Connect with us

ರಾಜಕೀಯ

ಚುನಾವಣಾ ರಾಜಕಾರಣ : ಆಶಾದಾಯಕ ಅವಕಾಶಗಳು

Published

on

Photo courtesy : LAW.COM

ದೇಶ ಮತ್ತೊಂದು ಮಹಾಚುನಾವಣೆಯ ಹೊಸಿಲಲ್ಲಿದೆ. ಯಾರು ಅಧಿಕಾರ ಅಲಂಕರಿಸಬಹುದು ಎಂಬ ಸಹಜ ಕುತೂಹಲ ಎಲ್ಲೆಡೆಯಲ್ಲಿಯೂ ಇದೆ. ಇದಕ್ಕೆ ಪ್ರತಿಯಾಗಿ ರಾಜಕೀಯ ಅಖಾಡ ಸನ್ನದ್ಧವಾಗಿದೆ. ಲೋಕಸಭೆ ಚುನಾವಣೆ ಎಂದಾಕ್ಷಣ ಮುಂದಿನ ನಾಯಕ ಯಾರು ಎಂಬ ನಿರೀಕ್ಷೆ ಸಹಜವಾಗಿಯೇ ಗರಿಗೆದರುತ್ತದೆ. ಈ ಕುತೂಹಲಕ್ಕನುಗುಣವಾದ ನಿರೀಕ್ಷೆಯನ್ನು ಭಾರತದ ರಾಜಕಾರಣ ಹೇಗೆ ಈಡೇರಿಸುತ್ತದೆ ಎನ್ನುವುದರ ಮೇಲೆ ಭವಿಷ್ಯದ ಹೆಜ್ಜೆಗಳು ನಿರ್ಣಯಿಸಲ್ಪಡುತ್ತವೆ. ಜನಮನ್ನಣೆಯ ಗೆಲುವು ದಕ್ಕಿಸಿಕೊಳ್ಳಲು ರಾಜಕಾರಣಕ್ಕೆ ಎರಡು ಬಗೆಯ ಅವಕಾಶಗಳಿರುತ್ತವೆ. ಸಕಾರಾತ್ಮಕ ಆಲೋಚನೆಗಳ ಬಲದಲ್ಲಿ ದಾರ್ಶನಿಕ ನಾಯಕತ್ವ ಸಾಬೀತುಪಡಿಸುವ ಬದ್ಧತೆಯ ನಡೆಯೊಂದಿಗೆ ಮೊದಲ ಅವಕಾಶದ ಸಾಧ್ಯತೆ ಇರುತ್ತದೆ. ಇಡೀ ದೇಶವನ್ನು ಹಿಂದಕ್ಕೆಳೆಸುವ ಸಂಕುಚಿತ ಕಾರ್ಯಸೂಚಿಯೊಂದಿಗೆ ಜನರ ಜಡತೆಯನ್ನು ಮತ್ತಷ್ಟು ಸ್ಥಾಯಿಗೊಳಿಸುವ ಪ್ರಯತ್ನಗಳೊಂದಿಗಿನ ಅವಕಾಶ ಮತ್ತೊಂದು. ಭಾರತದ ರಾಜಕಾರಣವು ಇಂಥ ಸೀಮಿತ ದೃಷ್ಟಿಕೋನದ ಅವಕಾಶವಾದಿ ತಂತ್ರಗಾರಿಕೆಯನ್ನೇ ನೆಚ್ಚಿಕೊಂಡು ಸಾಗುತ್ತಿದೆ ಎಂಬುದಕ್ಕೆ ಹಲವು ನಿದರ್ಶನಗಳು ಇತಿಹಾಸದ ಪುಟಗಳಲ್ಲಿ ಲಭ್ಯವಾಗುತ್ತವೆ. ಸ್ವಾತಂತ್ರ್ಯೋತ್ತರ ಅವಧಿ, ಜಾಗತೀಕರಣದ ತದನಂತರದ ಕಾಲಘಟ್ಟ ಮತ್ತು ಹೊಸ ಶತಮಾನದ ಸ್ಥಿತ್ಯಂತರಗಳ ಅವಧಿಯನ್ನು ದೃಷ್ಟಿಯಲ್ಲಿರಿಸಿಕೊಂಡು ಈ ಚರ್ಚೆಯನ್ನು ವಿಸ್ತರಿಸಬಹುದು.

ಜಡತೆಯಿಂದ ಗೆಲುವಿನ ಲಾಭ!

ಅಧಿಕಾರಕ್ಕ ಬಂದ ಕ್ಷಣದಿಂದಲೇ ಮುಂದಿನ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಪ್ರದರ್ಶಿತವಾಗುವ ಎಚ್ಚರದ ರಾಜಕೀಯ ನಡೆ ಇಲ್ಲಿಯ ಸಾಮಾನ್ಯ ಗುಣಲಕ್ಷಣ. ಇದಕ್ಕೆ ಹೊಸ ಬಗೆಯ ತೀವ್ರತೆ ಸಿಕ್ಕಿದ್ದು ಹಿಂದಿನ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ. ಆಗಿನ ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಘಟನಾವಳಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಭಾರತೀಯ ರಾಜಕಾರಣ ಚಾಣಾಕ್ಷ ತಂತ್ರಗಾರಿಕೆಯ ತೀವ್ರತರ ತಿರುವಿನ ಘಟ್ಟ ತಲುಪಿದ್ದು ಸ್ಪಷ್ಟವಾಗುತ್ತದೆ. ಅಧಿಕಾರ ಪಡೆಯುವ ಏಕೈಕ ಕಾರ್ಯಸೂಚಿಯನ್ನಷ್ಟೇ ನೆಚ್ಚಿಕೊಂಡು ರಾಜಕೀಯ ಪಕ್ಷಗಳು ಕಾರ್ಯೋನ್ಮುಖವಾಗುವುದು, ಅದಕ್ಕಾಗಿ ಚಾಣಾಕ್ಷ ತಂತ್ರಗಾರಿಕೆಯ ನೆರವು ಪಡೆಯುವುದು, ಆ ಮೂಲಕ ಗೆಲುವು ಸಾಧ್ಯವಾಗಿಸಿಕೊಳ್ಳುವುದು – ಇವೆಲ್ಲವೂ ಗೊತ್ತಿರುವ ಸಂಗತಿಗಳೇ. ಆದರೆ, 2014ರ ಚುನಾವಣೆಯು ಈ ದೇಶದಲ್ಲಿ ಸ್ಥಾವರವಾಗಿ ಉಳಿದುಕೊಂಡಿದ್ದ ಜಡತೆಯ ನಿರ್ಲಿಪ್ತ ಮನಸ್ಥಿತಿಯನ್ನು ಬೇರೊಂದು ರೀತಿಯಲ್ಲಿ ಬಳಸಿಕೊಂಡು ಗೆಲುವು ತಂದುಕೊಳ್ಳುವ ಅವಕಾಶವನ್ನು ದಯಪಾಲಿಸಿತು. ಇದನ್ನು ಅತ್ಯಂತ ಚಾಣಾಕ್ಷಯುತವಾಗಿ ಬಳಸಿಕೊಂಡವರು ಗೆಲುವಿನ ನಗೆ ಬೀರಿದರು.

ಹಳೆ ಆಲದ ಮರಕ್ಕೆ ಜೋತುಬೀಳುವಿಕೆ

ಹಿಂದೆ ಬಹಳ ವರ್ಷಗಳ ಕಾಲ ಆಡಳಿತ ಚುಕ್ಕಾಣಿ ಹಿಡಿದಿದ್ದವರು ಅನುಸರಿಸಿದ ಹಾದಿಯನ್ನೇ ಬೇರೊಂದು ಬಗೆಯಲ್ಲಿ ಮಾದರಿಯಾಗಿಸಿಕೊಂಡ ಕಾರಣಕ್ಕಾಗಿಯೇ ಆ ಗೆಲುವು ಸಾಧಿಸಲು ಸಾಧ್ಯವಾಯಿತು. ಹಿಂದಿನವರದ್ದು ಹಳೆಯ ಆಲದ ಮರಕ್ಕೆ ಜೋತುಬೀಳುವ ಪ್ರವೃತ್ತಿಯ ರಾಜಕಾರಣವೇ ಆಗಿತ್ತು. ಹಳೆಯ ಸಾಧನೆಯನ್ನು ನೆನಪಿಸಿಕೊಂಡು ಮತ್ತೆ ಮತ್ತೆ ಅದರ ಜಪಗೈದು ಜನರನ್ನು ಸೆಳೆದುಕೊಳ್ಳುವ ತಂತ್ರಗಾರಿಕೆಯ ಕಡೆಗೇ ಅದರ ಆದ್ಯತೆ ಇತ್ತು. ಗೆಲುವು ಸಾಧಿಸುವ ಹುಮ್ಮಸ್ಸಿನೊಂದಿಗೆ ಚುನಾವಣಾ ಅಖಾಡಕ್ಕಿಳಿದಿದ್ದವರು ಹಳೆಯದ್ದರ ಆಧಾರದಲ್ಲಿ ಹೊಸದೊಂದು ರಾಜಕೀಯ ಸಂಸ್ಕøತಿಯನ್ನು ರೂಪಿಸುವ ಹೊಣೆಗಾರಿಕೆ ನಿರ್ವಹಿಸುವ ಅವಕಾಶವನ್ನು ಉದ್ದೇಶಪೂರ್ವಕವಾಗಿ ಬಿಟ್ಟುಕೊಟ್ಟರು. ಹೀಗಾಗಿ ‘ಹಳೆಯ ಬೇರು, ಹೊಸ ಚಿಗುರು’ ಎಂಬ ಪ್ರಯೋಗಶೀಲ ದೃಷ್ಟಿಕೋನ ಸೋಲನ್ನು ಅನುಭವಿಸಿತು. ಹಳೆಯ ಬೇರುಗಳೊಂದಿಗೆ ನಂಟು ಉಳಿಸಿಕೊಂಡು ಹೊಸದಾದ ಹೆಜ್ಜೆಗಳೊಂದಿಗೆ ಬದಲಾವಣೆಯ ಅಲೆಯನ್ನು ಮೂಡಿಸುವುದರ ಕಡೆಗಿನ ವ್ಯಾಪಕ ಸಾಧ್ಯತೆಗಳು ಮೊಟಕುಗೊಂಡವು.

ನಕಾರಾತ್ಮಕತೆಯ ಪುನರಾವರ್ತನೆ

ಪ್ರಶ್ನಿಸುವ ತಾರ್ಕಿಕತೆಯನ್ನು ಚಾಣಾಕ್ಷಯುತವಾಗಿ ಹತ್ತಿಕ್ಕುವ ಆಡಳಿತಾರೂಢ ಪ್ರಾಬಲ್ಯವು ಸ್ವಾತಂತ್ರ್ಯೋತ್ತರ ರಾಜಕೀಯ ವಲಯದ ಮೊದಲ ಆದ್ಯತೆಯಾಗಿ ಪ್ರಾಮುಖ್ಯತೆ ಪಡೆದುಕೊಂಡಿತು. ಇದನ್ನು ಹಿನ್ನೆಲೆಗೆ ಸರಿಸುವ ಪರ್ಯಾಯ ರಾಜಕಾರಣದ ತಾತ್ವಿಕ ಮಾದರಿಗಳು ವಿವಿಧ ದಶಕಗಳಲ್ಲಿ ಕಾಣಿಸಿಕೊಂಡರೂ ಜನಜನಿತವಾದ ರಾಜಕೀಯ ಪಕ್ಷಗಳ ಮುಂಚೂಣಿ ನಾಯಕರ ವ್ಯಕ್ತಿಗತ ಪ್ರತಿಷ್ಠೆ ಮತ್ತು ಆರಾಧನಾ ಮನೋಭಾವಕ್ಕೇ ಹೆಚ್ಚಿನ ಆದ್ಯತೆ ಸಿಕ್ಕಿತು. ಇದು ಐದು ವರ್ಷಗಳ ಅಧಿಕಾರಾವಧಿಯ ಪ್ರತಿ ಹಂತದಲ್ಲೂ ನುಸುಳಿಕೊಳ್ಳತೊಡಗಿತು. ಈಗ ಅದೇ ನಕಾರಾತ್ಮಕತೆ ಬೇರೆ ರೀತಿಯಲ್ಲಿ ಪುನರಾವರ್ತಿತವಾಗಿದೆ.

ವೈರುಧ್ಯದ ರಾಜಕೀಯ ನಡೆ

ಚುನಾವಣಾ ರಾಜಕಾರಣವು ಸಂಕುಚಿತ ಅಜೆಂಡಾ ಆಧಾರದಲ್ಲಿ ಅಭಿವ್ಯಕ್ತವಾದರೆ ಏನೇನಾಗುತ್ತದೆ ಎನ್ನುವುದನ್ನು ಸ್ವಾತಂತ್ರ್ಯೋತ್ತರ ಭಾರತದ ರಾಜಕೀಯ ಚರಿತ್ರೆಯ ಮೂಲಕ ತಿಳಿದುಕೊಳ್ಳಬಹುದು. ಇದರ ಅಧ್ಯಯನ ಮತ್ತು ಸೂಕ್ಷ್ಮ ಅವಲೋಕನದಿಂದ ಇಲ್ಲಿಯ ವೈರುಧ್ಯಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಜೀವಪರ ಸಂವೇದನೆಯ ಮೌಲಿಕ ಆಲೋಚನೆ ಮತ್ತು ವಾದಗಳನ್ನು ಮುನ್ನೆಲೆಗೆ ತಂದು ಅದಕ್ಕನುಗುಣವಾದ ಸರ್ಕಾರ ಅಸ್ತಿತ್ವಕ್ಕೆ ಬರಬೇಕು ಎಂಬ ಪ್ರತಿಪಾದನೆಯ ನೆರವಿನೊಂದಿಗೆ ಅಧಿಕಾರಕ್ಕೆ ಬಂದವರು ಮತ್ತು ಉದಾತ್ತವಾದ ಧಾರ್ಮಿಕ ಅಂಶಗಳನ್ನು ಸಂಕುಚಿತಗೊಳಿಸಿ ಸಂಘರ್ಷ ಮೂಡಿಸಿ ಅಧಿಕಾರಕ್ಕೆ ಹತ್ತಿರಾಗುವ ಜಾಯಮಾನದ ರಾಜಕೀಯ ವರ್ತನೆಗಳವರ ದಿಗ್ವಿಜಯದ ಜೊತೆಗೆ ಇಂಥ ವೈರುಧ್ಯಗಳಿವೆ. ಎರಡೂ ವಲಯಗಳು ಅಧಿಕಾರರೂಢ ಮತ್ತು ವಿರೋಧ ಪಕ್ಷ ಎಂಬ ನೆಲೆಗಳಲ್ಲಿ ವಿಂಗಡಣೆಯಾಗಿ ವಾದಗಳನ್ನು ಮುಂದಿಡುತ್ತಾ ಜನಬೆಂಬಲ ಗಿಟ್ಟಿಸಿಕೊಳ್ಳುವ ಪ್ರಯತ್ನದಲ್ಲಿ ಯಶಸ್ಸು ಕಂಡಿವೆ.

Rajadharma a column by Dr.N k padmanabh

ಒಮ್ಮೆ ಅವರಿಗೆ, ಮತ್ತೊಮ್ಮೆ ಇವರಿಗೆ ಎನ್ನುವ ಹಾಗೆ ಅಧಿಕಾರದ ಅವಕಾಶ ಪ್ರಾಪ್ತವಾಗಿದೆ. ಆದರೆ, ಅಧಿಕಾರಕ್ಕೆ ಬಂದ ಮೇಲೆ ಈ ಎರಡೂ ವಲಯಗಳ ರಾಜಕೀಯ ನಡೆ ಯಾವ ಬಗೆಯ ಉದಾತ್ತತೆಯೊಂದಿಗಿತ್ತು ಎಂಬುದನ್ನು ಪರಿಶೀಲಿಸಿದರೆ ಇಡೀ ಭಾರತದ ರಾಜಕಾರಣದ ಬಹುದೊಡ್ಡ ಮಿತಿಗಳು ಎದ್ದುಕಾಣುತ್ತವೆ. ಅಧಿಕಾರಕ್ಕೆ ಬರುವವರೆಗೆ ಪ್ರತಿಪಾದಿಸಿದ ವಿಶಾಲವಾದ ಮೌಲಿಕ ಆಲೋಚನೆಗಳನ್ನೇ ಅಧಿಕಾರಕ್ಕೆ ಬಂದ ನಂತರ ಮರೆಯುವ ಜಾಣ್ಮೆಯನ್ನು ಸ್ಥಾಯಿಯಾಗಿಸಿಕೊಂಡ ಪಕ್ಷ ರಾಜಕಾರಣವೊಂದರ ವಿಕಲಾಂಗ ಲಕ್ಷಣವು ಪಕ್ಷಾತೀತ ನೆಲೆಯಲ್ಲಿ ಸರ್ವವ್ಯಾಪಿಯಾಯಿತು. ಇಂಥ ದ್ವಂದ್ವವನ್ನು ಪ್ರಶ್ನಿಸುತ್ತಲೇ ಧರ್ಮಕ್ಕೆ ಸಂಬಂಧಿಸಿದ ಸೂಕ್ಷ್ಮ ಸಂಗತಿಗಳನ್ನು ರಾಜಕೀಯ ಲಾಭದ ಆಕಾಂಕ್ಷೆಯಲ್ಲಿ ತಪ್ಪಾಗಿ ವಿಶ್ಲೇಷಿಸಿ ಅಧಿಕಾರಕ್ಕೇರಿದವರೂ ಮತ್ತದೇ ಹಾದಿ ಹಿಡಿದರು. ಹೀಗಾಗಿಯೇ ರಾಜಕೀಯ ಪಕ್ಷಗಳ ಕೆಳಹಂತದ ಯುವ ಕಾರ್ಯಕರ್ತರಿಗೆ ಉದಾತ್ತವಾದ ನಾಯಕತ್ವದ ಮಾದರಿಯೇ ಇಲ್ಲದಂತಾಯಿತು.

ಬಹುಮತ ಪ್ರಾಶಸ್ತ್ಯದ ಮತ್ತೊಂದು ಮುಖ

ಈ ಹಂತದಲ್ಲಿಯೇ ಪ್ರಶ್ನಿಸುವ ಧ್ವನಿಗಳೊಂದಿಗೆ ಇರುವವರನ್ನೇ ದ್ವಂದ್ವಕ್ಕೆ ಸಿಲುಕಿಸುವ ವಿತಂಡವಾದಿ ದೃಷ್ಟಿಕೋನಗಳು ಕಳೆದ 2014 ಚುನಾವಣೆಯ ಸಂದರ್ಭದಲ್ಲಿ ವೈಭವೀಕೃತವಾದವು. ಇವರನ್ನು ಪ್ರಶ್ನೆ ಮಾಡುತ್ತೀರಿ. ಮತ್ತಿನ್ಯಾರನ್ನು ಆಯ್ಕೆ ಮಾಡುತ್ತೀರಿ? ಇಷ್ಟು ವರ್ಷಗಳ ಕಾಲ ಆಳಿದವರು ಏನು ಸಾಧಿಸಿದರು? ಎಂಬ ಮರುಪ್ರಶ್ನೆ ಎಸೆದು ಚರ್ಚೆ ಒಳಗೊಳ್ಳಬಹುದಾದ ವಿಶಾಲ ಆವರಣವನ್ನೇ ಒಡೆದುಬಿಡುವ ಪ್ರವೃತ್ತಿ ಮುಂದುವರೆಯಿತು. ಇದೇ ಪ್ರವೃತ್ತಿಯನ್ನೇ ಮುಖ್ಯವಾಗಿಸಿಕೊಂಡು ಸಾಮಾಜಿಕ ಜಾಲತಾಣಗಳನ್ನು ಪಕ್ಷದ ಪರವಾದ ಅಲೆ ಮೂಡಿಸುವ ಉದ್ದೇಶಕ್ಕೆ ಬಳಸಿಕೊಳ್ಳುವ ರಹಸ್ಯ ಕಾರ್ಯಸೂಚಿ ಯಶಸ್ಸು ಕಂಡಿತು. ಹಿಂದಿನವರ ಮೌನಕ್ಕಿಂತ ಈಗಿನವರ ಮಾತು ಹೆಚ್ಚು ಆಪ್ತ ಎಂಬ ಕಾರಣಕ್ಕಾಗಿ ಮತನೀಡುವ ಅಪೇಕ್ಷೆ ಸಾಮೂಹಿಕವಾಗಿ ಅಭಿವ್ಯಕ್ತವಾಯಿತು. ಸಮಸ್ಯೆಗಳನ್ನು ಅಸಹಾಯಕ ಮೌನ ಮತ್ತು ದಿವ್ಯ ನಿರ್ಲಿಪ್ತತೆಯೊಂದಿಗೆ ನಿರ್ಲಕ್ಷಿಸಿದವರಿಗಿಂತಲೂ ಅವೇ ಸಮಸ್ಯೆಗಳಿಗೆ ಪರಿಹಾರ ಸಾಧ್ಯ ಎಂಬುದನ್ನು ಭಾಷಿಕ ಪ್ರೌಢಿಮೆಯಲ್ಲಿ ಮನಗಾಣಿಸಿದವರು ಮುಖ್ಯ ಎಂಬ ಭಾವನೆಯೇ ಸಾರ್ವತ್ರಿಕವಾಗಿ ಹೊಸಬರಿಗೆ ಭಾರೀ ಬಹುಮತದ ಪ್ರಾಶಸ್ತ್ಯ ದೊರಕಿ ಅಧಿಕಾರದ ಅವಕಾಶ ಲಭ್ಯವಾಯಿತು.

ದಿಕ್ಕುತಪ್ಪಿಸುವ ಹುನ್ನಾರಗಳು

ಈಗ 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲೂ ಇದೇ ಬಗೆಯ ಇತಿಹಾಸ ಪುನರಾವರ್ತಿತಗೊಳ್ಳುವ ಎಲ್ಲ ವಿದ್ಯಮಾನಗಳಿಗೆ ನಾವೀಗ ಸಾಕ್ಷಿಯಾಗುತ್ತಲೇ ಇದ್ದೇವೆ. ಒಂದು ದೇಶದ ವಿರುದ್ಧ ಯುದ್ಧ ಆಗಬೇಕು ಎಂಬ ಅಗ್ರೆಸ್ಸಿವ್ ಪ್ರತಿಪಾದನೆಯು ಪೀಳಿಗೆಯೊಂದರ ರಾಜಕೀಯ ಆದ್ಯತೆಯನ್ನೇ ಸಂಕುಚಿತಗೊಳಿಸಿ ಬಹುಮತ ಗಿಟ್ಟಿಸಿಕೊಳ್ಳುವ ಮಟ್ಟಿಗೆ ಪ್ರಭಾವೀ ಎಂಬುದನ್ನು ಸಾಬೀತುಪಡಿಸುವ ನಿದರ್ಶನಗಳು ಕಣ್ಣಮುಂದೆಯೇ ಇವೆ. ಸುಳ್ಳುಗಳ ತರಹೇವಾರಿ ವಿವರಗಳು ಬಗೆಬಗೆಯ ಬಣ್ಣಗಳನ್ನು ಪಡೆದು ಜನರ ನಿರ್ಧಾರಾತ್ಮಕ ಶಕ್ತಿಯ ಮೇಲೆ ಪ್ರಭಾವ ಬೀರುತ್ತಿರುವ ವಾಸ್ತವವನ್ನು ಅಷ್ಟು ಸುಲಭವಾಗಿ ನಿರಾಕರಿಸುವಂತಿಲ್ಲ. ರಾಜಕಾರಣಿಗಳ ಹೇಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗಲಂತೂ ಭಾರತೀಯ ಪ್ರಜಾಪ್ರಭುತ್ವದ ದಿಕ್ಕುತಪ್ಪಿಸುವ ಹುನ್ನಾರಗಳು ಯಾವ ಸ್ವರೂಪದ್ದವು ಎಂಬುದು ಸ್ಪಷ್ಟವಾಗುತ್ತದೆ. ಇಡೀ ದೇಶದಲ್ಲಿ ಆಗಬೇಕಿದ್ದ ಚರ್ಚೆಗಳ ಬದಲು ಅನಗತ್ಯ ವಿವರಗಳೇ ಪ್ರಾಮುಖ್ಯತೆ ಪಡೆದುಕೊಂಡು ಯಾರಿಗೆ ಲಾಭವಾಗುತ್ತದೆ ಎಂಬ ಸೂಕ್ಷ್ಮತೆ ಗೊತ್ತಾಗುತ್ತದೆ.

ಪ್ರಚೋದನಾತ್ಮಕ ಒಮ್ಮತದ ಉತ್ಪನ್ನ

ವಿಧವೆ ಎಂಬ ಕಾರಣಕ್ಕಾಗಿ ಮಹಿಳೆಯ ರಾಜಕೀಯ ಪ್ರವೇಶಕ್ಕೆ ವ್ಯಕ್ತವಾಗುವ ಪ್ರತಿರೋಧ, ರಾಜಕೀಯ ನಾಯಕಿಯ ತಂದೆ ಯಾರೆಂಬುದೇ ಗೊತ್ತಿಲ್ಲ ಎಂಬುದನ್ನೇ ಚಿತ್ರಿಸಿ ಇಂಥವರ ಆಯ್ಕೆ ಸಮರ್ಥನೀಯವಲ್ಲ ಎಂಬ ವಾದ, ಸಂಘರ್ಷವನ್ನು ಸಮರ್ಥಿಸುವ ನುಡಿಗಳನ್ನಾಡಿದಾಗಲೇ ಪರವಾದ ಅಲೆಯನ್ನು ಸೃಷ್ಟಿಸಿಕೊಳ್ಳಬಹುದೆಂಬ ತಪ್ಪುಕಲ್ಪನೆ, ಜನಪ್ರಿಯ ತಾರೆಯನ್ನು ರಾಜಕೀಯಕ್ಕೆ ಕರೆತಂದು ಜನರನ್ನು ಸೆಳೆದುಕೊಳ್ಳುವ ಪ್ರಯತ್ನ, ಸುದ್ದಿಮಾಧ್ಯಮಗಳನ್ನು ಕೊಂಡುಕೊಂಡು ತಮ್ಮ ಮೂಗಿನ ನೇರಕ್ಕೆ ಬಳಸಿಕೊಳ್ಳುವ ಚಾಣಾಕ್ಷತೆ, ಹಿಂದೆಂದಿಗಿಂತಲೂ ಹೆಚ್ಚು ವಿಸ್ತಾರವಾದ ಸುದ್ದಿಮಾಧ್ಯಮ ಮುಖ್ಯಸ್ಥರು ಮತ್ತು ರಾಜಕೀಯ ಪಕ್ಷಗಳ ನಡುವಿನ ಅಸಂವಿಧಾನಿಕ ನಂಟು, ಅದರ ವಿಸ್ತರಣೆ ಎಂಬಂತೆ ಸಾಮಾಜಿಕ ಜಾಲತಾಣಗಳ ದುರ್ಬಳಕೆ, ಬರೀ ವಿವಾದಕ್ಕೆಳೆಸುವ ಮಾತುಗಳ ಸುತ್ತಲೇ ಗಿರಕಿ ಹೊಡೆಯುತ್ತಿರುವ ಸುದ್ದಿಮಾಧ್ಯಮ ಪ್ರಜ್ಞೆ – ಇವೆಲ್ಲವೂ ಸದ್ಯದ ಚುನಾವಣಾ ರಾಜಕಾರಣದ ಒಳಸುಳಿಗಳನ್ನು ಅರ್ಥೈಸಿಕೊಳ್ಳುವುದಕ್ಕೆ ಸಹಾಯಕವಾಗುತ್ತವೆ. ಭಾವನೆಗಳನ್ನು ಪ್ರಚೋದಿಸಿ ಒಮ್ಮತವನ್ನು ಉತ್ಪಾದಿಸಿಕೊಳ್ಳುವ ತಂತ್ರಗಾರಿಕೆಯು ಭಾರತದಲ್ಲಿ ಅತ್ಯಂತ ಜಾಗರೂಕತೆಯಿಂದ ಪ್ರಯೋಗಿಸಲ್ಪಡುತ್ತಿರುವುದಕ್ಕೆ ಸಾಕ್ಷ್ಯ ಒದಗಿಸುತ್ತವೆ.

ಭಾವನಾತ್ಮಕ ಪ್ರಚೋದನೆಯ ನೆರವಿನೊಂದಿಗೆ ಪೂರಕವಾದ ಒಮ್ಮತವನ್ನು ಸೃಷ್ಟಿಸಿಕೊಳ್ಳುವ ತಂತ್ರಗಾರಿಕೆಯು ಭಾರತೀಯ ರಾಜಕಾರಣಕ್ಕೆ ಹೊಸದೇನೂ ಅಲ್ಲ. ಅಸಮಾನತೆಯ ಕಾರಣಕ್ಕಾಗಿಯೇ ಭಾರತದಲ್ಲಿ ಬೇರೂರಿರುವ ತಾರತಮ್ಯದ ದೃಷ್ಟಿಕೋನಗಳನ್ನು ಒಡೆದುಹಾಕುವ ಅಪ್ಪಟ ವೈಚಾರಿಕ ಆಂದೋಲನಗಳು ನಡೆದರೂ ತಾರ್ಕಿಕ ಅಂತ್ಯ ಕಂಡುಕೊಳ್ಳುವವರೆಗೆ ಅವುಗಳ ಚಲನೆ ನಿರಂತರವಾಗುಳಿಯಲಿಲ್ಲ. ಇಂಥ ವೈಚಾರಿಕ ಆಂದೋಲನಗಳನ್ನು ರಾಜಕೀಯ ಅಸ್ಮಿತೆಯ ಸಶಕ್ತತೆಗೆ ಬಳಸಿಕೊಳ್ಳುವ ಜಾಣ್ಮೆಯ ರಾಜಕಾರಣದ ಬದಲು ಅವುಗಳನ್ನು ಭಾವುಕ ನೆಲೆಯಲ್ಲಿ ಗ್ರಹಿಸುವ ಒತ್ತಡ ಸೃಷ್ಟಿಸಿ ಪ್ರಬಲರು ಮತ್ತು ದುರ್ಬಲರ ನಡುವಿನ ಕಂದರ ಹೆಚ್ಚಿಸುವ ಪ್ರಯತ್ನಗಳಾದವು. ಈ ಹಂತದಲ್ಲಿ ಭಿನ್ನಾಭಿಪ್ರಾಯಗಳುಂಟಾದವು. ಗುಂಪುಗಳಾದವು.

ಹೀಗೆ ವೈಚಾರಿಕ ಆಂದೋಲನಗಳನ್ನು ಕಟ್ಟಬೇಕಾದ ವಲಯವೇ ಒಡೆದುಹೋಯಿತು.
ಸಮಸ್ಯೆಯ ಮೂಲಪತ್ತೆಯ ಅನಿವಾರ್ಯತೆ
ಅವುಗಳು ಎತ್ತಿದ ಪ್ರಶ್ನೆಗಳನ್ನೇ ಮುಂದಿಟ್ಟು ಚುನಾವಣೆಗಳನ್ನು ಎದುರಿಸಿದ ಪಕ್ಷ ರಾಜಕಾರಣವು ಅಧಿಕಾರ ಪಡೆಯುವಲ್ಲಿ ಯಶಸ್ಸು ಸಾಧಿಸಿತು. ಅಧಿಕಾರ ಪಡೆದ ನಂತರ ಈ ವೈಚಾರಿಕ ಆಂದೋಲನ ಎತ್ತಿದ್ದ ಪ್ರಶ್ನೆಗಳ ಹಿಂದಿದ್ದ ಸಂಕಟಗಳನ್ನು ಪರಿಹರಿಸುವುದರ ಕಡೆಗೆ ರಚನಾತ್ಮಕ ಪ್ರಯತ್ನವನ್ನು ನಡೆಸಲೇ ಇಲ್ಲ. ಅಷ್ಟೇ ಅಲ್ಲ, ಭಾವುಕ ವ್ಯಾಪ್ತಿಯಲ್ಲಿ ಅಗ್ರಸ್ಥಾನ ಪಡೆದು ಚರ್ಚೆಗೊಳಗಾಗುವ ದೇವರು, ಧರ್ಮಕ್ಕೆ ಸಂಬಂಧಿಸಿದ ಚರ್ಚೆಯನ್ನು ವಿವೇಚನೆ ಎತ್ತರಿಸುವ ಸಂವಾದ ರೂಪಿಸುವ ಆಡಳಿತಾತ್ಮಕ ಹೊಣೆಗಾರಿಕೆಗಳನ್ನೂ ನಿಭಾಯಿಸಲಿಲ್ಲ. ಈ ಸ್ಪೇಸ್‍ಅನ್ನು ಮೂಲಭೂತವಾದಿ ದೃಷ್ಟಿಕೋನದ ರಾಜಕಾರಣ ಸಕಾಲಿಕವಾಗಿ ಬಳಸಿಕೊಂಡು ಅಧಿಕಾರದ ನಿರ್ಣಾಯಕ ಆವರಣವನ್ನು ಪ್ರವೇಶಿಸುವ ಪ್ರಯತ್ನದಲ್ಲಿ ಯಶಸ್ಸು ಕಂಡಿತು. ಸಮಸ್ಯೆಯ ಈ ಮೂಲವನ್ನು ಗೊತ್ತುಮಾಡಿಕೊಳ್ಳದೇ ನಾವು ಸದ್ಯದಲ್ಲಿ ಇದಕ್ಕಿಂದ ಭಿನ್ನವಾದ ಹೊಸದೊಂದು ಪರ್ಯಾಯ ರಾಜಕಾರಣದ ಆಕೃತಿಗಳನ್ನು ಕಂಡುಕೊಳ್ಳಲು ಸಾಧ್ಯವಿಲ್ಲ.

ಅಪೂರ್ವ ಅವಕಾಶ ಬಿಟ್ಟುಕೊಡುವ ಚಾಳಿ

ಈಗ ಸುದ್ದಿಮಾಧ್ಯಮಗಳು ಅತ್ಯುತ್ಸಾಹದಲ್ಲಿ ಇಂತಿಷ್ಟು ಹೊಸ ಮತದಾರರು ಈ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಭವಿಷ್ಯ ನಿರ್ಧರಿಸಲಿದ್ದಾರೆ ಎಂದು ಬಿಂಬಿಸುತ್ತಿವೆ. ಹೀಗೆ ಬಿಂಬಿಸುತ್ತಲೇ ಯುವಶಕ್ತಿ ಯಾರ ಪರ ನಿಲ್ಲಬೇಕು ಎಂಬರ್ಥದ ವಿಶ್ಲೇಷಣೆಗಳನ್ನು ಪರೋಕ್ಷವಾಗಿ ಮುಂದಿಡುತ್ತಿವೆ. ಸೈನಿಕರ ಮೇಲೆ ದಾಳಿ ನಡೆದಾಗ ಯುದ್ಧದ ಮೂಲಕವೇ ಪರಿಹಾರ ಸಾಧ್ಯ ಎಂಬ ಬಿಂಬಗಳನ್ನು ಕಟ್ಟಿಕೊಟ್ಟು ಒಂದು ನಿರ್ದಿಷ್ಟ ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದರೆ ಮಾತ್ರ ನೆರೆಯ ರಾಷ್ಟ್ರಕ್ಕೆ ಬುದ್ಧಿ ಕಲಿಸಬಹುದು ಎಂಬ ಪರೋಕ್ಷ ಸಂದೇಶವನ್ನು ರವಾನಿಸುತ್ತಿವೆ. ಇನ್ನೂ ಕೆಲವು ಮಾಧ್ಯಮಗಳು ಮುಖ್ಯವಾಗಿ ಉಗ್ರರ ವಿರುದ್ಧದ ರಚನಾತ್ಮಕ ಕಾರ್ಯಾಚರಣೆ ಮತ್ತು ಪಾಕಿಸ್ತಾನದೊಂದಿಗಿನ ಸೌಹಾರ್ದಯುತ ಮಾತುಕತೆಯ ಹಾದಿ ಅನುಸರಣೆಯ ಅಗತ್ಯತೆಯನ್ನು ಪ್ರತಿಪಾದಿಸುತ್ತಿವೆ. ಈ ಚರ್ಚೆಯ ಲಾಭವನ್ನು ಪಡೆಯುವ ಹವಣಿಕೆಯನ್ನು ಪಕ್ಷಗಳು ತೋರುತ್ತಿವೆ. ಇವೆಲ್ಲದ್ದರ ಮಧ್ಯೆ ಚುನಾವಣಾ ಅಖಾಡದಲ್ಲಿ ಪ್ರಜಾಪ್ರಭುತ್ವವಾದಿ ರಾಷ್ಟ್ರವೊಂದು ಮುಂಚೂಣಿಗೆ ತಂದುಕೊಳ್ಳಲೇಬೇಕಾದ ಸಂಗತಿಗಳು ಪ್ರಾತಿನಿಧ್ಯವನ್ನೇ ಪಡೆಯುತ್ತಿಲ್ಲ. ಇಂಥ ಅಪೂರ್ವ ಅವಕಾಶವನ್ನು ರಾಜಕೀಯ ಪಕ್ಷಗಳು ಉದ್ದೇಶಪೂರ್ವಕವಾಗಿ ಬಿಟ್ಟುಕೊಡುತ್ತಿವೆ.

ಸವಾಲುಗಳ ನಿರ್ವಹಣೆಯ ಚಾಣಾಕ್ಷತೆಯ ಅಗತ್ಯತೆ

ಸಮಸ್ಯೆಗಳ ಪ್ರಮಾಣ ವ್ಯಾಪಕವಾಗಿದ್ದಾಗ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಸವಾಲಿನ ನಿರ್ವಹಣೆಯ ಚಾಕಚಕ್ಯತೆ ಪ್ರದರ್ಶಿಸಬೇಕಾಗುತ್ತದೆ. ಇಂಥ ಚಾಕಚಕ್ಯತೆಯೊಂದಿಗಿನ ನಿರ್ವಹಣೆಯ ಸವಾಲನ್ನು ಅತ್ಯಂತ ಶ್ರದ್ಧೆಯಿಂದ ಭಾರತೀಯ ರಾಜಕಾರಣ ಸ್ವೀಕರಿಸಲಿಲ್ಲ. ಸ್ವೀಕರಿಸುವುದನ್ನು ಪ್ರಾಥಮಿಕ ಆದ್ಯತೆಯ ಭಾಗವನ್ನಾಗಿ ಪರಿಗಣಿಸಲಿಲ್ಲ. ಬದಲಾಗಿ ಅದು ಜನರ ದೌರ್ಬಲ್ಯಗಳನ್ನೇ ಬಂಡವಾಳವಾಗಿಸಿಕೊಂಡು ಅದರ ಮೇಲೆ ಮತದ ಫಸಲು ಪಡೆಯುವ ಆಸೆಗಳನ್ನು ಈಡೇರಿಸುವುದರ ಕಡೆಗೆ ಹುಮ್ಮಸ್ಸನ್ನು ಮೀಸಲಾಗಿರಿಸಿಕೊಂಡಿತು. ಸಮಾಜವಾದಿ, ಜಾತ್ಯಾತೀತತೆ, ಬಂಡಾಯ ಮನೋಧರ್ಮದ ಚಳುವಳಿಗಳಿಂದ ಹೊಸ ಅಲೆ ಸೃಷ್ಟಿಸುವ ಪ್ರಯತ್ನಗಳಾದವು. ಆದರೆ ಅವುಗಳ ಪ್ರಭಾವವನ್ನು ವಿಸ್ತರಿಸುವುದಕ್ಕೆ ಇಲ್ಲಿಯ ರಾಜಕಾರಣ ಅವಕಾಶ ನೀಡಲಿಲ್ಲ. ಅವುಗಳನ್ನು ಸದೆಬಡೆಯುವ ಪ್ರತಿತಂತ್ರಗಳನ್ನು ಹೆಣೆದು ಸಾಂಪ್ರದಾಯಿಕ ಜಡತೆಯೊಂದಿಗಿನ ಜನರ ಮನೋಧರ್ಮದ ಮಿತಿಗಳನ್ನೇ ತನ್ನ ಗೆಲುವಿನ ತಂತ್ರಗಳಿಗಾಗಿ ಬಳಸಿಕೊಂಡಿತು. ಇದರ ಕಾರಣಕ್ಕಾಗಿಯೇ ಈಗ ಹೊಸ ವಿತಂಡವಾದಿ ದೃಷ್ಟಿಕೋನಗಳು ಜನಪ್ರಿಯ ಎಂಬ ಭಾವ ಮೂಡಿಸಲಾಗುತ್ತಿದೆ.

ಉಜ್ವಲ ಭವಿಷ್ಯದ ಸಾಧ್ಯತೆಗಳು

ಬುದ್ಧಿ ಮತ್ತು ಜೀವ – ಇವೆರಡೂ ಅಸಂಗತ ಎಂಬ ವೈರುಧ್ಯದ ನಿಲುವುಗಳು ಪ್ರಾಮುಖ್ಯತೆ ಪಡೆಯುತ್ತಿವೆ. ಬುದ್ಧಿಜೀವದ ವಿವೇಚನಾಪೂರ್ಣ ಅಸ್ತಿತ್ವ ಅಪಾಯಕಾರಿ ಎಂದು ನಂಬಿಸಲಾಗುತ್ತಿದೆ. ಆದರೆ, ವಾಸ್ತವದಲ್ಲಿ ಬುದ್ಧಿಜೀವವು ಧರ್ಮಾಧಾರಿತ ಭಾರತೀಯ ಸಾಮಾಜಿಕತೆಯನ್ನು ಭಿನ್ನವಾಗಿ ಮರುರೂಪಿಸುವುದಕ್ಕೆ ಅತ್ಯಾವಶಕ ಎಂಬ ತಾತ್ವಿಕತೆಯನ್ನು ರಾಜಕಾರಣ ಅರ್ಥೈಸಿಕೊಳ್ಳುತ್ತಿಲ್ಲ. ಧರ್ಮ, ದೇವರು, ಸಮಾಜ, ರಾಜಕಾರಣ, ಆರ್ಥಿಕತೆ – ಇವೆಲ್ಲವನ್ನೂ ಬುದ್ಧಿಜೀವದ ಜೀವಂತಿಕೆಯ ಬೆಂಬಲದೊಂದಿಗೆ ವಿವೇಕಪೂರ್ಣ ಪ್ರಜ್ಞೆಯೊಂದಿಗೆ ಅರ್ಥೈಸಿಕೊಳ್ಳಬೇಕು ಎಂಬ ಸ್ವಯಂಸಂವಿಧಾನವು ರೂಪುಗೊಳ್ಳಬೇಕಾಗಿದೆ. ಅದಕ್ಕಾಗಿ ರಾಜಕಾರಣವು ದಾರ್ಶನಿಕ ನಾಯಕತ್ವದ ಸತ್ವದೊಂದಿಗೆ ಗುರುತಿಸಿಕೊಳ್ಳಬೇಕು. ಇಂಥ ಸತ್ವವನ್ನು ಮುನ್ನೆಲೆಗೆ ತರುವುದಕ್ಕೆ ಚುನಾವಣೆಯ ಅಖಾಡವನ್ನು ಪೂರಕವಾಗಿಸಿಕೊಳ್ಳಬೇಕು. ಅಂಥ ಹೆಜ್ಜೆಗಳೊಂದಿಗೇ ಭಾರತದ ಉಜ್ವಲ ಭವಿಷ್ಯ ಅಡಗಿದೆ ಎಂಬುದನ್ನು ಬಹುಬೇಗ ಗೊತ್ತುಮಾಡಿಕೊಳ್ಳಬೇಕು.

-ಡಾ.ಎನ್.ಕೆ.ಪದ್ಮನಾಭ

ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.

ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.

ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಿವಿಧ ಜಿಲ್ಲೆಗಳಲ್ಲಿ ಡಾ. ಬಾಬು ಜಗಜೀವನ್ ರಾಮ್ 117ನೇ ಜನ್ಮ ದಿನಾಚರಣೆ

Published

on

ಸುದ್ದಿದಿನ ಡೆಸ್ಕ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಾ. ಬಾಬು ಜಗಜೀವನ್ ರಾಮ್ ಅವರ 117ನೇ ಜನ್ಮ ದಿನಾಚರಣೆ ಪ್ರಯುಕ್ತ ವಿಧಾನ ಸೌದದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ್ಪ, ಹಿರಿಯ ಶಾಸಕ ಈ. ತುಕಾರಾಮ್, ಮಾಜಿ ಸಚಿವ ಹೆಚ್.ಆಂಜನೇಯ, ವಿಧಾನ ಪರಿಷತ್ ಸದಸ್ಯ ಸುದಾಮ ದಾಸ್, ಮಹಿಳಾ ಆಯೋಗದ ಅದ್ಯಕ್ಷೆ ಡಾ. ನಾಗಲಕ್ಷ್ಮಿ ಸೇರಿ ಹಲವರು ಉಪಸ್ಥಿತರಿದ್ದರು. ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ ರಾಂ ಅವರ ಜನ್ಮ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಲಾಯಿತು.

ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಜಗಜೀವನರಾಂ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಮಂಡ್ಯದ ಡಿಸಿ ಪಾರ್ಕ್ ಎದುರು ಇರುವ ಜಗಜೀವನ್‌ರಾಮ್ ಪ್ರತಿಮೆಗೆ ಜಿಲ್ಲಾಡಳಿತದ ವತಿಯಿಂದ ಮಾಲಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಎಸ್ಪಿ ಎನ್.ಯತೀಶ್ ಸೇರಿದಂತೆ ಅಧಿಕಾರಿಗಳ ವರ್ಗ ಹಾಗೂ ಜಗಜೀವನ್‌ರಾಮ್ ಅನುಯಾಯಿಗಳು ಭಾಗವಹಿಸಿದ್ದರು.

ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಬಾಬು ಜಗಜೀವನ ರಾಂ ಅವರ ಅವರ 117ನೇ ಜಯಂತಿಯನ್ನು ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಾಂಕೇತಿಕವಾಗಿ ಆಚರಿಸಲಾಯಿತು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬಾಬು ಜಗಜೀವನ್ ರಾಂ ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಇಂದು ಚುನಾವಣಾ ಆಯೋಗ ಸಮಾವೇಶ

Published

on

ಸುದ್ದಿದಿನ ಡೆಸ್ಕ್ : ಕಳೆದ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ 11 ರಾಜ್ಯಗಳ ನಗರ ಪಾಲಿಕೆ ಆಯುಕ್ತರು ಮತ್ತು ಆಯ್ದ ಜಿಲ್ಲಾ ಚುನಾವಣಾ ಅಧಿಕಾರಿಗಳೊಂದಿಗೆ ಕೇಂದ್ರ ಚುನಾವಣಾ ಆಯೋಗ ಇಂದು ದೆಹಲಿಯಲ್ಲಿ ಸಮಾವೇಶ ನಡೆಸಲಿದೆ.

ಈ ಸಮಾವೇಶದಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಮಾರ್ಗಗಳ ಕುರಿತು ಚರ್ಚಿಸಲಾಗುವುದು ಮತ್ತು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಡಿಮೆ ಮತದಾನದ ಸಮಸ್ಯೆಯನ್ನು ಪರಿಹರಿಸಲು ಉದ್ದೇಶಿತ ಮತ್ತು ನಿರ್ದಿಷ್ಟ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಲಾಗುವುದು.

ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಹೈದರಾಬಾದ್, ಅಹಮದಾಬಾದ್, ಪುಣೆ, ಥಾಣೆ, ನಾಗ್ಪುರ, ಪಾಟ್ನಾ ಸಾಹಿಬ್, ಲಖನೌ ಮತ್ತು ಕಾನ್ಪುರ ನಗರ ಪಾಲಿಕೆಯ ಆಯುಕ್ತರು ಮತ್ತು ಬಿಹಾರ ಮತ್ತು ಉತ್ತರದ ಆಯ್ದ ಜಿಲ್ಲಾ ಚುನಾವಣಾ ಅಧಿಕಾರಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತರುಗಳಾದ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ಸಮಾವೇಶದ ಅಧ್ಯಕ್ಷತೆ ವಹಿಸಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ1 day ago

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮಡಿಕೇರಿಯಲ್ಲಿ...

ದಿನದ ಸುದ್ದಿ5 days ago

ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ

ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ...

ದಿನದ ಸುದ್ದಿ1 week ago

ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್‍ಗೆ ರೂ.10 ಪಡೆದ ಶಾಪಿಂಗ್ ಮಾಲ್‍ಗೆ ದಂಡ

ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499...

ದಿನದ ಸುದ್ದಿ1 week ago

ವಿವಿಧ ಜಿಲ್ಲೆಗಳಲ್ಲಿ ಡಾ. ಬಾಬು ಜಗಜೀವನ್ ರಾಮ್ 117ನೇ ಜನ್ಮ ದಿನಾಚರಣೆ

ಸುದ್ದಿದಿನ ಡೆಸ್ಕ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಾ. ಬಾಬು ಜಗಜೀವನ್ ರಾಮ್ ಅವರ 117ನೇ ಜನ್ಮ ದಿನಾಚರಣೆ ಪ್ರಯುಕ್ತ ವಿಧಾನ ಸೌದದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿ...

ದಿನದ ಸುದ್ದಿ2 weeks ago

ಇಂದು ಚುನಾವಣಾ ಆಯೋಗ ಸಮಾವೇಶ

ಸುದ್ದಿದಿನ ಡೆಸ್ಕ್ : ಕಳೆದ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ 11 ರಾಜ್ಯಗಳ ನಗರ ಪಾಲಿಕೆ ಆಯುಕ್ತರು ಮತ್ತು ಆಯ್ದ ಜಿಲ್ಲಾ ಚುನಾವಣಾ ಅಧಿಕಾರಿಗಳೊಂದಿಗೆ ಕೇಂದ್ರ ಚುನಾವಣಾ...

ದಿನದ ಸುದ್ದಿ2 weeks ago

ತಂತ್ರಜ್ಞಾನ ಮೋಡಿ : ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ

ಡಾ. ಚಂದ್ರಪ್ಪ ಎಚ್, ಸಹಾಯಕ ಪ್ರಾಧ್ಯಾಪಕರು, ಭೌತವಿಜ್ಞಾನ ವಿಭಾಗ, ಸರ್ಕಾರಿ ವಿಜ್ಞಾನ ಕಾಲೇಜು, ಚಿತ್ರದುರ್ಗ 90ರ ದಶಕದಿಂದೀಚೆಗೆ, ಎಲ್ಲೆಡೆ ಸದ್ದಿಲ್ಲದೇ ಕ್ರಮೇಣ ಒಕ್ಕರಿಸತೊಡಗಿದೆ ಆಧುನಿಕ ಯಾಂತ್ರಿಕೃತ ಬದುಕು....

ದಿನದ ಸುದ್ದಿ2 weeks ago

ಔಷಧಗಳ ದರ ಗಣನೀಯ ಏರಿಕೆ ಕುರಿತ ಮಾಧ್ಯಮಗಳ ವರದಿ ಸತ್ಯಕ್ಕೆ ದೂರವಾದ ಸಂಗತಿ ; ಕೇಂದ್ರ ಸರ್ಕಾರ ಸ್ಪಷ್ಟನೆ

ಸುದ್ದಿದಿನ ಡೆಸ್ಕ್ : ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವ ವಿವಿಧ ಔಷಧಿಗಳ ದರ ಗಣನೀಯವಾಗಿ ಏರಿಕೆ ಮಾಡಲಾಗಿದೆ ಎಂಬ ಮಾಧ್ಯಮಗಳ ವರದಿ ಸತ್ಯಕ್ಕೆ ದೂರವಾದ ಸಂಗತಿ ಮತ್ತು ಜನರನ್ನು...

ದಿನದ ಸುದ್ದಿ2 weeks ago

ರಾಜ್ಯದಲ್ಲಿ ಬಿಸಿಲ ತಾಪ ಇನ್ನೂ ಹೆಚ್ಚಾಗಲಿದೆ ; ಹವಾಮಾನ ಇಲಾಖೆ ಮುನ್ಸೂಚನೆ

ಸುದ್ದಿದಿನ ಡೆಸ್ಕ್ : ರಾಜ್ಯದಲ್ಲಿ ಮುಂದಿನ 7 ದಿನಗಳಲ್ಲಿ ಬಿಸಿಲ ತಾಪ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಅವಧಿಯಲ್ಲಿ ಜನರುಕೆಲವು ಮುನ್ನೆಚ್ಚರಿಕೆ...

ದಿನದ ಸುದ್ದಿ2 weeks ago

ಜಿಲ್ಲೆಯ ರಾಜಕಾರಣದಲ್ಲಿ ನನಗೆ ಅನ್ಯಾಯ; ರಾಜಕೀಯ ಕುತಂತ್ರ ವ್ಯವಸ್ಥೆ ವಿರುದ್ಧ ನನ್ನ ಹೋರಾಟ : ವಿನಯ್ ಕುಮಾರ್

ಸುದ್ದಿದಿನ,ದಾವಣಗೆರೆ : ಜಿಲ್ಲೆಯ ರಾಜಕಾರಣದಲ್ಲಿ ಚೆನ್ನಯ್ಯ ಒಡಿಯರ್ ಅವರಿಗೆ ಆದ ಅನ್ಯಾಯ ನನಗೂ ಆಗಿದೆ. ನನ್ನ ಹೋರಾಟ ನನ್ನ ಸ್ವಾಭಿಮಾನದ ಹೋರಾಟ ಒಬ್ಬ ವ್ಯಕ್ತಿ ಪಕ್ಷದ ವಿರುದ್ಧ...

ದಿನದ ಸುದ್ದಿ2 weeks ago

ಲೋಕಸಭೆ ಚುನಾವಣೆ; ರಾಜ್ಯದ 14 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಲು ಇಂದು ಕೊನೆ ದಿನ

ಸುದ್ದಿದಿನ ಡೆಸ್ಕ್ : 18ನೇ ಲೋಕಸಭೆ ಸಾರ್ವತ್ರಿಕ ಚುನಾವಣೆಗೆ, ದೇಶಾದ್ಯಂತ ಎರಡನೇ ಹಂತದ 89 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ. ರಾಜ್ಯದಲ್ಲಿ ನಡೆಯುತ್ತಿರುವ ಮೊದಲ...

Trending