ದಿನದ ಸುದ್ದಿ
ಸತ್ತವರಲ್ಲಿ ನಮ್ಮವರು ಯಾರು ?
“ಎಲ್ಲಿ ನೋಡಿದರಲ್ಲಿ ಚಿಂದಿಯಾದ ಶವಗಳು. ಕಾಲಿಟ್ಟಲೆಲ್ಲ ರಕ್ತವೋ ರಕ್ತ. ಲೆಕ್ಕವಿಲ್ಲದಷ್ಟು ಮೃತದೇಹಗಳ ಅವಶೇಷಗಳು. ಮುಂಡವಿಲ್ಲದ ರುಂಡಗಳು, ರುಂಡವಿಲ್ಲದ ಮುಂಡಗಳು. ಕೈ ಕಾಲುಗಳಿಲ್ಲದ ದೇಹಗಳು. ಗಾಯಗೊಂಡು ಒದ್ದಾಡುತ್ತಿದ್ದ ಹಲವರ ದೇಹಗಳಲ್ಲಿ ಚೂಪಾದ ಗಾಜಿನ ಚೂರುಗಳು ಹೊಕ್ಕಿದ್ದವು. ತಮ್ಮವರ ಪತ್ತೆಗಾಗಿ ಸಾವಿರಾರು ಮಂದಿ ಅಲ್ಲಿ ಸೇರಿದ್ದರು. ಶವಗಳನ್ನು ಗುರುತಿಸಲಾಗದೆ ಅವರು ರೋಧಿಸುತ್ತಿದ್ದರು. ಅವರ ಆಕ್ರಂದನ ಮುಗಿಲು ಮುಟ್ಟಿತ್ತು.” ಇದು ಈಸ್ಟರ್ ಭಾನುವಾರ ದ್ವೀಪರಾಷ್ಟ್ರ ಶ್ರೀಲಂಕಾದ ಕೊಲೊಂಬೋ ನಗರದಲ್ಲಿನ 3 ಚರ್ಚ್ಗಳಲ್ಲಿ ಮತ್ತು 3 ಪಂಚತಾರಾ ಹೊಟೇಲುಗಳಲ್ಲಿ ಸಂಭವಿಸಿದ ಭೀಕರ ಸರಣಿ ಬಾಂಬ್ ಸ್ಟೋಟದ ನಂತರ ಕಂಡುಬಂದ ಮನಕಲಕುವ ದೃಶ್ಯ.
ಚರ್ಚ್ಗಳಲ್ಲಿ ಪ್ರಾರ್ಥನೆಯಲ್ಲಿ ನಿರತರಾಗಿದ್ದವರ ಮೇಲೆ ಮತ್ತು ವಿಲಾಸಿ ಹೊಟೇಲುಗಳಲ್ಲಿ ತಂಗಿದ್ದ ವಿದೇಶಿ ಪ್ರವಾಶಿಗರನ್ನು ಗುರಿಯಾಗಿಸಿಕೊಂಡು ನಡೆದ ಎರಡು ಆತ್ಮಹತ್ಯಾ ದಾಳಿ ಮತ್ತು ಬಾಂಬ್ ಸ್ಪೋಟಗಳಿಂದಾಗಿ 300 ಕ್ಕೂ ಅಧಿಕ ಮಂದಿ ಅಮಾಯಕರು ಅಸುನೀಗಿ, 500 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಭಾರತ, ಪಾಕಿಸ್ತಾನ, ಅಮೇರಿಕ, ಡೆನ್ಮಾರ್ಕ್, ಬ್ರಿಟನ್, ಟರ್ಕಿ, ಪೋರ್ಚುಗಲ್, ಚೀನಾ ಮೊದಲಾದ ದೇಶಗಳ 35 ಪ್ರಜೆಗಳು ಮೃತಪಟ್ಟಿದ್ದಾರೆ. ಶ್ರೀಲಂಕಾದ ಇತಿಹಾಸದಲ್ಲೇ ಅತ್ಯಂತ ಬೀಭತ್ಸವಾದ ಈ ದಾಳಿಯನ್ನು ಭಾರತವೂ ಸೇರಿದಂತೆ ವಿಶ್ವದ ಅನೇಕ ದೇಶಗಳ ಗಣ್ಯರು ಬಲವಾಗಿ ಖಂಡಿಸಿದ್ದಾರೆ.
ಅಲ್ಲಿ ಮಕ್ಕಳನ್ನು ಕಳೆದುಕೊಂಡ ಹೆತ್ತವರು, ಅಪ್ಪ-ಅಮ್ಮನನ್ನು ಕಳೆದುಕೊಂಡ ಮಕ್ಕಳು, ಪತಿಯನ್ನು ಕಳೆದುಕೊಂಡ ಮಹಿಳೆಯರು, ಪತ್ನಿಯನ್ನು ಕಳೆದುಕೊಂಡ ಪುರುಷರು ತಮ್ಮವರನ್ನು ಹುಡುಕುತ್ತಿದ್ದರು. ಛಿಧ್ರ, ಛಿಧ್ರವಾದ ಮಾನವ ದೇಹದ ತುಂಡುಗಳಲ್ಲಿ ತಮ್ಮವರನ್ನು ಗುರುತಿಸುವುದು ಹೇಗೆ? ಸತ್ತವರಲ್ಲಿ ನಮ್ಮವರು ಯಾರು?
ಅದೇ ರಕ್ತ! ಅದೇ ಅಂಗಾಂಗಗಳು! ಇವರು ನಮ್ಮವರಾ? ಅವರು ನಮ್ಮವರಾ? ಒಂದರ ಮೇಲೊಂದು ಎಂಬಂತೆ ಬಿದ್ದಿರುವ ಮೃತದೇಹಗಳಲ್ಲಿ ನಮ್ಮವರು ಯಾರು ಎಂದು ಗುರುತಿಸುವುದು ಹೇಗೆ? ಇಂತಹ ಪ್ರಕರಣಗಳಲ್ಲಿ ಮೃತದೇಹಗಳನ್ನು ಗುರುತಿಸಲಾಗದೆ. ತಮಗೆ ಸಂಬಂಧವಿಲ್ಲದ ಮೃತ ದೇಹವನ್ನು ಹಸ್ತಾಂತರಿಸಿಕೊಂಡು ಅಂತ್ಯಸಂಸ್ಕಾರ ಮಾಡಿದ ಉದಾರಣೆಗಳಿವೆ. ಶ್ರೀಲಂಕಾ ಸ್ಪೋಟದಲ್ಲಿ ಮಡಿದ 7 ಜನ ಕನ್ನಡಿಗರು ಸೇರಿದಂತೆ 10 ಜನ ಭಾರತೀಯರು ನಮ್ಮವರೇ. ಮೃತಪಟ್ಟ ಇನ್ನುಳಿದವರೆಲ್ಲರೂ ನಮ್ಮವರೇ. “ಇವ ನಮ್ಮವ, ಇವ ನಮ್ಮವ” ಎನ್ನುವವನಿಗೆ ತಮ್ಮವರು ಸಿಗುತ್ತಾರೆ.ಆತನಿಗೆ ಎಲ್ಲರೂ ತನ್ನವರೇ ಆಗಿರುತ್ತಾರೆ. ಆತ ಮಾನವ ರಕ್ತದಲ್ಲಿ ಬೇಧ ಕಾಣುವುದಿಲ್ಲ.
ಹುಟ್ಟಿನಿಂದಲೇ ಕೆಲವರು ಕೀಳು ಜಾತಿಯವರಾಗಿರುತ್ತಾರೆ ಎಂಬುವುದನ್ನು ಆತ ಒಪ್ಪುವುದಿಲ್ಲ. ಮತ ಧರ್ಮಗಳ ಖಾಸಗಿ ನಂಬಿಕೆಗಳನ್ನು ಆತ ವಿವಾದಾಸ್ಪದಗೊಳಿಸುವುದಿಲ್ಲ. ಪುಲ್ವಾಮಾ ದಾಳಿಯಲ್ಲಿ ಸಾವನ್ನಪ್ಪಿದ ಯೋಧರನ್ನು ಆತ ‘ತನ್ನವರು’ ಎಂದು ದುಃಖಿಸುತ್ತಾನೆ. ಕಳೆದ ಮಾರ್ಚ್ 15 ರಂದು ನ್ಯೂಜಿಲ್ಯಾಂಡ್ನ ಮಸೀದಿಯಲ್ಲಿ ನಡೆದ ಶೂಟೌಟ್ಗೆ ಬಲಿಯಾದ 50 ಮಂದಿ ಪ್ರಾರ್ಥನಾ ನಿರತರನ್ನು ಆತ ‘ತನ್ನವರು’ ಎಂದು ಗುರುತಿಸುತ್ತಾನೆ. ಈಗ ಶ್ರೀಲಂಕಾದ ಚರ್ಚುಗಳಲ್ಲಿ ಬಾಂಬ್ ಸ್ಪೋಟಿಸಿ ಸಾಯಿಸಿದ ನೂರಾರು ಮಂದಿ ಭಕ್ತರನ್ನು ಆತ ‘ತನ್ನವರು’ ಎಂದು ಕಣ್ಣೀರು ಹಾಕುತ್ತಾನೆ. ಆತನಿಗೆ ‘ತನ್ನವರು’ ಸಿಕ್ಕೇ ಸಿಗುತ್ತಾರೆ.
‘ತನ್ನವರು’ ಚೆನ್ನಾಗಿರಬೇಕು. ತನ್ನವರು ನೆಮ್ಮದಿಯಿಂದ ಇರಬೇಕು. ಅವರಿಗೆ ಕಷ್ಟಗಳು ಬರಬಾರದು. ಹೀಗೆ ‘ಇವ ನಮ್ಮವ ಇವ ನಮ್ಮವ’ ಎನ್ನುವವನಿಗೆ ಎಲ್ಲರೂ ಚೆನ್ನಾಗಿರಬೇಕೆಂಬ ಮಹದಾಸೆ! ಆತನಿಗೆ ಯುದ್ಧ ಬೇಡ, ಶಾಂತಿ ಬೇಕು. ಆತನಿಗೆ ಪ್ರೀತಿ ಬೇಕು, ಹಿಂಸೆ ಬೇಡ, ಆತ ಹಂಚಿಕೊಂಡು ಬದುಕು ಬಯಸುತ್ತಾನೆ. ಎಲ್ಲರನ್ನೂ ಒಳಗೊಳ್ಳಲು ಶ್ರಮಿಸುತ್ತಾನೆ. ಆತ ವೈವಿಧ್ಯತೆಯಲ್ಲಿ ಏಕತೆ ಕಾಣುತ್ತಾನೆ. ಆತ ಗಡಿಗಳಿಲ್ಲದ, ಗಡಿ ಘರ್ಷಣೆಗಳಿಲ್ಲದ ವಿಶ್ವದ ಕನಸು ಕಾಣುತ್ತಾನೆ. ಆತ ವಿಶ್ವಮಾನವ. ಸರ್ವಜನಾಂಗ ಪ್ರೇಮಿ, ವಿಶ್ವದ ಕರಿಯರಲ್ಲಿ, ಬಿಳಿಯರಲ್ಲಿ ಆತ ಭೇಧ ಕಾಣುವುದಿಲ್ಲ. ಆಫ್ರಿಕಾದವರು, ಅಮೆರಿಕದವರು ಆತನಿಗೆ ಬೇರೆ ಬೇರೆ ಅಲ್ಲ. ಅವರ ಭಾಷೆ ಯಾವುದೇ ಇರಲಿ. ಅವರ ಆಹಾರ ವಿಹಾರ ಹೇಗೂ ಇರಲಿ, ಆತನಿಗೆ ಅವರೆಲ್ಲರೂ ‘ತನ್ನವರು’.
ಎಲ್ಲಾದರೂ ಸರಿಯೇ, ಭೂಕಂಪದಂತಹ, ಪ್ರವಾಹದಂತಹ, ಬರಗಾಲದಂತಹ ನೈಸರ್ಗಿಕ ವಿಕೋಪ ಸಂಭವಿಸಿ ಸಾವು ನೋವುಗಳಾದಾಗ ಆತ ಮರಗುತ್ತಾನೆ. ತನ್ನ ಕೈಲಾದಷ್ಟು ನೆರವು ನೀಡುತ್ತಾನೆ. ಆತನಿಗೆ ಪಾಕಿಸ್ತಾನ, ಹಿಂದುಸ್ಥಾನ ಎಂಬ ಭೇದವಿಲ್ಲ. ಹಿಂದು-ಮುಸ್ಲಿಂ ಎಂಬ ದ್ವೇಷವಿಲ್ಲ. ಅವನು ಚರ್ಚ್ಗಳನ್ನು ಧ್ವಂಸ ಮಾಡುವುದಿಲ್ಲ. ಮಸೀದಿಯನ್ನು ಕೆಡವಿ ಹೆಮ್ಮೆ ಪಟ್ಟುಕೊಳ್ಳುವುದಿಲ್ಲ. ಆತ ತನ್ನ ನಂಬಿಕೆಗಳನ್ನು ಇತರರ ಮೇಲೆ ಹೇರುವುದಿಲ್ಲ. ದಲಿತರನ್ನು ಆತ ನಿಂದಿಸುವುದಿಲ್ಲ.
ಮಹಿಳೆಯರ ದೇವಸ್ಥಾನ ಪ್ರವೇಶವನ್ನು ಆತ ವಿರೋಧಿಸುವುದಿಲ್ಲ. ಎಲ್ಲರ ಸ್ವಾತಂತ್ರ್ಯವನ್ನು ಆತ ಗೌರವಿಸುತ್ತಾನೆ. ಎಲ್ಲೆಲ್ಲ್ಲೂ ತನ್ನವರಿದ್ದಾರೆ. ಎಲ್ಲಾ ದೇಶಗಳಲ್ಲಿದ್ದಾರೆ. ಎಲ್ಲಾ ಭಾಷೆಗಳನ್ನಾಡುವವರಲ್ಲಿದ್ದಾರೆ. ಎಲ್ಲಾ ಮತಧರ್ಮಗಳ ಅನುಯಾಯಿಗಳಲ್ಲಿದ್ದಾರೆ. ಯಾವುದೇ ಮತವನ್ನು ಪ್ರತಿಪಾದಿಸದಿರುವವರ ನಡುವೆಯೂ ಇದ್ದಾರೆ. ಎಲ್ಲಾ ತರಹದ ಆಹಾರ ಸೇವಿಸುವವರ, ವಿಭಿನ್ನ ಉಡುಪುಗಳನ್ನು ತೊಡುವವರ, ಎಲ್ಲರ ನಡುವೆಯೂ ಆ ವಿಶ್ವ ಮಾನವನಿಗೆ ‘ತನ್ನವರು’ ಇದ್ದಾರೆ.
( ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಇಂದಿನಿಂದ ಏ.3 ರವರೆಗೆ ಸೂಳೆಕೆರೆಗೆ ನೀರು ಬಿಡುಗಡೆ
ಸುದ್ದಿದಿನ,ದಾವಣಗೆರೆ: ಭದ್ರಾ ಜಲಾಶಯ ಯೋಜನೆ ವ್ಯಾಪ್ತಿಗೆ ಬರುವ ದೇವರಬೆಳಕೆರೆ ಪಿಕ್ಅಪ್ ಅಣೆಕಟ್ಟಿನ ಸ್ಕವರಿಂಗ್ ಸ್ಪೂಯೀಸ್ ಗೇಟ್ ಮುಖಾಂತರ ಜಲಾಶಯದ ಡೆಡ್ ಸ್ಟೋರೇಜ್ ನೀರನ್ನು ಸೂಳೆಕೆರೆ ಹಳ್ಳಕ್ಕೆ ಮಾರ್ಚ್ 28 ರಿಂದ ಏಪ್ರಿಲ್ 3 ರವರೆಗೆ ಪ್ರತಿದಿನ 20 ಕ್ಯೂಸೆಕ್ಸ್ಗಳಲ್ಲಿ ಜನ-ಜಾನುವಾರು ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸಲು ಹಾಗೂ ಅಕ್ಕಪಕ್ಕದ ಗ್ರಾಮಗಳ ಕುಡಿಯುವ ನೀರಿನ ಉದ್ದೇಶಕ್ಕೆ ಬಿಡಲಾಗುತ್ತಿದೆ.
ಈ ವೇಳೆ ಹಳ್ಳಕ್ಕೆ ದನ ಕರಗಳನ್ನು ಇಳಿಸುವುದಾಗಲಿ, ಪಂಪ್ಸೆಟ್ಗಳಿಂದ ನೀರೆತ್ತುವುದುನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಕನೀನಿನಿ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ
ಸುದ್ದಿದಿನ ಡೆಸ್ಕ್ : ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.
ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಇದೇ 30 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಇದೇ ವೇಳೆ ಬಿಹಾರದಲ್ಲಿ ನಾಮಪತ್ರ ಸಲ್ಲಿಕೆಗೆ ನಾಳೆ ಕಡೆ ದಿನವಾಗಿದ್ದು, ಈ ತಿಂಗಳ 30 ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಏಪ್ರಿಲ್ 2ರಂದು ನಾಮತ್ರ ಹಿಂಪಡೆಯುವಿಕೆಗೆ ಕೊನೆಯ ದಿನವಾಗಿರುತ್ತದೆ.
ಏಪ್ರಿಲ್ 19 ರಂದು 17 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಅದರಂತೆ ತಮಿಳುನಾಡಿನಲ್ಲಿ 39, ರಾಜಸ್ಥಾನದಲ್ಲಿ 12, ಉತ್ತರ ಪ್ರದೇಶದಲ್ಲಿ 8, ಮಧ್ಯಪ್ರದೇಶದಲ್ಲಿ 6, ಉತ್ತರಾಖಂಡ, ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ತಲಾ 5 , ಬಿಹಾರದಲ್ಲಿ 4, ಪಶ್ಚಿಮ ಬಂಗಾಳದಲ್ಲಿ 3, ಅರುಣಾಚಲ ಪ್ರದೇಶ, ಮಣಿಪುರ, ಮೆಘಾಲಯದಲ್ಲಿ ತಲಾ 2 ಮತ್ತು ಛತ್ತೀಸ್ಗಢ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ, ಅಂಡಮಾನ್-ನಿಕೋಬಾರ್ ದ್ವೀಪಗಳು, ಜಮ್ಮು-ಕಾಶ್ಮೀರ, ಲಕ್ಷದ್ವೀಪ ಮತ್ತು ಪುದುಚೇರಿಯಲ್ಲಿ ತಲಾ ಒಂದು ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.
ಎರಡನೇ ಹಂತದಲ್ಲಿ 89 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ನಾಳೆ ಅಧಿಸೂಚನೆ ಹೊರಡಿಸಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
ಸುದ್ದಿದಿನ ಡೆಸ್ಕ್ : 18ನೇ ಲೋಕಸಭೆಗೆ ಸದಸ್ಯರನ್ನು ಆಯ್ಕೆ ಮಾಡಲು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಭಾರತ ಚುನಾವಣಾ ಆಯೋಗ, ಸಕಲ ಸಿದ್ಧತೆಯೊಂದಿಗೆ ಸಜ್ಜಾಗಿದೆ.
ದೇಶದಲ್ಲಿ ಚುನಾವಣೆಗಳನ್ನು ಪಾರದರ್ಶಕವಾಗಿ ಹಾಗೂ ಅತ್ಯಂತ ವಿಶ್ವಾಸಾರ್ಹ ರೀತಿಯಲ್ಲಿ ನಡೆಸುವ ಸಂಕಲ್ಪದೊಂದಿಗೆ ಚುನಾವಣಾ ಆಯೋಗ, ಸಮಸ್ತ ಚುನಾವಣಾ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ತಂತ್ರಜ್ಞಾನದ ನೆರವನ್ನು ಬಳಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮತದಾರರು, ಚುನಾವಣಾ ಸಿಬ್ಬಂದಿ ಹಾಗೂ ಆಯೋಗಕ್ಕೆ ನೆರವಾಗುವ ಹಲವು ಆಪ್ಗಳನ್ನು ಚುನಾವಣಾ ಆಯೋಗ ಅಭಿವೃದ್ಧಿಪಡಿಸಿದೆ.
ಈ ಪೈಕಿ ಇಂದು ಸಿ-ವಿಜಿಲ್ ಆಪ್ ಬಗ್ಗೆ ಮಾಹಿತಿ.
ದೇಶದಲ್ಲಿ ಚುನಾವಣೆಗಳ ವೇಳೆ ನಡೆಯುವ ಅಕ್ರಮಗಳು, ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಪ್ರಕರಣಗಳ ಮೇಲೆ ಕಣ್ಣಿಡುವುದು ಕೇವಲ ಚುನಾವಣಾ ಸಿಬ್ಬಂದಿಯ ಕೆಲಸವಲ್ಲ. ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು. ಹಾಗಾಗಿ ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರು ಆಯೋಗಕ್ಕೆ ದೂರು ತಲುಪಿಸಲು ಭಾರತ ಚುನಾವಣಾ ಆಯೋಗ ಸಿ-ವಿಜಿಲ್ ಆಪ್ ಅನ್ನು ಅಭಿವೃದ್ಧಿ ಪಡಿಸಿದೆ.
ದೂರುಗಳನ್ನು ಆನ್ಲೈನ್ ಮೂಲಕ ಆಯೋಗಕ್ಕೆ ರವಾನಿಸಲು ಈ ಆಪ್ ನೆರವಾಗುವುದು. ಯಾವುದೇ ಚುನಾವಣಾ ಅಕ್ರಮಗಳ ಬಗ್ಗೆ ಧ್ವನಿಮುದ್ರಣ, ವಿಡಿಯೋ ಚಿತ್ರದ ತುಣುಕುಗಳು ಮತ್ತು ಫೋಟೊ ಮೊದಲಾದ ದಾಖಲೆಗಳನ್ನು ಸಾರ್ವಜನಿಕರು ಇದರ ಮೂಲಕ ಕಳುಹಿಸಬಹುದು.
ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮಾಡುವ ಖರ್ಚು-ವೆಚ್ಚ, ಮತದಾರರ ಮನವೊಲಿಕೆಗೆ ಆಮಿಷಗಳ ಬಳಕೆ ಮೊದಲಾದ ಅಕ್ರಮಗಳ ಬಗ್ಗೆ ದೂರು ನೀಡಲು ಇದನ್ನು ಬಳಸಬಹುದು. ಒಂದುನೂರು ನಿಮಿಷಗಳಲ್ಲಿ ಚುನಾವಣಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
ದೇಶದ ಯಾವ ಮೂಲೆಯಲ್ಲೇ ಆಗಲಿ ನಡೆಯುವ ಚುನಾವಣಾ ಅಕ್ರಮ ಅಥವಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ತಾವು ನೀಡಿದ ದೂರುಗಳನ್ನು ಆಯೋಗ ಪರಿಗಣಿಸಿದೆಯೇ ಎನ್ನುವ ವಿವರಗಳನ್ನು ಸಹ ಸಾರ್ವಜನಿಕರು ಸಿ-ವಿಜಿಲ್-ಆಪ್ ಮೂಲಕ ವೀಕ್ಷಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ6 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ6 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ6 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ಕವಿತೆ | ನೆನಪು
-
ದಿನದ ಸುದ್ದಿ3 days ago
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
-
ದಿನದ ಸುದ್ದಿ2 days ago
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ