನವರಿ 21ರಂದು ಅಂಬಿಗರ ಚೌಡಯ್ಯನವರ ಜಯಂತಿಯನ್ನು ಆಚರಿಸಲಾಗುತ್ತದೆ.

ಹನ್ನೆರಡನೇ ಶತಮಾನ ಎನ್ನುವುದು ಈಗಲೂ ನಮ್ಮನ್ನು ಭಾವನಾತ್ಮಕವಾಗಿಯೇ ಆಳುತ್ತಿದೆ. ಆಚರಣೆಗಳ ಭಾರಕ್ಕೆ ಬಗ್ಗಿ ಹೋಗಿದ್ದ ಸನಾತನ ಸಂಸ್ಕೃತಿಯಲ್ಲಿ ಬೆಳೆದಿದ್ದ ವರ್ಣಕಳೆಯನ್ನು ಅಂದು ವಚನ ಸಂಸ್ಕೃತಿಯೆಂಬ ಧಾರ್ಮಿಕ ಕ್ರಾಂತಿಯು ಆವರಿಸಿಕೊಂಡಿತ್ತು. ತನ್ನ ಸರಳವಾದ ಭಾಷೆಯ ಮೂಲಕ ಜನರ ನಾಡಿ ಮಿಡಿತದೊಳಗೆ ಮಿಳಿತವಾಗಿ ಎಲ್ಲ ವರ್ಗಗಳ ವಿವೇಕ ಜಾಗೃತಿಯ ಕೆಲಸವನ್ನು ಅದು ಪರಿಣಾಮಕಾರಿಯಾಗಿ ಮಾಡಿತ್ತು. ಆ ಧಾರ್ಮಿಕ ಕ್ರಾಂತಿಗೆ ಶೋಷಿತ ವರ್ಗಕ್ಕೆ ಬೆನ್ನೆಲುಬಾಗುವ ಆಶಯವಷ್ಟೇ ಇರಲಿಲ್ಲ. ಎಲ್ಲೆಡೆಯೂ ಸಮಾನತೆಯ ತತ್ವವನ್ನು, ಜಾತಿ ರಹಿತ ವ್ಯವಸ್ಥೆಯನ್ನು ನಿರ್ಮಾಣ ಮಾಡುವ ನಿಷ್ಕಳಂಕ ಕಾಳಜಿಯೂ ಅದಕ್ಕಿತ್ತು.

ಬಸವಣ್ಣ, ಅಲ್ಲಮ ಪ್ರಭು, ಅಕ್ಕಮಹಾದೇವಿ, ಮಾದಾರ ಚೆನ್ನಯ್ಯ, ಹಡಪದ ಅಪ್ಪಣ್ಣ, ಒಬ್ಬರೇ ಇಬ್ಬರೇ! ಹತ್ತಾರು ಶಿವಶರಣರು ವರ್ಣತಂತುಗಳನ್ನು ಕಿತ್ತೊಗೆಯಲು ಪಣತೊಟ್ಟು ಸಮಾಜದ ಅಂತ:ಸತ್ವವನ್ನು ಬಡಿದೆಬ್ಬಿಸಿದ್ದರು. ವಚನ ಸಂಸ್ಕೃತಿಯು ಸಮಾಜಕ್ಕೆ ನೀಡಿದ ಕ್ರಿಯಾತ್ಮಕ ಬೆರಗು, ಒದಗಿಸಿದ ಆರೋಗ್ಯಕರ ಸಂದೇಹ ಮತ್ತು ಹರವಿಟ್ಟ ಅವಿಚ್ಛಿನ್ನ ದೃಢತೆಯ ಅಭಿವ್ಯಕ್ತಿ ಇಂದಿಗೂ ಆದರ್ಶಯುತವೇ ಆಗಿ ಉಳಿದಿದೆಯೆಂದರೆ ಅದು ನಮ್ಮ ಭಾಷೆಯ, ಸಂಸ್ಕೃತಿಯ ಉತ್ಕೃಷ್ಟತೆಯನ್ನು ಆ ದಿನಗಳಲ್ಲಿಯೇ ಸ್ಪರ್ಶಿಸಿದ್ದಲ್ಲಿ ಯಾವುದೇ ಸಂದೇಹ ಇಲ್ಲ.

ಇಂತಹ ಶರಣ ಸಂಸ್ಕೃತಿಯಲ್ಲಿ ಸಾಗಿಹೋದ ಮಹಾಚೇತನಗಳ ಕುರಿತು ಸ್ವಲ್ಪ ಸಂಯಮದೊಂದಿಗೆ ಅವಲೋಕಿಸಿದಾಗ ಒಬ್ಬ ವ್ಯಕ್ತಿ ನಮ್ಮನ್ನು ಬಿಟ್ಟೂಬಿಡದ ರೀತಿಯಲ್ಲಿ ಆವರಿಸಿಕೊಂಡು ಅಂತರಂಗವನ್ನು ತಟ್ಟುತ್ತಾನೆ. ರಭಸ ನೀರಿನ ವಿರುದ್ಧ ಈಜುವ ಹಾಯಿದೋಣಿ, ತೆಪ್ಪದಲ್ಲಿ ಕುಳಿತ ಅಮಾಯಕ ಜನ, ಧೀರನಂತೆ ನಿಂತ ಹರಿಗೋಲು ಕೈಯಲ್ಲಿ ಹಿಡಿದ ಆ ಅಂಬಿಗ- ಹೀಗೆಯೇ ಆತನನ್ನು ನಾವು ಕಲ್ಪಿಸಿಕೊಳ್ಳಬೇಕು. ಆ ಅಂಬಿಗನ ಕೈಯಲ್ಲಿದ್ದದ್ದು ಅಂತಿಂತಹ ಹರಿಗೋಲಲ್ಲ. ಅದು ತನ್ನ ಜೊತೆಗಿದ್ದವರನ್ನು ಮನೋಸ್ವಾತಂತ್ರ್ಯದ ನೆಲೆಗೆ ಕರೆದೊಯ್ಯುವ ಭರವಸೆಯ, ಬಂಡಾಯದ ಹರಿಗೋಲು ಎನ್ನುವುದನ್ನೂ ನಾವು ನೆನಪಿನಲ್ಲಿಟ್ಟುಕೊಳ್ಳಬೇಕು.

ಅಂಬಿಗರ ಚೌಡಯ್ಯ ವಚನಕಾರರರೆಲ್ಲರಲ್ಲಿ ಇದ್ದ ಸುಶಿಕ್ಷವಾದ ಅಭಿವ್ಯಕ್ತಿ ಮಾರ್ಗವನ್ನು ತುಳಿಯಲಿಲ್ಲ. ತನ್ನ ಹತಾಶೆ, ನೋವು, ಬೇಗುದಿ ಎಲ್ಲವನ್ನೂ ಆತ ತನ್ನದೇ ತೀಕ್ಷ್ಣಪದಗಳ ಆಡುನುಡಿಯ ಮೂಲಕ ನಿರ್ಭಿಡೆಯಿಂದ ಬೆತ್ತಲಾಗಿಸುತ್ತಾ ಹೋದ. ಅಲ್ಲದೇ ಎಲ್ಲಾ ವಚನಕಾರರ ಹಾದಿಯಲ್ಲಿ ತಾನು ನಡೆಯದೇ ಇಷ್ಟ ದೈವದ ಬದಲಿಗೆ ತನ್ನದೇ ಹೆಸರನ್ನು ತನ್ನ ವಚನಗಳ ಅಂಕಿತವಾಗಿ ಬಳಸಿಕೊಂಡು ಸಮಾಜದ ಓರೆಕೋರೆಗಳನ್ನು ತಿದ್ದುವ ಯತ್ನ ಮಾಡಿದ. ಅಂಬಿಗರ ಚೌಡಯ್ಯ ನಿಜಾರ್ಥದಲ್ಲಿ ಬಂಡಾಯ ವಚನ ಸಂಸ್ಕೃತಿಯ ಹರಿಕಾರ. ವಚನ ಸಂಸ್ಕೃತಿಯ ಆ ತರ್ಕದ ಲೆಕ್ಕಾಚಾರಗಳಿಂದ ದೂರವುಳಿದು ಗಟ್ಟಿ ಮೌಲ್ಯಗಳ, ನಿರ್ಭಿಡೆಯ ನುಡಿಗಟ್ಟುಗಳ ಮೂಲಕ ಸಮಾಜದ ಓರೆಕೋರೆಗಳನ್ನು ಬೆತ್ತಲೆಯಾಗಿಸಿದ ಚೌಡಯ್ಯನ ಆಕ್ರೋಶದ ಅಭಿವ್ಯಕ್ತಿಯ ಹಾದಿ ಇಂದಿಗೂ ನಮ್ಮನ್ನು ಬೆಚ್ಚಿಸಿ ವಿಸ್ಮಯಗೊಳಿಸುತ್ತದೆ. ಆತ, ಮುನ್ನೂರರ ಆಸುಪಾಸಿನ ಸಂಖ್ಯೆಯ ವಚನಗಳನ್ನು ಬರೆದಿದ್ದಾನೆ. ಒಂದೆರಡನ್ನು ಓದಿಕೊಳ್ಳಿ. ಆತನ ಆಶಯ, ಧಾಟಿ ನಿಮಗೆ ಅರ್ಥವಾದೀತು.

ಉಚ್ಚೆಯ ಬಚ್ಚಲಲ್ಲಿ ಹುಟ್ಟಿ, ನಾ ಹೆಚ್ಚು
ನೀ ಹೆಚ್ಚು ಎಂಬುವವರನ್ನು ಮಚ್ಚಿಲೇ ಹೊಡೆಯೆಂದಾನಂಬಿಗರ ಚೌಡಯ್ಯ

ಕಂತೆ ತೊಟ್ಟವ ಗುರುವಲ್ಲ
ಕಾವಿ ಹೊತ್ತವ ಜಂಗಮನಲ್ಲ
ಶೀಲ ಕಟ್ಟಿದವ ಶಿವಭಕ್ತನಲ್ಲ
ನೀರು ತೀರ್ಥವಲ್ಲ, ಕೂಳು ಪ್ರಸಾದವಲ್ಲ
ಹೌದೆಂಬವನ ಬಾಯಿ ಮೇಲೆ
ಅರ್ಧ ಮಣೆಯ ಪಾದರಕ್ಷೆಯ ತೆಗೆದುಕೊಂಡು
ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ ಟೊಕಟಕನೆ
ಹೊಡಿ ಎಂದಾತ ನಮ್ಮ ಅಂಬಿಗರ ಚೌಡಯ್ಯ

ನನ್ನ ಕುಲ ಹೆಚ್ಚು, ನಿನ್ನ ಕುಲ ಕಡಿಮೆ
ಎಂದು ಹೊಡೆದಾಡುವಂತಹ ಅಣ್ಣಗಳನ್ನು
ಹಿಡಿತಂದು ಮೂಗನೆ ಸವರಿ ಮೆಣಸಿನ ಹಿಟ್ಟು
ತುಪ್ಪವ ತುಂಬಿ ನಮ್ಮ ಪಡಿಹಾರಿ ಉತ್ತಣ್ಣನ
ವಾಮ ಪಾದುಕೆಯಿಂದ ಫಡಫಡನೆ ಹೊಡೆಯಬೇಕೆಂದ
ನಮ್ಮ ಅಂಬಿಗರ ಚೌಡಯ್ಯ

ಮೊಲೆ ಮೂಡಿ ಬಂದರೆ ಆ ಪಿಂಡವನು ಹೆಣ್ಣೆಂಬರು
ಗಡ್ಡ ಮೀಸೆಗಳು ಬಂದರೆ ಆ ಪಿಂಡವನು ಗಂಡೆಂಬರು
ಆ ಇಬ್ಬರ ನಡುವೆ ಸುಳಿವ ಆತ್ಮ ಹೆಣ್ಣೂ ಅಲ್ಲ ಗಂಡೂ ಅಲ್ಲ
ನೋಡಿರೆಂದನಮ್ಮಂಬಿಗರ ಚೌಡಯ್ಯ

ಈಶ್ವರನನ್ನು ಕಾಂಬುದೊಂದಾಶೆಯುಳ್ಳೊಡೆ
ಪರದೇಶಕ್ಕೆ ಹೋಗಿ ಬಳಲದಿರು!
ಕಾಶಿಯಲ್ಲಿ ಕಾಯುವ ವಿನಾಶ ಮಾಡಬೇಡ!
ನಿನ್ನಲ್ಲಿ ನೀ ತಿಳಿದು ನೋಡಾ, ಜಗವು ನಿನ್ನೊಳಗೆಂತಾದ ಅಂಬಿಗರ ಚೌಡಯ್ಯ

ಅಂತರಂಗದ ಬೇಗುದಿಯನ್ನು, ಕಳಕಳಿಯನ್ನು ನಿರ್ಭಿಡೆಯಿಂದ ಪ್ರಕಟಿಸಿದ ಅಂಬಿಗರ ಚೌಡಯ್ಯನ ಧಾಟಿ ಓದುಗನಿಗೆ ತೀವ್ರ ಒರಟೆನಿಸುವುದು ಸಹಜ. ಆದರೆ ಪ್ರಮುಖವಾಗಿ ನಾವು ಗಮನಿಸಬೇಕಾದ್ದು ಆ ಸಂವೇದನಾಶೀಲ ವಿಡಂಬನೆಯ ವಿಚಾರ ಸಿರಿವಂತಿಕೆ ಶತಮಾನಗಳು ಕಳೆದರೂ ಪ್ರಸ್ತುತವೇ ಆಗಿ ಉಳಿಯಬೇಕಿರುವ ಅವಶ್ಯಕತೆ.ಒಂದು ಕ್ಷಣ ನಿಲ್ಲಿ! ಇಲ್ಲಿ ನಾನು ವಿವರಿಸಹೊರಟಿರುವುದು, ಅಂಬಿಗರ ಚೌಡಯ್ಯನ ಬಂಡಾಯ ಮನೋಧರ್ಮದ ಕ್ರಾಂತಿ ಹಾದಿಯ ವೈಭವವನ್ನಲ್ಲ. ದುಷ್ಟ ಸಮಾಜದೆಡೆಗಿನ ಆತನ ತಾರ್ಕಿಕ ವಿಚಾರಣೆಯ ದಿಟ್ಟ ಧಾಟಿಯೂ ಅಲ್ಲ. ಮನೋದಾಸ್ಯದ ವಿರುದ್ಧ, ಜಾತಿ ವ್ಯವಸ್ಥೆಯ ವಿರುದ್ಧ ತನ್ನದೇ ಕಟು ನಿಃಸ್ವಾರ್ಥ ರೀತಿಯಲ್ಲಿ ಹೋರಾಡಿ ವಿಶ್ವಮಾನವ ಸಂದೇಶವನ್ನು ಬಿತ್ತಿ ಹೋದ ಛಡಿ ಏಟಿನ ಚೌಡಯ್ಯ ಇಂದಿನ ವ್ಯವಸ್ಥೆಗೆ ಅಪ್ರಸ್ತುತನಾಗುತ್ತಿದ್ದಾನೆಯೇ? ಇಂದಿನ ಅಂಬಿಗರ ಚೌಡಯ್ಯ, ಕಾಲಘಟ್ಟವೊಂದರ ಸಮಾಜವನ್ನು ಹೊಸಸ್ತರಕ್ಕೆ ಕರೆದೊಯ್ದಿದ್ದ ವಚನ ಸಂಸ್ಕೃತಿಯ ವೈಫಲ್ಯದ ಒಂದು ಪಾರ್ಶ್ವವನ್ನು ಬಿಂಬಿಸುತ್ತಿದ್ದಾನೆಯೇ? ಜಗತ್ತಿನ ಮುನ್ನಡೆಯೂ ಕಾಲದ ದೃಷ್ಟಿಯಿಂದ ಹಿನ್ನೆಡೆಯನ್ನು ಕಾಣುತ್ತದೆಯೇ? ಇಂತಹ ಪ್ರಶ್ನೆಗಳನ್ನು ಕೇಳಿಕೊಳ್ಳುವ ಕಾಲ ಇದು ಎನ್ನಿಸುತ್ತದೆ.

ಅಂಬಿಗರ ಚೌಡಯ್ಯನಂಥಹ ನಿಜಶರಣನ ಆ ಅಪೂರ್ವ ಸಂದೇಶಗಳು ಶತಮಾನಗಳು ಕಳೆಯುತ್ತಾ ಹೋದಂತೆ ಸಾಮಾಜಿಕ ವ್ಯವಸ್ಥೆಯಲ್ಲಿ ಗಟ್ಟಿಯಾಗುತ್ತಾ ಸಾಗಬೇಕಿತ್ತು. ಶೋಷಣೆಗೆ ಒಳಗಾದ ಸಮಾಜ ವರ್ಗದ ಅಂತಃಶಕ್ತಿ ಸ್ವಾವಲಂಬನೆಯಿಂದ ಸುಭದ್ರವಾಗಬೇಕಿತ್ತು. ವ್ಯವಸ್ಥೆಯಲ್ಲಿ ರೂಪಿತವಾದ ಜನಪರ ಕಲ್ಯಾಣ ಕಾರ್ಯಕ್ರಮಗಳು ಆ ವರ್ಗಗಳ ಅಂತರಂಗದಲ್ಲಿದ್ದ ಬೇಗುದಿಯನ್ನು ಭಸ್ಮ ಮಾಡಬೇಕಿತ್ತು. ಮತ್ತು ಇಡೀ ಸಮಾಜ, ಜಾತಿ-ವರ್ಗಗಳನ್ನು ಮೀರಿ ವಿಶ್ವಮಾನವ ಪ್ರಜ್ಞೆಯ ಉದಾರತೆಯನ್ನು ಗಳಿಸಿಕೊಳ್ಳುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿರಬೇಕಿತ್ತು. ಆದರೆ, ಇಂದಿನ ಪರಿಸ್ಥಿತಿ ನೋಡಿದಾಗ ಇಡೀ ವಚನ ಸಂಸ್ಕೃತಿಯ ಪರಿಣಾಮಗಳ ಬಗ್ಗೆ ವಿಷಾದವೆನಿಸುವ ಸಿನಿಕತೆ ಮೂಡುತ್ತದೆ.

ಚೌಡಯ್ಯ ಈಗ ಒಂದು ಜಾತಿಯ ಸ್ವತ್ತಾಗಿ ಸೊರಗಿದ್ದಾನೆ ಮತ್ತು ಆತನಷ್ಟೇ ಅಲ್ಲ, ಎಲ್ಲ ಶರಣರೂ ಒಂದೊಂದು ಜಾತಿಗೆ ಸೀಮಿತವಾಗಿಬಿಟ್ಟಿದ್ದಾರೆ. ಆಯಾ ಜಾತಿಯ ಇಂದಿನ ಜನಸಂಖ್ಯೆಯ ಪ್ರಾಬಲ್ಯದ ಮೇಲೆ ಆಯಾ ಶರಣರ ಸಂದೇಶಗಳು ಪ್ರಸ್ತುತತೆಯ ಕೀರ್ತಿಯನ್ನು ಗಳಿಸಿಕೊಳ್ಳುತ್ತಿರುವುದೂ ವಿಷಾದದ ಸತ್ಯ. ಅಂಬಿಗರ ಚೌಡಯ್ಯನ ವಿಷಯದಲ್ಲಿಯಂತೂ, ಶರಣನಾಗಲು ಆತ ದೀಕ್ಷೆ ನೀಡಿದ ಒಂದು ಜಾತಿ ಅವನನ್ನು ಒಂದೆಡೆಗೆ ಎಳೆಯುತ್ತಿದ್ದರೆ ಅವನು ಜನಿಸಿದ ಮೂಲಜಾತಿಯ ಮತಸ್ಥರು ಆತನನ್ನು ತಮ್ಮ ಸಾಮಾಜಿಕ ಅಸ್ತಿತ್ವದ ಕುರುಹಾಗಿ ಸ್ವೀಕರಿಸಿ ತಮ್ಮೆಡೆಗೆ ಸೆಳೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಆತ, ಇಂದು ರಾಜಕಾರಣಿಗಳಿಗೆ ಮತಬ್ಯಾಂಕನ್ನು ಸೃಷ್ಟಿಸುವ ಮೋಡಿಗಾರ.

ಇಂದು ಆತನ ಹೆಸರಿನಲ್ಲಿ ಎರಡು ವಿಶ್ವ ವಿದ್ಯಾಲಯಗಳಲ್ಲಿ ‘ಪೀಠ’ ಎನ್ನುವ ಗದ್ದುಗೆಗಳನ್ನು ಸ್ಥಾಪಿಸಲಾಗಿದೆ. ರಾಜಕೀಯ ಪ್ರಾಬಲ್ಯದ ಕಾರಣ ಆತನ ಜಯಂತಿಯ ಆಚರಣೆಗೆ ಸರ್ಕಾರದ ಅಧಿಕೃತ ಮುದ್ರೆಯೂ ಬಿದ್ದಿದೆ. ಆತನ ವಚನಗಳಲ್ಲಿದ್ದ ಧರ್ಮ ನಿರ್ಭಿಡತೆಯ, ಜೀವನ ಪ್ರೀತಿಯ ಆಶಯ ಅವನತಿಯೆಡೆಗೆ ಮುಖ ಮಾಡಿ ನಿಲ್ಲುತ್ತಿದೆ. ಜಾತಿಯೆಂಬ ವಿಹೀನ ಆಚರಣೆ ಸಂಸ್ಕೃತಿಯೆಂಬ ಜೀವನತತ್ವವನ್ನೇ ಬುಡಮೇಲು ಮಾಡಲು ನಿಂತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಇನ್ನು, ಆಡಳಿತ ಚುಕ್ಕಾಣಿ ಹಿಡಿದ ಸರ್ಕಾರಗಳು ಆತನ ತಾತ್ವಿಕ ಸಂದೇಶಗಳನ್ನು, ಜಾತಿ-ಧರ್ಮಗಳ ಸಂಕೋಲೆಗಳಿಂದ ಮುಕ್ತಗೊಳಿಸಿ ಇಡೀ ಸಾಮಾಜಿಕ ವ್ಯವಸ್ಥೆಯೊಳಗೆ ಹರಿಸುವ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿವೆಯೇ? ಈ ಜಾಡಿನಲ್ಲಿ ಸಿಗುವ ಕೆಲವು ಸತ್ಯಗಳು ಇಂದಿನ ಮಟ್ಟಿಗಂತೂ ನಿರಾಶೆಯನ್ನೇ ಮೂಡಿಸುತ್ತವೆ.

1. ರಾಣಿಬೆನ್ನೂರು ತಾಲ್ಲೂಕಿನ ಚೌಡಯ್ಯದಾನಪುರದ ಗ್ರಾಮದ ಪಕ್ಕದಲ್ಲಿಯೇ ವಿಶಾಲವಾಗಿ ಹರಿಯುವ ತುಂಗಭದ್ರೆಯ ತಟದಲ್ಲಿ ಚೌಡಯ್ಯ ಲಿಂಗೈಕ್ಯನಾದ ಸ್ಥಳ ಇದೆ. ಪ್ರತಿ ಮಳೆಗಾಲದಲ್ಲಿನ ನೆರೆಗೆ ಅದಕ್ಕೆ ಮುಳುಗುವ ಭಾಗ್ಯವೂ, ದೌರ್ಭಾಗ್ಯವೂ ಇದೆ. ಅಂಬಿಗನ ಆತ್ಮವಾದ ಕಾರಣ, ಮುಳುಗದೇ ಉಳಿದೆನೆನ್ನುವ ಹಾಗೆ ದರ್ಶನ ನೀಡುವ ಸೌಭಾಗ್ಯವೂ ಅದಕ್ಕಿದೆ. ಈ ಚೌಡಯ್ಯದಾನಪುರದ ಜಾಗವನ್ನು ಅಂಬಿಗರ ಚೌಡಯ್ಯ ತನ್ನ ಗುರುವಾದ ಶಿವದೇವಮುನಿಗಳಿಗೆ ದಾನವಾಗಿ ಕೊಟ್ಟಿರುವ ಬಗ್ಗೆ ಶಿಶುನಾಳ ಷರೀಫರು ರಚಿಸಿದ ‘ಶಿವದೇವ ವಿಜಯಂ’ ಎಂಬ ಪುಸ್ತಕದಲ್ಲಿ ಉಲ್ಲೇಖವಿದೆ. ಹಾಗಾಗಿಯೇ ಊರಿಗೆ ಆ ಹೆಸರು ರೂಢಿಗೆ ಬಂದಿತೆಂದೂ ಅದರಲ್ಲಿ ವಿವರಿಸಲಾಗಿದೆ.

ವೀರಶೈವ ಸಮುದಾಯದ ಶಿವದೇವಮುನಿಗಳು ಆತನಿಗೆ ಲಿಂಗದೀಕ್ಷೆ ನೀಡಿದರೆಂಬ ಕಾರಣಕ್ಕೆ, ಅನುಜನೆಂಬ ಮಮತೆಗೆ ಶ್ರೀ ಶಿವದೇವ ಒಡೆಯರ ಎಂಬ ವಕೀಲರು ಚೌಡಯ್ಯ ಲಿಂಗೈಕ್ಯನಾದ ಸ್ಥಳದಲ್ಲಿ ಗದ್ದುಗೆಯ ಜೀರ್ಣೋದ್ಧಾರ ಮಾಡಿ ೧೯೬೮ರಷ್ಟು ಹಿಂದೆಯೇ ಪುಟ್ಟದಾದ ಐಕ್ಯ ಮಂಟಪವನ್ನು ನಿರ್ಮಿಸಿದ್ದಾರೆ. ಕಾಲಾನುಕ್ರಮದಲ್ಲಿ ಸಾಮಾಜಿಕ ಪರಿಸ್ಥಿತಿಗಳ ಮನ್ವಂತರದ ಹಿನ್ನೆಲೆಯಲ್ಲಿ ರಾಜಕೀಯ ಪ್ರಾಬಲ್ಯಗಳು ಹೆಚ್ಚಿದಂತೆಲ್ಲಾ ಅಂಬಿಗರ ಚೌಡಯ್ಯನ ಮೂಲ ಸಮಾಜಸ್ಥರು ‘ಸಬಲತೆ’ಯನ್ನು ಗಳಿಸಿಕೊಂಡಿದ್ದಾರೆ. ಅದು ಸಹಜವೂ ಹೌದು. ಈ ಕಾರಣಕ್ಕೆ ಅಂಬಿಗರ ಚೌಡಯ್ಯ ತಮ್ಮವನೆಂದು ಹೇಳಿಕೊಳ್ಳುವ ಕಸುವು ಅವರಲ್ಲಿ ವೃದ್ಧಿಯಾಗಿ ಎರಡೂ ವರ್ಗಗಳಲ್ಲಿ ಹಬ್ಬಿದ ವಿಚಾರಭೇದಗಳು ಚೌಡಯ್ಯನ ಆತ್ಮವನ್ನು ಅನಾಥನನ್ನಾಗಿ ಮಾಡಿವೆ! ಇಂದು ಅಂಬಿಗರ ಚೌಡಯ್ಯನ ಐಕ್ಯಮಂಟಪದ ಸುತ್ತಲೂ, ಒಳಗೂ ಕಸ, ಕಡ್ಡಿ, ಕೊಳಚೆಗಳು ನಾರುತ್ತಿವೆ.

ಪಕ್ಕದಲ್ಲಿಯೇ ಮರಳು ಸಾಗಾಣಿಕೆ ದಂಧೆ ಎಗ್ಗಿಲ್ಲದೇ ನಡೆಯುತ್ತಿದ್ದರೆ ಸುತ್ತಮುತ್ತಲಿನ ಜಾಗ ಗ್ರಾಮಸ್ಥರ ಬಹಿರ್ದೆಸೆಯ ನಿರಾಳತೆಗೂ ಸಾಕ್ಷಿಯಾಗಿ ನಿಂತಿದೆ. ಪಕ್ಕದಲ್ಲಿಯೇ, ಮೇಲ್ಮಟ್ಟದಲ್ಲಿ ಇದ್ದುದರಲ್ಲಿ ಸುರಕ್ಷಿತವಾಗಿರುವ ಚಾಲುಕ್ಯರ ಕಾಲದ ಮುಕ್ತೇಶ್ವರ ದೇವಸ್ಥಾನ ಪಾರಂಪರಿಕ ಪಟ್ಟ ಗಿಟ್ಟಿಸಿಕೊಂಡು ಅದನ್ನು ಅಣಕಿಸುವಂತೆ ತೋರುತ್ತದೆ.ಒಡೆಯರ ಮತದ ಇಂದಿನ ಮಠಾಧೀಶರು ಅಂಬಿಗರ ಚೌಡಯ್ಯನನ್ನು ಆತನ ಮೂಲ ಸಮುದಾಯ ರಾಜಕೀಯವಾಗಿ ಅಪಹರಿಸಿಕೊಂಡಿರುವ ವಿಷಯದ ಬಗ್ಗೆ ಖಿನ್ನತೆಯ ಉಪೇಕ್ಷೆಯನ್ನು ತೋರಿದಂತೆ ಕಂಡರೆ, ಚೌಡಯ್ಯನ ಮೂಲ ಮತಸ್ಥರು ರಾಜಕೀಯ ನಾಯಕರ ಸಹಕಾರದೊಂದಿಗೆ ಹೊಸದಾಗಿ ಬೇರೊಂದು ಸ್ಥಳದಲ್ಲಿ ‘ಅಂಬಿಗರ ಚೌಡಯ್ಯನ ಪೀಠ’ವನ್ನು ನಿರ್ಮಿಸುವ ಬೃಹತ್ ಕಾರ್ಯದಲ್ಲಿ ತೊಡಗಿದ್ದಾರೆ. ಐಕ್ಯ ಮಂಟಪ ಅನಾಥವಾಗಿದೆ. ತುಂಗಭದ್ರೆಯೂ ಸಹನೆಯಿಂದ ಸೊರಗಿದ್ದಾಳೆ.

2. ಕಳೆದ ಎಂಟು ವರ್ಷಗಳ ಹಿಂದೆ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ‘ಅಂಬಿಗರ ಚೌಡಯ್ಯನ ಪೀಠ’ ಸ್ಥಾಪನೆಯಾಗಿದೆ. ಸರ್ಕಾರ ನೀಡಿದ ಎರಡು ಕೋಟಿ ಅನುದಾನದಲ್ಲಿ ಒಂದೂವರೆ ಕೋಟಿಯಷ್ಟು ಹಣವನ್ನು ಸ್ಮಾರಕ ಭವನ ನಿರ್ಮಿಸಿ ಅದರೊಳಗೆ ಮೌನ ವಾತಾವರಣವನ್ನು ಸೃಷ್ಟಿ ಮಾಡಲಾಗಿದೆ. ಉಳಿದ ಐವತ್ತು ಲಕ್ಷವನ್ನು ಬ್ಯಾಂಕಿನಲ್ಲಿ ಸ್ಥಿರಠೇವಣಿ ಇಟ್ಟು ಅದರಿಂದ ಬರುವ ಸಣ್ಣ ಮೊತ್ತದ ಬಡ್ಡಿಯ ಮೂಲಕ ವರ್ಷಕ್ಕೊಮ್ಮೆ ‘ಅಂಬಿಗರ ಚೌಡಯ್ಯ ಜಯಂತಿ’ಯನ್ನು ಆಚರಿಸಲಾಗುತ್ತದೆ. ಆಗಾಗ್ಗೆ ಒಂದೆರಡು ವಿಚಾರ ಸಂಕಿರಣಗಳನ್ನೂ ನಡೆಸಿ ಖರ್ಚು ಭರಿಸುವ ಶಾಸ್ತ್ರ ಮಾಡಲಾಗುತ್ತದೆ.

ವಿಶ್ವವಿದ್ಯಾಲಯದಲ್ಲಿ ದೈನಂದಿನ ಪಾಠ ಮಾಡಲೂ ಲಭ್ಯವಿಲ್ಲದ ಹಾಗಿರುವ ಪ್ರೊಫೆಸರ್ ಗಳ ಕೊರತೆ ಪೀಠ ನಿರ್ವಹಣೆಗೂ ವ್ಯಾಪಿಸಿದೆ. ಆ ಸ್ಥಳಕ್ಕೆ ಆಗಾಗ್ಗೆ ಎಡತಾಕುವ ಅಂಬಿಗರ ಚೌಡಯ್ಯನ ‘ಸಮಾಜ’ದ ವ್ಯಕ್ತಿಗಳು ತಮ್ಮ ಜಾತಿಯವರನ್ನೇ ಪೀಠದ ನಿರ್ದೇಶಕರನಾಗಿ ಮಾಡಬೇಕೆಂದು ಆಗ್ರಹಿಸುತ್ತಾರೆ. ಅಲ್ಲಿರುವ ಪ್ರತಿಕೂಲ ಪರಿಸ್ಥಿತಿಯ ಕಾರಣ ಉತ್ತರ ದೊರಕದೇ ಇನ್ನೊಮ್ಮೆ ಬರುತ್ತೇವೆಂದು ಗಡುವು ನೀಡಿ ಹೋಗುತ್ತಾರೆ.

ಮಂಗಳೂರು ವಿಶ್ವವಿದ್ಯಾಲಯದಲ್ಲೂ ಅಂಬಿಗರ ಚೌಡಯ್ಯನ ಪೀಠ ೨೦೧೨ರಿಂದ ಇದ್ದು ಅಲ್ಲಿಯೂ ಪರಿಸ್ಥಿತಿ ಭಿನ್ನವಿಲ್ಲ. ವಿಚಾರ ಸಂಕಿರಣ, ಜಯಂತಿಗಳನ್ನು ಹೊರತು ಪಡಿಸಿದರೆ ಚೌಡಯ್ಯನ ತತ್ವ, ಜೀವನ, ಸಿದ್ಧಾಂತಗಳನ್ನು, ಜನಸಾಮಾನ್ಯರ ಮನಸ್ಸುಗಳಲ್ಲಿ ಬಿತ್ತುವ ವಿಶಿಷ್ಟ ಪ್ರಯತ್ನಗಳೇನೂ ಆಗಿಲ್ಲ. ಒಂದು ಪುಸ್ತಕ ಪ್ರಕಟವಾಗಿದ್ದರೂ ಸಾಮಾನ್ಯ ಜನರ ಮನಸ್ಸುಗಳನ್ನೂ ಹೇಗೆ ಮುಟ್ಟಿದೆ ಎಂಬುದರ ಬಗ್ಗೆ ಯಾರಿಗೂ ಗೊತ್ತಿಲ್ಲ. ಅಂಬಿಗರ ಚೌಡಯ್ಯನ ಮತಸ್ಥರೆನ್ನುವ ಮೊಗವೀರರು ಈ ಪೀಠದ ಕಾರಣ ಎಷ್ಟು ಲಾಭ ಪಡೆದಿದ್ದಾರೆ? ತಿಳಿಯುವುದಿಲ್ಲ. ಅಲ್ಲಿಗೂ ಸರ್ಕಾರ ನೀಡಿರುವ ಐವತ್ತೇ ಲಕ್ಷದ ಅನುದಾನದಲ್ಲಿ ಬೇರೇನಾದರೂ ಹೇಗೆ ಮಾಡಲು ಸಾಧ್ಯ?ಅಂಬಿಗರ ಚೌಡಯ್ಯ ನಮ್ಮನ್ನು ಬಿಟ್ಟೂ ಬಿಡದೇ, ಶಿಲುಬೆಯೇರಿದ ಏಸುಕ್ರಿಸ್ತನನ್ನು ನೆನಪಿಸುತ್ತಾನೆ.

ಒಂಟಿಯಾಗಿ ನಡೆದು ಹೋದ ಬುದ್ಧನನ್ನೂ ಜ್ಞಾಪಿಸುತ್ತಾನೆ. ಏಸು ಕ್ರಿಸ್ತ ಯಹೂದಿಯಾಗಿಯೇ ಶಿಲುಬೆಗೇರಿದ. ತದನಂತರ ಕ್ರೈಸ್ತಧರ್ಮ ಉದಯವಾಯಿತು. ಗೌತಮ ಬುದ್ಧ ಸಾಗಿಹೋದ ಬಳಿಕವೇ ಬೌದ್ಧ ಧರ್ಮ ಚಿಗುರೊಡೆಯಿತು. ಅವರಿಬ್ಬರಿಗೂ, ಮಾನವಪ್ರೀತಿಯ ಹೊರತು ಹೊಸದೊಂದು ಧರ್ಮ ಸ್ಥಾಪನೆಯ ಕನಸಿರಲಿಲ್ಲ. ಅಂಬಿಗರ ಚೌಡಯ್ಯನೂ ಸನಾತನ ಧರ್ಮದ ಓರೆಕೋರೆಗಳನ್ನು ಖಂಡಿಸಿದ್ದಷ್ಟೇ ಅಲ್ಲ, ಜಾತಿ ಪದ್ಧತಿಯನ್ನು ನಿರಾಕರಿಸಿದ. ತನ್ನದೇ ರೀತಿಯಲ್ಲಿ ವಿಶ್ವ ಮಾನವತಾವಾದವನ್ನು ಪ್ರತಿಪಾದಿಸಿ ಸಾಗಿಹೋದ. ಆದರೆ, ಆತನ ಆತ್ಮವನ್ನು ಇಂದು ಜಾತಿಯ ಸಂಕೋಲೆಗಳಿಂದ ಬಿಗಿದು ಬಂಧಿಸಲಾಗಿದೆ. ಮಗ್ಗುಲು ಬದಲಿಸಲು ಆತನ ಚೇತನ ಇನ್ನೆಷ್ಟು ದಿನ ಕಾಯಬೇಕೋ?

ಕುವೆಂಪುರವರು ಭಾರತೀಯತೆಯ ಹೆಸರಿನಲ್ಲಿ ಎಲ್ಲಾ ಜಾತಿ ಮತಗಳನ್ನು ಉಳಿಸಿಕೊಳ್ಳುವುದಾದರೆ ಅಂತಹ ಭಾರತೀಯತೆ ಎಂದಿಗೂ ಪ್ರಸ್ತುತವಾಗುವುದಿಲ್ಲ. ವಿಶ್ವಮಾನವ ತತ್ವದ ಹೊರತು ಬದುಕಿಗೆ ಬೇರೆ ಯಾವುದೇ ಪರ್ಯಾಯವಿಲ್ಲ ಎಂದು ಪದೇ ಪದೇ ಹೇಳುತ್ತಿದ್ದರು. ಈ ಪ್ರಸ್ತುತತೆ ಎಂಬ ಪದದ ಅರ್ಥವ್ಯಾಪ್ತಿಯನ್ನು ಹಿಗ್ಗಿಸಬೇಕೇ ಎನ್ನುವ ಪ್ರಶ್ನೆಗೆ ಮನಸ್ಸು ಮೌನವನ್ನು ಮುರಿಯುವುದಿಲ್ಲ.

ಅಂದಹಾಗೆ ಅಂಬಿಗರ ಚೌಡಯ್ಯನ ಜಯಂತಿಯನ್ನು ಸರ್ಕಾರ ಅಧಿಕೃತವಾಗಿ ಜನವರಿ 21ರಂದು ಆಚರಿಸುತ್ತದೆ. ಅಂದು, ಚೌಡಯ್ಯನ ಸಮುದಾಯಕ್ಕೆ ಇನ್ನೂ ಹೆಚ್ಚಿನ ರಾಜಕೀಯ ಪ್ರಾತಿನಿಧ್ಯ ಸಿಕ್ಕಬೇಕು, ಮತ್ತು ರಾಜಕೀಯ ಪ್ರಾತಿನಿಧ್ಯ ಸಿಕ್ಕಾಗಲೇ ಸಮುದಾಯದ ಬೇಡಿಕೆಗಳಿಗೆ ಬಲ ದಕ್ಕುತ್ತದೆ ಎಂದು ರಾಜಕಾರಣಿಗಳು ಭಾಷಣ ಮಾಡುತ್ತಾರೆ. ಆತನ ಸಂದೇಶಗಳು ಇಂದಿಗೂ ಅತ್ಯಂತ ಪ್ರಸ್ತುತ ಎಂದು ಸಾಹಿತಿಗಳು ತಮ್ಮ ಮಾತುಗಳನ್ನು ಪುನರಾವರ್ತಿಸುತ್ತಾರೆ. ಜನಸಾಮಾನ್ಯರ ಬದುಕು ತುಂಗಭದ್ರೆಯ ತಿಳಿನೀರಿನಂತೆಯೇ ಎಲ್ಲವನ್ನೂ ಉಪೇಕ್ಷಿಸುತ್ತಾ, ಮರೆಯುತ್ತಾ ಮುಂದೆ ಸಾಗುತ್ತದೆ.

ಯಲ್ಲಾಲಿಂಗ ದಂಡಿನ್
ಚಿಮ್ಮಾಇದಲ್ಲಾಯಿ
ಚಿಂಚೋಳಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕವಿತೆ | ನೆನಪು

Published

on

ಕವಿ | ರುದ್ರಪ್ಪ ಹನಗವಾಡಿ
  • ರುದ್ರಪ್ಪ ಹನಗವಾಡಿ

ಅಪ್ಪನನ್ನು ಒಪ್ಪ ಮಾಡಿ
ವರ್ಷಗಳೇ ಕಳೆದವು ಮುವ್ವತ್ತೇಳು
ಇಂದಿರಾಗಾಂಧಿಯ ತುರ್ತು ಪರಿಸ್ಥಿತಿ
ಅರಸರ ಮೀಸಲಾತಿ
ಬಸವಲಿಂಗಪ್ಪನವರ ಬೂಸಾ ಖ್ಯಾತಿ
ಮಲ ಹೊತ್ತು
ಮಲಗಿದ್ದ ಕಾಲಕ್ಕೆ
ಚುರುಕು ಮುಟ್ಟಿಸಿದ ಕಾಲ

ಹರೆಯದ ನನಗೆ
ಕಾಲೇಜ ಮೇಷ್ಟರ ಕೆಲಸ
ಸೂಟು ಬೂಟಿನ ವೇಷ
ಆ ಮೇಲೆ ಅಮಲದಾರಿಕೆ
ಎಲ್ಲ ನಡೆದಾಗಲೇ ಅವ್ವನನ್ನು
ಆಸ್ಪತ್ರೆಗೆ ಸೇರಿಸಿದ್ದು
ಕಾಲ ಕಳೆದು ಕೊಂಡು
ಕೋಲ ಹಿಡಿದದ್ದು
ನಿನ್ನೆ ಮೊನ್ನೆಯಂತೆ
ಬಾಲ್ಯವಿನ್ನು ಉಂಟೆಂಬಂತೆ
ಭಾವಿಸುವಾಗಲೇ ಅವ್ವನ ಸಾವು

ಅದರೊಟ್ಟಿಗೆ ಕಾಯದಾಯಾಸ ತೀರಿಸಲು
ಬಂದರೆ ಬೆಂಗಳೂರಿಗೆ
ರೌಡಿಗಳ ಕಾಟ
ಅಂಬೇಡ್ಕರ್ ಪಟದ ಕೆಳಗೆ
ದೌರ್ಜನ್ಯದ ದಂಡು

ಅಮಾಯಕರಿಗೆ ಗುಂಡು
ಕಂಡುಂಡ ಹಾದಿಯ ಗುಡಿಸಲುಗಳಲ್ಲೀಗ
ಮುಗಿಲು ಮುಟ್ಟೋ ಮಹಲುಗಳು
ಅಂತಲ್ಲಿ
ದೇಶ ವಿದೇಶಗಳ
ಅಹವಾಲುಗಳು
ಅವಿವೇಕಗಳು
ನೋಡ ನೋಡುತ್ತಿದ್ದಂತೆ
ಉಸಿರು ಬಿಗಿಹಿಡಿದ ಜನರ ಒಳಗೆ
ಒಳಪದರಗಳೊಳಗೆ ಕನಸ ಬಿತ್ತಿ
ಹಸಿರ ಹೊನ್ನು ಬಾಚಲು ಹವಣಿಸಿದ
ಬಿಳಿ ಜನರ ಆಟ
ಅರ್ಥವಾಗುವುದೇ ಎಲ್ಲ
ಗೋಣ ನೀಡುವರೆ
ಹೂತಿಟ್ಟ ಗೂಟಕ್ಕೆ ?

( ಚಿಂತಕ ರುದ್ರಪ್ಪ ಹನಗವಾಡಿ ಅವರ ‘ಊರು – ಬಳಗ’ ಕವನ ಸಂಕಲನದಿಂದ ‘ ನೆನಪು ‘ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕೃತಿಯನ್ನು ಫ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ 2013 ರಲ್ಲಿ ಪ್ರಕಿಸಿದೆ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ; ಒಂದು ಚಿಂತನೆ

Published

on

  • ಮಹಾಂತೇಶ್.ಬಿ.ನಿಟ್ಟೂರು, ದಾವಣಗೆರೆ

ನಿಜ ಶರಣ ಶ್ರೀ ಅಂಬಿಗರ ಚೌಡಯ್ಯನವರ ಜೀವಿತ ಕಾಲ 12 ನೇ ಶತಮಾನದ ಬಸವಾದಿ ಶರಣರ ಕಾಲದಲ್ಲೇ ಇತ್ತು ಎಂಬುದು ಇತಿಹಾಸಕಾರರ ಸಂಶೋಧನೆಯಿಂದ ತಿಳಿದು ಬರುತ್ತದೆ. ಅವರ ಹುಟ್ಟೂರು ಹಾವೇರಿ ಜಿಲ್ಲೆಯ ಆಗಿನ ಶಿವಪುರ, ಈಗಿನ ಚೌಡಯ್ಯದಾನಪುರ. ಅವರ ತಂದೆಯ ಹೆಸರು ಶ್ರೀ ವಿರೂಪಾಕ್ಷ, ತಾಯಿಯ ಹೆಸರು ಪಂಪಾಂಭಿಕೆ, ಹೆಂಡತಿಯ ಹೆಸರು ಸುಲೋಚನಾ ಹಾಗೂ ಮಗನ ಹೆಸರು ಪುರವಂತ.

ಅಂಬಿಗ ವೃತ್ತಿಯ ಚೌಡಯ್ಯನವರು ಅಲ್ಲಮ ಪ್ರಭು ಮತ್ತು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಇದ್ದ ಒಬ್ಬ ಕ್ರಾಂತಿಕಾರಿ, ದಿಟ್ಟ, ನೇರ, ನಿಷ್ಠುರ ನುಡಿಯ ವಚನಕಾರ. ಕಲ್ಯಾಣ ಕ್ರಾಂತಿಯ ನಂತರ ಇವರು ತಮ್ಮ ವಚನಗಳ ಗಂಟನ್ನು ಹೊತ್ತು ಉಳವಿಗೆ ನಂತರ ತಮ್ಮ ಗ್ರಾಮವಾದ ತುಂಗಭದ್ರಾ ನದಿಯ ದಡದ ಮೇಲಿರುವ ಶಿವಪುರಕ್ಕೆ ಬಂದು ದೋಣಿ ನಡೆಸುವ ವೃತ್ತಿಯಲ್ಲಿ ನಿರತರಾಗಿ ವಚನ ರಚನೆ ಮಾಡಿರುವುದು ತಿಳಿದು ಬರುತ್ತದೆ.

ಚೌಡಯ್ಯನವರು ತಮ್ಮ ಜೀವಿತಾವಧಿಯಲ್ಲಿ ಅನೇಕ ಪವಾಡಗಳನ್ನು ಮಾಡಿರುತ್ತಾರೆ. ಗಿಡಮೂಲಿಕೆ ಔಷಧಿಗಳಿಂದ ಕ್ಷಯ ರೋಗ, ಕುಷ್ಠರೋಗ ಗುಣಪಡಿಸುವುದು, ಹಾವು ಕಚ್ಚಿದವರನ್ನು

ಬದುಕಿಸುವುದು ಇತ್ಯಾದಿ..

ಒಮ್ಮೆ ಗುತ್ತಲದ ಅರಸನು ಬೇಟೆಗಾಗಿ ಈ ಪ್ರದೇಶದಲ್ಲಿ ಸಂಚರಿಸುತ್ತಿದ್ದಾಗ, ಆತನ ಸೇನಾಧಿಪತಿಯು ಹಾವು ಕಚ್ಚಿ ಮೃತಪಟ್ಟನು. ಇದರಿಂದಾಗಿ ಅರಸನಿಗೆ ಅತೀವ ದುಃಖವುಂಟಾಗಿ ರೋಧಿಸತೊಡಗಿದನು. ಆಗ ಆತನ ಸೈನಿಕನೊಬ್ಬನು ಶ್ರೀ ಚೌಡಯ್ಯನವರ ಪವಾಡಗಳ ಬಗ್ಗೆ ವಿವರಿಸಿ ಹೇಳಲಾಗಿ, ಅರಸನು ತನ್ನ ಮೃತ ಸೇನಾಧಿಪತಿಯ ಶರೀರವನ್ನು ಚೌಡಯ್ಯನವರಲ್ಲಿಗೆ ತಂದು ಆತನನ್ನು ಬದುಕಿಸುವಂತೆ ಕೇಳಿಕೊಂಡರು, ಆಗ ಚೌಡಯ್ಯನವರು ಸೇನಾಧಿಪತಿಯನ್ನು ಬದುಕಿಸುತ್ತಾರೆ. ಇದರಿಂದ ಸಂತುಷ್ಟನಾದ ಅರಸನು ಶಿವಪುರದ ಸುತ್ತಲಿನ ಪೂರ್ವ – ಪಶ್ಚಿಮಕ್ಕೆ 14 ಮೈಲು ಹಾಗೂ ಉತ್ತರ – ದಕ್ಷಿಣಕ್ಕೆ 7 ಮೈಲು ಸುತ್ತಳತೆಯ ಭೂಮಿಯನ್ನು ಚೌಡಯ್ಯನವರಿಗೆ ದಾನವಾಗಿ ನೀಡಿದನು.

ಆದರೆ ಚೌಡಯ್ಯನರು ವೈರಾಗ್ಯಶಾಲಿಯು, ಲೌಕಿಕದಲ್ಲಿ ನಿರಾಸಕ್ತಿ ಹೊಂದಿದವರು ಆಗಿದ್ದರಿಂದ, ಅರಸನು ಕೊಡಮಾಡಿದ್ದ ಸಂಪೂರ್ಣ ಜಮೀನನ್ನು ತನ್ನ ಗುರುಗಳಾದ ಶ್ರೀ ಶಿವದೇವರಿಗೆ ದಾನವಾಗಿ ನೀಡಿದರು ಎಂಬ ಉಲ್ಲೇಖವಿದೆ. ಅಂದಿನಿಂದ ಶಿವಪುರ ಗ್ರಾಮಕ್ಕೆ ‘ಚೌಡಯ್ಯದಾನಪುರ’ ಎಂದು ಹೆಸರು ಬರುತ್ತದೆ. ಮುಂದೆ ಚೌಡಯ್ಯನರು ಅಲ್ಲಿ ದೇಹ ತ್ಯಾಗ ಮಾಡಿದ್ದರಿಂದ ತುಂಗಭದ್ರಾ ನದಿಯ ದಡದಲ್ಲಿ ಈಗಲೂ ಚೌಡಯ್ಯನವರ ಸಮಾಧಿ ಗದ್ದುಗೆ ಇದೆ.

ಭ್ರಮಾಲೋಕದಲ್ಲಿ ವಿಹರಿಸುತ್ತಾ ಕುಳಿತ, ಆಡಂಬರದಲ್ಲಿ ಅಡ್ಡಾದಿಡ್ಡಿ ಅಡ್ಡಾಡುವ ಮಂದಿಯ ಕಪಾಳಕ್ಕೆ ಹೊಡೆದು ಎಚ್ಚರಿಸುವಂತಿವೆ ಚೌಡಯ್ಯನವರ ವಚನಗಳು. ಧಾರ್ಮಿಕ ಮೂಢನಂಬಿಕೆ ಬಿತ್ತುವವರಿಗೆ, ಸ್ವಾರ್ಥಿಗಳಾಗಿ ಬದುಕುವವರಿಗೆ, ಮುಖವಾಡ ಹಾಕಿ ಮಂಕು ಬೂದಿ ಎರಚುವವರಿಗೆ ಸಿಂಹ ಸ್ವಪ್ನದಂತೆ ಬೆಚ್ಚಿ ಬೀಳಿಸುತ್ತವೆ ನಿಜ ಶರಣ ಅಂಬಿಗರ ಚೌಡಯ್ಯನವರ ವಚನಗಳು. ಇದಕ್ಕೆ ತಾತ್ಪೂರ್ತಿಕವಾಗಿ ಕೆಲವು ವಚನಗಳು ಈ ಕೆಳಗಿನಂತಿವೆ;

“ಅಂಬಿಗ ಅಂಬಿಗ ಎಂದು ಕುಂದ ನುಡಿಯದಿರು/ನಂಬಿದರೆ ಒಂದೇ ಹುಟ್ಟಲಿ/ಕಡೆಯ ಹಾಯಿಸುವೆನೆಂದಾತನಂಬಿಗರ/ಚೌಡಯ್ಯ ನಿಜಶರಣನು”

ಈ ಮೇಲಿನ ವಚನ ಶ್ರೀ ಅಂಬಿಗರ ಚೌಡಯ್ಯನವರ ಸ್ವಾಭಿಮಾನ, ಧೈರ್ಯ, ನೇರ, ನಿರ್ಭಿಡೆಯ ವ್ಯಕ್ತಿತ್ವದ ಪ್ರತೀಕವಾಗಿದೆ.

ಹನ್ನೆರಡನೇ ಶತಮಾನದ ಸಂದರ್ಭದಲ್ಲಿ ಜಾತಿ ಮತ್ತು ವರ್ಗ ವ್ಯವಸ್ಥೆ ಎಷ್ಟರಮಟ್ಟಿಗಿತ್ತು ಎಂಬುದನ್ನು ಈ ವಚನ ಸೂಚಿಸುತ್ತದೆ. ಅಂತಹ ವಿಚಿತ್ರ, ವಿಕ್ಷಿಪ್ತ ಸನ್ನಿವೇಶದಲ್ಲಿ ಬಸವಾದಿ ಶರಣರು ಜಾತೀಯತೆ, ವರ್ಗ – ವರ್ಣ ವ್ಯವಸ್ಥೆಯ ವಿರುದ್ಧ ಬೃಹತ್ ಚಳುವಳಿಯನ್ನು ಕೈಗೊಂಡಾಗ ಅಂಬಿಗರ ಚೌಡಯ್ಯನವರ ಸತ್ಯನಿಷ್ಠೆ, ಪ್ರಾಮಾಣಿಕತೆಯ ವಚನಗಳು ಪ್ರಖರವಾಗಿ ಕಾಣಿಸುತ್ತವೆ. ಕೆಲವು ಢೋಂಗಿ ಭಕ್ತರಿಗೆ, ಕಪಟ ಸನ್ಯಾಸಿಗಳಿಗೆ ತನ್ನ ಖಾರವಾದ ವಚನಗಳ ಮೂಲಕ ಚುರುಕು ಮುಟ್ಟಿಸುತ್ತಾರೆ.

ಆಡಂಬರ ಮತ್ತು ದುರಾಸೆಯ ಜನರ ಮನಸ್ಥಿತಿ ಕಂಡು ಕೆಂಡಾಮಂಡಲವಾಗಿ ಪ್ರಸ್ತುತ ಪಡಿಸಿದ ಒಂದು ವಚನ ಇಂತಿದೆ;

“ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಕಾಳೋಗರನ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹಾರುವ ಪಕ್ಷಿಯನು/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೆಬ್ಬುಲಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೊಯ್ವ ಹೆಮ್ಮಾರಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಬರುವ ಉರಿ ಬಾಣವನು/ಇಂತೆಲ್ಲವನು ಒಂದೇ ಮಂತ್ರದಲ್ಲಿ ನಿಲ್ಲಿಸಬಹುದು;/ಲೋಭವೆಂಬ ಗ್ರಹಣ ಹಿಡಿದವರ ಏತರಿಂದಲೂ/ನಿಲ್ಲಿಸಲಾಗದು/ಈ ಲೋಭಕ್ಕೆ ದಾರಿದ್ರ್ಯವೇ ಔಷಧವು;/ಹೇಳಿದರೆ ಕೇಳರು, ತಾವು ತಿಳಿಯರು/ಶಾಸ್ತ್ರವ ನೋಡರು, ಭಕ್ತಿಯ ಹಿಡಿಯರು/ಇಂತಹ ಗೊಡ್ಡು ಮೂಳ ಹೊಲೆಯರಿಗೆ/ಕರ್ಮವೆಂಬ ಶರದ್ಧಿಯಲ್ಲಿ ಬಿದ್ದು ಹೊರಳಾಡುವುದೇ/ಸತ್ಯವೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು”

ಸಂಸಾರದ ಜಂಜಾಟದಲ್ಲಿ ಬಿದ್ದು ಒದ್ದಾಡುತ್ತಾ ಶಿವನನ್ನು ಮರೆತು ಹತ್ತು ಹಲವು ಚಿಂತೆಯಲ್ಲಿ ಮುಳುಗಿರುವ ಶವ ಮುಖದ ಜನರ ಸ್ಥಿತಿ-ಗತಿಯನ್ನು ಅರ್ಥಗರ್ಭಿತವಾಗಿ ಸಾದರಪಡಿಸುವ ಒಂದು ವಚನ ಇಂತಿದೆ;

“ಬಡತನಕೆ ಉಂಬುವ ಚಿಂತೆ/ಉಣಲಾದಡೆ ಉಡುವ ಚಿಂತೆ/ಉಡಲಾದಡೆ ಇಡುವ ಚಿಂತೆ/ಇಡಲಾದಡೆ ಹೆಂಡಿರ ಚಿಂತೆ/ಹೆಂಡಿರಾದರೆ ಮಕ್ಕಳ ಚಿಂತೆ/ಮಕ್ಕಳಾದಡೆ ಬದುಕಿನ ಚಿಂತೆ/ಬದುಕಾದಡೆ ಕೇಡಿನ ಚಿಂತೆ/ಕೇಡಾದಡೆ ಮರಣದ ಚಿಂತೆ/ಇಂತೀ ಹಲವು ಚಿಂತೆಯಲ್ಲಿಪ್ಪವರ ಕಂಡೆನು/ಶಿವನ ಚಿಂತೆಯಲ್ಲಿದ್ದಾತರೊಬ್ಬರನೂ ಕಾಣೆನೆಂದಾತ/ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು!”

ಸಮಯದ ಸದ್ಬಳಕೆ ಮಾಡಿಕೊಂಡು ಕಾಯಕ ಮಾಡುತ್ತಾ ಶಿವಭಕ್ತರಾಗಿ, ಜೀವನ ಪಾವನವಾಗಿಸುವಂತೆ ಕರೆ ನೀಡುವ ಒಂದು ವಚನ ಇಂತಿದೆ;

“ಗಾಳಿ ಬಿಟ್ಟಾಗ ತೂರಿಕೊಳ್ಳಿರಯ್ಯ/ಗಾಳಿ ನಿಮ್ಮ ಅಧೀನವಲ್ಲ ಕಂಡಯ್ಯ/ನಾಳೆ ತೂರಿಹೆನೆಂದಡಿಲ್ಲ ಕಂಡಯ್ಯ/ಶಿವಶರಣೆ ಎಂಬುದೊಂದು ಗಾಳಿ ಬಿಟ್ಟಲ್ಲಿ/ಬೇಗ ತೂರೆಂದನಂಬಿಗರ ಚೌಡಯ್ಯ”

ಕಾವಿ ಬಟ್ಟೆ ತೊಟ್ಟು, ಭಿಕ್ಷೆಗಾಗಿ ಜೋಳಿಗೆ ಹಾಕಿದವರೆಲ್ಲರೂ ಜಂಗಮರು, ಗುರುಗಳಾಗಲಾರರು ಎಂಬುದನ್ನು ವಿಡಂಬಿಸುವ ಒಂದು ವಚನ ಇಂತಿದೆ;

“ಕಂಥೆ ತೊಟ್ಟವ ಗುರುವಲ್ಲ/ಕಾವಿ ಹೊದ್ದವ ಜಂಗಮನಲ್ಲ/ಶೀಲ ಕಟ್ಟಿದವ ಶಿವಭಕ್ತನಲ್ಲ/ನೀರು ತೀರ್ಥವಲ್ಲ/ಕೂಳು ಪ್ರಸಾದವಲ್ಲ/ಹೌದೆಂಬವನ ಬಾಯ ಮೇಲೆ/ಅರ್ಧ ಮಣದ ಪಾದರಕ್ಷೆಯ ತೆಗೆದುಕೊಂಡು/ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ/ಟೊಕ ಟೊಕನೆ ಹೊಡೆ ಎಂದಾತ/ನಮ್ಮ ಅಂಬಿಗರ ಚೌಡಯ್ಯ”

ಹೀಗೆ ಬಸವಾದಿ ಶರಣರ ಸಮಾಜ ಸುಧಾರಣಾ ಚಳವಳಿಯಲ್ಲಿ ತಮ್ಮ ಅಮೂಲ್ಯ ಸೇವೆಯನ್ನು ಮುಡುಪಾಗಿಟ್ಟ ಶ್ರೀ ಅಂಬಿಗರ ಚೌಡಯ್ಯನವರು ತಮ್ಮ ಬದುಕಿನ ನೀತಿಯಿಂದ, ನಿಷ್ಠೆಯಿಂದ, ತೀಕ್ಷ್ಣ ಖಂಡನೆಯ ಬಂಡಾಯ ವಚನಗಳಿಂದ ಗಮನ ಸೆಳೆದು, ಅವರು ರಚಿಸಿದ ವಚನಗಳಿಗೆ ತಮ್ಮ ಹೆಸರನ್ನೇ ಅಂಕಿತವನ್ನಾಗಿಟ್ಟಿರುವದು ವಿಶೇಷವಾಗಿದೆ. ಸಮಾಜದ ಕೊಳೆಯನ್ನು ತೊಳೆಯುವ ನಿಟ್ಟಿನಲ್ಲಿ ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ಎದ್ದು ಕಾಣುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮ್ಯಾಸ ನಾಯಕ ಬುಡಕಟ್ಟನಲ್ಲಿ ದೀಪಾವಳಿ ಹಬ್ಬದ ಆಚರಣೆ

Published

on

ಭಾರತ ತನ್ನ ಭೌಗೋಳಿಕ ಸ್ವರೂಪದಲ್ಲಿ ವೈವಿಧ್ಯತೆಯನ್ನು ಹೊಂದಿರುವಂತೆ ಅನೇಕ ಬಗೆಯ ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿದೆ.

ದೇಶದ ಪ್ರತಿಯೊಂದು ಸಮುದಾಯವು ಬದುಕಿನ ಕ್ರಮದಲ್ಲಿ ತನ್ನದೇ ಆದ ವೈವಿಧ್ಯತೆಯನ್ನು ಹೊಂದಿದ್ದು ಹಬ್ಬಗಳ ಆಚರಣೆಯಲ್ಲಿಯೂ ಈ ಭಿನ್ನತೆಯನ್ನು ಕಾಣಬಹುದಾಗಿದೆ. ಈಗ ನಡೆಯುತ್ತಿರುವ ದೀಪಾವಳಿ ಹಬ್ಬದ ಆಚರಣೆಯೂ ಇದರಿಂದ ಹೊರತಾಗಿಲ್ಲ. ಇಡೀ ಭಾರತ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸುತ್ತಿದೆ ಎಂಬುದು ಸಾಮಾನ್ಯವಾದ ಹೇಳಿಕೆಯಾಗಿರುತ್ತದೆ.

ದೀಪಾವಳಿ ಎಂದರೆ ದೀಪವನ್ನು ಬೆಳಗಿಸುವ ಹಬ್ಬ. ಜಗದ ಕತ್ತಲೆಯನ್ನು, ಮನದ ಕತ್ತಲೆಯನ್ನು, ಕಳೆಯುವ ಹಬ್ಬ ಎಂಬುದು ಒಂದು ನಂಬಿಕೆಯಾದರೆ ಬಲಿಚಕ್ರರ‍್ತಿಯನ್ನು ವರ್ಷಕೊಮ್ಮೆ ನೆನಪಿಸಿಕೊಳ್ಳುವುದು, ನರಕಾಸುರನನ್ನು ಶ್ರೀ ಕೃಷ್ಣ ಪರಮಾತ್ಮ ಕೊಂದು ಆತನ ಸೆರೆಯಲ್ಲಿದ್ದ ಅಸಂಖ್ಯಾತ ಮಹಿಳೆಯರಿಗೆ ಬಿಡುಗಡೆ ದೊರಕಿಸಿದ ದಿನವಿದು ಎಂದು ನೆನೆಪಿಸಿಕೊಳ್ಳುವುದು ಹೀಗೆಲ್ಲಾ ಪ್ರಚಲಿತ ಪುರಾಣಮೂಲಗಳಿಂದ ಈ ಹಬ್ಬದ ಆಚರಣೆಯ ಸಾಂಕೇತಿಕತೆಯನ್ನು ಅರ್ಥೈಸಲಾಗುತ್ತದೆ.

ಈ ಎರಡೂ ಘಟನೆಗಳನ್ನು ಕುರಿತು ಬೇರೆ ಬೇರೆ ನೆಲೆಯಿಂದ ಯೋಚಿಸಿದಾಗ ಇದನ್ನು ದೇಶದಾದ್ಯಂತ ಎಲ್ಲರೂ ಸಡಗರಿಸಬೇಕೆ? ಆಳುವವರ ಸಡಗರ ಎಲ್ಲರ ಸಡಗರವಾಗಲೇಬೇಕಾದ ಅನಿವಾರ್ಯವೇ? ಎಂಬ ನೆಲೆಗಳಿಂದ ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕಾಗುತ್ತದೆ.

ನಿಸರ್ಗಮೂಲ ಸಿದ್ದಾಂತವನ್ನು ಅನ್ವಯಿಸಿಕೊಂಡರೇ ಬಹುಶಃ ಈ ದೀಪಾವಳಿಯ ತಿಂಗಳು, ಅಂದರೇ ಕಾರ್ತಿಕ ಮಾಸದ ಹವಾಮಾನದಲ್ಲಿ ವಿಶೇಷತೆಯಿದೆ. ಕಾರ್-ಅಂದರೇ ಮಳೆ ಸುರಿಯುವುದು. ಕರ‍್ತೀಕ ಅಂದರೇ ಮಳೆಗಾಲದ ಕೊನೆಯ ದಿನಗಳಿವು, ಹಿಂಗಾರಿನ ಕೊನೆಯ ಮಳೆಗಳು ಸುರಿಯುವ ಮತ್ತು ಇದರೊಂದಿಗೆ ಚಳಿಗಾಲವೂ ಆರಂಭವಾಗುವುದರಿಂದ ಮಂಜುಮುಸುಕಿದ ವಾತಾವರಣವೂ ಜೊತೆಗೂಡಿ ಕತ್ತಲೆಯ ಆಧಿಕ್ಯ ಹೆಚ್ಚು. ಬಹುಶಃ ಈ ಕತ್ತಲೆಯನ್ನು ನಿವಾರಿಸಿಕೊಳ್ಳಲು ಮನೆಮನೆಯ ಮುಂದೆ ದೀಪಗಳನ್ನು ಹಚ್ಚಿ ಬೆಳಕನ್ನು ಕಂಡುಕೊಳ್ಳುವ ಉದ್ದೇಶವೂ ಇರಬಹುದೆನ್ನಿಸುತ್ತದೆ. ಒಟ್ಟಾರೆ ನಾಡಿನಾದ್ಯಂತ ಆಚರಿಸಲಾಗುವ ಈ ದೀಪಾವಳಿ ಹಬ್ಬವನ್ನು ಮ್ಯಾಸಮಂಡಲದಲ್ಲಿಯೂ ಆಚರಿಸಲಾಗುತ್ತದೆ.

ಮ್ಯಾಸಬುಡಕಟ್ಟಿನ ದೇವರು ಕಾಣದ ಲೋಕದವರಲ್ಲ. ಪ್ರಕೃತಿಯ ವಿಶಿಷ್ಟತೆಯನ್ನೇ ದೈವ ಎಂದು ಭಾವಿಸಿ ಪೂಜಿಸುವುದು, ಸೃಷ್ಟಿಗೆ ಕಾರಣವಾಗುವ ತಾಯಿಯನ್ನೇ ಮೊದಲ ದೈವ ಎಂದು ಪೂಜಿಸುವುದು, ತಮಗೆ ಬದುಕನ್ನು ಕಟ್ಟಿಕೊಟ್ಟು ತಮ್ಮನ್ನು ಮುನ್ನಡೆಸಿದ ಹಿರಿಯರನ್ನೇ, ನಾಯಕರನ್ನೇ ತಮ್ಮದೇವರು ಎಂದು ಪೂಜಿಸುವುದು, ಮತ್ತು ತಮ್ಮ ಬದುಕಿಗೆ ಆಧಾರವಾಗಿದ್ದ ಪಶುಸಂಪತ್ತನ್ನೇ ತಮ್ಮ ಹಿರಿಯರೊಂದಿಗೆ ಸಮೀಕರಿಸಿ ದೈವಗಳೆಂದು ಭಾವಿಸಿ ಪೂಜಿಸುವುದು ಈ ಬುಡಕಟ್ಟಿನ ವಿಶೇಷತೆ. ತಮ್ಮ ನಾಯಕ ಅಥವಾ ನಾಯಕಿ ಬಳಸುತ್ತಿದ್ದ ವಸ್ತುವನ್ನು ಬಿದಿರಿನ ಬುಟ್ಟಿಯಲ್ಲಿಟ್ಟು, ಕೆಲವು ಕಡೆ ಸಾಲಿಗ್ರಾಮಗಳನ್ನು ಮತ್ತು ನಾಯಕ/ನಾಯಕಿ ಬಳಸುತ್ತಿದ್ದ ಬಿಲ್ಲು, ಬಾಣ/ ಖಡ್ಗವನ್ನೇ ದೇವರೆಂದು ನಂಬಿ ಪೂಜಿಸುವ ಸಮುದಾಯದಲ್ಲಿ ದೀಪಾವಳಿಯನ್ನು ಇವುಗಳಿಗೆ ಪೂಜೆ ಸಲ್ಲಿಸುವ ಮೂಲಕವೇ ಆಚರಿಸಲಾಗುತ್ತದೆ.

ಮ್ಯಾಸಮಂಡಲದ ಎಲ್ಲಾ ಗುಡಿಕಟ್ಟುಗಳಲ್ಲಿಯೂ ಮತ್ತು ಇದಕ್ಕೆ ಸಂಬಂಧಿಸಿದ ಎತ್ತಿನಗೂಡುಗಳಲ್ಲಿ ಈ ಹಬ್ಬದ ಆಚರಣೆ ನಡೆಯುತ್ತದೆ. ದೀಪಾವಳಿ ಅಮಾವಾಸ್ಯೆಕಳೆದು ಪಾಡ್ಯದ ಸೋಮವಾರ ಹೀರೆಹಳ್ಳಿಯ ದಡ್ಡಿಸೂರನಾಯಕನ ಗುಡಿಗೆ ಈತನಿಂದ ಸಂರಕ್ಷಿಸಲ್ಪಟ್ಟ ದನಕರುಗಳ ಪರಂಪರೆಯಿಂದ ಇಂದಿಗೂ ಉಳಿದು ಬಂದಿರುವ ಆಕಳ ಗೂಡಿನಿಂದ (ಗುಡೇಕೋಟಿ ಬಳಿ ಇರುವ} ಕಿಲಾರಿಗಳು ಮೊಸರು,ತುಪ್ಪವನ್ನು ತಂದು ಸೋಮವಾರ ಸಂಜೆ ಗುಡಿಗೆ ಒಪ್ಪಿಸುತ್ತಾರೆ. ತಮ್ಮ ಹೊಲಗಳಲ್ಲಿ ಬೆಳೆದ ಹಸನಾದ ಸಜ್ಜೆಯತೆನೆಗಳನ್ನು ತಂದು ಒಪ್ಪಿಸುವ ವಾಡಿಕೆಯೂ ಇದೆ. ರಾತ್ರಿಯಿಡಿ ಎಲ್ಲರೂ ಸೇರಿ ಗುಡಿಯಲ್ಲಿ ಹುರುಳಿ, ಗುಗ್ಗರಿ ಬೇಯಿಸಿ ಜೋಳ ಅಥವಾ ಸಜ್ಜೆಯ ಅನ್ನ ಮಾಡಿ ಗೂಡಿನಿಂದ ತಂದ ಮೊಸರನ್ನು ಸೇರಿಸಿ ಬೆಳಗಿನಜಾವ ದಡ್ಡಿಸೂರನಾಯಕನಿಗೆ ನೈವೇದ್ಯ ಮಾಡಲಾಗುತ್ತದೆ.

ರಾತ್ರಿಯಿಡೀ ಉರುಮೆ ವಾದ್ಯದ ಸೇವೆ, ನಾಯಕನನ್ನು ಕುರಿತು ಪದ ಹೇಳುವುದು ನಡೆಯುತ್ತದೆ, ಹೀಗೆ ಗುಡಿಯಲ್ಲಿ ನಡೆಯುವ ಪೂಜೆಯೇ ತಮಗೆ ದೀಪಾವಳಿ ಹಬ್ಬದ ಆಚರಣೆಯಾಗಿದ್ದು ಮನೆ ಮನೆಯ ಮುಂದೆ ದೀಪ ಬೆಳಗಿಸುವ, ರಂಗೋಲಿ ಹಾಕುವ, ಪಟಾಕಿ ಸಿಡಿಸುವ ಆಚರಣೆಗಳು ಇಲ್ಲಿ ಇರುವುದಿಲ್ಲ.
ಕಂಪಳ ದೇವರ ಹಟ್ಟಿಯಲ್ಲಿ ಇದಕ್ಕಿಂತ ಸ್ವಲ್ಪ ಭಿನ್ನವಾಗಿ ಹಬ್ಬದ ಆಚರಣೆ ನಡೆಯುತ್ತದೆ. ಮಾಘ ಮಾಸದಲ್ಲಿ ನಡೆಯುವ ಗುಗ್ಗರಿ ಹಬ್ಬದಲ್ಲಿ ಮಾಡುವಂತೆ ಈ ಸಮಯದಲ್ಲಿಯೂ ಅಮಾವಾಸ್ಯೆ ನಂತರದ ಶುಕ್ರವಾರದಂದು ಪೆಟ್ಟಿ ದೇವರನ್ನು ಗುಡಿಯಿಂದ ತಂದು ಹಟ್ಟಿಯ ಹೊರವಲಯದಲ್ಲಿ ಹೊಸ ಉದಿ/ಪದಿಯನ್ನು ಕಟ್ಟಿ ಇದರಲ್ಲಿ ಕೂರಿಸಿ ಮೂರು ದಿನಗಳ ಹಬ್ಬದ ಆಚರಣೆ ನಡೆಸಲಾಗುತ್ತದೆ.

ತೆಲುಗಿನಲ್ಲಿ ಇದನ್ನು ‘ದುಯಿಲಪಂಡುವ’ ಎಂದು ಕರೆಯಲಾಗುತ್ತದೆ. ಕಂಪಳ ದೇವರ ಪೆಟ್ಟಿಯೊಂದಿಗೆ ಜಗಲೂರು ಪಾಪನಾಯಕನನ್ನು ಸಂಕೇತಿಸುವ ಬಿಲ್ಲು ದೇವರನ್ನೂ ತಂದು ಪೂಜಿಸಲಾಗುತ್ತದೆ. ಆಕಳಗೂಡಿನ ಮೀಸಲು ಮೊಸರು ಮತ್ತು ಬೆಣ್ಣೆಯನ್ನು ಅರ್ಪಿಸುವುದು ಇಲ್ಲಿ ಬಹಳ ವಿಶೇಷವಾದುದು. ಗತಿಸಿದ ಎತ್ತು ಮತ್ತು ಆಕಳಿಂದ ಸಂಗ್ರಹಿಸಿದ ಕೊಂಬನ್ನು ಇಲ್ಲಿ ಬೆಣ್ಣೆಯನ್ನು ಶೇಕರಿಸಲು ಬಳಸಲಾಗುತ್ತದೆ.ಬುಡಕಟ್ಟಿನ ಜನತೆ ತಮಗೆ ಸಿಗುವ ವಸ್ತುಗಳನ್ನೇ ಸಲಕರಣೆಗಳನ್ನಾಗಿ ಬಳಸುವ ವಿಧಾನ ಇಲ್ಲಿ ಗಮನ ಸೆಳೆಯುತ್ತದೆ. ಹೀಗೆ ಸಂಗ್ರಹಿಸಿದ ಬೆಣ್ಣೆಯನ್ನು ಕಾಯಿಸಿ ತುಪ್ಪ ಮಾಡಿ ಪದಿಯಲ್ಲಿ ದೀಪವನ್ನು ಉರಿಸಲಾಗುತ್ತದೆ.ಮೊಸರು,ಜೋಳದ/ಸಜ್ಜೆಯ ಅನ್ನ,ಬಾಳೆಹಣ್ಣು,ಬೆಲ್ಲವನ್ನು ಬೆಳಗಿನಜಾವದಲ್ಲಿ ನೈವೇದ್ಯ,ಮಾಡಲಾಗುತ್ತದೆ.

ಇದರೊಂದಿಗೆ ಎತ್ತುಗಳನ್ನೂ ಹರಿಯಿಸುವುದು, ಮಣೇವು, ಉರಿಯುವ ಪಂಜುಗಳನ್ನೇ ನುಂಗುವುದು ಈ ಹಬ್ಬದ ಪ್ರಮುಖ ಆಚರಣೆಗಳಾಗಿವೆ. ನನ್ನಿವಾಳದ ಕಟ್ಟಿಮನೆಗೆ ಸೇರಿದ ಬಂಗಾರುದೇವರ ಹಟ್ಟಿಯಲ್ಲಿ ದೇವರುಗಳನ್ನು ಮತ್ತು ಬೆಳಗಟ್ಟದ ಸೂರೆಯರಗಾಟನಾಯಕನಿಗೆ ಸಂಬಂಧಿಸಿದಂತೆ, ಬೋಸೇದೇವರ ಹಟ್ಟಿಯ ಬೋಸೇರಂಗಯ್ಯನ ಪೆಟ್ಟಿಯನ್ನು, ದೊಣಮಂಡಲಹಟ್ಟಿಯ ಮಂಡಬೊಮ್ಮದೇವರನ್ನು ಹಟ್ಟಿಯಿಂದ ಹೊರಗೆ ತಂದು ಊರ ಹೊರಗೆ ಹೊಸ ಪದಿಯನ್ನು ಕಟ್ಟಿ, ಗೂಡಿನಿಂದ ಎತ್ತುಗಳನ್ನು ಕರೆಸಿ ಗೌರವಿಸಿ ಪೂಜಿಸುವ ಕ್ರಮವಿದೆ.

ಒಟ್ಟಾರೆ ಈಮ್ಯಾಸಮಂಡಲದ ದೀಪಾವಳಿ ಹಬ್ಬಕ್ಕೆ ಆಯಾ ಗುಂಪಿನವರೆಲ್ಲರೂ ಕಾಸು,ಹಾಲು, ಮೊಸರನ್ನು ಅರ್ಪಿಸಿ ಪಾಲ್ಗೊಳ್ಳುವಿಕೆಯೇ ಇಲ್ಲಿ ಸಾಮುದಾಯಿಕತೆಯ ಮಹತ್ವವನ್ನು ಪಡೆಯುತ್ತದೆ. ಈ ದೀಪಾವಳಿ ಹಬ್ಬದ ಆಚರಣೆಯಲ್ಲಿಎಲ್ಲಾ ಪದಿಗಳಲ್ಲಯೂ ದಾಸೋಹ ವಿಶೇಷವಾಗಿ ನಡೆಯುತ್ತದೆ. ಮುಂಗಾರು ಮಳೆ ಸುರಿದು ಸೊಂಪಾಗಿ ಬೆಳೆದ ಹುಲ್ಲನ್ನು ತಿಂದು ಹಸುಗಳು ಸಾಕಷ್ಟು ಹಾಲನ್ನು ಕೊಡುವುದರಿಂದ ಸಮೃದ್ಧವಾದ ಹಾಲು,ಮೊಸರು ಈ ಹಬ್ಬಕ್ಕೆ ಒದಗುತ್ತದೆ.ಇದನ್ನು ಎಡೆ ಮಾಡಿದ ನಂತರ ಎಲ್ಲರಿಗೂ ದಾಸೋಹದಲ್ಲಿ ನೀಡಲಾಗುತ್ತದೆ.

ಈ ಬುಡಕಟ್ಟಿನ ದೀಪಾವಳಿ ಹಬ್ಬದ ಆಚರಣೆಯ ಹಿಂದೆ ನಮ್ಮ ಭಾರತದ ಪೌರಾಣಿಕ ಕಥನಗಳಾವುವು ಕೇಳಿ ಬರುವುದಿಲ್ಲ.ಮನೆ ಮನೆಯ ಮುಂದೆ ದೀಪಗಳನ್ನು ಹಚ್ಚಿ ಸಡಗರಿಸುವುದು ಇಲ್ಲಿಲ್ಲ. ರಂಗೋಲಿ ಹಾಕುವುದಂತೂ ಬುಡಕಟ್ಟಿನ ನಿಶೇಧಗಳಲ್ಲಿ ಒಂದಾಗಿರುವುದರಿಂದ ಆ ಪ್ರಸ್ತಾಪವೇ ಇಲ್ಲಿಲ್ಲ. ಬದಲಾಗಿ ತಮ್ಮ ಮನೆ ದೇವರಾದ ಪೆಟ್ಟಿಗೆ ದೇವರು/ಬಿಲ್ಲು ದೇವರು/ಎತ್ತುಗಳನ್ನು ಗೌರವಿಸಿ ಪೂಜಿಸುವುದು. ಈ ಮೂಲಕವಾಗಿಯೇ ತಮ್ಮ ಮುಂದಿನ ಬದುಕಿಗೆ ಬೇಕಾದ ಬೆಳಕನ್ನು, ಚೈತನ್ಯವನ್ನು ಕೋರುವುದು ಇಲ್ಲಿ ಮುಖ್ಯವಾಗಿರುತ್ತದೆ.

ತಾನು ಬದುಕಿರುವ ಪರಿಸರ, ತಮಗೆ ಬದುಕನ್ನು ಕಟ್ಟಿಕೊಡುವ ಪ್ರಾದೇಶಿಕತೆ ಮತ್ತು ಭೌತಿಕ ಪ್ರಪಂಚ ಮತ್ತು ತನಗೆ ನೈತಿಕ ಬೆಂಬಲವಾಗಿ ನಿಂತ ತನ್ನ ಸಾಂಸ್ಕೃತಿಕ ಜಗತ್ತು ಈ ಎಲ್ಲವುಗಳ ಮೂಲಕ ಒಡಮೂಡುವ ದೇಸಿತನ ಆಯಾ ಬುಡಕಟ್ಟಿನ ಆಚರಣೆಗಳಿಗೆ ಸೈದ್ಧಾಂತಿಕತೆಯನ್ನು ಒದಗಿಸಿಕೊಡುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಮ್ಯಾಸಬೇಡ ಬುಡಕಟ್ಟಿನ ಈ ದೀಪಾವಳಿ ಆಚರಣೆಯಲ್ಲಿ ಈ ದೇಸಿತನವೇ ಒಡಮೂಡಿರುವುದನ್ನು ಕಾಣಬಹುದಾಗಿದೆ.ಆದಿವಾಸಿಗಳ ಧರ‍್ಮಿಕ ಜಗತ್ತಿನಲ್ಲಿ ಸರ‍್ಪಣಾಭಾವ ಮತ್ತು ಪಾರಂಪರಿಕ ಸಂಬಂಧ ಮುಖ್ಯವಾಗಿರುತ್ತದೆ. ಈ ಆಚರಣೆಗಳನ್ನು ಸಮುದಾಯದ ಸಾಂಸ್ಕೃತಿಕ ಅಸ್ಮಿತೆಗಳು ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending