Connect with us

ಬಹಿರಂಗ

ಬದಲಾಗುತ್ತಿರುವ ಭಾರತದಲ್ಲಿ ಮಾಧ್ಯಮವೆಂಬೋ ಮಾಂತ್ರಿಕ

Published

on

  • ನಾ ದಿವಾಕರ

ಭಾರತ ಬದಲಾಗುತ್ತಿದೆ. ಸಾಂಸ್ಕೃತಿಕ ರಾಷ್ಟ್ರೀಯತೆ ಮತ್ತು ಮಾರುಕಟ್ಟೆ ಬಂಡವಾಳದ ಸುಳಿಯಲ್ಲಿ ಸಿಲುಕಿ ಉನ್ಮತ್ತ ಸ್ಥಿತಿ ತಲುಪಿರುವ ಭಾರತದ ಒಂದು ವರ್ಗ ಈ ಬದಲಾದ ಭಾರತದ ರಾಯಭಾರಿಯಂತೆ ಕಾಣುತ್ತಿದೆ. ಕೋವಿದ್ 19 ಸಂದರ್ಭದಲ್ಲಿ ಬದಲಾಗುತ್ತಿರುವ ಭಾರತದ ವಿಭಿನ್ನ ಮಜಲುಗಳು ಸಾರ್ವಜನಿಕ ಬದುಕಿನಲ್ಲಿ ಹಂತಹಂತವಾಗಿ ತೆರೆದುಕೊಳ್ಳುತ್ತಿವೆ. 2019ರ ಉತ್ತರಾರ್ಧದಲ್ಲಿ ದೇಶಾದ್ಯಂತ ಸೃಷ್ಟಿಯಾದ ಸಾಮಾಜಿಕ ಪ್ರಕ್ಷುಬ್ಧತೆ, ಸಾಂಸ್ಕೃತಿಕ ಉನ್ಮಾದ ಮತ್ತು ರಾಜಕೀಯ ಪಲ್ಲಟಗಳ ನಡುವೆಯೇ ಭಾರತ ಕೊರೋನಾ ದಾಳಿಗೆ ಸಿಲುಕಿ ದಿಕ್ಕುಗಾಣದ ದೆಸೆಯಲ್ಲಿ ನಿಂತಿದೆ.

ಭಾರತದ ಮಟ್ಟಿಗೆ ಹೇಳುವುದಾದರೆ ಕೊರೋನಾ ಸತ್ಯ ದರ್ಶನದ ಹೆಬ್ಬಾಗಿಲಿನಂತೆ ಕಾಣುತ್ತಿದೆ. ಆಳುವ ವರ್ಗಗಳ ದೃಷ್ಟಿಯಲ್ಲಿ ನಿಕೃಷ್ಟರಾಗಿದ್ದ ಬೃಹತ್ ಜನಸಮುದಾಯ ಇಂದು ತನ್ನ ಅಸ್ತಿತ್ವವನ್ನು ರಕ್ಷಿಸಿಕೊಳ್ಳಲು, ತನ್ನ ಅಸ್ಮಿತೆಯನ್ನು ಗುರುತಿಸಿಕೊಳ್ಳಲು ಎದ್ದು ನಿಂತಿದೆ.

ಈ ಜನಸಮುದಾಯಗಳ ಒಳಗಿನಿಂದಲೇ “ ಅನ್ಯರನ್ನು ” ಗುರುತಿಸಿ ಸ್ವಚ್ಚ ಭಾರತವನ್ನು ನಿರ್ಮಿಸುವ ಕನಸು ಕಾಣುತ್ತಿದ್ದ ಬೌದ್ಧಿಕ-ರಾಜಕೀಯ ವಲಯಕ್ಕೆ ತಮ್ಮ ಆಂತರ್ಯವನ್ನು ಸ್ವಚ್ಚಗೊಳಿಸಿಕೊಳ್ಳಬೇಕಾದ ಸಂದರ್ಭ ಎದುರಾಗಿದೆ.

ಕೊರೋನಾ ಸಮಾಜದ ಎಲ್ಲ ವರ್ಗಗಳನ್ನೂ ಕಾಡುತ್ತಿದೆ ಆದರೆ ಕೊರೋನಾದಿಂದ ಉದ್ಭವಿಸಿರುವ ಸಾವು ಬದುಕಿನ ಸಂಘರ್ಷ ಕೆಲವೇ ವರ್ಗಗಳನ್ನು ಮುನ್ನೆಲೆಗೆ ತಂದಿದೆ. ಈ ಸಂಘರ್ಷದ ನೆಲೆಯಲ್ಲೇ ಭಾರತೀಯ ಸಮಾಜದ ಪ್ರಜ್ಞಾವಂತ ಮನಸುಗಳು ಪ್ರಬುದ್ಧ ಭಾರತದ ಕನಸು ಕಾಣಬೇಕಿದೆ.

ನಾವು ಕೊರೋನಾ ವಿರುದ್ಧ ಯುದ್ಧ ಮಾಡುತ್ತಿದ್ದೇವೆ ಎನ್ನುವ ಒಂದು ಚಿಂತನೆ ನಮ್ಮ ಸೂಕ್ಷ್ಮತೆಯನ್ನು ಮತ್ತಷ್ಟು ಹರಿತಗೊಳಿಸಬೇಕಿತ್ತು. ಆದರೆ ಈ ಯುದ್ಧ ಎನ್ನುವ ಪದ ಅಕ್ಷರಶಃ ರಣರಂಗದ ಪರಿಭಾಷೆಯಲ್ಲಿ ವ್ಯಕ್ತವಾಗುತ್ತಿದ್ದು ಶತ್ರು-ಮಿತ್ರರ ಶೋಧಕ್ಕೆ ಕಾರಣವಾಗುತ್ತಿರುವುದನ್ನು ಗಮನಿಸುತ್ತಲೇ ಬಂದಿದ್ದೇವೆ.

ಇದರ ಒಂದು ಅಕ್ಷರತುಣುಕು ಪ್ರಜಾವಾಣಿ ಪತ್ರಿಕೆಯ ಸಂದರ್ಶನವೊಂದರಲ್ಲಿ ಕಂಡುಬರುತ್ತದೆ. ಸಂಘಪರಿವಾರದ ವಕ್ತಾರ ದತ್ತಾತ್ರೇಯ ಹೊಸಬಾಳೆಯವರೊಡನೆ ಪತ್ರಿಕೆ ನಡೆಸಿದ ಸಂದರ್ಶನವನ್ನು ನೋಡಿದಾಗ ಭಾರತದ ಸಾಂಸ್ಕೃತಿಕ ರಾಜಕಾರಣ ಒಂದು ವೈರಾಣುವನ್ನೂ ಆವಾಹನೆ ಮಾಡುವಷ್ಟು ಬಲಿಷ್ಟವಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ.

ಸಾಂಸ್ಕೃತಿಕ ರಾಜಕಾರಣದ ಪರಿಭಾಷೆಗೆ ನಾವು ಒಗ್ಗಿಹೋಗಿದ್ದೇವೆ. ಸದಾ ರಣರಂಗದ ಗುಂಗಿನಲ್ಲೇ ಇರುವ ಉನ್ಮತ್ತ ಮನಸುಗಳು ಇಲ್ಲದ ಶತ್ರುಗಳನ್ನು ಹುಡುಕುತ್ತಲೇ ತಮ್ಮೊಳಗಿನ ವೈರತ್ವದ ಭಾವನೆಯನ್ನು ಮತಧಾರ್ಮಿಕ ಕುಲುಮೆಗಳಲ್ಲಿ ಬೇಯಿಸುತ್ತಿರುತ್ತವೆ. ಕಳೆದ ಮೂರು ದಶಕಗಳಲ್ಲಿ ಭಾರತ ಕಂಡಿರುವ ದುರಂತ ಇದು.

ಈ ದುರಂತದ ಸೋದರ ಸಂಬಂಧಿಯಾಗಿ ಹಣಕಾಸು ಬಂಡವಾಳ ವ್ಯವಸ್ಥೆ ಅಗೋಚರ ಪ್ರಪಂಚವೊಂದನ್ನು ಸೃಷ್ಟಿಸಿಬಿಟ್ಟಿದೆ. ಕೊರೋನಾ ಕೃಪೆಯಿಂದ ಈ ಪ್ರಪಂಚ ಇಂದು ನಮ್ಮ ಕಣ್ಣೆದುರು ನಿಂತಿದೆ. ದೇಶದ ಬಹುಸಂಖ್ಯಾತ ಪ್ರಜೆಗಳನ್ನು ಪ್ರತಿನಿಧಿಸುವ ಈ ಪ್ರಪಂಚ ನಮ್ಮ ಮುಂದಿನ ದಿನಗಳಲ್ಲಿ ನಿರ್ಣಾಯಕ ನೆಲೆ ತಲುಪಲಿದೆ.

ಪ್ರಜಾವಾಣಿಗೆ ನೀಡಿದ ಸಂದರ್ಶನದಲ್ಲಿ ದತ್ತಾತ್ರೇಯ ಹೊಸಬಾಳೆಯವರ ಮೂರು ಅಭಿಪ್ರಾಯಗಳು ಪ್ರಜಾತಂತ್ರದ ಪ್ರಜ್ಞೆಗೆ ಘಾಸಿ ಉಂಟುಮಾಡುತ್ತವೆ. 9/11ರ ಸಂದರ್ಭದಲ್ಲಿ ಅಮೆರಿಕದ ವಿರೋಧ ಪಕ್ಷಗಳು ಸರ್ಕಾರದ ಬೆನ್ನಿಗೆ ನಿಂತಿದ್ದವು, 1971ರ ಯುದ್ಧದ ಸಂದರ್ಭದಲ್ಲಿ ವಾಜಪೇಯಿ ಸರ್ಕಾರಕ್ಕೆ ಬೆಂಬಲ ನೀಡಿದ್ದರು.

ಮತ್ತು ಲಾಕ್ ಡೌನ್ ಸಂದರ್ಭದಲ್ಲಿ ಭಾರತದಲ್ಲಿ ಮಿಲಿಟರಿಯನ್ನು ಬಳಸುವ ಪರಿಸ್ಥಿತಿ ಎದುರಾಗಲಿಲ್ಲ ಎಂದು ಜನರನ್ನು ಅಭಿನಂದಿಸಿದ್ದಾರೆ. ಈ ಮೂರು ವಾಕ್ಯಗಳಲ್ಲೂ ಕೊರೋನಾ ರಣಕೇಕೆ(ಸುದ್ದಿಮನೆಯ ಪರಿಭಾಷೆಯಲ್ಲಿ) ಮತ್ತು ಸಾಂಸ್ಕೃತಿಕ ರಾಜಕಾರಣದ ರಣೋತ್ಸಾಹದ ಛಾಯೆ ಕಂಡುಬರುತ್ತದೆ.

ಸಂದರ್ಶನ ನೀಡಿದ ವ್ಯಕ್ತಿ ಯಾರು ಎನ್ನುವುದಕ್ಕಿಂತಲೂ, ಒಂದು ಸಂಘಟನೆಯ ಸದಸ್ಯರಿಗೆ ಸಮಸ್ತ ಭಾರತೀಯರ ರಾಯಭಾರಿಯಾಗಿ ಮಾತನಾಡುವ ಅವಕಾಶ ನೀಡಿದ ಮಾಧ್ಯಮದ ನಡೆ ಇಲ್ಲಿ ಪ್ರಶ್ನಾರ್ಹವಾಗುತ್ತದೆ. ದತ್ತಾತ್ರೇಯ ಅವರ ಅಭಿಪ್ರಾಯಗಳು ವೈಯಕ್ತಿಕ-ತಾತ್ವಿಕ ಮತ್ತು ಸಂಘಟನಾತ್ಮಕ ನೆಲೆಯಲ್ಲಿ ವ್ಯಕ್ತವಾಗುವಂತಹುದು.

ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸೋಣ. ಪತ್ರಿಕೆಯ ಸಂಪಾದಕ ಮಂಡಲಿಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೂ ಮನ್ನಿಸೋಣ. ಆದರೆ ರಾಜ್ಯದ ಪ್ರತಿಷ್ಠಿತ ಸುದ್ದಿ ಪತ್ರಿಕೆಯೊಂದರ ಮುಖಪುಟದಲ್ಲಿ ಇಂತಹ ಅಭಿಪ್ರಾಯಗಳು ವಿಜೃಂಭಿಸಿದಾಗ ಪ್ರಜ್ಞಾವಂತ ಮನಸುಗಳಿಗೆ ಆತಂಕ ಉಂಟಾಗುವುದು ಸಹಜ. ಇತರ ಯಾವುದೇ ಪತ್ರಿಕೆಯಲ್ಲಿ ಈ ಸಂದರ್ಶನ ಪ್ರಕಟವಾಗಿದ್ದರೂ ನಿರ್ಲಕ್ಷಿಸಬಹುದಿತ್ತೇನೋ.

ಇರಲಿ, ಇಲ್ಲಿ ಸಮಸ್ಯೆ ಇರುವುದು ಒಂದು ಪತ್ರಿಕೆ ಅಥವಾ ಒಬ್ಬ ವ್ಯಕ್ತಿಯಲ್ಲಿ ಅಲ್ಲ. ಭಾರತದ ಪ್ರಜಾತಂತ್ರ ವ್ಯವಸ್ಥೆ ಎದುರಿಸುತ್ತಿರುವ ಸವಾಲು ಇಂತಹ ಸೂಕ್ಷ್ಮ ಸಂಗತಿಗಳನ್ನೂ ನಿಷ್ಕರ್ಷೆಗೊಡ್ಡುವ ಅನಿವಾರ್ಯತೆಯನ್ನು ಸೃಷ್ಟಿಸಿದೆ.

ನಾವು ಇಂದು ಮಾಧ್ಯಮ ಎಂದು ಭಾವಿಸುವ ವಿದ್ಯುನ್ಮಾನ ಸುದ್ದಿಮನೆಗಳು, ಮುದ್ರಣ ಲೋಕದ ಸುದ್ದಿ ಪತ್ರಿಕೆಗಳು ಮತ್ತು ಸಾಮಾಜಿಕ ತಾಣಗಳು ಪ್ರಜಾತಂತ್ರ ವ್ಯವಸ್ಥೆಯ ಆಧಾರ ಸ್ತಂಭಗಳು ಎನ್ನುವ ಭ್ರಮೆ ನಮ್ಮಿಂದ ಇನ್ನೂ ದೂರವಾಗದೆ ಉಳಿದಿರುವುದೇ ಅಚ್ಚರಿಯ ಸಂಗತಿ. ಬಹುಶಃ ನಮ್ಮ ಸಮಾಜದಲ್ಲಿ ತಾಳ್ಮೆ, ಸಹನೆ ತುಸು ಹೆಚ್ಚಾಗಿಯೇ ಇದೆ ಎನ್ನುವುದನ್ನು ಇದು ನಿರೂಪಿಸುತ್ತದೆ.

1990ರ ಸಂದರ್ಭದ ಸಾಂಸ್ಕೃತಿಕ ರಾಜಕಾರಣ ಮತ್ತು ಜಾಗತಿಕ ಬಂಡವಾಳದ ಪ್ರಹಾರದಿಂದ ಚೇತರಿಸಿಕೊಳ್ಳುವ ಮುನ್ನವೇ ನಮಗೆ ಸತ್ಯದರ್ಶನವಾಗಿದ್ದರೆ ಅದಕ್ಕೆ ಕೊರೋನಾ ಕಾರಣವಾಗಿದೆ. ಒಂದು ವರ್ಷದ ಹಿಂದೆ ದೇಶವ್ಯಾಪಿ ರಾಜಕೀಯ ಸಂಕಥನದ ಕೇಂದ್ರ ಬಿಂದು ಆಗಿದ್ದ “ ವಲಸಿಗರು ” ಇಂದೂ ಸಹ ಸಮಾಜೋ ರಾಜಕೀಯ ಸಂಕಥನದ ಕೇಂದ್ರ ಬಿಂದು ಆಗಿದ್ದಾರೆ.

ಅಂದು ನಿಕೃಷ್ಟರಾಗಿ ನಿರ್ಲಕ್ಷ್ಯಕ್ಕೆ ಅರ್ಹರಾಗಿದ್ದ ಈ ಸಮುದಾಯ ಇಂದು ಕಾಳಜಿ, ಕಳಕಳಿಗೆ ಅರ್ಹತೆ ಪಡೆದಿದ್ದರೂ, ಒಂದು ನೆಲೆಯಲ್ಲಿ ನಿಕೃಷ್ಟರಾಗಿಯೇ ಕಾಣುತ್ತಿದ್ದಾರೆ. ಈ ಅಂಶವನ್ನು ಬದಿಗಿಟ್ಟು ನೋಡಿದಾಗ, ಕೊರೋನಾ ಸಂದರ್ಭದಲ್ಲಿ ನಮಗೆ ಈ ದೇಶದ ಮುದ್ರಣ ಲೋಕ ಮತ್ತು ಡಿಜಿಟಲ್ ಲೋಕದ ಸುದ್ದಿಮನೆಗಳು ದಿನನಿತ್ಯ ಕಾಡುತ್ತವೆ.

ಪ್ರಜಾತಂತ್ರ ವ್ಯವಸ್ಥೆಯ ನಾಲ್ಕನೆಯ ಸ್ತಂಭ ಎನ್ನುವ ಪ್ರತಿಷ್ಠಿತ ಸ್ಥಾನ ಪಡೆದಿರುವ ಈ ಜಗತ್ತು ಇಂದು, ಈ ಆಶಯದ ಆಂತರ್ಯವನ್ನೇ ಮರೆತಂತೆ ಕಾಣುತ್ತಿರುವುದು ದುರಂತ. ಪ್ರಜಾವಾಣಿಯಲ್ಲಿನ ಒಂದು ಸಂದರ್ಶನ ಆಕ್ಷೇಪಾರ್ಹವಾಗಿ ಕಾಣುವುದು ಇಲ್ಲಿಯೇ.

ಮಾಧ್ಯಮ ಲೋಕದಲ್ಲಿ ಸ್ವತಂತ್ರ , ಸ್ವಾಯತ್ತ ಮತ್ತು ನಿಷ್ಪಕ್ಷಪಾತ ಧೋರಣೆಯನ್ನೇ ಮೂಲಮಂತ್ರವಾಗಿ ಭಾವಿಸುವ ಪರಂಪರೆಗೆ ಬಹುಶಃ ನಾವು ವಿದಾಯ ಹೇಳಿದ್ದೇವೆ ಎನಿಸುತ್ತದೆ. ವ್ಯವಸ್ಥೆ, ಪ್ರಭುತ್ವ ಮತ್ತು ಆಡಳಿತಾರೂಢ ಸರ್ಕಾರ ಈ ಮೂರರ ನಡುವಿನ ಅಂತರ, ವ್ಯತ್ಯಾಸ ಮತ್ತು ಕಂದರವನ್ನು ಮೂಲತಃ ಮಾಧ್ಯಮಗಳು ಬಿಂಬಿಸಬೇಕಾಗುತ್ತದೆ.

ಹಾಗಾದಲ್ಲಿ ಮಾತ್ರ ಸರ್ಕಾರದ ಕ್ರಮಗಳಿಂದ ಅಸಮಧಾನ ಹೊಂದಿರುವ, ಪ್ರಭುತ್ವದ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ, ವ್ಯವಸ್ಥೆಯ ಲೋಪಗಳ ವಿರುದ್ಧ ಪ್ರತಿರೋಧ ವ್ಯಕ್ತಪಡಿಸುವ ಸೂಕ್ಷ್ಮ ಮನಸುಗಳಿಗೆ ಅಕ್ಷರಗಳ ಮೂಲಕ, ಮಾತುಗಳ ಮೂಲಕ ಸ್ಪಂದಿಸಲು ಸಾಧ್ಯ. ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು ಈ ಸೂಕ್ಷ್ಮತೆಯನ್ನು ಕಳೆದುಕೊಂಡಿರುವುದು ಈ ಕಾಲಘಟ್ಟದ ದುರಂತ.

ತತ್ವ, ಸಿದ್ಧಾಂತ, ನೀತಿ ಮತ್ತು ಮೌಲ್ಯ ಈ ನಾಲ್ಕೂ ಸಹ ಒಂದು ದೇಶದ ಬೌದ್ಧಿಕ ವಲಯದ ಆಸ್ತಿ. ಹಾಗೆಯೇ ದೇಶದ ಮುನ್ನಡೆಗೆ ಪೂರಕವಾಗಬಹುದಾದ ಬೌದ್ಧಿಕ , ಭೌತಿಕ ಸರಕುಗಳು. ಈ ಸರಕುಗಳನ್ನು ನಾವು ಯಾವ ನೆಲೆಯಲ್ಲಿ ನಿಂತು ಬಳಸುತ್ತೇವೆ, ಹೇಗೆ ನಿಷ್ಕರ್ಷೆ ಮಾಡುತ್ತೇವೆ, ಯಾವ ದಿಕ್ಕಿನಲ್ಲಿ ಇವುಗಳನ್ನು ಕೊಂಡೊಯ್ಯುತ್ತೇವೆ ಮತ್ತು ಯಾರ ಪರವಾಗಿ ಈ ನಾಲ್ಕೂ ನೆಲೆಗಳು ನಿಲ್ಲುತ್ತವೆ ಈ ಪ್ರಶ್ನೆಗಳು ಒಂದು ಪ್ರಬುದ್ಧ ಸಮಾಜವನ್ನು ಕಾಡಲೇಬೇಕು.

ಇವುಗಳಿಂದಾಚೆಗೂ ಒಂದು ಪ್ರಪಂಚ ಇದೆ ಎಂದಾದರೆ ಅದು ಅರಾಜಕತೆಯ ನೆಲೆಯಲ್ಲೇ ಇರಬೇಕಾಗುತ್ತದೆ. ಭಾರತ ಈ ನಾಲ್ಕೂ ವಿದ್ಯಮಾನಗಳನ್ನು ಶತಮಾನಗಳಿಂದ ಪರಸ್ಪರ ವಿರುದ್ಧ ನೆಲೆಗಳಲ್ಲಿ, ವೈರುಧ್ಯಗಳ ನಡುವೆ, ವಿರೋಧಾಭಾಸಗಳೊಡನೆ ಮತ್ತು ಸಾಪೇಕ್ಷ ನೆಲೆಗಳಲ್ಲಿ ಎದುರಿಸುತ್ತಲೇ ಬಂದಿದೆ.

1990ರ ನಂತರದಲ್ಲಿ ಈ ನೆಲೆಗಳು ಹೆಚ್ಚು ಸಾಪೇಕ್ಷತೆಯನ್ನು ಪಡೆದುಕೊಳ್ಳುತ್ತಿದ್ದು, ತಮ್ಮ ಅಂತಃಸತ್ವವನ್ನು ಕಳೆದುಕೊಳ್ಳುತ್ತಿರುವುದನ್ನು ಗಮನಿಸಿದ್ದೇವೆ. ವಾದಗಳ ಅಥವಾ ಇಸಂಗಳ ಸಂಘರ್ಷದಲ್ಲಿ ಈ ನಾಲ್ಕೂ ವಿದ್ಯಮಾನಗಳು ಯಾವುದೇ ನೆಲೆಯಲ್ಲಿ ನಿಂತರೂ ಜನಸಮುದಾಯಗಳ ಮೂಲ ಆಶಯಗಳು ಮತ್ತು ಸಮಷ್ಟಿ ಪ್ರಜ್ಞೆಯ ಸಂರಕ್ಷಣೆಯ ಅನಿವಾರ್ಯತೆ ಎದುರಾದಾಗ ಮಾನವೀಯತೆ ಎನ್ನುವ ಒಂದು ವಿದ್ಯಮಾನ ಗೋಚರಿಸಲೇಬೇಕಲ್ಲವೇ ?

ವಸುದೈವ ಕುಟುಂಬಕಂ ಎನ್ನುವ ಅಸ್ಪಷ್ಟ ಘೋಷವಾಕ್ಯಕ್ಕಿಂತಲೂ ವಿಶ್ವಮಾನವತೆ ಎನ್ನುವ ವಿಶಾಲ ಹೃದಯದ ಒಂದು ಪದ ನಮ್ಮ ಮನಸುಗಳಿಗೆ ಹತ್ತಿರವಾಗುವುದು ಈ ಕಾರಣಕ್ಕಾಗಿಯೇ ಅಲ್ಲವೇ ? ಇದು ಮಾಧ್ಯಮ ಜಗತ್ತಿನಿಂದ ಕಣ್ಮರೆಯಾಗುತ್ತಿದೆ.

ಇಲ್ಲಿ ಮಾಧ್ಯಮ ಜಗತ್ತು ತನ್ನ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಕಂಡುಕೊಳ್ಳಬೇಕಿತ್ತು. ತನ್ನ ಅಸ್ತಿತ್ವ ಮತ್ತು ಅಸ್ಮಿತೆಗೂ, ಈ ದೇಶದ ಬಹುಸಂಖ್ಯೆಯ ಜನಸಮುದಾಯಗಳ ಅಸ್ತಿತ್ವ ಮತ್ತು ಅಸ್ಮಿತೆಗೂ ಅವಿನಾಭಾವ ಸಂಬಂಧ ಇದೆ, ಈ ಸಂಬಂಧವನ್ನು ಹೊಸೆಯುವ ಸೂಕ್ಷ್ಮ ತಂತುಗಳನ್ನು ನಿಷ್ಕ್ರಿಯಗೊಳಿಸಲು ಸಮಾಜೋ ರಾಜಕೀಯ ನೆಲೆಯಲ್ಲಿ ಮತ್ತು ಸಾಂಸ್ಕೃತಿಕ ನೆಲೆಯಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಸದಾ ಸಕ್ರಿಯವಾಗಿರುತ್ತವೆ ಎನ್ನುವ ಪ್ರಜ್ಞೆ ಮಾಧ್ಯಮ ಜಗತ್ತಿನಲ್ಲಿ ಸದಾ ಜಾಗೃತವಾಗಿರಬೇಕಿತ್ತು.

ಪ್ರಭುತ್ವ ಮತ್ತು ಸರ್ಕಾರ ಅಥವಾ ವ್ಯವಸ್ಥೆ ಈ ಬಹುಸಂಖ್ಯೆಯ ಜನಸಮುದಾಯಗಳನ್ನು ಪ್ರತಿನಿಧಿಸುವುದಿಲ್ಲ, ನಿಯಂತ್ರಿಸುತ್ತವೆ. ಈ ಪ್ರಾತಿನಿಧಿಕ ಹೊಣೆಯನ್ನು ಹೊರಬೇಕಾದುದು ಮಾಧ್ಯಮ ಲೋಕದ ಆದ್ಯತೆಯಾಗಬೇಕಲ್ಲವೇ ?

ಈ ಕೊರತೆಯ ವಿರಾಟ್ ಸ್ವರೂಪವನ್ನು ನಾವು ಕೊರೋನಾ ಸಂದರ್ಭದಲ್ಲಿ ಕಾಣುತ್ತಿದ್ದೇವೆ. ಹಣಕಾಸು ಬಂಡವಾಳ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳನ್ನೂ ಸೇರಿದಂತೆ ವ್ಯವಸ್ಥೆಯ ಎಲ್ಲ ಸಾಂಸ್ಥಿಕ ನೆಲೆಗಳೂ ಬಿಕರಿಯಾಗುತ್ತಿದ್ದರೂ, ತಾನು ಹರಾಜು ಮಾರುಕಟ್ಟೆಯ ಬಲಿಪೀಠದಲ್ಲಿ ತಲೆತಗ್ಗಿಸಿ ನಿಲ್ಲುವುದಿಲ್ಲ ಎನ್ನುವ ದಿಟ್ಟತನ ಮಾಧ್ಯಮ ಜಗತ್ತಿಗೆ ಇರಬೇಕಿತ್ತು. 1975ರ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಇದನ್ನು ಕಂಡಿದ್ದೇವೆ.

ಆದರೆ ಪರಿಸ್ಥಿತಿ ಏನೇ ಇದ್ದರೂ ಇಂದು ವಸ್ತುಸ್ಥಿತಿ ಬದಲಾಗಿದೆ. ಹಣಕಾಸು ಬಂಡವಾಳದ ಮಾರುಕಟ್ಟೆ ಅಧಿಪತ್ಯದೊಂದಿಗೆ, ಸಾಂಸ್ಕೃತಿಕ ರಾಜಕಾರಣ ಮತ್ತು ಜಾತಿ ರಾಜಕಾರಣದ ಕಬಂಧ ಬಾಹುಗಳು ಇಡೀ ವ್ಯವಸ್ಥೆಯನ್ನೇ ಆಕ್ರಮಿಸಿಕೊಂಡಿವೆ. ಪ್ರಭುತ್ವದ ನೆಲೆಗಳು ಈ ಅತಿಕ್ರಮಿತ ಕೋಟೆಯಲ್ಲಿ ಕಂಡುಬರುತ್ತಿವೆ. ಚುನಾಯಿತ ಸರ್ಕಾರಗಳು ತಮ್ಮ ಮೂಲ ನೆಲೆ ಮತ್ತು ಸೆಲೆ ಎರಡನ್ನು ಮರೆತು ಸ್ವಂತಿಕೆ ಕಳೆದುಕೊಂಡಿವೆ.

ಇಂತಹ ವಿಷಮ ಸ್ಥಿತಿಯಲ್ಲಿ 130 ಕೋಟಿ ಜನತೆಯ ಸೂಕ್ಷ್ಮ ಸಂವೇದನೆಗೆ ಸ್ಪಂದಿಸುವ ನೈತಿಕ ಹೊಣೆ ಮಾಧ್ಯಮ ಲೋಕದ ಮೇಲಿದೆ. ಕೆಂಪುಕೋಟೆಯ ಮೇಲಿನ ಛಾಯೆ ಮಾಧ್ಯಮ ಲೋಕದಲ್ಲಿ ಕತ್ತಲು ಆವರಿಸುವಂತೆ ಮಾಡುವ ಪರಂಪರೆ ಇಡೀ ಮಾಧ್ಯಮ ಜಗತ್ತನ್ನೇ ಬದಲಿಸಿಬಿಟ್ಟಿದೆ. ಬಿತ್ತರವಾಗಬೇಕಿದ್ದ ಸುದ್ದಿಗಳು ಉತ್ಪಾದನೆಯಾಗುತ್ತಿವೆ.

ಮಾಧ್ಯಮ ಲೋಕದ ಮಸೂರಗಳು ಸಿಕ್ಕುಗಳಿಗೆ ಸಿಲುಕಿ, ಸೂತ್ರ ಕಳೆದುಕೊಂಡಂತಾಗಿವೆ. ಪತ್ರಿಕೋದ್ಯಮದ ಕಣ್ಣೋಟ ಮತ್ತು ಮುನ್ನೋಟ ಮಸೂರದಲ್ಲೇ ಇರುತ್ತದೆ ಅಲ್ಲವೇ ? ಜನಸಾಮಾನ್ಯರ ನಾಡಿಮಿಡಿತವನ್ನು ಗ್ರಹಿಸಬೇಕಾದ ಮಾಧ್ಯಮ ಲೋಕ ಇಂದು ಉಸಿರುಗಟ್ಟಿರುವ ಸಮಾಜವನ್ನು ಅಕ್ಷರ ಸರಕು ಸಾಗಿಸುವ ಸಾಧನದಂತೆ ಬಳಸಿಕೊಳ್ಳುತ್ತಿದೆ. ಇದರ ನೇರ ಪರಿಣಾಮವನ್ನು ಕೊರೋನಾ ಸಂದರ್ಭದಲ್ಲೇ ಕಂಡಿದ್ದೇವೆ.

ಪ್ರಜಾತಂತ್ರ ಮೌಲ್ಯಗಳ ರಕ್ಷಣೆ ಮಾಧ್ಯಮ ಲೋಕದ ಮೌಖಿಕ ಅಭಿವ್ಯಕ್ತಿಯಿಂದ ಸಾಧ್ಯವಾಗುವಷ್ಟೇ ಅಕ್ಷರದಿಂದಲೂ ಸಾಧ್ಯವಾಗುತ್ತದೆ. ಸುದ್ದಿಮನೆಗಳ ಈ ಅಕ್ಷರಗಳು ಯಾವುದೇ ಚೌಕಟ್ಟಿನೊಳಗೆ ಬಂಧನಕ್ಕೊಳಗಾಗದೆ ಮುಕ್ತ ವಾತಾವರಣದಲ್ಲಿ ಹರಿದಾಡಿದಾಗ ಸಮಾಜದ ವಿಭಿನ್ನ ವರ್ಗಗಳು ಇವುಗಳ ನಡುವೆ ತಮ್ಮ ನೆಲೆ ಕಂಡುಕೊಳ್ಳುತ್ತವೆ.

ಶೋಷಿತ, ಅವಕಾಶವಂಚಿತ, ದಮನಿತ ಜನಸಮುದಾಯಗಳು ಈ ನೆಲೆಯಲ್ಲೇ ತಮ್ಮ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಗುರುತಿಸಿಕೊಳ್ಳುತ್ತವೆ. ಇದು ಪ್ರಜಾತಂತ್ರ ವ್ಯವಸ್ಥೆಯ ಬಲವರ್ಧನೆಗೆ ನೆರವಾಗುತ್ತದೆ. ಪತ್ರಿಕೋದ್ಯಮ ಎನ್ನುವ ಪದವನ್ನು ನಾವೆಷ್ಟೇ ಬಳಸಿದರೂ ಪತ್ರಿಕೆ ಉದ್ಯಮವಾಗುವುದನ್ನು ಸಹಿಸಲಾಗುವುದಿಲ್ಲ. ವಿದ್ಯುನ್ಮಾನ ಮಾಧ್ಯಮಗಳಿಗೂ ಇದು ಅನ್ವಯಿಸುತ್ತದೆ.

ಮಾಧ್ಯಮ ಲೋಕದಲ್ಲಿ ಮಾಂತ್ರಿಕ ಶಕ್ತಿ ಇದೆ. ಈ ಮಾಂತ್ರಿಕ ಶಕ್ತಿಯನ್ನು ಸಮಷ್ಟಿ ಪ್ರಜ್ಞೆಯ ನೆಲೆಯಲ್ಲಿ ಬಳಸಿದರೆ ಪ್ರಜಾತಂತ್ರದ ಮೌಲ್ಯಗಳ ರಕ್ಷಣೆಯಾಗುತ್ತವೆ. ವ್ಯಷ್ಟಿ ಪ್ರಜ್ಞೆಯ ನೆಲೆಯಲ್ಲಿ ಬಳಸಿದರೆ ಮಾದ್ಯಮ ವಸ್ತುನಿಷ್ಠೆಯನ್ನು ಮರೆತು ವ್ಯಕ್ತಿನಿಷ್ಠೆಗೆ ಬಲಿಯಾಗುತ್ತದೆ. ಬೌದ್ಧಿಕ ಸಮಾಜ ವಿನಾಶದತ್ತ ಸಾಗುತ್ತದೆ.

ಕಾರ್ಪೋರೇಟ್ ಔದ್ಯಮಿಕ ಹಿತಾಸಕ್ತಿ ಮತ್ತು ಮಾರುಕಟ್ಟೆಯ ಲೆಕ್ಕಾಚಾರಗಳು ಈ ಮಾಂತ್ರಿಕ ಶಕ್ತಿಯನ್ನು ನಿಯಂತ್ರಿಸುವಂತಾದರೆ ಮಾಧ್ಯಮ ಲೋಕ ತನ್ನ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಸುಲಭವಾಗಿ ಕಳೆದುಕೊಳ್ಳುತ್ತದೆ. ಇಂದು ಈ ಅಪಾಯವನ್ನು ನಾವು ಎದುರಿಸುತ್ತಿದ್ದೇವೆ.

ದುರದೃಷ್ಟವಶಾತ್ ಇಂದು ನಾವು ಔದ್ಯಮಿಕ ಸ್ವರೂಪದ ಮಾಧ್ಯಮಗಳ ನಡುವೆ ಬದುಕುತ್ತಿದ್ದೇವೆ. ಹಾಗಾಗಿಯೇ ಸುದ್ದಿಮನೆಗಳಲ್ಲಿ ಅಭಿಪ್ರಾಯಗಳ ಉತ್ಪಾದನೆಯಾದರೆ, ಮುದ್ರಣ ಮನೆಗಳಲ್ಲಿ ಅಕ್ಷರಗಳು ಉತ್ಪಾದನೆಯಾಗುತ್ತವೆ. ಎರಡೂ ಕಡೆ ಅಕ್ಷರ/ಅಭಿಪ್ರಾಯ ಮೂಡುವ ಪರಿಕಲ್ಪನೆ ಇಲ್ಲವಾಗಿದೆ.

ಪರ್ಯಾಯವೇನು ಎನ್ನುವ ಪ್ರಶ್ನೆಯೊಡನೆಯೇ ನಾವು ಮತ್ತೊಂದು ಮಾಧ್ಯಮ ಜಗತ್ತನ್ನು ಸೃಷ್ಟಿಸುವ ಹಂತಕ್ಕೆ ತಲುಪಿದ್ದೇವೆ. ಅಧಿಕಾರ ರಾಜಕಾರಣ ಮತ್ತು ವ್ಯವಸ್ಥೆಯ ಬಾಹುಗಳಿಂದ ದೂರ ಉಳಿದು ಈ ಹೊಸ ಜಗತ್ತನ್ನು ಸಂರಕ್ಷಿಸಿ, ಮಾನವೀಯ ನೆಲೆಯಲ್ಲಿ ಅಕ್ಷರಗಳನ್ನು ಬಿತ್ತುವ ನಿಟ್ಟಿನಲ್ಲಿ ನಾವು ಸಾಗಬೇಕಿದೆ. ಆಗ ಮಾತ್ರ ವಿಶ್ವಮಾನವ ಸಂದೇಶವನ್ನು ಸಾಕಾರಗೊಳಿಸಲು ಸಾಧ್ಯ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಭಾರತದ ಜನಸಂಖ್ಯೆ ವರವೋ..? ಶಾಪವೋ..?

Published

on

ಸಾಂದರ್ಭಿಕ ಚಿತ್ರ

 

  • ಅಂಬಿಕಾ. ಕೆ
    ಎಂ.ಎ. ಪ್ರಥಮ ವರ್ಷದ ವಿದ್ಯಾರ್ಥಿನಿ
    ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
    ಬೆಂಗಳೂರು ವಿಶ್ವವಿದ್ಯಾಲಯ

 

ವಿಶ್ವ ಸಂಸ್ಥೆಯು ಪಾಪುಲೇಷನ್ ಫಂಡ್ ಮಾಡಿರುವ ಅಂದಾಜಿನ ಪ್ರಕಾರ ಭಾರತವು ಜಗತ್ತಿನ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಎನಿಸಿಕೊಂಡಿದೆ.

ದೇಶದ ಒಟ್ಟು ಜನಸಂಖ್ಯೆಯು 142.86 ಕೋಟಿಗೆ ಏರಿಕೆಯಾಗಿದ್ದು, ಚೀನಾ ಎರಡನೇ ಸ್ಥಾನಕ್ಕೆ ಇಳಿದಿದೆ, ಇಂತಹದೊಂದು ಹಿರಿಮೆಗೆ ಭಾರತವು ಪಾತ್ರವಾಗಲಿದೆ ಎಂಬುದರ ಅರಿವು ಹಿಂದೆಯೇ ಇತ್ತು. ಹೊಸ ಭಾರತದ ಜನಸಂಖ್ಯೆಯ ಸ್ವರೂಪವೇನು ಮತ್ತು ಯಾವ ವಯೋ ಮಾನದವರು ಎಷ್ಟಿದ್ದಾರೆ. ಆದಾಯ ಮಟ್ಟ ಹೇಗಿದೆ, ಆದಾಯ ಹಂಚಿಕೆ ಹೇಗಿದೆ ಎಂಬುದರ ಕುರಿತು ಕೂಡ ಚರ್ಚೆಗಳು ನಡೆಯುತ್ತಿವೆ. ಒಟ್ಟು ಜನಸಂಖ್ಯೆಯ ಜತೆಗೆ ಈ ಎಲ್ಲಾ ಅಂಶಗಳು ಕೂಡ ಸರ್ಕಾರದ ನೀತಿಗಳು ಮತ್ತು ಕಾರ್ಯಕ್ರಮ ರೂಪಿಸುವಿಕೆ ಮೇಲೆ ಪ್ರಭಾವ ಬೀರುತ್ತವೆ. ರಾಜಕೀಯ ಪಕ್ಷಗಳು ಮತ್ತು ಗುಂಪುಗಳು ರಾಜಕೀಯ ಹಾಗೂ ಸಾಮಾಜಿಕ ಸ್ಥಾನಗಳನ್ನು ನಿರ್ಧರಿಸುವಲ್ಲಿಯೂ ಈ ಅಂಶಗಳು ಪಾತ್ರವಹಿಸುತ್ತವೆ ಭಾರತದಲ್ಲಿ ಗರಿಷ್ಠ ಸಂಖ್ಯೆಯು ಯುವ ಜನರಿದ್ದಾರೆ.

ಹಾಗೆಯೇ ಮುಂದುವರೆಯಲಿದೆ 15 ರಿಂದ 24 ವರ್ಷದೊಳಗಿನವರ ಸಂಖ್ಯೆಯು 25.4 ಕೋಟಿ ಎಂದು ಅಂದಾಜಿಸಲಾಗಿದೆ ಇನ್ನು ದೀರ್ಘಕಾಲ ಭಾರತವು ಈ ಸ್ಥಿತಿ ಕಾಯ್ದುಕೊಳ್ಳಲಿದೆ ಎಂಬುದರಲ್ಲಿಯೂ ಅನುಮಾನ ಇಲ್ಲ ಜನಸಂಖ್ಯೆಯಲ್ಲಿ ಜಗತ್ತಿನಲ್ಲಿ ಮೊದಲ ಸ್ಥಾನಕ್ಕೆ ಏರುವುದು, ಗೌರವ ಏನು ಅಲ್ಲ ಬದಲಿಗೆ ಇದು ದೇಶಕ್ಕೆ ಹಲವು ಸವಾಲುಗಳನ್ನು ಹುಟ್ಟುತ್ತದೆ ಜತೆಗೆ ಅವಕಾಶಗಳ ಬಾಗಿಗಳನ್ನು ತೆರೆಯುತ್ತದೆ ಆದರೆ, ಜನರನ್ನು ಸಕಾಲಿಕವಾಗಿ ಮತ್ತು ಪರಿಣಾಮಕಾರಿಯಾಗಿ ಬಲಿಸಿಕೊಳ್ಳದೆ ಇದ್ದರೆ ಜನಸಂಖ್ಯೆಯೇ ಶಾಪವಾಗಿ ದೊಡ್ಡ ಸವಾಲಾಗಿ ಪರಿಣಮಿಸಬಹುದು. ದೇಶ ಪ್ರತಿ ವರ್ಷವೂ ಹೆಚ್ಚು ಹೆಚ್ಚು ಜನರಿಗೆ ಆಹಾರ ಬಟ್ಟೆ ಶಿಕ್ಷಣ ಆರೋಗ್ಯ ಸೇವೆ ಉದ್ಯೋಗಾವಕಾಶಗಳನ್ನು ಒದಗಿಸಬೇಕಾಗುತ್ತದೆ.

ಅಂಬಿಕಾ. ಕೆ

ಹೀಗೆ ಮುಂದುವರೆದರೆ ಉದ್ಯೋಗಾವಕಾಶಗಳು ದೊರೆಯದೆ ಜನರ ಜೀವನ ಮಟ್ಟ ಸುಧಾರಿಸಿಕೊಳ್ಳುವುದು ಕಷ್ಟವೇ ಸರಿ ಕೆಲಸ ಮಾಡುವ ವಯೋಮಾನದ ಜನರನ್ನು ಸಮಂಜಸವಾಗಿ ಬಳಸಿಕೊಂಡರೇ ಮಾತ್ರ ಜನಸಂಖ್ಯೆಯು ದೇಶದ ಅಭಿವೃದ್ಧಿಗೆ ಪೂರಕವಾಗಿ ಪರಿಣಮಿಸುತ್ತದೆ. ದೇಶದಲ್ಲಿ ದೊಡ್ಡ ಸಂಖ್ಯೆಯ ಜನರಿಗೆ ಈಗಲೂ ಮೂಲ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗಿಲ್ಲ ಆದ್ದರಿಂದ ಎಲ್ಲಾ ಕ್ಷೇತ್ರಗಳಲ್ಲಿಯೂ ಸಂಬಂಧಿಸಿದ ನೀತಿಗಳು ಮತ್ತು ಕಾರ್ಯತಂತ್ರ ಗಳಿಗೆ ಸಂಬಂಧಿಸಿದ ಪ್ರಯತ್ನಗಳನ್ನು ನಡೆಸದೇ ಇದ್ದರೆ ಜನಸಂಖ್ಯೆ ಹೆಚ್ಚಳದ ಲಾಭವು ದೊರೆಯದೆ ಹೋಗಬಹುದು ಇದರ ಪರಿಣಾಮವಾಗಿ ಲಾಭದ ಹೆಸರಿನಲ್ಲಿ ನಷ್ಟವೇ ಹೆಚ್ಚು ಅದುವೇ ಒಂದು ಹೊರೆಯುವಾಗಬಹುದು.

ಯುವ ಜನರಿಗೆ ಸೌಲಭ್ಯಗಳು ಮತ್ತು ಅವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ಹೆಚ್ಚುತ್ತಲೇ ಇರುವ ಹಿರಿಯ ನಾಗರಿಕರ ಹಾರೈಕೆಯು ವ್ಯವಸ್ಥೆ ಮಾಡಬೇಕಿದೆ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುವುದು ಮತ್ತು ಸವಾಲುಗಳನ್ನು ಎದುರಿಸುವುದು ಭಾರತೀಯರ ಹೊರೆಗಾರಿಕೆ ದೇಶದ ಜನರ ಅಗತ್ಯಗಳನ್ನು ಪೂರೈಸಲು ವಿಫಲವಾದರೆ, ಸಾಮಾಜಿಕ ಸಂಘರ್ಷ ಮತ್ತು ರಾಜಕೀಯ ದೃಷ್ಟಿ ಉಂಟಾಗಿ ಅದು ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು. ಮುಂದೆ ಜನಸಂಖ್ಯಾ ಸ್ಫೋಟವಾದರೂ ಆಶ್ಚರ್ಯ ಪಡಬೇಕಾಗಿಲ್ಲ ಈಗಿನ ಸನ್ನಿವೇಶದಲ್ಲಿ ದೊರಕುತ್ತಿರುವ ಸಂಪನ್ಮೂಲಗಳ ಗರಿಷ್ಠ ಬಳಕೆ ಮತ್ತು ಪರಿಣಾಮಕಾರಿ ಬಳಕೆ ಬಹಳ ಮಹತ್ವವಾಗಿದೆ.

ಮೀಸಲಾತಿ, ವಲಸೆ , ರಾಜಕೀಯ ಪ್ರಾತಿನಿಧ್ಯ ಸಂಪನ್ಮೂಲಗಳ ಹಂಚಿಕೆ ಮತ್ತು ಇದರ ವಿಚಾರಗಳು ಚರ್ಚೆಗೆ ಒಳಗಾಗುವ ಸಾಧ್ಯತೆ ಇದೆ ಸಮಾಜದ ಎಲ್ಲಾ ವರ್ಗಗಳನ್ನು ಸಮಾನವಾಗಿ ಒಳಗೊಳ್ಳುವ ಆರ್ಥಿಕ ಪ್ರಗತಿಯು ಸಾಧ್ಯವಾದರೆ ಜನಸಂಖ್ಯೆ ಏರಿಕೆ ಸವಾಲಾಗಿ ಪರಿಣಮಿಸಬಹುದು ಮಾನವ ಅಭಿವೃದ್ಧಿಯೇ ಅತ್ಯುತ್ತಮ ಕುಟುಂಬ ಕಲ್ಯಾಣ ಯೋಜನೆ ಇದರಿಂದ ಜನಸಂಖ್ಯೆಯ ಏರಿಕೆಯನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬಹುದು ಜನಸಂಖ್ಯೆ ಹೆಚ್ಚಳ ಯಾವುದೋ ಒಂದು ಸಮುದಾಯ ಕಾರಣ ಎಂದು ದೂಷಿಸುವ ಪ್ರವೃತ್ತಿಗೆ ಜ್ಞಾನದಾದ ಆಧಾರ ಇಲ್ಲದ ಪೂರ್ವಗ್ರಹ ಕಾರಣದಿಂದ ಮತ್ತು ಇದು ತಪ್ಪು ನಡವಳಿಕೆಯ ಜನಸಂಖ್ಯೆಗೆ ಸಂಬಂಧಿಸಿದ ಸವಾಲುಗಳನ್ನು ಉತ್ತಮವಾಗಿ ಮತ್ತು ಜಾಣ್ಮೆಯಿಂದ ನಿರ್ವಹಿಸಿದರೆ ಈ ಶತಮಾನವನ್ನು ಭಾರತದ ಶತಮಾನವನ್ನಾಗಿ ಪರಿವರ್ತಿಸುವ ಅವಕಾಶ ನಮ್ಮ ಮುಂದೆ ಇದೆ ಜನರೇ ನಮ್ಮ ದೇಶದ ಸಂಪನ್ಮೂಲವನ್ನಾಗಿ ಮಾರ್ಪಾಡು ಮಾಡಿಕೊಳ್ಳುವ ಅವಕಾಶ ನಮ್ಮ ನಿಮ್ಮೆಲ್ಲರ ಮೇಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬಾಬಾ ಸಾಹೇಬ ಅಂಬೇಡ್ಕರರ ‘ಧ್ಯಾನ’ ಗಾಯನ ; ವಿನೂತನ

Published

on

 

  • ವೆನ್ನೆಲಾ ಕೆ.
    ಎಂ.ಎ. ಪ್ರಥಮ ವರ್ಷದ ವಿದ್ಯಾರ್ಥಿನಿ,
    ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,
    ಬೆಂಗಳೂರು ವಿಶ್ವವಿದ್ಯಾಲಯ,ಬೆಂಗಳೂರು

ತ್ತೀಚೆಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಅನನ್ಯ ಮಾಧ್ಯಮ ಮತ್ತು ಬೆಳ್ಳಿತೆರೆ ಸಂಸ್ಥೆಯ ವತಿಯಿಂದ ಆಯೋಜಿಸಿದ 132ನೇ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರ ಜನುಮ ನಿಮಿತ್ತವಾಗಿ “ಧಾನ್ಯ” ‘ಗಾಯನವು’ ವಿನೂತನವಾದ ಈ ಕಾರ್ಯಕ್ರಮವು 5 ಘಂಟೆ, 1ನಿಮಿಷ, 14 ಸೆಕೆಂಡ್ ಗೆ ಆರಂಭವಾಗಿದ್ದು ಅವಿಸ್ಮರಣೀಯವಾದ ದಿನ, ಇದೊಂದು ಭಾರತ ಇತಿಹಾಸದ ಪುಟದ ಚರಿತ್ರೆಯಲ್ಲೇ ಹೊಸ ದಾಖಲೆಯೂ ಅಂತ ಹೇಳಬಹುದು.

ಈ ಕಾರ್ಯಕ್ರಮವನ್ನು ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ವು ಇಡೀ ಭಾರತದಲ್ಲೇ ಯಾರು ಮಾಡಿರದ ಈ ವಿನೂತವಾದ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಬೆಂಗಳೂರು ನಗರದಲ್ಲಿರುವ ಗಾಂಧಿ ಭವನದ ಆವರಣದಲ್ಲಿ ‘ಅನನ್ಯ ಸಂಸ್ಥೆ’ ವತಿಯಿಂದ 132 ನೇ ‘ವಿಶ್ವದ ವೀರ ವಿದ್ಯಾರ್ಥಿ ಹುಟ್ಟಿದ ದಿನ’ ಹಾಗೂ ‘ರಾಷ್ಟ್ರದ ಸ್ಫೂರ್ತಿಯ ದಿನ’ ‘ಸರ್ವ ಸಮುದಾಯದ ಶಕ್ತಿಯ ದಿನ’ ಇದೊಂದು ನಮ್ಮೆಲ್ಲರ ಹಬ್ಬದ ದಿನ ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಇಂತಹ ಮೇರು ಶಿಖರ ಟ್ಯಾಗ್ ಲೈನ್ ಗಳಿಂದ ಅದ್ಭುತವಾಗಿ
ಆಯೋಜಿಸಿದ ಕಾರ್ಯಕ್ರಮಕ್ಕೆ ರಾಜ್ಯ ಕಂಡ ಪ್ರಸಿದ್ಧ ಐಪಿಎಸ್ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು, ಸಿನಿಮಾ ಸೆಲೆಬ್ರಿಟಿಗಳು, ಸಮಸ್ತ ವಿದ್ಯಾರ್ಥಿ ಸಮೂಹ, ಸಾಮಾಜಿಕ ನ್ಯಾಯದ ವಿಚಾರಶೀಲರು, ಬರಹಗಾರರು, ಪತ್ರಕರ್ತರು ಇನ್ನೂ ಅನೇಕ ಮುಂತಾದವರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಇದಕ್ಕೆ ಮುಖ್ಯ ಕಾರಣಕರ್ತರಾದ ಅನನ್ಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶ್ರೀ ರಾಂಪುರ ರಾಜೇಶ್ ರವರ ನಿರ್ದೇಶನದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿದ್ದು ಹೆಮ್ಮೆಯ ವಿಷಯ.

ಇದರ ಹಿನ್ನೆಲೆ: ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ದಲ್ಲಿ ಅತ್ಯುತ್ತಮ ಹಾಗೂ ಅತ್ಯಂತ ತುಂಬಾ ಮನಸ್ಸಿನಿಂದಲ್ಲೇ ವಿಶೇಷವಾದ ಆಸಕ್ತಿಯನ್ನು ಅಂಬೇಡ್ಕರ್ ರವರು ಸಂಗೀತ ಪ್ರಿಯರು ಹಾಗೂ ಅಂಬೇಡ್ಕರ್ ರವರು ಸುಶ್ರಾವ್ಯವಾಗಿ ವಯಲಿನ್ ನುಡಿಸುತ್ತಿದ್ದರು. ಹಾಗೇಯೆ ಇವರಿಗೆ ಚಿತ್ರಕಲೆಯೂ ಸಹ ಒಲಿದಿತ್ತು ಎಂಬುದು ಗಮನಾರ್ಹ ಸಂಗತಿ. ಇಂತಹ ವಿಷಯವನ್ನು ಯಾರು ಸಹ ಬೆಳಕು ಚೆಲ್ಲುವ ಸಾಹಸಕ್ಕೆ ಕೈ ಹಾಕಿ ಇರಲಿಲ್ಲ. ಇದೊಂದು ಅನನ್ಯ ಸಂಸ್ಥೆ ವತಿಯಿಂದ ಇಂತಹ ಕಾರ್ಯಕ್ರಮ ನಡೆಸಿಕೊಟ್ಟಿದ್ದು ಐತಿಹಾಸಿಕ ಚರಿತ್ರೆಗೆ ಮುನ್ನುಡಿವಾಗಿದೆ.

ಅಂಬೇಡ್ಕರ್ ರವರಿಗೆ ತಮ್ಮ ಬಿಡುವಿನ ವೇಳೆಯಲ್ಲಿ ಅದ್ಭುತವಾದ ಒಬ್ಬ ಸಂಗೀತ ಪ್ರಿಯರಾಗಿದ್ದರು. ಇವರು ಸುಶ್ರಾವ್ಯವಾಗಿ ವಯಲಿನ್ ನುಡಿಸುತ್ತಿದ್ದರು ಹಾಗೂ ವಿಶೇಷವಾಗಿ ಚಿತ್ರಕಲೆ ಸಹ ಸರಳವಾಗಿ ಮಾಡುವ ಮೂಲಕ ತಮ್ಮ ಮನದಲ್ಲಿ ಆಸಕ್ತಿ ಹೊಂದಿದ್ದರು. ಇನ್ನು ಹಲವಾರು ವಿಷಯದಲ್ಲಿ ಅಂದರೆ ಅಂಬೇಡ್ಕರ್ ರವರಿಗೆ ವಿಶೇಷವಾದ ಇವುಗಳಲ್ಲಿ ಆಸಕ್ತಿ ಮತ್ತು ಅಭಿರುಚಿಯನ್ನು ಹೊಂದಿದ್ದರು ಎಂಬುದನ್ನು ಮನಗಂಡ ಅನನ್ಯ ಸಂಸ್ಥೆಯ ವತಿಯಿಂದ ಆಯೋಜಿಸಿದ ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮವು ಅತ್ಯುತ್ತಮವಾಗಿ ಮೂಡಿಬಂದಿದೆ.

ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮದಲ್ಲಿ ವಿಶೇಷವಾಗಿ ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕರು ಹಾಗೂ ಚಿತ್ರ ಸಾಹಿತ್ಯಗಳು, ಅಂಬೇಡ್ಕರ್ ವಾದಿಗಳು ಮತ್ತು ಚಿತ್ರರಂಗದ ಬಹುಮುಖ ಪ್ರತಿಭೆ, ಮಹಾಗುರುಗಳಾದ ಡಾ. ಹಂಸಲೇಖ ರವರು ಹೊಸದಾಗಿ ಹಾಡನ್ನು ಬರೆದದ್ದು ತುಂಬಾ ಅವಿಸ್ಮರಣೀಯ ಅಂತ ಹೇಳಬಹುದು. ಇವರು ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪ್ರೊತ್ಸಾಹ ನೀಡಿದ್ದು, ಸರ್ವ ಸಮುದಾಯದಕ್ಕೆ ಹೊಸ ಶಕ್ತಿ ತುಂಬಿದ್ದು ಮೇರು ವ್ಯಕ್ತಿಯಾಗಿದ್ದಾರೆ.

ವೆನ್ನೆಲಾ ಕೆ.

ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮದಲ್ಲಿ ಮುಖ್ಯವಾದ ಅಂಶವೆಂದರೆ ಇದರಲ್ಲಿ ಒಟ್ಟು ನಾಲ್ಕು ಭಗವಾನ್ ಬುದ್ಧ, ಅಂಬೇಡ್ಕರ್, ಬಸವೇಶ್ವರ ಮುಂತಾದರವರನ್ನು ವಿಷಯಗಳನ್ನು ಪರಿಗಣಿಸಿ ಅಂಬೇಡ್ಕರ್ ಧ್ಯಾನ ಹಾಡುಗಳ ರಚಿಸಿವುದರಲ್ಲಿ ಪ್ರಮುಖವಾಗಿ ರಾಜ್ಯದ ಹೆಸರಾಂತ ಸಾಹಿತಿ, ಪ್ರಗತಿಪರ ಚಿಂತಕರು ಹಾಗೂ ಮಾಜಿ ಅಧ್ಯಕ್ಷರಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರಿನ ಪ್ರೊ.ಎಸ್.ಜಿ.ಸಿದ್ದರಾಮಯ್ಯನವರ
‘ಧೀ ಶಕ್ತಿಯೇ … ಜ್ಞಾನ ಪರ್ವತದ … ಧೀಮಂತ ಧೀಶಕ್ತಿಯೇ …
ಇಂತಹ ಸಾಲುಗಳನ್ನು, ಡಾ. ಕೈ.ವೈ.ನಾರಾಯಣಸ್ವಾಮಿರವರ ದೀಪಾ …. ಎಲ್ಲರೆದೆಯಲಿ … ಹಚ್ಚಿದ ದೀಪಾ .. ಭೂಪಾ … ಭೂಪಾ … ಭೀಮಾ ಭೂಪಾ .. ಬಾಬಾ .. ಸಾಹೇಬ್.. ಜೀವಸ್ವರವೇ … ಬಾಬಾ.. ಹಾಗೂ ರವಿ ಮರಿಯಪ್ಪರವರ ಹತ್ತು ಸಾವಿರ ವಯಲಿನನ್ನು … ವೀಣೆಗಳು ನೂರೆಂಟು … ಕೋಟಿ ಕೋಟಿ ಎದೆ ಸದ್ದಿನ ಡೊಳ್ಳು … ಸಂಯೋಜಿಸಿದರೇ .. ಸಂವಿಧಾನಾ … ಮತ್ತು ಚಿತ್ರ ಸಾಹಿತಿ, ಹೆಸರಾಂತ ಸಂಗೀತ ನಿರ್ದೇಶಕರು ಡಾ. ಹಂಸಲೇಖ ರವರು ನಿನ್ನ ಮೌನಾ … ದೀನ ಗಾನಾ… ನಿನ್ನ ಧ್ಯಾನಾ .. ಸಂವಿಧಾನಾ … ಈ ನಾಲ್ಕು ಅಂಬೇಡ್ಕರ್ ಧ್ಯಾನ ರಚನೆಗೆ ಇವರುಗಳ ಬರೆದಿರುವ ಅದ್ಭುತವಾದ ಅಂಬೇಡ್ಕರ್ ರವರ ಧ್ಯಾನ ಹಾಡುಗಳನ್ನು ನಮ್ಮ ಹಿಂದುಸ್ತಾನಿ ಸಂಗೀತ ಹಾಡುಗಳ ಮೂಲಕ ಕನ್ವರ್ಟ್ ಮಾಡುವ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿತು.

ಹಾಗೆಯೇ ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮವು ಬಹಳಷ್ಟು ಯಶಸ್ವಿಯಾಗಬೇಕಾದರೆ ಈ ಮೊದಲು ಪುಟ್ಟರಾಜ ಗವಾಯಿಗಳ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ಶ್ರೀ ಡಿ. ಕುಮಾರ್ ದಾಸ್ ಅವರ ವಿದ್ವತ್ ಶರೀರದಲ್ಲಿ ‘ಧ್ಯಾನ ಗಾಯನ’ ಹಾಗೂ ಇವರ ತಂಡದ ವತಿಯಿಂದ ನಡೆಸಿಕೊಟ್ಟ ಅದ್ಭತವಾದ ಅಂಬೇಡ್ಕರ್ ರವರ ಧ್ಯಾನವು ಹಿಂದುಸ್ತಾನಿ ಸಂಗೀತದ ಕನ್ವರ್ಟ್ ಮಾಡುವ ಮುಖಾಂತರ ಈ ಹಾಡುಗಳನ್ನು ಬಹಳ ಸೊಗಸಾಗಿ ಮೂಡಿಬಂದಿದ್ದು ಹೊಸ ದಾಖಲೆಗೆ ಸೇರ್ಪಡೆಯಾಗಿದೆ.

ಇನ್ನು ಮುಂಬರುವ ದಿನಗಳಲ್ಲಿ ಅದಷ್ಟು ಹಲವಾರು ವಿನೂತನವಾದ ಭಗವಾನ್ ಬುದ್ಧರ, ಬಸವೇಶ್ವರರ ಹಾಗೂ ವಿಶ್ವದ ವೀರ ವಿದ್ಯಾರ್ಥಿಯಾದ ಮೇರು ರಾಷ್ಟ್ರದ
ನಾಯಕರಾದ ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ರವರ ಹಲವಾರು ಹಾಡುಗಳನ್ನು
ಅನನ್ಯ ಮಾಧ್ಯಮ ಮತ್ತು ಬೆಳ್ಳಿತೆರೆ ಸಂಸ್ಥೆಯ ವತಿಯಿಂದ ಆಯೋಜಿಸಿದರೆ ಇನ್ನುಷ್ಟು ಭಾರತದ ಇತಿಹಾಸದ ಪುಟಗಳಲ್ಲಿ ಮರೆತು ಹೋಗಿರುವ ಹಲವು ಬಗ್ಗೆ ದಾಖಲೆ ಇಲ್ಲದ ನೈಜ ಸಂಗತಿಗಳನ್ನು ಪುನಃ ಹೊಸ ದಾಖಲೆಗೆ ಉಪಯುಕ್ತವಾದ ವಿಶಿಷ್ಟವಾದ ಮೇರು ನಾಯಕನ
ಅಂಬೇಡ್ಕರ್ ರವರ ವಿಚಾರ ಧಾರೆಗಳು ತಾವು ಅನುಭವಿಸಿದ ನೋವು, ನಲಿವು, ಭಾರತದ ರಾಜ್ಯಾಂಗದ ಶಿಲ್ಪಿಯನ್ನು ಮುಂಬರುವ ದಿನಗಳಲ್ಲಿ ಹೊಸ ಪೀಳಿಗೆಯ ಪರಿಚಯಿಸುವ ಕೀರ್ತಿದಾಯಿಕವಾಗಲಿ ಮತ್ತು ಅದಷ್ಟು ಮುಂಬರುವ ದಿನಗಳಲ್ಲಿ ಅಂಬೇಡ್ಕರ್ ರವರ ಆಸಕ್ತಿದಾಯಕ ವಿಚಾರಗಳು ಹಾಗೂ ಸಂಗೀತದ ಬಗ್ಗೆ ಹಲವಾರು ಮಾಹಿತಿಗಳು ಸಮಸಮಸಮಾಜಕ್ಕೆ ತಲುಪುವ ವ್ಯವಸ್ಥೆಗೆ ಸಾಕ್ಷಿಯಾಗಲಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ರಷ್ಯಾದಲ್ಲಿ ಓಂ – ಭರತಾಸ್- ರಾಮ – ರಾವಣ ಲಂಕೇಶ – ಮಾರೀಚ – ಸೀತ ನದಿಗಳು..!

Published

on

  • ಲಕ್ಷ್ಮೀಪತಿ ಕೋಲಾರ, ಸಂಶೋಧಕರು, ಸಂಸ್ಕೃತಿ‌ ಚಿಂತಕರು, ಬೆಂಗಳೂರು

ಸ್ಲಾವ್ ಸಮುದಾಯದ ಲಿತುವೇನಿಯ, ಲಾತ್ವಿಯ, ಬೆಲಾರಸ್,ಉಕ್ರೇನ್ ಮತ್ತು ರಷಿಯಾದಂತಹ ದೇಶಗಳ ನದಿ,ನಗರಗಳು ಸಂಸ್ಕೃತ ಮೂಲದ ಹೆಸರುಗಳನ್ನೆ ಇಂದಿಗು ಉಳಿಸಿಕೊಂಡಿರುವುದು ಆ ಭಾಷೆ ಮತ್ತು ಸಂಬಂಧಿತ ಸಂಸ್ಕೃತಿಯೊಂದಿಗೆ ಅವು ಹಿಂದೊಮ್ಮೆ ಹೊಂದಿದ್ದ ಬಲವಾದ ನಂಟಿಗೆ ಸಾಕ್ಷಿಯಾಗಬಲ್ಲವು.

ಇದರೊಂದಿಗೆ ಉತ್ತರ ಭಾರತದ ಆರ್ಯ ವೈದಿಕರ ಭಾಷೆ ಸಂಸ್ಕೃತಿಯೊಂದಿಗೆ ಸ್ಲಾವ್ ಸಮುದಾಯಕ್ಕೆ ಎಷ್ಟು ನಿಕಟ ಸಂಬಂಧವಿತ್ತೆಂಬುದನ್ನು ಮತ್ತು ನಾಲ್ಕೈದು ಸಾವಿರ ವರ್ಷಗಳ ಹಿಂದೆ ಈ ಎಲ್ಲ ಆರ್ಯ ಸಮುದಾಯಗಳು ಒಟ್ಟಿಗೆ ಒಂದೆಡೆಯೇ ಕಳ್ಳುಬಳ್ಳಿಗಳಾಗಿ ಜೀವಿಸಿದ್ದರೆಂಬುದನ್ನ ಈ ಹಿನ್ನೆಲೆಯಲ್ಲಿ ನಾವು ಗ್ರಹಿಸಬಹುದಾಗಿದೆ.

ಅದರಲ್ಲು ವಿಶೇಷವಾಗಿ ಲಿತುವೇನಿಯ ಮತ್ತು ರಷಿಯಾದ ನದಿಗಳ ಹೆಸರುಗಳು ಎಷ್ಟು ಸಂಸ್ಕೃತಮಯವು (ಇಂಡೋ – ಯುರೋಪಿಯನ್ ಭಾಷಾಮೂಲದ) ಮತ್ತು ವೈದಿಕರ ಪುರಾಣ ಮೂಲದವು ಆಗಿವೆ ಎಂದರೆ, ನಂಬಲಿಕ್ಕು ಅಸಾಧ್ಯ ಎಂಬಂತಿವೆ. ಇದರರ್ಥ ಸ್ಲಾವ್ ಜನರು ವೈದಿಕರ ಪುರಾಣಗಳಿಂದ ಪ್ರೇರಿತಗೊಂಡಿದ್ದಾರೆ ಎಂಬುದಲ್ಲ.

ಬದಲಿಗೆ ವೈದಿಕರ ಇಂದಿನ ಪುರಾಣ – ಸಂಸ್ಕೃತಿ – ಭಾಷೆಗಳು ವೈದಿಕರಿಗೆ ಎಷ್ಟು ಸಂಬಂಧಿಸಿದ್ದೋ ಅದಕ್ಕು ಹೆಚ್ಚಿನದಾಗಿ ಸ್ಲಾವ್ ಸಮುದಾಯಕ್ಕೂ ಸಂಬಂಧಿಸಿದ್ದಾಗಿದ್ದವು. ಹಾಗೆ ನೋಡಿದರೆ ಬ್ರಹ್ಮ – ವೇದ ಮೂಲವು ಕೂಡ ಸ್ಲಾವ್ ಸಮುದಾಯದ ಉತ್ತರ ಧ್ರುವ ಪ್ರದೇಶಕ್ಕೆ ಹೋಗಿ ನಿಲ್ಲುತ್ತದೆ ಎಂಬುದು ಸೋಜಿಗವಾದರು ನಿರ್ವಿವಾದವಾಗಿ ಚಾರಿತ್ರಿಕ ಸತ್ಯವಾಗಿದೆ. 12 – 13 ನೇ ಶತಮಾನಗಳಲ್ಲಿ ಸ್ಲಾವ್ ಜನರು ಕ್ರೈಸ್ತರಾಗಿ ಪರಿವರ್ತಿತರಾಗುವವರೆಗು ಅವರು ಶತಾಂಶ ಮತ್ತು ಥೇಟ್ ಶ್ರೇಷ್ಟ ಆರ್ಯ ವೈದಿಕರೆ ಆಗಿದ್ದರು.

ರಷ್ಯ ಮತ್ತು ಲಿತುವೇನಿಯಾಗಳಲ್ಲಿ ಭರತಾಸ್, ಓಂ, ರಾಮ, ಸೀತ, ಲಂಕೇಶ, ರಾವಣ, ಮಾರೀಚ, ನೆಮುನ (ಯಮುನ), ಕಾಮ, ಯಂತ್ರ, ಶ್ವೇತೆ, ದ್ರವ, ಮೋಕ್ಷ, ಋಗ್ವೇದದ ದಾನವ ಮಾತೆ ದನು ನೆನಪಿನ ದನುಬೆ ಮುಂತಾದ ನದಿಗಳು ಮತ್ತು ನಾರದ (ಈಗ ನರೋದ್ನಯ ಎಂದಿದ್ದರು ಸ್ಥಳೀಯರು ನಾರದ ಬೆಟ್ಟ ಎಂದೇ ಕರೆಯುತ್ತಾರೆ) ಹೆಸರಿನ ಬೆಟ್ಟವು ಇವೆ ಎಂದರೆ ಯಾರೂ ಅಚ್ಚರಿಪಡುವಂತದ್ದೆ.

ಯಾರಿಗಾದರು ಈ ಸಂಗತಿಗಳಲ್ಲಿ ಅನುಮಾನ ಹುಟ್ಟುವುದು ಸಹಜವೆ. ಯಾಕೆಂದರೆ ಸ್ಲಾವ್ – ವೈದಿಕ ಆರ್ಯರ ಮೂಲ ಪ್ರದೇಶವೆ ಉತ್ತರ ದ್ರುವ ಪ್ರದೇಶವಾಗಿತ್ತು ಎಂಬ ಚರಿತ್ರೆಯನ್ನೇ ನಮ್ಮಿಂದ ಮರೆಮಾಚಲಾಗಿತ್ತು ಮತ್ತು ಅದು ಬಹುದೊಡ್ಡ ಸಾಂಸ್ಕೃತಿಕ ರಾಜಕಾರಣವೂ ಆಗಿತ್ತು. ಆದರೆ ತಿಲಕರು ತಮ್ಮ “Arctic Home In the Vedas” ಎಂಬ ಪುಸ್ತಕದಲ್ಲಿ ಉತ್ತರ ಭಾರತದ ವೈದಿಕ ಆರ್ಯರ ತವರು ನೆಲ ಉತ್ತರ ದ್ರುವ ಪ್ರದೇಶವೆ, ಅಂದರೆ ಇಂದಿನ ಲಿತುವೇನಿಯ, ಲಾತ್ವಿಯ, ಬೆಲಾರಸ್ ಪ್ರದೇಶಗಳೇ ಆಗಿದ್ದವು ಎಂದು ಸಮರ್ಥ ಸಾಕ್ಷಾಧಾರಗಳೊಂದಿಗೆ ನಿರೂಪಿಸಿದ್ದಾರೆ.

ರಷ್ಯಾದಲ್ಲಿ ಸಂಸ್ಕೃತ ಭಾಷಾಮೂಲದ ನೂರಾರು ನದಿಗಳಿವೆ. ಭಾರತದಲ್ಲಿ ಕೆಲವು ನದಿಗಳನ್ನ ಹೊರತುಪಡಿಸಿದರೆ ಆ ಪ್ರಮಾಣದ ವೈದಿಕ ಪುರಾಣ ಮೂಲದ ನದಿ ಹೆಸರುಗಳು ಈ ನೆಲದಲ್ಲಿ ಇಲ್ಲವೆಂಬುದು ಪ್ರಾಚೀನ ಕಾಲದಿಂದಲು ಆರ್ಯ ವೈದಿಕರು ಇಲ್ಲಿರಲಿಲ್ಲವೆಂಬುದನ್ನೇ ಸೂಚಿಸುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending