ರಾಜಕೀಯ
ಸಮಾಜಶಕ್ತಿಗೆ ಭ್ರಮನಿರಸನ

ತುರ್ತು ಪರಿಸ್ಥಿತಿಯ ನಂತರದ ಚುನಾವಣೆಯಷ್ಟೇ ಮಹತ್ವದ ಚುನಾವಣೆ ಇದು ಕೆಲವರು ವಿಶ್ಲೇಷಿಸಿದ್ದರು. 2014 ರಿಂದ ಇಂದಿನವರೆಗೂ ದೇಶದಲ್ಲಿ ನಡೆದ ವಿದ್ಯಮಾನಗಳು ಮತ್ತು ಅವು ಎತ್ತಿದ ಪ್ರಶ್ನೆಗಳನ್ನು ತಿರುವಿ ಹಾಕಿದಾಗ ಅದು ನಿಜ ಎಂದೇ ಅನಿಸಿತ್ತು. ಹಾಗಿದ್ದ ಮೇಲೆ ಎಲ್ಲ ಪಕ್ಷಗಳೂ ಆ ಮಟ್ಟದ ಒಗ್ಗಟ್ಟಿನ ಹೋರಾಟಕ್ಕೆ ತಯಾರಾಗಿರಬೇಕಿತ್ತು.
ದೇಶದ ಬಿಜೆಪಿಯೇತರ ಎಲ್ಲ ನಾಯಕರುಗಳ ಹುಮ್ಮಸ್ಸು ಮೇಳೈಸಿ ದೇಶದ ಸಂಘಟಿತ ಪರ್ಯಾಯ ಶಕ್ತಿಗೆ ನಾಂದಿ ಆಯಿತು ಎನ್ನುವಂತೆ ಕುಮಾರಸ್ವಾಮಿಯವರ ಅಧಿಕಾರ ಸ್ವೀಕಾರ ವೇದಿಕೆಯಲ್ಲಿ ಸಂಭ್ರಮಿಸಲಾಯಿತು. ಆದರೆ ಆನಂತರ ಆದದ್ದು ನಾಯಿ ಬಾಲದ ಕಥೆಯೇ. ಬಿಜೆಪಿಯ ಬೆಂಬಲಿಗರು ಈಗ ಮೂರು ವರ್ಷಗಳಿಂದ ಒಂದು ಪ್ರಶ್ನೆಯನ್ನು ಕೇಳುತ್ತಲೇ ಇದ್ದರು: ‘ಮೋದಿಗೆ ಪರ್ಯಾಯ ಯಾರು? ಯಾರೂ ಇಲ್ಲವಲ್ಲಾ!’ ಎಂದು.
ಅದನ್ನು ಇಂದು ಸ್ಪಷ್ಟ ಗುರಿಯೇ ಇಲ್ಲದ, ಇದ್ದರೂ ಅದಕ್ಕೊಂದು ಅಜೆಂಡಾನೇ ಇಲ್ಲದ ಜಢತ್ವಕ್ಕೆ ಶರಣಗಿದ್ದ ಈ ಪಕ್ಷಗಳು ಒಪ್ಪಿಕೊಂಡಾಯಿತು. ಅದರ ನೈತಿಕ ಹೊಣೆಯನ್ನು ಈ ಪಕ್ಷಗಳು ಹೊರುವುದಿರಲಿ, ಅವು ದೇಶವನ್ನು ಎತ್ತ ತಳ್ಳಿದವು ಎನ್ನುವುದು ಅಕ್ಷಮ್ಯ. ಹಾಗೊಮ್ಮೆ ಬಿಜೆಪಿಯೇತರ ಸರ್ಕಾರ ರಚನೆಗೆ ಅವಕಾಶವಾಗುವಂತೆ ಫಲಿತಾಂಶ ಬಂದಿದ್ದರೂ ಅಂತಹ ಸರ್ಕಾರವನ್ನು ಈ ಪಕ್ಷಗಳು ಎಷ್ಟರ ಮಟ್ಟಿಗೆ ಸಧೃಢವಾಗಿ ನಡೆಸುತ್ತಿದ್ದವು ಎನ್ನುವ ಪ್ರಶ್ನೆ ದೊಡ್ಡದಾಗಿಯೇ ಇರುತ್ತಿತ್ತು. ಅದು ಇನ್ನೂ ಭಯಾನಕ. ಸಂಘ ಪರಿವಾರದ ಗುರಿ ಮಾತ್ರ ಸ್ವಾತಂತ್ರಪೂರ್ವದಿಂದಲೂ ಸ್ಪಷ್ಠವಾಗಿಯೇ ಇದೆ. ಹಂತಹಂತವಾಗಿ ಆ ಕಡೆಗೆ ಅದು ಸಾಗುತ್ತಲೇ ಇದೆ. ಇದು ಈ ದೇಶ-ಕಾಲದ ನಿಜ ಸ್ಥಿತಿ.
ಕರ್ನಾಟಕದಲ್ಲಿ ಮೈತ್ರಿ ಸರ್ಕಾರದ ಕಪಾಳಕ್ಕೆ ಹೊಡೆದಂತಾ ಈ ಫಲಿತಾಂಶಕ್ಕೆ ಇಲ್ಲಿ ನಡೆದ ಅಪ್ರಬುದ್ಧ ಅಥವಾ ಸ್ವಾರ್ಥ ತುಂಬಿದ ನಡೆಗಳೇ ಕಾರಣ. ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಮಾಡಿಕೊಂಡಿದ್ದೇ ಈ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು. ಯಾವುದೇ ಕಾರಣಕ್ಕೂ ಕೇಂದ್ರದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬಾರದು, ಬಿಜೆಪಿಯ ಅತ್ಯಂತ ಕಡಿಮೆ ಲೋಕಸಭಾ ಸದಸ್ಯರನ್ನು ಕರ್ನಾಟಕದಿಂದ ದೆಹಲಿಗೆ ಕಳಿಸುವಂತಾಗಬೇಕು ಎನ್ನುವ ದೃಷ್ಟಿ.
ಅದಕ್ಕಾಗಿ ಕಾಂಗ್ರೆಸ್ ಮುಖ್ಯಮಂತ್ರಿ ಸ್ಥಾನವನ್ನೂ ಜೆಡಿಎಸ್ಸಿಗೆ ಕೊಟ್ಟುಬಿಟ್ಟಿತ್ತು. ರಾಷ್ಟ್ರಮಟ್ಟದಲ್ಲಿ ಬಿಜೆಪಿಯೇತರ ಪಕ್ಷಗಳು ಒಂದೇ ವೇದಿಕೆಯಲ್ಲಿ ಹೇಗೆ ಬರಲು ಸಾಧ್ಯವಾಗಲಿಲ್ಲವೋ ಹಾಗೆಯೇ ಕರ್ನಾಟಕದಲ್ಲೂ ಕೂಡ ಸೀಟು ಹಂಚಿಕೆ ವಿಚಾರದಲ್ಲಿ ಮಿತ್ರಪಕ್ಷಗಳು ಒಮ್ಮತಕ್ಕೆ ಬರಲು ಸಾಧ್ಯವೇ ಆಗಲಿಲ್ಲ. ಈ ರಾಜಕೀಯ ಆಟಗಳಿಂದ ಪ್ರಜಾಪ್ರಭುತ್ವಕ್ಕಾದ ಧಕ್ಕೆ ಅಷ್ಟಿಷ್ಟಲ್ಲ.
ದೇವೇಗೌಡರ ಎದೆಯಲ್ಲಿ ಬಿಜೆಪಿಯೇತರ ಸರ್ಕಾರದ ಉದ್ದೇಶ ಇದ್ದರೂ ಅವರು ತಮ್ಮ ಕುಟುಂಬಕ್ಕೆ ತಮ್ಮನ್ನು ಕಟ್ಟಿಹಾಕಿಕೊಳ್ಳುತ್ತಾರೆ. ಆ ಕುಟುಂಬದ ಮೂರನೇ ತಲೆಮಾರಿನ ನಿನ್ನೆಯ ಹುಡುಗರು ಇಂದು ಸ್ವಂತ ಕಾಲ ಮೇಲೆ ನಿಲ್ಲಬೇಕಾದ ಅನಿವಾರ್ಯಕ್ಕೆ ಸಿಕ್ಕಿರುವ ಯುವಕರಾಗಿಬಿಟ್ಟಿದ್ದಾರೆ. ಆ ಒಬ್ಬೊಬ್ಬರಿಗೂ ಒಂದೊಂದು ನೆಲೆ ದೊರಕಿಸುವುದು ಆ ಕುಟುಂಬದ ಜವಾಬ್ದಾರಿ. ಆ ಕುಟುಂಬಕ್ಕೆ ಗೊತ್ತಿರುವುದು, ಆಸರೆಯಾಗಿರುವುದು ರಾಜಕೀಯವೇ. ಹಾಗಾಗಿ ತನ್ನ ಹಾಸನ ಕ್ಷೇತ್ರವನ್ನೇ ಒಬ್ಬ ಮೊಮ್ಮಗನಿಗೆ ದಾನ ಮಾಡಿದ ದೇವೇಗೌಡರು ತುಮಕೂರಿಗೆ ನಡೆದರು. ಅಥವಾ ಮೊಮ್ಮಗನೇ ಕಿತ್ತುಕೊಂಡು ಕಳಿಸಿದ್ದ!
ಮತ್ತೊಬ್ಬ ಮೊಮ್ಮಗನಿಗೆ ತಾವು ಕೆಲವು ವರ್ಷಗಳಿಂದ ಅನುಕೂಲಕರ ವಾತಾವರಣ ನಿರ್ಮಿಸಿಕೊಂಡ ಹಾಗೂ ಸಧ್ಯಕ್ಕೆ ಪ್ರಬಲ ಸ್ಪರ್ಧೆಯೊಡ್ಡಬಹುದಾದ ಯಾವ ಆಕಾಂಕ್ಷಿ ಇಲ್ಲವೆಂದೇ ತಿಳಿದಿದ್ದ ಮಂಡ್ಯ ಕ್ಷೇತ್ರವನ್ನು ಆಯ್ದುಕೊಂಡರು. ಯಾವ ಮೂಲ ಉದ್ದೇಶಕ್ಕಾಗಿ ಮೈತ್ರಿ ರಾಜಕೀಯಕ್ಕೆ ಅವಕಾಶ ಮಾಡಿಕೊಂಡಿದ್ದರೋ ಆ ಉದ್ದೇಶವನ್ನು ಪಕ್ಕಕ್ಕೆ ಸರಿಸಲಾಯಿತು. ಅಥವಾ, ನಿಜಕ್ಕೂ ಮೂಲ ಉದ್ದೇಶ ಇದು ಅಲ್ಲವೇ ಅಲ್ಲ, ಅದು ಚುನಾವಣೆಯಿಂದ ಚುನಾವಣೆಗೆ ಜಹಗೀರು ವಿಸ್ತರಣೆಯೇ. ಮುಂದೊಂದು ದಿನ ಭಾರತದಲ್ಲಿ ಪ್ರಜಾಪ್ರಭುತ್ವ ಕಳಚಿಹೋಗಿ ಮತ್ತೆ ರಾಜಾಡಳಿತ ಬರುತ್ತದೇನೋ, ಹಾಗಾಗುವುದಾದರೆ ತಮ್ಮ ಕುಟುಂಬವೇ ಅರಸಾಗಲಿ ಎನ್ನುವ ಮುಂಗಾಣ್ಕೆಯೋ ಎನ್ನುವ ಹಾಗೆ! ಪರಿಣಾಮ ಎದುರಿಗೇ ಇದೆ.
ದೇವೇಗೌಡರ ಉದ್ದೇಶ ನಿಜಕ್ಕೂ ಜಾತ್ಯತೀತ ಮನಸ್ಸಿನ, ಸಂವಿಧಾನಬದ್ಧ ಪರ್ಯಾಯ ಶಕ್ತಿಯನ್ನು ಹುಟ್ಟಿಹಾಕುವುದೇ ಆಗಿದ್ದಿದ್ದರೆ, ಅವರು ಈಗ ನಡೆದುಕೊಂಡಂತೆ ನಡೆದುಕೊಳ್ಳುತ್ತಿರಲಿಲ್ಲ. ಅವರು ತಮ್ಮ ಮೊಮ್ಮಕ್ಕಳನ್ನು ಮುಂದೆ ತರುವ ಕೆಲಸವನ್ನು ಮುಂದಕ್ಕೆ ಹಾಕುತ್ತಿದ್ದರು. ಅದರಿಂದ ಅವರ ಕುಟುಂಬಕ್ಕೆ ತುಂಬಾ ದೊಡ್ಡ ನಷ್ಟವೇನೂ ಆಗುತ್ತಿರಲಿಲ್ಲ. ಬದಲಿಗೆ ದಕ್ಷ ಅಭ್ಯರ್ಥಿಗಳನ್ನು ಹುಡುಕಿ ಅವಕಾಶ ಕೊಟ್ಟಿದ್ದರೆ ತಮ್ಮ ಪಕ್ಷದ ವರ್ಚಸ್ಸು ಇನ್ನಷ್ಟು ಬೆಳೆಯುತ್ತಿತ್ತು.
ಮೂರೂ ಕ್ಷೇತ್ರಗಳಲ್ಲಿ ಮೈತ್ರಿಯ ಅಭ್ಯರ್ಥಿಗಳೇ ಗೆಲ್ಲುತ್ತಿದ್ದರೇನೋ! ಇದನ್ನು ಬರೆಯುತ್ತಿರುವಾಗ ನನ್ನ ಬಗ್ಗೆ ನನಗೇ ನಗು ಬರುತ್ತದೆ. ಯಾವ ಆದರ್ಶವನ್ನು ಯಾರಿಂದ ನಿರೀಕ್ಷಿಸುತ್ತಿದ್ದೇವೆ ಎಂದು! ಬಿಜೆಪಿಯ ಸುಳಿವೇ ಇರದ ಮಂಡ್ಯವನ್ನು ಆ ಪಕ್ಷಕ್ಕೆ ಧಾರೆಯೆರೆದು ಕೊಟ್ಟಾಯಿತು. ಈ ರೀತಿಯ ಅಪ್ರಬುದ್ಧ, ಸ್ವಾರ್ಥ ರಾಜಕಾರಣದ ಚಾರಿತ್ರಿಕ ಪ್ರಮಾದಗಳೇ ಕರ್ನಾಟಕದಲ್ಲಿ ಬಿಜೆಪಿ ತಳವೂರಲು ಕಾರಣವಾಯ್ತು.
ಇನ್ನು ಕಾಂಗ್ರೆಸ್ಸಿಗೆ ಮತ್ತೆ ಬಿಜೆಪಿಗೆ ಅಧಿಕಾರ ಕೊಡಬಾರದು ಎನ್ನುವ ಛಲ ಮಾತಿನಲ್ಲಿ ಮಾತ್ರ ಕಂಡಿತು. ಕೃತಿಯಲ್ಲಿ ನಿರ್ಧಿಷ್ಠ ಗುರಿಯೇ ಇರಲಿಲ್ಲ ಎಂಬಂತೆ ತೋರಿತು. ಇಡೀ ದೇಶದಲ್ಲಿದ್ದ ಕಾಂಗ್ರೆಸ್ಸಿನ ಬಲಹೀನ ಸ್ಥಿತಿ ಕರ್ನಾಟಕ ಕಾಂಗ್ರೆಸ್ಸಿನ ಮೇಲೆ ಅಡ್ಡ ಪರಿಣಾಮ ಬೀರಿಯೇ ಇದ್ದಿತು. ಹೇಗಾದರೂ ಮಾಡಿ ಹಿಂದಿನ ಬಾರಿ ಗೆದ್ದ ಕ್ಷೇತ್ರಗಳನ್ನು ಉಳಿಸಿಕೊಂಡು ಲೋಕಸಭಾ ಚುನಾವಣೆಯೆಂಬ ದೈಯ್ಯವನ್ನು ಸಾಗಹಾಕುವ ಒಳಮನಸ್ಸೇ ಇಲ್ಲಿನ ಕಾಂಗ್ರೆಸ್ ನಾಯಕರಲ್ಲಿ ಕಂಡಿತು.ಈ ಮೈತ್ರಿ ಪಕ್ಷಗಳು ಮಾಡಿಕೊಂಡ ಗೊಂದಲ, ಅರಾಜಕತೆ ಮತ್ತು ಸ್ವಾರ್ಥಚಿಂತನೆಗಳಿಂದ ದೊಡ್ಡ ಲಾಭವಾಗಿದ್ದು, ಆಗುತ್ತಿರುವುದು ಬಿಜೆಪಿಗೆ. ದೊಡ್ಡ ನೈತಿಕ ನಷ್ಟವಾಗಿದ್ದು, ಆಗುವುದು ಈ ಮೈತ್ರಿ ಪಕ್ಷಗಳಿಗೆ.
ಎಲ್ಲಕ್ಕಿಂತ ಹೆಚ್ಚಾಗಿ ಈ ಮೈತ್ರಿ ಪಕ್ಷಗಳಿಂದ ದೊಡ್ಡ ಭ್ರಮನಿರಸನವಾಗಿದ್ದು ಕರ್ನಾಟಕದ ಪ್ರಗತಿಪರ ಯುವಶಕ್ತಿಗೆ ಮತ್ತು ಸಮಾಜಶಕ್ತಿಗೆ. ಕೋಮುವಾದೀ, ವಿಭಜಕ ಶಕ್ತಿಗಳು ಕರ್ನಾಟಕದಲ್ಲಿ ಬೆಳೆಯುವುದನ್ನು, ನೆಲೆಕಾಣುವುದನ್ನು ತಡೆಯಲು ಎಲ್ಲ ಪ್ರಜಾಪ್ರಭುತ್ವವಾದೀ ದಾರಿಗಳನ್ನೂ ಬಳಸಿಕೊಂಡು ಸ್ವಯಂಪ್ರೇರಿತವಾಗಿ ಸತತ ಹೋರಾಡುತ್ತಿವೆ ಈ ಶಕ್ತಿಗಳು. ಬಹುಶಃ ಈ ಮಟ್ಟಕ್ಕೆ ಟೊಂಕ ಕಟ್ಟಿ ಜನಪರವಾಗಿ, ಸಂವಿಧಾನದ ಪರವಾಗಿ ನಿಂತು ಪ್ರತಿರೋಧ ಒಡ್ಡುತ್ತಿರುವ ಕೆಲವೇ ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ.
ಆ ಕಾರಣದಿಂದಲೇ ಇಲ್ಲಿ ಇಂದಿನ ಮೈತ್ರಿ ಸರ್ಕಾರಕ್ಕೂ ಅವಕಾಶವಾಯಿತು. ಇದನ್ನು ಈ ಮೈತ್ರಿಪಕ್ಷಗಳು ಮರೆಯಬಾರದು. ಆದರೆ ಇಂದು ತಮ್ಮ ನಡೆಗಳಿಂದ ಅವು ಈ ಶಕ್ತಿಗಳ ವಿಶ್ವಾಸವನ್ನು ಸಾಕಷ್ಟು ಕಳಕೊಂಡಿವೆ. ಈಗ ಈ ಮೈತ್ರಿ ಸರ್ಕಾರ ನಿಜಕ್ಕೂ ಉಳಿದುಕೊಂಡರೆ ತಾನು ಕಳಕೊಂಡ ಈ ಶಕ್ತಿಗಳ ವಿಶ್ವಾಸವನ್ನು ಮತ್ತೆ ಗಳಿಸಿಕೊಳ್ಳುವ ಪ್ರಯತ್ನ ಪಡಬೇಕು. ಮತ್ತು ಆ ಪ್ರಯತ್ನ ಪ್ರಾಮಾಣಿಕವಾಗಿರಬೇಕು, ಅಷ್ಟೇ.
– ಕೇಸರಿ ಹರವೂ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ರಾಜಕೀಯ
ಮಸ್ಕಿ ಬಿಜೆಪಿ ಅಭ್ಯರ್ಥಿ ಪರ ಇಂದು ಸಿಂಗರ್ ಮಂಗ್ಲಿ ಪ್ರಚಾರ

ಸುದ್ದಿದಿನ,ರಾಯಚೂರು: ರಾಬರ್ಟ್ ಸಿನೆಮಾ ‘ಕಣ್ಣೆ ಅದಿರಿಂದಿ’ ಹಾಡಿನ ಮೂಲಕ ಭಾರೀ ಸದ್ದು ಮಾಡಿದ ಗಾಯಕಿ ಮಂಗ್ಲಿ ಮಸ್ಕಿ ಉಪ ಚುನಾವಣಾ ಅಖಾಡದಲ್ಲಿ ಮಂಗಳವಾರ ಬಿಜೆಪಿ ಪರವಾಗಿ ಪ್ರಚಾರ ಮಾಡಲಿದ್ದಾರೆ.
ಬಿಜೆಪಿಯು ಗಾಯಕಿ ಮಂಗ್ಲಿ ಅವರನ್ನ ಪ್ರಚಾರಕ್ಕೆ ಆಹ್ವಾನಿಸಿದ್ದು, ಇಂದು ಮಸ್ಕಿ ಕೆಲ ಭಾಗಗಳಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಪರವಾಗಿ ಮತಯಾಚಿಸಲಿದ್ದಾರೆ. ಆದರೆ ಚುನಾವಣಾ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢವಾಗಿದೆ.
ಇದೇ 17 ರಂದು ಬೆಳಗಾವಿ ಲೋಕಸಭೆ, ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮೂರು ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಗೆಲುವಿಗೆ ಭರ್ಜರಿ ರಣತಂತ್ರವನ್ನು ಹೂಡಿದ್ದಾರೆ.
ಇದನ್ನೂ ಓದಿ | ಕವಿತೆ | ಅವಳು ಮಸಣ ಕಾಯುವ ಪಾರ್ವತಿ..! -ಪದ್ಮಶ್ರೀ ಗೋವಿಂದರಾಜು,ಭದ್ರಾವತಿ
ಮಸ್ಕಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಿದ ಸಿಎಂ ಯಡಿಯೂರಪ್ಪ ಅವರು, ಕಾಂಗ್ರೆಸ್ ನೆಲಸವಾಗುವುದು ನಿಶ್ಚಿತ. 3 ಕ್ಷೇತ್ರಗಳಲ್ಲೂ ದೊಡ್ಡ ಮತಗಳ ಅಂತರದಲ್ಲಿ ನಾವೇ ಗೆಲ್ಲುತ್ತೇವೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು. ಇತ್ತ ಮೂರು ಪಕ್ಷಗಳ ಮತಯಾಚನೆಯ ಕಾವು ಏರುತ್ತಲೇ ಇದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಬಿ.ಜೆ.ಪಿ ಎಂ.ಪಿಗಳ ಗುಲಾಮಿ ಮನಸ್ಥಿತಿ ಕರ್ನಾಟಕವನ್ನು ಸರ್ವನಾಶ ಮಾಡಲಿದೆ : ಸಿದ್ದರಾಮಯ್ಯ ಆಕ್ರೋಶ

ಸುದ್ದಿದಿನ, ಬೆಳಗಾವಿ: ಕೃಷಿ ವಿರೋಧಿ ಕಾಯ್ದೆಗಳ ಮೂಲಕ ರೈತರ ಬದುಕನ್ನು ಶಾಶ್ವತವಾಗಿ ಘಾಸಿಮಾಡಿರುವ ಕೇಂದ್ರದ ಬಿಜೆಪಿ ಸರ್ಕಾರ ಇದೀಗ ರಸಗೊಬ್ಬರದ ಬೆಲೆ ಏರಿಸಿ ಅವರ ಗಾಯದ ಮೇಲೆ ಬರೆ ಎಳೆದಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಬೆಳಗಾವಿ ಲೋಕಸಭೆ ಕ್ಷೇತ್ರದ ಸವದತ್ತಿಯಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರ ಪರ ಮತಪ್ರಚಾರ ನಡೆಸಿದ ಅವರು ಮಾತನಾಡಿದರು.
ಕೇಂದ್ರದ ರೈತ ಶತ್ರು ನರೇಂದ್ರ ಮೋದಿ ಸರ್ಕಾರ ರಸಗೊಬ್ಬರದ ಬೆಲೆಗಳನ್ನು ಶೇ. 60 ರಷ್ಟು ಹೆಚ್ಚಿಸಿದೆ. ಡಿ.ಎ.ಪಿ ಗೊಬ್ಬರ ಏಪ್ರಿಲ್ 1 ರಿಂದ ಒಂದು ಕ್ವಿಂಟಾಲಿಗೆ 1400 ಗಳಷ್ಟು ಬೆಲೆ ಜಾಸ್ತಿಯಾಗುತ್ತಿದೆ. ಇದುವರೆಗೆ 2400 ರೂಪಾಯಿಗಳಿದ್ದ ಬೆಲೆ ಈಗ 3800 ರೂ ಗಳಾಗುತ್ತಿದೆ ಎಂದರು.
ಸಾರಜನಕ, ರಂಜಕ ಮತ್ತು ಪೊಟ್ಯಾಷ್ಗಳ ಮೇಲಿನ ಬೆಲೆ ಕ್ವಿಂಟಾಲ್ ಗೆ ರೂ.1250 ಹೆಚ್ಚಿಸಿದ್ದಾರೆ. ರೂ.2350 ಗೆ ಸಿಗುತ್ತಿದ್ದ ಗೊಬ್ಬರ ಈಗ ರೂ.3600ರಷ್ಟಾಗಿದ್ದು ರೈತರು ನಿಸ್ಸಂಶಯವಾಗಿ ದಿವಾಳಿಯಾಗಲಿದ್ದಾರೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಜಾಸ್ತಿಯಾಗಿದೆ, ಅದಕ್ಕೆ ಬೆಲೆ ಜಾಸ್ತಿ ಮಾಡಿದ್ದೇವೆ ಎಂಬ ಕೇಂದ್ರ ಸರ್ಕಾರದ ಸಬೂಬು ಶುದ್ಧ ಸುಳ್ಳು. ಕಳೆದ ವರ್ಷ ರೂ.1,33,947 ಕೋಟಿ ರಸಗೊಬ್ಬರಕ್ಕಾಗಿ ಸಬ್ಸಿಡಿ ನೀಡಲಾಗಿತ್ತು. ಈಗ ಅದು ರೂ.79,530 ಕೋಟಿಗೆ ಇಳಿಸಿದ್ದಾರೆ. ಆದ್ದರಿಂದಲೇ ಏಪ್ರಿಲ್ 1 ರಿಂದ ಬೆಲೆ ಹೆಚ್ಚಾಗಿದೆ.
ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯನ್ನು ಪ್ರಶ್ನಿಸದ ರಾಜ್ಯ ಸರ್ಕಾರ ಮತ್ತು ರಾಜ್ಯವನ್ನು ಪ್ರತಿನಿಧಿಸುವ ಬಿ.ಜೆ.ಪಿ ಎಂ.ಪಿಗಳ ಗುಲಾಮಿ ಮನಸ್ಥಿತಿ ಕರ್ನಾಟಕವನ್ನು ಸರ್ವನಾಶ ಮಾಡಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯನ್ನು ಪ್ರಶ್ನಿಸದ ರಾಜ್ಯ @BJP4Karnataka ಸರ್ಕಾರ ಮತ್ತು ರಾಜ್ಯವನ್ನು ಪ್ರತಿನಿಧಿಸುವ @BJP4India ಎಂ.ಪಿಗಳ ಗುಲಾಮಿ ಮನಸ್ಥಿತಿ ಕರ್ನಾಟಕವನ್ನು ಸರ್ವನಾಶ ಮಾಡಲಿದೆ.
5/5 #ಬೆಲೆಯೇರಿಕೆ— Siddaramaiah (@siddaramaiah) April 9, 2021
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
6ನೇ ವೇತನ ಆಯೋಗದ ಶಿಫಾರಸ್ಸಿನಂತೆ ಸಾರಿಗೆ ನೌಕರರಿಗೆ ವೇತನ ಭತ್ಯೆ ನೀಡಲು ಸಾಧ್ಯವಿಲ್ಲ : ಮುಖ್ಯಮಂತ್ರಿ ಯಡಿಯೂರಪ್ಪ

ಸುದ್ದಿದಿನ, ಬೆಂಗಳೂರು : ’ರಾಜ್ಯದ ಒಟ್ಟು ಆದಾಯದ ಶೇ. 85 ರಷ್ಟು, ವೇತನ, ಭತ್ಯೆ, ಪಿಂಚಣಿ ಮತ್ತಿತರ ಯೋಜನೇತರ ವೆಚ್ಚಗಳಿಗೆ ವ್ಯಯವಾಗುತ್ತಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಅಲ್ಪ ಆದಾಯ ಲಭ್ಯವಿರುತ್ತದೆ ಎಂದು ಮುಖ್ಯ ಮಂತ್ರಿ ಯಡಿಯೂರಪ್ಪ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಲಿಂಕ್ ಮೇಲೆ ಕ್ಲಿಕ್ ಮಾಡಿ : ಸಾರಿಗೆ ನೌಕರರು ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ವಿನಂತಿಸುತ್ತೇನೆ : ಯಡಿಯೂರಪ್ಪ ಫೇಸ್ ಬುಕ್ ಪೋಸ್ಟ್
ಬಜೆಟ್ ಅಧಿವೇಶನದಲ್ಲಿ ವಿಪಕ್ಷ ನಾಯಕರು ಪ್ರಸ್ತಾಪಿಸಿದ್ದಂತೆ, ಯೋಜನೇತರ ವೆಚ್ಚ ಈಗಾಗಲೇ ಅಧಿಕವಾಗಿದೆ. ಪ್ರಸಕ್ತ ಸಂದರ್ಭಗಳಲ್ಲಿ ಮತ್ತಷ್ಟು ಹೆಚ್ಚು ಅನುದಾನವನ್ನು ಯೋಜನೇತರ ವೆಚ್ಚಗಳಿಗೆ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
ಜೊತೆಗೆ ಲಾಕ್ ಡೌನ್ ಸಂದರ್ಭದಲ್ಲಿಯೂ ಸಹ ಸಾರಿಗೆ ನೌಕರರ ಹಿತರಕ್ಷಣೆ ದೃಷ್ಟಿಯಿಂದ ಅವರಿಗೆ ವೇತನ ನೀಡಲು, ಸರ್ಕಾರ 2,300 ಕೋಟಿ ರೂ. ಗಳ ಅನುದಾನ ನೀಡಿದೆ. ಸವಾಲಿನ ಸಂದರ್ಭಗಳಲ್ಲಿಯೂ ಸಹ ಸಾರಿಗೆ ಸಂಸ್ಥೆಗಳ ನೌಕರರ 9 ಬೇಡಿಕೆಗಳಲ್ಲಿ 8 ಬೇಡಿಕೆಗಳನ್ನು ಸರ್ಕಾರ ಈಗಾಗಲೇ ಈಡೇರಿಸಿದ್ದು, 6ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಭತ್ಯೆ ನೀಡಲು ಸಾಧ್ಯವಿರುವುದಿಲ್ಲ. ಆದ್ದರಿಂದ ಸಾರಿಗೆ ನೌಕರರು ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ವಿನಂತಿಸುತ್ತೇನೆ’. ಎಂದು ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಭಾವ ಭೈರಾಗಿ7 days ago
ಕವಿತೆ | ಅವಳು ಮಸಣ ಕಾಯುವ ಪಾರ್ವತಿ..!
-
ನೆಲದನಿ6 days ago
ನಮ್ಮ ಶಿವಮೊಗ್ಗ – ನಮ್ಮ ಹೆಮ್ಮೆ: ಕುವೆಂಪು
-
ದಿನದ ಸುದ್ದಿ6 days ago
ಕಾಡಿನಿಂದ ನಾಡಿಗೆ ಬಂದ ಲೋರಿಸ್ ‘ಪಾಪ’..!
-
ಬಹಿರಂಗ6 days ago
ಜ್ಯೋತಿರಾವ್ ಫುಲೆ : ವಸಾಹತು ಮತ್ತು ಮೇಲ್ವರ್ಗಗಳ ಪ್ರಾಬಲ್ಯವನ್ನು ಪ್ರಶ್ನಿಸಿಸುವ ನೆಲೆಗಳು
-
ನಿತ್ಯ ಭವಿಷ್ಯ6 days ago
ಈ ರಾಶಿಯವರಿಗೆ ಗುಡ್ ನ್ಯೂಸ್ ಬಯಸಿದ್ದೆಲ್ಲ ಸಿಗುವುದು ಮತ್ತು ಮುಟ್ಟಿದ್ದೆಲ್ಲ ಪ್ಲಾಟಿನಂ ಗೋಲ್ಡ್! ಸೋಮವಾರ ರಾಶಿ ಭವಿಷ್ಯ-ಏಪ್ರಿಲ್-12,2021
-
ರಾಜಕೀಯ6 days ago
ಮಸ್ಕಿ ಬಿಜೆಪಿ ಅಭ್ಯರ್ಥಿ ಪರ ಇಂದು ಸಿಂಗರ್ ಮಂಗ್ಲಿ ಪ್ರಚಾರ
-
ನಿತ್ಯ ಭವಿಷ್ಯ5 days ago
ಜ್ಯೋತಿಷ್ಯಶಾಸ್ತ್ರ ಅಥವಾ ನಿಮ್ಮ ಜನ್ಮಕುಂಡಲಿ ಪ್ರಕಾರ ಎಂಥಾ ಗುಣವುಳ್ಳ ವ್ಯಕ್ತಿ ಜೊತೆ ಮದುವೆ ಕಾರ್ಯ ಆಗುವುದು?ಕಂಕಣಬಲ ಕೂಡಿ ಬರಲು ಏನು ಮಾಡಬೇಕು?
-
ಬಹಿರಂಗ5 days ago
ಜ್ಯೋತಿಬಾ ಎಂಬ ದೀವಿಗೆ ತೋರಿದ ದಾರಿ ನಮ್ಮದಾಗಲಿ