ರಾಜಕೀಯ
ಸಂವಿಧಾನ ಮತ್ತು ಧರ್ಮ : ಸದ್ಯದ ಅಪವ್ಯಾಖ್ಯಾನ
ಸಮಸ್ಯೆಯೊಂದನ್ನು ನಿರ್ಲಕ್ಷಿಸಿದಾಗ ಅದು ತನ್ನ ಪ್ರಾಬಲ್ಯ ಹಿಗ್ಗಿಸಿಕೊಳ್ಳಲಾರಂಭಿಸುತ್ತದೆ. ಸಕಾಲಿಕ ಪರಿಹಾರೋಪಾಯ ಶೋಧಿಸಿಕೊಂಡು ಎದುರುಗೊಳ್ಳದಿದ್ದರೆ ಅದು ಬೃಹದಾಕಾರ ಪಡೆದುಕೊಳ್ಳುತ್ತದೆ. ಬಿಡಿಸಲಾಗದ ಬಿಕ್ಕಟ್ಟಾಗಿ ಮಾರ್ಪಾಡಾಗಿ ನಾನಾ ಸಂಕಟಗಳನ್ನು ನೆಲೆಗೊಳಿಸಿಬಿಡುತ್ತದೆ. ಪರಿಹಾರದ ಮಾರ್ಗ ಯಾವುದು ಎಂಬುದು ಗೊತ್ತಿದ್ದರೂ ಅದನ್ನು ಅನುಸರಿಸುವುದಕ್ಕೆ ಕಷ್ಟಸಾಧ್ಯ ಎಂಬ ಭಾವವನ್ನು ಸಾರ್ವತ್ರಿಕಗೊಳಿಸುವಷ್ಟರ ಮಟ್ಟಿಗೆ ಆ ಸಂಕಟಗಳು ತೀವ್ರವಾಗಿ ಬಾಧಿಸುತ್ತವೆ. ಹೀಗೆ ಸಂಕಟಗೊಳಪಟ್ಟ ವ್ಯಕ್ತಿಗತ ಸಂಕೀರ್ಣತೆ ಸಾಮೂಹಿಕ ಸ್ವರೂಪ ಆವಾಹಿಸಿಕೊಂಡು ಜನಸಮುದಾಯಗಳನ್ನು ದಿಗ್ಮೂಢರನ್ನಾಗಿಸುತ್ತದೆ. ಆಂತರ್ಯದೊಳಗೆ ಮೂಡುವ ಅಸಮಾಧಾನ ಸಹನೆಯನ್ನು ಕಳೆದಿಡುತ್ತದೆ. ಆ ಸಂದರ್ಭದ ಅಸಹನೆಯು ಹಿಂಸೆಯೊಂದಿಗಿನ ದೃಷ್ಟಿಕೋನಗಳನ್ನು ಚಿಗುರಿಸಿಕೊಳ್ಳಲು ನೆರವಾಗುತ್ತದೆ. ಈ ಹಂತದಲ್ಲಿಯೇ ದ್ವಂದ್ವ, ಅಸ್ಪಷ್ಟತೆ, ಅವಿವೇಕತನ, ಅಸಂಬದ್ಧತೆ ಮತ್ತು ಕ್ರೌರ್ಯದ ನಡವಳಿಕೆಗಳು ದೇಶದ ಸಾಮಾಜಿಕ ಅಸ್ಮಿತೆಯನ್ನೇ ಧ್ವಂಸಗೊಳಿಸುತ್ತವೆ. ಭಾರತ ಅಂಥದ್ದೊಂದು ಅಪಾಯಕಾರಿ ಪ್ರವೃತ್ತಿಯ ಮಿತಿಯೊಂದಿಗೆ ಹೆಜ್ಜೆಯಿರಿಸುತ್ತಿದೆ. ಇದನ್ನು ತಿಳಿದುಕೊಂಡು ಸರಿಹಾದಿ ತೋರುವ ದಾರ್ಶನಿಕತೆಯನ್ನು ನಿರೂಪಿಸಬೇಕಾದ ನಾಯಕರಲ್ಲದ ನಾಯಕರೆನ್ನಿಸಿಕೊಂಡವರು ಸಮಸ್ಯಾತ್ಮಕತೆಯನ್ನು ಸ್ಥಾಯಿಯಾಗಿಸಿ ತಮ್ಮ ಅಸ್ತಿತ್ವವನ್ನು ಶಾಶ್ವತಗೊಳಿಸಿಕೊಳ್ಳುವ ಹಂಬಲಗೊಳೊಂದಿಗೇ ಗುರುತಿಸಿಕೊಂಡಿದ್ದಾರೆ.
ಈ ದೇಶವನ್ನು ಕಾಡುತ್ತಿರುವ ಸಮಸ್ಯೆಗಳು ಯಾವುವು ಎಂಬುದು ಅವುಗಳ ವ್ಯತಿರಿಕ್ತ ಪರಿಣಾಮಗಳಿಗೆ ಈಡಾದವರೂ ಸೇರಿದಂತೆ ಹಲವರಿಗೆ ಗೊತ್ತಿದೆ. ಈ ಸಮಸ್ಯೆಗಳ ಮೂಲ ಎಲ್ಲಿಯದು ಎಂಬುದರ ಅರಿವೂ ಇದೆ. ಇಡೀ ದೇಶದಲ್ಲಿ ಸಮಸ್ಯೆಗಳೇ ಇಲ್ಲ ಎಂಬಂಥ ಪರಮೋಚ್ಛ ಭ್ರಮೆಯ ವರ್ತುಲಕ್ಕೆ ಸಿಲುಕೊಳ್ಳಬಾರದು ಎಂಬ ಪ್ರಜ್ಞೆಯನ್ನು ಕಟ್ಟಿಕೊಳ್ಳುವುದಕ್ಕೆ ಅನುಕೂಲ ಒದಗಿಸಿಕೊಡುವ ನಕಾರಾತ್ಮಕತೆಯ ಅನುಭವವು ಪ್ರತಿಯೊಬ್ಬರಿಗೂ ಆಗುತ್ತಲೇ ಇರುತ್ತದೆ. ಆದರೆ, ಅದನ್ನು ಹಲವರು ಅಭಿವ್ಯಕ್ತಿಸುವುದಿಲ್ಲ. ಬದಲಾವಣೆ ಬಯಸುವ ಚಿಂತಕರು ಮತ್ತು ಜನಸಾಮಾನ್ಯ ವಲಯ ಆ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಾರೆ. ಹಾಗೆ ಅವರು ಮುಕ್ತ ಆಲೋಚನೆಯನ್ನು ಹರಿಬಿಟ್ಟಾಗ ಅದು ಅಪಾಯಕಾರಿ ಎಂದು ತಪ್ಪಾಗಿ ಅರ್ಥೈಸುವ ಜಾಯಮಾನದ ನಡೆಯನ್ನು ರಾಜಕೀಯ ವಲಯ ಈಗೀಗ ನೆಚ್ಚಿಕೊಳ್ಳುತ್ತಿದೆ. ಇಂಥ ನಡೆಯ ಕಾರಣಕ್ಕಾಗಿಯೇ ಸಂವಿಧಾನ ಮತ್ತು ಧರ್ಮ ಪರಸ್ಪರ ಸಂಘರ್ಷಿಸುವ ನೆಲೆಗಳಾಗಿ ಚರ್ಚಿಸಲ್ಪಡುತ್ತಿವೆ. ಇವೆರಡರ ಉದಾತ್ತ ಅರ್ಥವನ್ನು ಒಡೆದು ಸಂಕುಚಿತಗೊಳಿಸಿದ ಅಪವ್ಯಾಖ್ಯಾನವನ್ನೇ ಜನಸಮುದಾಯ ನೆಚ್ಚಿಕೊಳ್ಳುವಂತೆ ಒತ್ತಡ ಹಾಕುತ್ತಿವೆ. ಇದೇ ಬಗೆಯ ಅನುಕೂಲಕರ ಸಮಯಾವಕಾಶವನ್ನು ಕಾಯ್ದುಕುಳಿತಂತೆ ರಾಜಕೀಯ ವಲಯ ತನ್ನ ದಾಳಗಳನ್ನು ಪ್ರಯೋಗಿಸುತ್ತಿದೆ.
ಸದ್ಯದ ವ್ಯತಿರಿಕ್ತ ಸ್ಥಿತಿಗತಿಗಳು ಅತ್ಯಂತ ನಿಖರವಾಗಿ ಬಿಟ್ಟುಕೊಡುತ್ತಿರುವ ಸುಳಿವುಗಳು ಹಲವಿವೆ. ಅವುಗಳಲ್ಲಿ ಧರ್ಮ ಮತ್ತು ದೇವರಿಗೆ ಸಂಬಂಧಿಸಿದಂತೆ ಇರುವ ವ್ಯಕ್ತಿಗತ ಸಂಕುಚಿತತೆಯನ್ನು ಸಾಂಸ್ಥಿಕಗೊಳಿಸಿ ಪ್ರಭಾವವನ್ನು ವ್ಯಾಪಕಗೊಳಿಸುವ ಪ್ರಯತ್ನವೂ ಒಂದು. ಧರ್ಮವನ್ನು ಮತ್ತೊಂದು ಧರ್ಮದ ವಿರುದ್ಧ ಎತ್ತಿಕಟ್ಟುವುದು, ಆಯಾ ಧರ್ಮಗಳವರ ನಂಬಿಕೆಯ ಆವರಣದಲ್ಲಿ ಆದ್ಯತೆ ಪಡೆದಿರುವ ದೇವರುಗಳ ಆರಾಧನೆಯ ಅವಕಾಶಗಳನ್ನು ಸ್ವಾರ್ಥಕ್ಕೆ ತಿರುಗಿಸಿಕೊಳ್ಳುವುದು ಈಗೀಗ ಸಾರ್ವತ್ರಿಕವಾಗಿದೆ. ಸಮಸ್ಯೆಯೊಂದು ವ್ಯಕ್ತಿಯನ್ನು ಭಾಧಿಸುತ್ತಿರುತ್ತದೆ. ವ್ಯಕ್ತಿಗತ, ಕೌಟುಂಬಿಕ, ಸಾಮಾಜಿಕ ಮತ್ತು ಆಡಳಿತಾತ್ಮಕ ಸಮಸ್ಯಾತ್ಮಕ ಸಂಕೀರ್ಣತೆಗಳೊಂದಿಗಿನ ವಾಸ್ತವಿಕತೆಯೇ ಆ ಸಮಸ್ಯೆಗೆ ಕಾರಣವಾಗಿರುತ್ತದೆ. ಆದರೆ, ಧರ್ಮ ಮತ್ತು ದೇವರನ್ನು ಅಪವ್ಯಾಖ್ಯಾನಕ್ಕೊಳಪಡಿಸಿ ಆ ಬಗ್ಗೆ ಸಂಕುಚಿತವಾಗಿ ಅರ್ಥೈಸಿ ಭಯಹುಟ್ಟಿಸಲಾಗುತ್ತದೆ. ಹೀಗೆ ಭಯವನ್ನು ಹುಟ್ಟಿಸಿ ಸ್ವಾರ್ಥ ಸಾಧಿಸಿಕೊಳ್ಳುವ ಹಿತಾಸಕ್ತಿಗಳ ಅಸ್ತಿತ್ವದಲ್ಲಿಯೇ ಮಹತ್ವದ ಸುಳಿವನ್ನು ಗೊತ್ತುಮಾಡಿಕೊಳ್ಳಬಹುದು. ಈ ಹಿತಾಸಕ್ತಿಗಳು ಸಮಸ್ಯೆಗಳನ್ನು ಉದ್ದೇಶಪೂರ್ವಕವಾಗಿ ಸ್ಥಾಯಿಯಾಗಿಸಿ ಜನರೊಳಗಿನ ಆಲೋಚಿಸುವ ಶಕ್ತಿಯನ್ನೇ ತಡೆದು ನಿಲ್ಲಿಸುತ್ತವೆ. ಆವರ ಆಲೋಚನೆಯ ಸಾಧ್ಯತೆಗಳನ್ನು ಮೊಟಕುಗೊಳಿಸಿ ಧರ್ಮವಲ್ಲದ ಸಂಗತಿಗಳ ಕಡೆಗೆ ತಿರುಗಿಸುತ್ತವೆ. ಅವರ ಮನಸ್ಸಿನಲ್ಲಿ ದೇವರುಗಳ ಬಗ್ಗೆ ಭಯದ ಭಾವ ಮೂಡಿಸುತ್ತವೆ. ಆರಾಧಿಸದಿದ್ದರೆ ಶಿಕ್ಷೆ ಗ್ಯಾರಂಟಿ, ದೇವರೇ ಮುನಿಸಿಕೊಂಡರೆ ಮುಂದಿದೆ ವ್ಯತಿರಿಕ್ತ ಪರಿಣಾಮ ಎಂಬ ಅತಾರ್ಕಿಕತೆಯನ್ನೇ ಮಂಡಿಸಿ ದಾರಿ ತಪ್ಪಿಸುತ್ತವೆ.
ಮೊದಲೇ ಸಮಸ್ಯೆಗಳ ಮಧ್ಯೆ ನರಳುತ್ತಿರುವವರ ಮುಂದೆ ಧರ್ಮದಲ್ಲಿಲ್ಲದ ಸಂಗತಿಗಳನ್ನು ವೈಭವೀಕರಿಸಿ ಹೇಳಿದರೆ ಸ್ವಾರ್ಥದ ಉದ್ದೇಶಗಳನ್ನು ಈಡೇರಿಸಿಕೊಳ್ಳಬಹುದು ಎಂಬ ಕಾರ್ಯಸೂಚಿ ಅತ್ಯಂತ ಎಚ್ಚರದಲ್ಲಿ ಯಶಸ್ವಿಯಾಗಿ ನಿರ್ವಹಿಸಲ್ಪಡುತ್ತದೆ. ಹೀಗಾದರೆ ಹೀಗಾಗುತ್ತದೆ ಎಂದು ತಾರ್ಕಿಕವಾಗಿ ಮಾತನಾಡುವವರಂತೆ ನಟಿಸುವವರೇ ರಂಜನಾಮಾಧ್ಯಮೋದ್ಯಮದ ಮೂಲಗಳಾಗುತ್ತಾರೆ. ಸಮಾಜದ ವಿವಿಧ ಜನವರ್ಗಗಳು ಇಂಥವರನ್ನು ಆರಾಧಿಸಿಕೊಂಡೇ ಇದ್ದರೆ ತಮ್ಮ ಬೇಳೆ ಬೇಯಿಸಿಕೊಳ್ಳಬಹುದು ಎಂಬ ರಾಜಕೀಯ ವಲಯದ ನಿರೀಕ್ಷೆಗಳು ಈ ಹಂತದಲ್ಲಿಯೇ ಈಡೇರಿಬಿಡುತ್ತವೆ. ಸಮಸ್ಯೆಯನ್ನು ಶಾಶ್ವತವಾಗಿ ಉಳಿಯುವಂತೆ ನೋಡಿಕೊಂಡು ಅದು ಬಿಕಟ್ಟಿನ ಸ್ವರೂಪ ಪಡೆದುಕೊಂಡಾಗಲೂ ಪರಿಹಾರದ ನಾಟಕವಾಡಿ ಧರ್ಮ, ದೇವರ ಕುರಿತಾಗಿ ಭಯಭೀತಿ ಸೃಷ್ಟಿಸಿ ಸಾಮಾಜಿಕ ಚಲನೆಯನ್ನು ನಿಲ್ಲಿಸಿಬಿಡುವ ರಾಜಕೀಯ ಉದ್ದೇಶಗಳು ಯಶಸ್ಸು ಪಡೆದುಬಿಡುತ್ತವೆ. ಇದೇ ರಾಜಕೀಯ ಪ್ರವೃತ್ತಿ ಇಂದು ಸಂವಿಧಾನಕ್ಕೆ ಸವಾಲೆಸೆಯುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ.
ಇದು ಎಲ್ಲ ಕಾಲದ ಸಮಸ್ಯೆಯೂ ಹೌದು. ಬಹುಷಃ ಈ ಕಾರಣಕ್ಕಾಗಿಯೇ ಇರಬಹುದು; ಈಗಾಗಲೇ ಆಗಿಹೋದ ದಾರ್ಶನಿಕರು ದೇವರು ಮತ್ತು ಧರ್ಮದ ಕುರಿತ ನಂಬಿಕೆಯ ಜಗತ್ತನ್ನು ಆಧರಿಸಿಯೇ ತಾತ್ವಿಕತೆಯನ್ನು ಪ್ರತಿಪಾದಿಸಿದರು. ಭೌತಿಕ ಜಗತ್ತಿನ ಒಳಗೇ ಮನುಷ್ಯಸಹಜ ದೌರ್ಬಲ್ಯಗಳೊಂದಿಗಿನ ಊನಗಳನ್ನು ತಮ್ಮೊಳಗಿನ ದಾರ್ಶನಿಕತೆಯೊಂದಿಗೆ ಎದುರುಗೊಂಡರು. ನಿಜವಾದ ಧರ್ಮ ಏನು ಎಂಬುದನ್ನು ಅರ್ಥೈಸಿದರು. ದೇವರ ಅಸ್ತಿತ್ವವು ಒಳಿತಿನೊಂದಿಗೇ ಇದೆ ಎಂಬ ವಿವೇಕವನ್ನು ಕಟ್ಟಿಕೊಡಲು ಪ್ರಯತ್ನಿಸಿದರು. ನಿಸರ್ಗದ ಅನೇಕ ಕೌತುಕಮಯ ಸಂಗತಿಗಳನ್ನು ಕಾಡಿಸಿಕೊಂಡು ಅವುಗಳನ್ನು ಜೀವಪರ ಅಂತಃಕರಣದೊಂದಿಗೆ ಮನುಷ್ಯ ಬದುಕಿನ ಉದ್ಧಾರಕ್ಕೆ ಬಳಸಿಕೊಳ್ಳಬಹುದಾದ ಒಳನೋಟಗಳ ಮೇಲೆ ಬೆಳಕು ಚೆಲ್ಲಿದರು. ಧರ್ಮ-ದೇವರ ಬಗೆಗಿನ ನಂಬಿಕೆಯ ಜಗತ್ತನ್ನು ಅಲುಗಾಡಿಸದೇ ಅಂತಸ್ಥಗೊಂಡಿರುವ ಮೂಢನಂಬಿಕೆಯ ಬೇರುಗಳನ್ನು ಕಿತ್ತೆಸೆಯಲು ತಾತ್ವಿಕ ಮಾರ್ಗವನ್ನು ಕಂಡುಕೊಂಡರು. ಆ ಮೂಲಕ ಧರ್ಮ ಮತ್ತು ದೇವರನ್ನು ಉದಾತ್ತತೆಯೊಂದಿಗೆ ತಾದಾತ್ಮ್ಯಗೊಳಿಸುವ ಚಲನಾತ್ಮಕ ಆಕೃತಿಗಳನ್ನು ಕೊಡುಗೆಗಳನ್ನಾಗಿ ನೀಡಿದರು. ಈಗ ಈ ಸಾಧ್ಯತೆಯ ತದ್ವಿರುದ್ಧದ ದಿಕ್ಕುಗಳೇ ಪರಮಮಾರ್ಗಗಳಾಗಿ ಪರಿಗಣಿತವಾಗುತ್ತಿವೆ. ಅವೇ ಪರಮೋಚ್ಛ ಎಂಬ ಬಿಂಬಗಳನ್ನು ಅತ್ಯಂತ ಚಾಣಾಕ್ಷಯುತವಾಗಿ ಕಟ್ಟಿಕೊಡಲಾಗುತ್ತಿದೆ. ಅಂಥ ಎಲ್ಲ ಸಂಕುಚಿತತೆಯನ್ನು ರಾಜಕೀಯ ಪೋಷಿಸುತ್ತಿದೆ. ಧರ್ಮ-ದೇವರನ್ನು ನೆಚ್ಚಿಕೊಂಡ ಜನರ ನಂಬಿಕೆಯ ಜಗತ್ತನ್ನು ಮೌಢ್ಯಕ್ಕೆ ತಿರುಗಿಸಿ ಅಪನಂಬಿಕೆಗಳನ್ನು ಮುನ್ನೆಲೆಗೆ ತಂದು ತನ್ನನ್ನು ವಿಜೃಂಭಿಸಿಕೊಳ್ಳುತ್ತಿದೆ.
ಧರ್ಮ ಮತ್ತು ದೇವರು – ಇವೆರಡೂ ಭಾವನಾತ್ಮಕ ಸಾಂಸ್ಥಿಕತೆಯನ್ನು ಅಳವಡಿಸಿಕೊಂಡು ನಿರಂತರವಾಗಿ ಜನರನ್ನು ಶೋಷಿಸಲು ಬಳಕೆಯಾದ ಇತಿಹಾಸವಿದೆ. ಅದನ್ನು ಮರೆಗೆ ಸರಿಸಿ ಅಧಿಕಾರ, ಹಣ ಮತ್ತು ಪ್ರತಿಷ್ಠೆಗಳನ್ನು ಸ್ಥಾಯಿಯಾಗಿಸಿಕೊಳ್ಳಲು ರಾಜಕೀಯ ಕೇಂದ್ರಗಳು ಪ್ರಯತ್ನಿಸಿ ಯಶಸ್ವಿಯಾಗುತ್ತಲೇ ಇವೆ. ಅವುಗಳಿಗೆ ಅನುಗುಣವಾಗಿಯೇ ತಮ್ಮನ್ನು ಪ್ರತಿಷ್ಠಾಪಿಸಿಕೊಂಡ ವಿವಿಧ ಜಾತಿಗಳ ಜನಸಮೂಹ ಅವು ನಿರೀಕ್ಷಿಸುವ ಸಂಕುಚಿತತೆಯ ಮನೋಧರ್ಮಕ್ಕೆ ಪಕ್ಕಾಗುತ್ತಲೇ ಇದೆ. ಬದಲಾವಣೆಯ ಪ್ರಬಲ ಅಸ್ತ್ರ ಎಂದು ಪರಿಗಣಿಸಲ್ಪಟ್ಟ ಶಿಕ್ಷಣ ಮತ್ತು ಅದರ ಮೂಲಕ ವ್ಯಾಪಕಗೊಳ್ಳುತ್ತದೆ ಎಂದುಕೊಂಡಿದ್ದ ಮೌಲ್ಯಾತ್ಮಕ ಪ್ರಭೆಯನ್ನು ಮತ್ತೆ ಮತ್ತೆ ಸೋಲಿಸುತ್ತಿರುವುದು ಇದೇ ಸಂಕುಚಿತತೆಯೇ. ಇದನ್ನೇ ಅಧಿಕಾರ ಕೇಂದ್ರಗಳ ಕಡೆಗೆ ನೋಟ ನೆಟ್ಟ ರಾಜಕೀಯ ವಲಯದ ಪ್ರತಿನಿಧಿಗಳು ತಮ್ಮ ಬಂಡವಾಳವಾಗಿಸಿಕೊಳ್ಳುತ್ತಿದ್ದಾರೆ. ಈಗ ಒಂದು ಹೆಜ್ಜೆ ಮುಂದೆ ಹೋಗಿ ಧರ್ಮದಲ್ಲಿ ಇಲ್ಲದೇ ಇರುವ ಜೀವವಿರೋಧಿ ಅಮಾನವೀಯ ಸಾಂಪ್ರದಾಯಿಕತೆಯನ್ನು ಸಂವಿಧಾನಕ್ಕಿಂತಲೂ ಮಿಗಿಲು ಎಂದು ಪ್ರತಿಪಾದಿಸುತ್ತಿದ್ದಾರೆ. ಆ ಪ್ರತಿಪಾದನೆಯನ್ನು ಸಮಾಜದ ವಿವಿಧ ಜನವರ್ಗಗಳು ಒಪ್ಪಿಕೊಳ್ಳಲೇಬೇಕು ಎಂಬ ವಿತಂಡವಾದವನ್ನು ಮುಂದಿಡುತ್ತಿದ್ದಾರೆ.
ಈ ನಕಾರಾತ್ಮಕ ಹೆಜ್ಜೆಗಳಿಗೆ ಪರ್ಯಾಯವಾಗಿ ವಿಶ್ವಾಸಾರ್ಹವಾದ ಸಂವಿಧಾನಬದ್ಧ ರಾಜಕೀಯ ಸಂಸ್ಕøತಿ ರೂಪುಗೊಳ್ಳಬೇಕಾದ ಅನಿವಾರ್ಯತೆ ಇದೆ. ಆದರೆ, ಅದು ಸಾಧ್ಯವಾಗುತ್ತಿಲ್ಲ. ಧರ್ಮವಲ್ಲದ ಸಂಗತಿಗಳನ್ನು ವೈಭವೀಕರಿಸಿ ಮುನ್ನೆಲೆಗೆ ತಂದ ವಲಯದವರೂ ತಾವು ಬದಲಾಗಬೇಕಾದ ಆಲೋಚನೆಗಳನ್ನು ಹರಿಬಿಡುತ್ತಿದ್ದಾರೆ ಎಂಬುದೇನೋ ಸಮಾಧಾನ ತರುವ ಸಂಗತಿ. ಈ ದೇಶದ ಸಾಂಸ್ಕøತಿಕ ವೈವಿಧ್ಯತೆಯ ಮಹತ್ವವನ್ನು ತಡವಾಗಿಯಾದರೂ ಹೇಳುತ್ತಿದ್ದಾರೆ ಎಂದುಕೊಳ್ಳಬಹುದು. ಎಲ್ಲ ಧರ್ಮಗಳವರನ್ನು ಗೌರವಿಸಬೇಕು ಎನ್ನುವ ಭಾವವನ್ನು ಸಂವಹಿಸುತ್ತಿದ್ದಾರೆ ಎಂದು ಖುಷಿಪಡಬಹುದು. ಅಂಥ ಆಶಾದಾಯಕ ನುಡಿಗಳು ನಡೆಯಲ್ಲೂ ಮೇಳೈಸಿಕೊಳ್ಳಬೇಕು.
ಹಾಗಾಗುವುದಕ್ಕೆ ಭಾರತದ ರಾಜಕಾರಣ ಅಷ್ಟು ಸುಲಭವಾಗಿ ಬಿಡುವುದಿಲ್ಲ. ಇಲ್ಲಿಯ ರಾಜಕಾರಣಕ್ಕೆ ಬದಲಾವಣೆಗಿಂತ ಸ್ಥಗಿತತೆಯೇ ಹೆಚ್ಚು ಅಚ್ಚುಮೆಚ್ಚು. ಧರ್ಮ-ದೇವರು ಕೇಂದ್ರಿತ ಸಾಂಪ್ರದಾಯಿಕತೆಯೊಂದಿಗೆ ತಳುಕು ಹಾಕಿಕೊಂಡಿರುವ ಸಮಸ್ಯೆಗಳು ಜಟಿಲವಾದಷ್ಟೂ ಅದಕ್ಕೆ ಎಲ್ಲಿಲ್ಲದ ಖುಷಿ. ಜನರು ಈ ಸಾಂಪ್ರದಾಯಿಕತೆಯ ತೊಳಲಾಟಗಳಲ್ಲೇ ಕಾಲ ಕಳೆದರೆ ನಿಜವಾದ ಬೆಳವಣಿಗೆಗೆ ಸಂಬಂಧಿಸಿದ ಚಿಂತನೆಯೇ ಹುಟ್ಟುವುದಿಲ್ಲ. ಆಗ ಜನರು ಎಚ್ಚೆತ್ತುಕೊಳ್ಳುವ ಪ್ರಮೇಯವೇ ಎದುರಾಗುವುದಿಲ್ಲ. ಇದು ದೇವರು-ಧರ್ಮಗಳ ರಕ್ಷಾಕವಚಗಳನ್ನು ಹಾಕಿಕೊಂಡು ಜನರ ಭಯವಿಹ್ವಲತೆಯನ್ನು ಬೇರೂರಿಸಿ ಮತ್ತಷ್ಟು ಗಟ್ಟಿಯಾಗಿಸಿ ಉಸಿರುಗಟ್ಟಿಸುವ ಆಟ. ತಮ್ಮನ್ನು ಸೋಲಿಸುವ ವೈಚಾರಿಕತೆ ಸನಿಹದಲ್ಲಿಯೇ ಇದೆ ಎನ್ನುವ ಸುಳಿವು ಸಿಕ್ಕ ತಕ್ಷಣವೇ ಧರ್ಮರಕ್ಷಣೆ ಮತ್ತು ದೇವರನ್ನು ಕೃತಾರ್ಥರನ್ನಾಗಿಸುವ ಕೈಂಕರ್ಯಗಳ ನೆಪದಲ್ಲಿ ಭಯವನ್ನು ಸೃಷ್ಟಿಸಿ ವಂಚಿಸುವ ಆಟ. ಇಂಥ ಆಟವನ್ನು ನಿಲ್ಲಿಸಬೇಕಾದರೆ ಪ್ರತಿಕಾಲಘಟ್ಟದಲ್ಲೂ ಸೋಲುತ್ತಲೇ ಇರುವ ಬಹುಸಂಖ್ಯಾತ ಶೋಷಿತ ಸಮುದಾಯದ ಜನರು ಸಂವಿಧಾನದ ಆವರಣಕ್ಕೆ ಮರಳಬೇಕು. ತಮ್ಮ ಸಮಸ್ಯೆಗಳಿಗೆ ಪರಿಹಾರ ತೋರುವ ಪರಿವರ್ತನಾಶೀಲ ಚಿಂತನಶೀಲ ಸದಾಶಯಗಳೊಂದಿಗೆ ಮುಖಾಮುಖಿಯಾಗಬೇಕು. ಧ್ಯಾನಸ್ಥ ಸ್ಥಿತಿಯಲ್ಲಿ ಸಂವಿಧಾನವನ್ನು ಅಂತರ್ಗತಗೊಳಿಸಿಕೊಳ್ಳಬೇಕು.
ಪರ್ಯಾಯ ರಾಜಕಾರಣದ ಸಾಧ್ಯತೆಗಳನ್ನು ಇಷ್ಟೊತ್ತಿಗಾಗಲೇ ಅತ್ಯಂತ ಚಾಣಾಕ್ಷಯುತವಾಗಿ ಪರೀಕ್ಷೆಗೊಡ್ಡಿ ತನ್ನ ಸಂವಿಧಾನಬದ್ಧ ಶಕ್ತಿಯನ್ನು ವಿಸ್ತರಿಸಿಕೊಳ್ಳಬಹುದಾಗಿದ್ದ ರಾಜಕೀಯ ಪಕ್ಷಗಳು ಮತ್ತೆ ಅಧಾರ್ಮಿಕ ಸಂಕುಚಿತತೆಯೊಂದಿಗಿನ ಶ್ರೇಷ್ಠತೆಯ ವ್ಯಸನದಿಂದ ಬಳಲುತ್ತಿರುವ ಸಾಂಪ್ರದಾಯಿಕ ಶಕ್ತಿಗಳ ಜೊತೆಗೇ ಕೈಜೋಡಿಸಿ ತಮ್ಮ ಅಧಿಕಾರ ಪಡೆಯುವ ಹಂಬಲಗಳನ್ನು ಜೀವಂತಗೊಳಿಸಿಕೊಳ್ಳುತ್ತಿವೆ. ಮತ್ತವೇ ಜಾತಿ ವೈರುಧ್ಯಗಳು. ಮತ್ತದೇ ಅಧಾರ್ಮಿಕ ಸಂಘರ್ಷ. ಮೇಲು-ಕೀಳುಗಳ ಅಂತರ್ಯುದ್ಧದ ಕಪಟಕಿರುಕುಳ ಯಾನ. ಸಂವಿಧಾನವನ್ನು ಗೆಲ್ಲಿಸುವ ಇಚ್ಛಾಶಕ್ತಿಯ ಕೊರತೆ. ಅಲ್ಲಲ್ಲಿ ಕಂಡುಬರುವ ಮಾನವೀಯತೆಯ ಒರತೆಗಳನ್ನು ಉದ್ದೇಶಪೂರ್ವಕವಾಗಿ ಇಲ್ಲವಾಗಿಸಿಬಿಡುವ ಹುನ್ನಾರಗಳ ತಕಧಿಮಿಗುಟ್ಟುವ ಕ್ರೂರನರ್ತನ. ಉದಾತ್ತ ತಾತ್ವಿಕತೆಯ ಪರಿಭಾಷೆಗಳನ್ನು ಅಪವ್ಯಾಖ್ಯಾನಗೊಳಿಸುವ ಸಾಂಪ್ರದಾಯಿಕತೆ ಅಸ್ತಿತ್ವ ಇನ್ನೆಷ್ಟು ದಿನ? ಕಾಲವೇ ಉತ್ತರಿಸಬೇಕು ಎಂದು ಸುಮ್ಮನೆ ಕುಳಿತುಕೊಳ್ಳಬೇಕೇ? ಯೋಚಿಸಲಾರಂಭಿಸಬೇಕೇ……?
(-ಡಾ.ಎನ್.ಕೆ.ಪದ್ಮನಾಭ
ಸಹಾಯಕ ಪ್ರಾಧ್ಯಾಪಕರು
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ
ಉಜಿರೆ,ಇ-ಮೇಲ್ ವಿಳಾಸ: nkpadmanabh@gmail.com
ಮೊಬೈಲ್: 9972998300)
ದಿನದ ಸುದ್ದಿ
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ
ಸುದ್ದಿದಿನ ಡೆಸ್ಕ್ : ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.
ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಇದೇ 30 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಇದೇ ವೇಳೆ ಬಿಹಾರದಲ್ಲಿ ನಾಮಪತ್ರ ಸಲ್ಲಿಕೆಗೆ ನಾಳೆ ಕಡೆ ದಿನವಾಗಿದ್ದು, ಈ ತಿಂಗಳ 30 ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಏಪ್ರಿಲ್ 2ರಂದು ನಾಮತ್ರ ಹಿಂಪಡೆಯುವಿಕೆಗೆ ಕೊನೆಯ ದಿನವಾಗಿರುತ್ತದೆ.
ಏಪ್ರಿಲ್ 19 ರಂದು 17 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಅದರಂತೆ ತಮಿಳುನಾಡಿನಲ್ಲಿ 39, ರಾಜಸ್ಥಾನದಲ್ಲಿ 12, ಉತ್ತರ ಪ್ರದೇಶದಲ್ಲಿ 8, ಮಧ್ಯಪ್ರದೇಶದಲ್ಲಿ 6, ಉತ್ತರಾಖಂಡ, ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ತಲಾ 5 , ಬಿಹಾರದಲ್ಲಿ 4, ಪಶ್ಚಿಮ ಬಂಗಾಳದಲ್ಲಿ 3, ಅರುಣಾಚಲ ಪ್ರದೇಶ, ಮಣಿಪುರ, ಮೆಘಾಲಯದಲ್ಲಿ ತಲಾ 2 ಮತ್ತು ಛತ್ತೀಸ್ಗಢ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ, ಅಂಡಮಾನ್-ನಿಕೋಬಾರ್ ದ್ವೀಪಗಳು, ಜಮ್ಮು-ಕಾಶ್ಮೀರ, ಲಕ್ಷದ್ವೀಪ ಮತ್ತು ಪುದುಚೇರಿಯಲ್ಲಿ ತಲಾ ಒಂದು ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.
ಎರಡನೇ ಹಂತದಲ್ಲಿ 89 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ನಾಳೆ ಅಧಿಸೂಚನೆ ಹೊರಡಿಸಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
ಸುದ್ದಿದಿನ ಡೆಸ್ಕ್ : 2024ರ ಲೋಕಸಭಾ ಚುನಾವಣೆಯಲ್ಲಿ ಅಂದಾಜು ಒಂದು ಕೋಟಿ 80 ಲಕ್ಷ ಹೊಸ ಮತದಾರರು ತಮ್ಮ ಅಮೂಲ್ಯ ಹಕ್ಕನ್ನು ಮೊದಲ ಬಾರಿಗೆ ಚಲಾಯಿಸಲಿದ್ದಾರೆ. ಇವರೆಲ್ಲ 18-19ರ ಪ್ರಾಯದವರು.
ಮೊದಲ ಬಾರಿಗೆ ಮತ ಚಲಾಯಿಸುವ ಯುವಕರಿಗೆ ಅವರ ಈ ಪವಿತ್ರ ಕರ್ತವ್ಯದ ಮಹತ್ವವನ್ನು ಮನಗಾಣಿಸುವ ಸಲುವಾಗಿ ಸಾಮಾಜಿಕ ಜಾಲತಾಣಗಳಲ್ಲಿ ’ನಾನು ಖಂಡಿತ ಮತ ಚಲಾಯಿಸುತ್ತೇನೆ’ ಎನ್ನುವ ಪ್ರಚಾರ ಆಂದೋಲನಗಳು ನಡೆಯುತ್ತಿವೆ.
ಈ ಬಾರಿ ಚುನಾವಣೆಯಲ್ಲಿ ಭಾಗವಹಿಸುವ ಯುವ ಮತದಾರರ ಪೈಕಿ 20ರಿಂದ 29ವರ್ಷ ವಯೋಮಾನದ ಅಂದಾಜು 19 ಕೋಟಿ 74 ಲಕ್ಷ ಮತದಾರರು ಪಾಲ್ಗೊಳ್ಳಲಿದ್ದಾರೆ. 18 ವರ್ಷಕ್ಕೆ ಮತದಾನದ ಹಕ್ಕು ದೊರೆಯುವುದಾದರೂ ಈಗ 17 ವರ್ಷ ತುಂಬಿರುವ ಯುವಜನ ಸಮೂಹದಿಂದ 13.4ಲಕ್ಷಕ್ಕೂ ಅಧಿಕ ಅರ್ಜಿಗಳನ್ನು ಮುಂಚಿತವಾಗಿಯೇ ಸ್ವೀಕರಿಸಲಾಗಿದೆ.
ಕೇಂದ್ರ ಚುನಾವಣಾ ಆಯೋಗ ಯುವ ಜನರಿಗೆ ಮತದಾನಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಸಚಿನ್ ತೆಂಡುಲ್ಕರ್ ಮತ್ತು ರಾಜಕುಮಾರ್ ರಾವ್ ಅವರಂತಹ ರಾಷ್ಟ್ರೀಯ ದಿಗ್ಗಜರಿಂದ ಸಂದೇಶಗಳನ್ನು ಪ್ರಸಾರ ಮಾಡುತ್ತಿದೆ. ಸಾಮಾಜಿಕ ಮಾಧ್ಯಮ ಅಭಿಯಾನಗಳು ಮತ್ತು ರೇಡಿಯೋ ಮೂಲಕವೂ ಸಂದೇಶಗಳನ್ನು ಪ್ರಸಾರ ಮಾಡಲಾಗುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
ಸುದ್ದಿದಿನ,ಬೆಂಗಳೂರು : ದಕ್ಷಿಣ ಭಾರತದಲ್ಲಿ ಭಾರತೀಯ ಜನತಾಪಕ್ಷಕ್ಕೆ, ಕರ್ನಾಟಕ ಹೆಬ್ಬಾಗಿಲಿನಂತಿದ್ದು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಬರಲಿರುವ ಮಹಾಚುನಾವಣೆಗೆ ಪಕ್ಷದ ಕೇಂದ್ರಬಿಂದುವಾಗಿ ಕಾರ್ಯನಿರ್ವಹಿಸಲಿರುವ ನೂತನ ಮಾಧ್ಯಮ ಕೇಂದ್ರದಲ್ಲಿ ಪಕ್ಷದ ರಾಜ್ಯ ನಾಯಕರು ಇಂದು ಬೆಳಿಗ್ಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ, ಜನಪರ ಆಡಳಿತ ನೀಡುವಲ್ಲಿ ಮತ್ತು ಬರಪರಿಸ್ಥಿತಿ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆಪಾದಿಸಿದರು.
ಜನವಿರೋಧಿ ಕ್ರಮಗಳಿಂದಾಗಿ ರಾಜ್ಯದ ಜನತೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಅತಿಹೆಚ್ಚು ಸ್ಥಾನಗಳನ್ನು ಗೆಲ್ಲುವ ಉದ್ದೇಶದಿಂದ ಕಾರ್ಯತಂತ್ರ ರೂಪಿಸಲು ತನ್ನ 200ಕ್ಕೂ ಹೆಚ್ಚು ಕಾರ್ಯಕರ್ತರಿಗೆ ಕಾರ್ಯಾಗಾರ ನಡೆಸಲು ಬಿಜೆಪಿ ನಿರ್ಧರಿಸಿದೆ. ಈ ನಡುವೆ ಲೋಕಸಭಾ ಚುನಾವಣೆ ಕುರಿತಂತೆ ದೆಹಲಿಯಲ್ಲಿ ಇಂದು ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿಯ ಸಭೆ ನಡೆಯಲಿದೆ.
ಚುನಾವಣೆಗೆ ಪಕ್ಷದ ಕಾರ್ಯತಂತ್ರಗಳನ್ನು ಕುರಿತು ಸಮಾಲೋಚಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್ ಶಾ ಹಾಗೂ ಚುನಾವಣಾ ಸಮಿತಿಯ ಸದಸ್ಯರು ಮತ್ತಿತರ ಪದಾಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
"ವಿಕಸಿತ ಭಾರತಕ್ಕಾಗಿ
ಮತ್ತೊಮ್ಮೆ ಮೋದಿ ಸರ್ಕಾರ"ಮಲ್ಲೇಶ್ವರಂನ ಜಿ.ಎಂ. ರಿಜಾಯ್ಸ್ ಹೋಟೆಲ್ನಲ್ಲಿ ಬಿಜೆಪಿ ಲೋಕಸಭಾ ಚುನಾವಣಾ 2024ರ ಮಾಧ್ಯಮ ಕೇಂದ್ರದ ಉದ್ಘಾಟನೆ ನೆರವೇರಿಸಲಾಯಿತು. ರಾಜ್ಯದೆಲ್ಲೆಡೆ ಪ್ರಧಾನಿ ಮೋದಿ ಜೀ ಅವರ ಪರವಾದ ಅಲೆ ವ್ಯಾಪಕವಾಗಿದ್ದು 'ಮೋದಿ ಮತ್ತೊಮ್ಮೆ' ಎಂಬುದು ಜನಸಾಮಾನ್ಯರ ಸಂಕಲ್ಪವಾಗಿದೆ. ದೇಶದಲ್ಲಿ 400 ಹಾಗೂ… pic.twitter.com/gYbNmo1Poo
— Vijayendra Yediyurappa (Modi Ka Parivar) (@BYVijayendra) March 23, 2024
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ದಾವಣಗೆರೆ | ವಿನೋಬನಗರದ ಶ್ರೀ ಚೌಡೇಶ್ವರಿ ಜಾತ್ರೆ ಸಂಭ್ರಮ
-
ದಿನದ ಸುದ್ದಿ6 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ6 days ago
ಭಾನುವಾರದಂದು ಕಾರ್ಯನಿರ್ವಹಿಸುವಂತೆ ಬ್ಯಾಂಕ್ಗಳಿಗೆ ಆರ್ ಬಿ ಐ ಸೂಚನೆ
-
ದಿನದ ಸುದ್ದಿ6 days ago
ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳು ಸ್ಥಗಿತ ; ಬಿಜೆಪಿ ಅಧಿಕಾರ ದುರುಪಯೋಗ : ಖರ್ಗೆ ಕಿಡಿ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ5 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ5 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ4 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?