Connect with us

ಲೈಫ್ ಸ್ಟೈಲ್

ಜನೌಷಧ ! ಜನರಿಕ್ ಔಷಧ ?! ಏನು ಎತ್ತ..?

Published

on


ಈಗಷ್ಟೇ ಜನೌಷಧಿ ಸಾಪ್ತಾಹ ಮುಗಿದಿದೆ. ದೇಶದ ಮೂಲೆಗಳಲ್ಲೂ ಸಹ ಜನೌಷಧಿ ಕೇಂದ್ರಗಳಲ್ಲಿ ಕಡಿಮೆ ಬೆಲೆಗೆ ದೊರಕುವ ಜನರಿಕ್ ಔಷಧಿಗಳನ್ನು ಮಾರಲು ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಜನರಿಕ್ ಔಷಧಗಳನ್ನು ಮಾರುವ ಜನೌಷಧಿ ಕೇಂದ್ರಗಳನ್ನು ಹೆಚ್ಚು ಹೆಚ್ಚಾಗಿ ಸ್ಥಾಪಿಸಲು ಸರ್ಕಾರವು ಪ್ರೋತ್ಸಾಹಿಸುತ್ತಿದೆ. ಹಾಗಿದ್ದರೆ ಈ “ಜನರಿಕ್” ಔಷಧಿಗಳೆಂದರೇನು? ಜನೌಷಧಿಗಳೆಂದರೇನು? ಅವುಗಳ ಬೆಲೆ ಏಕೆ ಕಡಿಮೆ? ಅವುಗಳು ಕಾರ್ಯಕ್ಷಮತೆ ಹೇಗಿರುತ್ತದೆ? ಅವುಗಳಿಗೆ ಲೈಸೆನ್ಸ್ ನೀಡುವವರು ಯಾರು? ಇವುಗಳ ನಿಯಂತ್ರಣ ಹೇಗೆ? ಇತ್ಯಾದಿ ಹಲವು ಪ್ರಶ್ನೆಗಳಿಗೆ ಉತ್ತರ ಬೇಕಲ್ಲವೇ? ಪ್ರಯತ್ನಿಸೋಣ.


  • ಡಾ.ಎನ್.ಬಿ.ಶ್ರೀಧರ, ಶಿವಮೊಗ್ಗ

ನರಿಕ್ ಔಷಧವಂತೆ!!. ಕೆಲಸ ಮಾಡ್ತದೋ ಏನೋ? ಅಲ್ರಿ.. ಅಷ್ಟು ಕಡಿಮೆ ಬೆಲೆಗೆ ಹ್ಯಾಗ್ ಮಾರ್ತಾರೆ? ಅದ್ರಲ್ಲಿ ಔಷಧಿನೇ ಕಡಿಮೆ ಇರಬಹುದು ಅಲ್ವೆ?. ಇದು ಒಂದಿಷ್ಟು ಜನರ ಅಭಿಪ್ರಾಯ.

“ಜನರಿಕ್ ಔಷಧಿ ಕೆಲಸ ಮಾಡಲ್ವಂತೆ. ಅದಕ್ಕೆ ಬ್ರಾಂಡೆಡ್ ಔಷಧಿ ತರ್ಸಿ ಕೊಂಡಿದ್ದೇನೆ. ದುಡ್ಡು ಜಾಸ್ತಿ ಆದರೂ ಪರ್ವಾಗಿಲ್ಲ. ಒಟ್ನಲ್ಲಿ ಚೆನ್ನಾಗಿ ಕೆಲಸ ಮಾಡಬೇಕು. ಇದು ಕೆಲವರ ಅಭಿಪ್ರಾಯ.

ಇತ್ತೀಚೆಗಂತೂ ದುಬಾರಿ ಔಷಧಗಳು ಉತ್ತಮವಾಗಿ ಕೆಲಸ ಮಾಡುತ್ತವೆಂಬ “ಪ್ಲಾಸೆಬೋ” ಪರಿಣಾಮ ಜನರ ತಲೆ ಹೊಕ್ಕುಬಿಟ್ಟಿದೆ. ಅದಕ್ಕೆ “ಡಾಕ್ಟ್ರೇ.. ಔಷಧಿ ದುಬಾರಿಯಾದರೂ ಪರವಾಗಿಲ್ಲ. ರೋಗ ಬೇಗ ಗುಣವಾಗಬೇಕು. ದುಬಾರಿ ಔಷಧಿ ಬರೆದುಕೊಡಿ” ಎನ್ನುವವರ ಸಂಖ್ಯೆಗೇನೂ ಕಡಿಮೆ ಇಲ್ಲ.

ಜನೌಷಧಿ ಕೇಂದ್ರಗಳನ್ನು ಹೆಚ್ಚು ಹೆಚ್ಚಾಗಿ ಸ್ಥಾಪಿಸಲು ಸರ್ಕಾರಗಳೇ ಪ್ರೋತ್ಸಾಹಿಸುತ್ತಿದ್ದಾವೆ. ಜನೌಷಧಿ ಕೇಂದ್ರಗಳಲ್ಲಿ ಕಡಿಮೆ ಬೆಲೆಗೆ ದೊರಕುವ ಜನರಿಕ್ ಔಷಧಿಗಳನ್ನು ಮಾರುತ್ತಾರೆ. ಹಾಗಿದ್ದರೆ ಈ ಜನರಿಕ್ ಔಷಧಿಗಳೆಂದರೇನು? ಜನೌಷಧಿಗಳೆಂದರೇನು? ಅವುಗಳ ಬೆಲೆ ಏಕೆ ಕಡಿಮೆ? ಅವುಗಳು ಕಾರ್ಯಕ್ಷಮತೆ ಹೇಗಿರುತ್ತದೆ? ಅವುಗಳಿಗೆ ಲೈಸೆನ್ಸ್ ನೀಡುವವರು ಯಾರು? ಇತ್ಯಾದಿ ಹಲವು ಪ್ರಶ್ನೆಗಳಿಗೆ ಉತ್ತರ ಬೇಕಲ್ಲವೇ? ಪ್ರಯತ್ನಿಸೋಣ…

ಸರಳವಾಗಿ ಉದಾಹರಣೆ ನೀಡಬೇಕೆಂದರೆ “ಕ್ರೋಸಿನ್” ಇದು ತಲೆನೋವಿಗೆ ಉಪಯೋಗಿಸುವ ಔಷಧದ ಬ್ರಾಂಡೆಡ್ ಹೆಸರು. ಇದು ಜಿ.ಎಸ್.ಕೆ ಕಂಪನಿಯ ಬ್ರಾಂಡೆಡ್ ಉತ್ಪನ್ನವಾದರೆ “ಪ್ಯಾರಸೆಟಮಾಲ್” ಇದು ಕ್ರೋಸಿನ್ನಲ್ಲಿರುವ “ಜನರಿಕ್” ಔಷಧಿಯ ಹೆಸರು. ಜನರಿಕ್ ಔಷಧಿಯಾದ “ಪ್ಯಾರಾಸೆಟಮಾಲ್” ಅನ್ನು ಅನೇಕ ಕಂಪನಿಗಳು ಅನೇಕ ಬ್ರಾಂಡೆಡ್ ಹೆಸರಿನಲ್ಲಿಯೂ ತಯಾರಿಸುತ್ತವೆ. ಜನರಿಕ್ ಪ್ಯಾರಸೆಟಮಾಲ್ 15 ಗುಳಿಗೆಗೆ ರೂ: 5 ಇದ್ದರೆ ಕ್ರೋಸಿನ್ 15 ಗುಳಿಗೆಗಳಿಗೆ ರೂ: 30.24 ಇರುತ್ತದೆ. ಅಂದರೆ ಬೆಲೆಯು ಬ್ರಾಂಡೆಡ್ ಔಷಧಿಗೆ ಕನೀಷ್ಟ 6 ಪಟ್ಟು ಜಾಸ್ತಿ !!. ಎರಡರ ಪರಿಣಾಮವೂ ಒಂದೇ. ಇದು ಅನೇಕ ಜನರಿಗೆ ಗೊತ್ತಿರುವುದಿಲ್ಲ.

ಇದನ್ನೂ ಓದಿ | ‘ಮೈತ್ರಿ ಸೇತು’ ಸೇತುವೆಯ ವೈಶಿಷ್ಟ್ಯತೆ..!

ಸಾಮಾನ್ಯವಾಗಿ ಒಂದು ಔಷಧ ಕಂಪನಿ ‘ಹೊಸ ಔಷಧ’ ಕಂಡುಹಿಡಿಯಿತೆಂದರೆ ಇಂತಿಷ್ಟು ವರ್ಷಗಳ ಕಾಲ ಅದರ ಸ್ವಾಮ್ಯತೆ ಅಥವಾ ಹಕ್ಕು ಹೊಂದಿರುತ್ತದೆ. ಅಂದರೆ ಈ ಪೇಟಂಟ್ ಅವಧಿಯಲ್ಲಿ ಬೇರೆ ಯಾವ ಔಷಧ ಕಂಪನಿಗಳೂ ಸಹ ಈ ಹೊಸ ಔಷಧವನ್ನು ಬಳಸಿ ಹೊಸ ಕಂಪನಿ ಹೆಸರಿನೊಂದಿಗೆ ಮಾರುವಂತಿಲ್ಲ. ಪೇಟಂಟ್ ಅವಧಿ ಮುಗಿದ ನಂತರ ಯಾವ ಕಂಪನಿ ಬೇಕಾದರೂ ಈ ಔಷಧವನ್ನು ಸಿದ್ದಪಡಿಸಿ ಹೊಸ ಬ್ರಾಂಡ್ ಹೆಸರಿನಿಂದ ಮಾರುಕಟ್ಟೆಯಲ್ಲಿ ಮುಕ್ತವಾಗಿ ಮಾರಬಹುದು.

ಇದಕ್ಕೆ ಮೂಲ ಕಂಪನಿ/ ಪೇಟಂಟ್ ಪಡೆದಿದ್ದ ಕಂಪನಿಯ ಪರವಾನಗಿ ಬೇಕಾಗಿರುವುದಿಲ್ಲ. ರಾಸಾಯನಿಕ ಹೆಸರು, ಜನರಿಕ್ ಹೆಸರು (ಮೂಲ ಹೆಸರು) ಮತ್ತು ಬ್ರಾಂಡೆಡ್ ಹೆಸರು / ಟ್ರೇಡ್ ನೇಮ್/ ಪ್ರೊಪ್ರೈಟರಿ ಹೆಸರುಗಳಿಂದ ಒಂದು ಔಷಧವನ್ನು ಗುರುತಿಸಬಹುದು. ಇವುಗಳಲ್ಲಿ ಔಷಧದ ರಾಸಾಯನಿಕ ಹೆಸರು ಮತ್ತು ಜನರಿಕ್ ಹೆಸರುಗಳು ಎಂದಿಗೂ ಬದಲಾಗುವುದಿಲ್ಲ. ರಾಸಾಯನಿಕ ಹೆಸರುಗಳನ್ನು ಓದುವುದು ಮತ್ತು ನೆನಪಿಟ್ಟುಕೊಳ್ಳುವುದು ಸಾಮಾನ್ಯವಾಗಿ ಕಷ್ಟ ಸಾದ್ಯ, ಆದರೆ ಜನರಿಕ್ ಹೆಸರುಗಳನ್ನು ಸುಲಭವಾಗಿ ಓದಬಹುದು ಮತ್ತು ನೆನಪಿಟ್ಟುಕೊಳ್ಳಬಹುದು.

ಬ್ರಾಂಡೆಡ್ ಔಷಧಗಳಿಗೆ ಪರ್ಯಾಯವಾಗಿ ಬಳಸುವ ಉದ್ದೇಶದಿಂದ ಸ್ವಾಮ್ಯತೆ ಅಥವಾ ಪೇಟಂಟ್ ಅವಧಿಯ ನಂತರ ಮಾರುಕಟ್ಟೆಯಲ್ಲಿ ಔಷಧದ ಮೂಲ ಹೆಸರಿನಲ್ಲಿ ಲಭ್ಯವಿರುವ ಔಷಧಗಳಿಗೆ “ಜನರಿಕ್ ಔಷಧ” ಗಳು ಎನ್ನುತ್ತಾರೆ.ಸಾರ್ವಜನಿಕರಿಗೆ ಇರುವಂತೆ ಬಹುತೇಕ ಜನರಿಗೆ ಜನರಿಕ್ ಔಷಧಿಗಳ ಬಗ್ಗೆ ಈ ಕೆಳಗಿನ ಸಂಶಯಗಳಿವೆ.

ಜನರಿಕ್ ಔಷಧಗಳು ಏಕೆ ಅಗ್ಗ?

  1. ಬ್ರಾಂಡೆಡ್ ಔಷಧಿಗಳಿಗೆ ಲೈಸನ್ಸ್ ಕೊಡುವಾಗ ಅನುಸರಿವಷ್ಟು ಕಠಿಣ ಕ್ರಮವನ್ನು ಜನರಿಕ್ ಔಷಧಿಗಳಿಗೆ ಅನುಮತಿ ನೀಡುವಾಗ ಅನುಸರಿಸುವುದಿಲ್ಲ.
  2. ಜನರಿಕ್ ಔಷಧಿಗಳು ಬ್ರಾಂಡೆಡ್ ಔಷಧಗಳಷ್ಟು ಕಾರ್ಯಕ್ಷಮತೆ ಹೊಂದಿಲ್ಲ.
  3. ಜನರಿಕ್ ಔಷಧಗಳು ಬ್ರಾಂಡೆಡ್ ಔಷಧಗಳಂತೆ ಉತ್ತಮವಾಗಿ ಉತ್ಪಾದನಾ ಗುಣಮಟ್ಟ ಹೊಂದಿಲ್ಲ.
  4. ಜನರಿಕ್ ಔಷಧಗಳ ಗುಣಮತ್ತ, ಪರಿಣಾಮ, ಅಡ್ಡ ಪರಿಣಾಮ ಇವುಗಳನ್ನು ತಪಾಸಣೆ ಮಾಡಲು ಉತ್ತಮ ಸಂಸ್ಥೆಗಳಿಲ್ಲ.
  5. ಇವುಗಳ ಬೆಲೆ ಕಡಿಮೆ. ಕಾರಣ ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಿರಬಹುದು.
  6. ಜನರಿಕ್ ಔಷಧಿಗಳಿಗೆ ಅಡ್ಡ ಪರಿಣಾಮಗಳಾದರೆ ತಯಾರಿಕರು ಹೊಣೆಗಾರಿಕೆ ವಹಿಸಿಕೊಳ್ಳುವುದಿಲ್ಲ.

ಈ ಪ್ರಶ್ನೆಗಳಿಗೆಲ್ಲ ಕೆಳಗೆ ಉತ್ತರವಿದೆ.

ಜನರಿಕ್ ಔಷಧಗಳೇಕೆ ಬ್ರಾಂಡೆಡ್ ಔಷಧಗಳಿಗಿಂತ ಅಗ್ಗ?

ಮಾರುಕಟ್ಟೆಗೆ ಹೊಸ ಔಷಧಿ ಲಗ್ಗೆ ಇಡುವ ಮುನ್ನ ಅಮೇರಿಕಾ ಸರ್ಕಾರದ ಅಧೀನದ ಸಂಸ್ಥೆಯಾದ ಆಹಾರ ಮತ್ತು ಔಷಧ ಪರವಾನಗಿ ಪ್ರಾಧಿಕಾರದ (ಎಫ್‌ಡಿಎ) ಕಠಿಣ ಕಣ್ಗಾವಲಿನಲ್ಲಿ ಪುನರಾವಲೋಕನಗೊಂಡಿರುತ್ತದೆ. ಕಂಪನಿಗಳು ಹೊಸ ಔಷಧಗಳನ್ನು ಕಂಡುಹಿಡಿಯುವಲ್ಲಿ ಸಾಕಷ್ಟು ಸಮಯ (ಸುಮಾರು 6-12 ವರ್ಷಗಳು) ಮತ್ತು ಸುಮಾರು 200 ಬಿಲಿಯನ್ ಹಣವನ್ನು ವ್ಯಯಿಸಿರುತ್ತವೆ.

ಎಫ್‌ಡಿಎಯು ಈ ಕಂಪಗಳಿಗೆ ತಾವು ತೊಡಗಿಸಿದ ಹಣವನ್ನು ಹಿಂಪಡೆಯಲು ನೆರವಾಗುವಂತೆ ಪೇಟಂಟ್ ಅವಧಿಯನ್ನು ನೀಡಿ ಮಾರುಕಟ್ಟೆಯಲ್ಲಿ ಏಕಸ್ವಾಮ್ಯವನ್ನು ಸಾಧಿಸಲು ನೆರವಾಗುತ್ತದೆ, ಹಾಗಾಗಿ ಬ್ರಾಂಡೆಡ್ ಔಷಧಗಳು ತುಸು ತುಟ್ಟಿ. ಆದರೆ ಜನರಿಕ್ ಔಷಧಗಳು ಹಾಗಲ್ಲ, ಪೇಟಂಟ್ ಅವಧಿಯ ನಂತರವೇ ಜನರಿಕ್ ಔಷಧಿಗಳನ್ನು ಸಿದ್ದಪಡಿಸಲು ಎಫ್‌ಡಿಎಯು ಪರವಾನಗಿ ನೀಡುವುದರಿಂದ , ಮತ್ತೊಮ್ಮೆ ಪ್ರಾಣಿಗಳ ಮತ್ತು ಮಾನವನ ಮೇಲೆ ಪ್ರಯೋಗ ಮಾಡಿ ಇದರ ಸುರಕ್ಷತೆ ಮತ್ತು ಪರಿಣಾಮದ ಬಗ್ಗೆ ಪರೀಕ್ಷಿಸುವ ಅವಶ್ಯಕತೆ ಇರುವುದಿಲ್ಲ.

ಹಾಗಾಗಿ ಜನರಿಕ್ ಔಷಧಿಗಳು ಅಗ್ಗ. ಬಹು ಮುಖ್ಯವಾಗಿ ಯಾವುದೇ ಕಂಪನಿ ತಯಾರಿಸಿದರೂ ಔಷಧದ ಮೂಲ ಹೆಸರಿನಲ್ಲೆ (ಜನರಿಕ್ ಹೆಸರಿನಲ್ಲಿ) ಮಾರಾಟ ಮಾಡಬೇಕಾಗಿರುವುದರಿಂದ ಮಾರುಕಟ್ಟೆಯಲ್ಲಿ ಕಂಪನಿ ದರ ಪೈಪೋಟಿಗೆ ಇಳಿದುಬಿಡುತ್ತದೆ. ಈ ಕಾರಣಗಳಿಂದ ಜನರಿಕ್ ಔಷಧಗಳು ಬ್ರಾಂಡೆಡ್ ಔಷಧಗಳಿಗಿಂತ ಕೆಲವೊಮ್ಮೆ ಶೇ: 70-85 ರಷ್ಟು ಕಡಿಮೆ ದರದಲ್ಲಿ ಲಭ್ಯವಾಗುತ್ತವೆ.

ಜನರಿಕ್ ಔಷಧಗಳು ಹೇಗೆ ಅನುಮೋದನೆ ಪಡೆಯುತ್ತವೆ?

ಯಾವುದೇ ಕಂಪನಿ ಹೊಸದಾಗಿ ಜನರಿಕ್ ಔಷಧಗಳನ್ನು ಸಿದ್ದಪಡಿಸಿ ಮಾರುಕಟ್ಟೆಗೆ ತರುವ ಮುನ್ನ ಹೊಸ ಅರ್ಜಿಯನ್ನು ಎಫ್‌ಡಿಎಗೆ ಸಲ್ಲಿಸಿರುತ್ತದೆ. ಆಗ ಎಪ್‌ಡಿಎ ವಿವಿಧ ಮೂಲಬೂತ ಪರೀಕ್ಷೆಗಳನ್ನು ನಡೆಸಿದ ನಂತರವೇ ಅನುಮೋದನೆ ನೀಡುತ್ತದೆ.

ಔಷಧದ ಅಡ್ಡಪರಿಣಾಮ ಮತ್ತು ಸುರಕ್ಷತೆಯ ತಪಾಸಣೆ ನಡೆಯುತ್ತದೆಯೇ?

ಹೌದು. ಜನರಿಕ್ ಅಥವಾ ಬೇರೆ ಯಾವುದೇ ಔಷಧ ಇರಲಿ, ಅವು ಎಲ್ಲಿಯವರೆಗೆ ಮಾರುಕಟ್ಟೆಯಲ್ಲಿ ಲಭ್ಯವಿರುತ್ತವೆಯೋ ಅಲ್ಲಿಯವರೆಗೆ ಎಪ್‌ಡಿಎಯ ಕಣ್ಗಾವಲಿನಲ್ಲಿರುತ್ತವೆ. ಔಷಧಗಳು ಸಿದ್ದವಾಗಿ ಬಳಕೆದಾರರಿಗೆ ಲಭ್ಯವಾಗುವ ತನಕದ ಎಲ್ಲಾ ಹಂತದಲ್ಲೂ ಎಪ್‌ಡಿಎಯು ಕಾಲಕಾಲಕ್ಕೆ ನಿರಂತರವಾಗಿ ಮೇಲ್ವಿಚಾರಣೆ ಮಾಡುವ ಮೂಲಕ ಔಷಧಗಳ ಸುರಕ್ಷತೆ ಮತ್ತು ಗುಣಮಟ್ಟವನ್ನು ಧೃಢಪಡಿಸುತ್ತದೆ. ಚಿಕಿತ್ಸಾ ವೈಫಲ್ಯ ಅಥವಾ ವೈಪರಿತ್ಯಗಳು ಕಂಡುಬಂದಲ್ಲಿ , ಸಾರ್ವಜನಿಕರಿಗೆ ಹಾಗೂ ಆರೋಗ್ಯ ಕ್ಷೇತ್ರ ವೃತ್ತಿಪರರಿಗೆ ಸೂಚನೆ/ ಸಲಹೆ/ ಶಿಫಾರಸ್ಸುಗಳನ್ನು ನೀಡುವ ಹೊಣೆಗಾರಿಕೆಯನ್ನು ಎಪ್‌ಡಿಎ ಹೊಂದಿದೆ.

ಭಾರತದಲ್ಲಿ ಜನರಿಕ್ ಔಷಧಗಳ ಪರಿಸ್ಥಿತಿ ಏನು?

ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ ಜಗತ್ತಿನ 30% ಜನರಿಗೆ ಅವಶ್ಯಕ ಔಷಧಗಳು ಕೈಗೆಟುಕುತ್ತಿಲ್ಲ. ಇದರ ಪ್ರಮಾಣ ಆಫ್ರಿಕಾ ಮತ್ತು ಏಷಿಯಾದಲ್ಲಿ 50%. ಭಾರತದಲ್ಲಿ ಒಟ್ಟು ಉತ್ಪನ್ನದ ಶೇ 1.2 ರಷ್ಟನ್ನು ಭಾರತೀಯರು ತಮ್ಮ ಆರೋಗ್ಯದ ಮೇಲೆ ಖರ್ಚು ಮಾಡುತ್ತಾರೆ. ವಾರ್ಷಿಕ ವೈದ್ಯಕೀಯ ವೆಚ್ಚವನ್ನು ತಗ್ಗಿಸುವ ಉದ್ದೇಶದಿಂದ ಜನರಿಕ್ ಔಷಧಗಳನ್ನು ಭಾರತದಲ್ಲಿ ಪರಿಚಯಿಸಲಾಗಿದೆ.

ಪರೀಕ್ಷೆ ಮತ್ತು ಮಾಪನಾಂಕ ನಿರ್ಣಯ

ಪ್ರಯೋಗಾಲಯಗಳಿಗಾಗಿ ರಾಷ್ಟ್ರೀಯ ಮಾನ್ಯತಾ ಮಂಡಳಿ (ಎನ್‌ಎಬಿಎಲ್) ಸರ್ಕಾರಿ ಮತ್ತು ಖಾಸಗಿ ತಯಾರಕರಿಂದ ಆಯ್ದ ಬ್ಯಾಚಿನ ಔಷಧಗಳನ್ನು ತಂದು ವಿವಿಧ ಪರೀಕ್ಷೆಗೆ ಒಳಪಡಿಸುವ ಮೂಲಕ ಗುಣಮಟ್ಟ, ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಧೃಢಪಡಿಸಿಕೊಳ್ಳುತ್ತದೆ.

ಕೇಂದ್ರ ಸರ್ಕಾರದಿಂದ ಸಹಾಯಧನ ಪಡೆದ ಸರ್ಕಾರೇತರ ಅಥವಾ ಲಾಭ ನಿರಪೇಕ್ಷಿತ ಸಂಘಟನೆಗಳೇ ಸಾಮಾನ್ಯವಾಗಿ ಭಾರತದಲ್ಲಿ ಜನರಿಕ್ ಔಷಧ ತಯಾರಕರು. ಜನರಿಕ್ ಔಷಧಗಳಲ್ಲಿ ದರ ವ್ಯತ್ಯಾಸಗಳಿದ್ದರೂ ಅವುಗಳ ಪರಿಣಾಮಕಾರಿತ್ವವನ್ನು ಹೋಲಿಕೆ ಮಾಡಬಹುದು.

ಜನರಿಕ್ ಮತ್ತು ಬ್ರಾಂಡೆಡ್ ಔಷಧಗಳ ಪರಿಣಾಮಕಾರಿತ್ವದಲ್ಲಿ ವ್ಯತ್ಯಾಸವಿಲ್ಲ ಎಂಬುದು ಸಾಬೀತಾಗಿದ್ದರೂ ಸಹ ಅನೇಕ ಆರೋಗ್ಯ ಸಂಭಂಧಿ ವೃತ್ತಿಪರರು, ಹೆಸರಾಂತ ಕಂಪನಿಗಳ ಔಷಧಗಳನ್ನೇ ಬರೆದುಕೊಡುತ್ತಾರೆ. ಆದರೆ ಅವರಿಗೆ ಕಡಿಮೆ ಹೆಸರಿರುವ ಕಂಪನಿಗಳು ಜನರಿಕ ಔಷಧಗಳನ್ನು ತಯಾರಿಸುತ್ತವೆ ಎಂಬುದೇ ತಿಳಿದಿರುವುದಿಲ್ಲ!

ಔಷಧ ತಯಾರಿಕೆಯಲ್ಲಿ ಬಳಸುವ ಉಪವಸ್ತುಗಳಿಂದ ಅಲ್ಪ ಸ್ವಲ್ಪ ಗುಣಮಟ್ಟದಲ್ಲಿ ವ್ಯತ್ಯಾಸವಾಗಬಹುದೇ ಹೊರತು ಮೂಲ ಔಷಧಿಯಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎನ್ನುತ್ತಾರೆ ಸಂಶೋಧಕರು. ಕೆಲವು ಔಷಧಿಗಳ ಗುಣಮಟ್ಟ ಸ್ವಲ್ಪ ಕಡಿಮೆ ಎಂಬ ಅಪವಾದ ಬಿಟ್ಟರೆ ಬಹುತೇಕ ಜನರಿಕ್ ಔಷಧಿಗಳು ಬ್ರಾಂಡೆಡ್ ಔಷಧಿಗಳಿಗಿಂತ ಗುಣ ಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಂಡಿರುವುದಿಲ್ಲ ಎಂಬುದು ಅಂಬೋಣ.

ಜಾನುವಾರುಗಳಲ್ಲಿಯೂ ಜನರಿಕ್ ಔಷಧಿ ಇದೆಯೇ?

ಇದೆ. ಜನರಿಕ್ ಔಷಧಿಗಳು ಜಾನುವಾರು ಚಿಕಿತ್ಸೆಯಲ್ಲೂ ಇವೆ. ಆದರೆ ಭಾರತದಲ್ಲಿ ಇನ್ನೂ ಇದರ ಜನೌಷಧಿ ಕೇಂದ್ರಗಳು ಇಲ್ಲ. ಈ ಔಷಧಿಗಳಿಗೆ ಅಷ್ಟು ಪರಿಣಾಮ ಹೊಂದಿಲ್ಲ ಎಂಬ ಭಾವನೆಯಿಂದ ಇವುಗಳನ್ನು ಬರೆದುಕೊಡುವುದಿಲ್ಲ ಎನ್ನುತ್ತದೆ ಸಮೀಕ್ಷೆ. ಆದರೆ ಜಾನುವಾರುಗಳ ಜನರಿಕ್ ಔಷಧಿಗಳಿಗೂ ಸಹ ಅಮೇರಿಕದಲ್ಲಿ ಎಫ್ ಡಿ ಎ ಅತ್ಯಂತ ಕಠಿಣ ತಪಾಸಣೆಗಳ ನಂತರವೇ ರಹದಾರಿ ನೀಡುತ್ತದೆ.ಭಾರತದಲ್ಲಿಯೂ ಸಹ ಪಶು ಜನೌಷಧಿ ಕೇಂದ್ರಗಳು ಬಂದರೆ ಜಾನುವಾರುಗಳ ಔಷಧಿ ಕಡಿಮೆ ದರದಲ್ಲಿ ದೊರಕಬಹುದು.

ಜನೌಷಧಿ ಕೇಂದ್ರಗಳೆಂದರೇನು?

ಭಾರತ ಸರ್ಕಾರವು ಜನರಿಕ್ ಔಷಧಿಗಳು ಜನಸಾಮಾನ್ಯರಿಗೆ ಕಡಿಮೆ ಬೆಲೆಗೆ ದೊರೆಯುವಂತೆ ಮಾಡಿದ ವ್ಯವಸ್ಥೆಯೇ ಜನೌಷಧಿ ಕೇಂದ್ರಗಳು. ಇಲ್ಲಿ ದೊರೆಯುವ ಜನರಿಕ್ ಔಷಧಿಗಳು ಬ್ರಾಂಡೆಡ್ ಔಷಧಿಗಳಷ್ಟೇ ಪರಿಣಾಮಕಾರಿಯಾಗಿರಬೇಕು. ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳು ಭಾರತ ಸರ್ಕಾರದ ಔಷಧ ಇಲಾಖೆಯ ಸುಪರ್ಧಿಯಲ್ಲಿ ನಿಯಂತ್ರಣದಲ್ಲಿವೆ. ಬ್ಯೂರೋ ಆಫ್ ಫಾರ್ಮಾ ಪಬ್ಲಿಕ್ ಸೆಕ್ಟರ್ ಅಂಡರ್ಟೇಕಿಂಗ್ಸ್ ಆಫ್ ಇಂಡಿಯಾ ಇದು ಜನೌಷಧಿಗಳ, ತಯಾರಿಕೆ, ಸಾಗಣೆ ಮತ್ತು ಗುಣಮಟ್ಟದ ಹೊಣೆ ಹೊತ್ತಿದೆ.
1. ಪ್ರತಿ ಔಷಧಿ ಬ್ಯಾಚಿನ ಔಷಧಿಗಳ ಗುಣಮಟ್ಟವು ಎನ್.ಎ.ಬಿ.ಎಲ್ ಪ್ರಯೋಗಶಾಲೆಗಳಿಂದ ದೃಢಪಟ್ಟಿರಬೇಕು.
2. ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳು ದೃಢೀಕರಿಸಲ್ಪಟ್ಟ ಸಂಸ್ಥೆಗಳಿಂದ ಮಾತ್ರ ಔಷಧ ಖರೀದಿಸಬೇಕು.
ಈ ವರೆಗೆ ಸುಮಾರು 4700 ಕ್ಕಿಂತ ಜಾಸ್ತಿ ಜನೌಷಧ ಕೇಂದ್ರಗಳು ದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಈ ವರ್ಷದ ಆಯವ್ಯಯದಲ್ಲಿ ಇನ್ನೂ ಜಾಸ್ತಿ ಕೇಂದ್ರಗಳನ್ನು ತೆರೆಯಲು ಭಾರತ ಸರ್ಕಾರ ಉದ್ದೇಶಿಸಿದೆ.

ಯಾರು ಜನೌಷಧಿ ಕೇಂದ್ರಗಳನ್ನು ತೆರೆಯಬಹುದು?

ಸರ್ಕಾರದಿಂದ ಮಾನ್ಯತೆ ಪಡೆದ ಜನಕಲ್ಯಾಣ ಕಾರ್ಯಕ್ರಮದಲ್ಲಿ ಕನೀಷ್ಟ 3 ವರ್ಷ ಅನುಭವವಿರುವ, ಸರ್ಕಾರೇತರ ಸಂಸ್ಥೆಗಳು, ಸಹಕಾರಿ ಸಂಘಗಳು ಸರ್ಕಾರಿ ಸಂಸ್ಥೆಗಳ ಆವರಣದಲ್ಲಿ ಉಚಿತವಾಗಿ ನೀಡಲ್ಪಡುವ ಸ್ಥಳದಲ್ಲಿ ಜನೌಷಧಿ ಕೇಂದ್ರಗಳನ್ನು ತೆರೆಯಬಹುದು.

ಅಲ್ಲದೇ ಫಾರ್ಮಾ ಪದವೀದರರು ಸೇರಿದಂತೆ ಯಾವುದೇ ನಿರುದ್ಯೋಗಿ ಪದವೀಧರರು ಅವಶ್ಯಕ ಸ್ಥಳ, ಕನೀಷ್ಟ ಬಂಡವಾಳ, ಶೀತಲಿಕರಣ ಯಂತ್ರ, ಗೋದಾಮು, ಔಷಧಿ ಅಂಗಡಿ ತೆರೆಯಲು ಮೂಲಭೂತ ಸೌಲಭ್ಯ ಮತ್ತಿತರ ರಹದಾರಿ ಹೊಂದಿದ್ದರೆ ಜನೌಷಧಿ ಕೇಂದ್ರಗಳನ್ನು ತೆರೆಯಬಹುದು. ಪ್ರತಿ ಔಷಧಿಯ ಮೇಲೆ ಶೇ: 20 ರಷ್ಟು ಲಾಭ ಇದ್ದೇ ಇದೆ. ಸರ್ಕಾರದಿಂದ ರೂ:1.5 ಲಕ್ಷದ ವರೆಗೆ ಸಹಾಯವೂ ಸಹ ದೊರೆಯುವುದು.

ಹೊಸ ಔಷಧಿಗಳು ಮಾರುಕಟ್ಟೆಗೆ ಬಂದಾಗ ಅವುಗಳ ಕಂಪನಿಯವರು ಹಾಕಿದ ಬಂಡವಾಳ ಮತ್ತು ಲಾಭವನ್ನು ಹಿಂದಿರುಗಿ ಪಡೆಯಲು ಜಾಸ್ತಿ ದುಬಾರಿ ಬೆಲೆಗೆ ಮಾರುವುದು ಸಹಜ. ಅವುಗಳನ್ನು ಖರೀದಿಸುವುದು ಅನಿವಾರ್ಯ ಸಹ. ಆದರೆ ಪೇಟೆಂಟ್ ಅವಧಿ ಮುಗಿದು ಔಷಧಿಯು “ಜನರಿಕ್” ರೂಪದಲ್ಲಿ ದೊರೆಯತೊಡಗಿದಾಗ ಅವುಗಳನ್ನೇ ಖರೀದಿಸುವುದು ಒಳ್ಳೆಯದಲ್ಲವೇ?

ಜನರಿಕ್ ಔಷಧಗಳು ಚಿಕಿತ್ಸಾ ವೆಚ್ಚವನ್ನು ಕಡಿಮೆ ಮಾಡಲೆಂದೇ ಬಂದವುಗಳು. ವ್ಯವಸ್ಥೆಯಲ್ಲಿ ಸಣ್ಣ ಪುಟ್ಟ ದೋಷಗಳಿರಬಹುದು.ಕೆಲವೊಮ್ಮೆ ಕಳಪೆ ಔಷಧಿಯೂ ಸಹ ಪತ್ತೆಯಾಗಿರಬಹುದು. ಇದು ವ್ಯಾಪಾರಿ ವೃತ್ತಿಯ ಎಲ್ಲ ರಂಗಗಳಲ್ಲಿದೆ. ಹೀಗಂದ ಮಾತ್ರಕ್ಕೆ ಅವುಗಳನ್ನೆಲ್ಲಾ ಸಂಶಯ ದೃಷ್ಟಿಯಿಂದ ನೋಡುವುದು ಒಳಿತಲ್ಲ. ರಾಷ್ಟ್ರೀಯ ವೈದ್ಯಕೀಯ ಆಯೋಗ (ಹಿಂದಿನ ಭಾರತೀಯ ಭಾರತೀಯ ವೈದ್ಯಕೀಯ ಮಂಡಳಿ) ಸಹ ಜನರಿಕ್ ಔಷಧಿಗಳನ್ನೇ ಬರದು ಕೊಡಬೇಕು ಎಂಬ ನಿಯಮ ಮಾಡಿದೆ.ಇದೇ ನಿಯಮವನ್ನು ಭಾರತೀಯ ಪಶುವೈದ್ಯಕೀಯ ಪರಿಷತ್ತು ಸಹ ಕಾಲಕ್ರಮೇಣ ಅನುಕರಿಸಬಹುದು.

ಬಹುತೇಕ ಜನ ಸಾಮಾನ್ಯರು ಸರ್ವೇ ಸಾಮಾನ್ಯವಾಗಿ ಬಳಸಿಲು ಪ್ರಾರಂಭಿಸಿದ ಮೇಲೆ ಮಾತ್ರ ಜನರಿಕ್ ಔಷಧಿಗಳಿಗೆ ಒಂದು ಉತ್ತಮ ಕಾಲ ಬಂದು ಸರ್ಕಾರದ ಆಶಯ ಈಡೇರಬಹುದು.

-(ಡಾ:ಎನ್.ಬಿ.ಶ್ರೀಧರ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು,
ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ
ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ತಂತ್ರಜ್ಞಾನ ಮೋಡಿ : ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ

Published

on

  • ಡಾ. ಚಂದ್ರಪ್ಪ ಎಚ್, ಸಹಾಯಕ ಪ್ರಾಧ್ಯಾಪಕರು, ಭೌತವಿಜ್ಞಾನ ವಿಭಾಗ, ಸರ್ಕಾರಿ ವಿಜ್ಞಾನ ಕಾಲೇಜು, ಚಿತ್ರದುರ್ಗ

90ರ ದಶಕದಿಂದೀಚೆಗೆ, ಎಲ್ಲೆಡೆ ಸದ್ದಿಲ್ಲದೇ ಕ್ರಮೇಣ ಒಕ್ಕರಿಸತೊಡಗಿದೆ ಆಧುನಿಕ ಯಾಂತ್ರಿಕೃತ ಬದುಕು.

ಜನಸಾಮಾನ್ಯರ ಅರಿವಿನ-ಪರಿಧಿ ತಿಳಿಗೊಳ್ಳುವುದರ ಮೊದಲೇ ಊಹಿಸಲಾರದಷ್ಟು ಮಟ್ಟಿಗೆ ಇಂದು, ಸ್ವಚ್ಛಂದ ಹಳ್ಳಿ-ಸೊಬಗಿನ ಕೂಡು-ಕುಟುಂಬದ, ಮೈ-ಮನಸ್ಸು ತುಂಬಿದ, ಪರಿಶುದ್ಧ ಜೀವನ ಪ್ರೀತಿ, ಉತ್ಸಾಹ, ಮಮತೆಯನ್ನು ಇನ್ನಿಲ್ಲವಾಗಿಸಿದೆ ಎನಿಸುತ್ತದೆಯಲ್ಲವೆ?

ಹೇಗೆಂದರೆ, ಕಲ್ಪಿಸಿಕೊಂಡರೂ ಕಣ್ಣೆದುರಿಗೆ ತೆರೆದಿಡುವ ಅಮೂಲ್ಯ ಬದುಕು, ಅದೆಷ್ಟು ಬೇಗ ದಿಕ್ಕು-ದೆಸೆಯಿಲ್ಲದೆ ಕಣ್ಣು-ಕಟ್ಟಿದ ಸ್ಪರ್ಧೆಗಿಳಿದ ಕುದುರೆಯಂತೆ ಅಲೆಯುವಂತಾಗಿದೆ! ಅರೆಕ್ಷಣ, ಮೈಮನ ಕಸಿವಿಸಿಗೊಳ್ಳುತ್ತೆ! ಜೀವ ಮರುಗುತ್ತೆ. ಮತ್ತೆ ಮತ್ತೆ ಆ ಬಾಲ್ಯ, ಹಳ್ಳಿ ಬದುಕನ್ನ ಅರಸಿ ಬಯಸುತ್ತೆ! ಜನತೆ, ಹಳ್ಳಿಯಲ್ಲಿನ ಗಿಡ-ಮರ, ಪಶು-ಪಕ್ಷಿ, ಹಳ್ಳ-ಕೊಳ್ಳ, ಬೆಟ್ಟ-ಗುಡ್ಡ ಮುಂತಾದ ಪರಿಸರದ ಸಕಲ ಜೀವಿಗಳೊಂದಿಗೆ ಒಂದಾಗಿ ನಲ್ಮೆಯಿಂದ ಪರಿಶುದ್ಧ ಮನದಿ, ಭೂ ತಾಯಿ, ತಿಳಿ-ನೀಲಿ ಆಗಸ, ಮಳೆ, ಗಾಳಿ, ಬೆಳಕನ್ನ ಇನ್ನಿಲ್ಲದೆ ಅಪ್ಪಿ, ಅತ್ಯಂತ ಸಂತಸ-ಖುಷಿಯಿಂದ, ಇರುವ ಪರಿಸ್ಥಿತಿಗೆ ಒಗ್ಗಿ , ಬದುಕು ರೂಪಿಸಿಕೊಂಡು ಜೀವನೋತ್ಸಾಹ ತಳೆಯುತ್ತಿದ್ದರು.

ನಿಜ ಹೇಳಬೇಕೆಂದರೆ, ಪರಿಸರವೇ ಪಾಠ; ಭೂ ತಾಯಿಯೇ ಹಾಸಿಗೆ; ಆಗಸವೇ ಹೊದಿಕೆಯಾಗಿ, ದುಡಿದ, ದಣಿವರಿದ ಮನದಿ, ಕಣ್ತುಂಬಿ ನೆಮ್ಮದಿಯ ನಿಟ್ಟುಸಿರುಗೈವ ಕ್ಷಣಗಳು ಅದಾಗಿತ್ತು!

ಹಳ್ಳಿಯಲ್ಲಿನ ಆಟೋಟಗಳು, ತಮಾಷೆಯ ಕ್ಷಣಗಳು, ಆಟಿಕೆಗಳು, ಸಾಮಾನುಗಳು, ಹಬ್ಬ-ಹರಿದಿನಗಳು, ಜಾತ್ರೆ-ಸಂತೆಗಳು, ಒಕ್ಕಲು ಸಮಯದ ಸುಗ್ಗಿಯ ಮಧುರ ಕ್ಷಣಗಳು ಇತ್ಯಾದಿ ಜನತೆಯ ಮುಗ್ಧ -ಮನಸ್ಸು ಮತ್ತು ಹೊಳೆವ ಮುಖದಲ್ಲಿ, ನಿಷ್ಕಲ್ಮಶ ಮಂದಹಾಸ ಮೂಡಿಸಿ, ಬೆಲೆ ಕಟ್ಟಲಾಗದ ಖುಷಿಯ ಕ್ಷಣಗಳನ್ನು ಸದಾ ಅವರಲ್ಲಿ ಕಂಗೊಳಿಸುತ್ತಿದ್ದವು.

ಎಲ್ಲರೂ ದುಡಿವವರು; ಎಲ್ಲರೂ ಭಾಗಿಯಾಗುವವರು; ಎಲ್ಲರೊಳಗೊಂದಾಗಿ ಬಾಳುವವರು; ಎಲ್ಲರಲ್ಲೂ ಧನ್ಯತಾ ಭಾವ; ಆದರಣೀಯತೆ, ಪೂಜ್ಯತಾ-ಭಾವ ತುಂಬಿತ್ತು! ಅಂತಃಕರಣೆ, ಕರುಣೆ, ಪ್ರೀತಿ-ವಿಶ್ವಾಸ, ತಕ್ಕಮಟ್ಟಿಗೆ ಮಾನವೀಯತೆ ಬದುಕ-ಪ್ರೀತಿ ಹೆಚ್ಚಿಸಿತ್ತು!

ಈಗಾಗಲೇ, ನಾವು ಯಾವ ಸ್ಥಿತಿ ತಲುಪಿದ್ದೇವೆಂದರೆ: ಶಾಲಾ ರಜೆಯ ದಿನಗಳಲ್ಲಿ, ಈಗಿನ ಮಕ್ಕಳಿಗೆ ಆ ಕಾಲದ ಹಳ್ಳಿಗಳ ಜೀವನ ಪರಿಚಯಿಸಲು ಗೊಟಗೋಡಿಯ ರಾಕ್ ಗಾರ್ಡನ್ – ಹಾವೇರಿ, ಹೆರಿಟೇಜ್ ವಿಲೇಜ್ – ಮಣಿಪಾಲ, ಅಲ್ಲಲ್ಲಿ ಸಾರ್ವಜನಿಕ ಉದ್ಯಾನವನ, ಹಾಗೂ ಇತರೆ ಕೆಲವು ಮ್ಯೂಸಿಯಮ್ ಗಳತ್ತ ಮುಖ ಮಾಡಿಬೇಕೆ ಹೊರತು ನೈಜ ಚಿತ್ರಣ ಪ್ರಸ್ತುತ ಹಳ್ಳಿಗಾಡಿನಲ್ಲೂ ಕಾಣಸಿಗದು! ಸ್ವತಃ ಹಳ್ಳಿಗರೇ ಪರಿತಪಿಸುವ ಸ್ಥಿತಿ.

ಕಾರಣ ಇಷ್ಟೆ: ತಂತ್ರಜ್ಞಾನದ ಆವಿಷ್ಕಾರ ಮತ್ತು ಎಲ್ಲ ಕ್ಷೇತ್ರಗಳಲ್ಲೂ ಹೊಕ್ಕಿರುವ ಅದರ ಗಾಢವಾದ ಛಾಯೆ. ಇಡೀ ‘ಪ್ರಪಂಚವೇ ಒಂದು ಹಳ್ಳಿ’ (Global Village) ಯಾಗಿ ಮಾರ್ಪಟ್ಟಿರುವ ಭಾವನೆ. ವಿಶೇಷವಾಗಿ, ದೂರವಾಣಿ, ಇಂಟರ್ನೆಟ್, ಯುಟ್ಯೂಬ್, ನೇರ ಮೆದುಳಿಗೆ ಕೈ ಹಾಕಿರುವ ಸಾಮಾಜಿಕ ಜಾಲತಾಣಗಳ ಡ್ರಗ್ಸ್ ರೀತಿಯ ಮಾನಸಿಕ ಮೋಹ ಬೆಂಬಿಡದೆ ಇಂದಿನ ಆಧುನಿಕ ಜನತೆಯ ಚಿಂತನಾರ್ಹ ಯೋಚನಾ ಶಕ್ತಿ, ಆರೋಗ್ಯ , ಕೌಟುಂಬಿಕ ಮೌಲ್ಯಗಳು, ಮಾನವೀಯ ಗುಣಗಳು ಹಾಗೂ ಒಟ್ಟಾರೆ ಜೀವನ ಶೈಲಿಯನ್ನೇ ಅಕ್ಷರಸಃ ನುಂಗಿಹಾಕಿವೆ! ಅಲ್ಲದೆ, ಇದು ಇಂದಿನ ಅನಿವಾರ್ಯವೆಂಬಂತೆ ಕಠೋರ ಸನ್ನಿವೇಶ ಹುಟ್ಟುಹಾಕಿವೆ.

ಒಂದೆಡೆ, ‘ಅತೀಯಾದ ಅಮೃತವೂ ವಿಷ’ವೆನ್ನುವಂತೆ, ಹಾಗೂ ಊಟದಲ್ಲಿ ‘ರುಚಿಗೆ ತಕ್ಕಷ್ಟು ಉಪ್ಪಿ’ರುವಂತೆ ಹಲವು ಒಳಿತು-ಕೆಡುಕಗಳ ನಡುವೆ ಎಲ್ಲವೂ ಹಿತಮಿತವಾಗಿ ಬಳಕೆಯಲ್ಲಿದ್ದರೆ ಚೆನ್ನ. ಅಲ್ವೇ? ಮೈ ಮನ ಆರೋಗ್ಯಕರವಾಗಿರುತ್ತೆ; ಜೀವನ ಉತ್ಸಾಹದಿಂದ ಕೂಡಿರುತ್ತೆ.
ಜೊತೆಗೆ, ಇತ್ತೀಚೆಗೆ ಜಗತ್ತಿನೆಲ್ಲೆಡೆ ಭಾರೀ ಸಂಚಲನ ಸೃಷ್ಟಿಸಿರುವ ‘ಕೃತಕ ಬುದ್ಧಿಮತ್ತೆ’ (Artificial Intelligence – AI) ಹಾಗೂ ‘ಬಯೋಚಿಪ್’ ತಂತ್ರಜ್ಞಾನಗಳು. ಈ ಎರಡೂ ತಂತ್ರಜ್ಞಾನಗಳು ಬಹುತೇಕ ಮನುಷ್ಯನನ್ನ ಸಹ ಒಂದು ಸರಕಾಗಿ ನೋಡುವ ದೂರದೃಷ್ಟಿ ಹೊಂದಿವೆ ಎಂದರೆ ತಪ್ಪಾಗಲಿಕ್ಕಿಲ್ಲ! ತೀರ ಇತ್ತೀಚೆಗೆ, ತಂತ್ರಜ್ಞಾನ ಜಗತ್ತಿನ ಹೆಸರಾಂತ ಉದ್ಯಮಿ: ಎಲಾನ್ ಮಸ್ಕ್ ತಮ್ಮ ‘ನ್ಯೂರಾಲಿಂಕ್’ (Neuralink) ಸಂಸ್ಥೆಯ ಮೂಲಕ ಪ್ರಪಂಚದ ಮೊಟ್ಟ ಮೊದಲ ಪ್ರಯತ್ನವಾಗಿ ಆರೋಗ್ಯವಂತ ವ್ಯಕ್ತಿಯೊಬ್ಬರ ಮೆದುಳಿನಲ್ಲಿ ಪ್ರಾಯೋಗಿಕ – ‘ಮೊದಲ ಬಯೋಚಿಪ್’ ಅಳವಡಿಸಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ! ಇದುವರೆಗೂ, ಮೊಬೈಲ್ ನಲ್ಲಿ ಕೇವಲ ‘ಮೆಮೊರಿ ಕಾರ್ಡ್’ ಬಳಸಿ, ಅದರಲ್ಲಿ ಸಂಗ್ರಹಿಸಿದ ಮಾಹಿತಿ ಬೇಕೆಂದಾಗ ಆಲಿಸುವ, ನೋಡುವ ಪರಿಪಾಠದ ಪರಿಚಯವಿದ್ದ ನಮಗೆ, AI ಹಾಗೂ Biochip ತಂತ್ರಜ್ಞಾನಗಳ ಅವತಾರಗಳು ಊಹೆಗೂ ಮೀರಿದ್ದು ಅನ್ಸುತ್ತೆ ಕೂಡ.

ಆಗ, ಜಗತ್ತು ಹೇಗಿರಬೇಡ? ತಂತ್ರಜ್ಞಾನ ತೊರೆದು ಮನುಷ್ಯ, ಜೀವನ ಕಲ್ಪಿಸಿಕೊಳ್ಳಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಅದು, ಕೇವಲ ಮನುಷ್ಯನ ಅವಶ್ಯಕತೆಗಳಿಗೆ ಪೂರಕವಾಗಿರಬೇಕೆ ಹೊರತು; ಆತನನ್ನ ಆಳುವ ಸ್ಥಿತಿ ತಲುಪಬಾರದು! ಮುಂದಿನ ದಿನಗಳಲ್ಲಿ, ಮನುಷ್ಯ ಎದುರಿಸಬಹುದಾದ ಭಯಾನಕ ತಂತ್ರಜ್ಞಾನ ಸಂಕೋಲೆಗಳನ್ನು ಕುರಿತು ಚರ್ಚಿಸುವ ಅಗತ್ಯ ಇಂದಿನ ತುರ್ತು ಅನಿವಾರ್ಯ. ಆದರೆ, ಎಲ್ಲವೂ ಸಲೀಸಾಗಿ ಕೈಗೆಟುಕುವ ಇಂದಿನ ದಿನಗಳಲಿ, ಅತಿಯಾಗಿ ಮಿತಿಮೀರಿರುವ ಅನುಕೂಲಗಳು ಅಮೂಲ್ಯ ಖುಷಿಯ ಕ್ಷಣಗಳನ್ನು ಎಂದಿಗೂ ನೀಡಲಾರವು.

ಬದಲಿಗೆ, ಪ್ರತಿಷ್ಠೆಯ ಹೆಮ್ಮರಗಳಾಗಿ, ಜನತೆ ನಾಲ್ಕು ದಿನದ ಈ ಬಾಳಲಿ ಏನೋ ಬಹುದೊಡ್ಡ ಸಾಧನೆಗೈದವರಂತೆ, ಯಂತ್ರಮಾನವರಂತೆ ಬೀಗುವವರೆ!!? ಮೂಲಭೂತವಾಗಿ, ಮಾನವ ಸಹಿತ ಸಕಲ ಜೀವ-ಸಂಕುಲವೂ ವಾಸಯೋಗ್ಯ ಸ್ವಚ್ಛಂದ ಭೂಮಿ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಭೂಮಿಯಲ್ಲಿ, ಮಣ್ಣಿನ ಫಲವತ್ತತೆ ಹಾಗೂ ನೀರು ಸಂರಕ್ಷಿಸದೆ; ಗಿಡ-ಮರ ಬೆಳೆಸದೆ; ಹಸಿರು ಹೆಚ್ಚಿಸದೆ, ಮತ್ತು ಪರಿಸರ ಸಮತೋಲನ ಕಾಪಾಡದೆ; ಕೇವಲ ತಂತ್ರಜ್ಞಾನ ತಲೆಯಲಿ ಹೊತ್ತು, ಮನುಷ್ಯ ಉತ್ತಮ ಆಹಾರ, ಆರೋಗ್ಯ ಮತ್ತು ಜೀವನ ಕಟ್ಟಿಕೊಳ್ಳಲು ಎಂದಿಗೂ ಸಾಧ್ಯವಿಲ್ಲ. ಸಮರೋಪಾದಿಯಲ್ಲಿ, ಜನತೆ ಸ್ವ ಇಚ್ಛೆಯಿಂದ ಹಳ್ಳಿ-ಹಳ್ಳಿಗಳಿಂದ, ನಗರಗಳು, ಬೆಟ್ಟ-ಗುಡ್ಡಗಳಲ್ಲೆಡೆ ಬೃಹತ್ ಸಂಖ್ಯೆಯಲ್ಲಿ ಸಸಿಗಳನ್ನ ನೆಟ್ಟು, ಪಾಲನೆ-ಪೋಷಣೆಗೈಯ್ಯುವ ಚಳುವಳಿ ರೂಪದ ಆಂದೋಲನ ದೇಶಾದ್ಯಂತ ಅತ್ಯಂತ ತ್ವರಿತವಾಗಿ ಕೈಗೂಡಬೇಕು. ಈ ನಿಟ್ಟಿನಲ್ಲಿ, ಎಲ್ಲರೂ ಕೈಜೋಡಿಸಬೇಕು.

(ಲೇಖಕರು : ಡಾ. ಚಂದ್ರಪ್ಪ ಎಚ್, ಸಹಾಯಕ ಪ್ರಾಧ್ಯಾಪಕರು, ಭೌತವಿಜ್ಞಾನ ವಿಭಾಗ, ಸರ್ಕಾರಿ ವಿಜ್ಞಾನ ಕಾಲೇಜು, ಚಿತ್ರದುರ್ಗ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ನಿಷೇಧ : ಸಚಿವ ದಿನೇಶ್ ಗುಂಡೂರಾವ್

Published

on

ಸುದ್ದಿದಿನ, ಬೆಂಗಳೂರು : ಕೃತಕ ಬಣ್ಣ ಬಳಸಿದ ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಮಾರಾಟವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯಾದ್ಯಂತ ನಿಷೇಧಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಆದಾಗ್ಯೂ, ಬಣ್ಣ ಹಾಗೂ ರಾಸಾಯನಿಕ ಹಾಕದೇ ಇರುವ ಈ ತಿನಿಸುಗಳ ಮಾರಾಟಕ್ಕೆ ನಿರ್ಬಂಧ ಇಲ್ಲ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳು ಸೇರಿದಂತೆ ಎಲ್ಲ ವಯೋಮಾನದವರಿಗೂ ಅಚ್ಚುಮೆಚ್ಚಾದ ಈ ಎರಡು ತಿನಿಸುಗಳನ್ನು ಆಕರ್ಷಕವಾಗಿ ಕಾಣುವಂತೆ ಮಾಡಲು ಬಳಸುವ ಕೃತಕ ಬಣ್ಣಗಳಲ್ಲಿ ಅಪಾಯಕಾರಿ ರಾಸಾಯನಿಕಗಳು ಇರುವುದು ಪರೀಕ್ಷೆಗಳಿಂದ ದೃಢಪಟ್ಟಿದೆ ಎಂದರು. ರಾಜ್ಯದ ಹಲವೆಡೆ ಬೀದಿಬದಿಯ ಗಾಡಿಗಳು, ಹೋಟೆಲ್‌ಗಳಲ್ಲಿ ತಯಾರಿಸಿದ ಗೋಬಿ ಮಂಚೂರಿ ತಿನಿಸಿನ 171ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ 107ಮಾದರಿಗಳಲ್ಲಿ ಅಸುರಕ್ಷಿತ ರಾಸಾಯನಿಕಗಳು ಪತ್ತೆಯಾಗಿರುವುದು ಆತಂಕಕಾರಿಯಾಗಿದೆ ಎಂದರು.

ಕೃತಕ ಬಣ್ಣಗಳಲ್ಲಿರುವ ರೋಡೊಮೈನ್-ಬಿ ಮತ್ತು ಟಾಟ್ರಝೀನ್ ರಾಸಾಯನಿಕಗಳು ಕ್ಯಾನ್ಸರ್ ರೋಗಕ್ಕೆ ಕಾರಣವಾಗಬಹುದು ಎನ್ನುವ ಅಂಶ ತಿಳಿದುಬಂದಿದೆ. ಬಣ್ಣ ಹಾಕಿದ ಗೋಬಿಮಂಚೂರಿ ಮತ್ತು ಕಾಟನ್‌ಕ್ಯಾಂಡಿಗಳನ್ನು ಮಾರಾಟ ಮಾಡುವವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಏಳು ವರ್ಷದರೆಗೆ ಜೈಲು ಶಿಕ್ಷೆ, 10 ಲಕ್ಷ ರೂಪಾಯಿವರೆಗೆ ದಂಡ ಅಥವಾ ಜೀವಾವಧಿ ಶಿಕ್ಷೆಗೂ ಅವಕಾಶವಿದೆ ಎಂದು ಸಚಿವರು ಎಚ್ಚರಿಕೆ ನೀಡಿದರು.

ಹೇಳಿಕೆ


  • ಬಣ್ಣ ಹಾಕಿರುವ ಈ ಎರಡು ತಿನಿಸುಗಳನ್ನು ಸೇವಿಸಬಾರದು ಎಂದು ಸಾರ್ವಜನಿಕರಿಗೂ ಎಚ್ಚರಿಕೆ ನೀಡಲಾಗಿದೆ. ಸಾರ್ವಜನಿಕರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದಲ್ಲದೇ, ಕಬಾಬ್, ಪಾನಿಪೂರಿ ಮೊದಲಾದ ತಿನಿಸುಗಳಲ್ಲೂ ಕೃತಕ ಬಣ್ಣಗಳ ಬಳಕೆ ಆಗುತ್ತಿದೆಯೇ ಎಂದು ಪರಿಶೀಲಿಸಲಾಗುತ್ತಿದೆ.

            | ಸಚಿವ ದಿನೇಶ್ ಗುಂಡೂರಾವ್


ಟ್ವೀಟ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೈಫ್ ಸ್ಟೈಲ್

ನೀಲಿ ಪರ್ವತಗಳ ನಾಡಿನಲ್ಲಿ ಕೀಚಕರ ಹಾವಳಿ

Published

on

Unidentified miscreants torch two houses belonging to a particular community to retaliate the killing of nine civilians by Kukis in Manipur. (Photo: PTI)
  • ಡಾ. ಸಿದ್ದಯ್ಯ ರೆಡ್ಡಿಹಳ್ಳಿ

ಗತ್ತಿನ ಪ್ರತಿ ಜನಾಂಗವು ತನ್ನ ಪೂರ್ವಜರ ಪ್ರತಿಭೆ ಹಾಗೂ ಹಿರಿಮೆಯನ್ನು ಹೇಳಿಕೊಳ್ಳಲು ಕಾತರಿಸುತ್ತದೆ. ಅದರಂತೆಯೇ ನಮ್ಮ ಭರತ ಖಂಡದ ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ವಾಸಿಸುವ ಮಣಿಪುರಿ ಜನರು ಕ್ರಿಸ್ತಪೂರ್ವದಲ್ಲಿಯೇ ಅತ್ಯಾಧುನಿಕ ಸಾಮ್ರಾಜ್ಯವನ್ನು ಕಟ್ಟಿದ್ದರಂತೆ ಎಂದು ಹೇಳಿಕೊಳ್ಳುತ್ತಾರೆ.

ನಿಜ ಮಣಿಪುರಿಗಳು ಬೆಟ್ಟಗಳ ನಡುವೆ ಬೆಚ್ಚನೆಯ ಜೀವನವನ್ನು ಸಾಗಿಸಿದವರು. ಆದರೆ ಅಲ್ಲಿ ಕೊಳ್ಳಿ ಇಡುವ ಕೆಲಸಗಳು ಬಹಳ ಹಿಂದಿನಿಂದಲೇ ಪ್ರಾರಂಭವಾಗಿರುವುದು ತಿಳಿದುಬರುತ್ತದೆ. ವಾಸ್ತವದಲ್ಲಿ ಹಲವು ಬುಡಕಟ್ಟುಗಳ ಸಂಮಿಶ್ರಣವೇ ಮಣಿಪುರವಾಗಿದೆ. ಆದರೆ ಮಣಿಪುರಿಗಳು ಮಾತ್ರ ಈ ನೆಲದ ಮೂಲ ನಿವಾಸಿಗಳು, ಅವರಿಗೆ ಮಾತ್ರ ಸಕಲ ಸೌಕರ್ಯಗಳು ಸಿಗಬೇಕು, ಉಳಿದವರು ರಾಜ್ಯ ಬಿಡಬೇಕು ಎಂದು ಉಯಿಲ್ಲೆಬ್ಬಿಸುತ್ತಿರುವವರು ಯಾರು? ಪ್ರತಿಯೊಂದು ಬುಡಕಟ್ಟು ಜನಾಂಗಕ್ಕೆ ಇರುವಂತೆ ಹೇರಳವಾದ ಜಾನಪದ ಕಥೆ, ಪುರಾಣ ಮತ್ತು ದಂತಕಥೆಗಳ ಸಂಪತ್ತು ಇಲ್ಲಿನ ಬುಡಕಟ್ಟು ಜನಾಂಗಗಳಿಗೂ ಇದೆ.

ಮಣಿಪುರದ ರಾಜಧಾನಿ ಇಂಫಾಲ್‌ನಲ್ಲಿ ವಾಸಿಸುತ್ತಿದ್ದ ಜನರನ್ನು ಮಿತೇಯಿ ಅಥವಾ ಮೈತೇಯಿ ಎಂದು ಕರೆಯಲಾಗುತ್ತಿತ್ತು. ಸ್ವಾತಂತ್ರ್ಯಪೂರ್ವದಲ್ಲಿ ಮಣಿಪುರವು ಬಾಂಗ್ಲಾದ ಗುಡ್ಡುಗಾಡು ಜಿಲ್ಲೆಗಳಲ್ಲಿ ಒಂದಾಗಿತ್ತು. ಭಾರತ ಸ್ವಾತಂತ್ರ್ಯಗೊಂಡು ಎರಡು ವರ್ಷ ಎರಡು ತಿಂಗಳು ಕಳೆದ ನಂತರ ಅಂದರೆ ಅಕ್ಟೋಬರ್ 15, 1949ರಂದು ಭಾರತದೊಂದಿಗೆ ಏಕೀಕೃತವಾಯಿತು.

ಮಣಿಪುರದಲ್ಲಿ ಅಂತರ-ಜನಾಂಗೀಯ ಹಿಂಸಾಚಾರವು ಇದೇ ಮೊದಲೇನಲ್ಲ, ಇದಕ್ಕೆ ಸುದೀರ್ಘವಾದ ಇತಿಹಾಸವಿದೆ. ಮಣಿಪುರಿಗಳ ಅತಿರೇಕ ಎಲ್ಲಿಯವರೆಗೆ ಹೋಗಿತ್ತು ಎಂದರೆ 1964ರಲ್ಲಿ ಭಾರತದಿಂದ ಬಿಡುಗಡೆ ಹೊಂದಿ, ಹೊಸ ದೇಶವನ್ನು ಸೃಷ್ಟಿಸಿಕೊಳ್ಳಬೇಕು ಎಂದು ದಂಗೆಯನ್ನು ಎಬ್ಬಿಸಲಾಗಿತ್ತು. ಇದರಲ್ಲಿ ಹಲವಾರು ಗುಂಪುಗಳು ಕೂಡಿಕೊಂಡಿದ್ದವು. ಅವರಿಗೆ ಅವರದೇ ಆದ ಗುರಿಗಳು ಇದ್ದುದರಿಂದ ಈ ದಂಗೆ ವಿಫಲವಾಯಿತು.

ಚೀನಾ ದೇಶದ ಕುಮ್ಮಕ್ಕಿನಿಂದಾಗಿ ‘ರೆವಲ್ಯೂಷನರಿ ಪಾರ್ಟಿ ಆಫ್ ಕಾಂಗ್ಲೀಪಾಕ್’ ಮತ್ತು ‘ಪೀಪಲ್ಸ್ ಲಿಬರೇಶನ್ ಆರ್ಮಿಗಳು’ ಹುಟ್ಟಿಕೊಂಡವು. ಇವರು ಶಸ್ತ್ರಾಸ್ತ್ರ ತರಬೇತಿಯನ್ನು ಹೊಂದಿ, ಬ್ಯಾಂಕ್ ದರೋಡೆಗಳನ್ನು ಮಾಡುವುದು, ಪೊಲೀಸ್ ಅಧಿಕಾರಿಗಳ ಮೇಲೆ ಮತ್ತು ಸರ್ಕಾರಿ ಕಟ್ಟಡಗಳ ಮೇಲೆ ದಾಳಿ ಮಾಡುವುದು ಇಂತಹ ಕೃತ್ಯಗಳನ್ನು ಮಾಡತೊಡಗಿದರು. 1980 ರಿಂದ 2004ರವರೆಗೂ ಭಾರತ ಸರ್ಕಾರ ಮಣಿಪುರವನ್ನು ಪ್ರಕ್ಷÄಬ್ದ ಪ್ರದೇಶ ಎಂದು ಉಲ್ಲೇಖಿಸಿತ್ತು.

ಈ ಸಂದರ್ಭದಲ್ಲಿ ‘ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆ’ಯನ್ನು ಜಾರಿಗೆ ತರಲಾಯಿತು. ಈ ಕಾಯಿದೆಯ ಪ್ರಕಾರ ಖಾಸಗಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಕೆಟ್ಟವರ್ತನೆಗಳನ್ನು ಮಾಡುತ್ತಿದ್ದರೆ, ಯಾವುದೇ ವಾರಂಟ್‌ಗಳಿಲ್ಲದೆ ಬಂಧಿಸಬಹುದಾಗಿತ್ತು. ಕಾನೂನುಗಳನ್ನು ಉಲ್ಲಂಘಿಸುವ, ಶಸ್ತ್ರಾಸ್ತ್ರಗಳನ್ನು ಹೊಂದಿರುವವರನ್ನು ಅಥವಾ ದೊಡ್ಡ ದೊಡ್ಡ ಗುಂಪುಗಳಲ್ಲಿ ಸೇರಿದ್ದವರನ್ನು ಗುಂಡಿಕ್ಕಿ ಕೊಲ್ಲುವ ಅವಕಾಶವನ್ನು ಮಿಲಿಟರಿಗೆ ಕೊಡಲಾಗಿತ್ತು. ಮಿಲಿಟರಿಯ ಪರವಾಗಿರುವ ಈ ಕಾನೂನು ಅನಿಯಂತ್ರಿತ ಹತ್ಯೆಗಳು, ಚಿತ್ರಹಿಂಸೆ, ಕ್ರೂರ ಅಮಾನವೀಯತೆ, ಅಪಹರಣದಂತಹ ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಯಿತು.

ಈ ಮಾನವ ವಿರೋದಿ ಮಿಲಿಟರಿ ಕಾನೂನಿನ ವಿರುದ್ಧ ಹಲವಾರು ಪ್ರತಿಭಟನೆಗಳು, ಹೋರಾಟಗಳು ಜರುಗಿದವು. ಇರೋಮ್ ಶರ್ಮಿಳಾ ಚಾನು ಎಂಬ ದಿಟ್ಟ ಮಹಿಳೆ ದೀರ್ಘಾವಧಿಯ ಉಪವಾಸ ಸತ್ಯಾಗ್ರಹವನ್ನು ಮಾಡಿದ್ದಳು. ಆದರೂ 2004ರಲ್ಲಿ ಸ್ಥಳೀಯ ಮಹಿಳೆಯರ ಮೇಲೆ ಹಿಂಸಾತ್ಮಕ ದಾಳಿಯನ್ನು ನಡೆಸಲಾಯಿತು. ಇದಕ್ಕೆ ಪ್ರತಿರೋಧವಾಗಿ ಪ್ರತಿಭಟನೆಗಳು ತೀವ್ರಮಟ್ಟಕ್ಕೆ ತಲುಪಿದಾಗ ಸರ್ಕಾರವು ಮಣಿಪುರದಲ್ಲಿದ್ದ ಗೊಂದಲದ ಸ್ಥಿತಿಯನ್ನು ತೆಗೆದುಹಾಕಿತು.

ಮಣಿಪುರವು ನೀಲಿ ಪರ್ವತಗಳಿಂದ ಸುತ್ತುವರೆದಿರುವ ನಾಡಾಗಿದೆ. ಈ ಪರ್ವತ ಶ್ರೇಣಿಗಳು ತಣ್ಣನೆಯ ಗಾಳಿಯನ್ನು ಮಣಿಪುರಿಗಳಿಗೆ ತಲುಪದಂತೆ ತಡೆಯುತ್ತವೆ. ಆದರೆ ಮಣಿಪುರಿಗಳಲ್ಲಿಯೇ ಹೊತ್ತಿಕೊಂಡಿರುವ ಬೆಂಕಿಯನ್ನು ನಂದಿಸಲು ಅವುಗಳಿಗೆ ಸಾಧ್ಯವೇ!? ಅವುಗಳು ಚಂಡಮಾರುತದ ಬಿರುಗಾಳಿಗಳನ್ನು ತಡೆಯಬಹುದು, ಆದರೆ ಅವರಲ್ಲಿರುವ ಮೌಢ್ಯವನ್ನು ತೊಡೆದುಹಾಕಲು ಸಾಧ್ಯವೇ?!
ಮಣಿಪುರ ರಾಜ್ಯವು ಉತ್ತರಕ್ಕೆ ನಾಗಾಲ್ಯಾಂಡ್, ದಕ್ಷಿಣಕ್ಕೆ ಮಿಜೋರಾಂ, ಪಶ್ಚಿಮಕ್ಕೆ ಅಸ್ಸಾಂ ಮತ್ತು ಪೂರ್ವಕ್ಕೆ ಮಯನ್ಮಾರ್ ದೇಶದ ಗಡಿಯನ್ನು ಹೊಂದಿದೆ.

ಮಣಿಪುರದಲ್ಲಿ ಮಳೆಗೆ, ನೀರಿಗೆ ಕೊರತೆಯಿಲ್ಲ. ಇದರ ಪಶ್ಚಿಮಕ್ಕೆ ಬರಾಕ್ ನದಿಯ ಜಲಾನಯನ ಪ್ರದೇಶ, ಪೂರ್ವದಲ್ಲಿ ಯು ನದಿಯ ಜಲಾನಯನ ಪ್ರದೇಶ, ಉತ್ತರದಲ್ಲಿ ಲಾನ್ಯೆ ನದಿಯ ಜಲಾನಯನ ಪ್ರದೇಶ, ಮಧ್ಯದಲ್ಲಿ ಮಣಿಪುರ ನದಿಯ ಜಲಾನಯನ ಪ್ರದೇಶವನ್ನು ಹೊಂದಿ ಸಮೃದ್ಧವಾಗಿರುವಂತೆ, ಅಲ್ಲಿನ ಮಹಿಳೆಯರು ಧಾರಾಕಾರವಾಗಿ ಕಣ್ಣೀರನ್ನು ಸುರಿಸುತ್ತಿದ್ದಾರೆ. ಇಲ್ಲಿನ ಮಹಿಳೆಯರ ಕಣ್ಣೀರಿಗೆ ಮೊದಲನ್ನು ಗುರುತಿಸುವುದಕ್ಕೆ, ಕೊನೆಯನ್ನು ಗ್ರಹಿಸುವುದಕ್ಕೆ ಸಾಧ್ಯವಾಗುತ್ತಿಲ್ಲ.

ಮಣಿಪುರದ ಅತಿದೊಡ್ಡ ನದಿ ಬರಾಕ್. ಇದು ಇರಾಂಗ್, ಮಕು ಮತ್ತು ತುವೈ ಉಪನದಿಗಳನ್ನು ಹೊಂದಿ ಅಸ್ಸಾಂ ರಾಜ್ಯವನ್ನು ಪ್ರವೇಶಿಸುತ್ತದೆ. ಮಣಿಪುರ ನದಿಯ ಜಲಾನಯನ ಪ್ರದೇಶವು ಮಣಿಪುರ, ಇಂಫಾಲ್, ಇರಿಲ್, ನಂಬುಲ್, ಸೆಕ್ಮೆಂ, ಚಕ್ಪಿ, ತೌಬಲ್ ಮತ್ತು ಖುಗಾ ಎಂಬಂತಹ ಎಂಟು ನದಿಗಳನ್ನು ಹೊಂದಿದೆ. ಈ ಎಲ್ಲಾ ನದಿಗಳು ಸುತ್ತಮುತ್ತಲಿನ ಬೆಟ್ಟಗಳಿಂದಲೇ ಹುಟ್ಟಿಕೊಂಡಿವೆ. ಈ ನದಿಗಳ ಒಳಹರಿವಿನ ಮರ್ಮ ನಮ್ಮ ರಾಜಕಾರಣಿಗಳ ಮರ್ಮದಂತೆ ಯಾರಿಗೂ ತಿಳಿಯದಂತಹ ಕಗ್ಗಂಟಾಗಿದೆ. ನದಿಯು ತಣ್ಣಗಿದ್ದು, ಒಂದೇ ಭಾರಿ ಬೋರ್ಗರೆದು ತಣ್ಣಗಾಗುವಂತೆ ನಮ್ಮ ಪ್ರಧಾನಮಂತ್ರಿಗಳು ಮೂರು ತಿಂಗಳ ಕಾಲ ದಿವ್ಯ ಮೌನವಾಗಿದ್ದು, ಜನರ ನಿತ್ಯ ಜೀವನವು ಅಲ್ಲೋಲ-ಕಲ್ಲೋಲ ಆದಮೇಲೆ ತಣ್ಣಗೆ ಮಾತನಾಡಿದ್ದಾರೆ.

ಆದರೆ ಅಲ್ಲಿಗೆ ಹೋಗುವ ಧೈರ್ಯವನ್ನು ಮಾಡಿಲ್ಲ. ಚುನಾವಣೆ ಇದ್ದರೆ ಹತ್ತು-ಹದಿನೈದು ಬಾರಿ ರೋಡ್-ಶೋ ಮಾಡುವ ಇವರು ಕಷ್ಟದ ಕಾಲದಲ್ಲಿ ಆ ಕಡೆ ತಿರುಗಿಯು ನೋಡದೇ ಇರುವುದು ಭಾರತೀಯರು ಪಶ್ಚಾತ್ತಾಪಪಡುವಂತೆ ಮಾಡಿದೆ.
ಮಣಿಪುರವನ್ನು ಭೌತಿಕ ಲಕ್ಷಣಗಳಲ್ಲಿ ವಿಭಿನ್ನವಾಗಿರುವ ಎರಡು ವಿಭಿನ್ನ ಭೌತಿಕ ಪ್ರದೇಶಗಳಾಗಿ ನಿರೂಪಿಸಬಹುದು. ಒಂದು ಒರಟಾದ ಬೆಟ್ಟಗಳು, ಕಿರಿದಾದ ಕಣಿವೆಗಳ ಹೊರ ಪ್ರದೇಶ ಮತ್ತೊಂದು ಸಮತಟ್ಟಾದ ಬಯಲಿನ ಒಳ ಪ್ರದೇಶ. ಇಲ್ಲಿನ ಕಣಿವೆ ಪ್ರದೇಶವು ಸಮತಟ್ಟಾದ ಮೇಲ್ಮೈ ಮೇಲೆ ಏರುತ್ತಿರುವ ಬೆಟ್ಟಗಳು ಮತ್ತು ದಿಬ್ಬಗಳಿಂದ ಕೂಡಿದೆ.

ಇಲ್ಲಿನ ಲೋಕ್ಟಾಕ್ ಸರೋವರವು ಕೇಂದ್ರ ಬಯಲಿನಿಂದ ನಾಗಾಲ್ಯಾಂಡ್‌ನ ಗಡಿಯವರೆಗೂ ತನ್ನ ವಿಸ್ತಾರವನ್ನು ಹರಡಿಕೊಂಡಿದೆ. ಇಲ್ಲಿನ ಮಣ್ಣಿನ ಹೊದಿಕೆಗೂ ಗಂಡು-ಹೆಣ್ಣಿನ ಸಂಬಂಧಕ್ಕೂ ನಿಕಟವಾದ ಹೋಲಿಕೆ ಇರುವಂತೆ ಕಂಡುಬರುತ್ತದೆ. ಬೆಟ್ಟದ ಪ್ರದೇಶದಲ್ಲಿ ಕೆಂಪು ಫೆರುಜಿನಸ್ ಮಣ್ಣು ಮತ್ತು ಕಣಿವೆಯಲ್ಲಿ ಮೆಕ್ಕಲು ಮಣ್ಣು ಇದೆ. ಕಣಿವೆಯ ಮಣ್ಣು ಇಲ್ಲಿನ ಗಂಡಿನ ರೀತಿಯಲ್ಲಿ ಕಠಿಣವಾಗಿದ್ದರೆ, ಕಡಿದಾದ ಇಳಿಜಾರುಗಳಲ್ಲಿರುವ ಮಣ್ಣು ಹೆಣ್ಣಿನಂತೆ ಹೆಚ್ಚಿನ ಸವೆತಕ್ಕೆ ಒಳಗಾಗಿದೆ, ಒಳಗಾಗುತ್ತಿದೆ. ಇದರ ಪರಿಣಾಮವಾಗಿ ಬಂಜರು ಬಂಡೆಗಳ ಇಳಿಜಾರುಗಳು ಸೃಷ್ಟಿಯಾಗುವಂತೆ ಅಲ್ಲಿನ ಪುರುಷರ ಮನಸ್ಸುಗಳು ಬಂಡೆಯಂತೆ ಆಗುತ್ತಿರುವುದು ಖೇದಕರವಾದ ಸಂಗತಿಯಾಗಿದೆ.

ಬೆಟ್ಟದ ತಪ್ಪಲಿನಲ್ಲಿ ರತ್ನಗಂಬಳಿಯನ್ನು ಹಾಸಿಹೊದಿಸಿರುವಂತೆ ಕಾಣುವ ಫ್ಲೋರಾ ಹೂವುಗಳು ಅಲ್ಲಿನ ಬುಡಕಟ್ಟು ಮಹಿಳೆಯರ ಸೌಂದರ್ಯವನ್ನು ಬಿತ್ತರಿಸಿದರೆ, ಬೆಟ್ಟಗಳು ಪುರುಷಾಂಕಾರದಂತೆ ಕಾಣುತ್ತವೆ. ಇಲ್ಲಿ ಏನಿಲ್ಲ ಹೇಳಿ, ನೈಸರ್ಗಿಕವಾದ ಸಸ್ಯವರ್ಗವಿದೆ. ನಾಲ್ಕು ರೀತಿಯ ವಿಶಾಲವಾಗಿ ಹರಡಿರುವ ಉಷ್ಣವಲಯದ ಅರೆ-ನಿತ್ಯಹರಿದ್ವರ್ಣ, ಒಣ ಸಮಶೀತೋಷ್ಣ ಅರಣ್ಯ, ಉಪ-ಉಷ್ಣವಲಯದ ಪೈನ್ ಕಾಡುಗಳು ಮತ್ತು ಉಷ್ಣವಲಯದ ತೇವಾಂಶವುಳ್ಳ ಅರಣ್ಯಗಳಿವೆ. ತೇಗ, ಪೈನ್, ಓಕ್, ಯುನಿಂಗ್ದೌ, ಲಿಹಾವೊ, ಬಿದಿರಿನ ಮರಗಳಿವೆ. ತಮ್ಮ ಕಷ್ಟಗಳ ನಡುವೆಯೂ ರಬ್ಬರ್, ಟೀ, ಕಾಫಿ, ಕಿತ್ತಳೆ, ಏಲಕ್ಕಿ ಬೆಳೆಯುತ್ತಾರೆ. ಆದರೆ ಅವರು ಹೆಚ್ಚು ಬೆಳೆಯುವ ಮತ್ತು ಇಷ್ಟಪಡುವ ಅಕ್ಕಿಯಂತೆ ಅಲ್ಲಿನ ಪುರುಷರ ಮನಸ್ಸುಗಳು ಬೇಗನೇ ಹಾಳಾಗುತ್ತಿರುವುದು ಜಾತಿ, ಧರ್ಮಗಳೆಂಬ ಕೀಟಗಳಿಂದ ಎಂಬುದನ್ನು ಅವರು ತಿಳಿಯದಿರುವುದು ದುರದೃಷ್ಟಕರ.

ಮಣಿಪುರ ಮತ್ತು ನಾಗಾಲ್ಯಾಂಡ್‌ಗಳ ಗಡಿಗಳ ನಡುವೆ ಇರುವ ಝುಕೊ ಎಂಬ ಕಣಿವೆಯು ಸಮಶೀತೋಷ್ಣ ಹವಾಮಾನವನ್ನು ಹೊಂದಿರುವಂತೆ, ಅಲ್ಲಿನ ಜನರಿಗೆ ಸಮಚಿತ್ತತೆಯನ್ನು ನೀಡಿದ್ದರೆ ಚೆನ್ನಾಗಿರುತ್ತಿತ್ತು. ಭಾರತದ ಈಶಾನ್ಯ ಮೂಲೆಯು ಸಾಮಾನ್ಯವಾಗಿ ಸೌಹಾರ್ದಯುತವಾದ ಹವಾಮಾನವನ್ನು ಹೊಂದಿದೆ. ಆದರೆ ಅಲ್ಲಿನ ಜನರು ಸೌಹಾರ್ದಯುತವಾದ ಮನೋಭಾವನೆಯನ್ನು ಹೊಂದಿಲ್ಲ. ಅಲ್ಲಿನ ವಾತಾವರಣದಂತೆ ಚಳಿಗಾಲದಲ್ಲಿ ಚಳಿ ಹೆಚ್ಚಾಗಿರುವಂತೆ, ಬೇಸಿಗೆಯಲ್ಲಿ ಬಿಸಿಲು ಗರಿಷ್ಠ ಮಟ್ಟಕ್ಕೆ ಹೋಗುವಂತೆ ಅಲ್ಲಿನ ಜನರು ಆವೇಶಕ್ಕೊಳಗಾಗುತ್ತಾರೆ.
ಇಂಫಾಲದ ಮೈತೇಯಿ ಜನರು ವಾರ್ಷಿಕ ಸರಾಸರಿ 933 ಮಿಲಿಮೀಟರ್ ಮಳೆಯನ್ನು ಪಡೆಯುತ್ತಾರೆ. ಆದರೂ ಕೂಡ ತಮ್ಮದೇ ನೆಲದಲ್ಲಿರುವ ಕುಕಿ ಜನಾಂಗದ ಮಹಿಳೆಯರು ಕಣ್ಣೀರು ಸುರಿಸುವಂತೆ ನಡೆದುಕೊಳ್ಳುತ್ತಾರೆ.

ನೈರುತ್ಯ ಮಾನ್ಸೂನ್ ಮಾರುತಗಳು ಬಂಗಾಳಕೊಲ್ಲಿಯಿAದ ತೇವಾಂಶವನ್ನು ಎತ್ತಿಕೊಂಡು ಪೂರ್ವ ಹಿಮಾಲಯ ಶ್ರೇಣಿಗಳ ಕಡೆಗೆ ಹೋಗುವಾಗ ಈ ಪ್ರದೇಶದಲ್ಲಿ ಮಳೆಯಾಗುವಂತೆ ಪ್ರಕೃತಿಯೇ ನೋಡಿಕೊಂಡರೂ ಮಹಿಳೆಯರ ಕಣ್ಣೀರು ಮಾತ್ರ ಧಾರಾಕಾರವಾಗಿ ಹರಿಯುವಂತೆ ತಮ್ಮ ಸ್ವಾರ್ಥಕ್ಕಾಗಿ ರಾಜಕಾರಣಿಗಳು ನೋಡಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಮಣಿಪುರದಲ್ಲಿ ಹವಾಮಾನದಲ್ಲಿ ಬದಲಾವಣೆ ಹೆಚ್ಚಾಗುತ್ತಿದೆ. ಉದಾಹರಣೆಗೆ ಮಳೆ ಮತ್ತು ತಾಪಮಾನದಲ್ಲಿ ತೀವ್ರ ಬದಲಾವಣೆಗಳು ಹೆಚ್ಚಾಗುತ್ತಿವೆ. ಆದರೆ ಅಲ್ಲಿನ ಜನಾಂಗಗಳ ನಡುವಿನ ಬಾಂಧವ್ಯದ ಬದ್ಧತೆಗಳು ಏರುಪೇರಾಗುತ್ತಿರುವುದು ಸಾಕಷ್ಟು ಹಿಂದಿನಿAದಲೇ ನಡೆಯುತ್ತಿರುವುದು ಮನುಷ್ಯ ಸಂಬಂಧಗಳ ನಡುವೆ ಬಿರುಕು ಮೂಡಿರುವುದರ ದ್ಯೋತಕವಾಗಿದೆ. ಕಣಿವೆ ಅಥವಾ ಬಯಲು ಪ್ರದೇಶಗಳಲ್ಲಿ ಮೈತೇಯಿ ಮಾತನಾಡುವ ಅಂದರೆ ಮಣಿಪುರಿ ಭಾಷಿಕರು ನೆಲೆಸಿದ್ದಾರೆ. ಬೆಟ್ಟಗಳಲ್ಲಿ ನಾಗಾಗಳು, ಕುಕಿಗಳು ಮೊದಲಾದ ಸಣ್ಣ ಬುಡಕಟ್ಟು ಜನರು ವಾಸಿಸುತ್ತಿದ್ದಾರೆ. ಇವರು ಬೆಟ್ಟಗಳ ಮೇಲ್ಮೈ ಮಣ್ಣಿನಂತೆ ಮೈತೇಯಿ ಜನರ ಹಾವಳಿಗೆ ಕೊಚ್ಚಿ ಹೋಗುತ್ತಿದ್ದಾರೆ. ಅಲ್ಲಿ ಮೈತೇಯಿ ಭಾಷೆಯು ಮಣಿಪುರಿ ಭಾಷೆಗೆ ಸಮಾನಾರ್ಥಕವಾಗಿ ಬಳಕೆಯಾಗುತ್ತಿರುವುದರಿಂದ ಇಲ್ಲಿನ ಬಹುಪಾಲು ಜನಸಂಖ್ಯೆ ಮೈತೇಯಿಯರೇ ಎಂದು ಕರೆಸಿಕೊಂಡಿದ್ದಾರೆ.

ಇವರು ಮಣಿಪುರದ ಮುಖ್ಯ ಜನಾಂಗ ಎಂಬುದೇನೋ ಸರಿ. ಆದರೆ ನಾಗಾ ಮತ್ತು ಕುಕಿ ಬುಡಕಟ್ಟು ಜನಾಂಗಗಳನ್ನು ಹಲವಾರು ಬುಡಕಟ್ಟು ಜನಾಂಗಗಳಾಗಿ ವಿಂಗಡಿಸಲಾಗಿದೆ. ಇವರೆಲ್ಲರೂ ಒಗ್ಗಟ್ಟಾಗಿದ್ದರೆ ನಮ್ಮ ಬೇಳೆ ಬೇಯ್ಯುವುದಿಲ್ಲ ಎಂಬ ಸಾಂಸ್ಕೃತಿಕ ರಾಜಕಾರಣವು ವ್ಯವಸ್ಥಿತವಾಗಿ ಬಹಳ ಹಿಂದಿನಿAದಲೇ ಇವರನ್ನು ಹೊಡೆದು ಹೊಡೆದು ಹಾಳುತ್ತಿದೆ.
ಮಣಿಪುರದಲ್ಲಿ ಮೇ 4ರಂದು ಜರುಗಿದ ಇಬ್ಬರು ಮಹಿಳೆಯರ ಸಾಮೂಹಿಕ ಅತ್ಯಾಚಾರ ಮತ್ತು ಬೆತ್ತಲೆ ಮೆರವಣಿಗೆಯು ಜುಲೈ 20ರಂದು ಹೊರ ಜಗತ್ತಿಗೆ ತಿಳಿಯಿತು. ಈ ಘಟನೆಯು ಪ್ರಪಂಚದ ಜನರನ್ನು ತಲ್ಲಣಗೊಳಿಸಿತು.

ಇಡೀ ಜಗತ್ತೇ ಈ ಕೃತ್ಯವನ್ನು ವಿರೋಧಿಸಿದರೂ ಕೂಡ, ಒಟ್ಟು ದೇಶವನ್ನೇ ತನ್ನ ಕುಟುಂಬ ಎಂದು ಕರೆದುಕೊಳ್ಳುವ ನಮ್ಮ ಪ್ರಧಾನಿಗಳು ಬೆಂಕಿ ಹೊತ್ತಿಕೊಂಡ ಮೂರು ತಿಂಗಳು ದಿವ್ಯ ಮೌನದಿಂದ ಇದ್ದರು ಎಂಬುದನ್ನು ಜಗತ್ತು ಮರೆಯುತ್ತದೆಯೇ? 140 ಕೋಟಿ ಜನರು ನನ್ನ ಕುಟುಂಬಸ್ಥರೇ ಎಂದು ಹೇಳಿಕೊಳ್ಳುವ ಪ್ರಧಾನಿಗಳು ಅದರಲ್ಲಿ ಮಹಿಳೆಯರೂ ಇದ್ದಾರೆ ಎಂಬುದನ್ನು ಮರೆತಿದ್ದಾರೆಯೇ!? ಒಟ್ಟಾರೆ ನಮ್ಮ ಪ್ರಧಾನಿಗಳ ಮೌನ, ಮೈತೇಯಿ ಮತಾಂಧರ ಆರ್ಭಟ ಕುಕಿ ಜನಾಂಗದ ಮಹಿಳೆಯರ ಬದುಕನ್ನು ಮೂರಾಬಟ್ಟೆ ಮಾಡಿರುವುದಂತೂ ಖಚಿತ.

(ಡಾ. ಸಿದ್ದಯ್ಯ ರೆಡ್ಡಿಹಳ್ಳಿ, 9449899520)

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

Trending