Connect with us

ನೆಲದನಿ

ಕೋರೆಗಾವ ವಿಜಯ : ದಲಿತ ಸ್ವಾಭಿಮಾನ ದಿನ

Published

on

  • ಡಾ.ಸಿದ್ರಾಮ ಕಾರಣಿಕ, ಧಾರವಾಡ, ಮೊ:9035343031

ಜನೇವರಿ 1…
ಇದು ದಲಿತ ಸ್ವಾಭಿಮಾನದ ದಿನ ! ದಲಿತರಾದವರೆಲ್ಲ ಮರೆಯದೇ ನೆನಪಿಡಬೇಕಾದ ದಿನ. ಇಡೀ ದೇಶದಲ್ಲಿಯೇ ವರ್ಣಧರ್ಮವನ್ನು ಪಾಲಿಸಿ, ದಲಿತರನ್ನು ನಿರಂತರವಾಗಿ ಶೋಷಣೆ ಮಾಡುತ್ತ, ಅವರ ಮೇಲೆ ದಿನನಿತ್ಯ ಅನ್ಯಾಯವೆಸಗುತ್ತ ಬಂದಿದ್ದ ಮಹಾರಾಷ್ಟ್ರದ ಪೇಶ್ವೆಗಳ ಸೊಕ್ಕಡಗಿಸಿ ಪೇಶ್ವಾಯಿ ಸಾಮ್ರಾಜ್ಯವನ್ನು ಇನ್ನಿಲ್ಲದಂತೆ ಮಾಡಿದ ಐತಿಹಾಸಿಕ ದಿನವಿದು. ಸುಮಾರು ನಲವತ್ತು ಸಾವಿರದಷ್ಟಿದ್ದ ಪೇಶ್ವೆ ಸೈನಿಕರನ್ನು ಕೇವಲ ಐದು ನೂರು ವೀರ ಯೋಧರು ಮಣ್ಣುಮುಕ್ಕಿಸಿದ ದಿನವಿದು.

ಹೌದು !
ಹಿಂದೂ ಧರ್ಮದ ಅನಾಚಾರಗಳನ್ನೆಲ್ಲ ದಲಿತರ ಮೇಲೆ ಹೇರಿ, ನಿರ್ದಯಿಯಾಗಿ ವರ್ತಿಸಿದ್ದ ಪೇಶ್ವೆಗಳಿಗೆ ಇಂಥದ್ದೊಂದು ಅಂತ್ಯ ತೋರಿಸುವ ಅವಶ್ಯಕತೆ ಇತ್ತು. ಅದನ್ನು ಸಾಧ್ಯ ಮಾಡಿ ತೋರಿಸಿದವರು ಬ್ರಿಟಿಷ್ ಸೇನೆಯಲ್ಲಿದ್ದ ದಲಿತ ಯೋಧರು.

ಪುಣೆ-ಅಹಮದಾನಗರ ಮಾರ್ಗದಲ್ಲಿ ಭೀಮಾನದಿಯ ತೀರದಲ್ಲಿ ಕೋರೆಗಾವ ಹೆಸರಿನ ಒಂದು ಸಣ್ಣ ಹಳ್ಳಿಯಿದೆ. ಹಳ್ಳಿ ಸಣ್ಣದಿದ್ದರೂ ಭೀಮಾ ತೀರದ ಆ ಹಳ್ಳಿಯಲ್ಲಿ ಅಡಗಿರುವ ಇತಿಹಾಸ ತುಂಬ ದೊಡ್ಡದು. ಅಷ್ಟೇ ಅಲ್ಲ ಅದು ಸ್ಫೂರ್ತಿದಾಯಕವಾದುದ್ದೂ ಹೌದು ! ಅದೊಂದು ನಮ್ಮನ್ನು ಹುರಿದುಂಬಿಸುವ ಮತ್ತು ಅಭಿಮಾನ ಪಡುವಂತೆ ಮಾಡುವ ಇತಿಹಾಸವೇ ಸರಿ.

ದಲಿತ ವರ್ಗದಿಂದ ಬಂದವರು ಯಾವುದೇ ಕೆಲಸದಲ್ಲಿದ್ದರೂ ನಿಷ್ಠೆಗೆ ಹೆಸರಾದವರು. ವರ್ಣವ್ಯವಸ್ಥೆಯಿಂದ ವ್ಯತಿತರಾಗಿ ನಲುಗಿ ಹೋದ ಅವರು, ಸೇನೆ ಸೇರಿ ಸಾಧಿಸಿದ ಸಿದ್ಧಿಗಳು ಒಂದೆರಡರಲ್ಲ. ಅವುಗಳನ್ನು ಒಂದೊಂದಾಗಿ ಮೆಲುಕು ಹಾಕಿದಾಗ ಮುಚ್ಚಿಟ್ಟ ಅಥವಾ ಮರೆತು ಹೋದ ಇತಿಹಾಸದ ದೊಡ್ಡದೊಂದು ಅಧ್ಯಾಯ ತೆರೆದುಕೊಳ್ಳುತ್ತದೆ.

ಅಸಹ್ಯವೆನ್ನಿಸುವಂತಹ ಅಸ್ಪøಶ್ಯತೆಯನ್ನು ಹೇರಿ ಪ್ರತಿಕ್ಷಣವೂ ಸಂಶಯಿತ ದೃಷ್ಟಿಯಿಂದ ನೋಡುವ ಪೇಶ್ವೆಗಳ ನಡೆಯನ್ನು ವಿರೋಧಿಸಿ, ಅದಕ್ಕೆ ತಕ್ಕ ಪ್ರತೀಕಾರ ತೀರಿಸಿಕೊಳ್ಳಲು ತಮಗಾದ ಅವಮಾನವನ್ನು ಹೊಟ್ಟೆಯೊಳಗಿಟ್ಟುಕೊಂಡಿದ್ದ ಮಹಾರರು ಸ್ವಾಭಿಮಾನದಿಂದ ಪುಟಿದೆದ್ದು ಗೆಲುವು ಸಾಧಿಸುವುದಕ್ಕೆ ಐತಿಹಾಸಿಕವಾದ ಕೋರೆಗಾವ ಕದನ ಅವಕಾಶ ನೀಡಿತು.

ಬ್ರಿಟಿಷರು ಅಸ್ಪøಶ್ಯತೆಯ ವಿಚಾರದಿಂದ ದೂರವುಳಿದು ಕೇವಲ ವೀರತನವನ್ನೇ ಮುಖ್ಯವಾಗಿಟ್ಟುಕೊಂಡು ತಮ್ಮ ಸೇನೆಯಲ್ಲಿ ಮಹಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರವೇಶ ನೀಡಿ, ಅವರಿಗೆ ಸೇನಾ ಶಿಕ್ಷಣ ನೀಡಿದರು. ಈ ಮಹಾರರ ಅಭೂತಪೂರ್ವ ಕಲಿತನದ ಕಾರಣದಿಂದಲೇ ಬ್ರಿಟಿಷರು ಕೋರೆಗಾವ ಕದನವನ್ನು ಗೆಲ್ಲಲು ಸಾಧ್ಯವಾಯಿತು. ಇತಿಹಾಸದ ಯಾವುದೇ ಪ್ರಸಂಗಗಳು ಮಹಾರರ ಈ ಕಲಿತನಕ್ಕೆ ಸರಿಸಾಟಿಯಾಗಿ ನಿಲ್ಲಲಾರವು.

ಕೋರೆಗಾವದಲ್ಲಿ ಅಖಂಡವಾಗಿ ನಿಂತಿರುವ ವಿಜಯಸ್ತಂಭ ಇಂದಿಗೂ ಆ ವೀರ ಮಹಾರರ ನೆನಪನ್ನು ಹಚ್ಚ ಹಸಿರಾಗಿಟ್ಟಿದೆ.ಢೋಂಗಿ, ಪಾಖಂಡಿ, ಸಮಯಸಾಧಕತನ ಮತ್ತು ದೇವರು-ಧರ್ಮದ ಹೆಸರಿನಲ್ಲಿ ಮಹಾರರ ಬದುಕನ್ನೇ ಹರಾಮ ಮಾಡಿದ, ಸೂತ್ರದ ಗೊಂಬೆಯನ್ನಾಗಿಸಿದ ಈ ಸಮಾಜಕ್ಕೆ ಮಹಾರ ರಕ್ತದಲ್ಲಿರುವ ಉಮೇದಿನ ಝಲಕ್ ತೋರಿಸುವ ಸಂಧಿ ಸಿಕ್ಕಿತೆಂಬ ಒಂದೇ ಒಂದು ಕಾರಣದಿಂದ ಕೋರೆಗಾವ ಕದನ ನಡೆಯಿತು.

ಮಹಾರರ ಸ್ವಾಭಿಮಾನವನ್ನೇ ಹಾಳು ಮಾಡಿದ ಪೇಶ್ವೆಗಳ ವಿರುದ್ಧ ಹೋರಾಟ ಮಾಡಿದ ಕೋರೆಗಾವ ಕದನದಲ್ಲಿ ಬ್ರಿಟಿಷ್ ಸರಕಾರ ಜಯ ಗಳಿಸಲು ಮಹಾರ ವೀರರ ಪರಾಕ್ರಮವೇ ಕಾರಣ ಎಂಬುದನ್ನು ಮರೆಯಬಾರದು.

ಯಾರಿಗೆ ಮನುಷ್ಯರೆಂದು ಬದುಕಲು ಅವಕಾಶವನ್ನೇ ನೀಡಿರಲಿಲ್ಲವೋ, ಯಾರಿಗೆ ಒಳ್ಳೆಯ ಬಟ್ಟೆ ಅಥವಾ ಪಾತ್ರೆ ಬಳಸುವುದಕ್ಕೆ ನಿರ್ಬಂಧವಿತ್ತೋ, ಯಾರಿಗೆ ಬೀದಿಗಳಲ್ಲಿ ಅಡ್ಡಾಡಲೂ ಅವಕಾಶವಿರಲಿಲ್ಲವೋ, ಯಾರ ವೀರತ್ವ ಮತ್ತು ಶೌರ್ಯತ್ವಕ್ಕೆ ಅವಕಾಶ ದೊರೆಯುತ್ತಿರಲಿಲ್ಲವೋ, ಯಾರಿಗೆ ಅವಮಾನಿತರಾಗಿ ಬದುಕುವ ಅನಿವಾರ್ಯತೆಯನ್ನು ಸೃಷ್ಟಿಸಲಾಗಿತ್ತೋ ಅವರು ಅಂಥವುಗಳನ್ನೆಲ್ಲ ವಿರೋಧಿಸುವುದಕ್ಕಾಗಿಯೇ ಬ್ರಿಟಿಷ್ ಸೇನೆಯನ್ನು ಸೇರಿ ತಮ್ಮ ಪರಾಕ್ರಮದ ಒಂದು ಝಲಕ್‍ನ್ನು ತೋರಿಸುವುದಕ್ಕೆ ಸಾಧ್ಯವಾಯಿತು.

ಶಿರೂರದಿಂದ 27 ಮೈಲುಗಳ ಸತತ ಕಾಲ್ನಡಿಗೆ ಮತ್ತು ಹಸಿವು-ನೀರಡಿಕೆಗಳಿಂದ ವ್ಯಾಕುಲಗೊಂಡಿದ್ದರೂ ಬೆರಳೆಣಿಕೆಯಷ್ಟಿದ್ದ ಸ್ವಾಭಿಮಾನಿ ಮಹಾರ ಯೋಧರು ತಮಗಿಂತ 40 ಪಟ್ಟು ಹೆಚ್ಚಿದ್ದ ಸರ್ವಶಸ್ತ್ರಸಜ್ಜಿತ ಪೇಶ್ವೆ ಸೇನೆಯನ್ನು 12 ಗಂಟೆಗಳ ಕಾಲದ ಕದನದಲ್ಲಿ ದಾರುಣವಾಗಿ ಪರಾಭವಗೊಳಿಸಿ ಪೇಶ್ವೆಯ ಶಾಹಿತನವನ್ನು ಧೂಳಿಪಟ ಮಾಡಿದರು.

ಈ ಕದನದಲ್ಲಿ ಮೊದಲನೇ ಹಾಗೂ ಎರಡನೇ ರೆಜಿಮೆಂಟಿನ ಒಟ್ಟು 50 ಯೋಧರು ವೀರ ಮರಣವನ್ನಪ್ಪಿದರು. 205 ಯೋಧರು ಗಾಯಾಳುಗಳಾದರು. ಹುತಾತ್ಮರಾದವರಲ್ಲಿ 22 ಮಹಾರರು, 16 ಮರಾಠರು, 8 ರಜಪೂತರು ಇಬ್ಬರು ಹಿಂದೂಗಳು ಹಾಗೂ ತಲಾ ಒಬ್ಬೊಬ್ಬ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಯೋಧರು ಸೇರಿದ್ದಾರೆ.

ಇದಕ್ಕೆಲ್ಲ ಪೂರ್ವಿಕರು ಸ್ಫೂರ್ತಿಯೂ ಕಾರಣವಾಗಿತ್ತು. ಹಿಂದೆ ಶಿವಾಜಿ ಕಾಲದಿಂದಲೂ ಮಹಾರರು ತಮ್ಮ ವೀರ-ಶೌರ್ಯ-ಸಾಹಸಗಳಿಂದ ಪ್ರಖ್ಯಾತರಗಿದ್ದಾರೆ. ಪಾಚಗಡದ ರಾಯನಾಕ, ಸುಭನಾಕ ವಾಘನಾಕ, ಮದನಾಕ ಏಸನಾಕ, ಧೋಂಡನಾಕ ಪುಂಡನಾಕ, ಮೊದಲು ಸಾತಾರಕ್ಕೆ ಸೇರಿದ್ದ ಸಾಂಗ್ಲಿ ಜಿಲ್ಲೆಯ ತಾಸಗಾವ ತಾಲೂಕಿನ ಕಾಳಂಬಿ ಗ್ರಾಮದ ಜಾಗೀರದಾರನಾಗಿದ್ದ ಶೂರ ಮೊದಲನೆ ಶಿದನಾಕ, ರಾಯನಾಕ ಮಹಾರ ಮೊದಲಾದವರ ಪಟ್ಟಿಯೇ ಇದೆ. ಇದರ ಮುಂದುವರಿಕೆಯಾಗಿ ಕೋರೆಗಾವ ಕದನ ಕಲಿಗಳಾದ ಮಹಾರ ಯೋಧರು ಕಾಣಿಸಿಕೊಳ್ಳುತ್ತಾರೆ.

1822 ರಲ್ಲಿ ಕೋರೆಗಾವದಲ್ಲಿ ಭೀಮಾ ನದಿಯ ದಂಡೆಯ ಮೇಲೆ ವಿಜಯಸ್ತಂಭವನ್ನು ನಿರ್ಮಿಸಲಾಗಿದೆ. ವಿಜಯಸ್ತಂಭದ ಮೇಲೆ “One of the proudest triumphs of the British Army in the East” ಎಂದು ಬರೆಯಲಾಗಿದೆ. ಅಂದರೆ ಭಾರತದ ಪೂರ್ವ ಪ್ರದೇಶಗಳಲ್ಲಿ ತನ್ನದಾಗಿಸಿಕೊಂಡಿರುವ ಹಲವಾರು ವಿಜಯಗಳಲ್ಲಿಯೇ ಈ ವಿಜಯವು ಬ್ರಿಟಿಷ ಸೇನೆ ಹೆಮ್ಮೆ ಪಡುವಂತಿದೆ ಎಂಬುದು ಅಲ್ಲಿ ಉಲ್ಲೇಖಿತವಾಗಿದೆ.

ಸ್ತಂಭದ ಬದಿಗಳಲ್ಲಿ ಇಂಗ್ಲೀಷ್ ಮತ್ತು ದೇವನಾಗರಿ ಲಿಪಿಯಲ್ಲಿ ಹುತಾತ್ಮರದ ವೀರಯೋಧರ ಹೆಸರುಗಳು ಕೆತ್ತಲ್ಪಟ್ಟಿವೆ. ಸೀನನಾಕ ಕಮಲನಾಕ, ರಾಮನಾಕ ಏಸನಾಕ, ಗೋಂದನಾಕ ಕೋಢೆನಾಕ, ರಾಮನಾಕ ಏಸನಾಕ, ಭಾಗನಾಕ ಹರನಾಕ, ಅಂಬರನಾಕ ಕಾನನಾಕ, ರೂಪನಾಕ ಲಖನಾಕ, ಗಣನಾಕ ಬಾಳನಾಕ, ಕಾಳನಾಕ ಕೋಂಡನಾಕ, ವಪನಾಕ ರಾಮನಾಕ, ವಿಟನಾಕ ಧಾಮನಾಕ, ರಾಜನಾಕ ಗಣನಾಕ, ವಪನಾಕ ಹರನಾಕ, ರೈನಾಕ ವಾನನಾಕ, ಗಣನಾಕ ಧರಮನಾಕ, ದೇವನಾಕ ಆನನಾಕ, ಗೋಪಾಳನಾಕ ಬಾಳನಾಕ, ಹರನಾಕ ಹೀರನಾಕ, ಜೇಠನಾಕ ದೈನಾಕ, ಗಣನಾಕ ಲಖನಾಕ ಎಂಬ ಅಲ್ಲಿಯ ಹೆಸರುಗಳೇ ನಮ್ಮ ಮೈ ಮನಗಳನ್ನು ರೋಮಾಂಚಿತಗೊಳಿಸುತ್ತವೆ. ಮರೆತು ಹೋದ ಇತಿಹಾಸವನ್ನು ಕಣ್ಮುಂದೆ ಕಟ್ಟಿ ಕೊಡುತ್ತವೆ.
ಬಹುಶಃ ಇಂತಹ ಮಹಾರ ವೀರರನ್ನು ಕಂಡೇ ಸಂತ ತುಕಾರಾಮರು, “ಮಹಾರಾಸಿ ಶಿವೆ / ಕೋಪೆ ತೋ ಬ್ರಾಹ್ಮಣ ನವ್ಹೆ/” ಎಂದು ತಮ್ಮ ಅಭಂಗದಲ್ಲಿ ಹೇಳಿದ್ದಾರೆ. ಅಂದರೆ ಬ್ರಾಹ್ಮಣರಿಗಿಂತ ಮಹಾರರು ಮಹಾಮಹಿಮರು ಎಂಬುದೇ ಇಲ್ಲಿಯ ಭಾವ.

ಡಾ. ಬಾಬಾಸಾಹೇಬ ಅಂಬೇಡ್ಕರರು ತಮ್ಮ ಅನುಯಾಯಿಗಳೊಂದಿಗೆ ಶಿರೂರ ಸಮೀಪದ ಭೀಮಾ-ಕೋರೆಗಾವಕ್ಕೆ ಬಂದು ವೀರ-ಪರಾಕ್ರಮದದ ಗತ ಸಾಹಸವನ್ನು ಸಾರುವ ವಿಜಯ ಸ್ತಂಭಕ್ಕೆ 1ನೇ ಜನೇವರಿ 1927 ರಂದು ಗೌರವ ವಂದನೆ ಸಲ್ಲಿಸಿದರು. ಆ ದಿನವನ್ನು ಕೋರೆಗಾವ ಕದನದ ಮಹಾರ ಕಲಿಗಳ ಸ್ಮøತಿದಿನವನ್ನಾಗಿ ಆಚರಿಸಿದರು. ಇದಕ್ಕಿಂತ ಮೊದಲು ಇತಿಹಾಸದಲ್ಲಿ ಮುಚ್ಚಿಹೋಗಿದ್ದ ಅಥವಾ ಮುಚ್ಚಿ ಹಾಕಲ್ಪಟ್ಟ ವಿಜಯ ಸ್ತಂಭದತ್ತ ಯಾರೂ ಹಾಯುತ್ತಿರಲಿಲ್ಲ ಕೂಡ.

ಆದರೆ ಯಾವಾಗ ಡಾ. ಬಾಬಾಸಾಹೇಬ ಅಂಬೇಡ್ಕರರು ಸ್ಮøತಿದಿನವನ್ನು ಆಚರಿಸಿದರೋ ಅಂದಿನಿಂದ ಇಂದಿನವರೆಗೆ ಪ್ರತಿವರ್ಷ ಜನೇವರಿ 1 ರಂದು ದೇಶದ ವಿವಿಧ ಭಾಗಗಳಿಂದ ಬರುವ ಅಸಂಖ್ಯಾತ ಜನ ಸಮೂಹ ಸ್ಮøತಿ ದಿನವನ್ನು ಆಚರಿಸುತ್ತ ಬರಲಾಗುತ್ತಿದೆ.. ಡಾ. ಬಾಬಾಸಾಹೇಬ ಅಂಬೇಡ್ಕರರು ಯಾವುದೇ ಮಹತ್ವದ ಕೆಲಸವಿದ್ದರೂ ಅದನ್ನೆಲ್ಲ ಬದಿಗೊತ್ತಿ ಜನೇವರಿ ಒಂದರಂದು ಕೋರೆಗಾವಕ್ಕೆ ಬಂದು ವಿಜಯ ಸ್ತಂಭಕ್ಕೆ ಗೌರವ ವಂದನೆ ಸಲ್ಲಿಸುತ್ತಿದ್ದರು.

ಹೀಗೆಲ್ಲ ಇದ್ದರೂ ಕೂಡ ಕೆಲವು ಸಮಯಸಾಧಕರು ಕೋರೆಗಾವ ಕದನದ ಬಗ್ಗೆ ಹೇಳುವುದೇನೆಂದರೆ `ಈ ಕದನ ನಮ್ಮದೇ ದೇಶದಲ್ಲಿಯ ನಮ್ಮದೇ ಬಂಧುಗಳ ವಿರುದ್ಧವಾಗಿತ್ತು ! ಆ ಕದನದ ಫಲವಾದರೂ ಏನು ?’ ಹೀಗೆ ಹೇಳುವವರಿಗೆ ಒಂದು ಸವಾಲನ್ನು ಈ ಸಂದರ್ಭದಲ್ಲಿ ಹಾಕಲೇಬೇಕೆನಿಸುತ್ತದೆ ; ಅಲ್ಲ ಸ್ವಾಮಿ, ತಮ್ಮ ಬಂಧುಗಳನ್ನು ಯಾರಾದರೂ ಗುಲಾಮರನ್ನಾಗಿ ಮಾಡಿಕೊಳ್ಳುತ್ತಾರೆಯೇ ? ತಮ್ಮ ಬಂಧುವಿನ ಹೆಣ್ಣುಮಗಳೊಬ್ಬಳ ಮಾನವನ್ನು ಕಳೆಯುತ್ತಾರೆಯೇ ? ತಮ್ಮ ಬಂಧುಗಳನ್ನು ಯಾರಾದರೂ ಅನ್ನ-ನೀರಿಗಾಗಿ ಚಡಪಡಿಸುವಂತೆ ಮಾಡುತ್ತಾರೆಯೇ ? ಸಾರ್ವಜನಿಕ ಜಾಗದಲ್ಲಿ ಅಡ್ಡಾಡಲು ನಿರ್ಬಂಧ ವಿಧಿಸಬಹುದೇ ? ತಮ್ಮ ಬಾಂಧವರನ್ನು ಯಾರಾದರೂ ಹೇಳಹೆಸರಿಲ್ಲದಂತೆ ನಾಶ ಮಾಡುವ ಕುತಂತ್ರ ಮಾಡಬಹುದೇ ? ತಾವೇ ಕೆಸರು ಎರಚಿ, ಅಪಹಾಸ್ಯ ಮಾಡಿ ನಗಬಹುದೇ ? ಈ ಪ್ರಕರಣಗಳು ನಡೆಯುತ್ತಲೇ ಇವೆ ಎಂದಾದರೆ ಅವರು ನಮ್ಮ ಬಂಧುಗಳು ಹೇಗಾಗುತ್ತಾರೆ ?

ಕೇವಲ ಬೆರಳೆಣಿಕೆಯಷ್ಟಿದ್ದ ಮಹಾರ ವೀರ ಯೋಧರು, ಪೇಶ್ವೆಗಳ ಬಲಾಢ್ಯ ಸೇನೆಯನ್ನು ಈ ಕೋರೆಗಾವ ಕದನದಲ್ಲಿ ಹೀನಾಯವಾಗಿ ಸೋಲಿಸಿದ್ದು ಸೋಜಿಗವಲ್ಲ. ಪೇಶ್ವೆಗಳಿಂದ ಉಂಟಾದ ಸಾಮಾಜಿಕ ಅನಿಷ್ಟ, ಅನ್ಯಾಯ ಮತ್ತು ಅಸ್ಪøಶ್ಯತೆಗಳಿಂದ ತಮಗಾದ ಶೋಷಣೆಗೆ ಪ್ರತಿಯಾಗಿ ಪ್ರತಿಕಾರ ಸಾಧಿಸಿದ ಈ ನಡೆ ಮಹಾರರ ಸ್ವಾಭಿಮಾನವನ್ನು ಎತ್ತಿ ಹಿಡಿಯುತ್ತದೆ. ಕೋರೆಗಾವ ಕದನದ ಗೆಲುವು ಎಂದರೆ ಅನ್ಯಾಯದ ವಿರುದ್ಧ ಪಡೆದ ಗೆಲುವೇ ಆಗಿದೆ.

ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರೂ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಿಸುತ್ತಾರೆ. “ಬ್ರಿಟಿಷರ ಪರವಾಗಿ ಮಹಾರ ಯೋಧರು ಯುದ್ಧ ಮಾಡಿದ್ದು ಅಭಿಮಾನ ಪಡುವ ಸಂಗತಿಯಲ್ಲದಿದ್ದರೂ ಮಹಾರ ಯೋಧರು ಬ್ರಿಟಿಷರ ಪರ ಯಾಕೆ ಹೋದರು ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಮೂಡುವುದು ಸಹಜವೇ ಆಗಿದೆ. ಮಹಾರರು ಮತ್ತೇನು ಮಾಡಲು ಸಾಧ್ಯವಿತ್ತು ? ಹಿಂದುಗಳೆನಿಸಿಕೊಂಡವರು ಅವರನ್ನು ಕೀಳು ಎಂದು ಪರಿಗಣಿಸಿ ನಾಯಿ-ನರಿಗಳಿಗಿಂತಲೂ ಕಡೆಯಾಗಿ ವರ್ತಿಸಿದಾಗ ಆ ಅವಮಾನವನ್ನು ಸಹಿಸಿಕೊಂಡು ಎಷ್ಟು ದಿನ ಬದುಕುವುದು ? ಸ್ವಾಭಿಮಾನದ ನೆಲೆಯಲ್ಲಿ ಮತ್ತು ಹೊಟ್ಟೆಗೆ ಹಿಟ್ಟು ದೊರಕಿಸಿಕೊಳ್ಳಲು ಅವರು ಅನಿವಾರ್ಯವಾಗಿ ಬ್ರಿಟಿಷರ ಸೇನೆ ಸೇರಿದರೆಂಬುದನ್ನು ಪ್ರತಿಯೊಬ್ಬರು ಲಕ್ಷ್ಯದಲ್ಲಿಡಬೇಕು” ಎಂಬ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಮಾತುಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು.

ಮಹಾರ ಯೋಧರು ಮುಂಚಿನಿಂದಲೂ ಅಂದರೆ ಶಿವಾಜಿಯ ಕಾಲದಿಂದಲೂ ಮರಾಠಾ ಸೇನೆಯಲ್ಲಿ ಪ್ರಾಮಾಣಿಕತೆಯಿಂದ, ಪರಾಕ್ರಮದಿಂದ ದುಡಿದವರು. ಆದರೆ ಎರಡನೇ ಬಾಜಿರಾವ ಗದ್ದುಗೆ ಏರಿದಾಗ ಅನುಭವಿಸಿದ ಜಾತಿಯತೆಯ ತಾರತಮ್ಯತೆ ದಲಿತರನ್ನು ಸಹಜವಾಗಿಯೇ ಕೆರಳಿಸಿತ್ತು. ಆ ಸಂದರ್ಭದಲ್ಲಿ ಅದನ್ನು ಹೇಳಲಾಗಿತ್ತು ಕೂಡ.

ಎರಡನೇ ಬಾಜಿರಾವನ ಬದಲಿಗೆ ಬೇರೆಯವರು ಯಾರಾದರೂ ಸಮರ್ಥರು ಪೇಶ್ವೆಗಳಾದರೆ ಮಾತ್ರ ತಾವು ತಮ್ಮ ತಾಯ್ನೆಲವನ್ನು ಪ್ರಾಣವನ್ನೇ ಬಲಿ ಕೊಟ್ಟಾದರೂ ಕೂಡ ಕಾಪಾಡಲು ಸಿದ್ಧವಿರುವುದಾಗಿ ಪರಾಕ್ರಮಿ ಶಿದನಾಕ ಮನವಿ ಮೂಲಕ ಪ್ರಕಟಿಸಿದ್ದ. ಪೇಶ್ವೆ ಈ ವಿನಂತಿಯನ್ನು ಅತ್ಯಂತ ತಿರಸ್ಕಾರದಿಂದ ತಳ್ಳಿ ಹಾಕಿದ.

ಆದ್ದರಿಂದಲೇ ಮಹಾರ ಯೋಧರು ಬ್ರಿಟಿಷ ಪಡೆ ಸೇರಿ ಪೇಶ್ವೆಯನ್ನು ಮುಗಿಸಲು ಮುಂದಾದರು. ಸಂಖ್ಯೆಯಲ್ಲಿ ಅಲ್ಪವಾಗಿದ್ದರೂ ಅತ್ಯಂತ ಕೆಚ್ಚಿನಿಂದ ಕಲಿತನ ಪ್ರದರ್ಶಿಸಿದ ಮಹಾರ ಯೋಧರು, ತಮ್ಮ ಮೇಲೆ ಅಮಾನವೀಯವಾದ ಬಂಧನಕಾರಿ ನಿಯಮಗಳಿಂದ ಅಸ್ಪøಶ್ಯತೆಯನ್ನು ಹೇರಿದ್ದ ಪೇಶ್ವೆ ಆಡಳಿತವನ್ನು ಕದನದಲ್ಲಿ ಮಣ್ಣು ಮುಕ್ಕಿಸಿದರು.

ಪ್ರತಿ ವರ್ಷ ಜನೇವರಿ ಒಂದರಂದು ದೇಶದ ಮೂಲೆ ಮೂಲೆಗಳಿಂದ ಬೃಹತ್ ಪ್ರಮಾಣದಲ್ಲಿ ಆಗಮಿಸುವ ದಲಿತರು ಮೊದಲು ವಿಜಯ ಸ್ತಂಭಕ್ಕೆ ಗೌರವ ವಂದನೆ ಸಲ್ಲಿಸುತ್ತಾರೆ. ನಂತರ ಮೈದಾನದ ಆಟಗಳು ಆರಂಭಗೊಳ್ಳುತ್ತವೆ. ಮಧ್ಯಾಹ್ನ ಸಹಭೋಜನ ಕೂಡ ಇರುತ್ತದೆ. ಭೋಜನದ ನಂತರ ಒಂದಿಷ್ಟು ವಿಶ್ರಾಂತಿ ಪಡೆದುಕೊಂಡು ಸಂಜೆಯ ಇಳಿ ಹೊತ್ತಿನ ಸಮಯದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಗೆದ್ದವರಿಗೆ ಬಹುಮಾನ ವಿತರಣೆಯಾಗುತ್ತದೆ. ಈ ಸಂದರ್ಭದಲ್ಲಿ ಸಭೆಯೂ ನಡೆಯುತ್ತದೆ.

ನಾವು ಆ ವೀರ ವಿಜಯಸ್ತಂಭದ ಹತ್ತಿರ ಹೋಗಿ ಗಂಟಲು ಹರಿಯುವಂತೆ ಘೋಷಣೆ ಕೂಗುತ್ತೇವೆ. ಇದನ್ನು ತಪ್ಪೆಂದು ನಾನು ಹೇಳುತ್ತಿಲ್ಲ. ಒಳ್ಳೆಯ ಸಂಗತಿಯೇ ಸರಿ ! ಆದರೆ ಅದೇ ಛಲದಿಂದ ; ಅದೇ ಮನಸ್ಸಿನಿಂದ ನಾವು ನಮ್ಮ ಪೂರ್ವಿಕರ ಪರಾಕ್ರಮವನ್ನು ಉಳಿಸಿಕೊಂಡು ಬರಬೇಕು ಎಂದು ಕೂಡ ನಮಗೆ ಆಗ ಅನ್ನಿಸಬೇಕಲ್ಲವೇ ? ಅನ್ನಿಸಿದರೂ ಆ ಪರಾಕ್ರಮ ಶಕ್ತಿ ಇಂದು ನಮ್ಮಲ್ಲಿ ಉಳಿದಿದೆಯೇ ? ಉಳಿಯದಿದ್ದರೆ ಅದಕ್ಕಾಗಿ ಚಿಂತಿಸುವ ಕನಿಷ್ಟ ಸೌಜನ್ಯವಾದರೂ ನಮಗೆ ಇರಬೇಡವೇ ? ಜೀವದ ಹಂಗು ತೊರೆದು ಅವರು ಅಂದರೆ ನಮ್ಮ ಪೂರ್ವಿಕರು ತಲಾ ನಲವತ್ತು ಸೈನಿಕರಿಗೆ ಒಬ್ಬ ಮಹಾರ ಯೋಧರಾಗಿ ಘನಘೋರ ಕದನದಲ್ಲಿ ವಿಜಯಿಯಾಗುತ್ತಾರೆ !

ಹಾಗಾದರೆ ಇಂದು ನಮ್ಮ ಯುದ್ಧ ಎಲ್ಲಿ ಆಗಬೇಕಿದೆ ? ಯಾರೊಂದಿಗೆ ಆಗಬೇಕಿದೆ ? 500 ಮಹಾರರು ಒಂದೇ ಜೀವವಾಗಿ ಹೋರಾಟ ಮಾಡಿದ್ದರಿಂದಲೇ ವಿಜಯಶ್ರೀ ಅವರಿಗೆ ಒಲಿದಳು. ಹಾಗಾದರೆ ಅಂಥ ಶಕ್ತಿ ಇಂದು ನಮ್ಮಲ್ಲಿ ಉಳಿದಿದೆಯೇ ? ನಾವು ಸ್ವಾರ್ಥಿ ಮತ್ತು ಢೋಂಗಿ ಮಂದಿಯಲ್ಲ ಅಲ್ಲವೇ ?
ನಮ್ಮ ಒಗ್ಗಟ್ಟಿನ (ಏಕತೆಯ) ಇತಿಹಾಸವನ್ನು ನಾವು ಮರೆತಿದ್ದೇವೆ ಅಲ್ಲವೇ ? ಇದರಿಂದಲೇ ಶೋಷಣೆ ಮಿತಿ ಮೀರುತ್ತದೆಯಲ್ಲವೇ ? ನಾವು ನಮ್ಮ ನಮ್ಮಲ್ಲಿಯೇ ಜಗಳವಾಡುತ್ತ ಕುಳಿತ್ತಿದ್ದೇವೆ ಎಂಬುದನ್ನು ಕಂಡಾಗ ಅನಿಸುತ್ತದೆ ; ಯಾರ್ಯಾರು ಕಲಿತರೋ ಅವರಲ್ಲಿಯ ಕೆಲವರು ತಮ್ಮ ಹೊಟ್ಟೆಯನ್ನಷ್ಟೇ ದೊಡ್ಡದಾಗಿಸಿಕೊಂಡರು ! ತಮ್ಮ ಸಮಾಜಕ್ಕೆ ತಾವೇನಾದರೂ ಋಣ ಸಂದಾಯ ಮಾಡಬೇಕಿದೆಯೇ ಎಂಬ ಅರಿವು ಅವರಲ್ಲಿ ಮಕಾಡೆ ಮಲಗಿ ಬಿಟ್ಟಿದೆ !

ನಾವು ನಮ್ಮ ಶೌರ್ಯದ ಇತಿಹಾಸವನ್ನೇ ಮರೆತಿದ್ದೇವೆ ; ಹತ್ತು ಜನ ಹತ್ತು ಕಡೆ ಮುಖ ಮಾಡಿ ನಿಂತಿದ್ದೇವೆ ! ಒಂದುಗೂಡುವ ; ಒಗ್ಗಟ್ಟು ಪ್ರದರ್ಶಿಸುವ ಮಾತೇ ಇಲ್ಲ ! ಅದರ ಪರಿಣಾಮವನ್ನೇ ನಾವು ಅನುಭವಿಸುತ್ತಿದ್ದೇವೆ. ಸಾಮಾನ್ಯನಾದ ನನ್ನನ್ನೂ ಸೇರಿಸಿ ನಮ್ಮವರೇ ಆಗಿರುವ ಮುಖಂಡರೂ ಇದಕ್ಕೆ ಹೊಣೆಗಾರರಾಗಿದ್ದಾರೆ ಎನಿಸುವುದಿಲ್ಲವೇ ?`ಅಸಹಾಯಕವಾಗಿ ಬದುಕುವುದಕ್ಕಿಂತ ಅವ್ವನ ಹೊಟ್ಟೆಯಲ್ಲಿಯೇ ಸತ್ತು ಹೋಗುವುದು ಮೇಲು’ ಎಂದು ಡಾ. ಬಾಬಾಸಾಹೇಬ ಅಂಬೇಡ್ಕರ್‍ರು ಹೇಳಿದ್ದರು.

ಇಂಥ ಮರ್ಮಭೇದಕ ಮಾತುಗಳೇನಾದರೂ ನಿಮಗೆ ತಟ್ಟಿದ್ದಾವೆಯೇ ? ಇಲ್ಲ ! ನಾವೆಲ್ಲ ತಟಸ್ಥರಾಗಿ ಸಂಬಳ ಪಡೆದು ಬೆಚ್ಚಗೆ ಹೊದ್ದುಕೊಂಡು ಮಲಗಿದ್ದೇವೆ ; ಎಚ್ಚರಾಗಿದ್ದೇವೆ ಎನ್ನುವ ಕೆಲವರು ವಿನಾಕರಣ ತಮ್ಮ ತಮ್ಮಲ್ಲಿ ಜಗಳ ಮಾಡಿಕೊಳ್ಳುತ್ತಿದ್ದಾರೆ ; ಇನ್ನೂ ಕೆಲವರು ಮತ್ಸರದಿಂದ ಪರಸ್ಪರ ಮಾತನಾಡುವುದನ್ನೇ ಬಿಟ್ಟುಬಿಟ್ಟಿದ್ದಾರೆ.

ಬಂಧುಗಳೇ,
ಈ ಸಂದರ್ಭದಲ್ಲಿ ನಾನು ವಿಶ್ವವಿದ್ಯಾಲಯ ಮಟ್ಟದಲ್ಲಿ ನಿಂತು ಒಂದು ಮಾತು ಹೇಳುತ್ತಿದ್ದೇನೆ. ನೀವೆಲ್ಲ ಸ್ವಾಭಿಮಾನಿ ದಲಿತರೇ ಆಗಿದ್ದರೆ, ಕಿಂಚಿತ್ತಾದರೂ ಪಡೆದುಕೊಂಡಿದ್ದರ ಋಣ ತೀರಿಸುವ ಕಾರ್ಯವನ್ನು ಯಾಕೆ ಮಾಡಬಾರದು ? ಶಿಕ್ಷಕೇತರ ಸಿಬ್ಬಂದಿಯನ್ನು ಬಿಡಿ ; ಯುಜಿಸಿ ಸಂಬಳ ಪಡೆಯುತ್ತಿರುವ ದಲಿತ ಪ್ರಾಧ್ಯಾಪಕರು ತಿಂಗಳಿಗೆ ಕೇವಲ ನೂರು ರುಪಾಯಿ ನೀಡಿ ಒಂದು ನಿಧಿಯನ್ನು ಆರಂಭಿಸಬೇಕು ; ಅಲ್ಲಿ ಸೇರುವ ಹಣ ದಲಿತ ವಿದ್ಯಾರ್ಥಿಗಳ ಕಲ್ಯಾಣಕ್ಕೆ ಸದುಪಯೋಗವಾಗಬೇಕು ಎನಿಸುವುದಿಲ್ಲವೆ ? ಒಳಜಾತಿಗಳನ್ನೇ ಮುಂದು ಮಾಡಿಕೊಂಡು ಪರಸ್ಪರ ದ್ವೇಷ-ಜಗಳ ಮರೆಯಬೇಕು ಎನಿಸುವುದಿಲ್ಲವೇ ? ವಿದ್ಯಾರ್ಥಿಗಳನ್ನೂ ಹಾದಿ ತಪ್ಪಿಸುವ ಚಾಳಿಯನ್ನು ಬಿಟ್ಟು ಕೂಡಿ ಬಾಳುವ ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯವಿಲ್ಲವೇ ? ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯವಿದೆ.

ದಯವಿಟ್ಟು ಒಂದು ಮಾತನ್ನು ಮಾತ್ರ ನಾನು ಇಲ್ಲಿ ಹೇಳಬಯಸುತ್ತೇನೆ ; ಮೊಟ್ಟಮೊದಲು ನೀವು ನಿಮ್ಮ ನಿಮ್ಮ ಗೂಡುಗಳನ್ನು ಬಿಟ್ಟು ಹೊರಬನ್ನಿ ; ಪೊರೆಯನ್ನು ಹರಿದೊಗೆಯಿರಿ ಸೋದರ ಸಂಬಂಧಗಳನ್ನು ಬೆಸೆಯಲು ಮುಂದಾಗಿ ! ನಮ್ಮ ಪೂರ್ವಿಕರ ಇತಿಹಾಸದ ಅರಿವು ಇದ್ದುದ್ದೇ ಆದಲ್ಲಿ ಇದು ಅಸಾಧ್ಯವೇನೂ ಅಲ್ಲ ಎಂಬುದು ನನ್ನ ಅಚಲ ವಿಶ್ವಾಸವಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕವಿತೆ | ನೆನಪು

Published

on

ಕವಿ | ರುದ್ರಪ್ಪ ಹನಗವಾಡಿ
  • ರುದ್ರಪ್ಪ ಹನಗವಾಡಿ

ಅಪ್ಪನನ್ನು ಒಪ್ಪ ಮಾಡಿ
ವರ್ಷಗಳೇ ಕಳೆದವು ಮುವ್ವತ್ತೇಳು
ಇಂದಿರಾಗಾಂಧಿಯ ತುರ್ತು ಪರಿಸ್ಥಿತಿ
ಅರಸರ ಮೀಸಲಾತಿ
ಬಸವಲಿಂಗಪ್ಪನವರ ಬೂಸಾ ಖ್ಯಾತಿ
ಮಲ ಹೊತ್ತು
ಮಲಗಿದ್ದ ಕಾಲಕ್ಕೆ
ಚುರುಕು ಮುಟ್ಟಿಸಿದ ಕಾಲ

ಹರೆಯದ ನನಗೆ
ಕಾಲೇಜ ಮೇಷ್ಟರ ಕೆಲಸ
ಸೂಟು ಬೂಟಿನ ವೇಷ
ಆ ಮೇಲೆ ಅಮಲದಾರಿಕೆ
ಎಲ್ಲ ನಡೆದಾಗಲೇ ಅವ್ವನನ್ನು
ಆಸ್ಪತ್ರೆಗೆ ಸೇರಿಸಿದ್ದು
ಕಾಲ ಕಳೆದು ಕೊಂಡು
ಕೋಲ ಹಿಡಿದದ್ದು
ನಿನ್ನೆ ಮೊನ್ನೆಯಂತೆ
ಬಾಲ್ಯವಿನ್ನು ಉಂಟೆಂಬಂತೆ
ಭಾವಿಸುವಾಗಲೇ ಅವ್ವನ ಸಾವು

ಅದರೊಟ್ಟಿಗೆ ಕಾಯದಾಯಾಸ ತೀರಿಸಲು
ಬಂದರೆ ಬೆಂಗಳೂರಿಗೆ
ರೌಡಿಗಳ ಕಾಟ
ಅಂಬೇಡ್ಕರ್ ಪಟದ ಕೆಳಗೆ
ದೌರ್ಜನ್ಯದ ದಂಡು

ಅಮಾಯಕರಿಗೆ ಗುಂಡು
ಕಂಡುಂಡ ಹಾದಿಯ ಗುಡಿಸಲುಗಳಲ್ಲೀಗ
ಮುಗಿಲು ಮುಟ್ಟೋ ಮಹಲುಗಳು
ಅಂತಲ್ಲಿ
ದೇಶ ವಿದೇಶಗಳ
ಅಹವಾಲುಗಳು
ಅವಿವೇಕಗಳು
ನೋಡ ನೋಡುತ್ತಿದ್ದಂತೆ
ಉಸಿರು ಬಿಗಿಹಿಡಿದ ಜನರ ಒಳಗೆ
ಒಳಪದರಗಳೊಳಗೆ ಕನಸ ಬಿತ್ತಿ
ಹಸಿರ ಹೊನ್ನು ಬಾಚಲು ಹವಣಿಸಿದ
ಬಿಳಿ ಜನರ ಆಟ
ಅರ್ಥವಾಗುವುದೇ ಎಲ್ಲ
ಗೋಣ ನೀಡುವರೆ
ಹೂತಿಟ್ಟ ಗೂಟಕ್ಕೆ ?

( ಚಿಂತಕ ರುದ್ರಪ್ಪ ಹನಗವಾಡಿ ಅವರ ‘ಊರು – ಬಳಗ’ ಕವನ ಸಂಕಲನದಿಂದ ‘ ನೆನಪು ‘ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕೃತಿಯನ್ನು ಫ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ 2013 ರಲ್ಲಿ ಪ್ರಕಿಸಿದೆ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ; ಒಂದು ಚಿಂತನೆ

Published

on

  • ಮಹಾಂತೇಶ್.ಬಿ.ನಿಟ್ಟೂರು, ದಾವಣಗೆರೆ

ನಿಜ ಶರಣ ಶ್ರೀ ಅಂಬಿಗರ ಚೌಡಯ್ಯನವರ ಜೀವಿತ ಕಾಲ 12 ನೇ ಶತಮಾನದ ಬಸವಾದಿ ಶರಣರ ಕಾಲದಲ್ಲೇ ಇತ್ತು ಎಂಬುದು ಇತಿಹಾಸಕಾರರ ಸಂಶೋಧನೆಯಿಂದ ತಿಳಿದು ಬರುತ್ತದೆ. ಅವರ ಹುಟ್ಟೂರು ಹಾವೇರಿ ಜಿಲ್ಲೆಯ ಆಗಿನ ಶಿವಪುರ, ಈಗಿನ ಚೌಡಯ್ಯದಾನಪುರ. ಅವರ ತಂದೆಯ ಹೆಸರು ಶ್ರೀ ವಿರೂಪಾಕ್ಷ, ತಾಯಿಯ ಹೆಸರು ಪಂಪಾಂಭಿಕೆ, ಹೆಂಡತಿಯ ಹೆಸರು ಸುಲೋಚನಾ ಹಾಗೂ ಮಗನ ಹೆಸರು ಪುರವಂತ.

ಅಂಬಿಗ ವೃತ್ತಿಯ ಚೌಡಯ್ಯನವರು ಅಲ್ಲಮ ಪ್ರಭು ಮತ್ತು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಇದ್ದ ಒಬ್ಬ ಕ್ರಾಂತಿಕಾರಿ, ದಿಟ್ಟ, ನೇರ, ನಿಷ್ಠುರ ನುಡಿಯ ವಚನಕಾರ. ಕಲ್ಯಾಣ ಕ್ರಾಂತಿಯ ನಂತರ ಇವರು ತಮ್ಮ ವಚನಗಳ ಗಂಟನ್ನು ಹೊತ್ತು ಉಳವಿಗೆ ನಂತರ ತಮ್ಮ ಗ್ರಾಮವಾದ ತುಂಗಭದ್ರಾ ನದಿಯ ದಡದ ಮೇಲಿರುವ ಶಿವಪುರಕ್ಕೆ ಬಂದು ದೋಣಿ ನಡೆಸುವ ವೃತ್ತಿಯಲ್ಲಿ ನಿರತರಾಗಿ ವಚನ ರಚನೆ ಮಾಡಿರುವುದು ತಿಳಿದು ಬರುತ್ತದೆ.

ಚೌಡಯ್ಯನವರು ತಮ್ಮ ಜೀವಿತಾವಧಿಯಲ್ಲಿ ಅನೇಕ ಪವಾಡಗಳನ್ನು ಮಾಡಿರುತ್ತಾರೆ. ಗಿಡಮೂಲಿಕೆ ಔಷಧಿಗಳಿಂದ ಕ್ಷಯ ರೋಗ, ಕುಷ್ಠರೋಗ ಗುಣಪಡಿಸುವುದು, ಹಾವು ಕಚ್ಚಿದವರನ್ನು

ಬದುಕಿಸುವುದು ಇತ್ಯಾದಿ..

ಒಮ್ಮೆ ಗುತ್ತಲದ ಅರಸನು ಬೇಟೆಗಾಗಿ ಈ ಪ್ರದೇಶದಲ್ಲಿ ಸಂಚರಿಸುತ್ತಿದ್ದಾಗ, ಆತನ ಸೇನಾಧಿಪತಿಯು ಹಾವು ಕಚ್ಚಿ ಮೃತಪಟ್ಟನು. ಇದರಿಂದಾಗಿ ಅರಸನಿಗೆ ಅತೀವ ದುಃಖವುಂಟಾಗಿ ರೋಧಿಸತೊಡಗಿದನು. ಆಗ ಆತನ ಸೈನಿಕನೊಬ್ಬನು ಶ್ರೀ ಚೌಡಯ್ಯನವರ ಪವಾಡಗಳ ಬಗ್ಗೆ ವಿವರಿಸಿ ಹೇಳಲಾಗಿ, ಅರಸನು ತನ್ನ ಮೃತ ಸೇನಾಧಿಪತಿಯ ಶರೀರವನ್ನು ಚೌಡಯ್ಯನವರಲ್ಲಿಗೆ ತಂದು ಆತನನ್ನು ಬದುಕಿಸುವಂತೆ ಕೇಳಿಕೊಂಡರು, ಆಗ ಚೌಡಯ್ಯನವರು ಸೇನಾಧಿಪತಿಯನ್ನು ಬದುಕಿಸುತ್ತಾರೆ. ಇದರಿಂದ ಸಂತುಷ್ಟನಾದ ಅರಸನು ಶಿವಪುರದ ಸುತ್ತಲಿನ ಪೂರ್ವ – ಪಶ್ಚಿಮಕ್ಕೆ 14 ಮೈಲು ಹಾಗೂ ಉತ್ತರ – ದಕ್ಷಿಣಕ್ಕೆ 7 ಮೈಲು ಸುತ್ತಳತೆಯ ಭೂಮಿಯನ್ನು ಚೌಡಯ್ಯನವರಿಗೆ ದಾನವಾಗಿ ನೀಡಿದನು.

ಆದರೆ ಚೌಡಯ್ಯನರು ವೈರಾಗ್ಯಶಾಲಿಯು, ಲೌಕಿಕದಲ್ಲಿ ನಿರಾಸಕ್ತಿ ಹೊಂದಿದವರು ಆಗಿದ್ದರಿಂದ, ಅರಸನು ಕೊಡಮಾಡಿದ್ದ ಸಂಪೂರ್ಣ ಜಮೀನನ್ನು ತನ್ನ ಗುರುಗಳಾದ ಶ್ರೀ ಶಿವದೇವರಿಗೆ ದಾನವಾಗಿ ನೀಡಿದರು ಎಂಬ ಉಲ್ಲೇಖವಿದೆ. ಅಂದಿನಿಂದ ಶಿವಪುರ ಗ್ರಾಮಕ್ಕೆ ‘ಚೌಡಯ್ಯದಾನಪುರ’ ಎಂದು ಹೆಸರು ಬರುತ್ತದೆ. ಮುಂದೆ ಚೌಡಯ್ಯನರು ಅಲ್ಲಿ ದೇಹ ತ್ಯಾಗ ಮಾಡಿದ್ದರಿಂದ ತುಂಗಭದ್ರಾ ನದಿಯ ದಡದಲ್ಲಿ ಈಗಲೂ ಚೌಡಯ್ಯನವರ ಸಮಾಧಿ ಗದ್ದುಗೆ ಇದೆ.

ಭ್ರಮಾಲೋಕದಲ್ಲಿ ವಿಹರಿಸುತ್ತಾ ಕುಳಿತ, ಆಡಂಬರದಲ್ಲಿ ಅಡ್ಡಾದಿಡ್ಡಿ ಅಡ್ಡಾಡುವ ಮಂದಿಯ ಕಪಾಳಕ್ಕೆ ಹೊಡೆದು ಎಚ್ಚರಿಸುವಂತಿವೆ ಚೌಡಯ್ಯನವರ ವಚನಗಳು. ಧಾರ್ಮಿಕ ಮೂಢನಂಬಿಕೆ ಬಿತ್ತುವವರಿಗೆ, ಸ್ವಾರ್ಥಿಗಳಾಗಿ ಬದುಕುವವರಿಗೆ, ಮುಖವಾಡ ಹಾಕಿ ಮಂಕು ಬೂದಿ ಎರಚುವವರಿಗೆ ಸಿಂಹ ಸ್ವಪ್ನದಂತೆ ಬೆಚ್ಚಿ ಬೀಳಿಸುತ್ತವೆ ನಿಜ ಶರಣ ಅಂಬಿಗರ ಚೌಡಯ್ಯನವರ ವಚನಗಳು. ಇದಕ್ಕೆ ತಾತ್ಪೂರ್ತಿಕವಾಗಿ ಕೆಲವು ವಚನಗಳು ಈ ಕೆಳಗಿನಂತಿವೆ;

“ಅಂಬಿಗ ಅಂಬಿಗ ಎಂದು ಕುಂದ ನುಡಿಯದಿರು/ನಂಬಿದರೆ ಒಂದೇ ಹುಟ್ಟಲಿ/ಕಡೆಯ ಹಾಯಿಸುವೆನೆಂದಾತನಂಬಿಗರ/ಚೌಡಯ್ಯ ನಿಜಶರಣನು”

ಈ ಮೇಲಿನ ವಚನ ಶ್ರೀ ಅಂಬಿಗರ ಚೌಡಯ್ಯನವರ ಸ್ವಾಭಿಮಾನ, ಧೈರ್ಯ, ನೇರ, ನಿರ್ಭಿಡೆಯ ವ್ಯಕ್ತಿತ್ವದ ಪ್ರತೀಕವಾಗಿದೆ.

ಹನ್ನೆರಡನೇ ಶತಮಾನದ ಸಂದರ್ಭದಲ್ಲಿ ಜಾತಿ ಮತ್ತು ವರ್ಗ ವ್ಯವಸ್ಥೆ ಎಷ್ಟರಮಟ್ಟಿಗಿತ್ತು ಎಂಬುದನ್ನು ಈ ವಚನ ಸೂಚಿಸುತ್ತದೆ. ಅಂತಹ ವಿಚಿತ್ರ, ವಿಕ್ಷಿಪ್ತ ಸನ್ನಿವೇಶದಲ್ಲಿ ಬಸವಾದಿ ಶರಣರು ಜಾತೀಯತೆ, ವರ್ಗ – ವರ್ಣ ವ್ಯವಸ್ಥೆಯ ವಿರುದ್ಧ ಬೃಹತ್ ಚಳುವಳಿಯನ್ನು ಕೈಗೊಂಡಾಗ ಅಂಬಿಗರ ಚೌಡಯ್ಯನವರ ಸತ್ಯನಿಷ್ಠೆ, ಪ್ರಾಮಾಣಿಕತೆಯ ವಚನಗಳು ಪ್ರಖರವಾಗಿ ಕಾಣಿಸುತ್ತವೆ. ಕೆಲವು ಢೋಂಗಿ ಭಕ್ತರಿಗೆ, ಕಪಟ ಸನ್ಯಾಸಿಗಳಿಗೆ ತನ್ನ ಖಾರವಾದ ವಚನಗಳ ಮೂಲಕ ಚುರುಕು ಮುಟ್ಟಿಸುತ್ತಾರೆ.

ಆಡಂಬರ ಮತ್ತು ದುರಾಸೆಯ ಜನರ ಮನಸ್ಥಿತಿ ಕಂಡು ಕೆಂಡಾಮಂಡಲವಾಗಿ ಪ್ರಸ್ತುತ ಪಡಿಸಿದ ಒಂದು ವಚನ ಇಂತಿದೆ;

“ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಕಾಳೋಗರನ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹಾರುವ ಪಕ್ಷಿಯನು/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೆಬ್ಬುಲಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೊಯ್ವ ಹೆಮ್ಮಾರಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಬರುವ ಉರಿ ಬಾಣವನು/ಇಂತೆಲ್ಲವನು ಒಂದೇ ಮಂತ್ರದಲ್ಲಿ ನಿಲ್ಲಿಸಬಹುದು;/ಲೋಭವೆಂಬ ಗ್ರಹಣ ಹಿಡಿದವರ ಏತರಿಂದಲೂ/ನಿಲ್ಲಿಸಲಾಗದು/ಈ ಲೋಭಕ್ಕೆ ದಾರಿದ್ರ್ಯವೇ ಔಷಧವು;/ಹೇಳಿದರೆ ಕೇಳರು, ತಾವು ತಿಳಿಯರು/ಶಾಸ್ತ್ರವ ನೋಡರು, ಭಕ್ತಿಯ ಹಿಡಿಯರು/ಇಂತಹ ಗೊಡ್ಡು ಮೂಳ ಹೊಲೆಯರಿಗೆ/ಕರ್ಮವೆಂಬ ಶರದ್ಧಿಯಲ್ಲಿ ಬಿದ್ದು ಹೊರಳಾಡುವುದೇ/ಸತ್ಯವೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು”

ಸಂಸಾರದ ಜಂಜಾಟದಲ್ಲಿ ಬಿದ್ದು ಒದ್ದಾಡುತ್ತಾ ಶಿವನನ್ನು ಮರೆತು ಹತ್ತು ಹಲವು ಚಿಂತೆಯಲ್ಲಿ ಮುಳುಗಿರುವ ಶವ ಮುಖದ ಜನರ ಸ್ಥಿತಿ-ಗತಿಯನ್ನು ಅರ್ಥಗರ್ಭಿತವಾಗಿ ಸಾದರಪಡಿಸುವ ಒಂದು ವಚನ ಇಂತಿದೆ;

“ಬಡತನಕೆ ಉಂಬುವ ಚಿಂತೆ/ಉಣಲಾದಡೆ ಉಡುವ ಚಿಂತೆ/ಉಡಲಾದಡೆ ಇಡುವ ಚಿಂತೆ/ಇಡಲಾದಡೆ ಹೆಂಡಿರ ಚಿಂತೆ/ಹೆಂಡಿರಾದರೆ ಮಕ್ಕಳ ಚಿಂತೆ/ಮಕ್ಕಳಾದಡೆ ಬದುಕಿನ ಚಿಂತೆ/ಬದುಕಾದಡೆ ಕೇಡಿನ ಚಿಂತೆ/ಕೇಡಾದಡೆ ಮರಣದ ಚಿಂತೆ/ಇಂತೀ ಹಲವು ಚಿಂತೆಯಲ್ಲಿಪ್ಪವರ ಕಂಡೆನು/ಶಿವನ ಚಿಂತೆಯಲ್ಲಿದ್ದಾತರೊಬ್ಬರನೂ ಕಾಣೆನೆಂದಾತ/ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು!”

ಸಮಯದ ಸದ್ಬಳಕೆ ಮಾಡಿಕೊಂಡು ಕಾಯಕ ಮಾಡುತ್ತಾ ಶಿವಭಕ್ತರಾಗಿ, ಜೀವನ ಪಾವನವಾಗಿಸುವಂತೆ ಕರೆ ನೀಡುವ ಒಂದು ವಚನ ಇಂತಿದೆ;

“ಗಾಳಿ ಬಿಟ್ಟಾಗ ತೂರಿಕೊಳ್ಳಿರಯ್ಯ/ಗಾಳಿ ನಿಮ್ಮ ಅಧೀನವಲ್ಲ ಕಂಡಯ್ಯ/ನಾಳೆ ತೂರಿಹೆನೆಂದಡಿಲ್ಲ ಕಂಡಯ್ಯ/ಶಿವಶರಣೆ ಎಂಬುದೊಂದು ಗಾಳಿ ಬಿಟ್ಟಲ್ಲಿ/ಬೇಗ ತೂರೆಂದನಂಬಿಗರ ಚೌಡಯ್ಯ”

ಕಾವಿ ಬಟ್ಟೆ ತೊಟ್ಟು, ಭಿಕ್ಷೆಗಾಗಿ ಜೋಳಿಗೆ ಹಾಕಿದವರೆಲ್ಲರೂ ಜಂಗಮರು, ಗುರುಗಳಾಗಲಾರರು ಎಂಬುದನ್ನು ವಿಡಂಬಿಸುವ ಒಂದು ವಚನ ಇಂತಿದೆ;

“ಕಂಥೆ ತೊಟ್ಟವ ಗುರುವಲ್ಲ/ಕಾವಿ ಹೊದ್ದವ ಜಂಗಮನಲ್ಲ/ಶೀಲ ಕಟ್ಟಿದವ ಶಿವಭಕ್ತನಲ್ಲ/ನೀರು ತೀರ್ಥವಲ್ಲ/ಕೂಳು ಪ್ರಸಾದವಲ್ಲ/ಹೌದೆಂಬವನ ಬಾಯ ಮೇಲೆ/ಅರ್ಧ ಮಣದ ಪಾದರಕ್ಷೆಯ ತೆಗೆದುಕೊಂಡು/ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ/ಟೊಕ ಟೊಕನೆ ಹೊಡೆ ಎಂದಾತ/ನಮ್ಮ ಅಂಬಿಗರ ಚೌಡಯ್ಯ”

ಹೀಗೆ ಬಸವಾದಿ ಶರಣರ ಸಮಾಜ ಸುಧಾರಣಾ ಚಳವಳಿಯಲ್ಲಿ ತಮ್ಮ ಅಮೂಲ್ಯ ಸೇವೆಯನ್ನು ಮುಡುಪಾಗಿಟ್ಟ ಶ್ರೀ ಅಂಬಿಗರ ಚೌಡಯ್ಯನವರು ತಮ್ಮ ಬದುಕಿನ ನೀತಿಯಿಂದ, ನಿಷ್ಠೆಯಿಂದ, ತೀಕ್ಷ್ಣ ಖಂಡನೆಯ ಬಂಡಾಯ ವಚನಗಳಿಂದ ಗಮನ ಸೆಳೆದು, ಅವರು ರಚಿಸಿದ ವಚನಗಳಿಗೆ ತಮ್ಮ ಹೆಸರನ್ನೇ ಅಂಕಿತವನ್ನಾಗಿಟ್ಟಿರುವದು ವಿಶೇಷವಾಗಿದೆ. ಸಮಾಜದ ಕೊಳೆಯನ್ನು ತೊಳೆಯುವ ನಿಟ್ಟಿನಲ್ಲಿ ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ಎದ್ದು ಕಾಣುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮ್ಯಾಸ ನಾಯಕ ಬುಡಕಟ್ಟನಲ್ಲಿ ದೀಪಾವಳಿ ಹಬ್ಬದ ಆಚರಣೆ

Published

on

ಭಾರತ ತನ್ನ ಭೌಗೋಳಿಕ ಸ್ವರೂಪದಲ್ಲಿ ವೈವಿಧ್ಯತೆಯನ್ನು ಹೊಂದಿರುವಂತೆ ಅನೇಕ ಬಗೆಯ ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿದೆ.

ದೇಶದ ಪ್ರತಿಯೊಂದು ಸಮುದಾಯವು ಬದುಕಿನ ಕ್ರಮದಲ್ಲಿ ತನ್ನದೇ ಆದ ವೈವಿಧ್ಯತೆಯನ್ನು ಹೊಂದಿದ್ದು ಹಬ್ಬಗಳ ಆಚರಣೆಯಲ್ಲಿಯೂ ಈ ಭಿನ್ನತೆಯನ್ನು ಕಾಣಬಹುದಾಗಿದೆ. ಈಗ ನಡೆಯುತ್ತಿರುವ ದೀಪಾವಳಿ ಹಬ್ಬದ ಆಚರಣೆಯೂ ಇದರಿಂದ ಹೊರತಾಗಿಲ್ಲ. ಇಡೀ ಭಾರತ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸುತ್ತಿದೆ ಎಂಬುದು ಸಾಮಾನ್ಯವಾದ ಹೇಳಿಕೆಯಾಗಿರುತ್ತದೆ.

ದೀಪಾವಳಿ ಎಂದರೆ ದೀಪವನ್ನು ಬೆಳಗಿಸುವ ಹಬ್ಬ. ಜಗದ ಕತ್ತಲೆಯನ್ನು, ಮನದ ಕತ್ತಲೆಯನ್ನು, ಕಳೆಯುವ ಹಬ್ಬ ಎಂಬುದು ಒಂದು ನಂಬಿಕೆಯಾದರೆ ಬಲಿಚಕ್ರರ‍್ತಿಯನ್ನು ವರ್ಷಕೊಮ್ಮೆ ನೆನಪಿಸಿಕೊಳ್ಳುವುದು, ನರಕಾಸುರನನ್ನು ಶ್ರೀ ಕೃಷ್ಣ ಪರಮಾತ್ಮ ಕೊಂದು ಆತನ ಸೆರೆಯಲ್ಲಿದ್ದ ಅಸಂಖ್ಯಾತ ಮಹಿಳೆಯರಿಗೆ ಬಿಡುಗಡೆ ದೊರಕಿಸಿದ ದಿನವಿದು ಎಂದು ನೆನೆಪಿಸಿಕೊಳ್ಳುವುದು ಹೀಗೆಲ್ಲಾ ಪ್ರಚಲಿತ ಪುರಾಣಮೂಲಗಳಿಂದ ಈ ಹಬ್ಬದ ಆಚರಣೆಯ ಸಾಂಕೇತಿಕತೆಯನ್ನು ಅರ್ಥೈಸಲಾಗುತ್ತದೆ.

ಈ ಎರಡೂ ಘಟನೆಗಳನ್ನು ಕುರಿತು ಬೇರೆ ಬೇರೆ ನೆಲೆಯಿಂದ ಯೋಚಿಸಿದಾಗ ಇದನ್ನು ದೇಶದಾದ್ಯಂತ ಎಲ್ಲರೂ ಸಡಗರಿಸಬೇಕೆ? ಆಳುವವರ ಸಡಗರ ಎಲ್ಲರ ಸಡಗರವಾಗಲೇಬೇಕಾದ ಅನಿವಾರ್ಯವೇ? ಎಂಬ ನೆಲೆಗಳಿಂದ ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕಾಗುತ್ತದೆ.

ನಿಸರ್ಗಮೂಲ ಸಿದ್ದಾಂತವನ್ನು ಅನ್ವಯಿಸಿಕೊಂಡರೇ ಬಹುಶಃ ಈ ದೀಪಾವಳಿಯ ತಿಂಗಳು, ಅಂದರೇ ಕಾರ್ತಿಕ ಮಾಸದ ಹವಾಮಾನದಲ್ಲಿ ವಿಶೇಷತೆಯಿದೆ. ಕಾರ್-ಅಂದರೇ ಮಳೆ ಸುರಿಯುವುದು. ಕರ‍್ತೀಕ ಅಂದರೇ ಮಳೆಗಾಲದ ಕೊನೆಯ ದಿನಗಳಿವು, ಹಿಂಗಾರಿನ ಕೊನೆಯ ಮಳೆಗಳು ಸುರಿಯುವ ಮತ್ತು ಇದರೊಂದಿಗೆ ಚಳಿಗಾಲವೂ ಆರಂಭವಾಗುವುದರಿಂದ ಮಂಜುಮುಸುಕಿದ ವಾತಾವರಣವೂ ಜೊತೆಗೂಡಿ ಕತ್ತಲೆಯ ಆಧಿಕ್ಯ ಹೆಚ್ಚು. ಬಹುಶಃ ಈ ಕತ್ತಲೆಯನ್ನು ನಿವಾರಿಸಿಕೊಳ್ಳಲು ಮನೆಮನೆಯ ಮುಂದೆ ದೀಪಗಳನ್ನು ಹಚ್ಚಿ ಬೆಳಕನ್ನು ಕಂಡುಕೊಳ್ಳುವ ಉದ್ದೇಶವೂ ಇರಬಹುದೆನ್ನಿಸುತ್ತದೆ. ಒಟ್ಟಾರೆ ನಾಡಿನಾದ್ಯಂತ ಆಚರಿಸಲಾಗುವ ಈ ದೀಪಾವಳಿ ಹಬ್ಬವನ್ನು ಮ್ಯಾಸಮಂಡಲದಲ್ಲಿಯೂ ಆಚರಿಸಲಾಗುತ್ತದೆ.

ಮ್ಯಾಸಬುಡಕಟ್ಟಿನ ದೇವರು ಕಾಣದ ಲೋಕದವರಲ್ಲ. ಪ್ರಕೃತಿಯ ವಿಶಿಷ್ಟತೆಯನ್ನೇ ದೈವ ಎಂದು ಭಾವಿಸಿ ಪೂಜಿಸುವುದು, ಸೃಷ್ಟಿಗೆ ಕಾರಣವಾಗುವ ತಾಯಿಯನ್ನೇ ಮೊದಲ ದೈವ ಎಂದು ಪೂಜಿಸುವುದು, ತಮಗೆ ಬದುಕನ್ನು ಕಟ್ಟಿಕೊಟ್ಟು ತಮ್ಮನ್ನು ಮುನ್ನಡೆಸಿದ ಹಿರಿಯರನ್ನೇ, ನಾಯಕರನ್ನೇ ತಮ್ಮದೇವರು ಎಂದು ಪೂಜಿಸುವುದು, ಮತ್ತು ತಮ್ಮ ಬದುಕಿಗೆ ಆಧಾರವಾಗಿದ್ದ ಪಶುಸಂಪತ್ತನ್ನೇ ತಮ್ಮ ಹಿರಿಯರೊಂದಿಗೆ ಸಮೀಕರಿಸಿ ದೈವಗಳೆಂದು ಭಾವಿಸಿ ಪೂಜಿಸುವುದು ಈ ಬುಡಕಟ್ಟಿನ ವಿಶೇಷತೆ. ತಮ್ಮ ನಾಯಕ ಅಥವಾ ನಾಯಕಿ ಬಳಸುತ್ತಿದ್ದ ವಸ್ತುವನ್ನು ಬಿದಿರಿನ ಬುಟ್ಟಿಯಲ್ಲಿಟ್ಟು, ಕೆಲವು ಕಡೆ ಸಾಲಿಗ್ರಾಮಗಳನ್ನು ಮತ್ತು ನಾಯಕ/ನಾಯಕಿ ಬಳಸುತ್ತಿದ್ದ ಬಿಲ್ಲು, ಬಾಣ/ ಖಡ್ಗವನ್ನೇ ದೇವರೆಂದು ನಂಬಿ ಪೂಜಿಸುವ ಸಮುದಾಯದಲ್ಲಿ ದೀಪಾವಳಿಯನ್ನು ಇವುಗಳಿಗೆ ಪೂಜೆ ಸಲ್ಲಿಸುವ ಮೂಲಕವೇ ಆಚರಿಸಲಾಗುತ್ತದೆ.

ಮ್ಯಾಸಮಂಡಲದ ಎಲ್ಲಾ ಗುಡಿಕಟ್ಟುಗಳಲ್ಲಿಯೂ ಮತ್ತು ಇದಕ್ಕೆ ಸಂಬಂಧಿಸಿದ ಎತ್ತಿನಗೂಡುಗಳಲ್ಲಿ ಈ ಹಬ್ಬದ ಆಚರಣೆ ನಡೆಯುತ್ತದೆ. ದೀಪಾವಳಿ ಅಮಾವಾಸ್ಯೆಕಳೆದು ಪಾಡ್ಯದ ಸೋಮವಾರ ಹೀರೆಹಳ್ಳಿಯ ದಡ್ಡಿಸೂರನಾಯಕನ ಗುಡಿಗೆ ಈತನಿಂದ ಸಂರಕ್ಷಿಸಲ್ಪಟ್ಟ ದನಕರುಗಳ ಪರಂಪರೆಯಿಂದ ಇಂದಿಗೂ ಉಳಿದು ಬಂದಿರುವ ಆಕಳ ಗೂಡಿನಿಂದ (ಗುಡೇಕೋಟಿ ಬಳಿ ಇರುವ} ಕಿಲಾರಿಗಳು ಮೊಸರು,ತುಪ್ಪವನ್ನು ತಂದು ಸೋಮವಾರ ಸಂಜೆ ಗುಡಿಗೆ ಒಪ್ಪಿಸುತ್ತಾರೆ. ತಮ್ಮ ಹೊಲಗಳಲ್ಲಿ ಬೆಳೆದ ಹಸನಾದ ಸಜ್ಜೆಯತೆನೆಗಳನ್ನು ತಂದು ಒಪ್ಪಿಸುವ ವಾಡಿಕೆಯೂ ಇದೆ. ರಾತ್ರಿಯಿಡಿ ಎಲ್ಲರೂ ಸೇರಿ ಗುಡಿಯಲ್ಲಿ ಹುರುಳಿ, ಗುಗ್ಗರಿ ಬೇಯಿಸಿ ಜೋಳ ಅಥವಾ ಸಜ್ಜೆಯ ಅನ್ನ ಮಾಡಿ ಗೂಡಿನಿಂದ ತಂದ ಮೊಸರನ್ನು ಸೇರಿಸಿ ಬೆಳಗಿನಜಾವ ದಡ್ಡಿಸೂರನಾಯಕನಿಗೆ ನೈವೇದ್ಯ ಮಾಡಲಾಗುತ್ತದೆ.

ರಾತ್ರಿಯಿಡೀ ಉರುಮೆ ವಾದ್ಯದ ಸೇವೆ, ನಾಯಕನನ್ನು ಕುರಿತು ಪದ ಹೇಳುವುದು ನಡೆಯುತ್ತದೆ, ಹೀಗೆ ಗುಡಿಯಲ್ಲಿ ನಡೆಯುವ ಪೂಜೆಯೇ ತಮಗೆ ದೀಪಾವಳಿ ಹಬ್ಬದ ಆಚರಣೆಯಾಗಿದ್ದು ಮನೆ ಮನೆಯ ಮುಂದೆ ದೀಪ ಬೆಳಗಿಸುವ, ರಂಗೋಲಿ ಹಾಕುವ, ಪಟಾಕಿ ಸಿಡಿಸುವ ಆಚರಣೆಗಳು ಇಲ್ಲಿ ಇರುವುದಿಲ್ಲ.
ಕಂಪಳ ದೇವರ ಹಟ್ಟಿಯಲ್ಲಿ ಇದಕ್ಕಿಂತ ಸ್ವಲ್ಪ ಭಿನ್ನವಾಗಿ ಹಬ್ಬದ ಆಚರಣೆ ನಡೆಯುತ್ತದೆ. ಮಾಘ ಮಾಸದಲ್ಲಿ ನಡೆಯುವ ಗುಗ್ಗರಿ ಹಬ್ಬದಲ್ಲಿ ಮಾಡುವಂತೆ ಈ ಸಮಯದಲ್ಲಿಯೂ ಅಮಾವಾಸ್ಯೆ ನಂತರದ ಶುಕ್ರವಾರದಂದು ಪೆಟ್ಟಿ ದೇವರನ್ನು ಗುಡಿಯಿಂದ ತಂದು ಹಟ್ಟಿಯ ಹೊರವಲಯದಲ್ಲಿ ಹೊಸ ಉದಿ/ಪದಿಯನ್ನು ಕಟ್ಟಿ ಇದರಲ್ಲಿ ಕೂರಿಸಿ ಮೂರು ದಿನಗಳ ಹಬ್ಬದ ಆಚರಣೆ ನಡೆಸಲಾಗುತ್ತದೆ.

ತೆಲುಗಿನಲ್ಲಿ ಇದನ್ನು ‘ದುಯಿಲಪಂಡುವ’ ಎಂದು ಕರೆಯಲಾಗುತ್ತದೆ. ಕಂಪಳ ದೇವರ ಪೆಟ್ಟಿಯೊಂದಿಗೆ ಜಗಲೂರು ಪಾಪನಾಯಕನನ್ನು ಸಂಕೇತಿಸುವ ಬಿಲ್ಲು ದೇವರನ್ನೂ ತಂದು ಪೂಜಿಸಲಾಗುತ್ತದೆ. ಆಕಳಗೂಡಿನ ಮೀಸಲು ಮೊಸರು ಮತ್ತು ಬೆಣ್ಣೆಯನ್ನು ಅರ್ಪಿಸುವುದು ಇಲ್ಲಿ ಬಹಳ ವಿಶೇಷವಾದುದು. ಗತಿಸಿದ ಎತ್ತು ಮತ್ತು ಆಕಳಿಂದ ಸಂಗ್ರಹಿಸಿದ ಕೊಂಬನ್ನು ಇಲ್ಲಿ ಬೆಣ್ಣೆಯನ್ನು ಶೇಕರಿಸಲು ಬಳಸಲಾಗುತ್ತದೆ.ಬುಡಕಟ್ಟಿನ ಜನತೆ ತಮಗೆ ಸಿಗುವ ವಸ್ತುಗಳನ್ನೇ ಸಲಕರಣೆಗಳನ್ನಾಗಿ ಬಳಸುವ ವಿಧಾನ ಇಲ್ಲಿ ಗಮನ ಸೆಳೆಯುತ್ತದೆ. ಹೀಗೆ ಸಂಗ್ರಹಿಸಿದ ಬೆಣ್ಣೆಯನ್ನು ಕಾಯಿಸಿ ತುಪ್ಪ ಮಾಡಿ ಪದಿಯಲ್ಲಿ ದೀಪವನ್ನು ಉರಿಸಲಾಗುತ್ತದೆ.ಮೊಸರು,ಜೋಳದ/ಸಜ್ಜೆಯ ಅನ್ನ,ಬಾಳೆಹಣ್ಣು,ಬೆಲ್ಲವನ್ನು ಬೆಳಗಿನಜಾವದಲ್ಲಿ ನೈವೇದ್ಯ,ಮಾಡಲಾಗುತ್ತದೆ.

ಇದರೊಂದಿಗೆ ಎತ್ತುಗಳನ್ನೂ ಹರಿಯಿಸುವುದು, ಮಣೇವು, ಉರಿಯುವ ಪಂಜುಗಳನ್ನೇ ನುಂಗುವುದು ಈ ಹಬ್ಬದ ಪ್ರಮುಖ ಆಚರಣೆಗಳಾಗಿವೆ. ನನ್ನಿವಾಳದ ಕಟ್ಟಿಮನೆಗೆ ಸೇರಿದ ಬಂಗಾರುದೇವರ ಹಟ್ಟಿಯಲ್ಲಿ ದೇವರುಗಳನ್ನು ಮತ್ತು ಬೆಳಗಟ್ಟದ ಸೂರೆಯರಗಾಟನಾಯಕನಿಗೆ ಸಂಬಂಧಿಸಿದಂತೆ, ಬೋಸೇದೇವರ ಹಟ್ಟಿಯ ಬೋಸೇರಂಗಯ್ಯನ ಪೆಟ್ಟಿಯನ್ನು, ದೊಣಮಂಡಲಹಟ್ಟಿಯ ಮಂಡಬೊಮ್ಮದೇವರನ್ನು ಹಟ್ಟಿಯಿಂದ ಹೊರಗೆ ತಂದು ಊರ ಹೊರಗೆ ಹೊಸ ಪದಿಯನ್ನು ಕಟ್ಟಿ, ಗೂಡಿನಿಂದ ಎತ್ತುಗಳನ್ನು ಕರೆಸಿ ಗೌರವಿಸಿ ಪೂಜಿಸುವ ಕ್ರಮವಿದೆ.

ಒಟ್ಟಾರೆ ಈಮ್ಯಾಸಮಂಡಲದ ದೀಪಾವಳಿ ಹಬ್ಬಕ್ಕೆ ಆಯಾ ಗುಂಪಿನವರೆಲ್ಲರೂ ಕಾಸು,ಹಾಲು, ಮೊಸರನ್ನು ಅರ್ಪಿಸಿ ಪಾಲ್ಗೊಳ್ಳುವಿಕೆಯೇ ಇಲ್ಲಿ ಸಾಮುದಾಯಿಕತೆಯ ಮಹತ್ವವನ್ನು ಪಡೆಯುತ್ತದೆ. ಈ ದೀಪಾವಳಿ ಹಬ್ಬದ ಆಚರಣೆಯಲ್ಲಿಎಲ್ಲಾ ಪದಿಗಳಲ್ಲಯೂ ದಾಸೋಹ ವಿಶೇಷವಾಗಿ ನಡೆಯುತ್ತದೆ. ಮುಂಗಾರು ಮಳೆ ಸುರಿದು ಸೊಂಪಾಗಿ ಬೆಳೆದ ಹುಲ್ಲನ್ನು ತಿಂದು ಹಸುಗಳು ಸಾಕಷ್ಟು ಹಾಲನ್ನು ಕೊಡುವುದರಿಂದ ಸಮೃದ್ಧವಾದ ಹಾಲು,ಮೊಸರು ಈ ಹಬ್ಬಕ್ಕೆ ಒದಗುತ್ತದೆ.ಇದನ್ನು ಎಡೆ ಮಾಡಿದ ನಂತರ ಎಲ್ಲರಿಗೂ ದಾಸೋಹದಲ್ಲಿ ನೀಡಲಾಗುತ್ತದೆ.

ಈ ಬುಡಕಟ್ಟಿನ ದೀಪಾವಳಿ ಹಬ್ಬದ ಆಚರಣೆಯ ಹಿಂದೆ ನಮ್ಮ ಭಾರತದ ಪೌರಾಣಿಕ ಕಥನಗಳಾವುವು ಕೇಳಿ ಬರುವುದಿಲ್ಲ.ಮನೆ ಮನೆಯ ಮುಂದೆ ದೀಪಗಳನ್ನು ಹಚ್ಚಿ ಸಡಗರಿಸುವುದು ಇಲ್ಲಿಲ್ಲ. ರಂಗೋಲಿ ಹಾಕುವುದಂತೂ ಬುಡಕಟ್ಟಿನ ನಿಶೇಧಗಳಲ್ಲಿ ಒಂದಾಗಿರುವುದರಿಂದ ಆ ಪ್ರಸ್ತಾಪವೇ ಇಲ್ಲಿಲ್ಲ. ಬದಲಾಗಿ ತಮ್ಮ ಮನೆ ದೇವರಾದ ಪೆಟ್ಟಿಗೆ ದೇವರು/ಬಿಲ್ಲು ದೇವರು/ಎತ್ತುಗಳನ್ನು ಗೌರವಿಸಿ ಪೂಜಿಸುವುದು. ಈ ಮೂಲಕವಾಗಿಯೇ ತಮ್ಮ ಮುಂದಿನ ಬದುಕಿಗೆ ಬೇಕಾದ ಬೆಳಕನ್ನು, ಚೈತನ್ಯವನ್ನು ಕೋರುವುದು ಇಲ್ಲಿ ಮುಖ್ಯವಾಗಿರುತ್ತದೆ.

ತಾನು ಬದುಕಿರುವ ಪರಿಸರ, ತಮಗೆ ಬದುಕನ್ನು ಕಟ್ಟಿಕೊಡುವ ಪ್ರಾದೇಶಿಕತೆ ಮತ್ತು ಭೌತಿಕ ಪ್ರಪಂಚ ಮತ್ತು ತನಗೆ ನೈತಿಕ ಬೆಂಬಲವಾಗಿ ನಿಂತ ತನ್ನ ಸಾಂಸ್ಕೃತಿಕ ಜಗತ್ತು ಈ ಎಲ್ಲವುಗಳ ಮೂಲಕ ಒಡಮೂಡುವ ದೇಸಿತನ ಆಯಾ ಬುಡಕಟ್ಟಿನ ಆಚರಣೆಗಳಿಗೆ ಸೈದ್ಧಾಂತಿಕತೆಯನ್ನು ಒದಗಿಸಿಕೊಡುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಮ್ಯಾಸಬೇಡ ಬುಡಕಟ್ಟಿನ ಈ ದೀಪಾವಳಿ ಆಚರಣೆಯಲ್ಲಿ ಈ ದೇಸಿತನವೇ ಒಡಮೂಡಿರುವುದನ್ನು ಕಾಣಬಹುದಾಗಿದೆ.ಆದಿವಾಸಿಗಳ ಧರ‍್ಮಿಕ ಜಗತ್ತಿನಲ್ಲಿ ಸರ‍್ಪಣಾಭಾವ ಮತ್ತು ಪಾರಂಪರಿಕ ಸಂಬಂಧ ಮುಖ್ಯವಾಗಿರುತ್ತದೆ. ಈ ಆಚರಣೆಗಳನ್ನು ಸಮುದಾಯದ ಸಾಂಸ್ಕೃತಿಕ ಅಸ್ಮಿತೆಗಳು ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending