ನೆಲದನಿ
ಜಾತಿ ಪ್ರಜ್ಞೆ ಮತ್ತು ಪ್ರಗತಿಪರತೆಯ ನಡುವೆ ಡಾ. ರಾಜ್..!
- ನಾ ದಿವಾಕರ
ಒಂದು ಸಮಾಜ ಮತ್ತು ಸಮಾಜೋ ಸಾಂಸ್ಕೃತಿಕ ಸ್ಥಿತ್ಯಂತರಗಳು ಒಬ್ಬ ನಟನನ್ನು ರೂಪಿಸುತ್ತದೆಯೋ ಅಥವಾ ಒಬ್ಬ ಚಿತ್ರ ನಟ ಸಾಮಾಜಿಕ ಚಿಂತನೆಗಳನ್ನು, ಸ್ವರೂಪವನ್ನು ತನ್ನ ಪಾತ್ರಗಳ ಮೂಲಕ ಬಿಂಬಿಸುತ್ತಾನೋ ? ಈ ಪ್ರಶ್ನೆ ಬಹುಶಃ ಭಾರತದಲ್ಲಿ ಮಾತ್ರ ಪ್ರಸ್ತುತತೆ ಪಡೆಯುತ್ತದೆ. ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಸ್ತುತ ಎನಿಸುತ್ತದೆ.
ಏಕೆಂದರೆ ಚಿತ್ರ ನಟರ ಮೂಲಕ ಸಮಾಜವನ್ನು ನೋಡುವ ಪರಂಪರೆಯೊಂದಿಗೇ , ಸಾಮಾಜಿಕ ನೆಲೆಯಲ್ಲಿ ನಿಂತು ಚಿತ್ರ ನಟರನ್ನು ನಿಷ್ಕರ್ಷೆಗೊಳಪಡಿಸುವ ಪರಂಪರೆಯೂ ಇಲ್ಲಿ ಬೆಳೆದುಬಂದಿದೆ. ಈ ಪರಂಪರೆಗೆ ಸುದೀರ್ಘ ಇತಿಹಾಸವೇನೂ ಇಲ್ಲ. ಬಹುಶಃ 1960ರ ದಶಕದ ನಂತರ ಕಂಡುಬಂದ ವಿದ್ಯಮಾನ ಇದು. 1970-80ರಲ್ಲಿ ಒಂದು ತಳಪಾಯವನ್ನು ನಿರ್ಮಿಸಿಕೊಂಡು ಈಗ ಬೃಹತ್ ವೃಕ್ಷವಾಗಿ ನಮ್ಮೆದುರು ನಿಂತಿದೆ.
ಮೂಲದಲ್ಲಿ ಈ ಬೃಹತ್ ವೃಕ್ಷಕ್ಕೆ ಬೀಜ ಬಿತ್ತಿದವರಾರು, ನೀರೆರೆದು ಪೋಷಿಸಿದವರಾರು ಎಂದು ನಾವು ಯೋಚಿಸುತ್ತಾ ಕುಳಿತರೆ ಕೊನೆಗೆ ನಮ್ಮನ್ನು ನಾವೇ ಹಳಿಯುತ್ತಲೋ, ನಮ್ಮ ಬೆನ್ನು ನಾವೇ ತಟ್ಟಿಕೊಳ್ಳುತ್ತಲೋ ಕಾಲ ಕಳೆಯಬೇಕಾಗುತ್ತದೆ. ಏಕೆಂದರೆ ಇದು ಸಾಮಾಜಿಕ ಪಲ್ಲಟಗಳಿಂದ ಉಗಮಿಸಿದ ವಿದ್ಯಮಾನವಲ್ಲ. ಬದಲಾಗಿ ಈ ವಿದ್ಯಮಾನದಿಂದ ಕೆಲವು ಸಾಮಾಜಿಕ ಪಲ್ಲಟಗಳು ಕಂಡುಬಂದವು.
ಚಲನ ಚಿತ್ರ ನಟರನ್ನು ನಮ್ಮ ನಡುವೆ ತಂದು ನಿಲ್ಲಿಸಿ ಮೌಲ್ಯಮಾಪನ ಮಾಡುವ ಮೂಲಕ ಅವರಲ್ಲಿ ನಮ್ಮ ಸುತ್ತಲಿನ ಮೌಲ್ಯಗಳನ್ನು ಕಂಡುಕೊಳ್ಳುವ ಯತ್ನ ಒಂದೆಡೆಯಾದರೆ, ಮತ್ತೊಂದೆಡೆ ರಜತ ಪರದೆಯ ಮೇಲೆ ನಮ್ಮ ಸುತ್ತಲಿನ ಸಮಾಜವನ್ನು ಮೂಡಿಸಿ ಮೌಲ್ಯಗಳನ್ನು ಬಿತ್ತುವ ಪ್ರಕ್ರಿಯೆಯೂ ಚಾಲನೆ ಪಡೆದಿದ್ದನ್ನು ನಾವು ಗಮನಿಸಬೇಕು.
ಇದರ ನೇರ ಪರಿಣಾಮವೇ 1960-70ರ ದಶಕದ ಸಾಮಾಜಿಕ ಕಥಾವಸ್ತುಗಳ ಚಲನಚಿತ್ರಗಳ ಮಹಾಪೂರ. ಇದು ಕೇವಲ ದಕ್ಷಿಣ ಭಾರತಕ್ಕೆ ಸೀಮಿತವಲ್ಲ. ಹಿಂದಿ ಚಿತ್ರರಂಗದಲ್ಲಿ 1940-50ರ ದಶಕಗಳಲ್ಲಿ ನಡೆದ ಪ್ರಯತ್ನಗಳು ನಮ್ಮಲ್ಲಿ ನಡೆದಿದ್ದು ತಡವಾಗಿ. ಏಕೆಂದರೆ ದಕ್ಷಿಣ ಭಾರತದ ಚಲನಚಿತ್ರ ರಂಗ ತನ್ನ ರಂಗಸಜ್ಜಿಕೆಯನ್ನು ಬದಲಿಸಲು ಹೆಚ್ಚು ಕಾಲ ಬೇಕಾಗಿತ್ತು.
ಪೌರಾಣಿಕ-ಭಕ್ತಿರಸ ಕಥನಗಳನ್ನು ದಾಟಿ, ಅದೇ ಕಥಾವಸ್ತುಗಳನ್ನು ಸಾಮಾಜಿಕ ಚೌಕಟ್ಟಿನಲ್ಲಿ ಅಳವಡಿಸುವ ಪ್ರಯತ್ನದ ಫಲ ಈ ಮನ್ವಂತರದ ಘಟ್ಟದಲ್ಲಿ ಕಾಣಬಹುದಾಗಿತ್ತು. ಇಂದಿಗೂ ಕೆಲವು ಸಂದೇಶಾತ್ಮಕ ಅಥವಾ ಕಾದಂಬರಿ ಆಧರಿತ ಚಿತ್ರಗಳನ್ನು ಹೊರಗಿಟ್ಟು ನೋಡಿದಾಗ ಮೂರು ರೀತಿಯ ಕಥನಗಳು ಪರದೆಯ ಮೇಲೆ ವಿಭಿನ್ನ ಶೈಲಿಯಲ್ಲಿ, ವೈವಿಧ್ಯಮಯ ಸ್ವರೂಪಗಳಲ್ಲಿ ಕಂಡುಬರುತ್ತವೆ.
ಒಂದು, ತಂದೆ ಮಗನ ಸಂಘರ್ಷ. ತಾನು ಪ್ರೀತಿಸುವ ಹುಡುಗಿಯನ್ನು ಪ್ರಾಣ ತೆತ್ತಾದರೂ ಪಡೆಯುವ ಛಲ, ಹಂಬಲ ಮತ್ತು ಹಪಹಪಿಯಿಂದ ನಾಯಕ ನಟ ತನ್ನ ಹೆತ್ತವರನ್ನೂ ಧಿಕ್ಕರಿಸಿ, ಸಾಯಲೂ ಸಿದ್ಧವಾಗುವ ಕಥಾವಸ್ತು. ಇದರ ಮೂಲ ಮುಘಲ್ಎ-ಅಝಮ್ ನಲ್ಲಿ ಕಾಣಬಹುದು. ಇದು ಚಾರಿತ್ರಿಕ ಹಿನ್ನೆಲೆಯ ಕಾಲ್ಪನಿಕ ಕಥಾವಸ್ತು ಇರುವ ಚಿತ್ರ.
ಎರಡನೆಯದು ಕಳ್ಳ ಪೊಲೀಸ್ ಆಟ. ಕೆಳವರ್ಗದ ಅಥವಾ ಬಡತನದ ಬೇಗೆಯಲ್ಲಿ ಬೆಂದು ತನ್ನ ಸಮಸ್ಯೆಗಳಿಗೆ ಸಾಮಾಜಿಕ ಸ್ಥಿತ್ಯಂತರಗಳೇ ಕಾರಣ ಎಂದು ಭಾವಿಸಿ ವಾಮಮಾರ್ಗದ ಮೂಲಕ ತನ್ನ ಜೀವನ ಸುಧಾರಣೆಗಾಗಿ ಕಳ್ಳತನ, ದರೋಡೆ, ಕೊಲೆ ಸುಲಿಗೆಯಲ್ಲೂ ತೊಡಗುವ ನಾಯಕನ ಸುತ್ತಲಿನ ಕಥಾವಸ್ತು. ಇದಕ್ಕೆ ಅಶೋಕ್ ಕುಮಾರ್ ನಟಿಸಿರುವ ಕಿಸ್ಮತ್ ಸ್ಪೂರ್ತಿ.
ಮೂರನೆಯದು ಬಡತನ, ಊಳಿಗಮಾನ್ಯ ದೌರ್ಜನ್ಯ, ಭೂಮಿಯ ಪ್ರಶ್ನೆ, ಗ್ರಾಮೀಣ ಬದುಕು ಮತ್ತು ಶೋಷಣೆಯ ವಿರುದ್ಧ ಸಿಡಿದೇಳುವ ಯುವ ಮನಸ್ಸಿನ ಚಿತ್ರಣ. ತಾಯಿ ಮತ್ತು ಮಗನ ನಡುವಿನ ತಾತ್ವಿಕ ಸಂಘರ್ಷ. ಇದನ್ನು ಮದರ್ ಇಂಡಿಯಾ ಚಿತ್ರದಲ್ಲಿ ಕಾಣಬಹುದು. ನಾಲ್ಕನೆಯದು ಅಣ್ಣ ತಮ್ಮಂದಿರ ನಡುವೆ ಸೈದ್ಧಾಂತಿಕ ಸಂಘರ್ಷ. ಸಮಾಜ ಬದಲಾವಣೆಗೆ ವ್ಯವಸ್ಥೆಯ ಒಳಗಿದ್ದುಕೊಂಡೇ ಹೋರಾಡುವ ಒಬ್ಬ, ವ್ಯವಸ್ಥೆಯ ವಿರುದ್ಧ ದಂಗೆ ಎದ್ದು ಹೋರಾಡುವ ಮತ್ತೊಬ್ಬ ಇವರ ನಡುವಿನ ಸಂಘರ್ಷ, ಪೊಲೀಸ್-ಡಕಾಯಿತ ಹೀಗೆ. ಈ ಕಥಾವಸ್ತು ಗಂಗಾ ಜಮುನಾ ಚಿತ್ರದಲ್ಲಿದೆ. ಈ ನಾಲ್ಕೂ ಚಿತ್ರಗಳು 1950-60ರ ನಡುವೆ ಬಂದವು.
1960ರ ದಶಕದ ನಂತರ ಇಲ್ಲಿಯವರೆಗೂ ಈ ನಾಲ್ಕು ಕಥಾವಸ್ತುಗಳನ್ನು ಹೊರತುಪಡಿಸಿದ ಚಲನಚಿತ್ರಗಳನ್ನು , ವಾಣಿಜ್ಯ ಚಿತ್ರಗಳ ವಲಯದಲ್ಲಿ ಕಾಣಲು ಸಾಧ್ಯವೇ ಇಲ್ಲ. ಇದರೊಳಗೇ Taming of the Shrew ಆಂಗ್ಲ ಕಥೆಯಲ್ಲಿನ, ಹಠಮಾರಿ ಹೆಣ್ಣನ್ನು ಮಣಿಸುವ ಕಥೆ ಸೇರಿಕೊಳ್ಳುತ್ತದೆ. ಅಲ್ಲಿಯವರೆಗೂ ಸಾಮಾಜಿಕ ಕಥಾವಸ್ತುಗಳಿಂದ ತುಸು ದೂರವೇ ಇದ್ದ ದಕ್ಷಿಣ ಭಾರತದ ಚಿತ್ರರಂಗಕ್ಕೆ ಈ ಸಂದರ್ಭದಲ್ಲಿ ನೆಲೆಯಾಗಿ ನಿಂತ ನಟರು ಎಂಜಿಆರ್, ಶಿವಾಜಿಗಣೇಶನ್, ಎನ್ಟಿಆರ್, ನಾಗೇಶ್ವರ್ರಾವ್, ಪ್ರೇಂ ನಜೀರ್ ಮತ್ತು ನಮ್ಮ ರಾಜಕುಮಾರ್. ಇವರ ವರ್ಚಸ್ಸು ಬೆಳೆಯುವುದರಲ್ಲಿ ಕಥೆಗಾರರ ಪಾತ್ರ ಬಹಳ ದೊಡ್ಡದು.
1960ರ ದಶಕ ಭಾರತೀಯ ಸಮಾಜದಲ್ಲಿ ಹಲವಾರು ಪಲ್ಲಟಗಳಿಗೆ, ವಿಪ್ಲವಗಳಿಗೆ ಸಾಕ್ಷಿಯಾಗಿತ್ತು. ಸಾಮಾಜಿಕ ಬದಲಾವಣೆಗಾಗಿ ಜನಸಾಮಾನ್ಯರಲ್ಲಿ ಇದ್ದ ತುಡಿತ ಸಾಹಿತ್ಯದಲ್ಲೂ ವ್ಯಕ್ತವಾಗತೊಡಗಿತ್ತು. ಒಂದು ಸ್ವಸ್ಥ ಸಮಾಜ ಎಂದರೆ ಹೀಗೇ ಇರಬೇಕು ಎನ್ನುವ ಚಿಂತನೆಗಳು ಸ್ಪಷ್ಟ ನೆಲೆ ಕಂಡುಕೊಂಡಿದ್ದೂ ಈ ದಶಕದಲ್ಲೇ. ಮತ್ತೊಂದೆಡೆ ರಾಜಕೀಯ ಬದಲಾವಣೆಗಳು ಈ ದಶಕದ ಉತ್ತರಾರ್ಧದಲ್ಲಿ ತೀವ್ರತೆ ಪಡೆದುಕೊಂಡರೂ, ಆರಂಭದಲ್ಲಿ ಮೌಲ್ಯಯುತ ಸಮಾಜ ಆದರ್ಶಪ್ರಾಯವಾಗಿತ್ತು.
ರಾಜಕೀಯ ವಲಯದಲ್ಲೂ ಇದೇ ರೀತಿಯ ಮೌಲ್ಯಯುತ ಅಭಿವ್ಯಕ್ತಿಗೆ ಅಂದು ಅವಕಾಶವಿತ್ತು. ಈ ಮೌಲ್ಯಗಳ ಮೂಲಕವೇ ಒಂದು ಸಭ್ಯ, ಸಂಯಮಶೀಲ, ಸಂವೇದನಾಶೀಲ ಸಮಾಜ ನಿರ್ಮಾಣ ಸಾಧ್ಯ ಎನ್ನುವ ಒಂದು ದೃಢ ಸಂಕಲ್ಪ ಸಾಹಿತ್ಯಕ ಸ್ವರೂಪ ಪಡೆದಂತೆಯೇ, ಸಂಘಟನಾತ್ಮಕ ಸ್ವರೂಪವನ್ನೂ ಪಡೆದಿತ್ತು. ಸಿನಿಮಾ ಮೂಲಕವೂ ಇದೇ ಅಭಿವ್ಯಕ್ತಿಯನ್ನು ಕಾಣಬಹುದಿತ್ತು.
ಈ ಸಂದರ್ಭದಲ್ಲಿ ಹೊರಬಂದ ಸಾಮಾಜಿಕ ಕಥಾವಸ್ತುವಿನ ಚಲನಚಿತ್ರಗಳು ಜನಸಾಮಾನ್ಯರನ್ನು ಹೆಚ್ಚಾಗಿ ಆಕರ್ಷಿಸಿದವು. ರಾಮಾಯಣದ ರಾಮ, ಮಹಾಭಾರತದ ಧರ್ಮರಾಯ, ಹರಿಶ್ಚಂದ್ರ ಕಾವ್ಯದ ಹರಿಶ್ಚಂದ್ರರನ್ನು ಜನರು ಸಾಮಾಜಿಕ ಚಿತ್ರಗಳ ನಾಯಕರಲ್ಲಿ ನೋಡಲು ಬಯಸುತ್ತಿದ್ದರು. ಡಾ ರಾಜ್ ಅಭಿನಯದ ನಮ್ಮ ಸಂಸಾರ, ನಂದಗೋಕುಲ, ದೇವರ ಮಕ್ಕಳು ಹೀಗೆ ಹಲವು ಚಿತ್ರಗಳನ್ನು ನೆನೆಯಬಹುದು. ಈ ಸಂದರ್ಭದಲ್ಲೇ ಎಂಜಿಆರ್ ತಮ್ಮ ರಾಜಕೀಯ ಪ್ರವೇಶಕ್ಕೆ ಅನುಕೂಲವಾಗುವಂತಹ ರಾಬಿನ್ ಹುಡ್ ಮಾದರಿಯ ಚಿತ್ರಗಳನ್ನು ಸಾಮಾಜಿಕ ಚೌಕಟ್ಟಿನಲ್ಲೇ ನೀಡಿದ್ದನ್ನೂ ಗಮನಿಸಬೇಕು. ರೈತರಿಗಾಗಿ, ಕಾರ್ಮಿಕರಿಗಾಗಿ, ಶೋಷಿತರಿಗಾಗಿ ತನ್ನ ಪ್ರಾಣ ನೀಡುವ ನಾಯಕ ಪರದೆಯ ಮೇಲೆ ವಿಜೃಂಭಿಸತೊಡಗಿದ್ದು ಈ ಅವಧಿಯಲ್ಲೇ.
ಇದರ ಮುಂದುವರೆದ ಭಾಗವಾಗಿ ದುಷ್ಟ ಶಿಕ್ಷಕ-ಶಿಷ್ಟ ರಕ್ಷಕನ ಪಾತ್ರವೂ ಮುನ್ನೆಲೆಗೆ ಬಂದಿತ್ತು. ಸಮಾಜದ ದುಷ್ಟ ಶಕ್ತಿಗಳನ್ನು ಸದೆಬಡಿಯುವ ಹೀರೋ ಕೊನೆಗೆ ಪ್ರಾಣ ತೆತ್ತರೂ ಜನ ಸ್ವೀಕರಿಸುತ್ತಿದ್ದುದನ್ನು 1960ರ ದಶಕದಲ್ಲಿ ಕಾಣಬಹುದಿತ್ತು. ಆದರೆ 1980ರ ನಂತರ ನಾಯಕ ನಟ ಸಾಯುವುದನ್ನು ಜನರು ಬಯಸುತ್ತಿರಲಿಲ್ಲ. ಇದು ಬೇರೆ ವಿಚಾರ. ಸಮಾಜದಲ್ಲಿ ದುಷ್ಟರಿದ್ದಾರೆ, ಅವರನ್ನು ಮುಗಿಸಬೇಕು, ಒಳ್ಳೆಯ ಸಮಾಜ ಕಟ್ಟಬೇಕು ಈ ಹಿನ್ನೆಲೆಯಲ್ಲಿ ಮನೆಮನೆಯಲ್ಲೂ ಕಂಡುಬಂದ ತಾಕಲಾಟಗಳನ್ನು, ಒಳಿತು ಕೆಡಕುಗಳನ್ನು ಪರದೆಯ ಮೇಲೆ ಬಿಂಬಿಸುವ ಮೂಲಕ ಸೋದರರ ನಡುವಿನ ಕಲಹಗಳು ಎಷ್ಟೋ ಚಿತ್ರಗಳ ಕಥಾವಸ್ತುವಾಗಿತ್ತು.
ಪುನಃ ಇಲ್ಲಿ ನಾಯಕ ನಟ ಧರ್ಮರಾಯ ಅಥವಾ ಶ್ರೀರಾಮ. ಕೆಲವೊಮ್ಮೆ ಹರಿಶ್ಚಂದ್ರನಂತೆ ಎಲ್ಲವನ್ನೂ ತ್ಯಾಗಮಾಡುವಂತೆಯೂ ಬಿಂಬಿಸಲ್ಪಟ್ಟ. ಖಳನಾಯಕನಿಗೆ ಸಿದ್ಧ ಮಾದರಿಗಳನ್ನು ಹುಡುಕಲಿಲ್ಲ. ನಾಯಕ ನಟರ ಈ ಮಾದರಿಗಳನ್ನೇ ವೀಕ್ಷಕರು ಸಮಾಜದಲ್ಲೂ ಹುಡುಕಲಾರಂಭಿಸಿದ್ದರು. ತಲೆ ಬಾಚುವ ಶೈಲಿಯಿಂದ ಹಿಡಿದು ಧರಿಸುವ ಉಡುಪು, ನಡಿಗೆಯ ಶೈಲಿಯವರೆಗೂ ಪರದೆಯ ಮೇಲಿನ ಹೀರೋಗಳು ಯುವ ಪೀಳಿಗೆಯ ಮೇಲೆ ಪ್ರಭಾವ ಬೀರಲಾರಂಭಿಸಿದ್ದರು.
ಹಾಗಾಗಿ ಸಿನಿಮಾ ಕಥೆ ಬರೆಯುವವರಿಗೆ ಇದೇ ಮೌಲ್ಯಗಳ ಚೌಕಟ್ಟಿನಲ್ಲೇ ಹೀರೋ ಪಾತ್ರವನ್ನು ಕಟ್ಟಿಕೊಡುವುದೂ ಅನಿವಾರ್ಯವಾಯಿತು. ಮುತ್ತುರಾಜ್ ಡಾ ರಾಜ್ ಆಗಿ ಉದಯಿಸಿದ್ದು ಹೀಗೆ. ನಮಗೆ ಡಾ ರಾಜ್ ಇಷ್ಟವಾಗುವುದಕ್ಕೂ ಇದೇ ಕಾರಣ. ತೆಲುಗಿನಲ್ಲಿ ಎನ್ಟಿಆರ್, ತಮಿಳಿನ ಎಂಜಿಆರ್ ಜನಪ್ರಿಯರಾದದ್ದೂ ಈ ಕಾರಣಕ್ಕೇ. ಈ ಚೌಕಟ್ಟಿನಿಂದ ಹೊರನಿಂತದ್ದು ಶಿವಾಜಿ, ನಾಗೇಶ್ವರರಾವ್.
ಇದನ್ನು ಅಪರಾಧ ಎಂದೇನೂ ಭಾವಿಸಬೇಕಿಲ್ಲ. ಆಗಿನ ಸಮಾಜ ಅದನ್ನು ಬಯಸಿತ್ತು, ಚಿತ್ರ ನಿರ್ಮಾಪಕರು ನೀಡಿದರು. ಆಗಿನ ಕಥಾವಸ್ತುಗಳು ಹೀರೋಗಾಗಿ ರೂಪುಗೊಳ್ಳುತ್ತಿರಲಿಲ್ಲ. ಹೀರೋ ಈ ಕಥಾವಸ್ತುವಿನ ಮೂಲಕ ಜನಮಾನಸದಲ್ಲಿ ಮನೆ ಮಾಡುತ್ತಿದ್ದ. ಇದು ಬದಲಾಗಿದ್ದು 1975-80ರ ನಂತರ. ನಾಯಕ ನಟನ ವರ್ಚಸ್ಸನ್ನು ಗಮನದಲ್ಲಿಟ್ಟುಕೊಂಡೇ ಕಥೆ ಹೆಣೆಯುವ ಪರಂಪರೆ ಆರಂಭವಾಗಿದ್ದು ಈ ದಶಕದಲ್ಲಿ. ಡಾ ರಾಜ್ ಸಹ ಇದಕ್ಕೆ ಹೊರತಾಗಲಿಲ್ಲ. ಡಾ ರಾಜ್ ಸ್ವಂತ ನಿರ್ಮಾಣ ಸಂಸ್ಥೆ ಆರಂಭವಾಗಿದ್ದೂ ಈ ಹಂತದಲ್ಲೇ. ಡಾ ರಾಜ್ ನಟನೆಯ ಚಿತ್ರಗಳನ್ನು ಈ ಎರಡು ಅವಧಿಗಳ ನಡುವೆ ಪರದೆಯನ್ನಿಟ್ಟು ನೋಡಿದರೆ ವ್ಯತ್ಯಾಸ ಸ್ಪಷ್ಟವಾಗಿ ತಿಳಿಯುತ್ತದೆ.
ಮತ್ತೊಂದೆಡೆ ಚಿತ್ರ ನಟರನ್ನು ಜಾತಿಯ ಚೌಕಟ್ಟಿನಲ್ಲಿ ನೋಡುವ ಪರಂಪರೆ ಆರಂಭವಾದದ್ದೂ ಈ ಸಂದರ್ಭದಲ್ಲೇ ಹೆಚ್ಚು. ಚಿತ್ರನಟರನ್ನು ಬಾಹ್ಯ ಸಮಾಜ ಜಾತಿಯ ಮೂಲಕ ಗುರುತಿಸುವ ಪರಂಪರೆ ಆರಂಭವಾದದ್ದು 1980ರ ನಂತರ. ಹಾಗಾಗಿಯೇ ನಮಗೆ ಬಾಲಣ್ಣ,. ಅಶ್ವಥ್, ವಾದಿರಾಜ್, ನರಸಿಂಹರಾಜು, ಉದಯಕುಮಾರ್, ದಿನೇಶ್ ಇವರಾರೂ ಅಸ್ಮಿತೆಗಳ ಚೌಕಟ್ಟಿನಲ್ಲಿ ಕಾಣಲಿಲ್ಲ. ನಾಗ್ ಸೋದರರೂ ಸಹ. ಈಗ ನಾವು ಈ ಸಂದರ್ಭದಿಂದ ಬಹುತೇಕ ಅರ್ಧಶತಮಾನದಷ್ಟು ದೂರ ಬಂದಿದ್ದೇವೆ. ಈ ಮಹಾನ್ ಕಲಾವಿದರ ನಟನೆ ಇಂದಿಗೂ ನಮ್ಮನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಅವರು ಪರದೆಯ ಮೇಲೆ ಕಟ್ಟಿಕೊಟ್ಟ ಆದರ್ಶಗಳು ನಮ್ಮ ನಡುವೆ ನಶಿಸಿಹೋಗುತ್ತಿದ್ದರೂ ಅದನ್ನು ಮೌಲ್ಯೀಕರಿಸಲು ನಾವು ಸಿದ್ಧರಾಗಿದ್ದೇವೆ. ಏಕೆಂದರೆ 1990ರ ನಂತರದ ಚಿತ್ರರಂಗ ಈ ಮೌಲ್ಯಗಳನ್ನು ದಾಟಿ ಬಂದಿದೆ.
ಈ ಸಂದರ್ಭದಲ್ಲಿ ನಾವು ಡಾ ರಾಜ್ ಅವರನ್ನು ಯಾವ ನೆಲೆಯಲ್ಲಿಟ್ಟು ಕಾಣಬೇಕು ? ಅವರ ನಟನೆಯನ್ನು ಎಲ್ಲರೂ ಇಷ್ಟಪಡಬೇಕು ಎಂದು ಅಪೇಕ್ಷಿಸುವುದೇ ತಪ್ಪಲ್ಲವೇ ? ಡಾ ರಾಜ್ ಒಬ್ಬ ನಟನೇ ಅಲ್ಲ ಎನ್ನುವವರು ಯಾರೇ ಆಗಿರಲಿ ಅವರಿಗೆ ನಟನೆಯ ಬಗ್ಗೆ ಅತ್ಯದ್ಭುತವಾದ ಕಲ್ಪನೆ, ಜ್ಞಾನ ಮತ್ತು ಅಭಿನಯ ಕಲೆಯ ಜ್ಞಾನ ಇರಬೇಕು. ಇಲ್ಲವಾದರೆ ಅದು ಬೀಸು ಹೇಳಿಕೆಯಾಗಿರಬೇಕು. ಇದು ಎಲ್ಲ ನಟರಿಗೂ ಅನ್ವಯಿಸುತ್ತದೆ. ಇನ್ನು ರಾಜ್ ನಟನೆ ಇಷ್ಟವಾಗುವುದಿಲ್ಲ ಎಂದರೆ ಅದು ನಾವು ಅಭಿನಯವನ್ನು ನೋಡುವ ನಮ್ಮದೇ ಆದ ರೀತಿಯನ್ನು ಅವಲಂಬಿಸುತ್ತದೆ. ಕೆಲವರಿಗೆ ಇಷ್ಟವಾಗದಿದ್ದರೆ ಏನಂತೆ, ಅದು ಡಾ ರಾಜ್ಗೆ ಅಪಚಾರ ಎಸಗಿದಂತೆ ಎಂದು ಏಕೆ ಭಾವಿಸಬೇಕು.
ಇಲ್ಲಿಯೂ ಜಾತಿಪ್ರಜ್ಞೆಯ ನೆಲೆಯಲ್ಲಿ ನಾವು ನಿಷ್ಕರ್ಷೆ ಮಾಡುತ್ತಾ ಹೋದರೆ ಭಾರತದ ಬಾಲಿವುಡ್ ಕೋಮುವಾದದ ಪ್ರಯೋಗಾಲಯವಾಗಿಬಿಡುತ್ತದೆ. ಅಲ್ಲವೇ ? ಹಾಗಾಗುವುದು ಬೇಡ. ಸಾಹಿತ್ಯ, ಕಲೆ, ನೃತ್ಯ, ಸಿನಿಮಾ, ರಂಗಭೂಮಿ ಇವೆಲ್ಲವೂ ಸಮಾಜದ ಆ ಹೊತ್ತಿನ ಸ್ಥಿತ್ಯಂತರಗಳನ್ನು ಬಿಂಬಿಸುವ ಆಕರಗಳೂ ಹೌದು, ವಾಹಿನಿಗಳೂ ಹೌದು. ಈ ಆಕರಗಳಲ್ಲಿ ಉದಯಿಸುವ ಕಲಾವಿದರು ತಮ್ಮದೇ ಆದ ನೆಲೆಯಲ್ಲಿ ತಮ್ಮ ಅಂಗಿಕ ಅಭಿನಯವನ್ನೋ, ಕಲಾಪ್ರತಿಭೆಯನ್ನೋ, ಅಕ್ಷರ ಪಾಂಡಿತ್ಯವನ್ನೋ ಹೊರಸೂಸುತ್ತಾರೆ. ಆ ಭೂಮಿಕೆಯಿಂದಾಚೆಗಿನ ಅವರ ವ್ಯಕ್ತಿತ್ವಕ್ಕೆ ಚ್ಯುತಿ ಬಾರದಂತೆ, ಅವರ ಪರದೆಯ ಮೇಲಿನ, ರಂಗದ ಮೇಲಿನ ಅಭಿವ್ಯಕ್ತಿಯನ್ನೂ ಗೌರವಿಸುವುದು ಪ್ರಜ್ಞಾವಂತ ಸಮಾಜದ ಆದ್ಯತೆಯಾಗಬೇಕು.
ಪ್ರಗತಿಪರ ಮನಸುಗಳಿಗೆ ರಾಜ್ ಹೇಗೆ ನೆರವಾಗುತ್ತಾರೆ ? ಅಥವಾ ಹೇಗೆ ನೆರವಾಗುವುದಿಲ್ಲ ? ಈ ಪ್ರಶ್ನೆಗಳಿಗೆ ಉತ್ತರ ಶೋಧಿಸಲು ಸಾಧ್ಯವೇ ? ಇಲ್ಲ ಎಂದ ಮೇಲೆ ಪ್ರಗತಿಪರರಲ್ಲಿ ಒಡಕು ಮೂಡಿಸಲು ರಾಜ್ ಏಕೆ ದಾಳವಾಗಬೇಕು ? ಭೈರಪ್ಪನವರ ಒಂದು ಹೇಳಿಕೆಗೆ ನಾವು ಇಷ್ಟೊಂದು ಮೌಲ್ಯ ನೀಡಬೇಕೇ ? ಹೀಗೆ ಹಲವು ಪ್ರಶ್ನೆಗಳು ಮೂಡುತ್ತಲೇ ಹೋಗುತ್ತವೆ. ನಮ್ಮ ಮುಂದಿನ ಸವಾಲುಗಳಿಗೆ ಈ ಪ್ರಶ್ನೆಗಳು ಯಾವ ರೀತಿಯಲ್ಲೂ ಸಾಂತ್ವನ ನೀಡುವುದಿಲ್ಲ. ಹಾಗಿದ್ದ ಮೇಲೆ ಪ್ರಾಮಾಣಿಕ ಪ್ರಗತಿಪರರನ್ನೂ ಅವಹೇಳನ ಮಾಡಲು ಡಾ ರಾಜ್ ಏಕೆ ಬಳಕೆಯಾಗಬೇಕು. ಇದು ನಾವು ರಾಜ್ ಅವರಿಗೆ ಮಾಡುವ ಅಪಚಾರ. ಬೇಡ ಅಲ್ಲವೇ ?
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕವಿತೆ | ನೆನಪು
- ರುದ್ರಪ್ಪ ಹನಗವಾಡಿ
ಅಪ್ಪನನ್ನು ಒಪ್ಪ ಮಾಡಿ
ವರ್ಷಗಳೇ ಕಳೆದವು ಮುವ್ವತ್ತೇಳು
ಇಂದಿರಾಗಾಂಧಿಯ ತುರ್ತು ಪರಿಸ್ಥಿತಿ
ಅರಸರ ಮೀಸಲಾತಿ
ಬಸವಲಿಂಗಪ್ಪನವರ ಬೂಸಾ ಖ್ಯಾತಿ
ಮಲ ಹೊತ್ತು
ಮಲಗಿದ್ದ ಕಾಲಕ್ಕೆ
ಚುರುಕು ಮುಟ್ಟಿಸಿದ ಕಾಲ
ಹರೆಯದ ನನಗೆ
ಕಾಲೇಜ ಮೇಷ್ಟರ ಕೆಲಸ
ಸೂಟು ಬೂಟಿನ ವೇಷ
ಆ ಮೇಲೆ ಅಮಲದಾರಿಕೆ
ಎಲ್ಲ ನಡೆದಾಗಲೇ ಅವ್ವನನ್ನು
ಆಸ್ಪತ್ರೆಗೆ ಸೇರಿಸಿದ್ದು
ಕಾಲ ಕಳೆದು ಕೊಂಡು
ಕೋಲ ಹಿಡಿದದ್ದು
ನಿನ್ನೆ ಮೊನ್ನೆಯಂತೆ
ಬಾಲ್ಯವಿನ್ನು ಉಂಟೆಂಬಂತೆ
ಭಾವಿಸುವಾಗಲೇ ಅವ್ವನ ಸಾವು
ಅದರೊಟ್ಟಿಗೆ ಕಾಯದಾಯಾಸ ತೀರಿಸಲು
ಬಂದರೆ ಬೆಂಗಳೂರಿಗೆ
ರೌಡಿಗಳ ಕಾಟ
ಅಂಬೇಡ್ಕರ್ ಪಟದ ಕೆಳಗೆ
ದೌರ್ಜನ್ಯದ ದಂಡು
ಅಮಾಯಕರಿಗೆ ಗುಂಡು
ಕಂಡುಂಡ ಹಾದಿಯ ಗುಡಿಸಲುಗಳಲ್ಲೀಗ
ಮುಗಿಲು ಮುಟ್ಟೋ ಮಹಲುಗಳು
ಅಂತಲ್ಲಿ
ದೇಶ ವಿದೇಶಗಳ
ಅಹವಾಲುಗಳು
ಅವಿವೇಕಗಳು
ನೋಡ ನೋಡುತ್ತಿದ್ದಂತೆ
ಉಸಿರು ಬಿಗಿಹಿಡಿದ ಜನರ ಒಳಗೆ
ಒಳಪದರಗಳೊಳಗೆ ಕನಸ ಬಿತ್ತಿ
ಹಸಿರ ಹೊನ್ನು ಬಾಚಲು ಹವಣಿಸಿದ
ಬಿಳಿ ಜನರ ಆಟ
ಅರ್ಥವಾಗುವುದೇ ಎಲ್ಲ
ಗೋಣ ನೀಡುವರೆ
ಹೂತಿಟ್ಟ ಗೂಟಕ್ಕೆ ?
( ಚಿಂತಕ ರುದ್ರಪ್ಪ ಹನಗವಾಡಿ ಅವರ ‘ಊರು – ಬಳಗ’ ಕವನ ಸಂಕಲನದಿಂದ ‘ ನೆನಪು ‘ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕೃತಿಯನ್ನು ಫ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ 2013 ರಲ್ಲಿ ಪ್ರಕಿಸಿದೆ.)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ; ಒಂದು ಚಿಂತನೆ
- ಮಹಾಂತೇಶ್.ಬಿ.ನಿಟ್ಟೂರು, ದಾವಣಗೆರೆ
ನಿಜ ಶರಣ ಶ್ರೀ ಅಂಬಿಗರ ಚೌಡಯ್ಯನವರ ಜೀವಿತ ಕಾಲ 12 ನೇ ಶತಮಾನದ ಬಸವಾದಿ ಶರಣರ ಕಾಲದಲ್ಲೇ ಇತ್ತು ಎಂಬುದು ಇತಿಹಾಸಕಾರರ ಸಂಶೋಧನೆಯಿಂದ ತಿಳಿದು ಬರುತ್ತದೆ. ಅವರ ಹುಟ್ಟೂರು ಹಾವೇರಿ ಜಿಲ್ಲೆಯ ಆಗಿನ ಶಿವಪುರ, ಈಗಿನ ಚೌಡಯ್ಯದಾನಪುರ. ಅವರ ತಂದೆಯ ಹೆಸರು ಶ್ರೀ ವಿರೂಪಾಕ್ಷ, ತಾಯಿಯ ಹೆಸರು ಪಂಪಾಂಭಿಕೆ, ಹೆಂಡತಿಯ ಹೆಸರು ಸುಲೋಚನಾ ಹಾಗೂ ಮಗನ ಹೆಸರು ಪುರವಂತ.
ಅಂಬಿಗ ವೃತ್ತಿಯ ಚೌಡಯ್ಯನವರು ಅಲ್ಲಮ ಪ್ರಭು ಮತ್ತು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಇದ್ದ ಒಬ್ಬ ಕ್ರಾಂತಿಕಾರಿ, ದಿಟ್ಟ, ನೇರ, ನಿಷ್ಠುರ ನುಡಿಯ ವಚನಕಾರ. ಕಲ್ಯಾಣ ಕ್ರಾಂತಿಯ ನಂತರ ಇವರು ತಮ್ಮ ವಚನಗಳ ಗಂಟನ್ನು ಹೊತ್ತು ಉಳವಿಗೆ ನಂತರ ತಮ್ಮ ಗ್ರಾಮವಾದ ತುಂಗಭದ್ರಾ ನದಿಯ ದಡದ ಮೇಲಿರುವ ಶಿವಪುರಕ್ಕೆ ಬಂದು ದೋಣಿ ನಡೆಸುವ ವೃತ್ತಿಯಲ್ಲಿ ನಿರತರಾಗಿ ವಚನ ರಚನೆ ಮಾಡಿರುವುದು ತಿಳಿದು ಬರುತ್ತದೆ.
ಚೌಡಯ್ಯನವರು ತಮ್ಮ ಜೀವಿತಾವಧಿಯಲ್ಲಿ ಅನೇಕ ಪವಾಡಗಳನ್ನು ಮಾಡಿರುತ್ತಾರೆ. ಗಿಡಮೂಲಿಕೆ ಔಷಧಿಗಳಿಂದ ಕ್ಷಯ ರೋಗ, ಕುಷ್ಠರೋಗ ಗುಣಪಡಿಸುವುದು, ಹಾವು ಕಚ್ಚಿದವರನ್ನು
ಬದುಕಿಸುವುದು ಇತ್ಯಾದಿ..
ಒಮ್ಮೆ ಗುತ್ತಲದ ಅರಸನು ಬೇಟೆಗಾಗಿ ಈ ಪ್ರದೇಶದಲ್ಲಿ ಸಂಚರಿಸುತ್ತಿದ್ದಾಗ, ಆತನ ಸೇನಾಧಿಪತಿಯು ಹಾವು ಕಚ್ಚಿ ಮೃತಪಟ್ಟನು. ಇದರಿಂದಾಗಿ ಅರಸನಿಗೆ ಅತೀವ ದುಃಖವುಂಟಾಗಿ ರೋಧಿಸತೊಡಗಿದನು. ಆಗ ಆತನ ಸೈನಿಕನೊಬ್ಬನು ಶ್ರೀ ಚೌಡಯ್ಯನವರ ಪವಾಡಗಳ ಬಗ್ಗೆ ವಿವರಿಸಿ ಹೇಳಲಾಗಿ, ಅರಸನು ತನ್ನ ಮೃತ ಸೇನಾಧಿಪತಿಯ ಶರೀರವನ್ನು ಚೌಡಯ್ಯನವರಲ್ಲಿಗೆ ತಂದು ಆತನನ್ನು ಬದುಕಿಸುವಂತೆ ಕೇಳಿಕೊಂಡರು, ಆಗ ಚೌಡಯ್ಯನವರು ಸೇನಾಧಿಪತಿಯನ್ನು ಬದುಕಿಸುತ್ತಾರೆ. ಇದರಿಂದ ಸಂತುಷ್ಟನಾದ ಅರಸನು ಶಿವಪುರದ ಸುತ್ತಲಿನ ಪೂರ್ವ – ಪಶ್ಚಿಮಕ್ಕೆ 14 ಮೈಲು ಹಾಗೂ ಉತ್ತರ – ದಕ್ಷಿಣಕ್ಕೆ 7 ಮೈಲು ಸುತ್ತಳತೆಯ ಭೂಮಿಯನ್ನು ಚೌಡಯ್ಯನವರಿಗೆ ದಾನವಾಗಿ ನೀಡಿದನು.
ಆದರೆ ಚೌಡಯ್ಯನರು ವೈರಾಗ್ಯಶಾಲಿಯು, ಲೌಕಿಕದಲ್ಲಿ ನಿರಾಸಕ್ತಿ ಹೊಂದಿದವರು ಆಗಿದ್ದರಿಂದ, ಅರಸನು ಕೊಡಮಾಡಿದ್ದ ಸಂಪೂರ್ಣ ಜಮೀನನ್ನು ತನ್ನ ಗುರುಗಳಾದ ಶ್ರೀ ಶಿವದೇವರಿಗೆ ದಾನವಾಗಿ ನೀಡಿದರು ಎಂಬ ಉಲ್ಲೇಖವಿದೆ. ಅಂದಿನಿಂದ ಶಿವಪುರ ಗ್ರಾಮಕ್ಕೆ ‘ಚೌಡಯ್ಯದಾನಪುರ’ ಎಂದು ಹೆಸರು ಬರುತ್ತದೆ. ಮುಂದೆ ಚೌಡಯ್ಯನರು ಅಲ್ಲಿ ದೇಹ ತ್ಯಾಗ ಮಾಡಿದ್ದರಿಂದ ತುಂಗಭದ್ರಾ ನದಿಯ ದಡದಲ್ಲಿ ಈಗಲೂ ಚೌಡಯ್ಯನವರ ಸಮಾಧಿ ಗದ್ದುಗೆ ಇದೆ.
ಭ್ರಮಾಲೋಕದಲ್ಲಿ ವಿಹರಿಸುತ್ತಾ ಕುಳಿತ, ಆಡಂಬರದಲ್ಲಿ ಅಡ್ಡಾದಿಡ್ಡಿ ಅಡ್ಡಾಡುವ ಮಂದಿಯ ಕಪಾಳಕ್ಕೆ ಹೊಡೆದು ಎಚ್ಚರಿಸುವಂತಿವೆ ಚೌಡಯ್ಯನವರ ವಚನಗಳು. ಧಾರ್ಮಿಕ ಮೂಢನಂಬಿಕೆ ಬಿತ್ತುವವರಿಗೆ, ಸ್ವಾರ್ಥಿಗಳಾಗಿ ಬದುಕುವವರಿಗೆ, ಮುಖವಾಡ ಹಾಕಿ ಮಂಕು ಬೂದಿ ಎರಚುವವರಿಗೆ ಸಿಂಹ ಸ್ವಪ್ನದಂತೆ ಬೆಚ್ಚಿ ಬೀಳಿಸುತ್ತವೆ ನಿಜ ಶರಣ ಅಂಬಿಗರ ಚೌಡಯ್ಯನವರ ವಚನಗಳು. ಇದಕ್ಕೆ ತಾತ್ಪೂರ್ತಿಕವಾಗಿ ಕೆಲವು ವಚನಗಳು ಈ ಕೆಳಗಿನಂತಿವೆ;
“ಅಂಬಿಗ ಅಂಬಿಗ ಎಂದು ಕುಂದ ನುಡಿಯದಿರು/ನಂಬಿದರೆ ಒಂದೇ ಹುಟ್ಟಲಿ/ಕಡೆಯ ಹಾಯಿಸುವೆನೆಂದಾತನಂಬಿಗರ/ಚೌಡಯ್ಯ ನಿಜಶರಣನು”
ಈ ಮೇಲಿನ ವಚನ ಶ್ರೀ ಅಂಬಿಗರ ಚೌಡಯ್ಯನವರ ಸ್ವಾಭಿಮಾನ, ಧೈರ್ಯ, ನೇರ, ನಿರ್ಭಿಡೆಯ ವ್ಯಕ್ತಿತ್ವದ ಪ್ರತೀಕವಾಗಿದೆ.
ಹನ್ನೆರಡನೇ ಶತಮಾನದ ಸಂದರ್ಭದಲ್ಲಿ ಜಾತಿ ಮತ್ತು ವರ್ಗ ವ್ಯವಸ್ಥೆ ಎಷ್ಟರಮಟ್ಟಿಗಿತ್ತು ಎಂಬುದನ್ನು ಈ ವಚನ ಸೂಚಿಸುತ್ತದೆ. ಅಂತಹ ವಿಚಿತ್ರ, ವಿಕ್ಷಿಪ್ತ ಸನ್ನಿವೇಶದಲ್ಲಿ ಬಸವಾದಿ ಶರಣರು ಜಾತೀಯತೆ, ವರ್ಗ – ವರ್ಣ ವ್ಯವಸ್ಥೆಯ ವಿರುದ್ಧ ಬೃಹತ್ ಚಳುವಳಿಯನ್ನು ಕೈಗೊಂಡಾಗ ಅಂಬಿಗರ ಚೌಡಯ್ಯನವರ ಸತ್ಯನಿಷ್ಠೆ, ಪ್ರಾಮಾಣಿಕತೆಯ ವಚನಗಳು ಪ್ರಖರವಾಗಿ ಕಾಣಿಸುತ್ತವೆ. ಕೆಲವು ಢೋಂಗಿ ಭಕ್ತರಿಗೆ, ಕಪಟ ಸನ್ಯಾಸಿಗಳಿಗೆ ತನ್ನ ಖಾರವಾದ ವಚನಗಳ ಮೂಲಕ ಚುರುಕು ಮುಟ್ಟಿಸುತ್ತಾರೆ.
ಆಡಂಬರ ಮತ್ತು ದುರಾಸೆಯ ಜನರ ಮನಸ್ಥಿತಿ ಕಂಡು ಕೆಂಡಾಮಂಡಲವಾಗಿ ಪ್ರಸ್ತುತ ಪಡಿಸಿದ ಒಂದು ವಚನ ಇಂತಿದೆ;
“ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಕಾಳೋಗರನ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹಾರುವ ಪಕ್ಷಿಯನು/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೆಬ್ಬುಲಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೊಯ್ವ ಹೆಮ್ಮಾರಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಬರುವ ಉರಿ ಬಾಣವನು/ಇಂತೆಲ್ಲವನು ಒಂದೇ ಮಂತ್ರದಲ್ಲಿ ನಿಲ್ಲಿಸಬಹುದು;/ಲೋಭವೆಂಬ ಗ್ರಹಣ ಹಿಡಿದವರ ಏತರಿಂದಲೂ/ನಿಲ್ಲಿಸಲಾಗದು/ಈ ಲೋಭಕ್ಕೆ ದಾರಿದ್ರ್ಯವೇ ಔಷಧವು;/ಹೇಳಿದರೆ ಕೇಳರು, ತಾವು ತಿಳಿಯರು/ಶಾಸ್ತ್ರವ ನೋಡರು, ಭಕ್ತಿಯ ಹಿಡಿಯರು/ಇಂತಹ ಗೊಡ್ಡು ಮೂಳ ಹೊಲೆಯರಿಗೆ/ಕರ್ಮವೆಂಬ ಶರದ್ಧಿಯಲ್ಲಿ ಬಿದ್ದು ಹೊರಳಾಡುವುದೇ/ಸತ್ಯವೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು”
ಸಂಸಾರದ ಜಂಜಾಟದಲ್ಲಿ ಬಿದ್ದು ಒದ್ದಾಡುತ್ತಾ ಶಿವನನ್ನು ಮರೆತು ಹತ್ತು ಹಲವು ಚಿಂತೆಯಲ್ಲಿ ಮುಳುಗಿರುವ ಶವ ಮುಖದ ಜನರ ಸ್ಥಿತಿ-ಗತಿಯನ್ನು ಅರ್ಥಗರ್ಭಿತವಾಗಿ ಸಾದರಪಡಿಸುವ ಒಂದು ವಚನ ಇಂತಿದೆ;
“ಬಡತನಕೆ ಉಂಬುವ ಚಿಂತೆ/ಉಣಲಾದಡೆ ಉಡುವ ಚಿಂತೆ/ಉಡಲಾದಡೆ ಇಡುವ ಚಿಂತೆ/ಇಡಲಾದಡೆ ಹೆಂಡಿರ ಚಿಂತೆ/ಹೆಂಡಿರಾದರೆ ಮಕ್ಕಳ ಚಿಂತೆ/ಮಕ್ಕಳಾದಡೆ ಬದುಕಿನ ಚಿಂತೆ/ಬದುಕಾದಡೆ ಕೇಡಿನ ಚಿಂತೆ/ಕೇಡಾದಡೆ ಮರಣದ ಚಿಂತೆ/ಇಂತೀ ಹಲವು ಚಿಂತೆಯಲ್ಲಿಪ್ಪವರ ಕಂಡೆನು/ಶಿವನ ಚಿಂತೆಯಲ್ಲಿದ್ದಾತರೊಬ್ಬರನೂ ಕಾಣೆನೆಂದಾತ/ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು!”
ಸಮಯದ ಸದ್ಬಳಕೆ ಮಾಡಿಕೊಂಡು ಕಾಯಕ ಮಾಡುತ್ತಾ ಶಿವಭಕ್ತರಾಗಿ, ಜೀವನ ಪಾವನವಾಗಿಸುವಂತೆ ಕರೆ ನೀಡುವ ಒಂದು ವಚನ ಇಂತಿದೆ;
“ಗಾಳಿ ಬಿಟ್ಟಾಗ ತೂರಿಕೊಳ್ಳಿರಯ್ಯ/ಗಾಳಿ ನಿಮ್ಮ ಅಧೀನವಲ್ಲ ಕಂಡಯ್ಯ/ನಾಳೆ ತೂರಿಹೆನೆಂದಡಿಲ್ಲ ಕಂಡಯ್ಯ/ಶಿವಶರಣೆ ಎಂಬುದೊಂದು ಗಾಳಿ ಬಿಟ್ಟಲ್ಲಿ/ಬೇಗ ತೂರೆಂದನಂಬಿಗರ ಚೌಡಯ್ಯ”
ಕಾವಿ ಬಟ್ಟೆ ತೊಟ್ಟು, ಭಿಕ್ಷೆಗಾಗಿ ಜೋಳಿಗೆ ಹಾಕಿದವರೆಲ್ಲರೂ ಜಂಗಮರು, ಗುರುಗಳಾಗಲಾರರು ಎಂಬುದನ್ನು ವಿಡಂಬಿಸುವ ಒಂದು ವಚನ ಇಂತಿದೆ;
“ಕಂಥೆ ತೊಟ್ಟವ ಗುರುವಲ್ಲ/ಕಾವಿ ಹೊದ್ದವ ಜಂಗಮನಲ್ಲ/ಶೀಲ ಕಟ್ಟಿದವ ಶಿವಭಕ್ತನಲ್ಲ/ನೀರು ತೀರ್ಥವಲ್ಲ/ಕೂಳು ಪ್ರಸಾದವಲ್ಲ/ಹೌದೆಂಬವನ ಬಾಯ ಮೇಲೆ/ಅರ್ಧ ಮಣದ ಪಾದರಕ್ಷೆಯ ತೆಗೆದುಕೊಂಡು/ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ/ಟೊಕ ಟೊಕನೆ ಹೊಡೆ ಎಂದಾತ/ನಮ್ಮ ಅಂಬಿಗರ ಚೌಡಯ್ಯ”
ಹೀಗೆ ಬಸವಾದಿ ಶರಣರ ಸಮಾಜ ಸುಧಾರಣಾ ಚಳವಳಿಯಲ್ಲಿ ತಮ್ಮ ಅಮೂಲ್ಯ ಸೇವೆಯನ್ನು ಮುಡುಪಾಗಿಟ್ಟ ಶ್ರೀ ಅಂಬಿಗರ ಚೌಡಯ್ಯನವರು ತಮ್ಮ ಬದುಕಿನ ನೀತಿಯಿಂದ, ನಿಷ್ಠೆಯಿಂದ, ತೀಕ್ಷ್ಣ ಖಂಡನೆಯ ಬಂಡಾಯ ವಚನಗಳಿಂದ ಗಮನ ಸೆಳೆದು, ಅವರು ರಚಿಸಿದ ವಚನಗಳಿಗೆ ತಮ್ಮ ಹೆಸರನ್ನೇ ಅಂಕಿತವನ್ನಾಗಿಟ್ಟಿರುವದು ವಿಶೇಷವಾಗಿದೆ. ಸಮಾಜದ ಕೊಳೆಯನ್ನು ತೊಳೆಯುವ ನಿಟ್ಟಿನಲ್ಲಿ ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ಎದ್ದು ಕಾಣುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಮ್ಯಾಸ ನಾಯಕ ಬುಡಕಟ್ಟನಲ್ಲಿ ದೀಪಾವಳಿ ಹಬ್ಬದ ಆಚರಣೆ
ಭಾರತ ತನ್ನ ಭೌಗೋಳಿಕ ಸ್ವರೂಪದಲ್ಲಿ ವೈವಿಧ್ಯತೆಯನ್ನು ಹೊಂದಿರುವಂತೆ ಅನೇಕ ಬಗೆಯ ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿದೆ.
ದೇಶದ ಪ್ರತಿಯೊಂದು ಸಮುದಾಯವು ಬದುಕಿನ ಕ್ರಮದಲ್ಲಿ ತನ್ನದೇ ಆದ ವೈವಿಧ್ಯತೆಯನ್ನು ಹೊಂದಿದ್ದು ಹಬ್ಬಗಳ ಆಚರಣೆಯಲ್ಲಿಯೂ ಈ ಭಿನ್ನತೆಯನ್ನು ಕಾಣಬಹುದಾಗಿದೆ. ಈಗ ನಡೆಯುತ್ತಿರುವ ದೀಪಾವಳಿ ಹಬ್ಬದ ಆಚರಣೆಯೂ ಇದರಿಂದ ಹೊರತಾಗಿಲ್ಲ. ಇಡೀ ಭಾರತ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸುತ್ತಿದೆ ಎಂಬುದು ಸಾಮಾನ್ಯವಾದ ಹೇಳಿಕೆಯಾಗಿರುತ್ತದೆ.
ದೀಪಾವಳಿ ಎಂದರೆ ದೀಪವನ್ನು ಬೆಳಗಿಸುವ ಹಬ್ಬ. ಜಗದ ಕತ್ತಲೆಯನ್ನು, ಮನದ ಕತ್ತಲೆಯನ್ನು, ಕಳೆಯುವ ಹಬ್ಬ ಎಂಬುದು ಒಂದು ನಂಬಿಕೆಯಾದರೆ ಬಲಿಚಕ್ರರ್ತಿಯನ್ನು ವರ್ಷಕೊಮ್ಮೆ ನೆನಪಿಸಿಕೊಳ್ಳುವುದು, ನರಕಾಸುರನನ್ನು ಶ್ರೀ ಕೃಷ್ಣ ಪರಮಾತ್ಮ ಕೊಂದು ಆತನ ಸೆರೆಯಲ್ಲಿದ್ದ ಅಸಂಖ್ಯಾತ ಮಹಿಳೆಯರಿಗೆ ಬಿಡುಗಡೆ ದೊರಕಿಸಿದ ದಿನವಿದು ಎಂದು ನೆನೆಪಿಸಿಕೊಳ್ಳುವುದು ಹೀಗೆಲ್ಲಾ ಪ್ರಚಲಿತ ಪುರಾಣಮೂಲಗಳಿಂದ ಈ ಹಬ್ಬದ ಆಚರಣೆಯ ಸಾಂಕೇತಿಕತೆಯನ್ನು ಅರ್ಥೈಸಲಾಗುತ್ತದೆ.
ಈ ಎರಡೂ ಘಟನೆಗಳನ್ನು ಕುರಿತು ಬೇರೆ ಬೇರೆ ನೆಲೆಯಿಂದ ಯೋಚಿಸಿದಾಗ ಇದನ್ನು ದೇಶದಾದ್ಯಂತ ಎಲ್ಲರೂ ಸಡಗರಿಸಬೇಕೆ? ಆಳುವವರ ಸಡಗರ ಎಲ್ಲರ ಸಡಗರವಾಗಲೇಬೇಕಾದ ಅನಿವಾರ್ಯವೇ? ಎಂಬ ನೆಲೆಗಳಿಂದ ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕಾಗುತ್ತದೆ.
ನಿಸರ್ಗಮೂಲ ಸಿದ್ದಾಂತವನ್ನು ಅನ್ವಯಿಸಿಕೊಂಡರೇ ಬಹುಶಃ ಈ ದೀಪಾವಳಿಯ ತಿಂಗಳು, ಅಂದರೇ ಕಾರ್ತಿಕ ಮಾಸದ ಹವಾಮಾನದಲ್ಲಿ ವಿಶೇಷತೆಯಿದೆ. ಕಾರ್-ಅಂದರೇ ಮಳೆ ಸುರಿಯುವುದು. ಕರ್ತೀಕ ಅಂದರೇ ಮಳೆಗಾಲದ ಕೊನೆಯ ದಿನಗಳಿವು, ಹಿಂಗಾರಿನ ಕೊನೆಯ ಮಳೆಗಳು ಸುರಿಯುವ ಮತ್ತು ಇದರೊಂದಿಗೆ ಚಳಿಗಾಲವೂ ಆರಂಭವಾಗುವುದರಿಂದ ಮಂಜುಮುಸುಕಿದ ವಾತಾವರಣವೂ ಜೊತೆಗೂಡಿ ಕತ್ತಲೆಯ ಆಧಿಕ್ಯ ಹೆಚ್ಚು. ಬಹುಶಃ ಈ ಕತ್ತಲೆಯನ್ನು ನಿವಾರಿಸಿಕೊಳ್ಳಲು ಮನೆಮನೆಯ ಮುಂದೆ ದೀಪಗಳನ್ನು ಹಚ್ಚಿ ಬೆಳಕನ್ನು ಕಂಡುಕೊಳ್ಳುವ ಉದ್ದೇಶವೂ ಇರಬಹುದೆನ್ನಿಸುತ್ತದೆ. ಒಟ್ಟಾರೆ ನಾಡಿನಾದ್ಯಂತ ಆಚರಿಸಲಾಗುವ ಈ ದೀಪಾವಳಿ ಹಬ್ಬವನ್ನು ಮ್ಯಾಸಮಂಡಲದಲ್ಲಿಯೂ ಆಚರಿಸಲಾಗುತ್ತದೆ.
ಮ್ಯಾಸಬುಡಕಟ್ಟಿನ ದೇವರು ಕಾಣದ ಲೋಕದವರಲ್ಲ. ಪ್ರಕೃತಿಯ ವಿಶಿಷ್ಟತೆಯನ್ನೇ ದೈವ ಎಂದು ಭಾವಿಸಿ ಪೂಜಿಸುವುದು, ಸೃಷ್ಟಿಗೆ ಕಾರಣವಾಗುವ ತಾಯಿಯನ್ನೇ ಮೊದಲ ದೈವ ಎಂದು ಪೂಜಿಸುವುದು, ತಮಗೆ ಬದುಕನ್ನು ಕಟ್ಟಿಕೊಟ್ಟು ತಮ್ಮನ್ನು ಮುನ್ನಡೆಸಿದ ಹಿರಿಯರನ್ನೇ, ನಾಯಕರನ್ನೇ ತಮ್ಮದೇವರು ಎಂದು ಪೂಜಿಸುವುದು, ಮತ್ತು ತಮ್ಮ ಬದುಕಿಗೆ ಆಧಾರವಾಗಿದ್ದ ಪಶುಸಂಪತ್ತನ್ನೇ ತಮ್ಮ ಹಿರಿಯರೊಂದಿಗೆ ಸಮೀಕರಿಸಿ ದೈವಗಳೆಂದು ಭಾವಿಸಿ ಪೂಜಿಸುವುದು ಈ ಬುಡಕಟ್ಟಿನ ವಿಶೇಷತೆ. ತಮ್ಮ ನಾಯಕ ಅಥವಾ ನಾಯಕಿ ಬಳಸುತ್ತಿದ್ದ ವಸ್ತುವನ್ನು ಬಿದಿರಿನ ಬುಟ್ಟಿಯಲ್ಲಿಟ್ಟು, ಕೆಲವು ಕಡೆ ಸಾಲಿಗ್ರಾಮಗಳನ್ನು ಮತ್ತು ನಾಯಕ/ನಾಯಕಿ ಬಳಸುತ್ತಿದ್ದ ಬಿಲ್ಲು, ಬಾಣ/ ಖಡ್ಗವನ್ನೇ ದೇವರೆಂದು ನಂಬಿ ಪೂಜಿಸುವ ಸಮುದಾಯದಲ್ಲಿ ದೀಪಾವಳಿಯನ್ನು ಇವುಗಳಿಗೆ ಪೂಜೆ ಸಲ್ಲಿಸುವ ಮೂಲಕವೇ ಆಚರಿಸಲಾಗುತ್ತದೆ.
ಮ್ಯಾಸಮಂಡಲದ ಎಲ್ಲಾ ಗುಡಿಕಟ್ಟುಗಳಲ್ಲಿಯೂ ಮತ್ತು ಇದಕ್ಕೆ ಸಂಬಂಧಿಸಿದ ಎತ್ತಿನಗೂಡುಗಳಲ್ಲಿ ಈ ಹಬ್ಬದ ಆಚರಣೆ ನಡೆಯುತ್ತದೆ. ದೀಪಾವಳಿ ಅಮಾವಾಸ್ಯೆಕಳೆದು ಪಾಡ್ಯದ ಸೋಮವಾರ ಹೀರೆಹಳ್ಳಿಯ ದಡ್ಡಿಸೂರನಾಯಕನ ಗುಡಿಗೆ ಈತನಿಂದ ಸಂರಕ್ಷಿಸಲ್ಪಟ್ಟ ದನಕರುಗಳ ಪರಂಪರೆಯಿಂದ ಇಂದಿಗೂ ಉಳಿದು ಬಂದಿರುವ ಆಕಳ ಗೂಡಿನಿಂದ (ಗುಡೇಕೋಟಿ ಬಳಿ ಇರುವ} ಕಿಲಾರಿಗಳು ಮೊಸರು,ತುಪ್ಪವನ್ನು ತಂದು ಸೋಮವಾರ ಸಂಜೆ ಗುಡಿಗೆ ಒಪ್ಪಿಸುತ್ತಾರೆ. ತಮ್ಮ ಹೊಲಗಳಲ್ಲಿ ಬೆಳೆದ ಹಸನಾದ ಸಜ್ಜೆಯತೆನೆಗಳನ್ನು ತಂದು ಒಪ್ಪಿಸುವ ವಾಡಿಕೆಯೂ ಇದೆ. ರಾತ್ರಿಯಿಡಿ ಎಲ್ಲರೂ ಸೇರಿ ಗುಡಿಯಲ್ಲಿ ಹುರುಳಿ, ಗುಗ್ಗರಿ ಬೇಯಿಸಿ ಜೋಳ ಅಥವಾ ಸಜ್ಜೆಯ ಅನ್ನ ಮಾಡಿ ಗೂಡಿನಿಂದ ತಂದ ಮೊಸರನ್ನು ಸೇರಿಸಿ ಬೆಳಗಿನಜಾವ ದಡ್ಡಿಸೂರನಾಯಕನಿಗೆ ನೈವೇದ್ಯ ಮಾಡಲಾಗುತ್ತದೆ.
ರಾತ್ರಿಯಿಡೀ ಉರುಮೆ ವಾದ್ಯದ ಸೇವೆ, ನಾಯಕನನ್ನು ಕುರಿತು ಪದ ಹೇಳುವುದು ನಡೆಯುತ್ತದೆ, ಹೀಗೆ ಗುಡಿಯಲ್ಲಿ ನಡೆಯುವ ಪೂಜೆಯೇ ತಮಗೆ ದೀಪಾವಳಿ ಹಬ್ಬದ ಆಚರಣೆಯಾಗಿದ್ದು ಮನೆ ಮನೆಯ ಮುಂದೆ ದೀಪ ಬೆಳಗಿಸುವ, ರಂಗೋಲಿ ಹಾಕುವ, ಪಟಾಕಿ ಸಿಡಿಸುವ ಆಚರಣೆಗಳು ಇಲ್ಲಿ ಇರುವುದಿಲ್ಲ.
ಕಂಪಳ ದೇವರ ಹಟ್ಟಿಯಲ್ಲಿ ಇದಕ್ಕಿಂತ ಸ್ವಲ್ಪ ಭಿನ್ನವಾಗಿ ಹಬ್ಬದ ಆಚರಣೆ ನಡೆಯುತ್ತದೆ. ಮಾಘ ಮಾಸದಲ್ಲಿ ನಡೆಯುವ ಗುಗ್ಗರಿ ಹಬ್ಬದಲ್ಲಿ ಮಾಡುವಂತೆ ಈ ಸಮಯದಲ್ಲಿಯೂ ಅಮಾವಾಸ್ಯೆ ನಂತರದ ಶುಕ್ರವಾರದಂದು ಪೆಟ್ಟಿ ದೇವರನ್ನು ಗುಡಿಯಿಂದ ತಂದು ಹಟ್ಟಿಯ ಹೊರವಲಯದಲ್ಲಿ ಹೊಸ ಉದಿ/ಪದಿಯನ್ನು ಕಟ್ಟಿ ಇದರಲ್ಲಿ ಕೂರಿಸಿ ಮೂರು ದಿನಗಳ ಹಬ್ಬದ ಆಚರಣೆ ನಡೆಸಲಾಗುತ್ತದೆ.
ತೆಲುಗಿನಲ್ಲಿ ಇದನ್ನು ‘ದುಯಿಲಪಂಡುವ’ ಎಂದು ಕರೆಯಲಾಗುತ್ತದೆ. ಕಂಪಳ ದೇವರ ಪೆಟ್ಟಿಯೊಂದಿಗೆ ಜಗಲೂರು ಪಾಪನಾಯಕನನ್ನು ಸಂಕೇತಿಸುವ ಬಿಲ್ಲು ದೇವರನ್ನೂ ತಂದು ಪೂಜಿಸಲಾಗುತ್ತದೆ. ಆಕಳಗೂಡಿನ ಮೀಸಲು ಮೊಸರು ಮತ್ತು ಬೆಣ್ಣೆಯನ್ನು ಅರ್ಪಿಸುವುದು ಇಲ್ಲಿ ಬಹಳ ವಿಶೇಷವಾದುದು. ಗತಿಸಿದ ಎತ್ತು ಮತ್ತು ಆಕಳಿಂದ ಸಂಗ್ರಹಿಸಿದ ಕೊಂಬನ್ನು ಇಲ್ಲಿ ಬೆಣ್ಣೆಯನ್ನು ಶೇಕರಿಸಲು ಬಳಸಲಾಗುತ್ತದೆ.ಬುಡಕಟ್ಟಿನ ಜನತೆ ತಮಗೆ ಸಿಗುವ ವಸ್ತುಗಳನ್ನೇ ಸಲಕರಣೆಗಳನ್ನಾಗಿ ಬಳಸುವ ವಿಧಾನ ಇಲ್ಲಿ ಗಮನ ಸೆಳೆಯುತ್ತದೆ. ಹೀಗೆ ಸಂಗ್ರಹಿಸಿದ ಬೆಣ್ಣೆಯನ್ನು ಕಾಯಿಸಿ ತುಪ್ಪ ಮಾಡಿ ಪದಿಯಲ್ಲಿ ದೀಪವನ್ನು ಉರಿಸಲಾಗುತ್ತದೆ.ಮೊಸರು,ಜೋಳದ/ಸಜ್ಜೆಯ ಅನ್ನ,ಬಾಳೆಹಣ್ಣು,ಬೆಲ್ಲವನ್ನು ಬೆಳಗಿನಜಾವದಲ್ಲಿ ನೈವೇದ್ಯ,ಮಾಡಲಾಗುತ್ತದೆ.
ಇದರೊಂದಿಗೆ ಎತ್ತುಗಳನ್ನೂ ಹರಿಯಿಸುವುದು, ಮಣೇವು, ಉರಿಯುವ ಪಂಜುಗಳನ್ನೇ ನುಂಗುವುದು ಈ ಹಬ್ಬದ ಪ್ರಮುಖ ಆಚರಣೆಗಳಾಗಿವೆ. ನನ್ನಿವಾಳದ ಕಟ್ಟಿಮನೆಗೆ ಸೇರಿದ ಬಂಗಾರುದೇವರ ಹಟ್ಟಿಯಲ್ಲಿ ದೇವರುಗಳನ್ನು ಮತ್ತು ಬೆಳಗಟ್ಟದ ಸೂರೆಯರಗಾಟನಾಯಕನಿಗೆ ಸಂಬಂಧಿಸಿದಂತೆ, ಬೋಸೇದೇವರ ಹಟ್ಟಿಯ ಬೋಸೇರಂಗಯ್ಯನ ಪೆಟ್ಟಿಯನ್ನು, ದೊಣಮಂಡಲಹಟ್ಟಿಯ ಮಂಡಬೊಮ್ಮದೇವರನ್ನು ಹಟ್ಟಿಯಿಂದ ಹೊರಗೆ ತಂದು ಊರ ಹೊರಗೆ ಹೊಸ ಪದಿಯನ್ನು ಕಟ್ಟಿ, ಗೂಡಿನಿಂದ ಎತ್ತುಗಳನ್ನು ಕರೆಸಿ ಗೌರವಿಸಿ ಪೂಜಿಸುವ ಕ್ರಮವಿದೆ.
ಒಟ್ಟಾರೆ ಈಮ್ಯಾಸಮಂಡಲದ ದೀಪಾವಳಿ ಹಬ್ಬಕ್ಕೆ ಆಯಾ ಗುಂಪಿನವರೆಲ್ಲರೂ ಕಾಸು,ಹಾಲು, ಮೊಸರನ್ನು ಅರ್ಪಿಸಿ ಪಾಲ್ಗೊಳ್ಳುವಿಕೆಯೇ ಇಲ್ಲಿ ಸಾಮುದಾಯಿಕತೆಯ ಮಹತ್ವವನ್ನು ಪಡೆಯುತ್ತದೆ. ಈ ದೀಪಾವಳಿ ಹಬ್ಬದ ಆಚರಣೆಯಲ್ಲಿಎಲ್ಲಾ ಪದಿಗಳಲ್ಲಯೂ ದಾಸೋಹ ವಿಶೇಷವಾಗಿ ನಡೆಯುತ್ತದೆ. ಮುಂಗಾರು ಮಳೆ ಸುರಿದು ಸೊಂಪಾಗಿ ಬೆಳೆದ ಹುಲ್ಲನ್ನು ತಿಂದು ಹಸುಗಳು ಸಾಕಷ್ಟು ಹಾಲನ್ನು ಕೊಡುವುದರಿಂದ ಸಮೃದ್ಧವಾದ ಹಾಲು,ಮೊಸರು ಈ ಹಬ್ಬಕ್ಕೆ ಒದಗುತ್ತದೆ.ಇದನ್ನು ಎಡೆ ಮಾಡಿದ ನಂತರ ಎಲ್ಲರಿಗೂ ದಾಸೋಹದಲ್ಲಿ ನೀಡಲಾಗುತ್ತದೆ.
ಈ ಬುಡಕಟ್ಟಿನ ದೀಪಾವಳಿ ಹಬ್ಬದ ಆಚರಣೆಯ ಹಿಂದೆ ನಮ್ಮ ಭಾರತದ ಪೌರಾಣಿಕ ಕಥನಗಳಾವುವು ಕೇಳಿ ಬರುವುದಿಲ್ಲ.ಮನೆ ಮನೆಯ ಮುಂದೆ ದೀಪಗಳನ್ನು ಹಚ್ಚಿ ಸಡಗರಿಸುವುದು ಇಲ್ಲಿಲ್ಲ. ರಂಗೋಲಿ ಹಾಕುವುದಂತೂ ಬುಡಕಟ್ಟಿನ ನಿಶೇಧಗಳಲ್ಲಿ ಒಂದಾಗಿರುವುದರಿಂದ ಆ ಪ್ರಸ್ತಾಪವೇ ಇಲ್ಲಿಲ್ಲ. ಬದಲಾಗಿ ತಮ್ಮ ಮನೆ ದೇವರಾದ ಪೆಟ್ಟಿಗೆ ದೇವರು/ಬಿಲ್ಲು ದೇವರು/ಎತ್ತುಗಳನ್ನು ಗೌರವಿಸಿ ಪೂಜಿಸುವುದು. ಈ ಮೂಲಕವಾಗಿಯೇ ತಮ್ಮ ಮುಂದಿನ ಬದುಕಿಗೆ ಬೇಕಾದ ಬೆಳಕನ್ನು, ಚೈತನ್ಯವನ್ನು ಕೋರುವುದು ಇಲ್ಲಿ ಮುಖ್ಯವಾಗಿರುತ್ತದೆ.
ತಾನು ಬದುಕಿರುವ ಪರಿಸರ, ತಮಗೆ ಬದುಕನ್ನು ಕಟ್ಟಿಕೊಡುವ ಪ್ರಾದೇಶಿಕತೆ ಮತ್ತು ಭೌತಿಕ ಪ್ರಪಂಚ ಮತ್ತು ತನಗೆ ನೈತಿಕ ಬೆಂಬಲವಾಗಿ ನಿಂತ ತನ್ನ ಸಾಂಸ್ಕೃತಿಕ ಜಗತ್ತು ಈ ಎಲ್ಲವುಗಳ ಮೂಲಕ ಒಡಮೂಡುವ ದೇಸಿತನ ಆಯಾ ಬುಡಕಟ್ಟಿನ ಆಚರಣೆಗಳಿಗೆ ಸೈದ್ಧಾಂತಿಕತೆಯನ್ನು ಒದಗಿಸಿಕೊಡುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಮ್ಯಾಸಬೇಡ ಬುಡಕಟ್ಟಿನ ಈ ದೀಪಾವಳಿ ಆಚರಣೆಯಲ್ಲಿ ಈ ದೇಸಿತನವೇ ಒಡಮೂಡಿರುವುದನ್ನು ಕಾಣಬಹುದಾಗಿದೆ.ಆದಿವಾಸಿಗಳ ಧರ್ಮಿಕ ಜಗತ್ತಿನಲ್ಲಿ ಸರ್ಪಣಾಭಾವ ಮತ್ತು ಪಾರಂಪರಿಕ ಸಂಬಂಧ ಮುಖ್ಯವಾಗಿರುತ್ತದೆ. ಈ ಆಚರಣೆಗಳನ್ನು ಸಮುದಾಯದ ಸಾಂಸ್ಕೃತಿಕ ಅಸ್ಮಿತೆಗಳು ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ6 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ7 days ago
ಭಾನುವಾರದಂದು ಕಾರ್ಯನಿರ್ವಹಿಸುವಂತೆ ಬ್ಯಾಂಕ್ಗಳಿಗೆ ಆರ್ ಬಿ ಐ ಸೂಚನೆ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ7 days ago
ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳು ಸ್ಥಗಿತ ; ಬಿಜೆಪಿ ಅಧಿಕಾರ ದುರುಪಯೋಗ : ಖರ್ಗೆ ಕಿಡಿ
-
ದಿನದ ಸುದ್ದಿ5 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ5 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ಕವಿತೆ | ನೆನಪು