Connect with us

ಬಹಿರಂಗ

ಭಾರತ ಸಂವಿಧಾನಕ್ಕೆ ‘ಭೂತ’ಚೇಷ್ಟೆ

Published

on

  • ದೇವನೂರ ಮಹಾದೇವ

ಮ್ಮ ಸಂವಿಧಾನಕ್ಕೆ 60 ವರ್ಷಗಳ ಇತಿಹಾಸ. ಆದರೆ ಸಾವಿರಾರು ವರ್ಷಗಳ ಇತಿಹಾಸವಿರುವ ಇಂದೂ ಕೂಡ ಅಗೋಚರವಾಗಿ ಆಳ್ವಿಕೆ ನಡೆಸುತ್ತಿರುವ ಅಲಿಖಿತ ಸಂವಿಧಾನವೂ ಒಂದಿದೆ. ಇದು ಭಾರತದ ಮನೋಭೂಮಿಕೆಯಲ್ಲಿದೆ. ಇದು ಭೂತಕಾಲದ ಸಂವಿಧಾನ. ಇದು ಭಾರತದ ಸುಪ್ತಪ್ರಜ್ಞೆಯ ಆಳದಲ್ಲಿದೆ. ಈ ಎರಡರ ನಡುವೆ ಯುದ್ಧ ಜರುಗುತ್ತಿದೆ. ಭೂತಕಾಲದ ಸಂವಿಧಾನವೂ ಇಲ್ಲಿ ಬಲವಾಗಿದೆ. ಹಾಗಾಗಿ ನಮ್ಮ ವರ್ತಮಾನ ಸಂವಿಧಾನದ ಆಸೆಗಳು ತೆವಳುತ್ತಿವೆ.

ಈ ನನ್ನ ಮಾತುಗಳಲ್ಲಿ ಹೊಸತೇನೂ ಇಲ್ಲ. ನಿಮ್ಮ ನಡುವೆ ನಾನೇ ಸ್ಪಷ್ಟ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವೆ. ಈ ಚಿಂತೆ ಮತ್ತು ಚಿಂತನೆಗಳನ್ನು ಉದಾಹರಣೆಗಳ ಮೂಲಕ ಸ್ಪಷ್ಟ ಮಾಡಿಕೊಳ್ಳಲು ಪ್ರಯತ್ನಿಸುವೆ.

ಬಹಳ ಹಿಂದೆ, ಡಾ.ಯು.ಆರ್.ಅನಂತಮೂರ್ತಿಯವರು ಇಂಗ್ಲಿಷ್ ವಿಭಾಗದಲ್ಲಿದ್ದಾಗ, ಅವರನ್ನು ಭೇಟಿ ಮಾಡಲು ಹಿರಿಯರೊಬ್ಬರು ಬಂದಿದ್ದರು. ತುಂಬಾ ಶುಭ್ರವಾಗಿದ್ದರು. ಮೈತುಂಬಾ ಬಿಳಿ ಬಟ್ಟೆ. ಜುಟ್ಟು ನಾಮ ಇತ್ತು. ಅವರು ಮಾತಾಡಿ ಹೋದ ಮೇಲೆ ಅನಂತಮೂರ್ತಿಯವರು ‘ಈಗ ಬಂದಿದ್ದವರು ವೇದ ಉಪನಿಷತ್ ಪುರಾಣ ಪಾರಂಗತರು’ ಎಂದರು. ಜೊತೆಗೆ- ‘ಇವರು ತಾವೇ ತಮ್ಮ ಅಡಿಗೆ ಮಾಡಿಕೊಂಡು ಊಟ ಮಾಡುವುದು’ ಎಂದೂ ಹೇಳಿದರು.

ಇದು ಯಾಕೋ ನನ್ನ ಮನಸ್ಸಲ್ಲಿ ಉಳಿದುಬಿಟ್ಟಿತು. ತನ್ನ ಕೈಯಾರ ಮಾಡಿದ್ದನ್ನು ಮಾತ್ರ ಊಟ ಮಾಡುವ ಇವರಿಗೆ ವೇದ ಉಪನಿಷತ್‍ಗಳು ಹೇಳಿಕೊಟ್ಟಿದ್ದೇನು ಎಂಬ ಪ್ರಶ್ನೆ ನನ್ನೊಳಗೆ ಉಳಿದುಬಿಟ್ಟಿತು. ಈಗ ಅನ್ನಿಸುತ್ತ್ತಿದೆ- ಇವರ ಕಠೋರ ಮಡಿಯ ಅಸ್ತಿತ್ವದಲ್ಲೆ ಅಸ್ಪೃಶ್ಯತೆಯ ಪ್ರಚಾರ ಕಾರ್ಯವೂ ಅಂತರ್ಗತವಾಗಿದೆ ಅಂತ. ಇವರನ್ನು ಅರ್ಥ ಮಾಡಿಕೊಳ್ಳೋಣ. ಅಂದರೆ ಇವರನ್ನು ಪಳೆಯುಳಿಕೆ ಎಂದು ಭಾವಿಸಿದರೆ ಸಮಸ್ಯೆ ಇಲ್ಲ. ಆದರೆ ಅವರ ಮಡಿಯನ್ನು ಪಾರಂಪರಿಕ ಮೌಲ್ಯ ಎಂದು ಗೌರವಿಸಿದರೆ ಅಪಾಯ ಆರಂಭವಾಗುತ್ತದೆ.

ಇನ್ನೊಂದು ಭೀಕರ ಉದಾಹರಣೆ ಕೊಡುತ್ತೇನೆ. ಪುರಿ ಜಗದ್ಗುರು ಅಸೃಶ್ಯತೆಯನ್ನು ಎತ್ತಿ ಹಿಡಿದಾಗ ಭಾರತ ತಲ್ಲಣಿಸಲಿಲ್ಲ. ಭೀಕರ ಉದಾಹರಣೆ ಎಂದು ನನ್ನ ಸಮಾಧಾನಕ್ಕಾಗಿ ಹೇಳಿಕೊಂಡೆ ಅಷ್ಟೆ. ಆದರೆ ಅದು ಭೀಕರವಾಗಿ ಸಮಾಜಕ್ಕೆ ತಟ್ಟಲೇ ಇಲ್ಲ. ಪುರಿ ಜಗದ್ಗುರು ಅಸಹ್ಯವಾಗಿ ನಮಗೆ ಕಾಣಲೇ ಇಲ್ಲ.

ಯಾಕೆಂದರೆ ನಮ್ಮ ವರ್ತಮಾನದ ಪ್ರಜ್ಞೆಯ ಸಂವಿಧಾನವು ಸಮಾನತೆಯನ್ನು ಮೌಲ್ಯ ಮಾಡಿದರೆ, ಭೂತಕಾಲದ ಸುಪ್ತಪ್ರಜ್ಞೆಯ ಸಂವಿಧಾನಕ್ಕೆ ಶ್ರೇಣೀಕೃತ ಸಮಾಜದ ಅಸ್ಪೃಶ್ಯತೆ, ಜಾತಿತಾರತಮ್ಯಗಳೇ ಮೌಲ್ಯವಾಗಿದೆ. ಭೂತದ ಕಪ್ಪುಹಣ ಇಂದೂ ಚಲಾವಣೆಯಲ್ಲಿದೆ. ಹೀಗಿರುವಾಗ ಸಮಾಜ ಯಾಕಾಗಿ ತಲ್ಲಣಿಸಬೇಕು? ಹೀಗಿದ್ದಾಗ ವರ್ತಮಾನದ ಸಂವಿಧಾನದ ಆಸೆಗಳು ತೆವಳದೆ ಮತ್ತೇನು ಮಾಡಲು ಸಾಧ್ಯ?

ಹಾಗೆ ಇಂದು ಚರ್ಚಿತವಾಗುತ್ತಿರುವ ಮತಾಂತರ ನಿಷೇಧದ ಪ್ರಸ್ತಾಪಕ್ಕೆ ಬಂದರೂ ಇಲ್ಲೂ ಕಾಣುವುದು ಇದನ್ನೇ. ಹಾಲಿ ಬಿಜೆಪಿ ಕರ್ನಾಟಕ ಸರ್ಕಾರ ಹಾಗೂ ಪೇಜಾವರ ಮಠಾಧೀಶರಾದಿಗಳು ಈ ಮತಾಂತರ ನಿಷೇಧಕ್ಕಾಗಿ ಹಾತೊರೆಯುತ್ತಿದೆ. ಶೂದ್ರನೊಬ್ಬ ನಿಮ್ಮ ಬ್ರಾಹ್ಮಣ ಜಾತಿಗೆ ಸೇರುತ್ತೇನೆಂದರೆ ಆಕಾಶ ನೋಡುವ ಮಠಾಧಿಪತಿಗಳು ಹಾಗೆ ಬ್ರಾಹ್ಮಣ ಜಾತಿಗೆ ನನ್ನನು ವರ್ಗಾವಣೆ ಮಾಡಿ ಎಂದು ಶೂದ್ರ ಕೇಳಿದರೆ ಇದು ತನ್ನ ವ್ಯಾಪ್ತಿಗೆ ಬರುವುದಿಲ್ಲವೆನ್ನುವ ಸರ್ಕಾರ, ಮತಾಂತರ ನಿಷೇಧಕ್ಕೆ ಚಿಂತಿಸುತ್ತಿರುವ ಕ್ರೌರ್ಯವು ಗಾಬರಿ ಹುಟ್ಟಿಸುತ್ತದೆ.

ಇರಲಿ, ಮತಾಂತರದ ಚಲನೆಯು ಭಾರತದಲ್ಲಿ ಇದ್ದುದರಿಂದಲೇ ಇಲ್ಲಿ ಅನೇಕಾನೇಕ ಧರ್ಮಗಳಿರುವುದು. ಈಗ ಹಾಲಿ ಭಾರತದಲ್ಲಿ ಮತಾಂತರಕ್ಕೆ ಅವಕಾಶವಿರುವ ಜೈನ, ಬೌದ್ಧ, ಸಿಖ್ ಹಾಗೂ ಕೆಲವು ಲಿಂಗಾಯತ ಪರಂಪರೆಯ ಧರ್ಮಗಳಿವೆ. ಲಿಂಗಾಯತವು ತನ್ನ ಜಾತಿ ಬಿಟ್ಟರೆ, ಭಾರತದ ದುಡಿಯುವ ವರ್ಗದ ಅಂದರೆ ತಳಸಮುದಾಯಗಳ ಧರ್ಮವಾಗಬಹುದಾದ ಸತ್ವವು ಅದರೊಳಗೆ ಇನ್ನೂ ಕುಟುಕುಜೀವದಂತೆ ಹುದುಗಿದೆ. ಇವುಗಳಲ್ಲಿ ನಿಧಾನವಾಗಿಯಾದರೂ ಮತಾಂತರ ಜರಗುತ್ತಲೇ ಇದೆ.

ನಮ್ಮ ಕಣ್ಣೆದುರೇ ಉಪನಿಷದ್ ದ್ರವ್ಯದಿಂದ ಧರ್ಮವಾಗಿ ಹುಟ್ಟು ಪಡೆಯಬಹುದಾಗಿದ್ದ ‘ಪರಮಹಂಸಧರ್ಮ’ವೊಂದು ಗತಿಸಿ ಬಿಟ್ಟಿತು. ಆ ಎಳೆಧರ್ಮದ ಕುತ್ತಿಗೆಗೆ ಜನಿವಾರ ಬಿಗಿದುಬಿಟ್ಟರು. ಇಂದು ರಾಮಕೃಷ್ಣಾಶ್ರಮಗಳು ಭೋಜನಶಾಲೆ ಮತ್ತು ವೇದಾಂತ ಕಥಾಕಾಲಕ್ಷೇಪ ತಾಣಗಳಾಗಿಬಿಟ್ಟಿವೆ. ಇದು ಈ ಸ್ಥಿತಿಯಿಂದ ಜಿಗಿದು ಎದ್ದರೆ ಇಂದೂ ಧರ್ಮವಾಗಬಹುದು. ಇಂದು ಸಂಘ ಪರಿವಾರವು ಹೇಳುತ್ತಿರುವ ಹಿಂದೂ ಧರ್ಮವು ಇಸ್ಲಾಂಗೆ ಪ್ರತಿಸ್ಪರ್ಧಿಯಾಗಿದ್ದು ಕೇವಲ ಇಸ್ಲಾಮಿನ ಮೂಲಭೂತವಾದೀ ಗುಣ ಲಕ್ಷಣಗಳನ್ನು ಮಾತ್ರ ತಾನು ಪಡೆದುಕೊಂಡು ಒಂದು ರೀತಿಯಲ್ಲಿ ನಮ್ಮ ಕಣ್ಣ ಮುಂದೆ ಈಗ ಜರುಗುತ್ತಿರುವುದು ‘ಹಿಂದ್‍ಇಸ್ಲಾಮೀ’ ನವಧರ್ಮವೊಂದರ ಉದಯದಂತೆಯೂ ಇದು ಕಾಣುತ್ತದೆ.

ಇಂದು ನಮ್ಮ ನಡುವೆ, ಸ್ಥಗಿತಗೊಂಡ ಸಾಮಾಜಿಕ ಪದ್ಧತಿಯೇ ಹಿಂದು ಎಂಬ ಧರ್ಮವಾಗಿ ಈ ಪದ್ಧತಿಯು ಎಲ್ಲಾ ಧರ್ಮಗಳಿಗಿಂತಲೂ ಪ್ರಬಲವಾಗಿದೆ. ಶ್ರೇಣಿಯ ಸಮಾಜಕ್ಕಾಗಿ ಇರುವ ಕಾನೂನು ಕಟ್ಟಳೆಗಳೇ ‘ಹಿಂದು ಧರ್ಮ’ ಎಂದಾಗಿದೆ, ಈ ಶ್ರೇಣಿಯ ಕಾನೂನು ಕಟ್ಟಳೆಗಳೇ ಇಲ್ಲಿ ಧರ್ಮವಾಗಿದೆ. ಇದು ಸಾವಿರಾರು ವರ್ಷಗಳಿಂದಲೂ ಧರ್ಮದ ವೇಷ ಹಾಕಿಕೊಂಡು ವಂಚಿಸಿ ವಂಚಿಸಿ ತನ್ನನ್ನು ಧರ್ಮವೆಂದೇ ಭಾವಿಸುವಂತೆ ಮಾಡಿಬಿಟ್ಟಿದೆ.

ತನ್ನ ವಂಚನೆಗಳಿಗೆ ಭಾರತದ ಮಹೋನ್ನತ ಜ್ಞಾನಶಾಖೆಗಳಾದ ದರ್ಶನಗಳನ್ನೂ ಬೌದ್ಧ-ಜೈನ ಧರ್ಮಗಳನ್ನೂ ಮಾತಾಡುವ ವಸ್ತುವಾಗಿ ಬಳಸಿಕೊಂಡಿದೆ. ದೇವರನ್ನೂ ಅವತಾರ ಎತ್ತಿಸಿದೆ. ಇದೆಲ್ಲಾ ಯಾತಕ್ಕಾಗಿ ಅಂದರೆ- ಶ್ರೇಣೀಕೃತ ಜಾತಿ ವರ್ಣ ಕಟ್ಟುಪಾಡುಗಳನ್ನು ಸುಪ್ತಪ್ರಜ್ಞೆಯಲ್ಲಿ ಸ್ಥಾಪಿಸುವುದಕ್ಕಾಗಿ. ಅದಕ್ಕಾಗೇ ಯಾವ ರಾಜ ಬಂದರೂ ರಾಜಧರ್ಮ ಅಂದರೆ ವರ್ಣವ್ಯವಸ್ಥೆಯನ್ನು ಕಾಪಾಡುವುದೇ ಆಗಿತ್ತು.

ಹಿಂದು ಆಗಿರುವುದೆಂದರೆ-ಇದ್ದ ಕಡೆ ಇರುವ ಶ್ರೇಣಿಯಲ್ಲಿ ಬಿದ್ದಿರು-ಎಂದೇ ಅರ್ಥ. ಇಲ್ಲಿರಬೇಕೆ? ಇಲ್ಲಿ ಅಸಮಾನತೆ ಕಟ್ಟಳೆಗಳ ವ್ಯಾಘ್ರನು ಧರ್ಮದ ಗೋಮುಖ ವೇಷದಲ್ಲಿದ್ದಾನೆ. ಹಿಂದೂ ಗೋಮುಖ ವ್ಯಾಘ್ರನಲ್ಲಿ ವ್ಯಾಘ್ರನ ಸಾಯಿಸಿದರೆ-ಅಂದರೆ ಶ್ರೇಣೀಕೃತ ಜಾತಿ ಕಟ್ಟಳೆ, ಅಸ್ಪೃಶ್ಯತೆಗಳ ಸಾಯಿಸಿದರೆ-ಇದೂ ಒಂದು ಧರ್ಮವಾಗಬಹುದು. ಇದು ಸಾಧ್ಯವೆ?

ಆದರೆ ಇದು ಸಾಧ್ಯವೇ ಎಂದು ಶ್ರೀ ಪೇಜಾವರರನ್ನು ಪ್ರಾತಿನಿಧಿಕ ಮಾಡಿಕೊಂಡು ಕೇಳುತ್ತಿದ್ದೇನೆ. ಅವತಾರ ಎತ್ತಿಸಿಯಾದರೂ ಜಾತಿಯ ಶ್ರೇಣಿಯು ಇಲ್ಲದಂತೆ ಹಿಂದೂ ಸಮಾಜ ರೂಪಿಸಿ ಅದನ್ನು ಧರ್ಮ ಮಾಡಲು ಸಾಧ್ಯವಿದೆಯೆ? ಇದಾಗದಿದ್ದರೆ, ಹಿಂದೂ ಸಮಾಜದ ದೇವಸ್ಥಾನ, ಮಠ, ಇತ್ಯಾದಿಗಳಲ್ಲಿ ಮಠಾಧೀಶ ಸ್ಥಾನ ಪೂಜೆ ಕಾರ್ಯ ಇತ್ಯಾದಿ ನಿರ್ವಹಣೆಗಳಲ್ಲಿ ಸಕಲೆಂಟು ಜಾತಿಗೂ ಪರ್ಯಾಯ ವ್ಯವಸ್ಥೆ ತರಲಾದರೂ ಸಾಧ್ಯವಿದೆಯೆ? ಉಡುಪಿಯಲ್ಲಿ ಅಷ್ಟಮಠಗಳ ಬದಲು ನವಮಠಗಳ ಪರ್ಯಾಯಕ್ಕಾಗಿ, ಡಿಮ್ಯಾಂಡ್ ಇಟ್ಟು ಕಾಯುತ್ತಿರುವವನಂತೆ ಇರುವ ಕನಕ ಇನ್ನೆಷ್ಟು ದಿನ ಕಾಯಬೇಕು? ಅಥವಾ ಅವನು ಹೊರಗಿರುವುದೇ ಧರ್ಮವೆ?

ನೀವು ದಲಿತ ಕೇರಿಗೆ ಪಾದವಿಟ್ಟರೆ ಅದನ್ನೆ ಧನ್ಯ ಎಂದುಕೊಳ್ಳುವ ಆ ದಲಿತ ಕೇರಿಯ ಮಗುವೊಂದು ನಿಮ್ಮನ್ನು ಪ್ರೀತಿಸಿ `ನಾನೂ ನಿಮ್ಮೊಡನೆ ಬರುತ್ತೇನೆ, ನನಗೂ ನೀವಾಗುವ ಆಸೆ’ ಎಂದರೆ ನೀವೇನು ಮಾಡುತ್ತೀರಿ? ಇಲ್ಲಿ ನೀವು ಅಂದರೆ ನೀವೇ ಅಲ್ಲ. ನಿಮ್ಮಂತೆ ಇರುವ ಎಲ್ಲರಿಗೂ ಇದು ಎದುರಾಗುತ್ತಿಲ್ಲ ಯಾಕೆ? ನಿಮ್ಮದೂ ಪತನದ ಸ್ಥಿತಿಯಲ್ಲವೇ? ನಿಮ್ಮಂಥವರಿಗೆ ಇಂಥವುಗಳನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಯಾಕೆಂದರೆ ಇಂಥವರ ದೇಹದೊಳಗಿನ ಆತ್ಮಸಾಕ್ಷಿ ಅಥವಾ ಸಾಕ್ಷಿಪ್ರಜ್ಞೆಯು ನೇಣಿಗೆ ಹಾಕಲ್ಪಟ್ಟಿರುತ್ತದೆ.

ಏಕೆಂದರೆ ಭಾರತದ ಸಮಾಜದ ಸುಪ್ತ ಮನಸ್ಸು ಅಸ್ಪೃಶ್ಯತೆ, ಶ್ರೇಣೀಕೃತ ಜಾತಿ ಪದ್ಧತಿ, ತಾರತಮ್ಯಗಳ ಅಪಮೌಲ್ಯಗಳನ್ನೆ ಮೌಲ್ಯ ಮಾಡಿಬಿಟ್ಟಿದೆ. ಇದನ್ನು ಬಿತ್ತುವವರನ್ನು ಪೂಜ್ಯರು, ಶ್ರೀಶ್ರೀಶ್ರೀ, ಮಾತಾಡಿದರೆ ಆಶೀರ್ವಚನ, ಆಧ್ಯಾತ್ಮಿಕ ಚಿಂತಕರು, ಪರಮ ಪೂಜ್ಯರು ಇತ್ಯಾದಿ ಪಟ್ಟಕಟ್ಟಿದೆ.

ಈ ಪ್ರಭಾವಕ್ಕೆ ಒಳಗಾದವರೇ ಭಾರತದ ಸಂವಿಧಾನದ ಆಶಯಗಳನ್ನು ನಿರ್ಧರಿಸುವ ನಿರ್ವಹಿಸುವ ನಿರ್ಣಾಯಕ ಸ್ಥಾನಗಳಲ್ಲಿ ಹೆಚ್ಚಾಗಿ ಇರುವಾಗ, ಕಳೆದ ವರ್ಷದ ರಾಜ್ಯ ಬಜೆಟ್‍ನಲ್ಲಿ ದಲಿತರಿಗೆ ಮೀಸಲಿಟ್ಟ 4 ಸಾವಿರ ಕೋಟಿಗಳಲ್ಲಿ ಅರ್ಧದಷ್ಟನ್ನು ಕಾಟಾಚಾರಕ್ಕೆ ಖರ್ಚುಮಾಡಿ ಉಳಿಕೆ ಅರ್ಧವನ್ನು ಲ್ಯಾಪ್ಸ್ ಮಾಡಿರುವ ಕ್ರಿಯೆ ಇಲ್ಲಿ ಸಹಜವಲ್ಲವೆ? ದಲಿತರ ಮೀಸಲಾತಿ ಉದ್ಯೋಗದಲ್ಲಿ ದಲಿತೇತರರು ನುಸುಳಿ ಪಡೆಯುತ್ತಿರುವುದು ಇಲ್ಲಿ ಸಹಜ ಕ್ರಿಯೆ ತಾನೆ? ನಮಗೆ ಅನ್ಯಾಯಗಳು, ಅನ್ಯಾಯಗಳಾಗಿ ಬಂದು ಮುಟ್ಟುತ್ತಿಲ್ಲ.

ಕನ್ನಡದಲ್ಲಿ ಒಂದು ಪದ ಇದೆ- `ಪಾಪ’ ಅಂತ. ಇದನ್ನು ಪಾಪ (Sin)ಕ್ಕೂ ಬಳಸುತ್ತಾರೆ, ಹಾಗೇ ಕರುಣೆ (pity)ಗೂ ಬಳಸುತ್ತಾರೆ. ಪಾಪಕ್ಕೆ ಬಳಸಿದರೆ ಪಾಪಿಷ್ಟ ಆಗುತ್ತಾನೆ. ಕರುಣೆಗೆ ಬಳಸಿದರೆ ಪಾಪದವನು ಆಗುತ್ತಾನೆ. ಪಾಪದವನು ಒಂದು ಪಟ್ಟು ಪತನಗೊಂಡವನಾಗಿದ್ದರೆ, ಪಾಪಿಷ್ಟನು ನೂರು ಪಟ್ಟು ಪತನಗೊಂಡವನಾಗಿರುತ್ತಾನೆ. ಅಸ್ಪೃಶ್ಯತೆಗೆ ಅಥವಾ ತಾರತಮ್ಯಕ್ಕೆ ಒಳಗಾದವರು ಪಾಪದವರು ಆಗುತ್ತಾರೆ.

ಯಾಕೆಂದರೆ ಇವರ ಮನೋಭೂಮಿಕೆಯಲ್ಲಿ ಅಸ್ಪೃಶ್ಯತೆ ತಾರತಮ್ಯ ಇರುವುದಿಲ್ಲ. ಆದರೆ ಯಾರು ಅಸ್ಪೃಶ್ಯತೆ, ತಾರತಮ್ಯ ಆಚರಿಸುತ್ತಾರೋ ಅವರ ಮನೋಭೂಮಿಕೆಯಲ್ಲಿ ಅಸ್ಪೃಶ್ಯತೆ ತಾರತಮ್ಯಗಳೇ ತುಂಬಿರುತ್ತವೆ. ಈ ನಿಜದ ಎದುರು ಅಸ್ಪೃಶ್ಯತೆ ತಾರತಮ್ಯ ಆಚರಿಸುವವರು ಪಾಪಿಷ್ಟರಾಗುತ್ತಾರೆ. ‘ಗುಲಾಮನನ್ನು ಪಳಗಿಸಲು ಹೆಣಗುವ ಮಾಲೀಕನ ಮನಸ್ಸಿನ ತುಂಬಾ ಗುಲಾಮತನ ತುಂಬಿರುತ್ತದೆ’ -ಎಂಬ ಹೆಗಲ್‍ನ ನುಡಿಯ ನಿಜದಂತೆ.

ನಾವು ನಮ್ಮ ಸಮಾಜವನ್ನು ನೋಡುವ ನೋಟಕ್ಕೆ ಈ ನಿಜದ ದರ್ಶನವಾದರೆ ಇದು ಸಂವಿಧಾನದ ಆಶಯಗಳತ್ತ ನಾವಿಟ್ಟ ಮೊದಲ ಹೆಜ್ಜೆಯಾಗುತ್ತದೆ. ಇದು ಕಡು ಕಷ್ಟ. ಭಾರತೀಯ ಮನಸ್ಸಿನ ನಡೆ ಮತ್ತು ನುಡಿ ಸೀಳಿಹೋಗಿದೆ. ಅಸ್ಪೃಶ್ಯತೆ ಪಾಪ ಎಂದರೆ ಹೌದೆನ್ನುವ ಭಾರತೀಯ ಮನಸ್ಸು ಅದೇ ಅಸ್ಪೃಶ್ಯತೆ ಆಚರಿಸುವವರು ಪಾಪಿಷ್ಟರು ಎಂದರೆ ಬೆಚ್ಚಿ ಬೀಳುತ್ತದೆ. ವ್ಯವಹಾರಕ್ಕೆ ವೇದವನ್ನು ನಡೆದುಕೊಂಡು, ಆದರ್ಶಕ್ಕೆ ವೇದಾಂತ ಎಂದರೆ ಉಪನಿಷತ್ತನ್ನು ಮಾತಿನ ಕಾಲಕ್ಷೇಪ ಮಾಡಿದ್ದೇ ಕಾರಣವೂ ಇರಬಹುದು.

ಆದರೆ ಈ ಪಾಪದವರೂ ಎಚ್ಚರದ ಸ್ಥಿತಿಯಲ್ಲಿ ಇಲ್ಲ. ಮಧ್ಯಮ ಜಾತಿಗೆ ಸೇರಿದ ನನ್ನ ಗೆಳೆಯನೊಬ್ಬ- “ಒಂದು ಚೋಟುದ್ದ ಬ್ರಾಹ್ಮಣ ಹುಡುಗ ಅವನು. ನಮ್ಮ ವಯಸ್ಸಾದ ಅಪ್ಪನಿಗೇನೆ `ಏನಯ್ಯ ಗೌಡ, ಚೆನ್ನಾಗಿದ್ದೀಯಾ?’ ಅಂತ ಏಕವಚನದಲ್ಲಿ ಕೇಳ್ತಾನಲ್ಲಯ್ಯ!” ಎಂದು ಕುಪಿತನಾಗಿ ಹೇಳಿದ. ನಾನು ಅವನಿಗೆ ‘ಸರಿಯಪ್ಪ, ನೀನು ಚಿಕ್ಕವನಾಗಿದ್ದಾಗ ನಮ್ಮ ಜಾತಿಯ ವಯಸ್ಸಾದವರಿಗೆ ಯಾವ ವಚನದಲ್ಲಿ ಕರೆಯುತ್ತಿದ್ದೆ?’ ಎಂದು ಕೇಳಿದೆ. ಇಂಥವರಲ್ಲಿ ಸ್ವಾಭಿಮಾನದ ಎಚ್ಚರ ಅಂದರೆ ತನ್ನದು ಮಾತ್ರ ಆಗಿರುತ್ತದೆ, ಇನ್ನೊಂದರ ಪರಿವೆ ಇರುವುದಿಲ್ಲ.

ಹಾಗೇ ದಲಿತರ ಮನಸ್ಥಿತಿಗೆ ಬಂದರೂ ಸಣ್ಣ ಪುಟ್ಟದಾದರೂ ಇದನ್ನೇ ಕಾಣುತ್ತೇವೆ. ಭಾರತದ ಬಹುತೇಕ ಸಮುದಾಯಗಳು ಹೀಗೇ ಇವೆ. ರಸಾಯನಶಾಸ್ತ್ರದಲ್ಲಿ ಬರುವ ಪರ್ಯಾಪ್ತ ದ್ರಾವಣ (Saturated solution)ದಂತೆ ಎಲ್ಲಾ ಜಾತಿಗಳು ತಂತಮ್ಮ ಕೊನೆ ಸ್ಥಿತಿ ತಲುಪಿ, ಅಸ್ಪೃಶ್ಯತೆ ತಾರತಮ್ಯಗಳು ನಡೆದು ಬಂದ ಪದ್ಧತಿಗಳಾಗಿ ಎಚ್ಚರವಿಲ್ಲದೆ ತಮಗೆ ತಾವೇ ನಡೆದುಕೊಂಡು ಬರುತ್ತಿವೆ. ನಾವು ಅದರೊಳಗೇ ಸಂಪೂರ್ಣ ಮುಳುಗಿಹೋಗಿರುವುದರಿಂದ ಅದರ ಐಬನ್ನು ಅರಿವಿಗೆ ತಂದುಕೊಳ್ಳುವುದಕ್ಕೇ ಹರಸಾಹಸ ಪಡಬೇಕಿದೆ.

ಈಗ ಭಾರತದಲ್ಲಿ ವರ್ತಮಾನದ ಸಂವಿಧಾನವೇನೊ ಪಾಪದವರನ್ನು ಮೇಲೆತ್ತಲು ಕೈಚಾಚಿದೆ. ಆದರೆ ಭೂತಕಾಲದ ಸಂವಿಧಾನ ಕಾಲೆಳೆಯುತ್ತಿದೆ. ಈ ಪಾಪದವರೂ ಎಚ್ಚರದಲ್ಲಿಲ್ಲ. ಸಂವಿಧಾನದ ಆಶಯಗಳ ಕಾಲೆಳೆಯುವ ಪಾಪಿಷ್ಟರಾದರೋ ಸಮಾಜದಲ್ಲಿ ಗಣ್ಯರೆನ್ನಿಸಿಕೊಂಡಿದ್ದಾರೆ. ಇವರ ವಂಶಸ್ಥರೇ ಇವರ ಪ್ರಭಾವದಲ್ಲಿರುವವರೇ ನಿರ್ಧರಿಸುವವರು ನಿರ್ವಹಿಸುವವರು ಆಗಿದ್ದಾರೆ. ಸಂವಿಧಾನದ ಆಸೆಗಳು ಈಡೇರುವುದಾದರೂ ಹೇಗೆ?

ಬಸ್ಸು ರೈಲು ಕಾರಣಕ್ಕಾಗಿ ಅಕ್ಕಪಕ್ಕ ಕೂತಿದ್ದೇವೆ. ಹೊಟೇಲ್ ಕಾರಣಕ್ಕಾಗಿ ಸಹಪಂಕ್ತಿ ಭೋಜನ ಮಾಡಿದ್ದೇವೆ. ನೌಕರಿ ಕಾರಣಕ್ಕಾಗಿ ಒಟ್ಟಾಗಿ ಓಡಾಡಿದ್ದೇವೆ, ಅಲ್ಲಿ ಇಲ್ಲಿ ಮದುವೆಗಳೂ ಆಗಿವೆ. ಇಲ್ಲಿ ಆಗುತ್ತಿರುವ ಬದಲಾವಣೆಗಳು ಹೆಚ್ಚಾಗಿ ಬಹಿರಂಗ ಒತ್ತಡದವು. ಅಂತರಂಗ ಕತ್ತಲಲ್ಲೆ ಇದೆ.

ಏನೇನು ಮಾಡಬಹುದಿತ್ತು? ಮೊದಲ ಹೆಜ್ಜೆಯಾಗಿ, ವರ್ತಮಾನದ ಸಂವಿಧಾನದ ಆಶಯಗಳಿಗೆ ತಕ್ಕಂತೆ ಪ್ರಜೆಗಳನ್ನು ರೂಪಿಸಲು ಶಿಕ್ಷಣ ಕ್ಷೇತ್ರವನ್ನು ತೆಪ್ಪ ಮಾಡಿಕೊಳ್ಳಬಹುದಿತ್ತು. ಶಿಕ್ಷಣ ಪಡೆಯುವ ಎಳೆಯರು ಆ ವಿದ್ಯೆಯಲ್ಲೆ ನಾಗರಿಕರೂ ಆಗುವಂತೆ ಶಿಕ್ಷಣವನ್ನೂ ರೂಪಿಸಬಹುದಿತ್ತು. ಸಮಾಜದಲ್ಲಿ ಅಸ್ಪೃಶ್ಯತೆ ತಾರತಮ್ಯ ಆಚರಿಸುವವರ ಬಗ್ಗೆ ಆ ಪದ್ಧತಿಗಳ ಬಗ್ಗೆ ಇರುವ ಭಯ ಭಕ್ತಿಗಳಲ್ಲಿ- ಭಯ ಇರಲಿ, ಆದರೆ ಭಕ್ತಿಯನ್ನು ಇಲ್ಲದಂತೆ ಮಾಡಬೇಕಿತ್ತು. ಭಕ್ತಿಯು ಅಪಮೌಲ್ಯವನ್ನೇ ಮೌಲ್ಯವಾಗಿಸಿ ಬಿಡಲೂಬಹುದು.

ಈ ಅಪಾಯದ ಅರಿವು ನಮಗಿರಬೇಕಿತ್ತು. ಈ ಅರಿವು ನಮಗೆ ಇದ್ದಿದ್ದರೆ.. ನಮ್ಮ ಶಿಕ್ಷಣದ ಪಠ್ಯ, ನಾವು ನೋಡುವ ದೃಷ್ಟಿಕೋನ ಎಲ್ಲವೂ ಹೊಸತಾಗಿ ಬಿಡುತ್ತಿತ್ತು. ಆಗ ಕೇವಲ ಮನುಷ್ಯ ಪ್ರಜ್ಞೆ ಕೆಲಸ ಮಾಡುತ್ತದೆ. ಆಗ ತಾರತಮ್ಯ ಮೌಲ್ಯವಾಗಿಸುವವರು ಪಳೆಯುಳಿಕೆಗಳಂತೆ ನಮ್ಮ ಸಮಾಜಶಾಸ್ತ್ರಜ್ಞರಿಗೆ ಕಾಣಬಹುದು. ಆಗ ಇಂಥವು ಸಾಮಾಜಿಕ ಸಾಂಸ್ಕೃತಿಕ ಅನಿಷ್ಟ ಪದ್ಧತಿಗಳು ಎಂದೋ ಅಥವಾ ಸಾಮಾಜಿಕ ಸಮಸ್ಯೆಗಳು ಎಂದೋ ಅಧ್ಯಯನದ ವಸ್ತುವಾಗುತ್ತಿತ್ತು.

ರಾಜ್ಯಶಾಸ್ತ್ರದಲ್ಲಿ- ಸಂವಿಧಾನ ಅನುಷ್ಠಾನಕ್ಕೆ ಇರುವ ತೊಡಕುಗಳ ಪಟ್ಟಿಯಲ್ಲಿ ಇದೂ ಸೇರ್ಪಡೆಯಾಗುತ್ತಿತ್ತು. ಮನಃಶಾಸ್ತ್ರದ ಸಮ್ಮೋಹಿನಿ ತಜ್ಞರು ಈ ಸುಪ್ತಪ್ರಜ್ಞೆಯ ತಾರತಮ್ಯಗಳನ್ನು ತಮ್ಮ ಅಧ್ಯಯನ ವಿಷಯ ಎಂದು ಪರಿಗಣಿಸಿ ಭೂತೋಚ್ಛಾಟನೆಯ ವಿಧಿವಿಧಾನಗಳನ್ನು ಕಂಡು ಹಿಡಿಯುವ ಪ್ರಯತ್ನಗಳೂ ಆಗುತ್ತಿದ್ದವು. ಶಿಕ್ಷಣತಜ್ಞರಿಂದ ಸಂವಿಧಾನದ ಆಶಯಗಳಿಗೆ ಪಠ್ಯ ರಚನೆಯಾಗುತ್ತಿತ್ತು -ಹೀಗೆ.

ಆದರೆ ಭಾರತದ ಶಿಕ್ಷಣ ಕ್ಷೇತ್ರಕ್ಕೆ ಬಂದರೆ ಇಲ್ಲೂ ಏನಾಗಿದೆ? ಹಿಂದೆ ದ್ವಿಜರಲ್ಲದವರಿಗೆ ವಿದ್ಯೆ ವಂಚಿಸಲ್ಪಟ್ಟಿತ್ತು. ಈಗ ವರ್ತಮಾನದ ಸಂವಿಧಾನದಲ್ಲಿ ವಿದ್ಯೆ ಎಲ್ಲರಿಗೂ ಮುಕ್ತವಾಗಿದೆ, ನಿಜ. ಆದರೆ ಕೊಟ್ಟಂತೆ ಕಾಣಿಸುತ್ತ ಸಹಜವಾಗೇ ಹೊರಗಿಡುವ ಸಂಚೂ ಜೊತೆಗೇ ಜರುಗುತ್ತಿದೆ. ಏಕರೂಪದ ಶಿಕ್ಷಣ ಪದ್ಧತಿ ಇಲ್ಲದೆ, ಪ್ರಾಥಮಿಕ ಶಿಕ್ಷಣದಲ್ಲಾದರೂ ಮಾತೃಭಾಷೆ ಮಾಧ್ಯಮವಾಗದೆ, ಕಡ್ಡಾಯ ಶಿಕ್ಷಣದಲ್ಲಿ ಕಡ್ಡಾಯ ಇಲ್ಲದೆ, ಮುಖ್ಯವಾಗಿ ಗ್ರಾಮೀಣ ಭಾರತವು ಸಹಜವೊ ಎಂಬಂತೆ ಹೊರ ಹಾಕಲ್ಪಡುತ್ತಿದೆ.

ಎಲ್ಲರಿಗೂ ಶಿಕ್ಷಣ ನೀಡಬೇಕೆಂಬ ಆಧುನಿಕ ಪ್ರಜ್ಞೆಯನ್ನು, ಶಿಕ್ಷಣ ಕೊಡಬಾರದೆನ್ನುವ ಸನಾತನ ಸುಪ್ತಪ್ರಜ್ಞೆಯೂ ನಿಯಂತ್ರಿಸುತ್ತಿರುವುದರ ಪರಿಣಾಮದಿಂದ ಇದಾಗುತ್ತಿರಬಹುದೇನೊ. ಇಲ್ಲೂ ತಾರತಮ್ಯವೇ. ಇದಕ್ಕೆ ನಾವು ಬೆಚ್ಚುತ್ತಿಲ್ಲ, ಬೆದರುತ್ತಿಲ್ಲ. ಮೊದಲು ಶಿಕ್ಷಣ ಕ್ಷೇತ್ರದಲ್ಲಿ ನಾವು ಎಚ್ಚೆತ್ತುಕೊಂಡು ಮನುಷ್ಯರಾದರೆ ಉಳಿದುದೆಲ್ಲಾ ತಂತಾನೆ ಕಾಣಬಹುದೇನೋ.

ಭಾರತದ ಇಂದಿನ ಸ್ಥಿತಿಗೆ ಒಂದು ಚಿತ್ರಣ ಕೊಟ್ಟು ಮುಗಿಸುತ್ತೇನೆ. ತುಂಬಾ ಹಿಂದೆ, ಹಳ್ಳಿಯೊಂದರಲ್ಲಿ ದಲಿತರಿಗೆ ಪ್ರವೇಶವಿಲ್ಲದ ಕಾರಣಕ್ಕೆ ಗಲಾಟೆಯಾಗಿ ಅಲ್ಲಿಗೆ ಹೋಗಿದ್ದೆವು. ಹೋಗಿ ನೋಡಿದರೆ, ಆ ಹೊಟೇಲ್ ಅಂದರೆ ಅದು ಜಗುಲಿ ಮೇಲೆ ತೆಂಗಿನ ಗರಿ ಕಟ್ಟಿದ ಒಂದು ಕತ್ತಲು ತುಂಬಿದ ಜೋಪಡಿಯಾಗಿತ್ತು. ಅಲ್ಲಿ ನೊಣಗಳ ಸಾಮ್ರಾಜ್ಯವಿತ್ತು. ಬಚ್ಚಲು ಪಕ್ಕದಲ್ಲೆ ಹರಿಯುತ್ತ ಮೂಗು ಮುಚ್ಚಿಕೊಂಡು ಏನಾರು ತಿನ್ನಬೇಕಿತ್ತು.

ಈ ಹೊಟೇಲ್ ಪ್ರವೇಶಕ್ಕೆ ದಲಿತರು ಹಾತೊರೆಯುತ್ತಿದ್ದರು. ಆ ದೃಶ್ಯ ನೋಡಿದ ನನ್ನ ಜೊತೆಗಿದ್ದ ಶ್ರೀಕೃಷ್ಣಆಲನಹಳ್ಳಿ ‘ಅಯ್ಯೋ ಮಾದೇವ, ಇಲ್ಲಿ ದಲಿತರು ಏನನ್ನೂ ತಿನ್ನದಿದ್ದರೇನೇ ಆರೋಗ್ಯವಲ್ಲವೆ?’ ಎಂದಿದ್ದರು. ಅದಕ್ಕೆ ನಾನು ‘ಪ್ರವೇಶ ಕೇಳುತ್ತಿರುವುದು ಮನಸ್ಸಿನ ಒಳಕ್ಕೆ’ ಎಂದಿದ್ದೆ.

ಭಾರತದ ಸ್ಥಿತಿಯೂ ಹೆಚ್ಚುಕಮ್ಮಿ ಆ ಹೊಟೇಲ್‍ನ ಕತೆಯಂತೆಯೇ ಇದೆ. ಇಲ್ಲಿ ಕೊಳಕುತನವಿದೆ, ಅನಾರೋಗ್ಯವಿದೆ, ಬಡತನವಿದೆ, ಅಜ್ಞಾನವು ತುಂಬಿದೆ. ಇಷ್ಟಿದ್ದೂ ಹೀಗಿದ್ದೂ ಭಾರತವು ಸ್ವಾತಂತ್ರ್ಯ ಪಡೆದ ನಂತರ ರಾಜರ ಆಳ್ವಿಕೆ ಕೊನೆಗೊಳಿಸಿದ್ದೂ, ವಯಸ್ಕರ ಮತದಾನ ಪದ್ಧತಿ ತಂದಿದ್ದೂ, ತನ್ನ ಮಿತಿಗಳೊಡನೆ ಶಿಕ್ಷಣವನ್ನು ಸರ್ವರಿಗೂ ಮುಕ್ತಗೊಳಿಸಿದ್ದೂ, ಭೂಸುಧಾರಣೆ, ಮೀಸಲಾತಿ ಇತ್ಯಾದಿ ಈ ನೆಲದಲ್ಲಿ ಸಂಭವಿಸಿರುವುದು ಸಾಮಾನ್ಯ ಸಂಗತಿಗಳೇನೂ ಅಲ್ಲ.

ಇದಕ್ಕೆ ಕಾರಣ- ಭಾರತದಲ್ಲಿ ಬುದ್ಧ, ವಚನಕಾರರಂಥವರ ಮಹೋನ್ನತ ಪರಂಪರೆಯ ಬೆಳಕು ಇರುವುದೂ ಅವರು ಉಸಿರಾಡಿದ ಗಾಳಿ ಅವರಿಟ್ಟ ಹೆಜ್ಜೆ ಗುರುತುಗಳು ಇರುವುದೂ ಈ ಮಹೋನ್ನತ ಪರಂಪರೆಯೂ ಭಾರತದ ಉನ್ನತ ಮನಸ್ಸುಗಳನ್ನು ಒಂದಿಷ್ಟು ಸೆಳೆದು ಕೈಹಿಡಿದು ನಡೆಸುತ್ತಿರುವುದೂ ಕಾರಣವಾಗಿರಬಹುದು. ಈ ಉನ್ನತ ಪರಂಪರೆಯ ಹೆಜ್ಜೆಗಳನ್ನು ಗುರುತಿಸಿ ನಾವು ಹೆಜ್ಜೆ ಇಟ್ಟರೆ ಆಗ ಸಂವಿಧಾನದ ಆಸೆಗಳು ಕೈಗೂಡಲೂಬಹುದು.

(‘ಎದೆಗೆ ಬಿದ್ದ ಅಕ್ಷರ’ ಸಂಕಲನದಿಂದ ಆಯ್ದ ಒಂದು ಬರಹ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಭಾರತದ ಜನಸಂಖ್ಯೆ ವರವೋ..? ಶಾಪವೋ..?

Published

on

ಸಾಂದರ್ಭಿಕ ಚಿತ್ರ

 

  • ಅಂಬಿಕಾ. ಕೆ
    ಎಂ.ಎ. ಪ್ರಥಮ ವರ್ಷದ ವಿದ್ಯಾರ್ಥಿನಿ
    ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
    ಬೆಂಗಳೂರು ವಿಶ್ವವಿದ್ಯಾಲಯ

 

ವಿಶ್ವ ಸಂಸ್ಥೆಯು ಪಾಪುಲೇಷನ್ ಫಂಡ್ ಮಾಡಿರುವ ಅಂದಾಜಿನ ಪ್ರಕಾರ ಭಾರತವು ಜಗತ್ತಿನ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಎನಿಸಿಕೊಂಡಿದೆ.

ದೇಶದ ಒಟ್ಟು ಜನಸಂಖ್ಯೆಯು 142.86 ಕೋಟಿಗೆ ಏರಿಕೆಯಾಗಿದ್ದು, ಚೀನಾ ಎರಡನೇ ಸ್ಥಾನಕ್ಕೆ ಇಳಿದಿದೆ, ಇಂತಹದೊಂದು ಹಿರಿಮೆಗೆ ಭಾರತವು ಪಾತ್ರವಾಗಲಿದೆ ಎಂಬುದರ ಅರಿವು ಹಿಂದೆಯೇ ಇತ್ತು. ಹೊಸ ಭಾರತದ ಜನಸಂಖ್ಯೆಯ ಸ್ವರೂಪವೇನು ಮತ್ತು ಯಾವ ವಯೋ ಮಾನದವರು ಎಷ್ಟಿದ್ದಾರೆ. ಆದಾಯ ಮಟ್ಟ ಹೇಗಿದೆ, ಆದಾಯ ಹಂಚಿಕೆ ಹೇಗಿದೆ ಎಂಬುದರ ಕುರಿತು ಕೂಡ ಚರ್ಚೆಗಳು ನಡೆಯುತ್ತಿವೆ. ಒಟ್ಟು ಜನಸಂಖ್ಯೆಯ ಜತೆಗೆ ಈ ಎಲ್ಲಾ ಅಂಶಗಳು ಕೂಡ ಸರ್ಕಾರದ ನೀತಿಗಳು ಮತ್ತು ಕಾರ್ಯಕ್ರಮ ರೂಪಿಸುವಿಕೆ ಮೇಲೆ ಪ್ರಭಾವ ಬೀರುತ್ತವೆ. ರಾಜಕೀಯ ಪಕ್ಷಗಳು ಮತ್ತು ಗುಂಪುಗಳು ರಾಜಕೀಯ ಹಾಗೂ ಸಾಮಾಜಿಕ ಸ್ಥಾನಗಳನ್ನು ನಿರ್ಧರಿಸುವಲ್ಲಿಯೂ ಈ ಅಂಶಗಳು ಪಾತ್ರವಹಿಸುತ್ತವೆ ಭಾರತದಲ್ಲಿ ಗರಿಷ್ಠ ಸಂಖ್ಯೆಯು ಯುವ ಜನರಿದ್ದಾರೆ.

ಹಾಗೆಯೇ ಮುಂದುವರೆಯಲಿದೆ 15 ರಿಂದ 24 ವರ್ಷದೊಳಗಿನವರ ಸಂಖ್ಯೆಯು 25.4 ಕೋಟಿ ಎಂದು ಅಂದಾಜಿಸಲಾಗಿದೆ ಇನ್ನು ದೀರ್ಘಕಾಲ ಭಾರತವು ಈ ಸ್ಥಿತಿ ಕಾಯ್ದುಕೊಳ್ಳಲಿದೆ ಎಂಬುದರಲ್ಲಿಯೂ ಅನುಮಾನ ಇಲ್ಲ ಜನಸಂಖ್ಯೆಯಲ್ಲಿ ಜಗತ್ತಿನಲ್ಲಿ ಮೊದಲ ಸ್ಥಾನಕ್ಕೆ ಏರುವುದು, ಗೌರವ ಏನು ಅಲ್ಲ ಬದಲಿಗೆ ಇದು ದೇಶಕ್ಕೆ ಹಲವು ಸವಾಲುಗಳನ್ನು ಹುಟ್ಟುತ್ತದೆ ಜತೆಗೆ ಅವಕಾಶಗಳ ಬಾಗಿಗಳನ್ನು ತೆರೆಯುತ್ತದೆ ಆದರೆ, ಜನರನ್ನು ಸಕಾಲಿಕವಾಗಿ ಮತ್ತು ಪರಿಣಾಮಕಾರಿಯಾಗಿ ಬಲಿಸಿಕೊಳ್ಳದೆ ಇದ್ದರೆ ಜನಸಂಖ್ಯೆಯೇ ಶಾಪವಾಗಿ ದೊಡ್ಡ ಸವಾಲಾಗಿ ಪರಿಣಮಿಸಬಹುದು. ದೇಶ ಪ್ರತಿ ವರ್ಷವೂ ಹೆಚ್ಚು ಹೆಚ್ಚು ಜನರಿಗೆ ಆಹಾರ ಬಟ್ಟೆ ಶಿಕ್ಷಣ ಆರೋಗ್ಯ ಸೇವೆ ಉದ್ಯೋಗಾವಕಾಶಗಳನ್ನು ಒದಗಿಸಬೇಕಾಗುತ್ತದೆ.

ಅಂಬಿಕಾ. ಕೆ

ಹೀಗೆ ಮುಂದುವರೆದರೆ ಉದ್ಯೋಗಾವಕಾಶಗಳು ದೊರೆಯದೆ ಜನರ ಜೀವನ ಮಟ್ಟ ಸುಧಾರಿಸಿಕೊಳ್ಳುವುದು ಕಷ್ಟವೇ ಸರಿ ಕೆಲಸ ಮಾಡುವ ವಯೋಮಾನದ ಜನರನ್ನು ಸಮಂಜಸವಾಗಿ ಬಳಸಿಕೊಂಡರೇ ಮಾತ್ರ ಜನಸಂಖ್ಯೆಯು ದೇಶದ ಅಭಿವೃದ್ಧಿಗೆ ಪೂರಕವಾಗಿ ಪರಿಣಮಿಸುತ್ತದೆ. ದೇಶದಲ್ಲಿ ದೊಡ್ಡ ಸಂಖ್ಯೆಯ ಜನರಿಗೆ ಈಗಲೂ ಮೂಲ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗಿಲ್ಲ ಆದ್ದರಿಂದ ಎಲ್ಲಾ ಕ್ಷೇತ್ರಗಳಲ್ಲಿಯೂ ಸಂಬಂಧಿಸಿದ ನೀತಿಗಳು ಮತ್ತು ಕಾರ್ಯತಂತ್ರ ಗಳಿಗೆ ಸಂಬಂಧಿಸಿದ ಪ್ರಯತ್ನಗಳನ್ನು ನಡೆಸದೇ ಇದ್ದರೆ ಜನಸಂಖ್ಯೆ ಹೆಚ್ಚಳದ ಲಾಭವು ದೊರೆಯದೆ ಹೋಗಬಹುದು ಇದರ ಪರಿಣಾಮವಾಗಿ ಲಾಭದ ಹೆಸರಿನಲ್ಲಿ ನಷ್ಟವೇ ಹೆಚ್ಚು ಅದುವೇ ಒಂದು ಹೊರೆಯುವಾಗಬಹುದು.

ಯುವ ಜನರಿಗೆ ಸೌಲಭ್ಯಗಳು ಮತ್ತು ಅವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ಹೆಚ್ಚುತ್ತಲೇ ಇರುವ ಹಿರಿಯ ನಾಗರಿಕರ ಹಾರೈಕೆಯು ವ್ಯವಸ್ಥೆ ಮಾಡಬೇಕಿದೆ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುವುದು ಮತ್ತು ಸವಾಲುಗಳನ್ನು ಎದುರಿಸುವುದು ಭಾರತೀಯರ ಹೊರೆಗಾರಿಕೆ ದೇಶದ ಜನರ ಅಗತ್ಯಗಳನ್ನು ಪೂರೈಸಲು ವಿಫಲವಾದರೆ, ಸಾಮಾಜಿಕ ಸಂಘರ್ಷ ಮತ್ತು ರಾಜಕೀಯ ದೃಷ್ಟಿ ಉಂಟಾಗಿ ಅದು ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು. ಮುಂದೆ ಜನಸಂಖ್ಯಾ ಸ್ಫೋಟವಾದರೂ ಆಶ್ಚರ್ಯ ಪಡಬೇಕಾಗಿಲ್ಲ ಈಗಿನ ಸನ್ನಿವೇಶದಲ್ಲಿ ದೊರಕುತ್ತಿರುವ ಸಂಪನ್ಮೂಲಗಳ ಗರಿಷ್ಠ ಬಳಕೆ ಮತ್ತು ಪರಿಣಾಮಕಾರಿ ಬಳಕೆ ಬಹಳ ಮಹತ್ವವಾಗಿದೆ.

ಮೀಸಲಾತಿ, ವಲಸೆ , ರಾಜಕೀಯ ಪ್ರಾತಿನಿಧ್ಯ ಸಂಪನ್ಮೂಲಗಳ ಹಂಚಿಕೆ ಮತ್ತು ಇದರ ವಿಚಾರಗಳು ಚರ್ಚೆಗೆ ಒಳಗಾಗುವ ಸಾಧ್ಯತೆ ಇದೆ ಸಮಾಜದ ಎಲ್ಲಾ ವರ್ಗಗಳನ್ನು ಸಮಾನವಾಗಿ ಒಳಗೊಳ್ಳುವ ಆರ್ಥಿಕ ಪ್ರಗತಿಯು ಸಾಧ್ಯವಾದರೆ ಜನಸಂಖ್ಯೆ ಏರಿಕೆ ಸವಾಲಾಗಿ ಪರಿಣಮಿಸಬಹುದು ಮಾನವ ಅಭಿವೃದ್ಧಿಯೇ ಅತ್ಯುತ್ತಮ ಕುಟುಂಬ ಕಲ್ಯಾಣ ಯೋಜನೆ ಇದರಿಂದ ಜನಸಂಖ್ಯೆಯ ಏರಿಕೆಯನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬಹುದು ಜನಸಂಖ್ಯೆ ಹೆಚ್ಚಳ ಯಾವುದೋ ಒಂದು ಸಮುದಾಯ ಕಾರಣ ಎಂದು ದೂಷಿಸುವ ಪ್ರವೃತ್ತಿಗೆ ಜ್ಞಾನದಾದ ಆಧಾರ ಇಲ್ಲದ ಪೂರ್ವಗ್ರಹ ಕಾರಣದಿಂದ ಮತ್ತು ಇದು ತಪ್ಪು ನಡವಳಿಕೆಯ ಜನಸಂಖ್ಯೆಗೆ ಸಂಬಂಧಿಸಿದ ಸವಾಲುಗಳನ್ನು ಉತ್ತಮವಾಗಿ ಮತ್ತು ಜಾಣ್ಮೆಯಿಂದ ನಿರ್ವಹಿಸಿದರೆ ಈ ಶತಮಾನವನ್ನು ಭಾರತದ ಶತಮಾನವನ್ನಾಗಿ ಪರಿವರ್ತಿಸುವ ಅವಕಾಶ ನಮ್ಮ ಮುಂದೆ ಇದೆ ಜನರೇ ನಮ್ಮ ದೇಶದ ಸಂಪನ್ಮೂಲವನ್ನಾಗಿ ಮಾರ್ಪಾಡು ಮಾಡಿಕೊಳ್ಳುವ ಅವಕಾಶ ನಮ್ಮ ನಿಮ್ಮೆಲ್ಲರ ಮೇಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬಾಬಾ ಸಾಹೇಬ ಅಂಬೇಡ್ಕರರ ‘ಧ್ಯಾನ’ ಗಾಯನ ; ವಿನೂತನ

Published

on

 

  • ವೆನ್ನೆಲಾ ಕೆ.
    ಎಂ.ಎ. ಪ್ರಥಮ ವರ್ಷದ ವಿದ್ಯಾರ್ಥಿನಿ,
    ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,
    ಬೆಂಗಳೂರು ವಿಶ್ವವಿದ್ಯಾಲಯ,ಬೆಂಗಳೂರು

ತ್ತೀಚೆಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಅನನ್ಯ ಮಾಧ್ಯಮ ಮತ್ತು ಬೆಳ್ಳಿತೆರೆ ಸಂಸ್ಥೆಯ ವತಿಯಿಂದ ಆಯೋಜಿಸಿದ 132ನೇ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರ ಜನುಮ ನಿಮಿತ್ತವಾಗಿ “ಧಾನ್ಯ” ‘ಗಾಯನವು’ ವಿನೂತನವಾದ ಈ ಕಾರ್ಯಕ್ರಮವು 5 ಘಂಟೆ, 1ನಿಮಿಷ, 14 ಸೆಕೆಂಡ್ ಗೆ ಆರಂಭವಾಗಿದ್ದು ಅವಿಸ್ಮರಣೀಯವಾದ ದಿನ, ಇದೊಂದು ಭಾರತ ಇತಿಹಾಸದ ಪುಟದ ಚರಿತ್ರೆಯಲ್ಲೇ ಹೊಸ ದಾಖಲೆಯೂ ಅಂತ ಹೇಳಬಹುದು.

ಈ ಕಾರ್ಯಕ್ರಮವನ್ನು ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ವು ಇಡೀ ಭಾರತದಲ್ಲೇ ಯಾರು ಮಾಡಿರದ ಈ ವಿನೂತವಾದ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಬೆಂಗಳೂರು ನಗರದಲ್ಲಿರುವ ಗಾಂಧಿ ಭವನದ ಆವರಣದಲ್ಲಿ ‘ಅನನ್ಯ ಸಂಸ್ಥೆ’ ವತಿಯಿಂದ 132 ನೇ ‘ವಿಶ್ವದ ವೀರ ವಿದ್ಯಾರ್ಥಿ ಹುಟ್ಟಿದ ದಿನ’ ಹಾಗೂ ‘ರಾಷ್ಟ್ರದ ಸ್ಫೂರ್ತಿಯ ದಿನ’ ‘ಸರ್ವ ಸಮುದಾಯದ ಶಕ್ತಿಯ ದಿನ’ ಇದೊಂದು ನಮ್ಮೆಲ್ಲರ ಹಬ್ಬದ ದಿನ ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಇಂತಹ ಮೇರು ಶಿಖರ ಟ್ಯಾಗ್ ಲೈನ್ ಗಳಿಂದ ಅದ್ಭುತವಾಗಿ
ಆಯೋಜಿಸಿದ ಕಾರ್ಯಕ್ರಮಕ್ಕೆ ರಾಜ್ಯ ಕಂಡ ಪ್ರಸಿದ್ಧ ಐಪಿಎಸ್ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು, ಸಿನಿಮಾ ಸೆಲೆಬ್ರಿಟಿಗಳು, ಸಮಸ್ತ ವಿದ್ಯಾರ್ಥಿ ಸಮೂಹ, ಸಾಮಾಜಿಕ ನ್ಯಾಯದ ವಿಚಾರಶೀಲರು, ಬರಹಗಾರರು, ಪತ್ರಕರ್ತರು ಇನ್ನೂ ಅನೇಕ ಮುಂತಾದವರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಇದಕ್ಕೆ ಮುಖ್ಯ ಕಾರಣಕರ್ತರಾದ ಅನನ್ಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶ್ರೀ ರಾಂಪುರ ರಾಜೇಶ್ ರವರ ನಿರ್ದೇಶನದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿದ್ದು ಹೆಮ್ಮೆಯ ವಿಷಯ.

ಇದರ ಹಿನ್ನೆಲೆ: ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ದಲ್ಲಿ ಅತ್ಯುತ್ತಮ ಹಾಗೂ ಅತ್ಯಂತ ತುಂಬಾ ಮನಸ್ಸಿನಿಂದಲ್ಲೇ ವಿಶೇಷವಾದ ಆಸಕ್ತಿಯನ್ನು ಅಂಬೇಡ್ಕರ್ ರವರು ಸಂಗೀತ ಪ್ರಿಯರು ಹಾಗೂ ಅಂಬೇಡ್ಕರ್ ರವರು ಸುಶ್ರಾವ್ಯವಾಗಿ ವಯಲಿನ್ ನುಡಿಸುತ್ತಿದ್ದರು. ಹಾಗೇಯೆ ಇವರಿಗೆ ಚಿತ್ರಕಲೆಯೂ ಸಹ ಒಲಿದಿತ್ತು ಎಂಬುದು ಗಮನಾರ್ಹ ಸಂಗತಿ. ಇಂತಹ ವಿಷಯವನ್ನು ಯಾರು ಸಹ ಬೆಳಕು ಚೆಲ್ಲುವ ಸಾಹಸಕ್ಕೆ ಕೈ ಹಾಕಿ ಇರಲಿಲ್ಲ. ಇದೊಂದು ಅನನ್ಯ ಸಂಸ್ಥೆ ವತಿಯಿಂದ ಇಂತಹ ಕಾರ್ಯಕ್ರಮ ನಡೆಸಿಕೊಟ್ಟಿದ್ದು ಐತಿಹಾಸಿಕ ಚರಿತ್ರೆಗೆ ಮುನ್ನುಡಿವಾಗಿದೆ.

ಅಂಬೇಡ್ಕರ್ ರವರಿಗೆ ತಮ್ಮ ಬಿಡುವಿನ ವೇಳೆಯಲ್ಲಿ ಅದ್ಭುತವಾದ ಒಬ್ಬ ಸಂಗೀತ ಪ್ರಿಯರಾಗಿದ್ದರು. ಇವರು ಸುಶ್ರಾವ್ಯವಾಗಿ ವಯಲಿನ್ ನುಡಿಸುತ್ತಿದ್ದರು ಹಾಗೂ ವಿಶೇಷವಾಗಿ ಚಿತ್ರಕಲೆ ಸಹ ಸರಳವಾಗಿ ಮಾಡುವ ಮೂಲಕ ತಮ್ಮ ಮನದಲ್ಲಿ ಆಸಕ್ತಿ ಹೊಂದಿದ್ದರು. ಇನ್ನು ಹಲವಾರು ವಿಷಯದಲ್ಲಿ ಅಂದರೆ ಅಂಬೇಡ್ಕರ್ ರವರಿಗೆ ವಿಶೇಷವಾದ ಇವುಗಳಲ್ಲಿ ಆಸಕ್ತಿ ಮತ್ತು ಅಭಿರುಚಿಯನ್ನು ಹೊಂದಿದ್ದರು ಎಂಬುದನ್ನು ಮನಗಂಡ ಅನನ್ಯ ಸಂಸ್ಥೆಯ ವತಿಯಿಂದ ಆಯೋಜಿಸಿದ ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮವು ಅತ್ಯುತ್ತಮವಾಗಿ ಮೂಡಿಬಂದಿದೆ.

ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮದಲ್ಲಿ ವಿಶೇಷವಾಗಿ ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕರು ಹಾಗೂ ಚಿತ್ರ ಸಾಹಿತ್ಯಗಳು, ಅಂಬೇಡ್ಕರ್ ವಾದಿಗಳು ಮತ್ತು ಚಿತ್ರರಂಗದ ಬಹುಮುಖ ಪ್ರತಿಭೆ, ಮಹಾಗುರುಗಳಾದ ಡಾ. ಹಂಸಲೇಖ ರವರು ಹೊಸದಾಗಿ ಹಾಡನ್ನು ಬರೆದದ್ದು ತುಂಬಾ ಅವಿಸ್ಮರಣೀಯ ಅಂತ ಹೇಳಬಹುದು. ಇವರು ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪ್ರೊತ್ಸಾಹ ನೀಡಿದ್ದು, ಸರ್ವ ಸಮುದಾಯದಕ್ಕೆ ಹೊಸ ಶಕ್ತಿ ತುಂಬಿದ್ದು ಮೇರು ವ್ಯಕ್ತಿಯಾಗಿದ್ದಾರೆ.

ವೆನ್ನೆಲಾ ಕೆ.

ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮದಲ್ಲಿ ಮುಖ್ಯವಾದ ಅಂಶವೆಂದರೆ ಇದರಲ್ಲಿ ಒಟ್ಟು ನಾಲ್ಕು ಭಗವಾನ್ ಬುದ್ಧ, ಅಂಬೇಡ್ಕರ್, ಬಸವೇಶ್ವರ ಮುಂತಾದರವರನ್ನು ವಿಷಯಗಳನ್ನು ಪರಿಗಣಿಸಿ ಅಂಬೇಡ್ಕರ್ ಧ್ಯಾನ ಹಾಡುಗಳ ರಚಿಸಿವುದರಲ್ಲಿ ಪ್ರಮುಖವಾಗಿ ರಾಜ್ಯದ ಹೆಸರಾಂತ ಸಾಹಿತಿ, ಪ್ರಗತಿಪರ ಚಿಂತಕರು ಹಾಗೂ ಮಾಜಿ ಅಧ್ಯಕ್ಷರಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರಿನ ಪ್ರೊ.ಎಸ್.ಜಿ.ಸಿದ್ದರಾಮಯ್ಯನವರ
‘ಧೀ ಶಕ್ತಿಯೇ … ಜ್ಞಾನ ಪರ್ವತದ … ಧೀಮಂತ ಧೀಶಕ್ತಿಯೇ …
ಇಂತಹ ಸಾಲುಗಳನ್ನು, ಡಾ. ಕೈ.ವೈ.ನಾರಾಯಣಸ್ವಾಮಿರವರ ದೀಪಾ …. ಎಲ್ಲರೆದೆಯಲಿ … ಹಚ್ಚಿದ ದೀಪಾ .. ಭೂಪಾ … ಭೂಪಾ … ಭೀಮಾ ಭೂಪಾ .. ಬಾಬಾ .. ಸಾಹೇಬ್.. ಜೀವಸ್ವರವೇ … ಬಾಬಾ.. ಹಾಗೂ ರವಿ ಮರಿಯಪ್ಪರವರ ಹತ್ತು ಸಾವಿರ ವಯಲಿನನ್ನು … ವೀಣೆಗಳು ನೂರೆಂಟು … ಕೋಟಿ ಕೋಟಿ ಎದೆ ಸದ್ದಿನ ಡೊಳ್ಳು … ಸಂಯೋಜಿಸಿದರೇ .. ಸಂವಿಧಾನಾ … ಮತ್ತು ಚಿತ್ರ ಸಾಹಿತಿ, ಹೆಸರಾಂತ ಸಂಗೀತ ನಿರ್ದೇಶಕರು ಡಾ. ಹಂಸಲೇಖ ರವರು ನಿನ್ನ ಮೌನಾ … ದೀನ ಗಾನಾ… ನಿನ್ನ ಧ್ಯಾನಾ .. ಸಂವಿಧಾನಾ … ಈ ನಾಲ್ಕು ಅಂಬೇಡ್ಕರ್ ಧ್ಯಾನ ರಚನೆಗೆ ಇವರುಗಳ ಬರೆದಿರುವ ಅದ್ಭುತವಾದ ಅಂಬೇಡ್ಕರ್ ರವರ ಧ್ಯಾನ ಹಾಡುಗಳನ್ನು ನಮ್ಮ ಹಿಂದುಸ್ತಾನಿ ಸಂಗೀತ ಹಾಡುಗಳ ಮೂಲಕ ಕನ್ವರ್ಟ್ ಮಾಡುವ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿತು.

ಹಾಗೆಯೇ ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮವು ಬಹಳಷ್ಟು ಯಶಸ್ವಿಯಾಗಬೇಕಾದರೆ ಈ ಮೊದಲು ಪುಟ್ಟರಾಜ ಗವಾಯಿಗಳ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ಶ್ರೀ ಡಿ. ಕುಮಾರ್ ದಾಸ್ ಅವರ ವಿದ್ವತ್ ಶರೀರದಲ್ಲಿ ‘ಧ್ಯಾನ ಗಾಯನ’ ಹಾಗೂ ಇವರ ತಂಡದ ವತಿಯಿಂದ ನಡೆಸಿಕೊಟ್ಟ ಅದ್ಭತವಾದ ಅಂಬೇಡ್ಕರ್ ರವರ ಧ್ಯಾನವು ಹಿಂದುಸ್ತಾನಿ ಸಂಗೀತದ ಕನ್ವರ್ಟ್ ಮಾಡುವ ಮುಖಾಂತರ ಈ ಹಾಡುಗಳನ್ನು ಬಹಳ ಸೊಗಸಾಗಿ ಮೂಡಿಬಂದಿದ್ದು ಹೊಸ ದಾಖಲೆಗೆ ಸೇರ್ಪಡೆಯಾಗಿದೆ.

ಇನ್ನು ಮುಂಬರುವ ದಿನಗಳಲ್ಲಿ ಅದಷ್ಟು ಹಲವಾರು ವಿನೂತನವಾದ ಭಗವಾನ್ ಬುದ್ಧರ, ಬಸವೇಶ್ವರರ ಹಾಗೂ ವಿಶ್ವದ ವೀರ ವಿದ್ಯಾರ್ಥಿಯಾದ ಮೇರು ರಾಷ್ಟ್ರದ
ನಾಯಕರಾದ ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ರವರ ಹಲವಾರು ಹಾಡುಗಳನ್ನು
ಅನನ್ಯ ಮಾಧ್ಯಮ ಮತ್ತು ಬೆಳ್ಳಿತೆರೆ ಸಂಸ್ಥೆಯ ವತಿಯಿಂದ ಆಯೋಜಿಸಿದರೆ ಇನ್ನುಷ್ಟು ಭಾರತದ ಇತಿಹಾಸದ ಪುಟಗಳಲ್ಲಿ ಮರೆತು ಹೋಗಿರುವ ಹಲವು ಬಗ್ಗೆ ದಾಖಲೆ ಇಲ್ಲದ ನೈಜ ಸಂಗತಿಗಳನ್ನು ಪುನಃ ಹೊಸ ದಾಖಲೆಗೆ ಉಪಯುಕ್ತವಾದ ವಿಶಿಷ್ಟವಾದ ಮೇರು ನಾಯಕನ
ಅಂಬೇಡ್ಕರ್ ರವರ ವಿಚಾರ ಧಾರೆಗಳು ತಾವು ಅನುಭವಿಸಿದ ನೋವು, ನಲಿವು, ಭಾರತದ ರಾಜ್ಯಾಂಗದ ಶಿಲ್ಪಿಯನ್ನು ಮುಂಬರುವ ದಿನಗಳಲ್ಲಿ ಹೊಸ ಪೀಳಿಗೆಯ ಪರಿಚಯಿಸುವ ಕೀರ್ತಿದಾಯಿಕವಾಗಲಿ ಮತ್ತು ಅದಷ್ಟು ಮುಂಬರುವ ದಿನಗಳಲ್ಲಿ ಅಂಬೇಡ್ಕರ್ ರವರ ಆಸಕ್ತಿದಾಯಕ ವಿಚಾರಗಳು ಹಾಗೂ ಸಂಗೀತದ ಬಗ್ಗೆ ಹಲವಾರು ಮಾಹಿತಿಗಳು ಸಮಸಮಸಮಾಜಕ್ಕೆ ತಲುಪುವ ವ್ಯವಸ್ಥೆಗೆ ಸಾಕ್ಷಿಯಾಗಲಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ರಷ್ಯಾದಲ್ಲಿ ಓಂ – ಭರತಾಸ್- ರಾಮ – ರಾವಣ ಲಂಕೇಶ – ಮಾರೀಚ – ಸೀತ ನದಿಗಳು..!

Published

on

  • ಲಕ್ಷ್ಮೀಪತಿ ಕೋಲಾರ, ಸಂಶೋಧಕರು, ಸಂಸ್ಕೃತಿ‌ ಚಿಂತಕರು, ಬೆಂಗಳೂರು

ಸ್ಲಾವ್ ಸಮುದಾಯದ ಲಿತುವೇನಿಯ, ಲಾತ್ವಿಯ, ಬೆಲಾರಸ್,ಉಕ್ರೇನ್ ಮತ್ತು ರಷಿಯಾದಂತಹ ದೇಶಗಳ ನದಿ,ನಗರಗಳು ಸಂಸ್ಕೃತ ಮೂಲದ ಹೆಸರುಗಳನ್ನೆ ಇಂದಿಗು ಉಳಿಸಿಕೊಂಡಿರುವುದು ಆ ಭಾಷೆ ಮತ್ತು ಸಂಬಂಧಿತ ಸಂಸ್ಕೃತಿಯೊಂದಿಗೆ ಅವು ಹಿಂದೊಮ್ಮೆ ಹೊಂದಿದ್ದ ಬಲವಾದ ನಂಟಿಗೆ ಸಾಕ್ಷಿಯಾಗಬಲ್ಲವು.

ಇದರೊಂದಿಗೆ ಉತ್ತರ ಭಾರತದ ಆರ್ಯ ವೈದಿಕರ ಭಾಷೆ ಸಂಸ್ಕೃತಿಯೊಂದಿಗೆ ಸ್ಲಾವ್ ಸಮುದಾಯಕ್ಕೆ ಎಷ್ಟು ನಿಕಟ ಸಂಬಂಧವಿತ್ತೆಂಬುದನ್ನು ಮತ್ತು ನಾಲ್ಕೈದು ಸಾವಿರ ವರ್ಷಗಳ ಹಿಂದೆ ಈ ಎಲ್ಲ ಆರ್ಯ ಸಮುದಾಯಗಳು ಒಟ್ಟಿಗೆ ಒಂದೆಡೆಯೇ ಕಳ್ಳುಬಳ್ಳಿಗಳಾಗಿ ಜೀವಿಸಿದ್ದರೆಂಬುದನ್ನ ಈ ಹಿನ್ನೆಲೆಯಲ್ಲಿ ನಾವು ಗ್ರಹಿಸಬಹುದಾಗಿದೆ.

ಅದರಲ್ಲು ವಿಶೇಷವಾಗಿ ಲಿತುವೇನಿಯ ಮತ್ತು ರಷಿಯಾದ ನದಿಗಳ ಹೆಸರುಗಳು ಎಷ್ಟು ಸಂಸ್ಕೃತಮಯವು (ಇಂಡೋ – ಯುರೋಪಿಯನ್ ಭಾಷಾಮೂಲದ) ಮತ್ತು ವೈದಿಕರ ಪುರಾಣ ಮೂಲದವು ಆಗಿವೆ ಎಂದರೆ, ನಂಬಲಿಕ್ಕು ಅಸಾಧ್ಯ ಎಂಬಂತಿವೆ. ಇದರರ್ಥ ಸ್ಲಾವ್ ಜನರು ವೈದಿಕರ ಪುರಾಣಗಳಿಂದ ಪ್ರೇರಿತಗೊಂಡಿದ್ದಾರೆ ಎಂಬುದಲ್ಲ.

ಬದಲಿಗೆ ವೈದಿಕರ ಇಂದಿನ ಪುರಾಣ – ಸಂಸ್ಕೃತಿ – ಭಾಷೆಗಳು ವೈದಿಕರಿಗೆ ಎಷ್ಟು ಸಂಬಂಧಿಸಿದ್ದೋ ಅದಕ್ಕು ಹೆಚ್ಚಿನದಾಗಿ ಸ್ಲಾವ್ ಸಮುದಾಯಕ್ಕೂ ಸಂಬಂಧಿಸಿದ್ದಾಗಿದ್ದವು. ಹಾಗೆ ನೋಡಿದರೆ ಬ್ರಹ್ಮ – ವೇದ ಮೂಲವು ಕೂಡ ಸ್ಲಾವ್ ಸಮುದಾಯದ ಉತ್ತರ ಧ್ರುವ ಪ್ರದೇಶಕ್ಕೆ ಹೋಗಿ ನಿಲ್ಲುತ್ತದೆ ಎಂಬುದು ಸೋಜಿಗವಾದರು ನಿರ್ವಿವಾದವಾಗಿ ಚಾರಿತ್ರಿಕ ಸತ್ಯವಾಗಿದೆ. 12 – 13 ನೇ ಶತಮಾನಗಳಲ್ಲಿ ಸ್ಲಾವ್ ಜನರು ಕ್ರೈಸ್ತರಾಗಿ ಪರಿವರ್ತಿತರಾಗುವವರೆಗು ಅವರು ಶತಾಂಶ ಮತ್ತು ಥೇಟ್ ಶ್ರೇಷ್ಟ ಆರ್ಯ ವೈದಿಕರೆ ಆಗಿದ್ದರು.

ರಷ್ಯ ಮತ್ತು ಲಿತುವೇನಿಯಾಗಳಲ್ಲಿ ಭರತಾಸ್, ಓಂ, ರಾಮ, ಸೀತ, ಲಂಕೇಶ, ರಾವಣ, ಮಾರೀಚ, ನೆಮುನ (ಯಮುನ), ಕಾಮ, ಯಂತ್ರ, ಶ್ವೇತೆ, ದ್ರವ, ಮೋಕ್ಷ, ಋಗ್ವೇದದ ದಾನವ ಮಾತೆ ದನು ನೆನಪಿನ ದನುಬೆ ಮುಂತಾದ ನದಿಗಳು ಮತ್ತು ನಾರದ (ಈಗ ನರೋದ್ನಯ ಎಂದಿದ್ದರು ಸ್ಥಳೀಯರು ನಾರದ ಬೆಟ್ಟ ಎಂದೇ ಕರೆಯುತ್ತಾರೆ) ಹೆಸರಿನ ಬೆಟ್ಟವು ಇವೆ ಎಂದರೆ ಯಾರೂ ಅಚ್ಚರಿಪಡುವಂತದ್ದೆ.

ಯಾರಿಗಾದರು ಈ ಸಂಗತಿಗಳಲ್ಲಿ ಅನುಮಾನ ಹುಟ್ಟುವುದು ಸಹಜವೆ. ಯಾಕೆಂದರೆ ಸ್ಲಾವ್ – ವೈದಿಕ ಆರ್ಯರ ಮೂಲ ಪ್ರದೇಶವೆ ಉತ್ತರ ದ್ರುವ ಪ್ರದೇಶವಾಗಿತ್ತು ಎಂಬ ಚರಿತ್ರೆಯನ್ನೇ ನಮ್ಮಿಂದ ಮರೆಮಾಚಲಾಗಿತ್ತು ಮತ್ತು ಅದು ಬಹುದೊಡ್ಡ ಸಾಂಸ್ಕೃತಿಕ ರಾಜಕಾರಣವೂ ಆಗಿತ್ತು. ಆದರೆ ತಿಲಕರು ತಮ್ಮ “Arctic Home In the Vedas” ಎಂಬ ಪುಸ್ತಕದಲ್ಲಿ ಉತ್ತರ ಭಾರತದ ವೈದಿಕ ಆರ್ಯರ ತವರು ನೆಲ ಉತ್ತರ ದ್ರುವ ಪ್ರದೇಶವೆ, ಅಂದರೆ ಇಂದಿನ ಲಿತುವೇನಿಯ, ಲಾತ್ವಿಯ, ಬೆಲಾರಸ್ ಪ್ರದೇಶಗಳೇ ಆಗಿದ್ದವು ಎಂದು ಸಮರ್ಥ ಸಾಕ್ಷಾಧಾರಗಳೊಂದಿಗೆ ನಿರೂಪಿಸಿದ್ದಾರೆ.

ರಷ್ಯಾದಲ್ಲಿ ಸಂಸ್ಕೃತ ಭಾಷಾಮೂಲದ ನೂರಾರು ನದಿಗಳಿವೆ. ಭಾರತದಲ್ಲಿ ಕೆಲವು ನದಿಗಳನ್ನ ಹೊರತುಪಡಿಸಿದರೆ ಆ ಪ್ರಮಾಣದ ವೈದಿಕ ಪುರಾಣ ಮೂಲದ ನದಿ ಹೆಸರುಗಳು ಈ ನೆಲದಲ್ಲಿ ಇಲ್ಲವೆಂಬುದು ಪ್ರಾಚೀನ ಕಾಲದಿಂದಲು ಆರ್ಯ ವೈದಿಕರು ಇಲ್ಲಿರಲಿಲ್ಲವೆಂಬುದನ್ನೇ ಸೂಚಿಸುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending