Connect with us

ದಿನದ ಸುದ್ದಿ

ಪ್ರಬುದ್ಧರೆನ್ನುವ ಪ್ರಭುಗಳಿಗೆ ಅತೀವ ನಮನ..!

Published

on

ಹರ್ಷಿತಾ ಕೆರೆಹಳ್ಳಿ
  • ಹರ್ಷಿತಾ ಕೆರೆಹಳ್ಳಿ

ಅದೆಷ್ಟೇ ತಪ್ಪಿಸಿದರೂ ಬೆಂಬಿಡದೆ ಬೆನ್ನೆತ್ತಿದೆ ಈ ವಿಚಾರ. ಸ್ವಚ್ಛಂದ ಆಕಾಶ, ನಿರ್ಮಲ ಗಾಳಿ, ಶುದ್ಧ ಜಲ, ಇರಲೊಂದು ಗೂಡು, ಬಂಧು ಮಿತ್ರರ ಒಡನಾಟ, ನಮ್ಮವರು , ತಮ್ಮವರು ಎಂಬ ವಿಶ್ವಾಸ ಎಲ್ಲವು ಸುಗಮವಾಗಿ ಸಾಗುತ್ತಲೇ ಇತ್ತು. ಅದೆಲ್ಲಿಂದ ಬಂದಿತೋ? ಮಹಾಮಾರಿ. ತಂಬೆಲರು ತುಳುಕುವ ಜಾಗದಲ್ಲೆಲ್ಲಾ ನೋವ ಹನಿ, ಜೀವ ಹಾನಿ. ಬೇಡೆಂದರು ಬಿಡುತ್ತಿಲ್ಲ ಸಾಕೆಂದರು ನಿಲ್ಲುತ್ತಿಲ್ಲ ಆಕ್ರಂದನ.

ಹಳ್ಳಿಯ ಜೀವನ ನೆಮ್ಮದಿಯ ಜೀವನ, ಅದೊಂದು ಸ್ವರ್ಗವೇ ಸರಿ ಎಂಬಂತಿದ್ದ ದಿನ ಈಗ ಮರುಭೂಮಿಯಂತಾಗಿದೆ. ಇಲ್ಲಿನ ಹಾಡು , ಹರಟೆ ,ಮೋಜು ಎಲ್ಲವು ಮುಸುಕು ಹಾಕಿಕೊಂಡು ತಮ್ಮ ತಮಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿಕೊಂಡಿರುವಂತೆ ಭಾಸವಾಗುತ್ತಿದೆ.

ಚಂದದೊಂದು ಸಂಸಾರ ಹೆಂಡತಿ, ಗಂಡ, ಇಬ್ಬರು ಮಕ್ಕಳು. ದಿಢೀರನೆ ಕರೋನ ಎಂಬ ಬರಸಿಡಿಲು ಆ ಸಂಸಾರಕ್ಕೆ ಬಡಿದಾಗ ಮನಸ್ಸೇ ಅಯೋಮಯವಾದಂತಾಯಿತು. ಮೊದಲು ಅಷ್ಟೇನು ಸ್ಥಿತಿ ಗಂಭೀರವಾಗಿರಲಿಲ್ಲ ಏಕೆಂದರೆ ಆ ವ್ಯಕ್ತಿಗೆ ಯಾವುದೇ ಬೇರೆ ರೀತಿಯ ಖಾಯಿಲೆಯಾಗಲಿ, ತೊಂದರೆಯಾಗಲಿ ಇರಲಿಲ್ಲ. ಮೂರು ದಿನ ಚಿಕಿತ್ಸೆ ಪಡೆದು ಮೊದಲಿನಂತೆ ಹಿಂತಿರುಗಿ ಬಂದರು.

ಧಡಕ್ಕನೆ ಅದೇ ರಾತ್ರಿ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲತೊಡಗಿದರು ತಕ್ಷಣವೇ ಅವರನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದರು. ಆ ವ್ಯಕ್ತಿಗೆ ಅದೇನು ನೋವೋ ಏನೋ? ತಿಳಿಯದು. ಆದರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗುತ್ತಿರಲಿಲ್ಲವೆಂದು ನನ್ನ ಭಾವನೆ. ಕೃತಕ ಉಸಿರಾಟದ ವ್ಯವಸ್ಥೆಯಿದ್ದರೂ ಅವರ ಸ್ಥಿತಿ ಗಂಭೀರವಾಗಿಯೇ ಇದೆ. ಅದೆಷ್ಟೋ ದಿನಗಳು ಆಸ್ಪತ್ರೆಯಲ್ಲಿ ಕಳೆಯಿತು. ದಿಢೀರನೆ ಆಸ್ಪತ್ರೆಯಿಂದ ಕರೆ ಬಂದಿತು.

ನಿಮ್ಮ ಮನೆಯವರಿಗೆ ಚಿಕಿತ್ಸೆ ಫಲಿಸುತ್ತಿಲ್ಲ , ಸ್ಥಿತಿ ಚಿಂತಾಜನಕವಾಗಿದೆ ತಕ್ಷಣವೇ ಪ್ಲಾಸ್ಮ ಬೇಕಾಗಿದೆ ಶೀಘ್ರವಾಗಿ ವ್ಯವಸ್ಥೆ ಮಾಡಿಕೊಳ್ಳಿ ಎಂದು ಹೇಳಿದರು.
ಪಾಪ! ಆ ವ್ಯಕ್ತಿಯ ಹೆಂಡತಿಗೆ ದಿಕ್ಕೇ ತೋಚದಂತಾಗಿ ಗೋಳಾಡಲಾರಂಭಿಸಿದರು. ನಿಜಕ್ಕೂ ಆ ಸ್ಥಿತಿ ಯಾರಿಗೂ ಬರಬಾರದೆಂದಷ್ಟೇ ಕೇಳಿಕೊಳ್ಳಲು ಸಾಧ್ಯವಾಗಿದ್ದು, ಏಕೆಂದರೆ ಎಷ್ಟೇ ಸಮಾಧಾನದ ಮಾತು ಅವರ ಜೀವ ಉಳಿಸಲು ಸಾಧ್ಯವಾಗದು. ಪರಿಸ್ಥಿತಿ ಬಿಗುಡಾಯಿಸುತ್ತಲೇ ಇದೆ ಆದರೆ ಪ್ಲಾಸ್ಮಾದ ವ್ಯವಸ್ಥೆ ಆಗುತ್ತಿಲ್ಲ .

ನಾನು ಎಲ್ಲರನ್ನು ಸಂಪರ್ಕಿಸಿದೆ ಆದರೆ ಎಲ್ಲರಿಂದಲೂ ಬಂದ ಉತ್ತರ ಒಂದೇ. ಇಲ್ಲ ಮೇಡಂ ನಮ್ಮ ಮನೆಯವರಿಗೆ ಬೇಕು, ನಮ್ಮ ಸ್ನೇಹಿತರಿಗೆ ಬೇಕು ಕೊಡಲಾಗುವುದಿಲ್ಲವೆಂದು. ಆ ತಾಯಿಯ ರೋಧನೆ ನೋಡಲಾಗುತ್ತಿಲ್ಲ . ಅವರ ಮಕ್ಕಳಿಗಂತೂ ಇದರ ಪರಿವೇ ಇಲ್ಲ . ಆಟವಾಡುವ ವಯಸ್ಸು ಅವಕ್ಕೆ. ಆಗ ನನಗನಿಸಿದ್ದು ಇಷ್ಟೇ . ಎಲ್ಲಿಯ ಜೀವನ? ಎಲ್ಲಿಯ ಹಣ? ಎಲ್ಲಿಯ ಸೌಂದರ್ಯ? ಎಲ್ಲವು ಶೂನ್ಯ. ಜೀವ ಉಳಿಸಲಾಗದ ನಿಧಿ ಇದ್ದರೇನು? ಜೀವಕ್ಕೆ ಬೆಲೆಯೆ ಇಲ್ಲ.

ಹೇಗೋ ದೇವರ ನಿಮಿತ್ತವೋ ಏನೋ ಅವರ ತೊಳಲಾಟಕ್ಕೆ ಮರುಗಿಯೋ ಏನೋ ಪ್ಲಾಸ್ಮ ದೊರಕಿತು. ಚಿಕಿತ್ಸೆ ಕೊಂಚ ಫಲಕಾರಿಯಾದಂತಾಗಿ ಅವರ ಮನೆಯವರೆಲ್ಲಾ ನಿಟ್ಟುಸಿರು ಬಿಟ್ಟರು. ಆದರೂ ಅವರಿನ್ನು ಸುಧಾರಿಸಿಲ್ಲ . ಆ ತಾಯಿಗೆ ಅಷ್ಟಾಗಿ ಪ್ರಪಂಚದ ಬಗ್ಗೆ ಅರಿವಿರಲಿಲ್ಲ ನಮಗೆ ಕರೆ ಮಾಡಿ ಏನದರೂ ಗೊತ್ತಾಯಿತ? ಡಿಸ್ಚಾರ್ಜ್ ಯಾವಾಗ? ಹೇಗಿದ್ದಾರೆ? ಎಂದು ಕೇಳಿದರೆ ಮನ ಕಲಕುವಂತಿರುತ್ತದೆ. ಆ ವ್ಯಕ್ತಿಯನ್ನು ಸಂಪರ್ಕಿಸಲು ಯಾವುದೇ ಮಾರ್ಗವಿಲ್ಲ . ನೋಡಿ ಎಂತಹ ಸ್ಥಿತಿ ತಮ್ಮವರಿಂದ ಸಾಂತ್ವಾನ ಕೇಳುವ ಭಾಗ್ಯ ಆ ವ್ಯಕ್ತಿಗಿಲ್ಲ. ಇಲ್ಲಿ ಹೆಂಡತಿಯ ತೊಳಲಾಟ ತಪ್ಪುತ್ತಿಲ್ಲ.

ಎಲ್ಲಿ ನೋಡಿದರೂ ಪಾಸಿಟಿವ್ ಕೇಸ್ಗಳು , ಸೀಲ್ಡೌನ್, ಕಂಟೈನ್ಮೆಂಟ್ ಜೋನ್ಗಳು . ಒಂದು ಕ್ಷಣ ಜೀವನವನ್ನೇ ತಬ್ಬಿಬ್ಬಾಗಿಸಿ ಬಿಡುತ್ತದೆ. ಇನ್ನೂ ಆ ಹೆಂಡತಿ ತನ್ನ ಗಂಡನ ದಾರಿಯನ್ನೇ ಎದುರು ನೋಡುತ್ತ ತನ್ನ ಆರೋಗ್ಯವನ್ನು ಹದಗೆಡಿಸಿಕೊಂಡಿದ್ದಾರೆ. ಇಂತಹ ಸ್ಥಿತಿ ನಿಮಗು ಎದುರಾಗಬಹುದು ನೀವು ನಿರ್ಲಕ್ಷ್ಯ ತೋರಿದರೆ. ಒಂದು ಕ್ಷಣ ಯೋಚಿಸಿ ಆ ಸ್ಥಿತಿ ನಿಮ್ಮದಾಗಿದ್ದರೇ? ನಿಮ್ಮ ಜೊತೆಗೆ ನಿಮ್ಮ ಮನೆಯವರ ಜೀವನವು ಹಾಳಾಗುತ್ತದೆ. ಒಮ್ಮೆಯಾದರೂ ನಿಮ್ಮವರ ಖುಷಿಗಾಗಿ ಒಳಿತು ಮಾರ್ಗದಲ್ಲಿ ನಡೆಯಿರಿ.

ಈ ಚಿಂತಾಜನಕ ಸ್ಥಿತಿಯಲ್ಲಿ ನಮ್ಮವರೆ ನಮ್ಮ ಬಳಿ ಬರಲು ಹಿಂಜರಿಯುತ್ತಾರೆ ಅಂತಹುದರಲ್ಲಿ ಯಾವುದೇ ರಕ್ತ ಸಂಬಂಧವಿಲ್ಲ , ಮಿತ್ರರಲ್ಲ. ತಮ್ಮ ಜೀವನವನ್ನು ಲೆಕ್ಕಿಸದೆ ತಮ್ಮವರಿಂದ ದೂರ ಸರಿದು ಹಗಲಿರುಳೆನ್ನದೆ ಅದೆಷ್ಟೋ ಸರ್ಕಾರಿ ನೌಕರರು ಹೊತ್ತೊತ್ತಿಗೆ ಊಟ, ತಿಂಡಿ, ನೀರು , ನಿದಿರೆ ಇಲ್ಲದೆ ಆಸ್ಪತ್ರೆ ಸಿಬ್ಬಂದಿಗಳು, ಆರಕ್ಷಕರು, ಪೌರ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಗ್ರಾಮ ಲೆಕ್ಕಿಗರು ಹೀಗೆ ಹಲವಾರು ಮಂದಿ ತಮ್ಮ ಜೀವದ ಹಂಗು ತೊರೆದು ನಮ್ಮಗಳ ಹಿತಕ್ಕಾಗಿ ಪರಿಶ್ರಮಿಸುತ್ತಿದ್ದಾರೆ.

ಅದೆಲ್ಲ ಒಂದೆಡೆಯಾದರೆ ದೇಶಕ್ಕಾಗಿ ನೆತ್ತರನ್ನು ಲೆಕ್ಕಿಸದೆ ಮಳೆ , ಬಿಸಿಲು, ಚಳಿ ಯೆನ್ನದೆ ದೇಶ ಕಾಯುವ ವೀರ ಯೋಧರಿಗೆಲ್ಲರಿಗು ಅನಂತ ಕೋಟಿ ನಮನ. ಅವರೆನಾದರೂ ನನ್ನಿಂದ ಆಗದು ದೇಶ ಕಾಯಲು ಎಂದು ಕೈ ಚೆಲ್ಲಿ ಕುಳಿತ್ತಿದ್ದರೆ ಈ ದಿನ ನಾವ್ಯಾರು ದಿನ ಉದಯಿಸೋ ಸೂರ್ಯನನ್ನ ನೋಡುವಂತಾಗುತ್ತಿರಲಿಲ್ಲ. ಅವರೆಲ್ಲರು ತಮ್ಮ ಮನೆಯವರಿಂದ ದೂರವಿದ್ದೂ, ಹೆಂಡತಿ , ಗಂಡ, ಮಕ್ಕಳು, ಅಪ್ಪ, ಅಮ್ಮ , ಬಂಧು ಬಳಗ, ಮಿತ್ರರೊಡನೆ ಕಾಲ ಕಳೆಯಲು ಸಮಯವಿಲ್ಲ.

ಆದರೆ ರಾಜ್ಯದ ಜನತೆಗೆಲ್ಲ ಜನತಾ ಕರ್ಫ್ಯೂ ಆದೇಶಿಸಿ ಎಲ್ಲರನ್ನೂ ಮನೆಯಲ್ಲಿಯೇ ಇದ್ದೂ ಕೊರೋನ ಸರಪಳಿಯನ್ನು ಮುರಿಯಲು ಸಹಕರಿಸೆಂದು ಬೇಡಿಕೊಳ್ಳುತ್ತಿದ್ದರು ಸಹ, ಈ ಜನತೆ ನನಗಲ್ಲ ಹೇಳುತ್ತಿರುವುದು ನನಗೂ ಅದಕ್ಕೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ. ನಿಜಕ್ಕೂ ಈ ಘಟನೆಯನ್ನೂ ನೋಡಿದ ಬಳಿಕ ಕರುನಾಡ ಜನರ ಮೇಲಿದ್ದ ಪೂಜ್ಯ ಭಾವನೆ ಬೇಸರ ತರಿಸಿದೆ.

ನೀರು ಕೇಳಿದರೆ ಅಮೃತವನ್ನೇ ಕೊಡುತ್ತೇವೆಂದು ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹಬ್ಪಿಸುವ ಬದಲು ದಯಮಾಡಿ ದೇಶಕ್ಕಾಗಲಿ, ನಾಡಿಗಾಗಲಿ ಏನನ್ನು ಕೊಡದಿದ್ದರು ಸರಿಯೇ . ನಿಮ್ಮ ನಿಮ್ಮ ಮನೆಯಲ್ಲಿರಿ, ನಿಮ್ಮವರೊಂದಿಗೆ ಕಾಲ ಕಳೆಯಿರಿ. ಯಾರೊಬ್ಬರು ಕೊರೋನ ಪಾಸಿಟಿವ್ ರಿಪೋರ್ಟ್ ಕೊಡದಂತೆ ಸಹಕರಿಸಿ. ಇದು ನಿಮ್ಮೆಲ್ಲರ ಕರ್ತವ್ಯವಾಗಿದೆ. ಪ್ರತಿಯೊಂದು ಜೀವಕ್ಕೂ ಅಮೂಲ್ಯವಾದ ಬೆಲೆಯಿದೆ. ದಯಮಾಡಿ ನಿಮ್ಮ ಜೀವದ ಜೊತೆ ನಿಮ್ಮವರ ಜೀವವನ್ನು ಕಾಪಾಡಿ.

ಈ ಮುಂದಿನ ೧೫ ದಿನಗಳಲ್ಲಿ ಕಟ್ಟು ನಿಟ್ಟಾಗಿ ನಿಯಮ ಪಾಲನೆ ಮಾಡಿದ್ದೇ ಆಗಿದ್ದಲ್ಲಿ ಕೋರೋನ ಸರಪಳಿಯನ್ನೂ ಖಂಡಿತವಾಗಿಯೂ ಮುರಿಯುವಲ್ಲಿ ಯಶಸ್ವಿಯಾಗುತ್ತೇವೆ .
ನನ್ನ ಮಾತಿಗಾದರೂ ಬೇಡ ಕನಿಷ್ಠ ದೇಶಕಾಯುವ ಯೋಧರಿಗಾಗಿ, ಕೊರೋನ ವಾರಿಯರ್ಸ್ ಗಳ ಪರಿಶ್ರಮಕ್ಕಾದರು ಬೆಲೆ ಕೊಟ್ಟು ಪ್ರಜ್ಞಾಪೂರಕವಾಗಿ, ವಿವೇಚನೆಯಿಂದ ನಡೆದುಕೊಳ್ಳಿ. ಭಾರತೀಯರಾದ ನಾವು ಪ್ರಬುದ್ಥರಾಗಿ ಆಲೋಚನೆಯಿಂದ ನಡೆಯಬೇಕಾಗಿದೆ.

ಅಷ್ಟೇನೂ ಸುಸಜ್ಜಿತ ವ್ಯವಸ್ಥೆಯಿಲ್ಲ , ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ , ವೆಂಟಿಲೇಟರ್ಗಳ ಕೊರತೆ, ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ , ನೀಡಿದ ಚಿಕಿತ್ಸೆ ಫಲಿಸುತ್ತಿಲ್ಲ. ಬೆಡ್ಗಳು ಸಿಗದೆ ಆಸ್ಪತ್ರೆಯ ಮುಂಬಾಗಿಲಲ್ಲೇ ಚಿಕಿತ್ಸೆಗಾಗಿ ಹಾತೊರೆತು ನಿಂತ ಅದೆಷ್ಟೋ ಜೀವಗಳು. ಯಾರ್ಯಾರ ಕೈ ಕಾಲಿಡಿದು ಚಿಕಿತ್ಸೆಗಾಗಿ ಹೋರಾಡುತ್ತಿರು ಜೀವಗಳು. ಅದೆಂಥಾ ಕ್ರೂರ ವಿಧಿಯಿರಬೇಕು. ಸಾಯುವಾಗ ನಮ್ಮವರ ಅಪ್ಪುಗೆ ಇಲ್ಲ , ಒಂದು ತೊಟ್ಟು ನೀರು ಕೊಡುವವರಿಲ್ಲ, ವಿಧಿ ವಿಧಾನಗಳ ಸಮಾಧಿಯಿಲ್ಲ, ಬಂಧು ಮಿತ್ರರ ಕಂಬನಿಯಿಲ್ಲ, ನಮ್ಮವರಿಂದ ಮಣ್ಣು ಮಾಡಿಸಿಕೊಳ್ಳುವಂತ ಪುಣ್ಯವೂ ಇಲ್ಲ.

ಯಾರ ಕೈಯಿಂದಲೋ ತೂದೆಸೆದು ಹಿಂತಿರುಗಿಯು ನೋಡದೆ ಬರುವವರಿಂದ ಅಂತಿಮ ಕಾರ್ಯವೂ ಇಲ್ಲದೆ ಪರಲೋಕ ಯಾನ ಮಾಡುವ ಜೀವ ಅದೇನು ಪಾಪ ಮಾಡಿತ್ತು? ಮೂಟೆಯ ಹಾಗೆ ಬಿಸಾಡಿ ಬೆಂಕಿ ಹೊತ್ತಿಸಿ ಕೈ ತೊಳೆದುಕೊಳುವರು. ಈ ಜನ ಇದಕ್ಕಾದರು ಎಚ್ಚೆತ್ತುಕೊಳ್ಳಬೇಕು.

ಮಾಧ್ಯಮಗಳಲ್ಲಿ ಇಂತಹ ನೈಜ್ಯ ಘಟನೆಗಳ ಅನಾವರಣ ಮಾಡುವುದಿಲ್ಲ. ಕೆಲಸಕ್ಕೆ ಬಾರದ ಮಾಹಿತಿಯನ್ನು ಪದೇ ಪದೇ ಹೇಳಿ ಹುಚ್ಚೆಬ್ಬಿಸುತ್ತಾರಷ್ಟೇ. ತಕ್ಷಣದ ವದಂತಿಯೆಂದರೆ ಆಮ್ಲಜನಕದ ಕೊರತೆಯಿಂದಾಗಿ 24 ಮಂದಿಯ ದುರ್ಮರಣ ಎಂದು ಒಂದೊಂದು ಚಾನಲ್ ನವರು ಒಂದೊಂದು ರೀತಿ ಚಿತ್ರಿಸುತ್ತಿದಾದರೆಯೆ ವಿನಃ ಪರಿಹಾರ ಮಾರ್ಗೋಪಾಯ ತೋರಿಸುತ್ತಿಲ್ಲ.

ಅವರಿಗೇನು ಬೇಕಾಗಿದ್ದು ವದಂತಿಯಷ್ಟೇ ಸಿಕ್ಕಿದ್ದನ್ನು 4 ದಿನವಾದರೂ ಬಿಡದೆ ಅದದೇ ವಿಚಾರವನ್ನು ಬೇರೆಯೇ ರೀತಿ ಚಿತ್ರಿಸುವುದನ್ನು ಬಿಟ್ಟು ಯಾವ ಆಸ್ಪತ್ರೆಯಲ್ಲಿ ಏನು ಕೊರತೆಯಿದೆ ? ಎಷ್ಟು ಬೆಡ್ ಖಾಲಿಯಿದೆ? ಎಲ್ಲೆಲ್ಲಿ ಪ್ಲಾಸ್ಮ ದೊರಕುತ್ತದೆ? ಈತರಹದ ಮಾಹಿತಿ ಬಿಟ್ಟು ಜನರ ಮಧ್ಯೆ ಬೆಂಕಿಯಿಲ್ಲದಿದ್ದರೂ ಇವರೇ ಕಿಡಿ ಹೊತ್ತಿಸಿ ಪರಿಸ್ಥಿತಿ ಬಿಗಡಾಯಿಸುವಂತೆ ಮಾಡುತ್ತಾರಷ್ಟೇ. ನಿಮ್ಮ ನೆರವಿಗೆ ಯಾರು ಬರುವುದಿಲ್ಲ . ನಿಮ್ಮ ಹಿತ ನಿಮ್ಮ ಕೈಯಲ್ಲೇಯಿದೆ.

ನಿಮ್ಮವರ ಜೀವ ಹೋದ ಮೇಲೆ ಎಲ್ಲರನ್ನೂ ದೂರುವ ಬದಲು ಅರಿತು ನಡೆಯಿರಿ. ಅದೆಲ್ಲವೂ ಅಧಿಕಾರಿಗಳ ನಿರ್ಲಕ್ಷವೋ? ಆಸ್ಪತ್ರೆಗಳವರ ನಿರ್ಲಕ್ಷವೋ? ಅಥವಾ ರೋಗಿಗಳ ನಿರ್ಲಕ್ಷವೋ? ತಿಳಿಯದು. ನನ್ನ ಪ್ರಕಾರ ಇದಕ್ಕೆ ಯಾವ ರಾಜ್ಯ ಸರ್ಕಾರವಾಗಲಿ , ಮಂತ್ರಿಗಳಾಗಲಿ , ಅಧಿಕಾರಿಗಳಾಗಲಿ ಹೊಣೆಯಾಗುವುದಿಲ್ಲ. ಏಕೆಂದರೆ
ಅವರು ನಮ್ಮ ಒಳಿತಿಗಾಗೇ ಲಾಕ್ಡೌನ್ ಮಂತ್ರ ಪಠಿಸುತ್ತಿರುವುದು.

ಅವರ ಆದೇಶವನ್ನು ಕಟ್ಟುನಿಟ್ಟಿನಿಂದ ಪಾಲಿಸಿದ್ದರೆ ಇಂದು ಇಷ್ಟೆಲ್ಲಾ ಸಾವು ನೋವು ಜೀವ ಹಾನಿಯಾಗುತ್ತಿರಲಿಲ್ಲ. ಪ್ರಜ್ಞಾವಂತರಾಗಿ ನಡೆದಿದ್ದರೆ ಅದೆಂದೋ ಈ ಮಹಾಮಾರಿಗೆ ವಿದಾಯ ಹೇಳಬಹುದಿತ್ತು, ದುರದೃಷ್ಠ ವಶಾ ಕೋರೊನವೆ ನಮ್ಮೆಲ್ಲರಿಗು ವಿದಾಯ ಹೇಳುತ್ತಿದೆ. ಇದೆಲ್ಲದ್ದಕ್ಕೂ ನೇರವಾಗಿ ನಾವೇ ಹೊಣೆಯಾಗುತ್ತೇವೆ. ಸತ್ತ ನಂತರ ಅವರಿವರಿಗೆ ಶಪಿಸಿ ನೋವನುಭವಿಸುವ ಬದಲು ರೋಗಕ್ಕೆ ತುತ್ತಾದದಂತೆ ಎಚ್ಚರದಿಂದಿರೋಣ.

ದಯಮಾಡಿ ಈಗಲಾದರೂ ಅರಿತು ನಡೆಯಿರಿ. ಸತ್ತ ಮೇಲೆ ಯಾವುದು ಮರಳಿ ಬರುವುದಿಲ್ಲ. ಮನುಕುಲ ಉಳಿಸಿ , ಗಿಡ ಬೆಳೆಸಿ . ಸುಂದರ ಪರಿಸರ ನಿರ್ಮಾಣ ಮಾಡೋಣ . ಇಲ್ಲವಾದಲ್ಲಿ ನಿಮ್ಮವರ ಜೀವ ಕಳೆದುಕೊಳ್ಳುವ ಸ್ಥಿತಿ ಬರುವ ಸಮಯ ದೂರವೇನು ಇಲ್ಲ. ಎಲ್ಲರಿಗೂ ಸಮಸ್ಯೆ ಇದ್ದೇ ಇದೆ ಹಾಗಂತ ಅದನ್ನೇ ದೊಡ್ಡದಾಗಿ ಮಾಡಿ ವರ್ತಿಸುವುದಲ್ಲ. ಮೊದಲು ಜವಬ್ದಾರಿಯುತ ನಾಗರೀಕರಾಗಿ ನಡೆಯಿರಿ. ಕೊರೊನಾದ ಬಗ್ಗೆ ಭಯಬೇಡ ಎಚ್ಚರಿಕೆಯಿರಲಿ.
ಮಾಸ್ಕ್ ಧರಿಸಿ , ತೀರ ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರ ಬನ್ನಿ , ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಅಗತ್ಯ ಸುರಕ್ಷಾ ಕ್ರಮ ಪಾಲಿಸಿ.

“ಸ್ವರ್ಗ ನರಕ ಎಲ್ಲ ಮೇಲಿಲ್ಲ ಕೇಳು ಎಲ್ಲವೂ ಇಲ್ಲಿಯೆ ನಾವು ಮಾಡಿದ್ದನ್ನು ನಾವೆ ಅನುಭವಿಸಿ ತೀರಬೇಕು. ನಾನು ಎಂಬ ಅಹಃ ಮಣ್ಣು ಕೇಳು.”

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.

ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.

ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ

Published

on

ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ 82.01 ರಷ್ಟು ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಏಪ್ರಿಲ್ 10 ರಂದು ಫಲಿತಾಂಶ ಪ್ರಕಟವಾಗಿದ್ದು ಹೆಚ್ಚಿನ ವಿವರಗಳು ಬರಬೇಕಾಗಿದೆ. ಈ ವರ್ಷ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು 19644 ರೆಗ್ಯುಲರ್, 422 ಖಾಸಗಿ ಸೇರಿ 20066 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಇದರಲ್ಲಿ 15904 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 80.96 ರಷ್ಟು ಫಲಿತಾಂಶ ಪಡೆದಿದ್ದಾರೆ.

ಕಳೆದ ವರ್ಷ ಶೇ 75.72 ರಷ್ಟು ಫಲಿತಾಂಶ ಬಂದಿತ್ತು, ಈ ವರ್ಷ ಶೇ 5.24 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಜಿಲ್ಲೆಗೆ ಟಾಪ್ ಬಂದವರಲ್ಲಿ ಕಲಾ ವಿಭಾಗದಲ್ಲಿ ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಮಹಿಳಾ ಪದವಿ ಪೂರ್ವ ಕಾಲೇಜಿನ ಹೀನಬಾನು ಪಿ.ಕೆ. 591 ಅಂಕ ಪಡೆದು ಶೇ 98.5, ವಾಣಿಜ್ಯ; ದಾವಣಗೆರೆ ತಾ; ಗೋಪನಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೇಷ್ಮಾ ಬಾನು 589 ಅಂಕ ಪಡೆದು ಶೇ 98.16 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಲೋಕಿಕೆರೆ ರಸ್ತೆಯಲ್ಲಿನ ಸರ್‍ಎಂವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೊಹಮ್ಮದ್ ಸುಹೇಲ್, ಅಮೃತ ದೊಡ್ಡ ಬಸಪ್ಪನವರ್, ಅನನ್ಯ ಹೆಚ್.ಎಸ್, ಆಕಾಶ್ ಸಿ.ಪಾಟೀಲ್ ಇವರು 593 ಅಂಕ ಶೇ 98.83 ರಷ್ಟು ಸಮನಾದ ಫಲಿತಾಂಶ ಹಂಚಿಕೊಂಡಿದ್ದಾರೆ ಎಂದರು.

ವಿಭಾಗವಾರು ಫಲಿತಾಂಶ; ಕಲಾ ವಿಭಾಗದಲ್ಲಿ ಶೇ 57.83 ರಷ್ಟು ಫಲಿತಾಂಶ ಬಂದಿದ್ದು ಇದರಲ್ಲಿ ಗಂಡು ಶೇ 45, ಹೆಣ್ಣು ಶೇ 66.46 ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 76.22 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 65.5, ಹೆಣ್ಣು ಶೇ 80.8, ವಿಜ್ಞಾನ ವಿಭಾಗದಲ್ಲಿ ಶೇ 91.13 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 91.39 ಹಾಗೂ ಹೆಣ್ಣು ಶೇ 88.69 ರಷ್ಟು ಫಲಿತಾಂಶ ಬಂದಿದೆ.

ನಗರಕ್ಕಿಂತ ಗ್ರಾಮೀಣರ ಮೇಲುಗೈ; ಫಲಿತಾಂಶದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಶೇ 1.1 ರಷ್ಟು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 73.65 ಗಂಡು, ಶೇ 84.6 ಹೆಣ್ಣು ಉತ್ತೀರ್ಣರಾದರೆ ನಗರ ಪ್ರದೇಶದ ಒಟ್ಟು ಫಲಿತಾಂಶ ಶೇ 80.75 ರಲ್ಲಿ ಗಂಡು ಶೇ 74.41, ಹೆಣ್ಣು ಶೇ 81.37 ರಷ್ಟು ಫಲಿತಾಂಶ ಪಡೆದಿದ್ದಾರೆ.

ಶೇ 100 ರಷ್ಟು ಫಲಿತಾಂಶ ಪಡೆದ ಶಾಲೆಗಳು; ದಾವಣಗೆರೆ ಅಂಜುಂ ಪದವಿ ಪೂರ್ವ ಕಾಲೇಜು, ಲೇಬರ್ ಕಾಲೋನಿ, ಜೈನ್ ಟ್ರಿನಿಟಿ ಪದವಿ ಪೂರ್ವ ಕಾಲೇಜು, ಅನ್‍ಮೋಲ್ ಪದವಿ ಪೂರ್ವ ಕಾಲೇಜು, ಶ್ರೀ ಗೀತಂ ಪದವಿ ಪೂರ್ವ ಕಾಲೇಜು, ದಾವಣಗೆರೆ ಇವು ಶೇ 100 ರಷ್ಟು ಫಲಿತಾಂಶ ಪಡೆದ ಕಾಲೇಜುಗಳಾಗಿವೆ.

ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂರ್, ಶಾಲಾ ಶಿಕ್ಷಣ, ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್‍ಗೆ ರೂ.10 ಪಡೆದ ಶಾಪಿಂಗ್ ಮಾಲ್‍ಗೆ ದಂಡ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499 ಪಾವತಿಸಿ, ಡೆನಿವಾ ಪ್ಯಾಂಟ್ ಖರೀದಿಸಿದರು. ಈ ವೇಳೆಯಲ್ಲಿ ಇಲ್ಲಿಯೇ ಲೈಫ್ ಸ್ಟೈಲ್ ಇಂಟರ್‍ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್ ಮಾರಾಟದ ವೇಳೆ ಹೆಚ್ಚುವರಿಯಾಗಿ ರೂ.10/- ಪೇಪರ್ ಬ್ಯಾಗ್‍ಗೆ ಪಡೆಯಲಾಯಿತು.

ಗ್ರಾಹಕರಾದ ಆರ್. ಬಸವರಾಜ್ ಇವರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ದಾಖಲಿಸಿ ವಾಣಿಜ್ಯ ಸಂಸ್ಥೆ ವಿರುದ್ದ ರೂ.50,000 ಮಾನಸಿಕ ಕಿರುಕುಳ ಹಾಗೂ ದೂರು ದಾಖಲಿಸಲು ಖರ್ಚು ಮಾಡಿದ ಮೊ ರೂ.10,000 ಗಳನ್ನು ಪಾವತಿಸುವಂತೆ ದೂರನ್ನು ದಾಖಲಿಸಿದರು.

ವಾಣಿಜ್ಯ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದು ಈ ಸಂಸ್ಥೆ ವಕೀಲರ ಮುಖಾಂತರ ಹಾಜರಾಗಿ ಬ್ಯಾಗ್‍ಗೆ ಹೆಚ್ಚುವರಿಯಾಗಿ ಪಡೆದ ಹಣಕ್ಕೆ ಸಮರ್ಥಿಸಿಕೊಂಡಿತ್ತು. ಆದರೆ ಗ್ರಾಹಕರ ಆಯೋಗ ಈ ಮೊದಲು ರಾಷ್ಟ್ರೀಯ ಗ್ರಾಹಕರ ಆಯೋಗ ಬಿಗ್ ಬಜಾರ್ ವಿರುದ್ಧ ಸಾಯಲ್ ದಾವ ಪ್ರಕರಣದ ನ್ಯಾಯ ನಿರ್ಣಯದ ತೀರ್ಪಿನ ಅನುಗುಣವಾಗಿ ವಾಣಿಜ್ಯ ಸಂಸ್ಥೆಗಳು ಕ್ಯಾರಿ ಬ್ಯಾಗ್‍ಗಳಿಗೆ ಹೆಚ್ಚಿನ ಹಣವನ್ನು ಪಡೆಯುವಂತಿಲ್ಲ ಎಂಬ ತೀರ್ಪನ್ನು ಉಲ್ಲೇಖಿಸಿ ಹೆಚ್ಚುವರಿಯಾಗಿ ರೂ.10 ಪಡೆದ ಸಂಸ್ಥೆಯ ಕ್ರಮವು ಗ್ರಾಹಕರ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅನುಚಿತ ವ್ಯಾಪಾರ ಪದ್ದತಿಯೆಂದು ಪರಿಗಣಿಸಿ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಶ್ರೀಮತಿ ಬಿ.ಯು. ಗೀತಾ ಇವರು ವಾಣಿಜ್ಯ ಸಂಸ್ಥೆಗೆ ರೂ.7000 ದಂಡವಿದಿಸಿ ಆದೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending