Connect with us

ನೆಲದನಿ

ಕಂದಗಲ್ಲು ಓಬಕ್ಕನ ಸೋಬಾನೆ ಪದಗಳಲ್ಲಿ ಬಸವದರ್ಶನ

Published

on

ಭಾರತದ ಚರಿತ್ರೆಯನ್ನು ತಿಳಿಯುವುದಕ್ಕೆ ಶಿಷ್ಟ ಸಾಹಿತ್ಯದಷ್ಟೆ ಮೌಖಿಕ ಸಾಹಿತ್ಯವೂ ಮಹತ್ವದ ದಾಖಲೆಯನ್ನು ಒದಗಿಸುತ್ತದೆ. ಈ ಮೌಖಿಕ ಚರಿತ್ರೆಯು ನೆಲಮೂಲ ಬದುಕಿನ ಪ್ರತಿದನಿಯಾಗಿದೆ. ಇಂತಹ ಮೌಖಿಕ ಚರಿತ್ರೆಯು ನೆಲದನಿಯಾಗಿ ತನ್ನ ಸಂವೇದನೆಗಳನ್ನು ಅನಾವರಣಗೊಳಿಸುತ್ತ ಬಂದಿದೆ. ಆದರೆ ನಾವು ನಮ್ಮ ಚರಿತ್ರೆಯನ್ನು ಅಧ್ಯಯನ ಮಾಡುವ ಸಂದರ್ಭದಲ್ಲಿ ನಮ್ಮ ಮನೆಯಲ್ಲಿಯೇ ಇರುವ ಚರಿತ್ರೆಯನ್ನು ಅರಿಯದೆ ಯಾರೋ ತಮ್ಮಿಚ್ಚೆಯಂತೆ ಬರೆದು ಸಿದ್ಧಪಡಿಸಿದ ದಾಖಲೆಯೆ ನಿಜವಾದ ಚರಿತ್ರೆಯೆಂದು ಭಾವಿಸಿ, ನಮ್ಮ ನಡುವೆ ಇರಬಹುದಾದ ವಾಸ್ತವ ಚರಿತ್ರೆಯನ್ನು ಲೆಕ್ಕಿಸದೆ ತಿರಸ್ಕಾರಕ್ಕೆ ಗುರಿಪಡಿಸಿದ್ದೇವೆ.

‘ಹಿತ್ತಲಗಿಡ ಮದ್ದಲ್ಲ’ ಎಂಬ ಮನಸ್ಥಿತಿಯು ಒಂದು ಕಾಲದಲ್ಲಿ ಮನೆ ಮಾಡಿಕೊಂಡಿತ್ತು. ಇದಕ್ಕೆ ಕಾರಣವೆಂದರೆ, ಈ ಪ್ರಕಾರದ ಸಾಹಿತ್ಯಕ್ಕೆ ಯಾವುದೇ ಮನ್ನಣೆ ಇಲ್ಲ ಎಂಬುದು ಬಹುತೇಕರ ನಂಬಿಕೆಯಾಗಿತ್ತು. ಆದರೆ ಇಂದು ಪಾಶ್ಚಿಮಾತ್ಯ ವಿಚಾರಧಾರೆಗಳ ಪ್ರಭಾವ ಹಾಗೂ ಕೆಲವು ವಿಶ್ವವಿದ್ಯಾಲಯಗಳು ಕೈಗೊಂಡಿರುವ ಅಲಕ್ಷಿತ ಸಮುದಾಯ ಕೇಂದ್ರಿತ (ಸಬಾಲ್ಟ್ರನ್) ಅಧ್ಯಯನದ ಫಲವಾಗಿ ಇಂದು ಗ್ರಾಮೀಣ ಬದುಕಿನಲ್ಲಿರುವ ಮೌಖಿಕ ಸಾಹಿತ್ಯದ ಬಗ್ಗೆ ಹೆಚ್ಚು ಒಲವುಗಳು ಬೆಳೆಯಲಾರಂಭಿಸಿವೆ. ಇದರಿಂದಾಗಿ ಮೌಖಿಕ ಚರಿತ್ರೆಯನ್ನು ಪ್ರಮುಖ ನೆಲೆಗೆ ತರುವ ಪ್ರಯತ್ನಗಳು ನಡೆಯುತ್ತಿವೆ.

ಗ್ರಾಮೀಣ ಜನತೆಯು ತಮ್ಮದೆ ಆದ ಬದುಕನ್ನು ಕಟ್ಟಿಕೊಂಡು, ತಮ್ಮ ಬದುಕಿನ ಬವಣೆಗಳನ್ನು ಮೌಖಿಕ ಸಾಹಿತ್ಯದಲ್ಲಿ ಮುಂದುವರೆಸಿಕೊಂಡು ಬಂದಿದ್ದಾರೆ. ಇಂತಹ ಗ್ರಾಮೀಣ ಬದುಕಿನಲ್ಲಿ ಅಂತರ್ಗತವಾಗಿರುವ ಚರಿತ್ರೆಯೊಂದನ್ನು ತಮ್ಮ ಸಾಹಿತ್ಯದಲ್ಲಿ ವ್ಯಕ್ತಪಡಿಸುವ ಜಾನಪದ ಹಾಡುಗಾರ್ತಿಯರಲ್ಲಿ ಕಂದಗಲ್ಲು ಓಬಕ್ಕನವರು ಒಬ್ಬರಾಗಿದ್ದಾರೆ.

ದಾವಣಗೆರೆ ತಾಲ್ಲೂಕು ಕಂದಗಲ್ಲು ಗ್ರಾಮದಲ್ಲಿ ನೆಲೆಸಿರುವ ಓಬಕ್ಕ ಸುಮಾರು ನೂರು ವರ್ಷಗಳ ಗಡಿಯಲ್ಲಿದ್ದಾರೆ. ತಮ್ಮ ಬದುಕಿನ ಒಂದು ಭಾಗವಾಗಿ ಸೋಬಾನೆ ಪದಗಳನ್ನು ಮೌಖಿಕವಾಗಿ ಹಾಡಿಕೊಂಡು ಬಂದ ಇವರು, ಜನಪದ ಸಾಹಿತ್ಯದ ಗಣ ಯನ್ನು ತಮಗರಿವಿಲ್ಲದಂತೆ ಕಾಪಾಡಿಕೊಂಡು ಬಂದಿದ್ದಾರೆ. ಪೀಳಿಗೆಯಿಂದ ಪೀಳಿಗೆಗೆ ಮೌಖಿಕವಾಗಿ ಮುಂದುವರೆದುಕೊಂಡು ಬಂದಿರುವ ಈ ಪ್ರಕಾರವು ಇಂದಿನ ಜಾಗತಿಕ ಭರಾಟೆಯಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಳುವ ಹಂತಕ್ಕೆ ಬಂದು ನಿಂತಿದೆ.

ಓಬಕ್ಕನಿಗೆ ತಾನು ಕಾಪಾಡಿಕೊಂಡು ಬಂದಿರುವ ಈ ಸಾಹಿತ್ಯದ ಸೊಬಗನ್ನು ತನ್ನ ಮುಂದಿನ ಪೀಳಿಗೆಗೂ ಕಲಿಸಬೇಕೆಂಬ ಹಂಬಲವಿದೆ. ಆದರೆ ಇಂದಿನ ಜಾಯಮಾನದ ಮನಸುಗಳಿಗೆ ಇದು ವಲ್ಲದ ತುತ್ತಾಗಿದ್ದು, ನಮ್ಮ ಹೆಣ್ಣು ಮಕ್ಕಳು ಸಿನಿಮಾ ಧಾರಾವಾಹಿಗೆ ಜೋತುಬಿದ್ದಿರುವುದರ ಫಲವಾಗಿ ಸತ್ವಯುತವಾದ ತಮ್ಮ ಮನೆಯ ಸಾಹಿತ್ಯದ ಸೊಬಗನ್ನು ಹೊರಹಾಕಿ, ಅನ್ಯ ಸಂಸ್ಕಕೃತಿಯ ಅನುಕರಣೆ ಮತ್ತು ಸ್ವೀಕಾರದ ಕಾಲಘಟ್ಟದಲ್ಲಿದ್ದೇವೆ. ಇದಕ್ಕೆ ಪ್ರಮುಖವಾದ ಕಾರಣ ನಮ್ಮ ಸಂಸ್ಕಕೃತಿ, ಆಚಾರ, ವಿಚಾರಗಳಲ್ಲಿರುವ ಮೌಲ್ಯಗಳ ತಿಳುವಳಿಕೆಯ ಕೊರತೆಯು ಒಂದಾಗಿದೆ.

ಓಬಕ್ಕನಲ್ಲಿ ನೆಲೆಯೂರಿರುವ ಮೌಖಿಕ ಸಾಹಿತ್ಯದ ಸಾಮಥ್ರ್ಯವನ್ನು ಕುರಿತು ವಿಚಾರಿಸಿದಾಗ ನನಗೆ ದನಿಗೆ ಜೊತೆಗೂಡಿಸುವವರು ಸಿಕ್ಕರೆ ರಾತ್ರಿಯಿಡಿ ನಿರಂತರವಾಗಿ ತಾನು ಕಲಿತಿರುವ ಪದಗಳನ್ನು ಹಾಡುವುದಾಗಿ ಧೈರ್ಯದಿಂದ ಸವಾಲು ಹಾಕುತ್ತಿದ್ದರು. ಓಬಕ್ಕ ನೂರು ವರ್ಷದ ಆಜುಭಾಜಿನಲ್ಲಿದ್ದರೂ ತುಂಬು ಕ್ರಿಯಾಶೀಲತೆಯಿಂದ ಕೆಲಸ ಕಾರ್ಯಗಳನ್ನು ನಿರ್ವಹಿಸುವುದರ ಜೊತೆಗೆ, ಇಂದಿನ ಮಹಿಳೆಯರು ತಮ್ಮ ಮನೆಯಲ್ಲಿ ಮಾಡುವಂತಹ ಸಣ್ಣಪುಟ್ಟ ಕಸೂತಿಯಂತಹ ಕೆಲಸಗಳನ್ನು ಅನುಕರಣೆಯಿಂದ ಕಲಿತು ವಿವಿಧ ಬಗೆಯ ಕಸೂತಿಯ ವಸ್ತುಗಳನ್ನು ತಯಾರಿಸುವ ಸಾಮಥ್ರ್ಯವನ್ನು ಹೊಂದಿದ್ದಾರೆ.

ಸುಮಾರು ಮೂವತ್ತನೇ ವಯಸ್ಸಿನಲ್ಲಿ ತನ್ನ ಗಂಡನನ್ನು ಕಳೆದುಕೊಂಡ ಓಬಕ್ಕ ಬದುಕನ್ನು ಧೈರ್ಯವಾಗಿ ಎದುರಿಸುವ ಎದೆಗಾರಿಕೆಯನ್ನು ಬೆಳೆಸಿಕೊಂಡು ಬಂದಿದ್ದಾರೆ. ಓಬಕ್ಕನಿಗೆ ತಾನು ಕಲಿತಿರುವ ಪದಗಳನ್ನು ಇಂದು ಪ್ರದರ್ಶಿಸುವುದಕ್ಕೆ ಹಲವಾರು ಅಡೆತಡೆಗಳಿವೆ. ಅವುಗಳಲ್ಲಿ ಒಂದು, ತಾನು ವಂಶಪಾರಂಪರ್ಯವಾಗಿ ಉಳಿಸಿಕೊಂಡು ಬಂದಿರುವ ಪದಗಳನ್ನು ಹಾಡುವುದಕ್ಕೆ ದನಿಗೂಡಿಸುವಂತಹ ಸಮಾನ ಮನಸ್ಕರ ಕೊರತೆಯು ಒಂದಾಗಿದೆ. ಎರಡು, ನೂರರ ಗಡಿಯಲ್ಲಿರುವ ಇವರು ದನಿ ಎತ್ತಿ ಹಾಡುವಷ್ಟು ಸಾಮಥ್ರ್ಯವನ್ನು ಕಳೆದುಕೊಂಡಿದ್ದು, ಹೆಚ್ಚು ಸಮಯ ಹಾಡುವುದಕ್ಕೆ ಇವರ ದನಿಯಲ್ಲಿ ಸಾಮಥ್ರ್ಯವಿಲ್ಲ. ಹೀಗಾಗಿ ಇವರ ದನಿಯಲ್ಲಿ ನಡುಕವಿದೆ.

ಇದರಿಂದ ಇಂದು ಈ ಪದಗಳನ್ನು ಹಾಡುವುದಕ್ಕೆ ಅಡಚಣೆ ಉಂಟಾಗುತ್ತದೆ. ಮೂರು, ಇವರಿಗೆ ಪ್ರೊತ್ಸಾಹ ನೀಡಿ ಇವರ ಪದಗಳ ಮಹತ್ವವನ್ನು ಗುರುತಿಸುವವರ ಕೊರತೆಯಿದೆ. ನಾಲ್ಕು, ಇವರಲ್ಲಿನ ಈ ಸಾಹಿತ್ಯವನ್ನು ಆಸಕ್ತಿಯಿಂದ ತಿಳಿಯಬೇಕೆಂಬ ಹಂಬಲವುಳ್ಳವರ ಎದುರು ಹಾಡುವುದಕ್ಕೆ ಇವರಿಗೆ ಮುಜುಗರವಿದೆ. ಇದಕ್ಕೆ ಕಾರಣ ಇಂದಿನ ಕಾಲದಲ್ಲಿ ನಾವು ಹಾಡಿಕೊಂಡು ಬಂದಿರುವ ಹಾಡು (ಪದ)ಗಳಿಗೆ ಬೆಲೆಯಿಲ್ಲ ಎಂಬ ಕೀಳರಿಮೆಯ ಭಾವವನ್ನು ತಮ್ಮಲ್ಲಿ ಬೆಳೆಸಿಕೊಂಡಿದ್ದಾರೆ. ಹಾಗಾಗಿ ಈ ಪದಗಳನ್ನು ಸಂಗ್ರಹಿಸುವುದು ಹಾಗೂ ಇವರಿಗೆ ಸಂಗ್ರಹದ ಅಗತ್ಯತೆಯ ಅರಿವು ಮೂಡಿಸುವುದು ಕೂಡ ತ್ರಾಸದಾಯಕವಾದ ಕೆಲಸವಾಗಿದೆ.

ಇದು ಇಂದು ಈ ಮೌಖಿಕ ಸಾಹಿತ್ಯವನ್ನು ಕಡೆಗಣಿಸಿ ಆಧುನಿಕ ಸಂಗೀತ ಪ್ರಕಾರಕ್ಕೆ ಹೆಚ್ಚು ಜೋತುಬಿದ್ದಿರುವ ಪರಿಣಾಮದಿಂದಾಗಿ ಇಂತಹ ಸಾಹಿತ್ಯ ಪ್ರಕಾರವು ಇಂದು ಅವನತಿಯ ಅಂಚಿನಲ್ಲಿದೆ. ಓಬಕ್ಕನಂತಹ ಎಷ್ಟೋ ಜನಪದರಲ್ಲಿ ಕರಗತವಾಗಿರುವ ಸಾಹಿತ್ಯದ ಸೊಬಗು ಅಳಿವಿನಂಚಿನಲ್ಲಿದೆ.

ನಾನು ನನ್ನ ಬಾಲ್ಯದ ದಿನಗಳಿಂದಲೂ ಓಬಕ್ಕನನ್ನು ಹತ್ತಿರದಿಂದ ನೋಡಿದವನು. ಆದರೆ ನನಗೆ ಓಬಕ್ಕನ ಸಾಹಿತ್ಯದ ಮಹತ್ವ ದರ್ಶನವಾಗಿದ್ದು ನಾನು ಸಂಶೋಧನೆಗೆ ತೊಡಗಿಕೊಂಡ ಬಹುದಿನಗಳ ನಂತರ. ನನಗೆ ಓಬಕ್ಕ ಸಂಬಂಧದಲ್ಲಿ ಅಜ್ಜಿಯಾಗಬೇಕು ಎಂದುಕೊಂಡಿದ್ದೆ. ಆದರೆ ಓಬಕ್ಕನ ಪ್ರಕಾರ ನಾನು ಓಬಕ್ಕನಿಗೆ ತಮ್ಮನಾಗಿದ್ದೆ.

ನೂರು ವರ್ಷದ ಗಡಿಯಲ್ಲಿರು ಓಬಕ್ಕನಿಗೂ ಮೂವತ್ತರ ಗಡಿಯಲ್ಲಿರುವ ನನಗೂ ಅಕ್ಕ-ತಮ್ಮನ ಸಂಬಂಧ ಹೇಗೆ ಸಾಧ್ಯ ಎಂಬುದು ನನಲ್ಲಿ ಗೊಂದಲವನ್ನು ಮೂಡಿಸಿತ್ತು. ಆದರೆ ಓಬಕ್ಕ ಕಟ್ಟಿಕೊಡುವ ವಂಶವೃಕ್ಷದ ಪ್ರಕಾರ ಆಕೆಗೆ ನಾನು ತಮ್ಮನೆ ಆಗಿದ್ದೆ. ಈ ಕಾರಣದಿಂದಾಗಿ ನೂರರ ಪ್ರಾಯದ ಓಬಜ್ಜಿಯನ್ನು ಇಲ್ಲಿ ಓಬಕ್ಕ ಎಂಬುದಾಗಿಯೇ ಸಂಬೋಧಿಸುತ್ತಿದ್ದೇನೆ. ಓಬಕ್ಕನಲ್ಲಿ ಕರಗತವಾಗಿರುವ ಪದಗಳನ್ನು ಸಂಗ್ರಹ ಮಾಡುವಾಗ ನಾನು ಸಂಶೋಧನೆ ಮಾಡುತ್ತಿದ್ದೇನೆ. ನೀನು ಕಲಿತಿರುವ ಪದಗಳನ್ನು ಹಾಡು ಎಂದರೆ ಓಬಕ್ಕ ಹೇಳುವಂತಿರಲಿಲ್ಲ. ಇದಕ್ಕೆ ಕಾರಣ ತನ್ನ ಕಾಲದ ಪದಗಳು (ಸಾಹಿತ್ಯ) ಮಹತ್ವ ಕಳೆದುಕೊಂಡಿದೆ ಎಂಬ ಆತಂಕದಿಂದಲೊ ಅಥವಾ ಬದಲಾದ ಕಾಲಕ್ಕೆ ತಕ್ಕಂತೆ ಹೊಂದಿಕೊಳ್ಳುವ ಮಾನವ ಸಹಜ ಗುಣದಿಂದಲೊ ಓಬಕ್ಕ ಆಧುನಿಕ ಬದುಕಿನಲ್ಲಿ ಬೆರೆತುಕೊಂಡಿರುವ ಸಿನಿಮಾ ಮತ್ತು ಧಾರವಾಹಿ ಪ್ರಪಂಚಕ್ಕೆ ತನ್ನನ್ನು ತೆರೆದುಕೊಂಡಿದ್ದಳು.

ಇಂತಹ ಸಂದರ್ಭದಲ್ಲಿ ಓಬಕ್ಕನನ್ನು ಆಕೆಯ ಸಾಹಿತ್ಯ ಜಗತ್ತಿಗೆ ಕೊಂಡೊಯ್ಯಲು ವಿವಿಧ ತೆರನಾದ ಕಸರತ್ತುಗಳನ್ನು ಪ್ರದರ್ಶಿಸಬೇಕಾಯಿತು. ಕೊನೆಗೆ ನಿನಗೆ ವಯಸ್ಸಾಗಿದೆ, ನಿನ್ನ ಕಾಲದಲ್ಲಿ ಹಾಡುತ್ತಿದ್ದ ಪದಗಳನ್ನೆಲ್ಲ ಮರೆತಿರುವೆ. ನಿನಗೆ ‘ಅರವುಮರುವು’ ಎಂದಾಗ ತನ್ನ ಸಾಮಥ್ರ್ಯವನ್ನು ಪ್ರದರ್ಶಿಸುವ ನೆಲೆಯಲ್ಲಿ ಒಂದೊಂದಾಗಿಯೇ ತನ್ನ ಮನದ ಮೂಲೆಯಲ್ಲಿ ಕೇಂದ್ರಿಕರಿಸಿಕೊಂಡಿದ್ದ ಪದಗಳನ್ನು ಹಾಡುವ ಪ್ರಯತ್ನ ಮಾಡಿದರು.

ಓಬಕ್ಕನ ದನಿಯ ಸಮಸ್ಯೆಯನ್ನರಿತ ನಾನು ಅವರ ಬಳಿ ಒಂದೊಂದೆ ಸಾಲುಗಳನ್ನು ಸ್ಪಷ್ಟವಾಗಿ ತಿಳಿದುಕೊಂಡು ಬರೆಯಲು ಪ್ರಾರಂಭಿಸಿದೆ. ಒಂದು ಪದವನ್ನು ಸಂಪೂರ್ಣವಾಗಿ ಸಂಗ್ರಹಿಸಿದ ತರುವಾಯ ಅದರ ರಾಗ ಮತ್ತು ಲಯವನ್ನು ತಿಳಿಯುವ ಕಾತುರದಿಂದ ನಿಧಾನವಾಗಿ ಅವರಿಂದಲೇ ಪದಗಳನ್ನು ಹಾಡಿಸಿ, ಅವರ ಹಾಡಿನ ರಾಗವನ್ನು ಆಧುನಿಕ ವಿದ್ಯುನ್ಮಾನಗಳಲ್ಲಿ ಸಂಗ್ರಹಿಸಲು ಪ್ರಾರಂಭಿಸಿದೆ.

ಹೀಗೆ ಸಂಗ್ರಹಿಸಿದ ಪದಗಳಲ್ಲಿ ಬಸವಣ್ಣನ ಬದುಕಿಗೆ ಸಂಬಂಧಿಸಿದ ಕೆಲವು ಪದಗಳನ್ನು ಓಬಕ್ಕ ಹಾಡಿದ್ದರು. ನಾವು ಈಗಾಗಲೇ ಚರಿತ್ರೆಯ ಪಠ್ಯಗಳಲ್ಲಿ ಓದಿರುವುದಕ್ಕಿಂತ ಭಿನ್ನವಾದ ದರ್ಶನವೊಂದು ಓಬಕ್ಕನ ಪದಗಳಲ್ಲಿ ಕಂಡುಬಂದಿತು. ಆದ್ದರಿಂದ ಈ ನೆಲೆಯ ಜಾಡುಹಿಡಿದು ಜನಪದರ ಬದುಕಲ್ಲಿ ಕಂಡುಬರುವ ಸಮಾಜ ಸುಧಾರಕನಾದ ಬಸವಣ್ಣನ ಬದುಕನ್ನು ಅನಾವರಣಗೊಳಿಸುವ ನೆಲೆಯಲ್ಲಿ ‘ಓಬಕ್ಕನ ಬಸವದರ್ಶನ’ ಎಂಬ ಈ ಲೇಖನವನ್ನು ರಚಿಸುವ ಪ್ರಯತ್ನವನ್ನು ಇಲ್ಲಿ ಕೈಗೊಳ್ಳಲಾಗಿದೆ.

–2–

ಪ್ರಸ್ತುತ ಲೇಖನದಲ್ಲಿ ಓಬಕ್ಕ ಹಾಡಿದ ಸೋಬಾನೆ ಪದಗಳ (ಹಾಡು) ಮೂಲಕ ಜನಪದರು ಅಥವಾ ಸಾಮಾನ್ಯ ಜನತೆಯು ಸಮಾಜ ಸುಧಾರಕನಾದ ಬಸವಣ್ಣನನ್ನು ಕಾಣುವ ಬಗೆಯನ್ನು ಇಲ್ಲಿ ಚರ್ಚೆಗೆ ಒಳಪಡಿಸಲಾಗುವುದು. ನಮ್ಮ ಜನಪದ ಸಂಸ್ಕೃತಿ ಹಾಗೂ ಪರಂಪರೆಯಲ್ಲಿ ತಳವರ್ಗದ ಜನತೆಯ ಪರವಾಗಿ ಹೋರಾಡಿದ ಬಸವಣ್ಣನನ್ನು ಶಿವನ ಪ್ರತಿರೂಪವಾಗಿ ಸ್ವೀಕರಿಸಲಾಗಿದೆ.

ಇಲ್ಲಿ ಶಿವ ಬೇರೆಯಲ್ಲ, ಬಸವಣ್ಣ ಬೇರೆಯಲ್ಲ. ಇದಕ್ಕೆ ಕಾರಣ ಈ ನಾಡಿನ ಮೂಲ ಸಂಸ್ಕೃತಿಯು ಶೈವ ನೆಲೆಯದಾಗಿರುವುದು. ಹೀಗಾಗಿ ನಮ್ಮ ಜನಪದರು ಶಿವನ ಆರಾಧಕರಾಗಿ ಕಂಡುಬರುತ್ತಾರೆ. ತಮ್ಮ ಸಮುದಾಯದ ಜನತೆಯ ಪರವಾಗಿ ಹೋರಾಟ ನಡೆಸಿದ ಕ್ರಾಂತಿಕಾರರನ್ನು ಶಿವನ ಪ್ರತಿರೂಪವಾಗಿ ಕಾಣುತ್ತಾರೆ. ಆದ್ದರಿಂದ ಇಲ್ಲಿ ಶಿವ ಮತ್ತು ಬಸವಣ್ಣ ಒಂದೆಯಾಗಿ ಕಂಡುಬರುತ್ತಾರೆ. ತಳಸಮುದಾಯದ ಪ್ರಗತಿಗಾಗಿ ಬಸವಣ್ಣ ತನ್ನ ಹೋರಾಟವನ್ನು ನಡೆಸಿದ್ದು ಕ್ರಿ.ಶ 12ನೇ ಶತಮಾನದಲ್ಲಿ. ಆದರೆ ಬಸವಣ್ಣನ ಮೂಲ ಆಶಯಗಳನ್ನು ಸ್ಥಾಪಿತ ಹಿತಾಸಕ್ತಿಗಳು ಅವರ ಇಚ್ಚಾನುಸಾರವಾಗಿ ಬಳಸಿಕೊಂಡು, ಆತನ ವಿಚಾರಗಳ ಅಡಿಯಲ್ಲಿ ಮೂಲಭೂತವಾದ ಧರ್ಮವೊಂದನ್ನು ಸ್ಥಾಪಿಸಿಕೊಂಡು ಬಂದಿವೆ.

ಈ ಸ್ಥಾಪಿತ ಮೌಲ್ಯಗಳಿಂದಾಗಿ ಬಸವಣ್ಣನ ಉದಾರವಾದಿ ನಿಲುವುಗಳನ್ನು ಇಂದು ಹುಡುಕುವುದು ಕೂಡ ಸಾಧ್ಯವಾಗದಷ್ಟು ದೂರ ಸರಿದಿವೆ. ಆದರೆ ತನ್ನ ಹಿತಕ್ಕಾಗಿ ಹೊರಾಡಿದ ಗುರುವನ್ನು ನಿಜದ ನೆಲೆಯಲ್ಲಿ ಆರಾಧಿಸಿಕೊಂಡು ಬಂದಿರುವುದನ್ನು ಜನಪದ ಪರಂಪರೆಯಲ್ಲಿ ಇಂದಿಗೂ ಗುರುತಿಸಬಹುದಾಗಿದೆ.
ಜನಪದರು ಬಸವಣ್ಣನನ್ನು ತಮ್ಮ ವಿಮೋಚನೆಗಾಗಿ ಹೋರಾಡಿದ ದೇವರೆಂದು ಆರಾಧಿಸುವುದು ಮಾತ್ರವಲ್ಲ, ಬಸವಣ್ಣನ ಸಂಕಷ್ಟಗಳನ್ನು ತಮ್ಮ ನೋವುಗಳೆಂಬಂತೆ ಆತನ ನೋವುಗಳಿಗೆ ಮಿಡಿಯುತ್ತಾ ಬಂದಿದ್ದಾರೆ. ಈ ಮನೋಭಾವವು ಜನಪದರಲ್ಲಿನ ಹೃದಯ ವೈಶಾಲ್ಯವನ್ನು ಕಟ್ಟಿಕೊಡುತ್ತದೆ. ಇವರ ಈ ತುಡಿತ ಯಾವುದೇ ಸ್ವಾರ್ಥದಿಂದ ಕೂಡಿದ್ದಲ್ಲ, ಬದಲಾಗಿ ಇಲ್ಲಿ ಸಾಮಾಜಿಕ ಕಳಕಳಿ ಕಂಡುಬರುತ್ತದೆ.

ಶಿಷ್ಟ ಪರಂಪರೆಯು ಬಸವಣ್ಣನ ಮಹಿಮೆಯನ್ನು ತಮ್ಮ ಇಚ್ಚಾನುಸಾರ ವರ್ಣನಾತ್ಮಕ ನೆಲೆಯಲ್ಲಿ ಚಿತ್ರಿಸಿಕೊಂಡು, ಹಲವಾರು ಕಡೆಗಳಲ್ಲಿ ಪ್ರಕ್ಷಿಪ್ತಗಳನ್ನು ಉಂಟುಮಾಡಿದೆ. ಇದಕ್ಕೆ ಕಾರಣ ಸ್ಥಾಪಿತ ಹಿತಾಸಕ್ತಿಗಳಿಗೆ ಧಕ್ಕೆಯಾಗದಂತೆ ಕಾಪಾಡುವ ಮೂಲಕ ಅಸಮಾನತೆಯ ಸಾಮಾಜಿಕ ವ್ಯವಸ್ಥೆಯನ್ನು ಮುಂದುವರೆಸಿಕೊಂಡು ಬಂದಿರುವುದಾಗಿದೆ.

ಇಂತಹ ಪ್ರಕ್ಷಿಪ್ತ ಮಾದರಿಗಳನ್ನು ಹಲವಾರು ಶಿಷ್ಟ ಸಾಹಿತ್ಯ ಕೃತಿಗಳಲ್ಲಿ ಗುರುತಿಸಬಹುದಾಗಿದೆ. ಆದರೆ ಇದಕ್ಕೆ ಪರ್ಯಾಯ ನೆಲೆಯಲ್ಲಿ ಸಾಮಾನ್ಯ ಜನರ ಬದುಕಿಗಾಗಿ ಹೋರಾಡಿದ ಬಸವಣ್ಣನ ನೋವಿಗೆ ಜನಪದರು ತುಡಿಯುತ್ತ ಬಂದಿರುವ ಕೆಲವು ಸೋಬಾನೆ ಪದಗಳು ಈ ಮುಂದಿನಂತಿವೆ.

ಯಾರೇನೆಂದರು ನಿನಗೆ ಸದ್ಗುರು ದೇವ ||
ಬಾರ ದ್ರೋಹಿರಿ ಮನಗೆ
ಸದ್ಗರು ದೇವ | ನಿನಗ್ಯಾರೇನೆಂದರು ||
ಸಣ್ಣನಾಗಲಿ ಬಾಲ | ಲೋಲನಾಗಲಿ ಗುಣ
ಶೀಲನಾಗಲಿ ಮುಕ್ತಿ | ಕೀಲು ತೋರಿದೆ ಗುರುವೆ
ಸದ್ಗುರು ದೇವ | ನಿನಗ್ಯಾರೇನೆಂದರು ||
ಚಾರನೆಂಬುವರೇನು | ಸೂರನೆಂಬುವರೇನು
ಪರಮಾತ್ಮಕ ಸುವ್ವಿ
ಸದ್ಗುರು ದೇವ | ಯಾರೇನೆಂದರು ನಿನಗೆ ||
ಧರೆಯೊಳು ಕೂಡಲಿ | ಪುರದೊಳು ನೆಲೆಸಿರುವ
ವರಶ್ರೀಸಂಗಮ ಬಸವೇಸ್ಪುರಗೆ | ಯಾರೇನೆಂದರು
ಸದ್ಗುರು ದೇವ | ಯಾರೇನೆಂದರು ನಿನಗೆ ||

ಈ ಜನಪದ ಸಾಹಿತ್ಯವು ಬಸವಣ್ಣನ ಅಂತಿಮ ದಿನದ ಬದುಕಿನ ಸಂಕಷ್ಟಗಳನ್ನು ಅನಾವರಣಗೊಳಿಸುತ್ತದೆ. ಇಲ್ಲಿ ಬಸವಣ್ಣ ಮೌನ ತಾಳಿರುವುದಕ್ಕೆ ಹಲವಾರು ಕಾರಣಗಳಿವೆ. ತನ್ನ ಹೋರಾಟದ ಭಕ್ತಿಯ ಮಾರ್ಗವನ್ನು ಕುರಿತು ಬಸವಣ್ಣ ಹೇಳುವ ‘ಭಕ್ತಿಯೆಂಬುದು ಮಾಡಬಾರದು ಕಾಣ| ಗರಗಸವಿದ್ದಂತೆ’ ಎಂಬ ಮಾತು ಆತನ ಬದುಕಿನ ಸಂಕಷ್ಟಗಳನ್ನು ಕಟ್ಟಿಕೊಡುತ್ತದೆ.

ಇಲ್ಲಿ ತನ್ನ ಹೋರಾಟದ ಹಾದಿಯಲ್ಲಿ ಈತನು ಹಲವಾರು ಬಗೆಯ ನೋವನ್ನು ಅನುಭವಿಸಿರುತ್ತಾನೆ. ಒಂದೆಡೆ ಬ್ರಾಹ್ಮಣ್ಯವನ್ನು ಧಿಕ್ಕರಿಸುವ ಮೂಲಕ ಶೂದ್ರ ಸಮುದಾಯದ ಸಮಾನತೆಗಾಗಿ ಹೋರಾಟ ನಡೆಸುತ್ತಾನೆ. ಮತ್ತೊಂದೆಡೆ ಸಮಾಜದ ಪ್ರಬಲ ವರ್ಗವಾದ ಪುರೋಹಿತಶಾಹಿಯನ್ನು ಎದುರು ಹಾಕಿಕೊಳ್ಳುತ್ತಾನೆ.

ಈ ಸಂದರ್ಭದಲ್ಲಿ ರಾಜಾಶ್ರಯದಲ್ಲಿದ್ದ ಬಸವಣ್ಣನಿಗೆ ತಳಸಮುದಾಯದ ಪರವಾದ ಹೋರಾಟ ಮಾಡುವುದಕ್ಕೆ ಸ್ವತಂತ್ರ ಅಸ್ತಿತ್ವ ಇರಲಿಲ್ಲ. ಇಲ್ಲಿ ರಾಜನ ಆಜ್ಞೆಯನ್ನು ತಿರಸ್ಕರಿಸಿದರೆ ತನ್ನ ಪದವಿಯನ್ನು ಕಳೆದುಕೊಳ್ಳುವುದು ಮಾತ್ರವಲ್ಲ, ಕಠಿಣ ಶಿಕ್ಷೆಗೂ ಗುರಿಯಾಗಬೇಕಾದ ಸಂಕಷ್ಟದ ದಿನಗಳು ಬಸವಣ್ಣನ ಮುಂದಿದ್ದವು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ತಾನು ಕಟ್ಟಿದ ಸಮಾನತೆಯ ಆಶಯಹೊತ್ತ ಅನುಭವ ಮಂಟಪವನ್ನು ಸಮಾನ ನೆಲೆಯಲ್ಲಿ ಮುನ್ನಡೆಸಬೇಕಾಗಿತ್ತು. ಇಂತಹ ಚಾರಿತ್ರಿಕ ಒತ್ತಡದ ಪರಿಸ್ಥಿತಿಯಲ್ಲಿನ ಬಸವಣ್ಣನ ಬದುಕನ್ನು ಕುರಿತು ಜನಪದರು ಆತನ ನೋವಿಗೆ ಮಿಡಿಯುತ್ತ ಬಂದಿದ್ದಾರೆ.

ಜಾನಪದವು ಶಿಷ್ಟ ಸಾಹಿತ್ಯ ಪರಂಪರೆಯಂತೆ ಬಸವಣ್ಣನ ಬದುಕನ್ನು ಹಾಗೂ ಆತನ ಹೋರಾಟದ ನೆಲೆಗಳನ್ನು ದೈವಾಂಶ ಸಂಭೂತ ನೆಲೆಯಲ್ಲಿ ವೈಭವಿಕರಿಸುವುದಿಲ್ಲ. ಜನಪದ ಪರಂಪರೆಯಲ್ಲಿ ಯಾವುದೇ ವೈಭವವಿಲ್ಲದೆ ಆತನ ವಾಸ್ತವ ಬದುಕನ್ನು ತಮ್ಮ ಮೌಖಿಕ ಸಾಹಿತ್ಯದಲ್ಲಿ ಅನಾವರಣಗೊಳಿಸುತ್ತಾರೆ. ಜನಪದರು ಬಸವಣ್ಣನನ್ನು ಶಿಷ್ಟ ಸಾಹಿತ್ಯದಿಂದ ರಚನೆಯಾದ ಚರಿತ್ರೆಯ ಮೂಲಕ ಅಧ್ಯಯನ ಮಾಡಿ ಕಂಡುಕೊಂಡವರಲ್ಲ. ಬದಲಾಗಿ ಕಾಲದಿಂದ ಕಾಲಕ್ಕೆ ಹರಿದುಬಂದ ಮೌಖಿಕ ಪರಂಪರೆಯಿಂದ ಆತನನ್ನು ಕಂಡುಕೊಂಡವರು.

ಹೀಗಾಗಿ ಇಲ್ಲಿ ಆತನ ನೋವು ನಲಿವುಗಳನ್ನು ಯಥಾ ಪ್ರಕಾರವಾಗಿ ಮುಂದುವರೆಸಿಕೊಂಡು ಬಂದಿದ್ದಾರೆ. ‘ಯಾರೇನೆಂದರು ನಿನಗೆ ಸದ್ಗುರು ದೇವ’ ಮತ್ತು ‘ಬಾರ ದ್ರೋಹಿರಿ ಮನಗೆ’ ಎಂಬ ನುಡಿಗಳು ಜನಪದರು ಕಂಡುಕೊಂಡಿರುವ ಬಸವ ದರ್ಶನವನ್ನು ಪ್ರತಿನಿಧಿಸುತ್ತವೆ. ಹೀಗಾಗಿ ಶಿಷ್ಟ ಸಾಹಿತ್ಯವು ಕಟ್ಟಿಕೊಡುವ ಚರಿತ್ರೆಗಿಂತ ಭಿನ್ನವಾದ ಚರಿತ್ರೆಯೊಂದು ನಮ್ಮ ಜಾನಪದರ ಬದುಕಿನೊಳಗೆ ಅಂತರ್ಗತವಾಗಿದೆ.

ಜನಪದರು ಬಸವಣ್ಣನ ನೋವು ನಲಿವುಗಳನ್ನು ಸಮಾನ ನೆಲೆಯಲ್ಲಿ ಚಿತ್ರಿಸಿಕೊಂಡು ಬಂದಿದ್ದಾರೆ. ಇಲ್ಲಿ ಆತನ ಕಲ್ಯಾಣ ಹಾಗೂ ಸರಸ ಸಲ್ಲಾಪಗಳು ಮಾನವ ಸಹಜ ನೆಲೆಯಲ್ಲಿ ವ್ಯಕ್ತವಾಗುತ್ತವೆ. ಬಸವಣ್ಣ ಮತ್ತು ಗಂಗಾಭಿಕೆಯ ಕಲ್ಯಾಣದ ಸಂದರ್ಭವನ್ನು ಹಾಗೂ ಅಲ್ಲಿನ ಸಲ್ಲಾಪದ ಕ್ಷಣಗಳನ್ನು ತಮ್ಮ ಬದುಕಿನೊಂದಿಗೆ ಸಮೀಕರಿಸಿಕೊಂಡು ಬಂದಿರುವುದನ್ನು ನಾವು ಜಾನಪದ ಪರಂಪರೆಯಲ್ಲಿ ಮಾತ್ರ ಗುರುತಿಸಬಹುದಾಗಿದೆ.

ಜನಪದರು ನಿರಂತರವಾಗಿ ಕಾಲದಿಂದ ಕಾಲಕ್ಕೆ ತಾವು ಆಚರಿಸಿಕೊಂಡು ಬಂದಿರುವ ಸಂಪ್ರದಾಯ, ಆಚರಣೆ, ಹಾಸ್ಯ, ವಿನೋದವನ್ನು ಬಸವಣ್ಣನ ಕಲ್ಯಾಣದೊಂದಿಗೆ ಸಮೀಕರಿಸಿಕೊಂಡು ಪದ ಕಟ್ಟಿ ಹಾಡುತ್ತಾ ಬಂದಿದ್ದಾರೆ. ಅದು ಓಬಕ್ಕನ ಸೋಬಾನೆ ಪದಗಳಲ್ಲಿ ಹೀಗೆ ವ್ಯಕ್ತವಾಗಿದೆ.

ಗುರುವಿನ ಮನೆಯಾಗೆ
ಅರುವಿನ ಲಯದಾಗೆ
ಅರುವಿನ ಮಂಟಪದ ಮನೆಯಾಗೆ
ಕರುಣ ಕನೆಂದುಕರೆವರು ಸೋಬಾನೆ||
ಬಸವಯ್ಯ ಶ್ರೀಗಂಗೆ
ಕುಶಲದಿಂ ಕರವಿಡಿದು | ಬಸವಣ್ಣ
ಬಂದು ಹಸೆಯಲ್ಲಿ ಕುಳಿತರು ಸೋಬಾನೆ||
ಪದ್ಮಲೋಚನೆ ಗಂಗೆ
ಎದ್ದು ಸೆರಗ ಬಿಗಿದು | ಮುದ್ದು ಬಸವಯ್ಯಗೆ
ಅರಿಶಿಣವ ಧರಿಸ್ಯಾಳೆ ಸೋಬಾನೆ ||
ಗಂಧ ಹಾಕುಸ್ತಿ ಹಿಡುಲಾಗ ಸೋಬಾನೆ
ಗಂಧ ಮೇಲಕ್ಕೆ ಎಳವುತ ಸೋಬಾನೆ
ಅಂದು ಆರುತಿಯಾ ಬೆಳಗುತ ಸೋಬಾನೆ
ಗಂಧ ಮೇಲಕ್ಕೆ ಎಳವುತ ಶ್ರೀಗಂಗೆ
ಬಂದು ಹಸೆಯಲ್ಲಿ ಕುಳಿತಳು ಸೋಬಾನೆ ||
ಬಸವಯ್ಯ ನೀನೊಮ್ಮೆ
ಎಣ್ಣೆ ಅರಿಶಿಣವ ಧರಿಸಪ್ಪ ಸೋಬಾನೆ
ಬಸವಯ್ಯ ಗಂಧ ಹಾಕುಸ್ತಿ ಹಿಡುಲಾಗ
ಅಂದು ಆರುತಿಯಾ ಬೆಳಗುತ
ಬಂದು ಹಸೆಯಲ್ಲಿ ಕುಳಿತರು ಸೋಬಾನೆ ||
ಬಂದು ಹಸೆಯಲ್ಲಿ ಕುಳಿತರು ಬಸವಣ್ಣ
ಸಸಿಮುಖಿಯರೆಲ್ಲ ನಗುತಾರೆ ಸೋಬಾನೆ ||
ಶರ್ತೆಶ ಕೋಟಿಗೆ ವರ್ಕಾಳ ಸಲಹುತ
ನಿತ್ಯಗೆ ಪರಮ ವಿರಕ್ತನಿಗೆ | ಭೂಗಳಿಯ ಕರ್ತನಿಗೆ
ಜೀವ ಕಮ್ಯಾರ್ತನಿಗೆ ಸೋಬಾನೆ
ಇವ ಸದ್ಗುರು ಬಸವದೇವನಿಗೆ ಸೋಬಾನೆ ||
ಅಂತರಂಗನ ಪೇಟೆ ಸಂತೆಗೊಗನ ತಂಗಿ
ಸಿಂತಿಸುತ ಕೊಂಡೆ ರತುನಾವ ಸೋಬಾನೆ ||
ಸಿಂತುಸುತ ಕೊಂಡೆ ರತುನಾದ ಬೆಳಕಿಲಿ
ಕಾಂತೆ ಕೇಳಮ್ಮ ಕೌತುಕವ ಸೋಬಾನೆ ||
ರತುನಾದ ಬೆಳಕಲಿ ಕಾಂತೆ ಕೇಳಮ್ಮ
ಕೌತುಕವ ಶ್ರೀಗುರು ಬಸವಂಗೆ | ಶಿವನ ಕುಮಾರಂಗೆ
ನಾಗಭೂಷಣ ನಮಿತನಿಗೆ ಸೋಬಾನೆ ||
ಸದ್ಗುರು ಬಸವಯ್ಯ ದೇವನಿಗೆ
ಸತ್ಯ ಸದ್ಗುರುವಂಗೆ | ನಿತ್ಯಸುಳ್ಳಾಡಿ ದಿನಗಳಿದೆ
ಮತ್ತುಟ್ಟೊ ಬಾದೆ ಬಿಡದಮ್ಮ ಸೋಬಾನೆ ||

ಪ್ರಸ್ತುತ ದಿನಗಳಲ್ಲಿ ಸ್ಥಾಪಿತ ನೆಲೆಗೆ ತಳ್ಳಿರುವ ಬಸವಣ್ಣನನ್ನು ಒಂದು ಜಾತಿಯ ನಾಯಕನೆಂದು ಬಿಂಬಿಸುವ ಮೂಲಕ ಉಳಿದಂತ ಸಮುದಾಯಗಳು ‘ಇವ ನಮ್ಮವನಲ್ಲ’ ಎನ್ನುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಇದಕ್ಕೆ ಬಸವಣ್ಣನ ಸುತ್ತ ಸುತ್ತುವರೆದಿರುವ ಮೂಲಭೂತವಾದ ಧೋರಣೆಯು ಪ್ರಮುಖ ಕಾರಣವಾಗಿದೆ. ಈ ಮೂಲಭೂತವಾದಿ ನೆಲೆಗಳು ಜೀವ ತಳೆಯುವುದು ಶಿಷ್ಟ ಸಮುದಾಯದಲ್ಲಿ ಮತ್ತು ಆಧುನಿಕ ಸಂದರ್ಭದ ಶಿಕ್ಷಿತ ಸಮುದಾಯದಲ್ಲಿ. ಆದರೆ ಈ ಅಸಮಾನತೆಯ ಧೋರಣೆಗಳು ಜನಪದರಲ್ಲಿ ವ್ಯಕ್ತವಾಗಿರುವುದು ಕಂಡುಬರುವುದಿಲ್ಲ. ಇದು ಜನಪದರಲ್ಲಿರುವ ವಿಶ್ವಮಾನವ ಪ್ರಜ್ಞೆಯನ್ನು ಅನಾವರಣಗೊಳಿಸುತ್ತದೆ. ಸಮಾಜದ ಒಳಿತಿಗಾಗಿ ನಿಸ್ವಾರ್ಥದಿಂದ ಹೋರಾಡಿದವರು ಯಾರೇ ಆಗಿರಲಿ, ಅವನು ಯಾವುದೇ ಜಾತಿ, ಸಮುದಾಯಕ್ಕೆ ಸೇರಿದ್ದರು ಸಹ ಅವನನ್ನು ತಮ್ಮ ನಾಯಕನೆಂದು, ದೈವವೆಂದು ಆರಾಧಿಸುತ್ತಾರೆ. ಈ ಕಾರಣದಿಂದ ಮೂಲತಃ ಬ್ರಾಹ್ಮಣನಾದ ಶಿವಶರಣ ಬಸವಣ್ಣನನ್ನು ಕೂಡ ಶಿವ ಸ್ವರೂಪಿಯಾಗಿ ಕಂಡುಕೊಡಿದ್ದಾರೆ. ಆತನ ನೋವು ನಲಿವುಗಳನ್ನು ತಮ್ಮ ನೋವು ನಲಿವುಗಳೊಂದಿಗೆ ಸಮೀಕರಿಸಿಕೊಂಡು ಪದಕಟ್ಟಿ ಹಾಡುತ್ತ ಬಂದಿದ್ದಾರೆ.
ಜಾನಪದರು ಸೃಷ್ಟಿಸಿಕೊಂಡು ಬಂದಿರುವ ಈ ಮೇಲಿನ ಹಾಡಿನಲ್ಲಿ ಬಸವಣ್ಣ ಎಲ್ಲಿಯೂ ರಾಜಪ್ರಭುತ್ವದ ಪ್ರತಿನಿಧಿಯಾಗಿ ಕಂಡುಬರುವುದಿಲ್ಲ.

ಜಾನಪದರ ಬದುಕಿನೊಳಗಿನ ಸಾಮಾನ್ಯ ವ್ಯಕ್ತಿಯಾಗಿ ಪ್ರತಿನಿಧಿಸುತ್ತಾನೆ. ಇಲ್ಲಿ ಬಸವಣ್ಣ ಮತ್ತು ಗಂಗಾಬಿಕೆಯರ ಕಲ್ಯಾಣವನ್ನು ಶಿವ ಮತ್ತು ಗಂಗೆಯರೊಂದಿಗೆ ಸಮೀಕರಿಸಿಕೊಂಡು ಬಂದಿದ್ದಾರೆ. ಇದು ಜನಪದ ಪರಂಪರೆಯಲ್ಲಿನ ವಿಶಿಷ್ಟ ದರ್ಶನವಾಗಿ ಕಂಡುಬರುತ್ತದೆ. ಶಿಷ್ಟ ಪರಂಪರೆಯು ಎಲ್ಲವನ್ನು ಹೊಡೆದು ನೋಡುವಂತಹ ಮೂಲಭೂತವಾದಿ ಗುಣಗಳನ್ನು ಸೃಷ್ಟಿಸುತ್ತ ಬಂದಿರುವ ಸಂದರ್ಭದಲ್ಲಿ, ಇದಕ್ಕೆ ಪರ್ಯಾಯವೆಂಬಂತೆ ಜನಪದ ಪರಂಪರೆಯು ಎಲ್ಲವನ್ನು ಸಮೀಕರಿಸಿಕೊಂಡು ಬಂದಿರುವುದನ್ನು ಈ ಪದಗಳಲ್ಲಿ ಗುರುತಿಸಬಹುದಾಗಿದೆ. ಇದು ಶಿಷ್ಟ ಪರಂಪರೆಗೆ ಜನಪದ ಪರಂಪರೆಯು ಒಡ್ಡುತ್ತ ಬಂದಿರುವ ಪ್ರತಿರೋಧದ ನೆಲೆಯೂ ಹೌದು. ಶಿಷ್ಟರು ಅಸಮಾನತೆಯ ವಿರುದ್ಧ ಹೋರಾಡಿದ ಬಸವಣ್ಣನ್ನು ಒಂದು ಜಾತಿ, ಸಮುದಾಯಕ್ಕೆ ಕೇಂದ್ರಿಕರಿಸುವ ಮೂಲಕ ಅನಾರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡುತ್ತ ಬಂದಿದ್ದಾರೆ. ಆದರೆ ಜನಪದರು ಸಮಾಜ ಸುಧಾರಕ ಬಸವಣ್ಣನನ್ನು ಶಿವನೊಂದಿಗೆ ಸಮೀಕರಿಸುವ ಮೂಲಕ ಗುಪ್ತಗಾಮಿನಿಯಂತೆ ಆರೋಗ್ಯಕರವಾದ ಸಮಾಜವನ್ನು ಕಟ್ಟುತ್ತ ಬಂದಿದ್ದಾರೆ. ಹೀಗಾಗಿಯೆ ಇಂದಿಗೂ ಬಸವಣ್ಣ ತಳಸಮುದಾಯದ ಜನತೆಯ ಅಂತರಾಳದಲ್ಲಿ ನೆಲೆಯೂರಿದ್ದಾನೆ.

ಇದೇ ಪದ (ಹಾಡು) ದಲ್ಲಿ ಕೊನೆಯದಾಗಿ ಕಂಡುಬರುವ ಸಾಲು ಜನಪದರ ಸ್ವಾಮಿ ನಿಷ್ಠೆಯನ್ನು ಎತ್ತಿಹಿಡಿಯುತ್ತದೆ. ‘ಸತ್ಯ ಸದ್ಗುರುವಂಗೆ ನಿತ್ಯಸುಳ್ಳಾಡಿ ದಿನಗಳಿದೆ ಮತ್ತುಟ್ಟೊ ಬಾದೆ ಬಿಡದಮ್ಮ ಸೋಬಾನೆ’ ಎಂಬುದು ಇವರ ಸ್ವಾಮಿನಿಷ್ಠೆಯ ಪ್ರತೀಕವಾಗಿದೆ. ಈ ನಿಷ್ಠೆಯಿಂದಾಗಿಯೇ ತಳಸಮುದಾಯವು ಮೂಲಭೂತವಾದಿಗಳು ತಮ್ಮ ಅನುಕೂಲಕ್ಕಾಗಿ ಸೃಷ್ಠಿಸಿರುವ ಕಪಟ ತಂತ್ರಗಳನ್ನು ತಮ್ಮ ಬದುಕಿನ ಭಾಗವೆಂಬಂತೆ ಅನಿವಾರ್ಯವಾಗಿ ಮುಂದುವರೆಸಿಕೊಂಡು ಬಂದಿದ್ದಾರೆ.

ಬಸವಣ್ಣನ ವಿಚಾರಗಳನ್ನು ಮೀರಿದರೆ, ಆತನ ತತ್ವ ಚಿಂತನೆಗಳಿಗೆ ವಿರುದ್ಧವಾಗಿ ನಡೆದುಕೊಂಡರೆ ಮುಂದಿನ ಜನ್ಮದಲ್ಲೂ ಇದೇ ನರಕವನ್ನು ಅನುಭವಿಸಬೇಕಾಗುತ್ತದೆ ಎಂಬುದು ಇವರ ನಂಬಿಕೆಯಾಗಿದೆ. ಹೀಗಾಗಿಯೇ ಬಸವಣ್ಣನ ಮೂಲ ತತ್ವ ಸಿದ್ಧಾಂತಗಳು ಇಂದಿಗೂ ಜೀವಂತಿಕೆಯನ್ನು ಪಡೆದುಕೊಂಡಿದ್ದು, ಇವನ್ನು ತಮ್ಮ ಬದುಕಿನ ಒಂದು ಭಾಗವೆಂಬಂತೆ ಮುಂದುವರೆಸಿಕೊಂಡು ಬಂದಿದ್ದಾರೆ.

ಆದರೆ ಮೂಲಭೂತವಾದಿ ಮನಸ್ಥಿತಿಗಳು ಬಸವಣ್ಣನ ವಿಚಾರಧಾರೆಗಳನ್ನು ತೊಡೆದುಹಾಕಿ, ಆತನ ಪ್ರತಿಮೆಯ ಮೂಲಕವೇ ಮೂಲಭೂತವಾದ ಧರ್ಮವೊಂದನ್ನು ಪ್ರತಿಷ್ಠಾಪಿಸಿಕೊಂಡು ರಾಜರೋಷವಾಗಿ ವೈಚಾರಿಕತೆಯ ಹರಿಕಾರನಾದ ಬಸವಣ್ಣನಿಗೆ ಅಪಮಾನವೆಸಗುತ್ತಿದ್ದಾರೆ. ಇಲ್ಲಿ ಜನಪದರು ಬಸವನಿಗೆ ಸುಳ್ಳಾಡಿದರೆ, ತಪ್ಪಾಗಿ ನಡೆದುಕೊಂಡರೆ ನಮಗೆ ಶಿಕ್ಷೆ ತಪ್ಪಿದ್ದಲ್ಲ ಎಂಬುದಾಗಿ ತಮ್ಮೆಲ್ಲ ಕಾರ್ಯಗಳನ್ನು ಆತ್ಮವಿಮರ್ಶೆ ಮಾಡಿಕೊಂಡರೆ, ಶಿಷ್ಟ ಸಮುದಾಯವು ತಾವು ಮಾಡುತ್ತಿರುವ ಕಾರ್ಯ ಬಸವನಿಗೆ ಸಂಪೂರ್ಣ ವಿರುದ್ಧವಾದುದೆಂದು ತಿಳಿದಿದ್ದರೂ ಇವರೆಲ್ಲಿಯೂ ಇಂತಹ ಆತ್ಮವಿಮರ್ಶೆಗೆ ಮುಂದಾಗಿರುವ ನಿದರ್ಶನಗಳು ಚರಿತ್ರೆಯಲ್ಲಾಗಲಿ, ಇವರ ಧರ್ಮಗ್ರಂಥ, ಪುರಾಣಗಳಲ್ಲಾಗಲಿ ಕಂಡುಬರುವುದಿಲ್ಲ. ಇದು ಜನಪದರು ಕಂಡುಕೊಂಡಿರುವ ಬಸವದರ್ಶನ, ಹಾಗೆಯೇ ಅವರ ಜೀವನ ದರ್ಶನವಾಗಿದೆ.

ಜನಪದರು ಅಕ್ಷರ ವಂಚಿರಾದರೂ ಲೋಕಜ್ಞಾನವನ್ನು ದಾರ್ಶನಿಕ ನೆಲೆಯಲ್ಲಿ ಅರಿತುಕೊಂಡವರು. ಇಲ್ಲಿನ ಹಾಡಿನಲ್ಲಿ ಕಂಡುಬರುವಂತೆ ಬಸವಣ್ಣನು ಬಿಜ್ಜಳನ ಆಸ್ಥಾನದಲ್ಲಿ ಆರ್ಥಿಕ ಮಂತ್ರಿಯಾಗಿದ್ದ ವಾಸ್ತವವನ್ನು ಅರಿತುಕೊಂಡಿದ್ದಾರೆ. ಆದರೆ ಈ ಸತ್ಯ ಜನಪದರಿಗೆ ತಿಳಿದಿದ್ದಾದರೂ ಹೇಗೆ ಎಂಬ ಅನುಮಾನ ಕಾಡುತ್ತದೆ. ಅಷ್ಟೇ ಅಲ್ಲದೆ ಇವರು ಬಸವಣ್ಣನನ್ನು ಕೇವಲ ಮಂತ್ರಿಯಾಗಿ ನೋಡುವುದಿಲ್ಲ. ಬಸವಣ್ಣನನ್ನು ಅಧಿಕಾರದ ನೆಲೆಯಲ್ಲಿ ನೋಡದೆ ಸಮಾನತೆಯನ್ನು ಸಾರಿದ ಕ್ರಾಂತಿ ಪುರುಷನಾಗಿ ನೋಡುತ್ತಾರೆ. ಹೀಗಾಗಿಯೇ ಇಲ್ಲಿ ಬಸವಣ್ಣನನ್ನು ಕುರಿತು ವಣ ್ಸುವಾಗ ‘ಗುರುವಿನ ಮನೆಯಾಗೆ ಅರುವಿನ ಲಯದಾಗೆ, ಅರುವಿ ಮಂಟಪದ ಮನೆಯಾಗೆ ಕರುಣ ಕನೆಂದು ಕರೆವರು’ ಎಂಬುದಾಗಿ ಆತನ ಬದುಕಿನ ಚಿತ್ರಣವನ್ನು ಕಟ್ಟಿಕೊಡುತ್ತಾರೆ. ಈ ಮಂತ್ರಿಯಾದ ಬಸವಣ್ಣನನ್ನು ತಮ್ಮ ಬದುಕಿಗೆ ಹತ್ತಿರವಾದ ನೆಲೆಯಲ್ಲಿ ಜನಪದರು ಸೃಷ್ಟಿಸಿಕೊಂಡಿದ್ದಾರೆ. ಗುರುವಿನ ಮನೆ ಮತ್ತು ಅರುವಿನ ಲಯ ಎಂಬ ಜನಪದರ ಪರಿಕಲ್ಪನೆಯು ಅನುಭವ ಮಂಟಪದ ಕುರಿತಾಗಿದೆ. ಜನಪದರಿಗೆ ಅನುಭವ ಮಂಟಪವು ಗುರುವಿನ ಮನೆಯಷ್ಟೆ ಅಲ್ಲದೆ ಅರಿವಿನ ತಾಣವು ಹೌದು. ಈ ಸೃಷ್ಟಿಯು ನಾವು ಲಿಖಿತ ಚಾರಿತ್ರಿಕ ದಾಖಲೆಗಳಾದ ವಚನಗಳು ಹಾಗೂ ಶಾಸನಗಳಲ್ಲಿ ಬಸವಣ್ಣನನ್ನು ನೋಡಿರುವುದಕ್ಕಿಂತ ಭಿನ್ನವಾದ ಬಸವ ದರ್ಶನವು ಜನಪದರಲ್ಲಿ ಕಂಡುಬರುತ್ತದೆ.

ಚಿನ್ನದ ಸಿಂಬೆಯ ಸುತ್ತಿ ರನ್ನದ ಕೊಡವ ತಗುದೆ
ಜಲದಿ ಲಗ್ಣಿಯ ಮಗುವಳೆ ಸೋಬಾನೆ ||
ಜಲದಿ ಲಗ್ಣಿಯ ಮಗುವ ಶರಣ ಯ ಕಂಡೆ
ಶಿವಶರಣರು ಜಪವ ಮರೆತಾರೆ ಸೋಬಾನೆ ||
ಶಿವಶರಣರು ಜಪವಿನ್ನು ಮರೆತು ಕೇಳ್ಯಾರೆ
ಯಾವ ಜಂಗಮರ ಮಗಳಮ್ಮ ಸೋಬಾನೆ ||
ಜಂಗಮರ ಸೊಸಿಯಯ್ಯ ಲಿಂಗ ಉಳ್ಳರು ಮಗಳು
ಬಿಂಗಿಬ್ರಹ್ಮನ ಕಿರಿ ತಂಗಿ ಸೋಬಾನೆ ||
ಬಿಂಗಿನೇ ಬ್ರಹ್ಮರ ಕಿರಿ ತಂಗಿ ಗುರುಗಳೇ
ನೀವ್ ಬನ್ನಿರಿ ನಮ್ಮ ಅರಮನೀಗೆ ಸೋಬಾನೆ ||
ಲಿಂಗೇನ ಉಳ್ಳರೇ ನಿಜವುಳ್ಳ ಭಕ್ತರೇ
ಸಂಗಮನಯ್ಯ ಬಸವಣ್ಣ ಸೋಬಾನೆ ||
ಸಂಗುಮನಯ್ಯ ಬಸವಣ್ಣ ಮೂವರೇ
ಬಂದಾರು ಗಿರಿರಾಜರ ಅರಮನೆಗೆ ಸೋಬಾನೆ ||
ಎಂದು ಬರದ ಬಸವಣ್ಣ ಈಗ್ಯಾಕೆ ಬಂದ್ಯಪ್ಪ
ಕುಂದಾರಗೊಳ್ಳ ಮಣ ಗೊಳ್ಳ ಸೋಬಾನೆ ||
ಕುಂದ್ರಾಕೆ ಬಂದಿಲ್ಲ ನಿದ್ರಾಕೆ ಬಂದಿಲ್ಲ
ಸಣ್ಣಳು ಗಿರಿಜಮ್ಮನ ಕೇಳಾ ಬಂದೆ ಸೋಬಾನೆ ||
ತುಪ್ಪನ್ನ ಉಣ್ಣವಳೆ ಪಟ್ಟೆಸೀರೆ ಉಡುವೋಳೆ
ಪಟ್ಟೆ ಮಂಚುದುಲೆ ಮಲಗೋಳೆ ಸೋಬಾನೆ ||
ಪಟ್ಟೇನೆ ಮಂಚುದುಲೇ ಮಲಗುವಳೆ ಗಿರಿಜಮ್ಮ
ಚಿಕ್ಕೊಳು ಗಿರಿಜಮುನ ಕೊಡುಲಾರೆ ಸೋಬಾನೆ ||
ಹಾಲನ್ನ ಉಣ್ಣವಳೇ ಸಾಗಿಸೀರುಡುವೋಳೆ
ಸಾಮ ಮಂಚುದುಲೆ ಮಲಗೋಳೆ ಸೋಬಾನೆ ||
ಸಾಮೇನೆ ಮಂಚುದುಲೆ ಮಲಗೋಳೆ ಗಿರಿಜಮ್ಮ
ಸಣ್ಣಳು ಗಿರಿಜಮುನ ಕೊಡುಲಾರೆ ಸೋಬಾನೆ ||
ಹಟ್ಯಾಗೆ ಗಿರಿಜಮ್ಮ ಕುಟ್ಟುತೇನ್ ಪಾಡ್ಯಾಳೆ
ಅಪ್ಪೋಜಿ ನನ್ನ ಕೊಡುತಾರೆ ಸೋಬಾನೆ ||
ಅಪ್ಪೋಜಿ ನನ್ನ ಕೊಡುತಾರೆ ಕೈಲಾಸದ
ಎಪ್ಪತ್ತೊಂದ್ ಜಡಿಯ ತ್ರಬಸಿಗೆ ಸೋಬಾನೆ ||
ಒಣ್ಯಾಗೆ ಗಿರಿಜಮ್ಮ ಹಾಡುತೇನ್ ಪಾಡ್ಯಾಳೆ
ಅಣ್ಣೋಜಿ ನನ್ನ ಕೊಡುತಾರೆ ಸೋಬಾನೆ ||
ಅಣ್ಣೋಜಿ ನನ್ನ ಕೊಡುತಾರೆ ಕೈಲಾಸದ
ಹನ್ನೊಂದೇ ಜಡೆಯ ತ್ರಬಸಿಗೆ ಸೋಬಾನೆ ||
ಊರಾಗೆ ಮನೆಯಿಲ್ಲ ಅಡುವ್ಯಾಗೆ ಹೊಲವಿಲ್ಲ
ಎತ್ತ ಕಟ್ಟುವರ ಅರಮನೆ ಸೋಬಾನೆ ||
ಎತ್ತೇನೆ ಕಟ್ಟುವ್ರ ಅರಮನೆ ಗಿರಿಜಮ್ಮ
ಅವ್ರನ ನೀನು ಭ್ರಮಿಸಿದ ಸೋಬಾನೆ ||
ಹೋಳಿಗೆ ಕರ್ಜಿಕಾಯಿ ಜೋಳಿ ತುಂಬೈದಾವೆ
ಹೋಳಿಗೆ ಮೂರುಲೋಕ ಸಲುವೈದಾವೆ ಸೋಬಾನೆ ||
ಹೋಳಿಗೆ ಮೂರುಲೋಕ ಸಲುವ್ಯಾವೆ ಕೈಲಾಸದ
ಮುಕ್ಕಣ್ಣ ನೀನು ಜರುದಿಯೋ ಸೋಬಾನೆ ||
ಚಕ್ಕುಲಿ ಕರ್ಜಿಕಾಯಿ ಕಕ್ಕುಸುತುಂಬೈದಾವೆ
ಕಕ್ಕುಸು ಮೂರುಲೋಕ ಸಲಿವ್ಯಾವೆ ಸೋಬಾನೆ ||
ಕಕ್ಕಸ ಮೂರುಲೋಕ ಸಲುವ್ಯಾವೆ ಕೈಲಾಸದ
ಮಾದೇವ್ರು ನೀನು ಜರುದಿಯೋ ಸೋಬಾನೆ ||
ಚಿನ್ನದ ಸರ ಹರಿದಿರಿ ಕೆನ್ನೆಮೇಲ್ ಹೊಡದೀರಿ
ಬಿಟ್ಟು ಬನ್ನಿ ಗಿರಿಜೆ ಗಿರಿದೂರ ಸೋಬಾನೆ ||
ಮುತ್ತಿನ ಸರ ಹರಿದಿರಿ ನೆತ್ತಿಮ್ಯಾಲ್ ಹೊಡದೀರಿ
ಬಿಟ್ಟು ಬನ್ನಿ ಗಿರಿಜೆ ಗಿರಿದೂರ ಸೋಬಾನೆ ||

ಈ ಹಿಂದೆ ತಿಳಿಸಿದಂತೆ ಜಾನಪದರು ಶಿವ ಮತ್ತು ಬಸವಣ್ಣನನ್ನು ಬೇರೆ ಬೇರೆಯಾಗಿ ನೋಡುವುದಿಲ್ಲ. ಇವರಿಬ್ಬರನ್ನು ಒಂದೆಯಾಗಿ ಸ್ವೀಕರಿಸಿದ್ದಾರೆ. ಶಿವ, ಬಸವಣ್ಣ ಹಾಗೂ ಗಿರಿಜೆಯ ಪ್ರಸ್ತಾಪವಿರುವ ಈ ಹಾಡಿನಲ್ಲಿ ಶಿವಶರಣನಾದ ಬಸವಣ್ಣನನ್ನು ಶಿವ ಸ್ವರೂಪಿಯಾಗಿಸಿರುವುದನ್ನು ಕಾಣಬಹುದಾಗಿದೆ. ಮಾನವನ ಸಹಜ ಬದುಕಿನ ನೆಲೆಯಲ್ಲಿ ಚಿತ್ರಿತವಾಗಿರುವ ಬಸವನನ್ನು ಜಾನಪದ ಪರಂಪರೆಯಲ್ಲಿ ಗುರುತಿಸಬಹುದಾಗಿದೆ. ಶಿವ ಮತ್ತು ದಕ್ಷಬ್ರಹ್ಮರ ಕಥೆಯನ್ನು ಹೋಲುವ ಈ ಜಾನಪದ ಹಾಡಿನಲ್ಲಿ ಬಸವನನ್ನು ಸಮೀಕರಿಸಿಕೊಂಡು ಬಂದಿದ್ದಾರೆ. ಇಲ್ಲಿ ಶಿವ ಪಾರ್ವತಿಯರ ವೈವಾಹಿಕ ಜೀವನಕ್ಕೆ ಸಂಬಂಧಿಸಿದ ಚಿತ್ರಣಗಳನ್ನು ಅನಾವರಣಗೊಳಿಸುವ ಸಂದರ್ಭದಲ್ಲಿ ಬಸವಣ್ಣನ್ನು ಸಮೀಕರಿಸಿಕೊಂಡಿರುವ ಬಗೆಯು ವಿಶೇಷವಾಗಿ ಕಂಡುಬರುತ್ತದೆ. ಇದು ಜಾನಪದ ಬದುಕಿನ ದಾರ್ಶನಿಕ ಆಯಾಮವಾಗಿ ಕಂಡುಬರುತ್ತದೆ.
ಜಾನಪದ ಬದುಕಿನಲ್ಲಿ ದರ್ಶನಗೊಳ್ಳುವ ಬಸವಣ್ಣ ಯಾವುದೇ ಜಾತಿ, ಮತ, ಪಂಥಕ್ಕೆ ಸೀಮಿತವಾಗುವುದಿಲ್ಲ. ಇಲ್ಲಿ ಇವನೊಬ್ಬ ವಿಶ್ವಮಾನವನಾಗಿ ಮುಖಾಮುಖಿಯಾಗುತ್ತಾನೆ. ನಾವು ಹೀಗಾಗಲೇ ಓದಿ ತಿಳಿದಿರುವ ಬಸವಣ್ಣನಿಗಿಂತ ಭಿನ್ನವಾದ ಬಸವಣ್ಣ ನಮ್ಮ ಮೌಖಿಕ ಪರಂಪರೆಯಲ್ಲಿ ಕಂಡುಬರುತ್ತಾನೆ. ನಮ್ಮ ಲಿಖಿತ ಪಠ್ಯ, ಶಾಸನ ಹಾಗೂ ಚರಿತ್ರೆಯ ಗ್ರಂಥಗಳು ಬಸವಣ್ಣನನ್ನು ಒಬ್ಬ ಮಂತ್ರಿಯಾಗಿ, ಯುದ್ದ, ಹೋರಾಟದ ಭಾಗವಾಗಿ ಮಾತ್ರ ಪರಿಚಯಿಸುತ್ತವೆ. ಆದರೆ ಅದರಾಚೆಗಿನ ಮಾನವ ಸಹಜವಾದ ಬಸವಣ್ಣನನ್ನು ನಾವು ಈ ಪ್ರಕಾರಗಳಲ್ಲಿ ನೋಡಲು ಸಾಧ್ಯವೇ ಇಲ್ಲ. ಆದರೆ ಮೌಖಿಕ ಪ್ರಕಾರದಲ್ಲಿ ಬಸವಣ್ಣ ರಾಜಪ್ರಭುತ್ವದಿಂದ ಹೊರಬಂದು ಮಾನವ ಸಹಜ ನೆಲೆಯಲ್ಲಿ ಕಂಡುಬರುತ್ತಾನೆ. ಜನಪದ ಪರಂಪರೆಯಲ್ಲಿ ಕಂಡುಬರುವ ಈ ಮಾನವ ಸಹಜ ಬಸವ ದರ್ಶನಕ್ಕೆ ಕಾರಣವೂ ಇದೆ. ಜನಪದ ಬದುಕು ಪ್ರಕೃತಿ ಸಹಜವಾಗಿರುವಂತದ್ದು. ಇಲ್ಲಿ ಯಾರು ರಾಜನಾದರೇನು ಸಾಮಾನ್ಯ ಜನತೆಗೆ ಇದರಿಂದ ಯಾವುದೇ ಪ್ರಯೋಜನವಾಗಿರುವುದು ಕಂಡುಬರುವುದಿಲ್ಲ. ಗ್ರಾಮೀಣ ಭಾಗದಲ್ಲಿ ಒಂದು ಗಾದೆ ಮಾತಿದೆ; ‘ಯಾರು ಮಂತ್ರಿಯಾದರೇನು ರಾಗಿ ಬೀಸುವುದು ತಪ್ಪುವುದಿಲ್ಲ’, ಹಾಗೆಯೇ ‘ರಾಮರಾಜ್ಯದಲ್ಲೂ ರಾಗಿ ಬೀಸುವುದು ತಪ್ಪಿದ್ದಲ್ಲ’ ಎಂಬ ಗಾದೆಮಾತುಗಳು ಸಾಮಾನ್ಯ ಜನತೆಯ ಬದುಕಿನ ಸ್ಥಿತಿಯನ್ನು ಪ್ರತಿನಿಧಿಸುತ್ತದೆ. ಅದರಂತೆ ಜಾನಪದರಿಗೆ ರಾಜಪ್ರಭುತ್ವ ಮುಖ್ಯವಾಗುವುದಿಲ್ಲ. ಸಾಮಾನ್ಯ ಜನತೆಯ ಪರವಾಗಿ ಹೋರಾಡಿದ ಸಾಂಸ್ಕøತಿಕ ನಾಯಕ ಮುಖ್ಯವಾಗುತ್ತಾನೆ. ಈ ಕಾರಣದಿಂದಾಗಿಯೇ ನಮ್ಮ ಜನಪದರು ಮಲೆಮಾದೇಶ್ವರ, ಮಂಟೇಸ್ವಾಮಿ, ಜುಂಜಪ್ಪ, ಗಾದ್ರಿಪಾಲನಾಯಕ, ಕುಮಾರ ರಾಮರಂತಹ ಸಾಂಸ್ಕøತಿಕ ನಾಯಕರನ್ನು ಸ್ಮರಿಸುತ್ತ ಬಂದಿದ್ದಾರೆಯೇ ಹೊರತು ರಾಜ್ಯಭಾರ ಮಾಡಿದ ಬಿಜ್ಜಳ, ಕೃಷ್ಣದೇವರಾಯರಂತಹ ರಾಜರನ್ನು ಮುಖ್ಯವೆಂದು ಪರಿಗಣ ಸಿರುವುದು ಕಂಡುಬರುವುದಿಲ್ಲ. ಈ ಕಾರಣದಿಂದಾಗಿಯೇ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದ ಬಸವಣ್ಣನಿಗಿಂತ ಮುಖ್ಯವಾಗಿ ಸಾಮಾಜಿಕ ಸಮಾನತೆಗಾಗಿ ಶ್ರಮಿಸಿದ ಮಾನವ ಸಹಜ ವ್ಯಕ್ತಿಯಾದ ಬಸವಣ್ಣನನ್ನು ಆರಾಧಿಸುತ್ತ ಬಂದಿದ್ದಾರೆ.
ಶಿಷ್ಟ ಪರಂಪರೆಯು ಬಸವಣ್ಣನನ್ನು ರಾಜಪ್ರಭುತ್ವದ ಒಂದು ಭಾಗವಾಗಿಯೇ ಚಿತ್ರಿಸಿಕೊಂಡು ಬಂದಿದೆ. ಇವರಿಗೆ ಮಾನವ ಸಹಜವಾದ ಬಸವ ಮುಖ್ಯವಾಗುವುದಿಲ್ಲ.

ಅಷ್ಟೇ ಅಲ್ಲದೇ ಈ ಶಿಷ್ಟ ಪ್ರಕಾರವು ಬಸವನನ್ನು ಜಾತಿ, ಮತ, ಪಂಥಗಳಾಚೆ ಹೋಗಲು ಬಿಡುವುದಿಲ್ಲ. ಜಾತಿ, ಮತ, ಪಂಥಗಳನ್ನು ಮೀರಿ ಸಮಾಜದ ಸುಧಾರಣೆಗಾಗಿ ಶ್ರಮಿಸಿದ ಬಸವನನ್ನು ಬಲವಂತವಾಗಿ ಸ್ಥಾಪಿತ ವ್ಯವಸ್ಥೆಯ ಅಡಿಯಲ್ಲಿ ಬಂಧಿಸುವ ತಂತ್ರಗಾರಿಕೆ ಶಿಷ್ಟ ಸಾಹಿತ್ಯದ ಒಂದು ಭಾಗವಾಗಿ ಕಂಡುಬರುತ್ತದೆ. ಆದರೆ ಬಸವಣ್ಣನ ಮೂಲ ಆಶಯಗಳು ಮಾತ್ರ ಜಾನಪದ ಬದುಕಿನೊಳಗೆ ಯಥಾ ಪ್ರಕಾರವಾಗಿ ಮುಂದುವರೆದಿವೆ. ಬಸವ ಇನ್ನು ಜೀವಂತವಾಗಿರುವುದಾದರೆ ಅದು ಜಾನಪದರ ಬದುಕಿನಲ್ಲಿ ಮಾತ್ರ ಎಂಬುದನ್ನು ಈ ಮೇಲೆ ಉಲ್ಲೇಖಿಸಿರುವ ಸೋಬಾನೆ ಹಾಡುಗಳಲ್ಲಿ ಗುರುತಿಸಬಹುದಾಗಿದೆ.

( ಲೇಖಕರು: ಕೆ.ಎ.ಓಬಳೆಶ್, ಸಂಶೋಧನ ವಿದ್ಯಾರ್ಥಿ, ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ ಕನ್ನಡ ವಿಶ್ವವಿದ್ಯಾಲಯ, ಹಂಪಿ)

ದಿನದ ಸುದ್ದಿ

ಕವಿತೆ | ನೆನಪು

Published

on

ಕವಿ | ರುದ್ರಪ್ಪ ಹನಗವಾಡಿ
  • ರುದ್ರಪ್ಪ ಹನಗವಾಡಿ

ಅಪ್ಪನನ್ನು ಒಪ್ಪ ಮಾಡಿ
ವರ್ಷಗಳೇ ಕಳೆದವು ಮುವ್ವತ್ತೇಳು
ಇಂದಿರಾಗಾಂಧಿಯ ತುರ್ತು ಪರಿಸ್ಥಿತಿ
ಅರಸರ ಮೀಸಲಾತಿ
ಬಸವಲಿಂಗಪ್ಪನವರ ಬೂಸಾ ಖ್ಯಾತಿ
ಮಲ ಹೊತ್ತು
ಮಲಗಿದ್ದ ಕಾಲಕ್ಕೆ
ಚುರುಕು ಮುಟ್ಟಿಸಿದ ಕಾಲ

ಹರೆಯದ ನನಗೆ
ಕಾಲೇಜ ಮೇಷ್ಟರ ಕೆಲಸ
ಸೂಟು ಬೂಟಿನ ವೇಷ
ಆ ಮೇಲೆ ಅಮಲದಾರಿಕೆ
ಎಲ್ಲ ನಡೆದಾಗಲೇ ಅವ್ವನನ್ನು
ಆಸ್ಪತ್ರೆಗೆ ಸೇರಿಸಿದ್ದು
ಕಾಲ ಕಳೆದು ಕೊಂಡು
ಕೋಲ ಹಿಡಿದದ್ದು
ನಿನ್ನೆ ಮೊನ್ನೆಯಂತೆ
ಬಾಲ್ಯವಿನ್ನು ಉಂಟೆಂಬಂತೆ
ಭಾವಿಸುವಾಗಲೇ ಅವ್ವನ ಸಾವು

ಅದರೊಟ್ಟಿಗೆ ಕಾಯದಾಯಾಸ ತೀರಿಸಲು
ಬಂದರೆ ಬೆಂಗಳೂರಿಗೆ
ರೌಡಿಗಳ ಕಾಟ
ಅಂಬೇಡ್ಕರ್ ಪಟದ ಕೆಳಗೆ
ದೌರ್ಜನ್ಯದ ದಂಡು

ಅಮಾಯಕರಿಗೆ ಗುಂಡು
ಕಂಡುಂಡ ಹಾದಿಯ ಗುಡಿಸಲುಗಳಲ್ಲೀಗ
ಮುಗಿಲು ಮುಟ್ಟೋ ಮಹಲುಗಳು
ಅಂತಲ್ಲಿ
ದೇಶ ವಿದೇಶಗಳ
ಅಹವಾಲುಗಳು
ಅವಿವೇಕಗಳು
ನೋಡ ನೋಡುತ್ತಿದ್ದಂತೆ
ಉಸಿರು ಬಿಗಿಹಿಡಿದ ಜನರ ಒಳಗೆ
ಒಳಪದರಗಳೊಳಗೆ ಕನಸ ಬಿತ್ತಿ
ಹಸಿರ ಹೊನ್ನು ಬಾಚಲು ಹವಣಿಸಿದ
ಬಿಳಿ ಜನರ ಆಟ
ಅರ್ಥವಾಗುವುದೇ ಎಲ್ಲ
ಗೋಣ ನೀಡುವರೆ
ಹೂತಿಟ್ಟ ಗೂಟಕ್ಕೆ ?

( ಚಿಂತಕ ರುದ್ರಪ್ಪ ಹನಗವಾಡಿ ಅವರ ‘ಊರು – ಬಳಗ’ ಕವನ ಸಂಕಲನದಿಂದ ‘ ನೆನಪು ‘ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕೃತಿಯನ್ನು ಫ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ 2013 ರಲ್ಲಿ ಪ್ರಕಿಸಿದೆ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ; ಒಂದು ಚಿಂತನೆ

Published

on

  • ಮಹಾಂತೇಶ್.ಬಿ.ನಿಟ್ಟೂರು, ದಾವಣಗೆರೆ

ನಿಜ ಶರಣ ಶ್ರೀ ಅಂಬಿಗರ ಚೌಡಯ್ಯನವರ ಜೀವಿತ ಕಾಲ 12 ನೇ ಶತಮಾನದ ಬಸವಾದಿ ಶರಣರ ಕಾಲದಲ್ಲೇ ಇತ್ತು ಎಂಬುದು ಇತಿಹಾಸಕಾರರ ಸಂಶೋಧನೆಯಿಂದ ತಿಳಿದು ಬರುತ್ತದೆ. ಅವರ ಹುಟ್ಟೂರು ಹಾವೇರಿ ಜಿಲ್ಲೆಯ ಆಗಿನ ಶಿವಪುರ, ಈಗಿನ ಚೌಡಯ್ಯದಾನಪುರ. ಅವರ ತಂದೆಯ ಹೆಸರು ಶ್ರೀ ವಿರೂಪಾಕ್ಷ, ತಾಯಿಯ ಹೆಸರು ಪಂಪಾಂಭಿಕೆ, ಹೆಂಡತಿಯ ಹೆಸರು ಸುಲೋಚನಾ ಹಾಗೂ ಮಗನ ಹೆಸರು ಪುರವಂತ.

ಅಂಬಿಗ ವೃತ್ತಿಯ ಚೌಡಯ್ಯನವರು ಅಲ್ಲಮ ಪ್ರಭು ಮತ್ತು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಇದ್ದ ಒಬ್ಬ ಕ್ರಾಂತಿಕಾರಿ, ದಿಟ್ಟ, ನೇರ, ನಿಷ್ಠುರ ನುಡಿಯ ವಚನಕಾರ. ಕಲ್ಯಾಣ ಕ್ರಾಂತಿಯ ನಂತರ ಇವರು ತಮ್ಮ ವಚನಗಳ ಗಂಟನ್ನು ಹೊತ್ತು ಉಳವಿಗೆ ನಂತರ ತಮ್ಮ ಗ್ರಾಮವಾದ ತುಂಗಭದ್ರಾ ನದಿಯ ದಡದ ಮೇಲಿರುವ ಶಿವಪುರಕ್ಕೆ ಬಂದು ದೋಣಿ ನಡೆಸುವ ವೃತ್ತಿಯಲ್ಲಿ ನಿರತರಾಗಿ ವಚನ ರಚನೆ ಮಾಡಿರುವುದು ತಿಳಿದು ಬರುತ್ತದೆ.

ಚೌಡಯ್ಯನವರು ತಮ್ಮ ಜೀವಿತಾವಧಿಯಲ್ಲಿ ಅನೇಕ ಪವಾಡಗಳನ್ನು ಮಾಡಿರುತ್ತಾರೆ. ಗಿಡಮೂಲಿಕೆ ಔಷಧಿಗಳಿಂದ ಕ್ಷಯ ರೋಗ, ಕುಷ್ಠರೋಗ ಗುಣಪಡಿಸುವುದು, ಹಾವು ಕಚ್ಚಿದವರನ್ನು

ಬದುಕಿಸುವುದು ಇತ್ಯಾದಿ..

ಒಮ್ಮೆ ಗುತ್ತಲದ ಅರಸನು ಬೇಟೆಗಾಗಿ ಈ ಪ್ರದೇಶದಲ್ಲಿ ಸಂಚರಿಸುತ್ತಿದ್ದಾಗ, ಆತನ ಸೇನಾಧಿಪತಿಯು ಹಾವು ಕಚ್ಚಿ ಮೃತಪಟ್ಟನು. ಇದರಿಂದಾಗಿ ಅರಸನಿಗೆ ಅತೀವ ದುಃಖವುಂಟಾಗಿ ರೋಧಿಸತೊಡಗಿದನು. ಆಗ ಆತನ ಸೈನಿಕನೊಬ್ಬನು ಶ್ರೀ ಚೌಡಯ್ಯನವರ ಪವಾಡಗಳ ಬಗ್ಗೆ ವಿವರಿಸಿ ಹೇಳಲಾಗಿ, ಅರಸನು ತನ್ನ ಮೃತ ಸೇನಾಧಿಪತಿಯ ಶರೀರವನ್ನು ಚೌಡಯ್ಯನವರಲ್ಲಿಗೆ ತಂದು ಆತನನ್ನು ಬದುಕಿಸುವಂತೆ ಕೇಳಿಕೊಂಡರು, ಆಗ ಚೌಡಯ್ಯನವರು ಸೇನಾಧಿಪತಿಯನ್ನು ಬದುಕಿಸುತ್ತಾರೆ. ಇದರಿಂದ ಸಂತುಷ್ಟನಾದ ಅರಸನು ಶಿವಪುರದ ಸುತ್ತಲಿನ ಪೂರ್ವ – ಪಶ್ಚಿಮಕ್ಕೆ 14 ಮೈಲು ಹಾಗೂ ಉತ್ತರ – ದಕ್ಷಿಣಕ್ಕೆ 7 ಮೈಲು ಸುತ್ತಳತೆಯ ಭೂಮಿಯನ್ನು ಚೌಡಯ್ಯನವರಿಗೆ ದಾನವಾಗಿ ನೀಡಿದನು.

ಆದರೆ ಚೌಡಯ್ಯನರು ವೈರಾಗ್ಯಶಾಲಿಯು, ಲೌಕಿಕದಲ್ಲಿ ನಿರಾಸಕ್ತಿ ಹೊಂದಿದವರು ಆಗಿದ್ದರಿಂದ, ಅರಸನು ಕೊಡಮಾಡಿದ್ದ ಸಂಪೂರ್ಣ ಜಮೀನನ್ನು ತನ್ನ ಗುರುಗಳಾದ ಶ್ರೀ ಶಿವದೇವರಿಗೆ ದಾನವಾಗಿ ನೀಡಿದರು ಎಂಬ ಉಲ್ಲೇಖವಿದೆ. ಅಂದಿನಿಂದ ಶಿವಪುರ ಗ್ರಾಮಕ್ಕೆ ‘ಚೌಡಯ್ಯದಾನಪುರ’ ಎಂದು ಹೆಸರು ಬರುತ್ತದೆ. ಮುಂದೆ ಚೌಡಯ್ಯನರು ಅಲ್ಲಿ ದೇಹ ತ್ಯಾಗ ಮಾಡಿದ್ದರಿಂದ ತುಂಗಭದ್ರಾ ನದಿಯ ದಡದಲ್ಲಿ ಈಗಲೂ ಚೌಡಯ್ಯನವರ ಸಮಾಧಿ ಗದ್ದುಗೆ ಇದೆ.

ಭ್ರಮಾಲೋಕದಲ್ಲಿ ವಿಹರಿಸುತ್ತಾ ಕುಳಿತ, ಆಡಂಬರದಲ್ಲಿ ಅಡ್ಡಾದಿಡ್ಡಿ ಅಡ್ಡಾಡುವ ಮಂದಿಯ ಕಪಾಳಕ್ಕೆ ಹೊಡೆದು ಎಚ್ಚರಿಸುವಂತಿವೆ ಚೌಡಯ್ಯನವರ ವಚನಗಳು. ಧಾರ್ಮಿಕ ಮೂಢನಂಬಿಕೆ ಬಿತ್ತುವವರಿಗೆ, ಸ್ವಾರ್ಥಿಗಳಾಗಿ ಬದುಕುವವರಿಗೆ, ಮುಖವಾಡ ಹಾಕಿ ಮಂಕು ಬೂದಿ ಎರಚುವವರಿಗೆ ಸಿಂಹ ಸ್ವಪ್ನದಂತೆ ಬೆಚ್ಚಿ ಬೀಳಿಸುತ್ತವೆ ನಿಜ ಶರಣ ಅಂಬಿಗರ ಚೌಡಯ್ಯನವರ ವಚನಗಳು. ಇದಕ್ಕೆ ತಾತ್ಪೂರ್ತಿಕವಾಗಿ ಕೆಲವು ವಚನಗಳು ಈ ಕೆಳಗಿನಂತಿವೆ;

“ಅಂಬಿಗ ಅಂಬಿಗ ಎಂದು ಕುಂದ ನುಡಿಯದಿರು/ನಂಬಿದರೆ ಒಂದೇ ಹುಟ್ಟಲಿ/ಕಡೆಯ ಹಾಯಿಸುವೆನೆಂದಾತನಂಬಿಗರ/ಚೌಡಯ್ಯ ನಿಜಶರಣನು”

ಈ ಮೇಲಿನ ವಚನ ಶ್ರೀ ಅಂಬಿಗರ ಚೌಡಯ್ಯನವರ ಸ್ವಾಭಿಮಾನ, ಧೈರ್ಯ, ನೇರ, ನಿರ್ಭಿಡೆಯ ವ್ಯಕ್ತಿತ್ವದ ಪ್ರತೀಕವಾಗಿದೆ.

ಹನ್ನೆರಡನೇ ಶತಮಾನದ ಸಂದರ್ಭದಲ್ಲಿ ಜಾತಿ ಮತ್ತು ವರ್ಗ ವ್ಯವಸ್ಥೆ ಎಷ್ಟರಮಟ್ಟಿಗಿತ್ತು ಎಂಬುದನ್ನು ಈ ವಚನ ಸೂಚಿಸುತ್ತದೆ. ಅಂತಹ ವಿಚಿತ್ರ, ವಿಕ್ಷಿಪ್ತ ಸನ್ನಿವೇಶದಲ್ಲಿ ಬಸವಾದಿ ಶರಣರು ಜಾತೀಯತೆ, ವರ್ಗ – ವರ್ಣ ವ್ಯವಸ್ಥೆಯ ವಿರುದ್ಧ ಬೃಹತ್ ಚಳುವಳಿಯನ್ನು ಕೈಗೊಂಡಾಗ ಅಂಬಿಗರ ಚೌಡಯ್ಯನವರ ಸತ್ಯನಿಷ್ಠೆ, ಪ್ರಾಮಾಣಿಕತೆಯ ವಚನಗಳು ಪ್ರಖರವಾಗಿ ಕಾಣಿಸುತ್ತವೆ. ಕೆಲವು ಢೋಂಗಿ ಭಕ್ತರಿಗೆ, ಕಪಟ ಸನ್ಯಾಸಿಗಳಿಗೆ ತನ್ನ ಖಾರವಾದ ವಚನಗಳ ಮೂಲಕ ಚುರುಕು ಮುಟ್ಟಿಸುತ್ತಾರೆ.

ಆಡಂಬರ ಮತ್ತು ದುರಾಸೆಯ ಜನರ ಮನಸ್ಥಿತಿ ಕಂಡು ಕೆಂಡಾಮಂಡಲವಾಗಿ ಪ್ರಸ್ತುತ ಪಡಿಸಿದ ಒಂದು ವಚನ ಇಂತಿದೆ;

“ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಕಾಳೋಗರನ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹಾರುವ ಪಕ್ಷಿಯನು/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೆಬ್ಬುಲಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೊಯ್ವ ಹೆಮ್ಮಾರಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಬರುವ ಉರಿ ಬಾಣವನು/ಇಂತೆಲ್ಲವನು ಒಂದೇ ಮಂತ್ರದಲ್ಲಿ ನಿಲ್ಲಿಸಬಹುದು;/ಲೋಭವೆಂಬ ಗ್ರಹಣ ಹಿಡಿದವರ ಏತರಿಂದಲೂ/ನಿಲ್ಲಿಸಲಾಗದು/ಈ ಲೋಭಕ್ಕೆ ದಾರಿದ್ರ್ಯವೇ ಔಷಧವು;/ಹೇಳಿದರೆ ಕೇಳರು, ತಾವು ತಿಳಿಯರು/ಶಾಸ್ತ್ರವ ನೋಡರು, ಭಕ್ತಿಯ ಹಿಡಿಯರು/ಇಂತಹ ಗೊಡ್ಡು ಮೂಳ ಹೊಲೆಯರಿಗೆ/ಕರ್ಮವೆಂಬ ಶರದ್ಧಿಯಲ್ಲಿ ಬಿದ್ದು ಹೊರಳಾಡುವುದೇ/ಸತ್ಯವೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು”

ಸಂಸಾರದ ಜಂಜಾಟದಲ್ಲಿ ಬಿದ್ದು ಒದ್ದಾಡುತ್ತಾ ಶಿವನನ್ನು ಮರೆತು ಹತ್ತು ಹಲವು ಚಿಂತೆಯಲ್ಲಿ ಮುಳುಗಿರುವ ಶವ ಮುಖದ ಜನರ ಸ್ಥಿತಿ-ಗತಿಯನ್ನು ಅರ್ಥಗರ್ಭಿತವಾಗಿ ಸಾದರಪಡಿಸುವ ಒಂದು ವಚನ ಇಂತಿದೆ;

“ಬಡತನಕೆ ಉಂಬುವ ಚಿಂತೆ/ಉಣಲಾದಡೆ ಉಡುವ ಚಿಂತೆ/ಉಡಲಾದಡೆ ಇಡುವ ಚಿಂತೆ/ಇಡಲಾದಡೆ ಹೆಂಡಿರ ಚಿಂತೆ/ಹೆಂಡಿರಾದರೆ ಮಕ್ಕಳ ಚಿಂತೆ/ಮಕ್ಕಳಾದಡೆ ಬದುಕಿನ ಚಿಂತೆ/ಬದುಕಾದಡೆ ಕೇಡಿನ ಚಿಂತೆ/ಕೇಡಾದಡೆ ಮರಣದ ಚಿಂತೆ/ಇಂತೀ ಹಲವು ಚಿಂತೆಯಲ್ಲಿಪ್ಪವರ ಕಂಡೆನು/ಶಿವನ ಚಿಂತೆಯಲ್ಲಿದ್ದಾತರೊಬ್ಬರನೂ ಕಾಣೆನೆಂದಾತ/ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು!”

ಸಮಯದ ಸದ್ಬಳಕೆ ಮಾಡಿಕೊಂಡು ಕಾಯಕ ಮಾಡುತ್ತಾ ಶಿವಭಕ್ತರಾಗಿ, ಜೀವನ ಪಾವನವಾಗಿಸುವಂತೆ ಕರೆ ನೀಡುವ ಒಂದು ವಚನ ಇಂತಿದೆ;

“ಗಾಳಿ ಬಿಟ್ಟಾಗ ತೂರಿಕೊಳ್ಳಿರಯ್ಯ/ಗಾಳಿ ನಿಮ್ಮ ಅಧೀನವಲ್ಲ ಕಂಡಯ್ಯ/ನಾಳೆ ತೂರಿಹೆನೆಂದಡಿಲ್ಲ ಕಂಡಯ್ಯ/ಶಿವಶರಣೆ ಎಂಬುದೊಂದು ಗಾಳಿ ಬಿಟ್ಟಲ್ಲಿ/ಬೇಗ ತೂರೆಂದನಂಬಿಗರ ಚೌಡಯ್ಯ”

ಕಾವಿ ಬಟ್ಟೆ ತೊಟ್ಟು, ಭಿಕ್ಷೆಗಾಗಿ ಜೋಳಿಗೆ ಹಾಕಿದವರೆಲ್ಲರೂ ಜಂಗಮರು, ಗುರುಗಳಾಗಲಾರರು ಎಂಬುದನ್ನು ವಿಡಂಬಿಸುವ ಒಂದು ವಚನ ಇಂತಿದೆ;

“ಕಂಥೆ ತೊಟ್ಟವ ಗುರುವಲ್ಲ/ಕಾವಿ ಹೊದ್ದವ ಜಂಗಮನಲ್ಲ/ಶೀಲ ಕಟ್ಟಿದವ ಶಿವಭಕ್ತನಲ್ಲ/ನೀರು ತೀರ್ಥವಲ್ಲ/ಕೂಳು ಪ್ರಸಾದವಲ್ಲ/ಹೌದೆಂಬವನ ಬಾಯ ಮೇಲೆ/ಅರ್ಧ ಮಣದ ಪಾದರಕ್ಷೆಯ ತೆಗೆದುಕೊಂಡು/ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ/ಟೊಕ ಟೊಕನೆ ಹೊಡೆ ಎಂದಾತ/ನಮ್ಮ ಅಂಬಿಗರ ಚೌಡಯ್ಯ”

ಹೀಗೆ ಬಸವಾದಿ ಶರಣರ ಸಮಾಜ ಸುಧಾರಣಾ ಚಳವಳಿಯಲ್ಲಿ ತಮ್ಮ ಅಮೂಲ್ಯ ಸೇವೆಯನ್ನು ಮುಡುಪಾಗಿಟ್ಟ ಶ್ರೀ ಅಂಬಿಗರ ಚೌಡಯ್ಯನವರು ತಮ್ಮ ಬದುಕಿನ ನೀತಿಯಿಂದ, ನಿಷ್ಠೆಯಿಂದ, ತೀಕ್ಷ್ಣ ಖಂಡನೆಯ ಬಂಡಾಯ ವಚನಗಳಿಂದ ಗಮನ ಸೆಳೆದು, ಅವರು ರಚಿಸಿದ ವಚನಗಳಿಗೆ ತಮ್ಮ ಹೆಸರನ್ನೇ ಅಂಕಿತವನ್ನಾಗಿಟ್ಟಿರುವದು ವಿಶೇಷವಾಗಿದೆ. ಸಮಾಜದ ಕೊಳೆಯನ್ನು ತೊಳೆಯುವ ನಿಟ್ಟಿನಲ್ಲಿ ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ಎದ್ದು ಕಾಣುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮ್ಯಾಸ ನಾಯಕ ಬುಡಕಟ್ಟನಲ್ಲಿ ದೀಪಾವಳಿ ಹಬ್ಬದ ಆಚರಣೆ

Published

on

ಭಾರತ ತನ್ನ ಭೌಗೋಳಿಕ ಸ್ವರೂಪದಲ್ಲಿ ವೈವಿಧ್ಯತೆಯನ್ನು ಹೊಂದಿರುವಂತೆ ಅನೇಕ ಬಗೆಯ ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿದೆ.

ದೇಶದ ಪ್ರತಿಯೊಂದು ಸಮುದಾಯವು ಬದುಕಿನ ಕ್ರಮದಲ್ಲಿ ತನ್ನದೇ ಆದ ವೈವಿಧ್ಯತೆಯನ್ನು ಹೊಂದಿದ್ದು ಹಬ್ಬಗಳ ಆಚರಣೆಯಲ್ಲಿಯೂ ಈ ಭಿನ್ನತೆಯನ್ನು ಕಾಣಬಹುದಾಗಿದೆ. ಈಗ ನಡೆಯುತ್ತಿರುವ ದೀಪಾವಳಿ ಹಬ್ಬದ ಆಚರಣೆಯೂ ಇದರಿಂದ ಹೊರತಾಗಿಲ್ಲ. ಇಡೀ ಭಾರತ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸುತ್ತಿದೆ ಎಂಬುದು ಸಾಮಾನ್ಯವಾದ ಹೇಳಿಕೆಯಾಗಿರುತ್ತದೆ.

ದೀಪಾವಳಿ ಎಂದರೆ ದೀಪವನ್ನು ಬೆಳಗಿಸುವ ಹಬ್ಬ. ಜಗದ ಕತ್ತಲೆಯನ್ನು, ಮನದ ಕತ್ತಲೆಯನ್ನು, ಕಳೆಯುವ ಹಬ್ಬ ಎಂಬುದು ಒಂದು ನಂಬಿಕೆಯಾದರೆ ಬಲಿಚಕ್ರರ‍್ತಿಯನ್ನು ವರ್ಷಕೊಮ್ಮೆ ನೆನಪಿಸಿಕೊಳ್ಳುವುದು, ನರಕಾಸುರನನ್ನು ಶ್ರೀ ಕೃಷ್ಣ ಪರಮಾತ್ಮ ಕೊಂದು ಆತನ ಸೆರೆಯಲ್ಲಿದ್ದ ಅಸಂಖ್ಯಾತ ಮಹಿಳೆಯರಿಗೆ ಬಿಡುಗಡೆ ದೊರಕಿಸಿದ ದಿನವಿದು ಎಂದು ನೆನೆಪಿಸಿಕೊಳ್ಳುವುದು ಹೀಗೆಲ್ಲಾ ಪ್ರಚಲಿತ ಪುರಾಣಮೂಲಗಳಿಂದ ಈ ಹಬ್ಬದ ಆಚರಣೆಯ ಸಾಂಕೇತಿಕತೆಯನ್ನು ಅರ್ಥೈಸಲಾಗುತ್ತದೆ.

ಈ ಎರಡೂ ಘಟನೆಗಳನ್ನು ಕುರಿತು ಬೇರೆ ಬೇರೆ ನೆಲೆಯಿಂದ ಯೋಚಿಸಿದಾಗ ಇದನ್ನು ದೇಶದಾದ್ಯಂತ ಎಲ್ಲರೂ ಸಡಗರಿಸಬೇಕೆ? ಆಳುವವರ ಸಡಗರ ಎಲ್ಲರ ಸಡಗರವಾಗಲೇಬೇಕಾದ ಅನಿವಾರ್ಯವೇ? ಎಂಬ ನೆಲೆಗಳಿಂದ ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕಾಗುತ್ತದೆ.

ನಿಸರ್ಗಮೂಲ ಸಿದ್ದಾಂತವನ್ನು ಅನ್ವಯಿಸಿಕೊಂಡರೇ ಬಹುಶಃ ಈ ದೀಪಾವಳಿಯ ತಿಂಗಳು, ಅಂದರೇ ಕಾರ್ತಿಕ ಮಾಸದ ಹವಾಮಾನದಲ್ಲಿ ವಿಶೇಷತೆಯಿದೆ. ಕಾರ್-ಅಂದರೇ ಮಳೆ ಸುರಿಯುವುದು. ಕರ‍್ತೀಕ ಅಂದರೇ ಮಳೆಗಾಲದ ಕೊನೆಯ ದಿನಗಳಿವು, ಹಿಂಗಾರಿನ ಕೊನೆಯ ಮಳೆಗಳು ಸುರಿಯುವ ಮತ್ತು ಇದರೊಂದಿಗೆ ಚಳಿಗಾಲವೂ ಆರಂಭವಾಗುವುದರಿಂದ ಮಂಜುಮುಸುಕಿದ ವಾತಾವರಣವೂ ಜೊತೆಗೂಡಿ ಕತ್ತಲೆಯ ಆಧಿಕ್ಯ ಹೆಚ್ಚು. ಬಹುಶಃ ಈ ಕತ್ತಲೆಯನ್ನು ನಿವಾರಿಸಿಕೊಳ್ಳಲು ಮನೆಮನೆಯ ಮುಂದೆ ದೀಪಗಳನ್ನು ಹಚ್ಚಿ ಬೆಳಕನ್ನು ಕಂಡುಕೊಳ್ಳುವ ಉದ್ದೇಶವೂ ಇರಬಹುದೆನ್ನಿಸುತ್ತದೆ. ಒಟ್ಟಾರೆ ನಾಡಿನಾದ್ಯಂತ ಆಚರಿಸಲಾಗುವ ಈ ದೀಪಾವಳಿ ಹಬ್ಬವನ್ನು ಮ್ಯಾಸಮಂಡಲದಲ್ಲಿಯೂ ಆಚರಿಸಲಾಗುತ್ತದೆ.

ಮ್ಯಾಸಬುಡಕಟ್ಟಿನ ದೇವರು ಕಾಣದ ಲೋಕದವರಲ್ಲ. ಪ್ರಕೃತಿಯ ವಿಶಿಷ್ಟತೆಯನ್ನೇ ದೈವ ಎಂದು ಭಾವಿಸಿ ಪೂಜಿಸುವುದು, ಸೃಷ್ಟಿಗೆ ಕಾರಣವಾಗುವ ತಾಯಿಯನ್ನೇ ಮೊದಲ ದೈವ ಎಂದು ಪೂಜಿಸುವುದು, ತಮಗೆ ಬದುಕನ್ನು ಕಟ್ಟಿಕೊಟ್ಟು ತಮ್ಮನ್ನು ಮುನ್ನಡೆಸಿದ ಹಿರಿಯರನ್ನೇ, ನಾಯಕರನ್ನೇ ತಮ್ಮದೇವರು ಎಂದು ಪೂಜಿಸುವುದು, ಮತ್ತು ತಮ್ಮ ಬದುಕಿಗೆ ಆಧಾರವಾಗಿದ್ದ ಪಶುಸಂಪತ್ತನ್ನೇ ತಮ್ಮ ಹಿರಿಯರೊಂದಿಗೆ ಸಮೀಕರಿಸಿ ದೈವಗಳೆಂದು ಭಾವಿಸಿ ಪೂಜಿಸುವುದು ಈ ಬುಡಕಟ್ಟಿನ ವಿಶೇಷತೆ. ತಮ್ಮ ನಾಯಕ ಅಥವಾ ನಾಯಕಿ ಬಳಸುತ್ತಿದ್ದ ವಸ್ತುವನ್ನು ಬಿದಿರಿನ ಬುಟ್ಟಿಯಲ್ಲಿಟ್ಟು, ಕೆಲವು ಕಡೆ ಸಾಲಿಗ್ರಾಮಗಳನ್ನು ಮತ್ತು ನಾಯಕ/ನಾಯಕಿ ಬಳಸುತ್ತಿದ್ದ ಬಿಲ್ಲು, ಬಾಣ/ ಖಡ್ಗವನ್ನೇ ದೇವರೆಂದು ನಂಬಿ ಪೂಜಿಸುವ ಸಮುದಾಯದಲ್ಲಿ ದೀಪಾವಳಿಯನ್ನು ಇವುಗಳಿಗೆ ಪೂಜೆ ಸಲ್ಲಿಸುವ ಮೂಲಕವೇ ಆಚರಿಸಲಾಗುತ್ತದೆ.

ಮ್ಯಾಸಮಂಡಲದ ಎಲ್ಲಾ ಗುಡಿಕಟ್ಟುಗಳಲ್ಲಿಯೂ ಮತ್ತು ಇದಕ್ಕೆ ಸಂಬಂಧಿಸಿದ ಎತ್ತಿನಗೂಡುಗಳಲ್ಲಿ ಈ ಹಬ್ಬದ ಆಚರಣೆ ನಡೆಯುತ್ತದೆ. ದೀಪಾವಳಿ ಅಮಾವಾಸ್ಯೆಕಳೆದು ಪಾಡ್ಯದ ಸೋಮವಾರ ಹೀರೆಹಳ್ಳಿಯ ದಡ್ಡಿಸೂರನಾಯಕನ ಗುಡಿಗೆ ಈತನಿಂದ ಸಂರಕ್ಷಿಸಲ್ಪಟ್ಟ ದನಕರುಗಳ ಪರಂಪರೆಯಿಂದ ಇಂದಿಗೂ ಉಳಿದು ಬಂದಿರುವ ಆಕಳ ಗೂಡಿನಿಂದ (ಗುಡೇಕೋಟಿ ಬಳಿ ಇರುವ} ಕಿಲಾರಿಗಳು ಮೊಸರು,ತುಪ್ಪವನ್ನು ತಂದು ಸೋಮವಾರ ಸಂಜೆ ಗುಡಿಗೆ ಒಪ್ಪಿಸುತ್ತಾರೆ. ತಮ್ಮ ಹೊಲಗಳಲ್ಲಿ ಬೆಳೆದ ಹಸನಾದ ಸಜ್ಜೆಯತೆನೆಗಳನ್ನು ತಂದು ಒಪ್ಪಿಸುವ ವಾಡಿಕೆಯೂ ಇದೆ. ರಾತ್ರಿಯಿಡಿ ಎಲ್ಲರೂ ಸೇರಿ ಗುಡಿಯಲ್ಲಿ ಹುರುಳಿ, ಗುಗ್ಗರಿ ಬೇಯಿಸಿ ಜೋಳ ಅಥವಾ ಸಜ್ಜೆಯ ಅನ್ನ ಮಾಡಿ ಗೂಡಿನಿಂದ ತಂದ ಮೊಸರನ್ನು ಸೇರಿಸಿ ಬೆಳಗಿನಜಾವ ದಡ್ಡಿಸೂರನಾಯಕನಿಗೆ ನೈವೇದ್ಯ ಮಾಡಲಾಗುತ್ತದೆ.

ರಾತ್ರಿಯಿಡೀ ಉರುಮೆ ವಾದ್ಯದ ಸೇವೆ, ನಾಯಕನನ್ನು ಕುರಿತು ಪದ ಹೇಳುವುದು ನಡೆಯುತ್ತದೆ, ಹೀಗೆ ಗುಡಿಯಲ್ಲಿ ನಡೆಯುವ ಪೂಜೆಯೇ ತಮಗೆ ದೀಪಾವಳಿ ಹಬ್ಬದ ಆಚರಣೆಯಾಗಿದ್ದು ಮನೆ ಮನೆಯ ಮುಂದೆ ದೀಪ ಬೆಳಗಿಸುವ, ರಂಗೋಲಿ ಹಾಕುವ, ಪಟಾಕಿ ಸಿಡಿಸುವ ಆಚರಣೆಗಳು ಇಲ್ಲಿ ಇರುವುದಿಲ್ಲ.
ಕಂಪಳ ದೇವರ ಹಟ್ಟಿಯಲ್ಲಿ ಇದಕ್ಕಿಂತ ಸ್ವಲ್ಪ ಭಿನ್ನವಾಗಿ ಹಬ್ಬದ ಆಚರಣೆ ನಡೆಯುತ್ತದೆ. ಮಾಘ ಮಾಸದಲ್ಲಿ ನಡೆಯುವ ಗುಗ್ಗರಿ ಹಬ್ಬದಲ್ಲಿ ಮಾಡುವಂತೆ ಈ ಸಮಯದಲ್ಲಿಯೂ ಅಮಾವಾಸ್ಯೆ ನಂತರದ ಶುಕ್ರವಾರದಂದು ಪೆಟ್ಟಿ ದೇವರನ್ನು ಗುಡಿಯಿಂದ ತಂದು ಹಟ್ಟಿಯ ಹೊರವಲಯದಲ್ಲಿ ಹೊಸ ಉದಿ/ಪದಿಯನ್ನು ಕಟ್ಟಿ ಇದರಲ್ಲಿ ಕೂರಿಸಿ ಮೂರು ದಿನಗಳ ಹಬ್ಬದ ಆಚರಣೆ ನಡೆಸಲಾಗುತ್ತದೆ.

ತೆಲುಗಿನಲ್ಲಿ ಇದನ್ನು ‘ದುಯಿಲಪಂಡುವ’ ಎಂದು ಕರೆಯಲಾಗುತ್ತದೆ. ಕಂಪಳ ದೇವರ ಪೆಟ್ಟಿಯೊಂದಿಗೆ ಜಗಲೂರು ಪಾಪನಾಯಕನನ್ನು ಸಂಕೇತಿಸುವ ಬಿಲ್ಲು ದೇವರನ್ನೂ ತಂದು ಪೂಜಿಸಲಾಗುತ್ತದೆ. ಆಕಳಗೂಡಿನ ಮೀಸಲು ಮೊಸರು ಮತ್ತು ಬೆಣ್ಣೆಯನ್ನು ಅರ್ಪಿಸುವುದು ಇಲ್ಲಿ ಬಹಳ ವಿಶೇಷವಾದುದು. ಗತಿಸಿದ ಎತ್ತು ಮತ್ತು ಆಕಳಿಂದ ಸಂಗ್ರಹಿಸಿದ ಕೊಂಬನ್ನು ಇಲ್ಲಿ ಬೆಣ್ಣೆಯನ್ನು ಶೇಕರಿಸಲು ಬಳಸಲಾಗುತ್ತದೆ.ಬುಡಕಟ್ಟಿನ ಜನತೆ ತಮಗೆ ಸಿಗುವ ವಸ್ತುಗಳನ್ನೇ ಸಲಕರಣೆಗಳನ್ನಾಗಿ ಬಳಸುವ ವಿಧಾನ ಇಲ್ಲಿ ಗಮನ ಸೆಳೆಯುತ್ತದೆ. ಹೀಗೆ ಸಂಗ್ರಹಿಸಿದ ಬೆಣ್ಣೆಯನ್ನು ಕಾಯಿಸಿ ತುಪ್ಪ ಮಾಡಿ ಪದಿಯಲ್ಲಿ ದೀಪವನ್ನು ಉರಿಸಲಾಗುತ್ತದೆ.ಮೊಸರು,ಜೋಳದ/ಸಜ್ಜೆಯ ಅನ್ನ,ಬಾಳೆಹಣ್ಣು,ಬೆಲ್ಲವನ್ನು ಬೆಳಗಿನಜಾವದಲ್ಲಿ ನೈವೇದ್ಯ,ಮಾಡಲಾಗುತ್ತದೆ.

ಇದರೊಂದಿಗೆ ಎತ್ತುಗಳನ್ನೂ ಹರಿಯಿಸುವುದು, ಮಣೇವು, ಉರಿಯುವ ಪಂಜುಗಳನ್ನೇ ನುಂಗುವುದು ಈ ಹಬ್ಬದ ಪ್ರಮುಖ ಆಚರಣೆಗಳಾಗಿವೆ. ನನ್ನಿವಾಳದ ಕಟ್ಟಿಮನೆಗೆ ಸೇರಿದ ಬಂಗಾರುದೇವರ ಹಟ್ಟಿಯಲ್ಲಿ ದೇವರುಗಳನ್ನು ಮತ್ತು ಬೆಳಗಟ್ಟದ ಸೂರೆಯರಗಾಟನಾಯಕನಿಗೆ ಸಂಬಂಧಿಸಿದಂತೆ, ಬೋಸೇದೇವರ ಹಟ್ಟಿಯ ಬೋಸೇರಂಗಯ್ಯನ ಪೆಟ್ಟಿಯನ್ನು, ದೊಣಮಂಡಲಹಟ್ಟಿಯ ಮಂಡಬೊಮ್ಮದೇವರನ್ನು ಹಟ್ಟಿಯಿಂದ ಹೊರಗೆ ತಂದು ಊರ ಹೊರಗೆ ಹೊಸ ಪದಿಯನ್ನು ಕಟ್ಟಿ, ಗೂಡಿನಿಂದ ಎತ್ತುಗಳನ್ನು ಕರೆಸಿ ಗೌರವಿಸಿ ಪೂಜಿಸುವ ಕ್ರಮವಿದೆ.

ಒಟ್ಟಾರೆ ಈಮ್ಯಾಸಮಂಡಲದ ದೀಪಾವಳಿ ಹಬ್ಬಕ್ಕೆ ಆಯಾ ಗುಂಪಿನವರೆಲ್ಲರೂ ಕಾಸು,ಹಾಲು, ಮೊಸರನ್ನು ಅರ್ಪಿಸಿ ಪಾಲ್ಗೊಳ್ಳುವಿಕೆಯೇ ಇಲ್ಲಿ ಸಾಮುದಾಯಿಕತೆಯ ಮಹತ್ವವನ್ನು ಪಡೆಯುತ್ತದೆ. ಈ ದೀಪಾವಳಿ ಹಬ್ಬದ ಆಚರಣೆಯಲ್ಲಿಎಲ್ಲಾ ಪದಿಗಳಲ್ಲಯೂ ದಾಸೋಹ ವಿಶೇಷವಾಗಿ ನಡೆಯುತ್ತದೆ. ಮುಂಗಾರು ಮಳೆ ಸುರಿದು ಸೊಂಪಾಗಿ ಬೆಳೆದ ಹುಲ್ಲನ್ನು ತಿಂದು ಹಸುಗಳು ಸಾಕಷ್ಟು ಹಾಲನ್ನು ಕೊಡುವುದರಿಂದ ಸಮೃದ್ಧವಾದ ಹಾಲು,ಮೊಸರು ಈ ಹಬ್ಬಕ್ಕೆ ಒದಗುತ್ತದೆ.ಇದನ್ನು ಎಡೆ ಮಾಡಿದ ನಂತರ ಎಲ್ಲರಿಗೂ ದಾಸೋಹದಲ್ಲಿ ನೀಡಲಾಗುತ್ತದೆ.

ಈ ಬುಡಕಟ್ಟಿನ ದೀಪಾವಳಿ ಹಬ್ಬದ ಆಚರಣೆಯ ಹಿಂದೆ ನಮ್ಮ ಭಾರತದ ಪೌರಾಣಿಕ ಕಥನಗಳಾವುವು ಕೇಳಿ ಬರುವುದಿಲ್ಲ.ಮನೆ ಮನೆಯ ಮುಂದೆ ದೀಪಗಳನ್ನು ಹಚ್ಚಿ ಸಡಗರಿಸುವುದು ಇಲ್ಲಿಲ್ಲ. ರಂಗೋಲಿ ಹಾಕುವುದಂತೂ ಬುಡಕಟ್ಟಿನ ನಿಶೇಧಗಳಲ್ಲಿ ಒಂದಾಗಿರುವುದರಿಂದ ಆ ಪ್ರಸ್ತಾಪವೇ ಇಲ್ಲಿಲ್ಲ. ಬದಲಾಗಿ ತಮ್ಮ ಮನೆ ದೇವರಾದ ಪೆಟ್ಟಿಗೆ ದೇವರು/ಬಿಲ್ಲು ದೇವರು/ಎತ್ತುಗಳನ್ನು ಗೌರವಿಸಿ ಪೂಜಿಸುವುದು. ಈ ಮೂಲಕವಾಗಿಯೇ ತಮ್ಮ ಮುಂದಿನ ಬದುಕಿಗೆ ಬೇಕಾದ ಬೆಳಕನ್ನು, ಚೈತನ್ಯವನ್ನು ಕೋರುವುದು ಇಲ್ಲಿ ಮುಖ್ಯವಾಗಿರುತ್ತದೆ.

ತಾನು ಬದುಕಿರುವ ಪರಿಸರ, ತಮಗೆ ಬದುಕನ್ನು ಕಟ್ಟಿಕೊಡುವ ಪ್ರಾದೇಶಿಕತೆ ಮತ್ತು ಭೌತಿಕ ಪ್ರಪಂಚ ಮತ್ತು ತನಗೆ ನೈತಿಕ ಬೆಂಬಲವಾಗಿ ನಿಂತ ತನ್ನ ಸಾಂಸ್ಕೃತಿಕ ಜಗತ್ತು ಈ ಎಲ್ಲವುಗಳ ಮೂಲಕ ಒಡಮೂಡುವ ದೇಸಿತನ ಆಯಾ ಬುಡಕಟ್ಟಿನ ಆಚರಣೆಗಳಿಗೆ ಸೈದ್ಧಾಂತಿಕತೆಯನ್ನು ಒದಗಿಸಿಕೊಡುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಮ್ಯಾಸಬೇಡ ಬುಡಕಟ್ಟಿನ ಈ ದೀಪಾವಳಿ ಆಚರಣೆಯಲ್ಲಿ ಈ ದೇಸಿತನವೇ ಒಡಮೂಡಿರುವುದನ್ನು ಕಾಣಬಹುದಾಗಿದೆ.ಆದಿವಾಸಿಗಳ ಧರ‍್ಮಿಕ ಜಗತ್ತಿನಲ್ಲಿ ಸರ‍್ಪಣಾಭಾವ ಮತ್ತು ಪಾರಂಪರಿಕ ಸಂಬಂಧ ಮುಖ್ಯವಾಗಿರುತ್ತದೆ. ಈ ಆಚರಣೆಗಳನ್ನು ಸಮುದಾಯದ ಸಾಂಸ್ಕೃತಿಕ ಅಸ್ಮಿತೆಗಳು ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ2 weeks ago

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮಡಿಕೇರಿಯಲ್ಲಿ...

ದಿನದ ಸುದ್ದಿ2 weeks ago

ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ

ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ...

ದಿನದ ಸುದ್ದಿ3 weeks ago

ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್‍ಗೆ ರೂ.10 ಪಡೆದ ಶಾಪಿಂಗ್ ಮಾಲ್‍ಗೆ ದಂಡ

ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499...

ದಿನದ ಸುದ್ದಿ3 weeks ago

ವಿವಿಧ ಜಿಲ್ಲೆಗಳಲ್ಲಿ ಡಾ. ಬಾಬು ಜಗಜೀವನ್ ರಾಮ್ 117ನೇ ಜನ್ಮ ದಿನಾಚರಣೆ

ಸುದ್ದಿದಿನ ಡೆಸ್ಕ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಾ. ಬಾಬು ಜಗಜೀವನ್ ರಾಮ್ ಅವರ 117ನೇ ಜನ್ಮ ದಿನಾಚರಣೆ ಪ್ರಯುಕ್ತ ವಿಧಾನ ಸೌದದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿ...

ದಿನದ ಸುದ್ದಿ3 weeks ago

ಇಂದು ಚುನಾವಣಾ ಆಯೋಗ ಸಮಾವೇಶ

ಸುದ್ದಿದಿನ ಡೆಸ್ಕ್ : ಕಳೆದ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ 11 ರಾಜ್ಯಗಳ ನಗರ ಪಾಲಿಕೆ ಆಯುಕ್ತರು ಮತ್ತು ಆಯ್ದ ಜಿಲ್ಲಾ ಚುನಾವಣಾ ಅಧಿಕಾರಿಗಳೊಂದಿಗೆ ಕೇಂದ್ರ ಚುನಾವಣಾ...

ದಿನದ ಸುದ್ದಿ3 weeks ago

ತಂತ್ರಜ್ಞಾನ ಮೋಡಿ : ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ

ಡಾ. ಚಂದ್ರಪ್ಪ ಎಚ್, ಸಹಾಯಕ ಪ್ರಾಧ್ಯಾಪಕರು, ಭೌತವಿಜ್ಞಾನ ವಿಭಾಗ, ಸರ್ಕಾರಿ ವಿಜ್ಞಾನ ಕಾಲೇಜು, ಚಿತ್ರದುರ್ಗ 90ರ ದಶಕದಿಂದೀಚೆಗೆ, ಎಲ್ಲೆಡೆ ಸದ್ದಿಲ್ಲದೇ ಕ್ರಮೇಣ ಒಕ್ಕರಿಸತೊಡಗಿದೆ ಆಧುನಿಕ ಯಾಂತ್ರಿಕೃತ ಬದುಕು....

ದಿನದ ಸುದ್ದಿ3 weeks ago

ಔಷಧಗಳ ದರ ಗಣನೀಯ ಏರಿಕೆ ಕುರಿತ ಮಾಧ್ಯಮಗಳ ವರದಿ ಸತ್ಯಕ್ಕೆ ದೂರವಾದ ಸಂಗತಿ ; ಕೇಂದ್ರ ಸರ್ಕಾರ ಸ್ಪಷ್ಟನೆ

ಸುದ್ದಿದಿನ ಡೆಸ್ಕ್ : ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವ ವಿವಿಧ ಔಷಧಿಗಳ ದರ ಗಣನೀಯವಾಗಿ ಏರಿಕೆ ಮಾಡಲಾಗಿದೆ ಎಂಬ ಮಾಧ್ಯಮಗಳ ವರದಿ ಸತ್ಯಕ್ಕೆ ದೂರವಾದ ಸಂಗತಿ ಮತ್ತು ಜನರನ್ನು...

ದಿನದ ಸುದ್ದಿ3 weeks ago

ರಾಜ್ಯದಲ್ಲಿ ಬಿಸಿಲ ತಾಪ ಇನ್ನೂ ಹೆಚ್ಚಾಗಲಿದೆ ; ಹವಾಮಾನ ಇಲಾಖೆ ಮುನ್ಸೂಚನೆ

ಸುದ್ದಿದಿನ ಡೆಸ್ಕ್ : ರಾಜ್ಯದಲ್ಲಿ ಮುಂದಿನ 7 ದಿನಗಳಲ್ಲಿ ಬಿಸಿಲ ತಾಪ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಅವಧಿಯಲ್ಲಿ ಜನರುಕೆಲವು ಮುನ್ನೆಚ್ಚರಿಕೆ...

ದಿನದ ಸುದ್ದಿ3 weeks ago

ಜಿಲ್ಲೆಯ ರಾಜಕಾರಣದಲ್ಲಿ ನನಗೆ ಅನ್ಯಾಯ; ರಾಜಕೀಯ ಕುತಂತ್ರ ವ್ಯವಸ್ಥೆ ವಿರುದ್ಧ ನನ್ನ ಹೋರಾಟ : ವಿನಯ್ ಕುಮಾರ್

ಸುದ್ದಿದಿನ,ದಾವಣಗೆರೆ : ಜಿಲ್ಲೆಯ ರಾಜಕಾರಣದಲ್ಲಿ ಚೆನ್ನಯ್ಯ ಒಡಿಯರ್ ಅವರಿಗೆ ಆದ ಅನ್ಯಾಯ ನನಗೂ ಆಗಿದೆ. ನನ್ನ ಹೋರಾಟ ನನ್ನ ಸ್ವಾಭಿಮಾನದ ಹೋರಾಟ ಒಬ್ಬ ವ್ಯಕ್ತಿ ಪಕ್ಷದ ವಿರುದ್ಧ...

ದಿನದ ಸುದ್ದಿ3 weeks ago

ಲೋಕಸಭೆ ಚುನಾವಣೆ; ರಾಜ್ಯದ 14 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಲು ಇಂದು ಕೊನೆ ದಿನ

ಸುದ್ದಿದಿನ ಡೆಸ್ಕ್ : 18ನೇ ಲೋಕಸಭೆ ಸಾರ್ವತ್ರಿಕ ಚುನಾವಣೆಗೆ, ದೇಶಾದ್ಯಂತ ಎರಡನೇ ಹಂತದ 89 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ. ರಾಜ್ಯದಲ್ಲಿ ನಡೆಯುತ್ತಿರುವ ಮೊದಲ...

Trending