ನೆಲದನಿ
ನುಡಿಯ ಒಡಲು – 01 : ನುಡಿಯೆಲ್ಲ ತತ್ವ ನೋಡಾ..!
- ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಅಲ್ಲಮನ ಈ ಮುಂದಿನ ವಚನವೊಂದರ ಮೂಲಕ ‘ನಮಗೆ ಬೇಕಾಗಿರುವ ಬದುಕಿನ ದಾರಿಗಳು’ ಎಂತಹವು? ಅಂತಹ ದಾರಿಯೊಂದನ್ನು ರೂಪಿಸಿಕೊಳ್ಳಲು ‘ನುಡಿ ಹೇಗೆ ಒತ್ತಾಸೆಯಾಗಬಲ್ಲದು’ ಎಂಬುದನ್ನು ಚರ್ಚಿಸುವುದು ಈ ಟಿಪ್ಪಣಿಯ ಗುರಿಯಾಗಿದೆ.
ಏಕೆಂದರೆ ಬದುಕಿನ ಚಲನಶೀಲತೆಗೆ ನುಡಿ ಕಾರಣವಾಗುವ ಹಾಗೆಯೇ, ಬದುಕಿನ ದಾರಿಗಳನ್ನು ತಪ್ಪಿಸುವಲ್ಲಿಯೂ ಮೊದಲ ಕಾರಣವೇ ನುಡಿ ಆಗಿರುತ್ತದೆ. ಹಾಗಾಗಿ ನುಡಿಯೊಂದು ಯಾವತ್ತಿಗೂ ನಿರ್ಲಿಪ್ತವಾಗಿರುವ ವಿದ್ಯಮಾನವಾಗಿರಲಾರದು. ಆ ಕಾರಣವಾಗಿ ಬದುಕಿನ ಹಲವು ವಿನ್ಯಾಸಗಳನ್ನು ಸೂಚಿಸುವ ಸೂಚಕವಾಗಿ ನುಡಿಯೊಂದು ಮುಂಚೂಣೆಗೆ ಬಂದಿರುತ್ತದೆ ಎಂಬೀ ದಿಟವನ್ನು ಒಪ್ಪಿ ನಾನು ಈ ಬರಹವನ್ನು ಬರೆಯಲು ಮುಂದಾಗಿರುತ್ತೇನೆ.
“ತನ್ನ ತಾನರಿದಡೆ ನುಡಿಯೆಲ್ಲ ತತ್ವ ನೋಡಾ!
ತನ್ನ ತಾ ಮರೆದಡೆ ನುಡಿಯೆಲ್ಲ ಮಾಯೆ ನೋಡಾ!
ಅರಿದು ಮರೆದು ಶಿವಯೋಗಿಯ ಶಬ್ದವೆಲ್ಲವು
ಉಪದೇಶವಲ್ಲದೇ ಭಿನ್ನವುಂಟೆ?
ನಿನ್ನ ಮನದ ಕಳವಳವ ತಿಳುಹಲೆಂದು ಮಾತನಾಡಿಸಿ ನೋಡಿದಡೆ,
ಎನ್ನ ಮನದೊಳಗೆ ಕಂದು ಕಲೆ ಎಂಬುದಿಲ್ಲ ನೋಡಾ!
ನಮ್ಮ ಗುಹೇಶ್ವರಲಿಂಗಕ್ಕೆ ನೀನು ಕರುಣದ ಶಿಶುವಾದ ಕಾರಣ
ಬಾಯ್ದೆಗೆದೆನಲ್ಲದೆ, ಭಿನ್ನವುಂಟೆ ಹೇಳಾ!”
–ಅಲ್ಲಮಪ್ರಭು
ಅಲ್ಲಮನನ್ನು ಕುರಿತು ಈಗಾಗಲೆ ಸಾಕಷ್ಟು ಬರೆಹಗಳು ಬಂದಿವೆ. ಅವನ ವಚನಗಳನ್ನೂ ಕುರಿತು ಇನ್ನೂ ಹೆಚ್ಚಿನ ಬರೆಹಗಳು ಬಂದಿರುತ್ತವೆ. ಆದರೂ ಅಲ್ಲಮನ ವಚನವೊಂದನ್ನು ಕುರಿತು ಒಂದಿಷ್ಟು ಚರ್ಚೆಗಳನ್ನು, ನುಡಿಯರಿಮೆ ನೆಲೆಯಿಂದ ಬೆಳೆಸುವುದು ಮಾತ್ರ ಈ ಟಿಪ್ಪಣಿಯ ಗುರಿಯಾಗಿದೆ. ಅಂದರೆ ನುಡಿಯನ್ನೇ ನೆಲೆಯಾಗಿಸಿಕೊಂಡಿರುವ ಅಲ್ಲಮನ ಈ ವಚನವÀನ್ನು ಮಾತ್ರ ಎದುರಿಗೆ ಇಟ್ಟುಕೊಂಡು ಇಲ್ಲಿಯ ಚರ್ಚೆಗಳು ಮೈದಾಳುತ್ತವೆ.
ಇಲ್ಲಿಯ ಯಾವ ಚರ್ಚೆಯು ಕೂಡ ತನ್ನಷ್ಟಕ್ಕೆ ತಾನು ಸ್ವತಂತ್ರವೂ ಅಲ್ಲ ಮತ್ತು ಸ್ವಾಯತ್ತವೂ ಅಲ್ಲ. ಅಂತಹವೊಂದು ಸ್ವಾತಂತ್ರ್ಯ ಹಾಗೂ ಸ್ವಾಯತ್ತತೆ ಯಾವುದೆ ತಿಳಿವು ಇಲ್ಲವೇ ಚಿಂತನೆಯೊಟ್ಟಿಗೆ ಪ್ರತ್ಯೇಕವಾಗಿ ನೆಲೆಗೊಳ್ಳಲಾರದು. ತಿಳಿವು ಯಾವತ್ತಿಗೂ ಸಮೂಹಗಳ ಒಡಲಿಂದಲೇ ಹೊರಹೊಮ್ಮುತ್ತದೆ.
ಹೀಗೆ ಹೊರಹೊಮ್ಮುವ ತಾತ್ವಿಕ ಚೌಕಟ್ಟುಗಳು ಎದುರಿಸಬಹುದಾದ ಸಾಮಾಜಿಕ-ರಾಜಕೀಯ ಬಿಕ್ಕಟ್ಟುಗಳು ಎಂತಹವು? ಮತ್ತು ಅವುಗಳ ಪರಿಣಾಮದಿಂದ ಸಮೂಹಗಳು ಅನುಭವಿಸುವ ಇಕ್ಕಟ್ಟುಗಳ ಸ್ವರೂಪ ಯಾವ ಬಗೆಯದು? ಎಂಬುದನ್ನು ವಿವರಿಸುವುದು ಈ ವಚನದ ಆಶಯವಾಗಿದೆ. ಇಂತಹ ಆಶಯಗಳನ್ನು ಸಮುದಾಯಗಳ ವಿನ್ಯಾಸಗಳೊಂದಿಗೆ ಮುಖಾಮುಖಿ ಆಗಿಸಿದರೆ, ಹುಟ್ಟಿಕೊಳ್ಳಬಹುದಾದ ಸಾಮಾಜಿಕ ಬಿಕ್ಕಟ್ಟುಗಳು ಎಂತಹವು ಎಂಬುದನ್ನು ಈ ಚರ್ಚೆಗಳು ಎತ್ತಿ ತೋರಿಸುತ್ತವೆ.
ಒಂದು ಸಂಗತಿಯನ್ನು ಮೊದಲೇ ನಿಚ್ಚಳಪಡಿಸಿಕೊಳ್ಳಬೇಕು. ಅದೇನೆಂದರೆ ನುಡಿ ಕುರಿತು ಅಲ್ಲಮನ ಈ ವಚನವು ಕನ್ನಡವನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಹೇಳಿರುವ ಮಾತಲ್ಲ. ಒಟ್ಟಾರೆ ನುಡಿಯ ತಾತ್ವಿಕತೆಯನ್ನು, ಮಹತ್ವವನ್ನು ಹಾಗೂ ಮನೋಧರ್ಮವನ್ನು ಕಂಡರಿಸುವ ನಿಲುವುಗಳು ಇದರಲ್ಲಿ ಅಡಕವಾಗಿವೆ. ಇದೊಂದು ರೀತಿಯಲ್ಲಿ ನುಡಿಯನ್ನು ಕುರಿತು, ಆ ನುಡಿ ಮೂಲಕವೇ ಬಿಡಿಸಿ ಹೇಳುವ ಬಗೆಯಾಗಿದೆ.
ಇಂತಹ ಮೆಟಾಲಿಂಗ್ವಿಸ್ಟಿಕ್ ಸ್ವರೂಪದ ವಿವರಗಳನ್ನು ತಾತ್ವಿಕಗೊಳಿಸುವುದು ಅಷ್ಟೊಂದ ಸುಳುವಾದ ಸಂಗತಿಯಲ್ಲ. ಭಾಷಾಶಾಸ್ತ್ರದಲ್ಲಿ ಇಂತಹ ಚಿಂತನೆಯನ್ನು ನುಡಿ ತತ್ವಶಾಸ್ತ್ರವೆಂದು ಕರೆಯುತ್ತಾರೆ.
ಈ ನುಡಿ ತತ್ವಶಾಸ್ತ್ರವು ಕನ್ನಡದಲ್ಲಿ ಒಂದು ಶಾಸ್ತ್ರೀಯ ನೆಲೆಯಾಗಿ ಇದುವರೆಗೂ ಬೆಳೆದು ಬರಲಿಲ್ಲ (ಕೆಲವು ಅಪವಾದಗಳನ್ನು ಹೊರತುಪಡಿಸಿ ಈ ಮಾತನ್ನು ಹೇಳುತ್ತೇನೆ). ಆದರೆ ಸಾಹಿತ್ಯದಲ್ಲಿ ಹಾಗೂ ನುಡಿ ಮತ್ತು ಸಂಸ್ಕ್ರುತಿ ಕುರಿತ ಬರೆಹಗಳಲ್ಲಿ ಈ ನುಡಿ ತತ್ವಶಾಸ್ತ್ರೀಯ ಚಿಂತನೆಗಳು ಪ್ರಕಟಗೊಂಡಿರುವುದನ್ನು ಕಾಣಬಹುದು.
ಇಂತಹ ಮೆಟಾಲಿಂಗ್ವಿಸ್ಟಿಕ್ ಚಿಂತನೆಗಳ ಹಿಂದೆ ಸಮೂಹಗಳ ಏಳ್ಗೆಯನ್ನು ಕಾಣುವ ಇರಾದೆಯು ಅಂತಸ್ಥವಾಗಿರುತ್ತದೆ. ಇಂತಹ ಚಿಂತನೆಗಳು, ಪ್ರಜಾಪ್ರಭುತ್ವದ ಮಾದರಿಯಲ್ಲಿ ಕೆಲಸ ಮಾಡುತ್ತವೆ. ಅಂದರೆ ಆಯಾ ಸಮಾಜಿಕರ ಅಭಿವ್ಯಕ್ತಿಗಳ ನಂಬಿಕೆಯನ್ನು ವೈಚಾರಿಕಗೊಳಿಸುವ ನೆಲೆಯಾಗಿರುತ್ತವೆ. ಸಮೂಹಗಳ ಒಡಲಲ್ಲಿ ಹುದುಗಿರುವ ಅಸಮಾನ ರಚನೆಗಳ ವಿನ್ಯಾಸಗಳನ್ನು ವೈಚಾರಿಕವಾಗಿ ಸರಿಪಡಿಸುವ ಮಾದರಿಗಳು ನುಡಿಯ ಇಂತಹ ತಾತ್ವಿಕ ಚೌಕಟ್ಟುಗಳಲ್ಲಿ ಸಿಗುತ್ತವೆ.
ಮನುಷ್ಯ ತನ್ನ ಬುದ್ಧಿಯನ್ನು ಯಥಾವತ್ತಾಗಿ ಬಳಸುವುದಕ್ಕೆ ಮತ್ತು ಆ ಹೊತ್ತಿನ ವಾಸ್ತವವನ್ನು ಅರಿವುದಕ್ಕೆ ಮಾತ್ರ ಸೀಮಿತನಾಗದೇ, ಇಂತಹ ಯಥಾಸ್ಥಿತಿ ಮತ್ತು ವಾಸ್ತವವನ್ನು ಬದಲಾಯಿಸುವ ನಿಲುವುಗಳನ್ನು ಹೊಂದಿರುತ್ತಾನೆ. ಗ್ರಹಿಕೆಯ ಮೂಲತತ್ವಗಳ ಬೆಳವಣಿಗೆ, ಬದಲಾವಣೆ ಹಾಗೂ ವೈಚಾರಿಕಗೊಳಿಸುವ ಮಾದರಿಗಳು ನುಡಿಯಿಂದಲೇ ಮೊದಲಾಗುತ್ತವೆ.
ಸಾಂಸ್ಕ್ರುತಿಕ, ರಾಜಕೀಯ ಹಾಗೂ ಶೈಕ್ಷಣಿಕ ಕ್ರಾಂತಿಗಳನ್ನು ನಿರಂತರಗೊಳಿಸಲು ನುಡಿಯ ಈ ವೈಚಾರಿಕ ಮಾದರಿಗಳು ಯಾವತ್ತಿಗೂ ನೆರವಾಗುತ್ತವೆ. ಅರವತ್ತರ ದಶಕದಲ್ಲಿ ಯುರೋಪಿನ ಚಿಂತನೆಯ ಮಾದರಿಗಳಲ್ಲಿ ತಲೆಯೆತ್ತಿದ ಇಂತಹ ಪ್ರಕ್ರಿಯೆಯನ್ನೇ ಭಾಷಿಕ ತಿರುವು (ಲಿಂಗ್ವಿಸ್ಟಿಕ್ ಟರ್ನ್) ಎಂದು ಗುರುತಿಸಿರುವುದನ್ನು ಕಾಣಬಹುದು.
ಮಾನವ ಇಲ್ಲವೇ ಸಮೂಹಗಳು ಚರಿತ್ರೆಯ ಉತ್ಪನ್ನ ಹಾಗೂ ಚರಿತ್ರೆಗಳೇ ಸಮೂಹಗಳನ್ನು ರೂಪಿಸುತ್ತವೆ ಎಂಬ ಸರಳವಾದ ನಂಬಿಕೆಯನ್ನು, ಬದಲಾಯಿಸುವ ನೆಲೆಗಳು ಇಂತಹ ಭಾಷಿಕ ತಿರುವಿನಲ್ಲಿ ಹುದುಗಿರುತ್ತವೆ. ಪರಿಣಾಮವಾಗಿ ಚರಿತ್ರೆ ಮತ್ತು ಚರಿತ್ರೆಯ ತಾತ್ವಿಕ ಚೌಕಟ್ಟುಗಳನ್ನು ಮರುಕಟ್ಟಲು ಸಾಧ್ಯವಾಗುತ್ತದೆ.
ಸಾಮಾಜಿಕ ಮತ್ತು ರಾಜಕೀಯ ಪಲ್ಲಟವನ್ನು ನೆಲೆಗೊಳಿಸುವ ಬಗೆಯೇ ಈ ಭಾಷಿಕ ತಿರುವುಗಳ ಮುಖ್ಯ ಗುರಿಯಾಗಿರುತ್ತದೆ. ಅಲ್ಲಮನ ಈ ಮೇಲಿನ ವಚನವು ಕೂಡ ಇಂತಹ ತಿಳಿವನ್ನೇ ಮಂಡಿಸುತ್ತದೆ. ಆದರೆ ಈ ಬಗೆಯ ಸಾಹಿತ್ಯಕ ಪರಿಕರಗಳು ಅರಿವಿನ ಆಕರಗಳಾಗಿ ಮಾನ್ಯತೆ ಪಡೆಯದೆ ಇರುವುದರಿಂದ, ಅವುಗಳೊಳಗಿನ ಚಿಂತನೆ ಮತ್ತು ಚಿಂತನೆಯನ್ನು ಕಟ್ಟುವ ಪರಿಕರಗಳು ಕೇವಲ ರಸಾನುಭವಕ್ಕೆ ಸೀಮಿತವಾಗಿವೆ.
ಜ್ಞಾನಮೀಮಾಂಸೆ ಎಂಬುದು ಸಮುದಾಯಗಳ ವಿವೇಕಕ್ಕೆ ಹೊರತಾದ ಚೌಕಟ್ಟು ಎಂಬ ನಂಬಿಕೆಯೇ ಸಾಮಾಜಿಕ-ಮಾನಸಿಕ ಬಿರುಕುಗಳಿಗೆ ಕಾರಣವಾಗುತ್ತದೆ. ಒಂದೊಂದು ನುಡಿ ಸಮುದಾಯದ ಲಾಂಗ್ವೇಜ್ ಸೈಕಾಲಜಿ ಮತ್ತು ಲಾಂಗ್ವೇಜ್ ಸೋಶಿಯಾಲಜಿಯನ್ನು ಆಳವಾದ ಓದಿಗೆ ಒಗ್ಗಿಸದೇ ಹೋದರೆ, ಅಂತಹ ಸಮುದಾಯ ಯಾವುದೇ ಏಳ್ಗೆಯನ್ನು ಕಾಣಲಾರದು ಹಾಗೂ ಬದುಕಿನ ಮುಂಗಾಣ್ಕೆಯನ್ನೂ ಹೊಂದಲು ಸಾಧ್ಯವಾಗಲಾರದು. ಇಂತಹ ಇಕ್ಕಟ್ಟುಗಳಿಂದ ಬಿಡಿಸಿಕೊಳ್ಳಲು ನುಡಿ ಮತ್ತು ನುಡಿಯ ಓದುಗಳನ್ನು ನಾವೆಲ್ಲರೂ ನಂಬಬೇಕಿದೆ.
ಯಾವುದೇ ವಿದ್ಯಮಾನವು ರಾಜಕೀಯ ಮಹತ್ವವನ್ನು ಪಡೆದುಕೊಳ್ಳುತ್ತದೆ ಅಂದರೆ, ಅದೊಂದು ಸಾಮಾಜಿಕ ಆದ್ಯತೆಯ ಬಗೆಯಾಗಿ ಮಾತ್ರವೇ ಹೊರತು, ಬೇರೆ ಯಾವುದೇ ಸಾಮಾಜಿಕ ಬೇಡಿಕೆಗಳನ್ನು ಈಡೇರಿಸುವ ಇರಾದೆಯಿಂದಲ್ಲ. ಎತ್ತುಗೆಗಾಗಿ ಕನ್ನಡ ಮಾಧ್ಯಮವನ್ನು ಕುರಿತ ಚರ್ಚೆಗಳು ರಾಜಕೀಯ ಮಹತ್ವವನ್ನು ಗುರಿಯಾಗಿಟ್ಟುಕೊಂಡು ಮುಂಚೂಣೆಗೆ ಬರುತ್ತವೆ. ಇಲ್ಲವಾದರೆ ಕೇವಲ ರಾಜಕೀಯ ಸರಿತನವನ್ನು ತೋರಿಸುವ ತುಡಿತದಿಂದ ಕೂಡಿರುತ್ತವೆ.
ಆದರೆ ಕನ್ನಡ ಮಾಧ್ಯಮವನ್ನು ನೆಲೆಗೊಳಿಸುವ ಮೂಲಕ ಯಾವ ಬಗೆಯ ಸಾಮಾಜಿಕ ಮಹತ್ವ, ಪರಿಣಾಮ ಮತ್ತು ಪ್ರಭಾವವನ್ನು ಉಂಟುಮಾಡಬಹುದು ಎಂಬ ಸಂಗತಿಯು ಈ ಚರ್ಚೆಗಳಲ್ಲಿ ಕಾಣೆಯಾಗಿರುತ್ತದೆ. ನುಡಿಯೆಂಬುದೇ ಬದುಕಿನ ವಿನ್ಯಾಸವೆಂದು ತಿಳಿದವರಿಗೆ ನುಡಿಯ ಮಹತ್ವದ ಅರಿವು ಬೇರೆಯಾಗಿರುತ್ತದೆ. ಆದರೆ ಬದುಕಿನ ಹಲವು ವಿದ್ಯಮಾನಗಳಲ್ಲಿ ನುಡಿಯೂ ಒಂದು ಎಂದಾದರೆ, ಈ ಬಗೆಯ ತಿಳಿವಿನ ಪರಿಣಾಮದಿಂದ ನುಡಿಗೆ ಇರುವ ಮಹತ್ವ ಕಳೆದು ಹೋಗುತ್ತದೆ.
ನುಡಿಯ ಮಹತ್ವವನ್ನು ಮಾತ್ರ ಹೇಳುವುದು ನನ್ನ ಗುರಿಯಲ್ಲ ಬದಲಾಗಿ ಬದುಕು ಮಹತ್ವವನ್ನು ಪಡೆಯಬೇಕಾದರೆ, ಅಂತಹ ಮಹತ್ವವೊಂದು ಎಲ್ಲಿ ಅಡಕವಾಗಿರುತ್ತದೆ ಎಂಬುದನ್ನು ಅರಿಯುವುದಾಗಿದೆ. ಇದಕ್ಕೆ ಒತ್ತಾಸೆಯಾಗಿರುವುದು ನುಡಿಯೇ ಆಗಿರುತ್ತದೆ. ಅಂದರೆ ನುಡಿ ಹಾಗೂ ಸಂಸ್ಕ್ರುತಿಗಳನ್ನು ಬೆಸೆಯುವ ಮೂಲತತ್ವಗಳನ್ನು ಅರಿಯುವ ಬಗೆಯೇ ಇಂತಹ ವಿಶ್ಲೇಷಣೆಗಳ ಮೊದಲ ಕಾಳಜಿ ಆಗಿರುತ್ತದೆ.
ತಿಳಿವನ್ನು ಮಂಡಿಸುವ ಹಾಗೂ ತಿಳಿವನ್ನು ವಿಶ್ಲೇಷಿಸುವ ಬಗೆಗಳ ನಡುವೆ ಗೆರೆ ಎಳೆಯಲು ಸಾಧ್ಯವಿಲ್ಲ. ಆದರೆ ಆಯಾ ಸಮುದಾಯದ ತಿಳಿವಿನ ದಾರಿಗಳನ್ನು ಮರೆಸುವ ನೆಲೆಗಳು ಎಂತಹವು ಎಂಬುದನ್ನು ಮಾತ್ರ ಗೆರೆ ಎಳೆದು ತೋರಿಸಬಹುದು ಎಂಬ ದಿಟವನ್ನು ಅಲ್ಲಮನ ಈ ವಚನವು ಗಟ್ಟಿಯಾಗಿ ಹೇಳುತ್ತದೆ. ನುಡಿಯ ಮಹತ್ವವನ್ನು ಮರೆತವರು, ಅದನ್ನು ಮನಗಾಣಬೇಕಾದ ಅನಿವಾರ್ಯ ಎಷ್ಟೊಂದು ಅಗತ್ಯವಿದೆ ಎಂಬುದನ್ನು ಈ ಚರ್ಚೆಗಳು ನೆನಪಿಸುತ್ತವೆ.
ಸಾಂಸ್ಕ್ರುತಿಕ ನೆನಪು ಮತ್ತು ಮರೆವುಗಳ ನಡುವಣ ತಿಕ್ಕಾಟ ಕೇವಲ ಒಂದು ಕಾಲಘಟ್ಟದ ಪ್ರಶ್ನೆ ಮಾತ್ರವಲ್ಲ, ಸಮೂಹಗಳ ಸಾಂಸ್ಕ್ರುತಿಕ ಹಾಗೂ ರಾಜಕೀಯ ಗುರುತಿನ ಚರಿತ್ರೆಯನ್ನು ನಿರ್ನಾಮಗೊಳಿಸುವ ಬಗೆಯೂ ಆಗಿರುತ್ತದೆ. ಮರೆವು, ನೆನಪು ಮತ್ತು ಮಾಯೆಯ ರೂಪಕವಾಗಿ ನುಡಿಯೊಂದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಅಲ್ಲಮ ತನ್ನೀ ವಚನದಲ್ಲಿ ಹೇಳುತ್ತಾನೆ.
ಬಹುತೇಕವಾಗಿ ಅಲ್ಲಮನ ವಚನಗಳು ಜನರಲ್ಲಿ ಕೇವಲ ತಿಳಿವನ್ನು ಮೂಡಿಸುವ ಇರಾದೆಯಿಂದ ಹುಟ್ಟಿಕೊಂಡಂತವುಗಳಲ್ಲ. ಬದಲಾಗಿ ತಿಳಿವಿನ ತಿಳಿವನ್ನು, ಅರಿವಿನ ಅರಿವನ್ನು ಕುರಿತು ಚಿಂತಿಸುವ ನೆಲೆಯಲ್ಲಿರುತ್ತವೆ. ಈ ಬಗೆಯ ಆಲೋಚನೆಯ ಕ್ರಮವನ್ನು ಕೇವಲ ಒಂದು ಜಿಜ್ಞಾಸೆಯ ವಿದ್ಯಮಾನವಾಗಿ ನೋಡಲಾಗುತ್ತದೆ.
ಆದರೆ ಅಲ್ಲಮನ ಗುರಿ ಇರುವುದು ಬದುಕಿನ ನೋಟಕ್ರಮದೊಳಗೆಯೇ ಜಿಜ್ಞಾಸೆಯೊಂದು ವಿಕಾಸಗೊಳ್ಳುವ ಹಾಗೂ ಅಂತಹ ಪ್ರಕ್ರಿಯೆಯಿಂದ ಉಂಟಾಗುವ ಪರಿಣಾಮಗಳನ್ನು ಗೊತ್ತುಪಡಿಸುವ ನಿಲುವಾಗಿದೆ. ಯಾವುದೇ ಕ್ರಿಯೆ ನೇರವಾಗಿ ಪರಿಣಾಮವನ್ನು ಸೂಚಿಸಲಾರದು. ಹೊರತಾಗಿ ಒಂದೊಂದು ಕ್ರಿಯೆಯು ಉಂಟಾಗಬಹುದಾದ ವಿದ್ಯಮಾನವೊಂದನ್ನು ಮಾತ್ರ ಸೂಚಿಸುತ್ತದೆ. ಹಾಗಾಗಿ ಪರಿಣಾಮವೆಂಬುದು ಕ್ರಿಯೆಯೊಳಗೆಯೇ ಅಂತಸ್ಥವಾಗಿರುವುದಿಲ್ಲ ಎಂಬ ದಿಟವನ್ನು ಈ ಮಾತುಗಳು ನಿಚ್ಚಳಪಡಿಸುತ್ತವೆ.
ಆದರೆ ಯಾವುದೇ ಕ್ರಿಯೆಯಿಂದ ಹೊರಹೊಮ್ಮಬಹುದಾದ ಪರಿಣಾಮದ ವಿನ್ಯಾಸಗಳನ್ನು, ಗೆರೆಕೊರೆದು ತೋರಿಸುವ ವಿವೇಕ ಅಲ್ಲಮನ ವಚನಗಳಿಗೆ ಇರುತ್ತದೆ. ಎತ್ತುಗೆಗಾಗಿ ‘ಮಂಜಿನ ಶಿವಾಲಯಕ್ಕೆ ಬಿಸಿಲ ಕಳಸವುಂಟೆ?’ ಎಂಬೀ ರೂಪಕವನ್ನು ನಿಗಾಯಿಟ್ಟು ನೋಡಿದರೆ, ಅಲ್ಲಮನ ವಚನಗಳ ಕಾಣ್ಕೆಯನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಮಂಜು ಮತ್ತು ಬಿಸಿಲು ಇವುಗಳು ಕೇವಲ ವೈರುಧ್ಯದ ನಿಲುವುಗಳಲ್ಲ. ಬದುಕಿನ ವಿನ್ಯಾಸದೊಳಗಿನ ವಿರೋಧಭಾಸವನ್ನು ಅರಿಯುವ ಮಾದರಿಯೆಂದೇ ಹೇಳಬೇಕು.
ಏಕೆಂದರೆ ಮಂಜು ಮತ್ತು ಬಿಸಿಲುಗಳು ಒಡಗೂಡಿದರೆ, ಪರಿಣಾಮ ಏನಾಗುತ್ತೆ? ಎಂಬುದಷ್ಟನ್ನೇ ಅಲ್ಲಮ ಹೇಳುತ್ತಿಲ್ಲ, ಬದಲಾಗಿ ಇಂತಹ ಪರಿಣಾಮಗಳ ಮೂಲಕ ಆಯಾ ವಸ್ತು ಇಲ್ಲವೇ ವಿದ್ಯಮಾನಗಳ ಅಸ್ತಿತ್ವದ ಗುರುತುಗಳನ್ನು ಮುಂಗಾಣಿಸುವ ಬಗೆಯೂ ಆಗಿರುತ್ತದೆ. ಆದ್ದರಿಂದ ಯಾವುದು ಏನನ್ನು, ಹೇಗೆ ನಿಯಂತ್ರಿಸುತ್ತದೆ ಮತ್ತು ಅವುಗಳ ಅಸ್ತಿತ್ವದ ಚಹರೆಗಳು ಎಂತಹವು ಅನ್ನುವುದು ಅಲ್ಲಮನ ವಚನದ ಈ ಸಾಲವೊಂದು ಎತ್ತಿ ತೋರಿಸುತ್ತದೆ.
ಆದರೆ ನಾನಿಲ್ಲಿ ಅಲ್ಲಮನನ್ನು ಈ ಸೀಮಿತ ತಾತ್ವಿಕ ಚೌಕಟ್ಟಿಗೆ ಕಟ್ಟಿ ಹಾಕಲಾರೆ. ಹೇಗೆ ನುಡಿಯೊಂದು ಅರಿವಿನ ಕುರುಹು ಆಗಬಲ್ಲದು ಎಂಬುದನ್ನು ತಿಳಿಯುವ ಜರೂರಿದೆ. ಆದ್ದರಿಂದ ನುಡಿಗೂ ಮತ್ತು ಬದುಕಿಗೂ ಇರುವ ನಂಟಸ್ತಿಕೆಯನ್ನು ಅಲ್ಲಮನ ಈ ವಚನದ ಮೂಲಕ ತಿಳಿಯುವುದಾಗಿದೆ. ಮತ್ತು ಅಲ್ಲಮನ ಮಾತುಗಳು ಅತ್ಯಂತ ಪರಿಣಾಮಕಾರಿಯಾಗಿ ಏನನ್ನು ಹೇಳುತ್ತವೆ ಎಂಬುದು ಇಲ್ಲಿ ಅಮೂರ್ತವಾಗಿದೆ ದಿಟ.
ಆದರೆ ಈ ಅಮೂರ್ತತೆ ಇಲ್ಲಿ ಒಂದು ಸಾಮಾಜಿಕ ಒತ್ತಡವಾಗಿ ನುಡಿಯೊಂದರ ಇಡೀತನವನ್ನು ಸಾಮಾಜಿಕ ಅಸ್ಮಿತೆಯ ಸಂಕೇತವನ್ನಾಗಿ ಕಾಣಿಸುತ್ತದೆ. ಆದರೆ ಇಂತಹ ಸಮೀಕರಣವನ್ನು ಕೇವಲ ಒಂದು ಸೂಚಕವನ್ನಾಗಿ ಮಾತ್ರ ಇಲ್ಲಿ ಗಮನಿಸಬೇಕಾದ ಅಗತ್ಯವಿದೆ. ಸಾಮಾಜಿಕತೆ ಎಂಬುದನ್ನು ನಾವು ಬಿಡಿಸಿ ನೋಡಬೇಕಾದರೆ ನುಡಿಯನ್ನು ಹಾಗೂ ಅದು ಕಟ್ಟಿಕೊಡುವ ತಾತ್ವಿಕತೆಯನ್ನು ಅರಿಯಲೆಬೇಕಾದ ಜರೂರಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕವಿತೆ | ನೆನಪು
- ರುದ್ರಪ್ಪ ಹನಗವಾಡಿ
ಅಪ್ಪನನ್ನು ಒಪ್ಪ ಮಾಡಿ
ವರ್ಷಗಳೇ ಕಳೆದವು ಮುವ್ವತ್ತೇಳು
ಇಂದಿರಾಗಾಂಧಿಯ ತುರ್ತು ಪರಿಸ್ಥಿತಿ
ಅರಸರ ಮೀಸಲಾತಿ
ಬಸವಲಿಂಗಪ್ಪನವರ ಬೂಸಾ ಖ್ಯಾತಿ
ಮಲ ಹೊತ್ತು
ಮಲಗಿದ್ದ ಕಾಲಕ್ಕೆ
ಚುರುಕು ಮುಟ್ಟಿಸಿದ ಕಾಲ
ಹರೆಯದ ನನಗೆ
ಕಾಲೇಜ ಮೇಷ್ಟರ ಕೆಲಸ
ಸೂಟು ಬೂಟಿನ ವೇಷ
ಆ ಮೇಲೆ ಅಮಲದಾರಿಕೆ
ಎಲ್ಲ ನಡೆದಾಗಲೇ ಅವ್ವನನ್ನು
ಆಸ್ಪತ್ರೆಗೆ ಸೇರಿಸಿದ್ದು
ಕಾಲ ಕಳೆದು ಕೊಂಡು
ಕೋಲ ಹಿಡಿದದ್ದು
ನಿನ್ನೆ ಮೊನ್ನೆಯಂತೆ
ಬಾಲ್ಯವಿನ್ನು ಉಂಟೆಂಬಂತೆ
ಭಾವಿಸುವಾಗಲೇ ಅವ್ವನ ಸಾವು
ಅದರೊಟ್ಟಿಗೆ ಕಾಯದಾಯಾಸ ತೀರಿಸಲು
ಬಂದರೆ ಬೆಂಗಳೂರಿಗೆ
ರೌಡಿಗಳ ಕಾಟ
ಅಂಬೇಡ್ಕರ್ ಪಟದ ಕೆಳಗೆ
ದೌರ್ಜನ್ಯದ ದಂಡು
ಅಮಾಯಕರಿಗೆ ಗುಂಡು
ಕಂಡುಂಡ ಹಾದಿಯ ಗುಡಿಸಲುಗಳಲ್ಲೀಗ
ಮುಗಿಲು ಮುಟ್ಟೋ ಮಹಲುಗಳು
ಅಂತಲ್ಲಿ
ದೇಶ ವಿದೇಶಗಳ
ಅಹವಾಲುಗಳು
ಅವಿವೇಕಗಳು
ನೋಡ ನೋಡುತ್ತಿದ್ದಂತೆ
ಉಸಿರು ಬಿಗಿಹಿಡಿದ ಜನರ ಒಳಗೆ
ಒಳಪದರಗಳೊಳಗೆ ಕನಸ ಬಿತ್ತಿ
ಹಸಿರ ಹೊನ್ನು ಬಾಚಲು ಹವಣಿಸಿದ
ಬಿಳಿ ಜನರ ಆಟ
ಅರ್ಥವಾಗುವುದೇ ಎಲ್ಲ
ಗೋಣ ನೀಡುವರೆ
ಹೂತಿಟ್ಟ ಗೂಟಕ್ಕೆ ?
( ಚಿಂತಕ ರುದ್ರಪ್ಪ ಹನಗವಾಡಿ ಅವರ ‘ಊರು – ಬಳಗ’ ಕವನ ಸಂಕಲನದಿಂದ ‘ ನೆನಪು ‘ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕೃತಿಯನ್ನು ಫ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ 2013 ರಲ್ಲಿ ಪ್ರಕಿಸಿದೆ.)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ; ಒಂದು ಚಿಂತನೆ
- ಮಹಾಂತೇಶ್.ಬಿ.ನಿಟ್ಟೂರು, ದಾವಣಗೆರೆ
ನಿಜ ಶರಣ ಶ್ರೀ ಅಂಬಿಗರ ಚೌಡಯ್ಯನವರ ಜೀವಿತ ಕಾಲ 12 ನೇ ಶತಮಾನದ ಬಸವಾದಿ ಶರಣರ ಕಾಲದಲ್ಲೇ ಇತ್ತು ಎಂಬುದು ಇತಿಹಾಸಕಾರರ ಸಂಶೋಧನೆಯಿಂದ ತಿಳಿದು ಬರುತ್ತದೆ. ಅವರ ಹುಟ್ಟೂರು ಹಾವೇರಿ ಜಿಲ್ಲೆಯ ಆಗಿನ ಶಿವಪುರ, ಈಗಿನ ಚೌಡಯ್ಯದಾನಪುರ. ಅವರ ತಂದೆಯ ಹೆಸರು ಶ್ರೀ ವಿರೂಪಾಕ್ಷ, ತಾಯಿಯ ಹೆಸರು ಪಂಪಾಂಭಿಕೆ, ಹೆಂಡತಿಯ ಹೆಸರು ಸುಲೋಚನಾ ಹಾಗೂ ಮಗನ ಹೆಸರು ಪುರವಂತ.
ಅಂಬಿಗ ವೃತ್ತಿಯ ಚೌಡಯ್ಯನವರು ಅಲ್ಲಮ ಪ್ರಭು ಮತ್ತು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಇದ್ದ ಒಬ್ಬ ಕ್ರಾಂತಿಕಾರಿ, ದಿಟ್ಟ, ನೇರ, ನಿಷ್ಠುರ ನುಡಿಯ ವಚನಕಾರ. ಕಲ್ಯಾಣ ಕ್ರಾಂತಿಯ ನಂತರ ಇವರು ತಮ್ಮ ವಚನಗಳ ಗಂಟನ್ನು ಹೊತ್ತು ಉಳವಿಗೆ ನಂತರ ತಮ್ಮ ಗ್ರಾಮವಾದ ತುಂಗಭದ್ರಾ ನದಿಯ ದಡದ ಮೇಲಿರುವ ಶಿವಪುರಕ್ಕೆ ಬಂದು ದೋಣಿ ನಡೆಸುವ ವೃತ್ತಿಯಲ್ಲಿ ನಿರತರಾಗಿ ವಚನ ರಚನೆ ಮಾಡಿರುವುದು ತಿಳಿದು ಬರುತ್ತದೆ.
ಚೌಡಯ್ಯನವರು ತಮ್ಮ ಜೀವಿತಾವಧಿಯಲ್ಲಿ ಅನೇಕ ಪವಾಡಗಳನ್ನು ಮಾಡಿರುತ್ತಾರೆ. ಗಿಡಮೂಲಿಕೆ ಔಷಧಿಗಳಿಂದ ಕ್ಷಯ ರೋಗ, ಕುಷ್ಠರೋಗ ಗುಣಪಡಿಸುವುದು, ಹಾವು ಕಚ್ಚಿದವರನ್ನು
ಬದುಕಿಸುವುದು ಇತ್ಯಾದಿ..
ಒಮ್ಮೆ ಗುತ್ತಲದ ಅರಸನು ಬೇಟೆಗಾಗಿ ಈ ಪ್ರದೇಶದಲ್ಲಿ ಸಂಚರಿಸುತ್ತಿದ್ದಾಗ, ಆತನ ಸೇನಾಧಿಪತಿಯು ಹಾವು ಕಚ್ಚಿ ಮೃತಪಟ್ಟನು. ಇದರಿಂದಾಗಿ ಅರಸನಿಗೆ ಅತೀವ ದುಃಖವುಂಟಾಗಿ ರೋಧಿಸತೊಡಗಿದನು. ಆಗ ಆತನ ಸೈನಿಕನೊಬ್ಬನು ಶ್ರೀ ಚೌಡಯ್ಯನವರ ಪವಾಡಗಳ ಬಗ್ಗೆ ವಿವರಿಸಿ ಹೇಳಲಾಗಿ, ಅರಸನು ತನ್ನ ಮೃತ ಸೇನಾಧಿಪತಿಯ ಶರೀರವನ್ನು ಚೌಡಯ್ಯನವರಲ್ಲಿಗೆ ತಂದು ಆತನನ್ನು ಬದುಕಿಸುವಂತೆ ಕೇಳಿಕೊಂಡರು, ಆಗ ಚೌಡಯ್ಯನವರು ಸೇನಾಧಿಪತಿಯನ್ನು ಬದುಕಿಸುತ್ತಾರೆ. ಇದರಿಂದ ಸಂತುಷ್ಟನಾದ ಅರಸನು ಶಿವಪುರದ ಸುತ್ತಲಿನ ಪೂರ್ವ – ಪಶ್ಚಿಮಕ್ಕೆ 14 ಮೈಲು ಹಾಗೂ ಉತ್ತರ – ದಕ್ಷಿಣಕ್ಕೆ 7 ಮೈಲು ಸುತ್ತಳತೆಯ ಭೂಮಿಯನ್ನು ಚೌಡಯ್ಯನವರಿಗೆ ದಾನವಾಗಿ ನೀಡಿದನು.
ಆದರೆ ಚೌಡಯ್ಯನರು ವೈರಾಗ್ಯಶಾಲಿಯು, ಲೌಕಿಕದಲ್ಲಿ ನಿರಾಸಕ್ತಿ ಹೊಂದಿದವರು ಆಗಿದ್ದರಿಂದ, ಅರಸನು ಕೊಡಮಾಡಿದ್ದ ಸಂಪೂರ್ಣ ಜಮೀನನ್ನು ತನ್ನ ಗುರುಗಳಾದ ಶ್ರೀ ಶಿವದೇವರಿಗೆ ದಾನವಾಗಿ ನೀಡಿದರು ಎಂಬ ಉಲ್ಲೇಖವಿದೆ. ಅಂದಿನಿಂದ ಶಿವಪುರ ಗ್ರಾಮಕ್ಕೆ ‘ಚೌಡಯ್ಯದಾನಪುರ’ ಎಂದು ಹೆಸರು ಬರುತ್ತದೆ. ಮುಂದೆ ಚೌಡಯ್ಯನರು ಅಲ್ಲಿ ದೇಹ ತ್ಯಾಗ ಮಾಡಿದ್ದರಿಂದ ತುಂಗಭದ್ರಾ ನದಿಯ ದಡದಲ್ಲಿ ಈಗಲೂ ಚೌಡಯ್ಯನವರ ಸಮಾಧಿ ಗದ್ದುಗೆ ಇದೆ.
ಭ್ರಮಾಲೋಕದಲ್ಲಿ ವಿಹರಿಸುತ್ತಾ ಕುಳಿತ, ಆಡಂಬರದಲ್ಲಿ ಅಡ್ಡಾದಿಡ್ಡಿ ಅಡ್ಡಾಡುವ ಮಂದಿಯ ಕಪಾಳಕ್ಕೆ ಹೊಡೆದು ಎಚ್ಚರಿಸುವಂತಿವೆ ಚೌಡಯ್ಯನವರ ವಚನಗಳು. ಧಾರ್ಮಿಕ ಮೂಢನಂಬಿಕೆ ಬಿತ್ತುವವರಿಗೆ, ಸ್ವಾರ್ಥಿಗಳಾಗಿ ಬದುಕುವವರಿಗೆ, ಮುಖವಾಡ ಹಾಕಿ ಮಂಕು ಬೂದಿ ಎರಚುವವರಿಗೆ ಸಿಂಹ ಸ್ವಪ್ನದಂತೆ ಬೆಚ್ಚಿ ಬೀಳಿಸುತ್ತವೆ ನಿಜ ಶರಣ ಅಂಬಿಗರ ಚೌಡಯ್ಯನವರ ವಚನಗಳು. ಇದಕ್ಕೆ ತಾತ್ಪೂರ್ತಿಕವಾಗಿ ಕೆಲವು ವಚನಗಳು ಈ ಕೆಳಗಿನಂತಿವೆ;
“ಅಂಬಿಗ ಅಂಬಿಗ ಎಂದು ಕುಂದ ನುಡಿಯದಿರು/ನಂಬಿದರೆ ಒಂದೇ ಹುಟ್ಟಲಿ/ಕಡೆಯ ಹಾಯಿಸುವೆನೆಂದಾತನಂಬಿಗರ/ಚೌಡಯ್ಯ ನಿಜಶರಣನು”
ಈ ಮೇಲಿನ ವಚನ ಶ್ರೀ ಅಂಬಿಗರ ಚೌಡಯ್ಯನವರ ಸ್ವಾಭಿಮಾನ, ಧೈರ್ಯ, ನೇರ, ನಿರ್ಭಿಡೆಯ ವ್ಯಕ್ತಿತ್ವದ ಪ್ರತೀಕವಾಗಿದೆ.
ಹನ್ನೆರಡನೇ ಶತಮಾನದ ಸಂದರ್ಭದಲ್ಲಿ ಜಾತಿ ಮತ್ತು ವರ್ಗ ವ್ಯವಸ್ಥೆ ಎಷ್ಟರಮಟ್ಟಿಗಿತ್ತು ಎಂಬುದನ್ನು ಈ ವಚನ ಸೂಚಿಸುತ್ತದೆ. ಅಂತಹ ವಿಚಿತ್ರ, ವಿಕ್ಷಿಪ್ತ ಸನ್ನಿವೇಶದಲ್ಲಿ ಬಸವಾದಿ ಶರಣರು ಜಾತೀಯತೆ, ವರ್ಗ – ವರ್ಣ ವ್ಯವಸ್ಥೆಯ ವಿರುದ್ಧ ಬೃಹತ್ ಚಳುವಳಿಯನ್ನು ಕೈಗೊಂಡಾಗ ಅಂಬಿಗರ ಚೌಡಯ್ಯನವರ ಸತ್ಯನಿಷ್ಠೆ, ಪ್ರಾಮಾಣಿಕತೆಯ ವಚನಗಳು ಪ್ರಖರವಾಗಿ ಕಾಣಿಸುತ್ತವೆ. ಕೆಲವು ಢೋಂಗಿ ಭಕ್ತರಿಗೆ, ಕಪಟ ಸನ್ಯಾಸಿಗಳಿಗೆ ತನ್ನ ಖಾರವಾದ ವಚನಗಳ ಮೂಲಕ ಚುರುಕು ಮುಟ್ಟಿಸುತ್ತಾರೆ.
ಆಡಂಬರ ಮತ್ತು ದುರಾಸೆಯ ಜನರ ಮನಸ್ಥಿತಿ ಕಂಡು ಕೆಂಡಾಮಂಡಲವಾಗಿ ಪ್ರಸ್ತುತ ಪಡಿಸಿದ ಒಂದು ವಚನ ಇಂತಿದೆ;
“ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಕಾಳೋಗರನ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹಾರುವ ಪಕ್ಷಿಯನು/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೆಬ್ಬುಲಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೊಯ್ವ ಹೆಮ್ಮಾರಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಬರುವ ಉರಿ ಬಾಣವನು/ಇಂತೆಲ್ಲವನು ಒಂದೇ ಮಂತ್ರದಲ್ಲಿ ನಿಲ್ಲಿಸಬಹುದು;/ಲೋಭವೆಂಬ ಗ್ರಹಣ ಹಿಡಿದವರ ಏತರಿಂದಲೂ/ನಿಲ್ಲಿಸಲಾಗದು/ಈ ಲೋಭಕ್ಕೆ ದಾರಿದ್ರ್ಯವೇ ಔಷಧವು;/ಹೇಳಿದರೆ ಕೇಳರು, ತಾವು ತಿಳಿಯರು/ಶಾಸ್ತ್ರವ ನೋಡರು, ಭಕ್ತಿಯ ಹಿಡಿಯರು/ಇಂತಹ ಗೊಡ್ಡು ಮೂಳ ಹೊಲೆಯರಿಗೆ/ಕರ್ಮವೆಂಬ ಶರದ್ಧಿಯಲ್ಲಿ ಬಿದ್ದು ಹೊರಳಾಡುವುದೇ/ಸತ್ಯವೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು”
ಸಂಸಾರದ ಜಂಜಾಟದಲ್ಲಿ ಬಿದ್ದು ಒದ್ದಾಡುತ್ತಾ ಶಿವನನ್ನು ಮರೆತು ಹತ್ತು ಹಲವು ಚಿಂತೆಯಲ್ಲಿ ಮುಳುಗಿರುವ ಶವ ಮುಖದ ಜನರ ಸ್ಥಿತಿ-ಗತಿಯನ್ನು ಅರ್ಥಗರ್ಭಿತವಾಗಿ ಸಾದರಪಡಿಸುವ ಒಂದು ವಚನ ಇಂತಿದೆ;
“ಬಡತನಕೆ ಉಂಬುವ ಚಿಂತೆ/ಉಣಲಾದಡೆ ಉಡುವ ಚಿಂತೆ/ಉಡಲಾದಡೆ ಇಡುವ ಚಿಂತೆ/ಇಡಲಾದಡೆ ಹೆಂಡಿರ ಚಿಂತೆ/ಹೆಂಡಿರಾದರೆ ಮಕ್ಕಳ ಚಿಂತೆ/ಮಕ್ಕಳಾದಡೆ ಬದುಕಿನ ಚಿಂತೆ/ಬದುಕಾದಡೆ ಕೇಡಿನ ಚಿಂತೆ/ಕೇಡಾದಡೆ ಮರಣದ ಚಿಂತೆ/ಇಂತೀ ಹಲವು ಚಿಂತೆಯಲ್ಲಿಪ್ಪವರ ಕಂಡೆನು/ಶಿವನ ಚಿಂತೆಯಲ್ಲಿದ್ದಾತರೊಬ್ಬರನೂ ಕಾಣೆನೆಂದಾತ/ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು!”
ಸಮಯದ ಸದ್ಬಳಕೆ ಮಾಡಿಕೊಂಡು ಕಾಯಕ ಮಾಡುತ್ತಾ ಶಿವಭಕ್ತರಾಗಿ, ಜೀವನ ಪಾವನವಾಗಿಸುವಂತೆ ಕರೆ ನೀಡುವ ಒಂದು ವಚನ ಇಂತಿದೆ;
“ಗಾಳಿ ಬಿಟ್ಟಾಗ ತೂರಿಕೊಳ್ಳಿರಯ್ಯ/ಗಾಳಿ ನಿಮ್ಮ ಅಧೀನವಲ್ಲ ಕಂಡಯ್ಯ/ನಾಳೆ ತೂರಿಹೆನೆಂದಡಿಲ್ಲ ಕಂಡಯ್ಯ/ಶಿವಶರಣೆ ಎಂಬುದೊಂದು ಗಾಳಿ ಬಿಟ್ಟಲ್ಲಿ/ಬೇಗ ತೂರೆಂದನಂಬಿಗರ ಚೌಡಯ್ಯ”
ಕಾವಿ ಬಟ್ಟೆ ತೊಟ್ಟು, ಭಿಕ್ಷೆಗಾಗಿ ಜೋಳಿಗೆ ಹಾಕಿದವರೆಲ್ಲರೂ ಜಂಗಮರು, ಗುರುಗಳಾಗಲಾರರು ಎಂಬುದನ್ನು ವಿಡಂಬಿಸುವ ಒಂದು ವಚನ ಇಂತಿದೆ;
“ಕಂಥೆ ತೊಟ್ಟವ ಗುರುವಲ್ಲ/ಕಾವಿ ಹೊದ್ದವ ಜಂಗಮನಲ್ಲ/ಶೀಲ ಕಟ್ಟಿದವ ಶಿವಭಕ್ತನಲ್ಲ/ನೀರು ತೀರ್ಥವಲ್ಲ/ಕೂಳು ಪ್ರಸಾದವಲ್ಲ/ಹೌದೆಂಬವನ ಬಾಯ ಮೇಲೆ/ಅರ್ಧ ಮಣದ ಪಾದರಕ್ಷೆಯ ತೆಗೆದುಕೊಂಡು/ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ/ಟೊಕ ಟೊಕನೆ ಹೊಡೆ ಎಂದಾತ/ನಮ್ಮ ಅಂಬಿಗರ ಚೌಡಯ್ಯ”
ಹೀಗೆ ಬಸವಾದಿ ಶರಣರ ಸಮಾಜ ಸುಧಾರಣಾ ಚಳವಳಿಯಲ್ಲಿ ತಮ್ಮ ಅಮೂಲ್ಯ ಸೇವೆಯನ್ನು ಮುಡುಪಾಗಿಟ್ಟ ಶ್ರೀ ಅಂಬಿಗರ ಚೌಡಯ್ಯನವರು ತಮ್ಮ ಬದುಕಿನ ನೀತಿಯಿಂದ, ನಿಷ್ಠೆಯಿಂದ, ತೀಕ್ಷ್ಣ ಖಂಡನೆಯ ಬಂಡಾಯ ವಚನಗಳಿಂದ ಗಮನ ಸೆಳೆದು, ಅವರು ರಚಿಸಿದ ವಚನಗಳಿಗೆ ತಮ್ಮ ಹೆಸರನ್ನೇ ಅಂಕಿತವನ್ನಾಗಿಟ್ಟಿರುವದು ವಿಶೇಷವಾಗಿದೆ. ಸಮಾಜದ ಕೊಳೆಯನ್ನು ತೊಳೆಯುವ ನಿಟ್ಟಿನಲ್ಲಿ ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ಎದ್ದು ಕಾಣುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಮ್ಯಾಸ ನಾಯಕ ಬುಡಕಟ್ಟನಲ್ಲಿ ದೀಪಾವಳಿ ಹಬ್ಬದ ಆಚರಣೆ
ಭಾರತ ತನ್ನ ಭೌಗೋಳಿಕ ಸ್ವರೂಪದಲ್ಲಿ ವೈವಿಧ್ಯತೆಯನ್ನು ಹೊಂದಿರುವಂತೆ ಅನೇಕ ಬಗೆಯ ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿದೆ.
ದೇಶದ ಪ್ರತಿಯೊಂದು ಸಮುದಾಯವು ಬದುಕಿನ ಕ್ರಮದಲ್ಲಿ ತನ್ನದೇ ಆದ ವೈವಿಧ್ಯತೆಯನ್ನು ಹೊಂದಿದ್ದು ಹಬ್ಬಗಳ ಆಚರಣೆಯಲ್ಲಿಯೂ ಈ ಭಿನ್ನತೆಯನ್ನು ಕಾಣಬಹುದಾಗಿದೆ. ಈಗ ನಡೆಯುತ್ತಿರುವ ದೀಪಾವಳಿ ಹಬ್ಬದ ಆಚರಣೆಯೂ ಇದರಿಂದ ಹೊರತಾಗಿಲ್ಲ. ಇಡೀ ಭಾರತ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸುತ್ತಿದೆ ಎಂಬುದು ಸಾಮಾನ್ಯವಾದ ಹೇಳಿಕೆಯಾಗಿರುತ್ತದೆ.
ದೀಪಾವಳಿ ಎಂದರೆ ದೀಪವನ್ನು ಬೆಳಗಿಸುವ ಹಬ್ಬ. ಜಗದ ಕತ್ತಲೆಯನ್ನು, ಮನದ ಕತ್ತಲೆಯನ್ನು, ಕಳೆಯುವ ಹಬ್ಬ ಎಂಬುದು ಒಂದು ನಂಬಿಕೆಯಾದರೆ ಬಲಿಚಕ್ರರ್ತಿಯನ್ನು ವರ್ಷಕೊಮ್ಮೆ ನೆನಪಿಸಿಕೊಳ್ಳುವುದು, ನರಕಾಸುರನನ್ನು ಶ್ರೀ ಕೃಷ್ಣ ಪರಮಾತ್ಮ ಕೊಂದು ಆತನ ಸೆರೆಯಲ್ಲಿದ್ದ ಅಸಂಖ್ಯಾತ ಮಹಿಳೆಯರಿಗೆ ಬಿಡುಗಡೆ ದೊರಕಿಸಿದ ದಿನವಿದು ಎಂದು ನೆನೆಪಿಸಿಕೊಳ್ಳುವುದು ಹೀಗೆಲ್ಲಾ ಪ್ರಚಲಿತ ಪುರಾಣಮೂಲಗಳಿಂದ ಈ ಹಬ್ಬದ ಆಚರಣೆಯ ಸಾಂಕೇತಿಕತೆಯನ್ನು ಅರ್ಥೈಸಲಾಗುತ್ತದೆ.
ಈ ಎರಡೂ ಘಟನೆಗಳನ್ನು ಕುರಿತು ಬೇರೆ ಬೇರೆ ನೆಲೆಯಿಂದ ಯೋಚಿಸಿದಾಗ ಇದನ್ನು ದೇಶದಾದ್ಯಂತ ಎಲ್ಲರೂ ಸಡಗರಿಸಬೇಕೆ? ಆಳುವವರ ಸಡಗರ ಎಲ್ಲರ ಸಡಗರವಾಗಲೇಬೇಕಾದ ಅನಿವಾರ್ಯವೇ? ಎಂಬ ನೆಲೆಗಳಿಂದ ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕಾಗುತ್ತದೆ.
ನಿಸರ್ಗಮೂಲ ಸಿದ್ದಾಂತವನ್ನು ಅನ್ವಯಿಸಿಕೊಂಡರೇ ಬಹುಶಃ ಈ ದೀಪಾವಳಿಯ ತಿಂಗಳು, ಅಂದರೇ ಕಾರ್ತಿಕ ಮಾಸದ ಹವಾಮಾನದಲ್ಲಿ ವಿಶೇಷತೆಯಿದೆ. ಕಾರ್-ಅಂದರೇ ಮಳೆ ಸುರಿಯುವುದು. ಕರ್ತೀಕ ಅಂದರೇ ಮಳೆಗಾಲದ ಕೊನೆಯ ದಿನಗಳಿವು, ಹಿಂಗಾರಿನ ಕೊನೆಯ ಮಳೆಗಳು ಸುರಿಯುವ ಮತ್ತು ಇದರೊಂದಿಗೆ ಚಳಿಗಾಲವೂ ಆರಂಭವಾಗುವುದರಿಂದ ಮಂಜುಮುಸುಕಿದ ವಾತಾವರಣವೂ ಜೊತೆಗೂಡಿ ಕತ್ತಲೆಯ ಆಧಿಕ್ಯ ಹೆಚ್ಚು. ಬಹುಶಃ ಈ ಕತ್ತಲೆಯನ್ನು ನಿವಾರಿಸಿಕೊಳ್ಳಲು ಮನೆಮನೆಯ ಮುಂದೆ ದೀಪಗಳನ್ನು ಹಚ್ಚಿ ಬೆಳಕನ್ನು ಕಂಡುಕೊಳ್ಳುವ ಉದ್ದೇಶವೂ ಇರಬಹುದೆನ್ನಿಸುತ್ತದೆ. ಒಟ್ಟಾರೆ ನಾಡಿನಾದ್ಯಂತ ಆಚರಿಸಲಾಗುವ ಈ ದೀಪಾವಳಿ ಹಬ್ಬವನ್ನು ಮ್ಯಾಸಮಂಡಲದಲ್ಲಿಯೂ ಆಚರಿಸಲಾಗುತ್ತದೆ.
ಮ್ಯಾಸಬುಡಕಟ್ಟಿನ ದೇವರು ಕಾಣದ ಲೋಕದವರಲ್ಲ. ಪ್ರಕೃತಿಯ ವಿಶಿಷ್ಟತೆಯನ್ನೇ ದೈವ ಎಂದು ಭಾವಿಸಿ ಪೂಜಿಸುವುದು, ಸೃಷ್ಟಿಗೆ ಕಾರಣವಾಗುವ ತಾಯಿಯನ್ನೇ ಮೊದಲ ದೈವ ಎಂದು ಪೂಜಿಸುವುದು, ತಮಗೆ ಬದುಕನ್ನು ಕಟ್ಟಿಕೊಟ್ಟು ತಮ್ಮನ್ನು ಮುನ್ನಡೆಸಿದ ಹಿರಿಯರನ್ನೇ, ನಾಯಕರನ್ನೇ ತಮ್ಮದೇವರು ಎಂದು ಪೂಜಿಸುವುದು, ಮತ್ತು ತಮ್ಮ ಬದುಕಿಗೆ ಆಧಾರವಾಗಿದ್ದ ಪಶುಸಂಪತ್ತನ್ನೇ ತಮ್ಮ ಹಿರಿಯರೊಂದಿಗೆ ಸಮೀಕರಿಸಿ ದೈವಗಳೆಂದು ಭಾವಿಸಿ ಪೂಜಿಸುವುದು ಈ ಬುಡಕಟ್ಟಿನ ವಿಶೇಷತೆ. ತಮ್ಮ ನಾಯಕ ಅಥವಾ ನಾಯಕಿ ಬಳಸುತ್ತಿದ್ದ ವಸ್ತುವನ್ನು ಬಿದಿರಿನ ಬುಟ್ಟಿಯಲ್ಲಿಟ್ಟು, ಕೆಲವು ಕಡೆ ಸಾಲಿಗ್ರಾಮಗಳನ್ನು ಮತ್ತು ನಾಯಕ/ನಾಯಕಿ ಬಳಸುತ್ತಿದ್ದ ಬಿಲ್ಲು, ಬಾಣ/ ಖಡ್ಗವನ್ನೇ ದೇವರೆಂದು ನಂಬಿ ಪೂಜಿಸುವ ಸಮುದಾಯದಲ್ಲಿ ದೀಪಾವಳಿಯನ್ನು ಇವುಗಳಿಗೆ ಪೂಜೆ ಸಲ್ಲಿಸುವ ಮೂಲಕವೇ ಆಚರಿಸಲಾಗುತ್ತದೆ.
ಮ್ಯಾಸಮಂಡಲದ ಎಲ್ಲಾ ಗುಡಿಕಟ್ಟುಗಳಲ್ಲಿಯೂ ಮತ್ತು ಇದಕ್ಕೆ ಸಂಬಂಧಿಸಿದ ಎತ್ತಿನಗೂಡುಗಳಲ್ಲಿ ಈ ಹಬ್ಬದ ಆಚರಣೆ ನಡೆಯುತ್ತದೆ. ದೀಪಾವಳಿ ಅಮಾವಾಸ್ಯೆಕಳೆದು ಪಾಡ್ಯದ ಸೋಮವಾರ ಹೀರೆಹಳ್ಳಿಯ ದಡ್ಡಿಸೂರನಾಯಕನ ಗುಡಿಗೆ ಈತನಿಂದ ಸಂರಕ್ಷಿಸಲ್ಪಟ್ಟ ದನಕರುಗಳ ಪರಂಪರೆಯಿಂದ ಇಂದಿಗೂ ಉಳಿದು ಬಂದಿರುವ ಆಕಳ ಗೂಡಿನಿಂದ (ಗುಡೇಕೋಟಿ ಬಳಿ ಇರುವ} ಕಿಲಾರಿಗಳು ಮೊಸರು,ತುಪ್ಪವನ್ನು ತಂದು ಸೋಮವಾರ ಸಂಜೆ ಗುಡಿಗೆ ಒಪ್ಪಿಸುತ್ತಾರೆ. ತಮ್ಮ ಹೊಲಗಳಲ್ಲಿ ಬೆಳೆದ ಹಸನಾದ ಸಜ್ಜೆಯತೆನೆಗಳನ್ನು ತಂದು ಒಪ್ಪಿಸುವ ವಾಡಿಕೆಯೂ ಇದೆ. ರಾತ್ರಿಯಿಡಿ ಎಲ್ಲರೂ ಸೇರಿ ಗುಡಿಯಲ್ಲಿ ಹುರುಳಿ, ಗುಗ್ಗರಿ ಬೇಯಿಸಿ ಜೋಳ ಅಥವಾ ಸಜ್ಜೆಯ ಅನ್ನ ಮಾಡಿ ಗೂಡಿನಿಂದ ತಂದ ಮೊಸರನ್ನು ಸೇರಿಸಿ ಬೆಳಗಿನಜಾವ ದಡ್ಡಿಸೂರನಾಯಕನಿಗೆ ನೈವೇದ್ಯ ಮಾಡಲಾಗುತ್ತದೆ.
ರಾತ್ರಿಯಿಡೀ ಉರುಮೆ ವಾದ್ಯದ ಸೇವೆ, ನಾಯಕನನ್ನು ಕುರಿತು ಪದ ಹೇಳುವುದು ನಡೆಯುತ್ತದೆ, ಹೀಗೆ ಗುಡಿಯಲ್ಲಿ ನಡೆಯುವ ಪೂಜೆಯೇ ತಮಗೆ ದೀಪಾವಳಿ ಹಬ್ಬದ ಆಚರಣೆಯಾಗಿದ್ದು ಮನೆ ಮನೆಯ ಮುಂದೆ ದೀಪ ಬೆಳಗಿಸುವ, ರಂಗೋಲಿ ಹಾಕುವ, ಪಟಾಕಿ ಸಿಡಿಸುವ ಆಚರಣೆಗಳು ಇಲ್ಲಿ ಇರುವುದಿಲ್ಲ.
ಕಂಪಳ ದೇವರ ಹಟ್ಟಿಯಲ್ಲಿ ಇದಕ್ಕಿಂತ ಸ್ವಲ್ಪ ಭಿನ್ನವಾಗಿ ಹಬ್ಬದ ಆಚರಣೆ ನಡೆಯುತ್ತದೆ. ಮಾಘ ಮಾಸದಲ್ಲಿ ನಡೆಯುವ ಗುಗ್ಗರಿ ಹಬ್ಬದಲ್ಲಿ ಮಾಡುವಂತೆ ಈ ಸಮಯದಲ್ಲಿಯೂ ಅಮಾವಾಸ್ಯೆ ನಂತರದ ಶುಕ್ರವಾರದಂದು ಪೆಟ್ಟಿ ದೇವರನ್ನು ಗುಡಿಯಿಂದ ತಂದು ಹಟ್ಟಿಯ ಹೊರವಲಯದಲ್ಲಿ ಹೊಸ ಉದಿ/ಪದಿಯನ್ನು ಕಟ್ಟಿ ಇದರಲ್ಲಿ ಕೂರಿಸಿ ಮೂರು ದಿನಗಳ ಹಬ್ಬದ ಆಚರಣೆ ನಡೆಸಲಾಗುತ್ತದೆ.
ತೆಲುಗಿನಲ್ಲಿ ಇದನ್ನು ‘ದುಯಿಲಪಂಡುವ’ ಎಂದು ಕರೆಯಲಾಗುತ್ತದೆ. ಕಂಪಳ ದೇವರ ಪೆಟ್ಟಿಯೊಂದಿಗೆ ಜಗಲೂರು ಪಾಪನಾಯಕನನ್ನು ಸಂಕೇತಿಸುವ ಬಿಲ್ಲು ದೇವರನ್ನೂ ತಂದು ಪೂಜಿಸಲಾಗುತ್ತದೆ. ಆಕಳಗೂಡಿನ ಮೀಸಲು ಮೊಸರು ಮತ್ತು ಬೆಣ್ಣೆಯನ್ನು ಅರ್ಪಿಸುವುದು ಇಲ್ಲಿ ಬಹಳ ವಿಶೇಷವಾದುದು. ಗತಿಸಿದ ಎತ್ತು ಮತ್ತು ಆಕಳಿಂದ ಸಂಗ್ರಹಿಸಿದ ಕೊಂಬನ್ನು ಇಲ್ಲಿ ಬೆಣ್ಣೆಯನ್ನು ಶೇಕರಿಸಲು ಬಳಸಲಾಗುತ್ತದೆ.ಬುಡಕಟ್ಟಿನ ಜನತೆ ತಮಗೆ ಸಿಗುವ ವಸ್ತುಗಳನ್ನೇ ಸಲಕರಣೆಗಳನ್ನಾಗಿ ಬಳಸುವ ವಿಧಾನ ಇಲ್ಲಿ ಗಮನ ಸೆಳೆಯುತ್ತದೆ. ಹೀಗೆ ಸಂಗ್ರಹಿಸಿದ ಬೆಣ್ಣೆಯನ್ನು ಕಾಯಿಸಿ ತುಪ್ಪ ಮಾಡಿ ಪದಿಯಲ್ಲಿ ದೀಪವನ್ನು ಉರಿಸಲಾಗುತ್ತದೆ.ಮೊಸರು,ಜೋಳದ/ಸಜ್ಜೆಯ ಅನ್ನ,ಬಾಳೆಹಣ್ಣು,ಬೆಲ್ಲವನ್ನು ಬೆಳಗಿನಜಾವದಲ್ಲಿ ನೈವೇದ್ಯ,ಮಾಡಲಾಗುತ್ತದೆ.
ಇದರೊಂದಿಗೆ ಎತ್ತುಗಳನ್ನೂ ಹರಿಯಿಸುವುದು, ಮಣೇವು, ಉರಿಯುವ ಪಂಜುಗಳನ್ನೇ ನುಂಗುವುದು ಈ ಹಬ್ಬದ ಪ್ರಮುಖ ಆಚರಣೆಗಳಾಗಿವೆ. ನನ್ನಿವಾಳದ ಕಟ್ಟಿಮನೆಗೆ ಸೇರಿದ ಬಂಗಾರುದೇವರ ಹಟ್ಟಿಯಲ್ಲಿ ದೇವರುಗಳನ್ನು ಮತ್ತು ಬೆಳಗಟ್ಟದ ಸೂರೆಯರಗಾಟನಾಯಕನಿಗೆ ಸಂಬಂಧಿಸಿದಂತೆ, ಬೋಸೇದೇವರ ಹಟ್ಟಿಯ ಬೋಸೇರಂಗಯ್ಯನ ಪೆಟ್ಟಿಯನ್ನು, ದೊಣಮಂಡಲಹಟ್ಟಿಯ ಮಂಡಬೊಮ್ಮದೇವರನ್ನು ಹಟ್ಟಿಯಿಂದ ಹೊರಗೆ ತಂದು ಊರ ಹೊರಗೆ ಹೊಸ ಪದಿಯನ್ನು ಕಟ್ಟಿ, ಗೂಡಿನಿಂದ ಎತ್ತುಗಳನ್ನು ಕರೆಸಿ ಗೌರವಿಸಿ ಪೂಜಿಸುವ ಕ್ರಮವಿದೆ.
ಒಟ್ಟಾರೆ ಈಮ್ಯಾಸಮಂಡಲದ ದೀಪಾವಳಿ ಹಬ್ಬಕ್ಕೆ ಆಯಾ ಗುಂಪಿನವರೆಲ್ಲರೂ ಕಾಸು,ಹಾಲು, ಮೊಸರನ್ನು ಅರ್ಪಿಸಿ ಪಾಲ್ಗೊಳ್ಳುವಿಕೆಯೇ ಇಲ್ಲಿ ಸಾಮುದಾಯಿಕತೆಯ ಮಹತ್ವವನ್ನು ಪಡೆಯುತ್ತದೆ. ಈ ದೀಪಾವಳಿ ಹಬ್ಬದ ಆಚರಣೆಯಲ್ಲಿಎಲ್ಲಾ ಪದಿಗಳಲ್ಲಯೂ ದಾಸೋಹ ವಿಶೇಷವಾಗಿ ನಡೆಯುತ್ತದೆ. ಮುಂಗಾರು ಮಳೆ ಸುರಿದು ಸೊಂಪಾಗಿ ಬೆಳೆದ ಹುಲ್ಲನ್ನು ತಿಂದು ಹಸುಗಳು ಸಾಕಷ್ಟು ಹಾಲನ್ನು ಕೊಡುವುದರಿಂದ ಸಮೃದ್ಧವಾದ ಹಾಲು,ಮೊಸರು ಈ ಹಬ್ಬಕ್ಕೆ ಒದಗುತ್ತದೆ.ಇದನ್ನು ಎಡೆ ಮಾಡಿದ ನಂತರ ಎಲ್ಲರಿಗೂ ದಾಸೋಹದಲ್ಲಿ ನೀಡಲಾಗುತ್ತದೆ.
ಈ ಬುಡಕಟ್ಟಿನ ದೀಪಾವಳಿ ಹಬ್ಬದ ಆಚರಣೆಯ ಹಿಂದೆ ನಮ್ಮ ಭಾರತದ ಪೌರಾಣಿಕ ಕಥನಗಳಾವುವು ಕೇಳಿ ಬರುವುದಿಲ್ಲ.ಮನೆ ಮನೆಯ ಮುಂದೆ ದೀಪಗಳನ್ನು ಹಚ್ಚಿ ಸಡಗರಿಸುವುದು ಇಲ್ಲಿಲ್ಲ. ರಂಗೋಲಿ ಹಾಕುವುದಂತೂ ಬುಡಕಟ್ಟಿನ ನಿಶೇಧಗಳಲ್ಲಿ ಒಂದಾಗಿರುವುದರಿಂದ ಆ ಪ್ರಸ್ತಾಪವೇ ಇಲ್ಲಿಲ್ಲ. ಬದಲಾಗಿ ತಮ್ಮ ಮನೆ ದೇವರಾದ ಪೆಟ್ಟಿಗೆ ದೇವರು/ಬಿಲ್ಲು ದೇವರು/ಎತ್ತುಗಳನ್ನು ಗೌರವಿಸಿ ಪೂಜಿಸುವುದು. ಈ ಮೂಲಕವಾಗಿಯೇ ತಮ್ಮ ಮುಂದಿನ ಬದುಕಿಗೆ ಬೇಕಾದ ಬೆಳಕನ್ನು, ಚೈತನ್ಯವನ್ನು ಕೋರುವುದು ಇಲ್ಲಿ ಮುಖ್ಯವಾಗಿರುತ್ತದೆ.
ತಾನು ಬದುಕಿರುವ ಪರಿಸರ, ತಮಗೆ ಬದುಕನ್ನು ಕಟ್ಟಿಕೊಡುವ ಪ್ರಾದೇಶಿಕತೆ ಮತ್ತು ಭೌತಿಕ ಪ್ರಪಂಚ ಮತ್ತು ತನಗೆ ನೈತಿಕ ಬೆಂಬಲವಾಗಿ ನಿಂತ ತನ್ನ ಸಾಂಸ್ಕೃತಿಕ ಜಗತ್ತು ಈ ಎಲ್ಲವುಗಳ ಮೂಲಕ ಒಡಮೂಡುವ ದೇಸಿತನ ಆಯಾ ಬುಡಕಟ್ಟಿನ ಆಚರಣೆಗಳಿಗೆ ಸೈದ್ಧಾಂತಿಕತೆಯನ್ನು ಒದಗಿಸಿಕೊಡುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಮ್ಯಾಸಬೇಡ ಬುಡಕಟ್ಟಿನ ಈ ದೀಪಾವಳಿ ಆಚರಣೆಯಲ್ಲಿ ಈ ದೇಸಿತನವೇ ಒಡಮೂಡಿರುವುದನ್ನು ಕಾಣಬಹುದಾಗಿದೆ.ಆದಿವಾಸಿಗಳ ಧರ್ಮಿಕ ಜಗತ್ತಿನಲ್ಲಿ ಸರ್ಪಣಾಭಾವ ಮತ್ತು ಪಾರಂಪರಿಕ ಸಂಬಂಧ ಮುಖ್ಯವಾಗಿರುತ್ತದೆ. ಈ ಆಚರಣೆಗಳನ್ನು ಸಮುದಾಯದ ಸಾಂಸ್ಕೃತಿಕ ಅಸ್ಮಿತೆಗಳು ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ6 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ6 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ6 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ಕವಿತೆ | ನೆನಪು
-
ದಿನದ ಸುದ್ದಿ3 days ago
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
-
ದಿನದ ಸುದ್ದಿ2 days ago
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ
-
ದಿನದ ಸುದ್ದಿ1 day ago
ಇಂದಿನಿಂದ ಏ.3 ರವರೆಗೆ ಸೂಳೆಕೆರೆಗೆ ನೀರು ಬಿಡುಗಡೆ