ಭಾವ ಭೈರಾಗಿ
ಕನಸುಗಳ ವ್ಯಾಖ್ಯಾನ..!
- ಕ್ರಾಂತಿರಾಜ್ ಒಡೆಯರ್, ಪ್ರಾಧ್ಯಾಪಕರು, ಮೈಸೂರು
ಹಲವು ಜನರು ತಮ್ಮ ನಿದ್ರಾವಸ್ಥೆಯಲ್ಲಿ ಕನಸುಗಳನ್ನು ಕಂಡು, ಅವು ನೆನಪಿದ್ದರೆ, ಅವುಗಳನ್ನು ಶುಭ ಕನಸುಗಳು ಹಾಗು ಕೆಟ್ಟ ಕನಸುಗಳೆಂದು ವಿಂಗಡಿಸಿ, ಒಳ್ಳೆಯ ಕನಸುಗಳನ್ನು ಕಂಡಿದ್ದರೆ, ನಂತರದ ದಿನಗಳಲ್ಲಿ ಒಳ್ಳೆಯದಾಗುವುದೆಂದು, ಕೆಟ್ಟ ಕನಸುಗಳನ್ನು ಕಂಡಿದ್ದರೆ, ಅದು ಪಾಪವೆಂದೂ, ಮುಂದೊಂದು ದಿನ ಏನಾದರು ಕೇಡು ಕಾದಿದೆಯೆಂದು ತಿಳಿದು, ಪಾಪ ಕಳೆದುಕೊಳ್ಳಲು ಅಥವಾ ಕೇಡಿನಿಂದ ಪಾರಾಗಲು, ದೇವಸ್ಥಾನಗಳಿಗೋ ಅಥವಾ ದೇವಮಾನವರ ಬಳಿಗೋ ಹೋಗಿ ಪೂಜೆ, ಹೋಮ, ಹವನ ಮಾಡಿಸಿ, ಪಾಪ ಅಥವಾ ಕೇಡಿನಿಂದ ಪಾರಾದವೆಂಬ ನಂಬಿಕೆಯಿಂದ ನಿಟ್ಟ್ಟುಸಿರು ಬಿಡುವುದನ್ನು ನಾನು ಹಲವರಿಂದ ಕೇಳಿದ್ದು ಅಲ್ಲದೇ ಕೆಲವು ಸ್ನೇಹಿತರು ನನ್ನ ಬಳಿಯೂ ಪ್ರಸ್ತಾಪ ಮಾಡಿದ್ದೂ ಇದೆ.
ಇಂತಹವರ ನಂಬಿಕೆಗಳು ಮಾಹಿತಿ ಮತ್ತು ಜ್ಞಾನದ ಕೊರತೆಯಿಂದ ಕೂಡಿದ್ದು, ಕನಸುಗಳನ್ನು ಮೂಢನಂಬಿಕೆಯ ದೃಷ್ಟಿಯಲ್ಲಿ ನೋಡದೇ, ವೈಜ್ಞಾನಿಕ ತಳಹದಿಯಲ್ಲಿ ನೋಡಬೇಕೆಂಬುದು ಈ ಒಂದು ಲೇಖನದ ಉದ್ದೇಶ.
ಕನಸುಗಳ ಬಗ್ಗೆ 1899 ರಲ್ಲಿ ಆಸ್ಟ್ರಿಯಾ ದೇಶದ ಖ್ಯಾತ ಮನೋಶಾಸ್ತ್ರಜ್ಞ ಸಿಗ್ಮನ್ದ್ದ್ ಫ್ರಾಯ್ಡ್ ಅವರು ತಮ್ಮ ಸುಧೀರ್ಘ ಸಂಶೋಧನೆಯ ಮೂಲಕ ಕನಸುಗಳ ಮೂಲ ಮತ್ತು ಅವುಗಳ ಅರ್ಥವನ್ನು ‘INTERPRETATION OF DREAMS‘ ಎಂಬ ಪುಸ್ತಕದ ಮೂಲಕ ಇಡೀ ವಿಶ್ವಕ್ಕೇ ತಿಳಿಸಿಕೊಟ್ಟಿದ್ದಾರೆ. ಅವರ ಪ್ರಕಾರ, ಮನುಷ್ಯರು ತಮ್ಮ ಸುಪ್ತ ಮನಸಿನಲ್ಲಿ ಅಡಗಿಸಿಟ್ಟ ಬಯಕೆಗಳು, ನಿದ್ರಾವಸ್ಥೆಯಲ್ಲಿ ಕನಸುಗಳಾಗಿ ಬರುವುವೆಂದೂ, ಅವು, ನಾವು ಶಾಂತಿಯುತವಾಗಿ ನಿದ್ರಿಸಲು ಸಹಾಯಕರಾಗಿ ಅಥವಾ ರಕ್ಷಕರಾಗಿ ಕಾರ್ಯ ನಿರ್ವಹಿಸುವುವುವೆಂದೂ ತಮ್ಮ ಸಂಶೋಧನೆಯಲ್ಲಿ ತಿಳಿಸಿದ್ದಾರೆ. ಮನುಷ್ಯರಿಗೆ ಕನಸು ಬೀಳುವುದು ಸಹಜ ಪ್ರಕ್ರಿಯೆಯಾಗಿದ್ದು, ಕನಸು ಬೀಳುವ ಮನುಷ್ಯರು ಆರೋಗ್ಯಕರ ಮನಸ್ಸನ್ನು ಹೊಂದಿರುತ್ತಾರೆ.
ಹಾಗೆಯೇ ಕನಸೇ ಬೀಳದ ಮನುಷ್ಯರು ಆರೋಗ್ಯಕರ ಮನಸ್ಸನ್ನು ಹೊಂದಿರುವುದಿಲ್ಲವೆಂದು ತಮ್ಮ ಸಂಶೋಧನೆಯಲ್ಲಿ ತಿಳಿಸಿದ್ದಾರೆ.
ಸಹಜವಾಗಿ ಕನಸುಗಳು ನಿದ್ರಾವಸ್ಥೆಯಲಿ ನಾವು ಉಪಪ್ರಜ್ಞಾಸ್ಥಿತಿಯಲ್ಲಿ ಇರುವಾಗ ಬರುವುವು. ಹಾಗೆಯೇ, ಶಾಂತ ಮನಸ್ಥಿತಿಯಲ್ಲಿ ಇರುವ ವ್ಯಕ್ತಿಗಳಿಗೆ ಮಾತ್ರ ಕನಸುಗಳು ಬರುವುದು.
ಪ್ರಜ್ಞಾಸ್ಥಿತಿಯಲ್ಲಿ ಇರುವಾಗ, ಹಾಗೆಯೇ ಅಶಾಂತ ಮನಸ್ಥಿತಿಯಲ್ಲಿ ಇರುವ ವಕ್ತಿಗಳಿಗೆ ಕನಸುಗಳು ಬರುವುದಿಲ್ಲ. ಇದರ ಅರ್ಥ, ಮನುಷ್ಯರು ತುಂಬಾ ದಣಿದಿದ್ದಾಗ ಅಥವಾ ಮದ್ಯಪಾನ ಮಾಡಿದಾಗ, ಅವರ ದೇಹ ಶಾಂತ ಸ್ಥಿತಿಗೆ ಹೋಗಿ, ಆ ಸಂದರ್ಭದಲ್ಲಿ ಅವರು ನಿದ್ರಾವಸ್ಥೆಗೆ ಹೋದಾಗ ಕನಸುಗಳು ಬರುವುದು ಗ್ಯಾರಂಟಿ.
ನಮಗೆ ಎಂತಹ ಕನಸುಗಳು ಬೀಳುತ್ತವೆಯೆಂದು ಅವಲೋಕಿಸಿ ನೋಡಿದಾಗ, ಅವು ಲೈಂಗಿಕವಾಗಿದ್ದು, ಅಂದರೆ, ವ್ಯಕ್ತಿಗೆ ಅಥವಾ ವ್ಯಕ್ತಿಗಳಿಗೆ ಸಂಭದಿಸಿದ್ದಾಗಿರುತ್ತವೆ. ಆ ವ್ಯಕ್ತಿ ಅಥವಾ ವ್ಯಕ್ತಿಗಳು ನಮಗೆ ಬಹಳ ಹತ್ತಿರದವರಾಗಿದ್ದು, ಕುಟುಂಬದ ಸದಸ್ಯರೊ, ಸ್ನೇಹಿತರೋ, ನಾವು ಕೆಲಸ ಮಾಡುವ ವಾತಾವರಣಕ್ಕೆ ಸಂಬಂಧಿಸಿದವರೋ, ನಮ್ಮ ವೈರಿಗಳೋ, ನಾವು ಜೀವನದಲ್ಲಿ ಹೆದರಿಕೊಳ್ಳುವ ವ್ಯಕ್ತಿಯೋ ಅಥವಾ ಪ್ರೀತಿಸುವವರೋ ಆಗಿರುತ್ತಾರೆ. ಮತ್ತು ಕನಸಿನಲ್ಲಿ ಬರುವ ಘಟನೆಗಳು ನಮ್ಮ ಜೀವನದಲ್ಲಿ ನೆಡೆದಿರುವುವೇ ಅಥವಾ ನಮ್ಮ ಆಲೋಚನೆಯಲ್ಲಿ ಬಂದಿರುವುವೇ ಆಗಿರುತ್ತವೆ.
ವ್ಯಕ್ತಿಗಳು ಅಥವಾ ಘಟನೆಗಳು ಕನಸಿನಲ್ಲಿ ಬರುವ ರೀತಿಯನ್ನು ಅವಲೋಕಿಸುವುದಾದರೆ, ಮನುಷ್ಯರು ಹೇಗಿದ್ದಾರೋ ಹಾಗೆಯೇ ಕಾಣಿಸಿಕೊಳ್ಳಬಹುದು ಅಥವಾ ಅವರ ದೇಹದ ಯಾವುದಾದರೊಂದು ಭಾಗ ಮಾತ್ರ ಕಾಣಿಸಬಹುದು ಅಥವಾ ಅವರು ಇರುವುದಕ್ಕಿಂತ ದಪ್ಪ ಅಥವಾ ಸಣ್ಣ ಆಕಾರಗಲ್ಲಿ ಕಾಣಿಸಿಕೊಳ್ಳಬಹುದು. ಇನ್ನೊಂದು ರೀತಿಯಲ್ಲಿ ನೋಡುವುದಾದರೆ, ಯಾವುದಾದರೂ ವಿಕಾರ ಚಿತ್ರ ಅಥವಾ ಭಯಂಕರ ಆಕಾರ ಅಥವಾ ಯಾವುದಾದರೊಂದು ವಸ್ತು ಅಥವಾ ನಾವು ಭಯಪಡುವ ವಸ್ತು ಕನಸಿನಲ್ಲಿ ಘಟನೆಗಳ ಜೊತೆ ಬರುತ್ತವೆ.
ಅವು ಕೆಟ್ಟ ಘಟನೆಗಳು ಆಗಿರಬಹುದು ಅಥವಾ ಸಂತೋಷ ಪಡುವ ಘಟನೆಗಳೂ ಆಗಿರಬಹುದು. ಒಟ್ಟಿನಲ್ಲಿ, ಆ ವ್ಯಕ್ತಿಗಳು ಅಥವಾ ಘಟನೆಗಳೂ ನಮ್ಮ ಸುಪ್ತ ಮನಸಿನಲ್ಲಿ ಅಡಗಿದ್ದು, ಕನಸಿನ ಮೂಲಕ ಬರಬಹುದು ಅಥವಾ ಅಡಗಿರುವ ಬಯಕೆಗಳನ್ನು ಸ್ವೀಕರಿಸಲು ಮನಸ್ಸು ಒಪ್ಪದಿದ್ದಾಗ ಹಾಗು ಅವುಗಳ ಬಗ್ಗೆ ಪಾಪಪ್ರಜ್ಞೆ ಕಾಡಿದಾಗ, ಆ ವ್ಯಕ್ತಿಗಳ ಹಾಗು ವಸ್ತುಗಳ ಬಗ್ಗೆ ಮನಸ್ಸಿನಲ್ಲಿ ಅಡಗಿರುವ ಬಯಕೆಗಳು ಬೇರೆ ರೂಪ ತಾಳಿ ಕಾಣಿಸಿಕೊಳ್ಳುತ್ತವೆ.
ಹಾಗಾದರೆ ಈ ಕನಸುಗಳನ್ನು ಓದುವುದು ಹೀಗೆ ಎಂದು ಅವಲೋಕಿಸಿದಾಗ, ವ್ಯಕ್ತಿಗಳು ಹಾಗು ಘಟನೆಗಳೂ ಸಹಜ ರೂಪದಲ್ಲಿ ಬಂದರೆ, ಕನಸುಗಳನ್ನು ಅರ್ಥಮಾಡಿಕೊಳ್ಳುವು ಸುಲಭ. ಆದರೆ, ವಿಕಾರ ರೂಪದಲ್ಲೋ, ಯಾವುದೋ ವಸ್ತುವಿನ ರೂಪದಲ್ಲೋ, ಕೆಟ್ಟ ಹಾಗು ಒಳ್ಳೆಯ ಸಂದರ್ಭದ ರೂಪದಲ್ಲೋ ಅಥವಾ ಸಂಬಂಧವಿಲ್ಲದ ರೂಪದಲ್ಲೋ ಬಂದರೆ, ಕನಸನ್ನು ಅರ್ಥ ಮಾಡಿಲೊಳ್ಳುವುದು ಕಷ್ಟ. ಆದರೆ, ಅವುಗಳನ್ನು ಅರ್ಥ ಮಾಡಿಕೊಳ್ಳಲು ಸಿಗ್ಮನ್ಡ್ ಫ್ರಾಯ್ಡ್ ಅವರು ಸುಲಭ ವಿಧಾನವನ್ನು ತಿಳಿಸಿದ್ದಾರೆ.
ಉದಾಹರಣೆಗೆ: ನನ್ನ ಗೆಳೆಯ, “ಅವನಿಗೆ ಹಲವು ಬಾರಿ ತನ್ನ ಕುಟುಂಬದ ಕೆಲವು ಸದಸ್ಯರೊಡನೆ ಅಂದರೆ, ತನ್ನ ತಾಯಿ, ತಂಗಿ, ಅಕ್ಕ, ಚಿಕ್ಕಪ್ಪ ಹಾಗು ದೊಡ್ಡಪ್ಪನ ಮಗಳ ಜೊತೆಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ಹಾಗೆ ಕನಸಿನಲ್ಲಿ ಬರುತ್ತಿರುವುದಾಗಿ ಹೇಳಿ ತನ್ನ ಬಗ್ಗೆಯೇ ಅಸಯ್ಯ ಪಟ್ಟಿಕೊಂಡನು”. ಅದಕ್ಕೆ ಪ್ರತಿಕ್ರಿಯಿಸುತ್ತಾ ನಾನು, “ಆ ಕನಸುಗಳ ಬಗ್ಗೆ ಅಸಯ್ಯ ಪಟ್ಟಿಕೊಳ್ಳುವಂತದ್ದು ಏನೂ ಇಲ್ಲ. ಯಾವುದೋ ಸಂದರ್ಭದಲ್ಲಿ ಅವರ ದೇಹದ ಸೂಕ್ಷ್ಮ ಭಾಗಗಳನ್ನು ತಪ್ಪಿ ನೋಡಿದ್ದು, ಅಥವಾ ಕೆಲವು ಸಂದರ್ಭಗಳಲ್ಲಿ ಕೆಟ್ಟ ಆಲೋಚನೆಗಳಿಂದ ಅವರ ಬಗ್ಗೆ ಯೋಚಿಸಿದ್ದರೆ ಅದು ಸುಪ್ತ ಮನಸ್ಸಿನಲ್ಲಿ ಅಡಗಿದ್ದು, ಕನಸಿನಲ್ಲಿ ಗೊತ್ತಿಲ್ಲದೆಯೇ ಬರುತ್ತದೆ.
ಅದನ್ನು ವೈಜ್ಞಾನಿಕವಾಗಿ ಆಲೋಚಿಸಬೇಕೇ ಹೊರತು ಅದರ ಬಗ್ಗೆ ಅಸಯ್ಯ ಪಟ್ಟಿಕೊಳ್ಳಬಾರದೆಂದು” ಹೇಳಿದಾಗ ಸ್ವಲ್ಪ ಸಮಾಧಾನವಾದನು. ಹಾಗೆಯೇ ಮತ್ತೊಬ್ಬ ಗೆಳೆಯ, “ಕನಸಿನಲ್ಲಿ ಅವನು ತನ್ನ ಪ್ರೇಯಸಿಯ ಜೊತೆಯಲ್ಲಿದ್ದಾಗ ಯಾವುದೋ ಒಂದು ಪುಟ್ಟ ಮಗು ಅವರು ಎಲ್ಲೆಲ್ಲಿ ಹೋಗುತ್ತಾರೋ ಅಲ್ಲೆಲ್ಲ ಬರುತ್ತಿದ್ದು, ಪಕ್ಕದಲ್ಲಿ ಹುಲ್ಲಿನ ಮೆದೆಗೆ ಬೆಂಕಿ ಬಿದ್ದ ಹಾಗೆ, ಅದು ಒಂದು ನೀರು ಇರುವ ಜಾಗಕ್ಕೆ ಹತ್ತಿರವಾಗಿತ್ತೆಂದು ಹೇಳಿದ”. ಅದಕ್ಕೆ ಪ್ರತಿಕ್ರಿಯಿಸಿದ ನಾನು “ಅವನ ಪ್ರೇಮದ ವಿಷಯ ಹುಡುಗಿ ಮನೆಯವರಿಗೆ ಗೊತ್ತಾಗುವ ಭಯವಿದ್ದು, ಹಾಗೆಯೇ ಅವರಿಬ್ಬರ ಪ್ರೀತಿಗೆ ವಿರೋಧ ವ್ಯಕ್ತವಾಗಿ ಮುರಿದುಬೀಳುವ ಭಯವಿದ್ದಾಗ ಈ ತರಹದ ಕನಸ್ಸುಗಳು ಬರುತ್ತವೆ ಎಂದು ಹೇಳಿದೆ”.
ಕನಸುಗಳನ್ನು ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಕಷ್ಟದ ಕೆಲಸ. ಇದಕ್ಕೋಸ್ಕರ ಸಿಗ್ಮುಂಡ್ ಫ್ರಾಯ್ಡ್ ಅವರು “ಫ್ರೀ ಅಸೋಸಿಯೇಷನ್” ಎಂಬ ತಂತ್ರವನ್ನು ಕಂಡುಹಿಡಿದರು.
ಒಟ್ಟಿನಲ್ಲಿ ಹೇಳುವುದಾದರೆ ಕನಸುಗಳು ಬೀಳುವುದು ಸಾಮಾನ್ಯವಾಗಿದ್ದು ಅದನ್ನು ಜನರು ಮೂಢನಂಬಿಕೆಯಿಂದ ನೋಡದೆ ವೈಜ್ಞಾನಿಕ ತಳಹದಿಯಲ್ಲಿ ನೋಡಬೇಕು.
(ಖ್ಯಾತ ಮನೋಶಾಸ್ತ್ರಜ್ಞ ಸಿಗ್ಮನ್ಡ್ ಫ್ರಾಯ್ಡ್ ಅವರಿಂದ ಪ್ರೇರಿತನಾಗಿ ಬರೆದಿರುವ ಲೇಖನ.)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕವಿತೆ | ನೆನಪು
- ರುದ್ರಪ್ಪ ಹನಗವಾಡಿ
ಅಪ್ಪನನ್ನು ಒಪ್ಪ ಮಾಡಿ
ವರ್ಷಗಳೇ ಕಳೆದವು ಮುವ್ವತ್ತೇಳು
ಇಂದಿರಾಗಾಂಧಿಯ ತುರ್ತು ಪರಿಸ್ಥಿತಿ
ಅರಸರ ಮೀಸಲಾತಿ
ಬಸವಲಿಂಗಪ್ಪನವರ ಬೂಸಾ ಖ್ಯಾತಿ
ಮಲ ಹೊತ್ತು
ಮಲಗಿದ್ದ ಕಾಲಕ್ಕೆ
ಚುರುಕು ಮುಟ್ಟಿಸಿದ ಕಾಲ
ಹರೆಯದ ನನಗೆ
ಕಾಲೇಜ ಮೇಷ್ಟರ ಕೆಲಸ
ಸೂಟು ಬೂಟಿನ ವೇಷ
ಆ ಮೇಲೆ ಅಮಲದಾರಿಕೆ
ಎಲ್ಲ ನಡೆದಾಗಲೇ ಅವ್ವನನ್ನು
ಆಸ್ಪತ್ರೆಗೆ ಸೇರಿಸಿದ್ದು
ಕಾಲ ಕಳೆದು ಕೊಂಡು
ಕೋಲ ಹಿಡಿದದ್ದು
ನಿನ್ನೆ ಮೊನ್ನೆಯಂತೆ
ಬಾಲ್ಯವಿನ್ನು ಉಂಟೆಂಬಂತೆ
ಭಾವಿಸುವಾಗಲೇ ಅವ್ವನ ಸಾವು
ಅದರೊಟ್ಟಿಗೆ ಕಾಯದಾಯಾಸ ತೀರಿಸಲು
ಬಂದರೆ ಬೆಂಗಳೂರಿಗೆ
ರೌಡಿಗಳ ಕಾಟ
ಅಂಬೇಡ್ಕರ್ ಪಟದ ಕೆಳಗೆ
ದೌರ್ಜನ್ಯದ ದಂಡು
ಅಮಾಯಕರಿಗೆ ಗುಂಡು
ಕಂಡುಂಡ ಹಾದಿಯ ಗುಡಿಸಲುಗಳಲ್ಲೀಗ
ಮುಗಿಲು ಮುಟ್ಟೋ ಮಹಲುಗಳು
ಅಂತಲ್ಲಿ
ದೇಶ ವಿದೇಶಗಳ
ಅಹವಾಲುಗಳು
ಅವಿವೇಕಗಳು
ನೋಡ ನೋಡುತ್ತಿದ್ದಂತೆ
ಉಸಿರು ಬಿಗಿಹಿಡಿದ ಜನರ ಒಳಗೆ
ಒಳಪದರಗಳೊಳಗೆ ಕನಸ ಬಿತ್ತಿ
ಹಸಿರ ಹೊನ್ನು ಬಾಚಲು ಹವಣಿಸಿದ
ಬಿಳಿ ಜನರ ಆಟ
ಅರ್ಥವಾಗುವುದೇ ಎಲ್ಲ
ಗೋಣ ನೀಡುವರೆ
ಹೂತಿಟ್ಟ ಗೂಟಕ್ಕೆ ?
( ಚಿಂತಕ ರುದ್ರಪ್ಪ ಹನಗವಾಡಿ ಅವರ ‘ಊರು – ಬಳಗ’ ಕವನ ಸಂಕಲನದಿಂದ ‘ ನೆನಪು ‘ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕೃತಿಯನ್ನು ಫ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ 2013 ರಲ್ಲಿ ಪ್ರಕಿಸಿದೆ.)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕವಿತೆ | ಮಣ್ಣ ಮಕ್ಕಳು
- ಸಿ.ಕೃಷ್ಣನಾಯಕ್, ಆಡಳಿತಾಧಿಕಾರಿ, ಐಟಿಐ ಕಾಲೇಜು ದಾವಣಗೆರೆ
ಮಣ್ಣ ಮಕ್ಕಳು ನಾವು
ಹಗಳಿರುಳೆನ್ನದೆ ಬೆವರು ಬಸಿದು
ಹಸಿದ ಹೊಟ್ಟೆಯಲಿ ಉಸಿರು ಹಿಡಿದವರು
ಕಸದಲಿ ರಸ ತೆಗದು ಬದುಕಿನುದ್ದಕ್ಕೂ ಉಳ್ಳವರ
ಕಸುಬಿಗೆ ಆಳಾದವರು ಸವಳು ನೀರಲಿ ಮೈತೊಳೆದು
ಚಿಂದಿ ಅಂಗಿಯಲಿ ಶಾಲೆಗೆ ದಾಖಲಾದವರು.
ಬರಿಗಾಲಲಿ ಕಾಡು ದಾರಿಯಲಿ ಮೈಲು ದೂರ ನಡೆದು
ನೆಗ್ಗಿಲ ಮುಳ್ಳು ತುಳಿದವರು ; ನಿಬ್ಬು ನೆಗ್ಗಿದ ಪೆನ್ನಿನಲಿ
ಹೆಸರು ಬರೆಯಲು ಕಲಿತವರು ಹರಿದ ಪಠ್ಯದಲಿ ಅಕ್ಷರ ಹುಡುಕಿ ಒಡೆದ ಪ್ಲೇಟಿನಲಿ ಬರೆದವರು.
ತೂತು ಬಿದ್ದ ಸೂರಿನಲಿ ಇಣುಕಿದ ಚುಕ್ಕಿ ಚಂದ್ರಮರ ನೋಡಿ
ವಿದ್ಯುತ್ ದೀಪದ ಕನಸು ಕಂಡವರು
ಮೋಸ ವಂಚನೆಗೆ ಬಗ್ಗದೆ ಶೋಷಣೆಗೆ ಸಿಡಿದವರು
ಮಣ್ಣ ಮಕ್ಕಳು ನಾವು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಬಿ.ಶ್ರೀನಿವಾಸ ಅವರ ‘ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು’ ಕೃತಿಯ ಕುರಿತು
ಸಂಡೂರಿನ ಜನರ ಮುದುಡಿದ ಅಂಗಿಯ ಮೇಲೆ,ಹೆಂಗಸರು ಮಾಸಿದ ಸೀರೆಯ ಸೆರಗಿನ ಮೇಲೆ ಬಿ.ಶ್ರೀನಿವಾಸ ಅಕ್ಷರ ಬಿಡಿಸುತ್ತಾರೆ.
ಅನ್ನದ ಅಗುಳು,ಧೂಳು,ಕಾಗದದ ಚೂರು,ಆಟಿಕೆ ಸಾಮಾನು,ಕಿಡ್ನಿ,ಈ ಸಣ್ಣವು ಗಳಲ್ಲಿ ಜೀವಸಾಕ್ಷಿ ಹುಡುಕುವ ಕಥೆಗಳಿವು.ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಅನ್ನದ ಅಗಳು,ಕಾಗದದ ಚೂರನ್ನು ಎತ್ತಿಹಿಡಿಯುವ ಗೆಳೆಯ ಶ್ರೀನಿವಾಸ *ಧೂಳನ್ನೇ ಅಕ್ಷರಗಳನ್ನಾಗಿಸಿದ ಲೇಖಕ.
- ಬಸವರಾಜ ಹೂಗಾರ
ಇಲ್ಲಿನ ಹುಚ್ಚರ ಕತೆಗಳನ್ನು ಓದುವಾಗ ಕುಂ.ವೀ.ಯವರ ಹಾಗೂ ಸಾದತ್ ಹಸನ್ ಮಾಂಟೋ ಅವರ ಹುಚ್ಚರ ಕತೆಗಳು ನೆನಪಾಗುತ್ತವೆ.ಇಲ್ಲಿನ ನತದೃಷ್ಟರ ಬದುಕನ್ನು ಹಿಡಿದಿಡಲು ಲೇಖಕರು ಕಂಡುಕೊಂಡಿರುವ ಅಭಿವ್ಯಕ್ತಿ ವಿನ್ಯಾಸ ವಿಶಿಷ್ಟವಾಗಿದೆ. ಬರಹಗಳು ದೀರ್ಘವಾಗಿಲ್ಲ. ಚುಟುಕಾಗಿವೆ. ಕವನಗಳೊ, ಗದ್ಯಗಳೊ ಎಂದು ಹೇಳಲಾಗದ ರೂಪದಲ್ಲಿವೆ.
ಗಾಢವಾದ ಅರ್ಥವನ್ನು ಕೆಲವೇ ಸಾಲುಗಳಲ್ಲಿ ವ್ಯಂಗ್ಯ ಮತ್ತು ವಿಡಂಬನೆಗಳಲ್ಲಿ ಹಿಡಿಯಲು ಯತ್ನಿಸುತ್ತವೆ.
ಇಲ್ಲಿರುವ ಲೋಕದ ನೋವಿಗೆ ಮಿಡಿವ ಸಂವೇದನೆ,ಓದುವ ಓದುಗರನ್ನೂ ಆವರಿಸಿಕೊಂಡು,ಚಿಂತನೆಗೆ ಹಚ್ಚುತ್ತದೆ.ಓದುತ್ತ,ಓದುತ್ತಾ ನಿಟ್ಟುಸಿರು ಹೊಮ್ಮುತ್ತದೆ.ಮನಸ್ಸು ಮಂಕಾಗುತ್ತದೆ.ಇಂತಹ ಬರಹಗಳನ್ನು ಕೊಟ್ಟಿರುವ ಶ್ರೀನಿವಾಸ ತಮ್ಮ ಅಂತಃಕರಣ ,ಚೂಪಾದ ಗ್ರಹಿಕೆ,ಆಳವಾದ ಸಂವೇದನೆಗಳನ್ನು ಇತರೆ ಪ್ರಕಾರಗಳಲ್ಲಿಯೂ ಪ್ರಕಟಿಸುವ ಜರೂರಿಯಿದೆ.
- ಡಾ.ರಹಮತ್ ತರೀಕೆರೆ
ಒಬ್ಬ ಮನುಷ್ಯ ಮತ್ತೊಬ್ಬನನ್ನು ಕಿತ್ತು ತಿನ್ನಬಾರದು.ಹೊಟ್ಟೆಪಾಡಿಗಾಗಿ ನಿರ್ವಹಿಸುವ ಪ್ರತಿ ಕೆಲಸವೂ ಸೃಜನಶೀಲವಾಗಿರಬೇಕು-ಎಂಬ ಧಾವಂತದಲ್ಲಿ ಹುಟ್ಟಿದ ಮನದ ಪ್ರಕ್ರಿಯೆಗಳಿಗೆಲ್ಲ ಇಲ್ಲಿ ಹರಡಿಕೊಂಡಿವೆ.
- ಬಿ.ಶ್ರೀನಿವಾಸ,ಕೃತಿ ಲೇಖಕ
ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು ನೊಂದವರ ಮನದಲ್ಲಿ ಅಲ್ಪಾವಧಿ ಗುರುತು ಮೂಡಿಸಬಹುದು ನಿಮ್ಮ ಈ ಪುಸ್ತಕ ಮತ್ತು ಅದರಲ್ಲಿರುವ ಎಷ್ಟೋ ವಿಚಾರಗಳು ನನ್ನನ್ನು ಡಿಸ್ಟರ್ಬ್ ಮಾಡಿವೆ. ಕೇವಲ ವಾಟ್ಸಾಪ್ ಲೈನ್ ಸಾಕಾಗಲ್ಲ ಎದುರುಗಡೆ ಕುಳಿತು ಇನ್ನು ಹೆಚ್ಚು ತಿಳಿದುಕೊಳ್ಳಬೇಕೇನಿಸುತ್ತದೆ. ಸಂಡೂರಿನ ದಾರುಣ ಚಿತ್ರಗಳನ್ನು,ಕೋರ್ಟಿನ ಚಿತ್ರಗಳನ್ನು,ಬದುಕಿನ ಚಿತ್ರಗಳನ್ನು ಕಣ್ಣಿಗೆ ರಾಚುವಂತೆ ಮೂಡಿಸಿದ್ದೀರಿ.
ಸಾವಿಗಿಂತ ಹಸಿವು ಬಹಳ ಕ್ರೂರಿ ಎನ್ನುವುದು: ನೋವಿನ ಬದಲು ಹಸಿವಿನ ಏಟುಗಳು ಬೀಳಬೇಕಿತ್ತು ಎನ್ನುವ ಸಾಲುಗಳಂತೂ Geographical Hungrey ಪುಸ್ತಕ ನೆನಪಿಸುತ್ತವೆ. ಸೊಂಡೂರಿನ ಚಿತ್ರಗಳ ಮೂಡಿಸಿದೆ ಗಾಢ ವಿಷಾದತೆ, ನನ್ನನ್ನು ಹೊರಬರಲು ಬಿಡುತ್ತಿಲ್ಲ.
“ಉಳ್ಳವರು ಹೊತ್ತ ಮೂಟೆಗಳಲ್ಲಿ ಬಡವರ ಹಸಿವಿನದ್ದೇ ಭಾರ”ಇವೆಲ್ಲ ಹಸಿವನ್ನು ಅನುಭವಿಸಿದವರಿಗೆ ಮಾತ್ರ ಸರಿಯಾಗಿ ಅರ್ಥವಾಗುವ ಸಾಲುಗಳು.
ಇನ್ನು ,ಕೋರ್ಟಿನ ಚಿತ್ರಗಳು, ಎಷ್ಟು ಜನ ಇರ್ತಾರೆ ಇವನ್ನೆಲ್ಲ ಸೂಕ್ಷ್ಮ ವಾಗಿ ತಿಳಿದುಕೊಳ್ಳುವವರು ?
ಶಾಲೆ ಹಿಂದೆ ತಿರುಗಬಾರದು ಕೋರ್ಟ್ ಕಚೇರಿ ಮುಂದೆ ತಿರುಗಬಾರದು ಎಂದು ನಮ್ಮ ಜನಪದರು ಹೇಳ್ವ ಮಾತು ಎಷ್ಟೋ ಸಲ ಸತ್ಯ ಎನಿಸುತ್ತದೆ.
ನೀವು ಹಿಡಿದಿಟ್ಟ ಬದುಕಿನ ಚಿತ್ರಗಳಲ್ಲಿನ “ಶವಪೆಟ್ಟಿಗೆ ಸಣ್ಣದಿದ್ದಷ್ಟು ಹೊರುವುದು ಬಹಳ ಕಷ್ಟ “ಎಂಬ ಮಾತಂತೂ ಚಿಕ್ಕಮಕ್ಕಳ ತಂದೆತಾಯಿಯರ ಕಣ್ಣಲ್ಲಿ ನೀರು ತರಿಸುವುದು.
ತಲೆ ಮ್ಯಾಲೆ ಮಲ ಸುರುವಿಕೊಂಡೆವಲ್ಲ ಸರ್ ಅವತ್ತೇ… ನಾವ್ ಹುಟ್ಟಿದ್ದು ಎನ್ನುವ ಸವಣೂರಿನ ಭಂಗಿಯ ಮಾತನ್ನು ಎಷ್ಟು ಅರ್ಥಗರ್ಭಿತವಾಗಿ ಸೋ ಕಾಲ್ಡ್ ಸೊಸೈಟಿಗೆ ಮುಟ್ಟಿ ನೋಡಿಕೊಳ್ಳುವಂತೆ ಬರೆದಿದ್ದೀರಿ. ಆಕೆ ಏನನ್ನೋ ಆಯ್ಕೆ ಮಾಡಿಕೊಂಡಿದ್ದಾಳೆ ಎಂಬ ವಿಚಾರಗಳು ಕೇವಲ ವಿಚಾರಗಳಲ್ಲ ,ಬದುಕಿನ ಸತ್ಯ ಚಿತ್ರಣಗಳು ದಿನ ನಿತ್ಯ ನಮ್ಮ ನಡುವೆ ನಡೆಯುವಂತವು.ಅವನ್ನು ಕಾಣುವಂತ ದೃಷ್ಟಿ ಇದ್ದವರಿಗೆ ಮಾತ್ರ ಇವು ಕಾಣುತ್ತವೆ ಸರ್ .
ನಿಮ್ಮ ನೈಜ ದೃಷ್ಟಿಗೆ ದನ್ಯವಾದಗಳು ಸರ್, ಉಳಿದದ್ದು ಎದುರು ಬದುರು ಕುಳಿತು ಮಾತಾಡೋಣ
- ಡಾ.ರಾಮಚಂದ್ರ ಹಂಸನೂರು, ಬೆಟಗೇರಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ6 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ6 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ6 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ಕವಿತೆ | ನೆನಪು
-
ದಿನದ ಸುದ್ದಿ3 days ago
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
-
ದಿನದ ಸುದ್ದಿ2 days ago
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ