Connect with us

ಲೈಫ್ ಸ್ಟೈಲ್

ಮದುವೆ ಎಂದರೆ ಹೆಣ್ಣು-ಗಂಡಿನ ದೈಹಿಕ ಸುಖವಲ್ಲ ಅದು ಕುಟುಂಬ ಕುಟುಂಬಗಳ ಮನಸ್ಸಿನ ಸಂಬಂಧ

Published

on

  • ಶಿವಾನಂದ ಕಲಬುರಗಿ

ರಸ ಜನನ ವಿರಸ ಮರಣ ಸಮರಸವೇ ಜೀವನ ಬೇಂದ್ರೆಯವರ ದಿವ್ಯ ವಾಣಿಯಂತೆ ಬದುಕಬೇಕೆಂದರೆ ಮನೆಯೇ ಮೊದಲ ಪಾಠಶಾಲೆ ಆಗಬೇಕು. ತಾಯಿಯೇ ಮೊದಲ ಗುರು ಆಗಬೇಕಾಗಿದೆ. ನೂಲಿನಂತೆ ಸೀರೆ ತಾಯಿಯಂತೆ ಮಗಳು ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು ಸುಳ್ಳಿಗೆ ಸುಖವಿಲ್ಲ ಸತ್ಯಕ್ಕೆ ಸಾವಿಲ್ಲ.

ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡಿಸು. ಎಂಬ ಗಾದೆ ಮಾತಿನಂತೆ ಮದುವೆ ಎಂಬುದು ಗಂಡು ಹೆಣ್ಣಿನ ದೈಹಿಕ ಸುಖವಲ್ಲ ಕುಟುಂಬ ಕುಟುಂಬಗಳ ನಡುವಿನ ಮನಸ್ಸಿನ ಸಂಬಂಧ. ಮದುವೆ ಏಳೇಳು ಜನ್ಮದ ಅನುಬಂಧ ಹೆಣ್ಣಿಗೊಂದು ಗಂಡು ಗಂಡಿಗೊಂದು ಹೆಣ್ಣು ಪ್ರಪಂಚದ ಸೃಷ್ಟಿಯಲ್ಲಿ ಇದ್ದೇ ಇರುತ್ತದೆ. ಬಡವರ ಮನೆಯ ಹೆಣ್ಣು ತಂದುಕೊಳ್ಳಬೇಕು ಶ್ರೀಮಂತರ ಮನೆಗೆ ಹೆಣ್ಣು ಕೊಡಬೇಕು. ಇದು ಲೋಕ ರೂಢಿಯ ಸಿದ್ಧಾಂತ.

ಋಣಾನುಬಂಧದ ಸಂಬಂಧ ಕೂಡಿಬಂದಾಗ ಮದುವೆಯೆಂಬ ಶುಭಕಾರ್ಯ ನೆರವೇರುತ್ತದೆ. ಮದುವೆಯಾದ ನವದಂಪತಿಗಳು ಪರಸ್ಪರ ಸ್ನೇಹಭಾವದಿಂದ ಅರಿತು ಬಾಳಬೇಕು. ಯಾರು ಹೆಚ್ಚಲ್ಲ ಯಾರು ಕಡಿಮೆಯೂ ಅಲ್ಲ ಗಂಡನಾದವನು ತನ್ನ ಹೆಂಡತಿಯಲ್ಲಿ ತನ್ನ ಸೋದರಿಯರ ಪ್ರೀತಿ ಕಾಣಬೇಕು. ಹೆಂಡತಿಯಾದವಳು ತನ್ನ ಗಂಡನಲ್ಲಿ ಸಹೋದರನ ಪ್ರೀತಿ ಕಾಣಬೇಕು. ಸೊಸೆಯಾದವಳು ತನ್ನ ಅತ್ತೆಯಲ್ಲಿ ತನ್ನ ತಾಯಿಯ ಪ್ರೀತಿ ಕಾಣಬೇಕು. ಅತ್ತೆಯಾದವಳು ತನ್ನ ಸೊಸೆಯಲ್ಲಿ ತನ್ನ ಮಗಳ ಪ್ರೀತಿ ಕಾಣಬೇಕು. ಅತ್ತೆಗೊಂದು ಕಾಲ ಸೊಸೆಗೊಂದು ಕಾಲ. ಕಾಲಾಯ ತಸ್ಮೈ ನಮಃ ಎಂಬ ಮಾತಿನೊಂದಿಗೆ ಅರ್ಥಪೂರ್ಣವಾಗಿ ಬಾಳಬೇಕು.

ಗಂಡ-ಹೆಂಡತಿ ಇಬ್ಬರೂ ಒಂದು ನಾಣ್ಯದ ಎರಡು ಮುಖಗಳಂತೆ. ಎರಡರಲ್ಲಿ ಒಂದು ಇಲ್ಲದಿದ್ದರೂ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತದೆ. ಹೆಣ್ಣು ಜಗದ ಕಣ್ಣು ಎಂದು ಬಿಂಬಿಸಲಾಗುತ್ತದೆ. ನಿಸರ್ಗದ ಶಕ್ತಿಯ ಜೊತೆಗೆ ಹೆಣ್ಣನ್ನು ಹೋಲಿಸುತ್ತೇವೆ. ಜನನ ಮತ್ತು ಮರಣಕ್ಕೂ ನಿಸರ್ಗವೇ ಹೇಗೆ ಕಾರಣವೋ ಹಾಗೆಯೇ ಹೆಣ್ಣು ಕೂಡ ಜನನ ಮರಣದ ನಡುವಿನ ವಿಸ್ಮಯ ಶಕ್ತಿ.

ಹೆಣ್ಣು ವಂಶವನ್ನು ಉದ್ಧಾರ ಮಾಡುವವಳು ಮನೆ ಬೆಳಗುವವಳು ಮನೆಯ ಮಹಾಲಕ್ಷ್ಮಿ ಸೌಭಾಗ್ಯವತಿ ಸುಕಾಂತೆ ಸಕಲ ಸಂಪನ್ನದಾತೆ ಮನೆ ಬೆಳಗುವ ನಂದದೀಪ ಎಂದು ಹೀಗೆ ನಾನಾ ರೀತಿಯಲ್ಲಿ ಅವಳನ್ನು ನಾಮಪದಿಂದ ಗುಣವಾಚಕವಾಗಿ ಪರಿವರ್ತಿಸಿ ಗೌರವಿಸಲಾಗಿದೆ. ಆದರೆ ಈ ಮೇಲಿನ ಎಲ್ಲಾ ಗುಣಗಾನವು ಎಲ್ಲಾ ಹೆಣ್ಣಿನಲ್ಲಿ ಸಾಧಾರಣವಾಗಿ ಕಂಡುಕೊಳ್ಳಲು ಕಷ್ಟಸಾಧ್ಯ. ಸಮಾಜದಲ್ಲಿನ ಬಹುತೇಕ ಸಂಸಾರಗಳಲ್ಲಿ ಗಂಡು-ಹೆಣ್ಣಿನ ಮಧ್ಯೆ ಹೊಂದಾಣಿಕೆ ಇಲ್ಲದೆ ಪವಿತ್ರವಾದ ಮದುವೆಯೆಂಬ ಸಂಬಂಧ ಕ್ಷಣಾರ್ಧದಲ್ಲಿ
ಕಡ್ಡಿ ಮುರಿದಂತೆ ಮುರಿದು ಬೀಳುತ್ತವೆ.

ಇದಕ್ಕೆಲ್ಲ ಕಾರಣ ಗಂಡ-ಹೆಂಡತಿಯರ ಮಧ್ಯ ಹೊಂದಾಣಿಕೆಯ ಎಂಬ ಆತ್ಮವಿಶ್ವಾಸ ಕೊರತೆಯಿಂದ. ನಾವು ಬಳಸುವ ಭಾಷೆ ಇತರರ ಹೃದಯವನ್ನು ಕಲಕಬೇಕು. ಮಾತು ಮೃತ್ಯುವಾಗದೆ ಮೃದುವಾಗಿ ಮನಸ್ಸಿಗೆ ನೆಮ್ಮದಿಯನ್ನು ನೀಡುವಂತಿರಬೇಕು. ಕಪಟತನ ಮೋಸ ವಂಚನೆ ಸುಳ್ಳು ತಮ್ಮ ಆಭರಣವನ್ನಾಗಿ ಮಾಡಿಕೊಂಡು ಮಾತನಾಡುವ ಅಹಂಕಾರಿಗಳು ಸಮಾಜದಲ್ಲಿ ಬೇಕಾದಷ್ಟು ಸಂಖ್ಯೆಯಲ್ಲಿದ್ದಾರೆ. ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು. ಆದ್ದರಿಂದ ಅರಿತು ನಡೆಯಬೇಕು ಮರೆತು ನಡೆಯಬಾರದು. ಅರಿವೇ ಗುರು ವಾಗುತ್ತದೆ ಮರುವು ಶಿಕ್ಷೆಯಾಗುತ್ತದೆ.

ನಾವು ನಡೆದು ಬಂದ ಹಾದಿ ಎಂದೆಂದಿಗೂ ಮರೆಯಬಾರದು. ಜೀವನದಲ್ಲಿ ಕಷ್ಟ ಸುಖಗಳನ್ನು ಸಮಾನವಾಗಿ ಸವಿಯಬೇಕು. ನಾನು ನನ್ನದು ನನ್ನಿಂದಲೇ ಎಂಬ ಅಹಂಕಾರ ನಮ್ಮ ವ್ಯಕ್ತಿತ್ವವನ್ನೇ ನಾಶಮಾಡುತ್ತದೆ. ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಬಹಳ ಮುಖ್ಯವಾಗುತ್ತದೆ. ಸಮಾಜದಲ್ಲಿ ಅಲ್ಪಸುಖಿಗಳು ಸಾಮಾನ್ಯವಾಗಿ ಕಾಣುತ್ತೇವೆ. ಒಂದು ದಿನದ ಗಂಜಿ ಕಾಣದ ಅದೆಷ್ಟೋ ಕುಟುಂಬಗಳಿಗೆ ತದನಂತರ ಬಂದ ಶ್ರೀಮಂತಿಕೆಯಿಂದ ತಮ್ಮ ಇಂದಿನ ಆದಿಯನ್ನು ಮರೆತುಬಿಡುತ್ತಾರೆ. ಹೇಳೋದು ಅದಕ್ಕಾಗಿಯೇ ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿದನಂತೆ. ಶ್ರೀಮಂತಿಕೆ ನೆತ್ತಿಗೇರಿದಾಗ ಬಸವನ ಹಾಲಿನಿಂದ ಕುಂಡಿ ತೊಳೆದನಂತೆ. ಬಡತನ ಸಿರಿತನ ಗೋಡೆ ಮೇಲಿನ ನೆರಳಿನಂತೆ.

ಒಂದು ತುತ್ತು ಅನ್ನ ಸಿಕ್ಕರೆ ತೊಡೆಯ ಮರೆಮಾಡಿ ಉಣ್ಣಬೇಕು ಎಂಬ ಅನುಭವದ ಮಾತು ನಮ್ಮ ಹಿರಿಯರು ನಮಗೆ ನಿರ್ದೇಶನ ಮಾಡಿದ್ದಾರೆ. ನಮ್ಮ ದೇಹವೆಂಬುದು ತುಂಬಿದ ಬಂಡಿಯಂತೆ ನಮ್ಮ ಕಾಲುಗಳು ಚಕ್ರದಂತೆ ನಡೆಯುವಾಗ ಜಾಗೃತಿಯಿಂದ ಹೆಜ್ಜೆ ಇಡಬೇಕು . ನಮ್ಮ ಪಂಚೇಂದ್ರಿಯಗಳು ಚಂಚಲಕ್ಕೆ ಸಿಕ್ಕಿಕೊಳ್ಳದಂತೆ ಹತೋಟಿಯಲ್ಲಿ ಹಿಡಿದುಕೊಳ್ಳುವುದೇ ಸಾಧನೆ. ಪ್ರತಿಯೊಬ್ಬ ಮನುಷ್ಯನು ತಮ್ಮ ಆತ್ಮ ಅವಲೋಕನದಿಂದ ಬದುಕಬೇಕು. ವಿಚಾರಾತ್ಮಕವು ಮತ್ತು ವಿಮರ್ಶಾತ್ಮಕವೂ ನಮ್ಮ ಸತ್ಯಾ ಅನ್ವೇಷಣೆಯ ಪಥದಲ್ಲಿ ಸಾಗುವಂತೆ ನೋಡಿಕೊಳ್ಳಬೇಕು.

ಮನುಷ್ಯ ಧರ್ಮ ದಲ್ಲಿ ಪಾಲಿಸಬೇಕಾದ ಬಹುದೊಡ್ಡ ಧರ್ಮ ಎಂದರೆ ಹಸಿದವನಿಗೆ ಅನ್ನ ನೀಡುವುದು, ಸೋತವನಿಗೆ ಸ್ಫೂರ್ತಿ ನೀಡಿ ಗೆಲುವಿನ ಕನಸುಗಳನ್ನು ಬಿತ್ತುವುದು, ಕಷ್ಟದಲ್ಲಿದ್ದವರಿಗೆ ಕೈಲಾದ ಸಹಾಯ ಮಾಡುವುದು. ಪರೋಪಕಾರಿಯಾಗಿ ಬದುಕುವುದು , ಮನುಷ್ಯರನ್ನು ಮನುಷ್ಯರೇ ಪ್ರೀತಿಸುವದೇ ಮನುಷ್ಯನ ಒಳಮರ್ಮ. ಪ್ರತಿಯೊಬ್ಬರೂ ತಮ್ಮ ಕಾಯಕದಲ್ಲಿ ಪ್ರಾಮಾಣಿಕತೆ ಸದಾಚಾರ ಹೊಂದಿರುವುದೇ ಧರ್ಮ. ನೀ ದೇವನಾದರೆ ಎನ್ನನೇಕೆ ಸಲಹೇ ಎಂದು ಅಲ್ಲಮ ದೇವರನ್ನು ಪ್ರಶ್ನಿಸುತ್ತಾನೆ. ನಮ್ಮ ಆತ್ಮವೇ ಪರಮಾತ್ಮ ನಮ್ಮ ಸದಾಚಾರವೇ ಸಕಲ ಸೌಭಾಗ್ಯ ನಮ್ಮ ಮಾತುಗಳಿಗೆ ಸತ್ಯವೇ ಸದಾ ಭೂಷಣ ಸತ್ಯವನ್ನು ನುಡಿಯುವುದು. ಸತ್ಯ ಮತ್ತು ಸುಳ್ಳು ಮನುಷ್ಯನ ವ್ಯಕ್ತಿತ್ವವನ್ನು ಅನಾವರಣಮಾಡುತ್ತವೆ. ಮದುವೆಯೆಂಬುದು ಗಂಡು-ಹೆಣ್ಣುಗಳ ಭಾವ ಸಂಬಂಧದಲ್ಲಿ ಲೀನವಾಗುವುದು.

ಸಾಮಾನ್ಯವಾಗಿ ಪ್ರತಿಯೊಂದು ಹೆಣ್ಣು ತಾನು ಮದುವೆಯಾದ ಗಂಡನೊಂದಿಗೆ ಸಂತೋಷದಿಂದ ಇರಬೇಕೆಂದರೆ ಇಬ್ಬರು ಕುಳಿತು ಆಲೋಚಿಸಿ ಪರಸ್ಪರ ಒಬ್ಬರನ್ನೊಬ್ಬರು ಆತ್ಮಸಾಕ್ಷಿಯಾಗಿ ಅರ್ಥಮಾಡಿಕೊಳ್ಳುವುದರಲ್ಲಿ ಸಂತೋಷವನ್ನು ಕಾಣಬೇಕು . ಹೆಣ್ಣಿಗೆ ಗಂಡನ ಶಾಶ್ವತ ಡಾಕ್ಟರ್ ರಾಜ್ ಅವರ ಒಂದು ಹಾಡು ನೆನಪಿಸುತ್ತಾ
ಬಂದು ಕೊಡಿಸೋ ಸೀರೆ ಬಣ್ಣ ಹೋಗುವವರಿಗೆ ತಂದೆ ಕೊಡಿಸೋ ಸೀರೆ ಮದುವೆಯಾಗುವವರೆಗೆ ತಾಯಿ ಕೊಡಿಸುವ ಸೀರೆ ತಾಯಿ ಆಗುವವರೆಗೆ ಗಂಡ ಕೊಡಿಸುವ ಸೀರೆ ಹೆಣ್ಣಿನ ಕುಂಕುಮ ಇರುವವರೆಗೆ ಮಣ್ಣಿನ ಮಮತೆ ಇರುವವರೆಗೂ. ಕೊಟ್ಟ ಹೆಣ್ಣು ಕುಲದ ಹೊರಗು.

ಎಷ್ಟೇ ಪ್ರೀತಿ ಪ್ರೇಮ ವಿಶ್ವಾಸ ಅನನ್ಯತೆಯಿಂದ ಇದ್ದರೂ ಗಂಡ-ಹೆಂಡತಿಯರ ಮಧ್ಯೆ ಒಂದಿಲ್ಲ ಒಂದು ಕಾರಣಕ್ಕೆ ಆಗಾಗ ಸಂಸಾರದಲ್ಲಿ ಜಂಜಾಟಗಳು ಗಲಾಟೆ ಗದ್ದಲಗಳು ಜಗಳಗಳು ಸರ್ವೇ ಸಾಮಾನ್ಯ. ತಮ್ಮಿಬ್ಬರ ಮಧ್ಯೆ ಆದ ಕ್ಷಣಿಕದ ಕಲಹ ತನ್ನ ತವರುಮನೆಗೆ ಎಂದು ದೂರು ನೀಡಬಾರದು. ಗಂಡ ಹೆಂಡರ ಜಗಳ ಗಂಧ ತೀಡಿದಂಗ.

ಗಂಡ ಹೆಂಡರ ಜಗಳ ಉಂಡು ಮಲಗುವತನಕ ಗಂಡ ಹೆಂಡರ ಜಗಳ ಕುಂಡಿ ತಿರುಗುವತನಕ ಅಂತಹ ಪವಿತ್ರವಾದ ತಮ್ಮ ಸಂಬಂಧವನ್ನು ತಾವೇ ಹಾಳು ಮಾಡಿಕೊಳ್ಳುತ್ತಾರೆ. ಚಾಡಿ ಹೇಳಿ ಸಂಸಾರ ಕೆಡಿಸಿಕೊಳ್ಳಬಾರದು. ಕನಕದಾಸರು ಹೇಳುತ್ತಾರೆ. ತಾಯಿ-ತಂದೆ ಇರುವವರೆಗೂ ತವರುಮನೆ. ತಂದೆ ತಾಯಿ ಇಲ್ಲದ ತವರು ಮನೆ ನೀರಿಲ್ಲದ ಕೆರೆಗೆ ಕರು ನೀರಿಗಾಗಿ ಧಾವಿಸಿ ಬಂದಂತೆ. ತಾಯಿ ಇದ್ದರೆ ತವರೆಚ್ಚು ತಂದೆ ಇದ್ದರೆ ಬಳಗ ಹೆಚ್ಚು ಸಾವಿರದಾಗೆಚ್ಚು ಪತಿ ಪುರುಷ. ಗಂಜಿಯ ಕುಡಿದರೂ ಗಂಡನ ಮನೆ ಲೇಸು ಅಂಗಿನ ಬಾನ ತವರೂರು.

ಆಸರಿಕೆ ಬ್ಯಾಸರಿಕೆ ಕಳಿಲ್ಯಾಕಂತ ತವರು ಮನೆಗೆ ಹೋದರೆ ಒಮ್ಮನದ ಜೋಳ ಒಳ್ಮುಂದೆ ಇಟ್ಟರಾ ಅಣ್ಣನ ಮಡದಿಯರು. ಹೆಣ್ಣಿಗೆ ತವರು ಸ್ಥಿರವಲ್ಲ ಕಟ್ಟಿದ ಬುತ್ತಿ ಹೊಟ್ಟಿದ ಬಣವೆ ಶಾಶ್ವತವಲ್ಲ. ಸತಿ-ಪತಿಗಳ ಇಬ್ಬರು ಸಂಸಾರದಲ್ಲಿ ಹಾಲು ಸಕ್ಕರೆಯಂತೆ ಕೂಡಿಬಾಳಿದರೆ ಬದುಕೆ ಒಂದು ನಂದನವನ. ಸತಿಪತಿಗಳಲ್ಲಿ ಒಂದಾಗದ ಭಕ್ತಿ ಹಿತವಪ್ಪುದು ಶಿವಂಗೆ . ಆ ಶಿವನೇ ಅರ್ಧನಾರೇಶ್ವರ ಸತಿ-ಪತಿಯರ ಧರ್ಮ ಎಲ್ಲಾ ಧರ್ಮಗಳಿಗಿಂತಲೂ ಅತ್ಯಂತ ಶ್ರೇಷ್ಠ ಧರ್ಮ. ಹೆಣ್ಣಿಗೆ ಪತಿಯೇ ಪರದೈವ ಗಂಡ ಎಂಬ ದೈವಶಕ್ತಿ ಪತಿವ್ರತೆ ಅನುಸೂಯೆ ತನ್ನ ಪತಿಯ ಪಾದ ಪೂಜದ ನೀರಿನಿಂದ ಪವಾಡ ಮೆರೆದಿದ್ದಾಳೆ. ಪಾರ್ವತಿ ಲಕ್ಷ್ಮಿ ಸರಸ್ವತಿ ಲೋಕಕ್ಕೆ ಮೂರು ಜನ ಪತಿವ್ರತೆಯರು ಎಂದು ತಮಗೆ ತಾವೇ ಬಿರುದು ತಂದುಕೊಂಡಿದ್ದರು.

ತಮಗಿಂತಲೂ ಅನುಸೂಯೆ ಪತಿವ್ರತೆ ಎಂದು ವರ್ತಮಾನ ತಿಳಿದು. ಮೂವರು ತಲೆಗೆ ಬಟ್ಟೆ ಕಟ್ಟಿಕೊಂಡು ತಮ್ಮ ಗಂಡಂದಿರು ಬರುವುದರಲ್ಲಿ ಮಂಚದ ಮೇಲೆ ಬಿಮ್ಮನೆ ಮಲಗಿದ್ದರು. ಸತಿಯರ ಮಲಗಿದ್ದ ಕಾರಣ ಕೇಳಿದ ಬ್ರಹ್ಮ ವಿಷ್ಣು ಮಹೇಶ್ವರರು ದಿಗ್ಭ್ರಾಂತರಾಗುತ್ತಾರೆ. ಮೂರು ಜನ ತಮ್ಮ ಗಂಡಂದಿರಿಗೆ ಚಾಡಿ ಹೇಳುತ್ತಾರೆ. ಲೋಕಕ್ಕೆ ದೊಡ್ಡವರಾದ ನೀವು ನಮಗಾದ ಅಪಮಾನವನ್ನು ಸರಿಪಡಿಸಬೇಕು. ಕೂಡಲೇ ಅನುಸೂಯೆಯ ಅರಮನೆಗೆ ಹೋಗಿ ಅವಳ ಪತಿವ್ರತೆಯನ್ನು ಪರೀಕ್ಷಿಸಬೇಕು ಎಂದು ಸವಾಲು ಹಾಕುತ್ತಾರೆ. ಹೆಂಡತಿಯರ ಮಾತು ಕೇಳಿದ ಬ್ರಹ್ಮ ವಿಷ್ಣು ಮಹೇಶ್ವರರು ಮಾರುವೇಷ ತೊಟ್ಟು ಋಷಿಮುನಿಗಳಾಗಿ ಅನುಸೂಯೆ ಅರಮನೆಯ ಬಾಗಿಲ ಮುಂದೆ ನಿಂತು ಭವತಿ ಭಿಕ್ಷಾಂದೇಹಿ ಎಂದು ಕೂಗುತ್ತಾರೆ. ಅರಮನೆಯ ಒಳಗೆ ಪತಿಯ ಸೇವೆ ಮಾಡುತ್ತಿದ್ದ ಅನುಸೂಯೆ ಹೊರಬಂದು ಸ್ವಾಮಿ ವೇಷಧರಿಸಿದ ಪೂಜ್ಯರನ್ನು ನೋಡಿ ಸಂತೋಷ ಪಡುತ್ತಾಳೆ. ಕೈ ಕಾಲು ತೊಳೆದುಕೊಳ್ಳಲು ಮೀಸಲು ನೀರು ತಂದು ನೀಡಿದಳು. ಒಳಗೆ ರತ್ನಗಂಬಳಿಯ ಗದ್ದಿಗೆ ಹಾಸಿ ಒಳಗೆ ಬನ್ನಿ ಎಂದು ವಿನಂತಿಸಿದಳು.

ಅವಳಲ್ಲಿನ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಎಲ್ಲ ವರ್ತಮಾನ ತನ್ನ ಪತಿರಾಯನಿಗೆ ಹೇಳಿದಳು. ಬಂದಂತಹ ಸ್ವಾಮಿಗಳಲ್ಲಿ ಒಬ್ಬರು ನಮಗೆ ಹಸಿವಾಗಿದೆ ಊಟ ಬಡಿಸು ಎಂದು ಬೇಡಿಕೊಳ್ಳುತ್ತಾರೆ. ಗುರುಗಳ ಆಸೆಯನ್ನು ಪೂರೈಸುವ ಹುಮ್ಮಸ್ಸಿನಲ್ಲಿ ತಮಗೇನು ಊಟಬೇಕು ಹೇಳಿದರೆ ಭಕ್ತಿಯಿಂದ ಮಾಡುತ್ತೇನೆ . ತಾವು ಸಂತೃಪ್ತಿಯಿಂದ ಹಾರೈಸಬೇಕು . ನಮಗೆ ಬೇಕಾದ ಆಹಾರವನ್ನು ಸಿದ್ದ ಪಡಿಸಬಲ್ಲೆಯಾ ಎಂದು ಅಪಹಾಸ್ಯ ಮಾಡುತ್ತಾರೆ. ತಮಗೇನು ಬೇಕು ಮಹಾಪ್ರಭು ತಾವು ಆಸೆಪಟ್ಟದನ್ನೆ ಮಾಡಿ ಬಡಿಸುತ್ತೇನೆ ಎಂದು ಒಪ್ಪಿಕೊಳ್ಳುತ್ತಾಳೆ.

ಹಾಗಾದರೆ ಉಸುಕಿನ ಉಸುಳಿ ಬಸಿಯಬೇಕು ಎಂದು ಹೇಳುತ್ತಾರೆ. ಆಗಲಿ ಎಂದು ಅಡುಗೆ ಮನೆಯವ ಒಳಗೆ ಬಂದು ನೀರು ಕಾಯಿಸಲು ಹಿಟ್ಟು ಬೊಗಸೆ ಮರಳನ್ನು ತಂದು ಪಾತ್ರೆಯಲ್ಲಿ ಹಾಕುತ್ತಾಳೆ. ಆಮೇಲೆ ಗಂಡನ ಪಾದ ಪೂಜೆಯ ಧೂಳಿನ ನೀರು ಅಡುಗೆ ಮಾಡಿದ ಪಾತ್ರೆಯ ಮೇಲೆ ಸಿಂಪಡಿಸಿದಾಗ ಪಾಯಸವಾಗುತ್ತದೆ. ಹೊಟ್ಟೆ ತುಂಬ ಊಟ ಮಾಡಿದ ಋಷಿಮುನಿಗಳು ಹಲಗೆ ತೊಟ್ಟಿಲಲ್ಲಿ ಮಲಗುವ ಇಂಗಿತವನ್ನು ವ್ಯಕ್ತಪಡಿಸುತ್ತಾರೆ. ಅವರ ಆಸೆಯಂತೆ ಹಲಗೆ ತೊಟ್ಟಿಲಿನಲ್ಲಿ ಹಾಸಿಗೆ ಹಾಸಿ ಮಲಗಲು ವಿನಂತಿಸಿದಾಗ ಅಪಹಾಸ್ಯ ಮಾಡುತ್ತಾರೆ.

ಗಂಡನ ಪಾದ ಪೂಜೆದ ಧೂಳಿನ ನೀರು ಮೂವರು ಋಷಿಗಳ ಮೇಲೆ ಸಿಂಪಡಿಸಿದಾಗ ವರ್ಷದ ಕೂಸುಗಳಾಗಿ ಬದಲಾಗುತ್ತಾರೆ. ಅಂತ ಅಗಾಧವಾದ ಶಕ್ತಿ ಗಂಡ-ಹೆಂಡತಿಯರಲ್ಲಿ ಅಡಗಿದೆ.
ದಿನಪೂರ್ತಿ ತಮ್ಮ ಗಂಡಂದಿರು ಬರುವ ಹಾದಿಯನ್ನೇ ಕಾಯುತ್ತಾರೆ. ಭಯಗೊಂಡು ಸರಸ್ವತಿ ಪಾರ್ವತಿ ಲಕ್ಷ್ಮಿಯವರು ಮಾರುವೇಷ ಧರಿಸಿ ಭವತಿ ಭಿಕ್ಷಾಂದೇಹಿ ಎಂದು ಅನುಸೂಯೆ ಅವರ ಮನೆಗೆ ಬರುತ್ತಾರೆ. ಅವರನ್ನು ಪ್ರೀತಿಯಿಂದ ಸ್ವಾಗತಿಸಿದ ಅನುಷಾದೇವಿಗೆ ಅಪಹಾಸ್ಯದ ಮಾತುಗಳಿಂದ ನಾವು ಕುಂದ್ರಲೂ ನಿಂದ್ರಲೂ ಬಂದಿಲ್ಲ ನಮ್ಮ ಗಂಡಂದಿರನ್ನು ಹುಡುಕಿಕೊಂಡು ಬಂದಿದ್ದೇವೆ. ಅವರನ್ನು ನಮಗೆ ಒಪ್ಪಿಸು ಎಂದು ವಿನಂತಿಸುತ್ತಾರೆ.

ಅದಕ್ಕೆ ಪತಿವ್ರತೆಯರಾದ ನೀವು ನಿಮ್ಮ ನಿಮ್ಮ ಗಂಡಂದಿರನ್ನು ನೀವೇ ಕರೆದುಕೊಂಡು ಹೋಗಿ ಎಂದು ಅಲಗಿ ತೊಟ್ಟಿಲಲ್ಲಿ ಮಲಗಿದ್ದ ಕೂಸುಗಳನ್ನು ತೋರಿಸುತ್ತಾಳೆ. ಬ್ರಹ್ಮ ವಿಷ್ಣು ಮಹೇಶ್ವರರು ಒಂದು ವರ್ಷದ ಮಕ್ಕಳಾಗಿ ಒಂದೇ ಮುಖದ ಒಂದೇ ಉಡುಗೆ ತೊಟ್ಟು ಮಲಗಿರುವುದನ್ನು ನೋಡಿ ಸರಸ್ವತಿ ಪಾರ್ವತಿ ಲಕ್ಷ್ಮಿಯವರು ಲೋಕಕ್ಕೆ ನೀನೇ ಮಹಾಪತಿವ್ರತೆ ಎಂದು ಅನುಷಾದೇವಿಯವರ ಕಾಲಿಗೆ ಎರಗುತ್ತಾರೆ. ತಮ್ಮಲ್ಲಿರುವ ಅಹಂಕಾರದ ಬುದ್ಧಿ ಅರಿವಾಗಿ ಅನುಷಾದೇವಿಯವರಿಗೆ ಶರಣಾಗುತ್ತಾರೆ. ಮತ್ತೊಂದು ಉದಾಹರಣೆ ಎಂದರೆ ಜಮದಗ್ನಿಯ ರೂಪ ಸೌಂದರ್ಯಕ್ಕೆ ಮರುಳಾದ ರೇಣುಕಾದೇವಿ ಜಮದಗ್ನಿ ಋಷಿಯನ್ನು ಮದುವೆಯಾಗಲು ಅಪೇಕ್ಷೆ ಪಡುತ್ತಾರೆ.

ಜಮದಗ್ನಿ ಮಹಾಋಷಿಗಳು ಬೇಡ ಎಂದು ಹೇಳಿದರು ಕೇಳದ ರೇಣುಕಾ ಮದುವೆಯಾಗುತ್ತಾರೆ. ಗಂಡನ ಪೂಜೆಗೆ ಮೀಸಲು ನೀರು ತರಲು ಉಸುಕಿನ ಕೊಡವ ಮಾಡಿ ಹಾವಿನ ಸಿಂಬಿ ಮಾಡಿ ನದಿಯ ನೀರಿಗೆ ಹೋಗಿ ಬಿಂದಿಗೆಯಲ್ಲಿ ನೀರು ತುಂಬಿಕೊಂಡು ಬರುವಾಗ ಒಬ್ಬ ಪುರುಷನನ್ನು ನೋಡಿ ಕಾಮೋದ್ರೇಕದ ಭಾವನೆಯ ಮೂಡಿದಾಗ ಪರ ಪುರುಷರನ್ನು ನೋಡಿದ ಶಾಪಕ್ಕೆ ಬಲಿಯಾಗುತ್ತಾಳೆ. ಹಾವಿನ ಸಿಂಬೆ ಹರಿದುಹೋಗುತ್ತದೆ ಮರಳಿನ ಬಿಂದಿಗೆ ಹೊಡೆದು ಹೋಗುತ್ತದೆ.

ಜಮದಗ್ನಿಯ ಕೋಪಕ್ಕೆ ಗುರಿಯಾಗುತ್ತಾಳೆ. ರೇಣುಕಾ ದೇವಿಗೆ ಜಮದಗ್ನಿ ಶಾಪ ಕೊಡುತ್ತಾರೆ. ಶಾಪ ವಿಮೋಚನೆಗಾಗಿ ರೇಣುಕರಾಜ ಜಮದಗ್ನಿಯ ಋಷಿಯ ಪಾದದ ಪೂಜೆಯ ನೀರು ತಂದು ಕುಷ್ಟರೋಗದಿಂದ ಬಳಲುತ್ತಿರುವ ರೇಣುಕಾದೇವಿಯ ಮೈಮೇಲೆ ಸಿಂಪಡಿಸಿದಾಗ ರೋಗದಿಂದ ಗುಣಮುಖಳಾದ ಘಟನೆಗಳು ಪುರಾಣಗಳಲ್ಲಿ ನೋಡುತ್ತೇವೆ.
ಇಂತಹ ಪವಿತ್ರವಾದ ಪತಿಯ ಮತ್ತು ಸತಿಯ ಶಕ್ತಿಯನ್ನು ಅರ್ಥಮಾಡಿಕೊಂಡು ಬಾಳಿದರೆ ಬದುಕು ಬಂಗಾರವಾಗಿ ಸಮಾಜದಲ್ಲಿ ಇತರರಿಗೆ ಮಾದರಿಯಾಗಿ ಬದುಕಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ತಂತ್ರಜ್ಞಾನ ಮೋಡಿ : ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ

Published

on

  • ಡಾ. ಚಂದ್ರಪ್ಪ ಎಚ್, ಸಹಾಯಕ ಪ್ರಾಧ್ಯಾಪಕರು, ಭೌತವಿಜ್ಞಾನ ವಿಭಾಗ, ಸರ್ಕಾರಿ ವಿಜ್ಞಾನ ಕಾಲೇಜು, ಚಿತ್ರದುರ್ಗ

90ರ ದಶಕದಿಂದೀಚೆಗೆ, ಎಲ್ಲೆಡೆ ಸದ್ದಿಲ್ಲದೇ ಕ್ರಮೇಣ ಒಕ್ಕರಿಸತೊಡಗಿದೆ ಆಧುನಿಕ ಯಾಂತ್ರಿಕೃತ ಬದುಕು.

ಜನಸಾಮಾನ್ಯರ ಅರಿವಿನ-ಪರಿಧಿ ತಿಳಿಗೊಳ್ಳುವುದರ ಮೊದಲೇ ಊಹಿಸಲಾರದಷ್ಟು ಮಟ್ಟಿಗೆ ಇಂದು, ಸ್ವಚ್ಛಂದ ಹಳ್ಳಿ-ಸೊಬಗಿನ ಕೂಡು-ಕುಟುಂಬದ, ಮೈ-ಮನಸ್ಸು ತುಂಬಿದ, ಪರಿಶುದ್ಧ ಜೀವನ ಪ್ರೀತಿ, ಉತ್ಸಾಹ, ಮಮತೆಯನ್ನು ಇನ್ನಿಲ್ಲವಾಗಿಸಿದೆ ಎನಿಸುತ್ತದೆಯಲ್ಲವೆ?

ಹೇಗೆಂದರೆ, ಕಲ್ಪಿಸಿಕೊಂಡರೂ ಕಣ್ಣೆದುರಿಗೆ ತೆರೆದಿಡುವ ಅಮೂಲ್ಯ ಬದುಕು, ಅದೆಷ್ಟು ಬೇಗ ದಿಕ್ಕು-ದೆಸೆಯಿಲ್ಲದೆ ಕಣ್ಣು-ಕಟ್ಟಿದ ಸ್ಪರ್ಧೆಗಿಳಿದ ಕುದುರೆಯಂತೆ ಅಲೆಯುವಂತಾಗಿದೆ! ಅರೆಕ್ಷಣ, ಮೈಮನ ಕಸಿವಿಸಿಗೊಳ್ಳುತ್ತೆ! ಜೀವ ಮರುಗುತ್ತೆ. ಮತ್ತೆ ಮತ್ತೆ ಆ ಬಾಲ್ಯ, ಹಳ್ಳಿ ಬದುಕನ್ನ ಅರಸಿ ಬಯಸುತ್ತೆ! ಜನತೆ, ಹಳ್ಳಿಯಲ್ಲಿನ ಗಿಡ-ಮರ, ಪಶು-ಪಕ್ಷಿ, ಹಳ್ಳ-ಕೊಳ್ಳ, ಬೆಟ್ಟ-ಗುಡ್ಡ ಮುಂತಾದ ಪರಿಸರದ ಸಕಲ ಜೀವಿಗಳೊಂದಿಗೆ ಒಂದಾಗಿ ನಲ್ಮೆಯಿಂದ ಪರಿಶುದ್ಧ ಮನದಿ, ಭೂ ತಾಯಿ, ತಿಳಿ-ನೀಲಿ ಆಗಸ, ಮಳೆ, ಗಾಳಿ, ಬೆಳಕನ್ನ ಇನ್ನಿಲ್ಲದೆ ಅಪ್ಪಿ, ಅತ್ಯಂತ ಸಂತಸ-ಖುಷಿಯಿಂದ, ಇರುವ ಪರಿಸ್ಥಿತಿಗೆ ಒಗ್ಗಿ , ಬದುಕು ರೂಪಿಸಿಕೊಂಡು ಜೀವನೋತ್ಸಾಹ ತಳೆಯುತ್ತಿದ್ದರು.

ನಿಜ ಹೇಳಬೇಕೆಂದರೆ, ಪರಿಸರವೇ ಪಾಠ; ಭೂ ತಾಯಿಯೇ ಹಾಸಿಗೆ; ಆಗಸವೇ ಹೊದಿಕೆಯಾಗಿ, ದುಡಿದ, ದಣಿವರಿದ ಮನದಿ, ಕಣ್ತುಂಬಿ ನೆಮ್ಮದಿಯ ನಿಟ್ಟುಸಿರುಗೈವ ಕ್ಷಣಗಳು ಅದಾಗಿತ್ತು!

ಹಳ್ಳಿಯಲ್ಲಿನ ಆಟೋಟಗಳು, ತಮಾಷೆಯ ಕ್ಷಣಗಳು, ಆಟಿಕೆಗಳು, ಸಾಮಾನುಗಳು, ಹಬ್ಬ-ಹರಿದಿನಗಳು, ಜಾತ್ರೆ-ಸಂತೆಗಳು, ಒಕ್ಕಲು ಸಮಯದ ಸುಗ್ಗಿಯ ಮಧುರ ಕ್ಷಣಗಳು ಇತ್ಯಾದಿ ಜನತೆಯ ಮುಗ್ಧ -ಮನಸ್ಸು ಮತ್ತು ಹೊಳೆವ ಮುಖದಲ್ಲಿ, ನಿಷ್ಕಲ್ಮಶ ಮಂದಹಾಸ ಮೂಡಿಸಿ, ಬೆಲೆ ಕಟ್ಟಲಾಗದ ಖುಷಿಯ ಕ್ಷಣಗಳನ್ನು ಸದಾ ಅವರಲ್ಲಿ ಕಂಗೊಳಿಸುತ್ತಿದ್ದವು.

ಎಲ್ಲರೂ ದುಡಿವವರು; ಎಲ್ಲರೂ ಭಾಗಿಯಾಗುವವರು; ಎಲ್ಲರೊಳಗೊಂದಾಗಿ ಬಾಳುವವರು; ಎಲ್ಲರಲ್ಲೂ ಧನ್ಯತಾ ಭಾವ; ಆದರಣೀಯತೆ, ಪೂಜ್ಯತಾ-ಭಾವ ತುಂಬಿತ್ತು! ಅಂತಃಕರಣೆ, ಕರುಣೆ, ಪ್ರೀತಿ-ವಿಶ್ವಾಸ, ತಕ್ಕಮಟ್ಟಿಗೆ ಮಾನವೀಯತೆ ಬದುಕ-ಪ್ರೀತಿ ಹೆಚ್ಚಿಸಿತ್ತು!

ಈಗಾಗಲೇ, ನಾವು ಯಾವ ಸ್ಥಿತಿ ತಲುಪಿದ್ದೇವೆಂದರೆ: ಶಾಲಾ ರಜೆಯ ದಿನಗಳಲ್ಲಿ, ಈಗಿನ ಮಕ್ಕಳಿಗೆ ಆ ಕಾಲದ ಹಳ್ಳಿಗಳ ಜೀವನ ಪರಿಚಯಿಸಲು ಗೊಟಗೋಡಿಯ ರಾಕ್ ಗಾರ್ಡನ್ – ಹಾವೇರಿ, ಹೆರಿಟೇಜ್ ವಿಲೇಜ್ – ಮಣಿಪಾಲ, ಅಲ್ಲಲ್ಲಿ ಸಾರ್ವಜನಿಕ ಉದ್ಯಾನವನ, ಹಾಗೂ ಇತರೆ ಕೆಲವು ಮ್ಯೂಸಿಯಮ್ ಗಳತ್ತ ಮುಖ ಮಾಡಿಬೇಕೆ ಹೊರತು ನೈಜ ಚಿತ್ರಣ ಪ್ರಸ್ತುತ ಹಳ್ಳಿಗಾಡಿನಲ್ಲೂ ಕಾಣಸಿಗದು! ಸ್ವತಃ ಹಳ್ಳಿಗರೇ ಪರಿತಪಿಸುವ ಸ್ಥಿತಿ.

ಕಾರಣ ಇಷ್ಟೆ: ತಂತ್ರಜ್ಞಾನದ ಆವಿಷ್ಕಾರ ಮತ್ತು ಎಲ್ಲ ಕ್ಷೇತ್ರಗಳಲ್ಲೂ ಹೊಕ್ಕಿರುವ ಅದರ ಗಾಢವಾದ ಛಾಯೆ. ಇಡೀ ‘ಪ್ರಪಂಚವೇ ಒಂದು ಹಳ್ಳಿ’ (Global Village) ಯಾಗಿ ಮಾರ್ಪಟ್ಟಿರುವ ಭಾವನೆ. ವಿಶೇಷವಾಗಿ, ದೂರವಾಣಿ, ಇಂಟರ್ನೆಟ್, ಯುಟ್ಯೂಬ್, ನೇರ ಮೆದುಳಿಗೆ ಕೈ ಹಾಕಿರುವ ಸಾಮಾಜಿಕ ಜಾಲತಾಣಗಳ ಡ್ರಗ್ಸ್ ರೀತಿಯ ಮಾನಸಿಕ ಮೋಹ ಬೆಂಬಿಡದೆ ಇಂದಿನ ಆಧುನಿಕ ಜನತೆಯ ಚಿಂತನಾರ್ಹ ಯೋಚನಾ ಶಕ್ತಿ, ಆರೋಗ್ಯ , ಕೌಟುಂಬಿಕ ಮೌಲ್ಯಗಳು, ಮಾನವೀಯ ಗುಣಗಳು ಹಾಗೂ ಒಟ್ಟಾರೆ ಜೀವನ ಶೈಲಿಯನ್ನೇ ಅಕ್ಷರಸಃ ನುಂಗಿಹಾಕಿವೆ! ಅಲ್ಲದೆ, ಇದು ಇಂದಿನ ಅನಿವಾರ್ಯವೆಂಬಂತೆ ಕಠೋರ ಸನ್ನಿವೇಶ ಹುಟ್ಟುಹಾಕಿವೆ.

ಒಂದೆಡೆ, ‘ಅತೀಯಾದ ಅಮೃತವೂ ವಿಷ’ವೆನ್ನುವಂತೆ, ಹಾಗೂ ಊಟದಲ್ಲಿ ‘ರುಚಿಗೆ ತಕ್ಕಷ್ಟು ಉಪ್ಪಿ’ರುವಂತೆ ಹಲವು ಒಳಿತು-ಕೆಡುಕಗಳ ನಡುವೆ ಎಲ್ಲವೂ ಹಿತಮಿತವಾಗಿ ಬಳಕೆಯಲ್ಲಿದ್ದರೆ ಚೆನ್ನ. ಅಲ್ವೇ? ಮೈ ಮನ ಆರೋಗ್ಯಕರವಾಗಿರುತ್ತೆ; ಜೀವನ ಉತ್ಸಾಹದಿಂದ ಕೂಡಿರುತ್ತೆ.
ಜೊತೆಗೆ, ಇತ್ತೀಚೆಗೆ ಜಗತ್ತಿನೆಲ್ಲೆಡೆ ಭಾರೀ ಸಂಚಲನ ಸೃಷ್ಟಿಸಿರುವ ‘ಕೃತಕ ಬುದ್ಧಿಮತ್ತೆ’ (Artificial Intelligence – AI) ಹಾಗೂ ‘ಬಯೋಚಿಪ್’ ತಂತ್ರಜ್ಞಾನಗಳು. ಈ ಎರಡೂ ತಂತ್ರಜ್ಞಾನಗಳು ಬಹುತೇಕ ಮನುಷ್ಯನನ್ನ ಸಹ ಒಂದು ಸರಕಾಗಿ ನೋಡುವ ದೂರದೃಷ್ಟಿ ಹೊಂದಿವೆ ಎಂದರೆ ತಪ್ಪಾಗಲಿಕ್ಕಿಲ್ಲ! ತೀರ ಇತ್ತೀಚೆಗೆ, ತಂತ್ರಜ್ಞಾನ ಜಗತ್ತಿನ ಹೆಸರಾಂತ ಉದ್ಯಮಿ: ಎಲಾನ್ ಮಸ್ಕ್ ತಮ್ಮ ‘ನ್ಯೂರಾಲಿಂಕ್’ (Neuralink) ಸಂಸ್ಥೆಯ ಮೂಲಕ ಪ್ರಪಂಚದ ಮೊಟ್ಟ ಮೊದಲ ಪ್ರಯತ್ನವಾಗಿ ಆರೋಗ್ಯವಂತ ವ್ಯಕ್ತಿಯೊಬ್ಬರ ಮೆದುಳಿನಲ್ಲಿ ಪ್ರಾಯೋಗಿಕ – ‘ಮೊದಲ ಬಯೋಚಿಪ್’ ಅಳವಡಿಸಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ! ಇದುವರೆಗೂ, ಮೊಬೈಲ್ ನಲ್ಲಿ ಕೇವಲ ‘ಮೆಮೊರಿ ಕಾರ್ಡ್’ ಬಳಸಿ, ಅದರಲ್ಲಿ ಸಂಗ್ರಹಿಸಿದ ಮಾಹಿತಿ ಬೇಕೆಂದಾಗ ಆಲಿಸುವ, ನೋಡುವ ಪರಿಪಾಠದ ಪರಿಚಯವಿದ್ದ ನಮಗೆ, AI ಹಾಗೂ Biochip ತಂತ್ರಜ್ಞಾನಗಳ ಅವತಾರಗಳು ಊಹೆಗೂ ಮೀರಿದ್ದು ಅನ್ಸುತ್ತೆ ಕೂಡ.

ಆಗ, ಜಗತ್ತು ಹೇಗಿರಬೇಡ? ತಂತ್ರಜ್ಞಾನ ತೊರೆದು ಮನುಷ್ಯ, ಜೀವನ ಕಲ್ಪಿಸಿಕೊಳ್ಳಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಅದು, ಕೇವಲ ಮನುಷ್ಯನ ಅವಶ್ಯಕತೆಗಳಿಗೆ ಪೂರಕವಾಗಿರಬೇಕೆ ಹೊರತು; ಆತನನ್ನ ಆಳುವ ಸ್ಥಿತಿ ತಲುಪಬಾರದು! ಮುಂದಿನ ದಿನಗಳಲ್ಲಿ, ಮನುಷ್ಯ ಎದುರಿಸಬಹುದಾದ ಭಯಾನಕ ತಂತ್ರಜ್ಞಾನ ಸಂಕೋಲೆಗಳನ್ನು ಕುರಿತು ಚರ್ಚಿಸುವ ಅಗತ್ಯ ಇಂದಿನ ತುರ್ತು ಅನಿವಾರ್ಯ. ಆದರೆ, ಎಲ್ಲವೂ ಸಲೀಸಾಗಿ ಕೈಗೆಟುಕುವ ಇಂದಿನ ದಿನಗಳಲಿ, ಅತಿಯಾಗಿ ಮಿತಿಮೀರಿರುವ ಅನುಕೂಲಗಳು ಅಮೂಲ್ಯ ಖುಷಿಯ ಕ್ಷಣಗಳನ್ನು ಎಂದಿಗೂ ನೀಡಲಾರವು.

ಬದಲಿಗೆ, ಪ್ರತಿಷ್ಠೆಯ ಹೆಮ್ಮರಗಳಾಗಿ, ಜನತೆ ನಾಲ್ಕು ದಿನದ ಈ ಬಾಳಲಿ ಏನೋ ಬಹುದೊಡ್ಡ ಸಾಧನೆಗೈದವರಂತೆ, ಯಂತ್ರಮಾನವರಂತೆ ಬೀಗುವವರೆ!!? ಮೂಲಭೂತವಾಗಿ, ಮಾನವ ಸಹಿತ ಸಕಲ ಜೀವ-ಸಂಕುಲವೂ ವಾಸಯೋಗ್ಯ ಸ್ವಚ್ಛಂದ ಭೂಮಿ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಭೂಮಿಯಲ್ಲಿ, ಮಣ್ಣಿನ ಫಲವತ್ತತೆ ಹಾಗೂ ನೀರು ಸಂರಕ್ಷಿಸದೆ; ಗಿಡ-ಮರ ಬೆಳೆಸದೆ; ಹಸಿರು ಹೆಚ್ಚಿಸದೆ, ಮತ್ತು ಪರಿಸರ ಸಮತೋಲನ ಕಾಪಾಡದೆ; ಕೇವಲ ತಂತ್ರಜ್ಞಾನ ತಲೆಯಲಿ ಹೊತ್ತು, ಮನುಷ್ಯ ಉತ್ತಮ ಆಹಾರ, ಆರೋಗ್ಯ ಮತ್ತು ಜೀವನ ಕಟ್ಟಿಕೊಳ್ಳಲು ಎಂದಿಗೂ ಸಾಧ್ಯವಿಲ್ಲ. ಸಮರೋಪಾದಿಯಲ್ಲಿ, ಜನತೆ ಸ್ವ ಇಚ್ಛೆಯಿಂದ ಹಳ್ಳಿ-ಹಳ್ಳಿಗಳಿಂದ, ನಗರಗಳು, ಬೆಟ್ಟ-ಗುಡ್ಡಗಳಲ್ಲೆಡೆ ಬೃಹತ್ ಸಂಖ್ಯೆಯಲ್ಲಿ ಸಸಿಗಳನ್ನ ನೆಟ್ಟು, ಪಾಲನೆ-ಪೋಷಣೆಗೈಯ್ಯುವ ಚಳುವಳಿ ರೂಪದ ಆಂದೋಲನ ದೇಶಾದ್ಯಂತ ಅತ್ಯಂತ ತ್ವರಿತವಾಗಿ ಕೈಗೂಡಬೇಕು. ಈ ನಿಟ್ಟಿನಲ್ಲಿ, ಎಲ್ಲರೂ ಕೈಜೋಡಿಸಬೇಕು.

(ಲೇಖಕರು : ಡಾ. ಚಂದ್ರಪ್ಪ ಎಚ್, ಸಹಾಯಕ ಪ್ರಾಧ್ಯಾಪಕರು, ಭೌತವಿಜ್ಞಾನ ವಿಭಾಗ, ಸರ್ಕಾರಿ ವಿಜ್ಞಾನ ಕಾಲೇಜು, ಚಿತ್ರದುರ್ಗ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ನಿಷೇಧ : ಸಚಿವ ದಿನೇಶ್ ಗುಂಡೂರಾವ್

Published

on

ಸುದ್ದಿದಿನ, ಬೆಂಗಳೂರು : ಕೃತಕ ಬಣ್ಣ ಬಳಸಿದ ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಮಾರಾಟವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯಾದ್ಯಂತ ನಿಷೇಧಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಆದಾಗ್ಯೂ, ಬಣ್ಣ ಹಾಗೂ ರಾಸಾಯನಿಕ ಹಾಕದೇ ಇರುವ ಈ ತಿನಿಸುಗಳ ಮಾರಾಟಕ್ಕೆ ನಿರ್ಬಂಧ ಇಲ್ಲ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳು ಸೇರಿದಂತೆ ಎಲ್ಲ ವಯೋಮಾನದವರಿಗೂ ಅಚ್ಚುಮೆಚ್ಚಾದ ಈ ಎರಡು ತಿನಿಸುಗಳನ್ನು ಆಕರ್ಷಕವಾಗಿ ಕಾಣುವಂತೆ ಮಾಡಲು ಬಳಸುವ ಕೃತಕ ಬಣ್ಣಗಳಲ್ಲಿ ಅಪಾಯಕಾರಿ ರಾಸಾಯನಿಕಗಳು ಇರುವುದು ಪರೀಕ್ಷೆಗಳಿಂದ ದೃಢಪಟ್ಟಿದೆ ಎಂದರು. ರಾಜ್ಯದ ಹಲವೆಡೆ ಬೀದಿಬದಿಯ ಗಾಡಿಗಳು, ಹೋಟೆಲ್‌ಗಳಲ್ಲಿ ತಯಾರಿಸಿದ ಗೋಬಿ ಮಂಚೂರಿ ತಿನಿಸಿನ 171ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ 107ಮಾದರಿಗಳಲ್ಲಿ ಅಸುರಕ್ಷಿತ ರಾಸಾಯನಿಕಗಳು ಪತ್ತೆಯಾಗಿರುವುದು ಆತಂಕಕಾರಿಯಾಗಿದೆ ಎಂದರು.

ಕೃತಕ ಬಣ್ಣಗಳಲ್ಲಿರುವ ರೋಡೊಮೈನ್-ಬಿ ಮತ್ತು ಟಾಟ್ರಝೀನ್ ರಾಸಾಯನಿಕಗಳು ಕ್ಯಾನ್ಸರ್ ರೋಗಕ್ಕೆ ಕಾರಣವಾಗಬಹುದು ಎನ್ನುವ ಅಂಶ ತಿಳಿದುಬಂದಿದೆ. ಬಣ್ಣ ಹಾಕಿದ ಗೋಬಿಮಂಚೂರಿ ಮತ್ತು ಕಾಟನ್‌ಕ್ಯಾಂಡಿಗಳನ್ನು ಮಾರಾಟ ಮಾಡುವವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಏಳು ವರ್ಷದರೆಗೆ ಜೈಲು ಶಿಕ್ಷೆ, 10 ಲಕ್ಷ ರೂಪಾಯಿವರೆಗೆ ದಂಡ ಅಥವಾ ಜೀವಾವಧಿ ಶಿಕ್ಷೆಗೂ ಅವಕಾಶವಿದೆ ಎಂದು ಸಚಿವರು ಎಚ್ಚರಿಕೆ ನೀಡಿದರು.

ಹೇಳಿಕೆ


  • ಬಣ್ಣ ಹಾಕಿರುವ ಈ ಎರಡು ತಿನಿಸುಗಳನ್ನು ಸೇವಿಸಬಾರದು ಎಂದು ಸಾರ್ವಜನಿಕರಿಗೂ ಎಚ್ಚರಿಕೆ ನೀಡಲಾಗಿದೆ. ಸಾರ್ವಜನಿಕರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದಲ್ಲದೇ, ಕಬಾಬ್, ಪಾನಿಪೂರಿ ಮೊದಲಾದ ತಿನಿಸುಗಳಲ್ಲೂ ಕೃತಕ ಬಣ್ಣಗಳ ಬಳಕೆ ಆಗುತ್ತಿದೆಯೇ ಎಂದು ಪರಿಶೀಲಿಸಲಾಗುತ್ತಿದೆ.

            | ಸಚಿವ ದಿನೇಶ್ ಗುಂಡೂರಾವ್


ಟ್ವೀಟ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೈಫ್ ಸ್ಟೈಲ್

ನೀಲಿ ಪರ್ವತಗಳ ನಾಡಿನಲ್ಲಿ ಕೀಚಕರ ಹಾವಳಿ

Published

on

Unidentified miscreants torch two houses belonging to a particular community to retaliate the killing of nine civilians by Kukis in Manipur. (Photo: PTI)
  • ಡಾ. ಸಿದ್ದಯ್ಯ ರೆಡ್ಡಿಹಳ್ಳಿ

ಗತ್ತಿನ ಪ್ರತಿ ಜನಾಂಗವು ತನ್ನ ಪೂರ್ವಜರ ಪ್ರತಿಭೆ ಹಾಗೂ ಹಿರಿಮೆಯನ್ನು ಹೇಳಿಕೊಳ್ಳಲು ಕಾತರಿಸುತ್ತದೆ. ಅದರಂತೆಯೇ ನಮ್ಮ ಭರತ ಖಂಡದ ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ವಾಸಿಸುವ ಮಣಿಪುರಿ ಜನರು ಕ್ರಿಸ್ತಪೂರ್ವದಲ್ಲಿಯೇ ಅತ್ಯಾಧುನಿಕ ಸಾಮ್ರಾಜ್ಯವನ್ನು ಕಟ್ಟಿದ್ದರಂತೆ ಎಂದು ಹೇಳಿಕೊಳ್ಳುತ್ತಾರೆ.

ನಿಜ ಮಣಿಪುರಿಗಳು ಬೆಟ್ಟಗಳ ನಡುವೆ ಬೆಚ್ಚನೆಯ ಜೀವನವನ್ನು ಸಾಗಿಸಿದವರು. ಆದರೆ ಅಲ್ಲಿ ಕೊಳ್ಳಿ ಇಡುವ ಕೆಲಸಗಳು ಬಹಳ ಹಿಂದಿನಿಂದಲೇ ಪ್ರಾರಂಭವಾಗಿರುವುದು ತಿಳಿದುಬರುತ್ತದೆ. ವಾಸ್ತವದಲ್ಲಿ ಹಲವು ಬುಡಕಟ್ಟುಗಳ ಸಂಮಿಶ್ರಣವೇ ಮಣಿಪುರವಾಗಿದೆ. ಆದರೆ ಮಣಿಪುರಿಗಳು ಮಾತ್ರ ಈ ನೆಲದ ಮೂಲ ನಿವಾಸಿಗಳು, ಅವರಿಗೆ ಮಾತ್ರ ಸಕಲ ಸೌಕರ್ಯಗಳು ಸಿಗಬೇಕು, ಉಳಿದವರು ರಾಜ್ಯ ಬಿಡಬೇಕು ಎಂದು ಉಯಿಲ್ಲೆಬ್ಬಿಸುತ್ತಿರುವವರು ಯಾರು? ಪ್ರತಿಯೊಂದು ಬುಡಕಟ್ಟು ಜನಾಂಗಕ್ಕೆ ಇರುವಂತೆ ಹೇರಳವಾದ ಜಾನಪದ ಕಥೆ, ಪುರಾಣ ಮತ್ತು ದಂತಕಥೆಗಳ ಸಂಪತ್ತು ಇಲ್ಲಿನ ಬುಡಕಟ್ಟು ಜನಾಂಗಗಳಿಗೂ ಇದೆ.

ಮಣಿಪುರದ ರಾಜಧಾನಿ ಇಂಫಾಲ್‌ನಲ್ಲಿ ವಾಸಿಸುತ್ತಿದ್ದ ಜನರನ್ನು ಮಿತೇಯಿ ಅಥವಾ ಮೈತೇಯಿ ಎಂದು ಕರೆಯಲಾಗುತ್ತಿತ್ತು. ಸ್ವಾತಂತ್ರ್ಯಪೂರ್ವದಲ್ಲಿ ಮಣಿಪುರವು ಬಾಂಗ್ಲಾದ ಗುಡ್ಡುಗಾಡು ಜಿಲ್ಲೆಗಳಲ್ಲಿ ಒಂದಾಗಿತ್ತು. ಭಾರತ ಸ್ವಾತಂತ್ರ್ಯಗೊಂಡು ಎರಡು ವರ್ಷ ಎರಡು ತಿಂಗಳು ಕಳೆದ ನಂತರ ಅಂದರೆ ಅಕ್ಟೋಬರ್ 15, 1949ರಂದು ಭಾರತದೊಂದಿಗೆ ಏಕೀಕೃತವಾಯಿತು.

ಮಣಿಪುರದಲ್ಲಿ ಅಂತರ-ಜನಾಂಗೀಯ ಹಿಂಸಾಚಾರವು ಇದೇ ಮೊದಲೇನಲ್ಲ, ಇದಕ್ಕೆ ಸುದೀರ್ಘವಾದ ಇತಿಹಾಸವಿದೆ. ಮಣಿಪುರಿಗಳ ಅತಿರೇಕ ಎಲ್ಲಿಯವರೆಗೆ ಹೋಗಿತ್ತು ಎಂದರೆ 1964ರಲ್ಲಿ ಭಾರತದಿಂದ ಬಿಡುಗಡೆ ಹೊಂದಿ, ಹೊಸ ದೇಶವನ್ನು ಸೃಷ್ಟಿಸಿಕೊಳ್ಳಬೇಕು ಎಂದು ದಂಗೆಯನ್ನು ಎಬ್ಬಿಸಲಾಗಿತ್ತು. ಇದರಲ್ಲಿ ಹಲವಾರು ಗುಂಪುಗಳು ಕೂಡಿಕೊಂಡಿದ್ದವು. ಅವರಿಗೆ ಅವರದೇ ಆದ ಗುರಿಗಳು ಇದ್ದುದರಿಂದ ಈ ದಂಗೆ ವಿಫಲವಾಯಿತು.

ಚೀನಾ ದೇಶದ ಕುಮ್ಮಕ್ಕಿನಿಂದಾಗಿ ‘ರೆವಲ್ಯೂಷನರಿ ಪಾರ್ಟಿ ಆಫ್ ಕಾಂಗ್ಲೀಪಾಕ್’ ಮತ್ತು ‘ಪೀಪಲ್ಸ್ ಲಿಬರೇಶನ್ ಆರ್ಮಿಗಳು’ ಹುಟ್ಟಿಕೊಂಡವು. ಇವರು ಶಸ್ತ್ರಾಸ್ತ್ರ ತರಬೇತಿಯನ್ನು ಹೊಂದಿ, ಬ್ಯಾಂಕ್ ದರೋಡೆಗಳನ್ನು ಮಾಡುವುದು, ಪೊಲೀಸ್ ಅಧಿಕಾರಿಗಳ ಮೇಲೆ ಮತ್ತು ಸರ್ಕಾರಿ ಕಟ್ಟಡಗಳ ಮೇಲೆ ದಾಳಿ ಮಾಡುವುದು ಇಂತಹ ಕೃತ್ಯಗಳನ್ನು ಮಾಡತೊಡಗಿದರು. 1980 ರಿಂದ 2004ರವರೆಗೂ ಭಾರತ ಸರ್ಕಾರ ಮಣಿಪುರವನ್ನು ಪ್ರಕ್ಷÄಬ್ದ ಪ್ರದೇಶ ಎಂದು ಉಲ್ಲೇಖಿಸಿತ್ತು.

ಈ ಸಂದರ್ಭದಲ್ಲಿ ‘ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆ’ಯನ್ನು ಜಾರಿಗೆ ತರಲಾಯಿತು. ಈ ಕಾಯಿದೆಯ ಪ್ರಕಾರ ಖಾಸಗಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಕೆಟ್ಟವರ್ತನೆಗಳನ್ನು ಮಾಡುತ್ತಿದ್ದರೆ, ಯಾವುದೇ ವಾರಂಟ್‌ಗಳಿಲ್ಲದೆ ಬಂಧಿಸಬಹುದಾಗಿತ್ತು. ಕಾನೂನುಗಳನ್ನು ಉಲ್ಲಂಘಿಸುವ, ಶಸ್ತ್ರಾಸ್ತ್ರಗಳನ್ನು ಹೊಂದಿರುವವರನ್ನು ಅಥವಾ ದೊಡ್ಡ ದೊಡ್ಡ ಗುಂಪುಗಳಲ್ಲಿ ಸೇರಿದ್ದವರನ್ನು ಗುಂಡಿಕ್ಕಿ ಕೊಲ್ಲುವ ಅವಕಾಶವನ್ನು ಮಿಲಿಟರಿಗೆ ಕೊಡಲಾಗಿತ್ತು. ಮಿಲಿಟರಿಯ ಪರವಾಗಿರುವ ಈ ಕಾನೂನು ಅನಿಯಂತ್ರಿತ ಹತ್ಯೆಗಳು, ಚಿತ್ರಹಿಂಸೆ, ಕ್ರೂರ ಅಮಾನವೀಯತೆ, ಅಪಹರಣದಂತಹ ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಯಿತು.

ಈ ಮಾನವ ವಿರೋದಿ ಮಿಲಿಟರಿ ಕಾನೂನಿನ ವಿರುದ್ಧ ಹಲವಾರು ಪ್ರತಿಭಟನೆಗಳು, ಹೋರಾಟಗಳು ಜರುಗಿದವು. ಇರೋಮ್ ಶರ್ಮಿಳಾ ಚಾನು ಎಂಬ ದಿಟ್ಟ ಮಹಿಳೆ ದೀರ್ಘಾವಧಿಯ ಉಪವಾಸ ಸತ್ಯಾಗ್ರಹವನ್ನು ಮಾಡಿದ್ದಳು. ಆದರೂ 2004ರಲ್ಲಿ ಸ್ಥಳೀಯ ಮಹಿಳೆಯರ ಮೇಲೆ ಹಿಂಸಾತ್ಮಕ ದಾಳಿಯನ್ನು ನಡೆಸಲಾಯಿತು. ಇದಕ್ಕೆ ಪ್ರತಿರೋಧವಾಗಿ ಪ್ರತಿಭಟನೆಗಳು ತೀವ್ರಮಟ್ಟಕ್ಕೆ ತಲುಪಿದಾಗ ಸರ್ಕಾರವು ಮಣಿಪುರದಲ್ಲಿದ್ದ ಗೊಂದಲದ ಸ್ಥಿತಿಯನ್ನು ತೆಗೆದುಹಾಕಿತು.

ಮಣಿಪುರವು ನೀಲಿ ಪರ್ವತಗಳಿಂದ ಸುತ್ತುವರೆದಿರುವ ನಾಡಾಗಿದೆ. ಈ ಪರ್ವತ ಶ್ರೇಣಿಗಳು ತಣ್ಣನೆಯ ಗಾಳಿಯನ್ನು ಮಣಿಪುರಿಗಳಿಗೆ ತಲುಪದಂತೆ ತಡೆಯುತ್ತವೆ. ಆದರೆ ಮಣಿಪುರಿಗಳಲ್ಲಿಯೇ ಹೊತ್ತಿಕೊಂಡಿರುವ ಬೆಂಕಿಯನ್ನು ನಂದಿಸಲು ಅವುಗಳಿಗೆ ಸಾಧ್ಯವೇ!? ಅವುಗಳು ಚಂಡಮಾರುತದ ಬಿರುಗಾಳಿಗಳನ್ನು ತಡೆಯಬಹುದು, ಆದರೆ ಅವರಲ್ಲಿರುವ ಮೌಢ್ಯವನ್ನು ತೊಡೆದುಹಾಕಲು ಸಾಧ್ಯವೇ?!
ಮಣಿಪುರ ರಾಜ್ಯವು ಉತ್ತರಕ್ಕೆ ನಾಗಾಲ್ಯಾಂಡ್, ದಕ್ಷಿಣಕ್ಕೆ ಮಿಜೋರಾಂ, ಪಶ್ಚಿಮಕ್ಕೆ ಅಸ್ಸಾಂ ಮತ್ತು ಪೂರ್ವಕ್ಕೆ ಮಯನ್ಮಾರ್ ದೇಶದ ಗಡಿಯನ್ನು ಹೊಂದಿದೆ.

ಮಣಿಪುರದಲ್ಲಿ ಮಳೆಗೆ, ನೀರಿಗೆ ಕೊರತೆಯಿಲ್ಲ. ಇದರ ಪಶ್ಚಿಮಕ್ಕೆ ಬರಾಕ್ ನದಿಯ ಜಲಾನಯನ ಪ್ರದೇಶ, ಪೂರ್ವದಲ್ಲಿ ಯು ನದಿಯ ಜಲಾನಯನ ಪ್ರದೇಶ, ಉತ್ತರದಲ್ಲಿ ಲಾನ್ಯೆ ನದಿಯ ಜಲಾನಯನ ಪ್ರದೇಶ, ಮಧ್ಯದಲ್ಲಿ ಮಣಿಪುರ ನದಿಯ ಜಲಾನಯನ ಪ್ರದೇಶವನ್ನು ಹೊಂದಿ ಸಮೃದ್ಧವಾಗಿರುವಂತೆ, ಅಲ್ಲಿನ ಮಹಿಳೆಯರು ಧಾರಾಕಾರವಾಗಿ ಕಣ್ಣೀರನ್ನು ಸುರಿಸುತ್ತಿದ್ದಾರೆ. ಇಲ್ಲಿನ ಮಹಿಳೆಯರ ಕಣ್ಣೀರಿಗೆ ಮೊದಲನ್ನು ಗುರುತಿಸುವುದಕ್ಕೆ, ಕೊನೆಯನ್ನು ಗ್ರಹಿಸುವುದಕ್ಕೆ ಸಾಧ್ಯವಾಗುತ್ತಿಲ್ಲ.

ಮಣಿಪುರದ ಅತಿದೊಡ್ಡ ನದಿ ಬರಾಕ್. ಇದು ಇರಾಂಗ್, ಮಕು ಮತ್ತು ತುವೈ ಉಪನದಿಗಳನ್ನು ಹೊಂದಿ ಅಸ್ಸಾಂ ರಾಜ್ಯವನ್ನು ಪ್ರವೇಶಿಸುತ್ತದೆ. ಮಣಿಪುರ ನದಿಯ ಜಲಾನಯನ ಪ್ರದೇಶವು ಮಣಿಪುರ, ಇಂಫಾಲ್, ಇರಿಲ್, ನಂಬುಲ್, ಸೆಕ್ಮೆಂ, ಚಕ್ಪಿ, ತೌಬಲ್ ಮತ್ತು ಖುಗಾ ಎಂಬಂತಹ ಎಂಟು ನದಿಗಳನ್ನು ಹೊಂದಿದೆ. ಈ ಎಲ್ಲಾ ನದಿಗಳು ಸುತ್ತಮುತ್ತಲಿನ ಬೆಟ್ಟಗಳಿಂದಲೇ ಹುಟ್ಟಿಕೊಂಡಿವೆ. ಈ ನದಿಗಳ ಒಳಹರಿವಿನ ಮರ್ಮ ನಮ್ಮ ರಾಜಕಾರಣಿಗಳ ಮರ್ಮದಂತೆ ಯಾರಿಗೂ ತಿಳಿಯದಂತಹ ಕಗ್ಗಂಟಾಗಿದೆ. ನದಿಯು ತಣ್ಣಗಿದ್ದು, ಒಂದೇ ಭಾರಿ ಬೋರ್ಗರೆದು ತಣ್ಣಗಾಗುವಂತೆ ನಮ್ಮ ಪ್ರಧಾನಮಂತ್ರಿಗಳು ಮೂರು ತಿಂಗಳ ಕಾಲ ದಿವ್ಯ ಮೌನವಾಗಿದ್ದು, ಜನರ ನಿತ್ಯ ಜೀವನವು ಅಲ್ಲೋಲ-ಕಲ್ಲೋಲ ಆದಮೇಲೆ ತಣ್ಣಗೆ ಮಾತನಾಡಿದ್ದಾರೆ.

ಆದರೆ ಅಲ್ಲಿಗೆ ಹೋಗುವ ಧೈರ್ಯವನ್ನು ಮಾಡಿಲ್ಲ. ಚುನಾವಣೆ ಇದ್ದರೆ ಹತ್ತು-ಹದಿನೈದು ಬಾರಿ ರೋಡ್-ಶೋ ಮಾಡುವ ಇವರು ಕಷ್ಟದ ಕಾಲದಲ್ಲಿ ಆ ಕಡೆ ತಿರುಗಿಯು ನೋಡದೇ ಇರುವುದು ಭಾರತೀಯರು ಪಶ್ಚಾತ್ತಾಪಪಡುವಂತೆ ಮಾಡಿದೆ.
ಮಣಿಪುರವನ್ನು ಭೌತಿಕ ಲಕ್ಷಣಗಳಲ್ಲಿ ವಿಭಿನ್ನವಾಗಿರುವ ಎರಡು ವಿಭಿನ್ನ ಭೌತಿಕ ಪ್ರದೇಶಗಳಾಗಿ ನಿರೂಪಿಸಬಹುದು. ಒಂದು ಒರಟಾದ ಬೆಟ್ಟಗಳು, ಕಿರಿದಾದ ಕಣಿವೆಗಳ ಹೊರ ಪ್ರದೇಶ ಮತ್ತೊಂದು ಸಮತಟ್ಟಾದ ಬಯಲಿನ ಒಳ ಪ್ರದೇಶ. ಇಲ್ಲಿನ ಕಣಿವೆ ಪ್ರದೇಶವು ಸಮತಟ್ಟಾದ ಮೇಲ್ಮೈ ಮೇಲೆ ಏರುತ್ತಿರುವ ಬೆಟ್ಟಗಳು ಮತ್ತು ದಿಬ್ಬಗಳಿಂದ ಕೂಡಿದೆ.

ಇಲ್ಲಿನ ಲೋಕ್ಟಾಕ್ ಸರೋವರವು ಕೇಂದ್ರ ಬಯಲಿನಿಂದ ನಾಗಾಲ್ಯಾಂಡ್‌ನ ಗಡಿಯವರೆಗೂ ತನ್ನ ವಿಸ್ತಾರವನ್ನು ಹರಡಿಕೊಂಡಿದೆ. ಇಲ್ಲಿನ ಮಣ್ಣಿನ ಹೊದಿಕೆಗೂ ಗಂಡು-ಹೆಣ್ಣಿನ ಸಂಬಂಧಕ್ಕೂ ನಿಕಟವಾದ ಹೋಲಿಕೆ ಇರುವಂತೆ ಕಂಡುಬರುತ್ತದೆ. ಬೆಟ್ಟದ ಪ್ರದೇಶದಲ್ಲಿ ಕೆಂಪು ಫೆರುಜಿನಸ್ ಮಣ್ಣು ಮತ್ತು ಕಣಿವೆಯಲ್ಲಿ ಮೆಕ್ಕಲು ಮಣ್ಣು ಇದೆ. ಕಣಿವೆಯ ಮಣ್ಣು ಇಲ್ಲಿನ ಗಂಡಿನ ರೀತಿಯಲ್ಲಿ ಕಠಿಣವಾಗಿದ್ದರೆ, ಕಡಿದಾದ ಇಳಿಜಾರುಗಳಲ್ಲಿರುವ ಮಣ್ಣು ಹೆಣ್ಣಿನಂತೆ ಹೆಚ್ಚಿನ ಸವೆತಕ್ಕೆ ಒಳಗಾಗಿದೆ, ಒಳಗಾಗುತ್ತಿದೆ. ಇದರ ಪರಿಣಾಮವಾಗಿ ಬಂಜರು ಬಂಡೆಗಳ ಇಳಿಜಾರುಗಳು ಸೃಷ್ಟಿಯಾಗುವಂತೆ ಅಲ್ಲಿನ ಪುರುಷರ ಮನಸ್ಸುಗಳು ಬಂಡೆಯಂತೆ ಆಗುತ್ತಿರುವುದು ಖೇದಕರವಾದ ಸಂಗತಿಯಾಗಿದೆ.

ಬೆಟ್ಟದ ತಪ್ಪಲಿನಲ್ಲಿ ರತ್ನಗಂಬಳಿಯನ್ನು ಹಾಸಿಹೊದಿಸಿರುವಂತೆ ಕಾಣುವ ಫ್ಲೋರಾ ಹೂವುಗಳು ಅಲ್ಲಿನ ಬುಡಕಟ್ಟು ಮಹಿಳೆಯರ ಸೌಂದರ್ಯವನ್ನು ಬಿತ್ತರಿಸಿದರೆ, ಬೆಟ್ಟಗಳು ಪುರುಷಾಂಕಾರದಂತೆ ಕಾಣುತ್ತವೆ. ಇಲ್ಲಿ ಏನಿಲ್ಲ ಹೇಳಿ, ನೈಸರ್ಗಿಕವಾದ ಸಸ್ಯವರ್ಗವಿದೆ. ನಾಲ್ಕು ರೀತಿಯ ವಿಶಾಲವಾಗಿ ಹರಡಿರುವ ಉಷ್ಣವಲಯದ ಅರೆ-ನಿತ್ಯಹರಿದ್ವರ್ಣ, ಒಣ ಸಮಶೀತೋಷ್ಣ ಅರಣ್ಯ, ಉಪ-ಉಷ್ಣವಲಯದ ಪೈನ್ ಕಾಡುಗಳು ಮತ್ತು ಉಷ್ಣವಲಯದ ತೇವಾಂಶವುಳ್ಳ ಅರಣ್ಯಗಳಿವೆ. ತೇಗ, ಪೈನ್, ಓಕ್, ಯುನಿಂಗ್ದೌ, ಲಿಹಾವೊ, ಬಿದಿರಿನ ಮರಗಳಿವೆ. ತಮ್ಮ ಕಷ್ಟಗಳ ನಡುವೆಯೂ ರಬ್ಬರ್, ಟೀ, ಕಾಫಿ, ಕಿತ್ತಳೆ, ಏಲಕ್ಕಿ ಬೆಳೆಯುತ್ತಾರೆ. ಆದರೆ ಅವರು ಹೆಚ್ಚು ಬೆಳೆಯುವ ಮತ್ತು ಇಷ್ಟಪಡುವ ಅಕ್ಕಿಯಂತೆ ಅಲ್ಲಿನ ಪುರುಷರ ಮನಸ್ಸುಗಳು ಬೇಗನೇ ಹಾಳಾಗುತ್ತಿರುವುದು ಜಾತಿ, ಧರ್ಮಗಳೆಂಬ ಕೀಟಗಳಿಂದ ಎಂಬುದನ್ನು ಅವರು ತಿಳಿಯದಿರುವುದು ದುರದೃಷ್ಟಕರ.

ಮಣಿಪುರ ಮತ್ತು ನಾಗಾಲ್ಯಾಂಡ್‌ಗಳ ಗಡಿಗಳ ನಡುವೆ ಇರುವ ಝುಕೊ ಎಂಬ ಕಣಿವೆಯು ಸಮಶೀತೋಷ್ಣ ಹವಾಮಾನವನ್ನು ಹೊಂದಿರುವಂತೆ, ಅಲ್ಲಿನ ಜನರಿಗೆ ಸಮಚಿತ್ತತೆಯನ್ನು ನೀಡಿದ್ದರೆ ಚೆನ್ನಾಗಿರುತ್ತಿತ್ತು. ಭಾರತದ ಈಶಾನ್ಯ ಮೂಲೆಯು ಸಾಮಾನ್ಯವಾಗಿ ಸೌಹಾರ್ದಯುತವಾದ ಹವಾಮಾನವನ್ನು ಹೊಂದಿದೆ. ಆದರೆ ಅಲ್ಲಿನ ಜನರು ಸೌಹಾರ್ದಯುತವಾದ ಮನೋಭಾವನೆಯನ್ನು ಹೊಂದಿಲ್ಲ. ಅಲ್ಲಿನ ವಾತಾವರಣದಂತೆ ಚಳಿಗಾಲದಲ್ಲಿ ಚಳಿ ಹೆಚ್ಚಾಗಿರುವಂತೆ, ಬೇಸಿಗೆಯಲ್ಲಿ ಬಿಸಿಲು ಗರಿಷ್ಠ ಮಟ್ಟಕ್ಕೆ ಹೋಗುವಂತೆ ಅಲ್ಲಿನ ಜನರು ಆವೇಶಕ್ಕೊಳಗಾಗುತ್ತಾರೆ.
ಇಂಫಾಲದ ಮೈತೇಯಿ ಜನರು ವಾರ್ಷಿಕ ಸರಾಸರಿ 933 ಮಿಲಿಮೀಟರ್ ಮಳೆಯನ್ನು ಪಡೆಯುತ್ತಾರೆ. ಆದರೂ ಕೂಡ ತಮ್ಮದೇ ನೆಲದಲ್ಲಿರುವ ಕುಕಿ ಜನಾಂಗದ ಮಹಿಳೆಯರು ಕಣ್ಣೀರು ಸುರಿಸುವಂತೆ ನಡೆದುಕೊಳ್ಳುತ್ತಾರೆ.

ನೈರುತ್ಯ ಮಾನ್ಸೂನ್ ಮಾರುತಗಳು ಬಂಗಾಳಕೊಲ್ಲಿಯಿAದ ತೇವಾಂಶವನ್ನು ಎತ್ತಿಕೊಂಡು ಪೂರ್ವ ಹಿಮಾಲಯ ಶ್ರೇಣಿಗಳ ಕಡೆಗೆ ಹೋಗುವಾಗ ಈ ಪ್ರದೇಶದಲ್ಲಿ ಮಳೆಯಾಗುವಂತೆ ಪ್ರಕೃತಿಯೇ ನೋಡಿಕೊಂಡರೂ ಮಹಿಳೆಯರ ಕಣ್ಣೀರು ಮಾತ್ರ ಧಾರಾಕಾರವಾಗಿ ಹರಿಯುವಂತೆ ತಮ್ಮ ಸ್ವಾರ್ಥಕ್ಕಾಗಿ ರಾಜಕಾರಣಿಗಳು ನೋಡಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಮಣಿಪುರದಲ್ಲಿ ಹವಾಮಾನದಲ್ಲಿ ಬದಲಾವಣೆ ಹೆಚ್ಚಾಗುತ್ತಿದೆ. ಉದಾಹರಣೆಗೆ ಮಳೆ ಮತ್ತು ತಾಪಮಾನದಲ್ಲಿ ತೀವ್ರ ಬದಲಾವಣೆಗಳು ಹೆಚ್ಚಾಗುತ್ತಿವೆ. ಆದರೆ ಅಲ್ಲಿನ ಜನಾಂಗಗಳ ನಡುವಿನ ಬಾಂಧವ್ಯದ ಬದ್ಧತೆಗಳು ಏರುಪೇರಾಗುತ್ತಿರುವುದು ಸಾಕಷ್ಟು ಹಿಂದಿನಿAದಲೇ ನಡೆಯುತ್ತಿರುವುದು ಮನುಷ್ಯ ಸಂಬಂಧಗಳ ನಡುವೆ ಬಿರುಕು ಮೂಡಿರುವುದರ ದ್ಯೋತಕವಾಗಿದೆ. ಕಣಿವೆ ಅಥವಾ ಬಯಲು ಪ್ರದೇಶಗಳಲ್ಲಿ ಮೈತೇಯಿ ಮಾತನಾಡುವ ಅಂದರೆ ಮಣಿಪುರಿ ಭಾಷಿಕರು ನೆಲೆಸಿದ್ದಾರೆ. ಬೆಟ್ಟಗಳಲ್ಲಿ ನಾಗಾಗಳು, ಕುಕಿಗಳು ಮೊದಲಾದ ಸಣ್ಣ ಬುಡಕಟ್ಟು ಜನರು ವಾಸಿಸುತ್ತಿದ್ದಾರೆ. ಇವರು ಬೆಟ್ಟಗಳ ಮೇಲ್ಮೈ ಮಣ್ಣಿನಂತೆ ಮೈತೇಯಿ ಜನರ ಹಾವಳಿಗೆ ಕೊಚ್ಚಿ ಹೋಗುತ್ತಿದ್ದಾರೆ. ಅಲ್ಲಿ ಮೈತೇಯಿ ಭಾಷೆಯು ಮಣಿಪುರಿ ಭಾಷೆಗೆ ಸಮಾನಾರ್ಥಕವಾಗಿ ಬಳಕೆಯಾಗುತ್ತಿರುವುದರಿಂದ ಇಲ್ಲಿನ ಬಹುಪಾಲು ಜನಸಂಖ್ಯೆ ಮೈತೇಯಿಯರೇ ಎಂದು ಕರೆಸಿಕೊಂಡಿದ್ದಾರೆ.

ಇವರು ಮಣಿಪುರದ ಮುಖ್ಯ ಜನಾಂಗ ಎಂಬುದೇನೋ ಸರಿ. ಆದರೆ ನಾಗಾ ಮತ್ತು ಕುಕಿ ಬುಡಕಟ್ಟು ಜನಾಂಗಗಳನ್ನು ಹಲವಾರು ಬುಡಕಟ್ಟು ಜನಾಂಗಗಳಾಗಿ ವಿಂಗಡಿಸಲಾಗಿದೆ. ಇವರೆಲ್ಲರೂ ಒಗ್ಗಟ್ಟಾಗಿದ್ದರೆ ನಮ್ಮ ಬೇಳೆ ಬೇಯ್ಯುವುದಿಲ್ಲ ಎಂಬ ಸಾಂಸ್ಕೃತಿಕ ರಾಜಕಾರಣವು ವ್ಯವಸ್ಥಿತವಾಗಿ ಬಹಳ ಹಿಂದಿನಿAದಲೇ ಇವರನ್ನು ಹೊಡೆದು ಹೊಡೆದು ಹಾಳುತ್ತಿದೆ.
ಮಣಿಪುರದಲ್ಲಿ ಮೇ 4ರಂದು ಜರುಗಿದ ಇಬ್ಬರು ಮಹಿಳೆಯರ ಸಾಮೂಹಿಕ ಅತ್ಯಾಚಾರ ಮತ್ತು ಬೆತ್ತಲೆ ಮೆರವಣಿಗೆಯು ಜುಲೈ 20ರಂದು ಹೊರ ಜಗತ್ತಿಗೆ ತಿಳಿಯಿತು. ಈ ಘಟನೆಯು ಪ್ರಪಂಚದ ಜನರನ್ನು ತಲ್ಲಣಗೊಳಿಸಿತು.

ಇಡೀ ಜಗತ್ತೇ ಈ ಕೃತ್ಯವನ್ನು ವಿರೋಧಿಸಿದರೂ ಕೂಡ, ಒಟ್ಟು ದೇಶವನ್ನೇ ತನ್ನ ಕುಟುಂಬ ಎಂದು ಕರೆದುಕೊಳ್ಳುವ ನಮ್ಮ ಪ್ರಧಾನಿಗಳು ಬೆಂಕಿ ಹೊತ್ತಿಕೊಂಡ ಮೂರು ತಿಂಗಳು ದಿವ್ಯ ಮೌನದಿಂದ ಇದ್ದರು ಎಂಬುದನ್ನು ಜಗತ್ತು ಮರೆಯುತ್ತದೆಯೇ? 140 ಕೋಟಿ ಜನರು ನನ್ನ ಕುಟುಂಬಸ್ಥರೇ ಎಂದು ಹೇಳಿಕೊಳ್ಳುವ ಪ್ರಧಾನಿಗಳು ಅದರಲ್ಲಿ ಮಹಿಳೆಯರೂ ಇದ್ದಾರೆ ಎಂಬುದನ್ನು ಮರೆತಿದ್ದಾರೆಯೇ!? ಒಟ್ಟಾರೆ ನಮ್ಮ ಪ್ರಧಾನಿಗಳ ಮೌನ, ಮೈತೇಯಿ ಮತಾಂಧರ ಆರ್ಭಟ ಕುಕಿ ಜನಾಂಗದ ಮಹಿಳೆಯರ ಬದುಕನ್ನು ಮೂರಾಬಟ್ಟೆ ಮಾಡಿರುವುದಂತೂ ಖಚಿತ.

(ಡಾ. ಸಿದ್ದಯ್ಯ ರೆಡ್ಡಿಹಳ್ಳಿ, 9449899520)

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

Trending