Connect with us

ದಿನದ ಸುದ್ದಿ

ಕೋರೆಗಾಂವ್ ಗಾಯಗಳನ್ನೂ, ಹರಿದ ಸಂಬಂಧಗಳನ್ನೂ ಹೊಲಿದುಕೊಳ್ಳೋಣ

Published

on

  • ಡಾ. ವಡ್ಡಗೆರೆ ನಾಗರಾಜಯ್ಯ

ಭಾರತ ಹುಣ್ಣಿಮೆಯ ದಿನ ಹೊಸ ಗಡಿಗೆಯ ತಣ್ಣೀರಿನಿಂದ ಹರಿದ ಗಾಯಗಳನ್ನು ತೊಳೆದು, ಹೊಸ ಸೂಜಿ – ಹೊಸ ದಾರಗಳಿಂದ ನೆತ್ತರು ಸೋರುವ ಗಾಯಗಳನ್ನು ಹೊಲಿದುಕೊಂಡ ಗೋಸಂಗಿ ಯುದ್ಧ ವೀರರ ನೆನಪು ನಮ್ಮ ತಾಯಂದಿರ ನಾಲಗೆ ಮೇಲೆ ಇನ್ನೂ ಮಾಸಿಲ್ಲ.

ಗೊಲ್ಲರ ರಾಜ ಕಾಟಮರಾಜನ ತಮ್ಮನಾದ ಚೆನ್ನಯ್ಯಬಾಲುಡು ಸಾರಿದ್ದ ಯುದ್ಧದಲ್ಲಿ ನೆರವಾಗಿ, ವೈರಿಗಳ ವಿರುದ್ಧ ಕಾದಾಡಿ ಚೆನ್ನಯ್ಯಬಾಲುಡುವಿಗೆ ಜಯ ತಂದುಕೊಡಲೆಂದು ಕಾರಂಪೂಡಿಯ ಯುದ್ಧಕ್ಕೆ ಹೋಗಿದ್ದ ಮಾದಿಗರ ಗೋಸಂಗಿ ಯುದ್ಧವೀರರು, ರಣರಂಗದಲ್ಲಿ ವೈರಿಗಳ ವಿರುದ್ಧ ಕಾದಾಡಿ ಕತ್ತಿಗಳಿಂದ ಗಾಯಗೊಂಡು ಇದೇ ಭಾರತ ಹುಣ್ಣಿಮೆಯ ಸಂಜೆ ಊರಿಗೆ ಮರಳಿ ಬರುತ್ತಾರೆ.‌

ಅಂದು ಸಂಜೆ ಊರಿನ ಹೊರಗೆ ಹೊಸ ಗಡಿಗೆಯ ತಣ್ಣೀರಿನಿಂದ ಹರಿದ ಗಾಯಗಳನ್ನು ತೊಳೆದು, ಹೊಸ ಸೂಜಿ – ಹೊಸ ದಾರಗಳಿಂದ ನೆತ್ತರು ಸೋರುವ ಗಾಯಗಳನ್ನು ಹೊಲಿದುಕೊಳ್ಳುತ್ತಾರೆ. ಚೆನ್ನಯ್ಯಬಾಲುಡುವಿಗೆ ಜಯವನ್ನು ತಂದುಕೊಟ್ಟ ಅವರು, ಆ ಗೊಲ್ಲರ ದೊರೆಯಿಂದ ಅನೇಕ ಬಿರುದುಗಳನ್ನೂ ಇನಾಮುಗಳನ್ನೂ ಪಡೆಯುತ್ತಾರೆ.

ಈ ಯುದ್ಧದ ನೆನಪನ್ನು ಮರೆಯಲಾರದ ಮಾದಿಗ ಜನಪದ ತಾಯಂದಿರು ಕಾವ್ಯವನ್ನು ಕಟ್ಟಿ ಹಾಡತೊಡಗಿ, ತಮ್ಮ ಸಮುದಾಯದ ಯುದ್ಧವೀರರ ಕಥನವನ್ನು ಮೌಖಿಕ ಧಾರೆಯಲ್ಲಿ ತಲೆಮಾರುಗಳಿಂದ ಸಾಗಿಸಿಕೊಂಡು ಬಂದಿದ್ದಾರೆ. ಗೋಸಂಗಿ ಯುದ್ಧ ವೀರರ ಈ ಕಥನವು ಗಾರುಡಿ ಗಂಗಭಾರತ ಕಾವ್ಯವಾಗಿ ನರದ ರಕ್ತದಂತೆ ಹರಿಯುತ್ತಿದೆ.

ಅಂತೆಯೇ ಭೀಮಾ ಕೋರೆಗಾಂವ್ ಮಹಾರ್ ವೀರ ಯೋಧರ ನೆನಪೂ ನಮ್ಮಿಂದ ಎಂದಿಗೂ ಮಾಸುವುದಿಲ್ಲ. ಬ್ರಿಟೀಷರಿಗೆ ಜಯ ತಂದುಕೊಡಲು ಪೇಶ್ವೆಗಳ ವಿರುದ್ಧ ಕಾದಾಡಿದ ಕೋರೆಗಾಂವ್ ವೀರಗಾಥೆ (1818 ಜನವರಿ 1) ದಲಿತರ ಪಾಲಿನ ಸ್ವಾಭಿಮಾನದ ಕಥನ. ಮಹಾರ್ ರೆಜಿಮೆಂಟಿನ ಸ್ಥಾಪನೆಯ ಘನತೆಗೂ ಹೊಸ ಪ್ರಸ್ತಾನ ಬರೆದ ಈ ದಲಿತ ದಿಗ್ವಿಜಯವನ್ನು ನಾವು ಪ್ರತಿ ವರ್ಷ ಆಚರಿಸುತ್ತಾ ಬಂದಿದ್ದೇವೆ.

ಸಂವಿಧಾನ ಕತೃ ಡಾ.ಬಿ.ಆರ್.ಅಂಬೇಡ್ಕರ್ ಅವರು, ಪ್ರತಿವರ್ಷ ಜನವರಿ 01 ರಂದು ಕೊರೆಗಾಂವ್ ಹತಾತ್ಮ ಯುದ್ಧವೀರರ ರಣಭೂಮಿಗೆ ಸಕುಟುಂಬ ಸಮೇತರಾಗಿ ಹೋಗಿ ಮಹಾರ್ ಸೈನಿಕರ ವಿಜಯ ಸ್ಥೂಪಕ್ಕೆ ವಂದನೆ ಸಲ್ಲಿಸಿ ಬರುತ್ತಿದ್ದರು. ಪ್ರತಿವರ್ಷ ಜನವರಿ 01 ನೇ ದಿನವನ್ನು ಕೊರೆಗಾಂವ್ ಯುದ್ಧವೀರರ ವಿಜಯ ದಿವಸವನ್ನಾಗಿ ಆಚರಿಸುವುದನ್ನು ಅಂಬೇಡ್ಕರ್ ರೂಢಿಗೆ ತಂದರು.

ಕೋಮುವಾದಿ ಮರಾಠ ಪೇಶ್ವೆಗಳ ವಿರುಧ್ಧ ಹೋರಾಡಿ ಮಡಿದು ಹುತಾತ್ಮರಾದ ಕೊರೆಗಾಂವ್ ವೀರರ ವಿಜಯ ದಿವಸವನ್ನಾಗಿ ನಾವು ಜನವರಿ-02 ರ ದಿನವನ್ನು ಆಚರಿಸುತ್ತಿದ್ದೇವೆ.

2018 ನೇ ಜನವರಿ 02 ರ ಭಾರತ ಹುಣ್ಣಿಮೆಯ ದಿನ ದಲಿತರ ಪಾಲಿಗೊಂದು ಕರಾಳ ನೆನಪನ್ನು ಬೆಸೆದುಬಿಟ್ಟಿದೆ. ಕರುಣಾಮೈತ್ರಿಗಳ ಸಂಕೇತವಾದ ನೀಲಿ ಮತ್ತು ಪಂಚಶೀಲ ಧ್ವಜಗಳನ್ನು ಹಿಡಿದು ಮಹಾರಾಷ್ಟ್ರದ ಕೊರೆಗಾಂವ್ ವೀರಭೂಮಿಗೆ ಕೋರೆಗಾಂವ್ ವಿಜಯ ದಿವಸದ 200 ನೇ ವರ್ಷಾಚರಣೆಯನ್ನು ಆಚರಿಸಲು ಹೋಗಿದ್ದ ನಮ್ಮ ಬಂಧುಗಳ ವಿರುದ್ಧ, ಮತೀಯ ಧ್ವೇಷ ಮತ್ತು ರಕ್ತಪಾತದ ಸಂಕೇತವಾದ ಭಗವಾಧ್ವಜವನ್ನು ಹಿಡಿದುಕೊಂಡು ಬಂದ ಸಂಘಪರಿವಾರದ ಗೂಂಡಾಗಳು ಗುಂಪು ಘರ್ಷಣೆ ನಡೆಸಿ ನಮ್ಮ ಅನೇಕ ಬಂಧುಗಳು ಗಾಯಗೊಂಡರು.

ಸಾರ್ವಜನಿಕ ಆಸ್ತಿ-ಪಾಸ್ತಿಗಳೂ ನಾಶವಾಗಿ ಸಾಮಾನ್ಯ ಜನಜೀವನ ಕದಡಿ ಹೋಯಿತು. ದಲಿತರ ಜೀವಹಾನಿಯೂ ಆಗಿಹೋದ ಅಂತಹ ಹೊತ್ತಿನಲ್ಲಿ ಸಹಜವಾಗಿ ವ್ಯಗ್ರಗೊಳ್ಳಬೇಕಿದ್ದ ದಲಿತರು ತಮ್ಮ ಕೋಪವನ್ನು ಸಾರ್ವಜನಿಕರ ಮೇಲಾಗಲೀ ಸಾರ್ವಜನಿಕ ಆಸ್ತಿ-ಪಾಸ್ತಿಗಳ ಮೇಲಾಗಲೀ ಹರಿಯಬಿಡದೆ ಶಾಂತಿಯನ್ನು ಕಾಪಾಡಿಕೊಂಡರು.

ಗೋಸಂಗಿ ಯುದ್ಧವೀರರ ಮತ್ತು ಕೋರೆಗಾಂವ್ ಯುದ್ಧ ವೀರರ ಅಮರ ಕಾವ್ಯಗಳನ್ನು ಕಟ್ಟಿ ಹಾಡುವ ಮೂಲಕ ದಲಿತರು ತಮಗಾದ ನೋವನ್ನು ಹೊರ ಹಾಕಿದರು. ಹರಿದ ಗಾಯಗಳನ್ನು ಹೊಲೆಯುವಂತೆ ಸಂಬಂಧಗಳನ್ನೂ ಹೊಲೆದುಕೊಳ್ಳುವುದನ್ನು ನಮ್ಮ ಜನಪದರು ಧ್ಯಾನಿಸಿದ್ದರು. ಇಂದು ಕೊರೆಗಾಂವ್ ವಿಜಯ ದಿವಸದ 203 ನೇ ವರ್ಷಾಚರಣೆಯ ಹೊತ್ತಿನಲ್ಲಿ ಇಲ್ಲಿಯತನಕ ‌ಮತೀಯವಾದಿಗಳಿಂದ ‌ನಮಗಾಗಿರುವ ಗಾಯಗಳನ್ನೂ, ಹರಿದ ಸಂಬಂಧಗಳನ್ನೂ ಹೊಲಿದುಕೊಳ್ಳೋಣ.

ಕರುಣಾಮೈತ್ರಿಗಳ ಸಂಕೇತವಾದ ನೀಲಿ ಮತ್ತು ಪಂಚಶೀಲ ಧ್ವಜಗಳನ್ನು ಎಲ್ಲೆಡೆ ಎತ್ತಿ ಹಿಡಿಯೋಣ.

(ಡಾ. ವಡ್ಡಗೆರೆ ನಾಗರಾಜಯ್ಯ
8722724174)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.

ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.

ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ

Published

on

ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ 82.01 ರಷ್ಟು ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಏಪ್ರಿಲ್ 10 ರಂದು ಫಲಿತಾಂಶ ಪ್ರಕಟವಾಗಿದ್ದು ಹೆಚ್ಚಿನ ವಿವರಗಳು ಬರಬೇಕಾಗಿದೆ. ಈ ವರ್ಷ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು 19644 ರೆಗ್ಯುಲರ್, 422 ಖಾಸಗಿ ಸೇರಿ 20066 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಇದರಲ್ಲಿ 15904 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 80.96 ರಷ್ಟು ಫಲಿತಾಂಶ ಪಡೆದಿದ್ದಾರೆ.

ಕಳೆದ ವರ್ಷ ಶೇ 75.72 ರಷ್ಟು ಫಲಿತಾಂಶ ಬಂದಿತ್ತು, ಈ ವರ್ಷ ಶೇ 5.24 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಜಿಲ್ಲೆಗೆ ಟಾಪ್ ಬಂದವರಲ್ಲಿ ಕಲಾ ವಿಭಾಗದಲ್ಲಿ ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಮಹಿಳಾ ಪದವಿ ಪೂರ್ವ ಕಾಲೇಜಿನ ಹೀನಬಾನು ಪಿ.ಕೆ. 591 ಅಂಕ ಪಡೆದು ಶೇ 98.5, ವಾಣಿಜ್ಯ; ದಾವಣಗೆರೆ ತಾ; ಗೋಪನಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೇಷ್ಮಾ ಬಾನು 589 ಅಂಕ ಪಡೆದು ಶೇ 98.16 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಲೋಕಿಕೆರೆ ರಸ್ತೆಯಲ್ಲಿನ ಸರ್‍ಎಂವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೊಹಮ್ಮದ್ ಸುಹೇಲ್, ಅಮೃತ ದೊಡ್ಡ ಬಸಪ್ಪನವರ್, ಅನನ್ಯ ಹೆಚ್.ಎಸ್, ಆಕಾಶ್ ಸಿ.ಪಾಟೀಲ್ ಇವರು 593 ಅಂಕ ಶೇ 98.83 ರಷ್ಟು ಸಮನಾದ ಫಲಿತಾಂಶ ಹಂಚಿಕೊಂಡಿದ್ದಾರೆ ಎಂದರು.

ವಿಭಾಗವಾರು ಫಲಿತಾಂಶ; ಕಲಾ ವಿಭಾಗದಲ್ಲಿ ಶೇ 57.83 ರಷ್ಟು ಫಲಿತಾಂಶ ಬಂದಿದ್ದು ಇದರಲ್ಲಿ ಗಂಡು ಶೇ 45, ಹೆಣ್ಣು ಶೇ 66.46 ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 76.22 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 65.5, ಹೆಣ್ಣು ಶೇ 80.8, ವಿಜ್ಞಾನ ವಿಭಾಗದಲ್ಲಿ ಶೇ 91.13 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 91.39 ಹಾಗೂ ಹೆಣ್ಣು ಶೇ 88.69 ರಷ್ಟು ಫಲಿತಾಂಶ ಬಂದಿದೆ.

ನಗರಕ್ಕಿಂತ ಗ್ರಾಮೀಣರ ಮೇಲುಗೈ; ಫಲಿತಾಂಶದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಶೇ 1.1 ರಷ್ಟು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 73.65 ಗಂಡು, ಶೇ 84.6 ಹೆಣ್ಣು ಉತ್ತೀರ್ಣರಾದರೆ ನಗರ ಪ್ರದೇಶದ ಒಟ್ಟು ಫಲಿತಾಂಶ ಶೇ 80.75 ರಲ್ಲಿ ಗಂಡು ಶೇ 74.41, ಹೆಣ್ಣು ಶೇ 81.37 ರಷ್ಟು ಫಲಿತಾಂಶ ಪಡೆದಿದ್ದಾರೆ.

ಶೇ 100 ರಷ್ಟು ಫಲಿತಾಂಶ ಪಡೆದ ಶಾಲೆಗಳು; ದಾವಣಗೆರೆ ಅಂಜುಂ ಪದವಿ ಪೂರ್ವ ಕಾಲೇಜು, ಲೇಬರ್ ಕಾಲೋನಿ, ಜೈನ್ ಟ್ರಿನಿಟಿ ಪದವಿ ಪೂರ್ವ ಕಾಲೇಜು, ಅನ್‍ಮೋಲ್ ಪದವಿ ಪೂರ್ವ ಕಾಲೇಜು, ಶ್ರೀ ಗೀತಂ ಪದವಿ ಪೂರ್ವ ಕಾಲೇಜು, ದಾವಣಗೆರೆ ಇವು ಶೇ 100 ರಷ್ಟು ಫಲಿತಾಂಶ ಪಡೆದ ಕಾಲೇಜುಗಳಾಗಿವೆ.

ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂರ್, ಶಾಲಾ ಶಿಕ್ಷಣ, ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್‍ಗೆ ರೂ.10 ಪಡೆದ ಶಾಪಿಂಗ್ ಮಾಲ್‍ಗೆ ದಂಡ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499 ಪಾವತಿಸಿ, ಡೆನಿವಾ ಪ್ಯಾಂಟ್ ಖರೀದಿಸಿದರು. ಈ ವೇಳೆಯಲ್ಲಿ ಇಲ್ಲಿಯೇ ಲೈಫ್ ಸ್ಟೈಲ್ ಇಂಟರ್‍ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್ ಮಾರಾಟದ ವೇಳೆ ಹೆಚ್ಚುವರಿಯಾಗಿ ರೂ.10/- ಪೇಪರ್ ಬ್ಯಾಗ್‍ಗೆ ಪಡೆಯಲಾಯಿತು.

ಗ್ರಾಹಕರಾದ ಆರ್. ಬಸವರಾಜ್ ಇವರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ದಾಖಲಿಸಿ ವಾಣಿಜ್ಯ ಸಂಸ್ಥೆ ವಿರುದ್ದ ರೂ.50,000 ಮಾನಸಿಕ ಕಿರುಕುಳ ಹಾಗೂ ದೂರು ದಾಖಲಿಸಲು ಖರ್ಚು ಮಾಡಿದ ಮೊ ರೂ.10,000 ಗಳನ್ನು ಪಾವತಿಸುವಂತೆ ದೂರನ್ನು ದಾಖಲಿಸಿದರು.

ವಾಣಿಜ್ಯ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದು ಈ ಸಂಸ್ಥೆ ವಕೀಲರ ಮುಖಾಂತರ ಹಾಜರಾಗಿ ಬ್ಯಾಗ್‍ಗೆ ಹೆಚ್ಚುವರಿಯಾಗಿ ಪಡೆದ ಹಣಕ್ಕೆ ಸಮರ್ಥಿಸಿಕೊಂಡಿತ್ತು. ಆದರೆ ಗ್ರಾಹಕರ ಆಯೋಗ ಈ ಮೊದಲು ರಾಷ್ಟ್ರೀಯ ಗ್ರಾಹಕರ ಆಯೋಗ ಬಿಗ್ ಬಜಾರ್ ವಿರುದ್ಧ ಸಾಯಲ್ ದಾವ ಪ್ರಕರಣದ ನ್ಯಾಯ ನಿರ್ಣಯದ ತೀರ್ಪಿನ ಅನುಗುಣವಾಗಿ ವಾಣಿಜ್ಯ ಸಂಸ್ಥೆಗಳು ಕ್ಯಾರಿ ಬ್ಯಾಗ್‍ಗಳಿಗೆ ಹೆಚ್ಚಿನ ಹಣವನ್ನು ಪಡೆಯುವಂತಿಲ್ಲ ಎಂಬ ತೀರ್ಪನ್ನು ಉಲ್ಲೇಖಿಸಿ ಹೆಚ್ಚುವರಿಯಾಗಿ ರೂ.10 ಪಡೆದ ಸಂಸ್ಥೆಯ ಕ್ರಮವು ಗ್ರಾಹಕರ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅನುಚಿತ ವ್ಯಾಪಾರ ಪದ್ದತಿಯೆಂದು ಪರಿಗಣಿಸಿ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಶ್ರೀಮತಿ ಬಿ.ಯು. ಗೀತಾ ಇವರು ವಾಣಿಜ್ಯ ಸಂಸ್ಥೆಗೆ ರೂ.7000 ದಂಡವಿದಿಸಿ ಆದೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending