Connect with us

ನೆಲದನಿ

‘ಹಾದಿಗಲ್ಲು’ : ಜನಪರ ಹೆಜ್ಜೆಗಳ ಅನನ್ಯ ಯಾನ

Published

on

  • ಡಾ.ಎನ್.ಕೆ.ಪದ್ಮನಾಭ,ಸಹಾಯಕ ಪ್ರಾಧ್ಯಾಪಕರು,ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ,ಉಜಿರೆ

ಲಾಕ್‌ಡೌನ್‌ನ ಸುಧೀರ್ಘ ಅವಧಿಯ ನಂತರ ತೀರಾ ಇತ್ತೀಚೆಗೆ ನಮ್ಮ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಕ್ಲಾಸ್‌ಗಳು ಶುರುವಾದವು. ಕಳೆದ ವಾರದ ತರಗತಿಯಲ್ಲಿ ಸಾರ್ವಜನಿಕ ಸಂಪರ್ಕದ ಕುರಿತ ವ್ಯಾಖ್ಯಾನ ಆಧರಿಸಿ ಚರ್ಚೆ ಆರಂಭಿಸಿದ್ದೆ.

ಇಡೀ ಸರ್ಕಾರೀ ವ್ಯವಸ್ಥೆಯನ್ನು ಸಮಗ್ರವಾಗಿ ಬದಲಾಯಿಸಲು ಆಡಳಿತದಲ್ಲಿ ಸಾರ್ವಜನಿಕ ಸಂಪರ್ಕ ಅಥವಾ ಪಬ್ಲಿಕ್ ರಿಲೇಷನ್ಸ್ ಎಂಬ ಪ್ರತ್ಯೇಕ ಇಲಾಖೆ ರೂಪಿಸಿ ಅದನ್ನು ಬಲಪಡಿಸುವುದರ ಕಡೆಗೆ ನೀತಿ ನಿರೂಪಕರು ಯೋಚಿಸುವ ಅಗತ್ಯವಿದೆ ಎಂಬ ಪ್ರತಿಪಾದನೆಯೊಂದಿಗೆ ತರಗತಿಯಲ್ಲಿ ನನ್ನ ಉಪನ್ಯಾಸ ಶುರುವಾಗಿತ್ತು.

ರೆಕ್ಸ್ ಹಾರ್ಲೋ ಅವರ ವಿಸ್ತೃತವಾದ ವ್ಯಖ್ಯಾನವನ್ನು ಈ ಕೇಂದ್ರ ಆಶಯ ಆಧರಿಸಿ ವಿವರಿಸಿದ್ದೆ. ಪ್ರತ್ಯೇಕವಾದ ಸ್ವಾಯತ್ತ ಸಂಸ್ಥೆಯಾಗಿ ಸರ್ಕಾರಿ ಆಡಳಿತದ ಉನ್ನತೀಕರಣಕ್ಕೆ ಹೇಗೆ ನೆರವಾಗಬಹುದು ಎಂಬುದನ್ನು ವಿವಿಧ ಆಯಾಮಗಳಲ್ಲಿ ವಿಶ್ಲೇಷಣೆಗೊಳಪಡಿಸಲು ಪ್ರಯತ್ನಿಸಿದ್ದೆ.

ಇದಾದ ಮರುದಿನ ನನ್ನ ಓದಿಗೆ ಸಿಕ್ಕಿದ್ದು ಐಎಎಸ್ ಅಧಿಕಾರಿ ಕೆ.ಎ.ದಯಾನಂದ ಅವರು ಬರೆದ ‘ಹಾದಿಗಲ್ಲು’ ಕೃತಿ. ‘ಆತ್ಮವೃತ್ತಾಂತದ ಮೊದಲ ಚರಣ’ ಎಂಬ ಟ್ಯಾಗ್‌ಲೈನ್‌ನೊಂದಿಗೆ ಐದನೇ ಮುದ್ರಣ ಕಂಡಿರುವ ಈ ಕೃತಿಯೊಂದಿಗಿನ ಓದಿನ ಯಾನ ನನ್ನ ತರಗತಿಯ ಚರ್ಚೆಯ ಮುಂದುವರಿದ ಭಾಗದಂತಿತ್ತು. ವ್ಯಕ್ತಿಗತ ಯಶಸ್ಸನ್ನು ಸಮಾಜಪರ-ಜನಪರ ಕೆಲಸಗಳೊಂದಿಗೆ ಸಮೀಕರಿಸಿ ಸಾಧನೆ ಸಾಧ್ಯವಾಗಿಸಿಕೊಂಡ ಹಿಂದಿನ ಮತ್ತು ವರ್ತಮಾನದ ಎಲ್ಲಾ ಸಾಧಕರೊಳಗೆ ಪಬ್ಲಿಕ್ ರಿಲೇಷನ್ಸ್ ತಂತ್ರಜ್ಞ ಕ್ರಿಯಾಶೀಲತೆ ಇರುತ್ತದೆ ಎಂಬ ನನ್ನ ತರಗತಿಯ ಪ್ರತಿಪಾದನೆಗೆ ಪೂರಕವಾದ ಸಮರ್ಥನಾ ಸಾಕ್ಷ್ಯವಾಗಿ ಇಡೀ ಕೃತಿ ಸಹಾಯಕವಾಯಿತು.

ಖಾಸಗೀಕರಣವೊಂದೇ ಸದ್ಯದ ಎಲ್ಲ ಬಗೆಯ ಸಮಸ್ಯೆಗಳಿಗೆ ಪರಿಹಾರೋಪಾಯ ಎಂಬ ಪೂರ್ವಗ್ರಹಪೀಡಿತ-ಅವಸರದ ದೃಷ್ಟಿಕೋನವೇ ವಿಜೃಂಭಿಸುತ್ತಿರುವಾಗ ಸರ್ಕಾರೀ ಆಡಳಿತದ ಪರಿಕಲ್ಪನೆಯೊಳಗೇ ಇರುವ ಸರ್ವೋದಯದ ಪ್ರಾಯೋಗಿಕ ಆಯಾಮವನ್ನು ಗಂಭೀರವಾಗಿ ಪರಿಗಣಿಸಬೇಕಾದ ಸಕಾರಾತ್ಮಕ ಒತ್ತಡವನ್ನು ‘ಹಾದಿಗಲ್ಲು’ ಸೃಷ್ಟಿಸುತ್ತದೆ. ಈ ಕೃತಿಯ ಓದು ಶುರುವಾಗುವ ಮುನ್ನಾದಿನದ ನನ್ನ ತರಗತಿಯಲ್ಲಿ ಸರ್ಕಾರಿ ವ್ಯವಸ್ಥೆಯೊಳಗೆ ಪಿಆರ್ ಸ್ವಾಯತ್ತ ಸಂಸ್ಥೆಯಾಗಿ ರಾಷ್ಟ್ರ, ರಾಜ್ಯ ಮತ್ತು ಜಿಲ್ಲಾವಾರು ಮಟ್ಟಗಳಲ್ಲಿ ಹೇಗೆ ಕಾರ್ಯನಿರ್ವಹಿಸಬಹುದು ಎಂಬುದನ್ನು ಪ್ರಸ್ತಾಪಿಸಿದ್ದೆ.

ದಯಾನಂದ ಅವರು ಬರೆದ ಒಂದೊಂದು ಅಧ್ಯಾಯವೂ ನನ್ನ ಪ್ರತಿಪಾದನೆಗೆ ಸಹಾಯಕವಾಗುವ ಬೌದ್ಧಿಕ ಪ್ರಾಯೋಗಿಕ ಸಂಪನ್ಮೂಲವಾಗಿ ಒದಗಿಬಂದಿದ್ದು ಒಂದು ವಿಶೇಷ ಅನುಭವ. ಒಂದು ಅಧ್ಯಾಯದಿಂದ ಮತ್ತೊಂದು ಅಧ್ಯಾಯಕ್ಕೆ ದಾಟಿಕೊಳ್ಳುವಾಗಲೆಲ್ಲಾ ಅವರೊಳಗೆ ಸುಪ್ತವಾದ ಸಾರ್ವಜನಿಕ ಸಂಪರ್ಕ ಕೌಶಲ್ಯದೊಂದಿಗೆ ಬೆರೆತುಹೋದ ಮನುಷ್ಯಪರ ಕಾಳಜಿ ಸರ್ಕಾರಿ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾಯಿಸಬಹುದು ಎಂಬ ಆಶಾವಾದ ಗಟ್ಟಿಗೊಳ್ಳುತ್ತಲೇ ಇತ್ತು.

ಉನ್ನತ ಹಂತದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ತಾನು ಪ್ರತಿನಿಧಿಸುವ ಆಡಳಿತಾತ್ಮಕ ವ್ಯವಸ್ಥೆಯೊಳಗೆ ಸಮಗ್ರ ಬದಲಾವಣೆ ತರುವ ಕನಸನ್ನು ಬಿತ್ತಿ ಸಮೃದ್ಧಿಯನ್ನು ನೆಲೆಗೊಳಿಸುವ ಮಾದರಿಗಳನ್ನು ಸೃಷ್ಟಿಸಬಹುದು. ಎಲ್ಲವೂ ಸರಿಯಿಲ್ಲ ಎಂಬ ಹತಾಶೆಗಿಂತಲೂ ಮಿತಿಗಳನ್ನೇ ಗುರುತಿಸಿ ಅವುಗಳನ್ನೇ ಸಮೃದ್ಧಿಯ ಕಡೆಗೆ ಪಯಣಿಸಲು ಒತ್ತಡವನ್ನುಂಟುಮಾಡುವ ಅಪೂರ್ವ ಅವಕಾಶಗಳನ್ನಾಗಿಸಿಕೊಂಡರೆ ಬದಲಾವಣೆ ಸಾಧ್ಯವಾಗುತ್ತದೆ. ಈ ಬಗೆಯ ಮಹತ್ವದ ಬದಲಾವಣೆಗಾಗಿ ಮ್ಯಾನೇಜ್‌ಮೆಂಟಿನ ಅಕ್ಯಾಡೆಮಿಕ್ ಅಧ್ಯಯನದ ಅವಶ್ಯಕತೆ ಇಲ್ಲ.

ಸದಾ ಸಕಾರಾತ್ಮಕ ಮನೋಬಲ, ವ್ಯಕ್ತಿಗತ ಬದುಕಿನ ಅನುಭವಗಳು, ಸ್ವತಃ ಕಂಡುಕೊಂಡ ವಿನೂತನ ಅವಲೋಕನದ ಮಾದರಿ, ಜಗತ್ತನ್ನು, ಸುತ್ತಮುತ್ತಲಿನ ಘಟನೆ- ಮನುಷ್ಯ ವರ್ತನೆಗಳನ್ನು ಸೂಕ್ಷ್ಮವಾಗಿ ನೋಡುವ ಚಿಕಿತ್ಸಕ ದೃಷ್ಟಿಕೋನ, ವೃತ್ತಿಪರ ಯಶಸ್ಸಿನ ಸ್ಪಷ್ಟ ಪ್ರಜ್ಞೆ- ಇವಿಷ್ಟೂ ಇದ್ದರೆ ಬಹುದೊಡ್ಡ ಸಾಮಾಜಿಕ ಪಲ್ಲಟಗಳಿಗೆ ಕಾರಣವಾಗಬಲ್ಲ ಕೊಡುಗೆಗಳನ್ನು ನೀಡಬಹುದು. ‘ಹಾದಿಗಲ್ಲು’ ಇಂಥದ್ದೊಂದು ಒಳನೋಟವನ್ನು ಕಟ್ಟಿಕೊಳ್ಳಲು ನೆರವಾಗುತ್ತದೆ.

ಮ್ಯಾನೇಜ್‌ಮೆಂಟ್ ಅಕ್ಯಾಡೆಮಿಕ್ ವಲಯದಲ್ಲಿ ಮತ್ತೆ ಮತ್ತೆ ಪ್ರಸ್ತಾಪಿತವಾಗುವ ಸ್ವಾಟ್ ಅನಾಲಿಸಿಸ್ (SWOT Analysis – Strengths, Weaknesses, Opportunities and Threats)ಪರಿಕಲ್ಪನೆಯು ಪರಿಣಾಮಕಾರಿಯಾಗಿ ಪ್ರಯೋಗಕ್ಕೊಳಪಡಬೇಕಾಗಿರುವುದು ಸರ್ಕಾರೀ ಆಡಳಿತಾತ್ಮಕ ಹಂತಗಳಲ್ಲಿ. “ಯೋಜನೆಗಳು ರೂಪುಗೊಳ್ಳುತ್ತವೆ, ಹಾಗೆ ರೂಪುಗೊಂಡು ಅನುಷ್ಠಾನಗೊಳ್ಳದೇ ನಿಷ್ಪ್ರಯೋಜಕವೆನ್ನಿಸುತ್ತವೆ” ಎಂಬ ಸಾರ್ವತ್ರಿಕ ಟೀಕೆ ಈಗಲೂ ವ್ಯಕ್ತವಾಗುತ್ತಲೇ ಇರುತ್ತದೆ.

ಯಾರದೋ ಪ್ರಬಂಧಕ್ಕೆ, ಇನ್ಯಾರದೋ ಭಾಷಣಕ್ಕೆ, ಮತ್ತಿನ್ಯಾರದೋ ಭಾವಾವೇಶಭರಿತ ಜನಪ್ರಿಯ ಸ್ವರೂಪದ ವಾಕ್ ವಾಹಕ್ಕೆ ಈ ಟೀಕಾತ್ಮಕ ಹೇಳಿಕೆಯ ಧ್ವನಿ ಪುನರಾವರ್ತಿತವಾಗುತ್ತಲೇ ಇರುತ್ತದೆ. ಆಡಳಿತ ಮತ್ತು ವಿರೋಧ ಪಕ್ಷಗಳವರು ಈ ಹೇಳಿಕೆಯನ್ನು ದೃಷ್ಟಿಯಲ್ಲಿರಿಸಿಕೊಂಡೇ ಆ ಕ್ಷಣದ ಲಾಭ ಪಡೆದುಕೊಳ್ಳುವ ತಾತ್ಪೂರ್ತಿಕ ಉದ್ದೇಶವನ್ನು ಈಡೇರಿಸಿಕೊಳ್ಳುತ್ತಲೇ ಇರುತ್ತಾರೆ.

ಟಿಆರ್‌ಪಿ ಎಂಬ ಮಹಾಮಾಯೆಯ ಹಿಡಿತಕ್ಕೊಳಗಾದ ಸುದ್ದಿಮಾಧ್ಯಮಗಳೂ ಇವುಗಳನ್ನೇ ವೈಭವೀಕರಿಸುತ್ತವೆ.ಯೋಜನೆಗಳ ಕಟ್ಟುನಿಟ್ಟಿನ ಅನುಷ್ಠಾನ ಮತ್ತು ಹೊಸ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಸರ್ಕಾರಿ ವ್ಯವಸ್ಥೆಯ ಪುನರುತ್ಥಾನದ ಕುರಿತ ಪರಿಹಾರೋಪಾಯದ ತಾರ್ಕಿಕ ಸಂವಾದ ನಡೆದರೂ ಅದು ಸಂಪೂರ್ಣವಾಗಿ ಆಡಳಿತಾತ್ಮಕ ಪ್ರಾಯೋಗಿಕತೆಯಲ್ಲಿ ಪ್ರತಿಫಲಿತವಾಗದೇ ಉಳಿದುಬಿಟ್ಟಿದೆ.

ಬರೀ ಚರ್ಚೆ, ಸಮಾಲೋಚನೆ, ಚಿಂತನೆಗಳು, ಪ್ರಯತ್ನಗಳು ಬಿಡಿಬಿಡಿಯಾಗಿ ನಡೆದವೇ ಹೊರತು ನಿರೀಕ್ಷಿತ ಆಡಳಿತಾತ್ಮಕ ಪ್ರಯೋಗಶೀಲತೆ ಸಮಗ್ರವಾಗಿ ವ್ಯಕ್ತವಾಗಲಿಲ್ಲ. ಇಂಥದ್ದೊಂದು ಕೊರಗಿನೊಂದಿಗೇ ಹೊಸ ಪೀಳಿಗೆ ಬದುಕಬೇಕಾಗಿಲ್ಲ ಎಂಬುದನ್ನು ‘ಹಾದಿಗಲ್ಲು’ ಸ್ಪಷ್ಟಪಡಿಸುತ್ತದೆ. ಆಡಳಿತಾತ್ಮಕ ಪ್ರಯೋಗಶೀಲತೆ ಯಾವ ಯಾವ ರೀತಿಯಲ್ಲಿ ಅಳವಡಿಸಲ್ಪಡಬಹುದು ಎಂಬ ದಾರಿಗಳನ್ನು ಕಾಣಿಸುತ್ತದೆ.

ಆಡಳಿತದ ವಿವಿಧ ಹುದ್ದೆಗಳ ವಿವಿಧ ಹಂತಗಳ ಕಾರ್ಯನಿರ್ವಹಣೆಯು ಆಯಾ ಕಾಲದ ಅಗತ್ಯಗಳಿಗೆ ತಕ್ಕಂತೆ ಹೇಗೆ ಪುನರ್‌ಸ್ವರೂಪ ಪಡೆದುಕೊಳ್ಳಬಹುದು ಎಂಬ ಹೊಳಹುಗಳನ್ನು ಹೊಳೆಸುತ್ತದೆ. ‘ಅಧಿಕಾರ’ ಮತ್ತು ‘ಅಧಿಕಾರಿ’ ಈ ಎರಡೂ ಪದಗಳ ಕುರಿತು ಬೇರೂರಿಬಿಟ್ಟಿರುವ ಹತಾಶೆ, ಅಸಮಾಧಾನ ಮತ್ತು ಆಕ್ರೋಶದ ಭಾವಗಳೆಲ್ಲವನ್ನೂ ಇಲ್ಲವಾಗಿಸಿ ಅವುಗಳ ಸ್ಥಾನಗಳಲ್ಲಿ ಆಶಾವಾದ, ಆತ್ಮಸಂತೃಪ್ತಿ ಮತ್ತು ಹೊಂಗನಸುಗಳ ಮಹತ್ವಾಕಾಂಕ್ಷೀ ಮನೋಬಲವನ್ನು ನೆಲೆಗೊಳಿಸಿಕೊಳ್ಳಲು ಈ ಕೃತಿಯು ಪ್ರೇರಣೆ ನೀಡುತ್ತದೆ.

ಐಎಎಸ್, ಕೆಎಎಸ್ ಅಧಿಕಾರಿಗಳ ಬಗ್ಗೆ ಜನರಲ್ಲಿ ತಪ್ಪುಕಲ್ಪನೆಯೊಂದಿದೆ. ಎಲ್ಲರೂ ಹೀಗೆ ಯೋಚಿಸುವುದಿಲ್ಲವಾದರೂ ಇದು ಇಡೀ ಸಾಮುದಾಯಿಕ ದೃಷ್ಟಿಕೋನದ ಮೇಲೆಯೇ ಪ್ರಭಾವ ಬೀರುತ್ತದೆ. ಅದೇನೆಂದರೆ, ಅಷ್ಟೆಲ್ಲಾ ಕಷ್ಟಪಟ್ಟು ಓದಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸಾಗಿ ಅಧಿಕಾರಿಗಳಾಗಿ ನೇಮಕಗೊಂಡು ಏನನ್ನೂ ಓದಿಕೊಳ್ಳದ, ವಿಚಿತ್ರ ಧೋರಣೆಗಳೊಂದಿಗಿನ ಮಂತ್ರಿಗಳು, ರಾಜಕಾರಣಿಗಳ ಮುಂದೆ ಕೈಕಟ್ಟಿ ನಿಲ್ಲಬೇಕಾಗುತ್ತದೆ, ಅಂಥದ್ದೊಂದು ವಿಚಿತ್ರ ಸ್ಥಿತಿ ಎದುರಿಸಿ ಸ್ವಾಭಿಮಾನ ಬಲಿಕೊಡಬಾರದು ಎನ್ನುವ ಅವಸರದ ಧಾಟಿಯ ಮಾತುಗಳು ಕೇಳಿಬರುತ್ತವೆ.

ಇಂಥ ಅವಸರವಾದಿ ದೃಷ್ಟಿಕೋನಗಳನ್ನು ‘ಹಾದಿಗಲ್ಲು’ ಅಲ್ಲಗಳೆಯುತ್ತದೆ. ಐಎಎಸ್, ಕೆಎಎಸ್ ಅಧಿಕಾರಿ ಹುದ್ದೆಗಳು ಪ್ರತಿಷ್ಠಿತ ಮಂತ್ರಿಮಹೋದಯರ ಗುಲಾಮಗಿರಿಯ ಸಂಕೇತಗಳಲ್ಲ ಎಂಬುದನ್ನು ಅಧಿಕೃತವಾಗಿ ದೃಢಪಡಿಸುತ್ತದೆ. ವ್ಯಕ್ತಿಗತ ವೃತ್ತಿಬದ್ಧತೆ, ಬದಲಾವಣೆಗೆ ತುಡಿಯುವ ಅಂತರ್ಗತ ಶಕ್ತಿ, ಸದ್ಯದ ಕಾಲದ ಸವಾಲುಗಳಿಗೆ ಎದುರುಗೊಂಡು ಹೊಸತಾದ ಮುನ್ನಡೆ ಸಾಧಿಸುವ ಸೌಜನ್ಯಯುತ ಛಲವೊಂದಿದ್ದರೆ ಈ ಹುದ್ದೆಗಳ ನಿರ್ವಹಣೆಯು ಆತ್ಮತೃಪ್ತಿಯನ್ನು ತಂದುಕೊಡುತ್ತದೆ ಎಂಬುದನ್ನು ದಯಾನಂದ ಅವರು ಸ್ವಾನುಭವದ ನಿದರ್ಶನಗಳ ಮೂಲಕ ಸಾಬೀತುಪಡಿಸಿದ್ದಾರೆ.

ತಾವು ವಿವಿಧ ಇಲಾಖೆಗಳ ನೇತೃತ್ವ ವಹಿಸಿದಾಗಲೆಲ್ಲಾ ನಿಯಮಾವಳಿಗಳಿಗೆ ಅನುಗುಣವಾಗಿ ಅನುಷ್ಟಾನಕ್ಕೆ ತಂದ ಯೋಚನೆ, ಯೋಜನೆಗಳು, ನೊಂದವರಿಗೆ ನ್ಯಾಯ ದೊರಕಿಸಿಕೊಟ್ಟ ತತ್‌ಕ್ಷಣದ ಕ್ರಮಗಳು, ಇಲಾಖೆಗಳಿಗೆ ಆಧುನಿಕ ತಾಂತ್ರಿಕಸ್ಪರ್ಶ ನೀಡಿದ ಕ್ರಾಂತಿಕಾರಿ ಹೆಜ್ಜೆಗಳು, ಎಲ್ಲಕ್ಕಿಂತ ಹೆಚ್ಚಾಗಿ ಉನ್ನತಾಧಿಕಾರಿ ಹುದ್ದೆಯ ವೃತ್ತಿಪರ ಮೌಲ್ಯವನ್ನು ವಿಸ್ತರಿಸಿದ ಅನೇಕ ಅನುಭವಗಳ ಆಪ್ತ ಉಲ್ಲೇಖವು ಇಡೀ ಕೃತಿಯನ್ನು ಬದಲಾವಣೆಯ ಮಹೋನ್ನತ ಸಾಧ್ಯತೆಗಳನ್ನು ಕಂಡರಿಸುವ ಪ್ರಾಯೋಗಿಕ ಜ್ಞಾನಸಂಪನ್ಮೂಲವನ್ನಾಗಿಸಿದೆ.

ಈ ಕೃತಿಯು ಕೇವಲ ಆಡಳಿತಾತ್ಮಕ ಹುದ್ದೆ ನಿರ್ವಹಣೆಯ ಸ್ವಾನುಭವ ವಿವರಗಳ ಸಂಕಲನವಷ್ಟೇ ಅಲ್ಲ. ಈಗಾಗಲೇ ಬಾಳಿಹೋದ ನಮ್ಮ ಹಿರಿಯ ತಲೆಮಾರುಗಳು ಹಾದುಬಂದ ಒಡಲಬೇಗೆಯನ್ನು ಅಕ್ಷರಗಳಲ್ಲಿ ಹಿಡಿದಿಡುವ ಸೃಜನಶೀಲ ಆಕೃತಿಯನ್ನಾಗಿಯೂ ಇದನ್ನು ಗ್ರಹಿಸಬಹುದು. ಸಾಮಾಜಿಕ ಏಣಿ-ಶ್ರೇಣಿ ವ್ಯವಸ್ಥೆಯೊಳಗೆ ಯಾತನೆ ಅನುಭವಿಸುತ್ತಾ ಬದಲಾವಣೆಯ ಹೊಂಗನಸುಗಳಿಂದ ದೂರ ಉಳಿದು ಅಭಿವೃದ್ಧಿಯ ಮುಖ್ಯವಾಹಿನಿ ಸೇರಿಕೊಳ್ಳುವ ಕನಸುಗಳಿಲ್ಲದೇ ಬದುಕುವ ಅನಿವಾರ್ಯತೆಯ ಗತದ ಕಾಲವನ್ನು ದಯಾನಂದ ಅವರು ಕಾಣಿಸುವ ಪರಿ ಅನನ್ಯ.

ಜಡಗೊಂಡ ಸಾಮಾಜಿಕ ವ್ಯವಸ್ಥೆಯಲ್ಲಿ ಪಲ್ಲಟಗಳನ್ನು ನೆಲೆಗೊಳಿಸುವ ಹೆಜ್ಜೆಗಳ ವಿವರಗಳನ್ನು ಸೌಜನ್ಯದ ಧಾಟಿಯಲ್ಲಿ ಮುಂದಿಡುತ್ತಲೇ ಸಾಂಸ್ಕೃತಿಕ ಪ್ರಜ್ಞೆಯನ್ನು ಕಟ್ಟಿಕೊಳ್ಳಲು ಬೇಕಾದ ಒಳನೋಟಗಳು ಅವರ ಬರಹಕ್ಕೆ ಜೀವಂತಿಕೆಯನ್ನು ತಂದುಕೊಟ್ಟಿವೆ. ಅವರೊಳಗಿನ ಅಪ್ಪಟ ಸಾಹಿತ್ಯಕ ವಿಮರ್ಶಕನನ್ನು ಈ ಕೃತಿ ಪರಿಚಯಿಸಿದೆ.

ಕುವೆಂಪು, ಪೂರ್ಣಚಂದ್ರ ತೇಜಸ್ವಿ, ಡಿ.ವಿ.ಜಿ ಅವರಂಥ ಪ್ರತಿಭೆಗಳನ್ನು ದಯಾನಂದ್ ವರ್ತಮಾನದಲ್ಲಿ ನಿಂತು ಗ್ರಹಿಸುವ ಬಗೆ ನಮ್ಮನ್ನು ಚಿಂತನೆಗೆ ಹಚ್ಚುತ್ತದೆ. ಕೆಲವು ಸಿನಿಮಾಗಳ ಪ್ರಸ್ತಾಪದ ಮೂಲಕ ಮೌಲ್ಯಪರ ಆಲೋಚನಾಕ್ರಮಗಳ ವೈಶಿಷ್ಟ್ಯತೆಯನ್ನು ಮನಗಾಣಿಸುತ್ತಾರೆ. ಅಧ್ಯಾಯಗಳಲ್ಲಿ ಕಾಣಿಸಿಕೊಳ್ಳುವ ಪಾತ್ರಗಳು ಕೇವಲ ನೆನಪುಗಳ ಯಾನದ ಸಹಭಾಗೀ ಯಾತ್ರಿಕರು ಮಾತ್ರವಲ್ಲ.

ನನಗೆ ತುಂಬಾ ಇಷ್ಟವಾದ ಪಾತ್ರವ್ಯಕ್ತಿತ್ವಗಳೆಂದರೆ ದಯಾನಂದ ಅವರ ತಂದೆ, ತಾಯಿ ಮತ್ತು ಹುಚ್ಚಮ್ಮತ್ತೆ. ಅಪ್ಪನನ್ನು ಅವರು ಆಧ್ಯಾತ್ಮ ಜೀವಿ ಎಂದು ಗುರುತಿಸುತ್ತಾರೆ. ತಾಯಿಯು ಅವರ ದೃಷ್ಟಿಯಲ್ಲಿ ಆರ್ಥಿಕ ತಜ್ಞೆ. ಹುಚ್ಚಮ್ಮ ಅವರ ತಂದೆಯ ತಂಗಿ. ಅವರ ಮನೆದೇವರ ಹೆಸರನ್ನೇ ಅಜ್ಜ ತನ್ನ ಅತ್ತೆಗೆ ಇಟ್ಟದ್ದನ್ನು ನೆನಪಿಸಿಕೊಳ್ಳುತ್ತಲೇ ತಮ್ಮ ಪಾಲಿನ ನಿಜದ ದೇವರಾಗಿ ಪ್ರಭಾವಿಸಿದ್ದನ್ನು ಪ್ರಸ್ತಾಪಿಸಿದ ಬರಹವು ಜನರ ನೋವಿಗೆ ಸ್ಪಂದಿಸುವ ವ್ಯಕ್ತಿತ್ವ ರೂಪಿಸಿಕೊಳ್ಳಲು ಹುಚ್ಚಮ್ಮತ್ತೆಯೇ ಪ್ರೇರಣೆಯಾಗಿರುವ ದಿವ್ಯತೆಗೆ ಕನ್ನಡಿ ಹಿಡಿಯುತ್ತದೆ.

‘ಚರ್ಮವನ್ನೇ ಚಪ್ಪಲಿಯಾಗಿಸಿಕೊಂಡ ಅಪ್ಪ’ ಶೀರ್ಷಿಕೆಯ ಬರಹವು ಆ ಕಾಲದ ಆರ್ಥಿಕ ದುಃಸ್ಥಿತಿಯ ಸಾಮಾಜಿಕ ರೂಪವನ್ನು ಅನಾವರಣಗೊಳಿಸುತ್ತದೆ. ಇದನ್ನು ಓದುವಾಗ ಮತ್ತೆ ಮತ್ತೆ ನೆನಪಿಗೆ ಬಂದದ್ದು ಪುನೀತ್ ರಾಜಕುಮಾರ್ ಬಾಲನಟರಾಗಿ ಅಭಿನಯಿಸಿದ ‘ಬೆಟ್ಟದ ಹೂವು’ ಸಿನಿಮಾ. ಅಮ್ಮನ ದುಃಖ ದುಮ್ಮಾನಗಳ ನಡುವೆ ಓದುವ ಕನಸನ್ನು ಜೀವಂತವಾಗಿರಿಸಿಕೊಂಡ ಹುಡುಗ ಕುವೆಂಪು ಅವರ ಕೃತಿಯನ್ನು ಕೊಂಡುಕೊಳ್ಳಲು ದುಡ್ಡು ಹೊಂದಿಸಿಕೊಳ್ಳಲು ಹೆಣಗಾಡುತ್ತಾನೆ.

ಕೊನೆಗೆ ದುಡಿಮೆಯ ದುಡ್ಡನ್ನು ಹೇಗೋ ಹೊಂದಿಸಿಕೊಂಡು ಆ ಕೃತಿಯನ್ನು ಕೊಂಡುಕೊಳ್ಳಬೇಕು ಎನ್ನುವಷ್ಟರಲ್ಲಿ ಚಳಿಗಾಲದ ಚಳಿಯಿಂದ ರಕ್ಷಿಸಿಕೊಳ್ಳಲು ಕಂಬಳಿಯ ಅಗತ್ಯ ಮನಗಂಡು ಕೃತಿಯನ್ನು ಓದುವ ಕನಸನ್ನು ಬಿಟ್ಟುಕೊಡುತ್ತಾನೆ. ಬಡತನವು ಎಳೆಯರ ಮನಸುಗಳ ಒಡಲಾಳದ ಕನಸುಗಳ ಬಲಿ ಕೇಳುವ ವೈರುಧ್ಯವನ್ನು ಎನ್.ಲಕ್ಷ್ಮೀನಾರಾಯಣ ಅವರು ಮನಮುಟ್ಟುವಂತೆ ಸಿನಿಮಾದಲ್ಲಿ ಬಿಂಬಿಸಿದ್ದರು.

ದಯಾನಂದ ಅವರು ಈ ಬರಹದ ಮೂಲಕ ಆತ್ಮಕಥನಕ್ಕೆ ಕಾವ್ಯಾತ್ಮಕ ಪ್ರತಿಮೆಯ ಆಯಾಮವನ್ನು ಒದಗಿಸಿಕೊಟ್ಟಿದ್ದಾರೆ. ಇದನ್ನು ಶೀರ್ಷಿಕೆಯೇ ಧ್ವನಿಸುತ್ತದೆ. ಮತ್ತೊಂದು ಅಧ್ಯಾಯದಲ್ಲಿ ಇದೇ ಬರಹದ ಧ್ವನಿ ದಾರ್ಶನಿಕ ಪ್ರತಿಪಾದನೆಯ ಎತ್ತರ ಪಡೆದುಕೊಳ್ಳುತ್ತದೆ. ಆಡಿ-ಕೂಡಿ ಬಾಳುವ ನಮ್ಮತನವು ಬಡತನದ ನಿವಾರಣೆಗಾಗಿಯೋ, ಸಂಪತ್ತಿನ ಆಸೆಗಾಗಿಯೋ ಬಲಿಯಾಗುತ್ತಿರುವುದಂತೂ ಕಟು ಸತ್ಯ ಎಂಬ ಅವರ ವ್ಯಾಖ್ಯಾನವು ವರ್ತಮಾನದ ಬದುಕನ್ನು ವಿಭಿನ್ನವಾಗಿ ಅರ್ಥೈಸಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಪುರಾಣ ಮತ್ತು ಇತಿಹಾಸದ ಕುರಿತ ಹೊಸದಾದ ವಿಚಾರ ಲಹರಿಯನ್ನೊಳಗೊಂಡ ಬರಹಗಳು ನಮ್ಮನ್ನು ಹೊಸ ರೀತಿಯಲ್ಲಿ ಆಲೋಚಿಸುವಂತೆ ನೆರವಾಗುತ್ತವೆ. ಪುರಾಣಗಳ ಕಾಲ್ಪನಿಕತೆಯೊಳಗೇ ಇರುವ ವಾಸ್ತವವಾದಿ ನೆಲೆಗಳನ್ನು ಶೋಧಿಸುತ್ತವೆ. ಇಲ್ಲದ ಇತಿಹಾಸವನ್ನು ಸೃಷ್ಟಿಸುವ ವರ್ತಮಾನದ ವಿಚಿತ್ರ ಜಾಯಮಾನವನ್ನು ನಿರಾಕರಿಸಿ ಇಸಿಹಾಸವನ್ನು ನೋಡುವ ಬಗೆ ಹೇಗೆಂಬುದನ್ನು ತಿಳಿಸಿಕೊಡುತ್ತವೆ.

ಸಾಮಾಜಿಕ ಸ್ಥಿತ್ಯಂತರಗಳು ಮತ್ತು ಅವುಗಳಿಗೆ ಅನುಗುಣವಾಗಿ ಆಡಳಿತಾತ್ಮಕ ಮಾದರಿಗಳನ್ನು ಮರುರೂಪಿಸಿದ ಪ್ರಯೋಗಶೀಲತೆಯ ಸಾಧ್ಯತೆಯನ್ನು ಈ ಕೃತಿ ಅಂತಃಕರಣದ ಭಾಷೆಯಲ್ಲಿ ಚಿತ್ರಿಸಿದೆ. ಇಡೀ ಕೃತಿಯು ಹಿರಿಯ ಮತ್ತು ಕಿರಿಯ ಅಧಿಕಾರಿಗಳಿಗೆ ಆಡಳಿತಾತ್ಮಕ ಮಾದರಿಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಮಾರ್ಗದರ್ಶಿಯೂ ಹೌದು. ಕೇವಲ ಅಧಿಕಾರಿಗಳಿಗೆ ಮಾತ್ರವಲ್ಲ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ನೌಕರರು ಇದನ್ನೊಮ್ಮೆ ಓದಲೇಬೇಕು.

ಅಧಿಕಾರಿಗಳಾಗಿ ಸಾಧನೆಗೈಯ್ಯುವ ಕನಸುಳ್ಳ ಯುವ ಪೀಳಿಗೆ ಈ ಕೃತಿಯ ಪುಟಗಳೊಂದಿಗೆ ಸಂವಾದಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ತಮ್ಮದೇ ಪ್ರತಿಷ್ಠೆಯ ಗುಂಗಿನಲ್ಲೇ ರಾಜಕಾರಣದ ಮಹತ್ವಪೂರ್ಣ ಅವಧಿಯನ್ನು ಕಳೆಯುವ ಜನಪ್ರತಿನಿಧಿಗಳು ಅತ್ಯಂತ ಶ್ರದ್ಧೆಯಿಂದ ಓದಿಕೊಳ್ಳಬೇಕು. ಮಂತ್ರಿಗಳೆನ್ನಿಸಿಕೊಂಡವರು ‘ತಮ್ಮ ಬಿಡುವಿಲ್ಲದ ಕಾರ್ಯದೊತ್ತಡಗಳ!?’ ಮಧ್ಯೆ ಈ ಕೃತಿಗಾಗಿಯೇ ಸಮಯ ಮೀಸಲಿರಿಸಿ ದೂರದರ್ಶಿತ್ವದ ಗುಣದ ಪಾಠವನ್ನು ಕಲಿತುಕೊಳ್ಳಬೇಕು.

ಈ ಕೃತಿ ಇಂಗ್ಲಿಷ್‌ಗೆ ಅನುವಾದಿತಗೊಂಡು ರಾಷ್ಟ್ರ ದ ವಿವಿಧ ರಾಜ್ಯಗಳವರೂ ಓದುವಂತಾಗಬೇಕು. ಸಾಮಾಜಿಕ ಬದಲಾವಣೆಯ ಕನಸು ಸಂಪೂರ್ಣವಾಗಿ ಈಡೇರುವುದಕ್ಕೆ ಇಡೀ ಆಡಳಿತಾತ್ಮಕ ವ್ಯವಸ್ಥೆಯನ್ನು ಸಿದ್ಧಗೊಳಿಸುವುದಕ್ಕೆ ಈ ಓದು ಸಹಾಯಕವಾಗಬೇಕು. ಹಾಗಾದಾಗ ಮಾತ್ರ ಇಡೀ ಸರ್ಕಾರೀ ಆಡಳಿತ ವ್ಯವಸ್ಥೆಯೊಳಗೆ ಸಮಗ್ರ ಬದಲಾವಣೆ ತರಲು ಪೂರಕವಾಗುವಂಥ ಪಬ್ಲಿಕ್ ರಿಲೇಷನ್ಸ್ ಎಂಬ ಪ್ರತ್ಯೇಕ ಸ್ವಾಯತ್ತ ಸಂಸ್ಥೆ ಸ್ಥಾಪಿತವಾಗಬಹುದು.

ಅಂಥ ಸಂಸ್ಥೆಯ ಮುಂಚೂಣಿ ನಾಯಕರಾಗಿ ಕೆ.ಎ.ದಯಾನಂದ ಅವರಂಥ ಅಧಿಕಾರಿಗಳೇ ಕಂಗೊಳಿಸಬಹುದು. ಜನರನ್ನು ನಲುಗಿಸುತ್ತಿರುವ ಎಲ್ಲ ಬಗೆಯ ಸಂಕಟಗಳಿಂದ ಪಾರುಮಾಡುವ ಸರ್ವೋದಯದ ಸಾಧ್ಯತೆಗಳು ಸರ್ಕಾರಿ ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಕಾಣಿಸಿಕೊಳ್ಳಬಹುದು. ಜನಕಲ್ಯಾಣದ ಆದರ್ಶ ರಾಷ್ಟ್ರವಾಗಿ ಭಾರತ ರೂಪುಗೊಂಡು ಜಗತ್ತನ್ನು ಸೆಳೆಯಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕವಿತೆ | ನೆನಪು

Published

on

ಕವಿ | ರುದ್ರಪ್ಪ ಹನಗವಾಡಿ
  • ರುದ್ರಪ್ಪ ಹನಗವಾಡಿ

ಅಪ್ಪನನ್ನು ಒಪ್ಪ ಮಾಡಿ
ವರ್ಷಗಳೇ ಕಳೆದವು ಮುವ್ವತ್ತೇಳು
ಇಂದಿರಾಗಾಂಧಿಯ ತುರ್ತು ಪರಿಸ್ಥಿತಿ
ಅರಸರ ಮೀಸಲಾತಿ
ಬಸವಲಿಂಗಪ್ಪನವರ ಬೂಸಾ ಖ್ಯಾತಿ
ಮಲ ಹೊತ್ತು
ಮಲಗಿದ್ದ ಕಾಲಕ್ಕೆ
ಚುರುಕು ಮುಟ್ಟಿಸಿದ ಕಾಲ

ಹರೆಯದ ನನಗೆ
ಕಾಲೇಜ ಮೇಷ್ಟರ ಕೆಲಸ
ಸೂಟು ಬೂಟಿನ ವೇಷ
ಆ ಮೇಲೆ ಅಮಲದಾರಿಕೆ
ಎಲ್ಲ ನಡೆದಾಗಲೇ ಅವ್ವನನ್ನು
ಆಸ್ಪತ್ರೆಗೆ ಸೇರಿಸಿದ್ದು
ಕಾಲ ಕಳೆದು ಕೊಂಡು
ಕೋಲ ಹಿಡಿದದ್ದು
ನಿನ್ನೆ ಮೊನ್ನೆಯಂತೆ
ಬಾಲ್ಯವಿನ್ನು ಉಂಟೆಂಬಂತೆ
ಭಾವಿಸುವಾಗಲೇ ಅವ್ವನ ಸಾವು

ಅದರೊಟ್ಟಿಗೆ ಕಾಯದಾಯಾಸ ತೀರಿಸಲು
ಬಂದರೆ ಬೆಂಗಳೂರಿಗೆ
ರೌಡಿಗಳ ಕಾಟ
ಅಂಬೇಡ್ಕರ್ ಪಟದ ಕೆಳಗೆ
ದೌರ್ಜನ್ಯದ ದಂಡು

ಅಮಾಯಕರಿಗೆ ಗುಂಡು
ಕಂಡುಂಡ ಹಾದಿಯ ಗುಡಿಸಲುಗಳಲ್ಲೀಗ
ಮುಗಿಲು ಮುಟ್ಟೋ ಮಹಲುಗಳು
ಅಂತಲ್ಲಿ
ದೇಶ ವಿದೇಶಗಳ
ಅಹವಾಲುಗಳು
ಅವಿವೇಕಗಳು
ನೋಡ ನೋಡುತ್ತಿದ್ದಂತೆ
ಉಸಿರು ಬಿಗಿಹಿಡಿದ ಜನರ ಒಳಗೆ
ಒಳಪದರಗಳೊಳಗೆ ಕನಸ ಬಿತ್ತಿ
ಹಸಿರ ಹೊನ್ನು ಬಾಚಲು ಹವಣಿಸಿದ
ಬಿಳಿ ಜನರ ಆಟ
ಅರ್ಥವಾಗುವುದೇ ಎಲ್ಲ
ಗೋಣ ನೀಡುವರೆ
ಹೂತಿಟ್ಟ ಗೂಟಕ್ಕೆ ?

( ಚಿಂತಕ ರುದ್ರಪ್ಪ ಹನಗವಾಡಿ ಅವರ ‘ಊರು – ಬಳಗ’ ಕವನ ಸಂಕಲನದಿಂದ ‘ ನೆನಪು ‘ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕೃತಿಯನ್ನು ಫ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ 2013 ರಲ್ಲಿ ಪ್ರಕಿಸಿದೆ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ; ಒಂದು ಚಿಂತನೆ

Published

on

  • ಮಹಾಂತೇಶ್.ಬಿ.ನಿಟ್ಟೂರು, ದಾವಣಗೆರೆ

ನಿಜ ಶರಣ ಶ್ರೀ ಅಂಬಿಗರ ಚೌಡಯ್ಯನವರ ಜೀವಿತ ಕಾಲ 12 ನೇ ಶತಮಾನದ ಬಸವಾದಿ ಶರಣರ ಕಾಲದಲ್ಲೇ ಇತ್ತು ಎಂಬುದು ಇತಿಹಾಸಕಾರರ ಸಂಶೋಧನೆಯಿಂದ ತಿಳಿದು ಬರುತ್ತದೆ. ಅವರ ಹುಟ್ಟೂರು ಹಾವೇರಿ ಜಿಲ್ಲೆಯ ಆಗಿನ ಶಿವಪುರ, ಈಗಿನ ಚೌಡಯ್ಯದಾನಪುರ. ಅವರ ತಂದೆಯ ಹೆಸರು ಶ್ರೀ ವಿರೂಪಾಕ್ಷ, ತಾಯಿಯ ಹೆಸರು ಪಂಪಾಂಭಿಕೆ, ಹೆಂಡತಿಯ ಹೆಸರು ಸುಲೋಚನಾ ಹಾಗೂ ಮಗನ ಹೆಸರು ಪುರವಂತ.

ಅಂಬಿಗ ವೃತ್ತಿಯ ಚೌಡಯ್ಯನವರು ಅಲ್ಲಮ ಪ್ರಭು ಮತ್ತು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಇದ್ದ ಒಬ್ಬ ಕ್ರಾಂತಿಕಾರಿ, ದಿಟ್ಟ, ನೇರ, ನಿಷ್ಠುರ ನುಡಿಯ ವಚನಕಾರ. ಕಲ್ಯಾಣ ಕ್ರಾಂತಿಯ ನಂತರ ಇವರು ತಮ್ಮ ವಚನಗಳ ಗಂಟನ್ನು ಹೊತ್ತು ಉಳವಿಗೆ ನಂತರ ತಮ್ಮ ಗ್ರಾಮವಾದ ತುಂಗಭದ್ರಾ ನದಿಯ ದಡದ ಮೇಲಿರುವ ಶಿವಪುರಕ್ಕೆ ಬಂದು ದೋಣಿ ನಡೆಸುವ ವೃತ್ತಿಯಲ್ಲಿ ನಿರತರಾಗಿ ವಚನ ರಚನೆ ಮಾಡಿರುವುದು ತಿಳಿದು ಬರುತ್ತದೆ.

ಚೌಡಯ್ಯನವರು ತಮ್ಮ ಜೀವಿತಾವಧಿಯಲ್ಲಿ ಅನೇಕ ಪವಾಡಗಳನ್ನು ಮಾಡಿರುತ್ತಾರೆ. ಗಿಡಮೂಲಿಕೆ ಔಷಧಿಗಳಿಂದ ಕ್ಷಯ ರೋಗ, ಕುಷ್ಠರೋಗ ಗುಣಪಡಿಸುವುದು, ಹಾವು ಕಚ್ಚಿದವರನ್ನು

ಬದುಕಿಸುವುದು ಇತ್ಯಾದಿ..

ಒಮ್ಮೆ ಗುತ್ತಲದ ಅರಸನು ಬೇಟೆಗಾಗಿ ಈ ಪ್ರದೇಶದಲ್ಲಿ ಸಂಚರಿಸುತ್ತಿದ್ದಾಗ, ಆತನ ಸೇನಾಧಿಪತಿಯು ಹಾವು ಕಚ್ಚಿ ಮೃತಪಟ್ಟನು. ಇದರಿಂದಾಗಿ ಅರಸನಿಗೆ ಅತೀವ ದುಃಖವುಂಟಾಗಿ ರೋಧಿಸತೊಡಗಿದನು. ಆಗ ಆತನ ಸೈನಿಕನೊಬ್ಬನು ಶ್ರೀ ಚೌಡಯ್ಯನವರ ಪವಾಡಗಳ ಬಗ್ಗೆ ವಿವರಿಸಿ ಹೇಳಲಾಗಿ, ಅರಸನು ತನ್ನ ಮೃತ ಸೇನಾಧಿಪತಿಯ ಶರೀರವನ್ನು ಚೌಡಯ್ಯನವರಲ್ಲಿಗೆ ತಂದು ಆತನನ್ನು ಬದುಕಿಸುವಂತೆ ಕೇಳಿಕೊಂಡರು, ಆಗ ಚೌಡಯ್ಯನವರು ಸೇನಾಧಿಪತಿಯನ್ನು ಬದುಕಿಸುತ್ತಾರೆ. ಇದರಿಂದ ಸಂತುಷ್ಟನಾದ ಅರಸನು ಶಿವಪುರದ ಸುತ್ತಲಿನ ಪೂರ್ವ – ಪಶ್ಚಿಮಕ್ಕೆ 14 ಮೈಲು ಹಾಗೂ ಉತ್ತರ – ದಕ್ಷಿಣಕ್ಕೆ 7 ಮೈಲು ಸುತ್ತಳತೆಯ ಭೂಮಿಯನ್ನು ಚೌಡಯ್ಯನವರಿಗೆ ದಾನವಾಗಿ ನೀಡಿದನು.

ಆದರೆ ಚೌಡಯ್ಯನರು ವೈರಾಗ್ಯಶಾಲಿಯು, ಲೌಕಿಕದಲ್ಲಿ ನಿರಾಸಕ್ತಿ ಹೊಂದಿದವರು ಆಗಿದ್ದರಿಂದ, ಅರಸನು ಕೊಡಮಾಡಿದ್ದ ಸಂಪೂರ್ಣ ಜಮೀನನ್ನು ತನ್ನ ಗುರುಗಳಾದ ಶ್ರೀ ಶಿವದೇವರಿಗೆ ದಾನವಾಗಿ ನೀಡಿದರು ಎಂಬ ಉಲ್ಲೇಖವಿದೆ. ಅಂದಿನಿಂದ ಶಿವಪುರ ಗ್ರಾಮಕ್ಕೆ ‘ಚೌಡಯ್ಯದಾನಪುರ’ ಎಂದು ಹೆಸರು ಬರುತ್ತದೆ. ಮುಂದೆ ಚೌಡಯ್ಯನರು ಅಲ್ಲಿ ದೇಹ ತ್ಯಾಗ ಮಾಡಿದ್ದರಿಂದ ತುಂಗಭದ್ರಾ ನದಿಯ ದಡದಲ್ಲಿ ಈಗಲೂ ಚೌಡಯ್ಯನವರ ಸಮಾಧಿ ಗದ್ದುಗೆ ಇದೆ.

ಭ್ರಮಾಲೋಕದಲ್ಲಿ ವಿಹರಿಸುತ್ತಾ ಕುಳಿತ, ಆಡಂಬರದಲ್ಲಿ ಅಡ್ಡಾದಿಡ್ಡಿ ಅಡ್ಡಾಡುವ ಮಂದಿಯ ಕಪಾಳಕ್ಕೆ ಹೊಡೆದು ಎಚ್ಚರಿಸುವಂತಿವೆ ಚೌಡಯ್ಯನವರ ವಚನಗಳು. ಧಾರ್ಮಿಕ ಮೂಢನಂಬಿಕೆ ಬಿತ್ತುವವರಿಗೆ, ಸ್ವಾರ್ಥಿಗಳಾಗಿ ಬದುಕುವವರಿಗೆ, ಮುಖವಾಡ ಹಾಕಿ ಮಂಕು ಬೂದಿ ಎರಚುವವರಿಗೆ ಸಿಂಹ ಸ್ವಪ್ನದಂತೆ ಬೆಚ್ಚಿ ಬೀಳಿಸುತ್ತವೆ ನಿಜ ಶರಣ ಅಂಬಿಗರ ಚೌಡಯ್ಯನವರ ವಚನಗಳು. ಇದಕ್ಕೆ ತಾತ್ಪೂರ್ತಿಕವಾಗಿ ಕೆಲವು ವಚನಗಳು ಈ ಕೆಳಗಿನಂತಿವೆ;

“ಅಂಬಿಗ ಅಂಬಿಗ ಎಂದು ಕುಂದ ನುಡಿಯದಿರು/ನಂಬಿದರೆ ಒಂದೇ ಹುಟ್ಟಲಿ/ಕಡೆಯ ಹಾಯಿಸುವೆನೆಂದಾತನಂಬಿಗರ/ಚೌಡಯ್ಯ ನಿಜಶರಣನು”

ಈ ಮೇಲಿನ ವಚನ ಶ್ರೀ ಅಂಬಿಗರ ಚೌಡಯ್ಯನವರ ಸ್ವಾಭಿಮಾನ, ಧೈರ್ಯ, ನೇರ, ನಿರ್ಭಿಡೆಯ ವ್ಯಕ್ತಿತ್ವದ ಪ್ರತೀಕವಾಗಿದೆ.

ಹನ್ನೆರಡನೇ ಶತಮಾನದ ಸಂದರ್ಭದಲ್ಲಿ ಜಾತಿ ಮತ್ತು ವರ್ಗ ವ್ಯವಸ್ಥೆ ಎಷ್ಟರಮಟ್ಟಿಗಿತ್ತು ಎಂಬುದನ್ನು ಈ ವಚನ ಸೂಚಿಸುತ್ತದೆ. ಅಂತಹ ವಿಚಿತ್ರ, ವಿಕ್ಷಿಪ್ತ ಸನ್ನಿವೇಶದಲ್ಲಿ ಬಸವಾದಿ ಶರಣರು ಜಾತೀಯತೆ, ವರ್ಗ – ವರ್ಣ ವ್ಯವಸ್ಥೆಯ ವಿರುದ್ಧ ಬೃಹತ್ ಚಳುವಳಿಯನ್ನು ಕೈಗೊಂಡಾಗ ಅಂಬಿಗರ ಚೌಡಯ್ಯನವರ ಸತ್ಯನಿಷ್ಠೆ, ಪ್ರಾಮಾಣಿಕತೆಯ ವಚನಗಳು ಪ್ರಖರವಾಗಿ ಕಾಣಿಸುತ್ತವೆ. ಕೆಲವು ಢೋಂಗಿ ಭಕ್ತರಿಗೆ, ಕಪಟ ಸನ್ಯಾಸಿಗಳಿಗೆ ತನ್ನ ಖಾರವಾದ ವಚನಗಳ ಮೂಲಕ ಚುರುಕು ಮುಟ್ಟಿಸುತ್ತಾರೆ.

ಆಡಂಬರ ಮತ್ತು ದುರಾಸೆಯ ಜನರ ಮನಸ್ಥಿತಿ ಕಂಡು ಕೆಂಡಾಮಂಡಲವಾಗಿ ಪ್ರಸ್ತುತ ಪಡಿಸಿದ ಒಂದು ವಚನ ಇಂತಿದೆ;

“ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಕಾಳೋಗರನ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹಾರುವ ಪಕ್ಷಿಯನು/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೆಬ್ಬುಲಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೊಯ್ವ ಹೆಮ್ಮಾರಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಬರುವ ಉರಿ ಬಾಣವನು/ಇಂತೆಲ್ಲವನು ಒಂದೇ ಮಂತ್ರದಲ್ಲಿ ನಿಲ್ಲಿಸಬಹುದು;/ಲೋಭವೆಂಬ ಗ್ರಹಣ ಹಿಡಿದವರ ಏತರಿಂದಲೂ/ನಿಲ್ಲಿಸಲಾಗದು/ಈ ಲೋಭಕ್ಕೆ ದಾರಿದ್ರ್ಯವೇ ಔಷಧವು;/ಹೇಳಿದರೆ ಕೇಳರು, ತಾವು ತಿಳಿಯರು/ಶಾಸ್ತ್ರವ ನೋಡರು, ಭಕ್ತಿಯ ಹಿಡಿಯರು/ಇಂತಹ ಗೊಡ್ಡು ಮೂಳ ಹೊಲೆಯರಿಗೆ/ಕರ್ಮವೆಂಬ ಶರದ್ಧಿಯಲ್ಲಿ ಬಿದ್ದು ಹೊರಳಾಡುವುದೇ/ಸತ್ಯವೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು”

ಸಂಸಾರದ ಜಂಜಾಟದಲ್ಲಿ ಬಿದ್ದು ಒದ್ದಾಡುತ್ತಾ ಶಿವನನ್ನು ಮರೆತು ಹತ್ತು ಹಲವು ಚಿಂತೆಯಲ್ಲಿ ಮುಳುಗಿರುವ ಶವ ಮುಖದ ಜನರ ಸ್ಥಿತಿ-ಗತಿಯನ್ನು ಅರ್ಥಗರ್ಭಿತವಾಗಿ ಸಾದರಪಡಿಸುವ ಒಂದು ವಚನ ಇಂತಿದೆ;

“ಬಡತನಕೆ ಉಂಬುವ ಚಿಂತೆ/ಉಣಲಾದಡೆ ಉಡುವ ಚಿಂತೆ/ಉಡಲಾದಡೆ ಇಡುವ ಚಿಂತೆ/ಇಡಲಾದಡೆ ಹೆಂಡಿರ ಚಿಂತೆ/ಹೆಂಡಿರಾದರೆ ಮಕ್ಕಳ ಚಿಂತೆ/ಮಕ್ಕಳಾದಡೆ ಬದುಕಿನ ಚಿಂತೆ/ಬದುಕಾದಡೆ ಕೇಡಿನ ಚಿಂತೆ/ಕೇಡಾದಡೆ ಮರಣದ ಚಿಂತೆ/ಇಂತೀ ಹಲವು ಚಿಂತೆಯಲ್ಲಿಪ್ಪವರ ಕಂಡೆನು/ಶಿವನ ಚಿಂತೆಯಲ್ಲಿದ್ದಾತರೊಬ್ಬರನೂ ಕಾಣೆನೆಂದಾತ/ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು!”

ಸಮಯದ ಸದ್ಬಳಕೆ ಮಾಡಿಕೊಂಡು ಕಾಯಕ ಮಾಡುತ್ತಾ ಶಿವಭಕ್ತರಾಗಿ, ಜೀವನ ಪಾವನವಾಗಿಸುವಂತೆ ಕರೆ ನೀಡುವ ಒಂದು ವಚನ ಇಂತಿದೆ;

“ಗಾಳಿ ಬಿಟ್ಟಾಗ ತೂರಿಕೊಳ್ಳಿರಯ್ಯ/ಗಾಳಿ ನಿಮ್ಮ ಅಧೀನವಲ್ಲ ಕಂಡಯ್ಯ/ನಾಳೆ ತೂರಿಹೆನೆಂದಡಿಲ್ಲ ಕಂಡಯ್ಯ/ಶಿವಶರಣೆ ಎಂಬುದೊಂದು ಗಾಳಿ ಬಿಟ್ಟಲ್ಲಿ/ಬೇಗ ತೂರೆಂದನಂಬಿಗರ ಚೌಡಯ್ಯ”

ಕಾವಿ ಬಟ್ಟೆ ತೊಟ್ಟು, ಭಿಕ್ಷೆಗಾಗಿ ಜೋಳಿಗೆ ಹಾಕಿದವರೆಲ್ಲರೂ ಜಂಗಮರು, ಗುರುಗಳಾಗಲಾರರು ಎಂಬುದನ್ನು ವಿಡಂಬಿಸುವ ಒಂದು ವಚನ ಇಂತಿದೆ;

“ಕಂಥೆ ತೊಟ್ಟವ ಗುರುವಲ್ಲ/ಕಾವಿ ಹೊದ್ದವ ಜಂಗಮನಲ್ಲ/ಶೀಲ ಕಟ್ಟಿದವ ಶಿವಭಕ್ತನಲ್ಲ/ನೀರು ತೀರ್ಥವಲ್ಲ/ಕೂಳು ಪ್ರಸಾದವಲ್ಲ/ಹೌದೆಂಬವನ ಬಾಯ ಮೇಲೆ/ಅರ್ಧ ಮಣದ ಪಾದರಕ್ಷೆಯ ತೆಗೆದುಕೊಂಡು/ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ/ಟೊಕ ಟೊಕನೆ ಹೊಡೆ ಎಂದಾತ/ನಮ್ಮ ಅಂಬಿಗರ ಚೌಡಯ್ಯ”

ಹೀಗೆ ಬಸವಾದಿ ಶರಣರ ಸಮಾಜ ಸುಧಾರಣಾ ಚಳವಳಿಯಲ್ಲಿ ತಮ್ಮ ಅಮೂಲ್ಯ ಸೇವೆಯನ್ನು ಮುಡುಪಾಗಿಟ್ಟ ಶ್ರೀ ಅಂಬಿಗರ ಚೌಡಯ್ಯನವರು ತಮ್ಮ ಬದುಕಿನ ನೀತಿಯಿಂದ, ನಿಷ್ಠೆಯಿಂದ, ತೀಕ್ಷ್ಣ ಖಂಡನೆಯ ಬಂಡಾಯ ವಚನಗಳಿಂದ ಗಮನ ಸೆಳೆದು, ಅವರು ರಚಿಸಿದ ವಚನಗಳಿಗೆ ತಮ್ಮ ಹೆಸರನ್ನೇ ಅಂಕಿತವನ್ನಾಗಿಟ್ಟಿರುವದು ವಿಶೇಷವಾಗಿದೆ. ಸಮಾಜದ ಕೊಳೆಯನ್ನು ತೊಳೆಯುವ ನಿಟ್ಟಿನಲ್ಲಿ ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ಎದ್ದು ಕಾಣುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮ್ಯಾಸ ನಾಯಕ ಬುಡಕಟ್ಟನಲ್ಲಿ ದೀಪಾವಳಿ ಹಬ್ಬದ ಆಚರಣೆ

Published

on

ಭಾರತ ತನ್ನ ಭೌಗೋಳಿಕ ಸ್ವರೂಪದಲ್ಲಿ ವೈವಿಧ್ಯತೆಯನ್ನು ಹೊಂದಿರುವಂತೆ ಅನೇಕ ಬಗೆಯ ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿದೆ.

ದೇಶದ ಪ್ರತಿಯೊಂದು ಸಮುದಾಯವು ಬದುಕಿನ ಕ್ರಮದಲ್ಲಿ ತನ್ನದೇ ಆದ ವೈವಿಧ್ಯತೆಯನ್ನು ಹೊಂದಿದ್ದು ಹಬ್ಬಗಳ ಆಚರಣೆಯಲ್ಲಿಯೂ ಈ ಭಿನ್ನತೆಯನ್ನು ಕಾಣಬಹುದಾಗಿದೆ. ಈಗ ನಡೆಯುತ್ತಿರುವ ದೀಪಾವಳಿ ಹಬ್ಬದ ಆಚರಣೆಯೂ ಇದರಿಂದ ಹೊರತಾಗಿಲ್ಲ. ಇಡೀ ಭಾರತ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸುತ್ತಿದೆ ಎಂಬುದು ಸಾಮಾನ್ಯವಾದ ಹೇಳಿಕೆಯಾಗಿರುತ್ತದೆ.

ದೀಪಾವಳಿ ಎಂದರೆ ದೀಪವನ್ನು ಬೆಳಗಿಸುವ ಹಬ್ಬ. ಜಗದ ಕತ್ತಲೆಯನ್ನು, ಮನದ ಕತ್ತಲೆಯನ್ನು, ಕಳೆಯುವ ಹಬ್ಬ ಎಂಬುದು ಒಂದು ನಂಬಿಕೆಯಾದರೆ ಬಲಿಚಕ್ರರ‍್ತಿಯನ್ನು ವರ್ಷಕೊಮ್ಮೆ ನೆನಪಿಸಿಕೊಳ್ಳುವುದು, ನರಕಾಸುರನನ್ನು ಶ್ರೀ ಕೃಷ್ಣ ಪರಮಾತ್ಮ ಕೊಂದು ಆತನ ಸೆರೆಯಲ್ಲಿದ್ದ ಅಸಂಖ್ಯಾತ ಮಹಿಳೆಯರಿಗೆ ಬಿಡುಗಡೆ ದೊರಕಿಸಿದ ದಿನವಿದು ಎಂದು ನೆನೆಪಿಸಿಕೊಳ್ಳುವುದು ಹೀಗೆಲ್ಲಾ ಪ್ರಚಲಿತ ಪುರಾಣಮೂಲಗಳಿಂದ ಈ ಹಬ್ಬದ ಆಚರಣೆಯ ಸಾಂಕೇತಿಕತೆಯನ್ನು ಅರ್ಥೈಸಲಾಗುತ್ತದೆ.

ಈ ಎರಡೂ ಘಟನೆಗಳನ್ನು ಕುರಿತು ಬೇರೆ ಬೇರೆ ನೆಲೆಯಿಂದ ಯೋಚಿಸಿದಾಗ ಇದನ್ನು ದೇಶದಾದ್ಯಂತ ಎಲ್ಲರೂ ಸಡಗರಿಸಬೇಕೆ? ಆಳುವವರ ಸಡಗರ ಎಲ್ಲರ ಸಡಗರವಾಗಲೇಬೇಕಾದ ಅನಿವಾರ್ಯವೇ? ಎಂಬ ನೆಲೆಗಳಿಂದ ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕಾಗುತ್ತದೆ.

ನಿಸರ್ಗಮೂಲ ಸಿದ್ದಾಂತವನ್ನು ಅನ್ವಯಿಸಿಕೊಂಡರೇ ಬಹುಶಃ ಈ ದೀಪಾವಳಿಯ ತಿಂಗಳು, ಅಂದರೇ ಕಾರ್ತಿಕ ಮಾಸದ ಹವಾಮಾನದಲ್ಲಿ ವಿಶೇಷತೆಯಿದೆ. ಕಾರ್-ಅಂದರೇ ಮಳೆ ಸುರಿಯುವುದು. ಕರ‍್ತೀಕ ಅಂದರೇ ಮಳೆಗಾಲದ ಕೊನೆಯ ದಿನಗಳಿವು, ಹಿಂಗಾರಿನ ಕೊನೆಯ ಮಳೆಗಳು ಸುರಿಯುವ ಮತ್ತು ಇದರೊಂದಿಗೆ ಚಳಿಗಾಲವೂ ಆರಂಭವಾಗುವುದರಿಂದ ಮಂಜುಮುಸುಕಿದ ವಾತಾವರಣವೂ ಜೊತೆಗೂಡಿ ಕತ್ತಲೆಯ ಆಧಿಕ್ಯ ಹೆಚ್ಚು. ಬಹುಶಃ ಈ ಕತ್ತಲೆಯನ್ನು ನಿವಾರಿಸಿಕೊಳ್ಳಲು ಮನೆಮನೆಯ ಮುಂದೆ ದೀಪಗಳನ್ನು ಹಚ್ಚಿ ಬೆಳಕನ್ನು ಕಂಡುಕೊಳ್ಳುವ ಉದ್ದೇಶವೂ ಇರಬಹುದೆನ್ನಿಸುತ್ತದೆ. ಒಟ್ಟಾರೆ ನಾಡಿನಾದ್ಯಂತ ಆಚರಿಸಲಾಗುವ ಈ ದೀಪಾವಳಿ ಹಬ್ಬವನ್ನು ಮ್ಯಾಸಮಂಡಲದಲ್ಲಿಯೂ ಆಚರಿಸಲಾಗುತ್ತದೆ.

ಮ್ಯಾಸಬುಡಕಟ್ಟಿನ ದೇವರು ಕಾಣದ ಲೋಕದವರಲ್ಲ. ಪ್ರಕೃತಿಯ ವಿಶಿಷ್ಟತೆಯನ್ನೇ ದೈವ ಎಂದು ಭಾವಿಸಿ ಪೂಜಿಸುವುದು, ಸೃಷ್ಟಿಗೆ ಕಾರಣವಾಗುವ ತಾಯಿಯನ್ನೇ ಮೊದಲ ದೈವ ಎಂದು ಪೂಜಿಸುವುದು, ತಮಗೆ ಬದುಕನ್ನು ಕಟ್ಟಿಕೊಟ್ಟು ತಮ್ಮನ್ನು ಮುನ್ನಡೆಸಿದ ಹಿರಿಯರನ್ನೇ, ನಾಯಕರನ್ನೇ ತಮ್ಮದೇವರು ಎಂದು ಪೂಜಿಸುವುದು, ಮತ್ತು ತಮ್ಮ ಬದುಕಿಗೆ ಆಧಾರವಾಗಿದ್ದ ಪಶುಸಂಪತ್ತನ್ನೇ ತಮ್ಮ ಹಿರಿಯರೊಂದಿಗೆ ಸಮೀಕರಿಸಿ ದೈವಗಳೆಂದು ಭಾವಿಸಿ ಪೂಜಿಸುವುದು ಈ ಬುಡಕಟ್ಟಿನ ವಿಶೇಷತೆ. ತಮ್ಮ ನಾಯಕ ಅಥವಾ ನಾಯಕಿ ಬಳಸುತ್ತಿದ್ದ ವಸ್ತುವನ್ನು ಬಿದಿರಿನ ಬುಟ್ಟಿಯಲ್ಲಿಟ್ಟು, ಕೆಲವು ಕಡೆ ಸಾಲಿಗ್ರಾಮಗಳನ್ನು ಮತ್ತು ನಾಯಕ/ನಾಯಕಿ ಬಳಸುತ್ತಿದ್ದ ಬಿಲ್ಲು, ಬಾಣ/ ಖಡ್ಗವನ್ನೇ ದೇವರೆಂದು ನಂಬಿ ಪೂಜಿಸುವ ಸಮುದಾಯದಲ್ಲಿ ದೀಪಾವಳಿಯನ್ನು ಇವುಗಳಿಗೆ ಪೂಜೆ ಸಲ್ಲಿಸುವ ಮೂಲಕವೇ ಆಚರಿಸಲಾಗುತ್ತದೆ.

ಮ್ಯಾಸಮಂಡಲದ ಎಲ್ಲಾ ಗುಡಿಕಟ್ಟುಗಳಲ್ಲಿಯೂ ಮತ್ತು ಇದಕ್ಕೆ ಸಂಬಂಧಿಸಿದ ಎತ್ತಿನಗೂಡುಗಳಲ್ಲಿ ಈ ಹಬ್ಬದ ಆಚರಣೆ ನಡೆಯುತ್ತದೆ. ದೀಪಾವಳಿ ಅಮಾವಾಸ್ಯೆಕಳೆದು ಪಾಡ್ಯದ ಸೋಮವಾರ ಹೀರೆಹಳ್ಳಿಯ ದಡ್ಡಿಸೂರನಾಯಕನ ಗುಡಿಗೆ ಈತನಿಂದ ಸಂರಕ್ಷಿಸಲ್ಪಟ್ಟ ದನಕರುಗಳ ಪರಂಪರೆಯಿಂದ ಇಂದಿಗೂ ಉಳಿದು ಬಂದಿರುವ ಆಕಳ ಗೂಡಿನಿಂದ (ಗುಡೇಕೋಟಿ ಬಳಿ ಇರುವ} ಕಿಲಾರಿಗಳು ಮೊಸರು,ತುಪ್ಪವನ್ನು ತಂದು ಸೋಮವಾರ ಸಂಜೆ ಗುಡಿಗೆ ಒಪ್ಪಿಸುತ್ತಾರೆ. ತಮ್ಮ ಹೊಲಗಳಲ್ಲಿ ಬೆಳೆದ ಹಸನಾದ ಸಜ್ಜೆಯತೆನೆಗಳನ್ನು ತಂದು ಒಪ್ಪಿಸುವ ವಾಡಿಕೆಯೂ ಇದೆ. ರಾತ್ರಿಯಿಡಿ ಎಲ್ಲರೂ ಸೇರಿ ಗುಡಿಯಲ್ಲಿ ಹುರುಳಿ, ಗುಗ್ಗರಿ ಬೇಯಿಸಿ ಜೋಳ ಅಥವಾ ಸಜ್ಜೆಯ ಅನ್ನ ಮಾಡಿ ಗೂಡಿನಿಂದ ತಂದ ಮೊಸರನ್ನು ಸೇರಿಸಿ ಬೆಳಗಿನಜಾವ ದಡ್ಡಿಸೂರನಾಯಕನಿಗೆ ನೈವೇದ್ಯ ಮಾಡಲಾಗುತ್ತದೆ.

ರಾತ್ರಿಯಿಡೀ ಉರುಮೆ ವಾದ್ಯದ ಸೇವೆ, ನಾಯಕನನ್ನು ಕುರಿತು ಪದ ಹೇಳುವುದು ನಡೆಯುತ್ತದೆ, ಹೀಗೆ ಗುಡಿಯಲ್ಲಿ ನಡೆಯುವ ಪೂಜೆಯೇ ತಮಗೆ ದೀಪಾವಳಿ ಹಬ್ಬದ ಆಚರಣೆಯಾಗಿದ್ದು ಮನೆ ಮನೆಯ ಮುಂದೆ ದೀಪ ಬೆಳಗಿಸುವ, ರಂಗೋಲಿ ಹಾಕುವ, ಪಟಾಕಿ ಸಿಡಿಸುವ ಆಚರಣೆಗಳು ಇಲ್ಲಿ ಇರುವುದಿಲ್ಲ.
ಕಂಪಳ ದೇವರ ಹಟ್ಟಿಯಲ್ಲಿ ಇದಕ್ಕಿಂತ ಸ್ವಲ್ಪ ಭಿನ್ನವಾಗಿ ಹಬ್ಬದ ಆಚರಣೆ ನಡೆಯುತ್ತದೆ. ಮಾಘ ಮಾಸದಲ್ಲಿ ನಡೆಯುವ ಗುಗ್ಗರಿ ಹಬ್ಬದಲ್ಲಿ ಮಾಡುವಂತೆ ಈ ಸಮಯದಲ್ಲಿಯೂ ಅಮಾವಾಸ್ಯೆ ನಂತರದ ಶುಕ್ರವಾರದಂದು ಪೆಟ್ಟಿ ದೇವರನ್ನು ಗುಡಿಯಿಂದ ತಂದು ಹಟ್ಟಿಯ ಹೊರವಲಯದಲ್ಲಿ ಹೊಸ ಉದಿ/ಪದಿಯನ್ನು ಕಟ್ಟಿ ಇದರಲ್ಲಿ ಕೂರಿಸಿ ಮೂರು ದಿನಗಳ ಹಬ್ಬದ ಆಚರಣೆ ನಡೆಸಲಾಗುತ್ತದೆ.

ತೆಲುಗಿನಲ್ಲಿ ಇದನ್ನು ‘ದುಯಿಲಪಂಡುವ’ ಎಂದು ಕರೆಯಲಾಗುತ್ತದೆ. ಕಂಪಳ ದೇವರ ಪೆಟ್ಟಿಯೊಂದಿಗೆ ಜಗಲೂರು ಪಾಪನಾಯಕನನ್ನು ಸಂಕೇತಿಸುವ ಬಿಲ್ಲು ದೇವರನ್ನೂ ತಂದು ಪೂಜಿಸಲಾಗುತ್ತದೆ. ಆಕಳಗೂಡಿನ ಮೀಸಲು ಮೊಸರು ಮತ್ತು ಬೆಣ್ಣೆಯನ್ನು ಅರ್ಪಿಸುವುದು ಇಲ್ಲಿ ಬಹಳ ವಿಶೇಷವಾದುದು. ಗತಿಸಿದ ಎತ್ತು ಮತ್ತು ಆಕಳಿಂದ ಸಂಗ್ರಹಿಸಿದ ಕೊಂಬನ್ನು ಇಲ್ಲಿ ಬೆಣ್ಣೆಯನ್ನು ಶೇಕರಿಸಲು ಬಳಸಲಾಗುತ್ತದೆ.ಬುಡಕಟ್ಟಿನ ಜನತೆ ತಮಗೆ ಸಿಗುವ ವಸ್ತುಗಳನ್ನೇ ಸಲಕರಣೆಗಳನ್ನಾಗಿ ಬಳಸುವ ವಿಧಾನ ಇಲ್ಲಿ ಗಮನ ಸೆಳೆಯುತ್ತದೆ. ಹೀಗೆ ಸಂಗ್ರಹಿಸಿದ ಬೆಣ್ಣೆಯನ್ನು ಕಾಯಿಸಿ ತುಪ್ಪ ಮಾಡಿ ಪದಿಯಲ್ಲಿ ದೀಪವನ್ನು ಉರಿಸಲಾಗುತ್ತದೆ.ಮೊಸರು,ಜೋಳದ/ಸಜ್ಜೆಯ ಅನ್ನ,ಬಾಳೆಹಣ್ಣು,ಬೆಲ್ಲವನ್ನು ಬೆಳಗಿನಜಾವದಲ್ಲಿ ನೈವೇದ್ಯ,ಮಾಡಲಾಗುತ್ತದೆ.

ಇದರೊಂದಿಗೆ ಎತ್ತುಗಳನ್ನೂ ಹರಿಯಿಸುವುದು, ಮಣೇವು, ಉರಿಯುವ ಪಂಜುಗಳನ್ನೇ ನುಂಗುವುದು ಈ ಹಬ್ಬದ ಪ್ರಮುಖ ಆಚರಣೆಗಳಾಗಿವೆ. ನನ್ನಿವಾಳದ ಕಟ್ಟಿಮನೆಗೆ ಸೇರಿದ ಬಂಗಾರುದೇವರ ಹಟ್ಟಿಯಲ್ಲಿ ದೇವರುಗಳನ್ನು ಮತ್ತು ಬೆಳಗಟ್ಟದ ಸೂರೆಯರಗಾಟನಾಯಕನಿಗೆ ಸಂಬಂಧಿಸಿದಂತೆ, ಬೋಸೇದೇವರ ಹಟ್ಟಿಯ ಬೋಸೇರಂಗಯ್ಯನ ಪೆಟ್ಟಿಯನ್ನು, ದೊಣಮಂಡಲಹಟ್ಟಿಯ ಮಂಡಬೊಮ್ಮದೇವರನ್ನು ಹಟ್ಟಿಯಿಂದ ಹೊರಗೆ ತಂದು ಊರ ಹೊರಗೆ ಹೊಸ ಪದಿಯನ್ನು ಕಟ್ಟಿ, ಗೂಡಿನಿಂದ ಎತ್ತುಗಳನ್ನು ಕರೆಸಿ ಗೌರವಿಸಿ ಪೂಜಿಸುವ ಕ್ರಮವಿದೆ.

ಒಟ್ಟಾರೆ ಈಮ್ಯಾಸಮಂಡಲದ ದೀಪಾವಳಿ ಹಬ್ಬಕ್ಕೆ ಆಯಾ ಗುಂಪಿನವರೆಲ್ಲರೂ ಕಾಸು,ಹಾಲು, ಮೊಸರನ್ನು ಅರ್ಪಿಸಿ ಪಾಲ್ಗೊಳ್ಳುವಿಕೆಯೇ ಇಲ್ಲಿ ಸಾಮುದಾಯಿಕತೆಯ ಮಹತ್ವವನ್ನು ಪಡೆಯುತ್ತದೆ. ಈ ದೀಪಾವಳಿ ಹಬ್ಬದ ಆಚರಣೆಯಲ್ಲಿಎಲ್ಲಾ ಪದಿಗಳಲ್ಲಯೂ ದಾಸೋಹ ವಿಶೇಷವಾಗಿ ನಡೆಯುತ್ತದೆ. ಮುಂಗಾರು ಮಳೆ ಸುರಿದು ಸೊಂಪಾಗಿ ಬೆಳೆದ ಹುಲ್ಲನ್ನು ತಿಂದು ಹಸುಗಳು ಸಾಕಷ್ಟು ಹಾಲನ್ನು ಕೊಡುವುದರಿಂದ ಸಮೃದ್ಧವಾದ ಹಾಲು,ಮೊಸರು ಈ ಹಬ್ಬಕ್ಕೆ ಒದಗುತ್ತದೆ.ಇದನ್ನು ಎಡೆ ಮಾಡಿದ ನಂತರ ಎಲ್ಲರಿಗೂ ದಾಸೋಹದಲ್ಲಿ ನೀಡಲಾಗುತ್ತದೆ.

ಈ ಬುಡಕಟ್ಟಿನ ದೀಪಾವಳಿ ಹಬ್ಬದ ಆಚರಣೆಯ ಹಿಂದೆ ನಮ್ಮ ಭಾರತದ ಪೌರಾಣಿಕ ಕಥನಗಳಾವುವು ಕೇಳಿ ಬರುವುದಿಲ್ಲ.ಮನೆ ಮನೆಯ ಮುಂದೆ ದೀಪಗಳನ್ನು ಹಚ್ಚಿ ಸಡಗರಿಸುವುದು ಇಲ್ಲಿಲ್ಲ. ರಂಗೋಲಿ ಹಾಕುವುದಂತೂ ಬುಡಕಟ್ಟಿನ ನಿಶೇಧಗಳಲ್ಲಿ ಒಂದಾಗಿರುವುದರಿಂದ ಆ ಪ್ರಸ್ತಾಪವೇ ಇಲ್ಲಿಲ್ಲ. ಬದಲಾಗಿ ತಮ್ಮ ಮನೆ ದೇವರಾದ ಪೆಟ್ಟಿಗೆ ದೇವರು/ಬಿಲ್ಲು ದೇವರು/ಎತ್ತುಗಳನ್ನು ಗೌರವಿಸಿ ಪೂಜಿಸುವುದು. ಈ ಮೂಲಕವಾಗಿಯೇ ತಮ್ಮ ಮುಂದಿನ ಬದುಕಿಗೆ ಬೇಕಾದ ಬೆಳಕನ್ನು, ಚೈತನ್ಯವನ್ನು ಕೋರುವುದು ಇಲ್ಲಿ ಮುಖ್ಯವಾಗಿರುತ್ತದೆ.

ತಾನು ಬದುಕಿರುವ ಪರಿಸರ, ತಮಗೆ ಬದುಕನ್ನು ಕಟ್ಟಿಕೊಡುವ ಪ್ರಾದೇಶಿಕತೆ ಮತ್ತು ಭೌತಿಕ ಪ್ರಪಂಚ ಮತ್ತು ತನಗೆ ನೈತಿಕ ಬೆಂಬಲವಾಗಿ ನಿಂತ ತನ್ನ ಸಾಂಸ್ಕೃತಿಕ ಜಗತ್ತು ಈ ಎಲ್ಲವುಗಳ ಮೂಲಕ ಒಡಮೂಡುವ ದೇಸಿತನ ಆಯಾ ಬುಡಕಟ್ಟಿನ ಆಚರಣೆಗಳಿಗೆ ಸೈದ್ಧಾಂತಿಕತೆಯನ್ನು ಒದಗಿಸಿಕೊಡುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಮ್ಯಾಸಬೇಡ ಬುಡಕಟ್ಟಿನ ಈ ದೀಪಾವಳಿ ಆಚರಣೆಯಲ್ಲಿ ಈ ದೇಸಿತನವೇ ಒಡಮೂಡಿರುವುದನ್ನು ಕಾಣಬಹುದಾಗಿದೆ.ಆದಿವಾಸಿಗಳ ಧರ‍್ಮಿಕ ಜಗತ್ತಿನಲ್ಲಿ ಸರ‍್ಪಣಾಭಾವ ಮತ್ತು ಪಾರಂಪರಿಕ ಸಂಬಂಧ ಮುಖ್ಯವಾಗಿರುತ್ತದೆ. ಈ ಆಚರಣೆಗಳನ್ನು ಸಮುದಾಯದ ಸಾಂಸ್ಕೃತಿಕ ಅಸ್ಮಿತೆಗಳು ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending