ದಿನದ ಸುದ್ದಿ
ತುಳುನಾಡು; ಕೋಟೆ ಚೆನ್ನಯರು ಮತ್ತು ‘ಮಮ್ಮಾಲಿ’ ಎಂಬ ಬ್ಯಾರಿ..!
- ಚರಣ್ ಐವರ್ನಾಡು
ಕೋಟಿ ಚೆನ್ನಯರ ಮರಣದ ನಂತರ ಎಣ್ಮೂರಿನ ದೇವು ಬಲ್ಲಾಳನ ಅರಸು ಪಟ್ಟದ ರಕ್ಷಣೆಗಾಗಿ ನಿಂತು ಪ್ರಾಣ ಕೊಟ್ಟವ “ಮಮ್ಮಾಲಿ” ಎಂಬ ಬ್ಯಾರಿ!!
ತುಳುನಾಡಿನ ಚರಿತ್ರೆ ಮತ್ತು ನಂಬಿಕೆಗಳ ಮೂಲಕ ಹಿಂದೂ ಮತ್ತು ಮುಸಲ್ಮಾನ ಕೋಮು ಶಕ್ತಿಗಳಿಗೆ ಪರ್ಯಾಯವಾಗಿ ಸೌಹಾರ್ದತೆಯ ಸಮಾಜವೊಂದನ್ನು ಕಟ್ಟದ ಹೊರತು ಮತ್ತೆ ಹಿಂದಿನಂತೆ ರಕ್ತದ ಹೊಳೆ ಹರಿದೀತು!
ಕೋಟಿ ಚೆನ್ನಯರು ಸುರಿಯೆ ಹಿಡಿದು ಹೋರಾಡಿದ್ದು ಕ್ರೂರ ಜಮೀನ್ದಾರಿಯ ವಿರುದ್ಧ. ತಮ್ಮ ಮೇಲೆ ನಂಬಿಕೆ ಇಟ್ಟ, ಗೌರವಿಸಿದ ದೇವು ಬಲ್ಲಾಳನ ಬೆನ್ನಿಗೆ ನಿಂತು ಲಡಾಯಿಯಲ್ಲಿ ಪ್ರಾಣ ಬಿಟ್ಟಿದ್ದು. ರೈತರಾದ ಇವರ ಬದುಕು ನಮ್ಮ ಹಕ್ಕುಗಳಿಗೆ ಹೊರಾಡುವುದಕ್ಕೆ ಮಾದರಿಯೇ ಹೊರತು ಮತದ್ವೇಷದ ಹೆಸರಿನಲ್ಲಿ ರಕ್ತ ಹರಿಸಲು ಅಲ್ಲ.
ಕರಾವಳಿ ಕೋಮು ದ್ವೇಷಕ್ಕೆ ಈಗಾಗಲೇ ಘಾಸಿಗೊಂಡಿದೆ. ಕೋಮು ಸಂಘಟನೆಗಳು ಕಟ್ಟುವ ಮನುಷ್ಯ ಸಂಬಂಧಗಳನ್ನು ಒಡೆಯುವ ಚರಿತ್ರೆಗೆ ನಾವು ಪರ್ಯಾಯವಾಗಿ ನಮ್ಮ ಸತ್ಯದ ಚರಿತ್ರೆಯನ್ನು ಹೇಳಬೇಕಿದೆ.
ನನಗೆ ಗೊತ್ತು, ಈ ಕೆಲಸ ಅಷ್ಟು ಶೀಘ್ರ ಮತ್ತು ಸುಲಭವಲ್ಲ. ಸುಳ್ಳು ಚರಿತ್ರೆ ಹರಡುವುದು ಉದ್ರೇಕಕಾರಿ ಮಾತುಗಳ ಮೂಲಕ. ಅದಕ್ಕೆ ಬೇಕಾದಷ್ಟು ವೇದಿಕೆಗಳಿವೆ. ಕೇಳಿ ಹುಚ್ಚೆದ್ದು ಕುಣಿಯುವ ಶೂದ್ರ, ದಲಿತ ಹುಡುಗರು ಇದ್ದಾರೆ. ನಾಳೆ ಇವರೆಲ್ಲ ಕತ್ತಿ ಪಿಸ್ತೂಲ್ ಹಿಡಿಯುವುದನ್ನು ನಾವು ಕಣ್ಣಲ್ಲಿ ನೋಡುವ ಕಾಲ ಬಂದರು ನಿರ್ಭಿಡೆಯಿಂದ ನಮ್ಮ ಪರಂಪರೆ ಹೇಳಿದ ಸೌಹಾರ್ದದ ಕತೆಗಳನ್ನು ಗಟ್ಟಿಯಾಗಿ ಹೇಳಲು ಪ್ರಯತ್ನ ಮಾಡಿಯೇ ಮಾಡುತ್ತೇನೆ!
ಕೋಟಿ ಚೆನ್ನಯರು ತಲವಾರು ಹಿಡಿದು ಹಾಗೇ ನಾವೂ ಹಿಡಿಯುತ್ತೇವೆ!! ಯಾರು ಹಿಡಿಯುವವರು…? ಬಿಲ್ಲವ, ಗೌಡ, ಮರಕಾಲ ಮೊದಲಾದ ಶೂದ್ರರು, ದಲಿತರು? ಕೋಟಿ ಚೆನ್ನಯರು ಅನ್ನದ ಹಕ್ಕಿಗಾಗಿ ಹೋರಾಡಿದರು. ಇಂದು ದೇಶದಲ್ಲಿ ರೈತರು (ನೀವು ಹೇಳುವಂತೆ ಅವರು ಸುಳ್ಳು ರೈತರೇ ಅನ್ನಿ) ಕೃಷಿ ನೀತಿಗಳ ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ.
ಇವರ ಹೋರಾಟವನ್ನು ಹೀಯಾಳಿಸುವ ನಿಮ್ಮ ಸ್ವಾತಂತ್ರ್ಯವನ್ನು ಒಪ್ಪಿಕೊಳ್ಳುತ್ತಾ ಅವರ ಅಹವಾಲುಗಳನ್ನು ಕೇಳುವ ದಾರಿದ್ರ್ಯ ನಮ್ಮನ್ನು ಆಳುವ ಸರ್ಕಾರಕ್ಕೆ ಇದೆ ಎಂಬುದು ವ್ಯಥೆ! ಇಲ್ಲಿ ತಮ್ಮ ಭೂಮಿಗಾಗಿ ಪಡುಮಲೆ ಬಲ್ಲಾಳನ ವಿರುದ್ಧ ಸಿಡಿದೆದ್ದ ಕೋಟಿ ಚೆನ್ನಯರು ಆದರ್ಶವಾಗುತ್ತಾರೆ.
ತುಳುನಾಡಿನ ಬೇಕಿರುವುದು ಕೋಮು ಸಂಘರ್ಷಗಳು ಅಲ್ಲ. ತಲವಾರು ಹಿಡಿಯಲು ಹೊರಟಿರುವ ನನ್ನ ಪ್ರಾಯದ ಯುವಕರಿಗೆ ಬೇಕಾಗಿರುವುದು ಉದ್ಯೋಗ, ನಮ್ಮ ಭಾಷೆಗೆ ಬೇಕಾದ ರಾಜಕೀಯ ಶಕ್ತಿ, ಎರಡು ದಶಕಗಳ ಹಿಂದೆ ನಿಂತು ಹೋಗಿರುವ ಪಂಡಿತ ಪರಂಪರೆಯ ಚರ್ಚೆ!
ತುಳುನಾಡಿನ ಜನ ಬುದ್ದಿವಂತರು ಎಂದು ಕರೆಸಿಕೊಳ್ಳುತ್ತಾರೆ. ಬುದ್ದಿವಂತರು ಆಗಿದ್ದರು….. ಹಾಗಾಗಿ ಹತ್ತಾರು ಬ್ಯಾಂಕುಗಳು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಕೈಗಾರಿಕೆಗಳು ಇಲ್ಲಿ ಬೆಳೆದವು. ತುಳುವಿನಷ್ಟು ಈ ದೇಶದ ಯಾವುದೇ ಪ್ರಾದೇಶಿಕ ಭಾಷೆಯಲ್ಲಿ ಸಾಹಿತ್ಯ, ಸಂಶೋಧನೆಯ ಕೆಲಸ ನಡೆದಿಲ್ಲ. ಇಲ್ಲಿ ಒಂದು ಸುದೀರ್ಘ ಪಂಡಿತರ ಪರಂಪರೆ ಇದೆ. ಯಾವಾಗ ಕೋಮು ಸಂಘಟನೆಗಳು ಇಲ್ಲಿ ಕಾಲಿಟ್ಟವೋ…ಅಲ್ಲಿಗೆ ಎಲ್ಲವೂ ನಿಂತೇ ಹೋಗಿವೆ! ಇಂದು ತುಳುನಾಡಿನ ಜನ ಬುದ್ದಿವಂತರಾಗಿ ಉಳಿದಿಲ್ಲ, ಮುಟ್ಟಾಳರಾಗಿದ್ದಾರೆ!
ದಕ್ಷಿಣ ಕನ್ನಡಕ್ಕೆ ಬೆಂಕಿ ಹಾಕಲು ಗೊತ್ತಿದೆ ಎಂಬ ಒಬ್ಬ ಅವಿವೇಕಿ, ಮೂರ್ಖ ಸಂಸದ ತುಳುನಾಡನ್ನು ಹೇಗೆ ಪ್ರತಿನಿಧಿಸಬಲ್ಲ? ಇಂತವರ ಮಾತು ಕೇಳಿ ನಮ್ಮ ಯುವಕರು ಕತ್ತಿ ಹಿಡಿಯುತ್ತಾರೆ. ಭಾಷಣ ಬಿಗಿಯುವ ಜನ ತಮ್ಮ ಮಕ್ಕಳ ಕೈಗೆ ಕತ್ತಿ ಕೊಡುತ್ತಾರೆಯೇ? ಯಾರು ಕತ್ತಿ ಹಿಡಿಯುತ್ತಾರೆ? ನನ್ನಂತ ಶೂದ್ರ, ದಲಿತನ ಮಗ! ಅವನಿಗೆ ಉದ್ಯೋಗ ಇಲ್ಲ, ಓದಲು ಕಾಸಿಲ್ಲ!
ಪ್ರಜ್ಞಾವಂತ ಹಿಂದೂ, ಮುಸಲ್ಮಾನ ಮತ್ತು ಎಲ್ಲಾ ಧರ್ಮದವರು ಎಚ್ಚೆತ್ತು ಕೋಮು ದ್ವೇಷಕ್ಕೆ ಪರ್ಯಾಯವಾಗಿ ಸೌಹಾರ್ದತೆಯ ಸಮುದಾಯವನ್ನು ಕಟ್ಟದ್ದೆ ಇದ್ದರೆ ಮುಂದೆ ಬದುಕಲು ಸಾಧ್ಯ ಇಲ್ಲದ ಸ್ಥಿತಿ ನಿರ್ಮಾಣ ಆದೀತು.
ಸಾಧ್ಯ ಆದರೆ ನಮ್ಮ ಮಕ್ಕಳ ಕೈಗೆ ಕತ್ತಿ ಕೊಡಲು ಹೊರಟಿರುವ ಚೈತ್ರ ಎಂಬ ಭಾಷಣ ಮಾಡುವ ಮೂರ್ಖ ಹೆಂಗಸಿಗೆ ಈ ಕಥೆಯನ್ನು ತಲುಪಿಸಿ.
ಕೋಟಿ ಚೆನ್ನಯರು ಮರಣ ಹೊಂದಿದ ಮೇಲೆ ಎಣ್ಮೂರು ಸೂತಕದಲ್ಲಿ ಇತ್ತು. ದೇವು ಬಲ್ಲಾಳನ ಪಟ್ಟವನ್ನು ರಕ್ಷಿಸಲು ಅವಳಿ ವೀರರು ತಮ್ಮ ಪ್ರಾಣವನ್ನು ಅರ್ಪಿಸಿದ್ದರು. ಇವರ ನಂತರ ಎಣ್ಮೂರಿನ ದೇವು ಬಲ್ಲಾಳನ ಪಟ್ಟವನ್ನು ಕಾಪಾಡುವ ವೀರರು ಯಾರು? ಆಗ ಅವರಿಗೆ ಬೆಂಗಾವಲಾಗಿ ನಿಂತ ವೀರ “ಮಾಮ್ಮಾಲಿ” ಬ್ಯಾರಿ!
ಕುರಿಯ ಗುತ್ತು ಪುತ್ತೂರಿನ ಹೆಗ್ಗಡೆಯ ಬೀಡಿಗೆ ಸೇರಿದ ಖ್ಯಾತ ಗುತ್ತು. ಇಲ್ಲಿನ ಗುತ್ತಿನಾರ್ ಮರಣಹೊಂದಿದ ಮೇಲೆ ಗುತ್ತಿನ ಹೆಂಗಸು ಗುತ್ತಿನ ಜವಾಬ್ದಾರಿ ಹೊರುತ್ತಾಳೆ. ಗುತ್ತಿನ ಪರಿಸರದಲ್ಲಿ ಇದ್ದ ಮುಸ್ಲಿಂ ಕುಟುಂಬದ ಯುವಕ ಗುತ್ತಿನ ದಂಡಿನ ಮುಖಂಡ. ಅನಾಥನಾಗಿದ್ದ ಅವನು ತನ್ನ ಮಡದಿಯ ಜೊತೆಗೆ ವಾಸ ಮಾಡುತ್ತಿದ್ದ.
ಹೀಗಿರಲು ಗುತ್ತಿಗೆ ವಿಜಯನಗರದ ತಾಳಿಕೋಟೆಯ ಕದನಕ್ಕೆ ಸೈನಿಕರು ಮತ್ತು ನಿಧಿಯನ್ನು ನೀಡುವಂತೆ ಪುತ್ತೂರಿನ ಹೆಗ್ಗಡೆಗೆ ಬರುತ್ತದೆ. ಅವನು ತನ್ನ ಕೈಕೆಳಗೆ ಬರುವ ನಾಲ್ಕು ಗುತ್ತುಗಳನ್ನು ಕರೆದು ಸಭೆ ನಡೆಸುತ್ತಾನೆ. ಯುದ್ಧಕ್ಕೆ ಪಡೆಯನ್ನು ಕಳುಹಿಸಲು ಅದಕ್ಕೆ ಮುಖಂಡನಾಗಿ ಕುರಿಯ ಗುತ್ತಿನ ಬ್ಯಾರಿ ಮುಖಂಡನನ್ನು ನೇಮಿಸಿದಾಗ ಗುತ್ತಿನ ಹೆಂಗಸು ವಿರೋಧ ಮಾಡುತ್ತಾಳೆ. ಅವಳಿಗೆ ತುಂಬು ಗರ್ಭಿಣಿ ಮಡದಿಯನ್ನು ಹೊಂದಿರುವ ಬ್ಯಾರಿಯನ್ನು ಯುದ್ದಕ್ಕೆ ಕಳುಹಿಸುವುದು ಇಷ್ಟವಿರಲಿಲ್ಲ. ಆದರೆ ಬ್ಯಾರಿ ತನ್ನ ಪಡೆಯೊಂದಿಗೆ ವಿಜಯನಗರದ ಯುದ್ದಕ್ಕೆ ಹೋಗುತ್ತಾನೆ. ಯುದ್ಧದಲ್ಲಿ ಮರಣ ಹೊಂದುತ್ತಾನೆ.
ಇತ್ತ ಗಂಡನನ್ನು ಕಳೆದುಕೊಂಡ ಬ್ಯಾರ್ದಿ ಒಂದು ಗಂಡು ಮಗುವಿಗೆ ಜನ್ಮ ನೀಡಿ ಮರಣ ಹೊಂದುತ್ತಾಳೆ. ಈ ಮಗುವನ್ನು ಗುತ್ತಿನ ಮನೆಯ ಒಡತಿಯೇ “ಮಮ್ಮಾಲಿ/ಮಮ್ಮದೆ” ಎಂಬ ಹೆಸರು ಇಟ್ಟು ಸಾಕುತ್ತಾಳೆ. ಅವ ಮುಸಲ್ಮಾನನಾದರೂ ಅವನಿಗೆ ನಮಾಜು ಮಾಡಲು ಗುತ್ತಿನಲ್ಲಿ ಅಡ್ಡಿ ಇರಲಿಲ್ಲ. ಒಂದು ದೀಪ ಉರಿಸಿ ನಿತ್ಯ ನಮಾಜು ಮಾಡುತ್ತಿದ್ದ.
ಒಂದು ದಿನ ದನ ಮೇಯಿಸಲು ಹೋಗಿದ್ದ ಮಾಮ್ಮಲಿ ಮರದ ಕೆಳಗೆ ಮಲಗಿದ್ದ. ಅವನ ಮುಖಕ್ಕೆ ಬಿಸಿಲು ಬಡಿಯುತ್ತಿತ್ತು. ಆಗ ಒಂದು ಸರ್ಪ ಹೆಡೆ ಎತ್ತಿ ಅವನ ಮುಖಕ್ಕೆ ಬಿಸಿಲು ಬೀಳದಂತೆ ನಿಂತಿತ್ತಂತೆ. ಅದನ್ನು ನೋಡಿ ಇತರ ಹುಡುಗರು ಭಯದಲ್ಲಿ ಓಡಿ ಹೋಗಿದ್ದರು. ಆದರೆ ಮಮ್ಮಾಲಿ ಮಾತ್ರ ಏನೂ ಅಗದವನಂತೆ ಇದ್ದ. ಇವನು ಗುಟ್ಟಿನಲ್ಲಿ ಬೆಳೆದಂತೆ ಅವನ ಕಾರಣಿಕ ಕೂಡಾ ದಿನೇ ದಿನೇ ಬೆಳೆಯಿತು. ಕುರಿಯ ಗುತ್ತಿನ ಸಂಪತ್ತು ಸಮೃದ್ಧವಾಗಿ ಬೆಳೆಯಿತು.
ಒಂದು ದಿನ ಕುರಿಯ ಗುತ್ತಿನ ಕಪಿಲೆ ದನವನ್ನು ಹುಲಿ ಹಿಡಿಯಿತು. ದನವನ್ನು ಕಳೆದುಕೊಂಡ ಗುತ್ತಿನ ಒಡತಿ ಅಳುತ್ತಿದ್ದಳು. ಅಂದು ರಾತ್ರಿ ಮಮ್ಮಾಲಿ ದನವನ್ನು ಕೊಂದ ಜಾಗಕ್ಕೆ ಕರಿ ಕಂಬಳಿ ಹೊದ್ದು ಹೋಗಿ ಹುಲಿಗಾಗಿ ಕಾದನು, ಹುಲಿ ಬಂದಂತೆ ಅದನ್ನು ಹೊಡೆದು ಸಾಯಿಸಿದ. ಸತ್ತ ಹುಲಿಯನ್ನು ಹಗ್ಗದಲ್ಲಿ ಕಟ್ಟಿ ತನ್ನ ಸೊಂಟಕ್ಕೆ ಬಿಗಿದು ಎಳೆದುಕೊಂಡು ಕುರಿಯ ಗುತ್ತಿನ ಅಂಗಳಕ್ಕೆ ತಂದು ಹಾಕಿದ.
ಇಂತಹ ವೀರನನ್ನು ಗರಡಿಗೆ ಸೇರಿಸಿ ವೀರನನ್ನಾಗಿ ಮಾಡಲು ಗುತ್ತಿನ ಒಡತಿ ತೀರ್ಮಾನಿಸುತ್ತಾಳೆ. ಆದರೆ ಪುತ್ತೂರಿನಲ್ಲಿ ಗರಡಿ ಇರಲಿಲ್ಲ. ಅವನ್ನನ್ನು ವಿಟ್ಲದ ಅರಸನ ಗರಡಿಗೆ ಸೇರಿಸುತ್ತಾಳೆ.
ವಿಟ್ಲದ ಅರಸರಿಗೆ ಗರಡಿಯ ಗುರುವಾಗಿ ಇದ್ದವರು ದೇರಣ್ಣ ಗೌಡ ಎಂಬವನು. ಇವನ ಅಡಿಯಲ್ಲಿ ಮಮ್ಮಾಲಿ ಅಂಗ ಸಾಧನೆಯನ್ನು ಕಲಿಯುತ್ತಿರುತ್ತಾನೆ.
ಒಮ್ಮೆ ರಾಜ ಕುಟುಂಬಕ್ಕೆ ಸೇರಿದ ಯುವಕ ದೇರಣ್ಣ ಗೌಡರ ಪ್ರೇಯಸಿಯ ಮಾನ ಭಂಗ ಮಾಡುತ್ತಾನೆ. ಆಗ ದೇರಣ್ಣ ಗೌಡ ಇದನ್ನು ಪ್ರಶ್ನಿಸಿ ರಾಜ ವಿರೋಧಕ್ಕೆ ಒಳಾಗಾಗ ಬೇಕಾದೀತು ಎಂದು ಸಾಧುವಾದ ಎಣ್ಮೂರು ದೇವು ಬಲ್ಲಾಳನ ಬೀಡಿಗೆ ತನ್ನ ಪ್ರೇಯಸಿಯೊಂದಿಗೆ ಬರುತ್ತಾನೆ. ಬಲ್ಲಾಳ ಅವನಿಗೆ ಅಕ್ರಿಕೆ (ತುರಿಕೆ ಉಂಟು ಮಾಡುವ ಸಸ್ಯ) ಹೆಚ್ಚಿದ್ದ ಅಕ್ರಿಕಟ್ಟೆ ಎಂಬ ಭೂಮಿಯನ್ನು ನೀಡಿ ಆಶ್ರಯ ನೀಡುತ್ತಾರೆ. ಹಾಗೆ ಬಲ್ಲಾಳರು ಗೌಡನ ಮೂಲಕ ಪಡ್ಪು ಎಂಬಲ್ಲಿ ಗರಡಿ ಶಾಲೆ ತೆರೆಯುತ್ತಾರೆ.
ಹೇಳದೆ ಕೇಳದೆ ವಿಟ್ಲ ಬಿಟ್ಟ ಗುರುವನ್ನು ಹುಡುಕಿಕೊಂಡು ಮಮ್ಮಾಲಿ ಪಡ್ಪುವಿನಲ್ಲಿ ಇದ್ದ ಗರಡಿಗೆ ಬರುತ್ತಾನೆ. ಮತ್ತೆ ತನ್ನ ಗುರು ದೇರಣ್ಣ ಗೌಡನನ್ನು ಕೂಡಿಕೊಳ್ಳುತಾನೆ. ಇದು ಆಗಿದ್ದು ಕೋಟಿ ಚೆನ್ನಯರು ಮರಣ ಹೊಂದಿ ಎರಡು ವರ್ಷಗಳು ತುಂಬುತ್ತಿದ್ದ ಹಾಗೆ. ಕೋಟಿ ಚೆನ್ನಯರು ಮತ್ತು ಮಂಜು ಪೆರ್ಗಡೆ ತೀರಿದ ಮೇಲೆ ಎಣ್ಮೂರು ಬೀಡಿಗೆ ರಕ್ಷಣೆಗಾಗಿ ಯಾರೂ ಇರಲಿಲ್ಲ. ದೇರಣ್ಣನ ಶಿಷ್ಯ ಮಮ್ಮಾಲಿಯನ್ನು ದೇವು ಬಲ್ಲಾಳ ಮೆಚ್ಚಿ ಹತ್ತಿರ ಮಾಡಿಕೊಂಡ. ಅವನ ರಕ್ಷಣೆಯಲ್ಲಿ ಬಲ್ಲಾಳ ಎಣ್ಮೂರು ಪಟ್ಟವನ್ನು ಅಳುತ್ತಿದ್ದ.
ವೃದ್ದನಾಗಿದ್ದ ದೇವು ಬಲ್ಲಾಳನ ಪಟ್ಟದ ಮೇಲೆ ಅವನ ಅಳಿಯ ರುಕ್ಮ ಬಲ್ಲಾಳನ ಕಣ್ಣು ಬಿತ್ತು. ಪಟ್ಟವನ್ನು ಹಸ್ತಾಂತರ ಮಾಡುವಂತೆ ಇವನು ಬಲ್ಲಾಳನಿಗೆ ಹೇಳಿದ್ದ. ಇದನ್ನು ಚಾವಡಿಯಲ್ಲಿ ಪ್ರಸ್ತಾಪ ಮಾಡಿದಾಗ ಪಟ್ಟವನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ದೇವು ಬಲ್ಲಾಳ ಘೋಷಿಸುತ್ತಾನೆ. ಬಲ್ಲಾಳನಿಗೆ ಇಕ್ಕೇರಿಯ ಅರಸರು ಪಟ್ಟದ ಕತ್ತಿ ಮತ್ತು ಕಿರೀಟವನ್ನು ಕೊಟ್ಟಿದ್ದರಂತೆ.
ಅದನ್ನು ತನ್ನ ವಶ ಮಾಡಿಕೊಂಡರೆ ಕಿರೀಟ ಮತ್ತು ಮತ್ತು ಪಟ್ಟದ ಕತ್ತಿ ಇಲ್ಲದ ಬಲ್ಲಾಳ ಅಧಿಕಾರ ಬಿಡಬೇಕಾಗುತ್ತದೆ ಎಂದು ರುಕ್ಮ ಬಲ್ಲಾಳ ಕುತಂತ್ರಗಳನ್ನು ಹೂಡುತ್ತಾನೆ. ಅದಕ್ಕಾಗಿ ಕಡಬದ ಬಲ್ಲಾಳನ ಸಹಾಯ ಕೋರುತ್ತಾನೆ. ಆದರೆ ಇದು ಮಮ್ಮಾಲಿ ಇರುವ ತನಕ ಸಾಧ್ಯ ಇಲ್ಲ ಎಂಬುದು ಅವನಿಗೆ ಗೊತ್ತಿತ್ತು.
ಮಮ್ಮಾಲಿ ನಮಾಜು ಮಾಡಲು ಎಣ್ಮೂರಿನಲ್ಲಿ ಪಳ್ಳಿ (ಮಸೀದಿ) ಇರಲಿಲ್ಲ. ಅವನು ಕಡಬದ ಪಲ್ಲಿಗೆ ಹೋಗಬೇಕಿತ್ತು. ಒಂದು ಶುಕ್ರವಾರ ಕಡಬದ ಪಳ್ಳಿಗೆ ಹೋಗುವಾಗ ಕಡಬದ ಪಲ್ಲಿಯಲ್ಲಿ ಇರುವ ಯುವಕರು ಅಂದು ಒಬ್ಬರೂ ಇರಲಿಲ್ಲ. ಮಮ್ಮಾಲಿಗೆ ಅನುಮಾನ ಬರುತ್ತದೆ. ನೇರ ಎಣ್ಮೂರಿನ ಕಡೆಗೆ ನಡೆಯುತ್ತಾನೆ.
ಇತ್ತ ಮಮ್ಮಾಲಿ ಇಲ್ಲದ ಸಮಯದಲ್ಲಿ ರುಕ್ಮ ಬಲ್ಲಾಳ ಕಡಬದ ಬಲ್ಲಾಳನ ಪಡೆಯೊಂದಿಗೆ ಎಣ್ಮೂರಿನ ಬೀಡಿನ ಮೇಲೆ ಧಾಳಿ ಇಟ್ಟು ಪಟ್ಟದ ಕತ್ತಿ ಮತ್ತು ಪೇಟವನ್ನು ವಶಮಾಡಿಕೊಳ್ಳುತ್ತಾನೆ.
ಕಡಬದ ದಂಡು ಕಡಬದ ಕಡೆಗೆ ಮರಳುವಾಗ ಹಿಂತಿರುಗಿ ಬರುತ್ತಿರುವ ಮಮ್ಮಾಲಿ ಬ್ಯಾರಿ ಪಂಜದ ಕಮಿಲದಲ್ಲಿ ಎದುರಾಗುತ್ತಾನೆ. ಮಮ್ಮಾಲಿ ಮತ್ತು ಕಡಬದ ದಂಡಿನ ನಡುವೆ ಕಾದಾಟ ನಡೆಯುತ್ತದೆ. ಲಡಾಯಿಯಲ್ಲಿ ಮಮ್ಮಾಲಿ ಒಬ್ಬನೇ ಕಾದಾಡಿ ಎಣ್ಮೂರಿನ ಪಟ್ಟದ ಕತ್ತಿ ಮತ್ತು ಪೇಟವನ್ನು ಮರುವಶ ಮಾಡಿಕೊಳ್ಳುತ್ತಾನೆ.
ಮಮ್ಮಾಲಿ ಎಣ್ಮೂರಿನ ಬೀಡಿಗೆ ಬಂದಾಗ ದೇವು ಬಲ್ಲಾಳ ಮತ್ತು ದೇರಣ್ಣ ಗೌಡ ದುಃಖದಲ್ಲಿ ಇರುತ್ತಾರೆ. ಬ್ಯಾರಿ ತಾನು ತಂದ ಪೇಟ ಮತ್ತು ಕತ್ತಿಯನ್ನು ಬಲ್ಲಾಳರಿಗೆ ಒಪ್ಪಿಸುತ್ತಾನೆ. ಆಗ ಬಲ್ಲಾಳರು ಒಮ್ಮೆ ಕಳೆದುಕೊಂಡ ಪಟ್ಟವನ್ನು ಮತ್ತೆ ಏರುವುದಿಲ್ಲ ಎಂದು ಹೇಳಿ ಮಮ್ಮಾಲಿಯನ್ನು ಪಟ್ಟ ಏರುವಂತೆ ಒತ್ತಾಯಿಸುತ್ತಾರೆ.
ಬ್ಯಾರಿ ಎಷ್ಟೇ ತಿರಸ್ಕರಿಸಿದರು ಬಲ್ಲಾಳ ಒಪ್ಪುವುದಿಲ್ಲ. ಆಗ ಮಮ್ಮಾಲಿ ಪಟ್ಟದ ಕತ್ತಿ ಮತ್ತು ಪೇಟವನ್ನು ಪಟ್ಟದ ಮಣೆಯ (ಸಿಂಹಾಸನ) ಮೇಲೆ ಇಟ್ಟು ಬೀಡನ್ನು ಕಾಯುತ್ತಾನೆ. ಬಲ್ಲಾಳ ತನ್ನ ನಂತರ ಮಮ್ಮಾಲಿಗೆ ಪಟ್ಟ ಹೋಗಬೇಕು ಎಂದು ಅವನು ಪಟ್ಟವೇರಿ ಮಾಡಬೇಕಾದ ಜವಾಬ್ದಾರಿಗಳನ್ನು ಕುರಿತು ಶಾಸನ ಬರೆಸುತ್ತಾನೆ. ಕೆಲ ಕಾಲದ ನಂತರ ಬಲ್ಲಾಳ ಮರಣ ಹೊಂದುತ್ತಾನೆ.
ಇತ್ತ ರುಕ್ಮ ಬಲ್ಲಾಳ ಪಟ್ಟವನ್ನು ದಕ್ಕಿಸಿಕೊಳ್ಳಲು ಪ್ರಯತ್ನ ನಡೆಸುತ್ತಿರುತ್ತಾನೆ. ಅವನು ಕುಂಬ್ಳೆ ರಾವಂತರಸ ಮತ್ತು ವಿಟ್ಲದ ಹೆಗ್ಗಡೆಗೆ ದೂರು ನೀಡುತ್ತಾನೆ. ಇವರು ಮಮ್ಮಾಲಿಯನ್ನು ಕರೆದು ರುಕ್ಮ ಬಲ್ಲಾಳನಿಗೆ ಪಟ್ಟ ಬಿಟ್ಟು ಕೊಡುವಂತೆ ಆದೇಶ ನೀಡುತ್ತಾರೆ. ಪಟ್ಟ ಬಿಟ್ಟು ಕೊಟ್ಟರೆ ಸ್ವರ್ಗರ್ಥರಾದ ದೇವು ಬಲ್ಲಾಳರಿಗೆ ಅಪಚಾರ ಬಗೆದ ಹಾಗೆ ಎಂದು ಮಮ್ಮಾಲಿ ಇದಕ್ಕೆ ಒಪ್ಪುವುದಿಲ್ಲ.
ಆಗ ಕುಂಬ್ಳೆ ಮತ್ತು ವಿಟ್ಲದ ಅರಸರು ಒಂದು ತೀರ್ಮಾನಕ್ಕೆ ಬರುತ್ತಾರೆ. ಯಾರ ತಲೆಗೆ ಪಟ್ಟದ ಆನೆ ಪಟ್ಟದ ಕಿರೀಟ ಹಾಕಿದ ಮುಂಡಾಸು ತೋಡಿಸುತ್ತದೆಯೋ ಅವರು ಮುಂದೆ ಎಣ್ಮೂರು ಬೀಡಿನ ಪಟ್ಟ ಏರಬೇಕು ಎಂದು ಅದೇಶಿಸುತ್ತಾರೆ. ಇದಕ್ಕೆ ಬ್ಯಾರಿ ಒಪ್ಪುತ್ತಾನೆ.
ಆದರೆ ಆನೆ ಮಮ್ಮಾಲಿ ಬ್ಯಾರಿಯ ತಲೆಗೆ ಪಟ್ಟದ ಮುಂಡಾಸು ತೊಡಿಸುತ್ತದೆ. ಪಟ್ಟ ಮಮ್ಮಾಲಿಯದಾಗುತ್ತದೆ. ಆದರೆ ಇವನು ಪಟ್ಟದ ಕತ್ತಿ ಮತ್ತು ಮುಂಡಾಸನ್ನು ಪಟ್ಟದ ಮಣೆಯ ಮೇಲೆ ಇಟ್ಟು ಬೀಡನ್ನು ಅಳುತ್ತಾನೆ. ಮಣೆಯ ಪಕ್ಕ ಒಂದು ಸರ್ಪ ಮಲಾಗಿರುತ್ತಿತ್ತಂತೆ! ರುಕ್ಮ ಬಲ್ಲಾಳ ತನಗೆ ದಕ್ಕಿದ ಭೂಮಿಯನ್ನು ಅನುಭವಿಸಲು ಸಾಧ್ಯವಾಗದೆ ಊರು ಬಿಟ್ಟ.
ಬ್ಯಾರಿ ಬೀಡಿನಲ್ಲಿ ವಾಸ ಮಾಡದೆ ಪಕ್ಕದಲ್ಲಿ ತನಗೊಂದು ಮನೆ ಕಟ್ಟಿಸಿಕೊಂಡ. ಆದರೆ ಬೀಡಿನಿಂದ ಆಗಬೇಕಾದ ಎಲ್ಲ ಧರ್ಮ ಕಾರ್ಯಗಳನ್ನು ಮಾಡಿಸಿಕೊಂಡು ಬರುತ್ತಿದ್ದ.
ಸುಮಾರು ಕ್ರಿ.ಶ 1590 ರ ಆಸುಪಾಸಿನಲ್ಲಿ ನಡೆದ ಈ ಘಟನೆಯ ಕಥನ ಇಂದು ಕೆಲವು ಆಚರಣೆಗಳ ಮೂಲಕ ಉಳಿದುಕೊಂಡಿದೆ. ಬಲ್ಲಾಳ ಬರೆಸಿದ ತಾಮ್ರ ಶಾಸನ ಇತ್ತೀಚಿನ ವರೆಗೆ ಇತ್ತಂತೆ. 1920 ರ ಅಜುಬಾಜಿನಲ್ಲಿ ಹಳೆಯ ಬೀಡಿಗೆ ಬೆಂಕಿ ಬಿದ್ದ ಮೇಲೆ ಪಟ್ಟದ ಕಿರೀಟ ಮತ್ತು ಈ ತಾಮ್ರ ಶಾಸನ ನಾಶವಾಗಿ ಹೋಯಿತಂತೆ.
ಮಮ್ಮಾಲಿ ಬ್ಯಾರಿಯು ಅಧಿಕಾರ ಹಿಡಿದ ಮೇಲೆ ಪಂಜದ ದೇವರಿಗೆ ತಪ್ಪದೆ ಸೇವೆ ನಡೆಯುತ್ತಿತ್ತು. ಬ್ಯಾರಿಯ ಕುಟುಂಬ ದೊಡ್ಡದಾಗಿ ಬೆಳೆದಿದೆ. ಸುಳ್ಯದ ಖ್ಯಾತ ನ್ಯಾಯವಾದಿ ಕುಂಞಪಳ್ಳಿಯವರು ಎಣ್ಮೂರು ಬೀಡಿನ ಅರ್ವತ್ತೊಕ್ಕೆಲು ಮನೆಯವರು. ಎಣ್ಮೂರು ಪಟ್ಟವನ್ನು ಉಳಿಸಿದ ಕುಂಞಪಿಲಿ ಮಮ್ಮಾಲಿ ಕುಟುಂಬವನ್ನು ಪಂಜ ಜಾತ್ರೆಯಲ್ಲಿ ಗೌರವಾದರ ನೀಡಿ ಆಹ್ವಾನಿಸಿ ಸ್ವಾಗತಿಸುತ್ತಾರೆ.
ಮಮ್ಮಾಲಿ ಹುಟ್ಟಿದ ಮನೆ ಕುರಿಯದ ಗುತ್ತಿನಲ್ಲಿ ನಮಾಜು ಮಾಡುವಾಗ ಅವನು ಉರಿಸಿದ ದೀಪವನ್ನು ಇಂದಿಗೂ ಉರಿಸುತ್ತಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಶಿವಮೊಗ್ಗಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ
ಸುದ್ದಿದಿನ, ಶಿವಮೊಗ್ಗ : ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿ ಮಾತನಾಡಲಿದ್ದಾರೆ.
ಯುವಜನರು, ಮಹಿಳೆಯರು, ರೈತರು ಸೇರಿ ಸುಮಾರು ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಶಿವಮೊಗ್ಗದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚುನಾವಣಾ ಬಾಂಡ್ ಕುರಿತ ದತ್ತಾಂಶ ಬಿಡುಗಡೆ
ಸುದ್ದಿದಿನ,ನವದೆಹಲಿ : ಚುನಾವಣಾ ಬಾಂಡ್ ಕುರಿತಂತೆ ಸುಪ್ರೀಂಕೋರ್ಟ್ನ ರಿಜಿಸ್ಟ್ರಿ ಇಂದ ಲಭ್ಯವಾದ ಅಂಕಿಕೃತ ದತ್ತಾಂಶ ಮಾದರಿಯನ್ನು ಚುನಾವಣಾ ಆಯೋಗ ಭಾನುವಾರ ತನ್ನ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದೆ. www.eci.gov.in/candidate-politicalparty ವೆಬ್ಸೈಟ್ನಲ್ಲಿ ಈ ದತ್ತಾಂಶ ಲಭ್ಯವಿರುತ್ತದೆ.
ಸುಪ್ರೀಂಕೋರ್ಟ್ ನಿರ್ದೇಶಿಸಿದಂತೆ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್ ಕುರಿತ ದತ್ತಾಂಶಗಳನ್ನು ಮೊಹರು ಹಾಕಿದ ಲಕೋಟೆಯಲ್ಲಿ ಸಲ್ಲಿಸಿದ್ದವು ಎಂದು ಚುನಾವಣಾ ಆಯೋಗದ ಹೇಳಿಕೆ ತಿಳಿಸಿದೆ. ರಾಜಕೀಯ ಪಕ್ಷಗಳಿಂದ ಸ್ವೀಕರಿಸಿದ ಮೊಹರು ಹಾಕಿದ ಲಕೋಟೆಗಳನ್ನು ತೆರೆಯದೇ ಸುಪ್ರೀಂಕೋರ್ಟ್ಗೆ ಸಲ್ಲಿಸಲಾಗಿತ್ತು.
ಇದೇ 15ರಂದು ಸುಪ್ರೀಂಕೋರ್ಟ್ ನೀಡಿದ ಆದೇಶದ ಮೇರೆಗೆ ಸುಪ್ರೀಂಕೋರ್ಟ್ನ ರಿಜಿಸ್ಟ್ರಿ, ಭೌತಿಕ ಪ್ರತಿ ಹಾಗೂ ಅದರ ಡಿಜಿಟಲ್ ದಾಖಲೆಯಿರುವ ಪೆನ್ಡ್ರೈವ್ ಒಳಗೊಂಡ ಮೊಹರು ಹಾಕಿದ ಲಕೋಟೆಯನ್ನು ಹಿಂತಿರುಗಿಸಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ರಶ್ಮಿ ಚಂದ್ರಗಿರಿ ಅವರಿಗೆ ಪಿಎಚ್.ಡಿ ಪದವಿ
ಸುದ್ದಿದಿನ,ಹಾವೇರಿ : ನಗರದ ರಶ್ಮಿ ಚಂದ್ರಗಿರಿ ಅವರು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮಂಡಿಸಿದ “ದಲಿತ ಬಂಡಾಯ ಕಾದಂಬರಿಗಳಲ್ಲಿ ಸಾಂಸ್ಕೃತಿಕ ನೆಲೆಗಳು” ಎಂಬ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ಪ್ರಧಾನ ಮಾಡಿದೆ.
ಇವರಿಗೆ ಡಾ.ಬಿಎಸ್.ಭಜಂತ್ರಿ , ಸಹಾಯಕ ಪ್ರಧ್ಯಾಪಕರು ಕರ್ನಾಟಕ ಕಲಾ ಮಹಾವಿದ್ಯಾಲಯ ಧಾರವಾಡ ಇವರು ಮಾರ್ಗದರ್ಶನ ಮಾಡಿದ್ದರು.
ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ರಶ್ಮಿ ಚಂದ್ರಗಿರಿಯವರ ಹಲವು ಲೇಖನಗಳು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಪ್ರಸ್ತುತ ಇವರು ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿತ್ತಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243