ದಿನದ ಸುದ್ದಿ
ಕಲ್ಕಿ ಭಗವಾನ್ ಮತ್ತು ದೇವ ಮಾನವರು..!
ವಿವೇಕಾನಂದ. ಹೆಚ್.ಕೆ
ಸುಮಾರು 12 ವರ್ಷಗಳ ಹಿಂದೆ ವಿಜಯಕುಮಾರ್ ಎಂಬ ಕಲ್ಕಿ ಭಗವಾನ್ ಅವರನ್ನು ಐದಾರು ಬಾರಿ ಭೇಟಿಯಾಗುವ ಅವಕಾಶ ದೊರೆತಿತ್ತು. ಒಬ್ಬ ಭಕ್ತನಾಗಿಯಲ್ಲ. ಆಗ ನನ್ನ ವೃತ್ತಿಯಾಗಿದ್ದ ಸಾಕ್ಷ್ಯಚಿತ್ರದ ರಚನೆ ನಿರ್ಮಾಣ ನಿರ್ದೇಶನದ ಭಾಗವಾಗಿ ತಿರುಪತಿ ಬಳಿಯ ಬಂಗಾರು ಪಾಳ್ಯಂ ಆಶ್ರಮದಲ್ಲಿ ಸುಮಾರು 3 ದಿನಗಳ ಕಾಲ ಮತ್ತು ಚರ್ಚೆಯ ಭಾಗವಾಗಿ ಇನ್ನೂ ಕೆಲವು ದಿನ ಅವರ ಬಳಿ ಮಾತನಾಡುತ್ತಿದ್ದೆ.
ಇದೀಗ ಆತನ ಮೇಲೆ ತೆರಿಗೆ ದಾಳಿಯಾಗಿ ಅಪಾರ ಪ್ರಮಾಣದ ಹಣ ಆಸ್ತಿ ವಶಪಡಿಸಿಕೊಂಡರುವ ಸಂದರ್ಭದಲ್ಲಿ ಒಂದಷ್ಟು ನೆನಪುಗಳು.
ಆಶ್ರಮದ ಸಿಬ್ಬಂದಿ ಮತ್ತು ಭಕ್ತರು ಆತ ಮತ್ತು ಆತನ ಪತ್ನಿಯನ್ನು ಸಾಕ್ಷಾತ್ ದೇವರೆಂದೇ ಪರಿಗಣಿಸಿದ್ದರು. ಸದಾ ಹೊಳೆಯುವ ರೇಷ್ಮೆಯ ವಸ್ತ್ರವನ್ನು ಧರಿಸಿಕೊಂಡಿರುತ್ತಿದ್ದರು. ಉತ್ತಮ ಮೇಕಪ್ ಕಾರಣದಿಂದ ಮುಖ ಒಂದಷ್ಟು ಕಾಂತಿಯುತವಾಗಿ ಹೊಳೆಯುತ್ತಿತ್ತು. ಇದು ಮುಗ್ದ ಜನರಿಗೆ ಅವರ ಮೇಲೆ ಮತ್ತಷ್ಟು ನಂಬಿಕೆ ಹೆಚ್ಚಾಗಲು ಕಾರಣವಾಗಿತ್ತು.
ಎಂದಿನಂತೆ ಭಾಷೆ ಧ್ವನಿ ಆಕರ್ಷಕವಾಗಿತ್ತು.
ಆಗಾಗ ಹುಣ್ಣಿಮೆಯ ಸಮಯದಲ್ಲಿ ಸಂಜೆ ಕಾರ್ಯಕ್ರಮ ಏರ್ಪಡಿಸಿ ಜನರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಕಾಡಿನ ವಾತಾವರಣದ ವಿಶಾಲ ಜಾಗದಲ್ಲಿ ಹೂವು ಹಣ್ಣಿನ ಗಿಡಗಳು ಯಥೇಚ್ಛವಾಗಿ ಇದ್ದವು. ಭಕ್ತ ಭಕ್ತೆಯರ ದಂಡು ಸದಾ ಚಟುವಟಿಕೆಯಿಂದ ಓಡಾಡುತ್ತಾ ಅಲ್ಲಿಯೇ ವಾಸವಾಗಿದ್ದರು.
ಎಲ್ಲಾ ದೇವ ಮಾನವರಂತೆ ಆತ ಒಂದು ವಿಚಾರಧಾರೆಯ ಮೇಲೆ ತನ್ನ ಹಿಂಬಾಲಕರನ್ನು ಮೆಚ್ಚಿಸಲು – ಸೆಳೆಯಲು ಪ್ರಯತ್ನಿಸುತ್ತಿದ್ದ. ಅದೇನೆಂದರೆ,
ನೀವು ನಿಮಗಿರುವ ಕಷ್ಟಗಳಿಂದ ದೂರ ಹೋಗಲು ಪ್ರಯತ್ನಿಸಬೇಡಿ. ಉದ್ದೇಶಪೂರ್ವಕವಾಗಿ ಆ ಸಮಸ್ಯೆಯನ್ನೇ ಕುರಿತು ಯೋಚಿಸಿ. ಆ ಸಮಸ್ಯೆ ಒಳಗೆ ಹೋಗಿ. ಅದು ಆಳಕ್ಕೆ ಹೋದಂತೆ ಅದೇ ಸಮಸ್ಯೆ ಸಹಜವಾಗಿ ರೂಪಾಂತರ ಹೊಂದಿ ನೋವೇ ನಲಿವಾಗಿ ಬದಲಾಗುತ್ತದೆ. ನಂತರ ಅದು ಒಳ್ಳೆಯ ಪರಿಣಾಮ ಬೀರಿ ಸಂತಸವಾಗಿ ಮಾರ್ಪಡುತ್ತದೆ. ಆಗ ನಿಮ್ಮ ಸಮಸ್ಯೆ ತನ್ನಿಂದ ತಾನೇ ಪರಿಹಾರವಾಗುತ್ತದೆ.
ಆತನ ನಿಜವಾದ ಒಳನೋಟ ಏನಿತ್ತೋ ಗೊತ್ತಿಲ್ಲ. ಆದರೆ ಆ ವಿಚಾರಧಾರೆಯ ಸಾರಾಂಶವನ್ನು ನಾನು ಗ್ರಹಿಸಿದ್ದು ಹೀಗೆ.ಒಮ್ಮೆ ಆತನೊಂದಿಗೆ ಖಾಸಗಿ ಮಾತುಕತೆಯ ಸಮಯದಲ್ಲಿ ಆತನ ಪವಾಡದ ಬಗ್ಗೆ ಪ್ರಶ್ನಿಸಿದೆ.
ಆತನ ಅಂಗೈಯಲ್ಲಿ ಜೇನುತುಪ್ಪ ಮತ್ತು ವಿಭೂತಿ ಬರುತ್ತದೆ ಎಂಬ ನಂಬಿಕೆ ಆತನ ಭಕ್ತರಲ್ಲಿ ಇತ್ತು ಮತ್ತು ಅದು ಬರುತ್ತಲೂ ಇತ್ತು.
ಆದರೆ ನನಗೆ ಆಗಲೂ ಆ ರೀತಿಯ ಕ್ರಿಯೆ ನಡೆಯಲು ಸಾಧ್ಯವಿಲ್ಲ. ಅದು ಜಾದು ಅಥವಾ ಕಣ್ಕಟ್ಟು ಆಗಿರಬೇಕೆ ಹೊರತು ನಿಜವಲ್ಲ. ಅದು ಇಡೀ ಸೃಷ್ಟಿಗೇ ವಿರೋಧ ಮತ್ತು ಹಾಗಾಗಿದ್ದೇ ಆದಲ್ಲಿ ಸೃಷ್ಟಿಯ ಒಟ್ಟು ವಿಶ್ವಾಸವೇ ಕಳಚಿ ಬೀಳುತ್ತದೆ ಎಂಬ ಅರಿವಿತ್ರು. ಅದನ್ನು ಆತನ ಬಳಿ ಕೇಳಿದೆ.
ನಿಮಗೆ ಆಶ್ಚರ್ಯವಾಗಬಹುದು. ಆತ ಅದನ್ನು ಒಪ್ಪಿಕೊಂಡ. ಹೌದು ಹಾಗೆ ನಡೆಯಲು ಸಾಧ್ಯವಿಲ್ಲ. ಆದರೆ ನಾನು ನನ್ನ ವಿಚಾರಗಳನ್ನು ಜನರಿಗೆ ತಲುಪಿಸಿ ಈ ಸಮಾಜವನ್ನು ಒಳ್ಳೆಯ ರೀತಿಯಲ್ಲಿ ಮುನ್ನಡೆಸಬೇಕಾದರೆ ಈ ಸಾಮಾನ್ಯ ಜನರಿಗೆ ಅಸಾಮಾನ್ಯವಾದದ್ದನ್ನು ಮಾಡಿ ತೋರಿಸಲೇ ಬೇಕಿದೆ. ನನ್ನೊಳಗೆ ಒಂದು ದೈವತ್ವದ ಅಗಾಧ ಶಕ್ತಿ ಇದೆ ಎಂದು ಜನರಿಗೆ ಮನವರಿಕೆ ಮಾಡಿದರೆ ಮಾತ್ರ ಜನ ನನ್ನನ್ನು ನಂಬುತ್ತಾರೆ, ಗೌರವಿಸುತ್ತಾರೆ, ಆರಾಧಿಸುತ್ತಾರೆ. ಕೇವಲ ಒಳ್ಳೆಯ ವಿಚಾರಗಳು ಜನರನ್ನು ಆಕರ್ಷಿಸುವುದಿಲ್ಲ. ಪವಾಡಗಳು ಮಾತ್ರ ದೇವ ಮಾನವ ಎಂದು ಕರೆಯಲ್ಪಡುವ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ನಾನು ಜೇನು ತುಪ್ಪದ ಪವಾಡ ಮಾಡುತ್ತೇನೆ. ಇದೊಂದು ವಿಶೇಷ ಶಕ್ತಿ ಎಂದು ಜನ ನಂಬುತ್ತಾರೆ. ಇಲ್ಲಿ ನಾನು ಯಾವುದೇ ಮೋಸ ಮಾಡುತ್ತಿಲ್ಲ. ಈ ಸಮಾಜದ ಸೇವೆಗಾಗಿ ನಾನು ಕಲ್ಕಿ ಅವತಾರ ತಾಳಿದ್ದೇನೆ. ಇಲ್ಲಿನ ಮೋಸ ವಂಚನೆ ಅನ್ಯಾಯಗಳನ್ನು ಸರಿ ಮಾಡಿ ಶಾಂತಿ ಸಹಕಾರದ ನೆಮ್ಮದಿಯ ಬದುಕನ್ನು ರೂಪಿಸುವ ಗುರಿ ಹೊಂದಿದ್ದೇನೆ. ಕೆಲವೇ ವರ್ಷಗಳಲ್ಲಿ ಇದು ಸಾಧ್ಯವಾಗುತ್ತದೆ ಎಂದು ಆತ ಭರವಸೆಯಿಂದ ಹೇಳಿದ.
ಇದು ಖಾಸಗಿ ಮಾತುಕತೆ. ಅಲ್ಲಿಂದ ನಾನು ಆತನನ್ನು ಮತ್ತೆಂದೂ ಭೇಟಿಯಾಗಲಿಲ್ಲ. ಬಹುಶಃ ಆತನಿಗೆ ಈಗ ನನ್ನ ಗುರುತು ಸಿಗದಿರಬಹುದು.ಈ ಕಳೆದ ವರ್ಷಗಳಲ್ಲಿ ನನ್ನ ಅನುಭವದಿಂದ ನನ್ನೊಳಗೆ ಬಹಳಷ್ಟು ವಿಚಾರಗಳು ಅಭಿಪ್ರಾಯಗಳು ಬದಲಾಗಿವೆ. ಆದರೆ ಈ ನೆನಪುಗಳನ್ನು ಅಂದಿನ ನನ್ನ ಮನೋಭಾವಕ್ಕೆ ತಕ್ಕಂತೆ ನಿರೂಪಿಸಿದ್ದೇನೆ.
ಯಾವುದೇ ಧರ್ಮದ ಯಾವುದೇ ದೇವಮಾನವರನ್ನು ಕಳ್ಳರು ಸುಳ್ಳರು ವಂಚಕರು ಕ್ರಿಮಿನಲ್ ಗಳು ಎಂದು ಒಂದು ವಾಕ್ಯದಲ್ಲಿ ವಿವರಿಸಬಾರದು ಅಥವಾ ನಿಜವಾಗಲೂ ಪವಾಡ ಪುರುಷರೆಂದು ಕುರುಡಾಗಿ ನಂಬಬಾರದು. ಹೇಗೆ ರಾಜಕಾರಣಿಗಳು, ನಟರು, ಧರ್ಮಾಧಿಕಾರಿಗಳು, ವ್ಯಾಪಾರಿಗಳು ಭವಿಷ್ಯಕಾರರು ಮುಂತಾದವರು ಈ ಸಮಾಜದ ಭಾಗವಾಗಿ ನಮ್ಮೊಳಗೇ ಇದ್ದು ನಮ್ಮನ್ನು ಭ್ರಮಾಲೋಕಕ್ಕೆ ಸೆಳೆದು ಅವರು ಪ್ರಖ್ಯಾತರು, ಕುಖ್ಯಾತರು, ಹಣವಂತರು, ಜನಪ್ರಿಯರು, ಅಧಿಕಾರಸ್ತರು ಆಗುತ್ತಾರೋ ಅದೇ ಪರೋಕ್ಷ ವಿಧಾನದಲ್ಲಿ ಈ ದೇವ ಮಾನವರು ಸಹ ನಮ್ಮ ಅಜ್ಞಾನದಿಂದ ಸೃಷ್ಠಿಯಾಗುತ್ತಾರೆ.
ಇವರನ್ನು ನೇರವಾಗಿ ಕಳ್ಳರು ಎನ್ನಲಾಗದು. ಒಂದೋ ತಮ್ಮೊಳಗಿರುವ ಯಾವುದೋ ಸಾಮರ್ಥ್ಯವನ್ನು ಸದುಪಯೋಗ ಪಡಿಸಿಕೊಳ್ಳುತ್ತಾರೆ ಅಥವಾ ಜನರ ಭಾವನೆ ನಂಬಿಕೆಗಳನ್ನು ಗುರುತಿಸಿ ಅದನ್ನು ಅವರಿಗೆ ತಕ್ಕಂತೆ ದುರುಪಯೋಗ ಪಡಿಸಿಕೊಳ್ಳುತ್ತಾರೆ.ಅದರಲ್ಲಿ ಕೆಲವರು ಅತಿ ಬುದ್ಧಿವಂತಿಕೆಯಿಂದ ದೇಶ ವಿದೇಶಗಳಲ್ಲಿ ತಮ್ಮ ಆಶ್ರಮವನ್ನು ಸ್ಥಾಪಿಸಿ ಹಣದ – ಭಕ್ತರ ಸಾಮ್ರಾಜ್ಯವನ್ನೇ ಕಟ್ಟುತ್ತಾರೆ. ಆ ಮುಖಾಂತರ ಮತ್ತಷ್ಟು ಬೆಳೆಯುತ್ತಾ ಹೋಗುತ್ತಾರೆ.
ಇಲ್ಲಿ ಯೋಚಿಸಬೇಕಾದ ಜವಾಬ್ದಾರಿ ನಮ್ಮದು. ಒಂದು ನಾಗರಿಕ ಸಮಾಜ ವೈಚಾರಿಕ ಚಿಂತನಾ ವಿಧಾನದ ಮೂಲಕ ನಿರ್ಮಾಣವಾದರೆ ಅದರ ಜ್ಞಾನ ಅಭಿವೃದ್ಧಿ ಕಡೆಗಿರುತ್ತದೆ ಮತ್ತು ಶಾಶ್ವತವಾಗಿರುತ್ತದೆ.
ಅದೇ ಸಮಾಜ ಭ್ರಮೆಗಳ ಭಯ ಭಕ್ತಿಯ ಮುಖಾಂತರ ರೂಪಗೊಂಡರೆ ಅದು ತಾತ್ಕಾಲಿಕ. ಯಾವುದೇ ಕ್ಷಣದಲ್ಲಿ ಕುಸಿಯಬಹುದು. ದೇವ ಮಾನವ ಕಲ್ಪನೆ ಒಂದು ಭ್ರಮೆ. ನಾವೆಲ್ಲರೂ ಕೇವಲ ಸಹಜ ಮಾನವರು ಮಾತ್ರ.
ಸುದ್ದಿದಿನ.ಕಾಂ|ವಾಟ್ಸಪ್|9980346243
ದಿನದ ಸುದ್ದಿ
ಇಂದಿನಿಂದ ಏ.3 ರವರೆಗೆ ಸೂಳೆಕೆರೆಗೆ ನೀರು ಬಿಡುಗಡೆ
ಸುದ್ದಿದಿನ,ದಾವಣಗೆರೆ: ಭದ್ರಾ ಜಲಾಶಯ ಯೋಜನೆ ವ್ಯಾಪ್ತಿಗೆ ಬರುವ ದೇವರಬೆಳಕೆರೆ ಪಿಕ್ಅಪ್ ಅಣೆಕಟ್ಟಿನ ಸ್ಕವರಿಂಗ್ ಸ್ಪೂಯೀಸ್ ಗೇಟ್ ಮುಖಾಂತರ ಜಲಾಶಯದ ಡೆಡ್ ಸ್ಟೋರೇಜ್ ನೀರನ್ನು ಸೂಳೆಕೆರೆ ಹಳ್ಳಕ್ಕೆ ಮಾರ್ಚ್ 28 ರಿಂದ ಏಪ್ರಿಲ್ 3 ರವರೆಗೆ ಪ್ರತಿದಿನ 20 ಕ್ಯೂಸೆಕ್ಸ್ಗಳಲ್ಲಿ ಜನ-ಜಾನುವಾರು ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸಲು ಹಾಗೂ ಅಕ್ಕಪಕ್ಕದ ಗ್ರಾಮಗಳ ಕುಡಿಯುವ ನೀರಿನ ಉದ್ದೇಶಕ್ಕೆ ಬಿಡಲಾಗುತ್ತಿದೆ.
ಈ ವೇಳೆ ಹಳ್ಳಕ್ಕೆ ದನ ಕರಗಳನ್ನು ಇಳಿಸುವುದಾಗಲಿ, ಪಂಪ್ಸೆಟ್ಗಳಿಂದ ನೀರೆತ್ತುವುದುನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಕನೀನಿನಿ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ
ಸುದ್ದಿದಿನ ಡೆಸ್ಕ್ : ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.
ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಇದೇ 30 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಇದೇ ವೇಳೆ ಬಿಹಾರದಲ್ಲಿ ನಾಮಪತ್ರ ಸಲ್ಲಿಕೆಗೆ ನಾಳೆ ಕಡೆ ದಿನವಾಗಿದ್ದು, ಈ ತಿಂಗಳ 30 ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಏಪ್ರಿಲ್ 2ರಂದು ನಾಮತ್ರ ಹಿಂಪಡೆಯುವಿಕೆಗೆ ಕೊನೆಯ ದಿನವಾಗಿರುತ್ತದೆ.
ಏಪ್ರಿಲ್ 19 ರಂದು 17 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಅದರಂತೆ ತಮಿಳುನಾಡಿನಲ್ಲಿ 39, ರಾಜಸ್ಥಾನದಲ್ಲಿ 12, ಉತ್ತರ ಪ್ರದೇಶದಲ್ಲಿ 8, ಮಧ್ಯಪ್ರದೇಶದಲ್ಲಿ 6, ಉತ್ತರಾಖಂಡ, ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ತಲಾ 5 , ಬಿಹಾರದಲ್ಲಿ 4, ಪಶ್ಚಿಮ ಬಂಗಾಳದಲ್ಲಿ 3, ಅರುಣಾಚಲ ಪ್ರದೇಶ, ಮಣಿಪುರ, ಮೆಘಾಲಯದಲ್ಲಿ ತಲಾ 2 ಮತ್ತು ಛತ್ತೀಸ್ಗಢ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ, ಅಂಡಮಾನ್-ನಿಕೋಬಾರ್ ದ್ವೀಪಗಳು, ಜಮ್ಮು-ಕಾಶ್ಮೀರ, ಲಕ್ಷದ್ವೀಪ ಮತ್ತು ಪುದುಚೇರಿಯಲ್ಲಿ ತಲಾ ಒಂದು ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.
ಎರಡನೇ ಹಂತದಲ್ಲಿ 89 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ನಾಳೆ ಅಧಿಸೂಚನೆ ಹೊರಡಿಸಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
ಸುದ್ದಿದಿನ ಡೆಸ್ಕ್ : 18ನೇ ಲೋಕಸಭೆಗೆ ಸದಸ್ಯರನ್ನು ಆಯ್ಕೆ ಮಾಡಲು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಭಾರತ ಚುನಾವಣಾ ಆಯೋಗ, ಸಕಲ ಸಿದ್ಧತೆಯೊಂದಿಗೆ ಸಜ್ಜಾಗಿದೆ.
ದೇಶದಲ್ಲಿ ಚುನಾವಣೆಗಳನ್ನು ಪಾರದರ್ಶಕವಾಗಿ ಹಾಗೂ ಅತ್ಯಂತ ವಿಶ್ವಾಸಾರ್ಹ ರೀತಿಯಲ್ಲಿ ನಡೆಸುವ ಸಂಕಲ್ಪದೊಂದಿಗೆ ಚುನಾವಣಾ ಆಯೋಗ, ಸಮಸ್ತ ಚುನಾವಣಾ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ತಂತ್ರಜ್ಞಾನದ ನೆರವನ್ನು ಬಳಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮತದಾರರು, ಚುನಾವಣಾ ಸಿಬ್ಬಂದಿ ಹಾಗೂ ಆಯೋಗಕ್ಕೆ ನೆರವಾಗುವ ಹಲವು ಆಪ್ಗಳನ್ನು ಚುನಾವಣಾ ಆಯೋಗ ಅಭಿವೃದ್ಧಿಪಡಿಸಿದೆ.
ಈ ಪೈಕಿ ಇಂದು ಸಿ-ವಿಜಿಲ್ ಆಪ್ ಬಗ್ಗೆ ಮಾಹಿತಿ.
ದೇಶದಲ್ಲಿ ಚುನಾವಣೆಗಳ ವೇಳೆ ನಡೆಯುವ ಅಕ್ರಮಗಳು, ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಪ್ರಕರಣಗಳ ಮೇಲೆ ಕಣ್ಣಿಡುವುದು ಕೇವಲ ಚುನಾವಣಾ ಸಿಬ್ಬಂದಿಯ ಕೆಲಸವಲ್ಲ. ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು. ಹಾಗಾಗಿ ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರು ಆಯೋಗಕ್ಕೆ ದೂರು ತಲುಪಿಸಲು ಭಾರತ ಚುನಾವಣಾ ಆಯೋಗ ಸಿ-ವಿಜಿಲ್ ಆಪ್ ಅನ್ನು ಅಭಿವೃದ್ಧಿ ಪಡಿಸಿದೆ.
ದೂರುಗಳನ್ನು ಆನ್ಲೈನ್ ಮೂಲಕ ಆಯೋಗಕ್ಕೆ ರವಾನಿಸಲು ಈ ಆಪ್ ನೆರವಾಗುವುದು. ಯಾವುದೇ ಚುನಾವಣಾ ಅಕ್ರಮಗಳ ಬಗ್ಗೆ ಧ್ವನಿಮುದ್ರಣ, ವಿಡಿಯೋ ಚಿತ್ರದ ತುಣುಕುಗಳು ಮತ್ತು ಫೋಟೊ ಮೊದಲಾದ ದಾಖಲೆಗಳನ್ನು ಸಾರ್ವಜನಿಕರು ಇದರ ಮೂಲಕ ಕಳುಹಿಸಬಹುದು.
ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮಾಡುವ ಖರ್ಚು-ವೆಚ್ಚ, ಮತದಾರರ ಮನವೊಲಿಕೆಗೆ ಆಮಿಷಗಳ ಬಳಕೆ ಮೊದಲಾದ ಅಕ್ರಮಗಳ ಬಗ್ಗೆ ದೂರು ನೀಡಲು ಇದನ್ನು ಬಳಸಬಹುದು. ಒಂದುನೂರು ನಿಮಿಷಗಳಲ್ಲಿ ಚುನಾವಣಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
ದೇಶದ ಯಾವ ಮೂಲೆಯಲ್ಲೇ ಆಗಲಿ ನಡೆಯುವ ಚುನಾವಣಾ ಅಕ್ರಮ ಅಥವಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ತಾವು ನೀಡಿದ ದೂರುಗಳನ್ನು ಆಯೋಗ ಪರಿಗಣಿಸಿದೆಯೇ ಎನ್ನುವ ವಿವರಗಳನ್ನು ಸಹ ಸಾರ್ವಜನಿಕರು ಸಿ-ವಿಜಿಲ್-ಆಪ್ ಮೂಲಕ ವೀಕ್ಷಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ6 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ6 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ6 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ಕವಿತೆ | ನೆನಪು
-
ದಿನದ ಸುದ್ದಿ3 days ago
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
-
ದಿನದ ಸುದ್ದಿ2 days ago
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ
-
ದಿನದ ಸುದ್ದಿ1 day ago
ಇಂದಿನಿಂದ ಏ.3 ರವರೆಗೆ ಸೂಳೆಕೆರೆಗೆ ನೀರು ಬಿಡುಗಡೆ