Connect with us

ಅಂತರಂಗ

ಅರಿಮೆಯ ಅರಿವಿರಲಿ-14 : ತನ್ನ ಬಣ್ಣಿಸಬೇಡ

Published

on

  • ಯೋಗೇಶ್ ಮಾಸ್ಟರ್

ತ್ಮರತಿಯ ಮತ್ತೊಂದು ಮುಖ್ಯ ಲಕ್ಷಣವೆಂದರೆ ತನ್ನ ಹೊಗಳಿಕೆಯ ಉನ್ಮತ್ತತೆಯಲ್ಲಿ ಮೈಮರೆಯುವುದು. ತನ್ನನ್ನು ಪ್ರದರ್ಶಿಸಿಕೊಳ್ಳುವ ಅಮಲಿನಲ್ಲಿ ಮತ್ತು ಬಣ್ಣಿಸಿಕೊಳ್ಳುವ ಮದದಲ್ಲಿ ಮೈಮರೆಯುವುದು. ಹೆಚ್ಚೆಚ್ಚು ಮಾಡಿಕೊಂಡಷ್ಟೂ ಹೆಚ್ಚೆಚ್ಚು ಮದ. ಯಾವ್ಯಾವ ಸಂದರ್ಭಗಳು ಒದಗುವುದೋ ಅದನ್ನೆಲ್ಲಾ ತನ್ನ ಬಣ್ಣನೆಗೆ ಬಳಸಿಕೊಳ್ಳುವುದು. ಅದಕ್ಕೆ ಖರ್ಚಾಗುವುದೋ? ಆಗಲಿ. ಒಟ್ಟಾರೆ ತನ್ನ ಬಣ್ಣನೆ ವರ್ಣನೆ ಪ್ರದರ್ಶನವಾಗಬೇಕು.

ದೇವಸ್ಥಾನಕ್ಕೆ ಫ್ಯಾನ್ ಹಾಕಿಸಿದರಾ? ಅದ್ಯಾವುದೋ ಆಶ್ರಮಕ್ಕೆ ಅಲಮಾರಿ ಕೊಟ್ಟರಾ? ಇನ್ಯಾವುದೋ ಗುಡಿಗೆ ಗಂಟೆ ದಾನವಿತ್ತರಾ? ಅದರ ಮೇಲೆಲ್ಲಾ ಅವರ ಹೆಸರಿರಬೇಕು. ಕೆಲವೊಮ್ಮೆ ಯಾರದೋ ಸ್ಮರಣೆಯಿಂದ ಕೊಡುತ್ತಿದ್ದು, ಅವರ ಹೆಸರೂ ಸೇರಿದಂತೆ ಕೊಟ್ಟವರ ಹೆಸರೂ, ಅವರ ಹೆಂಡರು ಮಕ್ಕಳ ಹೆಸರೂ ಉಲ್ಲೇಖಿತವಾಗಿರಬೇಕು. ಇದು ಆತ್ಮತೃಪ್ತಿಯ ವಿಷಯವಲ್ಲ. ಅರಿಮೆಯ ತೃಪ್ತಿ. ನಾರ್ಸಿಸಂ ಎಂಬ ಮಾನಸಿಕ ಸಮಸ್ಯೆಯು ಮನಸ್ಸಿಗೆ ಹಾತೊರೆಯುವಂತೆ ಮಾಡುವ ಬಯಕೆ. ಯಾವುದೇ ಅರಿಮೆಯನ್ನು ನಿವಾರಿಸಿಕೊಳ್ಳಲು ಮಾಡಬೇಕಾದ ಮೊದಲನೆಯ ಕೆಲಸವೆಂದರೆ, ಅದನ್ನು ತಮ್ಮಲ್ಲಿ ಗುರುತಿಸಿಕೊಳ್ಳುವುದು ಮತ್ತು ಅದು ಮತ್ತೆ ತಲೆ ಎತ್ತದಂತೆ ಬಹಳ ಎಚ್ಚರದಿಂದ ಕೆಲಸ ಮಾಡುವುದು. ಪ್ರಜ್ಞಾಪೂರ್ವಕವಾಗಿ ವರ್ತಿಸುವುದು.

ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ” ಎನ್ನುವ ಬಸವಣ್ಣ ಆತ್ಮರತಿಯ ಅರಿಮೆಯನ್ನು ನಿವಾರಿಸಿಕೊಳ್ಳಲು ಅರಿವಿನ ದಾರಿ ತೋರುತ್ತಾರೆ. ತನ್ನನ್ನು ಬಣ್ಣಿಸಿಕೊಳ್ಳುವುದೊಂದು ವಿಧಾನವಾದರೆ, ಮತ್ತೊಬ್ಬರನ್ನು ಹಳಿಯುತ್ತಾ ತಾನೆಷ್ಟು ಉತ್ತಮನು ಎಂದು ಪ್ರದರ್ಶಿಸಿಕೊಳ್ಳುವುದು ಮತ್ತೊಂದು ವಿಧಾನ. ತನ್ನ ಬಣ್ಣಿಸಿಕೊಂಡು ಇದಿರಿರುವವರನ್ನು ಹಳಿಯುವುದಕ್ಕೆ ಮನೆಯಲ್ಲಿ ಮಕ್ಕಳಿಗೆ ಬಹಳಷ್ಟು ಪೋಷಕರೇ ಮಾದರಿಯಾಗುತ್ತಾರೆ.

ತಾವು ಸಣ್ಣವರಿದ್ದಾಗ ಅದೆಷ್ಟು ಕಷ್ಟಪಟ್ಟೆವು. ನಮಗೆ ಕೇಳಿದ್ದೆಲ್ಲಾ ಸಿಗುತ್ತಿರಲಿಲ್ಲ. ನಿಮಗೆ ಎಲ್ಲಾ ಸಿಗುತ್ತಿದೆ. ನಿಮಗೆ ಕಷ್ಟ ಅರ್ಥವಾಗಲ್ಲ. ನಾವು ಅಷ್ಟು ದೂರ ನಡೆದುಕೊಂಡು ಹೋಗುತ್ತಿದ್ದೆವು. ನಿಮಗೆ ಈಗ ವಾಹನ ಸೌಕರ್ಯವಿದೆ. ನಮಗೆ ಹೊಟ್ಟೆಗೆ ಸರಿಯಾಗಿ ದೊರಕುತ್ತಿರಲಿಲ್ಲ. ನಿಮಗೆ ಕೇಳಿದ್ದು ಕೇಳಿದ್ದೆಲ್ಲಾ ಸಿಗುತ್ತದೆ. ನಿಮಗೆ ಹೊಟ್ಟೆ ತುಂಬಾ ಸಿಗತ್ತಲ್ಲಾ ಅದಕ್ಕೇ ಕೊಬ್ಬು. ನಮಗೆ ಒಂದು ಪುಸ್ತಕ ಬೇಕಾದರೆ ಅದೆಷ್ಟು ಕಾಡಿಬೇಡಿ ಪಡೆಯಬೇಕಿತ್ತು. ನೀವು ಅದೆಷ್ಟು ವ್ಯರ್ಥ ಮಾಡುತ್ತೀರಿ. ಇಲ್ಲಿ ಪೋಷಕರು ತಮ್ಮನ್ನು ಬಣ್ಣಿಸಿಕೊಂಡು, ಮಕ್ಕಳನ್ನು ಹಳಿದುಕೊಂಡು ಮಾಡುತ್ತಿರುವುದೇನು? ಮಕ್ಕಳ ಮುಂದೆ ಪೋಷಕರ ಆತ್ಮರತಿಯ ಪ್ರದರ್ಶನ.

ಕಪಟತನ ಕದವಿಕ್ಕಿಕೊಳ್ಳದು

ಆತ್ಮರತಿಯ ವೇದಿಕೆ ಯಾವುದಾದರೂ ಆಗಬಹುದು. ದೇಗುಲ, ಅನಾಥಾಶ್ರಮ, ಸಾಮಾಜಿಕ ಸಂಸ್ಥೆಗಳು, ಆಧ್ಯಾತ್ಮಿಕ ಆಶ್ರಮಗಳು, ಧಾರ್ಮಿಕ ಕೇಂದ್ರಗಳು; ಹೀಗೆ.
ಆತ್ಮರತಿಯ ಈ ಅರಿಮೆಯ ಬಗ್ಗೆ ಎಚ್ಚರವಹಿಸಲು ಯೇಸು ನೀಡುವ ಎಚ್ಚರಿಕೆ ಬಹಳ ಸ್ಪಷ್ಟವಾಗಿದೆ.

ನೀನು ದಾನಧರ್ಮ ಮಾಡುವಾಗ ತುತ್ತೂರಿ ಊದಿಸಬೇಡಿ. ಜನರ ಹೊಗಳಿಕೆಗಾಗಿ ಕಪಟಿಗಳು ಪ್ರಾರ್ಥನಾಮಂದಿರಗಳಲ್ಲೂ ಹಾದಿಬೀದಿಗಳಲ್ಲೂ ಹೀಗೆ ಪ್ರದರ್ಶನ ಮಾಡುತ್ತಾರೆ. ನೀನು ದಾನಧರ್ಮ ಮಾಡುವಾಗ ನಿನ್ನ ಬಲಗೈ ಕೊಡುವುದು ನಿನ್ನ ಎಡಗೈಗೂ ತಿಳಿಯದ ಹಾಗೆ ಗೋಪ್ಯವಾಗಿರಲಿ.”
“ಪ್ರಾರ್ಥನೆ ಮಾಡುವಾಗ ಕಪಟಿಗಳಂತೆ ಮಾಡಬೇಡಿ. ಜನರು ತಮ್ಮನ್ನು ನೋಡಲೆಂದು ಪ್ರಾರ್ಥನಾಮಂದಿರಗಳಲ್ಲೂ ಬೀದಿಯ ಚೌಕಗಳಲ್ಲೂ ನಿಂತು ಪ್ರಾರ್ಥನೆ ಮಾಡಲು ಇಚ್ಛಿಸುತ್ತಾರೆ. ನೀನು ಪ್ರಾರ್ಥನೆ ಮಾಡುವಾಗ ನಿನ್ನ ಕೊಠಡಿಗೆ ಹೋಗು; ಬಾಗಿಲನ್ನು ಮುಚ್ಚು; ಅಂತರಂಗದಲ್ಲಿರುವ ನಿನ್ನ ತಂದೆಗೆ ಪ್ರಾರ್ಥನೆ ಮಾಡು.”

ತಾನೆಷ್ಟು ಪರಮ ಭಕ್ತ ಎಂದು ಹೊರಗೆ ತೋರಿಸಿಕೊಳ್ಳುವುದು ಭಕ್ತಿಯಲ್ಲ ಆತ್ಮರತಿ ಎನ್ನುವುದು ಯೇಸುವಿನ ಧೋರಣೆ. ಈ ಅರಿಮೆಯನ್ನು ಗುರುತಿಸುತ್ತಾ ಮುಂದುವರಿಸುವ ಬಸವಣ್ಣ,  ಮಾಡಿ ಕೆಟ್ಟರು ಮನವಿಲ್ಲದೆ. ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ” ಮಾಡುವ ಮತ್ತು ನೀಡುವುದು ಎರಡೂ ತನ್ನ ಆತ್ಮರತಿಯ ತೃಪ್ತಿಗೇ ಹೊರತು ಆತ್ಮತೃಪ್ತಿಗಲ್ಲ. ಮಾಡುವ ನೀಡುವ ನಿಜಗುಣವುಳ್ಳವನು ಡಂಗೂರವನ್ನು ಸಾರುವುದೇನೂ ಬೇಕಾಗಿಲ್ಲ ಎಂಬುದು ಬಸವಣ್ಣನವರ ಸ್ಪಷ್ಟತೆ.

ಯೇಸು ಹೇಳುವಂತೆ ಕಪಟತನವು ಕದವಿಕ್ಕಿಕೊಳ್ಳದು. ಹೊರಗೆ ಆಡಂಬರಕ್ಕೆ ತನ್ನ ಪ್ರದರ್ಶನ ಮಾಡಬೇಕು. ಅದು ದಾನವೋ, ಪ್ರಾರ್ಥನೆಯೋ, ಪೂಜೆಯೋ ಎಂತದ್ದೋ. ಈಗ ಕರೋನಾ ಲಾಕ್ ಡೌನ್ ಸಮಯದಲ್ಲಿಯೂ ಕೂಡಾ ಅದೆಷ್ಟು ಜನರು ತಮ್ಮ ಪಾಡಿಗೆ ತಾವು ಆಹಾರ ವಿತರಣೆ ಅಥವಾ ದೈನಂದಿನ ಜೀವನಕ್ಕೆ ಅಗತ್ಯವಿರುವುದರ ವಿತರಣೆಗಳನ್ನು ಉಚಿತವಾಗಿ ತಮ್ಮ ಸಾಮಾಜಿಕ ಕರ್ತವ್ಯದಂತೆ ಆತ್ಮತೃಪ್ತಿಗಾಗಿ ಮಾಡುತ್ತಿದ್ದಾರೆ. ಹಾಗೆಯೇ ಒಂದಿಷ್ಟು, ಒಂದು ದಿನ ಎಲ್ಲೋ ಒಂದಷ್ಟು ಮಾಡಿ ಅದರ ಫೋಟೋ ಮತ್ತು ವಿಡಿಯೋಗಳನ್ನು ಮಾಡಿಕೊಂಡು ವರ್ಷವಿಡೀ ವಾಟ್ಸಪ್ ಮತ್ತು ಫೇಸ್ಬುಕ್ಕಿನಲ್ಲಿ ಎಲ್ಲರಿಗೂ ತೋರಿಸಿಕೊಂಡು ಪ್ರಶಂಸೆಯ ಹಸಿವಿಗೆ ಉಣಬಡಿಸಿಕೊಳ್ಳುತ್ತಿರುವುದೂ ಕೂಡಾ ಬೇಕಾದಷ್ಟಿದೆ.

ಕ್ರೂರ ಕರುಣೆ

ಕೆಲವರಿಗೆ ಅವರಾತ್ಮರತಿಯ ತೃಪ್ತಿಗೆ ಅನಾಥಾಶ್ರಮಗಳ ಅಥವಾ ವೃದ್ಧಾಶ್ರಮಗಳೂ ಕೂಡಾ ಆತ್ಮರತಿಯ ವೇದಿಕೆಗಳಾಗುತ್ತವೆ. ಮೊದಲನೆಯದಾಗಿ ಅದನ್ನು ಅನಾಥಾಶ್ರಮ ಎನ್ನುವುದೇ ಒಂದು ವ್ಯಂಗ್ಯ ಮತ್ತು ಕ್ರೂರ. ಆ ಗೂಡಿನಲ್ಲಿರುವವರನ್ನು ತಾವು “ಅನಾಥ ಅನಾಥ” ಎಂಬ ಪ್ರಜ್ಞೆಯನ್ನು ಸದಾ ಜಾಗೃತವಾಗಿಡುವ ಫಲಕಗಳು ಅವು. ಅಲ್ಲಿಗೆ ಹೋಗಿ ಸಮಾರಂಭದಂತೆ ಒಂದು ಕಾರ್ಯಕ್ರಮ ಮಾಡಿ, ವೇದಿಕೆಯ ಮೇಲೆ ದಾನಿಗಳನ್ನು ಇನ್ನಿಲ್ಲದಂತೆ ಹಾಡಿ ಹೊಗಳಿ, ಅವರು ಉಬ್ಬಿ, ಕೊಡುವ ಕೈ ಮೇಲೆ ಎಂಬ ಭಾವದಿಂದ ಮೈಮರೆತು, ತಮ್ಮ ಮುಂದೆ ಕುಳಿತಿರುವ ಅನಾಥರು, ವೃದ್ಧರು, ಮಕ್ಕಳು ತಾವು ಯಾರದೋ ಅಧೀನದಲ್ಲಿ, ಕೃಪೆಯಲ್ಲಿ ಬದುಕುತ್ತಿದ್ದೇವೆ ಎಂಬ ಕೀಳರಿಮೆಯಲ್ಲಿ ಮುಖಬಾಡಿಸಿಕೊಂಡು ಕುಳಿತಿದ್ದು ಯಾವ ಸಾರ್ಥಕ್ಯಕ್ಕೆ?

ಅನಾಥಾಲಯದಿಂದಲೋ, ಹೆಣ್ಣು ಮಕ್ಕಳಿರುವ ಸೇವಾಶ್ರಮದಿಂದಲೋ ಯಾರನ್ನಾದರೂ ಮದುವೆಯಾಗುವುದು ಇನ್ನೂ ದೊಡ್ಡ ತುತ್ತೂರಿ. ‘ಆ ಹೆಣ್ಣು ಮಗುವಿಗೆ ಬಾಳು ಕೊಡುತ್ತಿರುವ ತಾನೊಬ್ಬ ಬಹು ದೊಡ್ಡ ಉದಾರಿ’ ಎಂದು ಪತ್ರಿಕೆಯಲ್ಲಿ ಪ್ರಕಟಿಸಿಕೊಳ್ಳುವಷ್ಟು ಆತ್ಮರತಿ. ಯಾರು ಯಾರಿಗೆ ಬಾಳು ಕೊಡುವುದು? ವಿಧವೆ ಎಂದು ಕರೆಯುವುದೂ, ಅನಾಥರೆಂದೂ ಕರೆಯುವುದೂ ಕೂಡಾ ಒಂದು ಅಮಾನವೀಯವೇ ಆಗಿರುವಾಗ, ಅವರನ್ನು ಮದುವೆಯಾಗಿ ಬಾಳು ಕೊಡುತ್ತೇನೆ ಎಂದು ಘೋಷಿಸಿಕೊಳ್ಳುವುದು ಆ ಹೆಣ್ಣುಮಗುವನ್ನು ದೈನೇಸಿಯಾಗಿಯೇ ಇಡುವ ಬಗೆ. ಆತ್ಮರತಿಯ ಅರಿಮೆಯುಳ್ಳವರಿಗೆ ಇಂಥಾ ಕ್ರೂರ ಕಾರುಣ್ಯವು ಮತ್ತು ಪ್ರದರ್ಶಕ ಔದಾರ್ಯವು ಸಾಮಾನ್ಯ.

ವಿಧವೆಯ ಅಥವಾ ಯಾವುದೇ ಹೆಣ್ಣುಮಗುವಿನೊಂದಿಗಿನ ಮದುವೆ ಆ ಭಾವವೇ ಇಲ್ಲದೇ ಬರಿಯ ವ್ಯಕ್ತಿಗತವಾಗಿ ಆಪ್ತ ಸಂಗತಿಯಾಗಬಾರದೇ! ಕೆಲವರು ಕೊಡುವ ಕಾರಣವೇನೆಂದರೆ, ಇವು ಇತರರಿಗೆ ಪ್ರೇರಣೆಯಾಗುವುದು ಎಂದು. ಒಬ್ಬನ ಆತ್ಮರತಿಯು ಇನ್ನೊಬ್ಬನ ಆತ್ಮರತಿಯ ಪ್ರದರ್ಶನಕ್ಕೆ ದಾರಿಯಾಗುವುದು ಅಷ್ಟೇ. ಏಕೆಂದರೆ, ಪ್ರಾಮಾಣಿಕ ಮನಸ್ಸುಳ್ಳವನಿಗೆ ಈ ಪ್ರೇರಣೆಗಳೇನೂ ಬೇಕಾಗಿಲ್ಲ. ಆತನ ಆತ್ಮಸಾಕ್ಷಿ ಮತ್ತು ಸ್ವಪ್ರೇರಣೆಯೇ ಸಾಕಾಗಿರುತ್ತದೆ.

ಸಾಮೂಹಿಕ ರತಿಕ್ರೀಡೆ

ಎಷ್ಟೋ ಬಾರಿ ನಮ್ಮ ದೇಶದಲ್ಲಿಯೂ ಸೇರಿದಂತೆ ವಿವಿಧ ಸಮಾಜಗಳಲ್ಲಿ ಯಾವುದಕ್ಕೆ ನಾಚಿಕೊಳ್ಳಬೇಕೋ ಅದಕ್ಕೆ ಹೆಮ್ಮೆ ಪಟ್ಟುಕೊಳ್ಳುತ್ತಾರೆ. ಯಾವುದಕ್ಕೆ ಹೆಮ್ಮೆಪಟ್ಟುಕೊಳ್ಳಬೇಕೋ ಅದಕ್ಕೆ ನಾಚಿಕೊಳ್ಳುತ್ತಾರೆ.

ಸಮೂಹ ಆತ್ಮರತಿ ಅಥವಾ (Collective narcissism or group narcissism)
ಅಂತ ಒಂದಿದೆ. ಅದರದೇನಪ್ಪಾ ಲಕ್ಷಣ ಅಂದರೆ, ವ್ಯಕ್ತಿಗತವಾದ ಆತ್ಮರತಿಯು ಸಮುದಾಯ ಗುರುತಿನಲ್ಲಿ ಅಥವಾ ಸಂಕಲಿತವಾಗಿರುವ ವಿಷಯದಲ್ಲಿ ವಿಲೀನಗೊಳಿಸಿಕೊಂಡಿರುವುದು. ಆ ಸಮುದಾಯವನ್ನು ಅಥವ ಸಮೂಹವನ್ನು ಅಥವಾ ಸಂಸ್ಥೆಯನ್ನು ಯಾರಾದರೂ ಏನಾದರೂ ನಕಾರಾತ್ಮಕವಾಗಿ ಅಂದರೆ ವೈಯಕ್ತಿಕವಾಗಿ ತನಗೇ ಏನಾದರೂ ಆದಂತೆ ಭಾಸವಾಗುವುದು.

ಅದೇ ರೀತಿಯಲ್ಲಿ ತಾನು ಆ ಸಮೂಹದವನು ಎಂದು ಹೆಮ್ಮೆ ಪಡುವುದು. ಅದೇ ರೀತಿಯಲ್ಲಿ ಅದಕ್ಕೇನಾದರೂ ಪ್ರಶಂಸೆಯು ದೊರಕಿದರೆ ವಿಪರೀತವಾಗಿ ತಾನು ಹೆಮ್ಮೆ ಪಡುವುದು. ಇದು ಹಲವು ವೇಷಗಳನ್ನು ಹಾಕಿಕೊಂಡು ಬರುತ್ತದೆ. ಧರ್ಮ, ಸಂಸ್ಕೃತಿ, ಜಾತಿ, ಸಂಘ, ಸಂಸ್ಥೆ; ಹೀಗೆ. ಧಾರ್ಮಿಕತೆಯ ಸಂಘರ್ಷವೇ ಬಹಳ ಪ್ರಧಾನ ಕಿರುಕುಳವಾಗಿರುವ ಈ ಸಮಯದಲ್ಲಿ ಧಾರ್ಮಿಕ ಸಮುದಾಯಗಳ ವಿಚಾರವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ.

ನಾನು ಇಂತಹ ಧರ್ಮದಲ್ಲಿ ಗುರುತಿಸಿಕೊಂಡೆನೆಂದರೆ, ಆ ಧರ್ಮವು ಅತ್ಯಂತ ಶ್ರೇಷ್ಟವೆಂದೂ, ಅದರಲ್ಲಿ ಯಾವುದೇ ಬಗೆಯ ನ್ಯೂನ್ಯತೆಗಳಿರುವುದಿಲ್ಲವೆಂದೂ, ಅದರ ವಿಚಾರಗಳೇ ಅಂತಿಮವೆಂದೂ, ಅದನ್ನು ವಿರೋಧಿಸುವವರು ಅಥವಾ ವಿಮರ್ಶಿಸುವವರು ನಮ್ಮ ಶತ್ರುಗಳೆಂದು ಭಾವಿಸುವುದು ಸಮೂಹರತಿಯ ಅರಿಮೆಯ ವ್ಯಾಪ್ತಿಗೆ ಒಳಗಾಗುತ್ತದೆ.

ಎಷ್ಟೋ ಬಾರಿ ಆ ಧರ್ಮವು ತಾನು ಹುಟ್ಟಿದ ಸಂದರ್ಭದ ಸಾಮಾಜಿಕ ವ್ಯವಸ್ಥೆಗೆ ಮತ್ತು ಆಗಿನ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ತನ್ನ ರೂಪುರೇಷೆಗಳನ್ನು ತೀರ್ಮಾನಿಸಿಕೊಂಡಿರುತ್ತದೆ. ಹಿಂದೂ ಧರ್ಮದ ಹೊರತಾಗಿ ವಿಶ್ವದ ಇತರ ಸ್ಥಾಪಿತ ಧರ್ಮಗಳೆಲ್ಲವೂ ಕೂಡಾ ಸಮಾಜೋಧಾರ್ಮಿಕದ ಆಂದೋಲನದ ಪ್ರತಿಫಲಗಳೇ ಆಗಿವೆ. ಹಾಗಾಗಿ ಅವುಗಳನ್ನು ಈ ಕಾಲ ಘಟ್ಟದಲ್ಲಿ ನಿಲುಕಿಸಿಕೊಳ್ಳುವಾಗ ಕೆಲವು ಅಭಿಪ್ರಾಯ ಬೇಧಗಳು ಮತ್ತು ತಾಂತ್ರಿಕ ವ್ಯತ್ಯಾಸಗಳು ಬಹಳ ಸಹಜವಾಗಿರುತ್ತವೆ.

ಇನ್ನು ಹಿಂದೂ ಧರ್ಮವು ವಿಶಾಲ ಭೌಗೋಳಿಕ ಪರಿಸರದಲ್ಲಿ ವಿಕಾಸವಾದ ಜೀವನ ಪದ್ಧತಿಯೇ ಹೊರತು ಯಾವುದೊಂದು ಉದ್ದೇಶದ ಹಿನ್ನೆಲೆಯಲ್ಲಿ ಸ್ಥಾಪಿತವಾದದ್ದೇ ಅಲ್ಲ. ಇಲ್ಲೇ ಸಮಸ್ಯೆ ಇರುವುದು. ವ್ಯಕ್ತಿಗತವಾಗಿ ಸಂಮೋಹಿತಗೊಂಡು ವ್ಯಕ್ತಿಗಳು ಆಯಾ ಧಾರ್ಮಿಕತೆಯಲ್ಲಿ ಮೈಮರೆಯುವುದರಿಂದ ಧರ್ಮವು ದಾರಿಯಾಗದೇ ಗುರಿಯಾಗಿ ಪರಿಣಮಿಸಿ ಒಂದು ಅರಿಮೆಯಾಗಿ ಪರಿಣಮಿಸುತ್ತದೆ.

ತನ್ನ ಧರ್ಮವೇ ಅಂತಿಮವೆಂದೂ, ಶ್ರೇಷ್ಟವೆಂದೂ ಎತ್ತಿ ಹಿಡಿಯಲು ಎಲ್ಲಾ ಧರ್ಮಿಯರೂ ಹೋರಾಡುವಾಗ ಸಂಘರ್ಷಗಳು ಉಂಟಾಗುತ್ತವೆ. ಅಷ್ಟೇ ಅಲ್ಲದೇ ನಿನ್ನ ಧರ್ಮವು ನನ್ನ ಧರ್ಮಕ್ಕಿಂತ ಕನಿಷ್ಟ ಎಂದು ನಿರೂಪಿಸಲು ತನ್ನ ವಿರೋಧಿ ಧರ್ಮವೆಂದು ಯಾವುದನ್ನು ಭಾವಿಸಿರುತ್ತಾರೋ ಅದರ ಹುಳುಕುಗಳನ್ನು ಎತ್ತಿ ಹಿಡಿಯುವುದು, ಆಯಾ ಧಾರ್ಮಿಕ ವ್ಯಕ್ತಿಗಳ ತೇಜೋವಧೆ ಮಾಡಲು ಯತ್ನಿಸುವುದು, ಆ ಮೂಲಕ ವಿರೋಧಿಗಳನ್ನು ಕೆರಳಿಸುವುದು ಇತ್ಯಾದಿಗಳಾಗುತ್ತವೆ. ಇದರಿಂದ ಸಾಂಪ್ರದಾಯಿಕ ವಿರೋಧಿಗಳು ರೂಪುಗೊಳ್ಳುತ್ತವೆ.

ಆಗ ರಾಜಕೀಯ, ಸಾಮಾಜಿಕ ಸ್ಥಾನಮಾನವೇ ಮೊದಲಾಗಿ ಸಾಂಸ್ಕೃತಿಕ ಅಸಹನೆಗಳೂ ಉಂಟಾಗಿ ಸಾಮಾಜಿಕ ಸಂಘರ್ಷಗಳು ಉಂಟಾಗಿ ಜೀವಗಳು ಮೌಲ್ಯರಹಿತವಾಗುತ್ತವೆ.ಆಗ ನಡೆದ ಕ್ರೈಸ್ತರ ಮತ್ತು ಮುಸಲ್ಮಾರದ ಕ್ರುಸೇಡ್ ಯುದ್ಧಗಳು, ಇಸ್ರೇಲ್ ಮತ್ತು ಪ್ಯಾಲೆಸ್ತಿನನಲ್ಲಿ ಮುಸಲ್ಮಾನರ ಮತ್ತು ಯಹೂದಿಗಳ ಸಂಘರ್ಷ, ಪ್ರಾಚೀನ ಭಾರತದಲ್ಲಿ ವೈದಿಕರ ಮತ್ತು ಬೌದ್ಧಾನುಯಾಯಿಗಳ ಸಂಘರ್ಷ, ಪ್ರಸ್ತುತ ಭಾರತದಲ್ಲಿ ಹಿಂದೂ ಮುಸ್ಲೀಮರ ಸಂಘರ್ಷಗಳು, ಆರ್ಯ ರಕ್ತೋನ್ಮಾದದಲ್ಲಿ ಯಹೂದಿಗಳ ಮೇಲೆ ನಾಜಿಗಳ ದ್ವೇಷ, ರೊಹಿಂಗ್ಯಾದಲ್ಲಿ ಮುಸಲ್ಮಾನರ ಮೇಲೆ ಬೌದ್ಧರ ಆಕ್ರಮಣ, ತಮಿಳುನಾಡಿನಲ್ಲಿ ಶೈವ ಮತ್ತು ವೈಷ್ಣವ ಸಂಘರ್ಷ, ಪ್ರಾಚೀನ ಕರ್ನಾಟಕದಲ್ಲಿ ಜೈನ ಮತ್ತು ಶೈವರ ಸಂಘರ್ಷ; ಹೀಗೆ ಒಂದೆರಡು ಉದಾಹರಣೆಗಳಲ್ಲ.

ತಮ್ಮ ಶ್ರೇಷ್ಟತೆಯು ತಮ್ಮ ವಿರೋಧಿಗಳ ದ್ವೇಷದ ಆಧಾರದ ಮೇಲೆಯೇ ಅವಲಂಬಿತವಾಗಿರುವುದು ಸಮೂಹ ರತಿಯ ಪರಮಾವಧಿ. ಪರಸ್ಪರ ವ್ಯಕ್ತಿಗತ ಪರಿಚಯವೇ ಇಲ್ಲದವರು, ಪರಸ್ಪರ ಯಾವುದೇ ದ್ವೇಷ ಮತ್ತು ಸಂಘರ್ಷಗಳು ಇರದಿದ್ದರೂ ಸಮುದಾಯ, ಮತ, ಧರ್ಮ, ಸಂಸ್ಕೃತಿ, ಬುಡಕಟ್ಟು ಮತ್ತು ಜನಾಂಗಗಳು ಎಂಬ ಕಾರಣಕ್ಕಾಗಿ ವಿರೋಧಿಸುವುದು ಮತ್ತು ದಾಳಿಗಳನ್ನು ಮಾಡುವುದು ಸಮುದಾಯದಲ್ಲಿ ಉಲ್ಬಣಗೊಂಡಿರುವ ಮನೋರೋಗದ ಲಕ್ಷಣ. ನೆಮ್ಮದಿಯ ಜೀವನಕ್ಕೆ, ಬದುಕಿನ ವ್ಯವಹಾರಕ್ಕೆ ಬೇಡದೇ ಇರುವುದೆಲ್ಲವೂ ದ್ವೇಷಿಸುವುದಕ್ಕೆ ಕಾರಣವಾಗಿ ಪರಿಣಮಿಸುತ್ತದೆ.

ವ್ಯಕ್ತಿಗತವಾದಂತಹ ದೌರ್ಬಲ್ಯವನ್ನು, ಅಪರಾಧಗಳನ್ನು ಸಮುದಾಯದ ತಲೆಗೆ ಕಟ್ಟಿ ದ್ವೇಷಿಸುವಂತಹ ಮನಸ್ಥಿತಿ ಬೆಳೆದಿರುತ್ತದೆ. ಯಾರಾದರೊಬ್ಬ ಮುಸಲ್ಮಾನ ಕ್ಯಾಬ್ ಡ್ರೈವರ್ ನಿಮ್ಮೊಡನೆ ಸರಿಯಾಗಿ ಚಿಲ್ಲರೆ ಕೊಡದೇ ಹೊರಟುಹೋದಾಗ ಮುಸಲ್ಮಾನರೇ ಹೀಗೆ ಮೋಸಗಾರರು ಎಂಬ ಮಾತು ಮೊದಲು ಹೊರಟರೆ, ಅಥವಾ ಬ್ರಾಹ್ಮಣ ಪತ್ರಕರ್ತನೊಬ್ಬ ತನ್ನ ಶ್ರೇಷ್ಟತೆಯ ವ್ಯಸನವನ್ನು ಪತ್ರಿಕೆಯಲ್ಲಿಯೋ ಅಥವಾ ಮಾಧ್ಯಮಗಳಲ್ಲಿಯೋ ಕಾರಿಕೊಂಡಾಗ ಬ್ರಾಹ್ಮಣರೆಲ್ಲರೂ ಹೀಗೇ ಎಂದು ಅಭಿಪ್ರಾಯಕ್ಕೆ ಬಂದರೆ ಅಲ್ಲಿಗೆ ಸಮೂಹ ಆತ್ಮರತಿಯ ಅರಿಮೆಯಲ್ಲಿ ಸಿಕ್ಕಿದ್ದೇವೆಂದು ಅರ್ಥ.

ವ್ಯಕ್ತಿಗಳೇ ಇಂತಹ
ಮನೋರೋಗಗಳಲ್ಲಿರುವವರು. ಅವರು ಯಾವ ಜಾತಿಯಲ್ಲಿದ್ದರೂ, ಧರ್ಮದಲ್ಲಿದ್ದರೂ ಅವುಗಳ ಲಾಂಛನದಡಿಯಲ್ಲಿ ತಮ್ಮ ಅರಿಮೆಗಳ ಪ್ರದರ್ಶನ ಮಾಡುತ್ತಿರುತ್ತಾರೆ. ಅವನು ಮುಸಲ್ಮಾನನಾಗಿದ್ದರೆ ಇಸ್ಲಾಂ ಶ್ರೇಷ್ಟತೆಯ ಗೀಳು, ಹಿಂದೂ ಆಗಿದ್ದರೆ ಹಿಂದೂ ಶ್ರೇಷ್ಟತೆಯ ಗೀಳು ಅಷ್ಟೇ. ಈ ಗೀಳಿನ ಅಥವಾ ವ್ಯಸನದ, ಅರಿಮೆಯ ಸಮಸ್ಯೆ ಧರ್ಮಗಳದ್ದೋ, ಸಂಸ್ಕೃತಿಗಳದ್ದೋ ಅಲ್ಲ. ವ್ಯಕ್ತಿಗಳದ್ದು. ಅವನಿಗಿರುವ ಸಮಸ್ಯೆ Collective narcissism or group narcissism. ಆದರೆ ಎಡವಟ್ಟಾಗುವುದು ಎಲ್ಲಿ ಗೊತ್ತೇ? ಸಮಾನ ಮನಸ್ಕರು ಸಮೂಹಗಳನ್ನು ಮಾಡಿಕೊಂಡು ಅವರ ಅಭಿರುಚಿ, ಆಸಕ್ತಿ ಇತ್ಯಾದಿಗಳನ್ನು ಗಟ್ಟಿಗೊಳಿಸಿಕೊಳ್ಳುವಂತೆ, ಈ ಸಮೂಹ ರತಿಯ ಅರಿಮೆಯ ಮನಸ್ಥಿತಿಯವರೂ ಕೂಡಾ ಆಯಾ ಜಾತಿ, ಧರ್ಮ ಇತ್ಯಾದಿಗಳ ಲಾಂಛನಗಳಲ್ಲಿ ಶ್ರೇಷ್ಟತೆಯ ವ್ಯಸನವನ್ನು ಗಟ್ಟಿಗೊಳಿಸಿಕೊಳ್ಳುತ್ತಾ ಹೋಗುತ್ತಾರೆ.

ಅದರ ಜಾಲದಲ್ಲಿ ಸಿಕ್ಕವರೆಲ್ಲರೂ ಮತ್ತೆ ಮತ್ತೆ ತಮ್ಮ ಧರ್ಮಾಂಧತೆಗೆ ಅಥವಾ ಜಾತಿವಾದಕ್ಕೆ ತಮ್ಮನ್ನು ಅರ್ಪಿಸಿಕೊಳ್ಳುತ್ತಾ ಹೋಗುತ್ತಾರೆ. ಭಾರತದಲ್ಲಿ ಜಾತಿಯ ವಿಷಯದಲ್ಲಿಯೂ ಈ ಸಾಮುದಾಯಿಕ ಮಾನಸಿಕ ಸಮಸ್ಯೆ ಬಹಳ ಗಾಢವಾಗಿದೆ. ಯಾವುದೇ ವ್ಯಕ್ತಿಯು ತನ್ನ ಜಾತಿಯ ಹೆಸರನ್ನು ತನ್ನ ಹೆಸರಿನ ಜೊತೆಗೆ ಹೆಮ್ಮೆಯಿಂದ ತಗುಲಿಹಾಕಿಕೊಳ್ಳುವನೋ, ಅಥವಾ ಅಪ್ರಾಯೋಗಿಕವಾಗಿದ್ದರೂ, ಅವೈಚಾರಿಕವಾಗಿದ್ದರೂ, ಅವೈಜ್ಞಾನಿಕವಾಗಿದ್ದರೂ, ಅಪ್ರಸ್ತುತವಾಗಿದ್ದರೂ ಜಾತಿಯ ಆಚರಣೆಗಳನ್ನು ಜೀವಂತವಾಗಿ ಇಡಲೇಬೇಕು ಎಂದು ಪ್ರಯತ್ನಿಸುತ್ತಾ, ಸಾಮಾಜಿಕ ಮತ್ತು ವೈಯಕ್ತಿಕವಾದ ಮಾನಸ ಸಂಬಂಧಗಳನ್ನು ಕಡೆಗಣಿಸುತ್ತಾನೆಂದರೆ ಅವನಿಗೆ ಈ ಮನೋರೋಗವಿದೆ ಎಂದೇ ಅರ್ಥ.

ಇದೇ ರೀತಿಯಲ್ಲಿ ಸಂಸ್ಕೃತಿಯಲ್ಲಿ ಉನ್ಮತ್ತತೆಯಿಂದ ಗುರುತಿಸಿಕೊಳ್ಳುವಂತಹ ಅರಿಮೆಯೂ ಕೂಡಾ ಇದರ ಒಂದು ಭಾಗವಾಗಿದೆ. ಗಮನಿಸಿ, ಇಂತವರೆಲ್ಲಾ ಒಟ್ಟೊಟ್ಟಿಗೆ ಗುಂಪುಗೂಡಿಕೊಂಡು ನಮ್ಮದೇ ಶ್ರೇಷ್ಟ, ಮತ್ತೊಬ್ಬರದು ಕನಿಷ್ಟ, ನಾವು ಏನಾದರೂ ನಮ್ಮದನ್ನು ಬಿಡಬಾರದು. ಹೀಗೆಲ್ಲಾ ಮಾತಾಡಿಕೊಂಡು ಸಂತೋಷಪಡುವುದು ಸಾಮೂಹಿಕ ರತಿಕ್ರೀಡೆಯಂತೆ.

ಜಗತ್ತಿನಲ್ಲಿಯೇ ನಮ್ಮಷ್ಟು ಶ್ರೇಷ್ಟ ಸಂಸ್ಕೃತಿ ಯಾವುದೂ ಇಲ್ಲ, ನಮ್ಮದೇ ಅತ್ಯಂತ ಪುರಾತನ, ನಮ್ಮದೇ ಈಗಲೂ ಪ್ರಸ್ತುತ, ಇತರ ಎಲ್ಲಾ ಸಂಸ್ಕೃತಿಗಳ ನಮ್ಮದಕ್ಕಿಂತ ಕೀಳು; ಈ ಬಗೆಯ ವ್ಯಸನವು ಅಥವಾ ಶ್ರೇಷ್ಟತೆಯ ಗೀಳು ಕೂಡಾ ಈ ಕಾಂಪ್ಲೆಂಕ್ಸ್‍ನ ಒಂದು ಭಾಗವಾಗಿದೆ.

ಒಳಕುದಿ

ಹಾಗಾದರೆ ನಮ್ಮದರ ಬಗ್ಗೆ ನಮಗೆ ಹೆಮ್ಮೆ, ಅಭಿಮಾನ ಬೇಡವೇ? ಬೇಕು. ಅದು ಆರೋಗ್ಯಕರವಾಗಿರುವುದು ಯಾವಾಗೆಂದರೆ, ನಮ್ಮಂತದ್ದೇ ಹಲವು ಸಂಸ್ಕೃತಿಗಳು, ಧರ್ಮಗಳು ಜಗತ್ತಿನಲ್ಲಿ ಅಸ್ತಿತ್ವದಲ್ಲಿವೆ. ಅವುಗಳಿಗೆ ಅವುಗಳದೇ ಆದಂತಹ ಮೌಲ್ಯವಿದೆ. ನಾವು ಅನುಸರಿಸುತ್ತಿರುವಂತೆ ಅವುಗಳನ್ನು ಕೂಡಾ ನಮ್ಮಂತಹ ಜೀವಿಗಳೇ ಅನುಸರಿಸುತ್ತಿದ್ದಾರೆ. ನಮ್ಮದು ಮತ್ತು ಅವರದರಲ್ಲಿ ಕೂಡುವಿಕೆಯ ಅಂಶಗಳಾವುವು? ಭಿನ್ನವಿರುವ ಅಂಶಗಳಾವುವು; ಇತ್ಯಾದಿಗಳೆಲ್ಲಾ ನಮ್ಮ ಅಧ್ಯಯನದ ಅಥವಾ ಅರಿವಿನ ವಿಷಯಗಳಾಗಿ ಒದಗಿದರೆ ಆರೋಗ್ಯಕರವಾದ ಸಾಂಸ್ಕೃತಿಕ ಅಥವಾ ಧಾರ್ಮಿಕವಾದ ವಾತಾವರಣವು ಸಮಾಜದಲ್ಲಿ ಉಂಟಾಗುತ್ತದೆ.

ನಮ್ಮ ಸಂಸ್ಕೃತಿ ಅಥವಾ ಧರ್ಮದ ಮಾನ್ಯತೆಯು ಅಥವಾ ಶ್ರೇಷ್ಟತೆಯು ಮತ್ತೊಂದು ಯಾವುದೋ ಒಂದರ ಜೊತೆಗಿನ ಪೈಪೋಟಿಯಂತಾಗಿರಬಾರದು. ಅಥವಾ ಅದನ್ನು ದ್ವೇಷಿಸುವ ಮಾನದಂಡದಲ್ಲಿ ನಮ್ಮದರ ಶ್ರೇಷ್ಟತನವು ತಲೆಯೆತ್ತುವಂತಹ ಮನಸ್ಥಿತಿಯು ಇರಕೂಡದು. ಅಷ್ಟೇ!
ಒಟ್ಟಾರೆ ವ್ಯಕ್ತಿವ್ಯಕ್ತಿಯ ಮನಸ್ಥಿತಿಗಳು ಆರೋಗ್ಯದಿಂದಿದ್ದರೆ ಸಮಾಜವು ಆರೋಗ್ಯವಾಗಿರುತ್ತದೆ. ಏಕೆಂದರೆ ವ್ಯಕ್ತಿವ್ಯಕ್ತಿಗಳಿಂದ ಕುಟುಂಬ, ಕುಟುಂಬಗಳಿಂದ ಸಮಾಜ.

ಇತರ ಧರ್ಮೀಯರನ್ನು, ಸಂಸ್ಕೃತಿ, ಆಚಾರ ವಿಚಾರಗಳನ್ನು ಅನಿವಾರ್ಯವಾಗಿ ಸಹಿಸಿಕೊಳ್ಳುವಂತಹ ಮನಸ್ಥಿತಿಯೂ ಕೂಡಾ ಆರೋಗ್ಯಕರವೇನಲ್ಲ. ಏಕೆಂದರೆ ಇದು ಒಳ ಕುದಿಯಾಗಿರುತ್ತದೆ. ಈ ಒಳಕುದಿ ಸ್ವೀಕರಿಸಿರುವುದಿಲ್ಲ. ಸಹಿಸಿಕೊಂಡಿರುತ್ತದೆ ಅಷ್ಟೇ. ಯಾವಾಗ ಅವರ ಸಹನಾ ಶಕ್ತಿ ಬಲ ಕಳೆದುಕೊಳ್ಳುತ್ತದೆಯೋ ಆಗ ಸ್ಫೋಟಗೊಳ್ಳುತ್ತದೆ. ಸಮಾಜದ ಧರ್ಮಗಳಲ್ಲಿ, ಸಂಸ್ಕೃತಿಗಳಲ್ಲಿ ಮಾತ್ರವಲ್ಲ ಸಹಿಸಿಕೊಂಡಿರುವ ಈ ಒಳಕುದಿಯ ಸಂಘರ್ಷ. ಮನೆಗಳಲ್ಲಿಯೂ ಕೂಡಾ. ಗಂಡ ಹೆಂಡತಿಯನ್ನು ಅಥವಾ ಹೆಂಡತಿ ಗಂಡನನ್ನು, ಮಕ್ಕಳು ಪೋಷಕರನ್ನು, ಪೋಷಕರು ಮಕ್ಕಳನ್ನು ಮತ್ತು ಇತರ ಸದಸ್ಯರನ್ನು ಅವರವರ ಸ್ವಭಾವ, ಅಭಿರುಚಿ, ವ್ಯಕ್ತಿತ್ವದಂತೆ ಸ್ವೀಕರಿಸಿರುವುದಿಲ್ಲ. ಹೇಗೋ ಸಹಿಸಿಕೊಂಡಿರುತ್ತಾರೆ.

ಸಹಿಸಿಕೊಳ್ಳುವುದಕ್ಕೂ ಸ್ವೀಕರಿಸುವುದಕ್ಕೂ ಬಹಳ ವ್ಯತ್ಯಾಸವಿದೆ. ಸಹಿಸಿಕೊಳ್ಳುವುದು ಎಂದರೆ ಅಸಹನೆ ಇದೆ, ಒಪ್ಪಿಗೆ ಇಲ್ಲ, ಆದರೆ ವಾತಾವರಣವು ಕೆಡಬಾರದು ಎಂದೋ ಅಥವಾ ಇನ್ನಾವುದಾದರೂ ಕಾರಣಕ್ಕೆ ಸಂಘರ್ಷಗಳಾಗಬಾರದು ಎಂದೋ ‘ಅಡ್ಜೆಸ್ಟ್’ ಮಾಡಿಕೊಳ್ಳುವುದು. ಹೊಂದಾಣಿಕೆ ಮಾಡಿಕೊಳ್ಳುವುದು. ಅಡ್ಜೆಸ್ಟ್ ಮಾಡಿಕೊಳ್ಳುವವರು ತಮ್ಮ ಬಲ ಮೇಲಾದಾಗ ರಿಜೆಕ್ಟ್ ಮಾಡುವುದರಲ್ಲಿ ಯಾವ ಆಶ್ಚರ್ಯವೂ ಇರುವುದಿಲ್ಲ. ಅಡ್ಜೆಸ್ಟ್‍ಮೆಂಟ್ ಎಂದರೆ ಒತ್ತಡದಲ್ಲಿರುವ ಬಂಧನವೇ.

ಆದರೆ ಅಕ್ಸೆಪ್ಟ್ ಮಾಡಿರುವವರು ಅವರಿಂದ ಯಾವ ನಿರೀಕ್ಷೆಯನ್ನು ಇಟ್ಟುಕೊಳ್ಳುವುದಿಲ್ಲ. ತಮ್ಮ ಆತ್ಮರತಿಯ ಅರಿಮೆಗೆ ಅನುಗುಣವಾಗಿ ಅವರು ವರ್ತಿಸಬೇಕೆಂದು ಕಾಯುವುದಿಲ್ಲ. ಅವರು ಇರುವುದೇ ಹಾಗೆ. ನಾನು ಇರುವುದೇ ಹೀಗೆ. ಪರಸ್ಪರ ನಿರೀಕ್ಷೆಗಳಿಲ್ಲದೇ ಅನುಬಂಧದಲ್ಲಿರುವುದು. ಕೂಡುವಂತಹ ಚುಕ್ಕಿಗಳಿಗೆ ಗೆರೆಗಳನ್ನು ಎಳೆದು ರಂಗೋಲಿ ಬಿಡಿಸುವುದು. ಆತ್ಮರತಿಯ ಅರಿಮೆಯೆಂದ ಬಿಡುಗಡೆ ಎಂದರೆ ಮಿಲನ. ಆತ್ಮರತಿಯ ಅರಿಮೆಯಲ್ಲಿರುವುದು ಎಂದರೆ ಕಾರಾಗೃಹಗಳೊಂದಿಗೆ ನಡೆದಾಡುತ್ತಿರುವುದು. ಯಾರೂ ಯಾರನ್ನೂ ಸಂಧಿಸರು, ಬೆರೆಯರು.
ಅದಕ್ಕೆ ಬಸವಣ್ಣನವರ ಸರಳ ಸೂತ್ರ “ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ.” ಅರಿಮೆಯಿಂದ ಹೊರಗೆ ಬರುವುದು ವ್ಯಕ್ತಿಯು ತನ್ನ ಮನೋರೋಗದಿಂದ ಮುಕ್ತನಾಗುವುದು ಅಂತರಂಗ ಶುದ್ಧಿ. ವ್ಯಕ್ತಿಗತವಾಗಿ ಮಾನಸಿಕವಾಗಿ ಆರೋಗ್ಯವಾಗಿರುವವರಿಂದ ಆರೋಗ್ಯಕರ ಸಮಾಜವೇ ನಿರ್ಮಾಣವಾಗುತ್ತದೆ. ಇದು ಬಹಿರಂಗ ಶುದ್ಧಿ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಮರೆಯಾದ ಅಪೂರ್ವ ಚಿತ್ರಕಲಾ ಪ್ರತಿಭೆ ‘ಶೋಭಾ ಕರಣಿಕ್’

Published

on

ಶೋಭಾ ಕರಣಿಕ್
  • ಡಾ.ಎನ್.ಕೆ.ಪದ್ಮನಾಭ, ಸಹಾಯಕ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ,ಉಜಿರೆ

ವರು ಬಿಡಿಸುತ್ತಿದ್ದ ರೇಖೆಗಳು ನಮ್ಮ ದೇಶೀ ಸಂಸ್ಕೃತಿಯ ವಕ್ತಾರಿಕೆಯ ಪಾತ್ರ ನಿರ್ವಹಿಸುತ್ತಿದ್ದವು. ಕನ್ನಡದ್ದೇ ಆದ ಕಲಾತ್ಮಕ ಪರಂಪರೆಯನ್ನು ಸೂಕ್ಷ್ಮವಾಗಿ ಗ್ರಹಿಸಿದ್ದ ಅವರ ಚಿತ್ರಗಳು ಜೀವಂತಿಕೆಯ ಗುಣಲಕ್ಷಣದೊಂದಿಗೆ ಕಂಗೊಳಿಸುತ್ತಿದ್ದವು.

ಸಾಂಪ್ರದಾಯಿಕ ಚಿತ್ರಶೈಲಿಯನ್ನು ಆಧುನಿಕ ಅಗತ್ಯಗಳಿಗೆ ತಕ್ಕಂತೆ ಮಣಿಸಿ ಪರಂಪರೆಯೊಳಗೇ ಅಡಗಿದ್ದ ಮೌಲಿಕ ಮಾದರಿಗಳನ್ನು ಮನಗಾಣಿಸುವ ಶ್ರದ್ಧೆಯೊಂದಿಗೇ ಅವರು ಚಿತ್ರವಿನ್ಯಾಸ ರೂಪಿಸುತ್ತಿದ್ದರು. ಇನ್ಸ್ಟಾಗ್ರಾಮ್, ಫೇಸ್‌ಬುಕ್ ಮತ್ತಿತರ ಮಾಧ್ಯಮಗಳ ಮೂಲಕ ತಮ್ಮ ಚಿತ್ರಗಳನ್ನು ಕಾಣಿಸುತ್ತಿದ್ದರು. ಪರಂಪರೆ ಮತ್ತು ವರ್ತಮಾನವನ್ನು ಬೆಸೆದು ಹೊಸ ಬಗೆಯ ಚಿತ್ರಪ್ರಯೋಗಗಳನ್ನು ನಡೆಸುವ ಹುಮ್ಮಸ್ಸಿನೊಂದಿಗೆ ಚಿತ್ರಕಲಾಯಾನ ಮುಂದುವರೆಸಿದ್ದರು. ಅವರ ಹೆಸರು ಶೋಭಾ ಕರಣಿಕ್.

ಇತ್ತೀಚೆಗಷ್ಟೇ ಅವರ ಚಿತ್ರಕಲಾಯಾನ ನಿಂತಿತು. ಅವರ ನಿಧನವು ವಿನೂತನವಾದ ಪ್ರಯೋಗಶೀಲ ಚಿತ್ರಕಲಾ ಸಾಧ್ಯತೆಗಳನ್ನು ತಡೆದು ನಿಲ್ಲಿಸಿತು. ಪುರಾಣದ ಕಥನ ಪ್ರಸಂಗಗಳಲ್ಲಿ ಉಲ್ಲೇಖಿತ ದೇವರು-ದೇವತೆಗಳ ಅಸ್ಮಿತೆ ಮತ್ತು ದೇಸೀ ಸಂಸ್ಕೃತಿಯನ್ನು ಬಿಂಬಿಸುವ ವಿನ್ಯಾಸಗಳನ್ನು ಸಮನ್ವಯಗೊಳಿಸಿ ಚಿತ್ರಕಲೆಗೆ ಹೊಸ ಆಯಾಮ ತಂದುಕೊಟ್ಟ ಪ್ರತಿಭೆಯಾಗಿ ಶೋಭಾ ಕರಣಿಕ್ ಅವರದ್ದು ವಿಶೇಷ ವ್ಯಕ್ತಿತ್ವವಾಗಿತ್ತು. ಮ್ಯೂರಲ್ ಪೇಂಟಿಂಗ್‌ನಲ್ಲಿ ಅವರಿಗಿದ್ದ ಪರಿಣತಿ, ಉತ್ತರ ಕನ್ನಡದ ಕಾವಿ ಕಲೆಯ ಕುರಿತಾದ ವಿಸ್ತೃತ ಜ್ಞಾನವು ಚಿತ್ರಕಲೆಯನ್ನು ಉನ್ನತೀಕರಿಸುವುದಕ್ಕೆ ಅವರಿಗೆ ನೆರವಾಗಿತ್ತು.

ಕಲೆಯ ಜೊತೆಗಿನ ಅನುಸಂಧಾನದ ಕ್ಷಣಗಳು ಅಪೂರ್ವ. ಒಂದು ನಿರ್ದಿಷ್ಟ ನಿರ್ಣಾಯಕ ಸಂದರ್ಭ, ಸಮಯದಲ್ಲಿ ಕಲೆಯೊಂದು ವ್ಯಕ್ತಿತ್ವವನ್ನು ಪ್ರಭಾವಿಸಿ ಸೃಜನಶೀಲತೆಯ ಹಸಿವನ್ನು ನೆಲೆಗೊಳಿಸುವುದಕ್ಕೆ ಪ್ರೇರಣೆಯಾಗುತ್ತದೆ. ಕಲೆಯ ಪ್ರಭಾವ ಎರಡು ಬಗೆಯದ್ದು. ಸಹೃದಯರನ್ನು ತನ್ನ ಕಲಾತ್ಮಕ ಮಾದರಿಗಳಿಂದ ಸೆಳೆದು ಅವರೊಳಗೆ ವಿಶೇಷ ಅನುಭೂತಿ ಧಾರೆ ಎರೆಯುವಂಥದ್ದು ಒಂದು ಬಗೆಯಾದರೆ ಹೀಗೆ ಸೆಳೆದುಕೊಂಡು ಮತ್ತೆ ಮತ್ತೆ ಪ್ರಭಾವಿಸುತ್ತಾ ಸಹೃದಯರನ್ನೇ ಕಲಾವಿದರನ್ನಾಗಿಸುವ ಸಾಧ್ಯತೆ ಮತ್ತೊಂದು ತೆರನಾದದ್ದು.

ಈ ಕಾರಣಕ್ಕಾಗಿಯೇ ಕಲಾತ್ಮಕ ಸಂಭವನೀಯತೆಯು ಅನನ್ಯವೆನ್ನಿಸಿಕೊಂಡಿದೆ. ಇಂಥ ಅನನ್ಯತೆಯೊಂದಿಗೇ ಶೋಭಾ ಕರಣಿಕ್ ಗುರುತಿಸಿಕೊಂಡಿದ್ದರು. ಅವರು ಓದಿದ್ದು ತಾಂತ್ರಿಕ ವಿಜ್ಞಾನ. ಆದರೆ, ಅವರ ನಿಜದ ಪ್ರತಿಭೆ ಅಭಿವ್ಯಕ್ತವಾದದ್ದು ಚಿತ್ರಕಲೆಯ ಮೂಲಕ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪರಿಸರದಲ್ಲಿ ಬೆಳೆದ ಶೋಭಾ ಕರಣಿಕ್ ಮೊದಲಿನಿಂದಲೂ ದೇಶೀ ಕಲೆಯ ಕುರಿತು ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡು ಬಂದಿದ್ದರು. ಹೈಸ್ಕೂಲ್ ಓದುತ್ತಿರುವಾಗಲೇ ಕಾವಿಕಲೆಯ ವಿನ್ಯಾಸ ಅವರನ್ನು ಸೆಳೆದಿತ್ತು. ಇವುಗಳನ್ನು ಮತ್ತೆ ಮತ್ತೆ ನೋಡುತ್ತಾ ಹೋದಂತೆಲ್ಲಾ ಕಾವಿ ಕಲೆಯ ಕುರಿತ ಆಕರ್ಷಣೆ ಕಲಿಕೆಯ ಹಂಬಲವಾಗಿ ಮಾರ್ಪಟ್ಟಿತು. ಉತ್ತರ ಕನ್ನಡದ ಟೆಂಪಲ್ ರ‍್ಟ್ ಪ್ರಕಾರದ ಭಾಗವಾಗಿ ಕಾವಿ ಕಲೆಯನ್ನು ಪರಿಚಯಿಸುವ ದೃಷ್ಟಿಯಿಂದ ಅವರು ರಚಿಸಿದ್ದ ತರಹೇವಾರಿ ವಿನ್ಯಾಸಗಳು ವಿವಿಧ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮಗಳಲ್ಲಿ ಗಮನ ಸೆಳೆದಿದ್ದವು.

ಕಾವಿ ಕಲೆಯೂ ಸೇರಿದಂತೆ ನಮ್ಮ ಸಾಂಪ್ರದಾಯಿಕ ಕಲೆಗಳು ಈ ಹಿಂದಿನ ಕಾಲದ ತಲೆಮಾರನ್ನಷ್ಟೇ ಪ್ರಭಾವಿಸಿದ್ದಲ್ಲದೇ ನಂತರದ ಹೊಸ ಪೀಳಿಗೆಯನ್ನೂ ಆಕರ್ಷಿಸುವ ಗುಣ ಹೊಂದಿವೆ. ಮೂಲ ಅಂತಃಸತ್ವಕ್ಕೆ ಧಕ್ಕೆಯೊದಗದ ಹಾಗೆ ಹೊಸ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಈ ಸಾಂಪ್ರದಾಯಿಕ ಚಿತ್ರಕಲಾ ವಿನ್ಯಾಸಗಳನ್ನು ಮರುರೂಪಿಸಬಹುದು. ಹೊಸ ಕಾಲದಲ್ಲಿ ಅವುಗಳ ಮಹತ್ವವನ್ನು ಮನಗಾಣಿಸಬಹುದು ಎಂಬುದು ಅವರ ಆಶಯವಾಗಿತ್ತು.

ಕಲೆಯೊಂದು ಒಂದು ಕಾಲದಿಂದ ಮತ್ತೊಂದು ಕಾಲಕ್ಕೆ ದಾಟಿಕೊಳ್ಳುವಾಗ ಪಲ್ಲಟಗಳು ಸಹಜ. ಈ ಪಲ್ಲಟಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಇಂತಹ ಕಲೆಗಳಿಗೆ ಹೊಸಕಾಲದಲ್ಲೂ ಜೀವಂತಿಕೆಯನ್ನು ತಂದುಕೊಡುವ ಪ್ರಯತ್ನದ ಅಗತ್ಯವನ್ನು ಮನಗಾಣಿಸುವುದಕ್ಕಾಗಿಯೇ ಶೋಭಾ ಕರಣಿಕ್ ಅವರು ಚಿತ್ರಕಲಾ ರಚನೆಯ ವೈವಿಧ್ಯಮಯ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದರು.

ಅವರ ನಿಧನದಿಂದ ಈ ಪ್ರಯೋಗಶೀಲ ಹೆಜ್ಜೆಗಳು ನಿಂತಂತಾಗಿವೆ. ಆದರೆ, ಅವರು ಪರಂಪರೆ ಮತ್ತು ವರ್ತಮಾನವನ್ನು ಸಮನ್ವಯಗೊಳಿಸಿ ಸಾಬೀತುಪಡಿಸಿದ ಅಪೂರ್ವ ಚಿತ್ರಕಲಾ ಪ್ರಯೋಗಶೀಲತೆಯ ಜೀವಂತಿಕೆ ಹೊಸ ಪೀಳಿಗೆಗೆ ಸದಾ ಸ್ಫೂರ್ತಿಯ ಸೆಲೆಯಾಗಿರುತ್ತದೆ. ಅವರ ಹೆಸರಿನ ಇನಸ್ಟಾಗ್ರಾಂನಲ್ಲಿ ಕಾಣಿಸಿಕೊಂಡಿರುವ ಚಿತ್ರಗಳು ಇಂಥ ಸ್ಫೂರ್ತಿಯ ಪ್ರಭೆಯನ್ನು ದಾಟಿಸುತ್ತಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಹೊಸತನದ ಹೊಸ್ತಿಲಲ್ಲಿ..!

Published

on

ಬರಹ : ಮೀನಾಕ್ಷಿ. ಬಿ
  • ಮೀನಾಕ್ಷಿ .ಬಿ, ಎಂ. ಎ ವಿದ್ಯಾರ್ಥಿನಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ

ಹೊಸವರ್ಷ ವೆಂಬುದು ಪ್ರತಿಯೊಬ್ಬರ ಬಾಳಲ್ಲಿ ವರ್ಷಕ್ಕೊಮ್ಮೆ ಬರುವ ಹೊಸದಿನಗಳ ಆಗಮನ ಯಾಕೆಂದರೆ ಹೊಸತನವನ್ನು ತರುತ್ತಾ ಇರುವ ಹೊಸವರ್ಷ ಕೂಡ ಒಂದು ಜೀವನದ ಭರವಸೆ, ನಿರೀಕ್ಷೆ ಕನಸುಗಳ ಬಂಡಿಯ ಮೇಲೆ ಸಾಗುವ ಪ್ರಯಾಣ ನಮ್ಮ ಜೀವನ.

ವ್ಯಕ್ತಿಯ ನಂಬಿಕೆಯ ಆಧಾರದ ಮೇಲೆಯೇ ಜೀವನ ಸಾಗುಸುತ್ತಿರುವುದು.ಯಾಕೆಂದರೆ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿಯೂ ಕೂಡ ಕಷ್ಟ -ಸುಖ ದುಃಖದ ಸಂಗತಿಗಳು ಇದ್ದೆ ಇರುತ್ತದೆ. ಕೆಲವೊಂದು ಬಾರಿ ಹತಾಶೆಯನ್ನು ಹೊಂದಿ ಜೀವನದಲ್ಲಿ ಜಿಗುಪ್ಸೆ ಒಂದು ಕೆಟ್ಟ ನಿರ್ಧಾರಕ್ಕೆ ಮನಸ್ಸು ದಾರಿ ಮಾಡಿಕೊಡುತ್ತದೆ. ಹಾಗೆಯೇ ಕಷ್ಟ ಇದ್ದಲ್ಲಿ ಸುಖವಿರುವುದುಂಟು ಅನ್ನುವ ಹಾಗೇ ಇವತ್ತಲ್ಲ ನಾಳೆ ಒಳ್ಳೆಯ ದಿನಗಳು ನಮ್ಮ ಜೀವನದಲ್ಲಿ ಬರಬಹುದೆಂಬ ಭರವಸೆ,ಆತ್ಮವಿಶ್ವಾಸವನ್ನು ಇಟ್ಟುಕೊಂಡು ಜೀವನ ನಡೆಸುತ್ತಲೇ ಇದ್ದೇವೆ.

ಈ ವರ್ಷ ಒಳ್ಳೆಯದಾಗಿಲ್ಲ ಅಂದರೆ ಏನು ಮುಂದಿನ ವರ್ಷ ಆದರೂ ನನ್ನ ಬದುಕು ಬದಲಾಗಬಹುದು ಎಂಬ ಹೊಸತನವನ್ನು ನಮ್ಮಲ್ಲಿ ಭರವಸೆ,ನಂಬಿಕೆಯ ಬೇರಿನೊಂದಿಗೆ ಬೆರೆಸಿಕೊಂಡು ಬದುಕಬೇಕು.ನಾಳೆಯ ದಿನಗಳ ಮೇಲಿನ ಅನಿರೀಕ್ಷಿತ ತೀರಿವಿನಿಂದಾಗುವ ಬದುಕಿನಲ್ಲಾಗುವ ಬದಲಾವಣೆ ಹೊಸತನದ ಚಾಪನ್ನು ಮೂಡಿಸುತ್ತದೆ.
ಎಂಥ ಹತಾಶ ಮನಸ್ಥಿತಿಯವರಲ್ಲೂ ಹೊಸವರ್ಷ ಭರವಸೆಯ ಅಭಯ ಹಸ್ತವನ್ನು ಚಾಚುತ್ತದೆ. ಅದೆಲ್ಲಿಂದಲೇ ಆತ್ಮ ವಿಶ್ವಾಸದ ಬೆಳಕಿನ ಕಿಡಿಯೊಂದು ಕಾಣಿಸಿಕೊಳ್ಳುತ್ತದೆ.

ಹೊಸವರ್ಷವೆಂಬುದು ಕೇವಲ ಸಂಭ್ರಮದ ಕಾಲ ಮಾತ್ರವಲ್ಲ. ಕಳೆದ ದಿನಗಳತ್ತ ಹಿಂತಿರುಗಿ ನೋಡುವ ಸಮಯ ಕೂಡ ಹಿಂದಿನ ದಿನಗಳ ಪುಟಗಳನ್ನು ತೆಗೆದು ನೋಡಿದರೆ. ಉತ್ಸಾಹದ ಗಳಿಗೆಗಳು ಮುಂದಿನ ಕೆಲಸಗಳಿಗೆ ಚೈತನ್ಯ, ಉತ್ಸಾಹ ನೀಡಬಲ್ಲದು.ನಮ್ಮ ದಿಕ್ಕಿಲ್ಲದ ದಾರಿಗೆ ಖಚಿತ ದಿಕ್ಕು ದಾರಿಯನ್ನು ತೋರಬಲ್ಲದು.

ಜೀವನದ ಪ್ರಯಾಣಕ್ಕೆ ಒಂದು ನಿಲ್ದಾಣವಾಗಿದೆ. ನಾವು ಕಾಣುವ ಕನಸಗಳು ಕನಸಾಗಿಯೇ ಉಳಿದಿದೆ ಯಾಕೆಂದರೆ ನಮ್ಮಲ್ಲಿನ ಬೇಜವಾಬ್ದಾರಿ, ನಿರ್ಲಕ್ಷತನ ಆಮೇಲೆ ಮಾಡಿದರೆ ಆಯ್ತು ಅನ್ನೋ ಮನೋಭಾವನೆ ಯಾವುದರ ಬಗ್ಗೆಯೂ ಆಸಕ್ತಿ ಕೊಡದೆ ಇರೋದು ಎಲ್ಲವು ನಮ್ಮ ಕನಸಿನ ಜೀವನ ರೂಪಿಸಿಕೊಳ್ಳುವಲ್ಲಿ ಸಫಲರಾಗದೆ ಉಳಿಯಲು ಕಾರಣ.

ಮೊದಲು ಆತ್ಮವಿಶ್ವಾಸ ಬೇಕು ನಾನು ಈ ಕೆಲಸವನ್ನು ಮಾಡುವೆ ಎಂಬ ಒಂದು ನಿರ್ಧಿಷ್ಟ ಗುರಿ ಇರಬೇಕು ಅಂಗಿದ್ರೆ ಅಷ್ಟೇ ಜೀವನದ ಪಯಣದ ಹಾದಿಯಲ್ಲಿ ಯಶಸ್ಸನ್ನು ಕಾಣಲು ಸಾಧ್ಯ ಇಲ್ಲವಾದಲ್ಲಿ ಸೋಲನ್ನು ಅನುಭವಿಸುವ ಪರಿಸ್ಥಿತಿ ಎದುರಾಗುತ್ತದೆ. ಮುಂದಿನ ದಿನಗಳ ಆಗಮನದೊಂದಿಗೆ ನಾವು ಕಂಡ ಕನಸನ್ನು ಈಡೇರಿಸಿಕೊಳ್ಳುವ ಸತತ ಪ್ರಯತ್ನದೊಂದಿಗೆ ಬರುವ ದಿನವನ್ನು ಸ್ವಾಗತಿಸಿಕೊಳ್ಳೋಣ.
ಎಲ್ಲರ ಬಾಳಲಿ ಹರುಷ ,ಸಂತೋಷ ಮನೆಮಾಡಲಿ ಎಂದು ಆಶಿಸುತ್ತಾ ಎಲ್ಲರಿಗೂ ಹೊಸವರ್ಷದ ಶುಭಾಶಯಗಳು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಕಾಮರೂಪದ ಪ್ರಭಾಕರ

Published

on

  • ಪ್ರೊ.ರಹಮತ್ ತರೀಕೆರೆ

ನಾನು ಕೋಲಾರಕ್ಕೆ ಹೋದಾಗೆಲ್ಲ ಎರಡು ಜಾಗಗಳಿಗೆ ತಪ್ಪದೆ ಭೇಟಿ ಕೊಡುತ್ತೇನೆ. ಒಂದು-ಕೆ.ರಾಮಯ್ಯ ಮತ್ತವರ ಸಂಗಾತಿಗಳು ಸೇರಿ ತೇರುಹಳ್ಳಿ ಬೆಟ್ಟದ ಮೇಲೆ ಕಟ್ಟಿರುವ `ಆದಿಮ’ಕ್ಕೆ; ಇನ್ನೊಂದು-`ಕಾಮರೂಪಿ’ ಎಂಬ ಹೆಸರಲ್ಲಿ ಬರೆಯುತ್ತಿದ್ದ ಕನ್ನಡ ಲೇಖಕ ಡಾ. ಎಂ.ಎಸ್. ಪ್ರಭಾಕರ ಅವರಿರುವ ಕಠಾರಿಪಾಳ್ಯದ ಮನೆಗೆ. 50ರ ದಶಕದ ಕೊನೆಯಲ್ಲಿ ಕರ್ನಾಟಕ ಬಿಟ್ಟುಹೋದ ಪ್ರಭಾಕರ, ‘ಹಿಂದೂ’ ಪತ್ರಿಕೆಯ ವರದಿಗಾರರಾಗಿ ಆಫ್ರಿಕಾ ಅಮೇರಿಕ ಬಾಂಗ್ಲಾದೇಶ ಈಶಾನ್ಯ ಭಾರತವನ್ನೆಲ್ಲ ಅಲೆದಾಡಿ, ಕಡೆಗೆ ಕಾಮರೂಪದಲ್ಲಿ (ಅಸ್ಸಾಮಿನ ಪುರಾತನ ಹೆಸರಿದು) ನೆಲೆಸಿಬಿಟ್ಟರು.

`ಕಾಮರೂಪ’ ಶಬ್ದಕ್ಕೆ ಬಯಸಿದ ರೂಪಧಾರಣೆ ಮಾಡುವ ಮಾಯಾವಿ ವಿದ್ಯೆ ಎಂಬರ್ಥವೂ ಇದೆ. ಎಂಬತ್ತರ ಪ್ರಾಯದಲ್ಲಿ ಕರ್ನಾಟಕಕ್ಕೆ ಮರಳಿ ಬಂದಿರುವ ಪ್ರಭಾಕರ ಅವರು, ತಾವು ಹುಟ್ಟಿಬೆಳೆದ ಮನೆಯಲ್ಲಿ ಬಿಡಾರ ಹೂಡಿದ್ದಾರೆ. ಹಿರೀಕರು ಕಟ್ಟಿದ ದೊಡ್ಡಮನೆ. ಮನೆಯೊಳಗೊಂದೇ ಜೀವ; ಮನೆ ತುಂಬ ಪುಸ್ತಕದ ರಾಶಿ (ಹೆಚ್ಚಿನವು ಇಂಗ್ಲೀಶ್ ಬಂಗಾಳಿ ಅಸ್ಸಾಮಿ). ನಟ್ಟನಡುವಿರುವ ಹಾಲಿನ ಮೂಲೆಯಲ್ಲಿ ಬೀದಿಗೆ ಬೆನ್ನುಕೊಟ್ಟಂತೆ ಕೂತು, ಲ್ಯಾಪ್‌ಟಾಪಿನಲ್ಲಿ ಬರೆಯುತ್ತ, ವೆಬ್‌ಸೈಟುಗಳನ್ನು ಜಾಲಾಡುತ್ತ, ಬ್ಲಾಗುಗಳನ್ನೋದುತ್ತ ಪ್ರಭಾಕರ ಕುಳಿತಿರುತ್ತಾರೆ.

ಅವರ ಮನಗೆ ಹೋದಾಗಲೆಲ್ಲ ನನಗೆ ರಾಗಿಮುದ್ದೆ ಸೊಪ್ಪಿನ ಸಾರಿನ ಊಟ ಸಿಗುತ್ತದೆ. ಅವರು ಉಣ್ಣುವುದೊಂದು ಅಪೂರ್ವ ದೃಶ್ಯ. ತಣಿಗೆಯ ನಡುವೆ ಹದವಾಗಿ ಬೆಂದು ಕಂಪು ಬೀರುವ ಗೋಂದಿನಂತಹ ಕೆಂಗಪ್ಪು ಬಣ್ಣದ ಬಿಸಿಮುದ್ದೆಯನ್ನಿಟ್ಟು, ಅದರ ತಲೆಯ ಮೇಲೆ ಶಿಖರವನ್ನು ಹಿಮವು ಅಲಂಕರಿಸುವಂತೆ ಬೆಣ್ಣೆಯ ಚೂರನ್ನಿಡುತ್ತಾರೆ; ಬೆಣ್ಣೆಯು ಮುದ್ದೆ ಕಾವಿಗೆ ಕರಗಿ ಇಡೀ ಚೆಂಡನ್ನು ಆವರಿಸಿ ಅಭಿಷೇಕ ಮಾಡಿಸಿಕೊಂಡ ಮೂರುತಿಯಂತೆ ಥಳಥಳ ಹೊಳೆಯುತ್ತದೆ. ಆಗ ಘಮಿಸುವ ಮುದ್ದೆಯನ್ನು ಚೆನ್ನಾಗಿ ಮಿದ್ದು, ಒಂದು ಬದಿಯಿಂದ ಇಷ್ಟಿಷ್ಟೇ ಮುರಿದು ತುತ್ತು ಮಾಡಿ, ಸೊಪ್ಪಿನ ಗಟ್ಟಿಸಾರಲ್ಲಿ ಹೊರಳಾಡಿಸಿ ಗುಕ್ಕನೆ ನುಂಗಿ ಕಣ್ಮುಚ್ಚಿ ಕೊಳ್ಳುತ್ತಾರೆ. ತರುವಾಯ ಶ್ರೀಯುತರು ಜ್ಞಾನೋದಯವಾದ ಸಿದ್ಧನಂತೆ ಅವರ ಮುಖದಲ್ಲಿ ಪರಮಾನಂದದ ಒಂದು ಕಳೆ ಆವಿರ್ಭವಿಸುತ್ತದೆ. ಇದನ್ನೆಲ್ಲ ಕಾಣುವಾಗ, ಲೋಕವನ್ನೆಲ್ಲ ಸುತ್ತಾಡಿರುವ ಇವರು ಕೋಲಾರಕ್ಕೆ ಮುದ್ದೆಸುಖಕ್ಕಾಗಿಯೆ ಬಂದರೇನೊ ಎಂದು ಶಂಕೆ ಬರುತ್ತದೆ. ಪ್ರಭಾಕರ ಅವರಿಗೆ ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಅನೇಕ ದೂರುಗಳಿವೆ. ಅವುಗಳಲ್ಲಿ ಆಹಾರ ತಯಾರಿಕೆ ಮತ್ತು ಸೇವನೆ ಕುರಿತು ಅದರಲ್ಲಿ ವಿವರಗಳೇ ಇಲ್ಲ ಎಂಬುದೂ ಒಂದು.

ಕನ್ನಡದ ಅತಿಹಿರಿಯ ಮತ್ತು ಹೆಚ್ಚು ಬರೆಯದ ಲೇಖಕರಲ್ಲಿ ಪ್ರಭಾಕರ ಅವರೂ ಒಬ್ಬರು. ನಾನು ಅವರ ‘ಕುದುರೆಮೊಟ್ಟೆ’ ಕಾದಂಬರಿಯನ್ನೂ ‘ಒಂದು ತೊಲ ಪುನುಗು ಮತ್ತು ಇತರ ಕತೆಗಳು’ ಸಂಕಲನವನ್ನೂ ಓದಿದ್ದೆ. ಇವುಗಳಲ್ಲಿ ‘ಕುದುರೆ ಮೊಟ್ಟೆ’ ಈಗಲೂ ಪ್ರಿಯವಾದ ಪುಸ್ತಕ. ಅದರಲ್ಲಿರುವ ಕೆಲವು ಪಾತ್ರಗಳು ಕೊಂಚ ವಿಕ್ಷಿಪ್ತವಾಗಿವೆ; ಅಲ್ಲಿನ ಬಾಳಿನ ಸನ್ನಿವೇಶಗಳೂ ಅನಿರೀಕ್ಷಿತವಾಗಿವೆ. ಆದರೆ ಎಲ್ಲಿಯೂ ಹುಸಿ ಅನಿಸದಂತೆ, ಒಂದೇ ಶಬ್ದ ಅಪವ್ಯಯವಾಗದಂತೆ ಅದನ್ನು ಬರೆಯಲಾಗಿದೆ. ಪಾತ್ರಗಳನ್ನು ತಮ್ಮ ಸಿದ್ಧಾಂತಕ್ಕೆ ತಕ್ಕಂತೆ ಮಣಿಸಿ ಕೈಗೊಂಬೆಯಂತೆ ಆಡಿಸುತ್ತ, ಕೆಲವನ್ನು ಮುದ್ದಾಮಾಗಿ ದುರುಳಗೊಳಿಸಿ ಕಲೆಯ ಜಾಣಮುಸುಕಿನಲ್ಲಿ ಅಡಗಿಸುತ್ತ, ಕೆಲವು ಕಾದಂಬರಿಗಳು ಕನ್ನಡದಲ್ಲಿ ಪ್ರಕಟವಾಗುತ್ತಿವೆ. ಇಂತಹ ಹೊತ್ತಲ್ಲಿ ಅರ್ಧ ಶತಮಾನದ ಹಿಂದೆ ಪ್ರಕಟವಾದ ಈ ಕಾದಂಬರಿ, ಬಾಳನ್ನು ಕುರಿತು ತೋರುವ ಕಕ್ಕುಲಾತಿ ಕಂಡು ಖುಶಿಯಾಗುತ್ತದೆ. ಕತೆಗಾರರಿಗೆ ತಾವು ಸೃಷ್ಟಿಸುವ ಕೆಲವು ಪಾತ್ರಗಳ ಮೇಲೆ ಕೊಂಚ ಭಾವ ಪಕ್ಷಪಾತವಿರುತ್ತದೆ. ಆದರೆ ತಾವು ಸೃಜಿಸುವ ಎಲ್ಲ ಪಾತ್ರಗಳನ್ನು ತಾಯಿಯಂತೆ ನೋಡುವುದು ಬರೆಹದ ನೈತಿಕತೆ. ಈ ಸಂಗತಿ ಕುವೆಂಪು ಮತ್ತು ಟಾಲ್ ಸ್ಟಾಯ್ ಕಾದಂಬರಿ ಓದಿದವರಿಗೆ ಗೊತ್ತಿದೆ.

ಕಾಮವನ್ನು ಇಟ್ಟುಕೊಂಡು ಜೀವನದ ಸತ್ಯಗಳನ್ನು ಶೋಧಿಸುವ ವಿಷಯದಲ್ಲಿ ಕಾಮರೂಪಿಯವರು, ಒಬ್ಬ ಟಿಪಿಕಲ್ ನವ್ಯಲೇಖಕರೇ. ಆದರೆ ನವ್ಯದ ಕೆಲವು ಲೇಖಕರಲ್ಲಿ ಕಾಣುವಂತೆ, ಅದಕ್ಕವರು ಅನಗತ್ಯ ಪ್ರಾಮುಖ್ಯ ಕೊಡುವುದಿಲ್ಲ. ಅದನ್ನು ಚಪ್ಪರಿಸುವುದಿಲ್ಲ. ವೈಭವೀಕರಿಸುವುದಿಲ್ಲ. ಬದಲಿಗೆ, ಮನುಷ್ಯರಾದವರು ಜೀವನದ ಇಕ್ಕಟ್ಟುಗಳಲ್ಲಿ ಸಿಲುಕಿ ಅನಿವಾರ್ಯವಾಗಿ ವರ್ತಿಸುವ ಪರಿಯನ್ನು ತಣ್ಣಗೆ ವ್ಯಂಗ್ಯವಾಗಿ ಚಿತ್ರಿಸುತ್ತಾ ಹೋಗುತ್ತಾರೆ. ಸತ್ಯಕ್ಕಿರುವ ಹಲವು ಮುಖಗಳನ್ನು ಹಿಡಿಯುವಂತಹ ಕುರುಸೋವಾನ ‘ರಶೋಮನ್’ ಸಿನಿಮಾ ನೆನಪಿಸುವ ಈ ಕಾದಂಬರಿ, ಮತ್ತೆಮತ್ತೆ ಓದಬೇಕು ಎನಿಸುವಷ್ಟು ತಾಜಾ ಆಗಿದೆ. ‘ಉಪಪತ್ತಿಯೋಗ’ ಎಂಬುದನ್ನು ಬಿಟ್ಟರೆ, ಉಳಿದಂತೆ ವ್ಯಕ್ತಿವಾದವನ್ನು ಅತಿಯಾಗಿ ಬಿಂಬಿಸುವ ತಂತ್ರದ ಬಿಗಿತದಲ್ಲಿರುವ ಅವರ ಕತೆಗಳು ಅಷ್ಟು ಆಪ್ತವೆನಿಸಿಲ್ಲ.

ನನಗೆ ಪ್ರಭಾಕರ್ ಕುರಿತು ಆಸಕ್ತಿ ಮೂಡಿಸಿದವರು ಮಾರ್ಕ್ಸ್‌ವಾದಿ ಚಿಂತಕ ಕೆ.ರಾಘವೇಂದ್ರರಾವ್ ಅವರು. ಅಮೆರಿಕೆಯ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಿದ್ದ ಎ.ಕೆ.ರಾಮಾನುಜನರ ಹೊಂದಾಣಿಕೆಯ ಗುಣವನ್ನು ಕಟುವಾಗಿ ವಿಮರ್ಶಿಸುತ್ತ, ಅಲ್ಲಿನ ಶೈಕ್ಷಣಿಕ ಕ್ಷೇತ್ರದಲ್ಲಿರುವ ಬಿಳಿಯರ ಯಜಮಾನಿಕೆಗೆ ಬಾಗದೆ ಹೊರಬಂದ ಪ್ರಭಾಕರ ಅವರ ದಿಟ್ಟ ಸ್ವಭಾವವನ್ನು ಅವರು ತಮ್ಮ ಸಂದರ್ಶನದಲ್ಲಿ ಪ್ರಸ್ತಾಪಿಸಿದ್ದರು. ಪ್ರಭಾಕರ ಅವರನ್ನು ಭೇಟಿಯಾಗಬೇಕು ಎಂದು ಅನಿಸುತ್ತಿತ್ತು. ಅದರಲ್ಲೂ ಭಾರತದ ಶಾಕ್ತಪೀಠಗಳಲ್ಲಿ ಮುಖ್ಯವಾಗಿರುವ ಅಸ್ಸಾಮಿನ ಕಾಮಾಖ್ಯಕ್ಕೆ ಹೋಗಲು ಯತ್ನಿಸುತ್ತಿದ್ದ ನಾನು, ಅಲ್ಲೇ ಸಮೀಪದ ಗೌಹಾತಿಯಲ್ಲಿರುವ ಅವರನ್ನು ಕಾಣಲು ಹವಣಿಕೆ ಮಾಡಿಕೊಂಡಿದ್ದೆ. ಆದರೆ ಸಾರ್ವಜನಿಕ ವ್ಯಕ್ತಿಯಾಗಲು ನಿರಾಕರಿಸಿ ಅಜ್ಞಾತವಾಗಿಯೇ ಬಾಳುವ ಅವರು ಸುಲಭವಾಗಿ ಸಿಗುತ್ತಿರಲಿಲ್ಲ.

ನನ್ನ ತವಕವನ್ನರಿತಿದ್ದ ಕೆ.ರಾಮಯ್ಯ, ‘ಪ್ರಭಾಕರ್ ಕರ್ನಾಟಕಕ್ಕೆ ಬಂದಿದ್ದಾರೆ. ಬನ್ನಿ’ ಎಂದು ಅವರ ಮನೆಗೆ ಕರೆದುಕೊಂಡು ಹೋದರು. ಮಧ್ಯಾಹ್ನದ ಸುಡುಹೊತ್ತು. ಪ್ರಭಾಕರ ಪ್ರೀತಿಯಿಂದ ಬರಮಾಡಿಕೊಂಡು ನೊರೆ ತುಂಬಿದ ಒಗರು ಬೀರಿನ ಮಗ್ಗನ್ನು ಕೈಗೆ ಕೊಟ್ಟು, ಕಾಮಾಖ್ಯದ ಬಗ್ಗೆಯೂ ತಂತ್ರ ಪಂಥದ ಬಗ್ಗೆಯೂ ಇರುವ ಕೃತಿಗಳನ್ನು ತೋರಿಸುತ್ತ, ಗಂಟೆಗಟ್ಟಳೆ ಮಾತಾಡಿದರು. ಅರಿವಿನ ಕಿಡಿಗಳು ಹಾರುವ ಅದೊಂದು ವಿದ್ವತ್‌ಪೂರ್ಣ ಹರಟೆ.

ನಾನು ಅವರಲ್ಲಿ ಶಿಷ್ಯವೃತ್ತಿ ಸ್ವೀಕರಿಸಿ ಹಲವಾರು ಸಲ ಕೋಲಾರಕ್ಕೆ ಹೋಗಿ ಬಂದಿದ್ದೇನೆ. ಅವರ ಮಾತುಕತೆಗಳಲ್ಲಿ ನನಗೆ ಮುಖ್ಯವಾಗಿ ಕಂಡಿದ್ದು, ಜಾತ್ಯತೀತವಾದ ಮನಸ್ಸು; ಸಣ್ಣಪುಟ್ಟ ಸಂಗತಿಗಳ ಮೇಲೂ ಕಾಳಜಿಯಿಂದ ಸೂಕ್ಷ್ಮವಾಗಿ ಚಿಂತಿಸುವ ಮಾನವೀಯತೆ; ಗತಕಾಲದ ಬಗ್ಗೆ ಹಳಹಳಿಕೆಯಿಲ್ಲದೆ ವರ್ತಮಾನದ ಸಮಸ್ಯೆಗಳನ್ನು ಕುರಿತು ಚಿಂತಿಸುವ ಪ್ರಖರವೂ ನಿಷ್ಠುರವೂ ಆದ ರಾಜಕೀಯ ಪ್ರಜ್ಞೆ. ಸಾರ್ವಜನಿಕ ಬದುಕಿನಲ್ಲಿ ಜಾತಿಪದ್ಧತಿ ಎಲ್ಲೆಮೀರಿ ನಿರತವಾಗಿರುವ ಕುರಿತ ಹೇವರಿಕೆ. ಹಿರಿಯ ಲೇಖಕರಲ್ಲಿ ಸಾಮಾನ್ಯವಾಗಿ ಎರಡು ಸ್ವಭಾವಗಳಿರುತ್ತವೆ. ಒಂದು- ಕಳೆದುಹೋದ ಕಾಲದ ಬಗ್ಗೆ ಭಾವುಕ ಮರುಕಳಿಕೆ. ಎರಡು-ವರ್ತಮಾನದ ಸಾಮಾಜಿಕ ರಾಜಕೀಯ ವೈರುಧ್ಯಗಳನ್ನು ಉದಾರವಾಗಿ ನೋಡುತ್ತ, ಚಿಂತನೆಯ ಮೊನಚನ್ನು ಕಳೆದುಕೊಳ್ಳುವುದು. ಆದರೆ ಆತ್ಮಕ್ಕೆ ಸದಾ ಬೆಂಕಿ ಹತ್ತಿಸಿಕೊಂಡಂತೆ ಉರಿಯುವ ಕೆಲವರಿದ್ದಾರೆ. ಕೋಚೆ, ಕುಸುಮಾಕರ ದೇವರಗೆಣ್ಣೂರ, ಎಂ.ಡಿ. ನಂಜುಂಡಸ್ವಾಮಿ, ನೀಲಗಂಗಯ್ಯ ಪೂಜಾರ, ಕೆ.ರಾಘವೇಂದ್ರರಾವ್, ಅಬ್ಬಿಗೇರಿ ವಿರೂಪಾಕ್ಷಪ್ಪ, ಸಾರಾ ಅಬೂಬಕರ್, ಕಾಮರೂಪಿ ಪ್ರಭಾಕರ-ಇವರೆಲ್ಲ ಇಂತಹವರು. ಈ ಹಿರಿಯರ ಜತೆ ಮಾತಾಡುವಾಗ ಇವರ ಹಠಮಾರಿತನ, ಜಗಳಗಂಟಿತನ, ಆದರ್ಶವಾದ, ನೈತಿಕ ಪ್ರಜ್ಞೆ ಹಾಗೂ ಭಿನ್ನಮತ ಇಷ್ಟವಾಗುತ್ತದೆ.

ಕರ್ನಾಟಕದಿಂದ ಬಹುಕಾಲ ದೂರವಿದ್ದ ಕಾರಣದಿಂದ ಏರ್ಪಟ್ಟಿರುವ ಅಪರಿಚಿತತೆಯಿಂದಲೊ ಅಥವಾ ಕರ್ನಾಟಕದ ಒಳಗೇ ಇದ್ದೂಇದ್ದೂ ನಮಗೆ ಕಾಣದಂತಾಗಿರುವ ವೈರುಧ್ಯಗಳು ‘ಹೊರಗಿನಿಂದ’ ಬಂದಿರುವ ಅವರಿಗೆ ಒಡೆದು ಕಾಣುತ್ತಿರುವುದರಿಂದಲೊ, ಪ್ರಭಾಕರ ಕರ್ನಾಟಕದ ಸಮಕಾಲೀನ ಸಾಂಸ್ಕೃತಿಕ ರಾಜಕಾರಣದ ವೈರುಧ್ಯಗಳ ಬಗ್ಗೆ ತೀಕ್ಷ್ಣವಾದ ಟಿಪ್ಪಣಿ ಮಾಡುತ್ತಿರುತ್ತಾರೆ; ಕನ್ನಡಿಗರ ಸ್ವಭಾವದಲ್ಲೇ ವ್ಯಕ್ತಿನಿಷ್ಠೆಗಾಗಿ ವಿಮರ್ಶೆಯ ನಿಷ್ಠುರತೆ ಬಿಟ್ಟುಕೊಡುವ, ಸಜ್ಜನಿಕೆಯ ಭಾಷೆಯಲ್ಲಿ ವಾಸ್ತವವನ್ನು ಅಡಗಿಸುವ ಪ್ರವೃತ್ತಿಯಿದೆ ಎಂದು ಹೇಳುತ್ತಿರುತ್ತಾರೆ. ಸಂಘಟಕರೊಬ್ಬರು ಕಾರ್ಯಕ್ರಮವೊಂದಕ್ಕೆ ಕರೆಸಿಕೊಂಡು ಪರಿಚಯ ಭಾಷಣದಲ್ಲಿ ತಮ್ಮನ್ನು ಅತಿಯಾಗಿ ಹೊಗಳಿದ್ದನ್ನು ನೆನೆಯುತ್ತ ಅವರೊಮ್ಮೆ ಹೇಳಿದರು: “ಏನ್ ಸ್ವಾಮಿ ಕನ್ನಡಿಗರು? ಎಷ್ಟು ಉದಾರತೆ! ನನ್ನ ಬಗ್ಗೆ ಅವರಿಗೆ ಏನೂ ಗೊತ್ತಿಲ್ಲ. ನಾನು ಎಲ್ಲ ಸೇರಿದರೆ ನೂರೈವತ್ತು ಪುಟಗಳನ್ನೂ ಬರೆದಿಲ್ಲ. ಕನ್ನಡಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟಿಲ್ಲ. ಆದರೂ ವಾಚಾಮಗೋಚರ ಹೊಗಳಿಬಿಟ್ಟರು. ಕರ್ನಾಟಕದಲ್ಲಿ ಮಾತಿಗೆ ಬೆಲೆಯೇ ಇದ್ದಂತಿಲ್ಲ.’’

ಇದನ್ನು ಕೇಳುವಾಗ ಈಚೆಗೆ ಕಲ್ಕತ್ತಾದಲ್ಲಿ ನಾನು ಕಂಡ, ಹಿರಿಯ ಲೇಖಕ ರುದ್ರಪ್ರತಾಪ ಸೇನರ ಸನ್ಮಾನ ಕಾರ್ಯಕ್ರಮ ನೆನಪಾಯಿತು. ಸೇನರಿಗೆ 75ವರ್ಷ ತುಂಬಿದ ನೆಪದಲ್ಲಿ ಇರಿಸಿಕೊಂಡಿದ್ದ ಆ ಕಾರ್ಯಕ್ರಮ ಎಷ್ಟು ವಿಮರ್ಶಾತ್ಮಕವಾಗಿತ್ತು ಎಂದರೆ, ಅವರ ಶಿಷ್ಯರು ತಮ್ಮ ಗುರುವಿನ ಜತೆ ಕೋರ್ಟ್ಮಾರ್ಶಲ್ ನಡೆಸುವವರ ಹಾಗೆ ಪ್ರಶ್ನೆ ಕೇಳುತ್ತಿದ್ದರು. ಸೇನರು ಆ ಕಟುತರ ಪ್ರಶ್ನೆಗಳಿಗೆಲ್ಲ ಪ್ರಾಮಾಣಿಕವಾಗಿ ದ್ವಂದ್ವವಿಲ್ಲದೆ ಉತ್ತರಿಸುತ್ತಿದ್ದರು. ಹಿರಿಯರ ತಲೆಗೆ ಅಭಿನಂದನ ಗ್ರಂಥಗಳ ಸರಮಾಲೆಯನ್ನು ತಂದು ಕಟ್ಟಿ, ಎಗ್ಗಿಲದೆ ಹೊಗಳಿ ವೈಭವೀಕರಿಸುವ ಪದ್ಧತಿಯಿರುವ ಕರ್ನಾಟಕದಲ್ಲಿ, ಈ ಪರಿಯ ನಿಷ್ಠುರತೆ ಕಲ್ಪಿಸಿಕೊಳ್ಳುವುದೇ ಕಷ್ಟ.

ತೋರುಗಾಣಿಕೆಯನ್ನು ಸದಾ ನಿರಾಕರಿಸುವ ಪ್ರಭಾಕರ ಅವರಲ್ಲಿ, ಅವರ ಖಂಡಿತವಾದಿ ನಿಲುವಿಗೆ ಅಷ್ಟೊಂದು ತಾಳೆಯಾಗದ ಇನ್ನೊಂದು ಮುಖವಿದೆ. ಅದೆಂದರೆ, ಜೀವನಪ್ರೀತಿಯ ಸಂಕೇತದಂತಿರುವ ತಮಾಶೆ ಮತ್ತು ಪೋಲಿತನ. ಈ ತಮಾಶೆಯ ಗುಣ ಅದ್ಭುತ ನಾಟಕೀಯ ಶೈಲಿಯಾಗಿ ಅವರ ಕಥೆ ಕಾದಂಬರಿಗಳಲ್ಲೆಲ್ಲ ಆವರಿಸಿಕೊಂಡಿದೆ. ತಮಗೆ ಪಾಠ ಹೇಳಿದ ಗುರುಗಳ ವೈಯಕ್ತಿಕ ಬದುಕಿನಲ್ಲಿದ್ದ ಸನಾತನವಾದ ಮತ್ತು ತರಗತಿಗಳಲ್ಲಿ ಕನ್ನಡ ಬಳಸದ ಅವರ ಇಂಗ್ಲಿಷಿನ ವ್ಯಾಮೋಹ ಕುರಿತಂತೆ, ಅವರಲ್ಲಿ ಸ್ವಾರಸ್ಯಕರ ಮಾಹಿತಿಗಳಿವೆ. ಪ್ರಭಾಕರ ಅವರು ಆಪ್ತರ ಎದುರು ತಾವು ಬರೆದಿರುವ ಅಪ್ರಕಟಿತ ಪೋಲಿ ಪದ್ಯಗಳನ್ನು ವಾಚಿಸುವುದುಂಟು. ಬಹುಶಃ ಇದು ಅವರ ಗೆಳೆಯರಾಗಿದ್ದ ಎಚ್.ಎಸ್. ಬಿಳಿಗಿರಿಯವರ ಸಹವಾಸ ಫಲವಿರಬೇಕು.

ಒಂದೇ ವ್ಯಕ್ತಿತ್ವದಲ್ಲಿ ಒಟ್ಟಿಗೇ ಇರಲು ಕಷ್ಟವೆನಿಸಬಹುದಾದ ಇನ್ನೂ ಅನೇಕ ಸಂಗತಿಗಳು ಅವರಲ್ಲಿ ಸಹಜವಾಗಿ ನಿರಾಳವಾಗಿ ಇವೆ. ಉದಾ.ಗೆ, ಬಹುಭಾಷಿಕರಾದ ಅವರ ಮನೆಮಾತು ತಮಿಳುಗನ್ನಡ; ಬರವಣಿಗೆ ಕನ್ನಡ ಮತ್ತು ಇಂಗ್ಲೀಶಿನಲ್ಲಿ; ಸಂಸ್ಕೃತ ಅಸ್ಸಾಮಿ ಬಂಗಾಳಿ ಭಾಷೆಗಳಲ್ಲಿ ದೊಡ್ಡ ವಿದ್ವತ್ತು. (ಅವರ ಅಸ್ಸಾಮಿ ಬಂಗಾಳಿ ತಿಳಿವಳಿಕೆಯಿಂದ ಕನ್ನಡಕ್ಕೆ ಪ್ರಯೋಜನವಿನ್ನೂ ಆಗಿಲ್ಲ). ಪಂಪ ಅವರ ಇಷ್ಟದ ಕವಿ. ಮೂಲತಃ ಇಂಗ್ಲೀಶ್ ಸಾಹಿತ್ಯದ ವಿದ್ಯಾರ್ಥಿಯಾದರೂ ಸಾಹಿತ್ಯಕ್ಕಿಂತ ಹೆಚ್ಚಾಗಿ ಅಂತರಾಷ್ಟ್ರೀಯ ರಾಷ್ಟ್ರೀಯ ರಾಜಕಾರಣದ ಮೇಲೆ ಹೆಚ್ಚು ಬರೆವಣಿಗೆ. ಅದರಲ್ಲೂ ಈಶಾನ್ಯ ಭಾರತದ ರಾಜಕಾರಣ ಭಾಷೆ ಧರ್ಮ ಸಂಸ್ಕೃತಿ ಕುರಿತ ಅವರ ತಿಳಿವಳಿಕೆ ಅಪರೂಪದ್ದು. ಇವನ್ನೆಲ್ಲ ಒಟ್ಟಿಗೆ ಹೇಗೆ ಕಲ್ಪಿಸಿಕೊಳ್ಳುವುದು? ಪ್ರಭಾಕರ ತಮ್ಮ ಕಾದಂಬರಿಯ ಒಂದು ಪಾತ್ರದ ಹಾಗೇ ಬದುಕಿದ್ದಾರೆ.

ಅವರು ಈಚೆಗೆ ಮಾತಾಡುತ್ತ ಕೊಂಚ ದಣಿದ ದನಿಯಲ್ಲಿ “ಸ್ವಾಮಿ, ಕರ್ನಾಟಕ ನನಗೆ ಸಾಕಾಗಿದೆ. ಗೌಹಾಟಿಗೆ ಹೋಗಬೇಕು ಅನಿಸುತ್ತಿದೆ’ ಎಂದು ಗೊಣಗಿದರು. “ಹೋಗಿ. ಆದರೆ ಮತ್ತೆಬನ್ನಿ’’ ಎಂದೆ. ಅವರಲ್ಲಿ ಕೋಲಾರ-ಗೌಹಾತಿಗಳ ನಡುವೆ ವಿಚಿತ್ರವಾದ ಆಕರ್ಷಣೆ ವಿಕರ್ಷಣೆಯಿದೆ. ಇದು ಬಹುಕಾಲ ಬೇರೆಡೆ ಬೆಳೆದ ಮರ ತನ್ನ ಮೂಲನೆಲಕ್ಕೆ ಬಂದು ನಾಟಿಗೊಂಡರೆ ಬೇರೂರುವ ಕಷ್ಟ. ಮರಳಿ ಹುಟ್ಟಿದೂರಿಗೆ ಬರುವಿಕೆ ಬಾಲ್ಯದ ನೆನಪುಗಳನ್ನು ಎಚ್ಚರಿಸಿ ಸುಖ ಕೊಡುತ್ತದೆ; ಆದರೆ ಹೊಚ್ಚ ಹೊಸತೆೆನಿಸುವಷ್ಟು ಬದಲಾಗಿರುವ ಪರಿಸರವು, ಕಾಡುವ ಏಕಾಂಗಿತನವನ್ನೂ ತಂದಿಡುತ್ತದೆ. ಯಾರ ಮರುಕವನ್ನೂ ಬಯಸದೆ ಏಕಾಂತದಲ್ಲಿ ಘನತೆಯಿಂದ ಕೊನೆಯ ದಿನಗಳನ್ನು ಕಳೆಯ ಬಯಸುವ ಇಂತಹ ಹಠಮಾರಿ ಜೀವಗಳು, ಒಳಗೇ ಮೃದ್ವಂಗಿಗಳಾಗಿ ಆಪ್ತಸಂಗಾತಕ್ಕೆ ಹಾತೊರೆಯುತ್ತಿರುತ್ತವೆ.

ಆ ಸಂಗಾತದ ಸ್ವರೂಪ ಎಂತಹುದು ಎಂದು ಸ್ಪಷ್ಟವಾಗುವುದಿಲ್ಲ. ನಾನು ‘ಕಾಮರೂಪಕ್ಕೆ ಯಾವಾಗ ಹೋಗುತ್ತೀರಿ’ ಎಂದು ಕೇಳಿದೆ: ‘ಆದಿಮದ 50ನೇ ಬೆಳುದಿಂಗಳ ಕಾರ್ಯಕ್ರಮ ಮುಗಿಸಿಕೊಂಡು’ ಎಂದರು.
ಪ್ರತಿಯೊಬ್ಬರಿಗೂ ಬಾಳಿನಲ್ಲಿ ಬಹುರೂಪಧಾರಣೆ ಮಾಡಬೇಕಾದ ಒತ್ತಡಗಳು ಎದುರಾಗಬಹುದು. ಆದರೆ ಈ ರೂಪಧಾರಣೆಗೆ ಕಾರಣ, ನಮ್ಮ ಇಚ್ಛಾನಿಚ್ಛೆಗಳು ಮಾತ್ರವಲ್ಲ, ಬಾಳಿನ ಅನೂಹ್ಯ ಒತ್ತಡಗಳು ಸಹ. ಈ ಒತ್ತಡಗಳು ಬರೆಹ ಇಲ್ಲವೇ ಮಾತಿನ ವ್ಯಾಖ್ಯಾನಕ್ಕೆ ಕೆಲವೊಮ್ಮೆ ನಿಲುಕುವಂತೆ ಇರುವುದಿಲ್ಲ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending