ಭಾವ ಭೈರಾಗಿ
ನರಹತ್ಯೆ ಮತ್ತು ಜಗುಲಿ ಸಂಸ್ಕೃತಿ
- ಜಗದೀಶ್ ಕೊಪ್ಪ
ಮೊನ್ನೆ ಮಹಾರಾಷ್ಟ್ರದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸಾಧುಗಳನ್ನು ಹಾಗೂ ಚಾಲಕನನ್ನು ಮಕ್ಕಳ ಕಳ್ಳರೆಂದು ಭಾವಿಸಿ ಜನರು ಹತ್ಯೆ ಮಾಡಿದ್ದಾರೆ. ಈ ಸುದ್ದಿ ಪ್ರಸಕ್ತ ಭಾರತದ ಮನಸ್ಥಿತಿಗೆ ಹಿಡಿದ ಕೈಗನ್ನಡಿಯಂತಿದೆ. ಕಳೆದ ಆರರೇಳು ವರ್ಷಗಳಿಂದ ಮಕ್ಕಳ ಕಳ್ಳರು, ಮಾತಗಾತಿಯರು, ಗೋವುಗಳ ಕಳ್ಳಸಾಗಾಣಿಕೆದಾರರು ಎಂಬ ಹಣೆಪಟ್ಟಿಯೊಂದಿಗೆ ನಿರ್ಗತಿಕರು, ಭಿಕ್ಷುಕರು, ಮಾನಸಿಕ ಅಸ್ವಸ್ಥರು ಮತ್ತು ಅಮಾಯಕರನ್ನು ಗ್ರಾಮ ಭಾರತದಲ್ಲಿ ನಿರ್ಧಯವಾಗಿ ಕೊಲ್ಲಲಾಗುತ್ತಿದೆ.
ಮನುಷ್ಯ ಮನಷ್ಯನನ್ನು ಕೊಲ್ಲುವುದು ಅನಾಗರೀಯಕತೆಯ ಕಾಲದಲ್ಲಿ ಮತ್ತು ಯುದ್ಧದಲ್ಲಿ ಎಂದು ತಿಳಿದುಕೊಂಡಿದ್ದ ನಮಗೆ ಈಗ ನಾವು ಬದುಕುತ್ತಿರುವ ಕಾಲಘಟ್ಟ ಯಾವುದು ಎಂಬ ಪ್ರಶ್ನೆ ಎದುರಾಗಿದೆ.ಈ ಪರಿಸ್ಥಿತಿ ಎಲ್ಲಿಯವರೆಗೆ ಬಂದಿದೆಯೆಂದರೆ, ಯಾವೊಬ್ಬ ಅಪರಿಚಿತ ವ್ಯಕ್ತಿಯೂ ಹಳ್ಳಿಗಳಿಗೆ ಕಾಲಿಡದಂತೆ ಅವನನ್ನು ಅಥವಾ ಅವಳನ್ನು ಅಸಹಾಯಕತೆಗೆ ದೂಡಿದೆ. ಭಾರತದ ನಿಜವಾದ ಆತ್ಮದಂತಿರುವ ಹಳ್ಳಿಗಳಿಗೆ ಮತ್ತು ಅಲ್ಲಿನ ಜನರ ಎದೆಯೊಳಕ್ಕೆ ಈ ಕ್ರೌರ್ಯದ ಹಾಗೂ ಅಪನಂಬಿಕೆಯ ವಿಷವನ್ನು ತುಂಬಿದವರು ಯಾರು? ಇದು ಉತ್ತರವಿಲ್ಲದ ಪ್ರಶ್ನೆ.
ನಾನು ಹಳ್ಳಿಗಾಡಿನ ಸಂಸ್ಕೃತಿಯಿಂದ ಬಂದವನು ಎಂದು ಎದೆಯುಬ್ಬಿಸಿ ಹೇಳಿಕೊಳ್ಳುವ ಕಾಲ ಒಂದಿತ್ತು ಆದರೆ, ಈಗ ಆ ಮಾತನ್ನು ಹೇಳಲು ನನಗೀಗ ಹಿಂಜರಿಕೆಯಾಗುತ್ತಿದೆ. ಇಂದಿನ ಹಳ್ಳಿಗಳು ಅಪನಂಬಿಕೆ, ದ್ವೇಷ ಮತ್ತು ದಳ್ಳುರಿಗಳ ಕೊಂಪೆಯಾಗಿವೆ. ನಗರ ಸಂಸ್ಕೃತಿಯ ಕಾಡ್ಗಿಚ್ಚಿನಿಂದ ಅರಬೆಂದ ನಿತ್ಯ ಹರಿದ್ವರ್ಣದ ಕಾಡಿನಂತೆ ಗೋಚರಿಸುತ್ತಿವೆ.
1981 ರಲ್ಲಿ ತಮಿಳುಭಾಷೆಯಲ್ಲಿ ಬಿಡುಗಡೆಯಾದ ಕೆ.ಬಾಲಚಂದರ್ ರವರ “ ತಣ್ಣೀರ್, ತಣ್ಣೀರ್” ಸಿನಿಮಾವನ್ನು ನಾನು ಪ್ರಥಮವಾಗಿ ನೋಡಿದ್ದು ತಿರುಪತಿಯ ಚಿತ್ರಮಂದಿರದಲ್ಲಿ.ಆ ಚಿತ್ರದ ನಾಯಕಿ ಹೇಳುವ ಒಂದು ಡೈಲಾಗ್ ಇವೊತ್ತಿಗೂ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಕೊಂಡು ಬಿಟ್ಟಿದೆ.
ಒಬ್ಬ ಖೈದಿ ರಾತ್ರೋ ರಾತ್ರಿ ಜೈಲಿನಿಂದ ತಪ್ಪಿಸಿಕೊಂಡು ನಡೆಯುತ್ತಾ ಅನೇಕ ಹಳ್ಳಿಗಳನ್ನು ದಾಟುತ್ತಾ ಹೋಗುತ್ತಿರುತ್ತಾನೆ. ಮಧ್ಯಾಹ್ನದ ವೇಳೆಗೆ ಹಸಿವು ಮತ್ತು ನೀರಡಿಕೆಯಿಂದ ಒಂದು ಹಳ್ಳಿಯನ್ನು ತಲುಪುತ್ತಾನೆ. ಆ ಹಳ್ಳಿ ಒಂದು ಕುಗ್ರಾಮ. ಕುಡಿಯುವ ನೀರಿಗಾಗಿ ಎಂಟತ್ತು ಕಿಲೊಮೀಟರ್ ದೂರ ಹೋಗಿ ಮಹಿಳೆಯರು ನೀರು ಹೊತ್ತು ತರಬೇಕಾದ ಸ್ಥಿತಿ. ಯಾರೊಬ್ಬರೂ ಅವನಿಗೆ ನೀರು ಕೊಡಲು ನಿರಾಕರಿಸುತ್ತಾರೆ.
ನಿರಾಸೆಯಿಂದ ಹಳ್ಳಿಯಿಂದ ಹೋಗುತ್ತಿರುವ ಸಮಯದಲ್ಲಿ ಖೈದಿಗೆ ಆಗ ತಾನೆ ಉರಿಬಿಸಿನಲ್ಲಿ ತಲೆಯ ಮೇಲೆ ಹಾಗೂ ಸೊಂಟದಲ್ಲಿ ನೀರು ಹೊತ್ತು ಹಳ್ಳಿಗೆ ಬರುತ್ತಿರುವ ಹೆಣ್ಣುಮಗಳು ಕಾಣುತ್ತಾಳೆ. ಅವಳ ಬಳಿ ತೆರಳಿ ನೀರಿಗಾಗಿ ಕೈಯೊಡ್ಡಿದ್ದಾಗ ಆಕೆ ಹೇಳುವ ಮಾತಿದು, “ ಅಣ್ಣಯ್ಯಾ, ಈ ಊರಿನಲ್ಲಿ ನೀನು ಹೆಂಗಸರ ಶೀಲ ಬೇಕಾದರೆ ಕೇಳು ಕೊಟ್ಟುಬಿಡುತ್ತಾರೆ ಆದರೆ, ನೀರು ಕೊಡಲಾರರು” ಒಂದು ಹಳ್ಳಿಯ ಕುಡಿಯುವ ನೀರಿನ ಅಭಾವ ಕುರಿತು ಕಟು ವಾಸ್ತವ ಸಂಗತಿಯನ್ನು ಹೀಗೂ ಹೇಳಬಹುದೆ ಎಂದು ನಮಗೆ ಆಶ್ಚರ್ಯವಾಗುತ್ತದೆ. ನಂತರ ಅನುಕಂಪದಿಂದ ಆತನ ಬೊಗಸೆಗೆ ನೀರು ಸುರಿಯುತ್ತಾಳೆ, ಆತನ ದಾಹವನ್ನು ನೀಗಿಸುತ್ತಾಳೆ.
ಆ ಹೆಣ್ಣುಮಗಳ ಅಂತಃಕರಣ ಮತ್ತು ಪ್ರೀತಿಗೆ ಮನಸೋತ ಖೈದಿ, ನೀರಿನ ಅಭಾವ ಕುರಿತು ಆಕೆಯನ್ನು ಕೇಳಿದಾಗ, ಎಂಟತ್ತು ಕಿ.ಮಿ.ದೂರದ ನಾಲೆಯನ್ನು ಹಳ್ಳಿಯತ್ತ ತಿರುಗಿಸಲು ಊರಿನ ಗಂಡಸರಿಗೆ ಮತ್ತು ರಾಜಕೀಯ ಪಕ್ಷಗಳಿಗೆ ಮನಸ್ಸಿಲ್ಲ ಎಂಬ ಸಂಗತಿ ನಾಯಕಿಯಿಂದ ತಿಳಿಯುತ್ತದೆ. ತನ್ನ ಹಿನ್ನಲೆಯನ್ನು ಹೇಳಿಕೊಳ್ಳದ ಖೈದಿ, ಆ ಹೆಣ್ಣುಮಗಳನ್ನು ತಂಗಿಯೆಂದು ಭಾವಿಸಿ, ಆಕೆಯ ಆಶ್ರಯದಲ್ಲಿ ಉಳಿದುಕೊಂಡು ಏಕಾಂಗಿಯಾಗಿ ನಾಲುವೆ ತೋಡಿ ಊರಿಗೆ ನೀರು ಹರಿಸುತ್ತಾನೆ. ಒಂದು ಬೊಗಸೆ ನೀರು ಮತ್ತು ಹೆಣ್ಣಿನ ಅಂತಃಕರಣ ಹೇಗೆ ಒಬ್ಬ ಖೈದಿಯ ಮನಪರಿವರ್ತನೆ ಮಾಡಬಲ್ಲದು ಎಂಬುದಕ್ಕೆ ಹಾಗೂ ಹಳ್ಳಿಗಳ ನಿಜವಾದ ಮಾನವೀಯ ಮುಖಕ್ಕೆ ಈ ಚಿತ್ರ ಇವೊತ್ತಿಗೂ ಸಾಕ್ಷಿಯಾಗಿದೆ.
ರಾಷ್ಟ್ರಪ್ರಶಸ್ತಿ ಪಡೆದ ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿರುವ ಸರಿತಾಳ ಪಾತ್ರ ಆಕೆ ನಿಜಕ್ಕೂ ಭಾರತದ ಶ್ರೇಷ್ಠ ಅಭಿನೇತ್ರಿ ಎಂದು ಸಾಬೀತು ಪಡಿಸಿದೆ,
ನಾನು ಮತ್ತು ನನ್ನ ತಲೆಮಾರಿನ ಅನೇಕ ಬರಹಗಾರರು ಹುಟ್ಟಿ ಬೆಳೆದ ಹಳ್ಳಿಗಳು ಹೀಗೆಯೇ ಇದ್ದವು. ಎಲ್ಲರ ಮನೆಯ ಮುಂದೆ ಜಗುಲಿಗಳಿದ್ದವು. ಊರಿಗೆ ಬರುತ್ತಿದ್ದ ಮಡಿಕೆ ಮಾರುವವರುಮ ಕಸಬರಿಕೆ ಮಾರುವವರು, ಪಾತ್ರೆ ಹಾಗೂ ಬಟ್ಟೆಗಳನ್ನು ತಲೆಯ ಮೇಲೆ ಹೊತ್ತು ಮಾರುವವರು ನಮ್ಮ ಜಗುಲಿಯ ಮೇಲೆ ವಿಶ್ರಮಿಸಿಕೊಳ್ಳುತ್ತಿದ್ದರು. ಬಾಯಾರಿಯಾದಾಗ ಮಜ್ಜಿಗೆ, ಹಸಿವಾಗಿದ್ದಾಗ ಊಟ ಎಲ್ಲರ ಮನೆಗಳಲ್ಲಿ ಅವರಿಗೆ ದೊರೆಯುತ್ತಿತ್ತು. ಎಂತಹ ಬಡರೈತನ ಮನೆಯಲ್ಲಿಯೂ ಸಹ ಯಾರಾದರೂ ಬಂದರೆ ಇರಲಿ ಎಂದು ಅಗತ್ಯಕ್ಕಿಂತ ಎರಡು ಅಥವಾ ಮೂರು ಮುದ್ದೆಗಳನ್ನು ಹೆಚ್ಚಿಗೆ ಮಾಡಿ ಇಡುತ್ತಿದ್ದರು.
ಇನ್ನು, ಹಳ್ಳಿಗಾಡಿನ ಹೆಣ್ಣು ಮಕ್ಕಳಿಗೆ ಸೂಜಿ, ದಾರ, ಕರಿಮಣಿ, ಹೇರ್ ಪಿನ್, ಪೌಡರ್ ಇತ್ಯಾದಿಗಳನ್ನು ಸೂಟ್ ಕೇಸ್ ನಂತಹ ಪೆಟ್ಟಿಗೆಯಲ್ಲಿ ಇಟ್ಟುಕೊಂಡು, ಕಂಕುಳಲ್ಲಿ ಮಗು ಇಟ್ಟುಕೊಂಡು ಬರುತ್ತಿದ್ದ ಹೆಣ್ಣುಮಕ್ಕಳಿಗೆ ನಮ್ಮ ಅವ್ವಂದಿರು ಅಥವಾ ಅಕ್ಕ ತಂಗಿಯರು ಮಧ್ಯಾಹ್ನದ ವೇಳೆ ಅವರಿಗೆ ಊಟ ಹಾಕಿ, ಮಗುವಿಗೆ ಕುಡಿಯಲು ಹಾಲು ಒದಗಿಸುತ್ತಿದ್ದರು.
ಎಂತಹ ಬಡತನದ ನಡುವೆಯೂ ಸಹ ಬಡವರು ತಮ್ಮ ವೃತ್ತಿಯನ್ನು ಬಿಡುತ್ತಿರಲಿಲ್ಲ.
ಹಳ್ಳಿಗೆ ಹೋದರೆ, ಊಟಕ್ಕೆ ತೊಂದರೆಯಿಲ್ಲ ಎಂಬ ಭರವಸೆ ಅವರ ಬದುಕಿಗೆ ಬೆಳಕಿನ ದಾರಿಯಂತೆ ತೋರುತ್ತಿತ್ತು. ಹುಣಸೆ ಬೀಜ, ಬೇವು ಮತ್ತು ಹೊಂಗೆ ಬೀಜ ಕಲೆ ಹಾಕಲು ಬರುತ್ತಿದ್ದ ಮುಸ್ಲಿಂ ಮಂದಿ ಊರಿನ ಜನತೆಗೆಲಾ ಸಾಬಣ್ಣ ಆಗಿರುತ್ತಿದ್ದರು.ಅವರ ಹೆಣ್ಣು ಮಕ್ಕಳ ಮದುವೆಗೆ ಅಕ್ಕಿ, ತೆಂಗಿನ ಕಾಯಿ, ಬಾಳೆಹಣ್ಣು, ಆರ್ಥಿಕ ಸಹಾಯ ಇವೆಲ್ಲವೂ ಹಳ್ಳಿಗಳಿಂದ ಧಾರಾಳವಾಗಿ ಸಿಗುತ್ತಿತ್ತು. ಅಲ್ಲಿನ ಜಾತಿ, ಧರ್ಮಕ್ಕಿಂತ ಮಿಗಿಲಾಗಿ ಅವರೂ ಸಹ ನಮ್ಮಂತೆ ಮನನುಷ್ಯರು ಎಂಬ ಉದಾತ್ತ ಮಾನವೀಯ ಪ್ರಜ್ಞೆ ಅಶಿಕ್ಷಿತರಾದ ಹಳ್ಳಿಗರಲ್ಲಿ ಮನೆ ಮಾಡಿತ್ತು.
ಈಗ ಅಂತಹ ಪ್ರಜ್ಞೆಯನ್ನು ಮತ್ತು ಮನುಷ್ಯ ಸಂಬಂಧ ಕುರಿತಾದ ನಂಬಿಕೆಯನ್ನು ಎಲ್ಲಿ ಹುಡುಕಿ ತರೋಣ. ಊರುಗಳಲ್ಲಿದ್ದ ಜಗುಲಿ ಮನೆ ಮಾಯವಾಗಿವೆ, ಆರ್.ಸಿ.ಸಿ. ಮನೆ ಎದ್ದು ನಿಂತಿವೆ. ಅಪರಿಚತರು, ಭಿಕ್ಷುಕರು, ವ್ಯಾಪಾರಿಗಳು ರಾತ್ರಿಯ ವೇಳೆ ತಂಗುತ್ತಿದ್ದ ದೇವಸ್ಥಾನದ ಆವರಣ, ಶಾಲೆಗಳ ಹೊರಜಗುಲಿ ಇವುಗಳಿಗೆ ಕಾಂಪೌಂಡ್ ನಿರ್ಮಿಸಿ ಬೀಗ ಜಡಿಯಲಾಗಿದೆ. ಈ ಬೀಗ ಒಂದರ್ಥದಲ್ಲಿ ನಮ್ಮ ಮನಸ್ಸಿಗೆ ನಾವು ಹಾಕಿಕೊಂಡಿರುವ ಬೀಗಗಳಲ್ಲದೆ ಬೇರೇನೂ ಅಲ್ಲ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕವಿತೆ | ನೆನಪು
- ರುದ್ರಪ್ಪ ಹನಗವಾಡಿ
ಅಪ್ಪನನ್ನು ಒಪ್ಪ ಮಾಡಿ
ವರ್ಷಗಳೇ ಕಳೆದವು ಮುವ್ವತ್ತೇಳು
ಇಂದಿರಾಗಾಂಧಿಯ ತುರ್ತು ಪರಿಸ್ಥಿತಿ
ಅರಸರ ಮೀಸಲಾತಿ
ಬಸವಲಿಂಗಪ್ಪನವರ ಬೂಸಾ ಖ್ಯಾತಿ
ಮಲ ಹೊತ್ತು
ಮಲಗಿದ್ದ ಕಾಲಕ್ಕೆ
ಚುರುಕು ಮುಟ್ಟಿಸಿದ ಕಾಲ
ಹರೆಯದ ನನಗೆ
ಕಾಲೇಜ ಮೇಷ್ಟರ ಕೆಲಸ
ಸೂಟು ಬೂಟಿನ ವೇಷ
ಆ ಮೇಲೆ ಅಮಲದಾರಿಕೆ
ಎಲ್ಲ ನಡೆದಾಗಲೇ ಅವ್ವನನ್ನು
ಆಸ್ಪತ್ರೆಗೆ ಸೇರಿಸಿದ್ದು
ಕಾಲ ಕಳೆದು ಕೊಂಡು
ಕೋಲ ಹಿಡಿದದ್ದು
ನಿನ್ನೆ ಮೊನ್ನೆಯಂತೆ
ಬಾಲ್ಯವಿನ್ನು ಉಂಟೆಂಬಂತೆ
ಭಾವಿಸುವಾಗಲೇ ಅವ್ವನ ಸಾವು
ಅದರೊಟ್ಟಿಗೆ ಕಾಯದಾಯಾಸ ತೀರಿಸಲು
ಬಂದರೆ ಬೆಂಗಳೂರಿಗೆ
ರೌಡಿಗಳ ಕಾಟ
ಅಂಬೇಡ್ಕರ್ ಪಟದ ಕೆಳಗೆ
ದೌರ್ಜನ್ಯದ ದಂಡು
ಅಮಾಯಕರಿಗೆ ಗುಂಡು
ಕಂಡುಂಡ ಹಾದಿಯ ಗುಡಿಸಲುಗಳಲ್ಲೀಗ
ಮುಗಿಲು ಮುಟ್ಟೋ ಮಹಲುಗಳು
ಅಂತಲ್ಲಿ
ದೇಶ ವಿದೇಶಗಳ
ಅಹವಾಲುಗಳು
ಅವಿವೇಕಗಳು
ನೋಡ ನೋಡುತ್ತಿದ್ದಂತೆ
ಉಸಿರು ಬಿಗಿಹಿಡಿದ ಜನರ ಒಳಗೆ
ಒಳಪದರಗಳೊಳಗೆ ಕನಸ ಬಿತ್ತಿ
ಹಸಿರ ಹೊನ್ನು ಬಾಚಲು ಹವಣಿಸಿದ
ಬಿಳಿ ಜನರ ಆಟ
ಅರ್ಥವಾಗುವುದೇ ಎಲ್ಲ
ಗೋಣ ನೀಡುವರೆ
ಹೂತಿಟ್ಟ ಗೂಟಕ್ಕೆ ?
( ಚಿಂತಕ ರುದ್ರಪ್ಪ ಹನಗವಾಡಿ ಅವರ ‘ಊರು – ಬಳಗ’ ಕವನ ಸಂಕಲನದಿಂದ ‘ ನೆನಪು ‘ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕೃತಿಯನ್ನು ಫ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ 2013 ರಲ್ಲಿ ಪ್ರಕಿಸಿದೆ.)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕವಿತೆ | ಮಣ್ಣ ಮಕ್ಕಳು
- ಸಿ.ಕೃಷ್ಣನಾಯಕ್, ಆಡಳಿತಾಧಿಕಾರಿ, ಐಟಿಐ ಕಾಲೇಜು ದಾವಣಗೆರೆ
ಮಣ್ಣ ಮಕ್ಕಳು ನಾವು
ಹಗಳಿರುಳೆನ್ನದೆ ಬೆವರು ಬಸಿದು
ಹಸಿದ ಹೊಟ್ಟೆಯಲಿ ಉಸಿರು ಹಿಡಿದವರು
ಕಸದಲಿ ರಸ ತೆಗದು ಬದುಕಿನುದ್ದಕ್ಕೂ ಉಳ್ಳವರ
ಕಸುಬಿಗೆ ಆಳಾದವರು ಸವಳು ನೀರಲಿ ಮೈತೊಳೆದು
ಚಿಂದಿ ಅಂಗಿಯಲಿ ಶಾಲೆಗೆ ದಾಖಲಾದವರು.
ಬರಿಗಾಲಲಿ ಕಾಡು ದಾರಿಯಲಿ ಮೈಲು ದೂರ ನಡೆದು
ನೆಗ್ಗಿಲ ಮುಳ್ಳು ತುಳಿದವರು ; ನಿಬ್ಬು ನೆಗ್ಗಿದ ಪೆನ್ನಿನಲಿ
ಹೆಸರು ಬರೆಯಲು ಕಲಿತವರು ಹರಿದ ಪಠ್ಯದಲಿ ಅಕ್ಷರ ಹುಡುಕಿ ಒಡೆದ ಪ್ಲೇಟಿನಲಿ ಬರೆದವರು.
ತೂತು ಬಿದ್ದ ಸೂರಿನಲಿ ಇಣುಕಿದ ಚುಕ್ಕಿ ಚಂದ್ರಮರ ನೋಡಿ
ವಿದ್ಯುತ್ ದೀಪದ ಕನಸು ಕಂಡವರು
ಮೋಸ ವಂಚನೆಗೆ ಬಗ್ಗದೆ ಶೋಷಣೆಗೆ ಸಿಡಿದವರು
ಮಣ್ಣ ಮಕ್ಕಳು ನಾವು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಬಿ.ಶ್ರೀನಿವಾಸ ಅವರ ‘ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು’ ಕೃತಿಯ ಕುರಿತು
ಸಂಡೂರಿನ ಜನರ ಮುದುಡಿದ ಅಂಗಿಯ ಮೇಲೆ,ಹೆಂಗಸರು ಮಾಸಿದ ಸೀರೆಯ ಸೆರಗಿನ ಮೇಲೆ ಬಿ.ಶ್ರೀನಿವಾಸ ಅಕ್ಷರ ಬಿಡಿಸುತ್ತಾರೆ.
ಅನ್ನದ ಅಗುಳು,ಧೂಳು,ಕಾಗದದ ಚೂರು,ಆಟಿಕೆ ಸಾಮಾನು,ಕಿಡ್ನಿ,ಈ ಸಣ್ಣವು ಗಳಲ್ಲಿ ಜೀವಸಾಕ್ಷಿ ಹುಡುಕುವ ಕಥೆಗಳಿವು.ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಅನ್ನದ ಅಗಳು,ಕಾಗದದ ಚೂರನ್ನು ಎತ್ತಿಹಿಡಿಯುವ ಗೆಳೆಯ ಶ್ರೀನಿವಾಸ *ಧೂಳನ್ನೇ ಅಕ್ಷರಗಳನ್ನಾಗಿಸಿದ ಲೇಖಕ.
- ಬಸವರಾಜ ಹೂಗಾರ
ಇಲ್ಲಿನ ಹುಚ್ಚರ ಕತೆಗಳನ್ನು ಓದುವಾಗ ಕುಂ.ವೀ.ಯವರ ಹಾಗೂ ಸಾದತ್ ಹಸನ್ ಮಾಂಟೋ ಅವರ ಹುಚ್ಚರ ಕತೆಗಳು ನೆನಪಾಗುತ್ತವೆ.ಇಲ್ಲಿನ ನತದೃಷ್ಟರ ಬದುಕನ್ನು ಹಿಡಿದಿಡಲು ಲೇಖಕರು ಕಂಡುಕೊಂಡಿರುವ ಅಭಿವ್ಯಕ್ತಿ ವಿನ್ಯಾಸ ವಿಶಿಷ್ಟವಾಗಿದೆ. ಬರಹಗಳು ದೀರ್ಘವಾಗಿಲ್ಲ. ಚುಟುಕಾಗಿವೆ. ಕವನಗಳೊ, ಗದ್ಯಗಳೊ ಎಂದು ಹೇಳಲಾಗದ ರೂಪದಲ್ಲಿವೆ.
ಗಾಢವಾದ ಅರ್ಥವನ್ನು ಕೆಲವೇ ಸಾಲುಗಳಲ್ಲಿ ವ್ಯಂಗ್ಯ ಮತ್ತು ವಿಡಂಬನೆಗಳಲ್ಲಿ ಹಿಡಿಯಲು ಯತ್ನಿಸುತ್ತವೆ.
ಇಲ್ಲಿರುವ ಲೋಕದ ನೋವಿಗೆ ಮಿಡಿವ ಸಂವೇದನೆ,ಓದುವ ಓದುಗರನ್ನೂ ಆವರಿಸಿಕೊಂಡು,ಚಿಂತನೆಗೆ ಹಚ್ಚುತ್ತದೆ.ಓದುತ್ತ,ಓದುತ್ತಾ ನಿಟ್ಟುಸಿರು ಹೊಮ್ಮುತ್ತದೆ.ಮನಸ್ಸು ಮಂಕಾಗುತ್ತದೆ.ಇಂತಹ ಬರಹಗಳನ್ನು ಕೊಟ್ಟಿರುವ ಶ್ರೀನಿವಾಸ ತಮ್ಮ ಅಂತಃಕರಣ ,ಚೂಪಾದ ಗ್ರಹಿಕೆ,ಆಳವಾದ ಸಂವೇದನೆಗಳನ್ನು ಇತರೆ ಪ್ರಕಾರಗಳಲ್ಲಿಯೂ ಪ್ರಕಟಿಸುವ ಜರೂರಿಯಿದೆ.
- ಡಾ.ರಹಮತ್ ತರೀಕೆರೆ
ಒಬ್ಬ ಮನುಷ್ಯ ಮತ್ತೊಬ್ಬನನ್ನು ಕಿತ್ತು ತಿನ್ನಬಾರದು.ಹೊಟ್ಟೆಪಾಡಿಗಾಗಿ ನಿರ್ವಹಿಸುವ ಪ್ರತಿ ಕೆಲಸವೂ ಸೃಜನಶೀಲವಾಗಿರಬೇಕು-ಎಂಬ ಧಾವಂತದಲ್ಲಿ ಹುಟ್ಟಿದ ಮನದ ಪ್ರಕ್ರಿಯೆಗಳಿಗೆಲ್ಲ ಇಲ್ಲಿ ಹರಡಿಕೊಂಡಿವೆ.
- ಬಿ.ಶ್ರೀನಿವಾಸ,ಕೃತಿ ಲೇಖಕ
ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು ನೊಂದವರ ಮನದಲ್ಲಿ ಅಲ್ಪಾವಧಿ ಗುರುತು ಮೂಡಿಸಬಹುದು ನಿಮ್ಮ ಈ ಪುಸ್ತಕ ಮತ್ತು ಅದರಲ್ಲಿರುವ ಎಷ್ಟೋ ವಿಚಾರಗಳು ನನ್ನನ್ನು ಡಿಸ್ಟರ್ಬ್ ಮಾಡಿವೆ. ಕೇವಲ ವಾಟ್ಸಾಪ್ ಲೈನ್ ಸಾಕಾಗಲ್ಲ ಎದುರುಗಡೆ ಕುಳಿತು ಇನ್ನು ಹೆಚ್ಚು ತಿಳಿದುಕೊಳ್ಳಬೇಕೇನಿಸುತ್ತದೆ. ಸಂಡೂರಿನ ದಾರುಣ ಚಿತ್ರಗಳನ್ನು,ಕೋರ್ಟಿನ ಚಿತ್ರಗಳನ್ನು,ಬದುಕಿನ ಚಿತ್ರಗಳನ್ನು ಕಣ್ಣಿಗೆ ರಾಚುವಂತೆ ಮೂಡಿಸಿದ್ದೀರಿ.
ಸಾವಿಗಿಂತ ಹಸಿವು ಬಹಳ ಕ್ರೂರಿ ಎನ್ನುವುದು: ನೋವಿನ ಬದಲು ಹಸಿವಿನ ಏಟುಗಳು ಬೀಳಬೇಕಿತ್ತು ಎನ್ನುವ ಸಾಲುಗಳಂತೂ Geographical Hungrey ಪುಸ್ತಕ ನೆನಪಿಸುತ್ತವೆ. ಸೊಂಡೂರಿನ ಚಿತ್ರಗಳ ಮೂಡಿಸಿದೆ ಗಾಢ ವಿಷಾದತೆ, ನನ್ನನ್ನು ಹೊರಬರಲು ಬಿಡುತ್ತಿಲ್ಲ.
“ಉಳ್ಳವರು ಹೊತ್ತ ಮೂಟೆಗಳಲ್ಲಿ ಬಡವರ ಹಸಿವಿನದ್ದೇ ಭಾರ”ಇವೆಲ್ಲ ಹಸಿವನ್ನು ಅನುಭವಿಸಿದವರಿಗೆ ಮಾತ್ರ ಸರಿಯಾಗಿ ಅರ್ಥವಾಗುವ ಸಾಲುಗಳು.
ಇನ್ನು ,ಕೋರ್ಟಿನ ಚಿತ್ರಗಳು, ಎಷ್ಟು ಜನ ಇರ್ತಾರೆ ಇವನ್ನೆಲ್ಲ ಸೂಕ್ಷ್ಮ ವಾಗಿ ತಿಳಿದುಕೊಳ್ಳುವವರು ?
ಶಾಲೆ ಹಿಂದೆ ತಿರುಗಬಾರದು ಕೋರ್ಟ್ ಕಚೇರಿ ಮುಂದೆ ತಿರುಗಬಾರದು ಎಂದು ನಮ್ಮ ಜನಪದರು ಹೇಳ್ವ ಮಾತು ಎಷ್ಟೋ ಸಲ ಸತ್ಯ ಎನಿಸುತ್ತದೆ.
ನೀವು ಹಿಡಿದಿಟ್ಟ ಬದುಕಿನ ಚಿತ್ರಗಳಲ್ಲಿನ “ಶವಪೆಟ್ಟಿಗೆ ಸಣ್ಣದಿದ್ದಷ್ಟು ಹೊರುವುದು ಬಹಳ ಕಷ್ಟ “ಎಂಬ ಮಾತಂತೂ ಚಿಕ್ಕಮಕ್ಕಳ ತಂದೆತಾಯಿಯರ ಕಣ್ಣಲ್ಲಿ ನೀರು ತರಿಸುವುದು.
ತಲೆ ಮ್ಯಾಲೆ ಮಲ ಸುರುವಿಕೊಂಡೆವಲ್ಲ ಸರ್ ಅವತ್ತೇ… ನಾವ್ ಹುಟ್ಟಿದ್ದು ಎನ್ನುವ ಸವಣೂರಿನ ಭಂಗಿಯ ಮಾತನ್ನು ಎಷ್ಟು ಅರ್ಥಗರ್ಭಿತವಾಗಿ ಸೋ ಕಾಲ್ಡ್ ಸೊಸೈಟಿಗೆ ಮುಟ್ಟಿ ನೋಡಿಕೊಳ್ಳುವಂತೆ ಬರೆದಿದ್ದೀರಿ. ಆಕೆ ಏನನ್ನೋ ಆಯ್ಕೆ ಮಾಡಿಕೊಂಡಿದ್ದಾಳೆ ಎಂಬ ವಿಚಾರಗಳು ಕೇವಲ ವಿಚಾರಗಳಲ್ಲ ,ಬದುಕಿನ ಸತ್ಯ ಚಿತ್ರಣಗಳು ದಿನ ನಿತ್ಯ ನಮ್ಮ ನಡುವೆ ನಡೆಯುವಂತವು.ಅವನ್ನು ಕಾಣುವಂತ ದೃಷ್ಟಿ ಇದ್ದವರಿಗೆ ಮಾತ್ರ ಇವು ಕಾಣುತ್ತವೆ ಸರ್ .
ನಿಮ್ಮ ನೈಜ ದೃಷ್ಟಿಗೆ ದನ್ಯವಾದಗಳು ಸರ್, ಉಳಿದದ್ದು ಎದುರು ಬದುರು ಕುಳಿತು ಮಾತಾಡೋಣ
- ಡಾ.ರಾಮಚಂದ್ರ ಹಂಸನೂರು, ಬೆಟಗೇರಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243