ಅಂತರಂಗ
ಅರಿಮೆಯ ಅರಿವಿರಲಿ-7 : ಕುಮಾರ ಕಾಮ
- ಯೋಗೇಶ್ ಮಾಸ್ಟರ್
ಹಗ್ಗದ ಕೊನೆಗಳು
ಪ್ರೇಮ ಮತ್ತು ಕಾಮಗಳ ನಡುವೆ ಅದೆಷ್ಟೇ ಅಂತರವನ್ನು ಕಾಯ್ದುಕೊಂಡಿದ್ದರೂ, ಅಥವಾ ವ್ಯತ್ಯಾಸವನ್ನು ಕಂಡುಕೊಂಡಿದ್ದರೂ ಅವೆರಡೂ ಕೆಲವೊಮ್ಮೆ ಬೆರೆತುಕೊಂಡುಬಿಡುತ್ತವೆ. ಕಾರಣ ಈವೆರಡೂ ಒಂದೇ ಹಗ್ಗದ ಎರಡು ಕೊನೆಗಳೇ ಹೊರತು, ಎರಡು ಪ್ರತ್ಯೇಕ ಹಗ್ಗಗಳ ತುಂಡುಗಳಲ್ಲ. ಪ್ರೇಮಿಗಳಲ್ಲೂ ಗಮನಿಸಿ ಪವಿತ್ರ ಪ್ರೇಮದ ಬಗ್ಗೆ ಮಾತಾಡುತ್ತಲೇ, ವೈವಾಹಿಕ ಜೀವನದ ಬಗ್ಗೆ ಕನವರಿಸುತ್ತಲೇ ಹಗ್ಗ ಜಗ್ಗಾಟದಲ್ಲಿ ಯಾವಾಗಲೋ ಒಮ್ಮೆ ಮಧ್ಯದ ಗೆರೆಯನ್ನು ದಾಟುವಂತೆ ಯಾರೋ ಒಬ್ಬರು ಎಳೆದುಬಿಟ್ಟಿರುತ್ತಾರೆ. ಮತ್ತೊಬ್ಬರಲ್ಲೂ ಎಳೆಸಿಕೊಳ್ಳುವ ತವಕ ಗುಪ್ತವಾಗಿರುತ್ತದೆ. ಅದು ಪ್ರವೃತ್ತಿ. ಇದು ಇಲ್ಲವೇ, ಯಾವುದೇ ಕಾರಣದಿಂದ ಹಗ್ಗ ತುಂಡಾಗಿಬಿಟ್ಟಿರುತ್ತದೆ.
ಸರೀ, ಈ ಹಗ್ಗವ್ಯಾವುದು ಗೊತ್ತೇ? ಆನಂದ.
ಇರಲಿ, ಸಧ್ಯಕ್ಕೆ ಇಷ್ಟು ತಿಳಿದುಕೊಳ್ಳೋಣ. ಕಾಮ ಮತ್ತು ಪ್ರೇಮದ ಮೂಲದ್ರವ್ಯ ಆನಂದ. ಕಾಮವೂ ಆನಂದಕ್ಕಾಗಿಯೇ, ಪ್ರೇಮವೂ ಆನಂದಕ್ಕಾಗಿಯೇ. ಪ್ರೇಮಕ್ಕೂ ಮತ್ತು ಕಾಮಕ್ಕೂ ಸಧ್ಯಕ್ಕೆ ಕಣ್ಗಾವಲು ಎಂದರೆ ವ್ಯಕ್ತಿಯ ಪಾತ್ರ, ಹಾಗೂ ನೀತಿಸಂಹಿತೆಯನ್ನು ನೀಡುವುದೆಂದರೆ ಅದು ಹೊಣೆಗಾರಿಕೆ. ಅಂದರೆ ಪ್ರೇಮ ಮತ್ತು ಕಾಮದ ನಿರ್ವಹಣೆಯಲ್ಲಿ ಅಥವಾ ಅನುಭವದಲ್ಲಿ ಶಿಷ್ಟ ಅಥವಾ ಕ್ರಮಬದ್ದ ಸಮಾಜದಲ್ಲಿ ನಿರೀಕ್ಷಿಸಬೇಕಾಗಿರುವುದೇನೆಂದರೆ ಪಾತ್ರವರಿತ ಹೊಣೆಗಾರಿಕೆ ಅಥವಾ ಹೊಣೆಗಾರಿಕೆಯನ್ನರಿತ ಪಾತ್ರ. ಎರಡೂ ಒಂದೇ. ಅಳಿಯ ಅಲ್ಲ ಮಗಳ ಗಂಡ ಅಷ್ಟೇ. ಒಟ್ಟಾರೆ ಈ ಎಚ್ಚರಿಕೆ ಪ್ರೇಮ ಮತ್ತು ಕಾಮವು ದಿಕ್ಕು ದಾರಿ ಮತ್ತು ಗುರಿ ತಪ್ಪದಂತೆ ನೋಡಿಕೊಳ್ಳುತ್ತದೆ.
ಪಾತ್ರನಿರ್ವಹಣೆಯ ಹೊಣೆಗಾರಿಕೆ
ನಾನು ಮತ್ತು ಅವಳು ಇಬ್ಬರೂ ವ್ಯಕ್ತಿಗಳು. ಈ ಇಬ್ಬರ ವ್ಯಕ್ತಿಗಳು ಪರಸ್ಪರ ಯಾವ ಪಾತ್ರಗಳನ್ನು ನಿರ್ವಹಿಸುತ್ತಾ ಸಂಬಂಧಿಸಿಕೊಂಡಿದ್ದೇವೆ? ನಮ್ಮ ನಮ್ಮ ಪಾತ್ರಗಳು ವಿಧಿಸಿಕೊಂಡಿರುವ ಅಥವಾ ವಿಧಿಸಿರುವ ಹೊಣೆಗಾರಿಕೆಯನ್ನು ಸಮರ್ಥವಾಗಿ ಮತ್ತು ಗೊಂದಲ ಅಥವಾ ಸಂಘರ್ಷಗಳಿಲ್ಲದೇ ನಿಭಾಯಿಸಬೇಕೆಂದರೆ ಹಗ್ಗದ ಯಾವ ತುದಿಯನ್ನು ಹಿಡಿದುಕೊಳ್ಳಬೇಕು? ಆನಂದವು ಕ್ಷೋಭೆಗೊಳ್ಳದಿರಲು ಯಾವ ಕ್ರಮವನ್ನು ಪಾಲಿಸಬೇಕು? ಇದೇ ಪಾತ್ರಗಳು ತಮ್ಮ ಹೊಣೆಗಾರಿಕೆಯನುಸಾರವಾಗಿ ತೆಗೆದುಕೊಳ್ಳಬೇಕಾದ ತರಬೇತಿ. ಮಗುವೊಂದಕ್ಕೆ ಸಮಾಜವು ಈ ತರಬೇತಿಯನ್ನು ಭಾವನಾತ್ಮಕವಾಗಿಯೂ, ಮಾನಸಿಕವಾಗಿಯೂ ಹಾಗೂ ಭೌತಿಕವಾಗಿಯೂ ರೂಢಿಗೊಳ್ಳುವಂತೆ ನೀಡುತ್ತದೆ.
ಆದರೆ ಮನುಷ್ಯನು ಹುಟ್ಟುತ್ತಲೇ ತರಬೇತಿಯನ್ನು ಹೊಂದಿಲ್ಲದ ಕಾರಣ ಅವನು ಸ್ವಾಭಾವಿಕವಾಗಿ ನೈಸರ್ಗಿಕ ಪಶುವಿನಂತೆ ಪ್ರವೃತ್ತಿಗಳನ್ನು ಹೊಂದಿರುತ್ತಾನೆ. ಹಾಗಾಗಿಯೇ ತಾಯರಿಮೆ, ತಂದೆಯರಿಮೆ ಇತ್ಯಾದಿ ಅರಿಮೆಗಳು ಸಣ್ಣ ಮಗುವಿದ್ದಾಗ ಕಾಣುತ್ತವೆ, ನಂತರ ಶಿಷ್ಟ ಸಮಾಜದ ತರಬೇತಿಗೆ ಒಳಗಾಗುತ್ತಿದ್ದಂತೆ ಅವು ಮರೆಯಾಗುತ್ತವೆ.ವ್ಯಕ್ತಿಯಿಂದ ವ್ಯಕ್ತಿಗೆ ಕಲಿಕೆಯ ಸಾಮರ್ಥ್ಯದಲ್ಲಿ ವ್ಯತ್ಯಾಸವಿರುವಂತೆ, ಗ್ರಹಣಾಶಕ್ತಿಯಲ್ಲಿ ವ್ಯತ್ಯಾಸಗಳಿರುವಂತೆ, ಮನಸ್ಸೆಂಬ ವಿದ್ಯುತ್ಚಕ್ತಿಯ ಪ್ರವಹಿಸುವಿಕೆಯಲ್ಲಿ ವ್ಯತ್ಯಯವಾಗುವಂತೆ; ಮಾನಸಿಕ ಸ್ಥಿತಿಗಳೂ ಏಕಪ್ರಕಾರವಾಗಿ ನಿರಂತರ ಪ್ರವಹನೆಯಲ್ಲಿರುವುದಿಲ್ಲ. ಯಾವುದ್ಯಾವುದೋ ಪ್ರಭಾವಗಳು, ಪ್ರೇರಣೆಗಳು, ಸ್ಪಂದನೆಗಳು ಒಂದಿಷ್ಟು ಅಷ್ಟು ವ್ಯತ್ಯಾಸಗಳಾಗುವಂತೆ ಮಾಡುತ್ತವೆ. ಅದೇನೂ ಪ್ರಮಾದವಲ್ಲ. ಹಾಗಾಗುವುದು ಸ್ವಾಭಾವಿಕ.
ಆದರೆ, ಈ ವ್ಯತ್ಯಾಸದಲ್ಲೇ ಆನಂದವನ್ನು ಕಂಡುಕೊಂಡು ಅದನ್ನೇ ಗಟ್ಟಿಗೊಳಿಸಿಕೊಂಡುಬಿಟ್ಟರೆ ಕ್ರಮಗೊಳಿಸಿರುವ ಶಿಷ್ಟ ಸಮಾಜದ ವ್ಯವಸ್ಥೆಯು ಶಿಥಿಲಗೊಳ್ಳುವುದು ಮತ್ತು ಗೊಂದಲಗಳೂ ಹಾಗೂ ಸಂಘರ್ಷಗಳೂ ಆಗುವವು. ಹಲವು ಬಗೆಯ ವ್ಯಕ್ತಿಗಳೆಲ್ಲರೂ ಹಲವು ಬಗೆಯ ವ್ಯತ್ಯಾಸಗಳ ಮೇಲೆ ಹಕ್ಕು ಸ್ಥಾಪನೆ ಮಾಡಲು ಹೋದರೆ ಇಡೀ ಕ್ರಮವೇ ಪಲ್ಲಟಗೊಂಡು ಎಲ್ಲವೂ ಅಯೋಮಯವಾಗುವುದೆಂದು ನೈತಿಕ ಚೌಕಟ್ಟನ್ನು ವಿಧಿಸಿರುವುದು. ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ; ಹೀಗೆ ಹಲವು ಪ್ರಕಾರಗಳಲ್ಲಿ ಮನಸ್ಸಿನ ವ್ಯತ್ಯಯಗಳನ್ನು ಅಂಕೆಯಲ್ಲಿಡಲು ಸಾಮಾಜಿಕ ವ್ಯವಸ್ಥೆಯು ಹೆಣಗಾಡುವುದು.
ಇರಲಿ, ಈಗ ನಾವು ಇಷ್ಟರಮಟ್ಟಿಗೆ ಈ ವ್ಯತ್ಯಾಸ ಅಥವಾ ವ್ಯತ್ಯಯಗಳನ್ನು ಕಂಡುಕೊಂಡು ಏನೋ ಒಂದು ಹೈಪೊಥೀಸಿಸ್ ಮಾಡುತ್ತಿದ್ದೇವೆ. ಆದರೆ ಈ ಕ್ರಮವರಿತ ತರಬೇತಿಗಳ ಅಗತ್ಯವನ್ನು ಕಂಡುಕೊಳ್ಳುವ ಮುನ್ನವೂ ನಮ್ಮ ಮಾನವನ ಬದುಕಿತ್ತಲ್ಲಾ! ಆಗಲೂ ಲೈಂಗಿಕ ಚಟುವಟಿಕೆಗಳು ನಡೆಯುತ್ತಿತ್ತಲ್ಲ! ಪ್ರೇಮವೋ, ಕಾಮವೋ ಎಂತದ್ದೋ ಆನಂದವನ್ನು ಪಡೆಯಲು ವ್ಯಕ್ತಿ ವ್ಯಕ್ತಿಗಳ ಸೆಳೆತವಿತ್ತಲ್ಲ! ಅವೆಲ್ಲವೂ ಇವತ್ತಿದ್ದಂತೆಯೇ ಇದ್ದಿರಲು ಸಾಧ್ಯವೇ ಇಲ್ಲ. ಈಗಿರುವುದನ್ನು ಮಾನವ ಸಮಾಜದ ವಯಸ್ಕ ಭಾಗ ಎನ್ನುವುದಾದರೆ ಈ ಮಾನವ ಸಮಾಜಕ್ಕೆ ಬಾಲ್ಯವೂ ಇದ್ದಿರಬೇಕಲ್ಲ?
ಪ್ರೌಢ ಸಮಾಜಕ್ಕೆ ಬಾಲ್ಯವಿಲ್ಲವೇ?
ಆ ಸಮಾಜದ ಬಾಲ್ಯದಲ್ಲಿ ಮನೋಲೈಂಗಿಕ ಸಂಘರ್ಷಗಳು ಇರಲಿಲ್ಲ. ಮನಸ್ಸಿಗೆ ಸಂಘರ್ಷವು ಪ್ರಾರಂಭವಾಗುವುದೇ ಕಟ್ಟುಪಾಡುಗಳಿಗೆ ಒಳಗಾದಾಗ. ಅದಕ್ಕೆ ಮುಕ್ತ ಅಭಿವ್ಯಕ್ತಿ ಸಾಧ್ಯವಾಗದಿದ್ದಾಗ, ಅದರ ಆಸೆ ಮತ್ತು ಅಗತ್ಯಗಳನ್ನು ಸ್ವತಂತ್ರವಾಗಿ ಹಾಗೂ ಸಮರ್ಥವಾಗಿ ಪೂರೈಸಿಕೊಳ್ಳಲು ನಿರ್ಬಂಧಗಳಿದ್ದಾಗ.
ಮಾನವನ ಪ್ರಾರಂಭಿಕ ಸಮುದಾಯದ ಬದುಕಿನಲ್ಲಿ ನಿರ್ಬಂಧಗಳಿರಲಿಲ್ಲ. ಸಂಬಂಧಗಳ ಕಟ್ಟುಪಾಡುಗಳಿರಲಿಲ್ಲ. ಅವನ ಜೀವಿತಕ್ಕೆ ಇದ್ದಂತಹ ಮಾದರಿಯೆಂದರೆ ಅವು ಪ್ರಾಣಿಗಳು. ಪ್ರಾಣಿಗಳ ಬದುಕೇ ನಮ್ಮ ಬದುಕೂ ಆಗಿತ್ತು. ಆ ಪ್ರಾಣಿಗಳಲ್ಲಿ ಅಮ್ಮ, ಅಪ್ಪ, ಅಜ್ಜ, ಅಜ್ಜಿ, ಸೋದರ ಮಾವ, ಅಳಿಯ, ಸೊಸೆ, ಗಂಡ ಹೆಂಡತಿ ಇವೆಲ್ಲವೂ ಇಲ್ಲ. ಈಗ ನಾವು ಗುರುತಿಸಿಕೊಂಡು ಕರೆದರೆ ಅವುಗಳ ಗಂಟೇನೂ ಹೋಗುವುದಿಲ್ಲ. ಅವುಗಳದೇನೂ ಅಭ್ಯಂತರವಿಲ್ಲ. ಆದರೆ ನೀನು ತಾಯಿ ನಾಯಿ, ಮಗನಾಗಿರುವ ನಾಯಿಯ ಜೊತೆ ಸಂಭೋಗ ಮಾಡಬೇಡ ಎಂದರೆ ಅವು ಕೇಳುವುದಿಲ್ಲ. ನೀವಿಬ್ಬರೂ ಸೋದರ ಸೋದರಿಯರು ನೀವಿಬ್ಬರು ಪ್ರೀತಿಸಬಹುದೇ ಹೊರತು ಲೈಂಗಿಕ ಕ್ರಿಯೆ ನಡೆಸಬಾರದು ಎಂಬ ಕಟ್ಟಳೆಯು ಪ್ರಾಣಿಗಳಲ್ಲಿ ಸಮ್ಮತವಿಲ್ಲ.ಅಷ್ಟೇಕೆ ನಮ್ಮ ಚಾರಿತ್ರಿಕ ನೆನಪುಗಳಲ್ಲಿ ಪುರಾತನ ಗ್ರೀಸಿನ ರಾಜಮನೆತನಗಳಲ್ಲಿ ಸೋದರ ಸೋದರಿಯರು ವಿವಾಹವಾಗುತ್ತಿದ್ದರು ಮತ್ತು ಮಕ್ಕಳನ್ನು ಪಡೆಯುತ್ತಿದ್ದರು.
ಜೊಕಾಸ್ಟ ಕಾಂಪ್ಲೆಕ್ಸ್
ತನ್ನ ಮಗುವಿನ ಕುರಿತಾದ ತಾಯಿಯ ಪ್ರೇಮವು ಕಾಮವಾಗಿ ಮಾರ್ಪಾಡಾಗುವುದನ್ನು ಮಗನರಿಮೆ ಅಥವಾ ಜೊಕಾಸ್ಟ ಕಾಂಪ್ಲೆಕ್ಸ್ ಎಂದು ಮನೋವಿಜ್ಞಾನದಲ್ಲಿ ಗುರುತಿಸುತ್ತಾರೆ. ಇದಕ್ಕೆ ಜೊಕಾಸ್ಟ ಕಾಂಪ್ಲೆಕ್ಸ್ ಎನ್ನುವ ಬದಲು ನಾವೂ ನಮ್ಮ ಕನ್ನಡದ ಐತಿಹ್ಯಗಳಲ್ಲಿ ಸಿಗುವಂತಹ ಕಥೆಗಳನ್ನು ಆಧರಿಸಿ ಹೆಸರಿಡಲು ಹೋದರೆ ಕುಮಾರ ಕಾಮ ಎನ್ನಬಹುದು. ಕುಮಾರ ರಾಮನ ಕಥೆಯಲ್ಲಿ ಅವನ ಮಲತಾಯಿಯು ಕುಮಾರ ರಾಮನನ್ನು ಕಾಮಿಸುತ್ತಾಳೆ. ಅದರಂತೆಯೇ ಅದರ ತದ್ರೂಪದ ಕತೆಯಂತಿರುವ ಸತ್ಯವಂತ ಸಾರಂಗಧರನದೂ ಇದೇ ಪ್ರಸಂಗವೇ.
ರಾಮನಗರದ ಕಡೆಗಿರುವ ಜಾನಪದ ಐತಿಹ್ಯ. ಕುಮಾರ ರಾಮನ ತಾಯಿಯಾಗಲಿ, ಅಥವಾ ಸಾರಂಗಧರನ ತಾಯಿಯಾಗಲಿ ಅವರವರ ಮಲತಾಯಿಯರು. ಮಲತಾಯಿಯಾದರೂ ಅವಳ ಪಾತ್ರ ತಾಯಿಯದು. ಹೆತ್ತ ತಾಯಿಯಷ್ಟು ನಿರ್ವಹಿಸಲು ಅಲ್ಲಿ ಅವಕಾಶವಿಲ್ಲವಾದರೂ, ಸಮಾಜದ ನಿರೀಕ್ಷೆ ಮತ್ತು ಅಪೇಕ್ಷೆ ತಾಯಿಯ ಪಾತ್ರವನ್ನು ನಿರ್ವಹಿಸುವುದು.
ಸಮಾಜದ ನಿರೀಕ್ಷೆ ಮತ್ತು ಅಪೇಕ್ಷೆಗಳನ್ನು ಪೂರೈಸಲು ಕೆಲವಷ್ಟು ಪಾತ್ರ ನಿರ್ವಹಣೆ ಮಾಡಲು ಸಾಧ್ಯವಿಲ್ಲದೇ ಹೋಗುವುದಕ್ಕೆ ಅವರದೇ ಆದಂತಹ ಕಾರಣಗಳಿರುತ್ತವೆ. ನಾವು ಬರಿಯ ಶಿಷ್ಟ ಚೌಕಟ್ಟಿನಲ್ಲಿ ಅಳೆದು ಬಸಿದು ಬಿಸಾಡಲಾಗದು. ಕುಮಾರ ರಾಮನ ಅಥವಾ ಸಾರಂಗಧರನ ಮಲತಾಯಿಯರಿಬ್ಬರೂ ವಯಸ್ಸಿನಲ್ಲಿ ಕಿರಿಯರೂ ಮತ್ತು ತಾವು ಮದುವೆಯಾದ ವ್ಯಕ್ತಿಯು ಒಂದು ಹಂತಕ್ಕೆ ವೃದ್ಧನೂ ಆಗಿದ್ದನು. ಜೊತೆಗೆ ಮನುಷ್ಯ ಸ್ವಾಭಾವಿಕವಾಗಿಯೇ ಹೆಚ್ಚೂ ಕಡಿಮೆ ತಮ್ಮದೇ ವಯಸ್ಸಿನ ಮಗನ ಜೊತೆಗೆ ಹಗ್ಗದ ಪ್ರೇಮದ ಕೊನೆಯಿಂದ ಕಾಮದ ಇನ್ನೊಂದು ಕೊನೆಗೆ ಬರುವುದು ವಿಚಿತ್ರವೋ ಅಥವಾ ಅಸಹಜವೋ ಅಲ್ಲ. ಆ ಅಂತರವನ್ನು ಕಾಪಾಡಿಕೊಳ್ಳುವುದು ಅವರ ತರಬೇತಿಯ ಅಥವಾ ರೂಢಿಯ ಸಾಮರ್ಥ್ಯವಷ್ಟೇ ಆಗಿರುತ್ತದೆ.
ಏನೇ ಆಗಲಿ, ಜೊಕಾಸ್ಟಾ ಕಾಂಪ್ಲೆಕ್ಸ್ ಅಥವಾ ಕುಮಾರ ಕಾಮವನ್ನು ಸಿಗ್ಮಂಡ್ ಫ್ರಾಯ್ಡ್ ನಾನಾ ರೀತಿಗಳಲ್ಲಿ ವಿವರಿಸಲು ಯತ್ನಿಸುತ್ತಾರೆ. ಮಗುವು ತಾಯಿಯ ಮೊಲೆ ಹಾಲು ಕುಡಿಯುವಾಗ ತಾಯಿಯು ಲೈಂಗಿಕಾನಂದವನ್ನು ಪಡೆಯುತ್ತಾಳೆ ಎಂದೂ ಹೇಳುತ್ತಾರೆ. ಆದರೆ ನಾನದನ್ನು ಬರಿಯ ಆನಂದಕ್ಕೆ ಸೀಮಿತಗೊಳಿಸಲು ಯತ್ನಿಸುತ್ತೇನೆ. ಫ್ರಾಯ್ಡ್ಅಂತೆ ಮೈಯನ್ನೆಲ್ಲಾ ಲಿಂಗಮಯಗೊಳಿಸಿಕೊಳ್ಳುವ ಬದಲು ಆನಂದಮಯಗೊಳಿಸಿಕೊಂಡರೆ ಸರಿ ಹೋಗುವುದು ಎಂಬುದು ನನ್ನ ಅಭಿಪ್ರಾಯ.
ಏಕೆಂದರೆ ಕಾಮ ಅಥವಾ ಆನಂದವೆನ್ನುವುದರ ಮೂಲ ಲಿಂಗ ಮಾತ್ರವಲ್ಲ. ಲಿಂಗವೂ ಕೂಡಾ ಕಾಮುಕತೆಯ ಏಕೈಕ ಮೂಲವಲ್ಲ. ಲಿಂಗದ ಹೊರತಾಗಿ ದೇಹದ ವಿವಿಧ ಭಾಗಗಳು ವಿವಿಧ ವ್ಯಕ್ತಿಗಳಿಗೆ ಲೈಂಗಿಕಾನಂದದ ಸರಕುಗಳೇ ಆಗಿರುತ್ತವೆ. ಅದು ಅವರವರ ಅಭಿರುಚಿ, ಆಸಕ್ತಿ, ಸಮಸ್ಯೆ, ಅರಿಮೆ; ಏನೋ ಒಂದು.
ಹಾಗೆಯೇ ಸಂಬಂಧಗಳಲ್ಲಿ ಬರಿಯ ಆನಂದದ ವಾಸನೆಯನ್ನು ಮಾತ್ರ ಬೆನ್ನತ್ತಿದರೆ ಆಗದು. ಬೇರೆ ಬೇರೆ ಆಯಾಮಗಳೂ ಕೂಡಾ ಸಂಬಂಧಗಳಲ್ಲಿ ಅನಾವರಣಗೊಳ್ಳುತ್ತಿರುತ್ತವೆ. ಕಾರಣಗಳು ಏನೇ ಇರಲಿ ಕಾಂಪ್ಲೆಕ್ಸುಗಳು ಮೂಲದಲ್ಲಿ ಕೆಲಸ ಮಾಡುತ್ತಿರುತ್ತವೆ.
ಬಹುಪತಿ ಪದ್ಧತಿ ಅಥವಾ ಪಾಲಿಯಂಡ್ರಿ
ಹಿಂದೆ ಮಾನವನ ಸಮುದಾಯದ ಬದುಕು ಬಾಲ್ಯಾವಸ್ಥೆಯಲ್ಲಿದ್ದಾಗ ಹೆಣ್ಣೇ ಗುಂಪಿನ ನಾಯಕಿ. ಆ ಹೆಣ್ಣನ್ನು ಇಂದಿನ ಪರಿಭಾಷೆಯಲ್ಲಿ ತಾಯಿ ಎನ್ನುತ್ತೇವೆ. ಅದನ್ನೇ ಉಪಯೋಗಿಸಿದರೆ ವಿಷಯ ಅರ್ಥ ಮಾಡಿಕೊಳ್ಳುವುದು ಸುಲಭ. ಆಗ ತಾಯಿಯು ತನ್ನ ಗುಂಪಿನಲ್ಲಿರುವ ಸಮರ್ಥನನ್ನು ತನ್ನೊಡನೆಯ ಸಂಭೋಗಕ್ಕೆ ಆಯ್ದುಕೊಳ್ಳುತ್ತಿದ್ದಳು. ಅದು ವಿವಾಹ ಪೂರ್ವ ಕಾಲದಲ್ಲಿ. ಸರಿ, ಮದುವೆಯ ವ್ಯವಸ್ಥೆಯು ತಲೆಯೆತ್ತಿದ ಮೇಲೂ ಒಂದು ಹೆಣ್ಣಿಗೆ ಹಲವು ಗಂಡುಗಳನ್ನು ಮದುವೆಯಾಗುವ ಅಧಿಕಾರವಿತ್ತು, ರೂಢಿಯೂ ಬಹಳ ಕಾಲ ಅಸ್ತಿತ್ವದಲ್ಲಿತ್ತು. ಅವಳು ವಿವಾಹಪೂರ್ವ ಕಾಲದಲ್ಲಿ ಗುಂಪಿನ ನಾಯಕಿಯಾಗಿದ್ದಂತೆ ಮದುವೆಯ ವ್ಯವಸ್ಥೆಯ ನಂತರವೂ ಮನೆಯ ಯಜಮಾನಿಯಾಗಿ ಮುಂದುವರಿದು ಸೂಕ್ತವಾದ ಶಿಷ್ಟ ಮಾರ್ಪಾಡುಗಳೊಡನೆ ಮಾತೃ ಪ್ರಧಾನ ಸಮಾಜವು ತಲೆ ಎತ್ತಿತ್ತು.
ಆದರೆ ಒಂದು ಹೆಣ್ಣು ವಿಧವೆಯಾದರೆ ತನ್ನ ಗಂಡನ ತಮ್ಮನನ್ನು ವೈದಿಕರೂ ಸೇರಿದಂತೆ ಹಲವಾರು ಬುಡಕಟ್ಟುಗಳಲ್ಲಿ ರೂಢಿಯಲ್ಲಿತ್ತು. ಇನ್ನೂ ಕೆಲವು ಬುಡಕಟ್ಟುಗಳಲ್ಲಿ ತನ್ನ ಹಿರಿಯ ಮಗನನ್ನು ಮದುವೆಯಾಗುವ ಪದ್ಧತಿಯೂ ನಮ್ಮ ಪ್ರಾಚೀನ ಭಾರತದಲ್ಲಿತ್ತು. ಅನೇಕ ಪುರುಷರನ್ನು ಒಬ್ಬಳು ಮದುವೆಯಾಗುವ ಪದ್ಧತಿಯಂತೂ ನಮ್ಮ ಪ್ರಾಚೀನ ಭಾರತಕ್ಕೆ ಏನೇನೂ ಪರಕೀಯವಾಗಿರಲಿಲ್ಲ. ದ್ರೌಪದಿಯು ಐವರು ಗಂಡಂದಿರ ಮದುವೆಯಾಗಿರುವುದು ಮಹಾಭಾರತದಲ್ಲಿರುವುದರಿಂದ ಅದು ಪ್ರಖ್ಯಾತ ದಾಖಲು. ದ್ರೌಪದಿ ಪಾತ್ರದ ಚಿತ್ರಣವೂ ಕೂಡಾ ಮಹಾಭಾರತದಲ್ಲಿ ಬಲವಾಗಿಯೇ ಇದೆ. ಐದೂ ಜನ ಗಂಡಂದಿರನ್ನು ಅವಳು ತನ್ನ ಅಂಕೆಯಲ್ಲಿಯೇ ಇಟ್ಟುಕೊಂಡಿದ್ದಳು.
ಗಟ್ಟಿತನದಿಂದಲೇ ಅವಳು ವ್ಯಕ್ತಿಗಳನ್ನೂ ಮತ್ತು ಸನ್ನಿವೇಶಗಳನ್ನು ನಿರ್ವಹಿಸುತ್ತಿದ್ದಳು. ಅವಳಲ್ಲಿ ಯಜಮಾನಿಕೆ ಇದೆ. ದ್ರೌಪದಿಯ ಊರು ಪಾಂಚಾಲ ಎಂದು ಹೆಸರಿಸುವುದು ಇಂದಿನ ಹಿಮಾಚಲ ಪ್ರದೇಶದ ಕಿನೌರ್ ಪ್ರಾಂತ್ಯದಲ್ಲಿ. ಉತ್ತರಖಂಡದ ಹಿಮಾಲಯದ ಕೆಳಗಣಿವೆಗಳ ಜೌನ್ಸರ್ ಬವರ್ ಪ್ರದೇಶದಲ್ಲಿ ಪಹಾರಿಗಳೆಂಬ ಜನಾಂಗವಿದೆ. ಅವರಲ್ಲಿಯೂ, ಹಾಗೆಯೇ ಅದರಂತೆಯೇ ದಕ್ಷಿಣ ಭಾರತಕ್ಕೆ ಬಂದರೆ ತೋಡಾ ಬುಡಕಟ್ಟಿನಲ್ಲಿಯೂ ಕೂಡಾ ಬಹುಪತಿ ಪದ್ಧತಿ ರೂಢಿಯಲ್ಲಿತ್ತು. ಹತ್ತೊಬತ್ತನೆಯ ಶತಮಾನದವರೆಗೂ ಕೇರಳದ ಹಲವಾರು ಜಾತಿಗಳಲ್ಲಿ ಇದು ರೂಢಿಯಲ್ಲಿತ್ತು.
1911ರ ಜನಗಣತಿಯಲ್ಲಿ ಇ ಎ ಗೈಟ್ ಟಿಬೇಟಿನಿಂದ ನಮ್ಮ ದಕ್ಷಿಣ ಭಾರತದ ಸಮುದ್ರದ ತುದಿಯವರೆಗೂ ಅನೇಕಾನೇಕ ಬುಡಕಟ್ಟುಗಳಲ್ಲಿ ಬಹುಪತಿ ಅಥವಾ ಪಾಲಿಯಂಡ್ರಿ ಪದ್ಧತಿಯನ್ನು ನಮೂದಿಸುತ್ತಾರೆ.
ಆಸ್ತಿಯ ಹಕ್ಕೂ ಕೂಡಾ ಅವಳಿಗೇ ಇತ್ತು. ಅದನ್ನು ಉಳಿಸಿಕೊಳ್ಳಲು ಮತ್ತು ಸಂಬಂಧವನ್ನೂ ಆಪ್ತಗೊಳಿಸಿಕೊಳ್ಳಲು ವಿವಾಹದ ಸಂಬಂಧಗಳನ್ನೂ ಬೆಳೆಸಿಕೊಳ್ಳುತ್ತಿದ್ದರು. ಹೆಣ್ಣು ತನ್ನ ತವರಿಗೇ ತನ್ನ ಮಗಳನ್ನು ಕೊಡುವುದು, ಅಂದರೆ ತನ್ನ ಸೋದರನಿಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿಕೊಂಡು ತವರಿನಾ ಬಾಂಧವ್ಯವನ್ನು ಉಳಿಸಿಕೊಳ್ಳುವ ಮೂಲದಲ್ಲಿ ಜೊಕಾಸ್ಟಾ ಕಾಂಪ್ಲೆಕ್ಸ್ ಹೊಗೆಯಾಡುತ್ತಿದೆ ಎಂದರೆ ಗಾಬರಿಯಾಗುವ ಅಗತ್ಯವೇನಿಲ್ಲ.
ವರಸೆ ಇದೆ.
ನನ್ನ ಗೆಳೆಯನೊಬ್ಬನಿಗೆ ಅವನ ಅಕ್ಕ ತನ್ನ ಮಗಳನ್ನು ಕೊಡಲು ಎಷ್ಟೋ ಪರಿಪಾಟಲು ಪಟ್ಟಳು. ಅವನು ಬಲವಾಗಿ ನಿರಾಕರಿಸುತ್ತಿದ್ದ. “ನನಗೆ ಅಕ್ಕನಾದ ನೀನೂ ಕೂಡಾ ತಾಯಂತೆ. ನಿನ್ನ ಮಗಳೂ ಅದೇ ರಕ್ತದವಳು. ಅವಳನ್ನು ನನಗೆ ಹೆಂಡತಿಯಾಗಿ ಒಪ್ಪಲು ಸಾಧ್ಯವೇ ಇಲ್ಲ. ಅವಳು ನನಗೆ ತಂಗಿಯ ಸಂಬಂಧದಂತೆಯೇ ತೋರುತ್ತಾಳೆ” ಎಂಬುದು ಅವನ ಭಾವ.
“ಹಾಗೆಲ್ಲ ಅಂದುಕೊಳ್ಳಬೇಡ. ನಿಮ್ಮಿಬ್ಬರಿಗೂ ವರಸೆ ಇದೆ” ಎಂದು ಅವನ ಅಕ್ಕ ಅವನಿಗೆ ಮನವೊಲಿಸಲು ಪ್ರಯತ್ನಿಸುತ್ತಿದ್ದಳು. ಅದಕ್ಕೆ ಅವನು ಕೊಟ್ಟ ಉತ್ತರ, “ನೀವು ಹೇಳುತ್ತಿರುವ ವರಸೆ ಕೂಡಾ ಅಂದುಕೊಳ್ಳುವುದು ತಾನೇ? ನಿಮಗೆ ಅನುಕೂಲವಾಗುವಂತೆ ನೀವು ಅಂದುಕೊಳ್ಳಿ. ನನ್ನ ಮನೋಭಾವಕ್ಕೆ ತೋರುವಂತೆ ನಾನು ಅಂದುಕೊಳ್ಳುತ್ತೇನೆ.
ಒಟ್ಟಿನಲ್ಲಿ ಸಂಬಂಧಗಳು ಅನ್ನೋದೇ ಅಂದುಕೊಳ್ಳೋದು. ಬಿಡಿ” ಎಂದ. ಅವನ ಅಕ್ಕನ ಮಗಳ ಜೊತೆ ಅವನ ಮದುವೆಯಾಗಲಿಲ್ಲ.ವೈದ್ಯಕೀಯವಾಗಿ ರಕ್ತಸಂಬಂಧದಲ್ಲಿ ಮದುವೆಯಾಗುವುದು ಅಷ್ಟೇನೂ ಒಳಿತಲ್ಲದ ಕಾರಣದಿಂದ ಅವನ ನಿರ್ಧಾರವೂ ಒಳ್ಳೆಯದೇ. ಏನೇ ಆಗಲಿ, ಸಂಬಂಧಗಳು ಅನ್ನೋದು ನಾವು ನಾವು ಅಂದುಕೊಳ್ಳೋದು ಅಷ್ಟೇ! ನೈಸರ್ಗಿಕವಾಗಿ ಏನಿದೆ? ನಿಸರ್ಗದ ಸ್ವಾಭಾವಿಕ ವಾಸನೆಗಳ ಪಳೆಯುಳಿಕೆಗಳೇ ಈ ಅರಿಮೆಗಳು.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಅಂತರಂಗ
ಮರೆಯಾದ ಅಪೂರ್ವ ಚಿತ್ರಕಲಾ ಪ್ರತಿಭೆ ‘ಶೋಭಾ ಕರಣಿಕ್’
- ಡಾ.ಎನ್.ಕೆ.ಪದ್ಮನಾಭ, ಸಹಾಯಕ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ,ಉಜಿರೆ
ಅವರು ಬಿಡಿಸುತ್ತಿದ್ದ ರೇಖೆಗಳು ನಮ್ಮ ದೇಶೀ ಸಂಸ್ಕೃತಿಯ ವಕ್ತಾರಿಕೆಯ ಪಾತ್ರ ನಿರ್ವಹಿಸುತ್ತಿದ್ದವು. ಕನ್ನಡದ್ದೇ ಆದ ಕಲಾತ್ಮಕ ಪರಂಪರೆಯನ್ನು ಸೂಕ್ಷ್ಮವಾಗಿ ಗ್ರಹಿಸಿದ್ದ ಅವರ ಚಿತ್ರಗಳು ಜೀವಂತಿಕೆಯ ಗುಣಲಕ್ಷಣದೊಂದಿಗೆ ಕಂಗೊಳಿಸುತ್ತಿದ್ದವು.
ಸಾಂಪ್ರದಾಯಿಕ ಚಿತ್ರಶೈಲಿಯನ್ನು ಆಧುನಿಕ ಅಗತ್ಯಗಳಿಗೆ ತಕ್ಕಂತೆ ಮಣಿಸಿ ಪರಂಪರೆಯೊಳಗೇ ಅಡಗಿದ್ದ ಮೌಲಿಕ ಮಾದರಿಗಳನ್ನು ಮನಗಾಣಿಸುವ ಶ್ರದ್ಧೆಯೊಂದಿಗೇ ಅವರು ಚಿತ್ರವಿನ್ಯಾಸ ರೂಪಿಸುತ್ತಿದ್ದರು. ಇನ್ಸ್ಟಾಗ್ರಾಮ್, ಫೇಸ್ಬುಕ್ ಮತ್ತಿತರ ಮಾಧ್ಯಮಗಳ ಮೂಲಕ ತಮ್ಮ ಚಿತ್ರಗಳನ್ನು ಕಾಣಿಸುತ್ತಿದ್ದರು. ಪರಂಪರೆ ಮತ್ತು ವರ್ತಮಾನವನ್ನು ಬೆಸೆದು ಹೊಸ ಬಗೆಯ ಚಿತ್ರಪ್ರಯೋಗಗಳನ್ನು ನಡೆಸುವ ಹುಮ್ಮಸ್ಸಿನೊಂದಿಗೆ ಚಿತ್ರಕಲಾಯಾನ ಮುಂದುವರೆಸಿದ್ದರು. ಅವರ ಹೆಸರು ಶೋಭಾ ಕರಣಿಕ್.
ಇತ್ತೀಚೆಗಷ್ಟೇ ಅವರ ಚಿತ್ರಕಲಾಯಾನ ನಿಂತಿತು. ಅವರ ನಿಧನವು ವಿನೂತನವಾದ ಪ್ರಯೋಗಶೀಲ ಚಿತ್ರಕಲಾ ಸಾಧ್ಯತೆಗಳನ್ನು ತಡೆದು ನಿಲ್ಲಿಸಿತು. ಪುರಾಣದ ಕಥನ ಪ್ರಸಂಗಗಳಲ್ಲಿ ಉಲ್ಲೇಖಿತ ದೇವರು-ದೇವತೆಗಳ ಅಸ್ಮಿತೆ ಮತ್ತು ದೇಸೀ ಸಂಸ್ಕೃತಿಯನ್ನು ಬಿಂಬಿಸುವ ವಿನ್ಯಾಸಗಳನ್ನು ಸಮನ್ವಯಗೊಳಿಸಿ ಚಿತ್ರಕಲೆಗೆ ಹೊಸ ಆಯಾಮ ತಂದುಕೊಟ್ಟ ಪ್ರತಿಭೆಯಾಗಿ ಶೋಭಾ ಕರಣಿಕ್ ಅವರದ್ದು ವಿಶೇಷ ವ್ಯಕ್ತಿತ್ವವಾಗಿತ್ತು. ಮ್ಯೂರಲ್ ಪೇಂಟಿಂಗ್ನಲ್ಲಿ ಅವರಿಗಿದ್ದ ಪರಿಣತಿ, ಉತ್ತರ ಕನ್ನಡದ ಕಾವಿ ಕಲೆಯ ಕುರಿತಾದ ವಿಸ್ತೃತ ಜ್ಞಾನವು ಚಿತ್ರಕಲೆಯನ್ನು ಉನ್ನತೀಕರಿಸುವುದಕ್ಕೆ ಅವರಿಗೆ ನೆರವಾಗಿತ್ತು.
ಕಲೆಯ ಜೊತೆಗಿನ ಅನುಸಂಧಾನದ ಕ್ಷಣಗಳು ಅಪೂರ್ವ. ಒಂದು ನಿರ್ದಿಷ್ಟ ನಿರ್ಣಾಯಕ ಸಂದರ್ಭ, ಸಮಯದಲ್ಲಿ ಕಲೆಯೊಂದು ವ್ಯಕ್ತಿತ್ವವನ್ನು ಪ್ರಭಾವಿಸಿ ಸೃಜನಶೀಲತೆಯ ಹಸಿವನ್ನು ನೆಲೆಗೊಳಿಸುವುದಕ್ಕೆ ಪ್ರೇರಣೆಯಾಗುತ್ತದೆ. ಕಲೆಯ ಪ್ರಭಾವ ಎರಡು ಬಗೆಯದ್ದು. ಸಹೃದಯರನ್ನು ತನ್ನ ಕಲಾತ್ಮಕ ಮಾದರಿಗಳಿಂದ ಸೆಳೆದು ಅವರೊಳಗೆ ವಿಶೇಷ ಅನುಭೂತಿ ಧಾರೆ ಎರೆಯುವಂಥದ್ದು ಒಂದು ಬಗೆಯಾದರೆ ಹೀಗೆ ಸೆಳೆದುಕೊಂಡು ಮತ್ತೆ ಮತ್ತೆ ಪ್ರಭಾವಿಸುತ್ತಾ ಸಹೃದಯರನ್ನೇ ಕಲಾವಿದರನ್ನಾಗಿಸುವ ಸಾಧ್ಯತೆ ಮತ್ತೊಂದು ತೆರನಾದದ್ದು.
ಈ ಕಾರಣಕ್ಕಾಗಿಯೇ ಕಲಾತ್ಮಕ ಸಂಭವನೀಯತೆಯು ಅನನ್ಯವೆನ್ನಿಸಿಕೊಂಡಿದೆ. ಇಂಥ ಅನನ್ಯತೆಯೊಂದಿಗೇ ಶೋಭಾ ಕರಣಿಕ್ ಗುರುತಿಸಿಕೊಂಡಿದ್ದರು. ಅವರು ಓದಿದ್ದು ತಾಂತ್ರಿಕ ವಿಜ್ಞಾನ. ಆದರೆ, ಅವರ ನಿಜದ ಪ್ರತಿಭೆ ಅಭಿವ್ಯಕ್ತವಾದದ್ದು ಚಿತ್ರಕಲೆಯ ಮೂಲಕ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪರಿಸರದಲ್ಲಿ ಬೆಳೆದ ಶೋಭಾ ಕರಣಿಕ್ ಮೊದಲಿನಿಂದಲೂ ದೇಶೀ ಕಲೆಯ ಕುರಿತು ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡು ಬಂದಿದ್ದರು. ಹೈಸ್ಕೂಲ್ ಓದುತ್ತಿರುವಾಗಲೇ ಕಾವಿಕಲೆಯ ವಿನ್ಯಾಸ ಅವರನ್ನು ಸೆಳೆದಿತ್ತು. ಇವುಗಳನ್ನು ಮತ್ತೆ ಮತ್ತೆ ನೋಡುತ್ತಾ ಹೋದಂತೆಲ್ಲಾ ಕಾವಿ ಕಲೆಯ ಕುರಿತ ಆಕರ್ಷಣೆ ಕಲಿಕೆಯ ಹಂಬಲವಾಗಿ ಮಾರ್ಪಟ್ಟಿತು. ಉತ್ತರ ಕನ್ನಡದ ಟೆಂಪಲ್ ರ್ಟ್ ಪ್ರಕಾರದ ಭಾಗವಾಗಿ ಕಾವಿ ಕಲೆಯನ್ನು ಪರಿಚಯಿಸುವ ದೃಷ್ಟಿಯಿಂದ ಅವರು ರಚಿಸಿದ್ದ ತರಹೇವಾರಿ ವಿನ್ಯಾಸಗಳು ವಿವಿಧ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮಗಳಲ್ಲಿ ಗಮನ ಸೆಳೆದಿದ್ದವು.
ಕಾವಿ ಕಲೆಯೂ ಸೇರಿದಂತೆ ನಮ್ಮ ಸಾಂಪ್ರದಾಯಿಕ ಕಲೆಗಳು ಈ ಹಿಂದಿನ ಕಾಲದ ತಲೆಮಾರನ್ನಷ್ಟೇ ಪ್ರಭಾವಿಸಿದ್ದಲ್ಲದೇ ನಂತರದ ಹೊಸ ಪೀಳಿಗೆಯನ್ನೂ ಆಕರ್ಷಿಸುವ ಗುಣ ಹೊಂದಿವೆ. ಮೂಲ ಅಂತಃಸತ್ವಕ್ಕೆ ಧಕ್ಕೆಯೊದಗದ ಹಾಗೆ ಹೊಸ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಈ ಸಾಂಪ್ರದಾಯಿಕ ಚಿತ್ರಕಲಾ ವಿನ್ಯಾಸಗಳನ್ನು ಮರುರೂಪಿಸಬಹುದು. ಹೊಸ ಕಾಲದಲ್ಲಿ ಅವುಗಳ ಮಹತ್ವವನ್ನು ಮನಗಾಣಿಸಬಹುದು ಎಂಬುದು ಅವರ ಆಶಯವಾಗಿತ್ತು.
ಕಲೆಯೊಂದು ಒಂದು ಕಾಲದಿಂದ ಮತ್ತೊಂದು ಕಾಲಕ್ಕೆ ದಾಟಿಕೊಳ್ಳುವಾಗ ಪಲ್ಲಟಗಳು ಸಹಜ. ಈ ಪಲ್ಲಟಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಇಂತಹ ಕಲೆಗಳಿಗೆ ಹೊಸಕಾಲದಲ್ಲೂ ಜೀವಂತಿಕೆಯನ್ನು ತಂದುಕೊಡುವ ಪ್ರಯತ್ನದ ಅಗತ್ಯವನ್ನು ಮನಗಾಣಿಸುವುದಕ್ಕಾಗಿಯೇ ಶೋಭಾ ಕರಣಿಕ್ ಅವರು ಚಿತ್ರಕಲಾ ರಚನೆಯ ವೈವಿಧ್ಯಮಯ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದರು.
ಅವರ ನಿಧನದಿಂದ ಈ ಪ್ರಯೋಗಶೀಲ ಹೆಜ್ಜೆಗಳು ನಿಂತಂತಾಗಿವೆ. ಆದರೆ, ಅವರು ಪರಂಪರೆ ಮತ್ತು ವರ್ತಮಾನವನ್ನು ಸಮನ್ವಯಗೊಳಿಸಿ ಸಾಬೀತುಪಡಿಸಿದ ಅಪೂರ್ವ ಚಿತ್ರಕಲಾ ಪ್ರಯೋಗಶೀಲತೆಯ ಜೀವಂತಿಕೆ ಹೊಸ ಪೀಳಿಗೆಗೆ ಸದಾ ಸ್ಫೂರ್ತಿಯ ಸೆಲೆಯಾಗಿರುತ್ತದೆ. ಅವರ ಹೆಸರಿನ ಇನಸ್ಟಾಗ್ರಾಂನಲ್ಲಿ ಕಾಣಿಸಿಕೊಂಡಿರುವ ಚಿತ್ರಗಳು ಇಂಥ ಸ್ಫೂರ್ತಿಯ ಪ್ರಭೆಯನ್ನು ದಾಟಿಸುತ್ತಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಅಂತರಂಗ
ಹೊಸತನದ ಹೊಸ್ತಿಲಲ್ಲಿ..!
- ಮೀನಾಕ್ಷಿ .ಬಿ, ಎಂ. ಎ ವಿದ್ಯಾರ್ಥಿನಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ
ಹೊಸವರ್ಷ ವೆಂಬುದು ಪ್ರತಿಯೊಬ್ಬರ ಬಾಳಲ್ಲಿ ವರ್ಷಕ್ಕೊಮ್ಮೆ ಬರುವ ಹೊಸದಿನಗಳ ಆಗಮನ ಯಾಕೆಂದರೆ ಹೊಸತನವನ್ನು ತರುತ್ತಾ ಇರುವ ಹೊಸವರ್ಷ ಕೂಡ ಒಂದು ಜೀವನದ ಭರವಸೆ, ನಿರೀಕ್ಷೆ ಕನಸುಗಳ ಬಂಡಿಯ ಮೇಲೆ ಸಾಗುವ ಪ್ರಯಾಣ ನಮ್ಮ ಜೀವನ.
ವ್ಯಕ್ತಿಯ ನಂಬಿಕೆಯ ಆಧಾರದ ಮೇಲೆಯೇ ಜೀವನ ಸಾಗುಸುತ್ತಿರುವುದು.ಯಾಕೆಂದರೆ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿಯೂ ಕೂಡ ಕಷ್ಟ -ಸುಖ ದುಃಖದ ಸಂಗತಿಗಳು ಇದ್ದೆ ಇರುತ್ತದೆ. ಕೆಲವೊಂದು ಬಾರಿ ಹತಾಶೆಯನ್ನು ಹೊಂದಿ ಜೀವನದಲ್ಲಿ ಜಿಗುಪ್ಸೆ ಒಂದು ಕೆಟ್ಟ ನಿರ್ಧಾರಕ್ಕೆ ಮನಸ್ಸು ದಾರಿ ಮಾಡಿಕೊಡುತ್ತದೆ. ಹಾಗೆಯೇ ಕಷ್ಟ ಇದ್ದಲ್ಲಿ ಸುಖವಿರುವುದುಂಟು ಅನ್ನುವ ಹಾಗೇ ಇವತ್ತಲ್ಲ ನಾಳೆ ಒಳ್ಳೆಯ ದಿನಗಳು ನಮ್ಮ ಜೀವನದಲ್ಲಿ ಬರಬಹುದೆಂಬ ಭರವಸೆ,ಆತ್ಮವಿಶ್ವಾಸವನ್ನು ಇಟ್ಟುಕೊಂಡು ಜೀವನ ನಡೆಸುತ್ತಲೇ ಇದ್ದೇವೆ.
ಈ ವರ್ಷ ಒಳ್ಳೆಯದಾಗಿಲ್ಲ ಅಂದರೆ ಏನು ಮುಂದಿನ ವರ್ಷ ಆದರೂ ನನ್ನ ಬದುಕು ಬದಲಾಗಬಹುದು ಎಂಬ ಹೊಸತನವನ್ನು ನಮ್ಮಲ್ಲಿ ಭರವಸೆ,ನಂಬಿಕೆಯ ಬೇರಿನೊಂದಿಗೆ ಬೆರೆಸಿಕೊಂಡು ಬದುಕಬೇಕು.ನಾಳೆಯ ದಿನಗಳ ಮೇಲಿನ ಅನಿರೀಕ್ಷಿತ ತೀರಿವಿನಿಂದಾಗುವ ಬದುಕಿನಲ್ಲಾಗುವ ಬದಲಾವಣೆ ಹೊಸತನದ ಚಾಪನ್ನು ಮೂಡಿಸುತ್ತದೆ.
ಎಂಥ ಹತಾಶ ಮನಸ್ಥಿತಿಯವರಲ್ಲೂ ಹೊಸವರ್ಷ ಭರವಸೆಯ ಅಭಯ ಹಸ್ತವನ್ನು ಚಾಚುತ್ತದೆ. ಅದೆಲ್ಲಿಂದಲೇ ಆತ್ಮ ವಿಶ್ವಾಸದ ಬೆಳಕಿನ ಕಿಡಿಯೊಂದು ಕಾಣಿಸಿಕೊಳ್ಳುತ್ತದೆ.
ಹೊಸವರ್ಷವೆಂಬುದು ಕೇವಲ ಸಂಭ್ರಮದ ಕಾಲ ಮಾತ್ರವಲ್ಲ. ಕಳೆದ ದಿನಗಳತ್ತ ಹಿಂತಿರುಗಿ ನೋಡುವ ಸಮಯ ಕೂಡ ಹಿಂದಿನ ದಿನಗಳ ಪುಟಗಳನ್ನು ತೆಗೆದು ನೋಡಿದರೆ. ಉತ್ಸಾಹದ ಗಳಿಗೆಗಳು ಮುಂದಿನ ಕೆಲಸಗಳಿಗೆ ಚೈತನ್ಯ, ಉತ್ಸಾಹ ನೀಡಬಲ್ಲದು.ನಮ್ಮ ದಿಕ್ಕಿಲ್ಲದ ದಾರಿಗೆ ಖಚಿತ ದಿಕ್ಕು ದಾರಿಯನ್ನು ತೋರಬಲ್ಲದು.
ಜೀವನದ ಪ್ರಯಾಣಕ್ಕೆ ಒಂದು ನಿಲ್ದಾಣವಾಗಿದೆ. ನಾವು ಕಾಣುವ ಕನಸಗಳು ಕನಸಾಗಿಯೇ ಉಳಿದಿದೆ ಯಾಕೆಂದರೆ ನಮ್ಮಲ್ಲಿನ ಬೇಜವಾಬ್ದಾರಿ, ನಿರ್ಲಕ್ಷತನ ಆಮೇಲೆ ಮಾಡಿದರೆ ಆಯ್ತು ಅನ್ನೋ ಮನೋಭಾವನೆ ಯಾವುದರ ಬಗ್ಗೆಯೂ ಆಸಕ್ತಿ ಕೊಡದೆ ಇರೋದು ಎಲ್ಲವು ನಮ್ಮ ಕನಸಿನ ಜೀವನ ರೂಪಿಸಿಕೊಳ್ಳುವಲ್ಲಿ ಸಫಲರಾಗದೆ ಉಳಿಯಲು ಕಾರಣ.
ಮೊದಲು ಆತ್ಮವಿಶ್ವಾಸ ಬೇಕು ನಾನು ಈ ಕೆಲಸವನ್ನು ಮಾಡುವೆ ಎಂಬ ಒಂದು ನಿರ್ಧಿಷ್ಟ ಗುರಿ ಇರಬೇಕು ಅಂಗಿದ್ರೆ ಅಷ್ಟೇ ಜೀವನದ ಪಯಣದ ಹಾದಿಯಲ್ಲಿ ಯಶಸ್ಸನ್ನು ಕಾಣಲು ಸಾಧ್ಯ ಇಲ್ಲವಾದಲ್ಲಿ ಸೋಲನ್ನು ಅನುಭವಿಸುವ ಪರಿಸ್ಥಿತಿ ಎದುರಾಗುತ್ತದೆ. ಮುಂದಿನ ದಿನಗಳ ಆಗಮನದೊಂದಿಗೆ ನಾವು ಕಂಡ ಕನಸನ್ನು ಈಡೇರಿಸಿಕೊಳ್ಳುವ ಸತತ ಪ್ರಯತ್ನದೊಂದಿಗೆ ಬರುವ ದಿನವನ್ನು ಸ್ವಾಗತಿಸಿಕೊಳ್ಳೋಣ.
ಎಲ್ಲರ ಬಾಳಲಿ ಹರುಷ ,ಸಂತೋಷ ಮನೆಮಾಡಲಿ ಎಂದು ಆಶಿಸುತ್ತಾ ಎಲ್ಲರಿಗೂ ಹೊಸವರ್ಷದ ಶುಭಾಶಯಗಳು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಅಂತರಂಗ
ಕಾಮರೂಪದ ಪ್ರಭಾಕರ
- ಪ್ರೊ.ರಹಮತ್ ತರೀಕೆರೆ
ನಾನು ಕೋಲಾರಕ್ಕೆ ಹೋದಾಗೆಲ್ಲ ಎರಡು ಜಾಗಗಳಿಗೆ ತಪ್ಪದೆ ಭೇಟಿ ಕೊಡುತ್ತೇನೆ. ಒಂದು-ಕೆ.ರಾಮಯ್ಯ ಮತ್ತವರ ಸಂಗಾತಿಗಳು ಸೇರಿ ತೇರುಹಳ್ಳಿ ಬೆಟ್ಟದ ಮೇಲೆ ಕಟ್ಟಿರುವ `ಆದಿಮ’ಕ್ಕೆ; ಇನ್ನೊಂದು-`ಕಾಮರೂಪಿ’ ಎಂಬ ಹೆಸರಲ್ಲಿ ಬರೆಯುತ್ತಿದ್ದ ಕನ್ನಡ ಲೇಖಕ ಡಾ. ಎಂ.ಎಸ್. ಪ್ರಭಾಕರ ಅವರಿರುವ ಕಠಾರಿಪಾಳ್ಯದ ಮನೆಗೆ. 50ರ ದಶಕದ ಕೊನೆಯಲ್ಲಿ ಕರ್ನಾಟಕ ಬಿಟ್ಟುಹೋದ ಪ್ರಭಾಕರ, ‘ಹಿಂದೂ’ ಪತ್ರಿಕೆಯ ವರದಿಗಾರರಾಗಿ ಆಫ್ರಿಕಾ ಅಮೇರಿಕ ಬಾಂಗ್ಲಾದೇಶ ಈಶಾನ್ಯ ಭಾರತವನ್ನೆಲ್ಲ ಅಲೆದಾಡಿ, ಕಡೆಗೆ ಕಾಮರೂಪದಲ್ಲಿ (ಅಸ್ಸಾಮಿನ ಪುರಾತನ ಹೆಸರಿದು) ನೆಲೆಸಿಬಿಟ್ಟರು.
`ಕಾಮರೂಪ’ ಶಬ್ದಕ್ಕೆ ಬಯಸಿದ ರೂಪಧಾರಣೆ ಮಾಡುವ ಮಾಯಾವಿ ವಿದ್ಯೆ ಎಂಬರ್ಥವೂ ಇದೆ. ಎಂಬತ್ತರ ಪ್ರಾಯದಲ್ಲಿ ಕರ್ನಾಟಕಕ್ಕೆ ಮರಳಿ ಬಂದಿರುವ ಪ್ರಭಾಕರ ಅವರು, ತಾವು ಹುಟ್ಟಿಬೆಳೆದ ಮನೆಯಲ್ಲಿ ಬಿಡಾರ ಹೂಡಿದ್ದಾರೆ. ಹಿರೀಕರು ಕಟ್ಟಿದ ದೊಡ್ಡಮನೆ. ಮನೆಯೊಳಗೊಂದೇ ಜೀವ; ಮನೆ ತುಂಬ ಪುಸ್ತಕದ ರಾಶಿ (ಹೆಚ್ಚಿನವು ಇಂಗ್ಲೀಶ್ ಬಂಗಾಳಿ ಅಸ್ಸಾಮಿ). ನಟ್ಟನಡುವಿರುವ ಹಾಲಿನ ಮೂಲೆಯಲ್ಲಿ ಬೀದಿಗೆ ಬೆನ್ನುಕೊಟ್ಟಂತೆ ಕೂತು, ಲ್ಯಾಪ್ಟಾಪಿನಲ್ಲಿ ಬರೆಯುತ್ತ, ವೆಬ್ಸೈಟುಗಳನ್ನು ಜಾಲಾಡುತ್ತ, ಬ್ಲಾಗುಗಳನ್ನೋದುತ್ತ ಪ್ರಭಾಕರ ಕುಳಿತಿರುತ್ತಾರೆ.
ಅವರ ಮನಗೆ ಹೋದಾಗಲೆಲ್ಲ ನನಗೆ ರಾಗಿಮುದ್ದೆ ಸೊಪ್ಪಿನ ಸಾರಿನ ಊಟ ಸಿಗುತ್ತದೆ. ಅವರು ಉಣ್ಣುವುದೊಂದು ಅಪೂರ್ವ ದೃಶ್ಯ. ತಣಿಗೆಯ ನಡುವೆ ಹದವಾಗಿ ಬೆಂದು ಕಂಪು ಬೀರುವ ಗೋಂದಿನಂತಹ ಕೆಂಗಪ್ಪು ಬಣ್ಣದ ಬಿಸಿಮುದ್ದೆಯನ್ನಿಟ್ಟು, ಅದರ ತಲೆಯ ಮೇಲೆ ಶಿಖರವನ್ನು ಹಿಮವು ಅಲಂಕರಿಸುವಂತೆ ಬೆಣ್ಣೆಯ ಚೂರನ್ನಿಡುತ್ತಾರೆ; ಬೆಣ್ಣೆಯು ಮುದ್ದೆ ಕಾವಿಗೆ ಕರಗಿ ಇಡೀ ಚೆಂಡನ್ನು ಆವರಿಸಿ ಅಭಿಷೇಕ ಮಾಡಿಸಿಕೊಂಡ ಮೂರುತಿಯಂತೆ ಥಳಥಳ ಹೊಳೆಯುತ್ತದೆ. ಆಗ ಘಮಿಸುವ ಮುದ್ದೆಯನ್ನು ಚೆನ್ನಾಗಿ ಮಿದ್ದು, ಒಂದು ಬದಿಯಿಂದ ಇಷ್ಟಿಷ್ಟೇ ಮುರಿದು ತುತ್ತು ಮಾಡಿ, ಸೊಪ್ಪಿನ ಗಟ್ಟಿಸಾರಲ್ಲಿ ಹೊರಳಾಡಿಸಿ ಗುಕ್ಕನೆ ನುಂಗಿ ಕಣ್ಮುಚ್ಚಿ ಕೊಳ್ಳುತ್ತಾರೆ. ತರುವಾಯ ಶ್ರೀಯುತರು ಜ್ಞಾನೋದಯವಾದ ಸಿದ್ಧನಂತೆ ಅವರ ಮುಖದಲ್ಲಿ ಪರಮಾನಂದದ ಒಂದು ಕಳೆ ಆವಿರ್ಭವಿಸುತ್ತದೆ. ಇದನ್ನೆಲ್ಲ ಕಾಣುವಾಗ, ಲೋಕವನ್ನೆಲ್ಲ ಸುತ್ತಾಡಿರುವ ಇವರು ಕೋಲಾರಕ್ಕೆ ಮುದ್ದೆಸುಖಕ್ಕಾಗಿಯೆ ಬಂದರೇನೊ ಎಂದು ಶಂಕೆ ಬರುತ್ತದೆ. ಪ್ರಭಾಕರ ಅವರಿಗೆ ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಅನೇಕ ದೂರುಗಳಿವೆ. ಅವುಗಳಲ್ಲಿ ಆಹಾರ ತಯಾರಿಕೆ ಮತ್ತು ಸೇವನೆ ಕುರಿತು ಅದರಲ್ಲಿ ವಿವರಗಳೇ ಇಲ್ಲ ಎಂಬುದೂ ಒಂದು.
ಕನ್ನಡದ ಅತಿಹಿರಿಯ ಮತ್ತು ಹೆಚ್ಚು ಬರೆಯದ ಲೇಖಕರಲ್ಲಿ ಪ್ರಭಾಕರ ಅವರೂ ಒಬ್ಬರು. ನಾನು ಅವರ ‘ಕುದುರೆಮೊಟ್ಟೆ’ ಕಾದಂಬರಿಯನ್ನೂ ‘ಒಂದು ತೊಲ ಪುನುಗು ಮತ್ತು ಇತರ ಕತೆಗಳು’ ಸಂಕಲನವನ್ನೂ ಓದಿದ್ದೆ. ಇವುಗಳಲ್ಲಿ ‘ಕುದುರೆ ಮೊಟ್ಟೆ’ ಈಗಲೂ ಪ್ರಿಯವಾದ ಪುಸ್ತಕ. ಅದರಲ್ಲಿರುವ ಕೆಲವು ಪಾತ್ರಗಳು ಕೊಂಚ ವಿಕ್ಷಿಪ್ತವಾಗಿವೆ; ಅಲ್ಲಿನ ಬಾಳಿನ ಸನ್ನಿವೇಶಗಳೂ ಅನಿರೀಕ್ಷಿತವಾಗಿವೆ. ಆದರೆ ಎಲ್ಲಿಯೂ ಹುಸಿ ಅನಿಸದಂತೆ, ಒಂದೇ ಶಬ್ದ ಅಪವ್ಯಯವಾಗದಂತೆ ಅದನ್ನು ಬರೆಯಲಾಗಿದೆ. ಪಾತ್ರಗಳನ್ನು ತಮ್ಮ ಸಿದ್ಧಾಂತಕ್ಕೆ ತಕ್ಕಂತೆ ಮಣಿಸಿ ಕೈಗೊಂಬೆಯಂತೆ ಆಡಿಸುತ್ತ, ಕೆಲವನ್ನು ಮುದ್ದಾಮಾಗಿ ದುರುಳಗೊಳಿಸಿ ಕಲೆಯ ಜಾಣಮುಸುಕಿನಲ್ಲಿ ಅಡಗಿಸುತ್ತ, ಕೆಲವು ಕಾದಂಬರಿಗಳು ಕನ್ನಡದಲ್ಲಿ ಪ್ರಕಟವಾಗುತ್ತಿವೆ. ಇಂತಹ ಹೊತ್ತಲ್ಲಿ ಅರ್ಧ ಶತಮಾನದ ಹಿಂದೆ ಪ್ರಕಟವಾದ ಈ ಕಾದಂಬರಿ, ಬಾಳನ್ನು ಕುರಿತು ತೋರುವ ಕಕ್ಕುಲಾತಿ ಕಂಡು ಖುಶಿಯಾಗುತ್ತದೆ. ಕತೆಗಾರರಿಗೆ ತಾವು ಸೃಷ್ಟಿಸುವ ಕೆಲವು ಪಾತ್ರಗಳ ಮೇಲೆ ಕೊಂಚ ಭಾವ ಪಕ್ಷಪಾತವಿರುತ್ತದೆ. ಆದರೆ ತಾವು ಸೃಜಿಸುವ ಎಲ್ಲ ಪಾತ್ರಗಳನ್ನು ತಾಯಿಯಂತೆ ನೋಡುವುದು ಬರೆಹದ ನೈತಿಕತೆ. ಈ ಸಂಗತಿ ಕುವೆಂಪು ಮತ್ತು ಟಾಲ್ ಸ್ಟಾಯ್ ಕಾದಂಬರಿ ಓದಿದವರಿಗೆ ಗೊತ್ತಿದೆ.
ಕಾಮವನ್ನು ಇಟ್ಟುಕೊಂಡು ಜೀವನದ ಸತ್ಯಗಳನ್ನು ಶೋಧಿಸುವ ವಿಷಯದಲ್ಲಿ ಕಾಮರೂಪಿಯವರು, ಒಬ್ಬ ಟಿಪಿಕಲ್ ನವ್ಯಲೇಖಕರೇ. ಆದರೆ ನವ್ಯದ ಕೆಲವು ಲೇಖಕರಲ್ಲಿ ಕಾಣುವಂತೆ, ಅದಕ್ಕವರು ಅನಗತ್ಯ ಪ್ರಾಮುಖ್ಯ ಕೊಡುವುದಿಲ್ಲ. ಅದನ್ನು ಚಪ್ಪರಿಸುವುದಿಲ್ಲ. ವೈಭವೀಕರಿಸುವುದಿಲ್ಲ. ಬದಲಿಗೆ, ಮನುಷ್ಯರಾದವರು ಜೀವನದ ಇಕ್ಕಟ್ಟುಗಳಲ್ಲಿ ಸಿಲುಕಿ ಅನಿವಾರ್ಯವಾಗಿ ವರ್ತಿಸುವ ಪರಿಯನ್ನು ತಣ್ಣಗೆ ವ್ಯಂಗ್ಯವಾಗಿ ಚಿತ್ರಿಸುತ್ತಾ ಹೋಗುತ್ತಾರೆ. ಸತ್ಯಕ್ಕಿರುವ ಹಲವು ಮುಖಗಳನ್ನು ಹಿಡಿಯುವಂತಹ ಕುರುಸೋವಾನ ‘ರಶೋಮನ್’ ಸಿನಿಮಾ ನೆನಪಿಸುವ ಈ ಕಾದಂಬರಿ, ಮತ್ತೆಮತ್ತೆ ಓದಬೇಕು ಎನಿಸುವಷ್ಟು ತಾಜಾ ಆಗಿದೆ. ‘ಉಪಪತ್ತಿಯೋಗ’ ಎಂಬುದನ್ನು ಬಿಟ್ಟರೆ, ಉಳಿದಂತೆ ವ್ಯಕ್ತಿವಾದವನ್ನು ಅತಿಯಾಗಿ ಬಿಂಬಿಸುವ ತಂತ್ರದ ಬಿಗಿತದಲ್ಲಿರುವ ಅವರ ಕತೆಗಳು ಅಷ್ಟು ಆಪ್ತವೆನಿಸಿಲ್ಲ.
ನನಗೆ ಪ್ರಭಾಕರ್ ಕುರಿತು ಆಸಕ್ತಿ ಮೂಡಿಸಿದವರು ಮಾರ್ಕ್ಸ್ವಾದಿ ಚಿಂತಕ ಕೆ.ರಾಘವೇಂದ್ರರಾವ್ ಅವರು. ಅಮೆರಿಕೆಯ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಿದ್ದ ಎ.ಕೆ.ರಾಮಾನುಜನರ ಹೊಂದಾಣಿಕೆಯ ಗುಣವನ್ನು ಕಟುವಾಗಿ ವಿಮರ್ಶಿಸುತ್ತ, ಅಲ್ಲಿನ ಶೈಕ್ಷಣಿಕ ಕ್ಷೇತ್ರದಲ್ಲಿರುವ ಬಿಳಿಯರ ಯಜಮಾನಿಕೆಗೆ ಬಾಗದೆ ಹೊರಬಂದ ಪ್ರಭಾಕರ ಅವರ ದಿಟ್ಟ ಸ್ವಭಾವವನ್ನು ಅವರು ತಮ್ಮ ಸಂದರ್ಶನದಲ್ಲಿ ಪ್ರಸ್ತಾಪಿಸಿದ್ದರು. ಪ್ರಭಾಕರ ಅವರನ್ನು ಭೇಟಿಯಾಗಬೇಕು ಎಂದು ಅನಿಸುತ್ತಿತ್ತು. ಅದರಲ್ಲೂ ಭಾರತದ ಶಾಕ್ತಪೀಠಗಳಲ್ಲಿ ಮುಖ್ಯವಾಗಿರುವ ಅಸ್ಸಾಮಿನ ಕಾಮಾಖ್ಯಕ್ಕೆ ಹೋಗಲು ಯತ್ನಿಸುತ್ತಿದ್ದ ನಾನು, ಅಲ್ಲೇ ಸಮೀಪದ ಗೌಹಾತಿಯಲ್ಲಿರುವ ಅವರನ್ನು ಕಾಣಲು ಹವಣಿಕೆ ಮಾಡಿಕೊಂಡಿದ್ದೆ. ಆದರೆ ಸಾರ್ವಜನಿಕ ವ್ಯಕ್ತಿಯಾಗಲು ನಿರಾಕರಿಸಿ ಅಜ್ಞಾತವಾಗಿಯೇ ಬಾಳುವ ಅವರು ಸುಲಭವಾಗಿ ಸಿಗುತ್ತಿರಲಿಲ್ಲ.
ನನ್ನ ತವಕವನ್ನರಿತಿದ್ದ ಕೆ.ರಾಮಯ್ಯ, ‘ಪ್ರಭಾಕರ್ ಕರ್ನಾಟಕಕ್ಕೆ ಬಂದಿದ್ದಾರೆ. ಬನ್ನಿ’ ಎಂದು ಅವರ ಮನೆಗೆ ಕರೆದುಕೊಂಡು ಹೋದರು. ಮಧ್ಯಾಹ್ನದ ಸುಡುಹೊತ್ತು. ಪ್ರಭಾಕರ ಪ್ರೀತಿಯಿಂದ ಬರಮಾಡಿಕೊಂಡು ನೊರೆ ತುಂಬಿದ ಒಗರು ಬೀರಿನ ಮಗ್ಗನ್ನು ಕೈಗೆ ಕೊಟ್ಟು, ಕಾಮಾಖ್ಯದ ಬಗ್ಗೆಯೂ ತಂತ್ರ ಪಂಥದ ಬಗ್ಗೆಯೂ ಇರುವ ಕೃತಿಗಳನ್ನು ತೋರಿಸುತ್ತ, ಗಂಟೆಗಟ್ಟಳೆ ಮಾತಾಡಿದರು. ಅರಿವಿನ ಕಿಡಿಗಳು ಹಾರುವ ಅದೊಂದು ವಿದ್ವತ್ಪೂರ್ಣ ಹರಟೆ.
ನಾನು ಅವರಲ್ಲಿ ಶಿಷ್ಯವೃತ್ತಿ ಸ್ವೀಕರಿಸಿ ಹಲವಾರು ಸಲ ಕೋಲಾರಕ್ಕೆ ಹೋಗಿ ಬಂದಿದ್ದೇನೆ. ಅವರ ಮಾತುಕತೆಗಳಲ್ಲಿ ನನಗೆ ಮುಖ್ಯವಾಗಿ ಕಂಡಿದ್ದು, ಜಾತ್ಯತೀತವಾದ ಮನಸ್ಸು; ಸಣ್ಣಪುಟ್ಟ ಸಂಗತಿಗಳ ಮೇಲೂ ಕಾಳಜಿಯಿಂದ ಸೂಕ್ಷ್ಮವಾಗಿ ಚಿಂತಿಸುವ ಮಾನವೀಯತೆ; ಗತಕಾಲದ ಬಗ್ಗೆ ಹಳಹಳಿಕೆಯಿಲ್ಲದೆ ವರ್ತಮಾನದ ಸಮಸ್ಯೆಗಳನ್ನು ಕುರಿತು ಚಿಂತಿಸುವ ಪ್ರಖರವೂ ನಿಷ್ಠುರವೂ ಆದ ರಾಜಕೀಯ ಪ್ರಜ್ಞೆ. ಸಾರ್ವಜನಿಕ ಬದುಕಿನಲ್ಲಿ ಜಾತಿಪದ್ಧತಿ ಎಲ್ಲೆಮೀರಿ ನಿರತವಾಗಿರುವ ಕುರಿತ ಹೇವರಿಕೆ. ಹಿರಿಯ ಲೇಖಕರಲ್ಲಿ ಸಾಮಾನ್ಯವಾಗಿ ಎರಡು ಸ್ವಭಾವಗಳಿರುತ್ತವೆ. ಒಂದು- ಕಳೆದುಹೋದ ಕಾಲದ ಬಗ್ಗೆ ಭಾವುಕ ಮರುಕಳಿಕೆ. ಎರಡು-ವರ್ತಮಾನದ ಸಾಮಾಜಿಕ ರಾಜಕೀಯ ವೈರುಧ್ಯಗಳನ್ನು ಉದಾರವಾಗಿ ನೋಡುತ್ತ, ಚಿಂತನೆಯ ಮೊನಚನ್ನು ಕಳೆದುಕೊಳ್ಳುವುದು. ಆದರೆ ಆತ್ಮಕ್ಕೆ ಸದಾ ಬೆಂಕಿ ಹತ್ತಿಸಿಕೊಂಡಂತೆ ಉರಿಯುವ ಕೆಲವರಿದ್ದಾರೆ. ಕೋಚೆ, ಕುಸುಮಾಕರ ದೇವರಗೆಣ್ಣೂರ, ಎಂ.ಡಿ. ನಂಜುಂಡಸ್ವಾಮಿ, ನೀಲಗಂಗಯ್ಯ ಪೂಜಾರ, ಕೆ.ರಾಘವೇಂದ್ರರಾವ್, ಅಬ್ಬಿಗೇರಿ ವಿರೂಪಾಕ್ಷಪ್ಪ, ಸಾರಾ ಅಬೂಬಕರ್, ಕಾಮರೂಪಿ ಪ್ರಭಾಕರ-ಇವರೆಲ್ಲ ಇಂತಹವರು. ಈ ಹಿರಿಯರ ಜತೆ ಮಾತಾಡುವಾಗ ಇವರ ಹಠಮಾರಿತನ, ಜಗಳಗಂಟಿತನ, ಆದರ್ಶವಾದ, ನೈತಿಕ ಪ್ರಜ್ಞೆ ಹಾಗೂ ಭಿನ್ನಮತ ಇಷ್ಟವಾಗುತ್ತದೆ.
ಕರ್ನಾಟಕದಿಂದ ಬಹುಕಾಲ ದೂರವಿದ್ದ ಕಾರಣದಿಂದ ಏರ್ಪಟ್ಟಿರುವ ಅಪರಿಚಿತತೆಯಿಂದಲೊ ಅಥವಾ ಕರ್ನಾಟಕದ ಒಳಗೇ ಇದ್ದೂಇದ್ದೂ ನಮಗೆ ಕಾಣದಂತಾಗಿರುವ ವೈರುಧ್ಯಗಳು ‘ಹೊರಗಿನಿಂದ’ ಬಂದಿರುವ ಅವರಿಗೆ ಒಡೆದು ಕಾಣುತ್ತಿರುವುದರಿಂದಲೊ, ಪ್ರಭಾಕರ ಕರ್ನಾಟಕದ ಸಮಕಾಲೀನ ಸಾಂಸ್ಕೃತಿಕ ರಾಜಕಾರಣದ ವೈರುಧ್ಯಗಳ ಬಗ್ಗೆ ತೀಕ್ಷ್ಣವಾದ ಟಿಪ್ಪಣಿ ಮಾಡುತ್ತಿರುತ್ತಾರೆ; ಕನ್ನಡಿಗರ ಸ್ವಭಾವದಲ್ಲೇ ವ್ಯಕ್ತಿನಿಷ್ಠೆಗಾಗಿ ವಿಮರ್ಶೆಯ ನಿಷ್ಠುರತೆ ಬಿಟ್ಟುಕೊಡುವ, ಸಜ್ಜನಿಕೆಯ ಭಾಷೆಯಲ್ಲಿ ವಾಸ್ತವವನ್ನು ಅಡಗಿಸುವ ಪ್ರವೃತ್ತಿಯಿದೆ ಎಂದು ಹೇಳುತ್ತಿರುತ್ತಾರೆ. ಸಂಘಟಕರೊಬ್ಬರು ಕಾರ್ಯಕ್ರಮವೊಂದಕ್ಕೆ ಕರೆಸಿಕೊಂಡು ಪರಿಚಯ ಭಾಷಣದಲ್ಲಿ ತಮ್ಮನ್ನು ಅತಿಯಾಗಿ ಹೊಗಳಿದ್ದನ್ನು ನೆನೆಯುತ್ತ ಅವರೊಮ್ಮೆ ಹೇಳಿದರು: “ಏನ್ ಸ್ವಾಮಿ ಕನ್ನಡಿಗರು? ಎಷ್ಟು ಉದಾರತೆ! ನನ್ನ ಬಗ್ಗೆ ಅವರಿಗೆ ಏನೂ ಗೊತ್ತಿಲ್ಲ. ನಾನು ಎಲ್ಲ ಸೇರಿದರೆ ನೂರೈವತ್ತು ಪುಟಗಳನ್ನೂ ಬರೆದಿಲ್ಲ. ಕನ್ನಡಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟಿಲ್ಲ. ಆದರೂ ವಾಚಾಮಗೋಚರ ಹೊಗಳಿಬಿಟ್ಟರು. ಕರ್ನಾಟಕದಲ್ಲಿ ಮಾತಿಗೆ ಬೆಲೆಯೇ ಇದ್ದಂತಿಲ್ಲ.’’
ಇದನ್ನು ಕೇಳುವಾಗ ಈಚೆಗೆ ಕಲ್ಕತ್ತಾದಲ್ಲಿ ನಾನು ಕಂಡ, ಹಿರಿಯ ಲೇಖಕ ರುದ್ರಪ್ರತಾಪ ಸೇನರ ಸನ್ಮಾನ ಕಾರ್ಯಕ್ರಮ ನೆನಪಾಯಿತು. ಸೇನರಿಗೆ 75ವರ್ಷ ತುಂಬಿದ ನೆಪದಲ್ಲಿ ಇರಿಸಿಕೊಂಡಿದ್ದ ಆ ಕಾರ್ಯಕ್ರಮ ಎಷ್ಟು ವಿಮರ್ಶಾತ್ಮಕವಾಗಿತ್ತು ಎಂದರೆ, ಅವರ ಶಿಷ್ಯರು ತಮ್ಮ ಗುರುವಿನ ಜತೆ ಕೋರ್ಟ್ಮಾರ್ಶಲ್ ನಡೆಸುವವರ ಹಾಗೆ ಪ್ರಶ್ನೆ ಕೇಳುತ್ತಿದ್ದರು. ಸೇನರು ಆ ಕಟುತರ ಪ್ರಶ್ನೆಗಳಿಗೆಲ್ಲ ಪ್ರಾಮಾಣಿಕವಾಗಿ ದ್ವಂದ್ವವಿಲ್ಲದೆ ಉತ್ತರಿಸುತ್ತಿದ್ದರು. ಹಿರಿಯರ ತಲೆಗೆ ಅಭಿನಂದನ ಗ್ರಂಥಗಳ ಸರಮಾಲೆಯನ್ನು ತಂದು ಕಟ್ಟಿ, ಎಗ್ಗಿಲದೆ ಹೊಗಳಿ ವೈಭವೀಕರಿಸುವ ಪದ್ಧತಿಯಿರುವ ಕರ್ನಾಟಕದಲ್ಲಿ, ಈ ಪರಿಯ ನಿಷ್ಠುರತೆ ಕಲ್ಪಿಸಿಕೊಳ್ಳುವುದೇ ಕಷ್ಟ.
ತೋರುಗಾಣಿಕೆಯನ್ನು ಸದಾ ನಿರಾಕರಿಸುವ ಪ್ರಭಾಕರ ಅವರಲ್ಲಿ, ಅವರ ಖಂಡಿತವಾದಿ ನಿಲುವಿಗೆ ಅಷ್ಟೊಂದು ತಾಳೆಯಾಗದ ಇನ್ನೊಂದು ಮುಖವಿದೆ. ಅದೆಂದರೆ, ಜೀವನಪ್ರೀತಿಯ ಸಂಕೇತದಂತಿರುವ ತಮಾಶೆ ಮತ್ತು ಪೋಲಿತನ. ಈ ತಮಾಶೆಯ ಗುಣ ಅದ್ಭುತ ನಾಟಕೀಯ ಶೈಲಿಯಾಗಿ ಅವರ ಕಥೆ ಕಾದಂಬರಿಗಳಲ್ಲೆಲ್ಲ ಆವರಿಸಿಕೊಂಡಿದೆ. ತಮಗೆ ಪಾಠ ಹೇಳಿದ ಗುರುಗಳ ವೈಯಕ್ತಿಕ ಬದುಕಿನಲ್ಲಿದ್ದ ಸನಾತನವಾದ ಮತ್ತು ತರಗತಿಗಳಲ್ಲಿ ಕನ್ನಡ ಬಳಸದ ಅವರ ಇಂಗ್ಲಿಷಿನ ವ್ಯಾಮೋಹ ಕುರಿತಂತೆ, ಅವರಲ್ಲಿ ಸ್ವಾರಸ್ಯಕರ ಮಾಹಿತಿಗಳಿವೆ. ಪ್ರಭಾಕರ ಅವರು ಆಪ್ತರ ಎದುರು ತಾವು ಬರೆದಿರುವ ಅಪ್ರಕಟಿತ ಪೋಲಿ ಪದ್ಯಗಳನ್ನು ವಾಚಿಸುವುದುಂಟು. ಬಹುಶಃ ಇದು ಅವರ ಗೆಳೆಯರಾಗಿದ್ದ ಎಚ್.ಎಸ್. ಬಿಳಿಗಿರಿಯವರ ಸಹವಾಸ ಫಲವಿರಬೇಕು.
ಒಂದೇ ವ್ಯಕ್ತಿತ್ವದಲ್ಲಿ ಒಟ್ಟಿಗೇ ಇರಲು ಕಷ್ಟವೆನಿಸಬಹುದಾದ ಇನ್ನೂ ಅನೇಕ ಸಂಗತಿಗಳು ಅವರಲ್ಲಿ ಸಹಜವಾಗಿ ನಿರಾಳವಾಗಿ ಇವೆ. ಉದಾ.ಗೆ, ಬಹುಭಾಷಿಕರಾದ ಅವರ ಮನೆಮಾತು ತಮಿಳುಗನ್ನಡ; ಬರವಣಿಗೆ ಕನ್ನಡ ಮತ್ತು ಇಂಗ್ಲೀಶಿನಲ್ಲಿ; ಸಂಸ್ಕೃತ ಅಸ್ಸಾಮಿ ಬಂಗಾಳಿ ಭಾಷೆಗಳಲ್ಲಿ ದೊಡ್ಡ ವಿದ್ವತ್ತು. (ಅವರ ಅಸ್ಸಾಮಿ ಬಂಗಾಳಿ ತಿಳಿವಳಿಕೆಯಿಂದ ಕನ್ನಡಕ್ಕೆ ಪ್ರಯೋಜನವಿನ್ನೂ ಆಗಿಲ್ಲ). ಪಂಪ ಅವರ ಇಷ್ಟದ ಕವಿ. ಮೂಲತಃ ಇಂಗ್ಲೀಶ್ ಸಾಹಿತ್ಯದ ವಿದ್ಯಾರ್ಥಿಯಾದರೂ ಸಾಹಿತ್ಯಕ್ಕಿಂತ ಹೆಚ್ಚಾಗಿ ಅಂತರಾಷ್ಟ್ರೀಯ ರಾಷ್ಟ್ರೀಯ ರಾಜಕಾರಣದ ಮೇಲೆ ಹೆಚ್ಚು ಬರೆವಣಿಗೆ. ಅದರಲ್ಲೂ ಈಶಾನ್ಯ ಭಾರತದ ರಾಜಕಾರಣ ಭಾಷೆ ಧರ್ಮ ಸಂಸ್ಕೃತಿ ಕುರಿತ ಅವರ ತಿಳಿವಳಿಕೆ ಅಪರೂಪದ್ದು. ಇವನ್ನೆಲ್ಲ ಒಟ್ಟಿಗೆ ಹೇಗೆ ಕಲ್ಪಿಸಿಕೊಳ್ಳುವುದು? ಪ್ರಭಾಕರ ತಮ್ಮ ಕಾದಂಬರಿಯ ಒಂದು ಪಾತ್ರದ ಹಾಗೇ ಬದುಕಿದ್ದಾರೆ.
ಅವರು ಈಚೆಗೆ ಮಾತಾಡುತ್ತ ಕೊಂಚ ದಣಿದ ದನಿಯಲ್ಲಿ “ಸ್ವಾಮಿ, ಕರ್ನಾಟಕ ನನಗೆ ಸಾಕಾಗಿದೆ. ಗೌಹಾಟಿಗೆ ಹೋಗಬೇಕು ಅನಿಸುತ್ತಿದೆ’ ಎಂದು ಗೊಣಗಿದರು. “ಹೋಗಿ. ಆದರೆ ಮತ್ತೆಬನ್ನಿ’’ ಎಂದೆ. ಅವರಲ್ಲಿ ಕೋಲಾರ-ಗೌಹಾತಿಗಳ ನಡುವೆ ವಿಚಿತ್ರವಾದ ಆಕರ್ಷಣೆ ವಿಕರ್ಷಣೆಯಿದೆ. ಇದು ಬಹುಕಾಲ ಬೇರೆಡೆ ಬೆಳೆದ ಮರ ತನ್ನ ಮೂಲನೆಲಕ್ಕೆ ಬಂದು ನಾಟಿಗೊಂಡರೆ ಬೇರೂರುವ ಕಷ್ಟ. ಮರಳಿ ಹುಟ್ಟಿದೂರಿಗೆ ಬರುವಿಕೆ ಬಾಲ್ಯದ ನೆನಪುಗಳನ್ನು ಎಚ್ಚರಿಸಿ ಸುಖ ಕೊಡುತ್ತದೆ; ಆದರೆ ಹೊಚ್ಚ ಹೊಸತೆೆನಿಸುವಷ್ಟು ಬದಲಾಗಿರುವ ಪರಿಸರವು, ಕಾಡುವ ಏಕಾಂಗಿತನವನ್ನೂ ತಂದಿಡುತ್ತದೆ. ಯಾರ ಮರುಕವನ್ನೂ ಬಯಸದೆ ಏಕಾಂತದಲ್ಲಿ ಘನತೆಯಿಂದ ಕೊನೆಯ ದಿನಗಳನ್ನು ಕಳೆಯ ಬಯಸುವ ಇಂತಹ ಹಠಮಾರಿ ಜೀವಗಳು, ಒಳಗೇ ಮೃದ್ವಂಗಿಗಳಾಗಿ ಆಪ್ತಸಂಗಾತಕ್ಕೆ ಹಾತೊರೆಯುತ್ತಿರುತ್ತವೆ.
ಆ ಸಂಗಾತದ ಸ್ವರೂಪ ಎಂತಹುದು ಎಂದು ಸ್ಪಷ್ಟವಾಗುವುದಿಲ್ಲ. ನಾನು ‘ಕಾಮರೂಪಕ್ಕೆ ಯಾವಾಗ ಹೋಗುತ್ತೀರಿ’ ಎಂದು ಕೇಳಿದೆ: ‘ಆದಿಮದ 50ನೇ ಬೆಳುದಿಂಗಳ ಕಾರ್ಯಕ್ರಮ ಮುಗಿಸಿಕೊಂಡು’ ಎಂದರು.
ಪ್ರತಿಯೊಬ್ಬರಿಗೂ ಬಾಳಿನಲ್ಲಿ ಬಹುರೂಪಧಾರಣೆ ಮಾಡಬೇಕಾದ ಒತ್ತಡಗಳು ಎದುರಾಗಬಹುದು. ಆದರೆ ಈ ರೂಪಧಾರಣೆಗೆ ಕಾರಣ, ನಮ್ಮ ಇಚ್ಛಾನಿಚ್ಛೆಗಳು ಮಾತ್ರವಲ್ಲ, ಬಾಳಿನ ಅನೂಹ್ಯ ಒತ್ತಡಗಳು ಸಹ. ಈ ಒತ್ತಡಗಳು ಬರೆಹ ಇಲ್ಲವೇ ಮಾತಿನ ವ್ಯಾಖ್ಯಾನಕ್ಕೆ ಕೆಲವೊಮ್ಮೆ ನಿಲುಕುವಂತೆ ಇರುವುದಿಲ್ಲ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ6 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ6 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ6 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ಕವಿತೆ | ನೆನಪು
-
ದಿನದ ಸುದ್ದಿ3 days ago
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
-
ದಿನದ ಸುದ್ದಿ2 days ago
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ