Connect with us

ಬಹಿರಂಗ

‘ಹಿಂದೂ ಧರ್ಮ,ಅಸ್ಪೃಶ್ಯತೆ, ಗೋಮಾಂಸ ಸೇವನೆ ಮತ್ತು ರಾಜಕೀಯ’ದ ಬಗ್ಗೆ ಸ್ವಾಮಿ ವಿವೇಕಾನಂದರ ಚಿಂತನೆಗಳು..!

Published

on

  • ಹಿಂದೂ ಧರ್ಮ, ಪೌರೋಹಿತ್ಯ, ಅಸ್ಪೃಶ್ಯತೆ, ಆಹಾರ, ಗೋಮಾಂಸ ಸೇವನೆ ಮತ್ತು ರಾಜಕೀಯದ ಬಗ್ಗೆ ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಅವರ ಜನ್ಮದಿನವಾದ ಇಂದು (ಜ.12) ಮನನ ಮಾಡಿಕೊಳ್ಳೋಣ.

–ದಿನೇಶ್ ಅಮೀನ್ ಮಟ್ಟು

  1. ಹಿಂದೂ ಧರ್ಮ

ಸ್ವಾಮಿ ವಿವೇಕಾನಂದರು ಎಂದೂ ತಾವೊಬ್ಬ ಹಿಂದೂ ಎಂದಾಗಲಿ, ಹಿಂದೂ ಸನ್ಯಾಸಿಯೆಂದಾಗಲಿ ಹೇಳಿಕೊಳ್ಳಲಿಲ್ಲ. ಅವರಿಗೆ ಹಿಂದೂ ಎನ್ನುವ ಶಬ್ದದ ಬಗ್ಗೆಯೇ ಭಿನ್ನಾಭಿಪ್ರಾಯ ಇತ್ತು. ಮೂಲಭೂತವಾಗಿ ಹಿಂದುತ್ವದ ವ್ಯಾಖ್ಯಾನವನ್ನೇ ತಪ್ಪಾಗಿ ಮಾಡಲಾಗಿದೆ ಎಂದು ಅವರು ಹೇಳುತ್ತಿದ್ದರು.

ಸಿಂಧೂ ನದಿಯ ಆಚೆದಡದಲ್ಲಿರುವವರೆಲ್ಲರೂ ಹಿಂದೂಗಳು. ಅದರಲ್ಲಿ ಮುಸ್ಲಿಮ್, ಕ್ರಿಶ್ಚಿಯನ್, ಬೌದ್ಧರು ಸೇರಿದಂತೆ ಎಲ್ಲ ಧರ್ಮದವರೂ ಇದ್ದರು. ಪರ್ಷಿಯನರು ಮೂಲ ಸಿಂಧೂವನ್ನು ಅಪಭ್ರಂಶಗೊಳಿಸಿ ಹಿಂದೂ ಕರೆದರು. ಮುಸ್ಲಿಮ್ ಅರಸರ ಆಳ್ವಿಕೆಯ ಕಾಲದಲ್ಲಿ ಹಿಂದೂಗಳೆನಿಸಿಕೊಂಡವರು ಬಹಿರಂಗವಾಗಿ ತಮ್ಮನ್ನು ಹಿಂದೂಗಳೆಂದು ಕರೆಸಿಕೊಂಡರು ಎಂದು ಸ್ವತ: ವಿವೇಕಾನಂದರೇ ಹೇಳಿಕೊಂಡಿದ್ದಾರೆ. ಅವರ ಪ್ರಕಾರ ಹಿಂದೂಗಳು ತಮ್ಮನ್ನು ವೇದಾಂತಿಗಳು ಎಂದು ಕರೆದುಕೊಳ್ಳಬೇಕು.

ವಿವೇಕಾನಂದರ ಧರ್ಮದ ವ್ಯಾಖ್ಯಾನವೇ ಬೇರೆ ಇತ್ತು. “ದೇವರು ಬಂದು ಭೂಮಂಡಲವನ್ನು ಸೃಷ್ಟಿಸಿದ, ಅಂದಿನಿಂದ ಕಾಲ ಸ್ಥಬ್ಧವಾಗಿದೆ ಎನ್ನುವುದೆಲ್ಲ ಸುಳ್ಳು, ದೇವರು ಎನ್ನುವವನ ಅಸ್ತಿತ್ವ ಪ್ರತಿಯೊಬ್ಬನಿಗೂ ಹೃದಯದ ಮೂಲಕ ಅರಿವಾಗುವಂತಹದ್ದು. ಇದಕ್ಕಿಂತಲೂ ಮುಖ್ಯವಾದುದು ಭೂಮಂಡಲದ ಎಲ್ಲ ಜೀವಿಗಳ ಹೃದಯದಲ್ಲಿ ದೇವರಿದ್ದಾನೆ ಎಂಬ ಅರಿವು. ವ್ಯತ್ಯಾಸ ಇರುವುದು ಅದರ ಅಭಿವ್ಯಕ್ತಿಯ ರೂಪಗಳಲ್ಲಿ ಮಾತ್ರ. ದೇವರು ಎಲ್ಲ ಮನುಷ್ಯರೊಳಗೆ ಇರುತ್ತಾನೆ.ಮನುಷ್ಯನೊಳಗಿನ ದೈವತ್ವವನ್ನು ಕಂಡುಕೊಳ್ಳುವುದೇ ಧರ್ಮ” ಎಂದು ವಿವೇಕಾನಂದ ಹೇಳಿದ್ದರು.

ಅದಕ್ಕಾಗಿ ಅವರು ದರಿದ್ರರಲ್ಲಿ ಬಡವರಲ್ಲಿ ರೋಗಿಗಳಲ್ಲಿ, ನಿರ್ಗತಿಕರಲ್ಲಿ ದೇವರನ್ನು ಕಾಣು ಎಂದು ಹೇಳಿದ್ದರು. ನಾವು ಈಗ ಬಡತನ ಎನ್ನುವುದು ಪೂರ್ವಜನ್ಮದ ಪಾಪದ ಫಲ, ಅದೊಂದು ಅಪರಾಧ ಎಂದು ತಿಳಿದುಕೊಂಡವರ ಕಾಲದಲ್ಲಿದ್ದೇವೆ.

ದೇವರು ಎನ್ನುವುದು ಪ್ರೀತಿ, ಎಲ್ಲವನ್ನು ದೇವರು ಎಂದು ಭಾವಿಸುವ ಮೂಲಕ ದೇವರಪೂಜೆ ಮಾಡಬಹುದು. ವಿವೇಕಾನಂದರು ಪ್ರತಿಪಾದಿಸಿದ ಹಿಂದುತ್ವದಲ್ಲಿ ಜಾತಿ,ಸಂಕೇತ, ಆಚರಣೆ, ಪೂಜೆಯ ಸ್ಥಳ ಮತ್ತು ವಿಧಾನಗಳು ಇರಲಿಲ್ಲ. ಮೂರ್ತಿಪೂಜೆಗೆ ಅವರ ಸಹಮತ ಇರಲಿಲ್ಲ. ಒಮ್ಮೆ ಅವರು ಅಲ್ಮೋರದಲ್ಲಿರುವ ಮಾಯಾವತಿ ಆಶ್ರಮಕ್ಕೆ ಹೋಗಿದ್ದರು.

ಅಲ್ಲಿ ಗೋಡೆಯ ಮೇಲಿದ್ದ ರಾಮಕೃಷ್ಣ ಪರಮಹಂಸರ ಚಿತ್ರ ನೋಡಿ ಅಸಮಾಧಾನ ವ್ಯಕ್ತಪಡಿಸಿದ್ದರು. ಗುರುಗಳ ದೈಹಿಕ ಚಹರೆಯ ಮೂಲಕ ಅವರನ್ನು ನಾನು ನೆನಪಲ್ಲಿಟ್ಟುಕೊಳ್ಳುವುದು ಬೇಕಾಗಿಲ್ಲ. ಅವರ ಆದರ್ಶಗಳ ಪಾಲನೆ ಮತ್ತು ಪ್ರಚಾರದ ಮೂಲಕ ಅವರನ್ನು ನೆನಪಲ್ಲಿಟ್ಟುಕೊಳ್ಳಬೇಕು ಎಂದು ಅವರು ಹೇಳಿದ್ದರು.

ಧರ್ಮ ಎನ್ನುವುದು ಬಾಯಿ ಮಾತಲ್ಲ, ನಂಬಿಕೆಯೂ ಅಲ್ಲ, ಸಿದ್ಧಾಂತವೂ ಅಲ್ಲ, ಅದೊಂದು ಕೋಮುವಾದಿ ಭಾವನೆಯೂ ಅಲ್ಲ. ಧರ್ಮ ಎನ್ನುವುದು ಕೋಮುಗಳಲ್ಲಿ ಇಲ್ಲವೆ ಸಂಘಗಳಲ್ಲಿ ಬಾಳಲಾರದು. ಆತ್ಮನಿಗೂ, ದೇವರಿಗೂ ಇರುವ ಸಂಬಂಧ ಇದು. ಇದಕ್ಕೆ ಸಾಂಘಿಕ ರೂಪ ಕೊಟ್ಟಕೂಡಲೇ ಅದು ವ್ಯಾಪಾರವಾಗುವುದು. ಯಾವ ಧರ್ಮದಲ್ಲಿ ವ್ಯಾಪಾರದ ಗುಣಗಳಿರುವುದೋ ಅಲ್ಲಿ ಆಧ್ಯಾತ್ಮಿಕತೆ ನಾಶವಾಗುವುದು.

ಧರ್ಮ ಎನ್ನುವುದು ದೇವಾಲಯ ಕಟ್ಟುವುದರಲ್ಲಿ ಇಲ್ಲ, ಅಥವಾ ಸಾಮಾಜಿಕ ಪೂಜೆಗೆ ಹೋಗುವುದರಲ್ಲಿ ಇಲ್ಲ. ಅದು ಧರ್ಮಗ್ರಂಥಗಳಲ್ಲಿ ಇಲ್ಲ. ಉಪವಾಸದಲ್ಲಿಯೂ ಅಲ್ಲ. ಧರ್ಮವೆಂದರೆ ಸಾಕ್ಷಾತ್ಕಾರ. ಒಂದು ಕಣದಷ್ಟು ಧರ್ಮಾನುಷ್ಠಾನ ಮತ್ತು ಆತ್ಮ ಸಾಕ್ಷಾತ್ಕಾರ ಒಂದು ಮಣ ಮಾತಿಗಿಂತ ಮತ್ತು ಒಣ ಹೆಮ್ಮೆಗಿಂತ ಮೇಲು.

ಪುರೋಹಿತಷಾಹಿ ಬಗ್ಗೆ ವಿವೇಕಾನಂದರಷ್ಟು ಕಟುವಾಗಿ ಮಾತಾಡಿದ ಇನ್ನೊಬ್ಬ ಧಾರ್ಮಿಕ ನಾಯಕನಿಲ್ಲ.ಒಮ್ಮೊಮ್ಮೆ ಅವರ ಮಾತುಗಳು ಪೆರಿಯಾರ್ ಅವರಿಗಿಂತಲೂ ತೀಕ್ಷ್ಣವಾಗಿರುತ್ತಿತ್ತು. ನೀಚರು, ಕುತಂತ್ರಿಗಳಾಗಿರುವ ಪುರೋಹಿತರು ಎಲ್ಲ ವಿಧದ ಮೂಢನಂಬಿಕೆಗಳನ್ನು ವೇದ ಮತ್ತು ಹಿಂದೂ ಧರ್ಮದ ಸಾರ ಎಂದು ಬೋಧಿಸುತ್ತಾರೆ. ಈ ಮೋಸಗಾರರು ಅಥವಾ ಅವರ ತಾತಮುತ್ತಾತರಾಗಲಿ ಕಳೆದ ನಾನೂರು ತಲೆಮಾರುಗಳಿಂದಲೂ ವೇದದ ಒಂದು ಭಾಗವನ್ನೂ ನೋಡಿಲ್ಲ. ಕಲಿಯುಗದಲ್ಲಿ ಬ್ರಾಹ್ಮಣ ವೇಷದಲ್ಲಿರುವ ಈ ರಾಕ್ಷಸರಿಂದ ಮುಗ್ಧ ಜನರನ್ನು ಆ ದೇವರೇ ಕಾಪಾಡಬೇಕು.

ಪುರೋಹಿತರ ಹೃದಯ ಎಂದಿಗೂ ವಿಶಾಲವಾಗುವುದಿಲ್ಲ, ಅವರು ತಿದ್ದಿಕೊಳ್ಳುವುದಿಲ್ಲ. ಶತಶತಮಾನಗಳಿಂದ ಬಂದ ಮೂಢ ನಂಬಿಕೆ ಮತ್ತು ದಬ್ಬಾಳಿಕೆಯ ಸಂತಾನ ಅವರು. ಅವರು ಪ್ರಗತಿಗೆ ವಿರುದ್ಧವಾಗಿರುವವರು. ಮೊದಲು ಪುರೋಹಿತಷಾಹಿಯನ್ನು ಬೇರು ಸಹಿತ ಕಿತ್ತೊಗೆಯಿರಿ. ಬನ್ನಿ ಮನುಷ್ಯರಾಗಿ, ಸಂಕುಚಿತ ಬಿಲಗಳಿಂದ ಹೊರಗೆ ಬನ್ನಿ, ಕಣ್ಣು ಬಿಟ್ಟು ಹೊರಗೆ ನೋಡಿ, ಮನುಷ್ಯರನ್ನು ಪ್ರೀತಿಸಿ, ದೇಶವನ್ನು ಪ್ರೀತಿಸಿ, ಉನ್ನತವಾದ ಕೆಲಸಗಳಿಗಾಗಿ ಹೋರಾಡಿ.

ಪ್ರಪಂಚದ ಯಾವ ಧರ್ಮವೂ ಹಿಂದೂ ಧರ್ಮದಷ್ಟು ಭವ್ಯವಾಣಿಯಲ್ಲಿ ಮನುಷ್ಯತ್ವದ ಘನತೆ ಗೌರವಗಳ ಬಗ್ಗೆ ಬೋಧನೆ ಮಾಡಿಲ್ಲ. ಪ್ರಪಂಚದ ಯಾವ ಧರ್ಮವೂ ದೀನದಲಿತರ ಕುತ್ತಿಗೆಯನ್ನು ಹಿಂದೂ ಧರ್ಮದಷ್ಟು ಕ್ರೂರವಾಗಿ ತುಳಿಯುವುದಿಲ್ಲ. ತಪ್ಪು ಹಿಂದೂ ಧರ್ಮದಲ್ಲ , ಅಲ್ಲಿರುವ ಸಂಪ್ರದಾಯ ಶರಣರದ್ದು, ಪುರೋಹಿತರದ್ದು. ಪಾರಮಾರ್ಥಿಕ ಮತ್ತು ವ್ಯಾವಹಾರಿಕ ಎಂದು ನಾನಾ ಬಗೆಯ ಕ್ರೂರ ಸಾಧನೆಗಳನ್ನು ಸೃಷ್ಟಿಸುವ ಠಕ್ಕರದ್ದು.

ನನ್ನ ದೃಷ್ಟಿಯಲ್ಲಿ ಗ್ರಂಥಗಳು ಒಳ್ಳೆಯದಕ್ಕಿಂತ ಹೆಚ್ಚು ಕೆಟ್ಟದ್ದನ್ನು ಮಾಡಿವೆ. ಮತಾಂಧತೆ, ಅನ್ಯಧರ್ಮಿಯರನ್ನು ಹಿಂಸಿಸುವುದು, ಮೂಢನಂಬಿಕೆ, ಕಂದಾಚಾರ, ಕಪಟಾಚಾರಕ್ಕೆಲ್ಲ ಈ ಧರ್ಮಗ್ರಂಥಗಳು ಕಾರಣ. ಎಲ್ಲಿಯ ವರೆಗೆ ಧರ್ಮ ಎಲ್ಲೊ ಕೆಲವು ಆರಿಸಿದ ವ್ಯಕ್ತಿಗಳ ಕೈಯಲ್ಲಿ ಅಥವಾ ಕೆಲವು ಪುರೋಹಿತರ ಕೈಯಲ್ಲಿ ಇರುತ್ತೋ ಆಗ ಧರ್ಮ, ದೇವಸ್ಥಾನ, ಚರ್ಚ್, ಮಸೀದಿ, ಶಾಸ್ತ್ರ, ಮೂಢನಂಬಿಕೆಗಳ ಸುತ್ತ ಗಿರಕಿ ಹೊಡೆಯುತ್ತಿರುತ್ತದೆ. ಯಾವಾಗ ನಾವು ನಿಜವಾದ ಆಧ್ಯಾತ್ಮಿಕ ಸಮಷ್ಠಿ ಭಾವನೆಗೆ ಬರುವೆವೋ ಆಗ ಮಾತ್ರ ಧರ್ಮ ಸತ್ಯವಾಗುವುದು, ಬದುಕಿರುವುದು. ಅದು ನಮ್ಮ ಸ್ವಭಾವದಲ್ಲಿ, ನಡತೆಯಲ್ಲಿ, ಕಾರ್ಯದಲ್ಲಿ ವ್ಯಕ್ತವಾಗಬೇಕು. (3-14)

2. ಅಸ್ಪೃಶ್ಯತೆ

‘ನಾನೇ ಶುದ್ಧ ಉಳಿದವರೆಲ್ಲರೂ ಅಶುದ್ಧ’ ಎಂದು ಹೇಳುವುದು ಮೃಗೀಯವಾದ ರಾಕ್ಷಸ ಧರ್ಮ. ನರಕ ಸದೃಶವಾದ ಧರ್ಮ. ಭರತ ಖಂಡದಲ್ಲಿ ಧರ್ಮವೇನಾದರೂ ಉಳಿದುಕೊಂಡಿದೆ ಎಂದು ತಿಳಿದುಕೊಂಡಿದ್ಧಿರೇನು? ಜ್ಞಾನ, ಭಕ್ತಿ, ಯೋಗಗಳ ಮಾರ್ಗಗಳೆಲ್ಲ ಹೋಯಿತು. ಈಗ ಉಳಿದಿರುವುದು ಒಂದೇ ಧರ್ಮ. ಅದು ‘ಮುಟ್ಟಬೇಡ, ಮುಟ್ಟಬೇಡ ಎಂಬುದು.

ಪ್ರಪಂಚವೆಲ್ಲ ಮೈಲಿಗೆ ನಾನೊಬ್ಬನೇ ಮಡಿ, ಅಹಾ ಎಂತಹ ತಿಳಿಯಾದ ಬ್ರಹ್ಮಜ್ಞಾನ.ಇಂದಿನ ಹಿಂದೂ ಧರ್ಮ ಜ್ಞಾನ ಮಾರ್ಗವೂ ಅಲ್ಲ, ಭಕ್ತಿ ಮಾರ್ಗವೂ ಅಲ್ಲ. ಅದರ ಧರ್ಮವೇ ಅಸ್ಪೃಶ್ಯತೆ. ಎಲ್ಲರಲ್ಲಿಯೂ ಒಂದೇ ಆತ್ಮವನ್ನು ನೋಡಬೇಕೆಂಬ ಉಪದೇಶ ಗ್ರಂಥಗಳಲ್ಲಿಯೂ ಉಳಿದಿದೆ. ಹಸಿದವನಿಗೆ ಒಂದು ತುತ್ತನ್ನು ಕೊಡದವರು ಮೋಕ್ಷವನ್ನು ಹೇಗೆ ಕೊಟ್ಟಾರು? ಮತ್ತೊಬ್ಬರ ಉಸಿರಿನ ಸೋಕಿನಿಂದಲೇ ಇವರು ಪಾಪಿಗಳಾಗುವುದಿದ್ದರೆ ಇನ್ನೊಬ್ಬರನ್ನು ಹೇಗೆ ಶುದ್ಧಿ ಮಾಡಿಯಾರು. ಅಸ್ಪೃಶ್ಯತೆ ಎನ್ನುವುದು ಒಂದು ಮನೋರೋಗ. ಈ ರೋಗ ಗುಣವಾಗದೆ ಹಿಂದೂ ಧರ್ಮ ಉದ್ಧಾರವಾಗಲಾರದು.

ಸಮಾನತೆಯ ಭಾವವನ್ನು ಯಾವುದಾದರೂ ಒಂದು ಧರ್ಮ ಪಾಲಿಸುತ್ತಾ ಬಂದಿದ್ದರೆ ಅದು ಇಸ್ಲಾಂ ಧರ್ಮ. ವೇದಾಂತ ತತ್ವಗಳು ಎಷ್ಟೊಂದು ವಿಚಾರಪೂರ್ಣವಾಗಿದ್ದರೂ ಅದು ವಿಶ್ವದ ಮಾನವ ವರ್ಗದ ಬಹುಮಂದಿಗೆ ತಲುಪಬೇಕಾದರೆ ಇಸ್ಲಾಂಧರ್ಮದ ಅನುಷ್ಠಾನದ ಮಾದರಿಯನ್ನು ಅನುಸರಿಸಬೇಕಾಗುತ್ತದೆ. ನಮ್ಮ ಮಾತೃಭೂಮಿಯಲ್ಲಿ ಹಿಂದೂ ಮತ್ತು ಮುಸಲ್ಮಾನ ಧರ್ಮಗಳೆರಡೂ ಮಿಲನವಾಗಬೇಕು, ವೇದಾಂತದ ಮೆದುಳು ಮತ್ತು ಇಸ್ಲಾಮಿನ ದೇಹ ಇದೊಂದೇ ನಮ್ಮ ಪುರೋಗಮನಕ್ಕೆ ಹಾದಿ. ನನ್ನ ಕಣ್ಣಿಗೆ ಇಂದಿನ ಗೊಂದಲ ಮತ್ತು ತಿಕ್ಕಾಟದಿಂದ ವೇದಾಂತದ ಮೆದುಳು ಮತ್ತು ಇಸ್ಲಾಮಿನ ದೇಹದಿಂದ ಕೂಡಿದ ತೇಜೋಮಯವಾದ, ಅಜೇಯವಾದ ಮುಂದಿನ ನಿಷ್ಕಳಂಕ ಭಾರತದ ಉದಯ ಕಾಣುತ್ತಿದೆ.

ಪ್ರತಿಯೊಬ್ಬರು ಒಂದೇ ಧರ್ಮಕ್ಕೆ ಸೇರಿ ಒಂದೇ ಮಾರ್ಗವನ್ನು ಅನುಸರಿಸುವ ದುರ್ದಿನ ಪ್ರಪಂಚಕ್ಕೆ ಬಾರದಿರಲಿ, ಆಗ ಧರ್ಮ ಮತ್ತು ಆಧ್ಯಾತ್ಮ ಎರಡೂ ನಾಶವಾಗುವುದು. ವೈವಿಧ್ಯವೇ ಜೀವನದ ರಹಸ್ಯ. ಇದು ನಾಶವಾದರೆ ಸೃಷ್ಟಿನಾಶವಾಗುವುದು. ನನ್ನ ಧರ್ಮ ಎನ್ನುವುದು ಎಂದೂ ಇರಲಿಲ್ಲ. ಯಾವಾಗಲೂ ಇರುವುದು ಒಂದೇ ಧರ್ಮ. ಈ ಧರ್ಮವೇ ಹಲವು ದೇಶಗಳಲ್ಲಿ ಹಲವು ರೀತಿಗಳಲ್ಲಿ ವ್ಯಕ್ತವಾಗುತ್ತಾ ಹೋಗುವುದು. ಆದ್ದರಿಂದ ನಾವು ಎಲ್ಲ ಧರ್ಮಗಳಿಗೂ ಗೌರವವನ್ನು ತೋರಬೇಕು. ಸಾಧ್ಯವಾದ ಮಟ್ಟಿಗೆ ಎಲ್ಲವನ್ನೂ ಸ್ವೀಕರಿಸಬೇಕು. ಸ್ವಾಮಿ ವಿವೇಕಾನಂದರ ಎಷ್ಟೋ ವಿಚಾರಗಳನ್ನು ಓದಿದರೆ ಅವರೊಬ್ಬ ನಾಸ್ತಿಕನೂ ಇರಬಹುದೇನೋ ಎಂಬ ಸಂಶಯವೂ ಬಾರದೆ ಇರದು.

3. ಆಹಾರ

ನಮ್ಮ ಆಹಾರ ಪದ್ದತಿಯ ಬಗ್ಗೆ ವಿವೇಕಾನಂದರು ದೀರ್ಘವಾಗಿ ಮಾತನಾಡಿದ್ದಾರೆ. ನಿನಗಿಷ್ಟವಾದ ಮೀನು-ಮಾಂಸ ತಿನ್ನು. ಈ ದೇಶವೆಲ್ಲ ಒಂದೇ ಬಗೆಯ ತರಕಾರಿಯಲ್ಲಿ ಜೀವಿಸುವ, ಅಜೀರ್ಣದಿಂದ ನರಳುವ ಬಾಬಾಜಿಗಳಿಂದ ತುಂಬಿಹೋಗಿವೆ. ಸತ್ವಗುಣದ ಚಿಹ್ನೆಯೇ ಇಲ್ಲ. ಬರೀ ತಮಸ್ಸು. ನಗುಮುಖ, ಅಭಯೋತ್ಸಾಹ, ತೃಪ್ತಿ, ಉತ್ಕಟ, ಕ್ರಿಯಾಶೀಲತೆ ಇವೆಲ್ಲ ಸತ್ವಗುಣದ ಪರಿಣಾಮ. ಸೋಮಾರಿತನ, ಆಲಸ್ಯ, ಉತ್ಕಟ ಮೋಹ, ನಿದ್ದೆ ಎಲ್ಲವೂ ತಾಮಸ ಚಿಹ್ನೆಗಳು. ನಮಗಿಂದು ಬೇಕಾಗಿರುವುದು ಸತ್ವಗುಣಿಗಳು. ದೇಶದ ಜನರಿಗೆ ಅನ್ನ, ಬಟ್ಟೆ, ಉದ್ಯೋಗ ಬೇಕು. ದೇಶ ಜಾಗೃತಗೊಳ್ಳಬೇಕು, ಚಟುವಟಿಕೆಯಿಂದ ಇರುವಂತೆ ಪ್ರೇರೇಪಿಸಬೇಕು. ಇಲ್ಲದಿದ್ದರೆ ಅವರು ಮತ್ತಷ್ಟು ಜಡವಾಗಿ, ಮರ ಕಲ್ಲುಗಳಂತಾಗುತ್ತಾರೆ, ಆದ್ದರಿಂದ ಹೆಚ್ಚು ಮಾಂಸ, ಮೀಣು ತಿನ್ನಬೇಕೆಂದು ನಾನು ಹೇಳುತ್ತಿದ್ದೇನೆ.

ಪ್ರಾಣಿಗಳನ್ನು ಕೊಲ್ಲುವುದು ಖಂಡಿತವಾಗಿಯೂ ಕೆಟ್ಟದ್ದು. ಆದರೆ ರಸಾಯನಶಾಸ್ತ್ರದ ಅಭಿವೃದ್ಧಿಯೊಂದಿಗೆ ಎಲ್ಲಿಯ ವರೆಗೆ ಸಸ್ಯಾಹಾರ ಮನುಷ್ಯನ ದೇಹದ ಎಲ್ಲ ಅವಶ್ಯಕತೆಗಳನ್ನು ಪೂರೈಸುವುದಿಲ್ಲವೋ ಅಲ್ಲಿಯ ವರೆಗೆ ಮಾಂಸವನ್ನು ತಿನ್ನದೆ ವಿಧಿ ಇಲ್ಲ. ಉತ್ತಮ ಮತ್ತು ಪೌಷ್ಠಿಕಾಂಶದಿಂದ ಕೂಡಿದ ಆಹಾರ ಏನೆಲ್ಲ ಮಾಡಬಲ್ಲದು ಎಂಬುದಕ್ಕೆ ಜಪಾನ್ ದೇಶವೇ ಉದಾಹರಣೆ (7-125) ಹಿಂದೂ ಮತ್ತು ಚೀನಿಯರನ್ನು ನೋಡಿ ಅವರು ದೈಹಿಕವಾಗಿ ಎಷ್ಟೊಂದು ಬಡವಾಗಿದ್ದಾರೆ, ಅವರು ಮಾಂಸ ತಿನ್ನುವುದಿಲ್ಲ.

ಅಕ್ಕಿ ಮತ್ತು ಸಿಕ್ಕಿದ ತರಕಾರಿ ತಿಂದು ಜೀವಿಸುತ್ತಿದ್ದಾರೆ. ಹಿಂದೆ ಜಪಾನಿಯರೂ ಇದೇ ಸ್ಥಿತಿಯಲ್ಲಿದ್ದರು. ಅವರು ಮಾಂಸಹಾರ ಪ್ರಾರಂಭಿಸಿದ ನಂತರ ಆ ದೇಶದ ಚರಿತ್ರೆಯೇ ಬದಲಾಗಿ ಹೋಯಿತು. ಎಲ್ಲಿಯವರೆಗೆ ಸಮಾಜದಲ್ಲಿ ಶಕ್ತಿಶಾಲಿಗೆ ಜಯವೆಂಬುದು ಇರುತ್ತೋ ಅಲ್ಲಿಯ ವರೆಗೆ ಮಾಂಸಾಹಾರಿಗಳಾಗಿರಬೇಕು. ಇಲ್ಲದೆ ಇದ್ದರೆ ದುರ್ಬಲರು ಬಲಾಢ್ಯರ ಪಾದದ ಅಡಿಗೆ ಸಿಕ್ಕಿ ನಾಶವಾಗುತ್ತಾರೆ. ಎಲ್ಲೋ ಕೆಲವರಿಗೆ ಶಾಖಾಹಾರದಿಂದ ಪ್ರಯೋಜನವನ್ನು ಹೇಳಿದರಷ್ಟೇ ಸಾಲದು. ಒಂದು ದೇಶವನ್ನು ಮತ್ತೊಂದು ದೇಶದೊಂದಿಗೆ ಹೋಲಿಸಿ ನಿರ್ಣಯಕ್ಕೆ ಬನ್ನಿ.

4. ಗೋಮಾಂಸ

ಭಾರತದಲ್ಲಿ ಹಿಂದೆ ದನದ ಮಾಂಸ ತಿನ್ನದ ಬ್ರಾಹ್ಮಣ ಬ್ರಾಹ್ಮಣನಾಗಿ ಉಳಿಯುತ್ತಿರಲಿಲ್ಲ. ಸನ್ಯಾಸಿ, ರಾಜ, ಮಹಾತ್ಮರು ಮನೆಗೆ ಬಂದರೆ ಗೌರವಾರ್ಥವಾಗಿ ಅತ್ಯುತ್ತಮ ಗೂಳಿಯನ್ನು ಕೊಂದು ಅಡಿಗೆ ಮಾಡುತ್ತಿದ್ದರು. ಎಂದು ವೇದದಲ್ಲಿದೆ. ನಮ್ಮದು ಕೃಷಿಪ್ರಧಾನ ದೇಶ. ಅತ್ಯುತ್ತಮ ಎತ್ತುಗಳನ್ನು ಕೊಂದರೆ ಕಾಲಕ್ರಮೇಣ ದನದ ಜಾತಿಯೇನಾಶವಾಗುವುದೆಂದು ತಿಳಿದು, ಗೋಹತ್ಯೆ ಮಹಾಪಾಪವೆಂದು ನಿರ್ಬಂಧ ಹೇರಲಾಯಿತು.

ಈಗ ನಾನು ಕೇವಲ ಮಾಂಸವನ್ನು ಮಾತ್ರ ತಿಂದು ಜೀವಿಸುತ್ತಿದ್ದೇನೆ ಎಂದು 1897ರ ಏಪ್ರಿಲ್ 28ರಂದು ವಿವೇಕಾನಂದರು ಶ್ರೀಮತಿ ಹೆಲ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದರು.ನಮ್ಮ ದೇಶದ ಜನರಿಗೆ ಸತ್ಯವಾದ ಧರ್ಮವನ್ನು ಅನುಸರಿಸಿ ಸಾಧನೆ ಮಾಡುವಷ್ಟು ಶಕ್ತಿಯಾದರೂ ಉಳಿದಿದೆಯೇ? ತಾವು ಸಾತ್ವಿಕರೆಂದು ತಮ್ಮಲ್ಲಿ ತಾವೇ ಹೆಮ್ಮೆ ಪಡುವುದೊಂದೇ ಅವರಿಗಿರುವುದು.

ಯಾವ ಮನುಷ್ಯ ಕೊಂಚವೂ ಶ್ರಮಪಡದೆ ಕೇವಲ ಹರಿನಾಮವನ್ನು ಜಪಿಸುತ್ತಾ ಕೊಠಡಿಯ ಬಾಗಿಲು ಮುಚ್ಚಿಕೊಂಡು ಕುಳಿತಿರುವನೋ, ಯಾರು ಸ್ವತ: ತನ್ನ ಕಣ್ಣುಗಳೆದರೇ ಇತರರಿಗೆ ಆಗುತ್ತಿರುವ ಅನ್ಯಾಯ-ಅತ್ಯಾಚಾರಗಳನ್ನು ನೋಡಿಯೂ ಮೌನವಾಗಿ ಉದಾಸೀನದಿಂದ ಇರುವನೋ, ಅಂತಹ ಸಾತ್ವಿಕ ಮನುಷ್ಯನಿಂದ ಏನು ಪ್ರಯೋಜನ?

ಒಂದು ದೇಶದ ಜನರಿಗೆ ತಮ್ಮ ಹಸಿವನ್ನು ಹಿಂಗಿಸಲು ಸಾಕಷ್ಟು ಆಹಾರ ಇಲ್ಲದೆ ಇದ್ದಾಗ ಹೇಗೆ ತಾನೆ ಧರ್ಮದಲ್ಲಿ ಸಾಧನೆ ಮಾಡಬಲ್ಲರು? ಭೋಗದ ಆಸೆ ಆಕಾಂಕ್ಷೆ ತುಂಬಿದ ಮನಸ್ಸಿಗೆ ಕೊಂಚವೂ ತೃಪ್ತಿ ಸಿಗದೆ ಇರುವಾಗ ಆ ದೇಶದ ಜನರಿಗೆ ತ್ಯಾಗಬುದ್ದಿ ಹೇಗೆ ತಾನೆ ಬರಲು ಸಾಧ್ಯ?

5. ರಾಜಕೀಯ

ಧರ್ಮವನ್ನು, ಧಾರ್ಮಿಕ ಸಂಕೇತಗಳನ್ನು, ಧಾರ್ಮಿಕ ಪುರುಷರನ್ನು ರಾಜಕೀಯವಾಗಿ ಬಳಸುವುದು ಹೊಸತೇನಲ್ಲ. ಇತಿಹಾಸ ಪುರುಷರು, ಧಾರ್ಮಿಕ ನಾಯಕರು ಮತ್ತು ಸಮಾಜ ಸುಧಾರಕರನ್ನು ಎಲ್ಲ ರಾಜಕೀಯ ಪಕ್ಷಗಳು ಬಳಸುತ್ತಾ ಬಂದಿವೆ. ರಾಜಕೀಯ ಚರ್ಚೆ, ಹೋರಾಟಗಳಲ್ಲಿ ಇವರ ವಿಚಾರಗಳು ಬಳಕೆಯಾಗಿವೆ. ಗಾಂಧೀಜಿ, ಅಂಬೇಡ್ಕರ್, ಜ್ಯೋತಿಬಾ ಪುಲೆ, ಪೆರಿಯಾರ್ ಮಾತ್ರವಲ್ಲ, ಬುದ್ಧ, ಬಸವಣ್ಣನವರನ್ನು ರಾಜಕಾರಣಿಗಳು ಬಿಟ್ಟಿಲ್ಲ. ಎಡಪಕ್ಷಗಳು ಕೂಡಾ ಈಶ್ವರ ಚಂದ್ರ ವಿದ್ಯಾಸಾಗರ ಮತ್ತು ಠ್ಯಾಗೋರ್ ಅವರನ್ನು ಚುನಾವಣಾ ಭಿತ್ತಿಪತ್ರಗಳಲ್ಲಿ ಬಳಸಿಕೊಂಡಿವೆ.

ಆದರೆ ಬಳಕೆಮಾಡಿಕೊಳ್ಳಬಹುದು, ಆದರೆ ದುರ್ಬಳಕೆ ಆಗಬಾರದು. ವಿವೇಕಾನಂದರ ವಿಚಾರಗಳನ್ನು ಓದಿದರೆ ಅವರು ಕೇವಲ ಧಾರ್ಮಿಕ ನಾಯಕರೆಂದು ಅನಿಸುವುದಿಲ್ಲ. ರೋಮ್ಯಾನ್ ರೊಲಂಡ್ ಸೇರಿದಂತೆ ವಿವೇಕಾನಂದರ ಬಗ್ಗೆ ಬರೆದವರೆಲ್ಲರೂ ಅವರ ಚಿಂತನೆಗಳನ್ನು ಧಾರ್ಮಿಕ, ಆಧ್ಯಾತ್ಮಿಕ ದುರ್ಬೀನ್ ಗಳಲ್ಲಿಯೇ ನೋಡಿದ್ದಾರೆ. ಆದರೆ ಅವರು ಧರ್ಮವನ್ನು ಸಾಧನವನ್ನಾಗಿ ಬಳಸಿಕೊಂಡು ರಾಜಕೀಯ ಹೋರಾಟ ಮಾಡಿರುವುದನ್ನು ಯಾರೂ ಗುರುತಿಸುವುದಿಲ್ಲ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಭಾರತದ ಜನಸಂಖ್ಯೆ ವರವೋ..? ಶಾಪವೋ..?

Published

on

ಸಾಂದರ್ಭಿಕ ಚಿತ್ರ

 

  • ಅಂಬಿಕಾ. ಕೆ
    ಎಂ.ಎ. ಪ್ರಥಮ ವರ್ಷದ ವಿದ್ಯಾರ್ಥಿನಿ
    ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
    ಬೆಂಗಳೂರು ವಿಶ್ವವಿದ್ಯಾಲಯ

 

ವಿಶ್ವ ಸಂಸ್ಥೆಯು ಪಾಪುಲೇಷನ್ ಫಂಡ್ ಮಾಡಿರುವ ಅಂದಾಜಿನ ಪ್ರಕಾರ ಭಾರತವು ಜಗತ್ತಿನ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಎನಿಸಿಕೊಂಡಿದೆ.

ದೇಶದ ಒಟ್ಟು ಜನಸಂಖ್ಯೆಯು 142.86 ಕೋಟಿಗೆ ಏರಿಕೆಯಾಗಿದ್ದು, ಚೀನಾ ಎರಡನೇ ಸ್ಥಾನಕ್ಕೆ ಇಳಿದಿದೆ, ಇಂತಹದೊಂದು ಹಿರಿಮೆಗೆ ಭಾರತವು ಪಾತ್ರವಾಗಲಿದೆ ಎಂಬುದರ ಅರಿವು ಹಿಂದೆಯೇ ಇತ್ತು. ಹೊಸ ಭಾರತದ ಜನಸಂಖ್ಯೆಯ ಸ್ವರೂಪವೇನು ಮತ್ತು ಯಾವ ವಯೋ ಮಾನದವರು ಎಷ್ಟಿದ್ದಾರೆ. ಆದಾಯ ಮಟ್ಟ ಹೇಗಿದೆ, ಆದಾಯ ಹಂಚಿಕೆ ಹೇಗಿದೆ ಎಂಬುದರ ಕುರಿತು ಕೂಡ ಚರ್ಚೆಗಳು ನಡೆಯುತ್ತಿವೆ. ಒಟ್ಟು ಜನಸಂಖ್ಯೆಯ ಜತೆಗೆ ಈ ಎಲ್ಲಾ ಅಂಶಗಳು ಕೂಡ ಸರ್ಕಾರದ ನೀತಿಗಳು ಮತ್ತು ಕಾರ್ಯಕ್ರಮ ರೂಪಿಸುವಿಕೆ ಮೇಲೆ ಪ್ರಭಾವ ಬೀರುತ್ತವೆ. ರಾಜಕೀಯ ಪಕ್ಷಗಳು ಮತ್ತು ಗುಂಪುಗಳು ರಾಜಕೀಯ ಹಾಗೂ ಸಾಮಾಜಿಕ ಸ್ಥಾನಗಳನ್ನು ನಿರ್ಧರಿಸುವಲ್ಲಿಯೂ ಈ ಅಂಶಗಳು ಪಾತ್ರವಹಿಸುತ್ತವೆ ಭಾರತದಲ್ಲಿ ಗರಿಷ್ಠ ಸಂಖ್ಯೆಯು ಯುವ ಜನರಿದ್ದಾರೆ.

ಹಾಗೆಯೇ ಮುಂದುವರೆಯಲಿದೆ 15 ರಿಂದ 24 ವರ್ಷದೊಳಗಿನವರ ಸಂಖ್ಯೆಯು 25.4 ಕೋಟಿ ಎಂದು ಅಂದಾಜಿಸಲಾಗಿದೆ ಇನ್ನು ದೀರ್ಘಕಾಲ ಭಾರತವು ಈ ಸ್ಥಿತಿ ಕಾಯ್ದುಕೊಳ್ಳಲಿದೆ ಎಂಬುದರಲ್ಲಿಯೂ ಅನುಮಾನ ಇಲ್ಲ ಜನಸಂಖ್ಯೆಯಲ್ಲಿ ಜಗತ್ತಿನಲ್ಲಿ ಮೊದಲ ಸ್ಥಾನಕ್ಕೆ ಏರುವುದು, ಗೌರವ ಏನು ಅಲ್ಲ ಬದಲಿಗೆ ಇದು ದೇಶಕ್ಕೆ ಹಲವು ಸವಾಲುಗಳನ್ನು ಹುಟ್ಟುತ್ತದೆ ಜತೆಗೆ ಅವಕಾಶಗಳ ಬಾಗಿಗಳನ್ನು ತೆರೆಯುತ್ತದೆ ಆದರೆ, ಜನರನ್ನು ಸಕಾಲಿಕವಾಗಿ ಮತ್ತು ಪರಿಣಾಮಕಾರಿಯಾಗಿ ಬಲಿಸಿಕೊಳ್ಳದೆ ಇದ್ದರೆ ಜನಸಂಖ್ಯೆಯೇ ಶಾಪವಾಗಿ ದೊಡ್ಡ ಸವಾಲಾಗಿ ಪರಿಣಮಿಸಬಹುದು. ದೇಶ ಪ್ರತಿ ವರ್ಷವೂ ಹೆಚ್ಚು ಹೆಚ್ಚು ಜನರಿಗೆ ಆಹಾರ ಬಟ್ಟೆ ಶಿಕ್ಷಣ ಆರೋಗ್ಯ ಸೇವೆ ಉದ್ಯೋಗಾವಕಾಶಗಳನ್ನು ಒದಗಿಸಬೇಕಾಗುತ್ತದೆ.

ಅಂಬಿಕಾ. ಕೆ

ಹೀಗೆ ಮುಂದುವರೆದರೆ ಉದ್ಯೋಗಾವಕಾಶಗಳು ದೊರೆಯದೆ ಜನರ ಜೀವನ ಮಟ್ಟ ಸುಧಾರಿಸಿಕೊಳ್ಳುವುದು ಕಷ್ಟವೇ ಸರಿ ಕೆಲಸ ಮಾಡುವ ವಯೋಮಾನದ ಜನರನ್ನು ಸಮಂಜಸವಾಗಿ ಬಳಸಿಕೊಂಡರೇ ಮಾತ್ರ ಜನಸಂಖ್ಯೆಯು ದೇಶದ ಅಭಿವೃದ್ಧಿಗೆ ಪೂರಕವಾಗಿ ಪರಿಣಮಿಸುತ್ತದೆ. ದೇಶದಲ್ಲಿ ದೊಡ್ಡ ಸಂಖ್ಯೆಯ ಜನರಿಗೆ ಈಗಲೂ ಮೂಲ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗಿಲ್ಲ ಆದ್ದರಿಂದ ಎಲ್ಲಾ ಕ್ಷೇತ್ರಗಳಲ್ಲಿಯೂ ಸಂಬಂಧಿಸಿದ ನೀತಿಗಳು ಮತ್ತು ಕಾರ್ಯತಂತ್ರ ಗಳಿಗೆ ಸಂಬಂಧಿಸಿದ ಪ್ರಯತ್ನಗಳನ್ನು ನಡೆಸದೇ ಇದ್ದರೆ ಜನಸಂಖ್ಯೆ ಹೆಚ್ಚಳದ ಲಾಭವು ದೊರೆಯದೆ ಹೋಗಬಹುದು ಇದರ ಪರಿಣಾಮವಾಗಿ ಲಾಭದ ಹೆಸರಿನಲ್ಲಿ ನಷ್ಟವೇ ಹೆಚ್ಚು ಅದುವೇ ಒಂದು ಹೊರೆಯುವಾಗಬಹುದು.

ಯುವ ಜನರಿಗೆ ಸೌಲಭ್ಯಗಳು ಮತ್ತು ಅವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ಹೆಚ್ಚುತ್ತಲೇ ಇರುವ ಹಿರಿಯ ನಾಗರಿಕರ ಹಾರೈಕೆಯು ವ್ಯವಸ್ಥೆ ಮಾಡಬೇಕಿದೆ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುವುದು ಮತ್ತು ಸವಾಲುಗಳನ್ನು ಎದುರಿಸುವುದು ಭಾರತೀಯರ ಹೊರೆಗಾರಿಕೆ ದೇಶದ ಜನರ ಅಗತ್ಯಗಳನ್ನು ಪೂರೈಸಲು ವಿಫಲವಾದರೆ, ಸಾಮಾಜಿಕ ಸಂಘರ್ಷ ಮತ್ತು ರಾಜಕೀಯ ದೃಷ್ಟಿ ಉಂಟಾಗಿ ಅದು ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು. ಮುಂದೆ ಜನಸಂಖ್ಯಾ ಸ್ಫೋಟವಾದರೂ ಆಶ್ಚರ್ಯ ಪಡಬೇಕಾಗಿಲ್ಲ ಈಗಿನ ಸನ್ನಿವೇಶದಲ್ಲಿ ದೊರಕುತ್ತಿರುವ ಸಂಪನ್ಮೂಲಗಳ ಗರಿಷ್ಠ ಬಳಕೆ ಮತ್ತು ಪರಿಣಾಮಕಾರಿ ಬಳಕೆ ಬಹಳ ಮಹತ್ವವಾಗಿದೆ.

ಮೀಸಲಾತಿ, ವಲಸೆ , ರಾಜಕೀಯ ಪ್ರಾತಿನಿಧ್ಯ ಸಂಪನ್ಮೂಲಗಳ ಹಂಚಿಕೆ ಮತ್ತು ಇದರ ವಿಚಾರಗಳು ಚರ್ಚೆಗೆ ಒಳಗಾಗುವ ಸಾಧ್ಯತೆ ಇದೆ ಸಮಾಜದ ಎಲ್ಲಾ ವರ್ಗಗಳನ್ನು ಸಮಾನವಾಗಿ ಒಳಗೊಳ್ಳುವ ಆರ್ಥಿಕ ಪ್ರಗತಿಯು ಸಾಧ್ಯವಾದರೆ ಜನಸಂಖ್ಯೆ ಏರಿಕೆ ಸವಾಲಾಗಿ ಪರಿಣಮಿಸಬಹುದು ಮಾನವ ಅಭಿವೃದ್ಧಿಯೇ ಅತ್ಯುತ್ತಮ ಕುಟುಂಬ ಕಲ್ಯಾಣ ಯೋಜನೆ ಇದರಿಂದ ಜನಸಂಖ್ಯೆಯ ಏರಿಕೆಯನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬಹುದು ಜನಸಂಖ್ಯೆ ಹೆಚ್ಚಳ ಯಾವುದೋ ಒಂದು ಸಮುದಾಯ ಕಾರಣ ಎಂದು ದೂಷಿಸುವ ಪ್ರವೃತ್ತಿಗೆ ಜ್ಞಾನದಾದ ಆಧಾರ ಇಲ್ಲದ ಪೂರ್ವಗ್ರಹ ಕಾರಣದಿಂದ ಮತ್ತು ಇದು ತಪ್ಪು ನಡವಳಿಕೆಯ ಜನಸಂಖ್ಯೆಗೆ ಸಂಬಂಧಿಸಿದ ಸವಾಲುಗಳನ್ನು ಉತ್ತಮವಾಗಿ ಮತ್ತು ಜಾಣ್ಮೆಯಿಂದ ನಿರ್ವಹಿಸಿದರೆ ಈ ಶತಮಾನವನ್ನು ಭಾರತದ ಶತಮಾನವನ್ನಾಗಿ ಪರಿವರ್ತಿಸುವ ಅವಕಾಶ ನಮ್ಮ ಮುಂದೆ ಇದೆ ಜನರೇ ನಮ್ಮ ದೇಶದ ಸಂಪನ್ಮೂಲವನ್ನಾಗಿ ಮಾರ್ಪಾಡು ಮಾಡಿಕೊಳ್ಳುವ ಅವಕಾಶ ನಮ್ಮ ನಿಮ್ಮೆಲ್ಲರ ಮೇಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬಾಬಾ ಸಾಹೇಬ ಅಂಬೇಡ್ಕರರ ‘ಧ್ಯಾನ’ ಗಾಯನ ; ವಿನೂತನ

Published

on

 

  • ವೆನ್ನೆಲಾ ಕೆ.
    ಎಂ.ಎ. ಪ್ರಥಮ ವರ್ಷದ ವಿದ್ಯಾರ್ಥಿನಿ,
    ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,
    ಬೆಂಗಳೂರು ವಿಶ್ವವಿದ್ಯಾಲಯ,ಬೆಂಗಳೂರು

ತ್ತೀಚೆಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಅನನ್ಯ ಮಾಧ್ಯಮ ಮತ್ತು ಬೆಳ್ಳಿತೆರೆ ಸಂಸ್ಥೆಯ ವತಿಯಿಂದ ಆಯೋಜಿಸಿದ 132ನೇ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರ ಜನುಮ ನಿಮಿತ್ತವಾಗಿ “ಧಾನ್ಯ” ‘ಗಾಯನವು’ ವಿನೂತನವಾದ ಈ ಕಾರ್ಯಕ್ರಮವು 5 ಘಂಟೆ, 1ನಿಮಿಷ, 14 ಸೆಕೆಂಡ್ ಗೆ ಆರಂಭವಾಗಿದ್ದು ಅವಿಸ್ಮರಣೀಯವಾದ ದಿನ, ಇದೊಂದು ಭಾರತ ಇತಿಹಾಸದ ಪುಟದ ಚರಿತ್ರೆಯಲ್ಲೇ ಹೊಸ ದಾಖಲೆಯೂ ಅಂತ ಹೇಳಬಹುದು.

ಈ ಕಾರ್ಯಕ್ರಮವನ್ನು ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ವು ಇಡೀ ಭಾರತದಲ್ಲೇ ಯಾರು ಮಾಡಿರದ ಈ ವಿನೂತವಾದ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಬೆಂಗಳೂರು ನಗರದಲ್ಲಿರುವ ಗಾಂಧಿ ಭವನದ ಆವರಣದಲ್ಲಿ ‘ಅನನ್ಯ ಸಂಸ್ಥೆ’ ವತಿಯಿಂದ 132 ನೇ ‘ವಿಶ್ವದ ವೀರ ವಿದ್ಯಾರ್ಥಿ ಹುಟ್ಟಿದ ದಿನ’ ಹಾಗೂ ‘ರಾಷ್ಟ್ರದ ಸ್ಫೂರ್ತಿಯ ದಿನ’ ‘ಸರ್ವ ಸಮುದಾಯದ ಶಕ್ತಿಯ ದಿನ’ ಇದೊಂದು ನಮ್ಮೆಲ್ಲರ ಹಬ್ಬದ ದಿನ ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಇಂತಹ ಮೇರು ಶಿಖರ ಟ್ಯಾಗ್ ಲೈನ್ ಗಳಿಂದ ಅದ್ಭುತವಾಗಿ
ಆಯೋಜಿಸಿದ ಕಾರ್ಯಕ್ರಮಕ್ಕೆ ರಾಜ್ಯ ಕಂಡ ಪ್ರಸಿದ್ಧ ಐಪಿಎಸ್ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು, ಸಿನಿಮಾ ಸೆಲೆಬ್ರಿಟಿಗಳು, ಸಮಸ್ತ ವಿದ್ಯಾರ್ಥಿ ಸಮೂಹ, ಸಾಮಾಜಿಕ ನ್ಯಾಯದ ವಿಚಾರಶೀಲರು, ಬರಹಗಾರರು, ಪತ್ರಕರ್ತರು ಇನ್ನೂ ಅನೇಕ ಮುಂತಾದವರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಇದಕ್ಕೆ ಮುಖ್ಯ ಕಾರಣಕರ್ತರಾದ ಅನನ್ಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶ್ರೀ ರಾಂಪುರ ರಾಜೇಶ್ ರವರ ನಿರ್ದೇಶನದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿದ್ದು ಹೆಮ್ಮೆಯ ವಿಷಯ.

ಇದರ ಹಿನ್ನೆಲೆ: ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ದಲ್ಲಿ ಅತ್ಯುತ್ತಮ ಹಾಗೂ ಅತ್ಯಂತ ತುಂಬಾ ಮನಸ್ಸಿನಿಂದಲ್ಲೇ ವಿಶೇಷವಾದ ಆಸಕ್ತಿಯನ್ನು ಅಂಬೇಡ್ಕರ್ ರವರು ಸಂಗೀತ ಪ್ರಿಯರು ಹಾಗೂ ಅಂಬೇಡ್ಕರ್ ರವರು ಸುಶ್ರಾವ್ಯವಾಗಿ ವಯಲಿನ್ ನುಡಿಸುತ್ತಿದ್ದರು. ಹಾಗೇಯೆ ಇವರಿಗೆ ಚಿತ್ರಕಲೆಯೂ ಸಹ ಒಲಿದಿತ್ತು ಎಂಬುದು ಗಮನಾರ್ಹ ಸಂಗತಿ. ಇಂತಹ ವಿಷಯವನ್ನು ಯಾರು ಸಹ ಬೆಳಕು ಚೆಲ್ಲುವ ಸಾಹಸಕ್ಕೆ ಕೈ ಹಾಕಿ ಇರಲಿಲ್ಲ. ಇದೊಂದು ಅನನ್ಯ ಸಂಸ್ಥೆ ವತಿಯಿಂದ ಇಂತಹ ಕಾರ್ಯಕ್ರಮ ನಡೆಸಿಕೊಟ್ಟಿದ್ದು ಐತಿಹಾಸಿಕ ಚರಿತ್ರೆಗೆ ಮುನ್ನುಡಿವಾಗಿದೆ.

ಅಂಬೇಡ್ಕರ್ ರವರಿಗೆ ತಮ್ಮ ಬಿಡುವಿನ ವೇಳೆಯಲ್ಲಿ ಅದ್ಭುತವಾದ ಒಬ್ಬ ಸಂಗೀತ ಪ್ರಿಯರಾಗಿದ್ದರು. ಇವರು ಸುಶ್ರಾವ್ಯವಾಗಿ ವಯಲಿನ್ ನುಡಿಸುತ್ತಿದ್ದರು ಹಾಗೂ ವಿಶೇಷವಾಗಿ ಚಿತ್ರಕಲೆ ಸಹ ಸರಳವಾಗಿ ಮಾಡುವ ಮೂಲಕ ತಮ್ಮ ಮನದಲ್ಲಿ ಆಸಕ್ತಿ ಹೊಂದಿದ್ದರು. ಇನ್ನು ಹಲವಾರು ವಿಷಯದಲ್ಲಿ ಅಂದರೆ ಅಂಬೇಡ್ಕರ್ ರವರಿಗೆ ವಿಶೇಷವಾದ ಇವುಗಳಲ್ಲಿ ಆಸಕ್ತಿ ಮತ್ತು ಅಭಿರುಚಿಯನ್ನು ಹೊಂದಿದ್ದರು ಎಂಬುದನ್ನು ಮನಗಂಡ ಅನನ್ಯ ಸಂಸ್ಥೆಯ ವತಿಯಿಂದ ಆಯೋಜಿಸಿದ ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮವು ಅತ್ಯುತ್ತಮವಾಗಿ ಮೂಡಿಬಂದಿದೆ.

ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮದಲ್ಲಿ ವಿಶೇಷವಾಗಿ ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕರು ಹಾಗೂ ಚಿತ್ರ ಸಾಹಿತ್ಯಗಳು, ಅಂಬೇಡ್ಕರ್ ವಾದಿಗಳು ಮತ್ತು ಚಿತ್ರರಂಗದ ಬಹುಮುಖ ಪ್ರತಿಭೆ, ಮಹಾಗುರುಗಳಾದ ಡಾ. ಹಂಸಲೇಖ ರವರು ಹೊಸದಾಗಿ ಹಾಡನ್ನು ಬರೆದದ್ದು ತುಂಬಾ ಅವಿಸ್ಮರಣೀಯ ಅಂತ ಹೇಳಬಹುದು. ಇವರು ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪ್ರೊತ್ಸಾಹ ನೀಡಿದ್ದು, ಸರ್ವ ಸಮುದಾಯದಕ್ಕೆ ಹೊಸ ಶಕ್ತಿ ತುಂಬಿದ್ದು ಮೇರು ವ್ಯಕ್ತಿಯಾಗಿದ್ದಾರೆ.

ವೆನ್ನೆಲಾ ಕೆ.

ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮದಲ್ಲಿ ಮುಖ್ಯವಾದ ಅಂಶವೆಂದರೆ ಇದರಲ್ಲಿ ಒಟ್ಟು ನಾಲ್ಕು ಭಗವಾನ್ ಬುದ್ಧ, ಅಂಬೇಡ್ಕರ್, ಬಸವೇಶ್ವರ ಮುಂತಾದರವರನ್ನು ವಿಷಯಗಳನ್ನು ಪರಿಗಣಿಸಿ ಅಂಬೇಡ್ಕರ್ ಧ್ಯಾನ ಹಾಡುಗಳ ರಚಿಸಿವುದರಲ್ಲಿ ಪ್ರಮುಖವಾಗಿ ರಾಜ್ಯದ ಹೆಸರಾಂತ ಸಾಹಿತಿ, ಪ್ರಗತಿಪರ ಚಿಂತಕರು ಹಾಗೂ ಮಾಜಿ ಅಧ್ಯಕ್ಷರಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರಿನ ಪ್ರೊ.ಎಸ್.ಜಿ.ಸಿದ್ದರಾಮಯ್ಯನವರ
‘ಧೀ ಶಕ್ತಿಯೇ … ಜ್ಞಾನ ಪರ್ವತದ … ಧೀಮಂತ ಧೀಶಕ್ತಿಯೇ …
ಇಂತಹ ಸಾಲುಗಳನ್ನು, ಡಾ. ಕೈ.ವೈ.ನಾರಾಯಣಸ್ವಾಮಿರವರ ದೀಪಾ …. ಎಲ್ಲರೆದೆಯಲಿ … ಹಚ್ಚಿದ ದೀಪಾ .. ಭೂಪಾ … ಭೂಪಾ … ಭೀಮಾ ಭೂಪಾ .. ಬಾಬಾ .. ಸಾಹೇಬ್.. ಜೀವಸ್ವರವೇ … ಬಾಬಾ.. ಹಾಗೂ ರವಿ ಮರಿಯಪ್ಪರವರ ಹತ್ತು ಸಾವಿರ ವಯಲಿನನ್ನು … ವೀಣೆಗಳು ನೂರೆಂಟು … ಕೋಟಿ ಕೋಟಿ ಎದೆ ಸದ್ದಿನ ಡೊಳ್ಳು … ಸಂಯೋಜಿಸಿದರೇ .. ಸಂವಿಧಾನಾ … ಮತ್ತು ಚಿತ್ರ ಸಾಹಿತಿ, ಹೆಸರಾಂತ ಸಂಗೀತ ನಿರ್ದೇಶಕರು ಡಾ. ಹಂಸಲೇಖ ರವರು ನಿನ್ನ ಮೌನಾ … ದೀನ ಗಾನಾ… ನಿನ್ನ ಧ್ಯಾನಾ .. ಸಂವಿಧಾನಾ … ಈ ನಾಲ್ಕು ಅಂಬೇಡ್ಕರ್ ಧ್ಯಾನ ರಚನೆಗೆ ಇವರುಗಳ ಬರೆದಿರುವ ಅದ್ಭುತವಾದ ಅಂಬೇಡ್ಕರ್ ರವರ ಧ್ಯಾನ ಹಾಡುಗಳನ್ನು ನಮ್ಮ ಹಿಂದುಸ್ತಾನಿ ಸಂಗೀತ ಹಾಡುಗಳ ಮೂಲಕ ಕನ್ವರ್ಟ್ ಮಾಡುವ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿತು.

ಹಾಗೆಯೇ ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮವು ಬಹಳಷ್ಟು ಯಶಸ್ವಿಯಾಗಬೇಕಾದರೆ ಈ ಮೊದಲು ಪುಟ್ಟರಾಜ ಗವಾಯಿಗಳ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ಶ್ರೀ ಡಿ. ಕುಮಾರ್ ದಾಸ್ ಅವರ ವಿದ್ವತ್ ಶರೀರದಲ್ಲಿ ‘ಧ್ಯಾನ ಗಾಯನ’ ಹಾಗೂ ಇವರ ತಂಡದ ವತಿಯಿಂದ ನಡೆಸಿಕೊಟ್ಟ ಅದ್ಭತವಾದ ಅಂಬೇಡ್ಕರ್ ರವರ ಧ್ಯಾನವು ಹಿಂದುಸ್ತಾನಿ ಸಂಗೀತದ ಕನ್ವರ್ಟ್ ಮಾಡುವ ಮುಖಾಂತರ ಈ ಹಾಡುಗಳನ್ನು ಬಹಳ ಸೊಗಸಾಗಿ ಮೂಡಿಬಂದಿದ್ದು ಹೊಸ ದಾಖಲೆಗೆ ಸೇರ್ಪಡೆಯಾಗಿದೆ.

ಇನ್ನು ಮುಂಬರುವ ದಿನಗಳಲ್ಲಿ ಅದಷ್ಟು ಹಲವಾರು ವಿನೂತನವಾದ ಭಗವಾನ್ ಬುದ್ಧರ, ಬಸವೇಶ್ವರರ ಹಾಗೂ ವಿಶ್ವದ ವೀರ ವಿದ್ಯಾರ್ಥಿಯಾದ ಮೇರು ರಾಷ್ಟ್ರದ
ನಾಯಕರಾದ ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ರವರ ಹಲವಾರು ಹಾಡುಗಳನ್ನು
ಅನನ್ಯ ಮಾಧ್ಯಮ ಮತ್ತು ಬೆಳ್ಳಿತೆರೆ ಸಂಸ್ಥೆಯ ವತಿಯಿಂದ ಆಯೋಜಿಸಿದರೆ ಇನ್ನುಷ್ಟು ಭಾರತದ ಇತಿಹಾಸದ ಪುಟಗಳಲ್ಲಿ ಮರೆತು ಹೋಗಿರುವ ಹಲವು ಬಗ್ಗೆ ದಾಖಲೆ ಇಲ್ಲದ ನೈಜ ಸಂಗತಿಗಳನ್ನು ಪುನಃ ಹೊಸ ದಾಖಲೆಗೆ ಉಪಯುಕ್ತವಾದ ವಿಶಿಷ್ಟವಾದ ಮೇರು ನಾಯಕನ
ಅಂಬೇಡ್ಕರ್ ರವರ ವಿಚಾರ ಧಾರೆಗಳು ತಾವು ಅನುಭವಿಸಿದ ನೋವು, ನಲಿವು, ಭಾರತದ ರಾಜ್ಯಾಂಗದ ಶಿಲ್ಪಿಯನ್ನು ಮುಂಬರುವ ದಿನಗಳಲ್ಲಿ ಹೊಸ ಪೀಳಿಗೆಯ ಪರಿಚಯಿಸುವ ಕೀರ್ತಿದಾಯಿಕವಾಗಲಿ ಮತ್ತು ಅದಷ್ಟು ಮುಂಬರುವ ದಿನಗಳಲ್ಲಿ ಅಂಬೇಡ್ಕರ್ ರವರ ಆಸಕ್ತಿದಾಯಕ ವಿಚಾರಗಳು ಹಾಗೂ ಸಂಗೀತದ ಬಗ್ಗೆ ಹಲವಾರು ಮಾಹಿತಿಗಳು ಸಮಸಮಸಮಾಜಕ್ಕೆ ತಲುಪುವ ವ್ಯವಸ್ಥೆಗೆ ಸಾಕ್ಷಿಯಾಗಲಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ರಷ್ಯಾದಲ್ಲಿ ಓಂ – ಭರತಾಸ್- ರಾಮ – ರಾವಣ ಲಂಕೇಶ – ಮಾರೀಚ – ಸೀತ ನದಿಗಳು..!

Published

on

  • ಲಕ್ಷ್ಮೀಪತಿ ಕೋಲಾರ, ಸಂಶೋಧಕರು, ಸಂಸ್ಕೃತಿ‌ ಚಿಂತಕರು, ಬೆಂಗಳೂರು

ಸ್ಲಾವ್ ಸಮುದಾಯದ ಲಿತುವೇನಿಯ, ಲಾತ್ವಿಯ, ಬೆಲಾರಸ್,ಉಕ್ರೇನ್ ಮತ್ತು ರಷಿಯಾದಂತಹ ದೇಶಗಳ ನದಿ,ನಗರಗಳು ಸಂಸ್ಕೃತ ಮೂಲದ ಹೆಸರುಗಳನ್ನೆ ಇಂದಿಗು ಉಳಿಸಿಕೊಂಡಿರುವುದು ಆ ಭಾಷೆ ಮತ್ತು ಸಂಬಂಧಿತ ಸಂಸ್ಕೃತಿಯೊಂದಿಗೆ ಅವು ಹಿಂದೊಮ್ಮೆ ಹೊಂದಿದ್ದ ಬಲವಾದ ನಂಟಿಗೆ ಸಾಕ್ಷಿಯಾಗಬಲ್ಲವು.

ಇದರೊಂದಿಗೆ ಉತ್ತರ ಭಾರತದ ಆರ್ಯ ವೈದಿಕರ ಭಾಷೆ ಸಂಸ್ಕೃತಿಯೊಂದಿಗೆ ಸ್ಲಾವ್ ಸಮುದಾಯಕ್ಕೆ ಎಷ್ಟು ನಿಕಟ ಸಂಬಂಧವಿತ್ತೆಂಬುದನ್ನು ಮತ್ತು ನಾಲ್ಕೈದು ಸಾವಿರ ವರ್ಷಗಳ ಹಿಂದೆ ಈ ಎಲ್ಲ ಆರ್ಯ ಸಮುದಾಯಗಳು ಒಟ್ಟಿಗೆ ಒಂದೆಡೆಯೇ ಕಳ್ಳುಬಳ್ಳಿಗಳಾಗಿ ಜೀವಿಸಿದ್ದರೆಂಬುದನ್ನ ಈ ಹಿನ್ನೆಲೆಯಲ್ಲಿ ನಾವು ಗ್ರಹಿಸಬಹುದಾಗಿದೆ.

ಅದರಲ್ಲು ವಿಶೇಷವಾಗಿ ಲಿತುವೇನಿಯ ಮತ್ತು ರಷಿಯಾದ ನದಿಗಳ ಹೆಸರುಗಳು ಎಷ್ಟು ಸಂಸ್ಕೃತಮಯವು (ಇಂಡೋ – ಯುರೋಪಿಯನ್ ಭಾಷಾಮೂಲದ) ಮತ್ತು ವೈದಿಕರ ಪುರಾಣ ಮೂಲದವು ಆಗಿವೆ ಎಂದರೆ, ನಂಬಲಿಕ್ಕು ಅಸಾಧ್ಯ ಎಂಬಂತಿವೆ. ಇದರರ್ಥ ಸ್ಲಾವ್ ಜನರು ವೈದಿಕರ ಪುರಾಣಗಳಿಂದ ಪ್ರೇರಿತಗೊಂಡಿದ್ದಾರೆ ಎಂಬುದಲ್ಲ.

ಬದಲಿಗೆ ವೈದಿಕರ ಇಂದಿನ ಪುರಾಣ – ಸಂಸ್ಕೃತಿ – ಭಾಷೆಗಳು ವೈದಿಕರಿಗೆ ಎಷ್ಟು ಸಂಬಂಧಿಸಿದ್ದೋ ಅದಕ್ಕು ಹೆಚ್ಚಿನದಾಗಿ ಸ್ಲಾವ್ ಸಮುದಾಯಕ್ಕೂ ಸಂಬಂಧಿಸಿದ್ದಾಗಿದ್ದವು. ಹಾಗೆ ನೋಡಿದರೆ ಬ್ರಹ್ಮ – ವೇದ ಮೂಲವು ಕೂಡ ಸ್ಲಾವ್ ಸಮುದಾಯದ ಉತ್ತರ ಧ್ರುವ ಪ್ರದೇಶಕ್ಕೆ ಹೋಗಿ ನಿಲ್ಲುತ್ತದೆ ಎಂಬುದು ಸೋಜಿಗವಾದರು ನಿರ್ವಿವಾದವಾಗಿ ಚಾರಿತ್ರಿಕ ಸತ್ಯವಾಗಿದೆ. 12 – 13 ನೇ ಶತಮಾನಗಳಲ್ಲಿ ಸ್ಲಾವ್ ಜನರು ಕ್ರೈಸ್ತರಾಗಿ ಪರಿವರ್ತಿತರಾಗುವವರೆಗು ಅವರು ಶತಾಂಶ ಮತ್ತು ಥೇಟ್ ಶ್ರೇಷ್ಟ ಆರ್ಯ ವೈದಿಕರೆ ಆಗಿದ್ದರು.

ರಷ್ಯ ಮತ್ತು ಲಿತುವೇನಿಯಾಗಳಲ್ಲಿ ಭರತಾಸ್, ಓಂ, ರಾಮ, ಸೀತ, ಲಂಕೇಶ, ರಾವಣ, ಮಾರೀಚ, ನೆಮುನ (ಯಮುನ), ಕಾಮ, ಯಂತ್ರ, ಶ್ವೇತೆ, ದ್ರವ, ಮೋಕ್ಷ, ಋಗ್ವೇದದ ದಾನವ ಮಾತೆ ದನು ನೆನಪಿನ ದನುಬೆ ಮುಂತಾದ ನದಿಗಳು ಮತ್ತು ನಾರದ (ಈಗ ನರೋದ್ನಯ ಎಂದಿದ್ದರು ಸ್ಥಳೀಯರು ನಾರದ ಬೆಟ್ಟ ಎಂದೇ ಕರೆಯುತ್ತಾರೆ) ಹೆಸರಿನ ಬೆಟ್ಟವು ಇವೆ ಎಂದರೆ ಯಾರೂ ಅಚ್ಚರಿಪಡುವಂತದ್ದೆ.

ಯಾರಿಗಾದರು ಈ ಸಂಗತಿಗಳಲ್ಲಿ ಅನುಮಾನ ಹುಟ್ಟುವುದು ಸಹಜವೆ. ಯಾಕೆಂದರೆ ಸ್ಲಾವ್ – ವೈದಿಕ ಆರ್ಯರ ಮೂಲ ಪ್ರದೇಶವೆ ಉತ್ತರ ದ್ರುವ ಪ್ರದೇಶವಾಗಿತ್ತು ಎಂಬ ಚರಿತ್ರೆಯನ್ನೇ ನಮ್ಮಿಂದ ಮರೆಮಾಚಲಾಗಿತ್ತು ಮತ್ತು ಅದು ಬಹುದೊಡ್ಡ ಸಾಂಸ್ಕೃತಿಕ ರಾಜಕಾರಣವೂ ಆಗಿತ್ತು. ಆದರೆ ತಿಲಕರು ತಮ್ಮ “Arctic Home In the Vedas” ಎಂಬ ಪುಸ್ತಕದಲ್ಲಿ ಉತ್ತರ ಭಾರತದ ವೈದಿಕ ಆರ್ಯರ ತವರು ನೆಲ ಉತ್ತರ ದ್ರುವ ಪ್ರದೇಶವೆ, ಅಂದರೆ ಇಂದಿನ ಲಿತುವೇನಿಯ, ಲಾತ್ವಿಯ, ಬೆಲಾರಸ್ ಪ್ರದೇಶಗಳೇ ಆಗಿದ್ದವು ಎಂದು ಸಮರ್ಥ ಸಾಕ್ಷಾಧಾರಗಳೊಂದಿಗೆ ನಿರೂಪಿಸಿದ್ದಾರೆ.

ರಷ್ಯಾದಲ್ಲಿ ಸಂಸ್ಕೃತ ಭಾಷಾಮೂಲದ ನೂರಾರು ನದಿಗಳಿವೆ. ಭಾರತದಲ್ಲಿ ಕೆಲವು ನದಿಗಳನ್ನ ಹೊರತುಪಡಿಸಿದರೆ ಆ ಪ್ರಮಾಣದ ವೈದಿಕ ಪುರಾಣ ಮೂಲದ ನದಿ ಹೆಸರುಗಳು ಈ ನೆಲದಲ್ಲಿ ಇಲ್ಲವೆಂಬುದು ಪ್ರಾಚೀನ ಕಾಲದಿಂದಲು ಆರ್ಯ ವೈದಿಕರು ಇಲ್ಲಿರಲಿಲ್ಲವೆಂಬುದನ್ನೇ ಸೂಚಿಸುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending