ದಿನದ ಸುದ್ದಿ
ಅರಿಮೆಯ ಅರಿವಿರಲಿ-40 : ವಿದ್ಯಾವಂತರ ಮತಿಘಾತ
- ಯೋಗೇಶ್ ಮಾಸ್ಟರ್
ಈ ವರ್ಗದವರಿಗೆ ವಿದ್ಯಾಭ್ಯಾಸವಾಗಿರುತ್ತದೆ, ಆರ್ಥಿಕವಾಗಿ ಸಬಲರಾಗಿರುತ್ತಾರೆ. ಮನೆಯ ಜವಾಬ್ದಾರಿಗಳಿರುತ್ತವೆ. ಉನ್ನತ ಹುದ್ದೆಯೂ ಇರುತ್ತದೆ. ಸರ್ಕಾರದ ಅಥವಾ ಇನ್ನಾವುದಾದರೂ ಸಾಮಾಜಿಕ ಸಂಸ್ಥೆಯ ಭಾಗವೂ ಆಗಿರುತ್ತಾರೆ. ತೆರಿಗೆದಾರರಾಗಿರುತ್ತಾರೆ. ಅವರೂ ಕೂಡಾ ದೊಂಬಿ ಗಲಭೆ ಮಾಡುವವರ ಹಿಂಸಾತ್ಮಕ ಮನಸ್ಥಿತಿ ಮತ್ತು ಅಸಹನೀಯ ಧೋರಣೆಗಳನ್ನು ಹೊಂದಿರುತ್ತಾರೆ.
ಆದರೆ ಅವರು ನೇರವಾಗಿ ರಸ್ತೆಗೆ ಇಳಿಯುವುದಿಲ್ಲ. ಆದರೆ ಅಂತವು ಆಗಬೇಕೆಂದು ಬಯಸುತ್ತಾರೆ.
ಅವರಲ್ಲಿ ಕೆಲವರಿಗಂತೂ ನಾಗರಿಕ ದಂಗೆ, ದೊಂಬಿ, ದಾಳಿಗಳೂ ಕ್ರೀಡೆಗಳೇ, ಮನರಂಜನೆಗಳೇ. ಏಕೆಂದರೆ ಈ ಗಲಾಟೆ, ದೊಂಬಿ ಅವರಿಗೆ ಸೋಕದು. ಅವರು ಯಾವಾಗಲೂ ಸುರಕ್ಷಿತ. ಹಿಂದೆ ಕತ್ತಿಕಾಳಗವೇ ಮೊದಲಾಗಿ ಹೊಡೆದಾಟದ ರಕ್ತಸಿಕ್ತ ಕ್ರೀಡೆಗಳನ್ನು ಕ್ರೀಡಾಂಗಣದಲ್ಲಿಯೇ “ಭಲೇ ಭಲೇ” ಎಂದು ಗ್ಲ್ಯಾಡಿಯೇಟರ್ಗಳನ್ನು ಹುರಿದುಂಬಿಸುತ್ತಿದ್ದ ಪೂರ್ವಜರ ರಕ್ತದ ವಾಸನೆ ಇನ್ನೂ ಇವರಲ್ಲಿ ಜೀವಂತವಾಗಿದೆ.
ಮಕ್ಕಳು ಚಿಟ್ಟೆಯ ರೆಕ್ಕೆ ಕೀಳುವುದನ್ನು, ನಾಯಿಯ ಬಾಲಕ್ಕೆ ಸರ ಪಟಾಕಿಯನ್ನು ಕಟ್ಟುವುದನ್ನು, ಕತ್ತೆಯ ಬಾಲಕ್ಕೆ ಡಬ್ಬ ಕಟ್ಟಿ ಓಡಿಸುವುದನ್ನು, ಓತಿಕ್ಯಾತನ ಹಿಡಿದು ರಸ್ತೆಗೆಸೆದು ಅದರ ಮೇಲೆ ವಾಹನ ಹರಿಯುವುದ ನೋಡುವುದನ್ನು, ಇರುವೆಗಳನ್ನು ಹೊಸಕುವುದನ್ನು ಅಲ್ಲಲ್ಲಿ ನೋಡುತ್ತಿರುತ್ತೇವೆ. ಈ ಮಕ್ಕಳದು ಕ್ರೌರ್ಯಾಮೋದ ಅಥವಾ ಸ್ಯಾಡಿಸ್ಟ್ ಕುಶಿ ಎಂದು ಅನಿಸಲಿಲ್ಲವೇ? ಮಕ್ಕಳಿಗೆ ಗೊತ್ತಾಗುವುದಿಲ್ಲ, ಈಗ ಹಾಗೆ ಮಾಡುವುದು ಸಹಜ, ದೊಡ್ಡವರಾದ ಮೇಲೆ ಸರಿಹೋಗುತ್ತಾರೆ ಎಂದು ಎಂದೂ ಅಂದುಕೊಳ್ಳಬೇಡಿ.
ಈ ಮಕ್ಕಳು ದೊಡ್ಡವರಾದ ಮೇಲೆ ವಿದ್ಯಾವಂತರೂ, ಬುದ್ಧಿವಂತರೂ, ಅಧಿಕಾರಿಗಳೂ, ಜವಾಬ್ದಾರಿಯುತ ಸ್ಥಾನ, ಸಾಮಾಜಿಕ ಮಾನ್ಯತೆಗಳನ್ನು ಹೊಂದಿದ್ದರೂ ಸಾಮಾಜಿಕ ಅಸ್ವಾಸ್ಥ್ಯಕ್ಕೆ, ಕ್ರೌರ್ಯಕ್ಕೆ ತಮ್ಮ ಕಾಣ್ಕೆಗಳನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನೀಡುತ್ತಿರುತ್ತಾರೆ. ಏಕೆಂದರೆ ಅವರ ಮನಸ್ಸಿನ ಆಳದಲ್ಲಿ ಅಜ್ಞಾತವಾಗಿ ಕೆಲಸ ಮಾಡುತ್ತಿರುವ ಅನೇಕ ವಿಷಯಗಳಿರುತ್ತವೆ. ಅಡಗಿರುವ ಕಾರಣಗಳ ಮೂಲಗಳನ್ನು ಹೀಗೇ ಎಂದು ನಿರ್ಧಿಷ್ಟವಾಗಿ ಬೊಟ್ಟು ಮಾಡಿ ಹೇಳಲಾಗದಿದ್ದರೂ ಒಂದಷ್ಟು ಮೂಲಗಳನ್ನು ಗುರುತಿಸಬಹುದು.
ಸಾಮಾನ್ಯವಾಗಿ ಇರಬಹುದಾದ ಮನೋಜ್ಞಾತ ಕಾರಣಗಳೆಂದರೆ;
1. ಸಾಂಪ್ರದಾಯಕವಾದಂತಹ (ಜಾತಿ/ಧರ್ಮದ) ವೈಷಮ್ಯದಿಂದ ಸೇಡಿನ ಭಾವವನ್ನು ಹೊಂದಿರುತ್ತಾರೆ.
2. ತಮಗಿರುವ ಆರ್ಥಿಕ ಸಬಲತೆಯಿಂದಾಗಿ, ಸಾಮಾಜಿಕ ಸ್ಥಾನಮಾನದ ಭದ್ರತೆಯಿಂದಾಗಿ, ರಾಜಕೀಯ ಮತ್ತು ವ್ಯವಸ್ಥೆಯಲ್ಲಿರುವವರ ಕೃಪೆ ಅಥವಾ ಸ್ಥಾನದಿಂದಾಗಿ
ಭಯವಿರದವರಾಗಿರುತ್ತಾರೆ.
3. ಅಹಂಕಾರ, ಢಂಬಾಚಾರಗಳೂ ಕೂಡಾ ಕಂದಾಚಾರಗಳಂತೆ ಕುಟುಂಬಗಳಲ್ಲಿ ತಲೆಮಾರುಗಳಿಂದಲೇ ಬಂದಿರುತ್ತವೆ. ನಾವು, ನಮ್ಮ ಮನೆತನದವರು ಯಾರಿಗೂ ತಲೆ ಬಾಗಲ್ಲ. ನಾವಿರುವುದೇ ಆಳುವುದಕ್ಕೆ. ನಮ್ಮ ತಾತ ಮುತ್ತಾತಂದಿರು ಇಷ್ಟು ದರ್ಪದಿಂದ ಆಳುತ್ತಿದ್ದರು ಅಥವಾ ವರ್ತಿಸುತ್ತಿದ್ದರು; ಇಂತಹ ಧೋರಣೆಗಳು ಪ್ರತಿಷ್ಟೆಯ ಸಂಕೇತಗಳಾಗಿರುತ್ತವೆ. ಹಾಗಾಗಿ ಅವರಲ್ಲಿ ಇತರರನ್ನು ಸಮಾನವಾಗಿ ನೋಡುವುದು, ಸೌಹಾರ್ದದಿಂದ ಇರುವುದು, ಇತರರ ಅಭಿಪ್ರಾಯಗಳಿಗೆ ಬೆಲೆ ನೀಡುವುದು ಇರುವುದೇ ಇಲ್ಲ. ಹಾಗೆ ಇತರರದನ್ನು ಒಪ್ಪಿಕೊಳ್ಳುವುದು ತಮ್ಮ ಘನತೆಗೆ ಚ್ಯುತಿ ಎಂಬಂತಹ ಮನೋಭಾವ ಇರುತ್ತದೆ.
ಇನ್ನು ಔದಾರ್ಯವೆಂಬುದು ಅಥವಾ ಅಂತಃಕರುಣವೆಂಬುದು ಕೂಡಾ ಇರುವುದಿಲ್ಲ.
ಇವರು ಸಮಾಜಮುಖಿಯಾಗಿ ಚಿಂತನೆ ಮಾಡುವುದಿರಲಿ, ಹಾಗೆ ಮಾಡುವುದರಿಂದ ನಮಗೇನು ಲಾಭ ಎಂದು ಕೇಳುತ್ತಾರೆ. ನಮ್ಮದನ್ನು ನಾವು ನೋಡಿಕೊಂಡರಾಗದೇ ಎಂದು ಭಾವಿಸುತ್ತಾರೆ. (ಯಾರನ್ನಾದರೂ ಬೊಟ್ಟು ಮಾಡಿ ಅವರು ಹಾಗಿಲ್ಲ ಎನ್ನಬೇಡಿ. ಸಾಮಾನ್ಯವಾಗಿರುವುದಕ್ಕೆ ಅಪರೂಪವಾಗಿ ಅಪವಾದವಾಗಿರುವ ಉದಾಹರಣೆಗಳು ಇದ್ದೇ ಇರುತ್ತವೆ.)
4. ಬಾಲ್ಯದಲ್ಲಿಯೇ ಮೊಳಕೆಯೊಡೆದಿದ್ದ ಕ್ರೌರ್ಯಾಮೋದ (ಸ್ಯಾಡಿಸಂ) ಮನಸ್ಥಿತಿಯು ಗಮನಕ್ಕೆ ಮತ್ತು ಚಿಕಿತ್ಸೆಗೆ ಒಳಪಡದೇ ವಯಸ್ಕರಾದಾಗ ಸದೃಢವಾಗಿ ಬೆಳೆದಿರುತ್ತದೆ. ತಾವು ರಣಕ್ಕಿಳಿಯದೇ, ಇತರರನ್ನು ಗ್ಲ್ಯಾಡಿಯೇಟರ್ಗಳನ್ನಾಗಿ ಮಾಡಿ ಕಣಕ್ಕಿಳಿಸುತ್ತಾರೆ. ಇಲ್ಲಿ ಸಮಾಜ ಘಾತುಕತನದಲ್ಲಿ ಎರಡು ವರ್ಗಗಳಿವೆ. ಒಂದು ಭೌತಿಕವಾಗಿ ನೇರ ಸಮಾಜದ ಮೇಲೆ ಬೆಂಕಿಯಂತೆ ಉರಿದಾಳಿ ಮಾಡುವುದು.
ಮತ್ತೊಂದು ತಣ್ಣನೆ ತಮ್ಮ ಸ್ವಾರ್ಥದ ಹೊದಿಕೆಯಲ್ಲಿ ಬೆಚ್ಚಗಿದ್ದು ಮೊದಲನೆಯ ವರ್ಗದ ಸೃಷ್ಟಿಗೆ ಕಾರಣವಾಗುವುದು. ಇವರಲ್ಲಿ ಬಹುಪಾಲು ಅಪರಾಧಿಗಳಾಗಿ ಗುರುತಿಸಲ್ಪಡುವುದಿಲ್ಲ. ಆದರೆ, ಅಪರಾಧಿಗಳನ್ನು ರೂಪಿಸುವುದರಲ್ಲಿ ಬಹಳ ಗಂಭೀರವಾದ ಪ್ರೇರಣೆಗಳಾಗಿರುತ್ತಾರೆ. ಪ್ರಮುಖ ಪಾತ್ರವನ್ನು ವಹಿಸುತ್ತಾರೆ.
ಬಾಲ ಬಾಸ್
ಕೊಂಚ ಸ್ಥಿತಿವಂತರ ಅಥವಾ ಅಧಿಕಾರಸ್ಥರ ಮಕ್ಕಳು ಬಾಸ್ಗಳಾಗಿದ್ದು ತಮಗೆ ಒಂದಷ್ಟು ಬಾಲಗಳನ್ನು ಇಟ್ಟುಕೊಂಡಿರುತ್ತಾರೆ. ಕೆಲವು ಸಲ ಕುಟುಂಬದ ಹಿನ್ನೆಲೆ ಏನೂ ಇಲ್ಲದಿದ್ದರೂ ಶಕ್ತಿವಂತ ಹುಡುಗರು ಬಾಸ್ಗಳಾಗಿ ವರ್ತಿಸುವುದುಂಟು. ಆದರೆ ಸಾಮಾನ್ಯವಾಗಿ ಕುಟುಂಬದ ಆರ್ಥಿಕ ಮತ್ತು ಅಧಿಕಾರದ ಹಿನ್ನೆಲೆ ಮಕ್ಕಳಲ್ಲಿ ಸಾಕಷ್ಟು ಕೆಲಸ ಮಾಡುತ್ತದೆ.
ಶಾಲೆಗಳಲ್ಲಿ ಮತ್ತು ಮನೆಯ ಬಳಿಯ ಆಟದ ಮೈದಾನಗಳಲ್ಲಿ ಸ್ಥಿತಿವಂತ ಮಕ್ಕಳು ಸ್ಥಿತಿವಂತರಲ್ಲದ ಮಕ್ಕಳನ್ನು ಅಥವಾ ದೈಹಿಕವಾಗಿ ಅಥವಾ ಮಾನಸಿಕವಾಗಿ ಅಷ್ಟೇನೂ ಸಬಲರಲ್ಲದ ಗೆಳೆಯರನ್ನು ಬಾಲಗಳನ್ನಾಗಿ ನಡೆಸಿಕೊಳ್ಳುವ ರೀತಿಗಳನ್ನು ಪಾಲಕರೂ ಮತ್ತು ಶಿಕ್ಷಕರೂ ಗಮನಿಸಬೇಕು.
ಆ ಮಕ್ಕಳೋ ತಮಗಿರುವ ಮೇಲರಿಮೆಯ ಕಾರಣದಿಂದ, ಮನೆಯಲ್ಲಿ ಅನುಸರಿಸಿರುವ ಮಾದರಿಯ ದೆಸೆಯಿಂದ ತಮ್ಮ ಬಾಲಗಳಿಗೆ ಕೆಲಸಗಳನ್ನು ಹೇಳುತ್ತಿರುತ್ತಾರೆ. ಅವರು ಗೆಳೆಯರೇ ಆಗಿದ್ದರೂ ಒಬ್ಬ ಇನ್ನೊಬ್ಬನ ಮೇಲೆ ಮೇಲಧಿಕಾರವನ್ನು ಪಡೆದಿರುತ್ತಾರೆ. ಕೆಲವು ಸಲ ತಿನಿಸು ಅಥವಾ ಬೇರೆ ವಸ್ತುಗಳನ್ನು ಕೊಡುವ ಕಾರಣವಿರಬಹುದು. ಕೆಲವು ಸಲ ಏನೂ ಇಲ್ಲದೆಯೇ ಅಧಿಕಾರ ಚಲಾಯಿಸುತ್ತಾರೆ.
ಆಡುವಾಗ ಚೆಂಡು ದೂರದಲ್ಲಿ ಬಿದ್ದರೆ ಬಾಲವನ್ನೇ ಕಳುಹಿಸುವುದು, ಕಾಂಪೋಂಡಿನ ಒಳಗೆ ಅಥವಾ ಸಜ್ಜೆ ಮೇಲೆ ಬಿದ್ದರೆ ಬಾಲವನ್ನೇ ಹತ್ತಿಸುವುದು. ಚೇಷ್ಟೆ ಅಥವಾ ತರಲೆ ಮಾಡುವಾಗ ಬಾಲವನ್ನು ಸಿಕ್ಕಿಸಿ ತಾನು ಮೆಲ್ಲನೆ ಜಾರಿಕೊಳ್ಳುವುದು. ಅಂಗಡಿಯಿಂದ ಅಥವಾ ಇನ್ನೆಲ್ಲಿಂದಾದರೂ ಏನಾದರೂ ತರಿಸಿಕೊಳ್ಳುವುದಿದ್ದರೆ ಬಾಲವನ್ನೇ ಓಡಿಸುವುದು. ಬಾಲಬಾಸ್ಗಳು ಎಷ್ಟೋ ವಿಷಯಗಳಲ್ಲಿ ತಾವು ಅಪರಾಧಿಗಳಾಗದೆಯೇ ತಮ್ಮ ಬಾಲಗಳನ್ನು ಅಪರಾಧಿಗಳನ್ನಾಗಿ ರೂಪಿಸುತ್ತಾರೆ.
ಹೀಗೆ ಯಾವುದಾದರೂ ಪ್ರಕರಣದಲ್ಲಿ ಸಿಕ್ಕಿಕೊಂಡಾಗ ಬಾಲವನ್ನು ಕೇಳಿ, “ನೀನ್ಯಾಕೆ ಅವನು ಹೇಳಿದ ಹಾಗೆ ಕೇಳ್ತೀಯಾ?” ಎಂದು. ಪಾಪ ಬಾಲಗಳಲ್ಲಿ ಉತ್ತರವಿರುವುದಿಲ್ಲ. ಸುಮ್ಮನೆ ತಲೆ ತಗ್ಗಿಸಿ ನಿಂತುಕೊಳ್ಳುತ್ತವೆ. ಮತ್ತೆ ಬಾಸ್ ಹಿಂದೆ ಬಾಲಗಳಾಗಿ ಹೋಗುತ್ತವೆ. ಏಕೆಂದರೆ ಹಾಗೆ ಹೋಗುವುದು ಅವರಿಗೂ ರೂಢಿಯಾಗಿರುತ್ತದೆ. ಹಾಗೆ ಬಾಲಗಳನ್ನು ತಮ್ಮ ಹಿಂಬಾಲಕರನ್ನಾಗಿಸಿಕೊಳ್ಳುವುದು ಬಾಸ್ಗಳಿಗೂ ರೂಢಿಯಾಗಿಬಿಟ್ಟಿರುತ್ತವೆ.
ಯಾವುದೇ ಮಗುವು ತಾನೇ ಎದ್ದು ಹೋಗಿ ತನ್ನ ವಸ್ತುವನ್ನು ತರಬಹುದಾಗಿದ್ದರೂ ಮತ್ತೊಂದು ಮಗುವಿಗೆ ಆ ಕೆಲಸವನ್ನು ಮಾಡಲು ಹೇಳುತ್ತದೆ ಎಂದರೆ ತಕ್ಷಣವೇ ಎಚ್ಚೆತ್ತುಕೊಳ್ಳಿ. ಇದು ಬರಿಯ ಸೋಮಾರಿತನದ ವಿಷಯ ಮಾತ್ರವೇ ಅಲ್ಲ. ತನ್ನ ಮೇಲರಿಮೆಯ ಅಹಂಕಾರದ ತೃಪ್ತಿಗೆ ಮನುಷ್ಯರನ್ನು ಬಳಕೆ ಮಾಡಿಕೊಳ್ಳುವುದು. ಇದು ಕ್ರಮೇಣ ತನ್ನ ಇತರ ಸಹಜೀವಿಗಳನ್ನು ದಾಸ್ಯಕ್ಕೆ ಒಳಪಡಿಸಿಕೊಳ್ಳುವ ಮುನ್ಸೂಚನೆ. ಬಾಲಬಾಸ್ಗಳು ಗ್ಲ್ಯಾಡಿಯೇಟರ್ಗಳನ್ನು ರೂಪಿಸಿ ಭಲೇ ಭಲೇ ಎಂದು ರಕ್ತಸಿಕ್ತ ಕ್ರೀಡೆಗಳನ್ನು ಆನಂದಿಸುವವರು.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಇಂದಿನಿಂದ ಏ.3 ರವರೆಗೆ ಸೂಳೆಕೆರೆಗೆ ನೀರು ಬಿಡುಗಡೆ
ಸುದ್ದಿದಿನ,ದಾವಣಗೆರೆ: ಭದ್ರಾ ಜಲಾಶಯ ಯೋಜನೆ ವ್ಯಾಪ್ತಿಗೆ ಬರುವ ದೇವರಬೆಳಕೆರೆ ಪಿಕ್ಅಪ್ ಅಣೆಕಟ್ಟಿನ ಸ್ಕವರಿಂಗ್ ಸ್ಪೂಯೀಸ್ ಗೇಟ್ ಮುಖಾಂತರ ಜಲಾಶಯದ ಡೆಡ್ ಸ್ಟೋರೇಜ್ ನೀರನ್ನು ಸೂಳೆಕೆರೆ ಹಳ್ಳಕ್ಕೆ ಮಾರ್ಚ್ 28 ರಿಂದ ಏಪ್ರಿಲ್ 3 ರವರೆಗೆ ಪ್ರತಿದಿನ 20 ಕ್ಯೂಸೆಕ್ಸ್ಗಳಲ್ಲಿ ಜನ-ಜಾನುವಾರು ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸಲು ಹಾಗೂ ಅಕ್ಕಪಕ್ಕದ ಗ್ರಾಮಗಳ ಕುಡಿಯುವ ನೀರಿನ ಉದ್ದೇಶಕ್ಕೆ ಬಿಡಲಾಗುತ್ತಿದೆ.
ಈ ವೇಳೆ ಹಳ್ಳಕ್ಕೆ ದನ ಕರಗಳನ್ನು ಇಳಿಸುವುದಾಗಲಿ, ಪಂಪ್ಸೆಟ್ಗಳಿಂದ ನೀರೆತ್ತುವುದುನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಕನೀನಿನಿ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ
ಸುದ್ದಿದಿನ ಡೆಸ್ಕ್ : ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.
ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಇದೇ 30 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಇದೇ ವೇಳೆ ಬಿಹಾರದಲ್ಲಿ ನಾಮಪತ್ರ ಸಲ್ಲಿಕೆಗೆ ನಾಳೆ ಕಡೆ ದಿನವಾಗಿದ್ದು, ಈ ತಿಂಗಳ 30 ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಏಪ್ರಿಲ್ 2ರಂದು ನಾಮತ್ರ ಹಿಂಪಡೆಯುವಿಕೆಗೆ ಕೊನೆಯ ದಿನವಾಗಿರುತ್ತದೆ.
ಏಪ್ರಿಲ್ 19 ರಂದು 17 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಅದರಂತೆ ತಮಿಳುನಾಡಿನಲ್ಲಿ 39, ರಾಜಸ್ಥಾನದಲ್ಲಿ 12, ಉತ್ತರ ಪ್ರದೇಶದಲ್ಲಿ 8, ಮಧ್ಯಪ್ರದೇಶದಲ್ಲಿ 6, ಉತ್ತರಾಖಂಡ, ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ತಲಾ 5 , ಬಿಹಾರದಲ್ಲಿ 4, ಪಶ್ಚಿಮ ಬಂಗಾಳದಲ್ಲಿ 3, ಅರುಣಾಚಲ ಪ್ರದೇಶ, ಮಣಿಪುರ, ಮೆಘಾಲಯದಲ್ಲಿ ತಲಾ 2 ಮತ್ತು ಛತ್ತೀಸ್ಗಢ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ, ಅಂಡಮಾನ್-ನಿಕೋಬಾರ್ ದ್ವೀಪಗಳು, ಜಮ್ಮು-ಕಾಶ್ಮೀರ, ಲಕ್ಷದ್ವೀಪ ಮತ್ತು ಪುದುಚೇರಿಯಲ್ಲಿ ತಲಾ ಒಂದು ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.
ಎರಡನೇ ಹಂತದಲ್ಲಿ 89 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ನಾಳೆ ಅಧಿಸೂಚನೆ ಹೊರಡಿಸಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
ಸುದ್ದಿದಿನ ಡೆಸ್ಕ್ : 18ನೇ ಲೋಕಸಭೆಗೆ ಸದಸ್ಯರನ್ನು ಆಯ್ಕೆ ಮಾಡಲು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಭಾರತ ಚುನಾವಣಾ ಆಯೋಗ, ಸಕಲ ಸಿದ್ಧತೆಯೊಂದಿಗೆ ಸಜ್ಜಾಗಿದೆ.
ದೇಶದಲ್ಲಿ ಚುನಾವಣೆಗಳನ್ನು ಪಾರದರ್ಶಕವಾಗಿ ಹಾಗೂ ಅತ್ಯಂತ ವಿಶ್ವಾಸಾರ್ಹ ರೀತಿಯಲ್ಲಿ ನಡೆಸುವ ಸಂಕಲ್ಪದೊಂದಿಗೆ ಚುನಾವಣಾ ಆಯೋಗ, ಸಮಸ್ತ ಚುನಾವಣಾ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ತಂತ್ರಜ್ಞಾನದ ನೆರವನ್ನು ಬಳಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮತದಾರರು, ಚುನಾವಣಾ ಸಿಬ್ಬಂದಿ ಹಾಗೂ ಆಯೋಗಕ್ಕೆ ನೆರವಾಗುವ ಹಲವು ಆಪ್ಗಳನ್ನು ಚುನಾವಣಾ ಆಯೋಗ ಅಭಿವೃದ್ಧಿಪಡಿಸಿದೆ.
ಈ ಪೈಕಿ ಇಂದು ಸಿ-ವಿಜಿಲ್ ಆಪ್ ಬಗ್ಗೆ ಮಾಹಿತಿ.
ದೇಶದಲ್ಲಿ ಚುನಾವಣೆಗಳ ವೇಳೆ ನಡೆಯುವ ಅಕ್ರಮಗಳು, ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಪ್ರಕರಣಗಳ ಮೇಲೆ ಕಣ್ಣಿಡುವುದು ಕೇವಲ ಚುನಾವಣಾ ಸಿಬ್ಬಂದಿಯ ಕೆಲಸವಲ್ಲ. ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು. ಹಾಗಾಗಿ ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರು ಆಯೋಗಕ್ಕೆ ದೂರು ತಲುಪಿಸಲು ಭಾರತ ಚುನಾವಣಾ ಆಯೋಗ ಸಿ-ವಿಜಿಲ್ ಆಪ್ ಅನ್ನು ಅಭಿವೃದ್ಧಿ ಪಡಿಸಿದೆ.
ದೂರುಗಳನ್ನು ಆನ್ಲೈನ್ ಮೂಲಕ ಆಯೋಗಕ್ಕೆ ರವಾನಿಸಲು ಈ ಆಪ್ ನೆರವಾಗುವುದು. ಯಾವುದೇ ಚುನಾವಣಾ ಅಕ್ರಮಗಳ ಬಗ್ಗೆ ಧ್ವನಿಮುದ್ರಣ, ವಿಡಿಯೋ ಚಿತ್ರದ ತುಣುಕುಗಳು ಮತ್ತು ಫೋಟೊ ಮೊದಲಾದ ದಾಖಲೆಗಳನ್ನು ಸಾರ್ವಜನಿಕರು ಇದರ ಮೂಲಕ ಕಳುಹಿಸಬಹುದು.
ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮಾಡುವ ಖರ್ಚು-ವೆಚ್ಚ, ಮತದಾರರ ಮನವೊಲಿಕೆಗೆ ಆಮಿಷಗಳ ಬಳಕೆ ಮೊದಲಾದ ಅಕ್ರಮಗಳ ಬಗ್ಗೆ ದೂರು ನೀಡಲು ಇದನ್ನು ಬಳಸಬಹುದು. ಒಂದುನೂರು ನಿಮಿಷಗಳಲ್ಲಿ ಚುನಾವಣಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
ದೇಶದ ಯಾವ ಮೂಲೆಯಲ್ಲೇ ಆಗಲಿ ನಡೆಯುವ ಚುನಾವಣಾ ಅಕ್ರಮ ಅಥವಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ತಾವು ನೀಡಿದ ದೂರುಗಳನ್ನು ಆಯೋಗ ಪರಿಗಣಿಸಿದೆಯೇ ಎನ್ನುವ ವಿವರಗಳನ್ನು ಸಹ ಸಾರ್ವಜನಿಕರು ಸಿ-ವಿಜಿಲ್-ಆಪ್ ಮೂಲಕ ವೀಕ್ಷಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ6 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ6 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ6 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ಕವಿತೆ | ನೆನಪು
-
ದಿನದ ಸುದ್ದಿ3 days ago
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
-
ದಿನದ ಸುದ್ದಿ2 days ago
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ