Connect with us

ಅಂತರಂಗ

ಅರಿಮೆಯ ಅರಿವಿರಲಿ-8 : ಶೀಲ ಅಶ್ಲೀಲ

Published

on

  • ಯೋಗೇಶ್ ಮಾಸ್ಟರ್

ಶೀಲದ ಗೀಳಿನ ಸಿನಿಮಾಗಳು

ಶೀಲ ಅಶ್ಲೀಲದರಿಮೆ (Madonna/Whore Complex)ನಮ್ಮ ಭಾರತೀಯ ಸಿನಿಮಾಗಳಲ್ಲಿ ಚೆನ್ನಾಗಿ ಅರ್ಥವಾಗುತ್ತದೆ. ಪಾಪ, ಅವರಾದರೋ ಹೊಸದನ್ನೇನೂ ಸೃಷ್ಟಿಸಿ ತೋರುವುದಲ್ಲ. ಸಮಾಜದಲ್ಲಿ ಸಾಮಾನ್ಯವಾಗಿರುವ ಮನಸ್ಥಿತಿಯನ್ನೇ ವಿಜೃಂಭಿಸಿ ತೋರಿಸುತ್ತಾರೆ. ಆಗ ಸಮಾಜವೂ ಅದನ್ನು ಮೆಚ್ಚುವುದು ಮಾತ್ರವಲ್ಲದೇ ತನ್ನ ವ್ಯವಸ್ಥೆಯನ್ನು ಮತ್ತಷ್ಟು ಬಲಗೊಳಿಸಿಕೊಳ್ಳುತ್ತದೆ.

“ಹೆಣ್ಣಿನ ಬಾಳು ಹಣ್ಣಿನ ಹೋಳು, ಜಾರಿದರೊಮ್ಮೆ ಮಣ್ಣಿನ ಧೂಳು” ಎಂದು ಹಾಡುವ ಹೆಣ್ಣು ತನ್ನ ಶೀಲವನ್ನು ಎಷ್ಟು ಎಚ್ಚರಿಕೆಯಿಂದ ಕಾಪಾಡಿಕೊಳ್ಳಬೇಕು. ಬಹಳ ಸೂಕ್ಷ್ಮವಾಗಿರುವ ಗಾಜಿನ ವಸ್ತುವಂತೆ ಶೀಲ ಎನ್ನುವುದು. ಒಮ್ಮೆ ಬಿತ್ತೋ, ಒಡೆದು ಹೋಯಿತೋ, ಮುಗಿಯಿತು. ಅದಿನ್ನು ಬಿಸಾಡಬೇಕು. ತ್ರಿವೇಣಿಯವರ ಶರಪಂಜರದಲ್ಲಿ ಕಾವೇರಿಗೆ ಆವರಿಸಿದ್ದ ಸಮಸ್ಯೆ ಇದೆಯೇ. ಅಂದೆಂದೋ ಅಲ್ಲೆಲ್ಲೋ ಯಾರೊಂದಿಗೋ ಕಲೆತಿದ್ದ ವಿಷಯವನ್ನು ಯಾರೊಂದಿಗೂ ಹೇಳಿಕೊಳ್ಳದೇ ಹೋಗಿದ್ದಳು. ಯಾರಿಗೂ ಅದು ಗೊತ್ತಿಲ್ಲದಿದ್ದರೂ ಅವಳಿಗೇ ಅದನ್ನು ಸಮ್ಮತಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅದೇ ಮನೋರೋಗದಲ್ಲಿ ಬಳಲುವ ಅವಳು ಸಾಮಾಜಿಕ ಮತ್ತು ಕೌಟುಂಬಿಕ ಸಂಘರ್ಷಗಳಿಂದ ಸಮಸ್ಯೆ ಬಗೆಹರಿಯದೇ ಮತ್ತೆ ಮನೋರೋಗಿಯಾಗಿಯೇ ಉಳಿದುಬಿಡುತ್ತಾಳೆ.

ಈಗಾದರೂ ಅತ್ಯಾಚಾರಕ್ಕೊಳಗಾದ ಹೆಣ್ಣಿನ ನೋವು ಮತ್ತು ಅತ್ಯಾಚಾರಿಯ ದೌರ್ಜನ್ಯ ಮತ್ತು ಕ್ರೌರ್ಯವನ್ನು ನಾವು ಗುರುತಿಸುತ್ತಿದ್ದೇವೆ. ಆದರೆ ಈ ಮೊದಲು ನಮ್ಮ ಸಿನಿಮಾಗಳಲ್ಲಿ ಕ್ರೌರ್ಯ ಮತ್ತು ನೋವಿಗಿಂತಲೂ ಕೇಂದ್ರೀಕರಿಸುತ್ತಿದ್ದದ್ದು ಶೀಲವನ್ನು ಕಳೆದುಕೊಂಡಳು ಎಂಬ ವಿಷಯದ ಕುರಿತು. ಮಕ್ಕಳ ಸೈನ್ಯ ಸಿನಿಮಾದಲ್ಲಿ ನಾಯಕ ಮತ್ತು ನಾಯಕಿಗೆ ಅನೇಕ ಮಕ್ಕಳಿರುತ್ತಾರೆ. ಚಿತ್ರದಲ್ಲಿ ತೋರುವಂತೆ ಆತ ವಿಧುರ ಮತ್ತು ಆಕೆ ವಿಧವೆ. ಅವರಿಬ್ಬರೂ ಪ್ರೀತಿಸುತ್ತಾರೆ. ಅವರಿಬ್ಬರಿಗೂ ಇದ್ದ ಸಮಸ್ಯೆ ಮಕ್ಕಳ ಸಾಮರಸ್ಯ. ಅದೆಲ್ಲಾ ಸರಿ ಹೋಗುತ್ತದೆ. ಕೊನೆಗೆ ಅವರಿಬ್ಬರೂ ಮದುವೆಯಾಗುತ್ತಾರೆ.

ಆದರೆ, ಇಲ್ಲಿ ಶೀಲ ಅಶ್ಲೀಲದ ಅರಿಮೆ ತಲೆ ಎತ್ತುತ್ತದೆ. ನಾಯಕಿ ವಿಧವೆಯಾಗಿದ್ದರೆ ಮತ್ತು ಹಲವು ಮಕ್ಕಳ ತಾಯಿ ಎಂದರೆ ಹಿಂದಿನ ಗಂಡನ ಜೊತೆ ಮಲಗಿರುವಾಕೆ. ಈಗ ನಾಯಕನಿಗೆ ಆಕೆ ಕನ್ಯೆಯಲ್ಲ. ಹಾಗಾಗಿ ಕತೆಯಲ್ಲಿ ಒಂದು ಟ್ವಿಸ್ಟ್. ಏನೆಂದರೆ ಆ ಮಕ್ಕಳೆಲ್ಲಾ ಅವಳ ಮಕ್ಕಳಲ್ಲ. ಅವಳ ಅಕ್ಕನದು. ಅವಳು ಅಪಘಾತವೊಂದರಲ್ಲಿ ಸತ್ತಿರುತ್ತಾಳೆ. ಹೀಗೆ ನಾಯಕಿಯನ್ನು ಶೀಲವಂತೆಯಾಗಿ ಉಳಿಸಿದ್ದಾಯಿತು. ಒಂದೆರಡಲ್ಲ, ಇಂತಹ ಉದಾಹರಣೆಗಳು ಸಾಲುಸಾಲು. ಒಬ್ಬಳು ಅತ್ಯಾಚಾರಕ್ಕೆ ಒಳಗಾದರೆ ಅಥವಾ ಪ್ರೀತಿಸಿ, ಮಲಗಿ, ಗರ್ಭಧರಿಸಿದರೆ ಅವಳು ಕಡ್ಡಾಯವಾಗಿ ಕೆರೆನೋ ಬಾವಿಯನ್ನೋ ನೋಡಿಕೊಳ್ಳಲೇ ಬೇಕು.

ಮೊದಲೇ ಹೇಳಿದಂತೆ ಇದು ಸಿನಿಮಾದವರ ಸಮಸ್ಯೆಯಲ್ಲ. ಸಮಾಜದಲ್ಲಿ ವ್ಯಾಪಕವಾಗಿದ್ದಂತಹ ಮನಸ್ಥಿತಿಯನ್ನು ಅವರು ಗಟ್ಟಿಗೊಳಿಸುತ್ತಾರೆ. ಇಲ್ಲವಾದರೆ ಅವರ ಸಿನಿಮಾವನ್ನು ಜನ ತಿರಸ್ಕರಿಸುತ್ತಾರೆ. ಮುತ್ತು ಒಂದು ಮುತ್ತು ಎಂಬ ಸಿನಿಮಾ. ಎಂ ಕೆ ಇಂದಿರಾ ಅವರ ಕಾದಂಬರಿ ಆಧಾರಿತ. ಅನಂತನಾಗ್ ನಾಯಕ, ರೂಪಾ ಚಕ್ರವರ್ತಿ ನಾಯಕಿ. ಆ ಸಿನಿಮಾದಲ್ಲಿ ಒಳ್ಳೆಯ ಹಾಡುಗಳಿದ್ದವು, ನಾಯಕ ನಾಯಕಿ ಎಲ್ಲರೂ ಚೆನ್ನಾಗಿ ಅಭಿನಯಿಸಿದ್ದರು. ಆದರೆ ಸಿನಿಮಾ ಸೋತಿತು. ಏಕೆಂದರೆ, ನಾಯಕಿ ಒಬ್ಬಳು ಮೂಗಿ. ಅವಳು ಎಲ್ಲೋ ಬೆಳೆಯುತ್ತಿರುತ್ತಾಳೆ. ನಾಯಕ ನೋಡುತ್ತಾನೆ ಪ್ರೀತಿಸುತ್ತಾರೆ. ಮದುವೆಯಾಗಬೇಕೆಂದು ಬಯಸುತ್ತಾರೆ. ನಾಯಕಿಯ ತಾಯಿಯೂ ವಿರೋಧಿಸುತ್ತಾರೆ. ನಾಯಕನ ತಂದೆಯೂ ವಿರೋಧಿಸುತ್ತಾರೆ. ಕಾರಣ ಹೇಳಿರುವುದಿಲ್ಲ.

ನಾಯಕ ಮತ್ತು ನಾಯಕಿ ಎಲ್ಲರ ವಿರೋಧವನ್ನು ಮೀರಿ ದೇವಸ್ಥಾನದಲ್ಲಿ ಮದುವೆಯಾಗುವಾಗ ತಂದೆ ಓಡೋಡಿ ಬರುತ್ತಾನೆ. ಮದುವೆಯನ್ನು ನಿಲ್ಲಿಸಲು ಆದರೆ ಕೈಗೆ ಅಕ್ಷತೆ ಕೊಟ್ಟುಬಿಡುತ್ತಾರೆ. ಅವನು ಹಾಕಿಬಿಡುತ್ತಾನೆ.ಮದುವೆಯಾಗಿಬಿಡುತ್ತದೆ. ವಿಷಯ ತಿಳಿಯುತ್ತದೆ. ಏನೆಂದರೆ, ಅವರಿಬ್ಬರೂ ಒಂದೇ ತಂದೆಯ, ಆದರೆ ಬೇರೆ ಬೇರೆ ತಾಯಿಯ ಮಕ್ಕಳು. ಬೇರೆ ಬೇರೆ ಕಡೆ ಬೆಳೆದಿರುತ್ತಾರೆ. ಮಾನವ ಸಂಬಂಧದಲ್ಲಿ ನೋಡಿದರೆ ಅವರಿಬ್ಬರೂ ಅಣ್ಣ ತಂಗಿಯರಾಗಬೇಕು. ಸಿನಿಮಾ ಗೆಲ್ಲಲಿಲ್ಲ. ಸಿನಿಮಾ ಮಾತ್ರವಲ್ಲ. ಅದು ಬಹಳ ಜನಪ್ರಿಯ ಮತ್ತು ನೇರ ಮಾಧ್ಯಮವಾದ್ದರಿಂದ ಉದಾಹರಣೆಯಾಗಿ ತೆಗೆದುಕೊಂಡೆ. ಇತರ ಕಲೆಗಳು ಮತ್ತು ಜನಪದವೂ ಸೇರಿದಂತೆ ಇತರ ಸಾಹಿತ್ಯವೂ ಕೂಡಾ ಶೀಲ ಅಶ್ಲೀಲಗಳಲ್ಲಿ ಮಿಂದೆದ್ದಿವೆ.

ಶೀಲ ಅಶ್ಲೀಲ

ಶೀಲ ಅಶ್ಲೀಲದ ಅರಿಮೆ ಸಾಮಾನ್ಯವಾಗಿ ಗಂಡಸರಲ್ಲಿಯೇ ಕಾಣುವುದು. ಅಥವಾ ಅವರಿಂದಲೇ ಪ್ರಾರಂಭವಾಗಿರುವುದು. ಗಂಡಸರು ಹೆಣ್ಣನ್ನು ಒಂದೋ ಶೀಲವಂತೆ ಅಥವಾ ಪತಿವ್ರತೆಯಾಗಿಯೇ ನೋಡಲು ಇಷ್ಟಪಡುವರು. ಇವರಿಗೆ ತನ್ನ ಹೆಣ್ಣು ಯಾರೊಂದಿಗೂ ಹಾಸುಗೆಯನ್ನು ಹಂಚಿಕೊಂಡಿರುವುದನ್ನು ಕಲ್ಪಿಸಿಕೊಳ್ಳಲೇ ಸಾಧ್ಯವಿಲ್ಲ. ಮದುವೆಯಾಗುವಾಗ ತಾನು ಮದುವೆಯಾಗುವ ಹೆಣ್ಣಿನ ಕನ್ಯಾಪೆÇರೆ ಹರಿದಿರಬಾರದು ಎಂದು ಆಶಿಸುವವರು ಇವರಂತವರೇ. ಅವರ ಮನಸ್ಸಿನಲ್ಲಿ ಪರಿಶುದ್ಧವಾಗಿರುವ ಅಥವಾ ಶೀಲವಂತೆಯಾಗಿರುವ ಹೆಣ್ಣಿನ ಚಿತ್ರಣವಿರುತ್ತದೆ. ಆ ವರ್ತನೆಗಳನ್ನು ಪ್ರದರ್ಶಿಸಿದರೆ, ಅವರ ಮಾನದಂಡಗಳ ಪ್ರಕಾರ ನಡೆದುಕೊಂಡರೆ ಅವರಿಗೆ ಸಮಾಧಾನವಿರುತ್ತದೆ. ಅದರಲ್ಲಿ ಏನೇನೆಲ್ಲಾ ಇರಬಹುದು. ತನ್ನ ಹೆಂಡತಿ ಅಥವಾ ತಮ್ಮ ಮನೆಯ ಹೆಣ್ಣು ಮಕ್ಕಳು ಯಾವ ಗಂಡಸರ ಜೊತೆಗೆ ಕೈ ಕುಲುಕಬಾರದು, ಗಾಡಿಯಲ್ಲಿ ಹಿಂದೆ ಕುಳಿತುಕೊಂಡು ಹೋಗಬಾರದು, ನಗುನಗುತ್ತಾ ಗಂಡಸರ ಜೊತೆ ಮಾತಾಡಬಾರದು; ಇತ್ಯಾದಿಗಳೂ ಕೂಡ.

ಶೀಲ ಅಶ್ಲೀಲವನ್ನು ಇನ್ನೂ ಸ್ವಲ್ಪ ನಿಖರವಾಗಿ ಸುಶೀಲ ದುಶ್ಶೀಲವೆಂದೂ ಕರೆಯಬಹುದು.
ಸಾಮಾನ್ಯವಾಗಿ ಶೀಲಾಧಾರಿತ ನಿಬಂಧನೆಗಳು ಆ ವ್ಯಕ್ತಿಯ ಪ್ರಾದೇಶಿಕ ಸಂಸ್ಕೃತಿಯನ್ನು ಅಥವಾ ವ್ಯಕ್ತಿಯು ಬೆಳೆದುಬಂದಿರುವ ಸಮಾಜೋಧಾರ್ಮಿಕ ಸಂಸ್ಕೃತಿಯನ್ನೂ ಅವಲಂಬಿಸಿರಬಹುದು. ಶೀಲೆ ದುಶ್ಶೀಲೆಯ ಅರಿಮೆ ಇರುವಂತಹ ರಾಜಾಸ್ತಾನದ ಪುರುಷನಿಗೆ ತಲೆಯ ಮೇಲೆ ಸೆರಗಿಲ್ಲದೆ ಓಡಾಡುವ ಹೆಣ್ಣು ಮಗಳು, ಇದೇ ಬಗೆಯ ಕಾಂಪ್ಲೆಕ್ಸ್ ಇರುವ ಮುಸಲ್ಮಾನ ಪುರುಷನಿಗೆ ದೇಹದ ಉಬ್ಬುತಗ್ಗುಗಳು ಕಾಣುವಂತೆ ಬಟ್ಟೆ ಧರಿಸಿರುವ ಹೆಣ್ಣು ದುಶ್ಶೀಲೆಯಾಗಿ ಕಾಣಬಹುದು. ಹಿಂದೂ ಸನಾತನ ಸಂಪ್ರದಾಯಸ್ಥನಿಗೆ ಸ್ಕರ್ಟ್ ಹಾಕಿರುವ ಹೆಣ್ಣುಮಗು ದುಶ್ಶೀಲೆಯಾಗಿಯೂ, ಸೀರೆ ಉಟ್ಟು ಮೈತುಂಬಾ ಸೆರಗನ್ನು ಹೊದ್ದವಳು ಸುಶೀಲೆಯಾಗಿಯೂ ತೋರುವಳು.

ಹೀಗೆ ಅವರವರ ಧಾರ್ಮಿಕತೆ, ಸಂಸ್ಕೃತಿ, ಸಾಮಾಜಿಕ ವ್ಯವಸ್ಥೆಗಳ ವಿನ್ಯಾಸಗಳೂ ಅವರ ಅರಿಮೆಗಳಲ್ಲಿ ಹೊಕ್ಕಿರುತ್ತವೆ. ಹಿಂದಿನ ಸಿನಿಮಾಗಳನ್ನು ನೆನಪಿಸಿಕೊಳ್ಳಿ. ಅವಳು ಶೀಲವಂತೆಯಾಗಿರಬೇಕೆಂದರೆ ಸೀರೆಯುಟ್ಟಿರಬೇಕು, ಮೈ ತುಂಬಾ ಸೆರಗು ಹೊದ್ದಿರಬೇಕು, ಹಣೆಯಲ್ಲಿ ಕುಂಕುಮವಿರಬೇಕು. ದೊಡ್ಡವರಿಗೆ ಗೌರವ ಕೊಡಬೇಕು. ಅವಳು ಖಂಡಿತ ದೈವಭಕ್ತೆಯಾಗಿರಬೇಕು. ಅವಳು ದುಶ್ಶೀಲೆಯಾಗಿದ್ದರೆ, ಪಾಶ್ಚಾತ್ಯ ಉಡುಪು ತೊಟ್ಟಿರುತ್ತಾಳೆ. ಹಣೆಯಲ್ಲಿ ಕುಂಕುಮವಿರುವುದಿಲ್ಲ. ಕೇರ್ ಫ್ರೀ ಆಗಿರುತ್ತಾಳೆ; ಇತ್ಯಾದಿ.

ಒಟ್ಟಾರೆ ಸುಶೀಲೆ ದುಶ್ಶೀಲೆಗಳ ಅರಿಮೆಯವರು ಹೆಣ್ಣನ್ನು ಯಾವಾಗಲೂ ವಿಪರೀತವಾದ ದೃಷ್ಟಿಕೋನಗಳಲ್ಲೇ ನೋಡುತ್ತಿರುತ್ತಾರೆ.ತಮ್ಮ ಸಂಪರ್ಕದ ಹೆಣ್ಣಿನ ಜೊತೆಗೆ ಯಾವುದೇ ರೀತಿಯ ಭಾವನಾತ್ಮಕ ಸಂಬಂಧ ಮತ್ತು ಲೈಂಗಿಕ ಸಂಬಂಧಗಳನ್ನು ಹೊಂದುವುದರಲ್ಲಿಯೂ ಈ ಅರಿಮೆ ಅವರನ್ನು ಬಹಳವಾಗಿ ಕಾಡುತ್ತಿರುತ್ತದೆ. ಈ ಅರಿಮೆಯಿಂದ ಬಳಲುತ್ತಿರುವವರ ವರ್ತನೆಯು ತಮ್ಮ ಹೆಣ್ಣುಗಳನ್ನು ಅನುಮಾಸ್ಪದವಾಗಿ ನೋಡುತ್ತಿರುವಂತೆಯೂ ಕಾಣುತ್ತದೆ. ಹೌದು ಕೂಡಾ. ಈ ಅರಿಮೆಯುಳ್ಳವರು ತಮ್ಮ ಹೆಣ್ಣು ಇನ್ನೊಬ್ಬ ಗಂಡಸರೊಂದಿಗೆ ಸಲುಗೆಯಿಂದ ವರ್ತಿಸಿದರೆ ಅವರು ಆ ಗಂಡಸನ್ನು ಬೈಯುವುದಿಲ್ಲ. ತಮ್ಮ ಹೆಂಗಸನ್ನೇ ಬೈಯುತ್ತಾರೆ, ಆಕ್ಷೇಪಿಸುತ್ತಾರೆ. ಹೆಣ್ಣಾದವಳು ಸರಿಯಾಗಿ ಇರಬೇಕು ಎಂದು. ತನ್ನ ಶೀಲವನ್ನು ಕಾಪಾಡಿಕೊಳ್ಳುವುದು ಅವಳದೇ ಹೊಣೆಗಾರಿಕೆ ಎಂದು ನಿರೀಕ್ಷಿಸುತ್ತಾನೆ.

ಶೀಲಪ್ರಮಾಣ

ಈ ಅರಿಮೆಯ ಗಂಡಸು ಸೌಂದರ್ಯವೋ ಅಥವಾ ಪ್ರತಿಭೆಯೋ ಅಥವಾ ಚಟುವಟಿಕೆಗಳೋ; ಯಾವುದೋ ರೀತಿಯಲ್ಲಿ ತನಗೆ ಆಕರ್ಷಕವಾದಂತಹ ಹೆಣ್ಣಿಗೆ ಮಾರು ಹೋಗುತ್ತಾನೆ. ಆದರೆ ಆ ಆಕರ್ಷಣೆ ಅವನಲ್ಲಿ ಬಹುಕಾಲ ನಿಲ್ಲದು. ಅವನು ಅವಳ ಸುಶೀಲ ಮತ್ತು ದುಶ್ಶೀಲಗಳ ಮಾನದಂಡದಲ್ಲಿಯೇ ಅಳೆಯಲು ಪ್ರಾರಂಭಿಸಿ ನಂತರ ಅವನಿಂದ ಗುಣಪ್ರಮಾಣಪತ್ರವನ್ನು ಪಡೆಯದಿದ್ದರೆ ಸಂಘರ್ಷ ಪ್ರಾರಂಭವಾಗುತ್ತದೆ.ಇದು ಗಂಡಸಿನ ಸಮಸ್ಯೆ ಎಂದು ನಿರಾಳವಾಗಲು ಆಗದು. ಈ ಅರಿಮೆ ಹೆಂಗಸರಲ್ಲಿಯೂ ಇರುತ್ತದೆ. ತಮ್ಮಂತದೇ ಹೆಣ್ಣು ಸುಶೀಲೆಯೋ ದುಶ್ಶೀಲೆಯೋ ಎಂದು ಆಲೋಚಿಸುತ್ತಿರುತ್ತಿರುತ್ತಾರೆ. ಅವರ ಮಾನದಂಡದ ಪ್ರಕಾರ ಇರದ ಹೆಣ್ಣು ಮಕ್ಕಳನ್ನು ತಿರಸ್ಕರಿಸುತ್ತಾರೆ. ನಿಂದಿಸುತ್ತಾರೆ. ಅನುಮಾನದಿಂದ ನೋಡುತ್ತಾರೆ. ಅಷ್ಟೆಲ್ಲಾ ಏಕೆ? ಹೆಂಗಸರನೇಕರು ಇತರ ಹೆಂಗಸರು ತುಂಡು ಬಟ್ಟೆಯನ್ನು ಧರಿಸುವುದು, ಅಥವಾ ಮೈ ಕಾಣುವಂತ ವಿನ್ಯಾಸವಿರುವ ವಸ್ತ್ರವನ್ನು ಧರಿಸುವುದನ್ನೂ ಕೂಡಾ ಸಹಿಸುವುದಿಲ್ಲ. ಅವರಿಗೆ ಅಂತವನ್ನು ಕಾಣುವುದು ತೀರಾ ಮುಜುಗರ.

ಆದ್ದರಿಂದಲೇ ವಸ್ತ್ರಸಂಹಿತೆಯನ್ನು ಸಂಸ್ಕೃತಿಯ ಅಥವಾ ಧಾರ್ಮಿಕತೆಯ ಭಾಗವನ್ನಾಗಿಸಿಕೊಂಡು ಅದನ್ನು ಎತ್ತಿ ಹಿಡಿಯುತ್ತಾ ತಮ್ಮ ತಿರಸ್ಕಾರವನ್ನು ವ್ಯಕ್ತಪಡಿಸುತ್ತಿರುತ್ತಾರೆ. ಈ ಅರಿಮೆಯ ಅಸಹನೆಯು ಯಾವ ಯಾವ ವಿಪರೀತಗಳನ್ನು ಮುಟ್ಟುವುದೋ ಹೇಳಲಾಗದು. ಈ ಅರಿಮೆಯಿಂದಲೇ ಅನೇಕಾನೇಕ ಬೈಗುಳಗಳು ಹೆಣ್ಣನ್ನು ಕೇಂದ್ರೀಕರಿಸಿರುವವು. ಇಂಗ್ಲೀಶಲ್ಲಿ ಬಿಚ್, ವೋರ್ ಇಂದ ಹಿಡಿದು ಕನ್ನಡದ ಸೂಳೆ, ಬೋಳಿಮಗನೇ, ಸೂಳೆಮುಂಡೆ, ಹಾದರಗಿತ್ತಿ, ಚಿನ್ನಾಲಿ, ಚಂಬೇಲಿ; ಇನ್ನೂ ಅನೇಕಾನೇಕ ಪದಗಳು ಹುಟ್ಟಿರುವವು.

ಒಟ್ಟಾರೆ ಸುಶೀಲ ದುಶ್ಶೀಲದ ಅರಿಮೆಯ ಬಲಿಪಶು ಹೆಣ್ಣು. ಅದು ಹೆಣ್ಣಿಗಿರಲಿ ಗಂಡಿಗಿರಲಿ. ಗಂಡು ತಪ್ಪು ಮಾಡಿದರೂ ಅವನನ್ನು ಬೈಯುವುದು ಹೆಣ್ಣಿನ ಮೂಲದಿಂದಲೇ. ಗಂಡಸರು ಜಗಳವಾಡುವಾಗಲೂ ಪರಸ್ಪರ ತಾಯಿ, ಹೆಂಡತಿ, ಸೋದರಿಯರನ್ನು ಲೈಂಗಿಕ ಸಂಬಂಧದ ಬೈಗುಳಗಳಲ್ಲಿ ಬಳಸಿಕೊಳ್ಳುವುದು ಈ ಅರಿಮೆಯ ಅಭಿವ್ಯಕ್ತಿಯೇ. ಎಷ್ಟೋ ಗಂಡಸರು ವಿಧವೆಯರ ಮತ್ತು ವಿಚ್ಛೇದಿತರ ವಿವಾಹಗಳನ್ನು ಪುರಸ್ಕರಿಸುತ್ತಾರೆ. ಬೆಂಬಲಿಸುತ್ತಾರೆ. ಆದರೆ ತಾವು ಮಾತ್ರ ಅಂತಹ ವಿವಾಹಗಳನ್ನು ಮಾಡಿಕೊಳ್ಳಲು ಬಯಸುವುದಿಲ್ಲ. ತಮ್ಮ ಹೆಣ್ಣು ಕನ್ಯೆಯೇ ಆಗಿರಬೇಕೆಂದು ಬಯಸುತ್ತಾರೆ. ತಮ್ಮ ಹೆಣ್ಣು ಬೇರೆ ಪುರುಷನೊಂದಿಗೆ ಮಲಗಿಕೊಂಡಿರುವುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ.

ಹಾಗೆಯೇ ಕೆಲವು ಕೆಟಗೆರಿ ಪುರುಷರು ತಮಗೆ ಯಾವುದೇ ಹೆಣ್ಣು ನಿರಾಯಾಸವಾಗಿ ತಮ್ಮ ಲೈಂಗಿಕ ವಾಂಛೆಗೆ ಬಳಕೆಯಾಗುವುದನ್ನು ಬಯಸುತ್ತಾರೆ ಮತ್ತು ಸುಖಿಸುತ್ತಾರೆ. ಆದರೆ, ತಮ್ಮ ಮನೆಯ ಹೆಣ್ಣುಮಕ್ಕಳು ಆ ರೀತಿಯಲ್ಲಿ ಎಲ್ಲಿ ಬಳಕೆಯಾಗಿಬಿಡುತ್ತಾರೋ ಎಂಬ ಅನುಮಾನ ಮತ್ತು ಭಯದಿಂದ ಅತಿಯಾದ ಗಮನವನ್ನು ಕೊಡುತ್ತಾರೆ. ಇದರಿಂದ ಅವರ ಮನೆಯ ಹೆಣ್ಣು ಮಕ್ಕಳಿಗೆ ಹಿಂಸೆಯಾಗುತ್ತಿರುತ್ತದೆ. ತಮ್ಮನ್ನು ಅನುಮಾನಿಸುತ್ತಾರೆ ಮತ್ತು ಅಪಮಾನಿಸುತ್ತಾರೆ ಎಂದು ಅನ್ನಿಸುತ್ತಿರುತ್ತದೆ. ಇದರಿಂದ ಸಂಬಂಧಗಳು ಸಡಿಲಗೊಳ್ಳುತ್ತವೆ ಹಾಗೂ ಹಳಸತೊಡಗುತ್ತವೆ.

ಆತ್ಮಾವಲೋಕನ ಮಾಡಿಕೊಂಡಾಗ ತಮ್ಮಲ್ಲಿ ಇಂತಹ ಅರಿಮೆಯನ್ನು ಕಂಡುಕೊಂಡರೆ ಎಚ್ಚೆತ್ತುಕೊಂಡು ಅದೊಂದು ತಮ್ಮಲ್ಲಿರುವ ಮಾನಸಿಕ ಸಮಸ್ಯೆ ಎಂದು ತಿಳಿದು ಪ್ರಜ್ಞಾವಂತಿಕೆಯಿಂದ ವರ್ತಿಸತೊಡಗಿದರೆ ಸಂಬಂಧಗಳು ಮೌಲ್ಯವನ್ನು ಪಡೆಯುತ್ತವೆ. ಇಲ್ಲದಿದ್ದರೆ ತಾವೂ ನೆಮ್ಮದಿಯಾಗಿರರು, ತಮ್ಮ ಸಂಗಾತಿಗಳನ್ನೂ ನೆಮ್ಮದಿಯಾಗಿರಲು ಬಿಡರು.ಮಡಿ ಮೈಲಿಗೆಯಂತಹ ವ್ಯಸನವೇ ಈ ಶೀಲ ಅಶ್ಲೀಲದ ಅರಿಮೆಯು. ಕರೋನ ವೈರಸ್ಸಿನ ಸಂದರ್ಭದಲ್ಲಿ ಸ್ವಾಮೀಜಿಗಳು ಸೇರಿದಂತೆ ಅನೇಕರು ಮಡಿ ಮೈಲಿಗೆಯನ್ನು ಸ್ವಚ್ಛತೆ ಶುದ್ಧತೆಯ ಕಾರಣಗಳಿಂದ ಸಮರ್ಥಿಸಿಕೊಳ್ಳಲು ಮುಂದಾದರು. ಅಂತೆಯೇ ಶೀಲ ಅಶ್ಲೀಲವನ್ನು ವ್ಯಕ್ತಿಗಳು ಪ್ರಾಮಾಣಿಕತೆ ಮತ್ತು ಬದ್ಧತೆಗೆ ಅನ್ವಯಿಸಿಕೊಳ್ಳಲು ಯತ್ನಿಸುತ್ತಾರೆ.

ಸತ್ಯಕಾಮ ಜಾಬಾಲಿ

ಛಾಂದೋಗ್ಯೋಪನಿಷತ್ತಿನಲ್ಲಿ ಗೌತಮ ಋಷಿಯ ಗುರುಕುಲಕ್ಕೆ ಸತ್ಯಕಾಮನೆಂಬ ಬಾಲಕ ಬರುತ್ತಾನೆ. ಅವನಿಗೆ ಅಲ್ಲಿ ಶಿಕ್ಷಣ ಪಡೆಯಬೇಕೆಂಬ ಬಯಕೆ. ವಾಡಿಕೆಯಂತೆ ನಿನ್ನ ತಂದೆ ಯಾರು? ನೀನು ಯಾವ ಗೋತ್ರದವನು? ಎಂದು ಗುರು ಪ್ರಶ್ನಿಸುತ್ತಾನೆ. ಬ್ರಾಹ್ಮಣರಿಗೆ ವಿದ್ಯಾಭ್ಯಾಸದ ಅರ್ಹತೆ ಎಂಬ ವ್ಯವಸ್ಥೆಯ ಕಾಲವದು. ಬಾಲಕ ಸತ್ಯಕಾಮನಿಗೆ ತಿಳಿದಿರುವುದಿಲ್ಲ. ತಾಯಿಯಾದ ಜಾಬಾಲಿಯನ್ನು ಕೇಳಿ ತಿಳಿದುಕೊಂಡು ಬಂದು ಉತ್ತರಿಸುತ್ತಾನೆ.

“ನನ್ನ ತಾಯಿ ದಾಸಿಯಾಗಿದ್ದಳು. ಹಲವರ ಬಳಿ ಸೇವೆ ಮಾಡುತ್ತಿದ್ದಳು. ಆಗ ಯಾರಿಗೋ ಹುಟ್ಟಿರುವ ಮಗ ನಾನು. ಹಾಗಾಗಿ ನನಗೆ ತಂದೆ ಯಾರೆಂದು ಗೊತ್ತಿಲ್ಲ. ನನಗೆ ಗೋತ್ರವಿಲ್ಲ. ನನ್ನ ತಾಯಿ ಜಬಾಲಿ. ನಾನು ಸತ್ಯಕಾಮ ಜಾಬಾಲಿ” ಎಂದು ಉತ್ತರಿಸುತ್ತಾನೆ.ಗೌತಮ ಶೀಲ ಅಶ್ಲೀಲಗಳ ಅರಿಮೆ ಇಲ್ಲದ ಅರಿವಿರುವವನು. “ಸತ್ಯವನ್ನು ನುಡಿವವನೇ ಬ್ರಾಹ್ಮಣ. ನೀನಿಲ್ಲಿ ವಿದ್ಯಾಭ್ಯಾಸ ಪಡೆಯಲು ಯೋಗ್ಯ” ಎಂದು ಅವನನ್ನು ಸ್ವೀಕರಿಸುತ್ತಾನೆ. ಬ್ರಾಹ್ಮಣ್ಯವನ್ನು ಜಾತಿಯ ಸಂಕೋಲೆಯಿಂದ ಬಿಡಿಸಿ ನೀತಿಯ ಮೌಲ್ಯ ನೀಡುತ್ತಾನೆ.

ಶೀಲ ಅಶ್ಲೀಲಗಳ ಅರಿಮೆಯನ್ನು ಮೀರಿವ ಪ್ರತಿಮೆಗಳು ಸತ್ಯಕಾಮ, ಜಬಾಲಿ ಮತ್ತು ಗೌತಮ. ತಾಯಿಗೆ ಶೀಲವನ್ನು ಮೀರಿದ ತನ್ನ ವಾಸ್ತವವನ್ನು ಒಪ್ಪಿಕೊಳ್ಳುವ ಅರಿವಿದೆ. ಮಗನಿಗೂ ತನ್ನ ಹುಟ್ಟಿನ ಪಾವಿತ್ರ್ಯತೆ ಬಗ್ಗೆ ಯಾವ ಅರಿಮೆ ಇಲ್ಲದೇ ತಾಯಿಯನ್ನು ತಾಯಂದಷ್ಟೇ ಸ್ವೀಕರಿಸುವ ಅರಿವಿದೆ. ಗುರುವಿಗೆ ಸಾಂಪ್ರದಾಯಕ ಅರಿಮೆಯನ್ನು ಮೀರಿ ವ್ಯಕ್ತಿಗತವಾದ ಧೈರ್ಯ ಮತ್ತು ಸತ್ಯವನ್ನು ಮನ್ನಿಸುವ ಅರಿವಿದೆ.
ಅರಿಮೆಗಳನ್ನು ಮೀರಲು ಅರಿವೊಂದು ಸಾಧನ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಮರೆಯಾದ ಅಪೂರ್ವ ಚಿತ್ರಕಲಾ ಪ್ರತಿಭೆ ‘ಶೋಭಾ ಕರಣಿಕ್’

Published

on

ಶೋಭಾ ಕರಣಿಕ್
  • ಡಾ.ಎನ್.ಕೆ.ಪದ್ಮನಾಭ, ಸಹಾಯಕ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ,ಉಜಿರೆ

ವರು ಬಿಡಿಸುತ್ತಿದ್ದ ರೇಖೆಗಳು ನಮ್ಮ ದೇಶೀ ಸಂಸ್ಕೃತಿಯ ವಕ್ತಾರಿಕೆಯ ಪಾತ್ರ ನಿರ್ವಹಿಸುತ್ತಿದ್ದವು. ಕನ್ನಡದ್ದೇ ಆದ ಕಲಾತ್ಮಕ ಪರಂಪರೆಯನ್ನು ಸೂಕ್ಷ್ಮವಾಗಿ ಗ್ರಹಿಸಿದ್ದ ಅವರ ಚಿತ್ರಗಳು ಜೀವಂತಿಕೆಯ ಗುಣಲಕ್ಷಣದೊಂದಿಗೆ ಕಂಗೊಳಿಸುತ್ತಿದ್ದವು.

ಸಾಂಪ್ರದಾಯಿಕ ಚಿತ್ರಶೈಲಿಯನ್ನು ಆಧುನಿಕ ಅಗತ್ಯಗಳಿಗೆ ತಕ್ಕಂತೆ ಮಣಿಸಿ ಪರಂಪರೆಯೊಳಗೇ ಅಡಗಿದ್ದ ಮೌಲಿಕ ಮಾದರಿಗಳನ್ನು ಮನಗಾಣಿಸುವ ಶ್ರದ್ಧೆಯೊಂದಿಗೇ ಅವರು ಚಿತ್ರವಿನ್ಯಾಸ ರೂಪಿಸುತ್ತಿದ್ದರು. ಇನ್ಸ್ಟಾಗ್ರಾಮ್, ಫೇಸ್‌ಬುಕ್ ಮತ್ತಿತರ ಮಾಧ್ಯಮಗಳ ಮೂಲಕ ತಮ್ಮ ಚಿತ್ರಗಳನ್ನು ಕಾಣಿಸುತ್ತಿದ್ದರು. ಪರಂಪರೆ ಮತ್ತು ವರ್ತಮಾನವನ್ನು ಬೆಸೆದು ಹೊಸ ಬಗೆಯ ಚಿತ್ರಪ್ರಯೋಗಗಳನ್ನು ನಡೆಸುವ ಹುಮ್ಮಸ್ಸಿನೊಂದಿಗೆ ಚಿತ್ರಕಲಾಯಾನ ಮುಂದುವರೆಸಿದ್ದರು. ಅವರ ಹೆಸರು ಶೋಭಾ ಕರಣಿಕ್.

ಇತ್ತೀಚೆಗಷ್ಟೇ ಅವರ ಚಿತ್ರಕಲಾಯಾನ ನಿಂತಿತು. ಅವರ ನಿಧನವು ವಿನೂತನವಾದ ಪ್ರಯೋಗಶೀಲ ಚಿತ್ರಕಲಾ ಸಾಧ್ಯತೆಗಳನ್ನು ತಡೆದು ನಿಲ್ಲಿಸಿತು. ಪುರಾಣದ ಕಥನ ಪ್ರಸಂಗಗಳಲ್ಲಿ ಉಲ್ಲೇಖಿತ ದೇವರು-ದೇವತೆಗಳ ಅಸ್ಮಿತೆ ಮತ್ತು ದೇಸೀ ಸಂಸ್ಕೃತಿಯನ್ನು ಬಿಂಬಿಸುವ ವಿನ್ಯಾಸಗಳನ್ನು ಸಮನ್ವಯಗೊಳಿಸಿ ಚಿತ್ರಕಲೆಗೆ ಹೊಸ ಆಯಾಮ ತಂದುಕೊಟ್ಟ ಪ್ರತಿಭೆಯಾಗಿ ಶೋಭಾ ಕರಣಿಕ್ ಅವರದ್ದು ವಿಶೇಷ ವ್ಯಕ್ತಿತ್ವವಾಗಿತ್ತು. ಮ್ಯೂರಲ್ ಪೇಂಟಿಂಗ್‌ನಲ್ಲಿ ಅವರಿಗಿದ್ದ ಪರಿಣತಿ, ಉತ್ತರ ಕನ್ನಡದ ಕಾವಿ ಕಲೆಯ ಕುರಿತಾದ ವಿಸ್ತೃತ ಜ್ಞಾನವು ಚಿತ್ರಕಲೆಯನ್ನು ಉನ್ನತೀಕರಿಸುವುದಕ್ಕೆ ಅವರಿಗೆ ನೆರವಾಗಿತ್ತು.

ಕಲೆಯ ಜೊತೆಗಿನ ಅನುಸಂಧಾನದ ಕ್ಷಣಗಳು ಅಪೂರ್ವ. ಒಂದು ನಿರ್ದಿಷ್ಟ ನಿರ್ಣಾಯಕ ಸಂದರ್ಭ, ಸಮಯದಲ್ಲಿ ಕಲೆಯೊಂದು ವ್ಯಕ್ತಿತ್ವವನ್ನು ಪ್ರಭಾವಿಸಿ ಸೃಜನಶೀಲತೆಯ ಹಸಿವನ್ನು ನೆಲೆಗೊಳಿಸುವುದಕ್ಕೆ ಪ್ರೇರಣೆಯಾಗುತ್ತದೆ. ಕಲೆಯ ಪ್ರಭಾವ ಎರಡು ಬಗೆಯದ್ದು. ಸಹೃದಯರನ್ನು ತನ್ನ ಕಲಾತ್ಮಕ ಮಾದರಿಗಳಿಂದ ಸೆಳೆದು ಅವರೊಳಗೆ ವಿಶೇಷ ಅನುಭೂತಿ ಧಾರೆ ಎರೆಯುವಂಥದ್ದು ಒಂದು ಬಗೆಯಾದರೆ ಹೀಗೆ ಸೆಳೆದುಕೊಂಡು ಮತ್ತೆ ಮತ್ತೆ ಪ್ರಭಾವಿಸುತ್ತಾ ಸಹೃದಯರನ್ನೇ ಕಲಾವಿದರನ್ನಾಗಿಸುವ ಸಾಧ್ಯತೆ ಮತ್ತೊಂದು ತೆರನಾದದ್ದು.

ಈ ಕಾರಣಕ್ಕಾಗಿಯೇ ಕಲಾತ್ಮಕ ಸಂಭವನೀಯತೆಯು ಅನನ್ಯವೆನ್ನಿಸಿಕೊಂಡಿದೆ. ಇಂಥ ಅನನ್ಯತೆಯೊಂದಿಗೇ ಶೋಭಾ ಕರಣಿಕ್ ಗುರುತಿಸಿಕೊಂಡಿದ್ದರು. ಅವರು ಓದಿದ್ದು ತಾಂತ್ರಿಕ ವಿಜ್ಞಾನ. ಆದರೆ, ಅವರ ನಿಜದ ಪ್ರತಿಭೆ ಅಭಿವ್ಯಕ್ತವಾದದ್ದು ಚಿತ್ರಕಲೆಯ ಮೂಲಕ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪರಿಸರದಲ್ಲಿ ಬೆಳೆದ ಶೋಭಾ ಕರಣಿಕ್ ಮೊದಲಿನಿಂದಲೂ ದೇಶೀ ಕಲೆಯ ಕುರಿತು ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡು ಬಂದಿದ್ದರು. ಹೈಸ್ಕೂಲ್ ಓದುತ್ತಿರುವಾಗಲೇ ಕಾವಿಕಲೆಯ ವಿನ್ಯಾಸ ಅವರನ್ನು ಸೆಳೆದಿತ್ತು. ಇವುಗಳನ್ನು ಮತ್ತೆ ಮತ್ತೆ ನೋಡುತ್ತಾ ಹೋದಂತೆಲ್ಲಾ ಕಾವಿ ಕಲೆಯ ಕುರಿತ ಆಕರ್ಷಣೆ ಕಲಿಕೆಯ ಹಂಬಲವಾಗಿ ಮಾರ್ಪಟ್ಟಿತು. ಉತ್ತರ ಕನ್ನಡದ ಟೆಂಪಲ್ ರ‍್ಟ್ ಪ್ರಕಾರದ ಭಾಗವಾಗಿ ಕಾವಿ ಕಲೆಯನ್ನು ಪರಿಚಯಿಸುವ ದೃಷ್ಟಿಯಿಂದ ಅವರು ರಚಿಸಿದ್ದ ತರಹೇವಾರಿ ವಿನ್ಯಾಸಗಳು ವಿವಿಧ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮಗಳಲ್ಲಿ ಗಮನ ಸೆಳೆದಿದ್ದವು.

ಕಾವಿ ಕಲೆಯೂ ಸೇರಿದಂತೆ ನಮ್ಮ ಸಾಂಪ್ರದಾಯಿಕ ಕಲೆಗಳು ಈ ಹಿಂದಿನ ಕಾಲದ ತಲೆಮಾರನ್ನಷ್ಟೇ ಪ್ರಭಾವಿಸಿದ್ದಲ್ಲದೇ ನಂತರದ ಹೊಸ ಪೀಳಿಗೆಯನ್ನೂ ಆಕರ್ಷಿಸುವ ಗುಣ ಹೊಂದಿವೆ. ಮೂಲ ಅಂತಃಸತ್ವಕ್ಕೆ ಧಕ್ಕೆಯೊದಗದ ಹಾಗೆ ಹೊಸ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಈ ಸಾಂಪ್ರದಾಯಿಕ ಚಿತ್ರಕಲಾ ವಿನ್ಯಾಸಗಳನ್ನು ಮರುರೂಪಿಸಬಹುದು. ಹೊಸ ಕಾಲದಲ್ಲಿ ಅವುಗಳ ಮಹತ್ವವನ್ನು ಮನಗಾಣಿಸಬಹುದು ಎಂಬುದು ಅವರ ಆಶಯವಾಗಿತ್ತು.

ಕಲೆಯೊಂದು ಒಂದು ಕಾಲದಿಂದ ಮತ್ತೊಂದು ಕಾಲಕ್ಕೆ ದಾಟಿಕೊಳ್ಳುವಾಗ ಪಲ್ಲಟಗಳು ಸಹಜ. ಈ ಪಲ್ಲಟಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಇಂತಹ ಕಲೆಗಳಿಗೆ ಹೊಸಕಾಲದಲ್ಲೂ ಜೀವಂತಿಕೆಯನ್ನು ತಂದುಕೊಡುವ ಪ್ರಯತ್ನದ ಅಗತ್ಯವನ್ನು ಮನಗಾಣಿಸುವುದಕ್ಕಾಗಿಯೇ ಶೋಭಾ ಕರಣಿಕ್ ಅವರು ಚಿತ್ರಕಲಾ ರಚನೆಯ ವೈವಿಧ್ಯಮಯ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದರು.

ಅವರ ನಿಧನದಿಂದ ಈ ಪ್ರಯೋಗಶೀಲ ಹೆಜ್ಜೆಗಳು ನಿಂತಂತಾಗಿವೆ. ಆದರೆ, ಅವರು ಪರಂಪರೆ ಮತ್ತು ವರ್ತಮಾನವನ್ನು ಸಮನ್ವಯಗೊಳಿಸಿ ಸಾಬೀತುಪಡಿಸಿದ ಅಪೂರ್ವ ಚಿತ್ರಕಲಾ ಪ್ರಯೋಗಶೀಲತೆಯ ಜೀವಂತಿಕೆ ಹೊಸ ಪೀಳಿಗೆಗೆ ಸದಾ ಸ್ಫೂರ್ತಿಯ ಸೆಲೆಯಾಗಿರುತ್ತದೆ. ಅವರ ಹೆಸರಿನ ಇನಸ್ಟಾಗ್ರಾಂನಲ್ಲಿ ಕಾಣಿಸಿಕೊಂಡಿರುವ ಚಿತ್ರಗಳು ಇಂಥ ಸ್ಫೂರ್ತಿಯ ಪ್ರಭೆಯನ್ನು ದಾಟಿಸುತ್ತಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಹೊಸತನದ ಹೊಸ್ತಿಲಲ್ಲಿ..!

Published

on

ಬರಹ : ಮೀನಾಕ್ಷಿ. ಬಿ
  • ಮೀನಾಕ್ಷಿ .ಬಿ, ಎಂ. ಎ ವಿದ್ಯಾರ್ಥಿನಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ

ಹೊಸವರ್ಷ ವೆಂಬುದು ಪ್ರತಿಯೊಬ್ಬರ ಬಾಳಲ್ಲಿ ವರ್ಷಕ್ಕೊಮ್ಮೆ ಬರುವ ಹೊಸದಿನಗಳ ಆಗಮನ ಯಾಕೆಂದರೆ ಹೊಸತನವನ್ನು ತರುತ್ತಾ ಇರುವ ಹೊಸವರ್ಷ ಕೂಡ ಒಂದು ಜೀವನದ ಭರವಸೆ, ನಿರೀಕ್ಷೆ ಕನಸುಗಳ ಬಂಡಿಯ ಮೇಲೆ ಸಾಗುವ ಪ್ರಯಾಣ ನಮ್ಮ ಜೀವನ.

ವ್ಯಕ್ತಿಯ ನಂಬಿಕೆಯ ಆಧಾರದ ಮೇಲೆಯೇ ಜೀವನ ಸಾಗುಸುತ್ತಿರುವುದು.ಯಾಕೆಂದರೆ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿಯೂ ಕೂಡ ಕಷ್ಟ -ಸುಖ ದುಃಖದ ಸಂಗತಿಗಳು ಇದ್ದೆ ಇರುತ್ತದೆ. ಕೆಲವೊಂದು ಬಾರಿ ಹತಾಶೆಯನ್ನು ಹೊಂದಿ ಜೀವನದಲ್ಲಿ ಜಿಗುಪ್ಸೆ ಒಂದು ಕೆಟ್ಟ ನಿರ್ಧಾರಕ್ಕೆ ಮನಸ್ಸು ದಾರಿ ಮಾಡಿಕೊಡುತ್ತದೆ. ಹಾಗೆಯೇ ಕಷ್ಟ ಇದ್ದಲ್ಲಿ ಸುಖವಿರುವುದುಂಟು ಅನ್ನುವ ಹಾಗೇ ಇವತ್ತಲ್ಲ ನಾಳೆ ಒಳ್ಳೆಯ ದಿನಗಳು ನಮ್ಮ ಜೀವನದಲ್ಲಿ ಬರಬಹುದೆಂಬ ಭರವಸೆ,ಆತ್ಮವಿಶ್ವಾಸವನ್ನು ಇಟ್ಟುಕೊಂಡು ಜೀವನ ನಡೆಸುತ್ತಲೇ ಇದ್ದೇವೆ.

ಈ ವರ್ಷ ಒಳ್ಳೆಯದಾಗಿಲ್ಲ ಅಂದರೆ ಏನು ಮುಂದಿನ ವರ್ಷ ಆದರೂ ನನ್ನ ಬದುಕು ಬದಲಾಗಬಹುದು ಎಂಬ ಹೊಸತನವನ್ನು ನಮ್ಮಲ್ಲಿ ಭರವಸೆ,ನಂಬಿಕೆಯ ಬೇರಿನೊಂದಿಗೆ ಬೆರೆಸಿಕೊಂಡು ಬದುಕಬೇಕು.ನಾಳೆಯ ದಿನಗಳ ಮೇಲಿನ ಅನಿರೀಕ್ಷಿತ ತೀರಿವಿನಿಂದಾಗುವ ಬದುಕಿನಲ್ಲಾಗುವ ಬದಲಾವಣೆ ಹೊಸತನದ ಚಾಪನ್ನು ಮೂಡಿಸುತ್ತದೆ.
ಎಂಥ ಹತಾಶ ಮನಸ್ಥಿತಿಯವರಲ್ಲೂ ಹೊಸವರ್ಷ ಭರವಸೆಯ ಅಭಯ ಹಸ್ತವನ್ನು ಚಾಚುತ್ತದೆ. ಅದೆಲ್ಲಿಂದಲೇ ಆತ್ಮ ವಿಶ್ವಾಸದ ಬೆಳಕಿನ ಕಿಡಿಯೊಂದು ಕಾಣಿಸಿಕೊಳ್ಳುತ್ತದೆ.

ಹೊಸವರ್ಷವೆಂಬುದು ಕೇವಲ ಸಂಭ್ರಮದ ಕಾಲ ಮಾತ್ರವಲ್ಲ. ಕಳೆದ ದಿನಗಳತ್ತ ಹಿಂತಿರುಗಿ ನೋಡುವ ಸಮಯ ಕೂಡ ಹಿಂದಿನ ದಿನಗಳ ಪುಟಗಳನ್ನು ತೆಗೆದು ನೋಡಿದರೆ. ಉತ್ಸಾಹದ ಗಳಿಗೆಗಳು ಮುಂದಿನ ಕೆಲಸಗಳಿಗೆ ಚೈತನ್ಯ, ಉತ್ಸಾಹ ನೀಡಬಲ್ಲದು.ನಮ್ಮ ದಿಕ್ಕಿಲ್ಲದ ದಾರಿಗೆ ಖಚಿತ ದಿಕ್ಕು ದಾರಿಯನ್ನು ತೋರಬಲ್ಲದು.

ಜೀವನದ ಪ್ರಯಾಣಕ್ಕೆ ಒಂದು ನಿಲ್ದಾಣವಾಗಿದೆ. ನಾವು ಕಾಣುವ ಕನಸಗಳು ಕನಸಾಗಿಯೇ ಉಳಿದಿದೆ ಯಾಕೆಂದರೆ ನಮ್ಮಲ್ಲಿನ ಬೇಜವಾಬ್ದಾರಿ, ನಿರ್ಲಕ್ಷತನ ಆಮೇಲೆ ಮಾಡಿದರೆ ಆಯ್ತು ಅನ್ನೋ ಮನೋಭಾವನೆ ಯಾವುದರ ಬಗ್ಗೆಯೂ ಆಸಕ್ತಿ ಕೊಡದೆ ಇರೋದು ಎಲ್ಲವು ನಮ್ಮ ಕನಸಿನ ಜೀವನ ರೂಪಿಸಿಕೊಳ್ಳುವಲ್ಲಿ ಸಫಲರಾಗದೆ ಉಳಿಯಲು ಕಾರಣ.

ಮೊದಲು ಆತ್ಮವಿಶ್ವಾಸ ಬೇಕು ನಾನು ಈ ಕೆಲಸವನ್ನು ಮಾಡುವೆ ಎಂಬ ಒಂದು ನಿರ್ಧಿಷ್ಟ ಗುರಿ ಇರಬೇಕು ಅಂಗಿದ್ರೆ ಅಷ್ಟೇ ಜೀವನದ ಪಯಣದ ಹಾದಿಯಲ್ಲಿ ಯಶಸ್ಸನ್ನು ಕಾಣಲು ಸಾಧ್ಯ ಇಲ್ಲವಾದಲ್ಲಿ ಸೋಲನ್ನು ಅನುಭವಿಸುವ ಪರಿಸ್ಥಿತಿ ಎದುರಾಗುತ್ತದೆ. ಮುಂದಿನ ದಿನಗಳ ಆಗಮನದೊಂದಿಗೆ ನಾವು ಕಂಡ ಕನಸನ್ನು ಈಡೇರಿಸಿಕೊಳ್ಳುವ ಸತತ ಪ್ರಯತ್ನದೊಂದಿಗೆ ಬರುವ ದಿನವನ್ನು ಸ್ವಾಗತಿಸಿಕೊಳ್ಳೋಣ.
ಎಲ್ಲರ ಬಾಳಲಿ ಹರುಷ ,ಸಂತೋಷ ಮನೆಮಾಡಲಿ ಎಂದು ಆಶಿಸುತ್ತಾ ಎಲ್ಲರಿಗೂ ಹೊಸವರ್ಷದ ಶುಭಾಶಯಗಳು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಕಾಮರೂಪದ ಪ್ರಭಾಕರ

Published

on

  • ಪ್ರೊ.ರಹಮತ್ ತರೀಕೆರೆ

ನಾನು ಕೋಲಾರಕ್ಕೆ ಹೋದಾಗೆಲ್ಲ ಎರಡು ಜಾಗಗಳಿಗೆ ತಪ್ಪದೆ ಭೇಟಿ ಕೊಡುತ್ತೇನೆ. ಒಂದು-ಕೆ.ರಾಮಯ್ಯ ಮತ್ತವರ ಸಂಗಾತಿಗಳು ಸೇರಿ ತೇರುಹಳ್ಳಿ ಬೆಟ್ಟದ ಮೇಲೆ ಕಟ್ಟಿರುವ `ಆದಿಮ’ಕ್ಕೆ; ಇನ್ನೊಂದು-`ಕಾಮರೂಪಿ’ ಎಂಬ ಹೆಸರಲ್ಲಿ ಬರೆಯುತ್ತಿದ್ದ ಕನ್ನಡ ಲೇಖಕ ಡಾ. ಎಂ.ಎಸ್. ಪ್ರಭಾಕರ ಅವರಿರುವ ಕಠಾರಿಪಾಳ್ಯದ ಮನೆಗೆ. 50ರ ದಶಕದ ಕೊನೆಯಲ್ಲಿ ಕರ್ನಾಟಕ ಬಿಟ್ಟುಹೋದ ಪ್ರಭಾಕರ, ‘ಹಿಂದೂ’ ಪತ್ರಿಕೆಯ ವರದಿಗಾರರಾಗಿ ಆಫ್ರಿಕಾ ಅಮೇರಿಕ ಬಾಂಗ್ಲಾದೇಶ ಈಶಾನ್ಯ ಭಾರತವನ್ನೆಲ್ಲ ಅಲೆದಾಡಿ, ಕಡೆಗೆ ಕಾಮರೂಪದಲ್ಲಿ (ಅಸ್ಸಾಮಿನ ಪುರಾತನ ಹೆಸರಿದು) ನೆಲೆಸಿಬಿಟ್ಟರು.

`ಕಾಮರೂಪ’ ಶಬ್ದಕ್ಕೆ ಬಯಸಿದ ರೂಪಧಾರಣೆ ಮಾಡುವ ಮಾಯಾವಿ ವಿದ್ಯೆ ಎಂಬರ್ಥವೂ ಇದೆ. ಎಂಬತ್ತರ ಪ್ರಾಯದಲ್ಲಿ ಕರ್ನಾಟಕಕ್ಕೆ ಮರಳಿ ಬಂದಿರುವ ಪ್ರಭಾಕರ ಅವರು, ತಾವು ಹುಟ್ಟಿಬೆಳೆದ ಮನೆಯಲ್ಲಿ ಬಿಡಾರ ಹೂಡಿದ್ದಾರೆ. ಹಿರೀಕರು ಕಟ್ಟಿದ ದೊಡ್ಡಮನೆ. ಮನೆಯೊಳಗೊಂದೇ ಜೀವ; ಮನೆ ತುಂಬ ಪುಸ್ತಕದ ರಾಶಿ (ಹೆಚ್ಚಿನವು ಇಂಗ್ಲೀಶ್ ಬಂಗಾಳಿ ಅಸ್ಸಾಮಿ). ನಟ್ಟನಡುವಿರುವ ಹಾಲಿನ ಮೂಲೆಯಲ್ಲಿ ಬೀದಿಗೆ ಬೆನ್ನುಕೊಟ್ಟಂತೆ ಕೂತು, ಲ್ಯಾಪ್‌ಟಾಪಿನಲ್ಲಿ ಬರೆಯುತ್ತ, ವೆಬ್‌ಸೈಟುಗಳನ್ನು ಜಾಲಾಡುತ್ತ, ಬ್ಲಾಗುಗಳನ್ನೋದುತ್ತ ಪ್ರಭಾಕರ ಕುಳಿತಿರುತ್ತಾರೆ.

ಅವರ ಮನಗೆ ಹೋದಾಗಲೆಲ್ಲ ನನಗೆ ರಾಗಿಮುದ್ದೆ ಸೊಪ್ಪಿನ ಸಾರಿನ ಊಟ ಸಿಗುತ್ತದೆ. ಅವರು ಉಣ್ಣುವುದೊಂದು ಅಪೂರ್ವ ದೃಶ್ಯ. ತಣಿಗೆಯ ನಡುವೆ ಹದವಾಗಿ ಬೆಂದು ಕಂಪು ಬೀರುವ ಗೋಂದಿನಂತಹ ಕೆಂಗಪ್ಪು ಬಣ್ಣದ ಬಿಸಿಮುದ್ದೆಯನ್ನಿಟ್ಟು, ಅದರ ತಲೆಯ ಮೇಲೆ ಶಿಖರವನ್ನು ಹಿಮವು ಅಲಂಕರಿಸುವಂತೆ ಬೆಣ್ಣೆಯ ಚೂರನ್ನಿಡುತ್ತಾರೆ; ಬೆಣ್ಣೆಯು ಮುದ್ದೆ ಕಾವಿಗೆ ಕರಗಿ ಇಡೀ ಚೆಂಡನ್ನು ಆವರಿಸಿ ಅಭಿಷೇಕ ಮಾಡಿಸಿಕೊಂಡ ಮೂರುತಿಯಂತೆ ಥಳಥಳ ಹೊಳೆಯುತ್ತದೆ. ಆಗ ಘಮಿಸುವ ಮುದ್ದೆಯನ್ನು ಚೆನ್ನಾಗಿ ಮಿದ್ದು, ಒಂದು ಬದಿಯಿಂದ ಇಷ್ಟಿಷ್ಟೇ ಮುರಿದು ತುತ್ತು ಮಾಡಿ, ಸೊಪ್ಪಿನ ಗಟ್ಟಿಸಾರಲ್ಲಿ ಹೊರಳಾಡಿಸಿ ಗುಕ್ಕನೆ ನುಂಗಿ ಕಣ್ಮುಚ್ಚಿ ಕೊಳ್ಳುತ್ತಾರೆ. ತರುವಾಯ ಶ್ರೀಯುತರು ಜ್ಞಾನೋದಯವಾದ ಸಿದ್ಧನಂತೆ ಅವರ ಮುಖದಲ್ಲಿ ಪರಮಾನಂದದ ಒಂದು ಕಳೆ ಆವಿರ್ಭವಿಸುತ್ತದೆ. ಇದನ್ನೆಲ್ಲ ಕಾಣುವಾಗ, ಲೋಕವನ್ನೆಲ್ಲ ಸುತ್ತಾಡಿರುವ ಇವರು ಕೋಲಾರಕ್ಕೆ ಮುದ್ದೆಸುಖಕ್ಕಾಗಿಯೆ ಬಂದರೇನೊ ಎಂದು ಶಂಕೆ ಬರುತ್ತದೆ. ಪ್ರಭಾಕರ ಅವರಿಗೆ ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಅನೇಕ ದೂರುಗಳಿವೆ. ಅವುಗಳಲ್ಲಿ ಆಹಾರ ತಯಾರಿಕೆ ಮತ್ತು ಸೇವನೆ ಕುರಿತು ಅದರಲ್ಲಿ ವಿವರಗಳೇ ಇಲ್ಲ ಎಂಬುದೂ ಒಂದು.

ಕನ್ನಡದ ಅತಿಹಿರಿಯ ಮತ್ತು ಹೆಚ್ಚು ಬರೆಯದ ಲೇಖಕರಲ್ಲಿ ಪ್ರಭಾಕರ ಅವರೂ ಒಬ್ಬರು. ನಾನು ಅವರ ‘ಕುದುರೆಮೊಟ್ಟೆ’ ಕಾದಂಬರಿಯನ್ನೂ ‘ಒಂದು ತೊಲ ಪುನುಗು ಮತ್ತು ಇತರ ಕತೆಗಳು’ ಸಂಕಲನವನ್ನೂ ಓದಿದ್ದೆ. ಇವುಗಳಲ್ಲಿ ‘ಕುದುರೆ ಮೊಟ್ಟೆ’ ಈಗಲೂ ಪ್ರಿಯವಾದ ಪುಸ್ತಕ. ಅದರಲ್ಲಿರುವ ಕೆಲವು ಪಾತ್ರಗಳು ಕೊಂಚ ವಿಕ್ಷಿಪ್ತವಾಗಿವೆ; ಅಲ್ಲಿನ ಬಾಳಿನ ಸನ್ನಿವೇಶಗಳೂ ಅನಿರೀಕ್ಷಿತವಾಗಿವೆ. ಆದರೆ ಎಲ್ಲಿಯೂ ಹುಸಿ ಅನಿಸದಂತೆ, ಒಂದೇ ಶಬ್ದ ಅಪವ್ಯಯವಾಗದಂತೆ ಅದನ್ನು ಬರೆಯಲಾಗಿದೆ. ಪಾತ್ರಗಳನ್ನು ತಮ್ಮ ಸಿದ್ಧಾಂತಕ್ಕೆ ತಕ್ಕಂತೆ ಮಣಿಸಿ ಕೈಗೊಂಬೆಯಂತೆ ಆಡಿಸುತ್ತ, ಕೆಲವನ್ನು ಮುದ್ದಾಮಾಗಿ ದುರುಳಗೊಳಿಸಿ ಕಲೆಯ ಜಾಣಮುಸುಕಿನಲ್ಲಿ ಅಡಗಿಸುತ್ತ, ಕೆಲವು ಕಾದಂಬರಿಗಳು ಕನ್ನಡದಲ್ಲಿ ಪ್ರಕಟವಾಗುತ್ತಿವೆ. ಇಂತಹ ಹೊತ್ತಲ್ಲಿ ಅರ್ಧ ಶತಮಾನದ ಹಿಂದೆ ಪ್ರಕಟವಾದ ಈ ಕಾದಂಬರಿ, ಬಾಳನ್ನು ಕುರಿತು ತೋರುವ ಕಕ್ಕುಲಾತಿ ಕಂಡು ಖುಶಿಯಾಗುತ್ತದೆ. ಕತೆಗಾರರಿಗೆ ತಾವು ಸೃಷ್ಟಿಸುವ ಕೆಲವು ಪಾತ್ರಗಳ ಮೇಲೆ ಕೊಂಚ ಭಾವ ಪಕ್ಷಪಾತವಿರುತ್ತದೆ. ಆದರೆ ತಾವು ಸೃಜಿಸುವ ಎಲ್ಲ ಪಾತ್ರಗಳನ್ನು ತಾಯಿಯಂತೆ ನೋಡುವುದು ಬರೆಹದ ನೈತಿಕತೆ. ಈ ಸಂಗತಿ ಕುವೆಂಪು ಮತ್ತು ಟಾಲ್ ಸ್ಟಾಯ್ ಕಾದಂಬರಿ ಓದಿದವರಿಗೆ ಗೊತ್ತಿದೆ.

ಕಾಮವನ್ನು ಇಟ್ಟುಕೊಂಡು ಜೀವನದ ಸತ್ಯಗಳನ್ನು ಶೋಧಿಸುವ ವಿಷಯದಲ್ಲಿ ಕಾಮರೂಪಿಯವರು, ಒಬ್ಬ ಟಿಪಿಕಲ್ ನವ್ಯಲೇಖಕರೇ. ಆದರೆ ನವ್ಯದ ಕೆಲವು ಲೇಖಕರಲ್ಲಿ ಕಾಣುವಂತೆ, ಅದಕ್ಕವರು ಅನಗತ್ಯ ಪ್ರಾಮುಖ್ಯ ಕೊಡುವುದಿಲ್ಲ. ಅದನ್ನು ಚಪ್ಪರಿಸುವುದಿಲ್ಲ. ವೈಭವೀಕರಿಸುವುದಿಲ್ಲ. ಬದಲಿಗೆ, ಮನುಷ್ಯರಾದವರು ಜೀವನದ ಇಕ್ಕಟ್ಟುಗಳಲ್ಲಿ ಸಿಲುಕಿ ಅನಿವಾರ್ಯವಾಗಿ ವರ್ತಿಸುವ ಪರಿಯನ್ನು ತಣ್ಣಗೆ ವ್ಯಂಗ್ಯವಾಗಿ ಚಿತ್ರಿಸುತ್ತಾ ಹೋಗುತ್ತಾರೆ. ಸತ್ಯಕ್ಕಿರುವ ಹಲವು ಮುಖಗಳನ್ನು ಹಿಡಿಯುವಂತಹ ಕುರುಸೋವಾನ ‘ರಶೋಮನ್’ ಸಿನಿಮಾ ನೆನಪಿಸುವ ಈ ಕಾದಂಬರಿ, ಮತ್ತೆಮತ್ತೆ ಓದಬೇಕು ಎನಿಸುವಷ್ಟು ತಾಜಾ ಆಗಿದೆ. ‘ಉಪಪತ್ತಿಯೋಗ’ ಎಂಬುದನ್ನು ಬಿಟ್ಟರೆ, ಉಳಿದಂತೆ ವ್ಯಕ್ತಿವಾದವನ್ನು ಅತಿಯಾಗಿ ಬಿಂಬಿಸುವ ತಂತ್ರದ ಬಿಗಿತದಲ್ಲಿರುವ ಅವರ ಕತೆಗಳು ಅಷ್ಟು ಆಪ್ತವೆನಿಸಿಲ್ಲ.

ನನಗೆ ಪ್ರಭಾಕರ್ ಕುರಿತು ಆಸಕ್ತಿ ಮೂಡಿಸಿದವರು ಮಾರ್ಕ್ಸ್‌ವಾದಿ ಚಿಂತಕ ಕೆ.ರಾಘವೇಂದ್ರರಾವ್ ಅವರು. ಅಮೆರಿಕೆಯ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಿದ್ದ ಎ.ಕೆ.ರಾಮಾನುಜನರ ಹೊಂದಾಣಿಕೆಯ ಗುಣವನ್ನು ಕಟುವಾಗಿ ವಿಮರ್ಶಿಸುತ್ತ, ಅಲ್ಲಿನ ಶೈಕ್ಷಣಿಕ ಕ್ಷೇತ್ರದಲ್ಲಿರುವ ಬಿಳಿಯರ ಯಜಮಾನಿಕೆಗೆ ಬಾಗದೆ ಹೊರಬಂದ ಪ್ರಭಾಕರ ಅವರ ದಿಟ್ಟ ಸ್ವಭಾವವನ್ನು ಅವರು ತಮ್ಮ ಸಂದರ್ಶನದಲ್ಲಿ ಪ್ರಸ್ತಾಪಿಸಿದ್ದರು. ಪ್ರಭಾಕರ ಅವರನ್ನು ಭೇಟಿಯಾಗಬೇಕು ಎಂದು ಅನಿಸುತ್ತಿತ್ತು. ಅದರಲ್ಲೂ ಭಾರತದ ಶಾಕ್ತಪೀಠಗಳಲ್ಲಿ ಮುಖ್ಯವಾಗಿರುವ ಅಸ್ಸಾಮಿನ ಕಾಮಾಖ್ಯಕ್ಕೆ ಹೋಗಲು ಯತ್ನಿಸುತ್ತಿದ್ದ ನಾನು, ಅಲ್ಲೇ ಸಮೀಪದ ಗೌಹಾತಿಯಲ್ಲಿರುವ ಅವರನ್ನು ಕಾಣಲು ಹವಣಿಕೆ ಮಾಡಿಕೊಂಡಿದ್ದೆ. ಆದರೆ ಸಾರ್ವಜನಿಕ ವ್ಯಕ್ತಿಯಾಗಲು ನಿರಾಕರಿಸಿ ಅಜ್ಞಾತವಾಗಿಯೇ ಬಾಳುವ ಅವರು ಸುಲಭವಾಗಿ ಸಿಗುತ್ತಿರಲಿಲ್ಲ.

ನನ್ನ ತವಕವನ್ನರಿತಿದ್ದ ಕೆ.ರಾಮಯ್ಯ, ‘ಪ್ರಭಾಕರ್ ಕರ್ನಾಟಕಕ್ಕೆ ಬಂದಿದ್ದಾರೆ. ಬನ್ನಿ’ ಎಂದು ಅವರ ಮನೆಗೆ ಕರೆದುಕೊಂಡು ಹೋದರು. ಮಧ್ಯಾಹ್ನದ ಸುಡುಹೊತ್ತು. ಪ್ರಭಾಕರ ಪ್ರೀತಿಯಿಂದ ಬರಮಾಡಿಕೊಂಡು ನೊರೆ ತುಂಬಿದ ಒಗರು ಬೀರಿನ ಮಗ್ಗನ್ನು ಕೈಗೆ ಕೊಟ್ಟು, ಕಾಮಾಖ್ಯದ ಬಗ್ಗೆಯೂ ತಂತ್ರ ಪಂಥದ ಬಗ್ಗೆಯೂ ಇರುವ ಕೃತಿಗಳನ್ನು ತೋರಿಸುತ್ತ, ಗಂಟೆಗಟ್ಟಳೆ ಮಾತಾಡಿದರು. ಅರಿವಿನ ಕಿಡಿಗಳು ಹಾರುವ ಅದೊಂದು ವಿದ್ವತ್‌ಪೂರ್ಣ ಹರಟೆ.

ನಾನು ಅವರಲ್ಲಿ ಶಿಷ್ಯವೃತ್ತಿ ಸ್ವೀಕರಿಸಿ ಹಲವಾರು ಸಲ ಕೋಲಾರಕ್ಕೆ ಹೋಗಿ ಬಂದಿದ್ದೇನೆ. ಅವರ ಮಾತುಕತೆಗಳಲ್ಲಿ ನನಗೆ ಮುಖ್ಯವಾಗಿ ಕಂಡಿದ್ದು, ಜಾತ್ಯತೀತವಾದ ಮನಸ್ಸು; ಸಣ್ಣಪುಟ್ಟ ಸಂಗತಿಗಳ ಮೇಲೂ ಕಾಳಜಿಯಿಂದ ಸೂಕ್ಷ್ಮವಾಗಿ ಚಿಂತಿಸುವ ಮಾನವೀಯತೆ; ಗತಕಾಲದ ಬಗ್ಗೆ ಹಳಹಳಿಕೆಯಿಲ್ಲದೆ ವರ್ತಮಾನದ ಸಮಸ್ಯೆಗಳನ್ನು ಕುರಿತು ಚಿಂತಿಸುವ ಪ್ರಖರವೂ ನಿಷ್ಠುರವೂ ಆದ ರಾಜಕೀಯ ಪ್ರಜ್ಞೆ. ಸಾರ್ವಜನಿಕ ಬದುಕಿನಲ್ಲಿ ಜಾತಿಪದ್ಧತಿ ಎಲ್ಲೆಮೀರಿ ನಿರತವಾಗಿರುವ ಕುರಿತ ಹೇವರಿಕೆ. ಹಿರಿಯ ಲೇಖಕರಲ್ಲಿ ಸಾಮಾನ್ಯವಾಗಿ ಎರಡು ಸ್ವಭಾವಗಳಿರುತ್ತವೆ. ಒಂದು- ಕಳೆದುಹೋದ ಕಾಲದ ಬಗ್ಗೆ ಭಾವುಕ ಮರುಕಳಿಕೆ. ಎರಡು-ವರ್ತಮಾನದ ಸಾಮಾಜಿಕ ರಾಜಕೀಯ ವೈರುಧ್ಯಗಳನ್ನು ಉದಾರವಾಗಿ ನೋಡುತ್ತ, ಚಿಂತನೆಯ ಮೊನಚನ್ನು ಕಳೆದುಕೊಳ್ಳುವುದು. ಆದರೆ ಆತ್ಮಕ್ಕೆ ಸದಾ ಬೆಂಕಿ ಹತ್ತಿಸಿಕೊಂಡಂತೆ ಉರಿಯುವ ಕೆಲವರಿದ್ದಾರೆ. ಕೋಚೆ, ಕುಸುಮಾಕರ ದೇವರಗೆಣ್ಣೂರ, ಎಂ.ಡಿ. ನಂಜುಂಡಸ್ವಾಮಿ, ನೀಲಗಂಗಯ್ಯ ಪೂಜಾರ, ಕೆ.ರಾಘವೇಂದ್ರರಾವ್, ಅಬ್ಬಿಗೇರಿ ವಿರೂಪಾಕ್ಷಪ್ಪ, ಸಾರಾ ಅಬೂಬಕರ್, ಕಾಮರೂಪಿ ಪ್ರಭಾಕರ-ಇವರೆಲ್ಲ ಇಂತಹವರು. ಈ ಹಿರಿಯರ ಜತೆ ಮಾತಾಡುವಾಗ ಇವರ ಹಠಮಾರಿತನ, ಜಗಳಗಂಟಿತನ, ಆದರ್ಶವಾದ, ನೈತಿಕ ಪ್ರಜ್ಞೆ ಹಾಗೂ ಭಿನ್ನಮತ ಇಷ್ಟವಾಗುತ್ತದೆ.

ಕರ್ನಾಟಕದಿಂದ ಬಹುಕಾಲ ದೂರವಿದ್ದ ಕಾರಣದಿಂದ ಏರ್ಪಟ್ಟಿರುವ ಅಪರಿಚಿತತೆಯಿಂದಲೊ ಅಥವಾ ಕರ್ನಾಟಕದ ಒಳಗೇ ಇದ್ದೂಇದ್ದೂ ನಮಗೆ ಕಾಣದಂತಾಗಿರುವ ವೈರುಧ್ಯಗಳು ‘ಹೊರಗಿನಿಂದ’ ಬಂದಿರುವ ಅವರಿಗೆ ಒಡೆದು ಕಾಣುತ್ತಿರುವುದರಿಂದಲೊ, ಪ್ರಭಾಕರ ಕರ್ನಾಟಕದ ಸಮಕಾಲೀನ ಸಾಂಸ್ಕೃತಿಕ ರಾಜಕಾರಣದ ವೈರುಧ್ಯಗಳ ಬಗ್ಗೆ ತೀಕ್ಷ್ಣವಾದ ಟಿಪ್ಪಣಿ ಮಾಡುತ್ತಿರುತ್ತಾರೆ; ಕನ್ನಡಿಗರ ಸ್ವಭಾವದಲ್ಲೇ ವ್ಯಕ್ತಿನಿಷ್ಠೆಗಾಗಿ ವಿಮರ್ಶೆಯ ನಿಷ್ಠುರತೆ ಬಿಟ್ಟುಕೊಡುವ, ಸಜ್ಜನಿಕೆಯ ಭಾಷೆಯಲ್ಲಿ ವಾಸ್ತವವನ್ನು ಅಡಗಿಸುವ ಪ್ರವೃತ್ತಿಯಿದೆ ಎಂದು ಹೇಳುತ್ತಿರುತ್ತಾರೆ. ಸಂಘಟಕರೊಬ್ಬರು ಕಾರ್ಯಕ್ರಮವೊಂದಕ್ಕೆ ಕರೆಸಿಕೊಂಡು ಪರಿಚಯ ಭಾಷಣದಲ್ಲಿ ತಮ್ಮನ್ನು ಅತಿಯಾಗಿ ಹೊಗಳಿದ್ದನ್ನು ನೆನೆಯುತ್ತ ಅವರೊಮ್ಮೆ ಹೇಳಿದರು: “ಏನ್ ಸ್ವಾಮಿ ಕನ್ನಡಿಗರು? ಎಷ್ಟು ಉದಾರತೆ! ನನ್ನ ಬಗ್ಗೆ ಅವರಿಗೆ ಏನೂ ಗೊತ್ತಿಲ್ಲ. ನಾನು ಎಲ್ಲ ಸೇರಿದರೆ ನೂರೈವತ್ತು ಪುಟಗಳನ್ನೂ ಬರೆದಿಲ್ಲ. ಕನ್ನಡಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟಿಲ್ಲ. ಆದರೂ ವಾಚಾಮಗೋಚರ ಹೊಗಳಿಬಿಟ್ಟರು. ಕರ್ನಾಟಕದಲ್ಲಿ ಮಾತಿಗೆ ಬೆಲೆಯೇ ಇದ್ದಂತಿಲ್ಲ.’’

ಇದನ್ನು ಕೇಳುವಾಗ ಈಚೆಗೆ ಕಲ್ಕತ್ತಾದಲ್ಲಿ ನಾನು ಕಂಡ, ಹಿರಿಯ ಲೇಖಕ ರುದ್ರಪ್ರತಾಪ ಸೇನರ ಸನ್ಮಾನ ಕಾರ್ಯಕ್ರಮ ನೆನಪಾಯಿತು. ಸೇನರಿಗೆ 75ವರ್ಷ ತುಂಬಿದ ನೆಪದಲ್ಲಿ ಇರಿಸಿಕೊಂಡಿದ್ದ ಆ ಕಾರ್ಯಕ್ರಮ ಎಷ್ಟು ವಿಮರ್ಶಾತ್ಮಕವಾಗಿತ್ತು ಎಂದರೆ, ಅವರ ಶಿಷ್ಯರು ತಮ್ಮ ಗುರುವಿನ ಜತೆ ಕೋರ್ಟ್ಮಾರ್ಶಲ್ ನಡೆಸುವವರ ಹಾಗೆ ಪ್ರಶ್ನೆ ಕೇಳುತ್ತಿದ್ದರು. ಸೇನರು ಆ ಕಟುತರ ಪ್ರಶ್ನೆಗಳಿಗೆಲ್ಲ ಪ್ರಾಮಾಣಿಕವಾಗಿ ದ್ವಂದ್ವವಿಲ್ಲದೆ ಉತ್ತರಿಸುತ್ತಿದ್ದರು. ಹಿರಿಯರ ತಲೆಗೆ ಅಭಿನಂದನ ಗ್ರಂಥಗಳ ಸರಮಾಲೆಯನ್ನು ತಂದು ಕಟ್ಟಿ, ಎಗ್ಗಿಲದೆ ಹೊಗಳಿ ವೈಭವೀಕರಿಸುವ ಪದ್ಧತಿಯಿರುವ ಕರ್ನಾಟಕದಲ್ಲಿ, ಈ ಪರಿಯ ನಿಷ್ಠುರತೆ ಕಲ್ಪಿಸಿಕೊಳ್ಳುವುದೇ ಕಷ್ಟ.

ತೋರುಗಾಣಿಕೆಯನ್ನು ಸದಾ ನಿರಾಕರಿಸುವ ಪ್ರಭಾಕರ ಅವರಲ್ಲಿ, ಅವರ ಖಂಡಿತವಾದಿ ನಿಲುವಿಗೆ ಅಷ್ಟೊಂದು ತಾಳೆಯಾಗದ ಇನ್ನೊಂದು ಮುಖವಿದೆ. ಅದೆಂದರೆ, ಜೀವನಪ್ರೀತಿಯ ಸಂಕೇತದಂತಿರುವ ತಮಾಶೆ ಮತ್ತು ಪೋಲಿತನ. ಈ ತಮಾಶೆಯ ಗುಣ ಅದ್ಭುತ ನಾಟಕೀಯ ಶೈಲಿಯಾಗಿ ಅವರ ಕಥೆ ಕಾದಂಬರಿಗಳಲ್ಲೆಲ್ಲ ಆವರಿಸಿಕೊಂಡಿದೆ. ತಮಗೆ ಪಾಠ ಹೇಳಿದ ಗುರುಗಳ ವೈಯಕ್ತಿಕ ಬದುಕಿನಲ್ಲಿದ್ದ ಸನಾತನವಾದ ಮತ್ತು ತರಗತಿಗಳಲ್ಲಿ ಕನ್ನಡ ಬಳಸದ ಅವರ ಇಂಗ್ಲಿಷಿನ ವ್ಯಾಮೋಹ ಕುರಿತಂತೆ, ಅವರಲ್ಲಿ ಸ್ವಾರಸ್ಯಕರ ಮಾಹಿತಿಗಳಿವೆ. ಪ್ರಭಾಕರ ಅವರು ಆಪ್ತರ ಎದುರು ತಾವು ಬರೆದಿರುವ ಅಪ್ರಕಟಿತ ಪೋಲಿ ಪದ್ಯಗಳನ್ನು ವಾಚಿಸುವುದುಂಟು. ಬಹುಶಃ ಇದು ಅವರ ಗೆಳೆಯರಾಗಿದ್ದ ಎಚ್.ಎಸ್. ಬಿಳಿಗಿರಿಯವರ ಸಹವಾಸ ಫಲವಿರಬೇಕು.

ಒಂದೇ ವ್ಯಕ್ತಿತ್ವದಲ್ಲಿ ಒಟ್ಟಿಗೇ ಇರಲು ಕಷ್ಟವೆನಿಸಬಹುದಾದ ಇನ್ನೂ ಅನೇಕ ಸಂಗತಿಗಳು ಅವರಲ್ಲಿ ಸಹಜವಾಗಿ ನಿರಾಳವಾಗಿ ಇವೆ. ಉದಾ.ಗೆ, ಬಹುಭಾಷಿಕರಾದ ಅವರ ಮನೆಮಾತು ತಮಿಳುಗನ್ನಡ; ಬರವಣಿಗೆ ಕನ್ನಡ ಮತ್ತು ಇಂಗ್ಲೀಶಿನಲ್ಲಿ; ಸಂಸ್ಕೃತ ಅಸ್ಸಾಮಿ ಬಂಗಾಳಿ ಭಾಷೆಗಳಲ್ಲಿ ದೊಡ್ಡ ವಿದ್ವತ್ತು. (ಅವರ ಅಸ್ಸಾಮಿ ಬಂಗಾಳಿ ತಿಳಿವಳಿಕೆಯಿಂದ ಕನ್ನಡಕ್ಕೆ ಪ್ರಯೋಜನವಿನ್ನೂ ಆಗಿಲ್ಲ). ಪಂಪ ಅವರ ಇಷ್ಟದ ಕವಿ. ಮೂಲತಃ ಇಂಗ್ಲೀಶ್ ಸಾಹಿತ್ಯದ ವಿದ್ಯಾರ್ಥಿಯಾದರೂ ಸಾಹಿತ್ಯಕ್ಕಿಂತ ಹೆಚ್ಚಾಗಿ ಅಂತರಾಷ್ಟ್ರೀಯ ರಾಷ್ಟ್ರೀಯ ರಾಜಕಾರಣದ ಮೇಲೆ ಹೆಚ್ಚು ಬರೆವಣಿಗೆ. ಅದರಲ್ಲೂ ಈಶಾನ್ಯ ಭಾರತದ ರಾಜಕಾರಣ ಭಾಷೆ ಧರ್ಮ ಸಂಸ್ಕೃತಿ ಕುರಿತ ಅವರ ತಿಳಿವಳಿಕೆ ಅಪರೂಪದ್ದು. ಇವನ್ನೆಲ್ಲ ಒಟ್ಟಿಗೆ ಹೇಗೆ ಕಲ್ಪಿಸಿಕೊಳ್ಳುವುದು? ಪ್ರಭಾಕರ ತಮ್ಮ ಕಾದಂಬರಿಯ ಒಂದು ಪಾತ್ರದ ಹಾಗೇ ಬದುಕಿದ್ದಾರೆ.

ಅವರು ಈಚೆಗೆ ಮಾತಾಡುತ್ತ ಕೊಂಚ ದಣಿದ ದನಿಯಲ್ಲಿ “ಸ್ವಾಮಿ, ಕರ್ನಾಟಕ ನನಗೆ ಸಾಕಾಗಿದೆ. ಗೌಹಾಟಿಗೆ ಹೋಗಬೇಕು ಅನಿಸುತ್ತಿದೆ’ ಎಂದು ಗೊಣಗಿದರು. “ಹೋಗಿ. ಆದರೆ ಮತ್ತೆಬನ್ನಿ’’ ಎಂದೆ. ಅವರಲ್ಲಿ ಕೋಲಾರ-ಗೌಹಾತಿಗಳ ನಡುವೆ ವಿಚಿತ್ರವಾದ ಆಕರ್ಷಣೆ ವಿಕರ್ಷಣೆಯಿದೆ. ಇದು ಬಹುಕಾಲ ಬೇರೆಡೆ ಬೆಳೆದ ಮರ ತನ್ನ ಮೂಲನೆಲಕ್ಕೆ ಬಂದು ನಾಟಿಗೊಂಡರೆ ಬೇರೂರುವ ಕಷ್ಟ. ಮರಳಿ ಹುಟ್ಟಿದೂರಿಗೆ ಬರುವಿಕೆ ಬಾಲ್ಯದ ನೆನಪುಗಳನ್ನು ಎಚ್ಚರಿಸಿ ಸುಖ ಕೊಡುತ್ತದೆ; ಆದರೆ ಹೊಚ್ಚ ಹೊಸತೆೆನಿಸುವಷ್ಟು ಬದಲಾಗಿರುವ ಪರಿಸರವು, ಕಾಡುವ ಏಕಾಂಗಿತನವನ್ನೂ ತಂದಿಡುತ್ತದೆ. ಯಾರ ಮರುಕವನ್ನೂ ಬಯಸದೆ ಏಕಾಂತದಲ್ಲಿ ಘನತೆಯಿಂದ ಕೊನೆಯ ದಿನಗಳನ್ನು ಕಳೆಯ ಬಯಸುವ ಇಂತಹ ಹಠಮಾರಿ ಜೀವಗಳು, ಒಳಗೇ ಮೃದ್ವಂಗಿಗಳಾಗಿ ಆಪ್ತಸಂಗಾತಕ್ಕೆ ಹಾತೊರೆಯುತ್ತಿರುತ್ತವೆ.

ಆ ಸಂಗಾತದ ಸ್ವರೂಪ ಎಂತಹುದು ಎಂದು ಸ್ಪಷ್ಟವಾಗುವುದಿಲ್ಲ. ನಾನು ‘ಕಾಮರೂಪಕ್ಕೆ ಯಾವಾಗ ಹೋಗುತ್ತೀರಿ’ ಎಂದು ಕೇಳಿದೆ: ‘ಆದಿಮದ 50ನೇ ಬೆಳುದಿಂಗಳ ಕಾರ್ಯಕ್ರಮ ಮುಗಿಸಿಕೊಂಡು’ ಎಂದರು.
ಪ್ರತಿಯೊಬ್ಬರಿಗೂ ಬಾಳಿನಲ್ಲಿ ಬಹುರೂಪಧಾರಣೆ ಮಾಡಬೇಕಾದ ಒತ್ತಡಗಳು ಎದುರಾಗಬಹುದು. ಆದರೆ ಈ ರೂಪಧಾರಣೆಗೆ ಕಾರಣ, ನಮ್ಮ ಇಚ್ಛಾನಿಚ್ಛೆಗಳು ಮಾತ್ರವಲ್ಲ, ಬಾಳಿನ ಅನೂಹ್ಯ ಒತ್ತಡಗಳು ಸಹ. ಈ ಒತ್ತಡಗಳು ಬರೆಹ ಇಲ್ಲವೇ ಮಾತಿನ ವ್ಯಾಖ್ಯಾನಕ್ಕೆ ಕೆಲವೊಮ್ಮೆ ನಿಲುಕುವಂತೆ ಇರುವುದಿಲ್ಲ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending