ಲೈಫ್ ಸ್ಟೈಲ್
ರೌಡಿ ಎಮ್ಮೆ ಮತ್ತದರ ಮೂಗುದಾರ..!
- ಡಾ.ಎನ್.ಬಿ.ಶ್ರೀಧರ, ಶಿವಮೊಗ್ಗ
ದೂರವಾಣಿಯ ಆ ಕಡೆಯಿಂದ “ ಡಾಕ್ಟ್ರೇ.. ಈ ಕಡೆ ಬರುವಾಗ ನಮ್ಮನೆ ರೌಡಿ ಎಮ್ಮೆಗೆ ಮೂಗುದಾರ ತರಲು ಮರೀಬೇಡಿ” ಅಂದಾಗಲೇ ನನಗೆ ನೆನಪಾಗಿದ್ದು ಅವರ ಮನೆಯ ರೌಡಿ ಶೀಟರ್ ಮಹಿಷಿಯ ಅಪರಾವತಾರದ ಎಮ್ಮೆಗೆ ಮೂಗುದಾರ ಹಾಕಿ ನಿಯಂತ್ರಿಸಲು ನಾನೇ ಹೇಳಿದ್ದ ಸಲಹೆಯನ್ನು ಅನುಷ್ಠಾನಕ್ಕೆ ತರುವುದನ್ನು ಮರೆತಿದ್ದು. ಆಗಲೇ ಸಣ್ಣದಾಗಿ ಮಳೆಗಾಲ ಪ್ರಾರಂಭವಾಗಿದ್ದರಿಂದ ದನ ಎಮ್ಮೆಗಳಿಗೆ ಗಂಟಲು ಬೇನೆ ಲಸಿಕೆಯನ್ನು ಹಾಕುವ ಕಾರ್ಯದಲ್ಲಿ ಬ್ಯುಸಿಯಾಗಿದ್ದರಿಂದ ಇಂತಹದ್ದೊಂದು ಕಾರ್ಯವಿದೆ ಎಂಬುದೇ ನನ್ನ ಮಸ್ತಿಷ್ಕದಿಂದ ಆವಿಯಂತೆ ಮಾಯವಾಗಿತ್ತು.
ನನ್ನ ಶಿಷ್ಯನಿಗೆ “ ಒಂದ್ ಮೂಗುದಾರ ಸೆಟ್ ರೆಡಿ ಮಾಡೋ.. ಆ ದಿನದಿಂದ ಹೇಳ್ತಾ ಇದೀನಿ. ನೆನಪೇ ಮಾಡ್ಲಿಲ್ಲ ನೀನು” ಎಂದು ನಾನು ಮರೆತಿರುವ ಈ ವಿಷಯವನ್ನು ಆತನ ತಲೆಗೆ ಕಟ್ಟಿದೆ. ಆ ದಿನ ಶನಿವಾರವಾದ್ದರಿಂದ ಆತನಿಗೆ ಅನೇಕ “ಮಹತ್ವ”ದ ಕೆಲಸಗಳಿರುವುದರಿಂದ “ಸಾರ್. ಈವತ್ತು ನಾನು ಬರಕ್ಕಾಗಲ್ಲ. ತುಂಬಾ ಕೆಲ್ಸ ಇದೆ”.. ಎಂದು ನಾನು ಹೇಳುವ ಮೊದಲೇ ಪೂರ್ವನಿರೀಕ್ಷಿತ ಜಾಮಿನು ಅರ್ಜಿ ಹಾಕಿಕೊಂಡು ನಾನೊಬ್ಬನೇ ಈ ಕೆಲಸಕ್ಕೆ ಹೊರಡುವುದು ಎಂದು ತೀರ್ಮಾನಿಸಿಬಿಟ್ಟ.
ಸಂತೆಯ ದಿನ ಕುದುರುವ ಆತನ ಇಂತಹ ಅನೇಕ ವ್ಯವಹಾರಗಳ ಬಗ್ಗೆ ಸಕಲವನ್ನೂ ಅಮೂಲಾಗ್ರವಾಗಿ ತಿಳಿದಿದ್ದ ನಾನು ಅವನ ಬರುವಿಕೆಯ ಬಗ್ಗೆ ಅಷ್ಟೇನೂ ಆಸಕ್ತಿ ವಹಿಸಲಿಲ್ಲ. ನಿಜ. ಎತ್ತುಗಳಿಗೆ ಬಯಲು ಸೀಮೆಯ ಕಡೆ ಮೂಗುದಾರ ಇರದೇ ಇರುವುದನ್ನು ನೋಡಿದರೆ ಮದುವೆಯಾಗಿ ಮಂಗಳ ಸೂತ್ರವಿಲ್ಲದೇ ಓಡಾಡುವ ಬೆಂಗಳೂರಿನ ಕೆಲ ಹೆಣ್ಣುಮಕ್ಕಳು ನೆನಪಾಗಿ ಬಿಡುತ್ತಾರೆ. ಮಲೆನಾಡಿನಲ್ಲಿ ಗೋಪಾಲಕರು ಮೂಗುದಾರ ಹಾಕಿ ಜಾನುವಾರುಗಳನ್ನು ನಿಯಂತ್ರಿಸುವುದು ಕಡಿಮೆಯೇ ಸರಿ.
ಒಂದೋ ಜಾನುವಾರು ತೀರಾ ಹರಾಮಿಯಾಗಿ ಹಿಡಿತ ತಪ್ಪಿ ಹೋಗಿ ಬೆಂಗಳೂರು ಸೇರಿ ಹೊಟೇಲಿನಲ್ಲಿ ಕೆಲಸ ಮಾಡುವ ಹವ್ಯಕ ಮಾಣಿಯಂತೆ ಆಗಿರಬೇಕು ಇಲ್ಲವೇ ಸುಖಾ ಸುಮ್ಮನೇ ಬಿಲ್ಡಪ್ ಕೊಡುವ ಚಂದದ ಮಾಡರ್ನ್ ಹೆಣ್ ಹೈಕಳಂತೆ ಸ್ಟೈಲ್ ಮಾಡುವ ಬಿನ್ನಾಣಗಿತ್ತಿಯ ತರದ ದನಗಳನ್ನು ಹತೋಟಿಯಲ್ಲಿಡುವ ಬ್ರಹ್ಮಾಸ್ತ್ರ ಇದಾಗಿತ್ತು. ಬಯಲು ಸೀಮೆಯಲ್ಲೆಲ್ಲ ಈ “ಮೂಗುದಾರ” ಹಾಕುವ ಯಕಶ್ಚಿತ್ ಕಾರ್ಯಕ್ಕೆಲ್ಲ ಪಶುವೈದ್ಯರನ್ನು ಕರೆಯುತ್ತಲೇ ಇರಲಿಲ್ಲ.
ಹೋರಿಗಳ ಬೀಜ ತೆಗೆಯುವುದು, ದನದ ಕಾಲಲ್ಲಿರುವ ಹುಳವನ್ನು ಚಿಮ್ಮಟ ಹಾಕಿ ತೆಗೆಯುವುದು, ಮೂಗುದಾರ ಹಾಕುವುದು ಇದೆಲ್ಲಾ ಕಾರ್ಯ “ಕಂಪೌಂಡರ್” ಎಂದು ನಾಮಾಂಕಿತರಾದ ಜವಾನರೇ ಸದ್ದುಗದ್ದಲವಿಲ್ಲದೇ ಸಾಂಗೋಪಾಂಗವಾಗಿ ನೆರವೇರಿಸಿಬಿಡುತ್ತಿದ್ದರು.
ಗೋಕರ್ಣದ ದೊಡ್ದ ಭಟ್ಟರುಗಳು ದೊಡ್ಡ ದೊಡ್ಡ ಯಾಗ ಯಜ್ಞಗಳನ್ನು ನಡೆಸುವಾಗ ದರ್ಭೆ ಆಯುವುದು,ಹೋಮದ ಬೂದಿ ತೆಗೆಯುವುದು, ಚಿಲ್ಲರೆ ನಾಣ್ಯಗಳನ್ನು ಎಣಿಸುವುದು, ಬಾಳೆಕಂಬ ಹೊಂದಿಸುವುದು ಇತ್ಯಾದಿ ತಾಟಿ ಪಿಟಿ ಕೆಲಸಗಳಿಗೆ ಮರಿ ಭಟ್ಟರುಗಳನ್ನು ತೊಡಗಿಸಿ ತಾವು ಮಾತ್ರ ಗತ್ತಿನಿಂದ ಮಂತ್ರಗಳನ್ನು ಪಠಿಸುವಂತೆ ಈ ಮೂಗುದಾರ ಹಾಕುವ ಕೆಲಸವನ್ನು ಕೆಲ ಪಶುವೈದ್ಯರು ಅಸಡ್ಡೆಯಿಂದ ಗಮನಿಸಿ ದಿವ್ಯ ನಿರ್ಲಕ್ಷ್ಯದ ನೋಟ ಬೀರುತ್ತಿದ್ದರು.
ಬಯಲು ಸೀಮೆಯ ಆಸ್ಪತ್ರೆಗಳಲ್ಲಿ ಕಂಪೌಂಡರ್ ಅಲ್ಲಲ್ಲ.. ಜವಾನರು ತರಹೇವಾರಿ ಬಣ್ಣ ಬಣ್ಣದ ಕಾಟನ್, ನೈಲಾನ್, ಪ್ಲಾಸ್ಟಿಕ್ ಮೂಗುದಾರಗಳನ್ನು ಹುಬ್ಬಳ್ಳಿಯಿಂದ ತಂದು ಸ್ಟಾಕು ಮಾಡಿಕೊಂಡು ನಾನಾ ತರದ ರೇಟನ್ನು ಕುದುರಿಸಿ ರೈತರ ಎತ್ತುಗಳು ಹೋರಿಗಳಿಗೆ ಹಾಕುವುದು ಗೊತ್ತಿದ್ದರೂ ಸಹ ನಾವೆಲ್ಲಾ ಈ ವ್ಯವಹಾರಕ್ಕೂ ನಮಗೂ ಏನೂ ಸಂಬಂಧವಿಲ್ಲದಂತೆ ಸುಮ್ಮನಿರುತ್ತಿದ್ದೆವು. ಅದರಲ್ಲೂ ಹೋರಿಗಳ ಸಂತಾನ ಹರಣ ಕೇವಲ ಕಂಪೌಂಡರುಗಳ ಕಾರ್ಯವೆಂದೇ ಬಹುತೇಕರ ಭಾವನೆ.
ಹೋರಿಗಳನ್ನು ಕೆಡವಿಕೊಂಡು ಅವುಗಳ ವೃಷಣ ಚೀಲದ ಬುಡವನ್ನು ಬರ್ಡಿಜ಼ೋ ಕ್ಯಾಸ್ಟ್ರೇಟರ್ ಎಂಬ ಬಲೀಷ್ಠವಾದ ಇಕ್ಕಳದ ಮಧ್ಯೆ ಸಿಲುಕಿಸಿ ವೃಷಣಗಳಿಗೆ ಸರಬರಾಜಾಗುವ ರಕ್ತವನ್ನು ಒಮ್ಮೆಯೇ ಬಂದು ಮಾಡಿ ಅದು ಅನುತ್ಪಾದಕವಾಗಿ ಸೊರಗಿ ಹೋಗುವಂತೆ ಮಾಡುವುದಕ್ಕೆ ಗಿಡದ ಸಂತಾನವನ್ನು ಹೆಚ್ಚಿಸುವ ಕಲೆಯಾದ “ಕಸಿ” ಮಾಡುವುದು ಎಂದು ಅದ್ಯಾರು ಹೆಸರಿಟ್ಟರೋ?.
ಕಸಿಯಾದ ಮೇಲೆ ಹೋರಿಗಳು ಮಾಜಿಗಳಾಗಿ ಅವುಗಳ ಸಂತಾನದ ಬಗ್ಗೆ ಆಸಕ್ತಿಯನ್ನೇ ಕಳೆದುಕೊಂಡು ಎತ್ತಾಗಿ ರೈತನ ಹೇಳಿದಂತೆ ಕೇಳಿಕೊಂಡು ರೈತನ ಗಾಡಿ ಎತ್ತಾಗಿಯೋ ಅಥವಾ ಉಳುಮೆಯ ಎತ್ತಾಗಿಯೋ ಜೀವನವನ್ನು ಸವೆಸುತ್ತಿದ್ದವು.
ಪ್ರಾಣಿಪ್ರಿಯರ ಪ್ರಕಾರ ಇದೊಂದು ಪ್ರಾಣಿ ಹಿಂಸೆಯ ಪರಮಾವಧಿಯ ಪೈಶಾಚಿಕ ಕೃತ್ಯ. ಅವರ ಹೇಳುವ ಹಾಗೇ ಎತ್ತನ್ನು ಉಳುಮೆಗೆ, ಗಾಡಿ ಎಳೆಯಲು ಉಪಯೋಗಿಸುವುದೇ ಪ್ರಾಣಿ ಹಿಂಸೆ. ನಮ್ಮ ರೈತ ಬಾಂಧವರಿಗೆ ಇದೆಲ್ಲಾ ಅರ್ಥವಾಗುವುದು ಇನ್ನೊಂದು ಶತಮಾನವಾದರೂ ಸಾಧ್ಯವಿಲ್ಲ.
ಪಶುಗಳನ್ನು ತಲತಲಾಂತರದಿಂದ ಪ್ರೀತಿಯಿಂದ ಸಾಕುತ್ತಿರುವ ಉತ್ತರ ಕರ್ನಾಟಕದ ರೈತರ ಪ್ರಕಾರ ಪ್ರಾಣಿಹಿಂಸೆ, ಪ್ರಾಣಿಪ್ರೀತಿ ಬೆಂಗಳೂರಿನ ಶ್ರೀಮಂತರ ಮನೆಯ ಹೆಣ್ಮಕ್ಕಳು ಬೀದಿಯ ಕಂತ್ರಿ ನಾಯಿಗಳಿಗೆ ಬ್ರೆಡ್ಡು ಹಾಕುತ್ತಾ ಅದೇ ಪಶು ಪ್ರೀತಿ ಎಂದು ದೊಡ್ಡದಾಗಿ ಪೋಸು ಕೊಡುವ ಟೈಮ್ ಪಾಸ್ ಕೆಲಸ. ಅವರಿಗೆ ಪ್ರಾಣಿ ಪ್ರೀತಿಯ ಪಾಠ ಮಾಡ ಹೊರಟರೆ “ ಸಾಹೇಬ್ರೇ. ಸುಮ್ನಿರ್ರೀ. ಕುರಿಕೋಳಿ ಕಟದ್ ತಿನ್ನೋರು ಅದ್ಯಾಂಗ್ ಪ್ರಾಣಿ ಹಿಂಸೆ ಅಂತಾರ್ರೀ? ಅವು ಪ್ರಾಣಿ ಅಲ್ಲೇನ್ರಿ? ಜೀವ ಇಲ್ಲೇನ್ರಿ? ಎಂದು ಅವರು ಎತ್ತುಗಳನ್ನು ದುಡಿಸಿಕೊಳ್ಳುವದನ್ನು ವಿರೋಧಿಸುವವರ ಬಗ್ಗೆ ಅಭಿಪ್ರಾಯ ನೀಡುತ್ತಿದ್ದರು.
ನನ್ನ ಶಿಷ್ಯ ತಾಳಗುಪ್ಪದಲ್ಲಿರುವ ಸಕಲ ವಸ್ತುಗಳೂ ದೊರಕುವ ಹೈಟೆಕ್ ಅಂಗಡಿಯಾದ ಶೆಟ್ಟರ ಅಂಗಡಿಗೆ ಹೋಗಿ ಕಿರುಬೆರಳು ಗಾತ್ರದ ಉದ್ದನೆಯ ಕಾಟನ್ ದಾರವನ್ನು ತಂದು ಅದರ ತುದಿಯ ಹಲವು ಎಳೆಗಳನ್ನು ತೆಗೆದು ಕಲಾತ್ಮಕವಾಗಿ ಚೂಪಾಗಿ ಮಾಡಿ ಅದನ್ನು ಹುಡುಗಿಯರ ಜಡೆಯಂತೆ ನೇಯ್ದು, ಸೆಫ್ಟಿಕ್ ಆಗದಂತೆ ಇರಲು ಪೊವಿಡೋನ್ ಆಯೋಡಿನ್ ಎಂಬ ಸ್ಯಾನಿಟೈಸರ್ ತರದ ಕಂದು ಬಣ್ಣದ ದ್ರಾವಣದಲ್ಲಿ ಅದ್ದಿದರೆ ಅದು ಅರಿಷಿಣದಲ್ಲಿ ಮಿಂದ ಹೊಸ ಮಾಂಗಲ್ಯದಂತೆ ಮಿಂಚುತ್ತಿತ್ತು.
ಎಮ್ಮೆಗಳಿಗೆ ಎತ್ತುಗಳಿಗೆ ಹಾಕಿದಂತೇ ಮೂಗುದಾರ ಹಾಕುವುದೇನೂ ಅಷ್ಟೇನೂ ಸುಲಭವಲ್ಲ. ಮೂಗು ಮುಟ್ಟಲೂ ಸಹ ಎಮ್ಮೆಗಳಂತೂ ಬಿಡುವುದೇ ಇಲ್ಲ. ಅವುಗಳ ಕೋಡಿನ ಸುತ್ತ ಮಾರುದ್ಧ ಹಗ್ಗ ಹಾಕಿ ಹಣೆಯ ಮಧ್ಯದಲ್ಲಿ ಒಂದು ಗಂಟು ಹೊಡೆದು, ಅದರ ಮೂತಿಯ ಸುತ್ತ ಇನ್ನೊಂದು ಸುತ್ತಿನ ಸರಗುಣಿಕೆ ಹಾಕಿ ಗಟ್ಟಿಯಾದ ಕಂಬಕ್ಕೆ ಎಳೆದು ಹಿಡಿದರೆ ಮಾತ್ರ ಅವು ಬಗ್ಗುವುದು.
ಹಾವಿನಂತೆ ಬುಸ್ಸೆನ್ನುತ್ತಾ ಕೊಸರಾಡುವ ಅವುಗಳ ಮೂತಿಯನ್ನು ಕಟ್ಟಿದ ಪಕ್ಕದ ಕಂಬಕ್ಕೆ ಇಲ್ಲವೇ ಗೋಡೆಯೊಂದಕ್ಕೆ ಒತ್ತಿ ಹಿಡಿದು ಅದೇ ಸ್ಥಿತಿಯಲ್ಲಿಯೇ ಎಲ್ಲಾ ಕೆಲಸವನ್ನು ಪೂರೈಸಬೇಕಿತ್ತು. ಬಯಲು ಸೀಮೆಯಲ್ಲಿ ಇವನ್ನೆಲ್ಲಾ ಕೂಡಿಹಾಕಿ ಬಗ್ಗಿಸಿ ದಾರಿಗೆ ತರಲು ಟ್ರೆವಿಸ್ ಎಂಬ ಉಪಕರಣವಿರುವುದರಿಂದ ಮತ್ತು ಈ ಎಮ್ಮೆ, ಕೋಣ, ಕತ್ತೆ,ಹಂದಿ, ಎತ್ತುಗಳನ್ನೆಲ್ಲಾ ನಾಯಿಮರಿಯಂತೆ ಪಳಗಿಸಿ ಅನುಭವದ ಕೊಡಗಳಿಂತಿರುವ ಜವಾನ ಅಲ್ಲಲ್ಲ.. ಕಂಪೌಂಡರುಗಳು ಇರುವುದರಿಂದ ಈ ಕೆಲಸ ನಮಗೇನೂ ಕಷ್ಟ ತರುತ್ತಿರಲಿಲ್ಲ.
ಅಲ್ಲದೇ ಅವರೇ ನಿರ್ಧರಿಸಿದಂತೆ ಇಂತಹ ನಿಕೃಷ್ಠ ಕಾರ್ಯಗಳೆಲ್ಲಾ ತಜ್ಞ ಪಶುವೈದ್ಯರು ಮಾಡುವುದು ಅವರ ಕೆಲಸವೇ ಅಲ್ಲ ಎಂಬ ರೈತರ ಭಾವನೆ ಕೆಲ ಪಶುವೈದ್ಯರಲ್ಲಿ ಬಂದು ಬಹಳ ಕಾಲವೇ ಆಗಿ ಹೋಗಿತ್ತು. ಮೂಗಿಗೆ ಮೂಗುದಾರ ಹಾಕಿಸಿಕೊಂಡು, ಕಿವಿಗೊಂದು ಓಲೆ ಹಾಕಿಸಿಕೊಂಡು ಸಂತೆಯಲ್ಲಿ ಠಳಾಯಿಸುವ ಹೊಳೆಯುವ ಶರೀರದ ಸ್ಮಾರ್ಟಾದ ಎಮ್ಮೆಗಳನ್ನು ನೋಡುತ್ತಿದ್ದರೆ ನನಗೆ ನಮ್ಮ ಬಿವಿಎಸ್ಸಿ ವಿದ್ಯಾರ್ಥಿನಿಯೊಬ್ಬಳು ಅವಳ ಇರುವ ಎರಡು ಕಿವಿಗೆ ಹತ್ತಾರು ರಂಧ್ರಗಳನ್ನು ಮಾಡಿಸಿ ಅದಕ್ಕೆಲ್ಲಾ ತರಹೇವಾರಿ ಬಂಗಾರದ್ದೋ ಮತ್ತೆಂತದೋ ಜುಮುಕಿ ತರದ ನೇತಾಡುವ ಆಭರಣಗಳನ್ನು ಸಿಗಿಸಿಕೊಂಡು, ಮೂಗಿನ ಮಧ್ಯೆ ಅದೆಂತದೋ ನೇತಾಡುವ ರಿಂಗಿನಂತ ಆಭರಣ ಹಾಕಿರುವದನ್ನು ನೋಡಿದರೆ ಸಾನಿಯಾ ಮಿರ್ಜಾ ತರ ಮೂಗುತಿ ಸುಂದರಿಯಾಗಲು ಶತ ಪ್ರಯತ್ನ ಮಾಡುತ್ತಿರುವುದು ನೆನಪಾಗುತ್ತಿತ್ತು.
ಡಬ್ಬಣದಂತೆ ಚೂಪಾಗಿರುವ ಟ್ರೊಕಾರ್ ಎಂಬ ದಪ್ಪ ಸೂಜಿಯಂತಿರುವ ಉಪಕರಣಕ್ಕೆ ಮೂಗುದಾರದ ಚೂಪು ಮಾಡಿದ ತುದಿಯನ್ನು ಸಿಗಿಸಿ ಮೂಗಿನ ಹೊರಳೆಗಳ ಮಧ್ಯೆ ಇರುವ ಮೃದುವಾದ ಪಠಲವನ್ನು ಭೇಧಿಸಿ ತೂತು ಕೊರೆದು ಒಮ್ಮೆಯೇ ಬಲ ಬಿಟ್ಟು ಸರ್ರನೇ ದಾರ ಹಾಯಿಸಿ ಎರಡೂ ಕೈಗಳಿಂದ ಎಮ್ಮೆಯ ಎರಡೂ ಕೋಡುಗಳನ್ನು ಬಳಸಿ ತಾಳಿ ಕಟ್ಟುವಾಗ ಹೇಗೆ ಮೂರು ಗಂಟನ್ನು ಗಂಡಸರು ಹಾಕುತ್ತಾರೋ ಹಾಗೇ ಮೂರು ಗಂಟುಗಳನ್ನು ಭದ್ರವಾಗಿ ಹಾಕಿದರೆ ಮೂಗುದಾರ ಸರಿಯಾಗಿ ಬಿದ್ದ ಹಾಗೇ.
ಪುರೋಹಿತರುಗಳ “ಮಾಂಗಲ್ಯಂ ತಂತು ನಾನೇನ.. ಮಮ ಜೀವನ ಹೇತುನಾ.. ಎಂಬ ರಾಗವಾದ ಮಂತ್ರ ಘೋಷದ ಮಧ್ಯೆ ಮಾಂಗಲ್ಯ ಧಾರಣೆ ಸಮಯದಲ್ಲಿ ಹೆಣ್ಣು ಮಕ್ಕಳು ವಿನೀತರಾಗಿ ಸಹಸ್ರ ಜನರ ಮುಂದೆ ತಲೆ ಬಗ್ಗಿಸಿ ಗಂಟು ಹಾಕಿಸಿಕೊಂಡ ನಂತರ ಹೇಗೆ ಹುಲಿಯಾಗುತ್ತಾರೋ ಹಾಗೆ ನಮ್ಮಿಂದ ಮೂಗುದಾರ ಹಾಕಿಸಿಕೊಂಡ ಸ್ವಲ್ಪ ಹೊತ್ತಿಗೆ ಎಮ್ಮೆ ತಕ ಥೈ ಎಂದು ಡ್ಯಾನ್ಸ್ ಪ್ರಾರಂಭಿಸುತ್ತಿತ್ತು. ಆದರೆ ಮೂಗುದಾರವನ್ನು ಕೈ ಬೆರಳ ನಡುವೆ ಹಾಕಿ ಹಿಡಿದರೆ ಸಾಕು, ಮೂಗಿನ ಪಠಲದ ಮೆತ್ತನೇ ಭಾಗದ ಮೇಲೆ ಬೀಳುವ ಒತ್ತಡದ ನೋವಿನಿಂದದಲೋ ಏನೋ ಕುತ್ತಿಗೆಯ ಚರ್ಮ ಹಿಡಿದರೆ ಹರಾಮಿ ಹಲಾಲುಕೋರ ಹಾಲುಕಳ್ಳ ಕಳ್ಳ ಬೆಕ್ಕೂ ಸಹ ಮೆತ್ತಗಾಗುವಂತೆ ಎಮ್ಮೆಗಳೂ ಮೆತ್ತಗಾಗಿ ಬಿಡುತ್ತಿದ್ದವು.
ದನದ ಸಂತೆಗಳಲ್ಲೆಂತೂ ಕೆಲ ಮನೆಹಾಳ ದನದ ವ್ಯಾಪಾರಿಗಳು ಎತ್ತು, ಎಮ್ಮೆ, ಆಕಳುಗಳಿಗೆ ಬಣ್ಣ ಬಣ್ಣದ ಮೂಗುದಾರ ಹಾಕಿ ಅವುಗಳಿಗೊಂದಿಷ್ಟು ಬಣ್ಣಗಳ ಪ್ರೋಕ್ಷಣೆ ಮಾಡಿ ಗಿಡ್ಡ, ದಪ್ಪ, ಎತ್ತರ, ಡುಮ್ಮ, ಬಡಕಲು ಎಮ್ಮೆಗಳನ್ನು ಸುಂದರವಾಗಿ ಕಾಣುವಂತೆ ಮಾಡಿ ರೈತರನ್ನು ಬಕರಾ ಬಿದ್ದು ಖರೀದಿಸುವಂತೆ ಖೆಡ್ಡಾ ಕೆಡವುತ್ತಿದ್ದರು.
ಹೋರಿ ಎತ್ತುಗಳ ಕೊಂಬು ಕೆತ್ತಿ, ಇರುವ ಎರಡೇ ಬೆಳ್ಳಗಾದ ಕೂದಲುಗಳಿಗೆ ಬಣ್ಣ ಹಚ್ಚಿ ಯಂಗಾದೆವೆಂಬ ಬಿಂಕದಿಂದ ಬೀಗುವ ಪುರುಷರಂತೆ, ಅವುಗಳ ವಯಸ್ಸು ಮರೆಮಾಚುವ ಪ್ರಯತ್ನ ಮಾಡುತ್ತಿದ್ದರು. ಅದರಲ್ಲೂ ಎಮ್ಮೆಗಳ ಮೈಯ ರೋಮಗಳನ್ನೆಲ್ಲಾ ತರಿದು, ಕೊಂಬಿಗೆ ಹರಳೆಣ್ಣೆ ಸವರಿ, ಇಡೀ ಮೈಗೆ ಬೇವಿನ ಎಣ್ಣೆ ಹಚ್ಚಿ, ಕುತ್ತಿಗೆಗೆ ಆಗಾಗ ಟಣ್. ಟಣ್ ಎಂಬ ಚಂದದ ಶಬ್ದದಿಂದ ಮನಸೆಳೆಯುವ ಗಂಟೆ ಕಟ್ಟಿ ಆಕರ್ಷಣೆಯ ಮಾಡುತ್ತಿದ್ದರು.
ಇವೆಲ್ಲ ನೋಡಿದರೆ ಮದುವೆಯ ಸಮಯದಲ್ಲಿ ಮಿರ ಮಿರ ಮಿಂಚುವ ರೇಶ್ಮೆ ಸೀರೆ ಉಟ್ಟು, ಮೈಮೇಲೆಲ್ಲಾ ಬಂಗಾರದ ಪರ್ವತವನ್ನೇ ಹೇರಿಕೊಂಡಿರುವ, ಮದುವೆಗೆಂದೇ ಅಲಂಕಾರ ಮಾಡಲು ಬ್ಯೂಟಿಪಾರ್ಲರಿನಿಂದ ಕರೆಸಿದ ಬ್ಯುಟಿಶಿಯನ್ ಅಲಂಕಾರ ಮಾಡಿದ ಹಳ್ಳಿಯ ಮದುವಣಗಿತ್ತಿಯಂತೆ ಈ ಎಮ್ಮೆಗಳು ಕಾಣುತ್ತಿದ್ದವು.
ಸದಾ ಹಾವು ಕಪ್ಪೆಗಳನ್ನು ಅಟ್ಟಿಸಿಕೊಂಡು ಹೋಗುವ, ಸೊಪ್ಪು ಸೊದೆಗಳು ಕೊಳೆತು ನಾರುವ ಅರಲು ಕೆಸರು ಹೊಂಡದಲ್ಲಿ ಹೊರಳಾಡಿ ತಾಲಿ ಹೊಡೆದು ದುರ್ವಾಸನೆಯ ಸಗಣಿಯನ್ನು ಮೈಗೆಲ್ಲಾ ಹಚ್ಚಿಕೊಂಡು “ದಿಮ್ ರಂಗ” ಎಂದು ಸ್ವಚ್ಚಂದವಾಗಿ ಓಡಾಡಿಕೊಂಡಿರುವ ಈ ಎಮ್ಮೆಗಳಿಗೆ ಈ ರೀತಿ ಅಲಂಕಾರ ಮಾಡಿದರೆ ಒಂತರಾ ಸುಂದರವಾಗಿ ಕಾಣುತ್ತಿದ್ದವು.
ಎಂದೆಂದೂ ಚಂದದ ತುಟಿಗೆ ರಂಗನ್ನೇ ಹಚ್ಚದ ಹಳ್ಳಿ ಯುವತಿಯ ತುಟಿಗೆಲ್ಲಾ ಕಡುಗೆಂಪು ಬಣ್ಣದ ಲಿಪ್ ಸ್ಟಿಕ್ ಬಳಿದು, ಫ್ರೆಶ್ಶಾಗಿ ಆಗಷ್ಟೇ ಇಲಿ ಹೆಗ್ಗಣ ತಿಂದು ರಕ್ತ ಬಾಯಿಗೆ ಅಂಟಿಸಿಕೊಂಡ ಮಾರ್ಜಾಲಗಳಂತೆ ಮಾಡುವ ಪಟ್ಟಣದ ಬ್ಯುಟಿಶಿಯನ್ನುಗಳ ಸಾಲಿಗೆ ಈ ವ್ಯಾಪಾರಿಗಳು ಸೇರುತ್ತಿದ್ದರು.
ಈ ಎಮ್ಮೆಗಳನ್ನು ಒಂದೆರಡು ದಿನ ಹಾಲು ಕರೆಯದೇ ಕೆಚ್ಚಲೆಲ್ಲಾ ತುಂಬಿ ಕಾಮದೇನುವಿನಂತೆ ಕಾಣುವ ಚಂದಕ್ಕೆ ಮರುಳಾಗಿ ಒಂದಕ್ಕೆರಡು ರೇಟು ನೀಡಿ ಖರೀದಿಸಿ ಮನೆಗೆ ಹೋಗಿ ಹಾಲು ಹಿಂಡಿದರೆ ಮೊದಲನೇ ದಿನ ಭರಪೂರ ಹಾಲು ನೀಡುವ ಎಮ್ಮೆ ಮಾರನೇ ದಿನದಿಂದ ರಣಚಂಡಿಯಾಗಿ ಪಟಾರ್ ಎಂದು ಮುಖಕ್ಕೆ ಹಿಂಗಾಲಿನಿಂದ ಮುಲಾಜಿಲ್ಲದೇ ಭಾರಿಸುವ ಮಹಿಷಾಸುರನ ಧೂತನಾಗಿ ಪರಿವರ್ತಿತವಾಗುತ್ತಿತ್ತು.
ನಮ್ಮ ಯಜಮಾನರೂ ಹೀಗೇ ಮೋಸ ಹೋಗಿದ್ದು. ಭಾರಿ ಮೈಕಟ್ಟು ಹೊಂದಿ ಅಗಲ ಚೂಪಾದ ಕೋಡಿನ ಎತ್ತರದ ಈ ಎಮ್ಮೆ ರಾಗಿಣಿ, ಹರಿಪ್ರಿಯಾರಂತೆ ಎತ್ತರವಾಗಿದ್ದರಿಂದ ದೇವತೆಯ ಪಾತ್ರ ವಹಿಸಿದ ರಮ್ಯಾ ರಚಿತಾರಂತೆ ಚಂದ ಕಂಡಿದ್ದರಿಂದಲೋ ಏನೋ ದಲಾಲಿಯು ಮಿರಮಿರ ಮಿಂಚುವ ಅಲಂಕಾರಕ್ಕೆ ಬೆರಗು ಮಾತಿಗೆ ಮರುಳಾಗಿ ಎಮ್ಮೆ ತಂದ ಮೇಲೇಯೇ ಗೊತ್ತಾಗಿದ್ದು ಅದರ ರಮಾದೇವಿಯ ಗಯ್ಯಾಳಿ ಬುದ್ಧಿ. ನೋಡಲು ಭೀಕರವಾಗಿ ಕಂಡರೂ ಮನೆಯ ಯಜಮಾನಿಯನ್ನು ಮಾತ್ರ ಆ ಎಮ್ಮೆ ನಂಬುತ್ತಿದ್ದರಿಂದ ಆಯಮ್ಮನೇ ಅದರ ಸಕಲ ಉಸ್ತುವಾರಿಯನ್ನು ವಹಿಸಿದ್ದರು.
ಆದರೆ ಅವರು ಕಾರ್ಯನಿಮಿತ್ತ ಮಗಳ ಮನೆಗೋ, ತವರು ಮನೆಗೋ ಹೋದಾಗಲೋ ರಾಯರಿಗೆ ಭೂತಯ್ಯನ ಮಗ ಅಯ್ಯುವಿನ ದಿನೇಶ್ ಪಾತ್ರ ವಹಿಸಿ ಎಮ್ಮೆಯಿಂದ ಹಾಲೆಂಬ ಅಮೃತವನ್ನು ಪಡೆಯಲೇ ಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತಿತ್ತು. ಅವರೂ ಸಿನಿಮಾದಲ್ಲಿ ದಿನೇಶ್ ಸೀರೆ ಉಟ್ಟುಕೊಂಡು ಹೋಗಿ ಒದೆ ತಿನ್ನುವಂತೆ ಒದೆ ತಿಂದಾದ ಮೇಲೆ ಈ ಸಾಹಸ ಕೈಬಿಟ್ಟಿದ್ದರು. ಇನ್ನು ಹಿಂಡಿ ಇಟ್ಟು ಅದು ಹಿಂಡಿ ತಿನ್ನುವಲ್ಲಿ ಮಗ್ನನಾದರೆ ಈ ಕಡೆ ಕಳ್ಳನಂತೆ ಯಾಮಾರಿಸಿ ಹಾಲು ಕರೆಯುವ ಟೆಕ್ನಿಕ್ಕು ಎಲ್ಲಾ ಸಲ ಕೆಲಸ ಮಾಡುತ್ತಿರಲಿಲ್ಲ.
ಈ ಎಮ್ಮೆಗಳಿಗೆ ಅವುಗಳ ಕರುಗಳ ಮೇಲೆ ಅಪಾರ ಮಮತೆ. ಮನೆಯಲ್ಲೇ ಅವನ ತಮ್ಮ ತಂಗಿ ಇದ್ದರೂ ಅವರು “ಬೋಂಡಾ ಮಾಡಿ ಕೊಡಮ್ಮಾ” ಎಂದು ಗೋಗೆರೆದರೂ ಒಲೆ ಮೇಲೆ ಬಾಂಡ್ಲಿ ಇಡದ ಅಮ್ಮಂದಿರು, ದೂರದ ಅಮೇರಿಕಾದಲ್ಲಿ ಕುಳಿತು ಆಗಾಗ ಕರೆ ಮಾಡುವ ಟೆಕ್ಕಿ ಮಗ ಅಥವಾ ಮಗಳು ಮನೆ ಬಂದಾಗ ಅವರಿಗೆ ತರ ತರದ ತಿಂಡಿ ಮಾಡಿ ಹಾಕಿ “ತಿನ್ನು ಮಗಾ” ಎಂದು ಮಮಕಾರ ತೋರಿಸುವ ನಮ್ಮೆಲ್ಲಾ ಮಲೆನಾಡಿನ ಹಲವು ತಾಯಂದಿರಿಗೆ “ವಿಶೇಷ” ಮಮಕಾರ ಇರುವಂತೆ ಈ ಎಮ್ಮೆಯೂ ಸಹ ತನ್ನ ಕರುವಿಗೆ ಮಮಕಾರ ತೋರಿಸುತ್ತಿತ್ತು.
ಆ ಕರು ಜಂತು ನಾಶಕ ಹಾಕದಿರುವುದರಿಂದಲೋ ಅಥವಾ ಇ ಕೊಲೈ ಬಿಳಿ ಬೇಧಿಯಿಂದಲೋ ಬಳಲಿ ಹಳ್ಳಿ ಔಷಧಿ ನಾಟದೇ ಶಿವನ ಪಾದ ಸೇರಿದ ಮೇಲೆಯೇ ಎಮ್ಮೆಯ ನಿಜ ರೂಪದ ದರ್ಶನವಾಗಿದ್ದು. ಎಮ್ಮೆ ಕುಲದ ಸಕಲ ಗುಣಾವಗುಣಗಳೂ ಈ ಎಮ್ಮೆಯ ಮೈಸೇರಿದ್ದವು. ಈ ಎಮ್ಮೆಗಳಿಗೆ ಕರು ಯಾವಾಗಲೂ ಪಕ್ಕದಲ್ಲೇ ಇರಬೇಕು. ಹೊಸಬರು ಯಾರಾದರೂ ಬಂದು ಮುದ್ದಾದ ಎಮ್ಮೆ ಕರುವಿನ ತಲೆ ನೇವರಿಸಿ ಪ್ರೀತಿ ತೋರಿಸಲು ಹೋದಲ್ಲಿ ನಿಂತಲ್ಲೇ ರಣಚಂಡಿ ಅವತಾರ ತಾಳಿ ಬುಸ್ಸೆನ್ನುತ್ತಾ ಹಾಯಲು ಬರುತ್ತಿತ್ತು.
ಕರು ಸತ್ತ ಸುಮಾರು ದಿನಗಳ ವರೆಗೆ ಹತ್ತಿರವೂ ಸೇರಿಸದ ಬೃಹತ್ ಕೋಡಿನ ಎಮ್ಮೆ ಕ್ರಮೇಣ ಸತ್ತು ಹೋದ ಕರುವಿನ ನೆನಪು ಮಾಸಿದಂತೆ ಹಿಂಡಿ ತಿನ್ನುತ್ತಾ ಹಾಲು ಕೊಡಲು ಪ್ರಾರಂಭಿಸಿತಂತೆ. ಸ್ವಲ್ಪ ದಿನಗಳಲ್ಲಿ ಒಂದೆರಡು ಸಲ ಒದ್ದ ಮೇಲೆ ಬುದ್ಧಿ ಬಂದು ಅದರ ಮುಂದೆ ಕೋಲು ಹಿಡಿದು ನಿಂತು ಬೆದರಿಸುತ್ತಿದ್ದರೆ ಹಾಲಿನ ತೊರೆ ಇಳಿಸಿ ಹಾಲು ನೀಡುತ್ತಿತ್ತಂತೆ. ಇನ್ನೂ ಕೊಸರಾಟ ಪ್ರಾರಂಭಿಸಿದ ಮೇಲೇಯೇ ಈ ಮೂಗುದಾರ ಹಾಕುವ ಐಡಿಯಾ ಹೇಳಿದ್ದು.
ಹೌದು. ಇಷ್ಟೆಲ್ಲಾ ಹರಾಮಿ ಗುಣದ ಎಮ್ಮೆಯನ್ನು ಹುಟ್ಟಿದಷ್ಟು ಹಣಕ್ಕೆ ಮಾರಿಬಿಡಬಹುದಲ್ಲ?! ಇದು ನಿಮ್ಮ ಪ್ರಶ್ನೆ. ಇದರ ಕಲ್ಯಾಣ ಗುಣಗಳು ಬಾಯಿಂದ ಬಾಯಿಗೆ ಹಬ್ಬಿ ಆಗಲೇ ಕುಖ್ಯಾತಿ ಪಡೆದಿರುವುದರಿಂದ ಸ್ಥಳೀಯವಾಗಿ ಯಾವುದೇ ಗಿರಾಕಿಗಳು ಇಲ್ಲದಿರುವುದರಿಂದ ಈ ಎಮ್ಮೆಯನ್ನು ಸಾಠಿ ಮಾಡಿ ಅದೇ ಎಮ್ಮೆಯನ್ನು ಇವರಿಗೆ ಮಾರಿದ ದಲಾಲಿಗೆ ಮಾರುವುದೂ ಕಷ್ಠವಾಗಿತ್ತು. ಇನ್ನು ಉಳಿದಿದ್ದು ಒಂದೇ ದಾರಿ.
ಕಟುಕರ ಕತ್ತಿಗೆ ನೀಡುವುದು. ಅದು ಅದರ ದಪ್ಪನೇ ಸಿಕ್ಕಾಪಟ್ಟೆ ಎಸ್ ಎನ್ ಎಫ್ ಮತ್ತು ಫ್ಯಾಟ್ ಜಾಸ್ತಿ ಇರುವ ಹಾಲನ್ನು ಹಾಕಿ ಕಾಫಿ ಕಾಯಿಸಿ ಕುಡಿದ ಋಣ ಹೊತ್ತಿರುವ ಅವರ ಅಮ್ಮನಿಗೆ ಸುತರಾಂ ಇಷ್ಟವಿರಲಿಲ್ಲ. ಆದರೂ ಅವರಿಲ್ಲದಾಗ ಅದರ ವ್ಯಾಪಾರವಾಗಿ,ಶತಾಯು ಗತಾಯು ಪ್ರಯತ್ನಿಸಿದರೂ ಸಹ, ಅದನ್ನು ಲಾರಿ ಹತ್ತಿಸಲಾಗಿದೇ ಹೋದದ್ದರಿಂದ ಎಮ್ಮೆ ಖಾಯಂ ಇವರ ಮನೆಯಲ್ಲೇ ಲಟ್ಟ ಠೊಣಪನ ತರ ಠಿಕಾಣಿ ಹೂಡಿಯಾಗಿತ್ತು.
ಈ ಎಮ್ಮೆಗೆ ಮೂಗುದಾರ ಹಾಕುವ ಸಕಲ ಸಿದ್ಧತೆಗಳೊಂದಿಗೆ ಕಾರ್ಗಿಲ್ಲಿನತ್ತ ನುಗ್ಗುವ ಸೈನಿಕನಂತೆ ನಾನು ಅವರ ಮನೆಯ ಹತ್ತಿರ ಬೈಕು ನಿಲ್ಲಿಸುತ್ತಿದ್ದಂತೆ ನನ್ನ ಬೈಕಿನ ಶಬ್ಧದ ಶಬ್ಧ ಕೇಳಿಯೇ ಎಮ್ಮೆಗೆ ತಳ ಮಳ ಪ್ರಾರಂಭವಾಗಿತ್ತು ಅನಿಸುತ್ತದೆ. ಬುಸು .. ಬುಸು. ದರ.. ಬರ. ಶಬ್ಧ ಮಾಡುತ್ತಾ ಸೊಪ್ಪು ಹಾಕಿದ್ದ ಕೊಟ್ಟಿಗೆಯಲ್ಲಿ ಕಟ್ಟಿದ ಹಗ್ಗವನ್ನು ತುಂಡರಿಸುವಂತೆ ಎಳೆದಾಡುತ್ತಿತ್ತು. ಆಲದ ಮರದಂತೇ ವಿಶಾಲವಾಗಿ ದಶದಿಕ್ಕುಗಳಿಗೂ ಹರಡಿಕೊಂಡಂತಿದ್ದ ಅದರ ಕೋಡನ್ನು ಹತ್ತಿರವಿದ್ದ ಗೋಡೆಗೆ ಸದಾ ಉಜ್ಜುತ್ತಿದ್ದರಿಂದಲೋ ಏನೋ ಮಹಾಕಾಳಿಯ ಶೂಲದಷ್ಟು ಹರಿತವಾಗಿದ್ದವು.
ಕಣ್ಣುಗಳು ಗಾಬರಿಯಿಂದ ಹಿರಣ್ಯಕಶ್ಯಪುವಿನ ಕಣ್ಣಿನ ಹಾಗೇ ಗರ ಗರ ತಿರುಗುತ್ತಾ ಭಯ ಬೀಳಿಸುವ ಹಾಗಿದ್ದವು. ಬಲವಾದ ಪ್ಲಾಸ್ಟಿಕ್ ದಾಬಿನಲ್ಲಿ ಕಟ್ಟಿದ್ದರಿಂದ ಬಿಚ್ಚಿಕೊಂಡು ಹೋಗುವ ಸಾಧ್ಯತೆ ಕಡಿಮೆ ಇತ್ತು. ನಾನೂ ಸಹ ಧೈರ್ಯದಿಂದ ದಪ್ಪನೇ ಕಣ್ಣಿಯ ಹಗ್ಗ ತೆಗೆದುಕೊಂಡು ಅದರ ಎರಡೂ ಕೊಂಬಿನ ಸುತ್ತಲೂ ಹಾಕಲು ತೀವ್ರವಾಗಿ ಪ್ರಯತ್ನಿಸಿದೆ. ಆದರೆ ಅದರ ಅಗಲವಾದ ಕೊಂಬುಗಳು ನನ್ನ ಈ ಪ್ರಯತ್ನಕ್ಕೆ ತಣ್ಣೀರೆರಚುತ್ತಾ ಇದ್ದವು. ಈ ಎಮ್ಮೆಗಳೇ ಹೀಗೆ. ಹೆದರಿಕೆಯಿಂದಲೇ ಸಕಲ ಆಟ ಆಡಿ ಕೊನೆಗೆ ಸುಸ್ಥಾಗಿ ಬಾಯಿ ಅಗಲವಾಗಿ ತೆಗೆದುಕೊಂದು ನಾಲಿಗೆ ಹೊರಹಾಕಿ ನಿಂತು ಬಿಡುತ್ತವೆ.
ಎಷ್ಟೊತ್ತು ಆಟವಾಡೀತು ? ಎಂದು ನಾನೂ ಸಹ ಅದರ ಕೊಂಬಿನ ಮಧ್ಯೆ ಹಗ್ಗ ಹಾಕುವ ಪ್ರಯತ್ನ ಪ್ರಯತ್ನ ಬಿಡಲೇ ಇಲ್ಲ. ಜೊತೆ ಇದ್ದ ಆ ಮನೆಯ ಆಳೂ ಸಹ ಅದರ ಮುಂದಿನ ಎರಡೂ ಕಾಲುಗಳನ್ನು ಕಟ್ಟಿ ಹಾಕಿ ಆಟ ನಡೆಯದಂತೆ ಮಾಡಲು ಪ್ರಯತ್ನಿಸಿದ. ಆದರೆ ಹತ್ತಿರ ಹೋಗಲು ಬಿಟ್ಟೀತೇ ಎಮ್ಮೆ ? ನಮ್ಮೆಲ್ಲಾ ಪ್ರಯತ್ನಗಳೂ ಮುಗಿದು ನಮಗೂ ಸುಸ್ತಾಯಿತು. ಆದರೆ ಸೋಲೊಪ್ಪುವ ಪ್ರಶ್ನೆಯೇ ಇರಲಿಲ್ಲ. ಇಷ್ಟೆಲ್ಲಾ ಮಾಡಿದರೂ ಮನುಷ್ಯರನ್ನೇ ಕಾಣದೇ ಕಾಡು ಪ್ರಾಣಿಯಂತಿರುವ ಈ ಎಮ್ಮೆಗೆ ಮೂಗುದಾರ ಹಾಕಿ ಬಗ್ಗಿಸಲೇ ಬೇಕು ಎಂದು ನಾನು ಮತ್ತು ಅವರ ಮನೆಯ ಆಳು ಆಗಲೇ ತೀರ್ಮಾನಿಸಿ ಆಗಿತ್ತು.
ಈ ಸಲ ಎಮ್ಮೆಯ ಕಾಲ ಬುಡಕ್ಕೆ ಒಂದಿಷ್ಟು ಹುಲ್ಲು ಹಾಕಿಕೊಂಡು ಸಾಕಷ್ಟು ಚಾಕಚಕ್ಯತೆಯಿಂದ ಅದರ ಕೋಡುಗಳೆರಡಕ್ಕೆ ಹಗ್ಗ ಹಾಕಿಯೇ ಬಿಟ್ಟೆ. ಸರಕ್ಕನೇ ಅದರ ಮೂತಿಯ ಸುತ್ತಲೂ ಬಿಗಿದು ಸರಗುಣಿಕೆ ಸರ್ರನೇ ಎಳೆದು ಪಕ್ಕದ ಕಂಬಕ್ಕೆ ಕಟ್ಟಿಯೇ ಬಿಟ್ಟೆ. ಇದೇ ಸಂದರ್ಭವೆಂದು ಆಳು ಸಣ್ಣ ಹಗ್ಗದಿಂದ ಅದರ ಮುಂದಿನ ಕಾಲೆರಡನ್ನೂ ಹತ್ತಿರ ಬರುವಂತೆ ಬಿಗಿದು ಕಟ್ಟಿದ.
ಒಟ್ಟಿನಲ್ಲಿ ಎಮ್ಮೆ ನಮ್ಮ ತಿಲಕಾಷ್ಠವಲ್ಲದ ಮಹಿಷ ಬಂಧನದಲ್ಲಿ ಸೆರೆಯಾಯ್ತು. ಅದರ ಹಾರಾಟ ಜಿಗಿದಾಟದ ಈ ಸಮಯದಲ್ಲಿ ನಮ್ಮ ಮೈಗೆಲ್ಲಾ ಅದು ಚಿರಿ.. ಚಿರಿ ಎಂದು ಪದೇ ಪದೇ ಹಾರಿಸುವ ಮೂತ್ರದಿಂದ ಮತ್ತು ಹೆದರಿಕೆಯಿಂದ ಅದು ಹಾಕಿದ ತೆಳ್ಳಗಿನ ಸಗಣಿ, ಸಿರ್ಸಿ ಯೆಲ್ಲಾಪುರ ಬದಿಯ ಹವ್ಯಕ ಅತ್ಗೇರುಗಳು ಬೆಳಿಗ್ಗೆ ಮಾಡುವ ತೆಳ್ಳವ್ವು ದೋಸೆ ಹಿಟ್ಟಿನಷ್ಟು ನೀರಾಗಿದ್ದರಿಂದ ಇವೆರಡರಿಂದ ನಮ್ಮ ಮೈಯೆಲ್ಲಾ ಸಿಂಚನವಾಗಿ ನಾವಿಬ್ಬರು ದುರ್ವಾಸನೆಯ ಕೂಪವಾದೆವು. ನಾವಂದು ಕೊಂಡ ಮೂಗುದಾರ ಹಾಕುವ ಅಮೃತ ಘಳಿಗೆ ಸನಿಹವಾಗಿದ್ದರೆಂದಲೋ ಏನೋ ನನ್ನ ಉತ್ಸಾಹ ಇಮ್ಮಡಿಯಾಯಿತು. ಇದೇ ಮುಂದೆ ದೊಡ್ಡ ಅನಾಹುತಕ್ಕೆ ಎಡೆ ಮಾಡಿಕೊಡುತ್ತದೆಯೆಂಬುದು ಅನಾಹುತವಾದ ಮೇಲೆಯೇ ಗೊತ್ತಾಗಿದ್ದು.
ನಾನು ನನ್ನ ಸಕಲ ಪರಿಕರಗಳನ್ನು ಅತ್ತು ಅದಕ್ಕೆಂದೇ ನನ್ನ ಶಿಷ್ಯ ವಿಶೇಷವಾಗಿ ಸಿದ್ಧ ಪಡಿಸಿದ ಮೂಗುದಾರವನ್ನು ಅರ್ಜುನನು ರಣರಂಗದಲ್ಲಿ ಕರ್ಣನ ಮೇಲೆ ಸರ್ಪಾಸ್ತ್ರವನ್ನು ಬಿಡುವ ಮೊದಲು ಮಂತ್ರಿಸುವಂತೆ ತದೇಕಚಿತ್ತದಿಂದ ತುದಿಯನ್ನು ಹೊಸೆದು ಡಬ್ಬಣದಲ್ಲಿ ಪೋಣಿಸಿ ಎಮ್ಮೆಯ ಮೂತಿಯನ್ನು ಅದು ಅಕ್ಕಚ್ಚು ಕಲಗಚ್ಚು ಕುಡಿಯುವ ದೋಣಿಯಂತ ಕಾಲುವೆಯ ಅಂಚಿಗೊತ್ತಿ ಹಿಡಿದು ಅದರ ಮೂಗಿನ ಹೊರಳೆಗಳ ನಡುವೆ ಇರುವ ಮೆತ್ತನೇ ಸ್ಥಳವನ್ನು ಬೆರಳಿನಲ್ಲಿ ಗುರುತಿಸಿಕೊಂಡೆ.
ಮೂಗಿಗೆ ಕೈಹಾಕಿದ ಕೂಡಲೇ ಎಮ್ಮೆಗೆ ಗುಳು ಗುಳು ಅನಿಸಿತೋ ಏನೋ, ಸಕಲ ಶಕ್ತಿಯನ್ನೂ ಹಾಕಿ “ಡ್ರೀ….ಸ್” ಎಂದು ಬಲವಾಗಿ ಸೀನಿತು. ನನ್ನ ಮುಖ ಎಮ್ಮೆಯ ಮೂತಿಗೆ ಬಹಳ ಹತ್ತಿರವಿದ್ದುದರಿಂದ ಮೂಗಿನಲ್ಲಿರುವ ಲೋಳೆ ಮಿಶ್ರಿತವಾದ ಸ್ರಾವಗಳೆಲ್ಲಾ ನನ್ನ ಮುಖ, ಮೂಗು, ಬಾಯಿ ಎಲ್ಲಾ ಕಡೆ ಸ್ಪ್ರೇ ಆಯಿತು.
ಛಲ ಬಿಡದ ಮಲ್ಲನಾದ ನಾನು ಮತ್ತು ನನ್ನ ನಿರ್ಧಾರಕ್ಕೆ ದ್ವಿಗುಣ ಸಂಕಲ್ಪ ಹೊಂದಿದ ಆಳು, ಸಕಲ ಶಕ್ತಿಯನ್ನೂ ಹಾಕಿ ಮೂಗಿನ ಹೊರಳೆಯ ಮಧ್ಯದ ಜಾಗದಲ್ಲಿ ಡಬ್ಬಣದಂತ ಟ್ರೊಕಾರ್ ಒತ್ತಿ ತೂತು ಮಾಡಿ, ಮೂಗುದಾರದ ತುದಿಯನ್ನು ಹಿಡಿದು ಎಳೆದ ಹೊಡೆತಕ್ಕೆ ದಾರ ಪಾರಾಗಿ ಈ ಕಡೆ ಬಂದಿತು. ನಾನು ದಾರದ ಎರಡೂ ತುದಿಗಳನ್ನು ಎಮ್ಮೆಗೆ ಮಾಂಗಲ್ಯ ಕಟ್ಟುವಂತೆ ಕೊಂಬಿನ ಮಧ್ಯೆ ತಂದು ಎರಡು ಗಂಟು ಹಾಕಿ ಕೊನೆಯ ಮತ್ತು ಮೂರನೆಯ ಗಂಟು ಇನ್ನೇನು ಹಾಕಬೇಕು.., ಅಷ್ಟರಲ್ಲಿಯೇ ಆಗಿ ಹೋಯಿತು ಅನಾಹುತ !.
ಇಷ್ಟು ಹೊತ್ತೂ ಎಮ್ಮೆಯ ಮೂತಿಗೆ ಹಾಕಿದ ಹಗ್ಗವನ್ನು ಎಳೆದು ಹಿಡಿದ ಯಜಮಾನರು ಕೈಸೋತೋ ಅಥವಾ ನಮ್ಮ ಮೂಗುದಾರ ಹಾಕುವ ಕಾಯಕ ಮುಗಿಯಿತೆಂದೋ ಹಗ್ಗವನ್ನು ಸಡಿಲ ಬಿಟ್ಟರು ಅಂತ ಕಾಣಿಸುತ್ತದೆ. ಮೊದಲೇ ನೋವಿನಿಂದ ನಲುಗುತ್ತಿದ್ದ ಮತ್ತು ಮಹಾ ರೋಷದಿಂದಿರುವ ಅದರ ಸಮಯಕ್ಕಗಿ ಕಾಯುತ್ತಿದ್ದ ಎಮ್ಮೆ ನಭದೆಡೆ ಚೂಪಾದ ಕೋಡುಗಳನ್ನು ಹೊಂದಿರುವ ಬಂಡೆಯಂತೆ ಘಟ್ಟಿಯಾದ ತಲೆಯನ್ನು ಒಮ್ಮೆಯೇ ಸ್ಪ್ರಿಂಗಿನಂತೆ ಚಿಮ್ಮಿ ಬಿಟ್ಟಿತು.
ಇಂತಹ ತುರ್ತು ಪರಿಸ್ಥಿತಿಯನ್ನು ನಿರೀಕ್ಷಿಸದ ನಾನು ಮೂರನೇ ಗಂಟು ಹಾಕುವಲ್ಲಿ ಮಗ್ನನಾಗಿದ್ದೆ. ನನ್ನ ಕಾಲುಗಳ ಸಂದಿಯಲ್ಲಿ ಸಿಮೆಂಟಿನ ಗೋಡೆಗೆ ಪದೇ ಪದೇ ತಿಕ್ಕಿ ಚೂಪಾದ ಕೊಂಬುಗಳು “ಸಳ್” ಎಂದು ಹೊಕ್ಕಿರಬೇಕು. ನನ್ನ ಪ್ಯಾಂಟು ಅದರ ಮೇಲೆ ಹಾಕಿದ ಮಳೆಕೋಟು ಎರಡು ಒಂದೇ ಸಲಕ್ಕೆ ಸೀಳಿ ಹೋದವು. ಎಮ್ಮೆಯು ಚಿಮ್ಮಿದ ರಾಕೆಟ್ ವೇಗಕ್ಕೆ ಸಿಲುಕಿ ಎಮ್ಮೆಯಿಂದ ಮೂರು ಮಾರು ದೂರದಲ್ಲಿ ಸೊಪ್ಪಿನ ರಾಶಿಯಲ್ಲಿ ರಭಸದಿಂದ ಹಾರಿ ಬಿದ್ದೆ. ಸೊಪ್ಪಿನ ಕೊಟ್ಟಿಗೆಯಾಗಿದ್ದರಿಂದಲೋ ಏನೋ ಸೊಂಟ ಮುರಿದಿಲ್ಲ ಅನಿಸಿದ್ದು ಎದ್ದು ಕುಳಿತು ಕೊಳ್ಳಲು ಸಾಧ್ಯಾವಾಗಿದ್ದರಿಂದ.
ಗಾಬರಿಯಾದ ಯಜಮಾನರು ಮತ್ತು ಆಳು ನನ್ನನ್ನು ಬಂದೆತ್ತಿದರು. ಏನಾದರೂ ಆಯ್ತಾ ಡಾಕ್ಟ್ರೇ.. ಎಂದು ಅವರು ಕಕ್ಕುಲತೆಯಿಂದ ಕಾಳಜಿಯಿಂದ ಕೇಳುವ ಶಬ್ಧ ನನಗೆ ಎಲ್ಲೋ ಗುಹೆಯಿಂದ ಕ್ಷೀಣವಾಗಿ ಹೊರಬರುವ ಸನ್ಯಾಸಿಯು ಹೇಳುವ ’ಓಂ” ಮಂತ್ರದಂತೆ ಕೇಳಿಸಹತ್ತಿತು. ಎಲ್ಲೆಲ್ಲೋ ಅಸಾಧ್ಯ ನೋವು ಇದ್ದರೂ ಇದನ್ನು ವ್ಯಕ್ತಪಡಿಸಿದರೆ ನಾನು ಸೋತಂತೆ ಎಂದುಕೊಂಡು “ಹೆ… ಹೆ.. ಏನೂ ಆಗಿಲ್ಲ. ಸ್ವಲ್ಪ ಮೂಗ ಪೆಟ್ಟು ಅಷ್ಟೇ.. ಎಂದು ದೇಶಾವರಿ ನಗೆ ಬೀರುತ್ತಾ ತಡವರಿಸುತ್ತಾ ಎದ್ದೆ.
ಸಂಗೀತದವರು ಕಚೇರಿ ಮುಗಿದ ನಂತರ ಅವರ ತಬಲಾ ಹಾರ್ಮೋನಿಯಂ ಜೋಡಿಸಿದಂತೆ ನನ್ನ ಸಕಲ ಸರಂಜಾಮುಗಳನ್ನು ವಸ್ತುಗಳನ್ನೂ ಆಳು ಜೋಡಿಸಿ ನನ್ನ ಬ್ಯಾಗಿಗೆ ಹಾಕಿದ. ಎಮ್ಮೆಗೆ ನೋವು ಕಡಿಮೆ ಮಾಡುವ ಚುಚ್ಚುಮದ್ದು ಮತ್ತು ನಂಜುನಿವಾರಕ ನೀಡಬೇಕಿತ್ತು. ಆದರ ರಂಪಾಟದಿಂದ ಬೇಸರಗೊಂಡ ಯಜಮಾನರು “ನೋವಿನಿಂದ ನರಳಲಿ ಬಿಡ್ರೀ.. ದರೀದ್ರ ಎಮ್ಮೆ” ಎಂದು ಶಪಿಸಿದರು. ಬೈಕು ಸ್ಟಾರ್ಟ್ ಮಾಡಿದ ನಾನು ಯಜಮಾನರು “ಡಾಕ್ಟ್ರೇ ಆಸ್ರಿಗೆ ಏನ್ ಮಾಡ್ಸ್ಲಿ.. ಟೀನಾ ಕಾಫೀನಾ” ಎಂದರೂ ಕೇಳಿಸಿಕೊಳ್ಳದೇ ಬೈಕಿನ ಕ್ಲಚ್ ಬಿಟ್ಟು ಅಕ್ಸಲರೇಟರ್ ಒತ್ತಿದೆ.
ಸಣ್ಣ ಜಿಟಿ ಜಿಟಿ ಮಳೆ ಆಗಲೇ ಪ್ರಾರಂಭವಾಗಿತ್ತು. ಸುಮಾರು ಒಂದೆರಡು ಕಿಲೋ ಮೀಟರು ದೂರ ಬಂದಿರಬೇಕು. ಬಲಗಡೆಯ ಮೊಣಕಾಲಿನ ಹತ್ತಿರ ಒಂತರಾ ಬಿಸಿ..ಬಿಸಿ.. ಆದ ಹಾಗೇ ಅನಿಸಿತು. ಮಳೆಯಂಗಿಯ ತೂತಿನಿಂದ ನೀರು ಹೊಕ್ಕಿರಬೇಕು. ಶರೀರದ ತಾಪಕ್ಕೆ ಬಿಸಿಯಾಗಿರಬಹುದು ಎಂದುಕೊಂಡು ಇನ್ನೊಂದೆರಡು ಕಿಲೋಮೀಟರು ಬೈಕು ಓಡಿಸಿದೆ. ತಲೆ ಎಲ್ಲಾ ಸುತ್ತಿದ ಹಾಗೇ ಕಣ್ಣೆಲ್ಲಾ ಮಂಜಾದ ಹಾಗೇ ಆಯಿತು. ಮೈ ಕೈನ ಕಣಗಳೆಲ್ಲಾ ನೋವಿನಿಂದ ಕಥೆ ಹೇಳುತ್ತಿದ್ದವು.
ಬೈಕಿನ ಫುಟ್ ರೆಸ್ಟಿನ ಮೇಲಿದ್ದ ಕಾಲುಗಳನ್ನು ಗಮನಿಸಿಕೊಂಡೆ. ಏಕೋ ಮಳೆಯ ನೀರಿನ ಜೊತೆ ಕೆಂಪು ಮಿಶ್ರಣ ಹೊರಬರುತ್ತಿದ್ದ ಹಾಗನಿಸಿತು. ಸ್ವಲ್ಪ ದೂರ ಹೋಗಿ ರಸ್ತೆ ಬದಿಯಲ್ಲಿ ಬೈಕಿನ ಸ್ಟ್ಯಾಂಡ್ ಹಾಕಿ ನಿಲ್ಲಿಸಿದೆ. ಮಳೆಯ ಪ್ಯಾಂಟು ಮತ್ತು ಕಾಟನ್ ಪ್ಯಾಂಟುಗಳೆರಡು ರಕ್ತದಿಂದ ತೋಯ್ದು ಹೋಗಿದ್ದವು. ಮಲೆನಾಡಿನಲ್ಲಿ ಮಳೆಗಾಲದಲ್ಲಿ ರಕ್ತ ಹೀರುವ ಜಿಗಣೆ ಉಂಬಳ ಹೋಗಬಾರದ ಕೇಂದ್ರ ಸರ್ಕಾರದ ಬಳಿ ಹೋಗಿ ಕಚ್ಚಿರುವುದರಿಂದ ಹೀಗಾಗಿರಬಹುದು ಅಂದುಕೊಂಡೆ.
ಆದರೆ ಈ ಪ್ರಮಾಣದಲ್ಲಿ ರಕ್ತ ನಿಲ್ಲದೇ ಹೋಗುವುದು ಜಿಗಣೆ ಕಡಿತದಿಂದಲ್ಲ. ಇದು ಎಮ್ಮೆಯ ಚೂಪಾದ ಕೋಡಿನ ಪ್ರತಾಪ ಎಂದು ತಕ್ಷಣಕ್ಕೆ ಹೊಳೆಯಿತು. ಬವಳಿ ಬಂದ ಹಾಗಾದರೂ ನೇರವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದೆ. ವೈದ್ಯರ ಹತ್ತಿರ ಹೋಗಿ ಘಟನೆ ವಿವರಿಸಿ ನನ್ನ ಸಕಲ ಅಂಗಾಂಗಗಳನ್ನು ತೀವ್ರವಾದ ತಪಾಸಣೆಗೆ ಒಳಪಡಿಸುವಂತೆ ಬೇಡಿಕೆ ಇಟ್ಟೆ.
ನನ್ನ ಸ್ನೇಹಿತರಾದ ಅವರು ಡ್ರೆಸಿಂಗ್ ಮಾಡುತ್ತಾ “ಏನ್ ಡಾಕ್ಟ್ರೇ.. ಡಕಾಯಿತರು ಚೂರಿ ಹಾಕಿದ್ರಾ? ತಾಳಗುಪ್ಪದ ರೈಲಿಗೆ ಗುದ್ದಿದ್ರಾ? ಅಥ್ವಾ ಲಿಂಗಿನಮಕ್ಕಿಗೆ ಟರ್ಬೈನುಗಳನ್ನು ಸಾಗಿಸುವ ಯಮಗಾತ್ರದ ಲಾರಿಗೆ ಗುದ್ದಿದ್ರಾ? ಈ ಪರಿ ಗಾಯವಾಗಿದೆ?“ ಎಂದು ಕಕ್ಕುಲತೆ ಮೆರೆದರು. ನನ್ನ ತೊಡೆಯ ಮೇಲ್ಬಾಗದಲ್ಲಿ ಸುಮಾರು ಮೂರು ಇಂಚು ಚೂಪಾದ ಚಾಕುವಿನಿಂದ ತಿವಿದಂತೆ ಗಾಯವಾಗಿ ಅದರಿಂದ ಸಾಕಷ್ಟು ರಕ್ತ ಹರಿದಿತ್ತು.
ಅದಕ್ಕೆ ಡ್ರೆಸಿಂಗ್ ಮಾಡಿ ಆಳವಾದ ಗಾಯಕ್ಕೆ ಹೊಲಿಗೆ ಹಾಕಿ, ಪೌಡರು ಇಂತಹದ್ದೆಲ್ಲಾ ಮೆತ್ತಿ, ಟಿಟಿಯಂತ ಎಂತದೋ ಇಂಜೆಕ್ಷನ್ ಚುಚ್ಚಿ ಹದಿನೈದು ದಿನ ವಿಶ್ರಾಂತಿ ತೆಗೆದುಕೊಳ್ಳಿ ಎಂದು ಹೇಳಿ ಕಳಿಸಿದರು. ಎಲ್ಲಿಯ ವಿಶ್ರಾಂತಿ?! ಮನೆಗೆ ಹೋಗಿ ಮಲಗಿ ಒಂದು ವಾರದವರೆಗೆ ಸ್ವಲ್ಪ ಸುಧಾರಿಸಿಕೊಂಡು ಗಾಯ ವಾಸಿಯಾಗಿದೆ ಎಂದು ಖಚಿತ ಮಾಡಿಕೊಂಡು ನನ್ನ ಚಟುವಟಿಕೆಗಳನ್ನು ಎಂದಿನಂತೆ ಮುಂದುವರೆಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ನಿಷೇಧ : ಸಚಿವ ದಿನೇಶ್ ಗುಂಡೂರಾವ್
ಸುದ್ದಿದಿನ, ಬೆಂಗಳೂರು : ಕೃತಕ ಬಣ್ಣ ಬಳಸಿದ ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಮಾರಾಟವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯಾದ್ಯಂತ ನಿಷೇಧಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಆದಾಗ್ಯೂ, ಬಣ್ಣ ಹಾಗೂ ರಾಸಾಯನಿಕ ಹಾಕದೇ ಇರುವ ಈ ತಿನಿಸುಗಳ ಮಾರಾಟಕ್ಕೆ ನಿರ್ಬಂಧ ಇಲ್ಲ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳು ಸೇರಿದಂತೆ ಎಲ್ಲ ವಯೋಮಾನದವರಿಗೂ ಅಚ್ಚುಮೆಚ್ಚಾದ ಈ ಎರಡು ತಿನಿಸುಗಳನ್ನು ಆಕರ್ಷಕವಾಗಿ ಕಾಣುವಂತೆ ಮಾಡಲು ಬಳಸುವ ಕೃತಕ ಬಣ್ಣಗಳಲ್ಲಿ ಅಪಾಯಕಾರಿ ರಾಸಾಯನಿಕಗಳು ಇರುವುದು ಪರೀಕ್ಷೆಗಳಿಂದ ದೃಢಪಟ್ಟಿದೆ ಎಂದರು. ರಾಜ್ಯದ ಹಲವೆಡೆ ಬೀದಿಬದಿಯ ಗಾಡಿಗಳು, ಹೋಟೆಲ್ಗಳಲ್ಲಿ ತಯಾರಿಸಿದ ಗೋಬಿ ಮಂಚೂರಿ ತಿನಿಸಿನ 171ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ 107ಮಾದರಿಗಳಲ್ಲಿ ಅಸುರಕ್ಷಿತ ರಾಸಾಯನಿಕಗಳು ಪತ್ತೆಯಾಗಿರುವುದು ಆತಂಕಕಾರಿಯಾಗಿದೆ ಎಂದರು.
ಕೃತಕ ಬಣ್ಣಗಳಲ್ಲಿರುವ ರೋಡೊಮೈನ್-ಬಿ ಮತ್ತು ಟಾಟ್ರಝೀನ್ ರಾಸಾಯನಿಕಗಳು ಕ್ಯಾನ್ಸರ್ ರೋಗಕ್ಕೆ ಕಾರಣವಾಗಬಹುದು ಎನ್ನುವ ಅಂಶ ತಿಳಿದುಬಂದಿದೆ. ಬಣ್ಣ ಹಾಕಿದ ಗೋಬಿಮಂಚೂರಿ ಮತ್ತು ಕಾಟನ್ಕ್ಯಾಂಡಿಗಳನ್ನು ಮಾರಾಟ ಮಾಡುವವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಏಳು ವರ್ಷದರೆಗೆ ಜೈಲು ಶಿಕ್ಷೆ, 10 ಲಕ್ಷ ರೂಪಾಯಿವರೆಗೆ ದಂಡ ಅಥವಾ ಜೀವಾವಧಿ ಶಿಕ್ಷೆಗೂ ಅವಕಾಶವಿದೆ ಎಂದು ಸಚಿವರು ಎಚ್ಚರಿಕೆ ನೀಡಿದರು.
ಹೇಳಿಕೆ
- ಬಣ್ಣ ಹಾಕಿರುವ ಈ ಎರಡು ತಿನಿಸುಗಳನ್ನು ಸೇವಿಸಬಾರದು ಎಂದು ಸಾರ್ವಜನಿಕರಿಗೂ ಎಚ್ಚರಿಕೆ ನೀಡಲಾಗಿದೆ. ಸಾರ್ವಜನಿಕರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದಲ್ಲದೇ, ಕಬಾಬ್, ಪಾನಿಪೂರಿ ಮೊದಲಾದ ತಿನಿಸುಗಳಲ್ಲೂ ಕೃತಕ ಬಣ್ಣಗಳ ಬಳಕೆ ಆಗುತ್ತಿದೆಯೇ ಎಂದು ಪರಿಶೀಲಿಸಲಾಗುತ್ತಿದೆ.
| ಸಚಿವ ದಿನೇಶ್ ಗುಂಡೂರಾವ್
ಟ್ವೀಟ್
In consideration of public health, we are banning the use of artificial colours in Gobi Manchurian and cotton candy. Violation of this ban may result in imprisonment for up to 7 years and a fine of up to 10 lakhs.
Following reports of substandard quality and the presence of… pic.twitter.com/z2KWHi8Jbd
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) March 11, 2024
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಲೈಫ್ ಸ್ಟೈಲ್
ನೀಲಿ ಪರ್ವತಗಳ ನಾಡಿನಲ್ಲಿ ಕೀಚಕರ ಹಾವಳಿ
- ಡಾ. ಸಿದ್ದಯ್ಯ ರೆಡ್ಡಿಹಳ್ಳಿ
ಜಗತ್ತಿನ ಪ್ರತಿ ಜನಾಂಗವು ತನ್ನ ಪೂರ್ವಜರ ಪ್ರತಿಭೆ ಹಾಗೂ ಹಿರಿಮೆಯನ್ನು ಹೇಳಿಕೊಳ್ಳಲು ಕಾತರಿಸುತ್ತದೆ. ಅದರಂತೆಯೇ ನಮ್ಮ ಭರತ ಖಂಡದ ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ವಾಸಿಸುವ ಮಣಿಪುರಿ ಜನರು ಕ್ರಿಸ್ತಪೂರ್ವದಲ್ಲಿಯೇ ಅತ್ಯಾಧುನಿಕ ಸಾಮ್ರಾಜ್ಯವನ್ನು ಕಟ್ಟಿದ್ದರಂತೆ ಎಂದು ಹೇಳಿಕೊಳ್ಳುತ್ತಾರೆ.
ನಿಜ ಮಣಿಪುರಿಗಳು ಬೆಟ್ಟಗಳ ನಡುವೆ ಬೆಚ್ಚನೆಯ ಜೀವನವನ್ನು ಸಾಗಿಸಿದವರು. ಆದರೆ ಅಲ್ಲಿ ಕೊಳ್ಳಿ ಇಡುವ ಕೆಲಸಗಳು ಬಹಳ ಹಿಂದಿನಿಂದಲೇ ಪ್ರಾರಂಭವಾಗಿರುವುದು ತಿಳಿದುಬರುತ್ತದೆ. ವಾಸ್ತವದಲ್ಲಿ ಹಲವು ಬುಡಕಟ್ಟುಗಳ ಸಂಮಿಶ್ರಣವೇ ಮಣಿಪುರವಾಗಿದೆ. ಆದರೆ ಮಣಿಪುರಿಗಳು ಮಾತ್ರ ಈ ನೆಲದ ಮೂಲ ನಿವಾಸಿಗಳು, ಅವರಿಗೆ ಮಾತ್ರ ಸಕಲ ಸೌಕರ್ಯಗಳು ಸಿಗಬೇಕು, ಉಳಿದವರು ರಾಜ್ಯ ಬಿಡಬೇಕು ಎಂದು ಉಯಿಲ್ಲೆಬ್ಬಿಸುತ್ತಿರುವವರು ಯಾರು? ಪ್ರತಿಯೊಂದು ಬುಡಕಟ್ಟು ಜನಾಂಗಕ್ಕೆ ಇರುವಂತೆ ಹೇರಳವಾದ ಜಾನಪದ ಕಥೆ, ಪುರಾಣ ಮತ್ತು ದಂತಕಥೆಗಳ ಸಂಪತ್ತು ಇಲ್ಲಿನ ಬುಡಕಟ್ಟು ಜನಾಂಗಗಳಿಗೂ ಇದೆ.
ಮಣಿಪುರದ ರಾಜಧಾನಿ ಇಂಫಾಲ್ನಲ್ಲಿ ವಾಸಿಸುತ್ತಿದ್ದ ಜನರನ್ನು ಮಿತೇಯಿ ಅಥವಾ ಮೈತೇಯಿ ಎಂದು ಕರೆಯಲಾಗುತ್ತಿತ್ತು. ಸ್ವಾತಂತ್ರ್ಯಪೂರ್ವದಲ್ಲಿ ಮಣಿಪುರವು ಬಾಂಗ್ಲಾದ ಗುಡ್ಡುಗಾಡು ಜಿಲ್ಲೆಗಳಲ್ಲಿ ಒಂದಾಗಿತ್ತು. ಭಾರತ ಸ್ವಾತಂತ್ರ್ಯಗೊಂಡು ಎರಡು ವರ್ಷ ಎರಡು ತಿಂಗಳು ಕಳೆದ ನಂತರ ಅಂದರೆ ಅಕ್ಟೋಬರ್ 15, 1949ರಂದು ಭಾರತದೊಂದಿಗೆ ಏಕೀಕೃತವಾಯಿತು.
ಮಣಿಪುರದಲ್ಲಿ ಅಂತರ-ಜನಾಂಗೀಯ ಹಿಂಸಾಚಾರವು ಇದೇ ಮೊದಲೇನಲ್ಲ, ಇದಕ್ಕೆ ಸುದೀರ್ಘವಾದ ಇತಿಹಾಸವಿದೆ. ಮಣಿಪುರಿಗಳ ಅತಿರೇಕ ಎಲ್ಲಿಯವರೆಗೆ ಹೋಗಿತ್ತು ಎಂದರೆ 1964ರಲ್ಲಿ ಭಾರತದಿಂದ ಬಿಡುಗಡೆ ಹೊಂದಿ, ಹೊಸ ದೇಶವನ್ನು ಸೃಷ್ಟಿಸಿಕೊಳ್ಳಬೇಕು ಎಂದು ದಂಗೆಯನ್ನು ಎಬ್ಬಿಸಲಾಗಿತ್ತು. ಇದರಲ್ಲಿ ಹಲವಾರು ಗುಂಪುಗಳು ಕೂಡಿಕೊಂಡಿದ್ದವು. ಅವರಿಗೆ ಅವರದೇ ಆದ ಗುರಿಗಳು ಇದ್ದುದರಿಂದ ಈ ದಂಗೆ ವಿಫಲವಾಯಿತು.
ಚೀನಾ ದೇಶದ ಕುಮ್ಮಕ್ಕಿನಿಂದಾಗಿ ‘ರೆವಲ್ಯೂಷನರಿ ಪಾರ್ಟಿ ಆಫ್ ಕಾಂಗ್ಲೀಪಾಕ್’ ಮತ್ತು ‘ಪೀಪಲ್ಸ್ ಲಿಬರೇಶನ್ ಆರ್ಮಿಗಳು’ ಹುಟ್ಟಿಕೊಂಡವು. ಇವರು ಶಸ್ತ್ರಾಸ್ತ್ರ ತರಬೇತಿಯನ್ನು ಹೊಂದಿ, ಬ್ಯಾಂಕ್ ದರೋಡೆಗಳನ್ನು ಮಾಡುವುದು, ಪೊಲೀಸ್ ಅಧಿಕಾರಿಗಳ ಮೇಲೆ ಮತ್ತು ಸರ್ಕಾರಿ ಕಟ್ಟಡಗಳ ಮೇಲೆ ದಾಳಿ ಮಾಡುವುದು ಇಂತಹ ಕೃತ್ಯಗಳನ್ನು ಮಾಡತೊಡಗಿದರು. 1980 ರಿಂದ 2004ರವರೆಗೂ ಭಾರತ ಸರ್ಕಾರ ಮಣಿಪುರವನ್ನು ಪ್ರಕ್ಷÄಬ್ದ ಪ್ರದೇಶ ಎಂದು ಉಲ್ಲೇಖಿಸಿತ್ತು.
ಈ ಸಂದರ್ಭದಲ್ಲಿ ‘ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆ’ಯನ್ನು ಜಾರಿಗೆ ತರಲಾಯಿತು. ಈ ಕಾಯಿದೆಯ ಪ್ರಕಾರ ಖಾಸಗಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಕೆಟ್ಟವರ್ತನೆಗಳನ್ನು ಮಾಡುತ್ತಿದ್ದರೆ, ಯಾವುದೇ ವಾರಂಟ್ಗಳಿಲ್ಲದೆ ಬಂಧಿಸಬಹುದಾಗಿತ್ತು. ಕಾನೂನುಗಳನ್ನು ಉಲ್ಲಂಘಿಸುವ, ಶಸ್ತ್ರಾಸ್ತ್ರಗಳನ್ನು ಹೊಂದಿರುವವರನ್ನು ಅಥವಾ ದೊಡ್ಡ ದೊಡ್ಡ ಗುಂಪುಗಳಲ್ಲಿ ಸೇರಿದ್ದವರನ್ನು ಗುಂಡಿಕ್ಕಿ ಕೊಲ್ಲುವ ಅವಕಾಶವನ್ನು ಮಿಲಿಟರಿಗೆ ಕೊಡಲಾಗಿತ್ತು. ಮಿಲಿಟರಿಯ ಪರವಾಗಿರುವ ಈ ಕಾನೂನು ಅನಿಯಂತ್ರಿತ ಹತ್ಯೆಗಳು, ಚಿತ್ರಹಿಂಸೆ, ಕ್ರೂರ ಅಮಾನವೀಯತೆ, ಅಪಹರಣದಂತಹ ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಯಿತು.
ಈ ಮಾನವ ವಿರೋದಿ ಮಿಲಿಟರಿ ಕಾನೂನಿನ ವಿರುದ್ಧ ಹಲವಾರು ಪ್ರತಿಭಟನೆಗಳು, ಹೋರಾಟಗಳು ಜರುಗಿದವು. ಇರೋಮ್ ಶರ್ಮಿಳಾ ಚಾನು ಎಂಬ ದಿಟ್ಟ ಮಹಿಳೆ ದೀರ್ಘಾವಧಿಯ ಉಪವಾಸ ಸತ್ಯಾಗ್ರಹವನ್ನು ಮಾಡಿದ್ದಳು. ಆದರೂ 2004ರಲ್ಲಿ ಸ್ಥಳೀಯ ಮಹಿಳೆಯರ ಮೇಲೆ ಹಿಂಸಾತ್ಮಕ ದಾಳಿಯನ್ನು ನಡೆಸಲಾಯಿತು. ಇದಕ್ಕೆ ಪ್ರತಿರೋಧವಾಗಿ ಪ್ರತಿಭಟನೆಗಳು ತೀವ್ರಮಟ್ಟಕ್ಕೆ ತಲುಪಿದಾಗ ಸರ್ಕಾರವು ಮಣಿಪುರದಲ್ಲಿದ್ದ ಗೊಂದಲದ ಸ್ಥಿತಿಯನ್ನು ತೆಗೆದುಹಾಕಿತು.
ಮಣಿಪುರವು ನೀಲಿ ಪರ್ವತಗಳಿಂದ ಸುತ್ತುವರೆದಿರುವ ನಾಡಾಗಿದೆ. ಈ ಪರ್ವತ ಶ್ರೇಣಿಗಳು ತಣ್ಣನೆಯ ಗಾಳಿಯನ್ನು ಮಣಿಪುರಿಗಳಿಗೆ ತಲುಪದಂತೆ ತಡೆಯುತ್ತವೆ. ಆದರೆ ಮಣಿಪುರಿಗಳಲ್ಲಿಯೇ ಹೊತ್ತಿಕೊಂಡಿರುವ ಬೆಂಕಿಯನ್ನು ನಂದಿಸಲು ಅವುಗಳಿಗೆ ಸಾಧ್ಯವೇ!? ಅವುಗಳು ಚಂಡಮಾರುತದ ಬಿರುಗಾಳಿಗಳನ್ನು ತಡೆಯಬಹುದು, ಆದರೆ ಅವರಲ್ಲಿರುವ ಮೌಢ್ಯವನ್ನು ತೊಡೆದುಹಾಕಲು ಸಾಧ್ಯವೇ?!
ಮಣಿಪುರ ರಾಜ್ಯವು ಉತ್ತರಕ್ಕೆ ನಾಗಾಲ್ಯಾಂಡ್, ದಕ್ಷಿಣಕ್ಕೆ ಮಿಜೋರಾಂ, ಪಶ್ಚಿಮಕ್ಕೆ ಅಸ್ಸಾಂ ಮತ್ತು ಪೂರ್ವಕ್ಕೆ ಮಯನ್ಮಾರ್ ದೇಶದ ಗಡಿಯನ್ನು ಹೊಂದಿದೆ.
ಮಣಿಪುರದಲ್ಲಿ ಮಳೆಗೆ, ನೀರಿಗೆ ಕೊರತೆಯಿಲ್ಲ. ಇದರ ಪಶ್ಚಿಮಕ್ಕೆ ಬರಾಕ್ ನದಿಯ ಜಲಾನಯನ ಪ್ರದೇಶ, ಪೂರ್ವದಲ್ಲಿ ಯು ನದಿಯ ಜಲಾನಯನ ಪ್ರದೇಶ, ಉತ್ತರದಲ್ಲಿ ಲಾನ್ಯೆ ನದಿಯ ಜಲಾನಯನ ಪ್ರದೇಶ, ಮಧ್ಯದಲ್ಲಿ ಮಣಿಪುರ ನದಿಯ ಜಲಾನಯನ ಪ್ರದೇಶವನ್ನು ಹೊಂದಿ ಸಮೃದ್ಧವಾಗಿರುವಂತೆ, ಅಲ್ಲಿನ ಮಹಿಳೆಯರು ಧಾರಾಕಾರವಾಗಿ ಕಣ್ಣೀರನ್ನು ಸುರಿಸುತ್ತಿದ್ದಾರೆ. ಇಲ್ಲಿನ ಮಹಿಳೆಯರ ಕಣ್ಣೀರಿಗೆ ಮೊದಲನ್ನು ಗುರುತಿಸುವುದಕ್ಕೆ, ಕೊನೆಯನ್ನು ಗ್ರಹಿಸುವುದಕ್ಕೆ ಸಾಧ್ಯವಾಗುತ್ತಿಲ್ಲ.
ಮಣಿಪುರದ ಅತಿದೊಡ್ಡ ನದಿ ಬರಾಕ್. ಇದು ಇರಾಂಗ್, ಮಕು ಮತ್ತು ತುವೈ ಉಪನದಿಗಳನ್ನು ಹೊಂದಿ ಅಸ್ಸಾಂ ರಾಜ್ಯವನ್ನು ಪ್ರವೇಶಿಸುತ್ತದೆ. ಮಣಿಪುರ ನದಿಯ ಜಲಾನಯನ ಪ್ರದೇಶವು ಮಣಿಪುರ, ಇಂಫಾಲ್, ಇರಿಲ್, ನಂಬುಲ್, ಸೆಕ್ಮೆಂ, ಚಕ್ಪಿ, ತೌಬಲ್ ಮತ್ತು ಖುಗಾ ಎಂಬಂತಹ ಎಂಟು ನದಿಗಳನ್ನು ಹೊಂದಿದೆ. ಈ ಎಲ್ಲಾ ನದಿಗಳು ಸುತ್ತಮುತ್ತಲಿನ ಬೆಟ್ಟಗಳಿಂದಲೇ ಹುಟ್ಟಿಕೊಂಡಿವೆ. ಈ ನದಿಗಳ ಒಳಹರಿವಿನ ಮರ್ಮ ನಮ್ಮ ರಾಜಕಾರಣಿಗಳ ಮರ್ಮದಂತೆ ಯಾರಿಗೂ ತಿಳಿಯದಂತಹ ಕಗ್ಗಂಟಾಗಿದೆ. ನದಿಯು ತಣ್ಣಗಿದ್ದು, ಒಂದೇ ಭಾರಿ ಬೋರ್ಗರೆದು ತಣ್ಣಗಾಗುವಂತೆ ನಮ್ಮ ಪ್ರಧಾನಮಂತ್ರಿಗಳು ಮೂರು ತಿಂಗಳ ಕಾಲ ದಿವ್ಯ ಮೌನವಾಗಿದ್ದು, ಜನರ ನಿತ್ಯ ಜೀವನವು ಅಲ್ಲೋಲ-ಕಲ್ಲೋಲ ಆದಮೇಲೆ ತಣ್ಣಗೆ ಮಾತನಾಡಿದ್ದಾರೆ.
ಆದರೆ ಅಲ್ಲಿಗೆ ಹೋಗುವ ಧೈರ್ಯವನ್ನು ಮಾಡಿಲ್ಲ. ಚುನಾವಣೆ ಇದ್ದರೆ ಹತ್ತು-ಹದಿನೈದು ಬಾರಿ ರೋಡ್-ಶೋ ಮಾಡುವ ಇವರು ಕಷ್ಟದ ಕಾಲದಲ್ಲಿ ಆ ಕಡೆ ತಿರುಗಿಯು ನೋಡದೇ ಇರುವುದು ಭಾರತೀಯರು ಪಶ್ಚಾತ್ತಾಪಪಡುವಂತೆ ಮಾಡಿದೆ.
ಮಣಿಪುರವನ್ನು ಭೌತಿಕ ಲಕ್ಷಣಗಳಲ್ಲಿ ವಿಭಿನ್ನವಾಗಿರುವ ಎರಡು ವಿಭಿನ್ನ ಭೌತಿಕ ಪ್ರದೇಶಗಳಾಗಿ ನಿರೂಪಿಸಬಹುದು. ಒಂದು ಒರಟಾದ ಬೆಟ್ಟಗಳು, ಕಿರಿದಾದ ಕಣಿವೆಗಳ ಹೊರ ಪ್ರದೇಶ ಮತ್ತೊಂದು ಸಮತಟ್ಟಾದ ಬಯಲಿನ ಒಳ ಪ್ರದೇಶ. ಇಲ್ಲಿನ ಕಣಿವೆ ಪ್ರದೇಶವು ಸಮತಟ್ಟಾದ ಮೇಲ್ಮೈ ಮೇಲೆ ಏರುತ್ತಿರುವ ಬೆಟ್ಟಗಳು ಮತ್ತು ದಿಬ್ಬಗಳಿಂದ ಕೂಡಿದೆ.
ಇಲ್ಲಿನ ಲೋಕ್ಟಾಕ್ ಸರೋವರವು ಕೇಂದ್ರ ಬಯಲಿನಿಂದ ನಾಗಾಲ್ಯಾಂಡ್ನ ಗಡಿಯವರೆಗೂ ತನ್ನ ವಿಸ್ತಾರವನ್ನು ಹರಡಿಕೊಂಡಿದೆ. ಇಲ್ಲಿನ ಮಣ್ಣಿನ ಹೊದಿಕೆಗೂ ಗಂಡು-ಹೆಣ್ಣಿನ ಸಂಬಂಧಕ್ಕೂ ನಿಕಟವಾದ ಹೋಲಿಕೆ ಇರುವಂತೆ ಕಂಡುಬರುತ್ತದೆ. ಬೆಟ್ಟದ ಪ್ರದೇಶದಲ್ಲಿ ಕೆಂಪು ಫೆರುಜಿನಸ್ ಮಣ್ಣು ಮತ್ತು ಕಣಿವೆಯಲ್ಲಿ ಮೆಕ್ಕಲು ಮಣ್ಣು ಇದೆ. ಕಣಿವೆಯ ಮಣ್ಣು ಇಲ್ಲಿನ ಗಂಡಿನ ರೀತಿಯಲ್ಲಿ ಕಠಿಣವಾಗಿದ್ದರೆ, ಕಡಿದಾದ ಇಳಿಜಾರುಗಳಲ್ಲಿರುವ ಮಣ್ಣು ಹೆಣ್ಣಿನಂತೆ ಹೆಚ್ಚಿನ ಸವೆತಕ್ಕೆ ಒಳಗಾಗಿದೆ, ಒಳಗಾಗುತ್ತಿದೆ. ಇದರ ಪರಿಣಾಮವಾಗಿ ಬಂಜರು ಬಂಡೆಗಳ ಇಳಿಜಾರುಗಳು ಸೃಷ್ಟಿಯಾಗುವಂತೆ ಅಲ್ಲಿನ ಪುರುಷರ ಮನಸ್ಸುಗಳು ಬಂಡೆಯಂತೆ ಆಗುತ್ತಿರುವುದು ಖೇದಕರವಾದ ಸಂಗತಿಯಾಗಿದೆ.
ಬೆಟ್ಟದ ತಪ್ಪಲಿನಲ್ಲಿ ರತ್ನಗಂಬಳಿಯನ್ನು ಹಾಸಿಹೊದಿಸಿರುವಂತೆ ಕಾಣುವ ಫ್ಲೋರಾ ಹೂವುಗಳು ಅಲ್ಲಿನ ಬುಡಕಟ್ಟು ಮಹಿಳೆಯರ ಸೌಂದರ್ಯವನ್ನು ಬಿತ್ತರಿಸಿದರೆ, ಬೆಟ್ಟಗಳು ಪುರುಷಾಂಕಾರದಂತೆ ಕಾಣುತ್ತವೆ. ಇಲ್ಲಿ ಏನಿಲ್ಲ ಹೇಳಿ, ನೈಸರ್ಗಿಕವಾದ ಸಸ್ಯವರ್ಗವಿದೆ. ನಾಲ್ಕು ರೀತಿಯ ವಿಶಾಲವಾಗಿ ಹರಡಿರುವ ಉಷ್ಣವಲಯದ ಅರೆ-ನಿತ್ಯಹರಿದ್ವರ್ಣ, ಒಣ ಸಮಶೀತೋಷ್ಣ ಅರಣ್ಯ, ಉಪ-ಉಷ್ಣವಲಯದ ಪೈನ್ ಕಾಡುಗಳು ಮತ್ತು ಉಷ್ಣವಲಯದ ತೇವಾಂಶವುಳ್ಳ ಅರಣ್ಯಗಳಿವೆ. ತೇಗ, ಪೈನ್, ಓಕ್, ಯುನಿಂಗ್ದೌ, ಲಿಹಾವೊ, ಬಿದಿರಿನ ಮರಗಳಿವೆ. ತಮ್ಮ ಕಷ್ಟಗಳ ನಡುವೆಯೂ ರಬ್ಬರ್, ಟೀ, ಕಾಫಿ, ಕಿತ್ತಳೆ, ಏಲಕ್ಕಿ ಬೆಳೆಯುತ್ತಾರೆ. ಆದರೆ ಅವರು ಹೆಚ್ಚು ಬೆಳೆಯುವ ಮತ್ತು ಇಷ್ಟಪಡುವ ಅಕ್ಕಿಯಂತೆ ಅಲ್ಲಿನ ಪುರುಷರ ಮನಸ್ಸುಗಳು ಬೇಗನೇ ಹಾಳಾಗುತ್ತಿರುವುದು ಜಾತಿ, ಧರ್ಮಗಳೆಂಬ ಕೀಟಗಳಿಂದ ಎಂಬುದನ್ನು ಅವರು ತಿಳಿಯದಿರುವುದು ದುರದೃಷ್ಟಕರ.
ಮಣಿಪುರ ಮತ್ತು ನಾಗಾಲ್ಯಾಂಡ್ಗಳ ಗಡಿಗಳ ನಡುವೆ ಇರುವ ಝುಕೊ ಎಂಬ ಕಣಿವೆಯು ಸಮಶೀತೋಷ್ಣ ಹವಾಮಾನವನ್ನು ಹೊಂದಿರುವಂತೆ, ಅಲ್ಲಿನ ಜನರಿಗೆ ಸಮಚಿತ್ತತೆಯನ್ನು ನೀಡಿದ್ದರೆ ಚೆನ್ನಾಗಿರುತ್ತಿತ್ತು. ಭಾರತದ ಈಶಾನ್ಯ ಮೂಲೆಯು ಸಾಮಾನ್ಯವಾಗಿ ಸೌಹಾರ್ದಯುತವಾದ ಹವಾಮಾನವನ್ನು ಹೊಂದಿದೆ. ಆದರೆ ಅಲ್ಲಿನ ಜನರು ಸೌಹಾರ್ದಯುತವಾದ ಮನೋಭಾವನೆಯನ್ನು ಹೊಂದಿಲ್ಲ. ಅಲ್ಲಿನ ವಾತಾವರಣದಂತೆ ಚಳಿಗಾಲದಲ್ಲಿ ಚಳಿ ಹೆಚ್ಚಾಗಿರುವಂತೆ, ಬೇಸಿಗೆಯಲ್ಲಿ ಬಿಸಿಲು ಗರಿಷ್ಠ ಮಟ್ಟಕ್ಕೆ ಹೋಗುವಂತೆ ಅಲ್ಲಿನ ಜನರು ಆವೇಶಕ್ಕೊಳಗಾಗುತ್ತಾರೆ.
ಇಂಫಾಲದ ಮೈತೇಯಿ ಜನರು ವಾರ್ಷಿಕ ಸರಾಸರಿ 933 ಮಿಲಿಮೀಟರ್ ಮಳೆಯನ್ನು ಪಡೆಯುತ್ತಾರೆ. ಆದರೂ ಕೂಡ ತಮ್ಮದೇ ನೆಲದಲ್ಲಿರುವ ಕುಕಿ ಜನಾಂಗದ ಮಹಿಳೆಯರು ಕಣ್ಣೀರು ಸುರಿಸುವಂತೆ ನಡೆದುಕೊಳ್ಳುತ್ತಾರೆ.
ನೈರುತ್ಯ ಮಾನ್ಸೂನ್ ಮಾರುತಗಳು ಬಂಗಾಳಕೊಲ್ಲಿಯಿAದ ತೇವಾಂಶವನ್ನು ಎತ್ತಿಕೊಂಡು ಪೂರ್ವ ಹಿಮಾಲಯ ಶ್ರೇಣಿಗಳ ಕಡೆಗೆ ಹೋಗುವಾಗ ಈ ಪ್ರದೇಶದಲ್ಲಿ ಮಳೆಯಾಗುವಂತೆ ಪ್ರಕೃತಿಯೇ ನೋಡಿಕೊಂಡರೂ ಮಹಿಳೆಯರ ಕಣ್ಣೀರು ಮಾತ್ರ ಧಾರಾಕಾರವಾಗಿ ಹರಿಯುವಂತೆ ತಮ್ಮ ಸ್ವಾರ್ಥಕ್ಕಾಗಿ ರಾಜಕಾರಣಿಗಳು ನೋಡಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ಮಣಿಪುರದಲ್ಲಿ ಹವಾಮಾನದಲ್ಲಿ ಬದಲಾವಣೆ ಹೆಚ್ಚಾಗುತ್ತಿದೆ. ಉದಾಹರಣೆಗೆ ಮಳೆ ಮತ್ತು ತಾಪಮಾನದಲ್ಲಿ ತೀವ್ರ ಬದಲಾವಣೆಗಳು ಹೆಚ್ಚಾಗುತ್ತಿವೆ. ಆದರೆ ಅಲ್ಲಿನ ಜನಾಂಗಗಳ ನಡುವಿನ ಬಾಂಧವ್ಯದ ಬದ್ಧತೆಗಳು ಏರುಪೇರಾಗುತ್ತಿರುವುದು ಸಾಕಷ್ಟು ಹಿಂದಿನಿAದಲೇ ನಡೆಯುತ್ತಿರುವುದು ಮನುಷ್ಯ ಸಂಬಂಧಗಳ ನಡುವೆ ಬಿರುಕು ಮೂಡಿರುವುದರ ದ್ಯೋತಕವಾಗಿದೆ. ಕಣಿವೆ ಅಥವಾ ಬಯಲು ಪ್ರದೇಶಗಳಲ್ಲಿ ಮೈತೇಯಿ ಮಾತನಾಡುವ ಅಂದರೆ ಮಣಿಪುರಿ ಭಾಷಿಕರು ನೆಲೆಸಿದ್ದಾರೆ. ಬೆಟ್ಟಗಳಲ್ಲಿ ನಾಗಾಗಳು, ಕುಕಿಗಳು ಮೊದಲಾದ ಸಣ್ಣ ಬುಡಕಟ್ಟು ಜನರು ವಾಸಿಸುತ್ತಿದ್ದಾರೆ. ಇವರು ಬೆಟ್ಟಗಳ ಮೇಲ್ಮೈ ಮಣ್ಣಿನಂತೆ ಮೈತೇಯಿ ಜನರ ಹಾವಳಿಗೆ ಕೊಚ್ಚಿ ಹೋಗುತ್ತಿದ್ದಾರೆ. ಅಲ್ಲಿ ಮೈತೇಯಿ ಭಾಷೆಯು ಮಣಿಪುರಿ ಭಾಷೆಗೆ ಸಮಾನಾರ್ಥಕವಾಗಿ ಬಳಕೆಯಾಗುತ್ತಿರುವುದರಿಂದ ಇಲ್ಲಿನ ಬಹುಪಾಲು ಜನಸಂಖ್ಯೆ ಮೈತೇಯಿಯರೇ ಎಂದು ಕರೆಸಿಕೊಂಡಿದ್ದಾರೆ.
ಇವರು ಮಣಿಪುರದ ಮುಖ್ಯ ಜನಾಂಗ ಎಂಬುದೇನೋ ಸರಿ. ಆದರೆ ನಾಗಾ ಮತ್ತು ಕುಕಿ ಬುಡಕಟ್ಟು ಜನಾಂಗಗಳನ್ನು ಹಲವಾರು ಬುಡಕಟ್ಟು ಜನಾಂಗಗಳಾಗಿ ವಿಂಗಡಿಸಲಾಗಿದೆ. ಇವರೆಲ್ಲರೂ ಒಗ್ಗಟ್ಟಾಗಿದ್ದರೆ ನಮ್ಮ ಬೇಳೆ ಬೇಯ್ಯುವುದಿಲ್ಲ ಎಂಬ ಸಾಂಸ್ಕೃತಿಕ ರಾಜಕಾರಣವು ವ್ಯವಸ್ಥಿತವಾಗಿ ಬಹಳ ಹಿಂದಿನಿAದಲೇ ಇವರನ್ನು ಹೊಡೆದು ಹೊಡೆದು ಹಾಳುತ್ತಿದೆ.
ಮಣಿಪುರದಲ್ಲಿ ಮೇ 4ರಂದು ಜರುಗಿದ ಇಬ್ಬರು ಮಹಿಳೆಯರ ಸಾಮೂಹಿಕ ಅತ್ಯಾಚಾರ ಮತ್ತು ಬೆತ್ತಲೆ ಮೆರವಣಿಗೆಯು ಜುಲೈ 20ರಂದು ಹೊರ ಜಗತ್ತಿಗೆ ತಿಳಿಯಿತು. ಈ ಘಟನೆಯು ಪ್ರಪಂಚದ ಜನರನ್ನು ತಲ್ಲಣಗೊಳಿಸಿತು.
ಇಡೀ ಜಗತ್ತೇ ಈ ಕೃತ್ಯವನ್ನು ವಿರೋಧಿಸಿದರೂ ಕೂಡ, ಒಟ್ಟು ದೇಶವನ್ನೇ ತನ್ನ ಕುಟುಂಬ ಎಂದು ಕರೆದುಕೊಳ್ಳುವ ನಮ್ಮ ಪ್ರಧಾನಿಗಳು ಬೆಂಕಿ ಹೊತ್ತಿಕೊಂಡ ಮೂರು ತಿಂಗಳು ದಿವ್ಯ ಮೌನದಿಂದ ಇದ್ದರು ಎಂಬುದನ್ನು ಜಗತ್ತು ಮರೆಯುತ್ತದೆಯೇ? 140 ಕೋಟಿ ಜನರು ನನ್ನ ಕುಟುಂಬಸ್ಥರೇ ಎಂದು ಹೇಳಿಕೊಳ್ಳುವ ಪ್ರಧಾನಿಗಳು ಅದರಲ್ಲಿ ಮಹಿಳೆಯರೂ ಇದ್ದಾರೆ ಎಂಬುದನ್ನು ಮರೆತಿದ್ದಾರೆಯೇ!? ಒಟ್ಟಾರೆ ನಮ್ಮ ಪ್ರಧಾನಿಗಳ ಮೌನ, ಮೈತೇಯಿ ಮತಾಂಧರ ಆರ್ಭಟ ಕುಕಿ ಜನಾಂಗದ ಮಹಿಳೆಯರ ಬದುಕನ್ನು ಮೂರಾಬಟ್ಟೆ ಮಾಡಿರುವುದಂತೂ ಖಚಿತ.
(ಡಾ. ಸಿದ್ದಯ್ಯ ರೆಡ್ಡಿಹಳ್ಳಿ, 9449899520)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಮದ್ರಾಸ್ ಐ ವೈರಾಣುವಿಗೆ ಭಯ ಪಡಬೇಕಾಗಿಲ್ಲ : ಡಾ. ನಾಗರಾಜ
ಸುದ್ದಿದಿನ,ದಾವಣಗೆರೆ : ಸಾಮಾನ್ಯವಾಗಿ ಚಳಿಗಾಲದಲ್ಲಿ ಕಾಣಿಸಿಕೊಳ್ಳುತ್ತಿದ್ದ ಮದ್ರಾಸ್ ಐ ವೈರಾಣು ಅತೀ ವೇಗವಾಗಿ ಹರಡುತ್ತಿದ್ದು ಇದಕ್ಕೆ ಭಯ ಪಡಬೇಕಾಗಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗರಾಜ ತಿಳಿಸಿದ್ದಾರೆ.
ಮದ್ರಾಸ್ ಐ ಈ ಬಾರಿ ಮಳೆಗಾಲದಲ್ಲಿ ಆರಂಭವಾಗಿದ್ದು ರಾಜ್ಯದ ಜನರಕಣ್ಣು ಕೆಂಪಾಗಿಸುತ್ತಿದೆ, ಮುಖ್ಯವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಹಾಸ್ಟಲ್ ವಿದ್ಯಾರ್ಥಿಗಳಲ್ಲಿ “ಮದ್ರಾಸ್ ಐ” ವೇಗಾಗಿ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ, ಕಂಜಕ್ವಿಟಿಸ್ ಎಂದು ಕರೆಯಲಾಗುವ ಮದ್ರಾಸ್ ಐ ಅಥವಾ ಕಣ್ಣು ವೈರಾಣುಗಳಿಂದ ಹರಡುವ ಕಣ್ಣಿನ ಸಮಸ್ಯೆ ತೇವಾಂಶ ಹೆಚ್ಚಾದಾಗ ಅಥವಾ ಚಳಿಗಾಲದ ವಾತಾವರಣದಲ್ಲಿ ಹುಟ್ಟಿಕೊಳ್ಳುವ ಈ ವೈರಾಣುಗಳು ನೇರವಾಗಿಕಣ್ಣಿ ಮೇಲೆ ಪರಿಣಾಮಉಂಟು ಮಾಡುತ್ತವೆ, ರಾಜ್ಯದಲ್ಲಿ ಮಳೆಯಾಗುತ್ತಿದ್ದ ಪರಿಣಾಮ ಬಿಸಿಲು ಇಲ್ಲದಂತಾಗಿದೆ ಇದರ ಪರಿಣಾಮತೇವಾಂಶ ಹೆಚ್ಚಾಗಿ ಅವಧಿಗೂ ಮೊದಲೇ ಈ ವೈರಾಣು ದಾಂಗುಡಿ ಇರಿಸಿದೆ.
ರೋಗದ ಲಕ್ಷಣಗಳು
ಕಸ ಬಿದ್ದದಂತೆಆಗುವ ರೀತಿಯಾಗಿಕಣ್ಣುಚುಚ್ಚುವುದು, ಬೆಳಗ್ಗೆ ಎದ್ದಾಗ ಹೆಚ್ಚು ಪಿಸುರು (ಪಿಚ್ಚು) ಬರುತ್ತದೆ, ಕಣ್ಣುಗಳು ಕೆಂಪಾಗಿ, ಕಿರಿಕಿರಿ ಹೆಚ್ಚುವುದು, ಕಣ್ಣಲ್ಲಿ ನೀರು ಬರುವುದು, ರೆಪ್ಪೆ ಕಣ್ಣು ದಪ್ಪ ಆಗುವುದು ಕಂಡು ಬರುತ್ತದೆ.
ಮುಂಜಾಗೃತಾ ಕ್ರಮಗಳು
ಸಮಸ್ಯೆ ಇರುವವರು ಕೆಲದಿನ ಪ್ರತ್ಯೇಕ ವಾಸ ಮಾಡಿ, ಲಕ್ಷಣಗಳು ಕಾಣಿಸಿಕೊಳ್ಳದಿದ್ದರೆ, ಕಣ್ಣಿಗೆಔಷಧ ಹಾಕಿಸಿಕೊಳ್ಳಬೇಡಿ, ದಿನಕ್ಕೆ 8-10 ಬಾರಿ ಸ್ಯಾನಿಟೈಸರ್, ಸೋಪು ಬಳಸಿ ಕೈ ತೊಳೆದುಕೊಳ್ಳಿ, ವೈರಸ್ ಕಾಣಿಸಿಕೊಂಡಾಗ ಹತ್ತಿರದ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಸಲಹೆ ಪಡೆಯಬೇಕು, ವೈದ್ಯರ ತಪಾಸಣೆ ಮಾಡಿಸದೇ, ಔಷಧಿ ಅಂಗಡಿಗಳಲ್ಲಿ ಸಿಗುವ ಡ್ರಾಪ್ಸ್ಗಳನ್ನು ಬಳಸಬಾರದು, ಕಣ್ಣು ಮುಟ್ಟಿಕೊಳ್ಳುವುದನ್ನು ಕಡಿಮೆ ಮಾಡಬೇಕು.
ಪರಿಹಾರ
ಸಮಸ್ಯೆ ಉಳ್ಳವರು ಇತರರಿಂದದೂರಇರಬೇಕು, ವೈದ್ಯರ ಬಳಿ ತೋರಿಸಿ, ಐ ಡ್ರಾಪ್ಸ್ ಮಾತ್ರ ಹಾಕಬೇಕು, ಸಮಸ್ಯೆ ಕಡಿಮೆ ಆಗುವವರೆಗೆ ಗಾಳಿಗೆ ಹೋಗಬಾರದು, ದ್ವಿಚಕ್ರ ವಾಹನ ಓಡಿಸಬಾರದು, ಟಿ.ವಿ,ಮೊಬೈಲ್, ಕಂಪ್ಯೂಟರ್ಗಳನ್ನು ನೋಡುವುದನ್ನ ಕಡಿಮೆ ಮಾಡಿ ಕಣ್ಣಿಗೆ ವಿಶ್ರಾಂತಿಕೊಡಬೇಕು.
ರೋಗದ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣವೇ ಸಮೀಪದ ನಗರ, ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯಆರೋಗ್ಯ ಕೇಂದ್ರಗಳು, ತಾಲ್ಲೂಕು ಆಸ್ಪತ್ರೆಗಳು ಹಾಗೂ ಜಿಲ್ಲಾಆಸ್ಪತ್ರೆಗೆ ಭೇಟಿ, ವೈದ್ಯರ ಹತ್ತಿರತಪಾಸಣೆ ಮಾಡಿಸಿ ಚಿಕಿತ್ಸೆ ಪಡೆಯುವುದು ಸೂಕ್ತ. ವೈರಾಣುವಿನ ಸಮಸ್ಯೆ ಆಗಿರುವ ಕಾರಣ ನಿರ್ದಿಷ್ಟ ಚಿಕಿತ್ಸೆ ಇಲ್ಲ ಮುನ್ನೆಚ್ಚರಿಕೆಯೇ ಮದ್ದಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243