ಅಂತರಂಗ
‘ಭಾಶಾಹೀನರ ಸಂಗ ಅಭಿಮಾನ ಭಂಗ’ | ದ್ವೇಶದ ಭಾಶೆ ಮತ್ತು ಪ್ರತಿದ್ವೇಶದ ಭಾಶೆಯ ಅಪಾಯಗಳು
- ರಂಗನಾಥ ಕಂಟನಕುಂಟೆ
ಇದು ಬಹಳ ವಿಚಿತ್ರ ಸಂಗತಿಯಾದರೂ ವಾಸ್ತವದ ಸಂಗತಿ. ಅದೇನೆಂದರೆ ಆಧುನಿಕ ಭಾರತದಲ್ಲಿ ‘ಧರ್ಮ’ ಶಕ್ತಿರಾಜಕಾರಣದ ಕೇಂದ್ರಕ್ಕೆ ಬಂದ ನಂತರ ಸಾರ್ವಜನಿಕ ಭಾಶೆಯ ಸ್ವರೂಪವೇ ಬದಲಾಗಿ ಹೋಗಿದೆ. ಸದ್ಯದಲ್ಲಿ ಸಾರ್ವಜನಿಕ ಭಾಶೆ ಮುಕ್ತಮಾತುಕತೆಯ ಸಂವಾದದ ಚಹರೆಯನ್ನು ಕಳೆದುಕೊಂಡು ಆಕ್ರಮಣ ಮತ್ತು ಪ್ರತಿ ಆಕ್ರಮಣದ ಸ್ವರೂಪ ಪಡೆದುಕೊಂಡಿದೆ.
ಭಾಶೆಯನ್ನು ಬಳಸುವಾಗ ಸಹನೆ ಮತ್ತು ಲಜ್ಜೆಗಳ ಎಲ್ಲೆಯನ್ನು ಮೀರಲಾಗುತ್ತಿದೆ. ಅಲ್ಲದೆ ‘ಧರ್ಮ’ಗಳು ಬೋಧಿಸುವ ದಯೆ, ಕರುಣೆ, ಮಮತೆ, ಸಾಮರಸ್ಯ, ಸೌಹಾರ್ದತೆ, ಸಹಿಶ್ಣತೆಯ ಗುಣಗಳಿಗೆ ವಿರುದ್ಧವಾದ ‘ದ್ವೇಶದಭಾಶೆ’ ಮುಂಚೂಣಿಗೆ ಬಂದಿದೆ. ಇಲ್ಲಿನ ದುರಂತವೆಂದರೆ, ದ್ವೇಶದ ಭಾಶೆಯನ್ನು ಬಳಸುವ ಜನರನ್ನು ವಿರೋಧಿಸುವ ಭರದಲ್ಲಿ ಅವರ ವಿರೋಧಿಗಳು ಕೂಡ ‘ಆಕ್ರೋಶ ಮತ್ತು ಅಸಹನೆ’ಯ ಭಾಶೆಯನ್ನೇ ಬಳಸುತ್ತಿದ್ದಾರೆ. ದ್ವೇಶದ ಭಾಶೆಗೆ ಪ್ರತಿದ್ವೇಶದ ಭಾಶೆ ಬಳಕೆಯಾಗುತ್ತಿದೆ.
ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ದೇವರು ಮತ್ತು ಧರ್ಮಗಳು ಚರ್ಚೆಯ ಕೇಂದ್ರಕ್ಕೆ ಬಂದಾಗ ಅವುಗಳ ವಕ್ತಾರರ ಭಾಶೆ ಯಾವಾಗಲೂ ಒಂದು ಬಗೆಯ ಆಕ್ರಮಣಕಾರಿ ಗುಣವನ್ನೇ ಪಡೆದುಕೊಳ್ಳುವಂತೆ ಕಾಣುತ್ತದೆ. ಅದರಲ್ಲಿಯೂ ಏಕದೇವೋಪಾಸನೆಯನ್ನು ಪ್ರತಿಪಾದಿಸುವ ಎಲ್ಲ ಧಾರ್ಮಿಕ ಪಂಥಗಳು ಇಂತಹ ಆಕ್ರಮಣಕಾರಿ ಭಾಶೆಯನ್ನೇ ಬಳಸುವುದನ್ನು ಕಾಣಬಹುದು.
ಪುರಂದರದಾಸರು ತಮ್ಮದೊಂದು ಕೀರ್ತನೆಯಲ್ಲಿ, ‘ಮೂರ್ಖರಾದರು ಇವರು ಲೋಕದೊಳಗೆ ಏಕದೈವವ ಬಿಟ್ಟು ಕಾಕು ದೈವವ ಭಜಿಸಿ’ ಎನುತ್ತಾರೆ. ಇಲ್ಲಿ ತಾವು ನಂಬಿದ ದೈವ, ಧರ್ಮದ ವಿಚಾರಗಳ ಹೊರತಾಗಿರುವ ಜನರ ಬಗೆಗೆ ತಮ್ಮ ಭಿನ್ನಮತ ವ್ಯಕ್ತಪಡಿಸುವಾಗ ಅವರ ಭಾಶೆ ಕೊಂಚ ವ್ಯಂಗ್ಯ ಸೇರಿಕೊಂಡು ಒರಟಾಗುತ್ತದೆ. ಬಸವಣ್ಣ ಕೂಡ ಕೆಲವೊಮ್ಮೆ ಆಕ್ರಮಣಕಾರಿ ಭಾಶೆಯನ್ನೇ ಬಳಸುತ್ತಾನೆ.
ಭಕ್ತರ ಕಂಡರೆ ಬೋಳಪ್ಪಿರಯ್ಯ;
ಸವಣರ ಕಂಡರೆ ಬತ್ತಲೆಯಪ್ಪಿರಯ್ಯ,
ಹಾರುವರ ಕಂಡರೆ ಹರಿನಾಮವೆಂಬಿರಯ್ಯ
ಅವರವರ ಕಂಡರೆ ಅವರವರಂತೆ,
ಸೂಳೆಗೆ ಹುಟ್ಟಿದವರ ತೋರದಿರಯ್ಯ,
ಕೂಡಲಸಂಗಮಯ್ಯನ ಪೂಜಿಸಿ ಅನ್ಯದೈವಂಗಳಿಗೆರಗಿ,
ಭಕ್ತರೆನಿಸಿಕೊಂಬ ಅಜ್ಞಾನಿಗಳ ನಾನೇನೆಂಬೆನಯ್ಯ –ಎಲ್ ಬಸವರಾಜು, ಪು.54
ಎನ್ನುತ್ತಾನೆ.
ಈ ವಚನದಲ್ಲಿ ‘ಸೂಳೆಗೆ ಹುಟ್ಟಿದವರ ತೋರದಿರಯ್ಯ’ ಎನ್ನುವಲ್ಲಿ ಒಂದು ಬಗೆಯ ಸಿಟ್ಟು ಆಕ್ರೋಶ ‘ಅಸಹನೆ’ ಎದ್ದು ಕಾಣಿಸುತ್ತದೆ. ಅವಕಾಶವಾದಿಗಳ ಹಾಗೆ ವರ್ತಿಸುವ ಭಕ್ತರ ಕಂಡು ವ್ಯಕ್ತಮಾಡುತ್ತಿರುವ ಸಿಟ್ಟು ಸಮಣರ, ಹಾರುವರ ಬಗೆಗಿನ ಸಿಟ್ಟು ಕೂಡ ಆಗಿದೆ. ಕೂಡಲಸಂಗಮನಲ್ಲದ ಇತರೆ ದೈವಗಳ ಬಗೆಗೆ ಆಸಕ್ತಿ ತೋರಿಸುವ ಜನರ ಬಗೆಗೆ ಇರುವ ಸಿಟ್ಟಿನ ಮೂಲದಲ್ಲಿ ದೇವರು ಮತ್ತು ಧರ್ಮ ಪರವಾದ ‘ಕಟ್ಟಾವಾದಿತನ’ ಎದ್ದು ಕಾಣಿಸುತ್ತದೆ.
ಅಂದರೆ ಧಾರ್ಮಿಕವಾದ ಭಾವನೆಯಲ್ಲಿ ಕಟ್ಟಾವಾದಿತನ ದೃಢವಾಗುವ ಹೊತ್ತಿನಲ್ಲಿ ಭಾಶೆ ವ್ಯಗ್ರ ಸ್ವರೂಪವನ್ನು ಪಡೆಯುವುದು ಅಚ್ಚರಿಯ ಸಂಗತಿ. ಜನಪದ ದೈವಗಳನ್ನು ಟೀಕಿಸುವ ಉತ್ಸಾಹದಲ್ಲಿ ಮಡಕೆ ದೈವ ಮೊರ ದೈವ ಕಲ್ಲು ದೈವಗಳೆಂದು ಬಸವಣ್ಣ ಜರಿಯುತ್ತಾನೆ. ಹಾಗೆಯೇ ವೈದಿಕ ಪರಂಪರೆಯನ್ನು ಟೀಕಿಸುವ ಉಮೇದಿನಲ್ಲಿ ಅಲ್ಲಮ ಕೂಡ ‘ಪುರಾಣವೆಂಬುದು ಪುಂಡರಗೋಶಿ’್ಟ ಎಂದುಬಿಡುತ್ತಾನೆ! ಅಕ್ಕಮಹಾದೇವಿ ತನ್ನದೊಂದು ವಚನದಲ್ಲಿ ‘ಗೋವಿಂದನ ನಯನ ತನ್ನ ಉಂಗುಶ್ಟದ ಮೇಲಿಪ್ಪುದು’ ಎನ್ನುತ್ತಾಳೆ. ಕನಕದಾಸ ವಿಶ್ಣು ಮತ್ತು ಶಿವರ ನಡುವೆ ಸಾಮರಸ್ಯ ಮೂಡಿಸಲು ಪ್ರಯತ್ನಿಸುತ್ತಾನೆ.
ಇದನ್ನೂ ಓದಿ |ಮಹಾಡ್: ದಲಿತರ ಚಾರಿತ್ರಿಕ ದಂಗೆಯ ಕಥನ
ಆದರೂ ಅವನಲ್ಲಿಯೂ ನಾರಾಯಣನಿಶ್ಟೆ ಉಗ್ರವಾಗಿ ವ್ಯಕ್ತವಾಗುವಾಗ ಅವನ ಭಾಶೆಯು ಆಕ್ರಮಣಕಾರಿಯಾಗುತ್ತದೆ. “ಮಿಕ್ಕ ಮಾರಿ ಮಸಣಿ ಚೌಡಿ ಮೈಲಾರಿ ಮೊದಲಾದವರ ಠಕ್ಕು ದೈವದ ಗೊಡವೆ ಬೇಡ ನರಕ ತಪ್ಪದು” ಎನ್ನುತ್ತಾನೆ. ಇಲ್ಲಿ ಕನಕ ಜನಪದ ದೈವಗಳನ್ನು ನಿರಾಕರಿಸುವಾಗ ವ್ಯಕ್ತಪಡಿಸಿರುವ ಮಾತಿನಲ್ಲಿ ಅಸಹನೆ, ಆಕ್ರೋಶವಿದೆ ಎನ್ನಿಸುತ್ತದೆ. ಠಕ್ಕು ದೇವರು ಎಂದು ಜರಿಯುವ, ವ್ಯಂಗ್ಯವಾಡುವ ಬಗೆಯಿದೆ. ‘ಜಡ ದೈವಗಳ ಪೂಜೆ ಬೇಡಿರೋ’ ಎಂದು ಕೊನೆಗೆ ಕರೆ ಕೊಡುತ್ತಾನೆ.
ಜನಪದ ದೈವಗಳು ಠಕ್ಕು ಮತ್ತು ಜಡದೇವರಾದರೆ ನಾರಾಯಣನೂ ಅಂತಹ ಠಕ್ಕಿನ ಮತ್ತು ಜಡದೇವರೇ ಅಲ್ಲವೇ? ಅಂದರೆ ತಮ್ಮ ದೇವರು ಧರ್ಮಗಳನ್ನು ಸಮರ್ಥಿಸಿಕೊಳ್ಳುವ ವಿಚಾರಕ್ಕೆ ಬಂದಾಗ ವಿರಾಗಿಗಳ ಸಂತರ ಭಾಶೆಯೂ ಸ್ವಲ್ಪ ಲಯ ತಪ್ಪಿ ಒರಟಾಗುತ್ತದೆ. ಅವರೂ ಅಸಹನೆಯ ಆಕ್ರೋಶದ ಭಾಶೆಯನ್ನೇ ಬಳಸಿರುವುದನ್ನು ಗಮನಿಸಬಹುದು. ಹಾಗೆಯೇ ಕೆಲವು ಜೈನ, ಶೈವ ಧರ್ಮೀಯ ಕವಿಗಳಲ್ಲಿಯೂ ಇಂತಹದೇ ಭಾಶೆ ಢಾಳಾಗಿ ಕಾಣಿಸುತ್ತದೆ. ನಮ್ಮ ಪರಂಪರೆಯಲ್ಲಿ ಧಾರ್ಮಿಕ ನಿಶ್ಟೆಯನ್ನು ಆತ್ಯಂತಿಕವಾಗಿ ವ್ಯಕ್ತಪಡಿಸುವ ಉತ್ಸಾಹದಲ್ಲಿ ‘ಅನ್ಯ’ವಾದುದು ಇಲ್ಲವೇ ತನ್ನ ‘ಎದುರಾಳಿ’ಗಳಿಗೆ ಸಂಬಂಧಿಸಿದ ವಿಚಾರಗಳನ್ನು ಅಲ್ಲಗಳೆಯುವ ಹೊತ್ತಿನಲ್ಲಿ ಆಕ್ರಮಣಕಾರಿಯಾದ ಭಾಶೆ ಬಳಸಿರುವುದನ್ನು ಕಾಣಬಹುದು
ಹೀಗೆ ವ್ಯಕ್ತಮಾಡಿರುವವರು ಮೂಲತಃ ಅನುಭಾವಿಗಳು, ಜ್ಞಾನಿಗಳು, ವಿರಾಗಿಗಳು, ಕವಿಗಳು ಮತ್ತು ಸಕಲ ಜೀವಿಗಳಿಗೂ ಲೇಸನ್ನೇ ಬಯಸುವ ಮಹಾತ್ಮರು. ತಮ್ಮ ಆರಾಧ್ಯ ದೈವವನ್ನು ಪ್ರಾಮಾಣಿಕವಾಗಿ ನಂಬಿರುವ ನಿಜವಾದ ಭಕ್ತರು ಮತ್ತು ನಿಸ್ವಾರ್ಥಿಗಳು. ಇವರೂ ಕೂಡ ಅನ್ಯರ ಧಾರ್ಮಿಕ ನಿಶ್ಟೆ ಮತ್ತು ಎದುರಾಳಿಗಳ ವಿಚಾರವನ್ನು ಖಂಡಿಸುವ ಹೊತ್ತಿನಲ್ಲಿ ‘ದ್ವೇಶದ ಭಾಶೆ’ ಬಳಸಿದ್ದಾರೆ ಎನ್ನಲು ಬಾರದಿದ್ದರೂ, ಭಾವಾವೇಶದ, ಆಕ್ರೋಶದ ಭಾಶೆ ಬಳಸಿದ್ದಾರೆ ಎನ್ನಬಹುದು. ಇವರು ಬೇರೆಯವರನ್ನು ವಿಮರ್ಶೆ ಮಾಡಿದಶ್ಟು ತೀವ್ರವಾಗಿಯೇ ತಮ್ಮನ್ನೂ ವಿಮರ್ಶೆ ಮಾಡಿಕೊಂಡಿರುವುದು ತಿಳಿದು ಬರುತ್ತದೆ. ಇದು ಅವರ ಭಾಶೆಯನ್ನು ದ್ವೇಶದ ಭಾಶೆಯಾಗುವ ಅಪಾಯದಿಂದ ತಪ್ಪಿಸಿದೆ.
ಆದರೆ ಇಂದು ದೇವರು ಧರ್ಮಗಳ ಹೆಸರಿನಲ್ಲಿ ಮೂಲಭೂತವಾದಿಗಳಾಗಿ ಬದಲಾಗಿರುವ ‘ದೇಶಭಕ್ತರು’ ಬೇರೆಯವರ ಮೇಲೆ ದಾಳಿ ಮಾಡುವ ‘ದ್ವೇಶಭಕ್ತ’ರಾಗಿದ್ದಾರೆಯೇ ಹೊರತು ತಮ್ಮ ಧರ್ಮ, ಆಚರಣೆ ಮತ್ತು ವ್ಯಕ್ತಿಗತ ನಡತೆಗಳನ್ನು ವಿಮರ್ಶೆ ಮಾಡಿಕೊಳ್ಳುವುದೇ ಇಲ್ಲ. ಹಾಗಾಗಿ ಅಲ್ಲಿ ದ್ವೇಶದ ಭಾಶೆಯು ಹುಲುಸಾಗಿ ಬೆಳೆಯುತ್ತದೆ. ಅವರಿಂದ ಮತ್ತಾವುದೇ ಬಗೆಯ ಹೊಸ ಅರಿವು ಸೃಶ್ಟಿಯಾಗುವುದಿಲ್ಲ. ಅವರು ಕಿಚ್ಚಿನ ಬೊಂಬೆಗಳಂತಿದ್ದು ಬೇರೆಯವರನ್ನು ಸುಟ್ಟು ತಾವೂ ದಹಿಸಿಹೋಗುತ್ತಾರೆ. ಆತ್ಮವಿಮರ್ಶೆಯಿಲ್ಲದ ಮತ್ತು ಜ್ಞಾನದ ಗಂಧಗಾಳಿಯೂ ಇಲ್ಲದ ಅಜ್ಞಾನ-ಮೌಢ್ಯಗಳ ಮೂರ್ತ ರೂಪವಾಗಿರುವ ಧಾರ್ಮಿಕ ಮೂಲಭೂತವಾದಿಗಳು ಎಂದಿಗೂ ಯಾವುದೇ ಜ್ಞಾನವನ್ನು ಸೃಶ್ಟಿಸುವುದಿಲ್ಲ.
ಅವರು ದೇಶಕ್ಕೆ, ಮನುಕುಲಕ್ಕೆ ಅವರು ಕಂಟಕವಾಗಿರುತ್ತಾರೆಯೇ ಹೊರತು ಅವರು ಪರಿಹಾರವಾಗಿರುವುದಿಲ್ಲ. ಈ ಮೂಲಭೂತವಾದಿಗಳು/ಕೋಮುವಾದಿಗಳು ದೇವರು ಮತ್ತು ಧಾರ್ಮಿಕ ವಿಚಾರಗಳನ್ನು ಸ್ವಾರ್ಥ, ದ್ವೇಶದ ರಾಜಕಾರಣಕ್ಕೆ ಬಳಸುತ್ತಾರೆ. ಹಾಗಾಗಿಯೇ ಅವರ ಭಾಶೆ ದ್ವೇಶದ ಲೇಪನ ಪಡೆದುಕೊಂಡು ಬಳಕೆಯಾಗುತ್ತದೆ.
ಅಲ್ಲಮ ಬಸವಣ್ಣ ಕನಕ ಮುಂತಾದವರು ಆಳವಾದ ಜ್ಞಾನದೊಂದಿಗೆ ವೈಚಾರಿಕವಾಗಿ ಎದುರಾಳಿಗಳ ಚಿಂತನೆಯನ್ನು ಗೆಲ್ಲುವ ಹಠದಲ್ಲಿ ಕೊಂಚ ಆವೇಶದ ಭಾಶೆಯನ್ನು ಬಳಸುತ್ತಾರೆ. ಮತ್ತು ಹೊಸ ತಿಳಿವನ್ನು ಸೃಶ್ಟಿಸುತ್ತಾರೆ. ಆದರೆ ವೈಚಾರಿಕತೆ ಜ್ಞಾನಗಳ ಶತ್ರುಗಳಾಗಿರುವ ಎಲ್ಲ ಧರ್ಮಗಳ ಮೂಲಭೂತವಾದಿಗಳು ಮತಾಂಧರು ತಮ್ಮ ಅಜ್ಞಾನವನ್ನು ಮರೆಮಾಚಲೆಂದೇ ಸಂವಾದದ ಬದಲಿಗೆ ದ್ವೇಶದ ಭಾಶೆಗೆ ಮೊರೆಹೋಗುತ್ತಾರೆ.
ಅಂದರೆ ತಮ್ಮ ಸ್ವಾರ್ಥ, ದುಶ್ಟತನ, ಅವೈಚಾರಿಕತೆ, ಅಜ್ಞಾನ, ಟೊಳ್ಳುತನಗಳನ್ನು ಮುಚ್ಚಿಕೊಳ್ಳಲು ದ್ವೇಶದ ಭಾಶೆಯ ಮೊರೆಹೋಗುತ್ತಾರೆ. ‘ಬಾಯಿದ್ದವರು ಬರದಲ್ಲಿಯೂ ಬದುಕಿದರು’ ಎಂಬಂತೆ ವೈಚಾರಿಕತೆ ಮತ್ತು ಸತ್ಯ ಸಂಗತಿಗಳ ಆಧಾರದ ಮೇಲೆ ಜ್ಞಾನದ ಮೂಲಕ ಎದುರಾಳಿಗಳನ್ನು ಗೆಲ್ಲಲಾಗದ ಹೊತ್ತಿನಲ್ಲಿ ಗಂಟಲುಮಾರಿತನದಿಂದ ದ್ವೇಶದ ವಾಗ್ದಾಳಿಗಳಿಂದ ಗೆಲ್ಲಲು ಪ್ರಯತ್ನಿಸಲಾಗುತ್ತದೆ. ಇದೂ ಸಾಲದಾದಾಗ ನೇರವಾಗಿ ದೈಹಿಕವಾಗಿ ಹಲ್ಲೆ ಮಾಡುವ ಮಟ್ಟಕ್ಕಿಳಿಯುತ್ತಾರೆ.
ವಿಚಾರದ ಮೂಲಕ ಗೆಲ್ಲಲು ಸಾಧ್ಯವಾಗದೇ ಇದ್ದಾಗ ದ್ವೇಶದ ಭಾಶೆಯನ್ನು ಬಳಸಲಾಗುತ್ತದೆ. ಇಂತಹ ಭಾಶೆಯ ಮೂಲಕವೇ ಎದುರಾಳಿಗಳಲ್ಲಿ ಭಯೋತ್ಪಾದನೆ ಮೂಡಿಸಲಾಗುತ್ತದೆ. ಇಂತಹ ಭಯೋತ್ಪಾದನೆ ಮತ್ತು ದ್ವೇಶದ ಭಾಶೆಯ ಮೂಲಕವೇ ಜನರ ಮನಸ್ಸನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಲಾಗುತ್ತದೆ.
ವ್ಯಂಗ್ಯವೆಂದರೆ ಇಂತಹ ದ್ವೇಶ ಮತ್ತು ಭಯೋತ್ಪಾದನೆಯ ಭಾಶೆಯ ಹಿಂದಿರುವ ಸಾರ್ವಜನಿಕ ವಂಚನೆಯನ್ನು ಅರ್ಥಮಾಡಿಕೊಳ್ಳದೆ ಅದಕ್ಕೆ ಬಲಿಯಾಗುವ ಜನರ ಸಂಖ್ಯೆ ದೇಶದಲ್ಲಿ ಹೆಚ್ಚಿದೆ. ಇದು ಈ ಕಾಲದ ದೊಡ್ಡ ದುರಂತ. ಹೀಗೆ ಮುಗ್ಧ ಮನಸ್ಸುಗಳನ್ನು ವಶಪಡಿಸಿಕೊಳ್ಳುವವರಿಗೆ ಬಲಿಯಾಗಿ ದ್ವೇಶ ಭಾಶೆಯನ್ನೇ ಅಭಿವ್ಯಕ್ತಿಯ ಮಾಧ್ಯಮವಾಗಿಸಿಕೊಂಡಿದ್ದಾರೆ.
ಇವರು ಸಾಮಾಜಿಕ ಮಾಧ್ಯಮಗಳಲ್ಲಿ ಕ್ರಿಯಾಶೀಲವಾಗಿದ್ದು ದ್ವೇಶದ ಸಂದೇಶಗಳನ್ನು ಹೆಚ್ಚೆಚ್ಚು ಪ್ರಸಾರ ಮಾಡುತ್ತಿದ್ದಾರೆ. ಹಾಗಾಗಿಯೇ ದೇಶದಲ್ಲಿ ದ್ವೇಶದ ಭಾಶೆ ಮತ್ತು ಸಂದೇಶಗಳ ಪ್ರಸಾರದ ಸುನಾಮಿಯೇ ಬುಗಿಲೆದ್ದಿದೆ. ಆದ್ದರಿಂದಲೇ ಎಲ್ಲೆಡೆ ದ್ವೇಶದ ಭಾಶಣಗಳು ಸಂದೇಶಗಳು ಅನುರಣಿಸುತ್ತಿವೆ. ಈ ಪ್ರವಾಹದಲ್ಲಿ ಕೊಚ್ಚಿಹೋಗುವವರ ಸಂಖ್ಯೆ ವಿಪರೀತವಾಗಿದೆ. ಇಂದು ‘ದ್ವೇಶಭಾಶೆ’ ಪ್ರಸಾರಕ್ಕೆ ಮುಖ್ಯವಾಹಿನಿಯ ಮಾಧ್ಯಮಗಳೇ ಟೊಂಕ ಕಟ್ಟಿ ನಿಂತಿವೆ. ಅಂದರೆ ಬಹುತೇಕ ಪ್ರಭಾವಿ ಮಾಧ್ಯಮಗಳ ಭಾಶೆಯೇ ದ್ವೇಶಭಾಶೆಯಾಗಿಬಿಟ್ಟಿದೆ. ಇದು ಬಹಳ ಅಪಾಯಕಾರಿ ವಿದ್ಯಮಾನ.
ಶತ್ರುಹತ್ಯೆ ಮತ್ತು ಸ್ವ-ಹತ್ಯೆ
ಇಂತಹ ವಿದ್ಯಮಾನದ ಬೆಳವಣಿಗೆಗೆ ಬಹುಸಂಖ್ಯಾತರ ಧಾರ್ಮಿಕ ಮೂಲಭೂತವಾದ, ಕೋಮುವಾದ ಮತ್ತು ಉಗ್ರರಾಶ್ಟ್ರೀಯವಾದಗಳು ಕಾರಣವಾಗಿವೆ. ದ್ವೇಶದ ಭಾಶೆಗೆ ಧರ್ಮ ಮತ್ತು ರಾಶ್ಟ್ರೀಯತೆಗಳು ಇಂಬು ನೀಡಿರುವುದರಿಂದ ಈ ವಿಚಾರಗಳ ಬೆಂಬಲಿಗರು ತಮ್ಮ ಎದುರಾಳಿಗಳ ಮೇಲೆ ಅತ್ಯಂತ ಹೀನವಾದ ಭಾಶೆ ಬಳಸಿ ಆಕ್ರಮಣ ಮಾಡುತ್ತಿದ್ದಾರೆ.
ಧರ್ಮದ ಹೆಸರಿನಲ್ಲಿ ಹಾದಿಬೀದಿಗಳಲ್ಲಿ ಗುಂಪುದಾಳಿ ಮಾಡಿ ದಾಂಧಲೆ ಸೃಶ್ಟಿಸುವುದು ಒಂದು ಬಗೆಯಾದರೆ ನಿತ್ಯವೂ ವಿದ್ಯುನ್ಮಾನ ಮಾಧ್ಯಮಗಳು; ಮುಖ್ಯವಾಗಿ ಸಾಮಾಜಿಕ ಮಾಧ್ಯಮಗಳಾದ ವಾಟ್ಸ್ಆಫ್ ಮತ್ತು ಫೇಸ್ಬುಕ್ಗಳ ಮೂಲಕ ತಮ್ಮ ಎದುರಾಳಿಗಳ ಮೇಲೆ ಮುಗಿಬೀಳಲಾಗುತ್ತಿದೆ. ಹೀಗೆ ಮುಗಿಬೀಳುವ ವೇಳೆ ಅತ್ಯಂತ ಅಸಹ್ಯಕರ ಮತ್ತು ನೀಚಮಟ್ಟದ ಭಾಶೆ ಬಳಸಲಾಗುತ್ತದೆ. ತಮ್ಮ ಎದುರಾಳಿಗಳ ಮೇಲೆ ದಾಳಿ ಆರೋಪ ಮಾಡುವಾಗ ಸಂವಾದದ ಭಾಶೆಯನ್ನು ಬಳಸುವುದಿಲ್ಲ. ಬದಲಿಗೆ ತಮ್ಮ ಸೈದ್ಧಾಂತಿಕ ಎದುರಾಳಿಗಳ ವ್ಯಕ್ತಿತ್ವವನ್ನು ಹೀನಗೊಳಿಸುವಂತಹ ಭಾಶೆಯನ್ನು ಬಳಸಲಾಗುತ್ತದೆ.
ಆ ಮೂಲಕ ಅವರ ವ್ಯಕ್ತಿತ್ವವನ್ನು ವಿಕೃತಗೊಳಿಸಲಾಗುತ್ತದೆ. ಸಮಾಜದಲ್ಲಿ ಅವರ ಬಗೆಗೆ ಅಪನಂಬಿಕೆಯನ್ನು ಸೃಶ್ಟಿಸಲಾಗುತ್ತದೆ. ಇಂತಹ ಅಪಪ್ರಚಾರವನ್ನು ಸುಳ್ಳು ಸಂದೇಶಗಳನ್ನು ನಂಬುವಂತಹ ಜನಸಮೂಹವನ್ನು ವ್ಯವಸ್ಥಿತವಾಗಿ ಸೃಶ್ಟಿಸಿಕೊಳ್ಳಲಾಗಿದೆ. ಇದೇ ಫ್ಯಾಸಿಸಂನಮ ನಿಜವಾದ ಉದ್ದೇಶ ಕೂಡ ಆಗಿರುತ್ತದೆ. ಇಲ್ಲಿ ನಿಜವಾದ ಧರ್ಮ, ಭಾಶೆ ಮತ್ತು ಮೌಲ್ಯಗಳು ಎಲ್ಲವೂ ಅವಸಾನಗೊಳ್ಳುತ್ತವೆ ಇಲ್ಲವೇ ಅನರ್ಥ ಪಡೆದುಕೊಳ್ಳುತ್ತವೆ. ಅಂದರೆ ಧರ್ಮದ ಹೆಸರಿಯಲ್ಲಿಯೇ ಧರ್ಮದ ನೈಜ ಮೌಲ್ಯಗಳನ್ನು ನಾಶ ಮಾಡಲಾಗುತ್ತದೆ.
ಹೀಗೆ ತಮ್ಮ ‘ಸೈದ್ಧಾಂತಿಕ ಎದುರಾಳಿ’ಗಳ ಮೇಲೆ ದಾಳಿ ಮಾಡಲು ಬಳಸುವ ಭಾಶೆ ಅದು ಎದುರಾಳಿಗಳನ್ನು ಮಾತ್ರ ನಾಶ ಮಾಡುವುದಿಲ್ಲ. ಬದಲಿಗೆ ಮೊದಲು ‘ದ್ವೇಶಭಾಶೆ’ ಬಳಸುವವರನ್ನೇ ನಾಶಮಾಡಿರುತ್ತದೆ. ಯಾಕೆಂದರೆ ಅವರು ಮೊದಲು ತಮ್ಮ ವ್ಯಕ್ತಿತ್ವವನ್ನು ಕೊಂದುಕೊಂಡು ಅಮಾನುಶರಾಗಿ ಬದಲಾಗಿರುತ್ತಾರೆ. ಯಾವುದೇ ಬಗೆಯ ವೈಚಾರಿಕತೆ ಮತ್ತು ನೈಜವಾದ ಧಾರ್ಮಿಕ ಮೌಲ್ಯಗಳಲ್ಲಿ ನಂಬಿಕೆಯಿಟ್ಟಿರುವುದಿಲ್ಲ.
ಇವುಗಳ ಬಗೆಗೆ ವಚನಕಾರರಂತೆ ಪ್ರಾಮಾಣಿಕವಾಗಿ ಶೋಧನೆಯನ್ನೂ ಮಾಡುವುದಿಲ್ಲ. ಅವುಗಳ ನಿಜನೆಲೆಯನ್ನು ಅರಿವ ತುಡಿತವಿರುವುದಿಲ್ಲ. ಅವನ್ನು ಕುರುಡಾಗಿ ಭಾವಿಸಿ ಧರ್ಮದ, ದೇಶದ ಮತ್ತು ಸಂಸ್ಕøತಿ ರಕ್ಶಣೆಯ ಹೆಸರಿನಲ್ಲಿ ದ್ವೇಶದ ಭಾಶೆಯೊಂದಿಗೆ ದಾಳಿ ನಡೆಸಲಾಗುತ್ತದೆ. ಅಲ್ಲದೆ ಅವರ ಭಾಶೆ ವೈಚಾರಿಕವೂ ಚಿಂತನಶೀಲವೂ ಆದ ಸೃಜನಶೀಲ ಭಾಶೆಯಲ್ಲ. ಅದು ಯಾವುದೇ ಹೊಸ ವಿಚಾರವನ್ನೂ ಹುಟ್ಟಿಸುವುದಿಲ್ಲ. ಅದು ಒಂದು ಬಗೆಯ ಕಿಚ್ಚಿನ ಭಾಶೆ. ಕಿಚ್ಚು ಎಲ್ಲವನ್ನೂ ದಹಿಸುವಂತೆ ಕಿಚ್ಚಿನ ಭಾಶೆ ಬಳಸುವ ವ್ಯಕ್ತಿಗಳನ್ನು, ಅವರು ನಂಬಿರುವ ಧರ್ಮ ಮತ್ತು ಸಂಸ್ಕøತಿಯ ಉದಾತ್ತ ಮೌಲ್ಯಗಳನ್ನೂ ನಾಶ ಮಾಡುತ್ತಿರುತ್ತವೆ. ಅಲ್ಲದೆ ಈ ಭಾಶೆ ಸೃಜನಶೀಲತೆ ವಿರೋಧಿಯಾಗಿದ್ದು ವಿದ್ವಂಸಕಾರಿಯಾಗಿರುತ್ತದೆ. ಹಾಗಾಗಿ ಇಲ್ಲಿ ನಡೆಯುವುದು ಶತ್ರುಹತ್ಯೆಯಲ್ಲ! ಸ್ವಹತ್ಯೆ ಇಲ್ಲವೇ ಆತ್ಮಹತ್ಯೆ.
ದುರಂತವೆಂದರೆ ಇಂತಹ ವಿದ್ವಂಸಕಾರಿಯಾದ ಭಾಶೆಯೇ ಇಂದಿನ ಮುಖ್ಯವಾಹಿನಿ ಮಾಧ್ಯಮಗಳ ಭಾಶೆಯಾಗಿಬಿಟ್ಟಿದೆ. ಇಂದಿನ ಮುಖ್ಯವಾಹಿನಿಯ ಮಾಧ್ಯಮಗಳು, ಅಧಿಕಾರಶಕ್ತಿಗಳು, ಧರ್ಮರಕ್ಶಕರು, ವಿದ್ವಂಸಕಾರಿ ಭಾಶೆಯನ್ನು ಬಳಸುತ್ತಿರುವ ಕಾರಣ ದ್ವೇಶದ ವಿಚಾರಗಳನ್ನು ಹೊರತುಪಡಿಸಿ ಹೊಸ ವಿಚಾರದ ಕೊಡುಗೆ ನೀಡುವುದಿಲ್ಲ. ದೇಶಭಕ್ತಿ ದ್ವೇಶಭಕ್ತಿಯಾಗಿ ಕೆಲಸ ಮಾಡುತ್ತಿರುತ್ತದೆ. ಆದರೆ ಬಸವಣ್ಣ, ಅಲ್ಲಮ ಅಕ್ಕ ಕನಕನಂತಹವರು ಸಿಟ್ಟಿನ ಆವೇಶದ ಆಕ್ರೋಶದ ಭಾಶೆಯನ್ನು ಬಳಸಿದರೂ ಅವರು ತಮ್ಮೊಳಗೆ ದ್ವೇಶದ ಭಾವನೆ ಹೊಂದಿರುವುದಿಲ್ಲ.
ತಮ್ಮ ತಮ್ಮ ಅಂತರಂಗದಲ್ಲಿರುವ ಅಜ್ಞಾನ, ಸ್ವಾರ್ಥ ದ್ವೇಶದ ಭಾವನೆಗಳನ್ನು ಖಾಲಿಮಾಡಿಕೊಂಡ ನಂತರವೇ ಅವರು ಮಾತನಾಡುತ್ತಿದ್ದಾರೆ. ಅವರ ವಿಡಂಭನೆಯ ಭಾಶೆ ಆಳವಾದ ಜ್ಞಾನದಿಂದ ಹುಟ್ಟಿರುವುದರಿಂದ ಅದರಲ್ಲಿ ದ್ವೇಶವಿರುವುದಿಲ್ಲ. ಬದಲಿಗೆ ಅದು ದಪ್ಪ ಚರ್ಮದ ಜನರನ್ನು ತಿವಿದು ಎಚ್ಚರಿಸುತ್ತದೆ. ಆದರೆ ಇಂದು ದ್ವೇಶದ ಭಾಶೆಯನ್ನು ಬಳಸುವ ಜನರು ತಮ್ಮೊಳಗಿನ ಅಜ್ಞಾನದ ಕೊಡವನ್ನು ಖಾಲಿ ಮಾಡದೆ ಅದಕ್ಕೆ ಇನ್ನಶ್ಟು ಮೌಢ್ಯಗಳನ್ನು ದುಶ್ಟತನವನ್ನು ತುಂಬಿಕೊಳ್ಳಲು ದ್ವೇಶದ ಲೇಪನ ಮಾಡಿ ಅದನ್ನು ಅಲಗಾಗಿಸಿ ಎದುರಾಳಿಗಳ ಮೇಲೆ ದಾಳಿ ಮಾಡುತ್ತಾರೆ.
ಇದು ಅವರನ್ನು ಮತ್ತು ಜನರನ್ನು ನಾಶ ಮಾಡುತ್ತದೆ. ಪುರಂದರದಾಸರು ‘ವಿಚಾರವಿಲ್ಲದೆ ಪರರ ದೂಶಿಸುವುದಕ್ಕೆ ಚಾಚಿಕೊಂಡಿರುವಂತೇ ಇರುವ ನಾಲಿಗೆ’ಗಳು ಎನ್ನುತ್ತಾರೆ. ಅಂದರೆ ವಿಚಾರಹೀನತೆಯೇ ದ್ವೇಶದ ಭಾಶೆ ಬಳಸುವುದರ ಮೂಲ. ಅಂತಹವರೇ ನಾಲಗೆಗಳನ್ನು ಆಯುಧವಾಗಿಸಿ ದಾಳಿ ಮಾಡುತ್ತ ಅರಿವಿನ ಶತ್ರುಗಳಾಗಿ ಬೆಳೆಯುತ್ತಾರೆ. ಪುರಂದರ ದಾಸರು ‘ಭಾಶಾಹೀನರ ಸಂಗ ಅಭಿಮಾನ ಭಂಗ’ ಎನ್ನುತ್ತಾರೆ. ಅಂದರೆ ದ್ವೇಶಭಾಶೆ ಭಾಶಾಹೀನತೆಯ ದ್ಯೋತಕವೂ ಹೌದು. ಸಾಮಾಜಿಕ ಸೌಖ್ಯದಲ್ಲಿ ಭಾಶೆಯ ಪಾತ್ರ ಬಹಳ ಮಹತ್ವದ್ದು. ಹಾಗಾಗಿ ದ್ವೇಶಭಾಶೆಯಿಂದ ನಿಡುಗಾಲದಲ್ಲಿ ಸಾಮಾಜಿಕ ಸೌಖ್ಯದದ ಮೇಲೆ ಆಗುವ ಪರಿಣಾಮಗಳೇನು? ಎಂಬುದನ್ನು ಊಹಿಸಿದರೆ ಆತಂಕವಾಗುತ್ತದೆ.
ಇಲ್ಲಿ ಗಮನಿಸಬೇಕಾದ ಮತ್ತೊಂದು ಪ್ರಮುಖ ಸಂಗತಿಯೆಂದರೆ ಇಂತಹ ದ್ವೇಶಭಾಶೆಯನ್ನು ವಿರೋಧಿಸುವ ಒಂದು ವಿದ್ಯಮಾನವೂ ಇಂದು ಭಾರತದಲ್ಲಿ ಪ್ರಬಲವಾಗಿಯೇ ಬೆಳೆದಿದೆ. ಆದರೆ ಇದರಲ್ಲಿ ಒಂದು ವರ್ಗ ದ್ವೇಶಭಕ್ತಿಗೆ ಪದಲಿಯಾಗಿ ಪ್ರತಿದ್ವೇಶಭಕ್ತಿ ಭಾಶೆಯನ್ನು ಬಳಸುತ್ತಿದೆ. ಅಂದರೆ ಮತೀಯವಾದಿಗಳ ನೀಚಭಾಶೆಯನ್ನು ಖಂಡಿಸಲು ಅಂತಹದೇ ಭಾಶೆಯನ್ನು ಅದನ್ನು ವಿರೋಧಿಸುವ ಜನರು ಬಳಸುತ್ತಿದ್ದಾರೆ. ಇಂತಹ ಕಡೆ ಬಲಪಂಥೀಯರಲ್ಲಿ ಕಾಣುವಂತಹ ಅಸಹನೆ ಅಸಹಿಶ್ಣತೆಯ ಭಾವಗಳೇ ವಿರೋಧಿಸುವವರ ಭಾಶೆಯಲ್ಲಿ ಎದ್ದು ಕಾಣಿಸುತ್ತಿರುತ್ತದೆ. ಇದು ಅನೌಪಚಾರಿಕ ವಲಯದಲ್ಲಿ ಹೆಚ್ಚು.
ವಿಶೇಶವಾಗಿ ಫೇಸ್ಬುಕ್ನಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಟ್ರೊಲ್ ಭಾಶೆಯೇ ಇಲ್ಲಿ ಪ್ರಧಾನ. ಬಲಪಂಥೀಯರು ತಮ್ಮ ಸೈದ್ಧಾಂತಿಕ ವಿರೋಧಿಗಳನ್ನು ಖಂಡಿಸಲು ವಿರೋಧಿಸಲು ಗೇಲಿ ವ್ಯಂಗ್ಯ ಅಸಹ್ಯ ಬೈಗುಳ ಇತ್ಯಾದಿ ಎಲ್ಲವನ್ನೂ ಬಳಸುತ್ತಾರೆ. ಇಂತಹ ಭಾಶೆಯನ್ನು ಬಳಸಿ ಸಂವಾದ ನಡೆಸುವಾಗ ಅಲ್ಲಿ ಕೇಳುಗರ ಇಲ್ಲವೇ ಯಾರನ್ನು ಉದ್ದೇಶಿಸಿ ಬರೆಯಲಾಗಿರುತ್ತದೆಯೋ ಅವರಲ್ಲಿ ಯಾವ ಬದಲಾವಣೆಯೂ ಕಾಣಿಸುವುದಿಲ್ಲ. ವಿಚಾರ ಪ್ರಚೋದಕವೂ ಆಗಿರುವುದಿಲ್ಲ. ಅಂತಹ ಕಡೆ ಬಳಕೆಯಾಗಿರುವ ಭಾಶೆ ಕೇಳುಗರಲ್ಲಿಯೇ ಬೇರೆ ಬಗೆಯ ಅಸಹನೆ ಸೃಶ್ಟಿಸುವ ಸಾಧ್ಯತೆಗಳೇ ಹೆಚ್ಚು. ಅಂದರೆ ನೀಚ ಭಾಶೆಗೆ ಮತ್ತೊಂದು ಬಗೆಯ ನೀಚ ಭಾಶೆ ಮದ್ದಲ್ಲ. ದ್ವೇಶದ ಭಾಶೆಗೆ ಪ್ರತಿದ್ವೇಶದ ಭಾಶೆ ಮದ್ದಲ್ಲ. ಅಂತಹ ಕಡೆ ಸೌಹಾರ್ದದ ಪ್ರೀತಿಯ ಭಾಶೆಯೇ ಮದ್ದಾಗಿರುತ್ತದೆ.
ಆವೇಶದ ಆಕ್ರೋಶದ ಭಾಶೆಗೆ ಮೆಲುದನಿಯ ಮೃದುತ್ವದ ‘ಬುದ್ಧಭಾಶೆ’ಯೇ ಮದ್ದಾಗಿರುತ್ತದೆ. ಆದರೆ ಇದನ್ನು ಅರಿತುಕೊಳ್ಳದ ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿದ್ವೇಶದ ಭಾಶೆಯನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ. ಇಂತಹ ಪ್ರತಿದ್ವೇಶದ ಭಾಶೆ ಕೇಳುಗರಲ್ಲಿ ಯಾವುದೇ ಚಿಂತನೆಯನ್ನು ಎಚ್ಚರವನ್ನೂ ಮೂಡಿಸುವುದಿಲ್ಲ. ಬದಲಿಗೆ ಮತ್ತಶ್ಟು ಅಕರಾಳ ವಿಕರಾಳಗಳ ಭಾವನೆಗಳನ್ನೇ ಸೃಶ್ಟಿಸುತ್ತದೆ. ಸಾರ್ವಜನಿಕ ಭಾಶೆ ಅಕರಾಳ ವಿಕರಾಳ ಆದಶ್ಟೂ ಅದು ಒಟ್ಟು ದೇಶದ ವೈಚಾರಿಕ ಆರೋಗ್ಯಕ್ಕೆ ಹಾನಿಕಾರಕವಾಗಿರುತ್ತದೆ. ದ್ವೇಶದ ನುಡಿಗೆ ಪ್ರತಿದ್ವೇಶದ ನುಡಿಯನ್ನು ಬಳಸದೆ ಪ್ರೀತಿಯ ನುಡಿಯನ್ನು ಬಳಸಬೇಕಾಗಿರುತ್ತದೆ. ಅಜ್ಞಾನದಿಂದ, ದುಶ್ಟತನದಿಂದ ಮಾಡುವ ಉದ್ದೇಶಪೂರ್ವಕ ದಾಳಿಗೆ ಎದುರಾಳಿಯ ಮನಸ್ಸಿನಲ್ಲಿಯೂ ವಿಚಾರದ ಹಣತೆ ಹಚ್ಚುವಂತಹ ಭಾಶೆಯನ್ನು ಬಳಸಬೇಕಾಗುತ್ತದೆ. ಇದೇ ಇಂದಿನ ಅಗತ್ಯ.
ಮಿತ್ರಹತ್ಯೆ ಮತ್ತು ಸ್ವ-ಹತ್ಯೆ
ಸಾಮಾಜಿಕ ಮಾಧ್ಯಮಗಳ ಮೂಲಕ ‘ಮುಖೇಡಿ’ ಚರ್ಚೆಯನ್ನು ಮಾಡಲು ಮುಂದಾದ ನಂತರ ಮಿತ್ರಸಂವಾದವೂ ಶತ್ರುಸಂವಾದದಂತೆ ಬದಲಾಗಿದೆ. ಇದು ಇನ್ನೊಂದು ದೊಡ್ಡ ದುರಂತ. ಖಾಸಗಿಯಾಗಿ ನಡೆಯಬೇಕಾದ ಚರ್ಚೆಗಳು ಸಾರ್ವಜನಿಕವಾಗಿ ನಡೆಯುತ್ತವೆ. ಸಾರ್ವಜನಿಕವಾಗಿ ನಡೆಯಬೇಕಾದ ಚರ್ಚೆಗಳು ಕಣ್ಮರೆಯಾಗುತ್ತಿವೆ. ಎದುರಾಬದುರು ನಡೆಯುವ ಮಾತುಕತೆಯಲ್ಲಿ ಬಳಕೆಯಾಗುವ ಭಾಶೆಯ ಬಗೆಯೇ ಬೇರೆ. ಅಲ್ಲಿ ಮಾತು ಯಾವುದೇ ವ್ಯಕ್ತಿಯ ಎದುರು ನಿಲ್ಲದೆ ಮರೆಯಲ್ಲಿ ನಿಂತು ಮಾತನಾಡುವಾಗ ವಿಚಿತ್ರವಾದ ‘ಪೌರುಶ’ ಬಂದುಬಿಡುತ್ತದೆ.
ಇಲ್ಲಿ ವಿಶ್ವಾಸಗಳಿಗಿಂತ ಅಸಹನೆ ಮತ್ತು ನಂಜಿನ ಭಾವನೆಗಳು ಕಿಡಿಯಾಡುತ್ತಲೇ ಇರುತ್ತವೆ. ಈ ಕಿಡಿಗಳು ಅಲ್ಲಿಯೇ ನಂದಿಹೋಗುವ ಬದಲು ಅವು ಬಾಳಿನುದ್ದಕ್ಕೂ ಮುಂದುವರೆಯುವ ಸಾಧ್ಯತೆಗಳಿರುತ್ತವೆ. ಇದು ನಂಬಿಕೆಗಿಂತ ಅಪನಂಬಿಕೆಯ ಬೆಳೆಯನ್ನೇ ಹೆಚ್ಚು ಬೆಳೆಯುತ್ತಿದೆ. ಇಲ್ಲಿ ಮಾತು ಮನಸ್ಸುಗಳನ್ನು ಬೆಸೆಯುವುದಕ್ಕಿಂತ ಬೇರ್ಪಡಿಸುವ ಕೆಲಸವನ್ನೇ ಹೆಚ್ಚು ಮಾಡುತ್ತಿರುತ್ತದೆ. ಅಲ್ಲದೆ ಇಂತಹ ಸಮಯದಲ್ಲಿ ಮಿತ್ರಹತ್ಯೆ ಮತ್ತು ಸ್ವಹತ್ಯೆಗಳು ಹೆಚ್ಚು ನಡೆಯುತ್ತಿರುತ್ತವೆ. ತಮಗಿಂತ ಭಿನ್ನವಾದ ಅಭಿಪ್ರಾಯ ಮಂಡಿಸುವವರ ಮೇಲೆ ದಂಡೆತ್ತಿ ಹೋಗುವ ಭರದಲ್ಲಿ ಸಂವಾದ ಚೌಕಟ್ಟು ಮೀರಿದ ಭಾಶೆಯನ್ನು ಬಳಸಲಾಗುತ್ತದೆ.
ಇಂತಹ ಸಂದರ್ಭದಲ್ಲಿ ವಿಚಾರವನ್ನು ತಮ್ಮೆದುರು ಇರುವವರಿಗೆ ಮನನ ಮಾಡಿಸುವ ಬದಲಿಗೆ ಆರೋಪ ಮಾಡುವ ಇಲ್ಲವೇ ದೂರುವ ಕೆಲಸ ಮಾಡಲಾಗುತ್ತದೆ. ಇದು ಒಂದು ಬಗೆಯ ಅಸಹನೆ ಮತ್ತು ದ್ವೇಶದ ಭಾವನೆಯನ್ನೇ ಅಂತರಂಗದಲ್ಲಿ ಹೊಂದಿರುವುದನ್ನು ಗಮನಿಸಬಹುದು. ಇವು ಕೆಲವೊಮ್ಮೆ ಅತಿರೇಕ ಮುಟ್ಟಿರುವುದೂ ಉಂಟು. ನಿಜವೆಂದರೆ ಇಲ್ಲಿನ ಎಶ್ಟೋ ಸಂಗತಿಗಳು ಸಾರ್ವಜನಿಕವಾಗಿ ಚರ್ಚಿಸ ತಕ್ಕ ವಿಚಾರಗಳೇ ಆಗಿರುವುದಿಲ್ಲ. ಮುಕ್ತವಾಗಿ ಚರ್ಚಿಸತಕ್ಕ ವಿಚಾರಗಳು ಮತ್ತು ಖಾಸಗಿಯಾಗಿ ಚರ್ಚಿಸಬೇಕಾದ ವಿಚಾರಗಳು ಬೇರೆ ಬೇರೆ.
ಆದರೆ ಅದನ್ನು ಮರೆತು ಪರಸ್ಪರ ಕೆಸರೆರೆಚಿಕೊಳ್ಳುವ ಕೆಲಸವನ್ನು ಸಾರ್ವಜನಿಕ ವೇದಿಕೆಗಳಲ್ಲಿ ಮಾಡಲಾಗುತ್ತಿದೆ. ಇದರಿಂದ ಒಂದುಗೂಡಬೇಕಾದ ಜನರು ಚಿದ್ರಗೊಳ್ಳುತ್ತಿದ್ದಾರೆ. ಕೂಡುವ ಮನಸ್ಸುಗಳು ಮುರಿದು ಬೀಳುತ್ತಿವೆ. ಇಂತಹ ಅಪಾಯಕಾರಿ ವಿದ್ಯಮಾನಕ್ಕೆ ವೇದಿಕೆ ರೂಪಿಸಿರುವುದು ಸಾಮಾಜಿಕ ಮಾಧ್ಯಮಗಳು. ಇದರಿಂದ ಜನವಿರೋಧಿ ಆಳುವ ವರ್ಗಗಳು ಮತ್ತು ಪ್ರತಿಗಾಮಿ ಪುರೋಹಿತಶಾಹಿ ಶಕ್ತಿಗಳೇ ಹೆಚ್ಚು ಪ್ರಯೋಜನ ಪಡೆಯುತ್ತಿವೆ. ಆದರೆ ಜನರು ಒಗ್ಗೂಡಲು ಬಳಸಿಕೊಳ್ಳಬೇಕಾದ ವೇದಿಕೆಗಳನ್ನು ವಿಘಟನೆಗೊಳ್ಳಲು ಬಳಸಿಕೊಳ್ಳಲಾಗುತ್ತಿದೆ. ಇದು ಭಾಶೆಯ ಸಮಸ್ಯೆಯೋ ಇಲ್ಲವೇ ಅದನ್ನು ಅರಿತು ಬಳಸದೇ ಇರುವವರ ಸಮಸ್ಯೆಯೋ? ಎಂಬ ಪ್ರಶ್ನೆ ಇಲ್ಲಿ ಮುಖ್ಯವಾಗುತ್ತದೆ.
ಭಾಶೆಯ ಲೋಕಪಯೋಗಿ ಕಾರ್ಯ
ಕುವೆಂಪು ಅವರು ಭಾಶೆಯನ್ನು ಭಾವೋಪಯೋಗಿ ಮತ್ತು ಲೋಕೋಪಯೋಗಿ ಎಂದು ಎರಡು ನೆಲೆಯಲ್ಲಿ ಗುರುತಿಸುತ್ತಾರೆ. ಲೋಕೋಪಯೋಗಿ ಭಾಶೆ ಸಾರ್ವಜನಿಕ ಸಂವಹನದ ಮೂಲಕ ಮನಸ್ಸುಗಳನ್ನು ಬೆಸೆಯಬೇಕು. ಹಾಗೆಯೇ ಭಾವೋಪಯೋಗಿ ಗುಣದ ಮೂಲಕ ಮಾನವರು ಭಾಶೆಯನ್ನು ತಮ್ಮ ಅಂತರಂಗದ ವಿಕಾಸಕ್ಕೆ ಬಳಸಿಕೊಳ್ಳಬೇಕಿರುತ್ತದೆ. ಆದರೆ ದ್ವೇಶ ಮತ್ತು ಪ್ರತಿದ್ವೇಶಗಳ ಭಾಶೆ ಸಾಮಾಜಿಕ ನೆಲೆಯಲ್ಲಿ ಅದು ಸಮಾಜವನ್ನು ಭಿನ್ನ ವರ್ಗಗಳನ್ನು ಒಗ್ಗೂಡಿಸುವುದಿಲ್ಲ; ಬದಲಿಗೆ ವಿಭಜಿಸುತ್ತದೆ. ಹಾಗೆಯೇ ದ್ವೇಶ ಪ್ರತಿದ್ವೇಶಗಳ ಭಾಶೆ ಕೂಡ ಅಂತರಂಗವನ್ನು ಬೆಳಗುವುದಿಲ್ಲ. ಮತ್ತು ಅದು ಸೃಜಶೀಲವಾದ ಕಾರ್ಯಗಳಿಗೂ ಒದಗಿಬರುವುದಿಲ್ಲ. ಅಂತಹ ದ್ವೇಶ ಮತ್ತು ಪ್ರತಿದ್ವೇಶಗಳ ಭಾಶೆಯಿಂದ ಯಾವುದೋ ಹೊಸ ಚಿಂತನೆಯನ್ನು ಮನಸ್ಸುಗಳನ್ನು ಹುಟ್ಟಿಸಲು ಸಾಧ್ಯವಿಲ್ಲ.
‘ಕಾಂತಾಸಂಹಿತೆ’ಯಂತಹ ಪ್ರೇಮದಭಾಶೆ ಮಾತ್ರವೇ ಹೊಸವಿಚಾರ ಮಂಡಿಸಲು ಪ್ರಯೋಜನಕ್ಕೆ ಬರುತ್ತದೆ; ದ್ವೇಶದ ಭಾಶೆಯಲ್ಲ. ದ್ವೇಶದ ಭಾಶೆ-ಭಾಶಣಗಳು ಒಂದು ಸಮಾಜದ ರೋಗವನ್ನು ಎತ್ತಿತೋರಿಸುತ್ತವೆಯೇ ಹೊರತು ಅದು ಸಮಾಜದ ಅತ್ಯುನ್ನತ ಸಾಧನೆಯನ್ನು ಬಿಂಬಿಸುವುದಿಲ್ಲ.
ಕಾಡ್ಗಿಚ್ಚಿನ ಎದುರು ‘ನೀರು’ ಮಹತ್ವ ಪಡೆಯುವಂತೆ ದ್ವೇಶದ ಭಾಶೆಯ ಎದುರು ಬುದ್ಧನ ಕಾರುಣ್ಯದ ಭಾಶೆ ಮಹತ್ವ ಪಡೆಯುತ್ತದೆ. ಅಂಗುಲಿಮಾಲನಂತಹ ಭಯಹುಟ್ಟಿಸುವ ವ್ಯಕ್ತಿಯ ಎದುರು ಬುದ್ಧ ನಿಲ್ಲಲು ಸಾಧ್ಯವಾಗಿದ್ದು ಕಾರುಣ್ಯ ಭಾಶೆಯ ಮೂಲಕವೇ. ಗಾಂಧೀಜಿ ಬ್ರಿಟಿಶರನ್ನು ಎದುರಿಸಿದ್ದು ಇಂತಹ ಪ್ರೇಮದ ಭಾಶೆಯ ಮೂಲಕವೇ ಆಗಿತ್ತು. ಇದುವರೆಗಿನ ಚರಿತ್ರೆಯ ಅನುಭವದಿಂದ ಕಲಿತಿರುವ ಪಾಠಗಳನ್ನು ಗಮನಿಸಿದರೆ ಕ್ರೌರ್ಯಕ್ಕೆ ಎದುರಾಗಿ ನಿಂತು ಗೆದ್ದಿರುವುದು ಕ್ರೌರ್ಯವಲ್ಲ; ಬದಲಿಗೆ ಪ್ರೇಮ ಕರುಣೆ ದಯೆ ಮತ್ತು ಸಹನೆಯ ಮೌಲ್ಯಗಳು ಮಾತ್ರವೇ ಆಗಿದೆ.
ಇಂದಿನ ಅಗತ್ಯವೂ ಕೂಡ ಸಹನೆಯ ಮತ್ತು ಕರುಣೆಯ ಭಾಶೆಯೇ ಆಗಿದೆ. ಆದರೆ ಇಂದು ಕ್ರೌರ್ಯವನ್ನು ಎದುರುಗೊಳ್ಳುವ ದಿಟ್ಟತೆ ತೋರುತ್ತಿರುವ ಜನರೂ ಕೂಡ ಕೆಲವೊಮ್ಮೆ ಸಹನೆ ಕಳೆದುಕೊಂಡು ಪ್ರತಿಕ್ರಿಯಿಸುವುದು ಎದ್ದು ಕಾಣಿಸುತ್ತದೆ. ಕೆಲವೊಮ್ಮೆ ದ್ವೇಶಭಾಶೆಯ ಅತಿರೇಕದ ವರ್ತನೆಗಳನ್ನು ಕಂಡಾಗ ಆವೇಶ ಆಕ್ರೋಶಗಳು ಹುಟ್ಟಬಹುದು. ಆದರೆ ಅಂತಹ ಆವೇಶ ಆಕ್ರೋಶಗಳನ್ನು ತಮ್ಮ ಎದುರಾಳಿಗಳಂತೆ ಮೈದುಂಬಿಕೊಂಡಾಗ ವಿಚಾರ ಮತ್ತು ಚರ್ಚೆಗಳು ದಾರಿ ತಪ್ಪುತ್ತವೆ. ಭಾಶೆ ಹದಗೆಡುತ್ತದೆ. ಸಾಮಾಜಿಕ ಆರೋಗ್ಯ ಮತ್ತಶ್ಟು ನಾಶವಾಗುತ್ತದೆ.
ಹಾಗಾಗಿ ಬದಲಾವಣೆ ಬಯಸುವ ಮನಸ್ಸುಗಳು ತಮ್ಮ ಉದಾತ್ತ ಚಿಂತನೆಗಳಿಗೆ ತಕ್ಕುನಾದ ಕಾರುಣ್ಯದ ಭಾಶೆಯನ್ನೇ ಬಳಸಬೇಕಾಗುತ್ತದೆ. ಅತಿರೇಕದ ಭಾಶೆಯನ್ನು ಬಳಸಿದರೆ ಅದು ವಿಚಾರ ಸಂವಹನ ನಡೆಸದೆ ಹಾದಿತಪ್ಪಿರುವ ಮನಸ್ಸುಗಳನ್ನು ಪರಿವರ್ತಿಸುವ ಬದಲು ಮತ್ತಶ್ಟು ಕೆರಳಿಸುವ ಅಪಾಯವಿರುತ್ತದೆ. ಈ ಬಗೆಗೆ ಎಚ್ಚರಿಕೆ ಅಗತ್ಯವಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಅಂತರಂಗ
ಮರೆಯಾದ ಅಪೂರ್ವ ಚಿತ್ರಕಲಾ ಪ್ರತಿಭೆ ‘ಶೋಭಾ ಕರಣಿಕ್’
- ಡಾ.ಎನ್.ಕೆ.ಪದ್ಮನಾಭ, ಸಹಾಯಕ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ,ಉಜಿರೆ
ಅವರು ಬಿಡಿಸುತ್ತಿದ್ದ ರೇಖೆಗಳು ನಮ್ಮ ದೇಶೀ ಸಂಸ್ಕೃತಿಯ ವಕ್ತಾರಿಕೆಯ ಪಾತ್ರ ನಿರ್ವಹಿಸುತ್ತಿದ್ದವು. ಕನ್ನಡದ್ದೇ ಆದ ಕಲಾತ್ಮಕ ಪರಂಪರೆಯನ್ನು ಸೂಕ್ಷ್ಮವಾಗಿ ಗ್ರಹಿಸಿದ್ದ ಅವರ ಚಿತ್ರಗಳು ಜೀವಂತಿಕೆಯ ಗುಣಲಕ್ಷಣದೊಂದಿಗೆ ಕಂಗೊಳಿಸುತ್ತಿದ್ದವು.
ಸಾಂಪ್ರದಾಯಿಕ ಚಿತ್ರಶೈಲಿಯನ್ನು ಆಧುನಿಕ ಅಗತ್ಯಗಳಿಗೆ ತಕ್ಕಂತೆ ಮಣಿಸಿ ಪರಂಪರೆಯೊಳಗೇ ಅಡಗಿದ್ದ ಮೌಲಿಕ ಮಾದರಿಗಳನ್ನು ಮನಗಾಣಿಸುವ ಶ್ರದ್ಧೆಯೊಂದಿಗೇ ಅವರು ಚಿತ್ರವಿನ್ಯಾಸ ರೂಪಿಸುತ್ತಿದ್ದರು. ಇನ್ಸ್ಟಾಗ್ರಾಮ್, ಫೇಸ್ಬುಕ್ ಮತ್ತಿತರ ಮಾಧ್ಯಮಗಳ ಮೂಲಕ ತಮ್ಮ ಚಿತ್ರಗಳನ್ನು ಕಾಣಿಸುತ್ತಿದ್ದರು. ಪರಂಪರೆ ಮತ್ತು ವರ್ತಮಾನವನ್ನು ಬೆಸೆದು ಹೊಸ ಬಗೆಯ ಚಿತ್ರಪ್ರಯೋಗಗಳನ್ನು ನಡೆಸುವ ಹುಮ್ಮಸ್ಸಿನೊಂದಿಗೆ ಚಿತ್ರಕಲಾಯಾನ ಮುಂದುವರೆಸಿದ್ದರು. ಅವರ ಹೆಸರು ಶೋಭಾ ಕರಣಿಕ್.
ಇತ್ತೀಚೆಗಷ್ಟೇ ಅವರ ಚಿತ್ರಕಲಾಯಾನ ನಿಂತಿತು. ಅವರ ನಿಧನವು ವಿನೂತನವಾದ ಪ್ರಯೋಗಶೀಲ ಚಿತ್ರಕಲಾ ಸಾಧ್ಯತೆಗಳನ್ನು ತಡೆದು ನಿಲ್ಲಿಸಿತು. ಪುರಾಣದ ಕಥನ ಪ್ರಸಂಗಗಳಲ್ಲಿ ಉಲ್ಲೇಖಿತ ದೇವರು-ದೇವತೆಗಳ ಅಸ್ಮಿತೆ ಮತ್ತು ದೇಸೀ ಸಂಸ್ಕೃತಿಯನ್ನು ಬಿಂಬಿಸುವ ವಿನ್ಯಾಸಗಳನ್ನು ಸಮನ್ವಯಗೊಳಿಸಿ ಚಿತ್ರಕಲೆಗೆ ಹೊಸ ಆಯಾಮ ತಂದುಕೊಟ್ಟ ಪ್ರತಿಭೆಯಾಗಿ ಶೋಭಾ ಕರಣಿಕ್ ಅವರದ್ದು ವಿಶೇಷ ವ್ಯಕ್ತಿತ್ವವಾಗಿತ್ತು. ಮ್ಯೂರಲ್ ಪೇಂಟಿಂಗ್ನಲ್ಲಿ ಅವರಿಗಿದ್ದ ಪರಿಣತಿ, ಉತ್ತರ ಕನ್ನಡದ ಕಾವಿ ಕಲೆಯ ಕುರಿತಾದ ವಿಸ್ತೃತ ಜ್ಞಾನವು ಚಿತ್ರಕಲೆಯನ್ನು ಉನ್ನತೀಕರಿಸುವುದಕ್ಕೆ ಅವರಿಗೆ ನೆರವಾಗಿತ್ತು.
ಕಲೆಯ ಜೊತೆಗಿನ ಅನುಸಂಧಾನದ ಕ್ಷಣಗಳು ಅಪೂರ್ವ. ಒಂದು ನಿರ್ದಿಷ್ಟ ನಿರ್ಣಾಯಕ ಸಂದರ್ಭ, ಸಮಯದಲ್ಲಿ ಕಲೆಯೊಂದು ವ್ಯಕ್ತಿತ್ವವನ್ನು ಪ್ರಭಾವಿಸಿ ಸೃಜನಶೀಲತೆಯ ಹಸಿವನ್ನು ನೆಲೆಗೊಳಿಸುವುದಕ್ಕೆ ಪ್ರೇರಣೆಯಾಗುತ್ತದೆ. ಕಲೆಯ ಪ್ರಭಾವ ಎರಡು ಬಗೆಯದ್ದು. ಸಹೃದಯರನ್ನು ತನ್ನ ಕಲಾತ್ಮಕ ಮಾದರಿಗಳಿಂದ ಸೆಳೆದು ಅವರೊಳಗೆ ವಿಶೇಷ ಅನುಭೂತಿ ಧಾರೆ ಎರೆಯುವಂಥದ್ದು ಒಂದು ಬಗೆಯಾದರೆ ಹೀಗೆ ಸೆಳೆದುಕೊಂಡು ಮತ್ತೆ ಮತ್ತೆ ಪ್ರಭಾವಿಸುತ್ತಾ ಸಹೃದಯರನ್ನೇ ಕಲಾವಿದರನ್ನಾಗಿಸುವ ಸಾಧ್ಯತೆ ಮತ್ತೊಂದು ತೆರನಾದದ್ದು.
ಈ ಕಾರಣಕ್ಕಾಗಿಯೇ ಕಲಾತ್ಮಕ ಸಂಭವನೀಯತೆಯು ಅನನ್ಯವೆನ್ನಿಸಿಕೊಂಡಿದೆ. ಇಂಥ ಅನನ್ಯತೆಯೊಂದಿಗೇ ಶೋಭಾ ಕರಣಿಕ್ ಗುರುತಿಸಿಕೊಂಡಿದ್ದರು. ಅವರು ಓದಿದ್ದು ತಾಂತ್ರಿಕ ವಿಜ್ಞಾನ. ಆದರೆ, ಅವರ ನಿಜದ ಪ್ರತಿಭೆ ಅಭಿವ್ಯಕ್ತವಾದದ್ದು ಚಿತ್ರಕಲೆಯ ಮೂಲಕ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪರಿಸರದಲ್ಲಿ ಬೆಳೆದ ಶೋಭಾ ಕರಣಿಕ್ ಮೊದಲಿನಿಂದಲೂ ದೇಶೀ ಕಲೆಯ ಕುರಿತು ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡು ಬಂದಿದ್ದರು. ಹೈಸ್ಕೂಲ್ ಓದುತ್ತಿರುವಾಗಲೇ ಕಾವಿಕಲೆಯ ವಿನ್ಯಾಸ ಅವರನ್ನು ಸೆಳೆದಿತ್ತು. ಇವುಗಳನ್ನು ಮತ್ತೆ ಮತ್ತೆ ನೋಡುತ್ತಾ ಹೋದಂತೆಲ್ಲಾ ಕಾವಿ ಕಲೆಯ ಕುರಿತ ಆಕರ್ಷಣೆ ಕಲಿಕೆಯ ಹಂಬಲವಾಗಿ ಮಾರ್ಪಟ್ಟಿತು. ಉತ್ತರ ಕನ್ನಡದ ಟೆಂಪಲ್ ರ್ಟ್ ಪ್ರಕಾರದ ಭಾಗವಾಗಿ ಕಾವಿ ಕಲೆಯನ್ನು ಪರಿಚಯಿಸುವ ದೃಷ್ಟಿಯಿಂದ ಅವರು ರಚಿಸಿದ್ದ ತರಹೇವಾರಿ ವಿನ್ಯಾಸಗಳು ವಿವಿಧ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮಗಳಲ್ಲಿ ಗಮನ ಸೆಳೆದಿದ್ದವು.
ಕಾವಿ ಕಲೆಯೂ ಸೇರಿದಂತೆ ನಮ್ಮ ಸಾಂಪ್ರದಾಯಿಕ ಕಲೆಗಳು ಈ ಹಿಂದಿನ ಕಾಲದ ತಲೆಮಾರನ್ನಷ್ಟೇ ಪ್ರಭಾವಿಸಿದ್ದಲ್ಲದೇ ನಂತರದ ಹೊಸ ಪೀಳಿಗೆಯನ್ನೂ ಆಕರ್ಷಿಸುವ ಗುಣ ಹೊಂದಿವೆ. ಮೂಲ ಅಂತಃಸತ್ವಕ್ಕೆ ಧಕ್ಕೆಯೊದಗದ ಹಾಗೆ ಹೊಸ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಈ ಸಾಂಪ್ರದಾಯಿಕ ಚಿತ್ರಕಲಾ ವಿನ್ಯಾಸಗಳನ್ನು ಮರುರೂಪಿಸಬಹುದು. ಹೊಸ ಕಾಲದಲ್ಲಿ ಅವುಗಳ ಮಹತ್ವವನ್ನು ಮನಗಾಣಿಸಬಹುದು ಎಂಬುದು ಅವರ ಆಶಯವಾಗಿತ್ತು.
ಕಲೆಯೊಂದು ಒಂದು ಕಾಲದಿಂದ ಮತ್ತೊಂದು ಕಾಲಕ್ಕೆ ದಾಟಿಕೊಳ್ಳುವಾಗ ಪಲ್ಲಟಗಳು ಸಹಜ. ಈ ಪಲ್ಲಟಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಇಂತಹ ಕಲೆಗಳಿಗೆ ಹೊಸಕಾಲದಲ್ಲೂ ಜೀವಂತಿಕೆಯನ್ನು ತಂದುಕೊಡುವ ಪ್ರಯತ್ನದ ಅಗತ್ಯವನ್ನು ಮನಗಾಣಿಸುವುದಕ್ಕಾಗಿಯೇ ಶೋಭಾ ಕರಣಿಕ್ ಅವರು ಚಿತ್ರಕಲಾ ರಚನೆಯ ವೈವಿಧ್ಯಮಯ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದರು.
ಅವರ ನಿಧನದಿಂದ ಈ ಪ್ರಯೋಗಶೀಲ ಹೆಜ್ಜೆಗಳು ನಿಂತಂತಾಗಿವೆ. ಆದರೆ, ಅವರು ಪರಂಪರೆ ಮತ್ತು ವರ್ತಮಾನವನ್ನು ಸಮನ್ವಯಗೊಳಿಸಿ ಸಾಬೀತುಪಡಿಸಿದ ಅಪೂರ್ವ ಚಿತ್ರಕಲಾ ಪ್ರಯೋಗಶೀಲತೆಯ ಜೀವಂತಿಕೆ ಹೊಸ ಪೀಳಿಗೆಗೆ ಸದಾ ಸ್ಫೂರ್ತಿಯ ಸೆಲೆಯಾಗಿರುತ್ತದೆ. ಅವರ ಹೆಸರಿನ ಇನಸ್ಟಾಗ್ರಾಂನಲ್ಲಿ ಕಾಣಿಸಿಕೊಂಡಿರುವ ಚಿತ್ರಗಳು ಇಂಥ ಸ್ಫೂರ್ತಿಯ ಪ್ರಭೆಯನ್ನು ದಾಟಿಸುತ್ತಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಅಂತರಂಗ
ಹೊಸತನದ ಹೊಸ್ತಿಲಲ್ಲಿ..!
- ಮೀನಾಕ್ಷಿ .ಬಿ, ಎಂ. ಎ ವಿದ್ಯಾರ್ಥಿನಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ
ಹೊಸವರ್ಷ ವೆಂಬುದು ಪ್ರತಿಯೊಬ್ಬರ ಬಾಳಲ್ಲಿ ವರ್ಷಕ್ಕೊಮ್ಮೆ ಬರುವ ಹೊಸದಿನಗಳ ಆಗಮನ ಯಾಕೆಂದರೆ ಹೊಸತನವನ್ನು ತರುತ್ತಾ ಇರುವ ಹೊಸವರ್ಷ ಕೂಡ ಒಂದು ಜೀವನದ ಭರವಸೆ, ನಿರೀಕ್ಷೆ ಕನಸುಗಳ ಬಂಡಿಯ ಮೇಲೆ ಸಾಗುವ ಪ್ರಯಾಣ ನಮ್ಮ ಜೀವನ.
ವ್ಯಕ್ತಿಯ ನಂಬಿಕೆಯ ಆಧಾರದ ಮೇಲೆಯೇ ಜೀವನ ಸಾಗುಸುತ್ತಿರುವುದು.ಯಾಕೆಂದರೆ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿಯೂ ಕೂಡ ಕಷ್ಟ -ಸುಖ ದುಃಖದ ಸಂಗತಿಗಳು ಇದ್ದೆ ಇರುತ್ತದೆ. ಕೆಲವೊಂದು ಬಾರಿ ಹತಾಶೆಯನ್ನು ಹೊಂದಿ ಜೀವನದಲ್ಲಿ ಜಿಗುಪ್ಸೆ ಒಂದು ಕೆಟ್ಟ ನಿರ್ಧಾರಕ್ಕೆ ಮನಸ್ಸು ದಾರಿ ಮಾಡಿಕೊಡುತ್ತದೆ. ಹಾಗೆಯೇ ಕಷ್ಟ ಇದ್ದಲ್ಲಿ ಸುಖವಿರುವುದುಂಟು ಅನ್ನುವ ಹಾಗೇ ಇವತ್ತಲ್ಲ ನಾಳೆ ಒಳ್ಳೆಯ ದಿನಗಳು ನಮ್ಮ ಜೀವನದಲ್ಲಿ ಬರಬಹುದೆಂಬ ಭರವಸೆ,ಆತ್ಮವಿಶ್ವಾಸವನ್ನು ಇಟ್ಟುಕೊಂಡು ಜೀವನ ನಡೆಸುತ್ತಲೇ ಇದ್ದೇವೆ.
ಈ ವರ್ಷ ಒಳ್ಳೆಯದಾಗಿಲ್ಲ ಅಂದರೆ ಏನು ಮುಂದಿನ ವರ್ಷ ಆದರೂ ನನ್ನ ಬದುಕು ಬದಲಾಗಬಹುದು ಎಂಬ ಹೊಸತನವನ್ನು ನಮ್ಮಲ್ಲಿ ಭರವಸೆ,ನಂಬಿಕೆಯ ಬೇರಿನೊಂದಿಗೆ ಬೆರೆಸಿಕೊಂಡು ಬದುಕಬೇಕು.ನಾಳೆಯ ದಿನಗಳ ಮೇಲಿನ ಅನಿರೀಕ್ಷಿತ ತೀರಿವಿನಿಂದಾಗುವ ಬದುಕಿನಲ್ಲಾಗುವ ಬದಲಾವಣೆ ಹೊಸತನದ ಚಾಪನ್ನು ಮೂಡಿಸುತ್ತದೆ.
ಎಂಥ ಹತಾಶ ಮನಸ್ಥಿತಿಯವರಲ್ಲೂ ಹೊಸವರ್ಷ ಭರವಸೆಯ ಅಭಯ ಹಸ್ತವನ್ನು ಚಾಚುತ್ತದೆ. ಅದೆಲ್ಲಿಂದಲೇ ಆತ್ಮ ವಿಶ್ವಾಸದ ಬೆಳಕಿನ ಕಿಡಿಯೊಂದು ಕಾಣಿಸಿಕೊಳ್ಳುತ್ತದೆ.
ಹೊಸವರ್ಷವೆಂಬುದು ಕೇವಲ ಸಂಭ್ರಮದ ಕಾಲ ಮಾತ್ರವಲ್ಲ. ಕಳೆದ ದಿನಗಳತ್ತ ಹಿಂತಿರುಗಿ ನೋಡುವ ಸಮಯ ಕೂಡ ಹಿಂದಿನ ದಿನಗಳ ಪುಟಗಳನ್ನು ತೆಗೆದು ನೋಡಿದರೆ. ಉತ್ಸಾಹದ ಗಳಿಗೆಗಳು ಮುಂದಿನ ಕೆಲಸಗಳಿಗೆ ಚೈತನ್ಯ, ಉತ್ಸಾಹ ನೀಡಬಲ್ಲದು.ನಮ್ಮ ದಿಕ್ಕಿಲ್ಲದ ದಾರಿಗೆ ಖಚಿತ ದಿಕ್ಕು ದಾರಿಯನ್ನು ತೋರಬಲ್ಲದು.
ಜೀವನದ ಪ್ರಯಾಣಕ್ಕೆ ಒಂದು ನಿಲ್ದಾಣವಾಗಿದೆ. ನಾವು ಕಾಣುವ ಕನಸಗಳು ಕನಸಾಗಿಯೇ ಉಳಿದಿದೆ ಯಾಕೆಂದರೆ ನಮ್ಮಲ್ಲಿನ ಬೇಜವಾಬ್ದಾರಿ, ನಿರ್ಲಕ್ಷತನ ಆಮೇಲೆ ಮಾಡಿದರೆ ಆಯ್ತು ಅನ್ನೋ ಮನೋಭಾವನೆ ಯಾವುದರ ಬಗ್ಗೆಯೂ ಆಸಕ್ತಿ ಕೊಡದೆ ಇರೋದು ಎಲ್ಲವು ನಮ್ಮ ಕನಸಿನ ಜೀವನ ರೂಪಿಸಿಕೊಳ್ಳುವಲ್ಲಿ ಸಫಲರಾಗದೆ ಉಳಿಯಲು ಕಾರಣ.
ಮೊದಲು ಆತ್ಮವಿಶ್ವಾಸ ಬೇಕು ನಾನು ಈ ಕೆಲಸವನ್ನು ಮಾಡುವೆ ಎಂಬ ಒಂದು ನಿರ್ಧಿಷ್ಟ ಗುರಿ ಇರಬೇಕು ಅಂಗಿದ್ರೆ ಅಷ್ಟೇ ಜೀವನದ ಪಯಣದ ಹಾದಿಯಲ್ಲಿ ಯಶಸ್ಸನ್ನು ಕಾಣಲು ಸಾಧ್ಯ ಇಲ್ಲವಾದಲ್ಲಿ ಸೋಲನ್ನು ಅನುಭವಿಸುವ ಪರಿಸ್ಥಿತಿ ಎದುರಾಗುತ್ತದೆ. ಮುಂದಿನ ದಿನಗಳ ಆಗಮನದೊಂದಿಗೆ ನಾವು ಕಂಡ ಕನಸನ್ನು ಈಡೇರಿಸಿಕೊಳ್ಳುವ ಸತತ ಪ್ರಯತ್ನದೊಂದಿಗೆ ಬರುವ ದಿನವನ್ನು ಸ್ವಾಗತಿಸಿಕೊಳ್ಳೋಣ.
ಎಲ್ಲರ ಬಾಳಲಿ ಹರುಷ ,ಸಂತೋಷ ಮನೆಮಾಡಲಿ ಎಂದು ಆಶಿಸುತ್ತಾ ಎಲ್ಲರಿಗೂ ಹೊಸವರ್ಷದ ಶುಭಾಶಯಗಳು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಅಂತರಂಗ
ಕಾಮರೂಪದ ಪ್ರಭಾಕರ
- ಪ್ರೊ.ರಹಮತ್ ತರೀಕೆರೆ
ನಾನು ಕೋಲಾರಕ್ಕೆ ಹೋದಾಗೆಲ್ಲ ಎರಡು ಜಾಗಗಳಿಗೆ ತಪ್ಪದೆ ಭೇಟಿ ಕೊಡುತ್ತೇನೆ. ಒಂದು-ಕೆ.ರಾಮಯ್ಯ ಮತ್ತವರ ಸಂಗಾತಿಗಳು ಸೇರಿ ತೇರುಹಳ್ಳಿ ಬೆಟ್ಟದ ಮೇಲೆ ಕಟ್ಟಿರುವ `ಆದಿಮ’ಕ್ಕೆ; ಇನ್ನೊಂದು-`ಕಾಮರೂಪಿ’ ಎಂಬ ಹೆಸರಲ್ಲಿ ಬರೆಯುತ್ತಿದ್ದ ಕನ್ನಡ ಲೇಖಕ ಡಾ. ಎಂ.ಎಸ್. ಪ್ರಭಾಕರ ಅವರಿರುವ ಕಠಾರಿಪಾಳ್ಯದ ಮನೆಗೆ. 50ರ ದಶಕದ ಕೊನೆಯಲ್ಲಿ ಕರ್ನಾಟಕ ಬಿಟ್ಟುಹೋದ ಪ್ರಭಾಕರ, ‘ಹಿಂದೂ’ ಪತ್ರಿಕೆಯ ವರದಿಗಾರರಾಗಿ ಆಫ್ರಿಕಾ ಅಮೇರಿಕ ಬಾಂಗ್ಲಾದೇಶ ಈಶಾನ್ಯ ಭಾರತವನ್ನೆಲ್ಲ ಅಲೆದಾಡಿ, ಕಡೆಗೆ ಕಾಮರೂಪದಲ್ಲಿ (ಅಸ್ಸಾಮಿನ ಪುರಾತನ ಹೆಸರಿದು) ನೆಲೆಸಿಬಿಟ್ಟರು.
`ಕಾಮರೂಪ’ ಶಬ್ದಕ್ಕೆ ಬಯಸಿದ ರೂಪಧಾರಣೆ ಮಾಡುವ ಮಾಯಾವಿ ವಿದ್ಯೆ ಎಂಬರ್ಥವೂ ಇದೆ. ಎಂಬತ್ತರ ಪ್ರಾಯದಲ್ಲಿ ಕರ್ನಾಟಕಕ್ಕೆ ಮರಳಿ ಬಂದಿರುವ ಪ್ರಭಾಕರ ಅವರು, ತಾವು ಹುಟ್ಟಿಬೆಳೆದ ಮನೆಯಲ್ಲಿ ಬಿಡಾರ ಹೂಡಿದ್ದಾರೆ. ಹಿರೀಕರು ಕಟ್ಟಿದ ದೊಡ್ಡಮನೆ. ಮನೆಯೊಳಗೊಂದೇ ಜೀವ; ಮನೆ ತುಂಬ ಪುಸ್ತಕದ ರಾಶಿ (ಹೆಚ್ಚಿನವು ಇಂಗ್ಲೀಶ್ ಬಂಗಾಳಿ ಅಸ್ಸಾಮಿ). ನಟ್ಟನಡುವಿರುವ ಹಾಲಿನ ಮೂಲೆಯಲ್ಲಿ ಬೀದಿಗೆ ಬೆನ್ನುಕೊಟ್ಟಂತೆ ಕೂತು, ಲ್ಯಾಪ್ಟಾಪಿನಲ್ಲಿ ಬರೆಯುತ್ತ, ವೆಬ್ಸೈಟುಗಳನ್ನು ಜಾಲಾಡುತ್ತ, ಬ್ಲಾಗುಗಳನ್ನೋದುತ್ತ ಪ್ರಭಾಕರ ಕುಳಿತಿರುತ್ತಾರೆ.
ಅವರ ಮನಗೆ ಹೋದಾಗಲೆಲ್ಲ ನನಗೆ ರಾಗಿಮುದ್ದೆ ಸೊಪ್ಪಿನ ಸಾರಿನ ಊಟ ಸಿಗುತ್ತದೆ. ಅವರು ಉಣ್ಣುವುದೊಂದು ಅಪೂರ್ವ ದೃಶ್ಯ. ತಣಿಗೆಯ ನಡುವೆ ಹದವಾಗಿ ಬೆಂದು ಕಂಪು ಬೀರುವ ಗೋಂದಿನಂತಹ ಕೆಂಗಪ್ಪು ಬಣ್ಣದ ಬಿಸಿಮುದ್ದೆಯನ್ನಿಟ್ಟು, ಅದರ ತಲೆಯ ಮೇಲೆ ಶಿಖರವನ್ನು ಹಿಮವು ಅಲಂಕರಿಸುವಂತೆ ಬೆಣ್ಣೆಯ ಚೂರನ್ನಿಡುತ್ತಾರೆ; ಬೆಣ್ಣೆಯು ಮುದ್ದೆ ಕಾವಿಗೆ ಕರಗಿ ಇಡೀ ಚೆಂಡನ್ನು ಆವರಿಸಿ ಅಭಿಷೇಕ ಮಾಡಿಸಿಕೊಂಡ ಮೂರುತಿಯಂತೆ ಥಳಥಳ ಹೊಳೆಯುತ್ತದೆ. ಆಗ ಘಮಿಸುವ ಮುದ್ದೆಯನ್ನು ಚೆನ್ನಾಗಿ ಮಿದ್ದು, ಒಂದು ಬದಿಯಿಂದ ಇಷ್ಟಿಷ್ಟೇ ಮುರಿದು ತುತ್ತು ಮಾಡಿ, ಸೊಪ್ಪಿನ ಗಟ್ಟಿಸಾರಲ್ಲಿ ಹೊರಳಾಡಿಸಿ ಗುಕ್ಕನೆ ನುಂಗಿ ಕಣ್ಮುಚ್ಚಿ ಕೊಳ್ಳುತ್ತಾರೆ. ತರುವಾಯ ಶ್ರೀಯುತರು ಜ್ಞಾನೋದಯವಾದ ಸಿದ್ಧನಂತೆ ಅವರ ಮುಖದಲ್ಲಿ ಪರಮಾನಂದದ ಒಂದು ಕಳೆ ಆವಿರ್ಭವಿಸುತ್ತದೆ. ಇದನ್ನೆಲ್ಲ ಕಾಣುವಾಗ, ಲೋಕವನ್ನೆಲ್ಲ ಸುತ್ತಾಡಿರುವ ಇವರು ಕೋಲಾರಕ್ಕೆ ಮುದ್ದೆಸುಖಕ್ಕಾಗಿಯೆ ಬಂದರೇನೊ ಎಂದು ಶಂಕೆ ಬರುತ್ತದೆ. ಪ್ರಭಾಕರ ಅವರಿಗೆ ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಅನೇಕ ದೂರುಗಳಿವೆ. ಅವುಗಳಲ್ಲಿ ಆಹಾರ ತಯಾರಿಕೆ ಮತ್ತು ಸೇವನೆ ಕುರಿತು ಅದರಲ್ಲಿ ವಿವರಗಳೇ ಇಲ್ಲ ಎಂಬುದೂ ಒಂದು.
ಕನ್ನಡದ ಅತಿಹಿರಿಯ ಮತ್ತು ಹೆಚ್ಚು ಬರೆಯದ ಲೇಖಕರಲ್ಲಿ ಪ್ರಭಾಕರ ಅವರೂ ಒಬ್ಬರು. ನಾನು ಅವರ ‘ಕುದುರೆಮೊಟ್ಟೆ’ ಕಾದಂಬರಿಯನ್ನೂ ‘ಒಂದು ತೊಲ ಪುನುಗು ಮತ್ತು ಇತರ ಕತೆಗಳು’ ಸಂಕಲನವನ್ನೂ ಓದಿದ್ದೆ. ಇವುಗಳಲ್ಲಿ ‘ಕುದುರೆ ಮೊಟ್ಟೆ’ ಈಗಲೂ ಪ್ರಿಯವಾದ ಪುಸ್ತಕ. ಅದರಲ್ಲಿರುವ ಕೆಲವು ಪಾತ್ರಗಳು ಕೊಂಚ ವಿಕ್ಷಿಪ್ತವಾಗಿವೆ; ಅಲ್ಲಿನ ಬಾಳಿನ ಸನ್ನಿವೇಶಗಳೂ ಅನಿರೀಕ್ಷಿತವಾಗಿವೆ. ಆದರೆ ಎಲ್ಲಿಯೂ ಹುಸಿ ಅನಿಸದಂತೆ, ಒಂದೇ ಶಬ್ದ ಅಪವ್ಯಯವಾಗದಂತೆ ಅದನ್ನು ಬರೆಯಲಾಗಿದೆ. ಪಾತ್ರಗಳನ್ನು ತಮ್ಮ ಸಿದ್ಧಾಂತಕ್ಕೆ ತಕ್ಕಂತೆ ಮಣಿಸಿ ಕೈಗೊಂಬೆಯಂತೆ ಆಡಿಸುತ್ತ, ಕೆಲವನ್ನು ಮುದ್ದಾಮಾಗಿ ದುರುಳಗೊಳಿಸಿ ಕಲೆಯ ಜಾಣಮುಸುಕಿನಲ್ಲಿ ಅಡಗಿಸುತ್ತ, ಕೆಲವು ಕಾದಂಬರಿಗಳು ಕನ್ನಡದಲ್ಲಿ ಪ್ರಕಟವಾಗುತ್ತಿವೆ. ಇಂತಹ ಹೊತ್ತಲ್ಲಿ ಅರ್ಧ ಶತಮಾನದ ಹಿಂದೆ ಪ್ರಕಟವಾದ ಈ ಕಾದಂಬರಿ, ಬಾಳನ್ನು ಕುರಿತು ತೋರುವ ಕಕ್ಕುಲಾತಿ ಕಂಡು ಖುಶಿಯಾಗುತ್ತದೆ. ಕತೆಗಾರರಿಗೆ ತಾವು ಸೃಷ್ಟಿಸುವ ಕೆಲವು ಪಾತ್ರಗಳ ಮೇಲೆ ಕೊಂಚ ಭಾವ ಪಕ್ಷಪಾತವಿರುತ್ತದೆ. ಆದರೆ ತಾವು ಸೃಜಿಸುವ ಎಲ್ಲ ಪಾತ್ರಗಳನ್ನು ತಾಯಿಯಂತೆ ನೋಡುವುದು ಬರೆಹದ ನೈತಿಕತೆ. ಈ ಸಂಗತಿ ಕುವೆಂಪು ಮತ್ತು ಟಾಲ್ ಸ್ಟಾಯ್ ಕಾದಂಬರಿ ಓದಿದವರಿಗೆ ಗೊತ್ತಿದೆ.
ಕಾಮವನ್ನು ಇಟ್ಟುಕೊಂಡು ಜೀವನದ ಸತ್ಯಗಳನ್ನು ಶೋಧಿಸುವ ವಿಷಯದಲ್ಲಿ ಕಾಮರೂಪಿಯವರು, ಒಬ್ಬ ಟಿಪಿಕಲ್ ನವ್ಯಲೇಖಕರೇ. ಆದರೆ ನವ್ಯದ ಕೆಲವು ಲೇಖಕರಲ್ಲಿ ಕಾಣುವಂತೆ, ಅದಕ್ಕವರು ಅನಗತ್ಯ ಪ್ರಾಮುಖ್ಯ ಕೊಡುವುದಿಲ್ಲ. ಅದನ್ನು ಚಪ್ಪರಿಸುವುದಿಲ್ಲ. ವೈಭವೀಕರಿಸುವುದಿಲ್ಲ. ಬದಲಿಗೆ, ಮನುಷ್ಯರಾದವರು ಜೀವನದ ಇಕ್ಕಟ್ಟುಗಳಲ್ಲಿ ಸಿಲುಕಿ ಅನಿವಾರ್ಯವಾಗಿ ವರ್ತಿಸುವ ಪರಿಯನ್ನು ತಣ್ಣಗೆ ವ್ಯಂಗ್ಯವಾಗಿ ಚಿತ್ರಿಸುತ್ತಾ ಹೋಗುತ್ತಾರೆ. ಸತ್ಯಕ್ಕಿರುವ ಹಲವು ಮುಖಗಳನ್ನು ಹಿಡಿಯುವಂತಹ ಕುರುಸೋವಾನ ‘ರಶೋಮನ್’ ಸಿನಿಮಾ ನೆನಪಿಸುವ ಈ ಕಾದಂಬರಿ, ಮತ್ತೆಮತ್ತೆ ಓದಬೇಕು ಎನಿಸುವಷ್ಟು ತಾಜಾ ಆಗಿದೆ. ‘ಉಪಪತ್ತಿಯೋಗ’ ಎಂಬುದನ್ನು ಬಿಟ್ಟರೆ, ಉಳಿದಂತೆ ವ್ಯಕ್ತಿವಾದವನ್ನು ಅತಿಯಾಗಿ ಬಿಂಬಿಸುವ ತಂತ್ರದ ಬಿಗಿತದಲ್ಲಿರುವ ಅವರ ಕತೆಗಳು ಅಷ್ಟು ಆಪ್ತವೆನಿಸಿಲ್ಲ.
ನನಗೆ ಪ್ರಭಾಕರ್ ಕುರಿತು ಆಸಕ್ತಿ ಮೂಡಿಸಿದವರು ಮಾರ್ಕ್ಸ್ವಾದಿ ಚಿಂತಕ ಕೆ.ರಾಘವೇಂದ್ರರಾವ್ ಅವರು. ಅಮೆರಿಕೆಯ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಿದ್ದ ಎ.ಕೆ.ರಾಮಾನುಜನರ ಹೊಂದಾಣಿಕೆಯ ಗುಣವನ್ನು ಕಟುವಾಗಿ ವಿಮರ್ಶಿಸುತ್ತ, ಅಲ್ಲಿನ ಶೈಕ್ಷಣಿಕ ಕ್ಷೇತ್ರದಲ್ಲಿರುವ ಬಿಳಿಯರ ಯಜಮಾನಿಕೆಗೆ ಬಾಗದೆ ಹೊರಬಂದ ಪ್ರಭಾಕರ ಅವರ ದಿಟ್ಟ ಸ್ವಭಾವವನ್ನು ಅವರು ತಮ್ಮ ಸಂದರ್ಶನದಲ್ಲಿ ಪ್ರಸ್ತಾಪಿಸಿದ್ದರು. ಪ್ರಭಾಕರ ಅವರನ್ನು ಭೇಟಿಯಾಗಬೇಕು ಎಂದು ಅನಿಸುತ್ತಿತ್ತು. ಅದರಲ್ಲೂ ಭಾರತದ ಶಾಕ್ತಪೀಠಗಳಲ್ಲಿ ಮುಖ್ಯವಾಗಿರುವ ಅಸ್ಸಾಮಿನ ಕಾಮಾಖ್ಯಕ್ಕೆ ಹೋಗಲು ಯತ್ನಿಸುತ್ತಿದ್ದ ನಾನು, ಅಲ್ಲೇ ಸಮೀಪದ ಗೌಹಾತಿಯಲ್ಲಿರುವ ಅವರನ್ನು ಕಾಣಲು ಹವಣಿಕೆ ಮಾಡಿಕೊಂಡಿದ್ದೆ. ಆದರೆ ಸಾರ್ವಜನಿಕ ವ್ಯಕ್ತಿಯಾಗಲು ನಿರಾಕರಿಸಿ ಅಜ್ಞಾತವಾಗಿಯೇ ಬಾಳುವ ಅವರು ಸುಲಭವಾಗಿ ಸಿಗುತ್ತಿರಲಿಲ್ಲ.
ನನ್ನ ತವಕವನ್ನರಿತಿದ್ದ ಕೆ.ರಾಮಯ್ಯ, ‘ಪ್ರಭಾಕರ್ ಕರ್ನಾಟಕಕ್ಕೆ ಬಂದಿದ್ದಾರೆ. ಬನ್ನಿ’ ಎಂದು ಅವರ ಮನೆಗೆ ಕರೆದುಕೊಂಡು ಹೋದರು. ಮಧ್ಯಾಹ್ನದ ಸುಡುಹೊತ್ತು. ಪ್ರಭಾಕರ ಪ್ರೀತಿಯಿಂದ ಬರಮಾಡಿಕೊಂಡು ನೊರೆ ತುಂಬಿದ ಒಗರು ಬೀರಿನ ಮಗ್ಗನ್ನು ಕೈಗೆ ಕೊಟ್ಟು, ಕಾಮಾಖ್ಯದ ಬಗ್ಗೆಯೂ ತಂತ್ರ ಪಂಥದ ಬಗ್ಗೆಯೂ ಇರುವ ಕೃತಿಗಳನ್ನು ತೋರಿಸುತ್ತ, ಗಂಟೆಗಟ್ಟಳೆ ಮಾತಾಡಿದರು. ಅರಿವಿನ ಕಿಡಿಗಳು ಹಾರುವ ಅದೊಂದು ವಿದ್ವತ್ಪೂರ್ಣ ಹರಟೆ.
ನಾನು ಅವರಲ್ಲಿ ಶಿಷ್ಯವೃತ್ತಿ ಸ್ವೀಕರಿಸಿ ಹಲವಾರು ಸಲ ಕೋಲಾರಕ್ಕೆ ಹೋಗಿ ಬಂದಿದ್ದೇನೆ. ಅವರ ಮಾತುಕತೆಗಳಲ್ಲಿ ನನಗೆ ಮುಖ್ಯವಾಗಿ ಕಂಡಿದ್ದು, ಜಾತ್ಯತೀತವಾದ ಮನಸ್ಸು; ಸಣ್ಣಪುಟ್ಟ ಸಂಗತಿಗಳ ಮೇಲೂ ಕಾಳಜಿಯಿಂದ ಸೂಕ್ಷ್ಮವಾಗಿ ಚಿಂತಿಸುವ ಮಾನವೀಯತೆ; ಗತಕಾಲದ ಬಗ್ಗೆ ಹಳಹಳಿಕೆಯಿಲ್ಲದೆ ವರ್ತಮಾನದ ಸಮಸ್ಯೆಗಳನ್ನು ಕುರಿತು ಚಿಂತಿಸುವ ಪ್ರಖರವೂ ನಿಷ್ಠುರವೂ ಆದ ರಾಜಕೀಯ ಪ್ರಜ್ಞೆ. ಸಾರ್ವಜನಿಕ ಬದುಕಿನಲ್ಲಿ ಜಾತಿಪದ್ಧತಿ ಎಲ್ಲೆಮೀರಿ ನಿರತವಾಗಿರುವ ಕುರಿತ ಹೇವರಿಕೆ. ಹಿರಿಯ ಲೇಖಕರಲ್ಲಿ ಸಾಮಾನ್ಯವಾಗಿ ಎರಡು ಸ್ವಭಾವಗಳಿರುತ್ತವೆ. ಒಂದು- ಕಳೆದುಹೋದ ಕಾಲದ ಬಗ್ಗೆ ಭಾವುಕ ಮರುಕಳಿಕೆ. ಎರಡು-ವರ್ತಮಾನದ ಸಾಮಾಜಿಕ ರಾಜಕೀಯ ವೈರುಧ್ಯಗಳನ್ನು ಉದಾರವಾಗಿ ನೋಡುತ್ತ, ಚಿಂತನೆಯ ಮೊನಚನ್ನು ಕಳೆದುಕೊಳ್ಳುವುದು. ಆದರೆ ಆತ್ಮಕ್ಕೆ ಸದಾ ಬೆಂಕಿ ಹತ್ತಿಸಿಕೊಂಡಂತೆ ಉರಿಯುವ ಕೆಲವರಿದ್ದಾರೆ. ಕೋಚೆ, ಕುಸುಮಾಕರ ದೇವರಗೆಣ್ಣೂರ, ಎಂ.ಡಿ. ನಂಜುಂಡಸ್ವಾಮಿ, ನೀಲಗಂಗಯ್ಯ ಪೂಜಾರ, ಕೆ.ರಾಘವೇಂದ್ರರಾವ್, ಅಬ್ಬಿಗೇರಿ ವಿರೂಪಾಕ್ಷಪ್ಪ, ಸಾರಾ ಅಬೂಬಕರ್, ಕಾಮರೂಪಿ ಪ್ರಭಾಕರ-ಇವರೆಲ್ಲ ಇಂತಹವರು. ಈ ಹಿರಿಯರ ಜತೆ ಮಾತಾಡುವಾಗ ಇವರ ಹಠಮಾರಿತನ, ಜಗಳಗಂಟಿತನ, ಆದರ್ಶವಾದ, ನೈತಿಕ ಪ್ರಜ್ಞೆ ಹಾಗೂ ಭಿನ್ನಮತ ಇಷ್ಟವಾಗುತ್ತದೆ.
ಕರ್ನಾಟಕದಿಂದ ಬಹುಕಾಲ ದೂರವಿದ್ದ ಕಾರಣದಿಂದ ಏರ್ಪಟ್ಟಿರುವ ಅಪರಿಚಿತತೆಯಿಂದಲೊ ಅಥವಾ ಕರ್ನಾಟಕದ ಒಳಗೇ ಇದ್ದೂಇದ್ದೂ ನಮಗೆ ಕಾಣದಂತಾಗಿರುವ ವೈರುಧ್ಯಗಳು ‘ಹೊರಗಿನಿಂದ’ ಬಂದಿರುವ ಅವರಿಗೆ ಒಡೆದು ಕಾಣುತ್ತಿರುವುದರಿಂದಲೊ, ಪ್ರಭಾಕರ ಕರ್ನಾಟಕದ ಸಮಕಾಲೀನ ಸಾಂಸ್ಕೃತಿಕ ರಾಜಕಾರಣದ ವೈರುಧ್ಯಗಳ ಬಗ್ಗೆ ತೀಕ್ಷ್ಣವಾದ ಟಿಪ್ಪಣಿ ಮಾಡುತ್ತಿರುತ್ತಾರೆ; ಕನ್ನಡಿಗರ ಸ್ವಭಾವದಲ್ಲೇ ವ್ಯಕ್ತಿನಿಷ್ಠೆಗಾಗಿ ವಿಮರ್ಶೆಯ ನಿಷ್ಠುರತೆ ಬಿಟ್ಟುಕೊಡುವ, ಸಜ್ಜನಿಕೆಯ ಭಾಷೆಯಲ್ಲಿ ವಾಸ್ತವವನ್ನು ಅಡಗಿಸುವ ಪ್ರವೃತ್ತಿಯಿದೆ ಎಂದು ಹೇಳುತ್ತಿರುತ್ತಾರೆ. ಸಂಘಟಕರೊಬ್ಬರು ಕಾರ್ಯಕ್ರಮವೊಂದಕ್ಕೆ ಕರೆಸಿಕೊಂಡು ಪರಿಚಯ ಭಾಷಣದಲ್ಲಿ ತಮ್ಮನ್ನು ಅತಿಯಾಗಿ ಹೊಗಳಿದ್ದನ್ನು ನೆನೆಯುತ್ತ ಅವರೊಮ್ಮೆ ಹೇಳಿದರು: “ಏನ್ ಸ್ವಾಮಿ ಕನ್ನಡಿಗರು? ಎಷ್ಟು ಉದಾರತೆ! ನನ್ನ ಬಗ್ಗೆ ಅವರಿಗೆ ಏನೂ ಗೊತ್ತಿಲ್ಲ. ನಾನು ಎಲ್ಲ ಸೇರಿದರೆ ನೂರೈವತ್ತು ಪುಟಗಳನ್ನೂ ಬರೆದಿಲ್ಲ. ಕನ್ನಡಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟಿಲ್ಲ. ಆದರೂ ವಾಚಾಮಗೋಚರ ಹೊಗಳಿಬಿಟ್ಟರು. ಕರ್ನಾಟಕದಲ್ಲಿ ಮಾತಿಗೆ ಬೆಲೆಯೇ ಇದ್ದಂತಿಲ್ಲ.’’
ಇದನ್ನು ಕೇಳುವಾಗ ಈಚೆಗೆ ಕಲ್ಕತ್ತಾದಲ್ಲಿ ನಾನು ಕಂಡ, ಹಿರಿಯ ಲೇಖಕ ರುದ್ರಪ್ರತಾಪ ಸೇನರ ಸನ್ಮಾನ ಕಾರ್ಯಕ್ರಮ ನೆನಪಾಯಿತು. ಸೇನರಿಗೆ 75ವರ್ಷ ತುಂಬಿದ ನೆಪದಲ್ಲಿ ಇರಿಸಿಕೊಂಡಿದ್ದ ಆ ಕಾರ್ಯಕ್ರಮ ಎಷ್ಟು ವಿಮರ್ಶಾತ್ಮಕವಾಗಿತ್ತು ಎಂದರೆ, ಅವರ ಶಿಷ್ಯರು ತಮ್ಮ ಗುರುವಿನ ಜತೆ ಕೋರ್ಟ್ಮಾರ್ಶಲ್ ನಡೆಸುವವರ ಹಾಗೆ ಪ್ರಶ್ನೆ ಕೇಳುತ್ತಿದ್ದರು. ಸೇನರು ಆ ಕಟುತರ ಪ್ರಶ್ನೆಗಳಿಗೆಲ್ಲ ಪ್ರಾಮಾಣಿಕವಾಗಿ ದ್ವಂದ್ವವಿಲ್ಲದೆ ಉತ್ತರಿಸುತ್ತಿದ್ದರು. ಹಿರಿಯರ ತಲೆಗೆ ಅಭಿನಂದನ ಗ್ರಂಥಗಳ ಸರಮಾಲೆಯನ್ನು ತಂದು ಕಟ್ಟಿ, ಎಗ್ಗಿಲದೆ ಹೊಗಳಿ ವೈಭವೀಕರಿಸುವ ಪದ್ಧತಿಯಿರುವ ಕರ್ನಾಟಕದಲ್ಲಿ, ಈ ಪರಿಯ ನಿಷ್ಠುರತೆ ಕಲ್ಪಿಸಿಕೊಳ್ಳುವುದೇ ಕಷ್ಟ.
ತೋರುಗಾಣಿಕೆಯನ್ನು ಸದಾ ನಿರಾಕರಿಸುವ ಪ್ರಭಾಕರ ಅವರಲ್ಲಿ, ಅವರ ಖಂಡಿತವಾದಿ ನಿಲುವಿಗೆ ಅಷ್ಟೊಂದು ತಾಳೆಯಾಗದ ಇನ್ನೊಂದು ಮುಖವಿದೆ. ಅದೆಂದರೆ, ಜೀವನಪ್ರೀತಿಯ ಸಂಕೇತದಂತಿರುವ ತಮಾಶೆ ಮತ್ತು ಪೋಲಿತನ. ಈ ತಮಾಶೆಯ ಗುಣ ಅದ್ಭುತ ನಾಟಕೀಯ ಶೈಲಿಯಾಗಿ ಅವರ ಕಥೆ ಕಾದಂಬರಿಗಳಲ್ಲೆಲ್ಲ ಆವರಿಸಿಕೊಂಡಿದೆ. ತಮಗೆ ಪಾಠ ಹೇಳಿದ ಗುರುಗಳ ವೈಯಕ್ತಿಕ ಬದುಕಿನಲ್ಲಿದ್ದ ಸನಾತನವಾದ ಮತ್ತು ತರಗತಿಗಳಲ್ಲಿ ಕನ್ನಡ ಬಳಸದ ಅವರ ಇಂಗ್ಲಿಷಿನ ವ್ಯಾಮೋಹ ಕುರಿತಂತೆ, ಅವರಲ್ಲಿ ಸ್ವಾರಸ್ಯಕರ ಮಾಹಿತಿಗಳಿವೆ. ಪ್ರಭಾಕರ ಅವರು ಆಪ್ತರ ಎದುರು ತಾವು ಬರೆದಿರುವ ಅಪ್ರಕಟಿತ ಪೋಲಿ ಪದ್ಯಗಳನ್ನು ವಾಚಿಸುವುದುಂಟು. ಬಹುಶಃ ಇದು ಅವರ ಗೆಳೆಯರಾಗಿದ್ದ ಎಚ್.ಎಸ್. ಬಿಳಿಗಿರಿಯವರ ಸಹವಾಸ ಫಲವಿರಬೇಕು.
ಒಂದೇ ವ್ಯಕ್ತಿತ್ವದಲ್ಲಿ ಒಟ್ಟಿಗೇ ಇರಲು ಕಷ್ಟವೆನಿಸಬಹುದಾದ ಇನ್ನೂ ಅನೇಕ ಸಂಗತಿಗಳು ಅವರಲ್ಲಿ ಸಹಜವಾಗಿ ನಿರಾಳವಾಗಿ ಇವೆ. ಉದಾ.ಗೆ, ಬಹುಭಾಷಿಕರಾದ ಅವರ ಮನೆಮಾತು ತಮಿಳುಗನ್ನಡ; ಬರವಣಿಗೆ ಕನ್ನಡ ಮತ್ತು ಇಂಗ್ಲೀಶಿನಲ್ಲಿ; ಸಂಸ್ಕೃತ ಅಸ್ಸಾಮಿ ಬಂಗಾಳಿ ಭಾಷೆಗಳಲ್ಲಿ ದೊಡ್ಡ ವಿದ್ವತ್ತು. (ಅವರ ಅಸ್ಸಾಮಿ ಬಂಗಾಳಿ ತಿಳಿವಳಿಕೆಯಿಂದ ಕನ್ನಡಕ್ಕೆ ಪ್ರಯೋಜನವಿನ್ನೂ ಆಗಿಲ್ಲ). ಪಂಪ ಅವರ ಇಷ್ಟದ ಕವಿ. ಮೂಲತಃ ಇಂಗ್ಲೀಶ್ ಸಾಹಿತ್ಯದ ವಿದ್ಯಾರ್ಥಿಯಾದರೂ ಸಾಹಿತ್ಯಕ್ಕಿಂತ ಹೆಚ್ಚಾಗಿ ಅಂತರಾಷ್ಟ್ರೀಯ ರಾಷ್ಟ್ರೀಯ ರಾಜಕಾರಣದ ಮೇಲೆ ಹೆಚ್ಚು ಬರೆವಣಿಗೆ. ಅದರಲ್ಲೂ ಈಶಾನ್ಯ ಭಾರತದ ರಾಜಕಾರಣ ಭಾಷೆ ಧರ್ಮ ಸಂಸ್ಕೃತಿ ಕುರಿತ ಅವರ ತಿಳಿವಳಿಕೆ ಅಪರೂಪದ್ದು. ಇವನ್ನೆಲ್ಲ ಒಟ್ಟಿಗೆ ಹೇಗೆ ಕಲ್ಪಿಸಿಕೊಳ್ಳುವುದು? ಪ್ರಭಾಕರ ತಮ್ಮ ಕಾದಂಬರಿಯ ಒಂದು ಪಾತ್ರದ ಹಾಗೇ ಬದುಕಿದ್ದಾರೆ.
ಅವರು ಈಚೆಗೆ ಮಾತಾಡುತ್ತ ಕೊಂಚ ದಣಿದ ದನಿಯಲ್ಲಿ “ಸ್ವಾಮಿ, ಕರ್ನಾಟಕ ನನಗೆ ಸಾಕಾಗಿದೆ. ಗೌಹಾಟಿಗೆ ಹೋಗಬೇಕು ಅನಿಸುತ್ತಿದೆ’ ಎಂದು ಗೊಣಗಿದರು. “ಹೋಗಿ. ಆದರೆ ಮತ್ತೆಬನ್ನಿ’’ ಎಂದೆ. ಅವರಲ್ಲಿ ಕೋಲಾರ-ಗೌಹಾತಿಗಳ ನಡುವೆ ವಿಚಿತ್ರವಾದ ಆಕರ್ಷಣೆ ವಿಕರ್ಷಣೆಯಿದೆ. ಇದು ಬಹುಕಾಲ ಬೇರೆಡೆ ಬೆಳೆದ ಮರ ತನ್ನ ಮೂಲನೆಲಕ್ಕೆ ಬಂದು ನಾಟಿಗೊಂಡರೆ ಬೇರೂರುವ ಕಷ್ಟ. ಮರಳಿ ಹುಟ್ಟಿದೂರಿಗೆ ಬರುವಿಕೆ ಬಾಲ್ಯದ ನೆನಪುಗಳನ್ನು ಎಚ್ಚರಿಸಿ ಸುಖ ಕೊಡುತ್ತದೆ; ಆದರೆ ಹೊಚ್ಚ ಹೊಸತೆೆನಿಸುವಷ್ಟು ಬದಲಾಗಿರುವ ಪರಿಸರವು, ಕಾಡುವ ಏಕಾಂಗಿತನವನ್ನೂ ತಂದಿಡುತ್ತದೆ. ಯಾರ ಮರುಕವನ್ನೂ ಬಯಸದೆ ಏಕಾಂತದಲ್ಲಿ ಘನತೆಯಿಂದ ಕೊನೆಯ ದಿನಗಳನ್ನು ಕಳೆಯ ಬಯಸುವ ಇಂತಹ ಹಠಮಾರಿ ಜೀವಗಳು, ಒಳಗೇ ಮೃದ್ವಂಗಿಗಳಾಗಿ ಆಪ್ತಸಂಗಾತಕ್ಕೆ ಹಾತೊರೆಯುತ್ತಿರುತ್ತವೆ.
ಆ ಸಂಗಾತದ ಸ್ವರೂಪ ಎಂತಹುದು ಎಂದು ಸ್ಪಷ್ಟವಾಗುವುದಿಲ್ಲ. ನಾನು ‘ಕಾಮರೂಪಕ್ಕೆ ಯಾವಾಗ ಹೋಗುತ್ತೀರಿ’ ಎಂದು ಕೇಳಿದೆ: ‘ಆದಿಮದ 50ನೇ ಬೆಳುದಿಂಗಳ ಕಾರ್ಯಕ್ರಮ ಮುಗಿಸಿಕೊಂಡು’ ಎಂದರು.
ಪ್ರತಿಯೊಬ್ಬರಿಗೂ ಬಾಳಿನಲ್ಲಿ ಬಹುರೂಪಧಾರಣೆ ಮಾಡಬೇಕಾದ ಒತ್ತಡಗಳು ಎದುರಾಗಬಹುದು. ಆದರೆ ಈ ರೂಪಧಾರಣೆಗೆ ಕಾರಣ, ನಮ್ಮ ಇಚ್ಛಾನಿಚ್ಛೆಗಳು ಮಾತ್ರವಲ್ಲ, ಬಾಳಿನ ಅನೂಹ್ಯ ಒತ್ತಡಗಳು ಸಹ. ಈ ಒತ್ತಡಗಳು ಬರೆಹ ಇಲ್ಲವೇ ಮಾತಿನ ವ್ಯಾಖ್ಯಾನಕ್ಕೆ ಕೆಲವೊಮ್ಮೆ ನಿಲುಕುವಂತೆ ಇರುವುದಿಲ್ಲ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ6 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ6 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ6 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ಕವಿತೆ | ನೆನಪು
-
ದಿನದ ಸುದ್ದಿ3 days ago
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
-
ದಿನದ ಸುದ್ದಿ2 days ago
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ