ಭಾಮಿನಿ
ಆಂತರ್ಯ..!?

ದಿನವೂ ಸಂಜೆ ನಮ್ಮ ಮನೆ ಎದುರಿನ ಮನೆ ಮುಂದೆ ಅಕ್ಕ ಪಕ್ಕದ ಸುಮಾರು ಐದಾರು ಹೆಂಗಸರು ಕೂತು ಹರಟೆ ಹೊಡಿತಿರ್ತಾರೆ. ಅವರು ಸ್ವಲ್ಪ ಜೋರಾಗಿ ಮಾತಾಡಿದ್ರು ನಮಗೆ ನೀಟಾಗಿ ಕೇಳಿಸುತ್ತೆ. ಹೀಗೆ ನಿನ್ನೆ ಸಂಜೆ ಗಿಡಗಳಿಗೆ ನೀರು ಹಾಕೋವಾಗ ಅವರ ಮಾತುಗಳು ನನ್ನ ಕಿವಿಗೂ ಬಿದ್ವು. ಅವರಲ್ಲಿ ಒಬ್ಬರು ತಿಂಗಳ ಹಿಂದೆ ಅಷ್ಟೇ ತಮ್ಮ ಮಗಳ ಮದ್ವೆ ಮಾಡಿ ಗಂಡನ ಮನೆಗೆ ಕಳ್ಸಿದ್ರು.
ಈ ಬಗ್ಗೆ ವಿಚಾರಿಸ್ತಾ ಒಬ್ಬರು “ಏನಮ್ಮ ,ಮಗಳು ಬಂದಿದ್ಲ ಮನೆಗೆ?” ಅಂತ ಕೇಳಿದ್ರು, ಅದಕ್ಕೆ ಆ ತಾಯಿ ಜೋತು ಮುಖ ಹಾಕಿ “ಇಲ್ಲ ಅಕ್ಕ ” ಅಂದ್ಲು. ಅಲ್ವೇ ಒಬ್ಬಳೇ ಮಗಳು, ತಿಂಗಳಾಯಿತು ನೋಡದೆ ಹೋಗಿ ಕರ್ಕೊಂಡು ಬರ್ಬಾರ್ದ, ಅಂದಿದ್ದೆ ತಡ ಆ ತಾಯಿ ಕಣ್ಣೀರು ಹಾಕ್ತಾ ಮುಂದಿನವಾರ ಅವಳ ಹುಟ್ಟಿದಬ್ಬ ಇದೆ,ಕಳಿಸಿಕೊಡಿ ಅಂತ ಒಂದು ವಾರದಿಂದ ಕೇಳ್ತಿದ್ರೆ ಒಪ್ಪಕೊಳ್ತಾನೆ ಇಲ್ಲ ಅಂತ ಮಾತು ಮುಗ್ಸೋವಷ್ಟರಲ್ಲಿ ನನಗರಿವಿಲದೆ ನನ್ನ ಕಣ್ಣಲ್ಲೂ ನೀರು ಜಿನುಗಿತ್ತು ನೋಡಿ!
ಎಷ್ಟು ವಿಪರ್ಯಾಸ ಅಲ್ಲವೇ ? ತಾವು ಹೆತ್ತು ,ಹೊತ್ತು ,ಸಾಕಿ ,ಬೆಳೆಸಿ ,ಓದಿಸಿ ,ಪ್ರೀತಿಸಿ,ಮುದ್ದಿಸಿದ ಮಗಳು, ದಿನವೂ ಮನೆ ತುಂಬಾ ಓಡಾಡ್ತಾ, ತಂದೆ ತಾಯಿಯ ಅಕ್ಕರೆಯಲ್ಲಿ ಬೆಳೆದು,ಅವರ ನೋವು ಮರೆಸಿದ ಮಗಳು, ಮದುವೆ ಆದ ತಕ್ಷಣ ವೇ ಇನ್ನೊಬ್ಬರ ಸ್ವತ್ತಾಗುತ್ತಾಳೆ ಅಲ್ವಾ? ಅದುವರೆಗೂ ತಮ್ಮ ಕಣ್ಣೆದುರೇ ಓಡಾಡಿಕೊಂಡಿದ್ದ ಮಗಳನ್ನ ಈಗ ಒಮ್ಮೆ ನೋಡಬೇಕು ಅಂತ ಅನಿಸಿದರೂ ಅತ್ತೆ ಮನೆಯವರ ಒಪ್ಪಿಗೆ ಪಡೆಯಬೇಕು.
ಅಳಿಯನ ಆಣತಿ ಪಡೆಯಬೇಕು. ಅಕಸ್ಮಾತ್ ಅವರು ಒಪ್ಪಿ ಕಳಿಸಿದರು ಕೂಡ ಇಷ್ಟೇ ದಿನಕ್ಕೆ ವಾಪಾಸ್ ಬರಬೇಕು ಅನ್ನೋ ಕಡಿವಾಣ. ತಂದೆ ತಾಯಿಯ ಮನೆಯಲ್ಲಿ ಕಷ್ಠವೋ,ಸುಖವೊ,ಮಗಳು ನೆಮ್ಮದಿಯ ಬದುಕನ್ನು ಕಂಡಿರುತ್ತಾಳೆ. ಮದುವೆಯ ನಂತರ ಅತ್ತೆಯ ಮನೆಯಲ್ಲೂ ಅದೇ ನೆಮ್ಮದಿಯ ಬದುಕನ್ನು ಬದುಕಲು ಪ್ರಯತ್ನಿಸುತ್ತಾಳೆ, ಪ್ರತಿ ಕ್ಷಣವೂ ತಂದೆ ,ತಾಯಿ,ಒಡ ಹುಟ್ಟಿದವರ ಕಾಣಲು ಹಂಬಲಿಸುತ್ತಾಳೆ..ಗಂಡನ ಮನೆಯ ಎಲ್ಲರ ಜೊತೆ ಹೊಂದಿಕೊಳ್ಳುವ,ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿರುತ್ತಾಳೆ, ಆಗ ಅವಳಿಗೆ ಹೊಂದೊಕೊಳ್ಳಲು ಸ್ವಲ್ಪ ಸಮಯ ಕೊಡಬೇಕು. ಇಲ್ಲವಾದಲ್ಲಿ ಮಾನಸಿಕವಾಗಿ ಅವಳು ಒತ್ತಡಗಳ ಸುಳಿಯಲ್ಲಿ ಹುದುಗಿಹೋಗುತ್ತಾಳೆ. ಆಗ ಅವಳಿಗೆ ಬೇಕಾಗಿರುವುದು ತಾಯಿಯಂಥ ಪ್ರೀತಿ,ಕಾಳಜಿ .
ಈ ಥರದ ಪರಿಸ್ಥಿತಿಯನ್ನು ಮದುವೆ ಆದ ಪ್ರತಿ ಹೆಣ್ಣು ಅನುಭವಿಸಿಯೇ ಇರುತ್ತಾಳೆ. ಪ್ರತಿ ಅತ್ತೆಯು ಮಗಳಾಗಿದ್ದು,ಮತ್ತೊಂದು ಮನೆಯ ಸೊಸೆಯಾಗಿ,ನಂತರ ಅತ್ತೆಯ ಪದವಿಗೆ ಏರಿರುತ್ತಾಳೆ. ಅವಳು ಕೂಡಾ ಈ ಎಲ್ಲ ನೋವುಗಳನ್ನು ಅನುಭವಿಸಿಯೇ ಇರುತ್ತಾಳೆ. ಆದರೂ ಅದೆಲ್ಲವನ್ನು ಮರೆತು ಸೊಸೆಯಮೇಲೆ ದರ್ಬಾರು ಮಾಡುವುದು ಎಷ್ಟು ಸರಿ ???ಅತ್ತೆ ತನ್ನನ್ನು ಮಗಳ ಹಾಗೆ ಪ್ರೀತಿಸಬೇಕು ಅನ್ನೋದು ಎಲ್ಲ ಸೊಸೆಯಂದಿರಾ ಬಯಕೆಯೇ ಆಗಿರುತ್ತದೆ.
ಇಂದಿನ ಕೂಡು ಕುಟುಂಬಗಳು ಒಡೆದು,ಚಿಕ್ಕ ಕುಟುಂಬಗಳಾಗುವಲ್ಲಿ “ಸಂಪೂರ್ಣ ಪಾತ್ರ ಸೊಸೆಯದೇ” ಅಂತ ವಾದಿಸುವ ಎಷ್ಟೋ ಬರವಣಿಗೆ ಓದಿದ್ದೇನೆ,ಹೇಳಿಕೆಗಳನ್ನು ಕೇಳಿದ್ದೇನೆ…ಒಬ್ಬ ಸೊಸೆಯಾಗಿ ನಾನೂ ಕೆಲ ವಿಚಾರಗಳನ್ನು ಇಲ್ಲಿ ಹೇಳ ಬಯಸುವೆ.
ಹೀಗೆ ಯೋಚಿಸಿ ಒಬ್ಬ ವ್ಯಕ್ತಿಗೆ ಬೇಕಾದ ಎಲ್ಲ ಪ್ರೀತಿಯು ಸಿಕ್ಕಾಗ ಅವನು ಬೇರೆ ಏನನ್ನು ಹಂಬಲಿಸಲಾರ. ಕಾರಣ ಪ್ರೀತಿ ಸಂಬಂಧಗಳನ್ನು ಕೂಡಿಸುತ್ತದೆಯೇ ಹೊರತು ಕಳೆಯುವುದಿಲ್ಲ. ಹಿರಿಯರು ಅಂತ ಇರೋ ಮನೇಲಿ ಮಗಳು, ಸೊಸೆ ಎನ್ನುವ ಭೇದ ವೇ ಈ ಸಮಸ್ಯೆಯ ಮೂಲ ಕಾರಣ. ಮದುವೆ ಆದಮೇಲೆ ಮಗನ ಪ್ರೀತಿ ಇಬ್ಭಾಗವಾಗುವುದು ಸಹಜ,ಎಂದು ತಿಳಿದಿದ್ದರೂ ಸಹ ಮದುವೆ ಮಾಡಿರುತ್ತಾರೆ ಅಂದಮೇಲೆ ಆ ಸತ್ಯವನ್ನು ಅವರೇಕೆ ಒಪ್ಪಿಕೊಳ್ಳುವುದಿಲ್ಲ..? ತಮ್ಮ ನೋವಿಗೆ ಕೇವಲ ಸೊಸೆಯನ್ನೇ ಹೊಣೆ ಮಾಡುವುದು ಎಷ್ಟು ಸರಿ ?ಸಾಮಾನ್ಯವಾಗಿ ಒಂದು ತಪ್ಪು ಮಗಳಿಂದ ಆದರೆ ಅದು ಆಕಸ್ಮಿಕ, ಅದೇ ತಪ್ಪು ಸೊಸೆಯದಾದರೆ? ಅಲ್ಲಿ ನಡೆವ ಸಂಗತಿಯೇ ಬೇರೆ. ಮಗಳಿಗೆ ಸ್ವಲ್ಪ ಜ್ವರ ಬಂದರು ಅಯ್ಯೋ ಪಾಪ ಅಂತ ಅದೆಷ್ಟು ಮರುಗುವಳೋ ಈ ಅತ್ತೆ. ಅದೇ ಸೊಸೆ ಮನೆ,ನೌಕರಿ,ಮಗು ಹೀಗೆ ಕಾಲಿಗೆ ಚಕ್ರ ಕಟ್ಟಿಕೊಂಡು ,ವಿಶ್ರಾಂತಿಯನ್ನು ಅರಿಯದೆ ಅದೆಷ್ಟು ದಣಿದರು ಮೆಚ್ಚುಗೆಯ ಒಂದು ಮಾತೂ ಇಲ್ಲ.
ಆದರೆ ಅವಳ ಎಲ್ಲ ಕೆಲಸಗಳಲ್ಲೂ ತಪ್ಪುಗಳನ್ನು ಹುಡುಕುವ ಕಾಯಕ ಮಾತ್ರ ನಿರಂತರ. ಮಗಳೊಬ್ಬಳೇ ಅಡಿಗೆ ಮನೇಲಿ ಕೆಲಸ ಮಾಡಿದರೆ ಅದೆಷ್ಟು ಬೇಗ ಹೋಗಿ ಸಹಾಯ ಮಾಡುವಾಗ ಇದ್ದ ಕಾಳಜಿ ,ಸೊಸೆಯ ಮೇಲೆ ಯಾಕಿಲ್ಲ?ಅವಳು ಕೆಲಸಕ್ಕೆ ಹೋಗುವುದು ತಿಳಿದಿದ್ದರೂ ಒಂದೇ ಒಂದು ಚಿಕ್ಕ ಸಹಾಯ ಮಾಡಬೇಕು ಅಂತ ಏಕೆ ಅನಿಸುವುದಿಲ್ಲ ? ಇಂತಹ ಪ್ರತಿ ಘಟನೆಯು ಸೊಸೆಗೆ ತನ್ನ ತಾಯಿಯ ನೆನಪಿಸದೆ ಇರವು. ಬೇಕು ಅನಿಸಿದಾಗ ಅವರನ್ನು ನೋಡಲಾಗದ ಅಸಹಾಯಕತೆ. ದಿನವೂ ಮಲಗುವಾಗ ಅವರಿಗಾಗಿ ಒಂದು ಪ್ರಾರ್ಥನೆ ಮಾಡುವಾಗ ಅವರನ್ನು ನೆನೆದು ಕಣ್ಣೀರಿಡುವುದು. ಆಗ ಅವಳ ಕಣ್ಣೊರೆಸುವುದು ಮಾತ್ರ ಅವಳ ಆಪ್ತ ಗೆಳೆಯ ಅವಳ ತಲೆದಿಂಬು. ನಿಜ, ಇಂತಹ ಅದೆಷ್ಟೊ ಕಥೆಗಳು ಈ ತಲೆದಿಂಬಿನ ಅಡಿಯಲ್ಲಿ ಹೂತು ಹೋಗಿವೆಯೋ??ಇಂತಹ ಅದೆಷ್ಟೋ ಒತ್ತಡಗಳ ಅವಳ ತಾಳ್ಮೆ ಅದೆಷ್ಟು ಸಹಿಸೀತು?
ಒಮ್ಮೆ ತಾಳ್ಮೆ ಗೆಟ್ಟು ಮಾತಾಡಿದರೆ ಅಲ್ಲಿಯೂ ತಪ್ಪು ಅವಳದ್ದೇ. ಇರಲಿ, ಹೀಗೆ ಹೇಳ್ತ ಹೋದ್ರೆ ಈ ಲೇಖನಕ್ಕೆ ಕೊನೆಯೇ ಇರಲ್ಲ . ಇದೆಲ್ಲವನ್ನು ಹೇಳುವುದರ ಉದ್ದೇಶ ಇಷ್ಟೇ. ಸಂಬಂಧಗಳ ಅಡಿಪಾಯ ಪ್ರೀತಿ. ಅದರಲ್ಲಿ ಭೇದ ಇರಬಾರದು..ಮಗಳ ಮೇಲಿನ ಕೊಂಚ ಮಮತೆ ಸೊಸೆಯ ಮೇಲು ಇರಲಿ. ಅವಳ ತ್ಯಾಗ ,ಕಷ್ಟಗಳಿಗೊಂದು ‘ಮೆಚ್ಚುಗೆ’ ಇರಲಿ. ಅವಳ ತಪ್ಪುಗಳನ್ನು ತಿದ್ದಿ ಹೇಳುವ ಗುಣ ಇರಲಿ ಹೊರತು ಅವಳ ಹಿಂದೆ ಆಡಿಕೊಳ್ಳುವ ಸಣ್ಣತನ ಇರದಿರಲಿ. ಒಂದು ಹೆಣ್ಣು ಮದುವೆಯಾದಮೇಲೆ ತನ್ನ ಇಷ್ಟದ ನ ತವರನ್ನು ಬಿಟ್ಟು ಬರುತ್ತಾಳೆ. ತನ್ನೆಲ್ಲಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾಳೆ. ಅಷ್ಟೇ ಯಾಕೆ ಅವಳ ಹೆಸರು,ಅಸ್ತಿತ್ವ ಎಲ್ಲವೂ ಬದಲಾಗುತ್ತದೆ. ಇದೆಲ್ಲದರ ಬದಲಾಗಿ ಅವಳು ಬಯಸುವುದು “ಕೊಂಚ ಪ್ರೀತಿ” ಮಾತ್ರ.
ಈ ಪ್ರೀತಿಗೇಕೆ ಮಗಳು, ಸೊಸೆ ಎನ್ನುವ ಭೇದ ಅಲ್ಲವೇ ? ಚಪ್ಪಾಳೆ ಹೇಗೆ ಒಂದೇ ಕೈ ಇಂದ ಆಗಿವುದಿಲ್ಲವೋ ಹಾಗೆ ತಪ್ಪು ಕೂಡ ಒಬ್ಬರದೇ ಆಗಿರಲು ಸಾಧ್ಯವಿಲ್ಲ.ಚಿಕ್ಕವರು ತಪ್ಪು ಮಾಡಲು ಕಾರಣ ದೊಡ್ಡವರ ನಡುವಳಿಕೆಯೇ ಕಾರಣ ಅಲ್ಲ್ವೆ??ಸ್ವಲ್ಪ ಕಾಳಜಿ ,ಕೊಂಚ ಪ್ರೀತಿ ಇದ್ದರೆ ಅದೇ ಸ್ವರ್ಗ .,…ಅಲ್ಲವೇ..?
– ಕವಿತ ವಸಂತ್
ಸಂಗೀತ ಶಿಕ್ಷಕಿ
ಸುದ್ದಿದಿನ.ಕಾಂ|ವಾಟ್ಸಾಪ್|9986715401

ಭಾಮಿನಿ
ಲಾಸ್ಟ್ ಸ್ಟಾಪ್ ಬಸ್ನಲ್ಲಿ ಸಿಕ್ಕ [email protected]!

- ಆಕಾಶಪ್ರಿಯ
ಬಸ್ಸಿನಲ್ಲಿ ಸಿಕ್ಕವರು, ನನ್ನೀ ಬದುಕಿನ ಮಹಾಕಾವ್ಯಕ್ಕೊಂದು ಪುಟವಾದವರು, ಸ್ಮೃತಿಪಟಲಕ್ಕೊಂದು ಅಚ್ಚಳಿಯದ ನೆನಪಾದವರು ನೂರಾರು ಜೀವಗಳು. ನನ್ನದಲ್ಲದ ಊರಿನ, ನನ್ನವರಲ್ಲದ ಜನರ ನಡುವೆಯೂ ನನ್ನವರೆನಿಸಿದವರೂ, ಒಂದೊಮ್ಮೆ ಪಯಣದಲ್ಲಿ ಜೊತೆಯಾದವರು ಮನದೊಳಗೆ ಜೀವಂತವಾಗಿ ಬರಹಕ್ಕೆ ಅಕ್ಷರವಾಗಿದ್ದಾರೆ. ಅನುಭವದ ವಿಸ್ತರಣೆಗೆ ಕಾರಣರಾಗಿದ್ದಾರೆ. ಆಗಾಗ ಕಾಡಿದ್ದಾರೆ, ಅಪರೂಪಕ್ಕೆ ಕೆಲವರು ಸಂತಸದ ಕಣ್ಣಿನ ಹನಿಗಳಾಗಿದ್ದಾರೆ. ಹಲವರು ನಗುವಿನ ರುವಾರಿಗಳಾಗಿದ್ದಾರೆ. ಮತ್ತೆ ಕೆಲವರು ನನ್ನನ್ನೇ ಮೌನಿಯಾಗಿಸಿದ್ದಾರೆ. ಕೆಲವರಂತೂ ಮರೆತಷ್ಟೂ ನೆನಪಾಗಿದ್ದಾರೆ. ಅಂತದೇ ಆತ್ಮೀಯರಲ್ಲದ ಆತ್ಮೀಯರ ಜೊತೆಗಿನ ಒಂದು ಪಯಣದ ಕಥೆ ಈ ” ಲಾಸ್ಟ್ ಸ್ಟಾಪ್ ಬಸ್ನಲ್ಲಿ ಸಿಕ್ಕ [email protected]”
ನಾನು ನನ್ನ ಗೆಳತಿ ಸರ್ಕಾರಿ ಬಸ್ನಲ್ಲಿ ಎಲ್ಲಿಯೋ ಹೊರಟ್ಟಿದ್ದೆವು. ನಾವು ಇಳಿಯಬೇಕಾದ್ದು ಲಾಸ್ಟ್ ಸ್ಟಾಪ್ ಆಗಿದ್ದ ಕಾರಣ, ಬಸ್ನಲ್ಲಿ ಸೀಟ್ ಸಿಕ್ಕ ತಕ್ಷಣ ಖುಷಿಯಿಂದ ಕುತ್ಕೊಂಡೆವು. ನಂತರ ನೆಕ್ಸ್ಟ್ ಸ್ಟಾಪ್ನಲ್ಲಿ ಒಬ್ರು ಅಂಕಲ್ ಹತ್ತಿದ್ರು. ಸೀದಾ ನಮ್ಮ ಸೀಟ್ ಹತ್ರ ಬಂದು ಇದು ಸೀನಿಯರ್ ಸಿಟಿಜನ್ ಸೀಟ್ ಏಳಿ ಮೇಲೆ ಅಂತ ಆರ್ಡರ್ ಮಾಡಿದ್ರು.
ಸರಿ ಅಂತ ಪಕ್ಕದಲ್ಲಿ ಕೂತಿದ್ದ ಫ್ರೆಂಡ್ ಸೀಟ್ ಬಿಟ್ಟು ನಿಂತ್ಕೊಂಡ್ರು. ಆ ಅಂಕಲ್ಗೆ ಮನಸ್ಸಲ್ಲೇ ಇಬ್ರೂ ಬೈಕೊಂಡಿದ್ದೇನು ಸುಳ್ಳಲ್ಲ. ಯಾಕಂದ್ರೆ ಜೊತೆಗೆ ಮಾತಾಡ್ತಾ ಆರಾಮಾಗಿ ಹೋಗ್ತಿದ್ವು, ಇವ್ರು ಬಂದು ಎದ್ದೇಳಿಸಿದ್ರಲ್ಲ ಅಂತ ಸ್ವಲ್ಪ ಕೋಪ ಬೇಜಾರು ಎರಡು ಒಟ್ಟೊಟ್ಟಿಗೆ ಬಂತು. ಸಾಮಾನ್ಯವಾಗಿ ಬಸ್ ಫ್ರೆಂಟ್ ಅಲ್ಲಿ ಮಹಿಳೆಯರಿಗೆ ಹಿಂಬದಿ ಗಂಡಸರಿಗೆ ಸೀಟ್ಸ್ ಇರತ್ತೆ, ಬಟ್ ಇವ್ರು ಯಾಕೆ ಫ್ರೆಂಟ್ ಸೀಟ್ ಗೆ ಬಂದು ಸೀಟ್ ಬಿಡುಸ್ಕೊಂಡ್ರು….. ಘಾಟಿ ಮನುಷ್ಯ ಅನಿಸುತ್ತೆ!, ವಾದ ಬೇಡ ಅಂತ ಸುಮ್ಮನಾದ್ವಿ.
ಬಸ್ ಸ್ವಲ್ಪ ದೂರ ಕ್ರಮಿಸಿತ್ತು. ಒಬ್ಳೆ ಸುಮ್ನೆ ಕೂರೋಕೆ ಬೇಜಾರು, ಸೋ ಕಿವಿಗೆ ಇಯರ್ ಫೋನ್ ಸಿಕ್ಕಿಸಿ ಹಾಡು ಕೇಳ್ತಿದ್ದೆ. ಬಸ್ ಮುಂದೆ ಸಾಗ್ತಿತ್ತು, ನಿಧಾನವಾಗಿ ಅಂಕಲ್ ಮಾತು ಶುರುಮಾಡಿದ್ರು. ಇದು ಸೀನಿಯರ್ ಸಿಟಿಜನ್ ಸೀಟ್, ಯಾರು ಇಲ್ಲ ಅಂದ್ರೆ ಕುತ್ಕೋಳಿ… ಆದ್ರೆ ಯಾರಾದ್ರೂ ಸೀನಿಯರ್ ಸಿಟಿಜನ್ ಬಂದ್ರೆ ಅವ್ರಿಗೆ ಸೀಟ್ ಬಿಟ್ಕೊಡ್ಬೇಕು. ಬಸ್ನವ್ರು ಕೂಡ ಸರಿಯಾಗಿ ಬೋರ್ಡ್ ಹಾಕಿಲ್ಲ ರೂಲ್ಸ್ ಫಾಲೋ ಮಾಡಲ್ಲ, ರೂಲ್ಸ್ಬ್ರೇಕ್ ಮಾಡಿದ್ರೆ 5 ಸಾವಿರ ದಂಡ ಬೀಳುತ್ತೆ ಗೊತ್ತಾ ಅಂತ ಹೇಳುದ್ರು. ನಾನು ಹೂ ಗುಡುತ್ತಿದ್ದೆ. ಯಾಕೋ ಅವ್ರು ಮಾತಾಡುವಾಗ ನಾನು ಇಯರ್ ಫೋನ್ ಹಾಕೋಳೋದು ಸಭ್ಯತೆ ಅಲ್ಲ ಅಂತ ನನ್ ಮನ್ಸು ನನ್ನೇ ಗುರಾಯುಸ್ತು. ಇಯರ್ ಫೋನ್ ತೆಗ್ದೆ. ನಾನು ಅಂಕಲ್ ಜೊತೆ ಮಾತಿಗಿಳಿದೆ.
ನನ್ ಬಗ್ಗೆ ಕೇಳಿದ್ರು ಹೇಳ್ದೆ. ಆಮೇಲೆ ಅವ್ರು ಮಾತಡಿದ್ರು. ಅದ್ಯಾಕೋ ಹಿರಿಜೀವಗಳು ಮನಸ್ಸಿಗೆ ತುಂಬಾ ಹತ್ರ ಆಗ್ತಾರೆ ನಂಗೆ. ಹಿರಿಯರು ಮಾತಾಡುವಾಗ ಮನಸ್ಸಿಟ್ಟು ಕೇಳ್ಬೇಕು ಅನಿಸುತ್ತೆ. ನಿಮಗೆ ಗೊತ್ತಾ ಅವ್ರು ಅಂಕಲ್ ಅಂತ ಹೇಳ್ದೆ ಅಲ್ವಾ ಆಕ್ಚುಲಿ ಅವರ ವಯಸ್ಸು 73 ! ಹೆಸರು ಸೂರ್ಯನಾರಾಯಣ. ಎಕ್ಸ್ ಗವರ್ನಮೆಂಟ್ ಎಂಪ್ಲೋಯ್ . ಅಗ್ರಿಕಲ್ಚರ್ ಡಿಪಾರ್ಟ್ಮೆಂಟ್ ನಲ್ಲಿ ಸೇವೆ ಸಲ್ಲಿಸಿ ಈಗ ರಿಟೇರ್ಡ್ ಆಗಿದ್ದೀನಿ ಬೇಟಾ ಅಂದ್ರು. ನಾನು ಹೋ ಹೌದ ಅಂದೆ.
ನಂತ್ರ ಅವ್ರೇ ಮಾತು ಮುಂದುವರೆಸಿ ನಂಗೆ ಲಾಯರ್ ಆಗ್ಬೇಕು ಅಂತ ತುಂಬಾ ಆಸೆ ಇತ್ತು ಬೇಟಾ ನಾನು ಓದೋ ಟೈಮ್ನಲ್ಲಿ ಎಲ್ಲರ ಹತ್ರ ಹೇಳ್ಕೊಂಡು ಬರ್ತಿದೆ ನಾನ್ ಲಾಯರ್ ಆಗ್ತೀನಿ ಅಂತ …..ಹಾಗ್ ಹೇಳುವಾಗ ಅವ್ರ ಮುಖದಲ್ಲಿ ಆ ಹುಮ್ಮಸ್ಸು ನೋಡ್ಬೇಕಿತ್ತು ಒಂದು ಕ್ಷಣ ಸ್ಕೂಲ್ ಡೇಸ್ ಹಾಗೇ ಅವ್ರ ಕಣ್ಮುಂದೆ ಬಂತು ಅನಿಸುತ್ತೆ..ನಾನು ಕೇಳ್ದೇ ಯಾಕೆ ವಕೀಲರೇ ಆಗ್ಬೇಕು ಅನ್ಕೊಂಡ್ರಿ ಅಂತ.. ಅದುಕ್ಕೆ ಅವ್ರು ನನಗೆ ಅನ್ಯಾಯ ಸಹಿಸೋಕಾಗಲ್ಲ, ನಾನು ಲಾಯರ್ ಆಗಿ ನ್ಯಾಯ ಕೊಡುಸ್ಬೇಕು ಅನ್ನೋದೆ ನನ್ನ ಗುರಿಯಾಗಿತ್ತು ಅದ್ಕೆ ಅಂದ್ರು. ಆಮೇಲೆ ಏನ್ ಮಾಡೋದು ಬೇಟಾ ಅನ್ಕೋಳೋದೆ ಒಂದು ಆಗೋದೆ ಇನ್ನೊಂದು ಅಂದ್ರು. ನಾನು ಹೌದು ಅದಂತೂ ನಿಜ ಬಿಡಿ ಅಂದೆ.
ನಾನು ಈ ಮುತ್ತಿನ ನಗರಿಗೆ ಕಾಲಿಟ್ಟು 50 ವರ್ಷ ಕಳೆದಿದೆ. ನಾನ್ ಇಲ್ಲಿಗೆ ಬಂದಾಗ ಲಕ್ಷದಷ್ಟಿದ್ದ ಜನಸಂಖ್ಯೆ ಈಗ ನೋಡು ಕೋಟಿ ದಾಟಿದೆ ಅಂದ್ರು …. ಎಲ್ಲೇ ಹೋದ್ರು ಟ್ರಾಫಿಕ್ ಕಿರಿಕಿರಿ ಕಷ್ಟ ಬೇಟಾ ಅಂದ್ರು. ಈಗ ಗರ್ವನ್ಮೆಂಟ್ ಜಾಬ್ ತಗೋಳೋದು ನಮ್ಮ ಕಾಲದಷ್ಟು ಸುಲಭವಲ್ಲ ಅಂದ್ರು. ಹೌದು ಅಂಕಲ್ ಜನಸಂಖ್ಯೆ ಜಾಸ್ತಿಯಾಗಿ, ಕಾಂಪಿಟೇಶನ್ ಜಾಸ್ತಿ ಆಗಿದೆ ಏನ್ ಮಾಡೋಕಾಗಲ್ಲ ಅಂದೆ.
ಹೀಗೆ ಮಾತು ಮುಂದುವರಿತಾ ಫ್ಯಾಮಿಲಿ ಬಗ್ಗೆ ಕೇಳಿದ್ರು. ಹೇಳ್ದೆ. ತಕ್ಷಣ ಆ ಅಂಕಲ್ ನಂಗೆ ಅಪ್ಪ ಅಮ್ಮ ಇಬ್ರೂ ಇಲ್ಲ ಬೇಟಾ.. ನಂಗೆ 14 ನೇ ವಯಸ್ಸಿದ್ದಾಗಲೇ ತಂದೆ ತೀರ್ಕೊಂಡ್ರು, ಆಮೇಲೆ 36 ನೇ ವಯಸ್ಸಲ್ಲಿ ತಾಯಿ ತೀರ್ಕೊಂಡ್ರು. ಈಗಲೂ ಅಮ್ಮ ನೆನೆದಾಗೆಲ್ಲಾ ಕಣ್ಣಲ್ಲಿ ನೀರ್ ಬರುತ್ತೆ ಬೇಟಾ ಅಂದಾಗ ಅವ್ರ ಕಣ್ಣಾಲಿ ಒದ್ದೆಯಾಗಿತ್ತು. ಯಾವತ್ತೂ ತಂದೆ-ತಾಯಿನಾ ನೋಯಿಸಬಾರದು ಬೇಟಾ ನಮಗೋಸ್ಕರ ಅವ್ರು ಎಷ್ಟೆಲ್ಲಾ ಕಷ್ಟ ಪಡ್ತಾರೆ ಗೊತ್ತಾ ಅಂದ್ರು. ನಾನು ಹೂ ಅಂಕಲ್ ಅಂದೆ.
ನನ್ ಹೆಂಡ್ತಿ ಕೂಡ 56 ವರ್ಷ ಇರುವಾಗ ನನ್ನ ಒಂಟಿ ಮಾಡಿ ಮಧ್ಯರಾತ್ರಿನೇ ಬಿಟ್ಟು ಹೊರಟೋದ್ಲು. ಅವಳಿರ್ಬೇಕಿತ್ತು ಬೇಟಾ. ಅಪ್ಪ -ಅಮ್ಮ ದೇವ್ರಗಿಂತ ಮಿಗಿಲು. ಅವ್ರನ್ನ ಬಿಟ್ರೆ ಹೆಂಡ್ತಿನೇ ಗ್ರೇಟ್. ಗಂಡ ,ಮನೆ, ಮಕ್ಳು ಸಂಸಾರ ಎಲ್ಲಾ ನೋಡ್ಕೋತಾಳೆ . ಅವಳ ತರ ನಾವ್ ಕೆಲ್ಸ್ ಮಾಡೋಕಾಗಲ್ಲ, ಪ್ರತಿದಿನ ಅವಳ ನೆನಪು ಬರುತ್ತೆ ಬೇಟಾ ಅವ್ಳು ಮಧ್ಯರಾತ್ರಿ 12 : 30 ಗೆ ಹಾರ್ಟ್ ಅಟ್ಯಾಕ್ ಆಗಿ ಹೋಗಿಬಿಟ್ಲು ಅಂತ ಅತ್ರು. ಈ ಇಳಿವಯಸ್ಸಲ್ಲೂ ಜೊತೆಗೆ ಬದುಕಿ ಅಗಲಿದ ಜೀವ ನೆನೆದು ಅವ್ರು ಕಣ್ಣೀರಿಟ್ಟಾಗ ಏನ್ ಹೇಳ್ಬೇಕು ಅಂತಾನೇ ಗೊತ್ತಾಗಲಿಲ್ಲ ನಂಗೆ.
ನಾನು ಮಕ್ಳು ಬಗ್ಗೆ ಕೇಳ್ದೆ ಇಬ್ರು ಮಕ್ಳು ಒಬ್ಲು ಮಗಳು , ಒಬ್ಬ ಮಗ. ಮದುವೆ ಆಗಿದೆ ನಾನು ಮಗನ ಮನೇಲಿ ಇದ್ದೀನಿ ಅಂದ್ರು. ಆದ್ರೆ ರೀಸೆಂಟ್ ಆಗಿ ಅಳಿಯ ಕೂಡ ತೀರ್ಕೊಬಿಟ್ಟಾ ಅಂದ್ರು. ಹೌದಾ ಏನಾಗಿತ್ತು ಅಂದೆ ನಿಂಗೆ ಹೇಳ್ಬಾರ್ದು ಆದ್ರೂ ಹೇಳ್ತೀನಿ ಬೇಟಾ… ಅವ್ನು ಐಟಿ ಉದ್ಯೋಗಿ ಆದ್ರೂ ದಿನಾ ಕುಡಿತಾ ಇದ್ದ. ಲಿವರ್ ಡ್ಯಾಮೇಜ್ ಆಗಿತ್ತು. 2 ತಿಂಗಳ ಹಿಂದೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಟ್ರೀಟ್ಮೆಂಟ್ ಕೊಡುಸ್ತೆ ಡಾಕ್ಟರ್ ಇನ್ನೊಂದು ಆಪರೇಶನ್ ಆಗ್ಬೇಕು ಅಂದ್ರು 40 ಲಕ್ಷ ಖರ್ಚಾಗುತ್ತೆ ಅಂದ್ರು. ನನ್ ಪೆನ್ಷನ್ ದುಡ್ಡು ಅದು ಇದು ಎಲ್ಲಾ ಸೇರಿ ಆಪರೇಶನ್ ಮಾಡಿಸೋಕೆ ರೆಡಿ ಮಾಡ್ಕೋತ್ತಿದ್ದೊ.
ಆದ್ರೆ ಅಷ್ಟರಲ್ಲಿ ಅವನು ಸತ್ತು ಹೋದ ಅಂತ ಬೇಜಾರಲ್ಲಿ ಹೇಳಿದ್ರು.. ನನ್ ಮಗಳು ನೋಡಿದ್ರೆ, ಮೊಮ್ಮಕ್ಕಳನ್ನು ನೋಡಿದ್ರೆ ಪಾಪ ಅನಿಸುತ್ತೆ ಬೇಟಾ, ನಾವೆಷ್ಟೇ ಪ್ರೀತಿ ತೋರಿಸಿದ್ರೂ ಮಗಳಿಗೆ ಗಂಡನ ಪ್ರೀತಿ ಕೊಟ್ಟಂಗೆ ಆಗುತ್ತಾ, ಮಕ್ಕಳಿಗೆ ತಂದೆಯ ಪ್ರೀತಿ ತುಂಬೋಕಾಗಲ್ಲ, ನೆನೆಸ್ಕೊಂಡ್ರೆ ತುಂಬಾ ಬೇಜಾರಾಗುತ್ತೆ ಬೇಟಾ ಅಂದ್ರು. ಯಾರೂ ಇಂಥ ಕೆಲ್ಸ ಮಾಡ್ಬಾರ್ದು, ಕುಡಿಬಾರದು,ಹೆಂಡ್ತಿ ಮಕ್ಕಳ ಬಗ್ಗೆ ಯೋಚ್ನೆ ಮಾಡ್ಬೇಕು ಅಂತ ಅವ್ರು ಹೇಳುವಾಗ ನಿಜ ಅದ್ರಿಂದ ಅವ್ರ ಮಗಳು, ಫ್ಯಾಮಿಲಿ ಅದೆಷ್ಟು ನೋವು ಅನುಭವಿಸ್ತಿದ್ದಾರೆ ಅನ್ನೋದು ಅವ್ರ ಮಾತುಗಳಲ್ಲೇ ಗೊತ್ತಾಗ್ತಿತ್ತು.
ಇನ್ನು ಮಗ ಖಾಸಗಿ ಕಂಪೆನಿ ಉದ್ಯೋಗಿ, ಬ್ಯುಸಿ, ಇನ್ನು ಮೊಮ್ಮಕ್ಕಳು ಸ್ಕೂಲು, ಕಾಲೇಜು… ನಂಗೆ ರಿಟೇರ್ಡ್ ಆಗಿದೆ ನೋಡು ನಾನು ಫ್ರೀ….ನಾನೋ ದಿನಕ್ಕೆ 12 ನ್ಯೂಸ್ ಪೇಪರ್ ಒದ್ತೀನಿ, ಬುಕ್ಸ್ ಒದ್ತೀನಿ, ಅದ್ರಲ್ಲೇ ಇಡೀ ದಿನ ಕಳೀತೀನಿ, ತಿಂಗಳಿಗೆ 2000 ದಷ್ಟು ಬರೀ ಪೇಪರ್,ಬುಕ್ ಬಿಲ್ಲೇ ಆಗುತ್ತೆ, ನ್ಯೂಸ್ ಪೇಪರ್ ಓದದೇ ಹೋದ್ರೆ ನಂಗ್ ಸಮಾಧಾನನೇ ಆಗಲ್ಲ ಬೇಟಾ ಅಂದ್ರು.
ಅದ್ಕೆ ನಾನು ಎಷ್ಟೇ ಆದ್ರೂ ಲಾಯರ್ ಆಗಬೇಕು ಅನ್ಕೋಂಡಿದ್ದೋರಲ್ವೆ ನೀವು ಅಂತ ಛೇಡಿಸಿದೆ, ಅವ್ರೂ ನಕ್ಕು. ಹೌದು ಬೇಟಾ ನಾನ್ ಲಾಯರ್ ಆಗ್ಬೇಕಿತ್ತು. ಆಗಿದ್ದಿದ್ರೆ ಈಗ ಹೈಕೋರ್ಟ್ ಅಲ್ಲಿ ಇರ್ತಾ ಇದ್ದೆ ಅಂತ ಮನಸಾರೆ ನಕ್ರು. ಓದ್ಬೇಕು ಬೇಟಾ , ಪ್ರಪಂಚದ ಆಗು-ಹೋಗುಗಳನ್ನು ತಿಳ್ಕೋಬೇಕು, ಓದಿಲ್ಲಾ ಅಂದ್ರೆ ಪ್ರಾಣಿಗಳ ತರ ಆಗಿಬಿಡ್ತೀವಿ ಅವಕ್ಕೂ ನಮಗೂ ಏನೂ ವ್ಯತ್ಯಾಸ ಇರಲ್ಲ ಅಂದ್ರು ತೆಲುಗು,ಇಂಗ್ಲಿಷ್,ಹಿಂದಿಯನ್ನು ನಿರರ್ಗಳವಾಗಿ ಮಾತಾಡಬಲ್ಲ ಅವ್ರು 73 ರ ಹರೆಯದ ತಾತ ಅಲ್ಲ ಅಂಕಲ್!
ಇನ್ನು ನಿಮ್ಮ ಜೊತೆ ಹುಟ್ಟಿದವ್ರು ಯಾರಿಲ್ವಾ ಅಂತ ಕೇಳ್ದೆ. ಒಮ್ಮೆಲೆ ಅವರ ಮುಖ ಅರಳಿತು . ನಾವ್ 9 ಜನ ಮಕ್ಕಳು, ಎಲ್ರೂ ಇದ್ದೀವಿ. ಆಂಧ್ರ, ವಿಜಯವಾಡ, ಸಿಂಗಾಪುರ್, ಹೀಗೆ ಎಲ್ರೂ ಒಂದೊಂದು ಕಡೆ ಇದ್ದೀವಿ, ವರ್ಷಕ್ಕೆ ಒಂದು ಸಲ ತಂದೆ-ತಾಯಿ ಕಾರ್ಯ ಮಾಡುವಾಗ ಎಲ್ರೂ ಒಂದುಕಡೆ ಸೇರ್ತೀವಿ ಅಂದ್ರು.
ಇಷ್ಟೆಲ್ಲಾ ಮಾತಾಡೋ ಅಷ್ಟರಲ್ಲಿ ಅವ್ರು ಇಳಿಯುವ ಸ್ಟಾಪ್ ಬಂತು. ಹೋಗುವಾಗ ಬೈ ಬೇಟಾ ಖುಷ್ ರಹೋ, ದಿನ ಮಾತಾಡೋಕೆ ಯಾರೂ ಸಿಗಲ್ಲ, ಹೀಗೆ ಯಾರಾದ್ರೂ ಸಿಕ್ಕಿದ್ರೆ ಜರ್ನಿ ಮಾಡಿದ್ದೇ ಗೊತ್ತಾಗಲ್ಲ, ಒಬ್ರೆ ಇದ್ರಂತೂ ಇನ್ನೂ ಸ್ಟಾಪ್ ಬಂದಿಲ್ವಾ ಅನಸುತ್ತೆ. ಈಗ ನೋಡು ನಾವಿಬ್ರೂ ಮಾತಾಡ್ಕೊಂಡು ಬಂದಿದ್ಕೆ ಸ್ಟಾಪ್ ಬಂದಿದ್ದೆ ಗೊತ್ತಾಗಿಲ್ಲ ಅಂತ ನಕ್ರು. ಆಗ ನಾನು, ಬಸ್ ಹತ್ತುವಾಗ ಸಿಟ್ಟು ಮಾಡ್ಕೊಂಡು, ವಾದ ಮಾಡಿ ನಮ್ ಜೊತೆ ಸೀಟ್ ಬಿಡುಸ್ಕೊಂಡು ಕೂತ ಅದೇ ಸೂರ್ಯನಾರಾಯಣ್ ಅಂಕಲ್ ಬಸ್ ಇಳಿವಾಗ ಖುಷಿ-ಖುಷಿಯಾಗಿ ಇಳಿದಿದ್ದು ಕಂಡು ಒಂದು ಕ್ಷಣ ಖುಷಿಯಿಂದ ಮೌನಿಯಾದೆ.
ಆಗ ಅನಿಸಿದ್ದು, ಒಬ್ಬ ವ್ಯಕ್ತಿ ಅವನ ವ್ಯಕ್ತಿತ್ವನಾ ಒಂದೇ ಸಲ ಅಳೆಯೋಕೆ ಆಗಲ್ಲ. ಬರೀ ಯಾವುದೋ ಒಂದು ಘಟನೆಯಿಂದ ಒಂದು ಮಾತಿಂದ ಅವರು ಸರಿ ಇಲ್ಲ, ಹಾಗೇ ಹೀಗೆ ಅಂತ ಯಾವತ್ತೂ ಜಡ್ಜ್ ಮಾಡ್ಬಾರ್ದು, ಪ್ರತಿಯೊಬ್ಬರು ಮನಸ್ಸಲ್ಲೂ ಅವ್ರದೇ ಆದ ನೋವಿರುತ್ತೆ. ಮನದಾಳದ ಮಾತುಗಳನ್ನು ಕೇಳೋ ಯಾವುದೋ ಒಂದು ಜೀವನಾ ಆ ಕಂಗಳು ಹುಡುಕ್ತಿರುತ್ತೆ. ಒಂದು ವೇಳೆ ನಿಮಗೆ ಯಾವುದಾದರೂ ಹಿರಿಜೀವದ ಜೀವನದ ಅನುಭವನಾ, ಅಥವಾ ಅವ್ರ ನೋವನ್ನ ಕೇಳಿಸಿಕೊಳ್ಳೋ ಅವಕಾಶ ಸಿಕ್ರೆ ಅದಕ್ಕೆ ನೀವೂ ಕಿವಿಯಾಗಿ . ಯಾಕಂದ್ರೆ 73 ವರ್ಷಗಳ ತುಂಬು ಜೀವನ ನಡೆಸಿರೋರು ಅವ್ರಷ್ಟು ವಯಸ್ಸಿನವರೆಗೂ ಖಂಡಿತ ನಾವು ಬದ್ಕೋಕ್ಕಾಗಲ್ಲ, ಹಂಗಿದೆ ನಮ್ ಜೀವಿತಾವಧಿ ದರ , ಅಂತದ್ದರಲ್ಲಿ ಇಂತವರ ಅನುಭವಗಳೆ ನಮಗೆ ಮಾರ್ಗದರ್ಶನ ಆಗ್ಬೋದು, ಸ್ಫೂರ್ತಿ ಆಗಬಹುದು.
ಅಂದಹಾಗೇ ಅಂಕಲ್ ಒಟ್ಟಿಗಿನ ಇಷ್ಟೂ ಸಂಭಾಷಣೆ ನಡೆದಿದ್ದು, ಹಿಂದಿಯಲ್ಲಿ. ಆ ಭಾಷೇನೆ ನನಗೆ ಒಂದು ವಿಭಿನ್ನ ವ್ಯಕ್ತಿತ್ವದ ಪರಿಚಯ ಆಗೋಕೆ, ಬದುಕಿನ ಒಂದು ಅವಿಸ್ಮರಣೀಯ ಅನುಭವ ಆಗೋಕೆ ಕಾರಣ ಆಗಿದ್ದು, ನನ್ನ ನೆನಪಿನ ಬುತ್ತಿಗೊಂದು ಹೊಸ ವ್ಯಕ್ತಿಯ ಸೇರ್ಪಡೆಯಾಗುವಂತೆ ಮಾಡಿದ್ದು. ಒಂದು ವೇಳೆ ಯಾವುದೋ ಒಂದೇ ಭಾಷೆಯ ವ್ಯಾಮೋಹಕ್ಕೆ ಒಳಗಾಗಿ ಬೇರೆ ಭಾಷೆಗಳನ್ನ ತಿರಸ್ಕಾರ ಮಾಡಿದ್ರೆ ಬಹುಶಃ ಬದುಕಲ್ಲಿ ಏನನ್ನೋ ಮಿಸ್ ಮಾಡ್ಕೋತ್ತಿವಿ ಅನಿಸುತ್ತೆ. ಹಾಗಾಗಿ ನಂಗೆ ಯಾವುದೇ ಬೇರೆ ಭಾಷೆ ಕಲಿಕೆ ಬಗ್ಗೆ ಎಂದಿಗೂ ತಕರಾರಿಲ್ಲ. ಸೋ ಯಾರ ಮುಲಾಜಿಲ್ಲದೇ ಹೇಳ್ತೀನಿ, ಇಂಗ್ಲಿಷ್, ಹಿಂದಿಯನ್ನೂ ಸಮಾನಾಗಿ ಪ್ರೀತಿಸುವ, ಗೌರವಿಸುವ ನಾನೊಬ್ಬಳು ಅಪ್ಪಟ ಕನ್ನಡತಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾಮಿನಿ
ನಾನ್ವೆಜ್ ಹುಡ್ಗಿ, ಪುಲ್ಚರ್ ಹುಡ್ಗ..!

- ಆಕಾಶ ಪ್ರಿಯ
ಎಲ್ಲ ಹುಡುಗ್ರು ತಮ್ ಹುಡ್ಗಿನ ಅಟ್ರಾಕ್ಟ್ ಮಾಡೋಕೆ ತಾಜ್ಮಹಲ್ ಕಟ್ತೀನಿ, ಚಂದ್ರನ ತಂದುಕೊಡ್ತೀನಿ ಅಂತ ಹೇಳಿದ್ರೆ ನೀನು Like poles repels opposite poles attract ಅಂತ sciene law ಹೇಳಿ ನಿನ್ ಜೊತೆ ಲವ್ ಅಲಿ ಬೀಳೋತರ ಮಾಡ್ದೆ. ಹೀಗೂ ಲವ್ ಪ್ರಪೋಸ್ ಮಾಡ್ತಾರೆ ಅಂತ ನಂಗ್ ಗೊತ್ತೇ ಇರ್ಲಿಲ್ಲ. ಹಾಗ್ ನೋಡಿದ್ರೆ ನಮ್ಮಿಬ್ಬರ ಮಧ್ಯೆ ಭೂಮಿ ಆಕಾಶಕ್ಕಿರೊ ಅಷ್ಟು ಅಂತರ.
ಏನೂ ಮ್ಯಾಚ್ ಆಗಲ್ಲ, ‘ಟೀ’ ಇಂದ ದಿನ ಸ್ಟ್ರಾಟ್ ಮಾಡೋ ನಾನು ‘ಕಾಫಿ’ನೇ ಬೇಕು ಅನ್ನೋ ನೀನು, ಪುಳಿಯೋಗರೆ ಪ್ರೇಮಿ ನಾನು, ಪುಳಿಯೋಗರೆ ಹೆಸ್ರು ಕೇಳಿದ್ರೆ ಊಟನೆ ಬಿಡೋ ಆಸಾಮಿ ನೀನು. ನಾನ್ವೆಜ್ ಹುಡ್ಗಿ ನಾನು; ಪುಲ್ಚರ್ ಹುಡ್ಗ ನೀನು. ನಾನ್ ಸ್ಟಾಪ್ ಮಾತಾಡೋ ಹುಡುಗಿ ನಾನು, 10 ಮಾತಾಡಿದ್ರೆ ಒಂದು ಮಾತಾಡೋ silent ಹುಡ್ಗ ನೀನು. ಅಪ್ಪಟ ಕನ್ನಡದ ಹುಡುಗಿ ನಾನು, ಸ್ವಲ್ಪ ಜಾಸ್ತಿ ಕನ್ನಡ ಮಾತಾಡಿದ್ರೆ ನಂಗ್ ಕನ್ನಡ ಅಷ್ಟೊಂದ್ ಬರಲ್ಲ, ಅದೇನು ಅಂತ ಕೇಳೋ ನೀನೂ ಕನ್ನಡದ ಹುಡುಗಾನೆ ಅನ್ನೋ ಖುಷಿ ನಂಗೆ.
ನಮ್ಮಿಬ್ಬರು ಮಧ್ಯೆ ಕಾಫಿ ಟೀನೇ ಮ್ಯಾಚ್ ಆಗಲ್ಲ ಇನ್ನು ಜೀವನ ಮ್ಯಾಚ್ ಆಗುತ್ತಾ ಅಂದಾಗ ಕಾಫಿ ನೀವ್ ಮಾಡ್ಕೊಡಿ ನಿಮ್ಗೆ ಟೀ ನಾನ್ ಮಾಡ್ಕೊಡ್ತೀನಿ ಅಂತ ಸಿಂಪಲ್ ಸಜೇಶನ್ ಕೊಟ್ಟ ಹುಡ್ಗ, ಇವತ್ತು ನಂಜೊತೆ 7 ಹೆಜ್ಜೆ ಇಟ್ಟು ನನ್ ಸಂಗಾತಿ ಆಗಿದಿಯ ಅಂದ್ರೆ ಇದಕ್ಕಿಂತ ಬೇರೆ ಖುಷಿ ಏನಿದೆ ಹೇಳು. ಮನಸ್ಸಿಗೂ ಬದುಕಿಗೂ ನೀನೊಬ್ಬನೇ ಜೊತೆಗಾರ.
ನೀನ್ ಹೇಳಿದ್ ಆ science law ಇಷ್ಟ ಆದಷ್ಟೂ ಬಹುಶಃ ಯಾರ್ ಹೇಳಿದ್ ಯಾವ ಕವನ ಕೂಡ ಇಷ್ಟ ಆಗ್ಲಿಲ್ಲ ನಂಗೆ. ಅದ್ಕೆ ಯಾರಿಗೂ ಸೋಲದೇ ಇರೋ ಜಂಬದ್ ಹುಡ್ಗಿಗೆ ನಿಂಗೆ ಸೋಲದೇ ಇರೋಕೆ ಆಗ್ಲಿಲ್ಲ.
ನಿನ್ ಮೇಲೆ ಎಷ್ಟ್ ಕೋಪ ಬಂದ್ರೂ ಒಂದ್ ಸೆಕೆಂಡ್ ಕೂಡ ಆ ಕೋಪ ಇರೋದೇ ಇಲ್ಲ, ನೀನು ಅಷ್ಟೇ ಏನೇ ಆದ್ರೂ ನನ್ ಬಿಟ್ ಇರಲ್ಲ ಮಗು ತರ ಹುಡ್ಕೊಂಡ್ ಬರ್ತೀಯ ಇನ್ನೇನ್ ಬೇಕು ಹೇಳು ಸುಖ ಸಂಸಾರಕ್ಕೆ.
ನೋಡಿ ಮೈ ಡಿಯರ್ ಗಂಡ ನಿಂಜೊತೆ ಇನ್ನೂ ತುಂಬಾ ವರ್ಷ ಜೊತೇಲಿ ಇರ್ಬೇಕು ನಾನು, ಅಮ್ಮನ ಪೋಸ್ಟ್ ಗೆ ಪ್ರಮೋಷನ್ ತಗೋಬೇಕು, ಆಮೇಲೆ ಅತ್ತೆ ಪೋಸ್ಟ್, ಆಮೇಲೆ ಅಜ್ಜಿ ಪೋಸ್ಟ್ ಗೆ ಪ್ರೊಮೋಷನ್ ತಗೋಬೇಕು. ಸೋ ಇದೆಲ್ಲಾ ಆಗ್ಬೇಕು ಅಂದ್ರೆ ಆಯಸ್ಸು ಜಾಸ್ತಿ ಬೇಕಲ್ವಾ . ಅದ್ಕೆ ಇನ್ ಕೇಸ್ ಆ ಯಮ ಏನಾದ್ರು ಬೇಗ ಬರ್ತೀನಿ ಅಂದ್ರೆ ಯಮಂಗೇ influence ಮಾಡಿ ಡೆತ್ ಡೇಟ್ ನಾ ಪೋಸ್ಟ್ ಪೋನ್ ಮಾಡುಸ್ಕೊತಿನಿ.ಓಕೆ ನಾ! ಆದ್ರೆ ನೀವ್ ಯಾವತ್ತೂ ನನ್ ಬಿಟ್ ಹೊಗ್ಬಾರ್ದು, ನಾನೂ ಹೋಗಲ್ಲ.
ಬಾಳ ಸಂಗಾತಿ ಆದವ್ರು ನೋವು, ಸಮಸ್ಯೆ ಬಂದಾಗ ಫ್ರೆಂಡ್ಸ್ ತರ ಇರ್ಬೇಕಂತೆ. ಪ್ರೀತಿ ಬಂದಾಗ ಲವರ್ಸ್ ತರ ಇರ್ಬೇಕಂತೆ. ಆ ಪ್ರೀತಿ ಜಾಸ್ತಿ ಆದಾಗ ಗಂಡ ಹೆಂಡ್ತಿ ತರ ಇರ್ಬೇಕಂತೆ. ನಮ್ಮದೂ ಇದೇ ಪಾಲಿಸಿ. ಇಬ್ರು ಮಧ್ಯೆ ಎಲ್ಲ ಮ್ಯಾಚ್ ಆದ್ರೆ ಮಾತ್ರ ಚೆನ್ನಾಗಿರಬಹುದು ಅನ್ನೋದನ್ನ ನಾನ್ ಒಪ್ಪಲ್ಲ. ಯಾಕಂದ್ರೆ, ನಾನು ನೀನು ಓದಿರೋದೆ ಬೇರೆ ಒಂದಕ್ಕೊಂದು ಸಂಬಂಧವೇ ಇಲ್ಲ, ತಿನ್ನೋದ್ರಿಂದ ಹಿಡಿದು ಯಾವುದ್ರಲ್ಲೂ ಇಬ್ರುದು ಒಂದೇ ಟೇಸ್ಟ್ ಇಲ್ಲ
ನಿನ್ನ-ನನ್ನ ಆಸೆ ಕನಸು,ವಯಸ್ಸು,ಉದ್ಯೋಗ ಯಾವುದು ಮ್ಯಾಚ್ ಆಗಲ್ಲ, ಆದ್ರೂ ನಾನ್ ನಿಂಜೊತೆ ತುಂಬಾ ಖುಷಿಯಾಗಿದಿನಿ ಮಗು. ಯಾಕ್ ಹೇಳು ಲೈಫ್ ಪಾಟ್ನರ್ಸ್ ಒಬ್ರು ಟೇಸ್ಟ್ ನಾ ಒಬ್ರು ಇಷ್ಟ ಪಡದಿದ್ರು ಪರ್ವಾಗಿಲ್ಲ ಒಬ್ಬರಿಗೊಬ್ಬರು ಗೌರವಿಸ್ ಬೇಕು ಅದ್ಕೆ. ಭಾವನೆಗಳನ್ನ ಹೇಳ್ದನೇ ಅರ್ಥ ಮಾಡ್ಕೋಬೇಕು ಅಂತೇನೂ ಇಲ್ಲ, ಶೇರ್ ಮಾಡ್ಕೊಳೋ ಗುಣ ಇದ್ರೆ ಸಾಕು. ಜೀವನ ಖುಷಿ-ಖುಷಿಯಾಗಿರುತ್ತೆ.
ಅಷ್ಟಕ್ಕೂ ನಾನ್ ಯಾಕ್ ನಿಮ್ನ ಮಗು ಅಂತ ಕರೀತಿನಿ ಅಂದ್ರೆ ಪ್ರತೀ ಗಂಡಿಗೂ ತನ್ನ ಹೆಂಡ್ತಿ ಎರಡನೇ ತಾಯಿ ಆಗಿರ್ತಾಳಂತೆ, ಪ್ರತೀ ಹೆಣ್ಣಿಗೂ ತನ್ ಗಂಡ ಮೊದಲನೇ ಮಗು ಆಗಿರ್ತಾನಂತೆ. ಅದ್ಕೆ ಮಗು ನಿನ್ನ ಯಾವತ್ತೂ ಬಿಟ್ ಹೋಗಲ್ಲ.
ಈ ಪ್ರೇಮಿಗಳ ದಿನಕ್ಕೆ ನಾನ್ ನಿಂಗ್ ಹೇಳೋದ್ ಏನಂದ್ರೆ ಈ ಪ್ರಪಂಚದಲ್ಲಿ ಇದುವರೆಗೂ ನಿನ್ನ ಯಾರೂ ಇಷ್ಟ ಪಡದೆ ಇರೋ ಅಷ್ಟು, ಮುಂದೇನು ಇಷ್ಟ ಪಡೋಕೆ ಆಗದಿರೋ ಅಷ್ಟು ಇಷ್ಟ ಪಡ್ತೀನಿ. ಬರೀ ಗಂಡ ಆಗಿ ಅಲ್ಲ, ಮಗು ತರ ನೋಡ್ಕೋತೀನಿ ನಿನ್ನ ಕೊನೆವರೆಗೂ.
ಇಷ್ಟ, ಪ್ರೀತಿ, ಬದುಕು,ಇದಿಷ್ಟೂ ನೀನೇ.
ತುಂಬಾ ಲವ್ ಯು ಮಗು.
-ಇಂತಿ ನಿನ್ ಹೆಂಡ್ತಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾಮಿನಿ
‘ನನ್ನದಲ್ಲದ ಪಾಕಿಸ್ತಾನಕ್ಕೆ ಹೋಗು’ ಎಂದವರಿಗೆ ನನ್ನ ಧಿಕ್ಕಾರವಿದೆ : ಗಾಯಕಿ ಸುಹಾನ ಸಯ್ಯದ್

- ಝೀ ಕನ್ನಡ ವಾಹಿನಿಯ ಸರಿಗಮಪ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸುಹಾನ ಸಯ್ಯದ್ ಅವರ ಹಾಡನ್ನು ನೀವೆಲ್ಲ ಕೇಳಿ ಆನಂದಿಸಿರುತ್ತೀರಿ. ಅವರು ಹಾಡಿದ ‘ನೀನೆ ರಾಮ, ನೀನೆ ಶ್ಯಾಮ, ನೀನೆ ಅಲ್ಲಾ , ನೀನೇ ಏಸು’ ಎಂಬ ಗೀತೆಗೆ ಮುಸ್ಲಿಂ ಸಂಪ್ರದಾಯವಾದಿಗಳಿಂದ ವಿರೋಧವೂ ವ್ಯಕ್ತವಾಗಿತ್ತು. ಈಗ ನಾವು ಹೇಳ ಹೊರಟಿರುವುದೇನೆಂದರೆ, ಕೇಂದ್ರ ಸರ್ಕಾರವು ಜಾರಿಮಾಡಿರುವ ಎನ್ ಆರ್ ಸಿ , ಮತ್ತು ಸಿಎಎ ಕುರಿತಾಗಿ ಪರ ಮತ್ತು ವಿರೋಧಗಳು, ಪ್ರತಿಭಟನೆಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಸುಹಾನ ಅವರಿಗೆ ಅವರ ಫೇಸ್ ಬುಕ್ ಪೇಜ್ ನಲ್ಲಿ ಕೆಲವರು ಮಾಡಿರುವ ಕಮೆಂಟುಗಳಿಗೆ ಬೇಸರ ವ್ಯಕ್ತಪಡಿಸಿ, ಪೇಜ್ ನಲ್ಲಿ ತಮ್ಮ ಸರ್ವಧರ್ಮ ಪ್ರೇಮವನ್ನು ವ್ಯಕ್ತ ಪಡಿಸುತ್ತಾ, ಈ ರೀತಿಯಾಗಿ ಬರೆದುಕೊಂಡಿದ್ದಾರೆ. ಓದಿ ಅಭಿಪ್ರಾಯ ತಿಳಿಸಿ.
ನಾನು ಹುಟ್ಟಿದ್ದು ಬೆಳೆದದ್ದು ಎಲ್ಲ ಹಳ್ಳಿಯಲ್ಲಿ ಇಡೀ ಊರಿಗೆ ಒಂದೇ ಮುಸ್ಲಿಂ ಕುಟುಂಬದ ಮೂರು ಮನೆಗಳು ಅಷ್ಟೇ , ಮಿಕ್ಕವರೆಲ್ಲ ಹಿಂದೂಗಳು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆಯುವಾಗ ಇದ್ದ ಸ್ನೇಹಿತರೆಲ್ಲರೂ ಹಿಂದೂಗಳೇ. ಎಂಬಿಎ ಪದವಿ ಮುಗಿಯುವ ತನಕ ಬೆಸ್ಟ್ ಫ್ರೆಂಡ್ ಅನಿಸಿಕೊಂಡವರು ಎಲ್ಲರೂ ಹಿಂದೂಗಳೇ. ಈಗಲೂ ಸಹ.
ನಮ್ಮ ಮನೆಯಲ್ಲಿ ಎಲ್ಲರೂ ಎಲ್ಲಾ ದೇವಸ್ಥಾನಗಳಿಗೂ ಹೋಗ್ತೀವಿ. ಹಿಂದೂ ಸಹೋದರರ ಎಲ್ಲಾ ಶುಭ ಸಮಾರಂಭಗಳಲ್ಲಿ ಭಾಗವಹಿಸುತ್ತೀವಿ. ಹಾಗೆಯೇ, ನಾಗರಪಂಚಮಿ ದೀಪಾವಳಿ ಊರ ಜಾತ್ರೆ ಬಂದಾಗ ದೇವರಿಗೆ ನಮ್ಮ ಮನೆಯಿಂದ ಹಣ್ಣುಕಾಯಿ ತಪ್ಪದೇ ಒಪ್ಪಿಸುತ್ತೇವೆ.
ನನ್ನ ಅಜ್ಜಿ ವರದಹಳ್ಳಿಯ ಶ್ರೀಧರ ಸ್ವಾಮಿಗಳನ್ನು ತುಂಬಾ ನಂಬುತ್ತಾ ಇದ್ರಂತೆ ನನಗೂ ಕೂಡ ಮನಸ್ಸಿಗೆ ತುಂಬಾ ಬೇಸರವಾದಾಗ ಅಪ್ಪನ ಹತ್ತಿರ ವರದಹಳ್ಳಿಗೆ ಮತ್ತೆ ದರ್ಗಾಕ್ಕೆ ಹೋಗಿ ಬರೋಣ ಅಪ್ಪಾ!! ಅಂತ ಅಂದರೆ ಸಾಕು,. ಅಮ್ಮ, ನಾನು ಬರ್ತೀನಿ ನಡಿ ಅಂತಾರೆ.
ನಾನು ನಮಾಜ್ ಮಾಡ್ತೀನಿ ರಂಜಾನ್ ಉಪವಾಸ ಮಾಡ್ತೀನಿ ತೀರ್ಥಪ್ರಸಾದ ನಾನು ತಗೊಳ್ತೀನಿ ಕುಂಕುಮ ಹಚ್ಚಿಕೊಳ್ಳುತ್ತೀನಿ, ಕ್ರಿಸ್ಮಸ್ ಹಬ್ಬಕ್ಕೆ ಅಪ್ಪ-ಅಮ್ಮ ನಾನು ತಮ್ಮ ಪ್ರತಿವರ್ಷ ತಪ್ಪದೆ ಚರ್ಚಿಗೆ ಹೋಗಿ ಕ್ಯಾಂಡಲ್ ಹಚ್ಚಿ ಪ್ರೇಯರ್ ಮಾಡಿ ಬರ್ತೀವಿ..
ನನ್ನ ತಂದೆ ತಾಯಿ ಇಬ್ಬರೂ ಪ್ರಾಥಮಿಕ ಶಾಲಾ ಶಿಕ್ಷಕರು ಜಾತಿ,ಧರ್ಮ ನೋಡದೆ ಮಕ್ಕಳಿಗೆ ಭಗವದ್ಗೀತೆಯ ಶ್ಲೋಕಗಳನ್ನು ಹೇಳಿ ಕೊಡ್ತಾರೆ,
ರಾಮಾಯಣ, ಮಹಾಭಾರತದ ಕಥೆಗಳನ್ನ ಹೇಳ್ತಾರೆ. ನಾನೂ ಕೂಡಾ ಭಗವದ್ಗೀತೆಯನ್ನು ಓದಿದೀನಿ.
ಬೆಳಗ್ಗೆ ಎದ್ದಾಗ ಕರಾಗ್ರೇ ವಸತೇ, ಮಧ್ಯಾಹ್ನ ಅನ್ನಪೂರ್ಣೇ ಸದಾಪೂರ್ಣೇ, ರಾತ್ರಿ ಮಲಗುವಾಗ ರಾಮಂ ಸ್ಕಂದಂ ಹನುಮಂತಂ ಶ್ಲೋಕಗಳನ್ನು ಹೇಳಿದೀನಿ. ಬರಿ ಜೀ ಕನ್ನಡ ವಾಹಿನಿಯಲ್ಲಿ ಮಾತ್ರ ನನ್ನ ನೋಡಿದ್ದೀರಿ ಹೊರತು,ನಾನು ಯಕ್ಷಗಾನ ಕಲಾವಿದೆ ಅನ್ನೋದು ಗೊತ್ತಾ? ಎಷ್ಟು ಬಾರಿ ಸಂಗೀತ ಸ್ಪರ್ಧೆಯಲ್ಲಿ ನನ್ನ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದೀನಿ ತಿಳಿದಿದೆಯಾ? ಸಂಗೀತದ ಮೇಲೆ ನನಗಿರುವ ಆಸಕ್ತಿ ಹಾಗು ಕನ್ನಡ ಸಾಹಿತ್ಯದ ಮೇಲೆ ನನಗಿರುವ ಪ್ರೀತಿ,ಗೌರವ ಗೊತ್ತಾ???
ನಾನು ರಂಗಸ್ಥಳಕ್ಕೆ ಹೋಗುವ ಮುನ್ನ ಗಣಪತಿ ಪೂಜೆ ಮುಗಿಸಿ ಹೆಜ್ಜೆ ಹಾಕಿದ್ದು, ನಾಟಕಕ್ಕೆ ಬಣ್ಣ ಹಚ್ಚಿ ಅಭಿನಯಿಸುವ ಮುನ್ನ ಆಂಗಿಕಂ ಭುವನಂ ಎಂದು ಹಾಡಿ ಶಿವನೆ ಸತ್ಯ ಎಂದು ನಂಬಿಯೇ ರಂಗದ ಮೇಲೆ ಹೋಗಿದ್ದು, ಪೂಜಾ ಕುಣಿತ ಮಾಡುವಾಗಲೂ ಕರಗವನ್ನು,, ತಾಯಿಯ ಪೂಜೆ ಮಾಡಿದ ಮೇಲೆಯೇ ತಲೆಯ ಮೇಲೆ ಹೊತ್ತಿದ್ದು.
ಇನ್ನು, ಚಿಕ್ಕಂದಿನಿಂದಲೂ ಭಗತ್ ಸಿಂಗ್ ನ ಆದರ್ಶಗಳನ್ನು ಪಾಲಿಸುತ್ತಾ ಬಂದ ನನಗೆ ಯಾವುದೇ ವಿಷಯವನ್ನು ಪ್ರಶ್ನಿಸದೆ ಅನಿವಾರ್ಯ ಎಂದು ಒಪ್ಪಿಕೊಳ್ಳುವ ಮನಸ್ಥಿತಿ ಇಲ್ಲ. ಯಾವುದೋ ಒಂದು ರಾಜಕೀಯ ಪಕ್ಷ ಅಥವಾ ರಾಜಕೀಯ ನಾಯಕನನ್ನು ನಾನು ಎಂದಿಗೂ ಪೂಜಿಸಿಲ್ಲ.
ಎಲ್ಲಾ ರಾಜಕೀಯ ಪಕ್ಷದವರು ಪರಿಸ್ಥಿತಿಗಳನ್ನು
ಉಪಯೋಗಿಸಿಕೊಂಡು ತಮ್ಮ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುತ್ತಾರೆ ಎನ್ನುವ ಅರಿವು ನನಗಿದೆ. ಸರಿ ಮಾಡಿದರೆ ಸರಿ, ತಪ್ಪು ಮಾಡಿದವರು ಯಾರೇ ಆಗಿರಲಿ ಅದು ತಪ್ಪೇ.. !!!
ಯಾವುದೋ ಮಾತಿಗೆ ಸಂಬಂಧವಿಲ್ಲದ ನನ್ನ ತಂದೆ-ತಾಯಿಯನ್ನು ವಿಷಯಕ್ಕೆ ಎಳೆದು ಮಾತನಾಡುವ ನಿಮಗೆ ಸಿಕ್ಕಂತಹ ಸಂಸ್ಕಾರ, ನನ್ನ ತಂದೆ ತಾಯಿಯೂ ಕೊಟ್ಟಿಲ್ಲ, ನನಗೆ ವಿದ್ಯೆ ಹೇಳಿಕೊಟ್ಟ ಗುರುಗಳೂ ಕೊಟ್ಟಿಲ್ಲ.
ನನ್ನದಲ್ಲದ ಪಾಕಿಸ್ತಾನಕ್ಕೆ ಹೋಗು ಎಂದು ಕಾಮೆಂಟ್ ಮಾಡಿದವರ ಮೇಲೆ ಧಿಕ್ಕಾರ, ಪ್ರಚಾರಕ್ಕೆ ಈ ಮಾತನ್ನು ಆಡುತ್ತಿರುವೆ ಅನ್ನೋ ನಿಮ್ಮ ಈ ಸಂಕುಚಿತ ಮನೋಭಾವದ ಮೇಲೆ ಅತಿಯಾದ ಕನಿಕರ ಇದೆ.
ನಾನು ತಪ್ಪು ಎಂದಾದಲ್ಲಿ ನನಗೆ ತಿದ್ದಿಕೊಳ್ಳಲು ಏನೂ ಅಭ್ಯಂತರವಿಲ್ಲ, ಹಾಗಾಗಿ ನಾನು ಹೇಳಿದ ಮಾತು ತಪ್ಪು ಅಂತ ಅನ್ನಿಸಿದ ಮೇಲೆಯೂ ಗೌರವ ಮತ್ತು ಪ್ರೀತಿಯಿಂದ ಮಾತನಾಡಿರುವ ನನ್ನ ನಿಜವಾದ ಹಿಂದೂ ಸಹೋದರರ ಮೇಲೆ ಅತಿಯಾದ ಗೌರವ ಕೂಡಾ ಇದೆ..
ಏನು ಸಾಧನೆ ಮಾಡದೆ ನಾಲ್ಕು ಜನರಿಗೆ ಒಳ್ಳೆಯದನ್ನು ಮಾಡದೆ ಫೇಸ್ಬುಕ್ನಲ್ಲಿ 24ಗಂಟೆ ಆಕ್ಟಿವ್ ಇದ್ದು, ಬಸ್ ಸ್ಟ್ಯಾಂಡ್ ಗಳಲ್ಲಿ ಕೂತು ಹರಟೆ ಹೊಡೆದು ಭೂಮಿಗೆ ಭಾರವಾಗಿರುವ ನೀವು , ಮೊದಲು ನಿಮ್ಮ ಯೋಗ್ಯತೆಯನ್ನು ತಿಳಿದು ನಂತರ ಬೇರೆಯವರ ಯೋಗ್ಯತೆಯ ಬಗ್ಗೆ ಕಾಮೆಂಟ್ ಮಾಡಿ..
ಇನ್ನು ದಾಖಲೆಗಳ ವಿಚಾರ ಬಂದರೆ ನನ್ನ ಬಳಿ ಹಾಗೂ ನನ್ನ ಕುಟುಂಬದವರ ಬಳಿ ಎಲ್ಲಾ ದಾಖಲೆಗಳು ಇವೆ ಆದರೆ ನಾನು ಪ್ರಶ್ನಿಸಿದ್ದು ನೀವು ಹೇಳಿರುವ ಐಡಿ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಪಾಸ್ಪೋರ್ಟ್ ಯಾವುದೇ ಆಧಾರಗಳಿಲ್ಲದೆ ಹೊಟ್ಟೆಗೆ ತಿನ್ನಲು ಅನ್ನ ಇಲ್ಲದೆ ಹಾಗೂ ಯಾವುದೇ ಸೌಕರ್ಯಗಳನ್ನು ನಂಬಿ ಬದುಕದ, ಭಾರತದ ಮೂಲ ನಿವಾಸಿಗಳಾದ ಕೆಲವು, ಬುಡಕಟ್ಟು ಹಾಗೂ ಅಲೆಮಾರಿ ಜನಗಳ ಪರವಾಗಿ ( ಎಲ್ಲಾ ಧರ್ಮಗಳನ್ನು ).
ನೀವು ಹೇಳಿದಂತೆ ನಿಜವಾಗಿಯೂ ಇವರಾರಿಗೂ ತೊಂದರೆ ಇಲ್ಲ ಎಂತಾದರೆ ನನಗೂ ನಿಮಗೂ ಹಾಗೂ ಎಲ್ಲರಿಗೂ ಸಂತೋಷದ ವಿಚಾರ. ಎಂದು ಬರೆದುಕೊಂಡಿದ್ದಾರೆ ಸುಹಾನ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಬಹಿರಂಗ7 days ago
ಸಂವಿಧಾನ ನಿತ್ಯದ ಪಾಠವಾಗಲಿ..!
-
ಅಂತರಂಗ7 days ago
ಮಹಾ ಮಾನವತಾವಾದಿ ಅಂಬೇಡ್ಕರ್ ನೆನಪಿನಲ್ಲಿ..!
-
ಭಾವ ಭೈರಾಗಿ6 days ago
ಕವಿತೆ | ಯುಗಾದಿ ಪುರುಷ
-
ಲೈಫ್ ಸ್ಟೈಲ್5 days ago
ತರಕಾರಿ ಸಿಪ್ಪೆಯಿಂದ ಪೇಪರ್ ತಯಾರಿಸಿದ ಹತ್ತರ ಬಾಲೆ ಮಾನ್ಯ ಹರ್ಷ..!
-
ನಿತ್ಯ ಭವಿಷ್ಯ7 days ago
ಈ ರಾಶಿಯವರಿಗೆ ಶುಭಕಾರ್ಯ ನೆರವೇರಲಿದೆ..! ಬುಧವಾರ- ರಾಶಿ ಭವಿಷ್ಯ ಏಪ್ರಿಲ್-14,2021
-
ನಿತ್ಯ ಭವಿಷ್ಯ7 days ago
ಜನ್ಮ ಕುಂಡಲಿಯಲ್ಲಿ ಈ ಗ್ರಹಗಳು ಇದ್ದರೆ ಆಗರ್ಭ ಶ್ರೀಮಂತರು ; ಧನ ಯೋಗ ಪ್ರಾಪ್ತಿ
-
ನಿತ್ಯ ಭವಿಷ್ಯ6 days ago
ಈ ರಾಶಿಯವರು ಹೊಸ ಮನೆ ನಿರ್ಮಾಣ ಮಾಡಿ,ಮದುವೆ ಕಾರ್ಯ ಮಾಡುವಿರಿ..! ಗುರುವಾರ- ರಾಶಿ ಭವಿಷ್ಯ ಏಪ್ರಿಲ್-15,2021
-
ನಿತ್ಯ ಭವಿಷ್ಯ5 days ago
ಈ ರಾಶಿಯವರು ಕುಟುಂಬ ಸದಸ್ಯರೊಂದಿಗೆ “ಸಂತಾನದ” ಸಿಹಿಸುದ್ದಿ ಕೇಳಿ ಸಂತಸ ಹಂಚಿಕೊಳ್ಳುವಿರಿ! ಶುಕ್ರವಾರ-ಏಪ್ರಿಲ್-16,2021