Connect with us

ರಾಜಕೀಯ

ಕೇಜ್ರಿವಾಲ್ ಮತ್ತು ದೆಹಲಿ ಗಲಭೆ

Published

on

  • ವಿ.ನಟರಾಜ್

ದೆಹಲಿಯ ಮತೀಯ ಗಲಭೆಗಳ ನಿರ್ವಹಣೆಯ ವಿಚಾರದಲ್ಲಿ ಅಗತ್ಯಕ್ಕಿಂತಲೂ ಹೆಚ್ಚಿನ ಅಸಹಾಯಕತೆಯನ್ನು ಪ್ರದರ್ಶಿಸಿರುವ ದೆಹಲಿಯ ಮುಖ್ಯಮಂತ್ರಿ ಕೇಜ್ರಿವಾಲ್‌ ಅವರ ಬಗ್ಗೆ‌ ಬಹುತೇಕ ಗೆಳೆಯರು ಧಿಡೀರನೆ ಭ್ರಮನಿರಸನಗೊಂಡಿದ್ದಾರೆ.

ಮತೀಯ ಗಲಭೆ ವಿಚಾರದಲ್ಲಿ ಮೋದಿ-ಶಾ ಜೋಡಿಯ ‘ಎಂದಿನ ಸಂವೇದನಾಶೂನ್ಯತೆ’ಯನ್ನು, ಅದರಲ್ಲಿಯೂ ವಿಶೇಷವಾಗಿ ಕಾಶ್ಮೀರದ ವಿಚಾರದಲ್ಲಿ ತಾನು ಭಲೇ ಭಲೇ ಉಕ್ಕಿನ ಮನುಷ್ಯ ಎಂದು ಸಾಬೀತು ಪಡಿಸಿರುವುದಾಗಿ ತೊಡೆ ತಟ್ಟುತ್ತಿದ್ದ ಗೃಹ ಸಚಿವ ಅಮಿತ್‌ ಶಾ, ದೆಹಲಿ ಗಲಭೆಯ ವಿಚಾರದಲ್ಲಿ ಬೇಕೆಂದೇ ಬೆನ್ನುಮೂಳೆ ಕಳೆದುಕೊಂಡ ಬಗ್ಗೆ ಹೆಚ್ಚಿನ ತಕರಾರು ಪ್ರಗತಿಪರರಿಗೂ ಇದ್ದಂತಿಲ್ಲ.

ಯಾಕೆಂದರೆ, ಇಂಥದ್ದನ್ನೆಲ್ಲಾ ಈ ಜೋಡಿಯ ಆಡಳಿತ ಕಾಲದಲ್ಲಿ ನೋಡಲು ಬಹುಶಃ ಎಲ್ಲ ಪ್ರಗತಿಪರರೂ ಮಾನಸಿಕವಾಗಿ ಸಿದ್ಧರಾಗಿದ್ದಂತಿದೆ. ಆದರೆ, ಕೇಜ್ರಿವಾಲ್‌ ಕೂಡಾ ಇಷ್ಟು ಬೇಗನೇ ಮತೀಯಗಲಭೆಗಳಂತಹ ಗಂಭೀರ ವಿಷಯದಲ್ಲಿ ಶುದ್ಧಾತಿಶುದ್ಧ ರಾಜಕಾರಣಿಯಾಗಿ ಹೊರಹೊಮ್ಮುತ್ತಾರೆ, ಆಪ್ ನ ದೆಹಲಿ ರಾಜಕಾರಣಿಗಳು ರಂಗೋಲಿ ಕೆಳಗೆ ತೂರುವಂತಹ ಮಾತುಗಳನ್ನು ಆಡತೊಡಗುತ್ತಾರೆ ಎನ್ನುವುದನ್ನು ಬಹುತೇಕ ಗೆಳೆಯರು ನಿರೀಕ್ಷಿಸಿರಲಿಲ್ಲ.

ಇದೀಗ ದೇಶದ್ರೋಹ ಪ್ರಕರಣದಲ್ಲಿ ಜೆಎನ್‌ಯು ಮಾಜಿ ಮುಖಂಡ ಕನ್ಹಯ್ಯ ಕುಮಾರ್ ಹಾಗೂ ಸಂಗಡಿಗರ ವಿರುದ್ಧ ದೇಶದ್ರೋಹದ ಪ್ರಕರಣದ ವಿಚಾರಣೆಗೆ ದೆಹಲಿ ಸರ್ಕಾರ ಅನುಮತಿ ನೀಡಿರುವುದು ಸಹ ಅನೇಕರಿಗೆ ಅಚ್ಚರಿ ಉಂಟುಮಾಡಿದೆ. ದೆಹಲಿ ಗಲಭೆಯ ವಿಚಾರದಲ್ಲಿ ಆಪ್‌ ನ ಧೋರಣೆಯನ್ನು ಖಂಡಿಸಿದ್ದ ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ಪರೋಕ್ಷವಾಗಿ ಕೇಜ್ರಿ ಸರ್ಕಾರ ಚಾಟಿ ಬೀಸಿದೆಯೇ ಎನ್ನುವ ಅನುಮಾನ ಮೇಲುನೋಟಕ್ಕೇ ಗೋಚರಿಸುತ್ತಿದೆ.

ದೆಹಲಿ ಮತೀಯ ಗಲಭೆಗಳ ಮೊದಲ ಮೂರು ದಿನ ಆಪ್ ವರ್ತಿಸಿದ ರೀತಿ ಹೇಗಿತ್ತೆಂದರೆ, ಇಂತಹದ್ದೊಂದು ಗಲಭೆ ಸಂಭವಿಸಿದರೆ ಮಾತ್ರ ದೆಹಲಿ ಸರ್ಕಾರದ ಕೆಳಗೆ ಪೊಲೀಸ್‌ ಇಲಾಖೆ ಹಾಗೂ ಆ ಮೂಲಕ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹೊಣೆ ಬರಬೇಕು ಎನ್ನುವ ತನ್ನ ವಾದಕ್ಕೆ ಬಲ ಬರುತ್ತದೆ ಎನ್ನುವಂತಿತ್ತು. ಕೇಜ್ರಿವಾಲ್‌ ಅವರಂತೂ ‘ಹೆಚ್ಚುವರಿ’ ಅಸಹಾಯಕತೆಯನ್ನೇ ತಮ್ಮ ಮೇಲೆ ಆವಾಹಿಸಿಕೊಂಡವರಂತೆ ‘ಪೊಲೀಸ್‌ ಇಲಾಖೆ ನಮ್ಮ ಬಳಿ ಇಲ್ಲ’, ಎನ್ನುವುದನ್ನು ಸಾರಿ ಸಾರಿ ಹೇಳುವಂತೆ ಪ್ರತಿಕ್ರಿಯಿಸಿದರು.

ಇಂತಹದ್ದೊಂದು ‘ಚಾಲಾಕಿತನದ ರಾಜಕಾರಣ’ವನ್ನು ಕೇಜ್ರಿವಾಲ್ ಯಾವತ್ತಿದ್ದರೂ‌ ಪ್ರದರ್ಶಿಸುತ್ತಾರೆ ಎನ್ನುವುದು ಅವರ ಹೋರಾಟಗಳನ್ನು ಹತ್ತಿರದಿಂದ ಗಮನಿಸಿದವರಿಗೆ ತಿಳಿಯದ ವಿಷಯವೇನಲ್ಲ. ಎಷ್ಟಾದರೂ ಕೇಜ್ರಿವಾಲ್ ಇಂದಿನ ಪೀಳಿಗೆ ಬಯಸುವ ಫಟಾಫಟ್ ಕಾರ್ಪೊರೆಟ್‌ ಮಾದರಿ ರಾಜಕಾರಣವನ್ನು ಅನುಸರಿಸುತ್ತಾ‌ ಅಡಳಿತಾತ್ಮಕ ವಿಷಯಗಳ ಮೂಲಕ ಅಂಕಗಳಿಸುವ ರಾಜಕಾರಣಿಯೇ ಹೊರತು ಸೈದ್ಧಾಂತಿಕವಾಗಿ ಗಟ್ಟಿಯಾದ, ದಿಟ್ಟ ಹೆಜ್ಜೆಯನ್ನು ಇಡಬಹುದಾದ ರಾಜಕಾರಣಿ ಅಲ್ಲ.

ಈ ಬಗ್ಗೆ ತಕರಾರು ತೆಗೆಯ ಬಯಸುವವರ ವಾದಗಳಿಗೆ ಕೇಜ್ರಿವಾಲ್ ರ ಈವರೆಗಿನ ನಡೆಗಳಲ್ಲಿ ಹೆಚ್ಚಿನ ಸಾಕ್ಷ್ಯಗಳೂ ಸಿಗುವುದಿಲ್ಲ. ಕೇಜ್ರಿ ಹೀಗೇಕೆ ಎಂದು ಕಾರಣ ಹುಡುಕುತ್ತಾ ಹೊರಟವರಿಗೆ, ಇದೆಲ್ಲದರ ಬೀಜಗಳು ಇರುವುದು ಅವರನ್ನು ಅಧಿಕಾರ ರಾಜಕಾರಣದ ಕೇಂದ್ರಕ್ಕೆ ತಂದ “ಭ್ರಷ್ಟಾಚಾರದ ವಿರುದ್ಧ”ದ ಹೋರಾಟದಲ್ಲಿ ಎನ್ನುವುದನ್ನು ಇಲ್ಲಿ ಮತ್ತೊಮ್ಮೆ ನೆನಪಿಸಬೇಕಾಗುತ್ತದೆ.

ಭ್ರಷ್ಟಾಚಾರದ ವಿರುದ್ಧದ ಹೋರಾಟ ಎನ್ನುವ ಅಣ್ಣಾ ಹಜಾರೆಯವರ ನೇತೃತ್ವದಲ್ಲಿ ನಡೆದ ‘ದೆಹಲಿ ಕೇಂದ್ರಿತ’ ಹೋರಾಟವನ್ನು ಬಿಜೆಪಿ ಹೈಜಾಕ್‌ ಮಾಡದಂತೆ ಕೇಜ್ರಿವಾಲ್‌ ತಡೆದರು ಎನ್ನುವುದನ್ನು ಹೊರತುಪಡಿಸಿದರೆ, ಅವರು ಭ್ರಷ್ಟಾಚಾರದ ಹೋರಾಟವನ್ನು ಮತೀಯವಾದಿ ಮನಸ್ಸುಗಳನ್ನು ದೂರವಿಟ್ಟು ಕಟ್ಟಿದರು ಎಂದು ಯಾರೂ ಎದೆತಟ್ಟಿ ಹೇಳಲಾರರು.

ಒಂದೆಡೆ ಕಾಂಗ್ರೆಸ್‌ನ ಅಹಿಂದ ವೋಟ್‌ ಬ್ಯಾಂಕ್‌, ಮತ್ತೊಂದೆಡೆ ಬಿಜೆಪಿಯ ಮತೀಯವಾದಿ ರಾಜಕಾರಣ ಈ ಎರಡರಿಂದ ಸೈದ್ಧಾಂತಿಕವಾಗಿ ಸಮಾನಾಂತರವಾಗಿ ಇದ್ದುಕೊಂಡು ತಮ್ಮದೇ ಆದ ವೋಟ್‌ ಬ್ಯಾಂಕ್‌ ರೂಪಿಸಿಕೊಳ್ಳುವುದು ಸುದೀರ್ಘ ಅವಧಿಯನ್ನು, ಶ್ರಮವನ್ನು ಬೇಡುವಂತಹ ರಾಜಕಾರಣ ಎನ್ನುವುದನ್ನು ಅರಿತಿದ್ದ ಕೇಜ್ರಿವಾಲ್, ಫಟಾಫಟ್‌ ರಾಜಕಾರಣಕ್ಕೆ ಮೊರೆ ಹೋದರು.

ಈ ಎರಡೂ ರಾಷ್ಟ್ರೀಯ ಪಕ್ಷಗಳಿಂದ ಸುಲಭಕ್ಕೆ‌ ‘ವೋಟು ಕೀಳುವ’ ರಾಜಕಾರಣಕ್ಕೆ ತಮ್ಮನ್ನು ಮುಡಿಪಾಗಿಟ್ಟುಕೊಂಡರು. ಕೇಜ್ರಿವಾಲ್‌ ಭ್ರಷ್ಟಾಚಾರದ ವಿರುದ್ಧ ಮಾತನಾಡಿದಷ್ಟೇ ಉತ್ಸಾಹದಿಂದ ಸಾಮಾಜಿಕ ನ್ಯಾಯ, ಮತೀಯ ಸಾಮರಸ್ಯದಂತಹ ವಿಷಯಗಳ ಬಗ್ಗೆ ಮಾತನಾಡುವುದಿಲ್ಲ. ಈ ವಿಚಾರಗಳು ಬಂದಾಗ ಪ್ರಗತಿಪರರ ಮನಸ್ಸಿಗೆ ನೋವಾಗದಂತೆ ಎಚ್ಚರಿಕೆ ವಹಿಸುತ್ತಾರಾದರೂ, ಸ್ಥಳೀಯ ರಾಜಕಾರಣದಲ್ಲಿ ತಮ್ಮನ್ನು ಬೆಂಬಲಿಸುವ ಮೂಲತಃ ಬಿಜೆಪಿಯ ಮತದಾರರ ಆಕ್ರೋಶವನ್ನು ಕಟ್ಟಿಕೊಳ್ಳುವಷ್ಟು ದೂರಕ್ಕೆ ಅವರೆಂದೂ ಹೋಗುವುದಿಲ್ಲ. ಒಂದು ವೇಳೆ ಹೋದರೂ, ಅವಕಾಶ ನೋಡಿ ಚಕ್ಕನೆ ಹಿಂದಕ್ಕೆ ಪಲ್ಟಿ ಹೊಡೆದು ಬಿಡುತ್ತಾರೆ!

ಈ ವಿಷಯದಲ್ಲಿ ಅವರೊಬ್ಬ ಉತ್ತಮ ‘ಅಕ್ರೋಬ್ಯಾಟ್’. ಕೇಜ್ರಿವಾಲ್‌ ಅವರನ್ನು ಮುಂದೆ ಬಿಟ್ಟುಕೊಂಡ ಹಿಂದೆ ಓಡುವುದೆಂದರೆ ಅದೊಂದು ದುಸ್ಸಾಹಸವೇ ಸರಿ. ಕೇಜ್ರಿ, ಯಾವಾಗ ಛಕ್ಕನೆ ಲೇನ್‌ ಬದಲಿಸಿ ಹಿಂದಕ್ಕೆ ತಿರುಗಿ ಓಡಿಬಿಡುತ್ತಾರೋ ಹೇಳಲುಬಾರದು! ಹಾಗಾಗಿಯೇ, ಅವರ ಈ ವರಸೆಗಳನ್ನು ಕಂಡಾಗ, ಸದಾಕಾಲ ಅಧಿಕಾರದ ಕೇಂದ್ರದಲ್ಲಿರಲು ಅತ್ತಿಂದಿತ್ತ ಲಾಗ ಹಾಕುವ ಜೆಡಿಯು ಮುಖಂಡ ನಿತೀಶ್‌ ಕುಮಾರ್ ಅವರ ಸುಧಾರಿತ ಆವೃತ್ತಿಯಂತೆ ಕೇಜ್ರಿ ಭಾಸವಾಗುತ್ತಾರೆ!

ಬಿಜೆಪಿಯನ್ನು ವಿರೋಧಿಸುವ ಕಟ್ಟರ್‌ ಕಾಂಗ್ರೆಸ್ಸಿಗರು ಹಾಗೂ ಸಮಾಜವಾದಿಗಳಿಗೆ, ಅದೇ ರೀತಿ, ಕಾಂಗ್ರೆಸ್‌ ಹಾಗೂ ಸಮಾಜವಾದಿಗಳನ್ನು ಕಂಡರೆ ಉರಿದುಬೀಳುವ ಉಗ್ರ ಹಿಂದುತ್ವವಾದಿಗಳಿಗೆ ಕೇಜ್ರಿವಾಲ್‌ ಒಂದು ತಂಗುದಾಣದಂತೆ. ಹೇಗಾದರೂ ಸರಿ ತಮ್ಮ ವೋಟು ಕಾಂಗ್ರೆಸ್ಸಿಗೆ ಹೋಗಬಾರದು ಎಂದು ಬಯಸುವವರು, ಎಷ್ಟಾದರೂ ಸರಿ, ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂದು ಇಚ್ಛಿಸುವವರು ಕೇಜ್ರಿವಾಲ್‌ ರ ಪರಿಣಾಮಕಾರಿ ಆಡಳಿತ ಶೈಲಿಗೆ ಜೈಕಾರ ಹಾಕಿ ಅವರಿಗೆ ಮತ ನೀಡುತ್ತಾರೆ. ಹೀಗೆ ತಮಗೆ ಯಾವುದೇ ಸೈದ್ಧಾಂತಿಕ ಬಲದ ಸಹಾಯವಿಲ್ಲದೆ ಹರಿದುಬರುವ ಮತಗಳಿಂದಾಗಿ, ಕೇಜ್ರಿಯವರು ಯಾವತ್ತೂ ಹ್ಯಾಪಿಯೇ!

ಸೈದ್ಧಾಂತಿಕವಾಗಿ ಪೊಳ್ಳಾದರೂ ಸಹ ಇದು ಅಧಿಕಾರದ ಪಡಸಾಲೆಯಲ್ಲಿ ಬಹುಕಾಲ ಉಳಿಯುವ ವಾಸ್ತವ ರಾಜಕಾರಣದ ತಂತ್ರ ಎನ್ನುವುದನ್ನು ಅವರ ಅರ್ಥ ಮಾಡಿಕೊಂಡು, ಜೀರ್ಣಿಸಿಕೊಂಡಿದ್ದಾರೆ. ಪಾಪ, ಇದಾವುದರ ಅರಿವಿಲ್ಲದೆ, ಕೇಜ್ರಿ ಅವರಲ್ಲಿ ನೆಹರು ಪ್ರಣೀತ ಅಭಿವೃದ್ಧಿ ಮಾದರಿಯನ್ನು, ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ನಿರೀಕ್ಷಿಸಲು ಹೊರಟವರು ಭ್ರಮನಿರಸನಕ್ಕೆ ಒಳಗಾಗುತ್ತಾರೆ…

ಇನ್ನು, ಈ ಭ್ರಷ್ಟಾಚಾರದ ವಿರುದ್ಧದ ಹೋರಾಟ ಎನ್ನುವ ಪರಿಕಲ್ಪನೆ ಇಂದು ಬಹುತೇಕವಾಗಿ ಅವಕಾಶವಾದಿ ರಾಜಕಾರಣದ ಸರಕಾಗಿಬಿಟ್ಟಿದೆ. ಇದು ಎಲ್ಲರನ್ನೂ ಒಳಗೊಳ್ಳುವ, ‘ರಾಜಕೀಯ ಚಲಾವಣೆ’ಯ ಹೋರಾಟ ಎನ್ನುವ ಕಾರಣಕ್ಕೆ ಸುಲಭಕ್ಕೆ ನಮ್ಮ ಅನೇಕ ಭರವಸೆಯ ನಾಯಕರು ಗೊತ್ತಿದ್ದೋ, ಗೊತ್ತಿಲ್ಲದೆಯೋ, ಉದ್ದೇಶಪೂರ್ವಕವಾಗಿಯೋ, ದುರುದ್ದೇಶಪೂರ್ವಕವಾಗಿಯೋ ಇದಕ್ಕೆ ಜೋತು ಬೀಳುತ್ತಾರೆ. ವಿಪರ್ಯಾಸವೆಂದರೆ, ಭ್ರಷ್ಟಾಚಾರವನ್ನು ಅಸಾಮರ್ಥ್ಯದೊಂದಿಗೂ, ಅಸಾಮರ್ಥ್ಯವನ್ನು ಮೀಸಲಾತಿಯೊಂದಿಗೂ, ಮೀಸಲಾತಿಯನ್ನು ಮೇಲ್ಜಾತಿ ವಿರೋಧಿ ರಾಜಕಾರಣದೊಂದಿಗೂ ಚಕಚಕನೆ ಜೋಡಿಸಿ ಬಿಡುವ ದುರಾಲೋಚನಾ ಪ್ರವಾಹವೊಂದನ್ನು ಈ ದೇಶದಲ್ಲಿ ವ್ಯವಸ್ಥಿತವಾಗಿ ನಿರ್ಮಿಸಲಾಗಿದೆ.

ಈ ಪ್ರವಾಹದ ಚಾಲಕಶಕ್ತಿಯಾಗಿರುವ ವರ್ಗವು ಯಾವುದೇ ಬಗೆಯ ಸಾಮಾಜಿಕ ಅಸಮಾನತೆಯ ಬಗ್ಗೆ ಅಪ್ಪಿತಪ್ಪಿಯೂ ಬಾಯಿಬಿಡುವುದಿಲ್ಲ, ಬದಲಿಗೆ, ಭ್ರಷ್ಟಾಚಾರದ ಬಗ್ಗೆ ಮಾತ್ರ ಉದ್ದುದ್ದ ಭಾಷಣ ಬಿಡುತ್ತದೆ. ನಿರುದ್ಯೋಗ, ಕುಸಿದಿರುವ ಆರ್ಥಿಕತೆ, ಹೆಚ್ಚುತ್ತಿರುವ ಸಾಮಾಜಿಕ ಉದ್ವಿಗ್ನತೆ, ಕಂದಾಚಾರ, ಮೌಢ್ಯಗಳ ವಿರುದ್ಧ ಇದಕ್ಕೆ ಪ್ರತಿಭಟಿಸುವ ಇರಾದೆ ಇರುವುದಿಲ್ಲ. ಮತೀಯವಾದದ ಬಗ್ಗೆಯಂತೂ ತುಟಿ ಬಿಚ್ಚುವುದೇ ಇಲ್ಲ. ಹೀಗಾಗಿಯೇ ಈ ಬಗೆಯ ಹೋರಾಟಗಳು ಬಹುತೇಕ ಬಾರಿ ಸಂವಿಧಾನ ವಿರೋಧಿಗಳಿಗೆ ಶಕ್ತಿಯನ್ನು ತುಂಬಿವೆ!

ಅಂದಹಾಗೆ, ಕೊನೆಯದಾಗಿ, ಕಾಶ್ಮೀರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ತಿಂಗಳುಗಟ್ಟಲೆ ಮೊಬೈಲ್ ಹಾಗೂ ಇಂಟರ್ನೆಟ್‌ ಸೇವೆಗಳನ್ನು ಬಂದ್‌ ಮಾಡಿದ್ದನ್ನು ಸಮರ್ಥಿಸಿಕೊಂಡಿದ್ದ ಕೇಂದ್ರ ಸರ್ಕಾರ ದೆಹಲಿಯಲ್ಲಿ ಸಾಲು ಸಾಲು ಹೆಣಗಳು ಉರುಳಿದರೂ ಇಂತಹ ನಿರ್ಧಾರ ಕೈಗೊಳ್ಳಲಿಲ್ಲ! ಕೇವಲ ಒಂದು ವಾರ ಕಾಲವಾದರೂ ದೆಹಲಿಯಲ್ಲಿ ಮೊಬೈಲ್‌ ಹಾಗೂ ಇಂಟರ್‌ನೆಟ್‌ ಸೇವೆಗಳನ್ನು ಕೇಂದ್ರ ಸರ್ಕಾರ ಬಂದ್‌ ಮಾಡಲಿಲ್ಲವೇಕೆ? ಮೊದಲೇ ಕುಸಿದು ಕೂತಿರುವ ಅರ್ಥಿಕತೆಯ ಈ ಸಂದರ್ಭದಲ್ಲಿ ದೇಶದ ಯಾವುದೇ ಮೊಟ್ರೋ ನಗರಿಯಲ್ಲಿ ಇಂಟರ್ನೆಟ್‌ ಸೇವೆಯನ್ನು ಬ್ಯಾನ್‌ ಮಾಡುವುದು ಕೇಂದ್ರ ಸರ್ಕಾರಕ್ಕೆ ಸಾಧ್ಯವೇ? ಇಲ್ಲ. ಕಾಶ್ಮೀರದ ಪ್ರಯೋಗವನ್ನೇನಾದರೂ ದೇಶದ ಇತರೆಡೆ ಮಾಡಿದರೆ ಅದರಿಂದ ದೇಶದ ಆರ್ಥಿಕತೆಗೆ ಎಂತಹ ಹೊಡೆತ ಬೀಳಬಹುದು ಎನ್ನುವುದು ಅದಕ್ಕೆ ಗೊತ್ತು. ಹಾಗಾಗಿಯೇ ಅಂತಹ ದುಸ್ಸಾಹಸಕ್ಕೆ ಕೈ ಹಾಕಲು ಹೋಗುವುದಿಲ್ಲ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.

ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.

ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಿವಿಧ ಜಿಲ್ಲೆಗಳಲ್ಲಿ ಡಾ. ಬಾಬು ಜಗಜೀವನ್ ರಾಮ್ 117ನೇ ಜನ್ಮ ದಿನಾಚರಣೆ

Published

on

ಸುದ್ದಿದಿನ ಡೆಸ್ಕ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಾ. ಬಾಬು ಜಗಜೀವನ್ ರಾಮ್ ಅವರ 117ನೇ ಜನ್ಮ ದಿನಾಚರಣೆ ಪ್ರಯುಕ್ತ ವಿಧಾನ ಸೌದದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ್ಪ, ಹಿರಿಯ ಶಾಸಕ ಈ. ತುಕಾರಾಮ್, ಮಾಜಿ ಸಚಿವ ಹೆಚ್.ಆಂಜನೇಯ, ವಿಧಾನ ಪರಿಷತ್ ಸದಸ್ಯ ಸುದಾಮ ದಾಸ್, ಮಹಿಳಾ ಆಯೋಗದ ಅದ್ಯಕ್ಷೆ ಡಾ. ನಾಗಲಕ್ಷ್ಮಿ ಸೇರಿ ಹಲವರು ಉಪಸ್ಥಿತರಿದ್ದರು. ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ ರಾಂ ಅವರ ಜನ್ಮ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಲಾಯಿತು.

ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಜಗಜೀವನರಾಂ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಮಂಡ್ಯದ ಡಿಸಿ ಪಾರ್ಕ್ ಎದುರು ಇರುವ ಜಗಜೀವನ್‌ರಾಮ್ ಪ್ರತಿಮೆಗೆ ಜಿಲ್ಲಾಡಳಿತದ ವತಿಯಿಂದ ಮಾಲಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಎಸ್ಪಿ ಎನ್.ಯತೀಶ್ ಸೇರಿದಂತೆ ಅಧಿಕಾರಿಗಳ ವರ್ಗ ಹಾಗೂ ಜಗಜೀವನ್‌ರಾಮ್ ಅನುಯಾಯಿಗಳು ಭಾಗವಹಿಸಿದ್ದರು.

ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಬಾಬು ಜಗಜೀವನ ರಾಂ ಅವರ ಅವರ 117ನೇ ಜಯಂತಿಯನ್ನು ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಾಂಕೇತಿಕವಾಗಿ ಆಚರಿಸಲಾಯಿತು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬಾಬು ಜಗಜೀವನ್ ರಾಂ ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಇಂದು ಚುನಾವಣಾ ಆಯೋಗ ಸಮಾವೇಶ

Published

on

ಸುದ್ದಿದಿನ ಡೆಸ್ಕ್ : ಕಳೆದ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ 11 ರಾಜ್ಯಗಳ ನಗರ ಪಾಲಿಕೆ ಆಯುಕ್ತರು ಮತ್ತು ಆಯ್ದ ಜಿಲ್ಲಾ ಚುನಾವಣಾ ಅಧಿಕಾರಿಗಳೊಂದಿಗೆ ಕೇಂದ್ರ ಚುನಾವಣಾ ಆಯೋಗ ಇಂದು ದೆಹಲಿಯಲ್ಲಿ ಸಮಾವೇಶ ನಡೆಸಲಿದೆ.

ಈ ಸಮಾವೇಶದಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಮಾರ್ಗಗಳ ಕುರಿತು ಚರ್ಚಿಸಲಾಗುವುದು ಮತ್ತು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಡಿಮೆ ಮತದಾನದ ಸಮಸ್ಯೆಯನ್ನು ಪರಿಹರಿಸಲು ಉದ್ದೇಶಿತ ಮತ್ತು ನಿರ್ದಿಷ್ಟ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಲಾಗುವುದು.

ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಹೈದರಾಬಾದ್, ಅಹಮದಾಬಾದ್, ಪುಣೆ, ಥಾಣೆ, ನಾಗ್ಪುರ, ಪಾಟ್ನಾ ಸಾಹಿಬ್, ಲಖನೌ ಮತ್ತು ಕಾನ್ಪುರ ನಗರ ಪಾಲಿಕೆಯ ಆಯುಕ್ತರು ಮತ್ತು ಬಿಹಾರ ಮತ್ತು ಉತ್ತರದ ಆಯ್ದ ಜಿಲ್ಲಾ ಚುನಾವಣಾ ಅಧಿಕಾರಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತರುಗಳಾದ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ಸಮಾವೇಶದ ಅಧ್ಯಕ್ಷತೆ ವಹಿಸಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending