Connect with us

ಅಂತರಂಗ

ಅರಿಮೆಯ ಅರಿವಿರಲಿ – 17 : ತ್ಯಾಗವೇ ನನ್ನುಸಿರು

Published

on

  • ಯೋಗೇಶ್ ಮಾಸ್ಟರ್

ತಾನು ನೋವಿಗೊಳಗಾಗುತ್ತಾ ಇತರರ ಅನುಕಂಪ ಮತ್ತು ಗಮನವನ್ನು ತನ್ನ ಕಡೆಗೆ ಸೆಳೆದುಕೊಳ್ಳುವುದೇ ಮಾರ್ಟಿರ್ ಕಾಂಪ್ಲೆಕ್ಸ್. ಬಲಿದಾನದರಿಮೆಯುಳ್ಳವರ ಧ್ಯೇಯವಾಕ್ಯ “ಪರೋಪಕಾರಾರ್ಥೇಮಿದಂ ಶರೀರಂ.”ಅತಿಯೆನಿಸುವಷ್ಟು ಅಧಿಕ ಪರೋಪಕಾರಿಗಳು.ಕೆಲವೊಮ್ಮೆ ಅದು ನೋಡುಗರಿಗೆ ಮತ್ತು ಸಹವಾಸಿಗಳಿಗೆ ಉಪಕಾರವೆನಿಸುವುದೂ ಇಲ್ಲ. ತಮ್ಮನ್ನು ತಾವು ದಂಡಿಸಿಕೊಂಡು ಮತ್ತೊಬ್ಬರಿಗೆ ಕೆಲಸ ಮಾಡುವುದನ್ನು ನೋಡಿದರೆ ಕಿರಿಕಿರಿಯಾಗುತ್ತದೆ.

ಕೆಲವೊಂದು ಮನೆಗಳಲ್ಲಿ ಹೆಂಗಸರು ತಾನು ಏನೂ ತಿನ್ನದೇ, ಕುಡಿಯದೇ ಬರಿದೇ ಕೆಲಸ ಮಾಡುತ್ತಿರುತ್ತಾರೆ. ಎಲ್ಲರಿಗೂ ಅಡುಗೆ ಮಾಡಿ ಬಡಿಸುತ್ತಾರೆ, ಪಾತ್ರೆ ತೊಳೆಯುತ್ತಾರೆ, ಬಟ್ಟೆ ಒಗೆಯುತ್ತಾರೆ. ಆದರೆ ತಮ್ಮ ಹೊಟ್ಟೆಗೇನೂ ಹಾಕಿಕೊಳ್ಳುವುದಿಲ್ಲ. ಗಮನಿಸಿದವರು ತಿನ್ನು ತಿನ್ನು ಎಂದರೂ ಇದೊಂದು ಕೆಲಸ ಮುಗಿದುಹೋಗಲಿ, ಆಮೇಲೆ ತಿನ್ನುತ್ತೇನೆ ಎನ್ನುವರು. ಹಸಿದುಕೊಂಡೇ ಎಷ್ಟು ಹೊತ್ತಾದರೂ ಕೆಲಸ ಮಾಡುತ್ತಿರುವರು. ಅವರ ಆಂತರ್ಯಕ್ಕೆ ಬೇಕಾಗಿರುವುದೇ ಅದು. ನೋಡುಗರು “ನೋಡು ಅವಳನ್ನು. ಏನೂ ತಿನ್ನದೇ, ಬರೀ ಹೊಟ್ಟೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ತನ್ನ ಹೊಟ್ಟೆಗೇನೂ ಹಾಕಿಕೊಳ್ಳದಿದ್ದರೂ ಇತರರ ಹೊಟ್ಟೆ ತುಂಬಿಸುತ್ತಾಳೆ. ಯಾವಾಗಲೂ ಅವಳಿಗೆ ಗಂಡ, ಮಕ್ಕಳು, ಇತರರದೇ ಯೋಚನೆ. ತನ್ನ ಸ್ವಂತದ್ದೇನನ್ನೂ ಲಕ್ಷಿಸುವುದಿಲ್ಲ.” ಈ ತ್ಯಾಗಮಯಿಯ ಹಣೆಪಟ್ಟಿ ಬೇಕವರಿಗೆ. ಜ್ವರ ಬಂದಿದ್ದರೂ ಎದ್ದು ಕೆಲಸ ಮಾಡುವುದು. ಔಷಧ ತೆಗೆದುಕೊಳ್ಳುವುದನ್ನೂ ಬಿಟ್ಟು ಕೆಲಸ ಮಾಡಲು ಬರುವುದು.

ಇತರರಿಗಾಗಿ ರಾತ್ರಿ ನಿದ್ದೆಗೆಟ್ಟು ದುಡಿಯುವುದು. ಎಲ್ಲಾ ಕೆಲಸಗಳನ್ನೂ ತಾನೇ ಮೈಮೇಲೆಳೆದುಕೊಳ್ಳುವುದು. ಇಂತವೆಲ್ಲಾ ಮಾರ್ಟಿರ್ ಕಾಂಪ್ಲೆಕ್ಸ್ ಅಥವಾ ಬಲಿದಾನದರಿಮೆಯ ಅಥವಾ ಹುತಾತ್ಮನರಿಮೆಯ ಲಕ್ಷಣಗಳು. ಇತರರು ಮೊದಲು ತಾನು ನಂತರ – ಇದು ಅವರ ಆದ್ಯತೆ. ಅದಕ್ಕಾಗಿ ಅವರು ತಮ್ಮ ಆರೋಗ್ಯ ಮತ್ತು ಸುಖವನ್ನೆಲ್ಲಾ ಬೇಕಾದರೆ ತ್ಯಾಗ ಮಾಡುತ್ತಾರೆ ಅಥವಾ ನಿರ್ಲಕ್ಷಿಸುತ್ತಾರೆ. ಈ ತ್ಯಾಗದ ಹಿಂದೆ ಇರುವುದು ಅವರ ಅರಿಮೆಯ ಆಳದಲ್ಲಿ ಇತರರ ಗಮನ ಸೆಳೆಯುವ ಬಯಕೆ ಮತ್ತು ಅವರ ಕಾಳಜಿಯ ಕೋರಿಕೆ.

ತಾವು ಬಯಸುವಂತಹ ಅಥವಾ ಅಂತರಾಳದ ಆಸೆಯಿಂದ ನಿರೀಕ್ಷಿಸುತ್ತಿರುವಂತಹ ಪ್ರಶಂಸೆ, ಗಮನ ಮತ್ತು ಕಾಳಜಿಗಳು ಅತ್ತ ಕಡೆಯಿಂದ ಬರದೇ ಹೋದರೆ ತಮ್ಮನ್ನು ಇನ್ನಷ್ಟು ಕಠಿಣ ಪರಿಶ್ರಮಗಳಿಗೆ ಒಳಪಡಿಸಿಕೊಳ್ಳುತ್ತಾರೆ. ಹಾನಿ ಮಾಡಿಕೊಳ್ಳುವುದು, ಘಾಸಿ ಮಾಡಿಕೊಳ್ಳುವುದು ಕೂಡಾ ಉಂಟು.ಎಲ್ಲಿಂದಲೋ ಬಿದ್ದುಬಿಡುವುದು, ಕೈ ಕುಯ್ದುಕೊಳ್ಳುವುದು. ಇವುಗಳ ಜೊತೆಗೆ ಖಿನ್ನತೆಗೂ ಜಾರುತ್ತಾರೆ. ಇದು ಅವರ ಉಗ್ರವಾದ ವರ್ತನೆಗಳಿಗೂ ದಾರಿಯಾಗುತ್ತದೆ.

ದೇಶಕ್ಕಾಗಿ ಪ್ರಾಣ ಕೊಡುತ್ತೇನೆ

ಆರನೆಯ ತರಗತಿಯೊಂದರಲ್ಲಿ ಮಕ್ಕಳೆಲ್ಲಾ ತಾವು ದೊಡ್ದವರಾದ ಮೇಲೆ ಏನಾಗಬೇಕೆಂದು ಬಯಸುತ್ತೇವೆ ಎಂದು ಹೇಳುತ್ತಿದ್ದರು. ಒಬ್ಬ ಹುಡುಗ ತಾನು ಮಿಲಿಟರಿ ಸೇರಬೇಕು ಎಂದ.
“ಮಿಲಿಟರಿ ಏಕೆ?”
“ಸೋಲ್ಜರ್ ಆಗುತ್ತೇನೆ.”
“ಸೋಲ್ಜರ್ ಆಗಿ ಏನು ಮಾಡುತ್ತೀಯಾ?”
“ದೇಶವನ್ನು ರಕ್ಷಿಸುತ್ತೇನೆ. ಶತ್ರುಗಳೊಂದಿಗೆ ಹೋರಾಡುತ್ತೇನೆ.”
“ಆಮೇಲೆ?”
“ಆಮೇಲೆ?” ಅವನಿಗೆ ಮುಂದೆ ಏನು ಹೇಳುವುದು ಎಂದು ತೋಚಲಿಲ್ಲ. ಆದರೂ ಹೇಳಿದ “ದೇಶಕ್ಕಾಗಿ ಪ್ರಾಣಬಿಡುತ್ತೇನೆ.”
“ಆಮೇಲೆ?”
“ಆಮೇಲೆ. ದೇಶಕ್ಕೆಲ್ಲಾ ಒಳ್ಳೆಯದಾಗತ್ತೆ. ಆಮೇಲೆ,” ಅವನು ಆಲೋಚಿಸಲು ಕಷ್ಟಪಡುತ್ತಿದ್ದ, “ಆಮೇಲೆ, ನನ್ನ ಹೆಸರು ಎಲ್ಲಾ ಹೇಳ್ತಾರೆ….”
“ನಿನಗೆ ಗೊತ್ತಿರುವ ಒಂದೆರಡು ಸೋಲ್ಜರ್ಸ್ ಹೆಸರು ಹೇಳು.”
ಅವನು ಒಂದೂ ಹೇಳಲಿಲ್ಲ.

ಆದರೆ ಅವನಲ್ಲಿ ಸೈನಿಕನಾಗಿ ಸಾಯುವುದೆಂದರೆ ಬಹಳ ಹೀರೋಯಿಕ್ ಆಗಿರುವ ಕಲ್ಪನೆಯಷ್ಟೇ ಇತ್ತು. ಅವನ ತಂದೆ ಅಕೌಂಟೆಂಟ್. ಅವರ ಮನೆಯಲ್ಲಿ ಯಾರೂ ಯಾವ ವಿಶೇಷ ಪ್ರತಿಭೆಯುಳ್ಳವರೂ, ಅಥವಾ ಹೆಸರುವಾಸಿಯಾದವರೂ ಇರಲಿಲ್ಲ. ಇವನೊಳಗೆ ಸಹಜವಾಗಿ ಇರುವಂತ ಆತ್ಮರತಿಗೆ ಏನಾದರೊಂದು ಪ್ರದರ್ಶನಕ್ಕೆ ವೇದಿಕೆ ಬೇಕಿತ್ತು. ಅವನು ತಾನೊಬ್ಬ ವೀರ ಸಿಪಾಯಿಯಾಗುವುದರಿಂದ ಪ್ರಖ್ಯಾತನಾಗಬಹುದು ಅಥವಾ ತಾನು ಕಂಡುಕೊಂಡಿರುವ ಆ ಹೀರೋಯಿಕ್ ಚಿತ್ರಣ ತನ್ನದಾಗಬಹುದೆಂಬ ಆಲೋಚನೆಯೋ ಏನೋ? ಆ ಬಾಲಕ ಇವತ್ತು ಸಾಫ್ಟ್‍ವೇರ್ ಇಂಜಿನಿಯರ್ ಆಗಿದ್ದಾನೆ. ಹೆಂಡತಿ ಮಕ್ಕಳ ಜೊತೆ ಸುಖವಾಗಿದ್ದಾನೆ. ಅವನು ಸೈನಿಕನಾಗಲಿಲ್ಲ.

ಇತ್ತೀಚೆಗೆ ದೇಶದ ಮೇಲೆ ದಾಳಿ ಮಾಡುವ ಶತ್ರುಗಳ ಮತ್ತು ದೇಶಕ್ಕಾಗಿ ಹೋರಾಡುವ ವೀರ ಸೈನಿಕರ ವಿಷಯಗಳು ಬಂದಾಗ, “ಹೊರಗಿನ ಶತ್ರುಗಳಿಗಿಂತ ಒಳಗಿನ ಶತ್ರುಗಳೇ ಅಪಾಯಕಾರಿ. ನಮ್ಮೊಳಗಿನ ಶತ್ರುಗಳು ಅವರು ಮಿತ್ರರಾಗಬಹುದಾದ ಅವಕಾಶವನ್ನು ಇಲ್ಲವಾಗಿಸಿ ಅವರನ್ನು ಶತ್ರುಗಳನ್ನಾಗಿಯೇ ಉಳಿಸಿ, ಅವರೊಂದಿಗೆ ಹೋರಾಡಲು ಇತರರನ್ನು ಹುರಿದುಂಬಿಸಿ ಬ್ಲಡ್ ಸ್ಪೋರ್ಟ್ ಆಡುತ್ತಿದ್ದಾರೆ. ಭಾವೋದ್ರಿಕ್ತರಾಗಿ ವಿಚಾರ ಮಾಡದೇ ಮುನ್ನುಗ್ಗುವವರೇ ಅವರಿಗೆ ಬೇಕಾಗಿರುವುದು, ಎಚ್ಚರ” ಎಂದು ಫೇಸ್ಬುಕ್ಕಿನ ತನ್ನ ಗೋಡೆಯ ಮೇಲೆ ಬರೆದುಕೊಂಡಿದ್ದ.

ಆಲೋಚನೆಗಳು ಅಸೀಮವಾಗಲಿ

ಇಷ್ಟನ್ನು ಆಲೋಚನೆ ಮಾಡೋಣ.ಅರಿಮೆಗಳಿಗೆ ಒಂದು ನಿರ್ಧರಿತ ಚೌಕಟ್ಟುಗಳಿರುತ್ತವೆ. ಅದನ್ನು ದಾಟಲು ಅಥವಾ ಮೀರಲು ನಾವು ಸಹಕರಿಸಬೇಕೆಂದರೆ ಅವರ ಆಲೋಚನೆಗಳಿಗೆ ಉತ್ತರಗಳನ್ನೋ ಅಥವಾ ಪ್ರತ್ಯಾಲೋಚನೆಗಳನ್ನು ಕೊಡಬಾರದು. ಅವರದೇ ಆಲೋಚನೆಗಳನ್ನು ವಿಸ್ತರಿಸಿಕೊಳ್ಳಲು, ತಾವು ವಿಚಾರ ಮಾಡಿರುವಷ್ಟರ, ಚಿತ್ರಿಸಿಕೊಂಡಿರುವಷ್ಟರ ಆಚೆಗೆ ಆಲೋಚನೆಗಳನ್ನು ಮಾಡಲು ಅವಕಾಶ ಮಾಡಿಕೊಡಬೇಕು. ಅರಿಮೆಗಳು ಗಟ್ಟಿಯಾಗುವುದು, ಅವರ ಸೀಮಿತ ಚೌಕಟ್ಟುಗಳ ಒಳಗಿನ ವಿಚಾರಗಳಿಗೆ ಸತತವಾಗಿ ಸ್ಪಂದಿಸುತ್ತಿದ್ದಾಗ. ಸಕಾರಾತ್ಮಕವಾಗಿಯಾದರೂ ಸ್ಪಂದಿಸಿ, ನಕಾರಾತ್ಮಕವಾಗಿಯಾದರೂ ಸ್ಪಂದಿಸಿ, ಅದು ಗಟ್ಟಿಯಾಗುತ್ತದೆ.

ನೀವು ಈಗಾಗಲೇ ತಲೆಯಲ್ಲಿ ಕೂತಿರುವ ಆ ವ್ಯಕ್ತಿಯ ವಿಚಾರಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಸಹಜವಾಗಿ ಅದು ಪ್ರೋತ್ಸಾಹವನ್ನು ಪಡೆದು ಮತ್ತಷ್ಟು ಗಟ್ಟಿಯಾಗುತ್ತದೆ. ನೀವು ನಕಾರಾತ್ಮಕವಾಗಿ ಸ್ಪಂದಿಸಿದಿರೋ, ಆ ವಿಚಾರಕ್ಕೆ ವಿರುದ್ಧವಾಗಿ ನೀವು ಇದ್ದೀರಿ ಎಂದು ತಮ್ಮ ವಿಚಾರವನ್ನು ಮತ್ತಷ್ಟು ಗಟ್ಟಿಯಾಗಿ ಅವುಚಿಕೊಂಡು ಹಿಡಿಯುತ್ತಾರೆ. ಅದು ತಮ್ಮನ್ನು ಬಿಟ್ಟುಹೋಗದಂತೆ, ಅಥವಾ ತಾವು ಅದನ್ನು ಬಿಡದಂತೆ ಹಟದಿಂದ ಗಟ್ಟಿ ಹಿಡಿಯುತ್ತಾರೆ. ಇದು ಸಾಮಾನ್ಯವಾಗಿ ಯಾವುದೇ ಅರಿಮೆಯ ಲಕ್ಷಣ. ಹಾಗಾಗಿ ಅರಿಮೆಯುಳ್ಳ ವ್ಯಕ್ತಿಗಳಿಗೆ ತಮ್ಮಲ್ಲಿರುವ ಯಾವುದೇ ವಿಚಾರವನ್ನು ವಿಸ್ತರಿಸಲು, ಹಿಗ್ಗಿಸಲು, ಕ್ಷಿತಿಜಗಳನ್ನು ವಿಸ್ತರಿಸಿಕೊಳ್ಳಲು, ಸೀಮೆಗಳನ್ನು ದಾಟಿ ನೋಡಲು ಅನುಕೂಲವಾಗುವಂತಹ ಅವಕಾಶಗಳನ್ನು ಒದಗಿಸಿಕೊಡಬೇಕು. ಹೇಗೆ ಅರಿಮೆಯು ತನ್ನ ತೀರಾ ಖಾಸಗಿ ಮನಸ್ಸಿನ ಭಾಗವೋ, ಹಾಗೆಯೇ ಅರಿವೂ ಕೂಡಾ ತನ್ನದೇ ಮನಸ್ಸಿನ ಆಲೋಚನೆಗಳ ವಿಸ್ತರಣೆಯಿಂದ ಲಭಿಸಿದರೆ ಆತ್ಮತೃಪ್ತಿ. ತಾನು ಯಾರದೋ ಮಾತನ್ನು ಕೇಳುತ್ತಿದ್ದೇನೆ. ಯಾರಿಗೋ ವಿಧೇಯಕನಾಗಿದ್ದೇನೆ ಎಂಬ ಕೀಳರಿಮೆಯಿರದು. ಹಾಗಾಗಿಯೇ ವಿಚಾರಗಳನ್ನಾಗಲಿ, ಆಲೋಚನೆಗಳನ್ನಾಗಲಿ ಕೊಡಬಾರದು. ಬದಲಿಗೆ ವಿಚಾರ ಮಾಡುವ ಹಾಗೆ, ಆಲೋಚನೆ ಮಾಡುವ ಹಾಗೆ ಪ್ರೇರೇಪಿಸಬೇಕು.

ಆತ್ಮರತಿಯ ಅತ್ಯುನ್ನತ ಸ್ಥಿತಿ

ರೋಮಾಂಚನಗೊಳಿಸುವಂತಹ ಹಿನ್ನೆಲೆಯ ಸಂಗೀತ, ಪರವಶಗೊಳಿಸುವ ಬೆಳಕು, ಉತ್ತಮ ಮತ್ತು ಆಕರ್ಷಕವಾದ ಚಿತ್ರೀಕರಣ, ಪರಿಣಾಮಕಾರಿಯಾದ ಅಭಿನಯ; ಇವುಗಳೆಲ್ಲಾ ಇರುವ ನೇಣಿಗೇರುವ ಅಥವಾ ಹೋರಾಡಿ ಮಡಿಯುವ ವೀರನ ಕಥೆಯನ್ನು ಸಿನಿಮಾ ಮಂದಿರದಲ್ಲಿ ನೋಡುವ ಮಂದಿಗೆ ಈ ಬಲಿದಾನದರಿಮೆಯು ಮತ್ತಷ್ಟು ಬಲಿಯುತ್ತದೆ. ಹಿಂದೆ ಬರಹಗಳು ಈ ಬಗೆಯ ಬಲಿದಾನಗಳಿಗೆ ಪ್ರೇರೇಪಿಸುತ್ತಿದ್ದವು.

ಬಲಿದಾನದರಿಮೆ ಒಂದು ಮನೋವ್ಯಾಧಿ. ನಾನುಹುತಾತ್ಮನಾಗಬೇಕು.ಮಹಾತ್ಮನಾಗಬೇಕು.ನಾನು ಮನೆ, ಮಠ, ಮಡದಿ, ಮಕ್ಕಳು, ಕೊನೆಗೆ ಜೀವ ಎಲ್ಲವನ್ನೂ ತ್ಯಾಗ ಮಾಡಬೇಕು ಎಂದು ದೃಢ ಸಂಕಲ್ಪವನ್ನು ಮಾಡಿ ಬಲಿಯಾಗುವುದು ಆತ್ಮರತಿಯ ಅತ್ಯುನ್ನತ ಸ್ಥಿತಿಯೇ ಹೊರತು ಮತ್ತೇನಿಲ್ಲ.

ಹಾಗಾದರೆ ತ್ಯಾಗ, ಬಲಿದಾನಗಳಿಗೆ ಬೆಲೆಯೇ ಇಲ್ಲವೇ? ಇವೂ ಕೂಡಾ ಮಾನಸಿಕ ಸಮಸ್ಯೆಗಳೇ ಎಂಬ ಆಲೋಚನೆ ಬಂದರೆ ಎಷ್ಟೆಷ್ಟೋ ಆಧ್ಯಾತ್ಮಿಕ ವ್ಯಕ್ತಿಗಳ ತ್ಯಾಗಗಳು, ದೇಶಭಕ್ತರ ತ್ಯಾಗಗಳೆಲ್ಲವನ್ನೂ ಈ ಮಾನದಂಡದಲ್ಲಿ ನೋಡಲಾರಂಭಿಸಿದರೆ ಗೊಂದಲವುಂಟಾಗುತ್ತದೆ. ಆದರೆ, ನಿಧಾನವಾಗಿ ಬಿಡಿಸಿ ನೋಡಿದರೆ ಅರ್ಥವಾಗುವುದು. ಸ್ವಾತಂತ್ರ್ಯ ಸಂಗ್ರಾಮದಂತಹ ಹೋರಾಟಗಳಲ್ಲಿ ಅವರಿಗೊಂದು ಸ್ಪಷ್ಟವಾದ ಗುರಿಯಿದ್ದು, ಆ ಗುರಿಸಾಧನೆಗೆ ಶ್ರಮ ಪಡುತ್ತಿರುತ್ತಾರೆ. ಆಗ ಕುಣಿಕೆಗೆ ಕೊರಳೊಡ್ಡುವ ಅಥವಾ ಗುಂಡಿಗೆ ಗುಂಡಿಗೆಯೊಡ್ಡುವ ಅನಿವಾರ್ಯತೆ ಬಂದಾಗ ಅದನ್ನು ಧೈರ್ಯದಿಂದ ಸ್ವೀಕರಿಸುತ್ತಾರೆ.

ಇವರ ಸ್ವೀಕಾರದಲ್ಲಿ ಅನಿವಾರ್ಯತೆಯೇ ಪ್ರಧಾನ. ತಮ್ಮ ವ್ಯಕ್ತಿಗತವಾದ ಮನೋಭಾವದ ಕಾರಣವು ತಮ್ಮನ್ನು ನೋವಿಗೆ ಅಥವಾ ಸಾವಿಗೆ ಒಡ್ಡಿಕೊಳ್ಳುವುದಿಲ್ಲ. ಅವರ ನೋವು ಮತ್ತು ಸಾವಿನ ಕಾರಣ ಮತ್ತು ಉದ್ದೇಶವು ಆತ್ಮಕೇಂದ್ರಿತವಾಗಿರದೇ ಸಮುದಾಯ ಕೇಂದ್ರಿತವಾಗಿರುತ್ತದೆ. ಈ ವಿಷಯದಲ್ಲಿ ಸಾವಾಗಲಿ ಅಥವಾ ನೋವಾಗಲಿ ಅವರ ಬಯಕೆಯಲ್ಲ. ಅದು ಎದುರಾದಾಗ ಹಿಮ್ಮೆಟ್ಟದೆ ಅದನ್ನು ಎದುರಿಸುವುದು. ಈ ಸ್ಪಷ್ಟತೆಯನ್ನು ತಿಳಿದರೆ ಬಲಿದಾನದರಿಮೆಯ ಲಕ್ಷಣಗಳು ಅರ್ಥವಾಗುತ್ತವೆ. ಈ ಅರಿಮೆಯುಳ್ಳವರೂ ಕೂಡಾ ಹುತಾತ್ಮರಾಗಿರಬಹುದು. ಆದರೆ ಸಾಮಾನ್ಯೀಕರಿಸಲಾಗುವುದಿಲ್ಲ.

ವೀರಗಲ್ಲು ಮಾಸ್ತಿಗಲ್ಲು

ಇನ್ನು ನಮ್ಮ ಇತಿಹಾಸದಲ್ಲಿ ತಮ್ಮ ಒಡೆಯನಿಗಾಗಿ, ಊರಿಗಾಗಿ, ಗೋವುಗಳಿಗಾಗಿ ತಮ್ಮ ಪ್ರಾಣವನ್ನು ತೆತ್ತ ಗರುಡರೇ ಮೊದಲಾದ ವೀರರನ್ನು ನೋಡುತ್ತೇವೆ. ಆ ವೀರರ ಶೌರ್ಯ ಮತ್ತು ಬಲಿದಾನವನ್ನು ಗೌರವಿಸಲು ವೀರಗಲ್ಲುಗಳು ಘನತೆಯಿಂದ ನಿಂತಿರುತ್ತವೆ. ಗಂಡನನ್ನು ಕಳೆದುಕೊಂಡ ಗರತಿಯರು ಸತಿಯಾಗಲು ಚಿತೆಯಲ್ಲಿ ಸತ್ತು ಮಹಾಸತಿಯರಾಗುತ್ತಾರೆ. ಸಮಾಜ ಬಹಳ ಕಿಲಾಡಿ. ಸಾಮೂಹಿಕ ಮನಸ್ಥಿತಿಯು ದುರ್ಬಲವಾಗಿರುವ ವ್ಯಕ್ತಿಯೊಬ್ಬನ ಮನಸ್ಥಿತಿಯ ಬಲವನ್ನು ತನ್ನ ಅಸ್ತಿತ್ವಕ್ಕೆ ಬಳಸಿಕೊಳ್ಳುವುದು ಯಾವಾಗಲಿಂದಲೋ ರೂಢಿಸಿಕೊಂಡಿದೆ.

ಅವನ ಧೈರ್ಯವನ್ನು, ವೀರಾವೇಶವನ್ನು, ಪರೋಪಕಾರಿ ಗುಣವನ್ನು, ತ್ಯಾಗವನ್ನು ವೈಭವೀಕರಿಸಿ ಹೊಗಳಿ ಹೊಗಳಿ ಅದರಿಂದ ಅವನು ಗರ್ವದಿಂದ ಆ ಘನತೆಯನ್ನು ತನ್ನದಾಗಿಸಿಕೊಂಡುಬಿಟ್ಟಿರುತ್ತಾನೆ. ಪದೇ ಪದೇ ಅದನ್ನೇ ಧ್ಯಾನಿಸುತ್ತಾ ಅವನಂತರಾಳ ಅದನ್ನೊಪ್ಪಿಕೊಳ್ಳುವುದು ಮಾತ್ರವಲ್ಲದೇ ಅಪ್ಪಿಕೊಂಡಿ ಬಿಟ್ಟಿರುತ್ತದೆ. ಅವನೀಗ ಜಾಗೃತನಾಗಲಾರ, ಜಾಗೃತನಾದರೂ ಬಿಡಲಾರ. ಪಡೆದು ಸಂಭ್ರಮಿಸಿ ಗರ್ವಪಟ್ಟ ಗೌರವಕ್ಕೆ ಜವಾಬ್ದಾರನಾಗಿ ನಡೆದುಕೊಳ್ಳಬೇಕಾಗುತ್ತದೆ. ವೀರರು ವೀರಗಲ್ಲುಗಳಾಗುತ್ತಾರೆ. ಇನ್ನು ಸತಿ ಹೋಗುವ ವಿಷಯದಲ್ಲಿಯೂ ಕೂಡಾ ಸಮಾಜವು ಹೆಣ್ಣಿಗೆ ಮಾಡಿರುವ ಶೋಷಣೆಯೇ ಸರಿ. ಊರವರೆಲ್ಲಾ ಹಾಡಿ ಕೊಂಡಾಡಿ ಗಂಡ ಸತ್ತ ಒಂದು ಹೆಣ್ಣನ್ನು ಮುತ್ತೈದೆಯಾಗಿ ಸಾಯಲು ಪ್ರೇರೇಪಿಸುತ್ತಿದ್ದದ್ದು ಏನೂ ರಚನಾತ್ಮಕವೇನಲ್ಲ.

ಅವಳು ಸಮಾಜದ ಈ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳಲಾಗದೇ ಸಾಯಬೇಕಿತ್ತು ಅಥವಾ ಸಮಾಜವು ರೂಪಿಸಿದ್ದ ಬಲಿದಾನದ ಅರಿಮೆಯ ಪ್ರಭಾವದ ಗರ್ವದಿಂದ ಚಿತೆಯೇರಬೇಕಿತ್ತು. ಪಾಪದ ಅವಳು ಮಾನಸಿಕ ಸಮಸ್ಯೆಯುಳ್ಳವಳು. ತಾನು ಗಂಡನ ಚಿತೆಯೊಂದಿಗೆ ಬೇಯುವುದಿಲ್ಲ, ನಾನು ಸಾಯುವುದಿಲ್ಲ ಎಂದು ಹೆದರಿಕೊಂಡು ಓಡೋಡಿ ಹೋಗುತ್ತಿದ್ದವಳನ್ನು ಎಳೆದೆಳೆದು ಬಲತ್ಕಾರದಿಂದ ಚಿತೆಗೆ ದೂಡಿರುವ ಉದಾಹರಣೆಗಳುಂಟು. ಒಟ್ಟಾರೆ ಆರೋಗ್ಯವಾದ ಮನಸ್ಥಿತಿಯಿರುವವಳು ಸಹಜವಾಗಿ ಇರುವುದಕ್ಕೆ ಬಿಡದೇ ಸಮಾಜವು ಅವಳನ್ನು ಕೊಲ್ಲುತ್ತಿತ್ತು. ಹಳತೆಲ್ಲಾ ಹೊನ್ನಲ್ಲ. ಮಹಾಸತಿಗಲ್ಲುಗಳು ನಮ್ಮ ಹೆಮ್ಮೆಯ ಸಂಕೇತಗಳೇನಲ್ಲ. ಇದೇ ರೀತಿ ನಮ್ಮ ಪುರಾತನರ ಬದುಕು ಮತ್ತು ಪ್ರಾಚೀನ ವ್ಯವಸ್ಥೆಗಳು ಅಧ್ಯಯನಗಳಿಗೆ ಬೇಕೇ ಹೊರತು, ಅನುಕರಣೆಗಲ್ಲ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಮರೆಯಾದ ಅಪೂರ್ವ ಚಿತ್ರಕಲಾ ಪ್ರತಿಭೆ ‘ಶೋಭಾ ಕರಣಿಕ್’

Published

on

ಶೋಭಾ ಕರಣಿಕ್
  • ಡಾ.ಎನ್.ಕೆ.ಪದ್ಮನಾಭ, ಸಹಾಯಕ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ,ಉಜಿರೆ

ವರು ಬಿಡಿಸುತ್ತಿದ್ದ ರೇಖೆಗಳು ನಮ್ಮ ದೇಶೀ ಸಂಸ್ಕೃತಿಯ ವಕ್ತಾರಿಕೆಯ ಪಾತ್ರ ನಿರ್ವಹಿಸುತ್ತಿದ್ದವು. ಕನ್ನಡದ್ದೇ ಆದ ಕಲಾತ್ಮಕ ಪರಂಪರೆಯನ್ನು ಸೂಕ್ಷ್ಮವಾಗಿ ಗ್ರಹಿಸಿದ್ದ ಅವರ ಚಿತ್ರಗಳು ಜೀವಂತಿಕೆಯ ಗುಣಲಕ್ಷಣದೊಂದಿಗೆ ಕಂಗೊಳಿಸುತ್ತಿದ್ದವು.

ಸಾಂಪ್ರದಾಯಿಕ ಚಿತ್ರಶೈಲಿಯನ್ನು ಆಧುನಿಕ ಅಗತ್ಯಗಳಿಗೆ ತಕ್ಕಂತೆ ಮಣಿಸಿ ಪರಂಪರೆಯೊಳಗೇ ಅಡಗಿದ್ದ ಮೌಲಿಕ ಮಾದರಿಗಳನ್ನು ಮನಗಾಣಿಸುವ ಶ್ರದ್ಧೆಯೊಂದಿಗೇ ಅವರು ಚಿತ್ರವಿನ್ಯಾಸ ರೂಪಿಸುತ್ತಿದ್ದರು. ಇನ್ಸ್ಟಾಗ್ರಾಮ್, ಫೇಸ್‌ಬುಕ್ ಮತ್ತಿತರ ಮಾಧ್ಯಮಗಳ ಮೂಲಕ ತಮ್ಮ ಚಿತ್ರಗಳನ್ನು ಕಾಣಿಸುತ್ತಿದ್ದರು. ಪರಂಪರೆ ಮತ್ತು ವರ್ತಮಾನವನ್ನು ಬೆಸೆದು ಹೊಸ ಬಗೆಯ ಚಿತ್ರಪ್ರಯೋಗಗಳನ್ನು ನಡೆಸುವ ಹುಮ್ಮಸ್ಸಿನೊಂದಿಗೆ ಚಿತ್ರಕಲಾಯಾನ ಮುಂದುವರೆಸಿದ್ದರು. ಅವರ ಹೆಸರು ಶೋಭಾ ಕರಣಿಕ್.

ಇತ್ತೀಚೆಗಷ್ಟೇ ಅವರ ಚಿತ್ರಕಲಾಯಾನ ನಿಂತಿತು. ಅವರ ನಿಧನವು ವಿನೂತನವಾದ ಪ್ರಯೋಗಶೀಲ ಚಿತ್ರಕಲಾ ಸಾಧ್ಯತೆಗಳನ್ನು ತಡೆದು ನಿಲ್ಲಿಸಿತು. ಪುರಾಣದ ಕಥನ ಪ್ರಸಂಗಗಳಲ್ಲಿ ಉಲ್ಲೇಖಿತ ದೇವರು-ದೇವತೆಗಳ ಅಸ್ಮಿತೆ ಮತ್ತು ದೇಸೀ ಸಂಸ್ಕೃತಿಯನ್ನು ಬಿಂಬಿಸುವ ವಿನ್ಯಾಸಗಳನ್ನು ಸಮನ್ವಯಗೊಳಿಸಿ ಚಿತ್ರಕಲೆಗೆ ಹೊಸ ಆಯಾಮ ತಂದುಕೊಟ್ಟ ಪ್ರತಿಭೆಯಾಗಿ ಶೋಭಾ ಕರಣಿಕ್ ಅವರದ್ದು ವಿಶೇಷ ವ್ಯಕ್ತಿತ್ವವಾಗಿತ್ತು. ಮ್ಯೂರಲ್ ಪೇಂಟಿಂಗ್‌ನಲ್ಲಿ ಅವರಿಗಿದ್ದ ಪರಿಣತಿ, ಉತ್ತರ ಕನ್ನಡದ ಕಾವಿ ಕಲೆಯ ಕುರಿತಾದ ವಿಸ್ತೃತ ಜ್ಞಾನವು ಚಿತ್ರಕಲೆಯನ್ನು ಉನ್ನತೀಕರಿಸುವುದಕ್ಕೆ ಅವರಿಗೆ ನೆರವಾಗಿತ್ತು.

ಕಲೆಯ ಜೊತೆಗಿನ ಅನುಸಂಧಾನದ ಕ್ಷಣಗಳು ಅಪೂರ್ವ. ಒಂದು ನಿರ್ದಿಷ್ಟ ನಿರ್ಣಾಯಕ ಸಂದರ್ಭ, ಸಮಯದಲ್ಲಿ ಕಲೆಯೊಂದು ವ್ಯಕ್ತಿತ್ವವನ್ನು ಪ್ರಭಾವಿಸಿ ಸೃಜನಶೀಲತೆಯ ಹಸಿವನ್ನು ನೆಲೆಗೊಳಿಸುವುದಕ್ಕೆ ಪ್ರೇರಣೆಯಾಗುತ್ತದೆ. ಕಲೆಯ ಪ್ರಭಾವ ಎರಡು ಬಗೆಯದ್ದು. ಸಹೃದಯರನ್ನು ತನ್ನ ಕಲಾತ್ಮಕ ಮಾದರಿಗಳಿಂದ ಸೆಳೆದು ಅವರೊಳಗೆ ವಿಶೇಷ ಅನುಭೂತಿ ಧಾರೆ ಎರೆಯುವಂಥದ್ದು ಒಂದು ಬಗೆಯಾದರೆ ಹೀಗೆ ಸೆಳೆದುಕೊಂಡು ಮತ್ತೆ ಮತ್ತೆ ಪ್ರಭಾವಿಸುತ್ತಾ ಸಹೃದಯರನ್ನೇ ಕಲಾವಿದರನ್ನಾಗಿಸುವ ಸಾಧ್ಯತೆ ಮತ್ತೊಂದು ತೆರನಾದದ್ದು.

ಈ ಕಾರಣಕ್ಕಾಗಿಯೇ ಕಲಾತ್ಮಕ ಸಂಭವನೀಯತೆಯು ಅನನ್ಯವೆನ್ನಿಸಿಕೊಂಡಿದೆ. ಇಂಥ ಅನನ್ಯತೆಯೊಂದಿಗೇ ಶೋಭಾ ಕರಣಿಕ್ ಗುರುತಿಸಿಕೊಂಡಿದ್ದರು. ಅವರು ಓದಿದ್ದು ತಾಂತ್ರಿಕ ವಿಜ್ಞಾನ. ಆದರೆ, ಅವರ ನಿಜದ ಪ್ರತಿಭೆ ಅಭಿವ್ಯಕ್ತವಾದದ್ದು ಚಿತ್ರಕಲೆಯ ಮೂಲಕ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪರಿಸರದಲ್ಲಿ ಬೆಳೆದ ಶೋಭಾ ಕರಣಿಕ್ ಮೊದಲಿನಿಂದಲೂ ದೇಶೀ ಕಲೆಯ ಕುರಿತು ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡು ಬಂದಿದ್ದರು. ಹೈಸ್ಕೂಲ್ ಓದುತ್ತಿರುವಾಗಲೇ ಕಾವಿಕಲೆಯ ವಿನ್ಯಾಸ ಅವರನ್ನು ಸೆಳೆದಿತ್ತು. ಇವುಗಳನ್ನು ಮತ್ತೆ ಮತ್ತೆ ನೋಡುತ್ತಾ ಹೋದಂತೆಲ್ಲಾ ಕಾವಿ ಕಲೆಯ ಕುರಿತ ಆಕರ್ಷಣೆ ಕಲಿಕೆಯ ಹಂಬಲವಾಗಿ ಮಾರ್ಪಟ್ಟಿತು. ಉತ್ತರ ಕನ್ನಡದ ಟೆಂಪಲ್ ರ‍್ಟ್ ಪ್ರಕಾರದ ಭಾಗವಾಗಿ ಕಾವಿ ಕಲೆಯನ್ನು ಪರಿಚಯಿಸುವ ದೃಷ್ಟಿಯಿಂದ ಅವರು ರಚಿಸಿದ್ದ ತರಹೇವಾರಿ ವಿನ್ಯಾಸಗಳು ವಿವಿಧ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮಗಳಲ್ಲಿ ಗಮನ ಸೆಳೆದಿದ್ದವು.

ಕಾವಿ ಕಲೆಯೂ ಸೇರಿದಂತೆ ನಮ್ಮ ಸಾಂಪ್ರದಾಯಿಕ ಕಲೆಗಳು ಈ ಹಿಂದಿನ ಕಾಲದ ತಲೆಮಾರನ್ನಷ್ಟೇ ಪ್ರಭಾವಿಸಿದ್ದಲ್ಲದೇ ನಂತರದ ಹೊಸ ಪೀಳಿಗೆಯನ್ನೂ ಆಕರ್ಷಿಸುವ ಗುಣ ಹೊಂದಿವೆ. ಮೂಲ ಅಂತಃಸತ್ವಕ್ಕೆ ಧಕ್ಕೆಯೊದಗದ ಹಾಗೆ ಹೊಸ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಈ ಸಾಂಪ್ರದಾಯಿಕ ಚಿತ್ರಕಲಾ ವಿನ್ಯಾಸಗಳನ್ನು ಮರುರೂಪಿಸಬಹುದು. ಹೊಸ ಕಾಲದಲ್ಲಿ ಅವುಗಳ ಮಹತ್ವವನ್ನು ಮನಗಾಣಿಸಬಹುದು ಎಂಬುದು ಅವರ ಆಶಯವಾಗಿತ್ತು.

ಕಲೆಯೊಂದು ಒಂದು ಕಾಲದಿಂದ ಮತ್ತೊಂದು ಕಾಲಕ್ಕೆ ದಾಟಿಕೊಳ್ಳುವಾಗ ಪಲ್ಲಟಗಳು ಸಹಜ. ಈ ಪಲ್ಲಟಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಇಂತಹ ಕಲೆಗಳಿಗೆ ಹೊಸಕಾಲದಲ್ಲೂ ಜೀವಂತಿಕೆಯನ್ನು ತಂದುಕೊಡುವ ಪ್ರಯತ್ನದ ಅಗತ್ಯವನ್ನು ಮನಗಾಣಿಸುವುದಕ್ಕಾಗಿಯೇ ಶೋಭಾ ಕರಣಿಕ್ ಅವರು ಚಿತ್ರಕಲಾ ರಚನೆಯ ವೈವಿಧ್ಯಮಯ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದರು.

ಅವರ ನಿಧನದಿಂದ ಈ ಪ್ರಯೋಗಶೀಲ ಹೆಜ್ಜೆಗಳು ನಿಂತಂತಾಗಿವೆ. ಆದರೆ, ಅವರು ಪರಂಪರೆ ಮತ್ತು ವರ್ತಮಾನವನ್ನು ಸಮನ್ವಯಗೊಳಿಸಿ ಸಾಬೀತುಪಡಿಸಿದ ಅಪೂರ್ವ ಚಿತ್ರಕಲಾ ಪ್ರಯೋಗಶೀಲತೆಯ ಜೀವಂತಿಕೆ ಹೊಸ ಪೀಳಿಗೆಗೆ ಸದಾ ಸ್ಫೂರ್ತಿಯ ಸೆಲೆಯಾಗಿರುತ್ತದೆ. ಅವರ ಹೆಸರಿನ ಇನಸ್ಟಾಗ್ರಾಂನಲ್ಲಿ ಕಾಣಿಸಿಕೊಂಡಿರುವ ಚಿತ್ರಗಳು ಇಂಥ ಸ್ಫೂರ್ತಿಯ ಪ್ರಭೆಯನ್ನು ದಾಟಿಸುತ್ತಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಹೊಸತನದ ಹೊಸ್ತಿಲಲ್ಲಿ..!

Published

on

ಬರಹ : ಮೀನಾಕ್ಷಿ. ಬಿ
  • ಮೀನಾಕ್ಷಿ .ಬಿ, ಎಂ. ಎ ವಿದ್ಯಾರ್ಥಿನಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ

ಹೊಸವರ್ಷ ವೆಂಬುದು ಪ್ರತಿಯೊಬ್ಬರ ಬಾಳಲ್ಲಿ ವರ್ಷಕ್ಕೊಮ್ಮೆ ಬರುವ ಹೊಸದಿನಗಳ ಆಗಮನ ಯಾಕೆಂದರೆ ಹೊಸತನವನ್ನು ತರುತ್ತಾ ಇರುವ ಹೊಸವರ್ಷ ಕೂಡ ಒಂದು ಜೀವನದ ಭರವಸೆ, ನಿರೀಕ್ಷೆ ಕನಸುಗಳ ಬಂಡಿಯ ಮೇಲೆ ಸಾಗುವ ಪ್ರಯಾಣ ನಮ್ಮ ಜೀವನ.

ವ್ಯಕ್ತಿಯ ನಂಬಿಕೆಯ ಆಧಾರದ ಮೇಲೆಯೇ ಜೀವನ ಸಾಗುಸುತ್ತಿರುವುದು.ಯಾಕೆಂದರೆ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿಯೂ ಕೂಡ ಕಷ್ಟ -ಸುಖ ದುಃಖದ ಸಂಗತಿಗಳು ಇದ್ದೆ ಇರುತ್ತದೆ. ಕೆಲವೊಂದು ಬಾರಿ ಹತಾಶೆಯನ್ನು ಹೊಂದಿ ಜೀವನದಲ್ಲಿ ಜಿಗುಪ್ಸೆ ಒಂದು ಕೆಟ್ಟ ನಿರ್ಧಾರಕ್ಕೆ ಮನಸ್ಸು ದಾರಿ ಮಾಡಿಕೊಡುತ್ತದೆ. ಹಾಗೆಯೇ ಕಷ್ಟ ಇದ್ದಲ್ಲಿ ಸುಖವಿರುವುದುಂಟು ಅನ್ನುವ ಹಾಗೇ ಇವತ್ತಲ್ಲ ನಾಳೆ ಒಳ್ಳೆಯ ದಿನಗಳು ನಮ್ಮ ಜೀವನದಲ್ಲಿ ಬರಬಹುದೆಂಬ ಭರವಸೆ,ಆತ್ಮವಿಶ್ವಾಸವನ್ನು ಇಟ್ಟುಕೊಂಡು ಜೀವನ ನಡೆಸುತ್ತಲೇ ಇದ್ದೇವೆ.

ಈ ವರ್ಷ ಒಳ್ಳೆಯದಾಗಿಲ್ಲ ಅಂದರೆ ಏನು ಮುಂದಿನ ವರ್ಷ ಆದರೂ ನನ್ನ ಬದುಕು ಬದಲಾಗಬಹುದು ಎಂಬ ಹೊಸತನವನ್ನು ನಮ್ಮಲ್ಲಿ ಭರವಸೆ,ನಂಬಿಕೆಯ ಬೇರಿನೊಂದಿಗೆ ಬೆರೆಸಿಕೊಂಡು ಬದುಕಬೇಕು.ನಾಳೆಯ ದಿನಗಳ ಮೇಲಿನ ಅನಿರೀಕ್ಷಿತ ತೀರಿವಿನಿಂದಾಗುವ ಬದುಕಿನಲ್ಲಾಗುವ ಬದಲಾವಣೆ ಹೊಸತನದ ಚಾಪನ್ನು ಮೂಡಿಸುತ್ತದೆ.
ಎಂಥ ಹತಾಶ ಮನಸ್ಥಿತಿಯವರಲ್ಲೂ ಹೊಸವರ್ಷ ಭರವಸೆಯ ಅಭಯ ಹಸ್ತವನ್ನು ಚಾಚುತ್ತದೆ. ಅದೆಲ್ಲಿಂದಲೇ ಆತ್ಮ ವಿಶ್ವಾಸದ ಬೆಳಕಿನ ಕಿಡಿಯೊಂದು ಕಾಣಿಸಿಕೊಳ್ಳುತ್ತದೆ.

ಹೊಸವರ್ಷವೆಂಬುದು ಕೇವಲ ಸಂಭ್ರಮದ ಕಾಲ ಮಾತ್ರವಲ್ಲ. ಕಳೆದ ದಿನಗಳತ್ತ ಹಿಂತಿರುಗಿ ನೋಡುವ ಸಮಯ ಕೂಡ ಹಿಂದಿನ ದಿನಗಳ ಪುಟಗಳನ್ನು ತೆಗೆದು ನೋಡಿದರೆ. ಉತ್ಸಾಹದ ಗಳಿಗೆಗಳು ಮುಂದಿನ ಕೆಲಸಗಳಿಗೆ ಚೈತನ್ಯ, ಉತ್ಸಾಹ ನೀಡಬಲ್ಲದು.ನಮ್ಮ ದಿಕ್ಕಿಲ್ಲದ ದಾರಿಗೆ ಖಚಿತ ದಿಕ್ಕು ದಾರಿಯನ್ನು ತೋರಬಲ್ಲದು.

ಜೀವನದ ಪ್ರಯಾಣಕ್ಕೆ ಒಂದು ನಿಲ್ದಾಣವಾಗಿದೆ. ನಾವು ಕಾಣುವ ಕನಸಗಳು ಕನಸಾಗಿಯೇ ಉಳಿದಿದೆ ಯಾಕೆಂದರೆ ನಮ್ಮಲ್ಲಿನ ಬೇಜವಾಬ್ದಾರಿ, ನಿರ್ಲಕ್ಷತನ ಆಮೇಲೆ ಮಾಡಿದರೆ ಆಯ್ತು ಅನ್ನೋ ಮನೋಭಾವನೆ ಯಾವುದರ ಬಗ್ಗೆಯೂ ಆಸಕ್ತಿ ಕೊಡದೆ ಇರೋದು ಎಲ್ಲವು ನಮ್ಮ ಕನಸಿನ ಜೀವನ ರೂಪಿಸಿಕೊಳ್ಳುವಲ್ಲಿ ಸಫಲರಾಗದೆ ಉಳಿಯಲು ಕಾರಣ.

ಮೊದಲು ಆತ್ಮವಿಶ್ವಾಸ ಬೇಕು ನಾನು ಈ ಕೆಲಸವನ್ನು ಮಾಡುವೆ ಎಂಬ ಒಂದು ನಿರ್ಧಿಷ್ಟ ಗುರಿ ಇರಬೇಕು ಅಂಗಿದ್ರೆ ಅಷ್ಟೇ ಜೀವನದ ಪಯಣದ ಹಾದಿಯಲ್ಲಿ ಯಶಸ್ಸನ್ನು ಕಾಣಲು ಸಾಧ್ಯ ಇಲ್ಲವಾದಲ್ಲಿ ಸೋಲನ್ನು ಅನುಭವಿಸುವ ಪರಿಸ್ಥಿತಿ ಎದುರಾಗುತ್ತದೆ. ಮುಂದಿನ ದಿನಗಳ ಆಗಮನದೊಂದಿಗೆ ನಾವು ಕಂಡ ಕನಸನ್ನು ಈಡೇರಿಸಿಕೊಳ್ಳುವ ಸತತ ಪ್ರಯತ್ನದೊಂದಿಗೆ ಬರುವ ದಿನವನ್ನು ಸ್ವಾಗತಿಸಿಕೊಳ್ಳೋಣ.
ಎಲ್ಲರ ಬಾಳಲಿ ಹರುಷ ,ಸಂತೋಷ ಮನೆಮಾಡಲಿ ಎಂದು ಆಶಿಸುತ್ತಾ ಎಲ್ಲರಿಗೂ ಹೊಸವರ್ಷದ ಶುಭಾಶಯಗಳು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಕಾಮರೂಪದ ಪ್ರಭಾಕರ

Published

on

  • ಪ್ರೊ.ರಹಮತ್ ತರೀಕೆರೆ

ನಾನು ಕೋಲಾರಕ್ಕೆ ಹೋದಾಗೆಲ್ಲ ಎರಡು ಜಾಗಗಳಿಗೆ ತಪ್ಪದೆ ಭೇಟಿ ಕೊಡುತ್ತೇನೆ. ಒಂದು-ಕೆ.ರಾಮಯ್ಯ ಮತ್ತವರ ಸಂಗಾತಿಗಳು ಸೇರಿ ತೇರುಹಳ್ಳಿ ಬೆಟ್ಟದ ಮೇಲೆ ಕಟ್ಟಿರುವ `ಆದಿಮ’ಕ್ಕೆ; ಇನ್ನೊಂದು-`ಕಾಮರೂಪಿ’ ಎಂಬ ಹೆಸರಲ್ಲಿ ಬರೆಯುತ್ತಿದ್ದ ಕನ್ನಡ ಲೇಖಕ ಡಾ. ಎಂ.ಎಸ್. ಪ್ರಭಾಕರ ಅವರಿರುವ ಕಠಾರಿಪಾಳ್ಯದ ಮನೆಗೆ. 50ರ ದಶಕದ ಕೊನೆಯಲ್ಲಿ ಕರ್ನಾಟಕ ಬಿಟ್ಟುಹೋದ ಪ್ರಭಾಕರ, ‘ಹಿಂದೂ’ ಪತ್ರಿಕೆಯ ವರದಿಗಾರರಾಗಿ ಆಫ್ರಿಕಾ ಅಮೇರಿಕ ಬಾಂಗ್ಲಾದೇಶ ಈಶಾನ್ಯ ಭಾರತವನ್ನೆಲ್ಲ ಅಲೆದಾಡಿ, ಕಡೆಗೆ ಕಾಮರೂಪದಲ್ಲಿ (ಅಸ್ಸಾಮಿನ ಪುರಾತನ ಹೆಸರಿದು) ನೆಲೆಸಿಬಿಟ್ಟರು.

`ಕಾಮರೂಪ’ ಶಬ್ದಕ್ಕೆ ಬಯಸಿದ ರೂಪಧಾರಣೆ ಮಾಡುವ ಮಾಯಾವಿ ವಿದ್ಯೆ ಎಂಬರ್ಥವೂ ಇದೆ. ಎಂಬತ್ತರ ಪ್ರಾಯದಲ್ಲಿ ಕರ್ನಾಟಕಕ್ಕೆ ಮರಳಿ ಬಂದಿರುವ ಪ್ರಭಾಕರ ಅವರು, ತಾವು ಹುಟ್ಟಿಬೆಳೆದ ಮನೆಯಲ್ಲಿ ಬಿಡಾರ ಹೂಡಿದ್ದಾರೆ. ಹಿರೀಕರು ಕಟ್ಟಿದ ದೊಡ್ಡಮನೆ. ಮನೆಯೊಳಗೊಂದೇ ಜೀವ; ಮನೆ ತುಂಬ ಪುಸ್ತಕದ ರಾಶಿ (ಹೆಚ್ಚಿನವು ಇಂಗ್ಲೀಶ್ ಬಂಗಾಳಿ ಅಸ್ಸಾಮಿ). ನಟ್ಟನಡುವಿರುವ ಹಾಲಿನ ಮೂಲೆಯಲ್ಲಿ ಬೀದಿಗೆ ಬೆನ್ನುಕೊಟ್ಟಂತೆ ಕೂತು, ಲ್ಯಾಪ್‌ಟಾಪಿನಲ್ಲಿ ಬರೆಯುತ್ತ, ವೆಬ್‌ಸೈಟುಗಳನ್ನು ಜಾಲಾಡುತ್ತ, ಬ್ಲಾಗುಗಳನ್ನೋದುತ್ತ ಪ್ರಭಾಕರ ಕುಳಿತಿರುತ್ತಾರೆ.

ಅವರ ಮನಗೆ ಹೋದಾಗಲೆಲ್ಲ ನನಗೆ ರಾಗಿಮುದ್ದೆ ಸೊಪ್ಪಿನ ಸಾರಿನ ಊಟ ಸಿಗುತ್ತದೆ. ಅವರು ಉಣ್ಣುವುದೊಂದು ಅಪೂರ್ವ ದೃಶ್ಯ. ತಣಿಗೆಯ ನಡುವೆ ಹದವಾಗಿ ಬೆಂದು ಕಂಪು ಬೀರುವ ಗೋಂದಿನಂತಹ ಕೆಂಗಪ್ಪು ಬಣ್ಣದ ಬಿಸಿಮುದ್ದೆಯನ್ನಿಟ್ಟು, ಅದರ ತಲೆಯ ಮೇಲೆ ಶಿಖರವನ್ನು ಹಿಮವು ಅಲಂಕರಿಸುವಂತೆ ಬೆಣ್ಣೆಯ ಚೂರನ್ನಿಡುತ್ತಾರೆ; ಬೆಣ್ಣೆಯು ಮುದ್ದೆ ಕಾವಿಗೆ ಕರಗಿ ಇಡೀ ಚೆಂಡನ್ನು ಆವರಿಸಿ ಅಭಿಷೇಕ ಮಾಡಿಸಿಕೊಂಡ ಮೂರುತಿಯಂತೆ ಥಳಥಳ ಹೊಳೆಯುತ್ತದೆ. ಆಗ ಘಮಿಸುವ ಮುದ್ದೆಯನ್ನು ಚೆನ್ನಾಗಿ ಮಿದ್ದು, ಒಂದು ಬದಿಯಿಂದ ಇಷ್ಟಿಷ್ಟೇ ಮುರಿದು ತುತ್ತು ಮಾಡಿ, ಸೊಪ್ಪಿನ ಗಟ್ಟಿಸಾರಲ್ಲಿ ಹೊರಳಾಡಿಸಿ ಗುಕ್ಕನೆ ನುಂಗಿ ಕಣ್ಮುಚ್ಚಿ ಕೊಳ್ಳುತ್ತಾರೆ. ತರುವಾಯ ಶ್ರೀಯುತರು ಜ್ಞಾನೋದಯವಾದ ಸಿದ್ಧನಂತೆ ಅವರ ಮುಖದಲ್ಲಿ ಪರಮಾನಂದದ ಒಂದು ಕಳೆ ಆವಿರ್ಭವಿಸುತ್ತದೆ. ಇದನ್ನೆಲ್ಲ ಕಾಣುವಾಗ, ಲೋಕವನ್ನೆಲ್ಲ ಸುತ್ತಾಡಿರುವ ಇವರು ಕೋಲಾರಕ್ಕೆ ಮುದ್ದೆಸುಖಕ್ಕಾಗಿಯೆ ಬಂದರೇನೊ ಎಂದು ಶಂಕೆ ಬರುತ್ತದೆ. ಪ್ರಭಾಕರ ಅವರಿಗೆ ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಅನೇಕ ದೂರುಗಳಿವೆ. ಅವುಗಳಲ್ಲಿ ಆಹಾರ ತಯಾರಿಕೆ ಮತ್ತು ಸೇವನೆ ಕುರಿತು ಅದರಲ್ಲಿ ವಿವರಗಳೇ ಇಲ್ಲ ಎಂಬುದೂ ಒಂದು.

ಕನ್ನಡದ ಅತಿಹಿರಿಯ ಮತ್ತು ಹೆಚ್ಚು ಬರೆಯದ ಲೇಖಕರಲ್ಲಿ ಪ್ರಭಾಕರ ಅವರೂ ಒಬ್ಬರು. ನಾನು ಅವರ ‘ಕುದುರೆಮೊಟ್ಟೆ’ ಕಾದಂಬರಿಯನ್ನೂ ‘ಒಂದು ತೊಲ ಪುನುಗು ಮತ್ತು ಇತರ ಕತೆಗಳು’ ಸಂಕಲನವನ್ನೂ ಓದಿದ್ದೆ. ಇವುಗಳಲ್ಲಿ ‘ಕುದುರೆ ಮೊಟ್ಟೆ’ ಈಗಲೂ ಪ್ರಿಯವಾದ ಪುಸ್ತಕ. ಅದರಲ್ಲಿರುವ ಕೆಲವು ಪಾತ್ರಗಳು ಕೊಂಚ ವಿಕ್ಷಿಪ್ತವಾಗಿವೆ; ಅಲ್ಲಿನ ಬಾಳಿನ ಸನ್ನಿವೇಶಗಳೂ ಅನಿರೀಕ್ಷಿತವಾಗಿವೆ. ಆದರೆ ಎಲ್ಲಿಯೂ ಹುಸಿ ಅನಿಸದಂತೆ, ಒಂದೇ ಶಬ್ದ ಅಪವ್ಯಯವಾಗದಂತೆ ಅದನ್ನು ಬರೆಯಲಾಗಿದೆ. ಪಾತ್ರಗಳನ್ನು ತಮ್ಮ ಸಿದ್ಧಾಂತಕ್ಕೆ ತಕ್ಕಂತೆ ಮಣಿಸಿ ಕೈಗೊಂಬೆಯಂತೆ ಆಡಿಸುತ್ತ, ಕೆಲವನ್ನು ಮುದ್ದಾಮಾಗಿ ದುರುಳಗೊಳಿಸಿ ಕಲೆಯ ಜಾಣಮುಸುಕಿನಲ್ಲಿ ಅಡಗಿಸುತ್ತ, ಕೆಲವು ಕಾದಂಬರಿಗಳು ಕನ್ನಡದಲ್ಲಿ ಪ್ರಕಟವಾಗುತ್ತಿವೆ. ಇಂತಹ ಹೊತ್ತಲ್ಲಿ ಅರ್ಧ ಶತಮಾನದ ಹಿಂದೆ ಪ್ರಕಟವಾದ ಈ ಕಾದಂಬರಿ, ಬಾಳನ್ನು ಕುರಿತು ತೋರುವ ಕಕ್ಕುಲಾತಿ ಕಂಡು ಖುಶಿಯಾಗುತ್ತದೆ. ಕತೆಗಾರರಿಗೆ ತಾವು ಸೃಷ್ಟಿಸುವ ಕೆಲವು ಪಾತ್ರಗಳ ಮೇಲೆ ಕೊಂಚ ಭಾವ ಪಕ್ಷಪಾತವಿರುತ್ತದೆ. ಆದರೆ ತಾವು ಸೃಜಿಸುವ ಎಲ್ಲ ಪಾತ್ರಗಳನ್ನು ತಾಯಿಯಂತೆ ನೋಡುವುದು ಬರೆಹದ ನೈತಿಕತೆ. ಈ ಸಂಗತಿ ಕುವೆಂಪು ಮತ್ತು ಟಾಲ್ ಸ್ಟಾಯ್ ಕಾದಂಬರಿ ಓದಿದವರಿಗೆ ಗೊತ್ತಿದೆ.

ಕಾಮವನ್ನು ಇಟ್ಟುಕೊಂಡು ಜೀವನದ ಸತ್ಯಗಳನ್ನು ಶೋಧಿಸುವ ವಿಷಯದಲ್ಲಿ ಕಾಮರೂಪಿಯವರು, ಒಬ್ಬ ಟಿಪಿಕಲ್ ನವ್ಯಲೇಖಕರೇ. ಆದರೆ ನವ್ಯದ ಕೆಲವು ಲೇಖಕರಲ್ಲಿ ಕಾಣುವಂತೆ, ಅದಕ್ಕವರು ಅನಗತ್ಯ ಪ್ರಾಮುಖ್ಯ ಕೊಡುವುದಿಲ್ಲ. ಅದನ್ನು ಚಪ್ಪರಿಸುವುದಿಲ್ಲ. ವೈಭವೀಕರಿಸುವುದಿಲ್ಲ. ಬದಲಿಗೆ, ಮನುಷ್ಯರಾದವರು ಜೀವನದ ಇಕ್ಕಟ್ಟುಗಳಲ್ಲಿ ಸಿಲುಕಿ ಅನಿವಾರ್ಯವಾಗಿ ವರ್ತಿಸುವ ಪರಿಯನ್ನು ತಣ್ಣಗೆ ವ್ಯಂಗ್ಯವಾಗಿ ಚಿತ್ರಿಸುತ್ತಾ ಹೋಗುತ್ತಾರೆ. ಸತ್ಯಕ್ಕಿರುವ ಹಲವು ಮುಖಗಳನ್ನು ಹಿಡಿಯುವಂತಹ ಕುರುಸೋವಾನ ‘ರಶೋಮನ್’ ಸಿನಿಮಾ ನೆನಪಿಸುವ ಈ ಕಾದಂಬರಿ, ಮತ್ತೆಮತ್ತೆ ಓದಬೇಕು ಎನಿಸುವಷ್ಟು ತಾಜಾ ಆಗಿದೆ. ‘ಉಪಪತ್ತಿಯೋಗ’ ಎಂಬುದನ್ನು ಬಿಟ್ಟರೆ, ಉಳಿದಂತೆ ವ್ಯಕ್ತಿವಾದವನ್ನು ಅತಿಯಾಗಿ ಬಿಂಬಿಸುವ ತಂತ್ರದ ಬಿಗಿತದಲ್ಲಿರುವ ಅವರ ಕತೆಗಳು ಅಷ್ಟು ಆಪ್ತವೆನಿಸಿಲ್ಲ.

ನನಗೆ ಪ್ರಭಾಕರ್ ಕುರಿತು ಆಸಕ್ತಿ ಮೂಡಿಸಿದವರು ಮಾರ್ಕ್ಸ್‌ವಾದಿ ಚಿಂತಕ ಕೆ.ರಾಘವೇಂದ್ರರಾವ್ ಅವರು. ಅಮೆರಿಕೆಯ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಿದ್ದ ಎ.ಕೆ.ರಾಮಾನುಜನರ ಹೊಂದಾಣಿಕೆಯ ಗುಣವನ್ನು ಕಟುವಾಗಿ ವಿಮರ್ಶಿಸುತ್ತ, ಅಲ್ಲಿನ ಶೈಕ್ಷಣಿಕ ಕ್ಷೇತ್ರದಲ್ಲಿರುವ ಬಿಳಿಯರ ಯಜಮಾನಿಕೆಗೆ ಬಾಗದೆ ಹೊರಬಂದ ಪ್ರಭಾಕರ ಅವರ ದಿಟ್ಟ ಸ್ವಭಾವವನ್ನು ಅವರು ತಮ್ಮ ಸಂದರ್ಶನದಲ್ಲಿ ಪ್ರಸ್ತಾಪಿಸಿದ್ದರು. ಪ್ರಭಾಕರ ಅವರನ್ನು ಭೇಟಿಯಾಗಬೇಕು ಎಂದು ಅನಿಸುತ್ತಿತ್ತು. ಅದರಲ್ಲೂ ಭಾರತದ ಶಾಕ್ತಪೀಠಗಳಲ್ಲಿ ಮುಖ್ಯವಾಗಿರುವ ಅಸ್ಸಾಮಿನ ಕಾಮಾಖ್ಯಕ್ಕೆ ಹೋಗಲು ಯತ್ನಿಸುತ್ತಿದ್ದ ನಾನು, ಅಲ್ಲೇ ಸಮೀಪದ ಗೌಹಾತಿಯಲ್ಲಿರುವ ಅವರನ್ನು ಕಾಣಲು ಹವಣಿಕೆ ಮಾಡಿಕೊಂಡಿದ್ದೆ. ಆದರೆ ಸಾರ್ವಜನಿಕ ವ್ಯಕ್ತಿಯಾಗಲು ನಿರಾಕರಿಸಿ ಅಜ್ಞಾತವಾಗಿಯೇ ಬಾಳುವ ಅವರು ಸುಲಭವಾಗಿ ಸಿಗುತ್ತಿರಲಿಲ್ಲ.

ನನ್ನ ತವಕವನ್ನರಿತಿದ್ದ ಕೆ.ರಾಮಯ್ಯ, ‘ಪ್ರಭಾಕರ್ ಕರ್ನಾಟಕಕ್ಕೆ ಬಂದಿದ್ದಾರೆ. ಬನ್ನಿ’ ಎಂದು ಅವರ ಮನೆಗೆ ಕರೆದುಕೊಂಡು ಹೋದರು. ಮಧ್ಯಾಹ್ನದ ಸುಡುಹೊತ್ತು. ಪ್ರಭಾಕರ ಪ್ರೀತಿಯಿಂದ ಬರಮಾಡಿಕೊಂಡು ನೊರೆ ತುಂಬಿದ ಒಗರು ಬೀರಿನ ಮಗ್ಗನ್ನು ಕೈಗೆ ಕೊಟ್ಟು, ಕಾಮಾಖ್ಯದ ಬಗ್ಗೆಯೂ ತಂತ್ರ ಪಂಥದ ಬಗ್ಗೆಯೂ ಇರುವ ಕೃತಿಗಳನ್ನು ತೋರಿಸುತ್ತ, ಗಂಟೆಗಟ್ಟಳೆ ಮಾತಾಡಿದರು. ಅರಿವಿನ ಕಿಡಿಗಳು ಹಾರುವ ಅದೊಂದು ವಿದ್ವತ್‌ಪೂರ್ಣ ಹರಟೆ.

ನಾನು ಅವರಲ್ಲಿ ಶಿಷ್ಯವೃತ್ತಿ ಸ್ವೀಕರಿಸಿ ಹಲವಾರು ಸಲ ಕೋಲಾರಕ್ಕೆ ಹೋಗಿ ಬಂದಿದ್ದೇನೆ. ಅವರ ಮಾತುಕತೆಗಳಲ್ಲಿ ನನಗೆ ಮುಖ್ಯವಾಗಿ ಕಂಡಿದ್ದು, ಜಾತ್ಯತೀತವಾದ ಮನಸ್ಸು; ಸಣ್ಣಪುಟ್ಟ ಸಂಗತಿಗಳ ಮೇಲೂ ಕಾಳಜಿಯಿಂದ ಸೂಕ್ಷ್ಮವಾಗಿ ಚಿಂತಿಸುವ ಮಾನವೀಯತೆ; ಗತಕಾಲದ ಬಗ್ಗೆ ಹಳಹಳಿಕೆಯಿಲ್ಲದೆ ವರ್ತಮಾನದ ಸಮಸ್ಯೆಗಳನ್ನು ಕುರಿತು ಚಿಂತಿಸುವ ಪ್ರಖರವೂ ನಿಷ್ಠುರವೂ ಆದ ರಾಜಕೀಯ ಪ್ರಜ್ಞೆ. ಸಾರ್ವಜನಿಕ ಬದುಕಿನಲ್ಲಿ ಜಾತಿಪದ್ಧತಿ ಎಲ್ಲೆಮೀರಿ ನಿರತವಾಗಿರುವ ಕುರಿತ ಹೇವರಿಕೆ. ಹಿರಿಯ ಲೇಖಕರಲ್ಲಿ ಸಾಮಾನ್ಯವಾಗಿ ಎರಡು ಸ್ವಭಾವಗಳಿರುತ್ತವೆ. ಒಂದು- ಕಳೆದುಹೋದ ಕಾಲದ ಬಗ್ಗೆ ಭಾವುಕ ಮರುಕಳಿಕೆ. ಎರಡು-ವರ್ತಮಾನದ ಸಾಮಾಜಿಕ ರಾಜಕೀಯ ವೈರುಧ್ಯಗಳನ್ನು ಉದಾರವಾಗಿ ನೋಡುತ್ತ, ಚಿಂತನೆಯ ಮೊನಚನ್ನು ಕಳೆದುಕೊಳ್ಳುವುದು. ಆದರೆ ಆತ್ಮಕ್ಕೆ ಸದಾ ಬೆಂಕಿ ಹತ್ತಿಸಿಕೊಂಡಂತೆ ಉರಿಯುವ ಕೆಲವರಿದ್ದಾರೆ. ಕೋಚೆ, ಕುಸುಮಾಕರ ದೇವರಗೆಣ್ಣೂರ, ಎಂ.ಡಿ. ನಂಜುಂಡಸ್ವಾಮಿ, ನೀಲಗಂಗಯ್ಯ ಪೂಜಾರ, ಕೆ.ರಾಘವೇಂದ್ರರಾವ್, ಅಬ್ಬಿಗೇರಿ ವಿರೂಪಾಕ್ಷಪ್ಪ, ಸಾರಾ ಅಬೂಬಕರ್, ಕಾಮರೂಪಿ ಪ್ರಭಾಕರ-ಇವರೆಲ್ಲ ಇಂತಹವರು. ಈ ಹಿರಿಯರ ಜತೆ ಮಾತಾಡುವಾಗ ಇವರ ಹಠಮಾರಿತನ, ಜಗಳಗಂಟಿತನ, ಆದರ್ಶವಾದ, ನೈತಿಕ ಪ್ರಜ್ಞೆ ಹಾಗೂ ಭಿನ್ನಮತ ಇಷ್ಟವಾಗುತ್ತದೆ.

ಕರ್ನಾಟಕದಿಂದ ಬಹುಕಾಲ ದೂರವಿದ್ದ ಕಾರಣದಿಂದ ಏರ್ಪಟ್ಟಿರುವ ಅಪರಿಚಿತತೆಯಿಂದಲೊ ಅಥವಾ ಕರ್ನಾಟಕದ ಒಳಗೇ ಇದ್ದೂಇದ್ದೂ ನಮಗೆ ಕಾಣದಂತಾಗಿರುವ ವೈರುಧ್ಯಗಳು ‘ಹೊರಗಿನಿಂದ’ ಬಂದಿರುವ ಅವರಿಗೆ ಒಡೆದು ಕಾಣುತ್ತಿರುವುದರಿಂದಲೊ, ಪ್ರಭಾಕರ ಕರ್ನಾಟಕದ ಸಮಕಾಲೀನ ಸಾಂಸ್ಕೃತಿಕ ರಾಜಕಾರಣದ ವೈರುಧ್ಯಗಳ ಬಗ್ಗೆ ತೀಕ್ಷ್ಣವಾದ ಟಿಪ್ಪಣಿ ಮಾಡುತ್ತಿರುತ್ತಾರೆ; ಕನ್ನಡಿಗರ ಸ್ವಭಾವದಲ್ಲೇ ವ್ಯಕ್ತಿನಿಷ್ಠೆಗಾಗಿ ವಿಮರ್ಶೆಯ ನಿಷ್ಠುರತೆ ಬಿಟ್ಟುಕೊಡುವ, ಸಜ್ಜನಿಕೆಯ ಭಾಷೆಯಲ್ಲಿ ವಾಸ್ತವವನ್ನು ಅಡಗಿಸುವ ಪ್ರವೃತ್ತಿಯಿದೆ ಎಂದು ಹೇಳುತ್ತಿರುತ್ತಾರೆ. ಸಂಘಟಕರೊಬ್ಬರು ಕಾರ್ಯಕ್ರಮವೊಂದಕ್ಕೆ ಕರೆಸಿಕೊಂಡು ಪರಿಚಯ ಭಾಷಣದಲ್ಲಿ ತಮ್ಮನ್ನು ಅತಿಯಾಗಿ ಹೊಗಳಿದ್ದನ್ನು ನೆನೆಯುತ್ತ ಅವರೊಮ್ಮೆ ಹೇಳಿದರು: “ಏನ್ ಸ್ವಾಮಿ ಕನ್ನಡಿಗರು? ಎಷ್ಟು ಉದಾರತೆ! ನನ್ನ ಬಗ್ಗೆ ಅವರಿಗೆ ಏನೂ ಗೊತ್ತಿಲ್ಲ. ನಾನು ಎಲ್ಲ ಸೇರಿದರೆ ನೂರೈವತ್ತು ಪುಟಗಳನ್ನೂ ಬರೆದಿಲ್ಲ. ಕನ್ನಡಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟಿಲ್ಲ. ಆದರೂ ವಾಚಾಮಗೋಚರ ಹೊಗಳಿಬಿಟ್ಟರು. ಕರ್ನಾಟಕದಲ್ಲಿ ಮಾತಿಗೆ ಬೆಲೆಯೇ ಇದ್ದಂತಿಲ್ಲ.’’

ಇದನ್ನು ಕೇಳುವಾಗ ಈಚೆಗೆ ಕಲ್ಕತ್ತಾದಲ್ಲಿ ನಾನು ಕಂಡ, ಹಿರಿಯ ಲೇಖಕ ರುದ್ರಪ್ರತಾಪ ಸೇನರ ಸನ್ಮಾನ ಕಾರ್ಯಕ್ರಮ ನೆನಪಾಯಿತು. ಸೇನರಿಗೆ 75ವರ್ಷ ತುಂಬಿದ ನೆಪದಲ್ಲಿ ಇರಿಸಿಕೊಂಡಿದ್ದ ಆ ಕಾರ್ಯಕ್ರಮ ಎಷ್ಟು ವಿಮರ್ಶಾತ್ಮಕವಾಗಿತ್ತು ಎಂದರೆ, ಅವರ ಶಿಷ್ಯರು ತಮ್ಮ ಗುರುವಿನ ಜತೆ ಕೋರ್ಟ್ಮಾರ್ಶಲ್ ನಡೆಸುವವರ ಹಾಗೆ ಪ್ರಶ್ನೆ ಕೇಳುತ್ತಿದ್ದರು. ಸೇನರು ಆ ಕಟುತರ ಪ್ರಶ್ನೆಗಳಿಗೆಲ್ಲ ಪ್ರಾಮಾಣಿಕವಾಗಿ ದ್ವಂದ್ವವಿಲ್ಲದೆ ಉತ್ತರಿಸುತ್ತಿದ್ದರು. ಹಿರಿಯರ ತಲೆಗೆ ಅಭಿನಂದನ ಗ್ರಂಥಗಳ ಸರಮಾಲೆಯನ್ನು ತಂದು ಕಟ್ಟಿ, ಎಗ್ಗಿಲದೆ ಹೊಗಳಿ ವೈಭವೀಕರಿಸುವ ಪದ್ಧತಿಯಿರುವ ಕರ್ನಾಟಕದಲ್ಲಿ, ಈ ಪರಿಯ ನಿಷ್ಠುರತೆ ಕಲ್ಪಿಸಿಕೊಳ್ಳುವುದೇ ಕಷ್ಟ.

ತೋರುಗಾಣಿಕೆಯನ್ನು ಸದಾ ನಿರಾಕರಿಸುವ ಪ್ರಭಾಕರ ಅವರಲ್ಲಿ, ಅವರ ಖಂಡಿತವಾದಿ ನಿಲುವಿಗೆ ಅಷ್ಟೊಂದು ತಾಳೆಯಾಗದ ಇನ್ನೊಂದು ಮುಖವಿದೆ. ಅದೆಂದರೆ, ಜೀವನಪ್ರೀತಿಯ ಸಂಕೇತದಂತಿರುವ ತಮಾಶೆ ಮತ್ತು ಪೋಲಿತನ. ಈ ತಮಾಶೆಯ ಗುಣ ಅದ್ಭುತ ನಾಟಕೀಯ ಶೈಲಿಯಾಗಿ ಅವರ ಕಥೆ ಕಾದಂಬರಿಗಳಲ್ಲೆಲ್ಲ ಆವರಿಸಿಕೊಂಡಿದೆ. ತಮಗೆ ಪಾಠ ಹೇಳಿದ ಗುರುಗಳ ವೈಯಕ್ತಿಕ ಬದುಕಿನಲ್ಲಿದ್ದ ಸನಾತನವಾದ ಮತ್ತು ತರಗತಿಗಳಲ್ಲಿ ಕನ್ನಡ ಬಳಸದ ಅವರ ಇಂಗ್ಲಿಷಿನ ವ್ಯಾಮೋಹ ಕುರಿತಂತೆ, ಅವರಲ್ಲಿ ಸ್ವಾರಸ್ಯಕರ ಮಾಹಿತಿಗಳಿವೆ. ಪ್ರಭಾಕರ ಅವರು ಆಪ್ತರ ಎದುರು ತಾವು ಬರೆದಿರುವ ಅಪ್ರಕಟಿತ ಪೋಲಿ ಪದ್ಯಗಳನ್ನು ವಾಚಿಸುವುದುಂಟು. ಬಹುಶಃ ಇದು ಅವರ ಗೆಳೆಯರಾಗಿದ್ದ ಎಚ್.ಎಸ್. ಬಿಳಿಗಿರಿಯವರ ಸಹವಾಸ ಫಲವಿರಬೇಕು.

ಒಂದೇ ವ್ಯಕ್ತಿತ್ವದಲ್ಲಿ ಒಟ್ಟಿಗೇ ಇರಲು ಕಷ್ಟವೆನಿಸಬಹುದಾದ ಇನ್ನೂ ಅನೇಕ ಸಂಗತಿಗಳು ಅವರಲ್ಲಿ ಸಹಜವಾಗಿ ನಿರಾಳವಾಗಿ ಇವೆ. ಉದಾ.ಗೆ, ಬಹುಭಾಷಿಕರಾದ ಅವರ ಮನೆಮಾತು ತಮಿಳುಗನ್ನಡ; ಬರವಣಿಗೆ ಕನ್ನಡ ಮತ್ತು ಇಂಗ್ಲೀಶಿನಲ್ಲಿ; ಸಂಸ್ಕೃತ ಅಸ್ಸಾಮಿ ಬಂಗಾಳಿ ಭಾಷೆಗಳಲ್ಲಿ ದೊಡ್ಡ ವಿದ್ವತ್ತು. (ಅವರ ಅಸ್ಸಾಮಿ ಬಂಗಾಳಿ ತಿಳಿವಳಿಕೆಯಿಂದ ಕನ್ನಡಕ್ಕೆ ಪ್ರಯೋಜನವಿನ್ನೂ ಆಗಿಲ್ಲ). ಪಂಪ ಅವರ ಇಷ್ಟದ ಕವಿ. ಮೂಲತಃ ಇಂಗ್ಲೀಶ್ ಸಾಹಿತ್ಯದ ವಿದ್ಯಾರ್ಥಿಯಾದರೂ ಸಾಹಿತ್ಯಕ್ಕಿಂತ ಹೆಚ್ಚಾಗಿ ಅಂತರಾಷ್ಟ್ರೀಯ ರಾಷ್ಟ್ರೀಯ ರಾಜಕಾರಣದ ಮೇಲೆ ಹೆಚ್ಚು ಬರೆವಣಿಗೆ. ಅದರಲ್ಲೂ ಈಶಾನ್ಯ ಭಾರತದ ರಾಜಕಾರಣ ಭಾಷೆ ಧರ್ಮ ಸಂಸ್ಕೃತಿ ಕುರಿತ ಅವರ ತಿಳಿವಳಿಕೆ ಅಪರೂಪದ್ದು. ಇವನ್ನೆಲ್ಲ ಒಟ್ಟಿಗೆ ಹೇಗೆ ಕಲ್ಪಿಸಿಕೊಳ್ಳುವುದು? ಪ್ರಭಾಕರ ತಮ್ಮ ಕಾದಂಬರಿಯ ಒಂದು ಪಾತ್ರದ ಹಾಗೇ ಬದುಕಿದ್ದಾರೆ.

ಅವರು ಈಚೆಗೆ ಮಾತಾಡುತ್ತ ಕೊಂಚ ದಣಿದ ದನಿಯಲ್ಲಿ “ಸ್ವಾಮಿ, ಕರ್ನಾಟಕ ನನಗೆ ಸಾಕಾಗಿದೆ. ಗೌಹಾಟಿಗೆ ಹೋಗಬೇಕು ಅನಿಸುತ್ತಿದೆ’ ಎಂದು ಗೊಣಗಿದರು. “ಹೋಗಿ. ಆದರೆ ಮತ್ತೆಬನ್ನಿ’’ ಎಂದೆ. ಅವರಲ್ಲಿ ಕೋಲಾರ-ಗೌಹಾತಿಗಳ ನಡುವೆ ವಿಚಿತ್ರವಾದ ಆಕರ್ಷಣೆ ವಿಕರ್ಷಣೆಯಿದೆ. ಇದು ಬಹುಕಾಲ ಬೇರೆಡೆ ಬೆಳೆದ ಮರ ತನ್ನ ಮೂಲನೆಲಕ್ಕೆ ಬಂದು ನಾಟಿಗೊಂಡರೆ ಬೇರೂರುವ ಕಷ್ಟ. ಮರಳಿ ಹುಟ್ಟಿದೂರಿಗೆ ಬರುವಿಕೆ ಬಾಲ್ಯದ ನೆನಪುಗಳನ್ನು ಎಚ್ಚರಿಸಿ ಸುಖ ಕೊಡುತ್ತದೆ; ಆದರೆ ಹೊಚ್ಚ ಹೊಸತೆೆನಿಸುವಷ್ಟು ಬದಲಾಗಿರುವ ಪರಿಸರವು, ಕಾಡುವ ಏಕಾಂಗಿತನವನ್ನೂ ತಂದಿಡುತ್ತದೆ. ಯಾರ ಮರುಕವನ್ನೂ ಬಯಸದೆ ಏಕಾಂತದಲ್ಲಿ ಘನತೆಯಿಂದ ಕೊನೆಯ ದಿನಗಳನ್ನು ಕಳೆಯ ಬಯಸುವ ಇಂತಹ ಹಠಮಾರಿ ಜೀವಗಳು, ಒಳಗೇ ಮೃದ್ವಂಗಿಗಳಾಗಿ ಆಪ್ತಸಂಗಾತಕ್ಕೆ ಹಾತೊರೆಯುತ್ತಿರುತ್ತವೆ.

ಆ ಸಂಗಾತದ ಸ್ವರೂಪ ಎಂತಹುದು ಎಂದು ಸ್ಪಷ್ಟವಾಗುವುದಿಲ್ಲ. ನಾನು ‘ಕಾಮರೂಪಕ್ಕೆ ಯಾವಾಗ ಹೋಗುತ್ತೀರಿ’ ಎಂದು ಕೇಳಿದೆ: ‘ಆದಿಮದ 50ನೇ ಬೆಳುದಿಂಗಳ ಕಾರ್ಯಕ್ರಮ ಮುಗಿಸಿಕೊಂಡು’ ಎಂದರು.
ಪ್ರತಿಯೊಬ್ಬರಿಗೂ ಬಾಳಿನಲ್ಲಿ ಬಹುರೂಪಧಾರಣೆ ಮಾಡಬೇಕಾದ ಒತ್ತಡಗಳು ಎದುರಾಗಬಹುದು. ಆದರೆ ಈ ರೂಪಧಾರಣೆಗೆ ಕಾರಣ, ನಮ್ಮ ಇಚ್ಛಾನಿಚ್ಛೆಗಳು ಮಾತ್ರವಲ್ಲ, ಬಾಳಿನ ಅನೂಹ್ಯ ಒತ್ತಡಗಳು ಸಹ. ಈ ಒತ್ತಡಗಳು ಬರೆಹ ಇಲ್ಲವೇ ಮಾತಿನ ವ್ಯಾಖ್ಯಾನಕ್ಕೆ ಕೆಲವೊಮ್ಮೆ ನಿಲುಕುವಂತೆ ಇರುವುದಿಲ್ಲ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending