ಲೈಫ್ ಸ್ಟೈಲ್
ದೂರವಿರಲಿ ಗೋಮಾತೆ ಕೆಚ್ಚಲು ಬಾವೆಂಬ ಮಹಾಕಿಚ್ಚಿಂದ..!
- ಡಾ.ಎನ್.ಬಿ.ಶ್ರೀಧರ, ಶಿವಮೊಗ್ಗ
ವಚನಕಾರರ ನುಡಿಯಂತೆ “ಮನದೊಳಗಿನ ಕಿಚ್ಚು ತನ್ನ ಮನೆಯ ಸುಡದಲ್ಲದೇ ನೆರೆ ಮನೆಯ ಸುಡದು” ಆದರೆ ಕೆಚ್ಚಲ ಬಾವಿನಿಂದ ಆ ರಾಸಿನ ಕೆಚ್ಚಲು ಮಾತ್ರವಲ್ಲದೇ ಹೈನುಗಾರನ ಜೀವನವನ್ನು ಬುಡಮೇಲು ಮಾಡಬಹುದು.
ಹೈನುಗಾರರಿಗೆ ವೈದ್ಯರನ್ನು ಅತಿ ತುರ್ತಾಗಿ ಕರೆಯುವ ಕೆಲವು ಸಂದರ್ಭಗಳಿರುತ್ತವೆ. ಅವುಗಳಲ್ಲಿ ಕಷ್ಟಕರ ಹೆರಿಗೆ, ತೀವ್ರರೀತಿಯ ಹೊಟ್ಟೆ ಉಬ್ಬರ, ವಿಷಪ್ರಾಶನ, ಬೆಂಕಿ ಅನಾಹುತ, ರಸ್ತೆ ಅಪಘಾತ ಇತ್ಯಾದಿ. ಈ ಪಟ್ಟಿಗೆ ಕೆಚ್ಚಲು ಬಾವು ಕೂಡಾ ಸೇರುತ್ತದೆ!!. ಕೆಚ್ಚಲು ಬಾವು ಬಂದಿರುವುದನ್ನು ಕಂಡುಕೊಳ್ಳುವುದು ತುಂಬಾ ಸುಲಭ.
ಕೆಚ್ಚಲನ್ನು ನೋಡಿದರೆ ಸಾಕು ಹೇಳಿಬಿಡಬಹುದು. ಆದರೆ ಚಿಕಿತ್ಸೆ ಅಷ್ಟೇ ಕ್ಲಿಷ್ಟ. “ಪ್ರಾರಂಭಿಕ ಹಂತದಲ್ಲಿ ಕೂಡಲೇ ಸೂಕ್ತ ಚಿಕಿತ್ಸೆ ನೀಡಿದರೆ ಮಾತ್ರ ಗುಣವಾಗುವ ಸಾಧ್ಯತೆ ಇದೆ” ಎನ್ನತ್ತಾರೆ ಬಹುತೇಕ ತಜ್ಞರು. ಒಂದು ಸಲ ಕೆಚ್ಚಲು ಗಟ್ಟಿಯಾದರೆ ಅದನ್ನು ಸರಿ ಪಡಿಸುವುದು ಅಸಾಧ್ಯ.
ಹಾಲು ಕೊಡುವ ಹಸುವಿನ ಕೆಚ್ಚಲಿನ ಉರಿಯೂತವೇ ಕೆಚ್ಚಲುಬಾವು. ಇದರಲ್ಲಿ ಒಂದು ಅಥವಾ ಹೆಚ್ಚು ಮೊಲೆಗಳು ಕಾಯಿಲೆಗೆ ಒಳಗಾಗಬಹುದು. ಅನೇಕ ಜಾತಿಯ ಸೂಕ್ಷ್ಮಾಣು ಜೀವಿಗಳಿಂದ ಈ ರೋಗವು ದನ ಮತ್ತು ಎಮ್ಮೆ ಆಡುಗಳಲ್ಲಿ ಕಂಡುಬ೦ದರೂ ಹೆಚ್ಚು ಹಾಲು ಕೊಡುವ ಮಿಶ್ರತಳಿ ಹಸುಗಳಲ್ಲಿ ಇದರ ತೀವ್ರತೆ ಹೆಚ್ಚು.
ಕೆಚ್ಚಲು ಬಾವು ಬರಲು ಕಾರಣಗಳೇನು?
ಸದಾ ಗಲೀಜಿನಿಂದ ಕೂಡಿದ ಕೊಟ್ಟಿಗೆ, ಹಾಲು ಕರೆಯುವ ಪಾತ್ರೆಗಳು, ಹಾಲು ಕರೆಯುವ ವ್ಯಕ್ತಿ ಮೂಲಕ ರೋಗ ಹರಡುತ್ತದೆ. ರೋಗದಿಂದ ನರಳುತ್ತಿರುವ ರಾಸುಗಳು, ಮೊಲೆ ತೊಟ್ಟುಗಳ ಗಾಯ, ಕಲುಷಿತ ಹಾಲು ಕರೆಯುವ ಯಂತ್ರ ಇವೆಲ್ಲ ರೋಗಾಣುಗಳ ಮೂಲಗಳು.
ರೋಗಾಣುಗಳು ಮೊಲೆ ತೊಟ್ಟುಗಳ ಮೂಲಕ ಕೆಚ್ಚಲಿನೊಳಗೆ ಪ್ರವೇಶ ಪಡೆದು ತೀವ್ರಗತಿಯಲ್ಲಿ ಅಲ್ಲಿಯೇ ವೃದ್ಧಿ ಹೊಂದಿ ಹಾಲು ಉತ್ಪಾದಿಸುವ ಗ್ರಂಥಿಗಳನ್ನು ಹಾಳು ಮಾಡುತ್ತವೆ. ಹಾಲು ಅಮೃತಕ್ಕೆ ಸಮಾನ ಎಂದು ಹೇಳುತ್ತೇವೆ, ಹಾಲು ಇಷ್ಟಪಡದ ವ್ಯಕ್ತಿಗಳು ವಿರಳ. ಅದರಂತೆ ಸೂಕ್ಷ್ಮಾಣು ಜೀವಿಗಳು ಸಹಾ ಕೆಚ್ಚಲಿನ ಹಾಲಿನ ಮಾಧ್ಯಮವನ್ನು ಬಳಸಿಕೊಂಡು ತೀವೃಗತಿಯಲ್ಲಿ ಬೆಳೆಯುತ್ತವೆ. ಇದರಿಂದಾಗಿ ಬಾವು ಕಾಣಿಸಿಕೊಳ್ಳುತ್ತದೆ. ಇದೇ ಕೆಚ್ಚಲು ಬಾವು.
ಲಕ್ಷಣಗಳಾವುವು?
ಅತಿ ತೀವ್ರತರದ ಕೆಚ್ಚಲುಬಾವು ಉಂಟಾದರೆ ಕೆಲವೇ ಗಂಟೆಗಳಲ್ಲಿ ಕೆಚ್ಚಲು ಊದಿಕೊಂಡು ಕೆಂಪಾಗುತ್ತದೆ. ತೀವ್ರ ಜ್ವರ, ಮೇವು ನೀರು ಬಿಡುವುದು, ಕೆಚ್ಚಲು ಮುಟ್ಟಿದರೆ ನೋವಿನಿಂದ ಕಾಲು ಎತ್ತುವುದು ಅಥವಾ ಕಾಲು ಜಾಡಿಸುವುದು ಇತ್ಯಾದಿ ಪ್ರಮುಖ ಲಕ್ಷಣಗಳು. ಹಿಂಡಿದರೆ ನೀರಿನಂತಹ ದ್ರವ ಅಥವಾ ಮೊಸರಿನಂಥ ಹಾಲು ಬರುತ್ತದೆ.
ಒಟ್ಟಾರೆ ಹಾಲಿನ ಪ್ರಮಾಣ ಬಹಳ ಕಡಿಮೆ ಇರುವುದು. ಅತ್ಯಂತ ಶೀಘ್ರದಲ್ಲಿ ಸೂಕ್ತ ಚಿಕಿತ್ಸೆ ದೊರೆಯದಿದ್ದರೆ ಆ ಭಾಗದ ಕೆಚ್ಚಲು ಗಟ್ಟಿಯಾಗಬಹುದು. ಒಮ್ಮೊಮ್ಮೆ ರೋಗಕಾರಕ ಬ್ಯಾಕ್ಟೀರಿಯಾಗಳು ಉತ್ಪಾದಿಸಿದ ವಿಷದ ನಂಜು ರಕ್ತಕ್ಕೆ ಸೇರಿ ಹಸು ಸಾವಿಗೀಡಾಗಲೂಬಹುದು.
ಕೆಲವೊಮ್ಮೆ ಹಿಂಡಿದೊಡನೆ ರಕ್ತ ಮಿಶ್ರಿತ ಹಾಲು ಕರೆಯುತ್ತವೆ. ಇದಕ್ಕೆ ಹಾಲು ಕರೆಯುವ ಮೊಲೆಗಳನ್ನು ಅತೀಯಾಗಿ ಜಗ್ಗುವುದು, ಅಥವಾ ರಾಸುಗಳು ಮಲಗಿದಾಗ ದೇಹದ ಒತ್ತಡ ಕೆಚ್ಚಲಿನ ರಕ್ತ ನಾಳಗಳ ಮೇಲೆ ಬಿದ್ದಾಗ ರಕ್ತ ನಾಳಗಳು ಒಡೆದು ಹಾಲಿನಲ್ಲಿ ರಕ್ತ ಬರುತ್ತದೆ.
“ಕರುಹಾಕಿದ ಪ್ರಾರಂಭದಲ್ಲಿ ಕೆಲವೊಮ್ಮೆ ದೇಹದಲ್ಲಿ ಆಗುವ ಹಾರ್ಮೋನುಗಳ ವ್ಯತ್ಯಾಸದಿಂದ ಕೆಚ್ಚಲಿನ ರಕ್ತನಾಳಗಳು ಒಡೆದು ಹಾಲಿನಲ್ಲಿ ರಕ್ತ ಕಾಣಿಸಿಕೊಳ್ಳುತ್ತದೆ. ಇದು ಸಹಜ ಕ್ರಿಯೆಯಾಗಿದ್ದು ನಾಲ್ಕೈದು ದಿನಗಳಲ್ಲಿ ಸರಿಯಾಗುತ್ತದೆ. ಆಗದಿದ್ದರೆ ತಜ್ಞ ಪಶುವೈದ್ಯರನ್ನು ಕರೆದು ಚಿಕಿತ್ಸೆ ಕೊಡಿಸಬೇಕು.
ಚಿಕಿತ್ಸೆ ಏನು? ಹೇಗೆ?
ಕೆಚ್ಚಲು ಬಾವಿನ ಲಕ್ಷಣಗಳು ಕಂಡು ಬಂದರೆ ಕೂಡಲೇ ತಜ್ಞ ಪಶುವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಕೊಡಿಸುವುದು ಅತ್ಯಗತ್ಯ. ‘‘ಸಲೀಸಾಗಿ ಹಾಲು ಕೊಡುವ ಹಸುಗಳು ಹಾಲು ಕರೆಯುವಾಗ ನೋವಿನಿಂದ ಕಾಲು ಎತ್ತಿದರೆ, ಹಾಲಿನ ಬಣ್ಣ ಬದಲಾದರೆ ತಡಮಾಡುವುದಿಲ್ಲ.
ಸಂಪೂರ್ಣ ಹಾಲು ಕರೆದು ನಮ್ಮ ಮನೆಯಲ್ಲಿಯೇ ಇಟ್ಟುಕೊಂಡ ಮಲೆಗೇರಿಸುವ ಟ್ಯೂಬ್ ಏರಿಸಿ, ತಕ್ಷಣ ಪಶುವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಕೊಡಿಸುತ್ತೇವೆ. ಹಾಗಾಗಿ ಕೆಚ್ಚಲು ಬಾವು ಬೇಗ ವಾಸಿಯಾಗುತ್ತದೆ’’ ಎನ್ನುತ್ತಾರೆ 20 ವರ್ಷಗಳಿಂದ ಹೈನುಗಾರಿಕೆಯಲ್ಲಿ ತೊಡಗಿದ ಸೈದೂರಿನ ದಯಾನಂದರವರು.
ಈ ಕಾಯಿಲೆ ತಡೆಯುವ ಬಗೆ ಹೇಗೆ?
ಕೊಟ್ಟಿಗೆಯ ಸ್ವಚ್ಛತೆ, ಹಾಲು ಕರೆಯುವರ ಸ್ವಚ್ಚತೆ ಹಾಗೂ ಹಾಲುಕರೆಯುವ ಪಾತ್ರೆಗಳ ಸ್ವಚ್ಚತೆ ಕಾಪಾಡಿಕೊಳ್ಳುವುದು ಬಹು ಮುಖ್ಯ. ನಿಗಧಿಪಡಿಸಿದ ಕಾಲಕ್ಕೆ ಹಾಲು ಕರೆಯುವುದು ಹಾಗೂ ಕೊಟ್ಟಿಗೆ ಹಸಿ ಇರದಂತೆ ನೋಡಿಕೊಳ್ಳವುದು ಸಹ ಅಷ್ಟೇ ಮುಖ್ಯ.
“ನಾವು ಕೊಟ್ಟಿಗೆ ನೆಲ ಸ್ವಚ್ಚಗೊಳಿಸಲು ಹಾಗೂ ರಾಸುಗಳ ಮೈತೊಳೆಯಲು ಪ್ರೆಶರ್ ಪಂಪ ಬಳಸುತ್ತೇವೆ. ಹಾಗಾಗಿ ನಾಲ್ಕೈದು ವರ್ಷಗಳಿಂದ ನಮ್ಮ ರಾಸುಗಳಿಗೆ ಕೆಚ್ಚಲು ಬಾವು ಬಂದಿಲ್ಲ” ಎನ್ನುತ್ತಾರೆ ಹತ್ತಾರು ವರ್ಷಗಳಿಂದ ನೂರೆಂಟು ಹಸುಗಳನ್ನು ಸಾಕಿದ ಶಿರಸಿಯ ಶ್ರೀಮತಿ ವೇದಾವತಿ ಹೆಗಡೆಯವರು.
ಹಾಲು ಕರೆಯುವಾಗ ಉಗುರು ಬೆಚ್ಚಗಿನ ಶುದ್ಧ ನೀರಿನಲ್ಲಿ ಕೆಚ್ಚಲು ಹಾಗೂ ಮೊಲೆಗಳನ್ನು ತೊಳೆಯಬೇಕು. ಹಾಲು ಹಿಂಡಿದ ನಂತರ ಶುದ್ಧ ನೀರಿನಿಂದ ತೊಳೆದು ಕ್ರಿಮಿನಾಶಕ ಔಷಧಿಯಲ್ಲಿ ಮೊಲೆಗಳನ್ನು ಅದ್ದುವುದರಿಂದ ಕೆಚ್ಚಲು ಬಾವು ತಡೆಗಟ್ಟಬಹುದು. ಹಾಲು ಕರೆದಾದ ಒಂದರಿಂದರಿಂದ ಒಂದುವರೆ ಗಂಟೆಯ ಕಾಲ ಮೊಲೆತೊಟ್ಟುಗಳ ರಂದ್ರ ತೆರೆದಿರುತ್ತದೆ.
ಈ ಸಂದರ್ಭದಲ್ಲಿ ರಾಸುಗಳು ಮಲಗಿದರೆ ರೋಗಾಣುಗಳು ಮೊಲೆ ತೊಟ್ಟಗಳ ತೆರೆದ ರಂದ್ರಗಳ ಮೂಲಕ ಕೆಚ್ಚಲಿಗೆ ಪ್ರವೇಶ ಪಡೆಯುವುದರಿಂದ ಕೆಚ್ಚಲು ಬಾವು ಬರುತ್ತದೆ. ಕಾರಣ ರಾಸುಗಳು ತಕ್ಷಣ ಮಲಗದಂತೆ ತಡೆಯಲು ಹಾಲುಕರೆದ ನಂತರ ಮೇವು ಹಾಕುವುದು ಅಥವಾ ಓಡಾಡಲು ಕೊಟ್ಟಿಗೆಯ ಹೊರಗೆ ಬಿಡುವುದು ಒಳ್ಳೆಯದು.
ಮಶಿನಿನಿಂದ ಹಾಲು ಕರೆಯುವವರು ಇನ್ನೂ ಹುಶಾರಾಗಿರಬೇಕು, ಏಕೆಂದರೆ ಒಂದು ಹಸುವಿಗೆ ಬಂದ ಕೆಚ್ಚಲು ಬಾವು ಉಳಿದೆಲ್ಲಾ ಹಸುಗಳಿಗೆ ಹರಡುವ ಸಾಧ್ಯತೆ ಇದೆ ಎನ್ನುತ್ತಾರೆ ಶ್ರೀ ಸೀತಾರಾಮ ಹೆಗಡೆ, ನೀರ್ನಳ್ಳಿ, ಸಿರಸಿ.
ಮಂದ ಸ್ವರೂಪದ ಕೆಚ್ಚಲು ಬಾವನ್ನು ಪತ್ತೆ ಹಚ್ಚಿ ಅದಕ್ಕೆ ಚಿಕಿತ್ಸೆ ಮಾಡಿ ಅದು ಬರದಂತೆ ಚಿಕಿತ್ಸೆ ಮಾಡಿದರೆ ಅದರಿಂದ ತೀವ್ರ ಸ್ವರೂಪದ ಕೆಚ್ಚಲು ಬಾವು ಬರುವುದಿಲ್ಲ.
ಕೆಚ್ಚಲು ಬಾವು ಬಂದು ಕೆಚ್ಚಲು ಗಟ್ಟಿಯಾದ ನಂತರ ಚಿಕಿತ್ಸೆಗೆ ಓಡಾಡುವ ಬದಲು ಮಂದ ಸ್ವರೂಪದ ಕೆಚ್ಚಲು ಬಾವನ್ನು ಸರಳವಾದ “ಸರ್ಫ಼್ ಕೆಚ್ಚಲು ಬಾವು ಪರೀಕ್ಷೆ”ಯಿಂದ ಮೊದಲೇ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ಕೊಡಿಸುವುದು ಕೆಚ್ಚಲುಬಾವು ತಡೆಯುವಲ್ಲಿ ಒಂದು ಮಹತ್ತರ ಹೆಜ್ಜೆಯಾಗಬಲ್ಲದು.
ಏನಿದು ಸರ್ಫ಼್ ಕೆಚ್ಚಲು ಬಾವು ಪರೀಕ್ಷೆ?
ಈ ವಿಧಾನ ರೈತರೇ ಸುಲಭವಾಗಿ ಅವರ ಮನೆಯಲ್ಲೇ ಲಭ್ಯವಿರುವ ವಸ್ತುಗಳನ್ನು ಬಳಸಿಕೊಂಡು ಮಂದ ಸ್ವರೂಪದ ಕೆಚ್ಚಲು ಬಾವನ್ನು ಪತ್ತೆ ಮಾಡಬಹುದು. ಅದಕ್ಕೆ ಬೇಕಾದ ಸಾಮಗ್ರಿಗಳು ಇಷ್ಟೆ. ರೂ: 2 ಕ್ಕೆ ಸಿಗುವ 12 ಗ್ರಾಂನ ಸರ್ಫ್ ಪೌಡರ್, 400 ಮಿಲಿ ನೀರು, ಒಂದು ಚಮಚ ಅಥವಾ ಪ್ಲಾಸ್ಟಿಕ್ ಬಾಟಲಿಯ ಮುಚ್ಚಳ. ಮತ್ತೇನೂ ಇಲ್ಲ. ಈ ಕೆಚ್ಚಲು ಬಾವು ಪತ್ತೆಯ ವಿಧಾನ ಬಹಳ ಸುಲಭ. ಸರ್ಫ್ ಕೆಚ್ಚಲು ಬಾವು ಪತ್ತೆ ವಿಧಾನ ಹೀಗಿದೆ;
1) ಮೊದಲು ಶೇ 3 ರ ಸರ್ಫ್ ದ್ರಾವಣ ತಯಾರಿಸಿಕೊಳ್ಳಬೇಕು. ಇದನ್ನು ತಯಾರಿಸುವುದೂ ಸುಲಭ. ಅರ್ಧ ಲೀಟರ್ ನೀರಿನ ಬಾಟಲಿ ತೆಗೆದುಕೊಂಡು ಅದರಲ್ಲಿ ನೂರು ಮಿಲಿ ನೀರು ತೆಗೆದರೆ 400 ಮಿಲಿ ಆಗುತ್ತದೆ. ಇದರಲ್ಲಿ ರೂ: 2 ಕ್ಕೆ ಸಿಗುವ 12 ಗ್ರಾಂ ನ ಸರ್ಫ್ ಪೌಡರ್ ಅನ್ನು ಮಿಶ್ರಣ ಮಾಡಬೇಕು. ಈ ದ್ರಾವಣವನ್ನು ಸುಮಾರು 100 ಆಕಳುಗಳ ಕೆಚ್ಚಲು ಬಾವು ಪರೀಕ್ಷೆ ಮಾಡಲು 3 ತಿಂಗಳವರೆಗೆ ಬಳಸಬಹುದು.
2) ಆಕಳಿನಿಂದ 10-15 ಮಿಲಿ ಹಾಲನ್ನು ಕರೆದು ಬಾಟಲಿಯ ಮುಚ್ಚಳ ಅಥವಾ ಅಗಲವಾದ ಚಮಚದಲ್ಲಿ ಅಥವಾ ಟೀ ಕಪ್ನಲ್ಲಿ ಹಾಕಿಕೊಳ್ಳಬೇಕು.
3) ಇದಕ್ಕೆ ಸಮ ಪ್ರಮಾಣದಲ್ಲಿ (10-15 ಮಿಲಿ) ಸರ್ಫ್ ದ್ರಾವಣವನ್ನು ಹಾಕಬೇಕು. ನಂತರ 10-15 ಸೆಕೆಂಡ್ವರೆಗೆ ನಿಧಾನವಾಗಿ ಮಿಶ್ರಣ ಮಾಡಬೇಕು.
4) ನಂತರ ಮಿಶ್ರಣ ಮಡ್ಡಿಯಾದರೆ ಅಥವಾ ಲೋಳೆಯ ತರವಾದರೆ ಆ ಕೆಚ್ಚಲಿಗೆ ಕೆಚ್ಚಲು ಬಾವು ಇದೆ ಎಂದು ಅರ್ಥ. ಇಲ್ಲದೇ ಇದು ತಿಳಿಯಾಗಿದ್ದರೆ ಕೆಚ್ಚಲು ಬಾವು ಇಲ್ಲ ಎಂದರ್ಥ.
5) ಈ ಸುಲಭವಾದ ಪದ್ದತಿಯಿಂದ ರೈತರು ಕೆಚ್ಚಲು ಬಾವನ್ನು ಸುಲಭವಾಗಿ ಪತ್ತೆ ಹಚ್ಚಿ ಚಿಕಿತ್ಸೆ ಕೊಡಿಸಬಹುದು.
ಲೇಖನವನ್ನು ಈ ಕೆಳಗಿನಂತೆ ಸರಳೀಕರಿಸಬಹುದು.
ಕೆಚ್ಚಲು ಬಾವು ಮಹಾ ಮಾರಿ. ಇದನ್ನು ಬರದಂತೆ ತಡೆಯುವುದು ಬಹಳ ಮುಖ್ಯ.ಬಂದ ನಂತರ ಚಿಕಿತ್ಸೆ ಬಹಳ ಕಷ್ಟ.ಗೋವು ಅತ್ಯಂತ ನೋವಿನ ದಿನಗಳಲ್ಲಿ ಕಳೆಯುತ್ತದೆ. ಕೆಚ್ಚಲು ಬಾವನ್ನು ಸರಿಯಾಗಿ ನಿರ್ವಹಿಸದೇ ಗೋವು ನೋವು ಅನುಭವಿಸಿದರೆ ಇದನ್ನು “ಗೋಹಿಂಸೆ” ಎನ್ನಬಹುದು. ಕಾರಣ ಇದರಲ್ಲಿ ರಾಜಿ ಬೇಡವೇ ಬೇಡ.
ಹಾಲು ಕರೆದು ಆದ ಕೂಡಲೇ ಆಕಳನ್ನು 1-2 ಗಂಟೆ ಮಲಗಲು ಬಿಡಲೇ ಬಾರದು. ಈ ಸಂದರ್ಭದಲ್ಲಿ ಮೊಲೆಯ ರಂದ್ರಗಳು ಮುಚ್ಚುತ್ತಾ ಇರುತ್ತವೆ. ಹಾಲು ಕರೆದ ತಕ್ಷಣ ಹಸುವಿನ ಗಮನವನ್ನು ಬೇರೆಡೆ ಸೆಳೆಯಲು ಅದಕ್ಕೆ ಹಿಂಡಿ ಹುಲ್ಲು ನೀಡುವ ಅಭ್ಯಾಸ ಮಾಡಿದರೆ ಅದು ಮಲಗಲಾರದು. ಇದು ರಾತ್ರಿ ಮತ್ತು ಹಗಲು ಎರಡೂ ಹೊತ್ತು ಸಾಧ್ಯ.
ಹಾಲು ನಂತರ ಹಿಂಡಿ ಹುಲ್ಲು ಹಾಕಿದ 2-3ಗಂಟೆ ನಂತರ ಜಾನುವಾರನ್ನು ಸ್ವಲ್ಪ ಹೊತ್ತು ಹೊರಗೆ ಓಡಾಡಲು ಬಿಡಲೇ ಬೇಕು. ಮಲೆನಾಡಿನ ಭಾಗದ ರೈತರು ದನ ಓಡಾಡಲು ಪ್ರತಿ ದನಕ್ಕೆ ಕನೀಷ್ಟ200 ಚದರ ಅಡಿ ಸ್ಥಳ ಹೊಂದಿಸಿಕೊಳ್ಳಲೇಬೇಕು. ಜಾನುವಾರು ಯಾವಾಗಲೂ ಓಡಾಡಿಕೊಂಡಿರುವ ಪ್ರಾಣಿ. ಅದೂ ಓಡಾಡಿ ಕೊಂಡಿರಲಿ. ಸ್ಥಳ ಇಲ್ಲ ಎಂಬ ಸಬೂಬು ಬೇಡ. ಸ್ಥಳ ಇಲ್ಲದಿದ್ದರೆ ಜಾನುವಾರು ಸಾಕಲು ಪ್ರಶಸ್ಥವಲ್ಲ ಎಂಬುದು ಅರಿಯಿರಿ.
ಕೊಟ್ಟಿಗೆಯಲ್ಲಿ ಸ್ವಚ್ಚತೆ ಕಾಪಾಡಿ. ರಬ್ಬರ್ ಮ್ಯಾಟ್ ಬಳಸಿ. ಹಾಲು ಕರೆದ ನಂತ ಪೊಟ್ಯಾಸಿಯಂ ಪರಮ್ಯಾಂಗನೇಟ್ ದ್ರಾವಣ,ಡೆಟ್ಟಾಲ್,ಲೈಫ಼್ ಬಾಯ್ ಅಥವಾ ಇನ್ಯಾವುದೇ ಕ್ರಿಮಿನಾಶಕದ ದ್ರಾವಣ ಬಳಸಿ ಕೆಚ್ಚಲುಗಳ ಸ್ವಚ್ಚತೆ ಕಾಪಾಡಿ.
ಆಕಳಿಗೆ ನಿಯಮಿತವಾಗಿ ಉತ್ತಮ ಗುಣಮಟ್ಟದ ಖನಿಜ ಮಿಶ್ರಣ, ಹಾಲಿನ ಇಳುವರಿಗೆ ಅನುಸಾರವಾಗಿ ಸಮತೋಲಿತ ಪಶುಅಹಾರ, ನೀಡಿ.
ಪ್ರತಿ15ದಿನಕ್ಕೊಮ್ಮೆ ಸುಲಭವಾದ “ಸರ್ಫ಼್ ಕೆಚ್ಚಲು ಬಾವು ಪರೀಕ್ಷೆ” ಯನ್ನು ಮಾಡಿ,ಮಂದ ಸ್ವರೂಪದ ಕೆಚ್ಚಲು ಬಾವು ಪತ್ತೆಯಾದರೆ ಅದನ್ನು ತಜ್ಞ ಪಶುವೈದ್ಯರಿಂದ ಚಿಕಿತ್ಸೆ ಮಾಡಿಸಿ.
ಹೀಗಿದ್ದಲ್ಲಿ ಮಾತ್ರ ಕೆಚ್ಚಲು ಬಾವೆಂಬ ಮಹಾಮಾರಿಯಿಂದ ಹೈನುರಾಸುಗಳನ್ನು ಬಚಾವು ಮಾಡಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ನಿಷೇಧ : ಸಚಿವ ದಿನೇಶ್ ಗುಂಡೂರಾವ್
ಸುದ್ದಿದಿನ, ಬೆಂಗಳೂರು : ಕೃತಕ ಬಣ್ಣ ಬಳಸಿದ ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಮಾರಾಟವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯಾದ್ಯಂತ ನಿಷೇಧಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಆದಾಗ್ಯೂ, ಬಣ್ಣ ಹಾಗೂ ರಾಸಾಯನಿಕ ಹಾಕದೇ ಇರುವ ಈ ತಿನಿಸುಗಳ ಮಾರಾಟಕ್ಕೆ ನಿರ್ಬಂಧ ಇಲ್ಲ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳು ಸೇರಿದಂತೆ ಎಲ್ಲ ವಯೋಮಾನದವರಿಗೂ ಅಚ್ಚುಮೆಚ್ಚಾದ ಈ ಎರಡು ತಿನಿಸುಗಳನ್ನು ಆಕರ್ಷಕವಾಗಿ ಕಾಣುವಂತೆ ಮಾಡಲು ಬಳಸುವ ಕೃತಕ ಬಣ್ಣಗಳಲ್ಲಿ ಅಪಾಯಕಾರಿ ರಾಸಾಯನಿಕಗಳು ಇರುವುದು ಪರೀಕ್ಷೆಗಳಿಂದ ದೃಢಪಟ್ಟಿದೆ ಎಂದರು. ರಾಜ್ಯದ ಹಲವೆಡೆ ಬೀದಿಬದಿಯ ಗಾಡಿಗಳು, ಹೋಟೆಲ್ಗಳಲ್ಲಿ ತಯಾರಿಸಿದ ಗೋಬಿ ಮಂಚೂರಿ ತಿನಿಸಿನ 171ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ 107ಮಾದರಿಗಳಲ್ಲಿ ಅಸುರಕ್ಷಿತ ರಾಸಾಯನಿಕಗಳು ಪತ್ತೆಯಾಗಿರುವುದು ಆತಂಕಕಾರಿಯಾಗಿದೆ ಎಂದರು.
ಕೃತಕ ಬಣ್ಣಗಳಲ್ಲಿರುವ ರೋಡೊಮೈನ್-ಬಿ ಮತ್ತು ಟಾಟ್ರಝೀನ್ ರಾಸಾಯನಿಕಗಳು ಕ್ಯಾನ್ಸರ್ ರೋಗಕ್ಕೆ ಕಾರಣವಾಗಬಹುದು ಎನ್ನುವ ಅಂಶ ತಿಳಿದುಬಂದಿದೆ. ಬಣ್ಣ ಹಾಕಿದ ಗೋಬಿಮಂಚೂರಿ ಮತ್ತು ಕಾಟನ್ಕ್ಯಾಂಡಿಗಳನ್ನು ಮಾರಾಟ ಮಾಡುವವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಏಳು ವರ್ಷದರೆಗೆ ಜೈಲು ಶಿಕ್ಷೆ, 10 ಲಕ್ಷ ರೂಪಾಯಿವರೆಗೆ ದಂಡ ಅಥವಾ ಜೀವಾವಧಿ ಶಿಕ್ಷೆಗೂ ಅವಕಾಶವಿದೆ ಎಂದು ಸಚಿವರು ಎಚ್ಚರಿಕೆ ನೀಡಿದರು.
ಹೇಳಿಕೆ
- ಬಣ್ಣ ಹಾಕಿರುವ ಈ ಎರಡು ತಿನಿಸುಗಳನ್ನು ಸೇವಿಸಬಾರದು ಎಂದು ಸಾರ್ವಜನಿಕರಿಗೂ ಎಚ್ಚರಿಕೆ ನೀಡಲಾಗಿದೆ. ಸಾರ್ವಜನಿಕರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದಲ್ಲದೇ, ಕಬಾಬ್, ಪಾನಿಪೂರಿ ಮೊದಲಾದ ತಿನಿಸುಗಳಲ್ಲೂ ಕೃತಕ ಬಣ್ಣಗಳ ಬಳಕೆ ಆಗುತ್ತಿದೆಯೇ ಎಂದು ಪರಿಶೀಲಿಸಲಾಗುತ್ತಿದೆ.
| ಸಚಿವ ದಿನೇಶ್ ಗುಂಡೂರಾವ್
ಟ್ವೀಟ್
In consideration of public health, we are banning the use of artificial colours in Gobi Manchurian and cotton candy. Violation of this ban may result in imprisonment for up to 7 years and a fine of up to 10 lakhs.
Following reports of substandard quality and the presence of… pic.twitter.com/z2KWHi8Jbd
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) March 11, 2024
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಲೈಫ್ ಸ್ಟೈಲ್
ನೀಲಿ ಪರ್ವತಗಳ ನಾಡಿನಲ್ಲಿ ಕೀಚಕರ ಹಾವಳಿ
- ಡಾ. ಸಿದ್ದಯ್ಯ ರೆಡ್ಡಿಹಳ್ಳಿ
ಜಗತ್ತಿನ ಪ್ರತಿ ಜನಾಂಗವು ತನ್ನ ಪೂರ್ವಜರ ಪ್ರತಿಭೆ ಹಾಗೂ ಹಿರಿಮೆಯನ್ನು ಹೇಳಿಕೊಳ್ಳಲು ಕಾತರಿಸುತ್ತದೆ. ಅದರಂತೆಯೇ ನಮ್ಮ ಭರತ ಖಂಡದ ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ವಾಸಿಸುವ ಮಣಿಪುರಿ ಜನರು ಕ್ರಿಸ್ತಪೂರ್ವದಲ್ಲಿಯೇ ಅತ್ಯಾಧುನಿಕ ಸಾಮ್ರಾಜ್ಯವನ್ನು ಕಟ್ಟಿದ್ದರಂತೆ ಎಂದು ಹೇಳಿಕೊಳ್ಳುತ್ತಾರೆ.
ನಿಜ ಮಣಿಪುರಿಗಳು ಬೆಟ್ಟಗಳ ನಡುವೆ ಬೆಚ್ಚನೆಯ ಜೀವನವನ್ನು ಸಾಗಿಸಿದವರು. ಆದರೆ ಅಲ್ಲಿ ಕೊಳ್ಳಿ ಇಡುವ ಕೆಲಸಗಳು ಬಹಳ ಹಿಂದಿನಿಂದಲೇ ಪ್ರಾರಂಭವಾಗಿರುವುದು ತಿಳಿದುಬರುತ್ತದೆ. ವಾಸ್ತವದಲ್ಲಿ ಹಲವು ಬುಡಕಟ್ಟುಗಳ ಸಂಮಿಶ್ರಣವೇ ಮಣಿಪುರವಾಗಿದೆ. ಆದರೆ ಮಣಿಪುರಿಗಳು ಮಾತ್ರ ಈ ನೆಲದ ಮೂಲ ನಿವಾಸಿಗಳು, ಅವರಿಗೆ ಮಾತ್ರ ಸಕಲ ಸೌಕರ್ಯಗಳು ಸಿಗಬೇಕು, ಉಳಿದವರು ರಾಜ್ಯ ಬಿಡಬೇಕು ಎಂದು ಉಯಿಲ್ಲೆಬ್ಬಿಸುತ್ತಿರುವವರು ಯಾರು? ಪ್ರತಿಯೊಂದು ಬುಡಕಟ್ಟು ಜನಾಂಗಕ್ಕೆ ಇರುವಂತೆ ಹೇರಳವಾದ ಜಾನಪದ ಕಥೆ, ಪುರಾಣ ಮತ್ತು ದಂತಕಥೆಗಳ ಸಂಪತ್ತು ಇಲ್ಲಿನ ಬುಡಕಟ್ಟು ಜನಾಂಗಗಳಿಗೂ ಇದೆ.
ಮಣಿಪುರದ ರಾಜಧಾನಿ ಇಂಫಾಲ್ನಲ್ಲಿ ವಾಸಿಸುತ್ತಿದ್ದ ಜನರನ್ನು ಮಿತೇಯಿ ಅಥವಾ ಮೈತೇಯಿ ಎಂದು ಕರೆಯಲಾಗುತ್ತಿತ್ತು. ಸ್ವಾತಂತ್ರ್ಯಪೂರ್ವದಲ್ಲಿ ಮಣಿಪುರವು ಬಾಂಗ್ಲಾದ ಗುಡ್ಡುಗಾಡು ಜಿಲ್ಲೆಗಳಲ್ಲಿ ಒಂದಾಗಿತ್ತು. ಭಾರತ ಸ್ವಾತಂತ್ರ್ಯಗೊಂಡು ಎರಡು ವರ್ಷ ಎರಡು ತಿಂಗಳು ಕಳೆದ ನಂತರ ಅಂದರೆ ಅಕ್ಟೋಬರ್ 15, 1949ರಂದು ಭಾರತದೊಂದಿಗೆ ಏಕೀಕೃತವಾಯಿತು.
ಮಣಿಪುರದಲ್ಲಿ ಅಂತರ-ಜನಾಂಗೀಯ ಹಿಂಸಾಚಾರವು ಇದೇ ಮೊದಲೇನಲ್ಲ, ಇದಕ್ಕೆ ಸುದೀರ್ಘವಾದ ಇತಿಹಾಸವಿದೆ. ಮಣಿಪುರಿಗಳ ಅತಿರೇಕ ಎಲ್ಲಿಯವರೆಗೆ ಹೋಗಿತ್ತು ಎಂದರೆ 1964ರಲ್ಲಿ ಭಾರತದಿಂದ ಬಿಡುಗಡೆ ಹೊಂದಿ, ಹೊಸ ದೇಶವನ್ನು ಸೃಷ್ಟಿಸಿಕೊಳ್ಳಬೇಕು ಎಂದು ದಂಗೆಯನ್ನು ಎಬ್ಬಿಸಲಾಗಿತ್ತು. ಇದರಲ್ಲಿ ಹಲವಾರು ಗುಂಪುಗಳು ಕೂಡಿಕೊಂಡಿದ್ದವು. ಅವರಿಗೆ ಅವರದೇ ಆದ ಗುರಿಗಳು ಇದ್ದುದರಿಂದ ಈ ದಂಗೆ ವಿಫಲವಾಯಿತು.
ಚೀನಾ ದೇಶದ ಕುಮ್ಮಕ್ಕಿನಿಂದಾಗಿ ‘ರೆವಲ್ಯೂಷನರಿ ಪಾರ್ಟಿ ಆಫ್ ಕಾಂಗ್ಲೀಪಾಕ್’ ಮತ್ತು ‘ಪೀಪಲ್ಸ್ ಲಿಬರೇಶನ್ ಆರ್ಮಿಗಳು’ ಹುಟ್ಟಿಕೊಂಡವು. ಇವರು ಶಸ್ತ್ರಾಸ್ತ್ರ ತರಬೇತಿಯನ್ನು ಹೊಂದಿ, ಬ್ಯಾಂಕ್ ದರೋಡೆಗಳನ್ನು ಮಾಡುವುದು, ಪೊಲೀಸ್ ಅಧಿಕಾರಿಗಳ ಮೇಲೆ ಮತ್ತು ಸರ್ಕಾರಿ ಕಟ್ಟಡಗಳ ಮೇಲೆ ದಾಳಿ ಮಾಡುವುದು ಇಂತಹ ಕೃತ್ಯಗಳನ್ನು ಮಾಡತೊಡಗಿದರು. 1980 ರಿಂದ 2004ರವರೆಗೂ ಭಾರತ ಸರ್ಕಾರ ಮಣಿಪುರವನ್ನು ಪ್ರಕ್ಷÄಬ್ದ ಪ್ರದೇಶ ಎಂದು ಉಲ್ಲೇಖಿಸಿತ್ತು.
ಈ ಸಂದರ್ಭದಲ್ಲಿ ‘ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆ’ಯನ್ನು ಜಾರಿಗೆ ತರಲಾಯಿತು. ಈ ಕಾಯಿದೆಯ ಪ್ರಕಾರ ಖಾಸಗಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಕೆಟ್ಟವರ್ತನೆಗಳನ್ನು ಮಾಡುತ್ತಿದ್ದರೆ, ಯಾವುದೇ ವಾರಂಟ್ಗಳಿಲ್ಲದೆ ಬಂಧಿಸಬಹುದಾಗಿತ್ತು. ಕಾನೂನುಗಳನ್ನು ಉಲ್ಲಂಘಿಸುವ, ಶಸ್ತ್ರಾಸ್ತ್ರಗಳನ್ನು ಹೊಂದಿರುವವರನ್ನು ಅಥವಾ ದೊಡ್ಡ ದೊಡ್ಡ ಗುಂಪುಗಳಲ್ಲಿ ಸೇರಿದ್ದವರನ್ನು ಗುಂಡಿಕ್ಕಿ ಕೊಲ್ಲುವ ಅವಕಾಶವನ್ನು ಮಿಲಿಟರಿಗೆ ಕೊಡಲಾಗಿತ್ತು. ಮಿಲಿಟರಿಯ ಪರವಾಗಿರುವ ಈ ಕಾನೂನು ಅನಿಯಂತ್ರಿತ ಹತ್ಯೆಗಳು, ಚಿತ್ರಹಿಂಸೆ, ಕ್ರೂರ ಅಮಾನವೀಯತೆ, ಅಪಹರಣದಂತಹ ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಯಿತು.
ಈ ಮಾನವ ವಿರೋದಿ ಮಿಲಿಟರಿ ಕಾನೂನಿನ ವಿರುದ್ಧ ಹಲವಾರು ಪ್ರತಿಭಟನೆಗಳು, ಹೋರಾಟಗಳು ಜರುಗಿದವು. ಇರೋಮ್ ಶರ್ಮಿಳಾ ಚಾನು ಎಂಬ ದಿಟ್ಟ ಮಹಿಳೆ ದೀರ್ಘಾವಧಿಯ ಉಪವಾಸ ಸತ್ಯಾಗ್ರಹವನ್ನು ಮಾಡಿದ್ದಳು. ಆದರೂ 2004ರಲ್ಲಿ ಸ್ಥಳೀಯ ಮಹಿಳೆಯರ ಮೇಲೆ ಹಿಂಸಾತ್ಮಕ ದಾಳಿಯನ್ನು ನಡೆಸಲಾಯಿತು. ಇದಕ್ಕೆ ಪ್ರತಿರೋಧವಾಗಿ ಪ್ರತಿಭಟನೆಗಳು ತೀವ್ರಮಟ್ಟಕ್ಕೆ ತಲುಪಿದಾಗ ಸರ್ಕಾರವು ಮಣಿಪುರದಲ್ಲಿದ್ದ ಗೊಂದಲದ ಸ್ಥಿತಿಯನ್ನು ತೆಗೆದುಹಾಕಿತು.
ಮಣಿಪುರವು ನೀಲಿ ಪರ್ವತಗಳಿಂದ ಸುತ್ತುವರೆದಿರುವ ನಾಡಾಗಿದೆ. ಈ ಪರ್ವತ ಶ್ರೇಣಿಗಳು ತಣ್ಣನೆಯ ಗಾಳಿಯನ್ನು ಮಣಿಪುರಿಗಳಿಗೆ ತಲುಪದಂತೆ ತಡೆಯುತ್ತವೆ. ಆದರೆ ಮಣಿಪುರಿಗಳಲ್ಲಿಯೇ ಹೊತ್ತಿಕೊಂಡಿರುವ ಬೆಂಕಿಯನ್ನು ನಂದಿಸಲು ಅವುಗಳಿಗೆ ಸಾಧ್ಯವೇ!? ಅವುಗಳು ಚಂಡಮಾರುತದ ಬಿರುಗಾಳಿಗಳನ್ನು ತಡೆಯಬಹುದು, ಆದರೆ ಅವರಲ್ಲಿರುವ ಮೌಢ್ಯವನ್ನು ತೊಡೆದುಹಾಕಲು ಸಾಧ್ಯವೇ?!
ಮಣಿಪುರ ರಾಜ್ಯವು ಉತ್ತರಕ್ಕೆ ನಾಗಾಲ್ಯಾಂಡ್, ದಕ್ಷಿಣಕ್ಕೆ ಮಿಜೋರಾಂ, ಪಶ್ಚಿಮಕ್ಕೆ ಅಸ್ಸಾಂ ಮತ್ತು ಪೂರ್ವಕ್ಕೆ ಮಯನ್ಮಾರ್ ದೇಶದ ಗಡಿಯನ್ನು ಹೊಂದಿದೆ.
ಮಣಿಪುರದಲ್ಲಿ ಮಳೆಗೆ, ನೀರಿಗೆ ಕೊರತೆಯಿಲ್ಲ. ಇದರ ಪಶ್ಚಿಮಕ್ಕೆ ಬರಾಕ್ ನದಿಯ ಜಲಾನಯನ ಪ್ರದೇಶ, ಪೂರ್ವದಲ್ಲಿ ಯು ನದಿಯ ಜಲಾನಯನ ಪ್ರದೇಶ, ಉತ್ತರದಲ್ಲಿ ಲಾನ್ಯೆ ನದಿಯ ಜಲಾನಯನ ಪ್ರದೇಶ, ಮಧ್ಯದಲ್ಲಿ ಮಣಿಪುರ ನದಿಯ ಜಲಾನಯನ ಪ್ರದೇಶವನ್ನು ಹೊಂದಿ ಸಮೃದ್ಧವಾಗಿರುವಂತೆ, ಅಲ್ಲಿನ ಮಹಿಳೆಯರು ಧಾರಾಕಾರವಾಗಿ ಕಣ್ಣೀರನ್ನು ಸುರಿಸುತ್ತಿದ್ದಾರೆ. ಇಲ್ಲಿನ ಮಹಿಳೆಯರ ಕಣ್ಣೀರಿಗೆ ಮೊದಲನ್ನು ಗುರುತಿಸುವುದಕ್ಕೆ, ಕೊನೆಯನ್ನು ಗ್ರಹಿಸುವುದಕ್ಕೆ ಸಾಧ್ಯವಾಗುತ್ತಿಲ್ಲ.
ಮಣಿಪುರದ ಅತಿದೊಡ್ಡ ನದಿ ಬರಾಕ್. ಇದು ಇರಾಂಗ್, ಮಕು ಮತ್ತು ತುವೈ ಉಪನದಿಗಳನ್ನು ಹೊಂದಿ ಅಸ್ಸಾಂ ರಾಜ್ಯವನ್ನು ಪ್ರವೇಶಿಸುತ್ತದೆ. ಮಣಿಪುರ ನದಿಯ ಜಲಾನಯನ ಪ್ರದೇಶವು ಮಣಿಪುರ, ಇಂಫಾಲ್, ಇರಿಲ್, ನಂಬುಲ್, ಸೆಕ್ಮೆಂ, ಚಕ್ಪಿ, ತೌಬಲ್ ಮತ್ತು ಖುಗಾ ಎಂಬಂತಹ ಎಂಟು ನದಿಗಳನ್ನು ಹೊಂದಿದೆ. ಈ ಎಲ್ಲಾ ನದಿಗಳು ಸುತ್ತಮುತ್ತಲಿನ ಬೆಟ್ಟಗಳಿಂದಲೇ ಹುಟ್ಟಿಕೊಂಡಿವೆ. ಈ ನದಿಗಳ ಒಳಹರಿವಿನ ಮರ್ಮ ನಮ್ಮ ರಾಜಕಾರಣಿಗಳ ಮರ್ಮದಂತೆ ಯಾರಿಗೂ ತಿಳಿಯದಂತಹ ಕಗ್ಗಂಟಾಗಿದೆ. ನದಿಯು ತಣ್ಣಗಿದ್ದು, ಒಂದೇ ಭಾರಿ ಬೋರ್ಗರೆದು ತಣ್ಣಗಾಗುವಂತೆ ನಮ್ಮ ಪ್ರಧಾನಮಂತ್ರಿಗಳು ಮೂರು ತಿಂಗಳ ಕಾಲ ದಿವ್ಯ ಮೌನವಾಗಿದ್ದು, ಜನರ ನಿತ್ಯ ಜೀವನವು ಅಲ್ಲೋಲ-ಕಲ್ಲೋಲ ಆದಮೇಲೆ ತಣ್ಣಗೆ ಮಾತನಾಡಿದ್ದಾರೆ.
ಆದರೆ ಅಲ್ಲಿಗೆ ಹೋಗುವ ಧೈರ್ಯವನ್ನು ಮಾಡಿಲ್ಲ. ಚುನಾವಣೆ ಇದ್ದರೆ ಹತ್ತು-ಹದಿನೈದು ಬಾರಿ ರೋಡ್-ಶೋ ಮಾಡುವ ಇವರು ಕಷ್ಟದ ಕಾಲದಲ್ಲಿ ಆ ಕಡೆ ತಿರುಗಿಯು ನೋಡದೇ ಇರುವುದು ಭಾರತೀಯರು ಪಶ್ಚಾತ್ತಾಪಪಡುವಂತೆ ಮಾಡಿದೆ.
ಮಣಿಪುರವನ್ನು ಭೌತಿಕ ಲಕ್ಷಣಗಳಲ್ಲಿ ವಿಭಿನ್ನವಾಗಿರುವ ಎರಡು ವಿಭಿನ್ನ ಭೌತಿಕ ಪ್ರದೇಶಗಳಾಗಿ ನಿರೂಪಿಸಬಹುದು. ಒಂದು ಒರಟಾದ ಬೆಟ್ಟಗಳು, ಕಿರಿದಾದ ಕಣಿವೆಗಳ ಹೊರ ಪ್ರದೇಶ ಮತ್ತೊಂದು ಸಮತಟ್ಟಾದ ಬಯಲಿನ ಒಳ ಪ್ರದೇಶ. ಇಲ್ಲಿನ ಕಣಿವೆ ಪ್ರದೇಶವು ಸಮತಟ್ಟಾದ ಮೇಲ್ಮೈ ಮೇಲೆ ಏರುತ್ತಿರುವ ಬೆಟ್ಟಗಳು ಮತ್ತು ದಿಬ್ಬಗಳಿಂದ ಕೂಡಿದೆ.
ಇಲ್ಲಿನ ಲೋಕ್ಟಾಕ್ ಸರೋವರವು ಕೇಂದ್ರ ಬಯಲಿನಿಂದ ನಾಗಾಲ್ಯಾಂಡ್ನ ಗಡಿಯವರೆಗೂ ತನ್ನ ವಿಸ್ತಾರವನ್ನು ಹರಡಿಕೊಂಡಿದೆ. ಇಲ್ಲಿನ ಮಣ್ಣಿನ ಹೊದಿಕೆಗೂ ಗಂಡು-ಹೆಣ್ಣಿನ ಸಂಬಂಧಕ್ಕೂ ನಿಕಟವಾದ ಹೋಲಿಕೆ ಇರುವಂತೆ ಕಂಡುಬರುತ್ತದೆ. ಬೆಟ್ಟದ ಪ್ರದೇಶದಲ್ಲಿ ಕೆಂಪು ಫೆರುಜಿನಸ್ ಮಣ್ಣು ಮತ್ತು ಕಣಿವೆಯಲ್ಲಿ ಮೆಕ್ಕಲು ಮಣ್ಣು ಇದೆ. ಕಣಿವೆಯ ಮಣ್ಣು ಇಲ್ಲಿನ ಗಂಡಿನ ರೀತಿಯಲ್ಲಿ ಕಠಿಣವಾಗಿದ್ದರೆ, ಕಡಿದಾದ ಇಳಿಜಾರುಗಳಲ್ಲಿರುವ ಮಣ್ಣು ಹೆಣ್ಣಿನಂತೆ ಹೆಚ್ಚಿನ ಸವೆತಕ್ಕೆ ಒಳಗಾಗಿದೆ, ಒಳಗಾಗುತ್ತಿದೆ. ಇದರ ಪರಿಣಾಮವಾಗಿ ಬಂಜರು ಬಂಡೆಗಳ ಇಳಿಜಾರುಗಳು ಸೃಷ್ಟಿಯಾಗುವಂತೆ ಅಲ್ಲಿನ ಪುರುಷರ ಮನಸ್ಸುಗಳು ಬಂಡೆಯಂತೆ ಆಗುತ್ತಿರುವುದು ಖೇದಕರವಾದ ಸಂಗತಿಯಾಗಿದೆ.
ಬೆಟ್ಟದ ತಪ್ಪಲಿನಲ್ಲಿ ರತ್ನಗಂಬಳಿಯನ್ನು ಹಾಸಿಹೊದಿಸಿರುವಂತೆ ಕಾಣುವ ಫ್ಲೋರಾ ಹೂವುಗಳು ಅಲ್ಲಿನ ಬುಡಕಟ್ಟು ಮಹಿಳೆಯರ ಸೌಂದರ್ಯವನ್ನು ಬಿತ್ತರಿಸಿದರೆ, ಬೆಟ್ಟಗಳು ಪುರುಷಾಂಕಾರದಂತೆ ಕಾಣುತ್ತವೆ. ಇಲ್ಲಿ ಏನಿಲ್ಲ ಹೇಳಿ, ನೈಸರ್ಗಿಕವಾದ ಸಸ್ಯವರ್ಗವಿದೆ. ನಾಲ್ಕು ರೀತಿಯ ವಿಶಾಲವಾಗಿ ಹರಡಿರುವ ಉಷ್ಣವಲಯದ ಅರೆ-ನಿತ್ಯಹರಿದ್ವರ್ಣ, ಒಣ ಸಮಶೀತೋಷ್ಣ ಅರಣ್ಯ, ಉಪ-ಉಷ್ಣವಲಯದ ಪೈನ್ ಕಾಡುಗಳು ಮತ್ತು ಉಷ್ಣವಲಯದ ತೇವಾಂಶವುಳ್ಳ ಅರಣ್ಯಗಳಿವೆ. ತೇಗ, ಪೈನ್, ಓಕ್, ಯುನಿಂಗ್ದೌ, ಲಿಹಾವೊ, ಬಿದಿರಿನ ಮರಗಳಿವೆ. ತಮ್ಮ ಕಷ್ಟಗಳ ನಡುವೆಯೂ ರಬ್ಬರ್, ಟೀ, ಕಾಫಿ, ಕಿತ್ತಳೆ, ಏಲಕ್ಕಿ ಬೆಳೆಯುತ್ತಾರೆ. ಆದರೆ ಅವರು ಹೆಚ್ಚು ಬೆಳೆಯುವ ಮತ್ತು ಇಷ್ಟಪಡುವ ಅಕ್ಕಿಯಂತೆ ಅಲ್ಲಿನ ಪುರುಷರ ಮನಸ್ಸುಗಳು ಬೇಗನೇ ಹಾಳಾಗುತ್ತಿರುವುದು ಜಾತಿ, ಧರ್ಮಗಳೆಂಬ ಕೀಟಗಳಿಂದ ಎಂಬುದನ್ನು ಅವರು ತಿಳಿಯದಿರುವುದು ದುರದೃಷ್ಟಕರ.
ಮಣಿಪುರ ಮತ್ತು ನಾಗಾಲ್ಯಾಂಡ್ಗಳ ಗಡಿಗಳ ನಡುವೆ ಇರುವ ಝುಕೊ ಎಂಬ ಕಣಿವೆಯು ಸಮಶೀತೋಷ್ಣ ಹವಾಮಾನವನ್ನು ಹೊಂದಿರುವಂತೆ, ಅಲ್ಲಿನ ಜನರಿಗೆ ಸಮಚಿತ್ತತೆಯನ್ನು ನೀಡಿದ್ದರೆ ಚೆನ್ನಾಗಿರುತ್ತಿತ್ತು. ಭಾರತದ ಈಶಾನ್ಯ ಮೂಲೆಯು ಸಾಮಾನ್ಯವಾಗಿ ಸೌಹಾರ್ದಯುತವಾದ ಹವಾಮಾನವನ್ನು ಹೊಂದಿದೆ. ಆದರೆ ಅಲ್ಲಿನ ಜನರು ಸೌಹಾರ್ದಯುತವಾದ ಮನೋಭಾವನೆಯನ್ನು ಹೊಂದಿಲ್ಲ. ಅಲ್ಲಿನ ವಾತಾವರಣದಂತೆ ಚಳಿಗಾಲದಲ್ಲಿ ಚಳಿ ಹೆಚ್ಚಾಗಿರುವಂತೆ, ಬೇಸಿಗೆಯಲ್ಲಿ ಬಿಸಿಲು ಗರಿಷ್ಠ ಮಟ್ಟಕ್ಕೆ ಹೋಗುವಂತೆ ಅಲ್ಲಿನ ಜನರು ಆವೇಶಕ್ಕೊಳಗಾಗುತ್ತಾರೆ.
ಇಂಫಾಲದ ಮೈತೇಯಿ ಜನರು ವಾರ್ಷಿಕ ಸರಾಸರಿ 933 ಮಿಲಿಮೀಟರ್ ಮಳೆಯನ್ನು ಪಡೆಯುತ್ತಾರೆ. ಆದರೂ ಕೂಡ ತಮ್ಮದೇ ನೆಲದಲ್ಲಿರುವ ಕುಕಿ ಜನಾಂಗದ ಮಹಿಳೆಯರು ಕಣ್ಣೀರು ಸುರಿಸುವಂತೆ ನಡೆದುಕೊಳ್ಳುತ್ತಾರೆ.
ನೈರುತ್ಯ ಮಾನ್ಸೂನ್ ಮಾರುತಗಳು ಬಂಗಾಳಕೊಲ್ಲಿಯಿAದ ತೇವಾಂಶವನ್ನು ಎತ್ತಿಕೊಂಡು ಪೂರ್ವ ಹಿಮಾಲಯ ಶ್ರೇಣಿಗಳ ಕಡೆಗೆ ಹೋಗುವಾಗ ಈ ಪ್ರದೇಶದಲ್ಲಿ ಮಳೆಯಾಗುವಂತೆ ಪ್ರಕೃತಿಯೇ ನೋಡಿಕೊಂಡರೂ ಮಹಿಳೆಯರ ಕಣ್ಣೀರು ಮಾತ್ರ ಧಾರಾಕಾರವಾಗಿ ಹರಿಯುವಂತೆ ತಮ್ಮ ಸ್ವಾರ್ಥಕ್ಕಾಗಿ ರಾಜಕಾರಣಿಗಳು ನೋಡಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ಮಣಿಪುರದಲ್ಲಿ ಹವಾಮಾನದಲ್ಲಿ ಬದಲಾವಣೆ ಹೆಚ್ಚಾಗುತ್ತಿದೆ. ಉದಾಹರಣೆಗೆ ಮಳೆ ಮತ್ತು ತಾಪಮಾನದಲ್ಲಿ ತೀವ್ರ ಬದಲಾವಣೆಗಳು ಹೆಚ್ಚಾಗುತ್ತಿವೆ. ಆದರೆ ಅಲ್ಲಿನ ಜನಾಂಗಗಳ ನಡುವಿನ ಬಾಂಧವ್ಯದ ಬದ್ಧತೆಗಳು ಏರುಪೇರಾಗುತ್ತಿರುವುದು ಸಾಕಷ್ಟು ಹಿಂದಿನಿAದಲೇ ನಡೆಯುತ್ತಿರುವುದು ಮನುಷ್ಯ ಸಂಬಂಧಗಳ ನಡುವೆ ಬಿರುಕು ಮೂಡಿರುವುದರ ದ್ಯೋತಕವಾಗಿದೆ. ಕಣಿವೆ ಅಥವಾ ಬಯಲು ಪ್ರದೇಶಗಳಲ್ಲಿ ಮೈತೇಯಿ ಮಾತನಾಡುವ ಅಂದರೆ ಮಣಿಪುರಿ ಭಾಷಿಕರು ನೆಲೆಸಿದ್ದಾರೆ. ಬೆಟ್ಟಗಳಲ್ಲಿ ನಾಗಾಗಳು, ಕುಕಿಗಳು ಮೊದಲಾದ ಸಣ್ಣ ಬುಡಕಟ್ಟು ಜನರು ವಾಸಿಸುತ್ತಿದ್ದಾರೆ. ಇವರು ಬೆಟ್ಟಗಳ ಮೇಲ್ಮೈ ಮಣ್ಣಿನಂತೆ ಮೈತೇಯಿ ಜನರ ಹಾವಳಿಗೆ ಕೊಚ್ಚಿ ಹೋಗುತ್ತಿದ್ದಾರೆ. ಅಲ್ಲಿ ಮೈತೇಯಿ ಭಾಷೆಯು ಮಣಿಪುರಿ ಭಾಷೆಗೆ ಸಮಾನಾರ್ಥಕವಾಗಿ ಬಳಕೆಯಾಗುತ್ತಿರುವುದರಿಂದ ಇಲ್ಲಿನ ಬಹುಪಾಲು ಜನಸಂಖ್ಯೆ ಮೈತೇಯಿಯರೇ ಎಂದು ಕರೆಸಿಕೊಂಡಿದ್ದಾರೆ.
ಇವರು ಮಣಿಪುರದ ಮುಖ್ಯ ಜನಾಂಗ ಎಂಬುದೇನೋ ಸರಿ. ಆದರೆ ನಾಗಾ ಮತ್ತು ಕುಕಿ ಬುಡಕಟ್ಟು ಜನಾಂಗಗಳನ್ನು ಹಲವಾರು ಬುಡಕಟ್ಟು ಜನಾಂಗಗಳಾಗಿ ವಿಂಗಡಿಸಲಾಗಿದೆ. ಇವರೆಲ್ಲರೂ ಒಗ್ಗಟ್ಟಾಗಿದ್ದರೆ ನಮ್ಮ ಬೇಳೆ ಬೇಯ್ಯುವುದಿಲ್ಲ ಎಂಬ ಸಾಂಸ್ಕೃತಿಕ ರಾಜಕಾರಣವು ವ್ಯವಸ್ಥಿತವಾಗಿ ಬಹಳ ಹಿಂದಿನಿAದಲೇ ಇವರನ್ನು ಹೊಡೆದು ಹೊಡೆದು ಹಾಳುತ್ತಿದೆ.
ಮಣಿಪುರದಲ್ಲಿ ಮೇ 4ರಂದು ಜರುಗಿದ ಇಬ್ಬರು ಮಹಿಳೆಯರ ಸಾಮೂಹಿಕ ಅತ್ಯಾಚಾರ ಮತ್ತು ಬೆತ್ತಲೆ ಮೆರವಣಿಗೆಯು ಜುಲೈ 20ರಂದು ಹೊರ ಜಗತ್ತಿಗೆ ತಿಳಿಯಿತು. ಈ ಘಟನೆಯು ಪ್ರಪಂಚದ ಜನರನ್ನು ತಲ್ಲಣಗೊಳಿಸಿತು.
ಇಡೀ ಜಗತ್ತೇ ಈ ಕೃತ್ಯವನ್ನು ವಿರೋಧಿಸಿದರೂ ಕೂಡ, ಒಟ್ಟು ದೇಶವನ್ನೇ ತನ್ನ ಕುಟುಂಬ ಎಂದು ಕರೆದುಕೊಳ್ಳುವ ನಮ್ಮ ಪ್ರಧಾನಿಗಳು ಬೆಂಕಿ ಹೊತ್ತಿಕೊಂಡ ಮೂರು ತಿಂಗಳು ದಿವ್ಯ ಮೌನದಿಂದ ಇದ್ದರು ಎಂಬುದನ್ನು ಜಗತ್ತು ಮರೆಯುತ್ತದೆಯೇ? 140 ಕೋಟಿ ಜನರು ನನ್ನ ಕುಟುಂಬಸ್ಥರೇ ಎಂದು ಹೇಳಿಕೊಳ್ಳುವ ಪ್ರಧಾನಿಗಳು ಅದರಲ್ಲಿ ಮಹಿಳೆಯರೂ ಇದ್ದಾರೆ ಎಂಬುದನ್ನು ಮರೆತಿದ್ದಾರೆಯೇ!? ಒಟ್ಟಾರೆ ನಮ್ಮ ಪ್ರಧಾನಿಗಳ ಮೌನ, ಮೈತೇಯಿ ಮತಾಂಧರ ಆರ್ಭಟ ಕುಕಿ ಜನಾಂಗದ ಮಹಿಳೆಯರ ಬದುಕನ್ನು ಮೂರಾಬಟ್ಟೆ ಮಾಡಿರುವುದಂತೂ ಖಚಿತ.
(ಡಾ. ಸಿದ್ದಯ್ಯ ರೆಡ್ಡಿಹಳ್ಳಿ, 9449899520)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಮದ್ರಾಸ್ ಐ ವೈರಾಣುವಿಗೆ ಭಯ ಪಡಬೇಕಾಗಿಲ್ಲ : ಡಾ. ನಾಗರಾಜ
ಸುದ್ದಿದಿನ,ದಾವಣಗೆರೆ : ಸಾಮಾನ್ಯವಾಗಿ ಚಳಿಗಾಲದಲ್ಲಿ ಕಾಣಿಸಿಕೊಳ್ಳುತ್ತಿದ್ದ ಮದ್ರಾಸ್ ಐ ವೈರಾಣು ಅತೀ ವೇಗವಾಗಿ ಹರಡುತ್ತಿದ್ದು ಇದಕ್ಕೆ ಭಯ ಪಡಬೇಕಾಗಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗರಾಜ ತಿಳಿಸಿದ್ದಾರೆ.
ಮದ್ರಾಸ್ ಐ ಈ ಬಾರಿ ಮಳೆಗಾಲದಲ್ಲಿ ಆರಂಭವಾಗಿದ್ದು ರಾಜ್ಯದ ಜನರಕಣ್ಣು ಕೆಂಪಾಗಿಸುತ್ತಿದೆ, ಮುಖ್ಯವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಹಾಸ್ಟಲ್ ವಿದ್ಯಾರ್ಥಿಗಳಲ್ಲಿ “ಮದ್ರಾಸ್ ಐ” ವೇಗಾಗಿ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ, ಕಂಜಕ್ವಿಟಿಸ್ ಎಂದು ಕರೆಯಲಾಗುವ ಮದ್ರಾಸ್ ಐ ಅಥವಾ ಕಣ್ಣು ವೈರಾಣುಗಳಿಂದ ಹರಡುವ ಕಣ್ಣಿನ ಸಮಸ್ಯೆ ತೇವಾಂಶ ಹೆಚ್ಚಾದಾಗ ಅಥವಾ ಚಳಿಗಾಲದ ವಾತಾವರಣದಲ್ಲಿ ಹುಟ್ಟಿಕೊಳ್ಳುವ ಈ ವೈರಾಣುಗಳು ನೇರವಾಗಿಕಣ್ಣಿ ಮೇಲೆ ಪರಿಣಾಮಉಂಟು ಮಾಡುತ್ತವೆ, ರಾಜ್ಯದಲ್ಲಿ ಮಳೆಯಾಗುತ್ತಿದ್ದ ಪರಿಣಾಮ ಬಿಸಿಲು ಇಲ್ಲದಂತಾಗಿದೆ ಇದರ ಪರಿಣಾಮತೇವಾಂಶ ಹೆಚ್ಚಾಗಿ ಅವಧಿಗೂ ಮೊದಲೇ ಈ ವೈರಾಣು ದಾಂಗುಡಿ ಇರಿಸಿದೆ.
ರೋಗದ ಲಕ್ಷಣಗಳು
ಕಸ ಬಿದ್ದದಂತೆಆಗುವ ರೀತಿಯಾಗಿಕಣ್ಣುಚುಚ್ಚುವುದು, ಬೆಳಗ್ಗೆ ಎದ್ದಾಗ ಹೆಚ್ಚು ಪಿಸುರು (ಪಿಚ್ಚು) ಬರುತ್ತದೆ, ಕಣ್ಣುಗಳು ಕೆಂಪಾಗಿ, ಕಿರಿಕಿರಿ ಹೆಚ್ಚುವುದು, ಕಣ್ಣಲ್ಲಿ ನೀರು ಬರುವುದು, ರೆಪ್ಪೆ ಕಣ್ಣು ದಪ್ಪ ಆಗುವುದು ಕಂಡು ಬರುತ್ತದೆ.
ಮುಂಜಾಗೃತಾ ಕ್ರಮಗಳು
ಸಮಸ್ಯೆ ಇರುವವರು ಕೆಲದಿನ ಪ್ರತ್ಯೇಕ ವಾಸ ಮಾಡಿ, ಲಕ್ಷಣಗಳು ಕಾಣಿಸಿಕೊಳ್ಳದಿದ್ದರೆ, ಕಣ್ಣಿಗೆಔಷಧ ಹಾಕಿಸಿಕೊಳ್ಳಬೇಡಿ, ದಿನಕ್ಕೆ 8-10 ಬಾರಿ ಸ್ಯಾನಿಟೈಸರ್, ಸೋಪು ಬಳಸಿ ಕೈ ತೊಳೆದುಕೊಳ್ಳಿ, ವೈರಸ್ ಕಾಣಿಸಿಕೊಂಡಾಗ ಹತ್ತಿರದ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಸಲಹೆ ಪಡೆಯಬೇಕು, ವೈದ್ಯರ ತಪಾಸಣೆ ಮಾಡಿಸದೇ, ಔಷಧಿ ಅಂಗಡಿಗಳಲ್ಲಿ ಸಿಗುವ ಡ್ರಾಪ್ಸ್ಗಳನ್ನು ಬಳಸಬಾರದು, ಕಣ್ಣು ಮುಟ್ಟಿಕೊಳ್ಳುವುದನ್ನು ಕಡಿಮೆ ಮಾಡಬೇಕು.
ಪರಿಹಾರ
ಸಮಸ್ಯೆ ಉಳ್ಳವರು ಇತರರಿಂದದೂರಇರಬೇಕು, ವೈದ್ಯರ ಬಳಿ ತೋರಿಸಿ, ಐ ಡ್ರಾಪ್ಸ್ ಮಾತ್ರ ಹಾಕಬೇಕು, ಸಮಸ್ಯೆ ಕಡಿಮೆ ಆಗುವವರೆಗೆ ಗಾಳಿಗೆ ಹೋಗಬಾರದು, ದ್ವಿಚಕ್ರ ವಾಹನ ಓಡಿಸಬಾರದು, ಟಿ.ವಿ,ಮೊಬೈಲ್, ಕಂಪ್ಯೂಟರ್ಗಳನ್ನು ನೋಡುವುದನ್ನ ಕಡಿಮೆ ಮಾಡಿ ಕಣ್ಣಿಗೆ ವಿಶ್ರಾಂತಿಕೊಡಬೇಕು.
ರೋಗದ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣವೇ ಸಮೀಪದ ನಗರ, ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯಆರೋಗ್ಯ ಕೇಂದ್ರಗಳು, ತಾಲ್ಲೂಕು ಆಸ್ಪತ್ರೆಗಳು ಹಾಗೂ ಜಿಲ್ಲಾಆಸ್ಪತ್ರೆಗೆ ಭೇಟಿ, ವೈದ್ಯರ ಹತ್ತಿರತಪಾಸಣೆ ಮಾಡಿಸಿ ಚಿಕಿತ್ಸೆ ಪಡೆಯುವುದು ಸೂಕ್ತ. ವೈರಾಣುವಿನ ಸಮಸ್ಯೆ ಆಗಿರುವ ಕಾರಣ ನಿರ್ದಿಷ್ಟ ಚಿಕಿತ್ಸೆ ಇಲ್ಲ ಮುನ್ನೆಚ್ಚರಿಕೆಯೇ ಮದ್ದಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ6 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ6 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ6 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ಕವಿತೆ | ನೆನಪು
-
ದಿನದ ಸುದ್ದಿ3 days ago
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
-
ದಿನದ ಸುದ್ದಿ2 days ago
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ