ಭಾವ ಭೈರಾಗಿ
ಲವ್ವಲ್ಲಿರೋ ಕಿಕ್ಕು ಮದುವೆ ನಂತರ ಕಡಿಮೆಯಾಗುತ್ತಾ..
ಹೌದಂತೆ ಇತ್ತೀಚೆಗೆ ಯಾವುದೋ ಪತ್ರಿಕೆ ನೋಡುವಾಗ ಅದರಲ್ಲಿ ಒಂದು ಸರ್ವೆ ಬಗ್ಗೆ ಬರೆದಿದ್ದರು. ಪ್ರೀತಿಸುವಾಗ ಪರಸ್ಪರರ ಮೇಲಿರುವ ಸೆಳೆತ ಮದುವೆಯಾದ ನಂತರ ಕಡಿಮೆಯಾಗುತ್ತಾ ಅಂತ ಕೇಳಿ ಒಂದು ಸರ್ವೆ ಮಾಡಿದ್ದರು. ಅದಕ್ಕೆ ಶೇಕಡಾ ಎಪ್ಪತ್ತರಷ್ಟು ವಿವಾಹಿತರ ಉತ್ತರ ಹೌದು ಎಂದಿತ್ತು. ಇದು ನನ್ನನ್ನು ಬಹಳವಾಗಿ ಚಿಂತೆಗೀಡು ಮಾಡಿತು. ಪ್ರೀತಿಸುವಾಗ ಇರುವ ಸೆಳೆತ ಮದುವೆಯ ನಂತರ ಇರಲ್ಲವಂತೆ. ಪ್ರೇಮ ವಿವಾಹವನ್ನೇ ಮಾಡಿಕೊಳ್ಳಬೇಕೆಂದು ಕನಸಿನ ಲೋಕ ಕಟ್ಟುವ ನನ್ನಂತ ಅದೆಷ್ಟೋ ಆಶಾವಾದಿಗಳಿಗೆ ಈ ವರದಿ ನೋವುಂಟುಮಾಡಿರಬಹುದು. ಇದನ್ನು ಅಷ್ಟಕ್ಕೆ ಬಿಡುವುದಾದರೂ ಎಂತು? ಒಂದೆರಡು ರಾತ್ರಿ ಇದರ ಬಗ್ಗೆ ಚಿಂತಿಸಿದೆ ಸಣ್ಣ ಸಣ್ಣ ವಿಚಾರಗಳು ಇಂಥ ದೊಡ್ಡ ಸಮಸ್ಯೆಗೆ ಉತ್ತರವಾಗಬಲ್ಲವು. ಬಹಳ ಆಲೋಚಿಸಿದ ನಂತರ ಮನಸ್ಸಿಗೆ ಸಮಾಧಾನ ಸಿಕ್ಕಿತು.
ನಾವು ಎಷ್ಟೋಬಾರಿ ಯಾವುದನ್ನು ಪ್ರೀತಿ ಎಂದುಕೊಂಡಿರುತ್ತೇವೆಯೋ ಅದು ಪ್ರೀತಿಯೇ ಆಗಿರುವುದಿಲ್ಲ. ಕೆಲವೊಮ್ಮೆ ಯಾವುದನ್ನು ಪ್ರೀತಿಯಲ್ಲ ಎಂದುಕೊಂಡಿರುತ್ತೇವೆಯೋ ಅದು ನಿಜವಾದ ಪ್ರೀತಿಯಾಗಿರುತ್ತದೆ. ಹಲವು ಬಾರಿ ಅಧಿಕಾರವನ್ನೇ ಪ್ರೀತಿ ಎಂದುಕೊಂಡಿರುವವರುಂಟು, ಇನ್ನು ಕೆಲವೊಮ್ಮೆ ಸಮಯ ನೀಡಿಕೆಯನ್ನು ಪ್ರೀತಿ ಎಂದುಕೊಂಡಿರುತ್ತೇವೆ, ಹಲವುಬಾರಿ ಸೆಳೆತವನ್ನೋ ಮತ್ತೆ ಕೆಲವೊಮ್ಮೆ ಸಾಂಗತ್ಯವನ್ನೋ, ಬಹುತೇಕ ಸಮಯದಲ್ಲಿ ಕೇವಲ ಇಂಪಾರ್ಟೆನ್ಸ್ ನ್ನೇ ಪ್ರೀತಿ ಎಂದುಕೊಳ್ಳುವುದುಂಟು. ಇಂತಹ ಕೆಲವು ಸಂದರ್ಭಗಳಲ್ಲಿ ಮೇಲೆ ಹೇಳಿರುವ ಸರ್ವೆಯ ಫಲಿತಾಂಶ ಸಿಗುವುದು ಸಾಮಾನ್ಯವೆ.
ಆಚಾರ್ಯ ರಜನೀಶರು ಒಂದು ಮಾತು ಹೇಳುತ್ತಾರೆ. “ಇಬ್ಬರು ಪ್ರೇಮಿಗಳಲ್ಲಿ ಸದಾ ಪುಟಿಯುವ ಜೀವಂತಿಕೆ ಇರುತ್ತದೆ, ಆದರೆ ಇಬ್ಬರು ವಿವಾಹಿತರನ್ನು ನೋಡಿದಾಗ ನನಗೆ ಅಯ್ಯೋ ಎನಿಸುತ್ತದೆ ಯಾಕೆಂದರೆ ಅಲ್ಲಿ ಎರಡು ಜೀವವಿಲ್ಲದ ದೇಹಗಳು ಸಂಸಾರ ಮಾಡುತ್ತಿರುತ್ತವೆ ಎಂದು” ಇದರಲ್ಲಿ ಎಷ್ಟೊಂದು ಅರ್ಥವಿದೆ ಅಲ್ವಾ. ಸರಿ ಆಚಾರ್ಯರು ಹೀಗೆ ಯಾಕೆ ಹೇಳಿದರು ಅಂತ ಚಿಂತಿಸಿದರೆ ಬಹುತೇಕ ಸಮಯದಲ್ಲಿ ಆಗುವುದೇ ಹೀಗೆ ಮದುವೆಗೂ ಮೊದಲು ಪ್ರೇಮಿಗಳಿಬ್ಬರು ಒಬ್ಬರನ್ನೊಬ್ಬರು ಅತಿಯಾಗಿ ಪ್ರೀತಿಸುತ್ತಾರೆ. ಪರಸ್ಪರರನ್ನು ಆಕರ್ಷಿಸಲು ಅವರನ್ನವರು ಚೆಂದಗೆ ಕಾಣುವಂತೆ ಅಲಂಕರಿಸಿಕೊಳ್ಳುತ್ತಾರೆ. ಜೊತೆಗೆ ಉಡುಗೊರೆಗಳನ್ನು ನೀಡುವುದು, ತಮ್ಮ ಪ್ರೇಮಿಗಾಗಿ ಚೆಂದದ ಮಾತುಗಳನ್ನಾಡುವುದು ಹೀಗೆ ಒಂದಿಲ್ಲೊಂದನ್ನು ಮಾಡುತ್ತಾ ತಮ್ಮ ಪ್ರೇಮಿಯ ಗಮನ ತಮ್ಮತ್ತಲೇ ಇರುವಂತೆ ಇಬ್ಬರೂ ಪ್ರಯತ್ನಿಸುತ್ತಿರುತ್ತಾರೆ. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಈ ಎಲ್ಲ ಪ್ರಯತ್ನಗಳೂ ನಿಂತು ಹೋಗುತ್ತವೆ . ಆಗ ಆರಂಭವಾಗುತ್ತೆ ನೋಡಿ ನಿನಗೆ ಮೊದಲಿದ್ದ ಆಸಕ್ತಿಯಿಲ್ಲ,,, ನಿನಗೂ ಅಷ್ಟೆ ಆಗಿನಷ್ಟು ಪ್ರೀತಿ ಉಳಿದಿಲ್ಲ ಎಂಬ ಪರಸ್ಪರ ಆರೋಪಗಳು. ಇದರ ಪ್ರತಿಫಲವೇ ಈ ಮೇಲೆ ಹೇಳಿರುವ ಸರ್ವೆ.
ಇದಕ್ಕೆ ಮೂಲ ಕಾರಣ ಮದುವೆಯೆಂಬ ಅಗ್ರಿಮೆಂಟು. ಈ ಅಗ್ರಿಮೆಂಟ್ ಮಾಡಿಕೊಳ್ಳುವ ಮೊದಲು ಇಬ್ಬರೂ ಸ್ವತಂತ್ರರಾಗಿದ್ದರು ಏಕೆಂದರೆ ಆಗ ಇಬ್ಬರಲ್ಲಿ ಯಾರಿಗಾದರೂ ಬೇಸರವಾದರೆ, ನಮಗಿಬ್ಬರಿಗೂ ಒಟ್ಟಿಗಿರುವುದು ಅಸಾಧ್ಯ ಎನಿಸಿದರೆ ಸುಲಭವಾಗಿ ಹೊರ ಹೋಗಬಹುದಿತ್ತು ಈ ಅರಿವು ಇಬ್ಬರಿಗೂ ಇತ್ತು. ತನ್ನ ಪ್ರೇಯಸಿ ಲವ್ ಬ್ರೇಕಪ್ ಮಾಡಿಕೊಂಡು ಹೋಗಿಬಿಟ್ಟರೆ ಎಂಬ ಭಯ ಅವನಿಗೂ ಇತ್ತು, ಒಂದು ವೇಳೆ ಅವನು ಬಿಟ್ಟು ಹೋದರೆ ಎಂಬ ಭಯ ಅವಳಿಗೂ ಇತ್ತು. ಹೀಗಾಗಿ ಇಬ್ಬರೂ ಒಬ್ಬರಿಗೊಬ್ಬರು ಬೇಜಾರಾಗದಂತೆ, ಬೋರಾಗದಂತೆ ಮಾತು, ಹರಟೆ, ಚೇಷ್ಟೆ , ತಮಾಷೆ ,ಗಿಫ್ಟು ಹೀಗೆ ರಂಜಿಸುತ್ತಾ ಸದಾ ಬದುಕಿರುತ್ತಿದ್ದರು. ಯಾವಾಗ ಅವರಿಬ್ಬರಿಗೂ ಮದುವೆಯಾಯಿತೋ ಅಲ್ಲಿಗೆ ಅವಳು ನನ್ನನ್ನು ಬಿಟ್ಟು ಎಲ್ಲೂ ಹೋಗುವುದಿಲ್ಲ ಎಂಬ ಗ್ಯಾರೆಂಟಿಯಾಯ್ತು . ಅವಳಿಗೂ ಅಷ್ಟೆ ಸಾವಿರಾರು ಜನರೆದುರು ತಾಳಿಕಟ್ಟಿದ ಇವನು ನನ್ನನ್ನು ಬಿಟ್ಟು ಮತ್ತೊಬ್ಬಳ ಹಿಂದೆ ಹೋಗಲು ಅಸಾಧ್ಯ ಎಂಬ ಮನೋಭಾವ ಬರುತ್ತೆ. ಅಲ್ಲಿಗೆ ಒಬ್ಬರನ್ನೊಬ್ಬರು ಆಕರ್ಷಿಸುವ ಆ ಎಲ್ಲ ಕ್ರಿಯೆಗಳಿಗೂ ತಿಲಾಂಜಲಿ ಇಡುತ್ತಾರೆ . ಆಗಲೇ ಪ್ರೀತಿ ಕಡಿಮೆಯಾಯ್ತು, ಮೊದಲಿನಂತಿಲ್ಲ ಎಂಬ ಗೊಣಗಾಟಗಳು ಆರಂಭ. ಇದಕ್ಕೆ ಕಾರಣ ಮದುವೆ ಎಂಬ ಒಂದು ಅಗ್ರಿಮೆಂಟು. ಇದು ನಮ್ಮ ಅಂದರೆ ಮನುಷ್ಯರ ಸ್ವಾಭಾವಿಕ ಬುದ್ದಿಯಿರಬಹುದು. ಯಾವುದು ನನ್ನದು ಎಂದು ಖಾತ್ರಿಯಾಗುತ್ತದೆಯೋ ಅದಕ್ಕೆ ಅವನು ಇಂಪಾರ್ಟೆನ್ಸ್ ಕೊಡಲಾರ. ಯಾವುದು ಇತರರದ್ದೋ ಅಥವಾ ನನ್ನಿಂದ ಇದು ಕೈತಪ್ಪಿ ಹೋಗಬಹುದೋ ಅದರ ಬಗ್ಗೆ ಗಮನ ಹೆಚ್ಚು. ಮದುವೆಯ ನಂತರವೂ ಪ್ರೀತಿಸುವಾಗ ಕೊಡುವಷ್ಟು ಸ್ವತಂತ್ರ ವನ್ನೇ ಪರಸ್ಪರರು ನೀಡಿದರೆ ಮತ್ತು ಅವರನ್ನು ತನ್ನ ಆಸ್ತಿಯಂತೆ ನೋಡದೇ ಇದ್ದರೆ ಈ ಸಮಸ್ಯೆ ಸ್ವಲ್ಪಮಟ್ಟಿಗೆ ಕಡಿಮೆಯಾಗಬಹುದು. ಇದಕ್ಕೆ ಉತ್ತರವಾಗಬಲ್ಲ ಸಾವಿರಾರು ಅಂಶಗಳಿವೆ ಎಲ್ಲವನ್ನೂ ಒಟ್ಟಿಗೆ ಮಾತನಾಡಿದರೆ ಬೋರಾಗಬಹುದು ಮತ್ತೆ ಮಾತಾಡುವ ಅಷ್ಟರಲ್ಲಿ ನಾನು ಹೇಳಿದ ಕಾರಣ ಸರಿಯೋ ಎಂಬ ಬಗ್ಗೆ ನೀವೂ ಸ್ವಲ್ಪ ಆಲೋಚಿಸಿ.
ಸುದ್ದಿದಿನ.ಕಾಂ|ವಾಟ್ಸಾಪ್|9986715401
ದಿನದ ಸುದ್ದಿ
ಕವಿತೆ | ನೆನಪು
- ರುದ್ರಪ್ಪ ಹನಗವಾಡಿ
ಅಪ್ಪನನ್ನು ಒಪ್ಪ ಮಾಡಿ
ವರ್ಷಗಳೇ ಕಳೆದವು ಮುವ್ವತ್ತೇಳು
ಇಂದಿರಾಗಾಂಧಿಯ ತುರ್ತು ಪರಿಸ್ಥಿತಿ
ಅರಸರ ಮೀಸಲಾತಿ
ಬಸವಲಿಂಗಪ್ಪನವರ ಬೂಸಾ ಖ್ಯಾತಿ
ಮಲ ಹೊತ್ತು
ಮಲಗಿದ್ದ ಕಾಲಕ್ಕೆ
ಚುರುಕು ಮುಟ್ಟಿಸಿದ ಕಾಲ
ಹರೆಯದ ನನಗೆ
ಕಾಲೇಜ ಮೇಷ್ಟರ ಕೆಲಸ
ಸೂಟು ಬೂಟಿನ ವೇಷ
ಆ ಮೇಲೆ ಅಮಲದಾರಿಕೆ
ಎಲ್ಲ ನಡೆದಾಗಲೇ ಅವ್ವನನ್ನು
ಆಸ್ಪತ್ರೆಗೆ ಸೇರಿಸಿದ್ದು
ಕಾಲ ಕಳೆದು ಕೊಂಡು
ಕೋಲ ಹಿಡಿದದ್ದು
ನಿನ್ನೆ ಮೊನ್ನೆಯಂತೆ
ಬಾಲ್ಯವಿನ್ನು ಉಂಟೆಂಬಂತೆ
ಭಾವಿಸುವಾಗಲೇ ಅವ್ವನ ಸಾವು
ಅದರೊಟ್ಟಿಗೆ ಕಾಯದಾಯಾಸ ತೀರಿಸಲು
ಬಂದರೆ ಬೆಂಗಳೂರಿಗೆ
ರೌಡಿಗಳ ಕಾಟ
ಅಂಬೇಡ್ಕರ್ ಪಟದ ಕೆಳಗೆ
ದೌರ್ಜನ್ಯದ ದಂಡು
ಅಮಾಯಕರಿಗೆ ಗುಂಡು
ಕಂಡುಂಡ ಹಾದಿಯ ಗುಡಿಸಲುಗಳಲ್ಲೀಗ
ಮುಗಿಲು ಮುಟ್ಟೋ ಮಹಲುಗಳು
ಅಂತಲ್ಲಿ
ದೇಶ ವಿದೇಶಗಳ
ಅಹವಾಲುಗಳು
ಅವಿವೇಕಗಳು
ನೋಡ ನೋಡುತ್ತಿದ್ದಂತೆ
ಉಸಿರು ಬಿಗಿಹಿಡಿದ ಜನರ ಒಳಗೆ
ಒಳಪದರಗಳೊಳಗೆ ಕನಸ ಬಿತ್ತಿ
ಹಸಿರ ಹೊನ್ನು ಬಾಚಲು ಹವಣಿಸಿದ
ಬಿಳಿ ಜನರ ಆಟ
ಅರ್ಥವಾಗುವುದೇ ಎಲ್ಲ
ಗೋಣ ನೀಡುವರೆ
ಹೂತಿಟ್ಟ ಗೂಟಕ್ಕೆ ?
( ಚಿಂತಕ ರುದ್ರಪ್ಪ ಹನಗವಾಡಿ ಅವರ ‘ಊರು – ಬಳಗ’ ಕವನ ಸಂಕಲನದಿಂದ ‘ ನೆನಪು ‘ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕೃತಿಯನ್ನು ಫ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ 2013 ರಲ್ಲಿ ಪ್ರಕಿಸಿದೆ.)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕವಿತೆ | ಮಣ್ಣ ಮಕ್ಕಳು
- ಸಿ.ಕೃಷ್ಣನಾಯಕ್, ಆಡಳಿತಾಧಿಕಾರಿ, ಐಟಿಐ ಕಾಲೇಜು ದಾವಣಗೆರೆ
ಮಣ್ಣ ಮಕ್ಕಳು ನಾವು
ಹಗಳಿರುಳೆನ್ನದೆ ಬೆವರು ಬಸಿದು
ಹಸಿದ ಹೊಟ್ಟೆಯಲಿ ಉಸಿರು ಹಿಡಿದವರು
ಕಸದಲಿ ರಸ ತೆಗದು ಬದುಕಿನುದ್ದಕ್ಕೂ ಉಳ್ಳವರ
ಕಸುಬಿಗೆ ಆಳಾದವರು ಸವಳು ನೀರಲಿ ಮೈತೊಳೆದು
ಚಿಂದಿ ಅಂಗಿಯಲಿ ಶಾಲೆಗೆ ದಾಖಲಾದವರು.
ಬರಿಗಾಲಲಿ ಕಾಡು ದಾರಿಯಲಿ ಮೈಲು ದೂರ ನಡೆದು
ನೆಗ್ಗಿಲ ಮುಳ್ಳು ತುಳಿದವರು ; ನಿಬ್ಬು ನೆಗ್ಗಿದ ಪೆನ್ನಿನಲಿ
ಹೆಸರು ಬರೆಯಲು ಕಲಿತವರು ಹರಿದ ಪಠ್ಯದಲಿ ಅಕ್ಷರ ಹುಡುಕಿ ಒಡೆದ ಪ್ಲೇಟಿನಲಿ ಬರೆದವರು.
ತೂತು ಬಿದ್ದ ಸೂರಿನಲಿ ಇಣುಕಿದ ಚುಕ್ಕಿ ಚಂದ್ರಮರ ನೋಡಿ
ವಿದ್ಯುತ್ ದೀಪದ ಕನಸು ಕಂಡವರು
ಮೋಸ ವಂಚನೆಗೆ ಬಗ್ಗದೆ ಶೋಷಣೆಗೆ ಸಿಡಿದವರು
ಮಣ್ಣ ಮಕ್ಕಳು ನಾವು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಬಿ.ಶ್ರೀನಿವಾಸ ಅವರ ‘ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು’ ಕೃತಿಯ ಕುರಿತು
ಸಂಡೂರಿನ ಜನರ ಮುದುಡಿದ ಅಂಗಿಯ ಮೇಲೆ,ಹೆಂಗಸರು ಮಾಸಿದ ಸೀರೆಯ ಸೆರಗಿನ ಮೇಲೆ ಬಿ.ಶ್ರೀನಿವಾಸ ಅಕ್ಷರ ಬಿಡಿಸುತ್ತಾರೆ.
ಅನ್ನದ ಅಗುಳು,ಧೂಳು,ಕಾಗದದ ಚೂರು,ಆಟಿಕೆ ಸಾಮಾನು,ಕಿಡ್ನಿ,ಈ ಸಣ್ಣವು ಗಳಲ್ಲಿ ಜೀವಸಾಕ್ಷಿ ಹುಡುಕುವ ಕಥೆಗಳಿವು.ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಅನ್ನದ ಅಗಳು,ಕಾಗದದ ಚೂರನ್ನು ಎತ್ತಿಹಿಡಿಯುವ ಗೆಳೆಯ ಶ್ರೀನಿವಾಸ *ಧೂಳನ್ನೇ ಅಕ್ಷರಗಳನ್ನಾಗಿಸಿದ ಲೇಖಕ.
- ಬಸವರಾಜ ಹೂಗಾರ
ಇಲ್ಲಿನ ಹುಚ್ಚರ ಕತೆಗಳನ್ನು ಓದುವಾಗ ಕುಂ.ವೀ.ಯವರ ಹಾಗೂ ಸಾದತ್ ಹಸನ್ ಮಾಂಟೋ ಅವರ ಹುಚ್ಚರ ಕತೆಗಳು ನೆನಪಾಗುತ್ತವೆ.ಇಲ್ಲಿನ ನತದೃಷ್ಟರ ಬದುಕನ್ನು ಹಿಡಿದಿಡಲು ಲೇಖಕರು ಕಂಡುಕೊಂಡಿರುವ ಅಭಿವ್ಯಕ್ತಿ ವಿನ್ಯಾಸ ವಿಶಿಷ್ಟವಾಗಿದೆ. ಬರಹಗಳು ದೀರ್ಘವಾಗಿಲ್ಲ. ಚುಟುಕಾಗಿವೆ. ಕವನಗಳೊ, ಗದ್ಯಗಳೊ ಎಂದು ಹೇಳಲಾಗದ ರೂಪದಲ್ಲಿವೆ.
ಗಾಢವಾದ ಅರ್ಥವನ್ನು ಕೆಲವೇ ಸಾಲುಗಳಲ್ಲಿ ವ್ಯಂಗ್ಯ ಮತ್ತು ವಿಡಂಬನೆಗಳಲ್ಲಿ ಹಿಡಿಯಲು ಯತ್ನಿಸುತ್ತವೆ.
ಇಲ್ಲಿರುವ ಲೋಕದ ನೋವಿಗೆ ಮಿಡಿವ ಸಂವೇದನೆ,ಓದುವ ಓದುಗರನ್ನೂ ಆವರಿಸಿಕೊಂಡು,ಚಿಂತನೆಗೆ ಹಚ್ಚುತ್ತದೆ.ಓದುತ್ತ,ಓದುತ್ತಾ ನಿಟ್ಟುಸಿರು ಹೊಮ್ಮುತ್ತದೆ.ಮನಸ್ಸು ಮಂಕಾಗುತ್ತದೆ.ಇಂತಹ ಬರಹಗಳನ್ನು ಕೊಟ್ಟಿರುವ ಶ್ರೀನಿವಾಸ ತಮ್ಮ ಅಂತಃಕರಣ ,ಚೂಪಾದ ಗ್ರಹಿಕೆ,ಆಳವಾದ ಸಂವೇದನೆಗಳನ್ನು ಇತರೆ ಪ್ರಕಾರಗಳಲ್ಲಿಯೂ ಪ್ರಕಟಿಸುವ ಜರೂರಿಯಿದೆ.
- ಡಾ.ರಹಮತ್ ತರೀಕೆರೆ
ಒಬ್ಬ ಮನುಷ್ಯ ಮತ್ತೊಬ್ಬನನ್ನು ಕಿತ್ತು ತಿನ್ನಬಾರದು.ಹೊಟ್ಟೆಪಾಡಿಗಾಗಿ ನಿರ್ವಹಿಸುವ ಪ್ರತಿ ಕೆಲಸವೂ ಸೃಜನಶೀಲವಾಗಿರಬೇಕು-ಎಂಬ ಧಾವಂತದಲ್ಲಿ ಹುಟ್ಟಿದ ಮನದ ಪ್ರಕ್ರಿಯೆಗಳಿಗೆಲ್ಲ ಇಲ್ಲಿ ಹರಡಿಕೊಂಡಿವೆ.
- ಬಿ.ಶ್ರೀನಿವಾಸ,ಕೃತಿ ಲೇಖಕ
ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು ನೊಂದವರ ಮನದಲ್ಲಿ ಅಲ್ಪಾವಧಿ ಗುರುತು ಮೂಡಿಸಬಹುದು ನಿಮ್ಮ ಈ ಪುಸ್ತಕ ಮತ್ತು ಅದರಲ್ಲಿರುವ ಎಷ್ಟೋ ವಿಚಾರಗಳು ನನ್ನನ್ನು ಡಿಸ್ಟರ್ಬ್ ಮಾಡಿವೆ. ಕೇವಲ ವಾಟ್ಸಾಪ್ ಲೈನ್ ಸಾಕಾಗಲ್ಲ ಎದುರುಗಡೆ ಕುಳಿತು ಇನ್ನು ಹೆಚ್ಚು ತಿಳಿದುಕೊಳ್ಳಬೇಕೇನಿಸುತ್ತದೆ. ಸಂಡೂರಿನ ದಾರುಣ ಚಿತ್ರಗಳನ್ನು,ಕೋರ್ಟಿನ ಚಿತ್ರಗಳನ್ನು,ಬದುಕಿನ ಚಿತ್ರಗಳನ್ನು ಕಣ್ಣಿಗೆ ರಾಚುವಂತೆ ಮೂಡಿಸಿದ್ದೀರಿ.
ಸಾವಿಗಿಂತ ಹಸಿವು ಬಹಳ ಕ್ರೂರಿ ಎನ್ನುವುದು: ನೋವಿನ ಬದಲು ಹಸಿವಿನ ಏಟುಗಳು ಬೀಳಬೇಕಿತ್ತು ಎನ್ನುವ ಸಾಲುಗಳಂತೂ Geographical Hungrey ಪುಸ್ತಕ ನೆನಪಿಸುತ್ತವೆ. ಸೊಂಡೂರಿನ ಚಿತ್ರಗಳ ಮೂಡಿಸಿದೆ ಗಾಢ ವಿಷಾದತೆ, ನನ್ನನ್ನು ಹೊರಬರಲು ಬಿಡುತ್ತಿಲ್ಲ.
“ಉಳ್ಳವರು ಹೊತ್ತ ಮೂಟೆಗಳಲ್ಲಿ ಬಡವರ ಹಸಿವಿನದ್ದೇ ಭಾರ”ಇವೆಲ್ಲ ಹಸಿವನ್ನು ಅನುಭವಿಸಿದವರಿಗೆ ಮಾತ್ರ ಸರಿಯಾಗಿ ಅರ್ಥವಾಗುವ ಸಾಲುಗಳು.
ಇನ್ನು ,ಕೋರ್ಟಿನ ಚಿತ್ರಗಳು, ಎಷ್ಟು ಜನ ಇರ್ತಾರೆ ಇವನ್ನೆಲ್ಲ ಸೂಕ್ಷ್ಮ ವಾಗಿ ತಿಳಿದುಕೊಳ್ಳುವವರು ?
ಶಾಲೆ ಹಿಂದೆ ತಿರುಗಬಾರದು ಕೋರ್ಟ್ ಕಚೇರಿ ಮುಂದೆ ತಿರುಗಬಾರದು ಎಂದು ನಮ್ಮ ಜನಪದರು ಹೇಳ್ವ ಮಾತು ಎಷ್ಟೋ ಸಲ ಸತ್ಯ ಎನಿಸುತ್ತದೆ.
ನೀವು ಹಿಡಿದಿಟ್ಟ ಬದುಕಿನ ಚಿತ್ರಗಳಲ್ಲಿನ “ಶವಪೆಟ್ಟಿಗೆ ಸಣ್ಣದಿದ್ದಷ್ಟು ಹೊರುವುದು ಬಹಳ ಕಷ್ಟ “ಎಂಬ ಮಾತಂತೂ ಚಿಕ್ಕಮಕ್ಕಳ ತಂದೆತಾಯಿಯರ ಕಣ್ಣಲ್ಲಿ ನೀರು ತರಿಸುವುದು.
ತಲೆ ಮ್ಯಾಲೆ ಮಲ ಸುರುವಿಕೊಂಡೆವಲ್ಲ ಸರ್ ಅವತ್ತೇ… ನಾವ್ ಹುಟ್ಟಿದ್ದು ಎನ್ನುವ ಸವಣೂರಿನ ಭಂಗಿಯ ಮಾತನ್ನು ಎಷ್ಟು ಅರ್ಥಗರ್ಭಿತವಾಗಿ ಸೋ ಕಾಲ್ಡ್ ಸೊಸೈಟಿಗೆ ಮುಟ್ಟಿ ನೋಡಿಕೊಳ್ಳುವಂತೆ ಬರೆದಿದ್ದೀರಿ. ಆಕೆ ಏನನ್ನೋ ಆಯ್ಕೆ ಮಾಡಿಕೊಂಡಿದ್ದಾಳೆ ಎಂಬ ವಿಚಾರಗಳು ಕೇವಲ ವಿಚಾರಗಳಲ್ಲ ,ಬದುಕಿನ ಸತ್ಯ ಚಿತ್ರಣಗಳು ದಿನ ನಿತ್ಯ ನಮ್ಮ ನಡುವೆ ನಡೆಯುವಂತವು.ಅವನ್ನು ಕಾಣುವಂತ ದೃಷ್ಟಿ ಇದ್ದವರಿಗೆ ಮಾತ್ರ ಇವು ಕಾಣುತ್ತವೆ ಸರ್ .
ನಿಮ್ಮ ನೈಜ ದೃಷ್ಟಿಗೆ ದನ್ಯವಾದಗಳು ಸರ್, ಉಳಿದದ್ದು ಎದುರು ಬದುರು ಕುಳಿತು ಮಾತಾಡೋಣ
- ಡಾ.ರಾಮಚಂದ್ರ ಹಂಸನೂರು, ಬೆಟಗೇರಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243