ದಿನದ ಸುದ್ದಿ
ಹೆಚ್ಚು ಬೆಳೆದು ಹೆಚ್ಚೆಚ್ಚು ಜನರಿಗೆ ‘ಇಬ್ಬಡ್ಲ’ದ ಹುಚ್ಚು ಹಿಡಿಸಿಬಿಡಬಹುದು
- ಹರೀಶ್ ಬಿ ಎಸ್, ಸಹಾಯಕ ಪ್ರಾಧ್ಯಾಪಕರು,ತೋಟಗಾರಿಕೆ ಮಹಾವಿದ್ಯಾಲಯ,ಮೈಸೂರು
ಕ್ಯಾಕ್ರಿಕೆ, ಕೆಕ್ಕರಿಕೆ, ಇಬ್ಬಡ್ಲ, ಬನಸ್ಪತೆ…… ಕೇಳಿದ್ದೀರಾ ಈ ಹೆಸರುಗಳನ್ನು? ಕೇರಳಿಗರು ಇದಕ್ಕೆ ಕಕ್ಕರಿ ಅಥವಾ ಪೊಟ್ಟು ವಳ್ಳರಿ ಎನ್ನುವರು. ಸವಿದವರಿಗಷ್ಟೇ ಗೊತ್ತು ಇದರ ರುಚಿ, ಅದೂ ಬಿರುಬೇಸಿಗೆಯಲ್ಲಿ. ದಾಹ ತಣಿಸುವ ಯಾವುದೇ ಹಣ್ಣಿನ ರಸ ಅಥವಾ ತಂಪು ಪಾನೀಯಗಳಿಗೆ ಸಾಟಿಯಾಗಿ ನಿಲ್ಲಬಲ್ಲದು ಈ ದೇಸೀ ಹಣ್ಣು. ಉತ್ತರ ಕನ್ನಡ, ಶಿವಮೊಗ್ಗ, ತುಮಕೂರು, ಚಿತ್ರದುರ್ಗ ಹಾಗೂ ಹಾಸನ ಜಿಲ್ಲೆಯ ಕೆಲವೆಡೆ ಕಾಣಸಿಗುತ್ತದೆ. ಬಿರುಬೇಸಿಗೆಯಲ್ಲಿ ಬಿರಿದ ಈ ಹಣ್ಣಿನ ಮಂದರಸ ಅದೆಷ್ಟು ಸೊಗಸು.
ಈಗ ನೆನೆದರೂ ಮತ್ತೆ ಮತ್ತೆ ಬೇಕೆನಿಸುತ್ತದೆ. ಕರ್ನಾಟಕದಲ್ಲಿ ಇದರ ಪಾನಕ, ಪಾಯಸ ಹೆಚ್ಚೆಂದರೆ ಬಿರಿದ ಹಣ್ಣಿನ ತಿರುಳಿಗೆ ಬೆಲ್ಲ ತೆಂಗಿನ ಕಾಯಿ ತುರಿ ಸೇರಿಸಿ ಸವಿಯುವುದು ವಾಡಿಕೆ. ಬೆಳೆಯುವ ರೈತರು ವಿರಳವಾಗಿರುವುದರಿಂದ ಹಾಗೂ ಒಮ್ಮೆ ರುಚಿ ಹತ್ತಿದವರು ಮತ್ತೆ ಮತ್ತೆ ಕೊಳ್ಳಲು ಮನಸು ಮಾಡುವುದರಿಂದ ತಹಸೀಲು/ಜಿಲ್ಲಾ ಕೆಂದ್ರಗಳು ಹಾಗೂ ನಗರಗಳಲ್ಲಿ ಹಳ್ಳಿಗಾಡಿನ ಈ ಅಪ್ಪಟ ದೇಸೀ ಹಣ್ಣಿಗೆ ಬೇಡಿಕೆ ನಿರಂತರ ಹೆಚ್ಚುತ್ತಿದೆ. ಕೇರಳದ ಕೆಲ ಹೆದ್ದಾರಿಗಳ ಇಕ್ಕೆಲಗಳಲ್ಲೂ ಇದರ ಜ್ಯೂಸ್ ಮಾರುವ ಸಾಲು ಸಾಲು ಮಳಿಗೆಗಳು. ಇದರ ಕೀರ್ತಿ ಬೆಳೆದ ಅಲ್ಲಿನ ಕೆಲ ಕೃಷಿಕರಿಗೆ ಸಲ್ಲಬೇಕು.
ಬಿರಿದ ಹಣ್ಣಿನ ಪರಿಮಳಕ್ಕೆ ಮನಸೋತವರೇ ಹೆಚ್ಚು. ಇದರ ಕಾಯಿಯನ್ನು ಕೂಡ ತರಕಾರಿಯಾಗಿ, ಸಲಾಡಾಗಿ, ಉಪ್ಪಿನಕಾಯಿಯಾಗಿ ಬಳಸಬಹುದು ಜೊತೆಗೆ ಹಣ್ಣಿನ ತಿರುಳು ಬಳಸಿ ಹೆಚ್ಚು ದಿನ ಶೇಖರಿಸಿಡಬಹುದಾದ ಸಿದ್ಧ ಪೇಯ, ಸ್ಕ್ವಾಷ್, ಜಾಮ್, ಸಾಬೂನು ಮುಂತಾದ ಸಿದ್ಧ ಉತ್ಪನ್ನಗಳನ್ನು ತಯಾರಿಸಿ ಕಾಸು ಮಾಡಬಹುದೆಂಬುದು ಹೆಚ್ಚು ಜನರಿಗೆ ತಿಳಿದಿರುವುದು ಅನುಮಾನದ ವಿಚಾರ.
ನಮ್ಮ ಅರಸೀಕೆರೆಯ ಸುತ್ತ-ಮುತ್ತ ಸಾಮಾನ್ಯವಾಗಿ ಇದನ್ನು ಮಳೆಗಾಲದ ಆರಂಭದಲ್ಲಿ ಬಿತ್ತಿ ಗೌರಿಹಬ್ಬದ ಹೊತ್ತಿಗೆ ಕೊಯಿಲು ಮಾಡಿ ಮಾರುವುದು ಸಂಪ್ರದಾಯ. ಬೇಡಿಕೆ ಗಣನೀಯವಾಗಿರುವುದರಿಂದ ಬೆಳೆದವರು ತುಸು ಹೆಚ್ಚೇ ಲಾಭ ಮಾಡುತ್ತಿದ್ದಾರೆ. ಇನ್ನು ಕೆಲವೆಡೆ
ಡಿಸೆಂಬರ್ ನಲ್ಲಿ ಬಿತ್ತಿ ಬೇಸಿಗೆಗೆ ಹಣ್ಣು ಬರುವಂತೆ ಬೆಳೆದು ಮಾರುತ್ತಾರೆ.
ಇದರ ವ್ಯವಸ್ಥಿತ ಕೃಷಿ, ಸಂಸ್ಕರಣೆ ಹಾಗೂ ಮಾರಾಟಕ್ಕೆ ವಿಪುಲ ಅವಕಾಶವಿರುವುದರಿಂದ ವಾಣಿಜ್ಯ ಮಟ್ಟದಲ್ಲಿ ಬೆಳೆಯಲೂಬಹುದು; ಕಿಸೆ ತುಂಬ ಕಾಸೂ ಮಾಡಬಹುದು. ನಾವು ತಡ ಮಾಡಿದರೆ ಕೇರಳಿಗರೇ ನಮ್ಮಲ್ಲೂ ಮಳಿಗೆ ಹಾಕಿ ಮಾರಿಬಿಡುವ ಸಾಧ್ಯತೆಯಿದೆ. ಅವರಿಗೆ ಈ ಅವಕಾಶ ಕೊಡುವ ಬದಲು ನಮ್ಮ ಕೃಷಿಕರೇ ಬೆಳೆದು ಬಳಸಿ ತಮ್ಮ ಹಾಗೂ ಗ್ರಾಹಕರ ಉದರ ತಂಪು ಮಾಡುವುದರ ಜೊತೆಗೆ ಒಂದಷ್ಟು ಲಾಭಮಾಡಿಕೊಳ್ಳಬಹುದಾಗಿದೆ. ಕಲ್ಲಂಗಡಿ, ಕರಬೂಜ, ಸೌತೆ ಇತ್ಯಾದಿ ಬೆಳೆಗಳನ್ನು ನಿಖರ ಕೃಷಿ ಪದ್ಧತಿಯಲ್ಲಿ ದಶಕದಿಂದ ಬೆಳೆಯುತ್ತಿರುವ ನಮ್ಮ ಕೃಷಿಕರಿಗೆ ಇದರ ಕೃಷಿ ಖಂಡಿತ ಕಷ್ಟವಾಗಲಾರದು.
ಮಾಗಿದಾಗ ಬಿರುಕು ಬಿಟ್ಟು ಅದಿರುವ ಪರಿಸರದ ತುಂಬೆಲ್ಲ ಪರಿಮಳ ಪಸರಿಸುವುದು ಇದರ ವಿಶೇಷವಾದಾರೂ ದಿನಾರ್ಧದಲ್ಲಿ ಇದರ ಆಯಸ್ಸು ಮುಗಿಯುವುದೇ ಇದರ ಕೃಷಿಯ ವಿಸ್ತರಣೆ ಮತ್ತು ಮಾರಾಟಕ್ಕಿರುವ ದೊಡ್ಡ ತೊಡಕು. ಹಣ್ಣನ್ನು ರೆಫ್ರಿಜರೇಟಿರನಲ್ಲಿ ಇಟ್ಟರೂ ಇದರ ಮೂಲ ಗುಣಮಟ್ಟ ಕಾಯ್ದುಕೊಳ್ಳಲಾಗದು.
ಹೆಚ್ಚು ಬೆಳೆದು ಹೆಚ್ಚೆಚ್ಚು ಜನರಿಗೆ ಇದರ ಹುಚ್ಚು ಹಿಡಿಸಬಹುದು. ಬೆಳೆದ ಹಣ್ಣು ಇನ್ನೂ ಉಳಿದರೆ ನಮ್ಮ ಶಹರಗಳ ರಸ್ತೆ ಬದಿಗಳಲ್ಲಿ, ಹೋಟೆಲುಗಳಲ್ಲಿ, ಹಾಸ್ಟೆಲುಗಳಲ್ಲಿ…… ಎಲ್ಲೆಂದರಲ್ಲಿ ಮಂದರಸ ಮಾಡಿ ಮಾರಿಬಿಡಬಹುದು. ಬೆಳೆದ ಉತ್ಪನ್ನದ ಪ್ರಮಾಣ ಇನ್ನೂ ಹೆಚ್ಚಾದಲ್ಲಿ ಜಾಮು, ಸ್ಕ್ವಾಷು, ಸಾಬೂನು……ಇನ್ನೂ ಏನೇನನ್ನೋ ಮಾಡಲು ಅವಕಾಶ ಇದ್ದೇ ಇದೆ. ಇದರ ಕೃಷಿ ಹಾಗೂ ಬಳಕೆಯ ಬಗೆಗೆ ತಿಳುವಳಿಕೆ ಇರುವವರು ಹುಡುಕಿದರೆ ಖಂಡಿತ ನಮ್ಮಲ್ಲೇ ಸಿಗುವರು. ಅವರ ಜ್ಞಾನದ ದಾಖಲೆ ಮತ್ತು ಅದರ ಬಳಕೆ ಮಾಡುವ ಜಾಣ್ಮೆ ನಮ್ಮದಾಗಬೇಕಷ್ಟೆ. ಬೆಳೆಯುವುದರಲ್ಲಿ ಮುಂದಿರುವ ನಾವು ಮಾರುವುದರಲ್ಲಿ ಮುಂದಾಗಬೇಕಾದ ಅನಿವಾರ್ಯತೆಯಿದೆ. ಆಗಷ್ಟೇ ಇಬ್ಬಡ್ಲದ ಕೃಷಿಯಿಂದ ಹೆಚ್ಚಿನ ಲಾಭವಾದೀತು.
ಸದ್ಯಕ್ಕೆ ಬಹುತೇಕ ಬೆಳೆಯುವವರೆ ಮುಂದಿನ ಬೆಳೆಗೆ ಇದರ ಬೀಜ ಉಳಿಸಿಕೊಳ್ಳುತ್ತಿರುವುದು ವಾಡಿಕೆ. ಹೆಚ್ಚು ಜನ ಬೆಳೆಯಲು ಪ್ರಾರಂಭಿಸಿದರೆ ಉತ್ತಮ ಗುಣಮಟ್ಟದ ಬೀಜಕ್ಕೂ ಬೇಡಿಕೆ ಬಂದೀತು. ಆಗಲೇ ಬೆಳೆದ ಅನುಭವ ಉಳ್ಳವರು ಬೀಜೋತ್ಪಾದನೆಯನ್ನೇ ಮಾಡಲು ಅವಕಾಶವಿದೆ; ಜೊತೆಗೆ ಹೆಚ್ಚಿನ ಲಾಭವನ್ನೂ ಕೂಡ.
ನಮ್ಮ ವಿವಿಗಳು ಅದೇಕೋ ಇದರ ಬಗೆಗಿನ ಸಂಶೋಧನೆ ಮತ್ತು ವಿಸ್ತರಣೆಯಲ್ಲಿ ಹಿಂದೆ ಬಿದ್ದುಬಿಟ್ಟಿವೆ. ಇನ್ನಾದರೂ ಎಚ್ಚೆತ್ತುಕೊಂಡು ಇದರ ಹಿಂದೆ ಅವು ಬೀಳಲಿ ಎಂಬುದು ನಮ್ಮ ಕೃಷಿಕರ ಆಶಯ.
ಸ್ಥಳೀಯ ಬೇಡಿಕೆ, ರುಚಿ ತೋರಿಸಿದರೆ ನಗರಿಗರಿಗೂ ಇಷ್ಟವಾಗುವ ಇಬ್ಬಡ್ಲ, ಕೆಕ್ಕರಿಕೆ, ಬನಸ್ಪತ್ರೆಯ ತಾಜಾ ಹಣ್ಣು ಹಾಗೂ ಸಂಸ್ಕರಿಸಿದ ಉತ್ಪನ್ನಗಳು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲೂ ರಾರಾಜಿಸಬಹುದು. ಏನಂತೀರಿ? ಮಾರುಕಟ್ಟೆಯಲ್ಲಿ ಸಿಕ್ಕರೆ ಮರೆಯದೆ ರುಚಿ ನೋಡಿ. ಇವುಗಳ ಕೃಷಿ ಮಾಡುವ ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಲೇಖಕರನ್ನು 0821 2970411 /9480557634 ನಂಬರಿನಲ್ಲಿ ಸಂಪರ್ಕಿಸಬಹುದಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಇಂದಿನಿಂದ ಏ.3 ರವರೆಗೆ ಸೂಳೆಕೆರೆಗೆ ನೀರು ಬಿಡುಗಡೆ
ಸುದ್ದಿದಿನ,ದಾವಣಗೆರೆ: ಭದ್ರಾ ಜಲಾಶಯ ಯೋಜನೆ ವ್ಯಾಪ್ತಿಗೆ ಬರುವ ದೇವರಬೆಳಕೆರೆ ಪಿಕ್ಅಪ್ ಅಣೆಕಟ್ಟಿನ ಸ್ಕವರಿಂಗ್ ಸ್ಪೂಯೀಸ್ ಗೇಟ್ ಮುಖಾಂತರ ಜಲಾಶಯದ ಡೆಡ್ ಸ್ಟೋರೇಜ್ ನೀರನ್ನು ಸೂಳೆಕೆರೆ ಹಳ್ಳಕ್ಕೆ ಮಾರ್ಚ್ 28 ರಿಂದ ಏಪ್ರಿಲ್ 3 ರವರೆಗೆ ಪ್ರತಿದಿನ 20 ಕ್ಯೂಸೆಕ್ಸ್ಗಳಲ್ಲಿ ಜನ-ಜಾನುವಾರು ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸಲು ಹಾಗೂ ಅಕ್ಕಪಕ್ಕದ ಗ್ರಾಮಗಳ ಕುಡಿಯುವ ನೀರಿನ ಉದ್ದೇಶಕ್ಕೆ ಬಿಡಲಾಗುತ್ತಿದೆ.
ಈ ವೇಳೆ ಹಳ್ಳಕ್ಕೆ ದನ ಕರಗಳನ್ನು ಇಳಿಸುವುದಾಗಲಿ, ಪಂಪ್ಸೆಟ್ಗಳಿಂದ ನೀರೆತ್ತುವುದುನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಕನೀನಿನಿ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ
ಸುದ್ದಿದಿನ ಡೆಸ್ಕ್ : ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.
ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಇದೇ 30 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಇದೇ ವೇಳೆ ಬಿಹಾರದಲ್ಲಿ ನಾಮಪತ್ರ ಸಲ್ಲಿಕೆಗೆ ನಾಳೆ ಕಡೆ ದಿನವಾಗಿದ್ದು, ಈ ತಿಂಗಳ 30 ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಏಪ್ರಿಲ್ 2ರಂದು ನಾಮತ್ರ ಹಿಂಪಡೆಯುವಿಕೆಗೆ ಕೊನೆಯ ದಿನವಾಗಿರುತ್ತದೆ.
ಏಪ್ರಿಲ್ 19 ರಂದು 17 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಅದರಂತೆ ತಮಿಳುನಾಡಿನಲ್ಲಿ 39, ರಾಜಸ್ಥಾನದಲ್ಲಿ 12, ಉತ್ತರ ಪ್ರದೇಶದಲ್ಲಿ 8, ಮಧ್ಯಪ್ರದೇಶದಲ್ಲಿ 6, ಉತ್ತರಾಖಂಡ, ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ತಲಾ 5 , ಬಿಹಾರದಲ್ಲಿ 4, ಪಶ್ಚಿಮ ಬಂಗಾಳದಲ್ಲಿ 3, ಅರುಣಾಚಲ ಪ್ರದೇಶ, ಮಣಿಪುರ, ಮೆಘಾಲಯದಲ್ಲಿ ತಲಾ 2 ಮತ್ತು ಛತ್ತೀಸ್ಗಢ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ, ಅಂಡಮಾನ್-ನಿಕೋಬಾರ್ ದ್ವೀಪಗಳು, ಜಮ್ಮು-ಕಾಶ್ಮೀರ, ಲಕ್ಷದ್ವೀಪ ಮತ್ತು ಪುದುಚೇರಿಯಲ್ಲಿ ತಲಾ ಒಂದು ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.
ಎರಡನೇ ಹಂತದಲ್ಲಿ 89 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ನಾಳೆ ಅಧಿಸೂಚನೆ ಹೊರಡಿಸಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
ಸುದ್ದಿದಿನ ಡೆಸ್ಕ್ : 18ನೇ ಲೋಕಸಭೆಗೆ ಸದಸ್ಯರನ್ನು ಆಯ್ಕೆ ಮಾಡಲು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಭಾರತ ಚುನಾವಣಾ ಆಯೋಗ, ಸಕಲ ಸಿದ್ಧತೆಯೊಂದಿಗೆ ಸಜ್ಜಾಗಿದೆ.
ದೇಶದಲ್ಲಿ ಚುನಾವಣೆಗಳನ್ನು ಪಾರದರ್ಶಕವಾಗಿ ಹಾಗೂ ಅತ್ಯಂತ ವಿಶ್ವಾಸಾರ್ಹ ರೀತಿಯಲ್ಲಿ ನಡೆಸುವ ಸಂಕಲ್ಪದೊಂದಿಗೆ ಚುನಾವಣಾ ಆಯೋಗ, ಸಮಸ್ತ ಚುನಾವಣಾ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ತಂತ್ರಜ್ಞಾನದ ನೆರವನ್ನು ಬಳಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮತದಾರರು, ಚುನಾವಣಾ ಸಿಬ್ಬಂದಿ ಹಾಗೂ ಆಯೋಗಕ್ಕೆ ನೆರವಾಗುವ ಹಲವು ಆಪ್ಗಳನ್ನು ಚುನಾವಣಾ ಆಯೋಗ ಅಭಿವೃದ್ಧಿಪಡಿಸಿದೆ.
ಈ ಪೈಕಿ ಇಂದು ಸಿ-ವಿಜಿಲ್ ಆಪ್ ಬಗ್ಗೆ ಮಾಹಿತಿ.
ದೇಶದಲ್ಲಿ ಚುನಾವಣೆಗಳ ವೇಳೆ ನಡೆಯುವ ಅಕ್ರಮಗಳು, ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಪ್ರಕರಣಗಳ ಮೇಲೆ ಕಣ್ಣಿಡುವುದು ಕೇವಲ ಚುನಾವಣಾ ಸಿಬ್ಬಂದಿಯ ಕೆಲಸವಲ್ಲ. ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು. ಹಾಗಾಗಿ ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರು ಆಯೋಗಕ್ಕೆ ದೂರು ತಲುಪಿಸಲು ಭಾರತ ಚುನಾವಣಾ ಆಯೋಗ ಸಿ-ವಿಜಿಲ್ ಆಪ್ ಅನ್ನು ಅಭಿವೃದ್ಧಿ ಪಡಿಸಿದೆ.
ದೂರುಗಳನ್ನು ಆನ್ಲೈನ್ ಮೂಲಕ ಆಯೋಗಕ್ಕೆ ರವಾನಿಸಲು ಈ ಆಪ್ ನೆರವಾಗುವುದು. ಯಾವುದೇ ಚುನಾವಣಾ ಅಕ್ರಮಗಳ ಬಗ್ಗೆ ಧ್ವನಿಮುದ್ರಣ, ವಿಡಿಯೋ ಚಿತ್ರದ ತುಣುಕುಗಳು ಮತ್ತು ಫೋಟೊ ಮೊದಲಾದ ದಾಖಲೆಗಳನ್ನು ಸಾರ್ವಜನಿಕರು ಇದರ ಮೂಲಕ ಕಳುಹಿಸಬಹುದು.
ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮಾಡುವ ಖರ್ಚು-ವೆಚ್ಚ, ಮತದಾರರ ಮನವೊಲಿಕೆಗೆ ಆಮಿಷಗಳ ಬಳಕೆ ಮೊದಲಾದ ಅಕ್ರಮಗಳ ಬಗ್ಗೆ ದೂರು ನೀಡಲು ಇದನ್ನು ಬಳಸಬಹುದು. ಒಂದುನೂರು ನಿಮಿಷಗಳಲ್ಲಿ ಚುನಾವಣಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
ದೇಶದ ಯಾವ ಮೂಲೆಯಲ್ಲೇ ಆಗಲಿ ನಡೆಯುವ ಚುನಾವಣಾ ಅಕ್ರಮ ಅಥವಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ತಾವು ನೀಡಿದ ದೂರುಗಳನ್ನು ಆಯೋಗ ಪರಿಗಣಿಸಿದೆಯೇ ಎನ್ನುವ ವಿವರಗಳನ್ನು ಸಹ ಸಾರ್ವಜನಿಕರು ಸಿ-ವಿಜಿಲ್-ಆಪ್ ಮೂಲಕ ವೀಕ್ಷಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ6 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ6 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ6 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ಕವಿತೆ | ನೆನಪು
-
ದಿನದ ಸುದ್ದಿ3 days ago
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
-
ದಿನದ ಸುದ್ದಿ2 days ago
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ
-
ದಿನದ ಸುದ್ದಿ1 day ago
ಇಂದಿನಿಂದ ಏ.3 ರವರೆಗೆ ಸೂಳೆಕೆರೆಗೆ ನೀರು ಬಿಡುಗಡೆ