ರಾಜಕೀಯ
‘ಸೋನಿಯಾ ಗಾಂಧಿ’ ಮನುಜಪಥದ ಅಪ್ರತಿಮ ರಾಯಭಾರಿ..!
- ಗ್ಲಾಡ್ಸನ್ ಅಲ್ಮೇಡಾ
ಇಪ್ಪತ್ತು ವರುಷಗಳಿಂದ ಆಕೆಯ ಮೇಲೆ ಸತತವಾಗಿ ದಾಳಿ ಮಾಡಿದರೂ, ಆಕೆಯ ಚಾರಿತ್ರ್ಯವಧೆ ಮಾಡಿದರೂ, ಆಕೆಯ ಮಕ್ಕಳು, ಮೊಮ್ಮಕ್ಕಳನ್ನೂ ಬಿಡದೇ ಹೀಯಾಳಿಸಿದರೂ, ಇಲ್ಲಿನ ರಾಜಕೀಯ, ಇಲ್ಲಿನ ಪಕ್ಷಗಳು ಇದ್ಯಾವದರೊಂದಿಗೆ ಸಂಬಂಧನೇ ಇರದ ಆಕೆಯ ಹೆತ್ತವರನ್ನೂ ಬಿಡದೆ ನಿಂದಿಸಿದರೂ ಆ ತಾಯಿ ಒಮ್ಮೆಯೂ ತಿರುಗಿ ಉತ್ತರಿಸಿದ್ದಿಲ್ಲ.
ಅದೆಷ್ಟು ಆರೋಪಗಳು, ಅದೆಷ್ಟು ನಿಂದನೆಗಳು, ಅದೆಷ್ಟು ಕುಹಕಗಳು, ಅದೆಷ್ಟು ಕ್ರೌರ್ಯ. ಊಹುಂ! ಏನು ಮಾಡಿದರೂ ಆಕೆಯನ್ನು ಧೃತಿಗೆಡಿಸಲು ಆಗಿಲ್ಲ. ಎಂಥೆಂಥಾ ಫೊಟೋಶಾಪ್ಗಳು, ವಿಡಿಯೋಗಳು. ಆಕೆಯನ್ನು ಅರೆನಗ್ನಳನ್ನಾಗಿ ಚಿತ್ರಿಸಿ, ಯಾರ ಯಾರ ತೊಡೆಮೇಲಿ ಕುಳ್ಳಿರಿಸಿ, ಹಾಸಿಗೆ ಮೇಲೆ ಹೀಗೆ ಆಕೆಯ ಚಾರಿತ್ರ್ಯವಧೆಗೆ ಸಂಸ್ಕೃತಿ ರಕ್ಷಕರು, ದೇಶಭಕ್ತರೆನ್ನುವವರು ಇಳಿದಿರುವ ಆಳ ಇದೆಯಲ್ವಾ, ಅದು ತಮ್ಮ ಸಮಕಾಲೀನ ಮಾತ್ರವಲ್ಲ ಗತಕಾಲದಲ್ಲೂ ಯಾರೂ ಇಳಿದಿರಲಿಕ್ಕಿಲ್ಲ. ಆಕೆಯನ್ನು ಬಾರ್ ಡ್ಯಾನ್ಸರ್, ಅಪವಿತ್ರೆ, ಸೂಳೆ, ಕೀಪ್, ಜೆರ್ಸಿ ದನ, ಆಕೆಯ ಮಕ್ಕಳ ಹೈಬ್ರಿಡ್ ಕರುಗಳು ಎಂದೆಲ್ಲಾ ಜರಿದರು. ಅಬ್ಬಾ! ಎಂಥೆಂಥಾ ಬೈಗುಳಗಳು, ಎಂಥಾ ಅವಮಾನ. ಆದರೂ ಆ ತಾಯಿಯದ್ದು ಮಾತ್ರ ದಿವ್ಯ ನಿರ್ಲಕ್ಷ್ಯ.
ಇಂಥ ಅವಮಾನ, ನಿಂದನೆ, ಚಾರಿತ್ರ್ಯವಧೆ, ಹೀಯಾಳಿಕೆಯನ್ನೆದುರಿಸಿ, ತನ್ನನ್ನು ಹೀಯಾಳಿಸುತ್ತಿರುವವರ ಕಣ್ಣಲ್ಲಿ ಕಣ್ಣಿಟ್ಟು ನೋಡಿ, ಅವರ ಕಣ್ಣೆದುರಿನಲ್ಲೇ, ಅವರನ್ನೇ ಮಣಿಸಿ, ತನ್ನ ಪಕ್ಷವನ್ನು ಸತತ ಎರಡು ಬಾರಿ ಅಧಿಕಾರಕ್ಕೆ ತರಲು, ಸತತ ಇಪ್ಪತ್ತು ವರುಷಗಳ ಕಾಲ ಪಕ್ಷವನ್ನು ನಡೆಸಲು ಧೃಢ ನಿಶ್ಚಲ, ಅಟಲ ಮನೋಭಾವ, ಧೀಮಂತಿಕೆ ಹಾಗೂ ಎದೆಗಾರಿಕೆ ಬೇಕು.
ಆಕೆಯ ವಿದೇಶಿ ಮೂಲ, ಆಕೆಯ ಗಂಡನ ಕುಟುಂಬ ಇವೆಲ್ಲದಕ್ಕಿಂತ ಆಕೆಯನ್ನು ಮೂದಲಿಸುವವರಿಗೆ ಚುಚ್ಚುತ್ತಿರುವುದು ಆಕೆ ಮಹಿಳೆ ಎನ್ನುವ ಸತ್ಯ. ಯಾವುದೋ ದೇಶದಿಂದ, ಮದುವೆಯಾಗಿ ಈ ದೇಶಕ್ಕೆ ಬಂದು, ಈ ದೇಶದ ಭಾಷೆ, ಸಂಸ್ಕೃತಿ, ಉಡುಗೆ-ತೊಡುಗೆ, ಆಹಾರ, ಜನಜೀವನ ಎಲ್ಲವನ್ನೂ ಅಪ್ಪಿ, ತನ್ನ ಕಣ್ಣ ಮುಂದೆಯೇ ತನ್ನ ಮೈದುನ, ಅತ್ತೆ, ಗಂಡ ಎಲ್ಲರನ್ನೂ ಏಳೆಂಟು ವರುಷಗಳೊಳಗೆ ಭೀಕರವಾಗಿ ಕಳೆದುಕೊಂಡರೂ, ಒಮ್ಮೆಯೂ ವಿಚಲಿತರಾಗದೇ, ಒಮ್ಮೆಯೂ ತನ್ನ ಬೊಗಸೆ ಕಣ್ಣುಗಳಲ್ಲಿ ಹರಿದು ಬಂದ ಕಣ್ಣೀರಿನ ಒಂದೇ ಒಂದು ಹನಿ ಸಾರ್ವಜನಿಕರಿಗೆ ತೋರ್ಪಡಿಸದೇ, ತನ್ನವರೆಂದು ಯಾರೂ ಇಲ್ಲದಿದ್ದರೂ ತನ್ನ ಮಕ್ಕಳನ್ನು ಸಾಕಿ, ಸಲಹಿ, ಅವರಿಗೆ ವಿದ್ಯೆ, ಸಂಸ್ಕಾರ ಕೊಟ್ಟು ಬೆಳೆಸಿದ ಪರಿಯಿದೆಯಲ್ವಾ ಅದು ಅನನ್ಯ.
ತನ್ನ ಮೈದುನನ ದೇಹದ ಒಂಚೂರೂ ನೋಡಲು ಸಿಗಲಿಲ್ಲ ಆಕೆಗೆ, ಎಂಟೆದೆಯ ಅತ್ತೆಯ ಎದೆಯನ್ನೇ ಸೀಳಿದ ಗುಂಡುಗಳು ಆಕೆಯ ಕಣ್ಣೆದುರಲ್ಲೇ ಇದ್ದವು, ಕೊನೆಗೆ ತನ್ನ ಗಂಡನ ದೇಹ ಕೂಡಾ ಸಿಕ್ಕಿದ್ದು ಛಿದ್ರ ಛಿದ್ರವಾಗಿ. ಎಂಥಾ ಧೈರ್ಯವಂತರನ್ನೂ ಶಾಶ್ವತವಾಗಿ ಕಂಗೆಡಿಸಬಹುದಾದ ಘಟನೆಗಳಿವು.
ಆದರೆ ಆಕೆಯನ್ನಲ್ಲ. ತನ್ನ ಮನೆಯ ನಾಲ್ಕು ಗೋಡೆಗಳೊಳಗೆ ಆಕೆ ಅದೆಷ್ಟು ಬಾರಿ ಗಳಗಳನೇ ಅತ್ತಿದ್ದಾರೋ, ಅದೆಷ್ಟು ಬಾರಿ ತನ್ನೊಡಲ ಕುಡಿಗಳನ್ನು ಎದೆಗಪ್ಪಿ ಕಣ್ಣೀರಲ್ಲೇ ಮಿಂದಿದ್ದಾರೋ, ಅದೆಷ್ಟು ಬಾರಿ ಕನ್ನಡಿಯಲ್ಲಿ ತನ್ನನ್ನೇ ತಾನು ನೋಡುತ್ತಾ, ಕಣ್ಣುಗಳನ್ನು ತೇವ ಮಾಡಿಕೊಂಡಿದ್ದಾರೋ. ಆದರೆ ಹೊರಜಗತ್ತಿಗೆ ಆಕೆ ತನ್ನ ಯಾವುದೇ ನೋವನ್ನು, ಯಾವುದೇ ಅಂಜಿಕೆಯನ್ನು, ಯಾವುದೇ ಅಭದ್ರತೆಯನ್ನು ಎಂದೂ ತೋರ್ಪಡಿಸಿಲ್ಲ.
ಆಕೆಯದ್ದು ಅಸಾಧಾರಣ ವ್ಯಕ್ತಿತ್ವ, ಅತಿಮಾನುಷ ಸಹನೆ, ಅದ್ಭುತ ಜೀವನೋಲ್ಲಾಸ. ತನ್ನ ಪಾಲಿಗೆ ಬಂದದೆಲ್ಲವನ್ನೂ ಸಮಚಿತ್ತದಿಂದ ಒಪ್ಪಿ, ತನ್ನ ಗಂಡನ ಕೊಲೆಗಾರರನ್ನೇ ಕ್ಷಮಿಸಿ, ಎಂದೂ, ಯಾರನ್ನೂ ತೆಗಳದೇ, ಯಾರನ್ನೂ ನೋಯಿಸದೇ, ಸಾರ್ವಜನಿಕ ಜೀವನದಲ್ಲಿರುವ ನಾಯಕರು ಹೇಗಿರಬೇಕೆಂಬ ಅಲ್ಟಿಮೇಟ್ ಉದಾಹರಣೆಯನ್ನು ನಮ್ಮ ಮುಂದೆ ಇಟ್ಟಿರುವ ಈ ಶತಮಾನದ ಶ್ರೇಷ್ಟ ಮಹಿಳೆ ಆಕೆ.
ಆಕೆಯ ಜಾಗದಲ್ಲಿ ಇನ್ಯಾರಿದ್ದರೂ ಯಾವತ್ತೋ ಮಂಡಿಯೂರಿ ಬಿಡುತ್ತಿದ್ದಾರೇನೋ, ಯಾವತ್ತೋ ಸೋಲೊಪ್ಪಿ ಈ ದೇಶ, ಈ ಜನಗಳು, ಈ ಸಮಾಜದ ಸಹವಾಸವೇ ಬೇಡವೆಂದು ತನ್ನ ತವರು ಸೇರುತ್ತಿದ್ದರೇನೋ? ಮೈದುನನ ಅಂತ್ಯಸಂಸ್ಕಾರ, ಅತ್ತೆಯ ಅಂತ್ಯ ಸಂಸ್ಕಾರ ಹಾಗೂ ತನ್ನ ಗಂಡನ ಅಂತ್ಯಸಂಸ್ಕಾರದ ಸಮಯದಲ್ಲಿ ಆಕೆ ನಡೆದುಕೊಂಡಿರುವ ರೀತಿ ಕಣ್ಣಮುಂದೆ ಶಾಶ್ವತವಾಗಿ ಉಳಿಯಲಿದೆ. ಯಾಕೆಂದರೆ ಚಿನ್ನ ಶಬ್ದ ಮಾಡುವುದಿಲ್ಲ. ಶಬ್ದ ಮಾಡುವುದು ತಗಡು.
ತನ್ನನ್ನು ನಿಂದಿಸುತ್ತಿರುವವರನ್ನು, ಹೀಯಾಳಿಸುತ್ತಿರುವವರ ಬಗ್ಗೆ,ಅವಮಾನಿಸುತ್ತಿರುವವರ ಬಗ್ಗೆ ಆಕೆ ತಾಳಿರುವ ದಿವ್ಯ ನಿರ್ಲಕ್ಷ್ಯವೇ ಆಕೆಯ ವಿರೋಧಿಗಳ ಅವರನ್ನು ಧೃತಿಗೆಡಿಸಿದೆ, ಅವರ ಹುಚ್ಚಿನ, ಕ್ರೌರ್ಯದ ಸೀಮೆಗಳನ್ನು ದಾಟಿ ಅವರನ್ನು ಮೃಗಗಳನ್ನಾಗಿ ಮಾಡಿದೆ. ಏನೇನೂ ಮಾಡಿದರೂ ಆಕೆಯನ್ನು ವಿಚಲಿತರನ್ನಾಗಿಸಲು ಆಗದೇ, ಧೃತಿಗೆಡಿಸಲಾಗದೇ, ಅವರು ಹೊಡೆದ ಚೆಂಡು, ಹೊಡೆದ ವೇಗಕ್ಕಿಂತ ನೂರಿನ್ನೂರು ಪಟ್ಟು ಹೆಚ್ಚಿನ ವೇಗದಲ್ಲಿ ಹಿಂದೆ ಬಂದು ಅವರನ್ನೇ ನೆಲಕ್ಕಪ್ಪಳಿಸಿದೆ. Yet she is silent, she is resolute and she just keeps walking with her head held high.
ಆಕೆಯೇ ನಮ್ಮ ನಡುವಿನ ಕೌತುಕ ಹಾಗೂ ಅದ್ಬುತ ಸೋನೀಯಾ ಗಾಂಧಿ. ಆಕೆ ಕಾಂಗ್ರೇಸ್ ಅಲ್ಲ ಯಾವುದೇ ಪಕ್ಷದಲ್ಲಿದ್ದರೂ, ರಾಜಕೀಯದಲ್ಲಿಲ್ಲದಿದ್ದರೂ ನಾನು ಆಕೆಯ, ಆಕೆಯ ಗುಳಿಗೆನ್ನೆಯ, ನಿಷ್ಕಳಂಕ ಮುಗುಳ್ನಗೆಯ ಶಾಶ್ವತ ಫ್ಯಾನ್ ಆಗಿರುತ್ತಿದ್ದೆ ಯಾಕೆಂದರೆ ಆಕೆ ಬರೀ ಭಾರತೀಯಳಲ್ಲ, ಕೇವಲ ಮಹಿಳೆಯಲ್ಲ, ಬದಲಾಗಿ ಮನುಷತ್ವದ ಹಾಗೂ ಮನುಜಪಥದ ಅಲ್ಟಿಮೇಟ್ ಹಾಗೂ ಅಪ್ರತಿಮ ರಾಯಭಾರಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ
ಸುದ್ದಿದಿನ ಡೆಸ್ಕ್ : ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.
ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಇದೇ 30 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಇದೇ ವೇಳೆ ಬಿಹಾರದಲ್ಲಿ ನಾಮಪತ್ರ ಸಲ್ಲಿಕೆಗೆ ನಾಳೆ ಕಡೆ ದಿನವಾಗಿದ್ದು, ಈ ತಿಂಗಳ 30 ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಏಪ್ರಿಲ್ 2ರಂದು ನಾಮತ್ರ ಹಿಂಪಡೆಯುವಿಕೆಗೆ ಕೊನೆಯ ದಿನವಾಗಿರುತ್ತದೆ.
ಏಪ್ರಿಲ್ 19 ರಂದು 17 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಅದರಂತೆ ತಮಿಳುನಾಡಿನಲ್ಲಿ 39, ರಾಜಸ್ಥಾನದಲ್ಲಿ 12, ಉತ್ತರ ಪ್ರದೇಶದಲ್ಲಿ 8, ಮಧ್ಯಪ್ರದೇಶದಲ್ಲಿ 6, ಉತ್ತರಾಖಂಡ, ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ತಲಾ 5 , ಬಿಹಾರದಲ್ಲಿ 4, ಪಶ್ಚಿಮ ಬಂಗಾಳದಲ್ಲಿ 3, ಅರುಣಾಚಲ ಪ್ರದೇಶ, ಮಣಿಪುರ, ಮೆಘಾಲಯದಲ್ಲಿ ತಲಾ 2 ಮತ್ತು ಛತ್ತೀಸ್ಗಢ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ, ಅಂಡಮಾನ್-ನಿಕೋಬಾರ್ ದ್ವೀಪಗಳು, ಜಮ್ಮು-ಕಾಶ್ಮೀರ, ಲಕ್ಷದ್ವೀಪ ಮತ್ತು ಪುದುಚೇರಿಯಲ್ಲಿ ತಲಾ ಒಂದು ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.
ಎರಡನೇ ಹಂತದಲ್ಲಿ 89 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ನಾಳೆ ಅಧಿಸೂಚನೆ ಹೊರಡಿಸಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
ಸುದ್ದಿದಿನ ಡೆಸ್ಕ್ : 2024ರ ಲೋಕಸಭಾ ಚುನಾವಣೆಯಲ್ಲಿ ಅಂದಾಜು ಒಂದು ಕೋಟಿ 80 ಲಕ್ಷ ಹೊಸ ಮತದಾರರು ತಮ್ಮ ಅಮೂಲ್ಯ ಹಕ್ಕನ್ನು ಮೊದಲ ಬಾರಿಗೆ ಚಲಾಯಿಸಲಿದ್ದಾರೆ. ಇವರೆಲ್ಲ 18-19ರ ಪ್ರಾಯದವರು.
ಮೊದಲ ಬಾರಿಗೆ ಮತ ಚಲಾಯಿಸುವ ಯುವಕರಿಗೆ ಅವರ ಈ ಪವಿತ್ರ ಕರ್ತವ್ಯದ ಮಹತ್ವವನ್ನು ಮನಗಾಣಿಸುವ ಸಲುವಾಗಿ ಸಾಮಾಜಿಕ ಜಾಲತಾಣಗಳಲ್ಲಿ ’ನಾನು ಖಂಡಿತ ಮತ ಚಲಾಯಿಸುತ್ತೇನೆ’ ಎನ್ನುವ ಪ್ರಚಾರ ಆಂದೋಲನಗಳು ನಡೆಯುತ್ತಿವೆ.
ಈ ಬಾರಿ ಚುನಾವಣೆಯಲ್ಲಿ ಭಾಗವಹಿಸುವ ಯುವ ಮತದಾರರ ಪೈಕಿ 20ರಿಂದ 29ವರ್ಷ ವಯೋಮಾನದ ಅಂದಾಜು 19 ಕೋಟಿ 74 ಲಕ್ಷ ಮತದಾರರು ಪಾಲ್ಗೊಳ್ಳಲಿದ್ದಾರೆ. 18 ವರ್ಷಕ್ಕೆ ಮತದಾನದ ಹಕ್ಕು ದೊರೆಯುವುದಾದರೂ ಈಗ 17 ವರ್ಷ ತುಂಬಿರುವ ಯುವಜನ ಸಮೂಹದಿಂದ 13.4ಲಕ್ಷಕ್ಕೂ ಅಧಿಕ ಅರ್ಜಿಗಳನ್ನು ಮುಂಚಿತವಾಗಿಯೇ ಸ್ವೀಕರಿಸಲಾಗಿದೆ.
ಕೇಂದ್ರ ಚುನಾವಣಾ ಆಯೋಗ ಯುವ ಜನರಿಗೆ ಮತದಾನಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಸಚಿನ್ ತೆಂಡುಲ್ಕರ್ ಮತ್ತು ರಾಜಕುಮಾರ್ ರಾವ್ ಅವರಂತಹ ರಾಷ್ಟ್ರೀಯ ದಿಗ್ಗಜರಿಂದ ಸಂದೇಶಗಳನ್ನು ಪ್ರಸಾರ ಮಾಡುತ್ತಿದೆ. ಸಾಮಾಜಿಕ ಮಾಧ್ಯಮ ಅಭಿಯಾನಗಳು ಮತ್ತು ರೇಡಿಯೋ ಮೂಲಕವೂ ಸಂದೇಶಗಳನ್ನು ಪ್ರಸಾರ ಮಾಡಲಾಗುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
ಸುದ್ದಿದಿನ,ಬೆಂಗಳೂರು : ದಕ್ಷಿಣ ಭಾರತದಲ್ಲಿ ಭಾರತೀಯ ಜನತಾಪಕ್ಷಕ್ಕೆ, ಕರ್ನಾಟಕ ಹೆಬ್ಬಾಗಿಲಿನಂತಿದ್ದು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಬರಲಿರುವ ಮಹಾಚುನಾವಣೆಗೆ ಪಕ್ಷದ ಕೇಂದ್ರಬಿಂದುವಾಗಿ ಕಾರ್ಯನಿರ್ವಹಿಸಲಿರುವ ನೂತನ ಮಾಧ್ಯಮ ಕೇಂದ್ರದಲ್ಲಿ ಪಕ್ಷದ ರಾಜ್ಯ ನಾಯಕರು ಇಂದು ಬೆಳಿಗ್ಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ, ಜನಪರ ಆಡಳಿತ ನೀಡುವಲ್ಲಿ ಮತ್ತು ಬರಪರಿಸ್ಥಿತಿ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆಪಾದಿಸಿದರು.
ಜನವಿರೋಧಿ ಕ್ರಮಗಳಿಂದಾಗಿ ರಾಜ್ಯದ ಜನತೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಅತಿಹೆಚ್ಚು ಸ್ಥಾನಗಳನ್ನು ಗೆಲ್ಲುವ ಉದ್ದೇಶದಿಂದ ಕಾರ್ಯತಂತ್ರ ರೂಪಿಸಲು ತನ್ನ 200ಕ್ಕೂ ಹೆಚ್ಚು ಕಾರ್ಯಕರ್ತರಿಗೆ ಕಾರ್ಯಾಗಾರ ನಡೆಸಲು ಬಿಜೆಪಿ ನಿರ್ಧರಿಸಿದೆ. ಈ ನಡುವೆ ಲೋಕಸಭಾ ಚುನಾವಣೆ ಕುರಿತಂತೆ ದೆಹಲಿಯಲ್ಲಿ ಇಂದು ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿಯ ಸಭೆ ನಡೆಯಲಿದೆ.
ಚುನಾವಣೆಗೆ ಪಕ್ಷದ ಕಾರ್ಯತಂತ್ರಗಳನ್ನು ಕುರಿತು ಸಮಾಲೋಚಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್ ಶಾ ಹಾಗೂ ಚುನಾವಣಾ ಸಮಿತಿಯ ಸದಸ್ಯರು ಮತ್ತಿತರ ಪದಾಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
"ವಿಕಸಿತ ಭಾರತಕ್ಕಾಗಿ
ಮತ್ತೊಮ್ಮೆ ಮೋದಿ ಸರ್ಕಾರ"ಮಲ್ಲೇಶ್ವರಂನ ಜಿ.ಎಂ. ರಿಜಾಯ್ಸ್ ಹೋಟೆಲ್ನಲ್ಲಿ ಬಿಜೆಪಿ ಲೋಕಸಭಾ ಚುನಾವಣಾ 2024ರ ಮಾಧ್ಯಮ ಕೇಂದ್ರದ ಉದ್ಘಾಟನೆ ನೆರವೇರಿಸಲಾಯಿತು. ರಾಜ್ಯದೆಲ್ಲೆಡೆ ಪ್ರಧಾನಿ ಮೋದಿ ಜೀ ಅವರ ಪರವಾದ ಅಲೆ ವ್ಯಾಪಕವಾಗಿದ್ದು 'ಮೋದಿ ಮತ್ತೊಮ್ಮೆ' ಎಂಬುದು ಜನಸಾಮಾನ್ಯರ ಸಂಕಲ್ಪವಾಗಿದೆ. ದೇಶದಲ್ಲಿ 400 ಹಾಗೂ… pic.twitter.com/gYbNmo1Poo
— Vijayendra Yediyurappa (Modi Ka Parivar) (@BYVijayendra) March 23, 2024
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ6 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ6 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ6 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ಕವಿತೆ | ನೆನಪು
-
ದಿನದ ಸುದ್ದಿ3 days ago
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
-
ದಿನದ ಸುದ್ದಿ2 days ago
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ