Connect with us

ಅಂತರಂಗ

ಅರಿಮೆಯ ಅರಿವಿರಲಿ-10 : ನಾನು ಎಂದರೆ ಯಾರು..?

Published

on

  • ಯೋಗೇಶ್ ಮಾಸ್ಟರ್

ನಮಸ್ಕಾರ” ಎಂದಿರಿ ಅವರಿಗೆ. ಅವರೂ “ನಮಸ್ಕಾರ” ಎಂದರು. ನಿಮ್ಮಿಬ್ಬರ ಭೇಟಿಯಾಗಿ ಹತ್ತು ನಿಮಿಷಗಳಾಗಿವೆ. ಹನ್ನೊಂದನೆಯ ನಿಮಿಷಕ್ಕೆ ಇನ್ಯಾರೋ ಮೂರನೆಯವರು ಅವರಿಗೆ ತಿಳಿದಿರುವವರೋ ಅಥವಾ ಸಾಂದರ್ಭಿಕವಾಗಿ ಬಂದರು. ಅವರು ನಿಮ್ಮನ್ನು ವರ್ಣಿಸಲು ಪ್ರಾರಂಭಿಸುತ್ತಾರೆ. ನಿಮ್ಮದೆಂತಹ ಉದಾತ್ತ ವ್ಯಕ್ತಿತ್ವ, ನೀವು ಎಷ್ಟು ಪ್ರತಿಭಾವಂತರು, ನೀವು ಅವರಿಗೆ ಈಗ ಸಿಕ್ಕಿದ್ದು ಎಷ್ಟು ಅದೃಷ್ಟ; ಇತ್ಯಾದಿ.

ನಿಮ್ಮ ಅಗಣಿತ ಗುಣನಾಮ ಬಹುಪರಾಕುಗಳನ್ನೆಲ್ಲಾ ಕೇಳಿ ನೀವೇನಾದರೂ ಎಣ್ಣೆಗೆ ಬಿದ್ದ ಪೂರಿಯಂತೆ ಉಬ್ಬಿದಿರೋ ನೀವೊಬ್ಬ ನಾರ್ಸಿಸಸ್. ನಿಮ್ಮನ್ನು ಪುಂಖಾನುಪುಂಖವಾಗಿ ಹೊಗಳುತ್ತಿರುವವರು ಕೂಡಾ ಒಬ್ಬ ನಾರ್ಸಿಸಸ್. ಬರಿಯ ಹತ್ತು ನಿಮಿಷದ ಪರಿಚಯದಲ್ಲಿ ನಿಮ್ಮ ಜೀವಮಾನದ ಸಾಧನೆಯನ್ನು ಜಗತ್ತಿಗೆ ಸಾರಲು ಪಣತೊಟ್ಟು ನಿಂತಿರುವ ಮತ್ತು ನಿಮಗೆ ಬೇಕು ಬೇಕಾದ ಎಲ್ಲಾ ಪ್ರಶಸ್ತಿಗಳನ್ನು ಅವರ ಪೆಟ್ಟಿಗೆಯಿಂದ ತೆಗೆತೆಗೆದು ಕೊಡುತ್ತಿದ್ದಾರೆಂದರೆ ಅವರೂ ಕೂಡಾ ಒಬ್ಬ ನಾರ್ಸಿಸಸ್.

ನೀವೂ ಕೂಡಾ ಇಂತೆಯೇ ಅವರನ್ನು ಪ್ರಶಂಸಿಸಬೇಕೆಂದು ಅವರು ನಿಮಗೆ ಲಂಚ ನೀಡುತ್ತಿರುವುದು. ನೀವು ಅವರು ಬಡಿಸಿದ ರಸದೌತಣ ಸವಿದು, ಗಪ್ಪನೆ ಸುಮ್ಮನಾಗಿಬಿಟ್ಟರೆ. ಅವರು ನಿಮ್ಮನ್ನು ಮತ್ತೆಂದೂ ಹೊಗಳಲಾರರು. ನೀವೂ ಹೊಗಳಿದರೋ ಅಲ್ಲಿಗೆ ಕೊಟ್ಟು ಪಡೆಯುವ ವ್ಯವಹಾರ ಸುಸೂತ್ರವಾಗಿ ನಡೆಯುತ್ತಲೇ ಇರುತ್ತದೆ. ಇದು ಕೆಲವು ಸಲ ವೇದಿಕೆಯ ಮೇಲೂ ನಡೆಯುತ್ತದೆ.

ನಮ್ಮ ಸಾಧನೆಯ ಪಟ್ಟಿ ಒಂದು ನಮ್ಮ ಕೈಯ ಒಂದು ಮೊಳದಷ್ಟಿರುತ್ತದೆ. ಆದರೆ ನಮ್ಮನ್ನು ಕರೆಸಿದವರು ಅದನ್ನು ದುಬೈನ ಬುರ್ಜಾ ಖಲೀಫ್ ಕಟ್ಟಡದಷ್ಟು ಎಳೆದಿರುತ್ತಾರೆ. ಅಲ್ಲಿ ನಮ್ಮನ್ನು ಕರೆಯಿಸಿದವರಿಗೆ ನಾರ್ಸಿಸಸ್ ಹಸಿವೆಗೆ ಎರಡು ಬಗೆಯ ಊಟ ಬೇಕು. ಒಂದು ನಾವು ಕರೆಯಿಸಿರುವ ವ್ಯಕ್ತಿ ಸಾಧಾರಣ ಅಲ್ಲ. ಅಸಮಾನ್ಯ. ಅವರು ಅಷ್ಟು ಅಗ್ರಗಣ್ಯ ಎಂಬ ಚಿತ್ರಣವನ್ನು ಸಭಿಕರಿಗೆ ನೀಡುವುದು ಒಂದಾದರೆ, ಅಷ್ಟು ಹೊಗಳಿಸಿ ಹೂಮಳೆಗರೆಸಿಕೊಂಡವರು ಅದಕ್ಕೆ ಧನ್ಯತಾಭಾವದಿಂದ ಮರುಹೊಗಳಿಕೆ ಕೊಡಬಾರದೇ? ಇಂತಹ ಕಾರ್ಯಕ್ರಮ ಮಾಡುತ್ತಿರುವ ಇವರು ಅದೆಷ್ಟು ಮಹೋನ್ನತ ವ್ಯಕ್ತಿ ಎಂದು ಬಿನ್ನವತ್ತಳೆ ನೀಡದೇ ಹಾಗೇ ಹೋಗುವುದು ನ್ಯಾಯವೇ? ಧರ್ಮವೇ? ಸರಿ, ಪೈಪೋಟಿಗಳ ಮೇಲೆ ಹೊಗಳಬೇಕಾಗುತ್ತದೆ.ಹೊಗಳಿಕೆಗಳ ಹೊನ್ನಶೂಲದಿಂದ ಪರಸ್ಪರ ಇರಿದಿರಿದುಕೊಳ್ಳುತ್ತಿರುವುದು ಆತ್ಮರತಿಯರಿಮೆಯ ಮತ್ತೊಂದು ಫಳಫಳಿಸುವ ಲಕ್ಷಣ.

ಹೊಗಳಿಕೆಗಳ ಸುರಿಮಳೆ ಸುರಿದಾಗ ನಾರ್ಸಿಸಸ್ ಅಲ್ಲದವರಾದರೆ ಸಂಕೋಚದಿಂದ ಹಿಡಿಮುದ್ದೆಯಾಗುತ್ತಾರೆ. ಸ್ಪಂದಿಸುವುದೂ ಕಷ್ಟವಾಗುತ್ತದೆ. ಅಂತವರು ಸುಮ್ಮನಿದ್ದರೆ ಒಪ್ಪಿಕೊಂಡಂತಹ ಕಷ್ಟ, ಅದನ್ನು ಅಲ್ಲಗಳೆದರೆ ಸಭಿಕರ ಮುಂದೆ ಆಯೋಜಕರನ್ನು ಮುಜುಗರಕ್ಕೆ ತಳ್ಳಿದಂತಾಗುವುದು. ಅದಕ್ಕೆ ಅಡ್ಡಗೋಡೆ ಮೇಲೆ ದೀಪವಿಟ್ಟುಬಿಡುತ್ತಾರೆ. “ಇವರು ನನ್ನ ಮೇಲಿನ ಅಭಿಮಾನದಿಂದ ಇಷ್ಟು ಹೇಳುತ್ತಿದ್ದಾರೆ. (ನಾನು ಅಷ್ಟು ಇಲ್ಲ) ಎಂದು ಬ್ರಾಕೆಟಲ್ಲಿ ಓದುವವರಿಗೆ ಅರ್ಥವಾಗುವಷ್ಟು ಒಂದಿಷ್ಟು ನಗೆ ನಕ್ಕು ವಿಷಯವನ್ನು ತೇಲಿಸಿಬಿಡುತ್ತಾರೆ.

ಕೆಲವು ಸಮಾರಂಭಗಳು ಆತ್ಮರತಿಯ ಅಮೋಘ ಮೆರವಣಿಗೆಯೇ ಆಗಿರುತ್ತದೆ. ನಾರ್ಸಿಸಮ್ ಬಗ್ಗೆ ತಿಳಿದಿವರಿಗೆ ಅದು ಬಲ್ಲವನೇ ಬಲ್ಲ ಬೆಲ್ಲದ ರುಚಿಯ ಗಾದೆಯಂತೆ. ಕೆಲವರೆಲ್ಲಾ ಆ ಎಲ್ಲಾ ಹೊಗಳಿಗೆಗಳನ್ನು ಸ್ವೀಕರಿಸುತ್ತಾರೆ. ಹೌದು, ನಾನಿದಕ್ಕೆ ಅರ್ಹ ಎಂದು ಭಾವಿಸಿರುತ್ತಾರೆ. ಇನ್ನೂ ಸರಿಯಾಗಿ ಮತ್ತು ಪೂರ್ತಿಯಾಗಿ ಅವರು ಹೇಳಿಲ್ಲ ಎಂದೂ ಸ್ವಲ್ಪ ನಿರಾಶೆಯಾಗುತ್ತದೆ. ಇವರು ನಾರ್ಸಿಸಮ್ ಪಂಥದವರು.
ನೀವು ಅವರಿಗೆ ನಿರಾಶೆ ಮಾಡಿದಿರೋ, ಉಹುಂ, ಇನ್ನೊಂದು ಸಲ ಅವರು ನಿಮ್ಮನ್ನು ಅವರು ಲಕ್ಷಿಸುವುದಿಲ್ಲ. ನೀವು ಅವರನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ, ಅತಿಥಿಯಾಗಿ ಕರೆದು ಉಪೇಕ್ಷೆ ಮಾಡಿಬಿಡುತ್ತೀರಿ ಎಂದು ನಿಮ್ಮ ಕಡೆ ಹೊರಳುವುದಿಲ್ಲ.

ಹೊಗಳಿಕೆಯೇ ಆಹಾರ

ಆತ್ಮರತಿಯ ಸುಖಿಗಳು ತಮ್ಮನ್ನು ಭೇಟಿ ಮಾಡಿದವರಿಗೆ ತಮ್ಮ ಜೀವನದ ಮಹತ್ವದ ಅನೇಕಾನೇಕ ಘಟನೆಗಳನ್ನು ಹೇಳುತ್ತಿರುತ್ತಾರೆ. ಅದು ಆ ಸಂದರ್ಭಕ್ಕೆ ಬೇಕಿರಲಿ, ಬೇಡದಿರಲಿ. ಹೇಳದೇ ಬಿಡುವುದಿಲ್ಲ. ನೀವು ಕತೆ ಕೇಳಿದಂತೆ ಕೇಳಿ ಸುಮ್ಮನಾಗಿಬಿಟ್ಟರೆ ಅವರಿಗೆ ಬಹಳ ನಿರಾಶೆಯಾಗುತ್ತದೆ. ಅವರು ಅಷ್ಟೂ ಹೊತ್ತು ಹೇಳಿದ್ದೇಕೆಂದರೆ, ಆ ಗುಣಗಳನ್ನೆಲ್ಲಾ ನೀವು ಗುರುತಿಸಿ, ಹೆಕ್ಕಿ, ಒಂದಿಷ್ಟು ಒಳ್ಳೆಯ ಮಾತುಗಳನ್ನಾಡಬೇಕು ಎಂದು. ಅವು ಕಷ್ಟದ ಮತ್ತು ಸಾಹಸದ ಕೆಲಸಗಳಾಗಿರಬಹುದು.

ಯಾರಿಗೋ ಉಪಕಾರ ಮಾಡಿದ್ದಾಗಿರಬಹುದು.ಯಾವುದೋ ಸನ್ನಿವೇಶದಲ್ಲಿ ಹೆಣಗಾಡಿದ್ದೋ, ಹೋರಾಡಿದ್ದೋ ಆಗಿರಬಹುದು.
ಅವರಿಗೆ ಪ್ರಿಯವಾಗುವ ಶಬ್ದಗಳೇನೆಂದರೆ,
“ಅಬ್ಬಾ, ನೀವು ಅದು ಹೇಗೆ ಆ ಸಾಹಸ ಮಾಡಿದಿರಿ? ನೀವಾಗಿದ್ದಕ್ಕೆ ಮಾಡಿದಿರಿ. ಬೇರೆಯವರಾಗಿದ್ದರೆ ಓಡಿ ಹೋಗಿಬಿಡುತ್ತಿದ್ದರು. ಸೋತು ಸುಣ್ಣವಾಗಿಬಿಡುತ್ತಿದ್ದರು.”

“ಈಗಿನ ಕಾಲದಲ್ಲಿ ಯಾರು ಆ ರೀತಿ ನೆರವಾಗುತ್ತಾರೆ. ಎಲ್ಲರೂ ಅವರವರದು ನೋಡಿಕೊಳ್ಳುತ್ತಾರೆ. ನೀವಾಗಿದ್ದಕ್ಕೆ ಅಷ್ಟು ಉಪಕಾರ ಮಾಡಿದ್ದೀರಿ. ನಿಜವಾಗಿಯೂ ನೀವು ಗ್ರೇಟ್.” “ಪ್ಚ್, (ಅವರನ್ನೇ ದಿಟ್ಟಿಸಿ ನೋಡುತ್ತಾ) ನಂಬಕ್ಕೇ ಆಗಲ್ಲ. ನೀವು ಹೇಗೆ ಇವೆಲ್ಲಾ ಮಾಡಿದಿರಿ? ನನಗೆ ನಿಮ್ಮ ಜೊತೆ ಹೀಗೆ ಇರೋದೇ ಹೆಮ್ಮೆ.”

ಆಗ ಅವರ ಮುಖ ನೋಡಿ. ಕಣ್ಣುಗಳಲ್ಲಿ ಹೊಳಪಿರುತ್ತದೆ. ಮುಖದ ಪೂರ್ತಿ ನಗು ತುಂಬಿರುತ್ತದೆ. ವೆಂಕಟೇಶ್ವರ ಮಹಾತ್ಮ್ಯೆ ಸಿನಿಮಾದಲ್ಲಿ ಪ್ರತ್ಯಕ್ಷವಾದ ದೇವರು ನಸುನಗುತ್ತಾ ಭಕ್ತನ ಸ್ತುತಿಗೀತೆಗಳನ್ನು ಕೇಳುತ್ತಾ ತಲೆಯಾಡಿಸುತ್ತಿರುವಂತೆ ಕಾಣುತ್ತದೆ.
ಆತ್ಮರತಿಯ ರತಿಮನ್ಮಥರ ಸಂಭಾಷಣೆಯಲ್ಲಿ ಸಾಮಾನ್ಯವಾಗಿ ಅವರು ಮಾಡಿರುವ ಸಾಧನೆ ಅಥವಾ ಪಟ್ಟಿರುವ ವೇದನೆಗಳಿಂದ ಗೆದ್ದಿರಿವುದ ನಿವೇದನೆ. ಇತರರಿಗಿಂತ ತಾವು ವಿಶೇಷವೆಂದು ತಮ್ಮ ಕೇಳುಗ ಕುರಿಗಳಿಗೆ ಅರ್ಥ ಮಾಡಿಸಬೇಕಾಗಿರುವುದೇ ಅವರ ಗುರಿ.

ಅವರ ಮಾತುಗಳನ್ನು ಮುಂದಿರುವವರು ಕೇಳುತ್ತಿದ್ದಾರೋ ಇಲ್ಲವೋ ಎಂದು ಯೋಚಿಸುವುದೇ ಇಲ್ಲ. ತಮ್ಮ ಮುಂದಿರುವವರು ತಾವು ಕೇಳುತ್ತಿರುವ ಸಂಕೇತವಾಗಿ ಪ್ರಶ್ನೆಗಳನ್ನು ಕೇಳದಿದ್ದರೂ, ಅನುಮಾನಗಳನ್ನು ಮುಂದಿಟ್ಟು ಬಗೆಹರಿಸಿಕೊಳ್ಳಲು ಯತ್ನಿಸದಿದ್ದರೂ ಇವರು ಹೇಳುತ್ತಲೇ ಇರುತ್ತಾರೆ. ಅವರ ಹಸಿವಿಗೆ ಕೇಳುಗರ ಸಕಾರಾತ್ಮಕ ಪ್ರತಿಕ್ರಿಯೆಯೇ ಆಹಾರ.

ಅಪಾರ ಆತ್ಮವಿಶ್ವಾಸದ ವ್ಯಕ್ತಿಯಂತೆ ಕಾಣುವ ಅವರು ಹಾಗೆಯೇ ವರ್ತಿಸುತ್ತಾರೆ. ಅವರ ಆತ್ಮರತಿಗೆ ಸರಸವಾಗಿ ಉಣಬಡಿಸದ ಅರಸಿಕರನ್ನು ಅವರು ಇಷ್ಟಪಡುವುದಿಲ್ಲ. ದೂರಲಿ, ದೂರದಿರಲಿ ಖಂಡಿತವಾಗಿ ದೂರೀಕರಿಸುತ್ತಾರೆ. ಅವರ ಸುತ್ತ ಹೊಗಳುಭಟರಿರಬೇಕು. ಅವರು ಹೇಳಿದ್ದಕ್ಕೆಲ್ಲಾ, “ಪ್ಚ, ಅಮೋಘ! ವಿಸ್ಮಯ! ಅದ್ಭುತ!” ಎಂದು ಬೆರಗಾಗುತ್ತಿರಬೇಕು.

ಏಳು ಮಹಾಪಾತಕಗಳು

ನಾರ್ಸಿಸಮ್‍ನ ಏಳು ಮಹಾಪಾತಕಗಳನ್ನು ಮನೋವಿಜ್ಞಾನಿಗಳು ಗುರುತಿಸುತ್ತಾರೆ.

ನಾಚಿಗೇಡಿತನ: ಸಾಮಾನ್ಯವಾಗಿ ಆತ್ಮರತಿಯ ವ್ಯಕ್ತಿಗಳು ಮುಕ್ತವಾಗಿ ಮತ್ತು ಅಭಿಮಾನದಿಂದ ನಾಚಿಗೇಡಿಯಾಗಿರುತ್ತಾರೆ. ನಾನೂಂದ್ರೆ ಏನು? ನಾನೂಂದ್ರೆ ಯಾರು? ನಾನು ಮನಸ್ಸು ಮಾಡಿದರೆ ಏನು ಮಾಡ್ತೇನೆ ಗೊತ್ತಾ?; ಈ ವಾಕ್ಯಗಳೆಲ್ಲಾ ಅವರವೇ. ಅವರು ತಾವು ಯಾವಾಗಲೂ ವಿಮರ್ಶಾತೀತವಾಗಿರಲು ಬಯಸುತ್ತಾರೆ. ತನ್ನಲ್ಲಿ ವಿಮರ್ಶೆ ಮಾಡಲೇನಿದೆ? ನನ್ನ ಟೀಕಿಸುವವನು ಅಥವಾ ವಿಮರ್ಶಿಸುವವನು ಖಂಡನೆ ಅರ್ಹನೆಂದು ಅವರ ಅಚಲ ನಂಬಿಕೆ. ತಾವು ಶ್ರೀಮಾನ್ ಅಥವಾ ಶ್ರೀಮತಿ ಪರ್ಫೆಕ್ಟ್. ಒಂದು ವೇಳೆ ಅವರ ಯಾವುದಾದರೂ ಕೆಲಸ ಖಂಡಿತವಾಗಿ ಖಂಡನೀಯ ಮತ್ತು ತಪ್ಪು ಎಂದು ನಿರೂಪಿಸಿಬಿಟ್ಟಿದ್ದೇ ಆದರೂ, ಅವರು ಹೇಳುವುದೇನೆಂದರೆ, “ಅಕಸ್ಮಾತ್, ಈ ಕೆಲಸ ತಪ್ಪಾಗಿರಬಹುದು.

ಆದರೆ ನನ್ನ ಉದ್ದೇಶವು ಉತ್ತಮವಾಗಿತ್ತು. ನಾನು ಒಳ್ಳೆಯ ಉದ್ದೇಶದಿಂದ ಮಾಡಿದ್ದು” ಎಂದು ಹೇಳುತ್ತಾರೆಯೇ ಹೊರತು, ತಾವು ಅಪರಾಧ ಪ್ರಜ್ಞೆಯಿಂದ ನರಳುವುದೂ ಇಲ್ಲ. ತಾವು ತಪ್ಪಿತಸ್ಥರೆಂದು ಒಪ್ಪಿಕೊಳ್ಳುವುದೂ ಇಲ್ಲ.

ಅಸಾಧ್ಯ ಸಾಧಕ: ನಾರ್ಸಿಸಿಸ್ಟ್‍ಗಳು ತಮ್ಮನ್ನು ತಾವು ಪರ್ಫೆಕ್ಟ್ ಎಂದು ನಂಬಿರುವ ಕಾರಣದಿಂದ ಇತರರಿಗೆ ಸಾಧ್ಯವಾಗದ ಅದ್ಭುತಗಳನ್ನು ತಾವು ಸೃಷ್ಟಿಸುತ್ತೇವೆಂದು ನಂಬಿರುತ್ತಾರೆ. ಇತರರನ್ನು ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡುತ್ತಾರೆಯೇ ಹೊರತು ತಮ್ಮ ಆತ್ಮಚಿತ್ರಣವನ್ನು ಕಿಂಚಿತ್ತೂ ಮುಕ್ಕಾಗಿಸಿಕೊಳ್ಳರು.

ಸೊಕ್ಕು: ಯಾರಾದರೂ ಅವರನ್ನು ಖಂಡಿಸಿದರೆ, ಟೀಕಿಸಿದರೆ ಅವರ ಉಸಿರಾಟ ವೇಗವನ್ನು ಪಡೆಯುತ್ತದೆ. ಸೊಕ್ಕು ಉಕ್ಕೇರುತ್ತದೆ. ಆ ಟೀಕೆಗಳನ್ನು ತುಂಬಾ ವ್ಯಕ್ತಿಗತವಾಗಿ ಅದನ್ನು ತೆಗೆದುಕೊಳ್ಳುವುದು ಮಾತ್ರವಲ್ಲದೇ ಇತರರಿಗೆ ಅವರ ಬಗ್ಗೆ ನಕಾರಾತ್ಮಕವಾಗಿ ಹೇಳುತ್ತಿರುತ್ತಾರೆ. ಅವರ ಚಾರಿತ್ರ್ಯವಧೆ ಮಾಡಲು ಹೇಸುವುದಿಲ್ಲ. ಅವರಿಗೆಂತಾದರೂ ಸಂಕಟ ಬಂದರೆ “ಅವರಿಗೆ ಹಾಗೇ ಆಗಬೇಕು” ಎಂದು ತೃಪ್ತಿಪಡುವ ಪ್ರಯತ್ನ ಮಾಡುತ್ತಾರೆ.

ಅಸೂಯೆ: ಇತರರ ಸಾಧನೆಗಳನ್ನು ಪ್ರಶಂಸಿಸುವುದು ಅವರಿಗೆ ಎಂದೂ ಆಗದು. ಇತರರೇನಾದರೂ ಸಾಧನೆ ಮಾಡಿದ್ದಾರೆಂದರೆ ಅವರ್ಯಾವುದೋ ಅಡ್ಡದಾರಿಯಿಂದ ಮೇಲೆದ್ದು ಬಂದಿರಬೇಕು, ಯಾವುದಾದರೂ ವಶೀಲಿ, ಲಂಚ ರುಶುವತ್ತುಗಳ ಪ್ರಭಾವವಿರಬೇಕು, ಅವರಿಗೇನು ಅವರಪ್ಪನ ಹತ್ತಿರ ದುಡ್ದು ಬೇಕಾದಷ್ಟಿದೆ ಮಾಡುತ್ತಾನೆ; ಹೀಗೆ, ಏನಾದರೊಂದು ಹೇಳಿಯೇ ತೀರುತ್ತಾರೆಯೇ ಹೊರತು ಮೆಚ್ಚುವುದಂತೂ ಇಲ್ಲ. ಅದ್ಯಾವ ಸೀಮೆ ಸಾಧನೆ ಎಂಬ ಉಪೇಕ್ಷೆಯು ಅಸೂಯೆಯ ಬಿಂಬವೇ ಹೊರತು ಮತ್ತೇನಿಲ್ಲ.

ಪರಾಕುಪ್ರಿಯ: ನಾರ್ಸಿಸಿಸ್ಟ್‍ಗಳು ಸಕಾರಣಕ್ಕೆ ಹೊರತಾದ ಬಿರುದುಬಾವಲಿಗಳನ್ನು ಹೊಂದುವುದಕ್ಕೆ ಇಷ್ಟಪಡುತ್ತಾರೆ. ಪಕ್ಕದ ರಸ್ತೆಯವರಿಗೆ ಅವರ ಬಗ್ಗೆ ತಿಳಿದಿರದಿದ್ದರೂ ತಾವು ಜಗದ್ವಿಖ್ಯಾತರು ಎಂದು ಅನ್ನಿಸಿಕೊಳ್ಳಲು ಆಶಿಸುತ್ತಾರೆ. ಅದನ್ನು ಉಳಿಸಿಕೊಳ್ಳಲು ಸದಾ ಹೆಣಗಾಡುತ್ತಿರುತ್ತಾರೆ. ಅದನ್ನು ಒಪ್ಪಿಕೊಳ್ಳದವರ ಬಗ್ಗೆ ಬಹಳ ಕೋಪವಿರುತ್ತದೆ.

ಪಟಾಲಂ ಪಡೆ: ತಮ್ಮ ಸುತ್ತಲೂ ಹೇಳಿದಂತೆ ಕೇಳಿಕೊಂಡಿರುವ ಒಂದಷ್ಟು ಜನರನ್ನು ಹೊಂದಿರುವಂತಹ ಮನಸ್ಥಿತಿ ಬಹಳ ಸಾಧಾರಣ. ಆ ಜನರು ಇವರಿಗೆ ಪರಾಕು ಹೇಳಲು ಮಾತ್ರವಲ್ಲದೇ, ಇವರ ಶ್ರೇಷ್ಟತೆ ಮತ್ತು ಹೆಗ್ಗಳಿಕೆಯ ಬಗ್ಗೆ ಜನಗಳಲ್ಲಿ ಜಾಗೃತಿಯನ್ನು ಉಂಟು ಮಾಡಬೇಕೆಂದು ಇವರ ಅಭಿಲಾಷೆ. ಸಾಧಾರಣರಲ್ಲದೇ ಇವರು ಮಹಾನ್ ಸಾಧಕರಾಗಿದ್ದರೂ, ಪ್ರಖ್ಯಾತರಾಗಿದ್ದರೂ ಇಂತಹ ಮನಸ್ಥಿತಿಯಲ್ಲೇ ಇರುತ್ತಾರೆ.

ಅವರೊಬ್ಬರು ಈ ನಾಡಿನ ಬಹುಪ್ರಖ್ಯಾತರು. ನಾನೂ ಮತ್ತು ಕೆಲವು ಯುವನಿರ್ದೇಶಕರ ತಂಡಕ್ಕೆ ಅವರು ಗೆಳೆಯರು. ನಾವೆಲ್ಲರೂ ಕೂಡಿ ಒಂದು ಸಂಸ್ಥೆಗೆ ಔಪಚಾರಿಕ ಭೇಟಿ ನೀಡಬೇಕಿತ್ತು. ಪ್ರಖ್ಯಾತರ ಗೆಳೆಯರೊಬ್ಬರೂ ನಮ್ಮೊಂದಿಗೆ ಬಂದಿದ್ದರು.

ಈ ನಮ್ಮ ತಂಡ ಸಾಮಾನ್ಯವಾಗಿ ಮಾತಾಡಿಕೊಂಡು ಬರುತ್ತಿದ್ದೆವು. ಪ್ರಖ್ಯಾತರ ಗೆಳೆಯ ನಮ್ಮ ತಂಡದ ಬಳಿಗೆ ಬಂದು ಹೇಳಿದರು, “ನೀವು ಮೊದಲು ಒಳಗೆ ಬೇಗ ಬೇಗ ಹೋಗಿ. ಅಲ್ಲಿ ಇರುವವರಿಗೆ ಹೇಳಿ, ‘ಸಾರ್ ಬಂದರು, ಸಾರ್ ಬಂದರು’ ಅಂತ. ಅಲರ್ಟ್ ಆಗಲಿ” ಎಂದು.

ಪ್ರಖ್ಯಾತರ ಮುಖವನ್ನು ನೋಡಿದರೆ ಅವರು ಸಹಜವಾಗಿ ಅಲರ್ಟ್ ಆಗುತ್ತಾರೆ. ಮೇಲೆದ್ದು ಬಂದು ಗೌರವಿಸುತ್ತಾರೆ, ಸ್ವಾಗತಿಸುತ್ತಾರೆ. ನಾವು ಹೋಗಿ ‘ಬಂದ್ರು ಬಂದ್ರು’ ಅಂತ ಹೇಳೋದೇನಿದೇಂತ ನಮ್ಮ ಧೋರಣೆ. ನಾವು ಅದಕ್ಕೆ ಜಾಣ ಮುಗ್ಧರಾಗಿ ‘ನೀವು ಹೇಳುವುದು ಹೇಗೆ ಮಾಡುವುದು ಎಂದು ತಿಳಿಯಲಿಲ್ಲ’ ಎಂಬಂತೆ ಪಿಳಪಿಳನೆ ನೋಡುತ್ತಿದ್ದೆವು. ಆಗ ನಗಲೂ ಆಗುತ್ತಿರಲಿಲ್ಲ. ನಾವುಗಳು ಆಮೇಲೆ ಮನಸೋಯಿಚ್ಚೆ ನಗಾಡಿಕೊಂಡೆವು. ಬಹುಶಃ ನಮ್ಮ ಹತ್ತಿರ ಮಾಡಿಕೊಂಡ ತಮ್ಮ ಗೆಳೆಯರ ಅಹವಾಲು ಆ ಪ್ರಖ್ಯಾತರಿಗೆ ತಿಳಿದಿರಲಿಲ್ಲ ಎನಿಸುತ್ತದೆ.

ಇರಲಿ, ಇಂತಹ ಪಟಾಲಂ ಪಡೆಯನ್ನು ಹೊಂದಿರುವಾಸೆ ಆತ್ಮರತಿಸಖರದು. ಅವರನ್ನು ಶೋಷಿಸುತ್ತಿದ್ದೇವೆ ಎಂಬ ಅರಿವೂ ಅವರಿಗಿರುವುದಿಲ್ಲ. ತಮಗಾಗಿ ಅವರು ಹಾಗೆ ಮಾಡಬೇಕಾಗಿರುವುದು ಅವರ ಧರ್ಮ ಎಂದು ಅವರು ಭಾವಿಸಿರುತ್ತಾರೆ.

ಸೀಮೆಯೊಳಗೆ ಬಂಧಿತರು: ಬಹಳ ಶೋಚನೀಯ ಸಂಗತಿಯೆಂದರೆ, ತಾವು ತಮ್ಮ ಸುತ್ತಲೂ ಒಂದು ಎಲ್ಲೆಯನ್ನು ಗೀಚಿಕೊಂಡು ತಮ್ಮನ್ನು ಸಂಕುಚಿತಗೊಳಿಸಿಕೊಳ್ಳುತ್ತಿದ್ದೇವೆ ಎಂಬ ಅರಿವು ಅವರಿಗೆ ಇರದೇ ಹೋಗುವುದು. ಅವರು ತಮ್ಮ ಮತ್ತು ಇತರರ ನಡುವೆ ಕಂದಕಗಳನ್ನು ತೋಡಿಕೊಳ್ಳುತ್ತಿದ್ದೇವೆ ಎಂದು ಅವರ ಅರಿವಿಗೆ ಬಾರದೇ ಹೋಗುವುದು. ಒಂದು ವೇಳೆ ಅವರು ಖ್ಯಾತನಾಮರಾಗಿದ್ದರೆ, ಉನ್ನತ ಅಧಿಕಾರಸ್ಥರಾಗಿದ್ದರೆ ಅನಿವಾರ್ಯವಾಗಿ ಅವರಿಂದ ಕೆಲಸಗಳಾಗಬೇಕಾದವರು ತಗ್ಗುವ ಬಗ್ಗುವ ನಟನೆ ಮಾಡುತ್ತಿರುತ್ತಾರೆ.

ಕೊನೆಗೊಮ್ಮೆ ಅವರಿಂದ ಏನೂ ಕೆಲಸ ಆಗುವ ಅಗತ್ಯ ಇಲ್ಲದೇ ಹೋದಾಗ ಅವರನ್ನು ತಟ್ಟನೆ ನಿರ್ಲಕ್ಷಿಸಿಬಿಡುತ್ತಾರೆ. ಸಂಪೂರ್ಣ ಬಿಟ್ಟುಬಿಡುತ್ತಾರೆ. ತಮ್ಮ ಸುತ್ತಲೂ ವಂದಿಮಾಗದರನ್ನು, ಪಟಾಲಮನ್ನು ಕಟ್ಟಿಕೊಂಡು ತಿರುಗಾಡುತ್ತಿದ್ದವರಿಗೆ ಒಮ್ಮಿಂದೊಮ್ಮೆಲೆ ಆಘಾತವಾಗುತ್ತದೆ. ತಮ್ಮ ಅಹಂಕಾರಕ್ಕೆ ಆಹಾರ ಸಿಗದೇ ಮಾನಸಿಕವಾಗಿ ಕೃಶವಾಗುತ್ತಾರೆ. ಖಿನ್ನತೆಗೆ ಜಾರುತ್ತಾರೆ. ಅಂತಹ ಖಿನ್ನತೆಗಳಿಂದ ಹೊರಬರಲಾಗದೇ ಅನೇಕ ರೀತಿಯ ವ್ಯಸನಗಳಿಗೆ ತುತ್ತಾಗುತ್ತಾರೆ. ಕೆಲವೊಮ್ಮೆ ಆತ್ಮಹತ್ಯೆಗೆ ಶರಣಾಗಲೂಬಹುದು.

ಈ ಮಾನಸಿಕ ಸಮಸ್ಯೆ ಬಹಳಷ್ಟು ಜನರಲ್ಲಿರುವುದರಿಂದ ವ್ಯಕ್ತಿಗತವಾಗಿಯೂ ಮತ್ತು ಸಾಮಾಜಿಕವಾಗಿಯೂ ಬಹಳ ಸಂಘರ್ಷಗಳು ಮತ್ತು ಸಮಸ್ಯೆಗಳು ಉಂಟಾಗುತ್ತಿರುತ್ತವೆ. ಇದನ್ನು ಓದಿದಾಗ ನನ್ನಲ್ಲೂ ಇಂತಹ ಸಮಸ್ಯೆಯೊಂದಿದೆ ಎಂದು ಯಾರಿಗಾದರೂ ಅನ್ನಿಸಿದರೆ, ಅದು ಬಹಳ ಒಳ್ಳೆಯ ಸೂಚನೆ. ಏಕೆಂದರೆ, ಯಾವುದೇ ಮಾನಸಿಕ ಸಮಸ್ಯೆಯ ಚಿಕಿತ್ಸೆಯ ಕಾರ್ಯ ಪ್ರಾರಂಭವಾಗುವುದು ‘ನನಗೆ ಈ ಸಮಸ್ಯೆ ಇದೆ’ ಅರಿವಿನಿಂದ.

ಅದೇ ಪರಿಹಾರಕ್ಕೆ ಮೊದಲ ಹೆಜ್ಜೆ. ಸಾಮಾನ್ಯವಾಗಿ ಮಾನಸಿಕ ಸಮಸ್ಯೆಯು ತೀವ್ರವಾಗಿರುವವರು ತಮಗೆ ಮಾನಸಿಕ ಸಮಸ್ಯೆ ಇದೆ ಎಂದು ಒಪ್ಪಿಕೊಳ್ಳುವುದೇ ಇಲ್ಲ. ಇತರರಲ್ಲಿ ಅದು ಇದೆ ಎಂದು ಗುರುತಿಸಲು ಯತ್ನಿಸುತ್ತಿರುತ್ತಾರೆ. ತಾವು ಮಾತ್ರ ಸಂಪೂರ್ಣ ಆರೋಗ್ಯದಿಂದ ಇದ್ದೇವೆ ಎಂದುಕೊಂಡಿರುತ್ತಾರೆ. ಮನೋರೋಗಕ್ಕೆ ಮದ್ದಿಲ್ಲ ಎಂಬ ಗಾದೆಯನ್ನು ಒಪ್ಪುವುದು ಬೇಡ.ಮನೋರೋಗಕ್ಕೆ ಮದ್ದಿದೆ ಎಂಬ ಭರವಸೆ ಮತ್ತು ವಿಶ್ವಾಸದೊಡನೆ ಆತ್ಮವಿಮರ್ಶೆಗೊಳಗಾಗುವುದು ಈ ಸಮಸ್ಯೆಗೆ ಪರಿಹಾರಕ್ಕೆ ದಾರಿ ಕಾಣುವ ಪ್ರಾರಂಭ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಮರೆಯಾದ ಅಪೂರ್ವ ಚಿತ್ರಕಲಾ ಪ್ರತಿಭೆ ‘ಶೋಭಾ ಕರಣಿಕ್’

Published

on

ಶೋಭಾ ಕರಣಿಕ್
  • ಡಾ.ಎನ್.ಕೆ.ಪದ್ಮನಾಭ, ಸಹಾಯಕ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ,ಉಜಿರೆ

ವರು ಬಿಡಿಸುತ್ತಿದ್ದ ರೇಖೆಗಳು ನಮ್ಮ ದೇಶೀ ಸಂಸ್ಕೃತಿಯ ವಕ್ತಾರಿಕೆಯ ಪಾತ್ರ ನಿರ್ವಹಿಸುತ್ತಿದ್ದವು. ಕನ್ನಡದ್ದೇ ಆದ ಕಲಾತ್ಮಕ ಪರಂಪರೆಯನ್ನು ಸೂಕ್ಷ್ಮವಾಗಿ ಗ್ರಹಿಸಿದ್ದ ಅವರ ಚಿತ್ರಗಳು ಜೀವಂತಿಕೆಯ ಗುಣಲಕ್ಷಣದೊಂದಿಗೆ ಕಂಗೊಳಿಸುತ್ತಿದ್ದವು.

ಸಾಂಪ್ರದಾಯಿಕ ಚಿತ್ರಶೈಲಿಯನ್ನು ಆಧುನಿಕ ಅಗತ್ಯಗಳಿಗೆ ತಕ್ಕಂತೆ ಮಣಿಸಿ ಪರಂಪರೆಯೊಳಗೇ ಅಡಗಿದ್ದ ಮೌಲಿಕ ಮಾದರಿಗಳನ್ನು ಮನಗಾಣಿಸುವ ಶ್ರದ್ಧೆಯೊಂದಿಗೇ ಅವರು ಚಿತ್ರವಿನ್ಯಾಸ ರೂಪಿಸುತ್ತಿದ್ದರು. ಇನ್ಸ್ಟಾಗ್ರಾಮ್, ಫೇಸ್‌ಬುಕ್ ಮತ್ತಿತರ ಮಾಧ್ಯಮಗಳ ಮೂಲಕ ತಮ್ಮ ಚಿತ್ರಗಳನ್ನು ಕಾಣಿಸುತ್ತಿದ್ದರು. ಪರಂಪರೆ ಮತ್ತು ವರ್ತಮಾನವನ್ನು ಬೆಸೆದು ಹೊಸ ಬಗೆಯ ಚಿತ್ರಪ್ರಯೋಗಗಳನ್ನು ನಡೆಸುವ ಹುಮ್ಮಸ್ಸಿನೊಂದಿಗೆ ಚಿತ್ರಕಲಾಯಾನ ಮುಂದುವರೆಸಿದ್ದರು. ಅವರ ಹೆಸರು ಶೋಭಾ ಕರಣಿಕ್.

ಇತ್ತೀಚೆಗಷ್ಟೇ ಅವರ ಚಿತ್ರಕಲಾಯಾನ ನಿಂತಿತು. ಅವರ ನಿಧನವು ವಿನೂತನವಾದ ಪ್ರಯೋಗಶೀಲ ಚಿತ್ರಕಲಾ ಸಾಧ್ಯತೆಗಳನ್ನು ತಡೆದು ನಿಲ್ಲಿಸಿತು. ಪುರಾಣದ ಕಥನ ಪ್ರಸಂಗಗಳಲ್ಲಿ ಉಲ್ಲೇಖಿತ ದೇವರು-ದೇವತೆಗಳ ಅಸ್ಮಿತೆ ಮತ್ತು ದೇಸೀ ಸಂಸ್ಕೃತಿಯನ್ನು ಬಿಂಬಿಸುವ ವಿನ್ಯಾಸಗಳನ್ನು ಸಮನ್ವಯಗೊಳಿಸಿ ಚಿತ್ರಕಲೆಗೆ ಹೊಸ ಆಯಾಮ ತಂದುಕೊಟ್ಟ ಪ್ರತಿಭೆಯಾಗಿ ಶೋಭಾ ಕರಣಿಕ್ ಅವರದ್ದು ವಿಶೇಷ ವ್ಯಕ್ತಿತ್ವವಾಗಿತ್ತು. ಮ್ಯೂರಲ್ ಪೇಂಟಿಂಗ್‌ನಲ್ಲಿ ಅವರಿಗಿದ್ದ ಪರಿಣತಿ, ಉತ್ತರ ಕನ್ನಡದ ಕಾವಿ ಕಲೆಯ ಕುರಿತಾದ ವಿಸ್ತೃತ ಜ್ಞಾನವು ಚಿತ್ರಕಲೆಯನ್ನು ಉನ್ನತೀಕರಿಸುವುದಕ್ಕೆ ಅವರಿಗೆ ನೆರವಾಗಿತ್ತು.

ಕಲೆಯ ಜೊತೆಗಿನ ಅನುಸಂಧಾನದ ಕ್ಷಣಗಳು ಅಪೂರ್ವ. ಒಂದು ನಿರ್ದಿಷ್ಟ ನಿರ್ಣಾಯಕ ಸಂದರ್ಭ, ಸಮಯದಲ್ಲಿ ಕಲೆಯೊಂದು ವ್ಯಕ್ತಿತ್ವವನ್ನು ಪ್ರಭಾವಿಸಿ ಸೃಜನಶೀಲತೆಯ ಹಸಿವನ್ನು ನೆಲೆಗೊಳಿಸುವುದಕ್ಕೆ ಪ್ರೇರಣೆಯಾಗುತ್ತದೆ. ಕಲೆಯ ಪ್ರಭಾವ ಎರಡು ಬಗೆಯದ್ದು. ಸಹೃದಯರನ್ನು ತನ್ನ ಕಲಾತ್ಮಕ ಮಾದರಿಗಳಿಂದ ಸೆಳೆದು ಅವರೊಳಗೆ ವಿಶೇಷ ಅನುಭೂತಿ ಧಾರೆ ಎರೆಯುವಂಥದ್ದು ಒಂದು ಬಗೆಯಾದರೆ ಹೀಗೆ ಸೆಳೆದುಕೊಂಡು ಮತ್ತೆ ಮತ್ತೆ ಪ್ರಭಾವಿಸುತ್ತಾ ಸಹೃದಯರನ್ನೇ ಕಲಾವಿದರನ್ನಾಗಿಸುವ ಸಾಧ್ಯತೆ ಮತ್ತೊಂದು ತೆರನಾದದ್ದು.

ಈ ಕಾರಣಕ್ಕಾಗಿಯೇ ಕಲಾತ್ಮಕ ಸಂಭವನೀಯತೆಯು ಅನನ್ಯವೆನ್ನಿಸಿಕೊಂಡಿದೆ. ಇಂಥ ಅನನ್ಯತೆಯೊಂದಿಗೇ ಶೋಭಾ ಕರಣಿಕ್ ಗುರುತಿಸಿಕೊಂಡಿದ್ದರು. ಅವರು ಓದಿದ್ದು ತಾಂತ್ರಿಕ ವಿಜ್ಞಾನ. ಆದರೆ, ಅವರ ನಿಜದ ಪ್ರತಿಭೆ ಅಭಿವ್ಯಕ್ತವಾದದ್ದು ಚಿತ್ರಕಲೆಯ ಮೂಲಕ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪರಿಸರದಲ್ಲಿ ಬೆಳೆದ ಶೋಭಾ ಕರಣಿಕ್ ಮೊದಲಿನಿಂದಲೂ ದೇಶೀ ಕಲೆಯ ಕುರಿತು ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡು ಬಂದಿದ್ದರು. ಹೈಸ್ಕೂಲ್ ಓದುತ್ತಿರುವಾಗಲೇ ಕಾವಿಕಲೆಯ ವಿನ್ಯಾಸ ಅವರನ್ನು ಸೆಳೆದಿತ್ತು. ಇವುಗಳನ್ನು ಮತ್ತೆ ಮತ್ತೆ ನೋಡುತ್ತಾ ಹೋದಂತೆಲ್ಲಾ ಕಾವಿ ಕಲೆಯ ಕುರಿತ ಆಕರ್ಷಣೆ ಕಲಿಕೆಯ ಹಂಬಲವಾಗಿ ಮಾರ್ಪಟ್ಟಿತು. ಉತ್ತರ ಕನ್ನಡದ ಟೆಂಪಲ್ ರ‍್ಟ್ ಪ್ರಕಾರದ ಭಾಗವಾಗಿ ಕಾವಿ ಕಲೆಯನ್ನು ಪರಿಚಯಿಸುವ ದೃಷ್ಟಿಯಿಂದ ಅವರು ರಚಿಸಿದ್ದ ತರಹೇವಾರಿ ವಿನ್ಯಾಸಗಳು ವಿವಿಧ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮಗಳಲ್ಲಿ ಗಮನ ಸೆಳೆದಿದ್ದವು.

ಕಾವಿ ಕಲೆಯೂ ಸೇರಿದಂತೆ ನಮ್ಮ ಸಾಂಪ್ರದಾಯಿಕ ಕಲೆಗಳು ಈ ಹಿಂದಿನ ಕಾಲದ ತಲೆಮಾರನ್ನಷ್ಟೇ ಪ್ರಭಾವಿಸಿದ್ದಲ್ಲದೇ ನಂತರದ ಹೊಸ ಪೀಳಿಗೆಯನ್ನೂ ಆಕರ್ಷಿಸುವ ಗುಣ ಹೊಂದಿವೆ. ಮೂಲ ಅಂತಃಸತ್ವಕ್ಕೆ ಧಕ್ಕೆಯೊದಗದ ಹಾಗೆ ಹೊಸ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಈ ಸಾಂಪ್ರದಾಯಿಕ ಚಿತ್ರಕಲಾ ವಿನ್ಯಾಸಗಳನ್ನು ಮರುರೂಪಿಸಬಹುದು. ಹೊಸ ಕಾಲದಲ್ಲಿ ಅವುಗಳ ಮಹತ್ವವನ್ನು ಮನಗಾಣಿಸಬಹುದು ಎಂಬುದು ಅವರ ಆಶಯವಾಗಿತ್ತು.

ಕಲೆಯೊಂದು ಒಂದು ಕಾಲದಿಂದ ಮತ್ತೊಂದು ಕಾಲಕ್ಕೆ ದಾಟಿಕೊಳ್ಳುವಾಗ ಪಲ್ಲಟಗಳು ಸಹಜ. ಈ ಪಲ್ಲಟಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಇಂತಹ ಕಲೆಗಳಿಗೆ ಹೊಸಕಾಲದಲ್ಲೂ ಜೀವಂತಿಕೆಯನ್ನು ತಂದುಕೊಡುವ ಪ್ರಯತ್ನದ ಅಗತ್ಯವನ್ನು ಮನಗಾಣಿಸುವುದಕ್ಕಾಗಿಯೇ ಶೋಭಾ ಕರಣಿಕ್ ಅವರು ಚಿತ್ರಕಲಾ ರಚನೆಯ ವೈವಿಧ್ಯಮಯ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದರು.

ಅವರ ನಿಧನದಿಂದ ಈ ಪ್ರಯೋಗಶೀಲ ಹೆಜ್ಜೆಗಳು ನಿಂತಂತಾಗಿವೆ. ಆದರೆ, ಅವರು ಪರಂಪರೆ ಮತ್ತು ವರ್ತಮಾನವನ್ನು ಸಮನ್ವಯಗೊಳಿಸಿ ಸಾಬೀತುಪಡಿಸಿದ ಅಪೂರ್ವ ಚಿತ್ರಕಲಾ ಪ್ರಯೋಗಶೀಲತೆಯ ಜೀವಂತಿಕೆ ಹೊಸ ಪೀಳಿಗೆಗೆ ಸದಾ ಸ್ಫೂರ್ತಿಯ ಸೆಲೆಯಾಗಿರುತ್ತದೆ. ಅವರ ಹೆಸರಿನ ಇನಸ್ಟಾಗ್ರಾಂನಲ್ಲಿ ಕಾಣಿಸಿಕೊಂಡಿರುವ ಚಿತ್ರಗಳು ಇಂಥ ಸ್ಫೂರ್ತಿಯ ಪ್ರಭೆಯನ್ನು ದಾಟಿಸುತ್ತಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಹೊಸತನದ ಹೊಸ್ತಿಲಲ್ಲಿ..!

Published

on

ಬರಹ : ಮೀನಾಕ್ಷಿ. ಬಿ
  • ಮೀನಾಕ್ಷಿ .ಬಿ, ಎಂ. ಎ ವಿದ್ಯಾರ್ಥಿನಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ

ಹೊಸವರ್ಷ ವೆಂಬುದು ಪ್ರತಿಯೊಬ್ಬರ ಬಾಳಲ್ಲಿ ವರ್ಷಕ್ಕೊಮ್ಮೆ ಬರುವ ಹೊಸದಿನಗಳ ಆಗಮನ ಯಾಕೆಂದರೆ ಹೊಸತನವನ್ನು ತರುತ್ತಾ ಇರುವ ಹೊಸವರ್ಷ ಕೂಡ ಒಂದು ಜೀವನದ ಭರವಸೆ, ನಿರೀಕ್ಷೆ ಕನಸುಗಳ ಬಂಡಿಯ ಮೇಲೆ ಸಾಗುವ ಪ್ರಯಾಣ ನಮ್ಮ ಜೀವನ.

ವ್ಯಕ್ತಿಯ ನಂಬಿಕೆಯ ಆಧಾರದ ಮೇಲೆಯೇ ಜೀವನ ಸಾಗುಸುತ್ತಿರುವುದು.ಯಾಕೆಂದರೆ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿಯೂ ಕೂಡ ಕಷ್ಟ -ಸುಖ ದುಃಖದ ಸಂಗತಿಗಳು ಇದ್ದೆ ಇರುತ್ತದೆ. ಕೆಲವೊಂದು ಬಾರಿ ಹತಾಶೆಯನ್ನು ಹೊಂದಿ ಜೀವನದಲ್ಲಿ ಜಿಗುಪ್ಸೆ ಒಂದು ಕೆಟ್ಟ ನಿರ್ಧಾರಕ್ಕೆ ಮನಸ್ಸು ದಾರಿ ಮಾಡಿಕೊಡುತ್ತದೆ. ಹಾಗೆಯೇ ಕಷ್ಟ ಇದ್ದಲ್ಲಿ ಸುಖವಿರುವುದುಂಟು ಅನ್ನುವ ಹಾಗೇ ಇವತ್ತಲ್ಲ ನಾಳೆ ಒಳ್ಳೆಯ ದಿನಗಳು ನಮ್ಮ ಜೀವನದಲ್ಲಿ ಬರಬಹುದೆಂಬ ಭರವಸೆ,ಆತ್ಮವಿಶ್ವಾಸವನ್ನು ಇಟ್ಟುಕೊಂಡು ಜೀವನ ನಡೆಸುತ್ತಲೇ ಇದ್ದೇವೆ.

ಈ ವರ್ಷ ಒಳ್ಳೆಯದಾಗಿಲ್ಲ ಅಂದರೆ ಏನು ಮುಂದಿನ ವರ್ಷ ಆದರೂ ನನ್ನ ಬದುಕು ಬದಲಾಗಬಹುದು ಎಂಬ ಹೊಸತನವನ್ನು ನಮ್ಮಲ್ಲಿ ಭರವಸೆ,ನಂಬಿಕೆಯ ಬೇರಿನೊಂದಿಗೆ ಬೆರೆಸಿಕೊಂಡು ಬದುಕಬೇಕು.ನಾಳೆಯ ದಿನಗಳ ಮೇಲಿನ ಅನಿರೀಕ್ಷಿತ ತೀರಿವಿನಿಂದಾಗುವ ಬದುಕಿನಲ್ಲಾಗುವ ಬದಲಾವಣೆ ಹೊಸತನದ ಚಾಪನ್ನು ಮೂಡಿಸುತ್ತದೆ.
ಎಂಥ ಹತಾಶ ಮನಸ್ಥಿತಿಯವರಲ್ಲೂ ಹೊಸವರ್ಷ ಭರವಸೆಯ ಅಭಯ ಹಸ್ತವನ್ನು ಚಾಚುತ್ತದೆ. ಅದೆಲ್ಲಿಂದಲೇ ಆತ್ಮ ವಿಶ್ವಾಸದ ಬೆಳಕಿನ ಕಿಡಿಯೊಂದು ಕಾಣಿಸಿಕೊಳ್ಳುತ್ತದೆ.

ಹೊಸವರ್ಷವೆಂಬುದು ಕೇವಲ ಸಂಭ್ರಮದ ಕಾಲ ಮಾತ್ರವಲ್ಲ. ಕಳೆದ ದಿನಗಳತ್ತ ಹಿಂತಿರುಗಿ ನೋಡುವ ಸಮಯ ಕೂಡ ಹಿಂದಿನ ದಿನಗಳ ಪುಟಗಳನ್ನು ತೆಗೆದು ನೋಡಿದರೆ. ಉತ್ಸಾಹದ ಗಳಿಗೆಗಳು ಮುಂದಿನ ಕೆಲಸಗಳಿಗೆ ಚೈತನ್ಯ, ಉತ್ಸಾಹ ನೀಡಬಲ್ಲದು.ನಮ್ಮ ದಿಕ್ಕಿಲ್ಲದ ದಾರಿಗೆ ಖಚಿತ ದಿಕ್ಕು ದಾರಿಯನ್ನು ತೋರಬಲ್ಲದು.

ಜೀವನದ ಪ್ರಯಾಣಕ್ಕೆ ಒಂದು ನಿಲ್ದಾಣವಾಗಿದೆ. ನಾವು ಕಾಣುವ ಕನಸಗಳು ಕನಸಾಗಿಯೇ ಉಳಿದಿದೆ ಯಾಕೆಂದರೆ ನಮ್ಮಲ್ಲಿನ ಬೇಜವಾಬ್ದಾರಿ, ನಿರ್ಲಕ್ಷತನ ಆಮೇಲೆ ಮಾಡಿದರೆ ಆಯ್ತು ಅನ್ನೋ ಮನೋಭಾವನೆ ಯಾವುದರ ಬಗ್ಗೆಯೂ ಆಸಕ್ತಿ ಕೊಡದೆ ಇರೋದು ಎಲ್ಲವು ನಮ್ಮ ಕನಸಿನ ಜೀವನ ರೂಪಿಸಿಕೊಳ್ಳುವಲ್ಲಿ ಸಫಲರಾಗದೆ ಉಳಿಯಲು ಕಾರಣ.

ಮೊದಲು ಆತ್ಮವಿಶ್ವಾಸ ಬೇಕು ನಾನು ಈ ಕೆಲಸವನ್ನು ಮಾಡುವೆ ಎಂಬ ಒಂದು ನಿರ್ಧಿಷ್ಟ ಗುರಿ ಇರಬೇಕು ಅಂಗಿದ್ರೆ ಅಷ್ಟೇ ಜೀವನದ ಪಯಣದ ಹಾದಿಯಲ್ಲಿ ಯಶಸ್ಸನ್ನು ಕಾಣಲು ಸಾಧ್ಯ ಇಲ್ಲವಾದಲ್ಲಿ ಸೋಲನ್ನು ಅನುಭವಿಸುವ ಪರಿಸ್ಥಿತಿ ಎದುರಾಗುತ್ತದೆ. ಮುಂದಿನ ದಿನಗಳ ಆಗಮನದೊಂದಿಗೆ ನಾವು ಕಂಡ ಕನಸನ್ನು ಈಡೇರಿಸಿಕೊಳ್ಳುವ ಸತತ ಪ್ರಯತ್ನದೊಂದಿಗೆ ಬರುವ ದಿನವನ್ನು ಸ್ವಾಗತಿಸಿಕೊಳ್ಳೋಣ.
ಎಲ್ಲರ ಬಾಳಲಿ ಹರುಷ ,ಸಂತೋಷ ಮನೆಮಾಡಲಿ ಎಂದು ಆಶಿಸುತ್ತಾ ಎಲ್ಲರಿಗೂ ಹೊಸವರ್ಷದ ಶುಭಾಶಯಗಳು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಕಾಮರೂಪದ ಪ್ರಭಾಕರ

Published

on

  • ಪ್ರೊ.ರಹಮತ್ ತರೀಕೆರೆ

ನಾನು ಕೋಲಾರಕ್ಕೆ ಹೋದಾಗೆಲ್ಲ ಎರಡು ಜಾಗಗಳಿಗೆ ತಪ್ಪದೆ ಭೇಟಿ ಕೊಡುತ್ತೇನೆ. ಒಂದು-ಕೆ.ರಾಮಯ್ಯ ಮತ್ತವರ ಸಂಗಾತಿಗಳು ಸೇರಿ ತೇರುಹಳ್ಳಿ ಬೆಟ್ಟದ ಮೇಲೆ ಕಟ್ಟಿರುವ `ಆದಿಮ’ಕ್ಕೆ; ಇನ್ನೊಂದು-`ಕಾಮರೂಪಿ’ ಎಂಬ ಹೆಸರಲ್ಲಿ ಬರೆಯುತ್ತಿದ್ದ ಕನ್ನಡ ಲೇಖಕ ಡಾ. ಎಂ.ಎಸ್. ಪ್ರಭಾಕರ ಅವರಿರುವ ಕಠಾರಿಪಾಳ್ಯದ ಮನೆಗೆ. 50ರ ದಶಕದ ಕೊನೆಯಲ್ಲಿ ಕರ್ನಾಟಕ ಬಿಟ್ಟುಹೋದ ಪ್ರಭಾಕರ, ‘ಹಿಂದೂ’ ಪತ್ರಿಕೆಯ ವರದಿಗಾರರಾಗಿ ಆಫ್ರಿಕಾ ಅಮೇರಿಕ ಬಾಂಗ್ಲಾದೇಶ ಈಶಾನ್ಯ ಭಾರತವನ್ನೆಲ್ಲ ಅಲೆದಾಡಿ, ಕಡೆಗೆ ಕಾಮರೂಪದಲ್ಲಿ (ಅಸ್ಸಾಮಿನ ಪುರಾತನ ಹೆಸರಿದು) ನೆಲೆಸಿಬಿಟ್ಟರು.

`ಕಾಮರೂಪ’ ಶಬ್ದಕ್ಕೆ ಬಯಸಿದ ರೂಪಧಾರಣೆ ಮಾಡುವ ಮಾಯಾವಿ ವಿದ್ಯೆ ಎಂಬರ್ಥವೂ ಇದೆ. ಎಂಬತ್ತರ ಪ್ರಾಯದಲ್ಲಿ ಕರ್ನಾಟಕಕ್ಕೆ ಮರಳಿ ಬಂದಿರುವ ಪ್ರಭಾಕರ ಅವರು, ತಾವು ಹುಟ್ಟಿಬೆಳೆದ ಮನೆಯಲ್ಲಿ ಬಿಡಾರ ಹೂಡಿದ್ದಾರೆ. ಹಿರೀಕರು ಕಟ್ಟಿದ ದೊಡ್ಡಮನೆ. ಮನೆಯೊಳಗೊಂದೇ ಜೀವ; ಮನೆ ತುಂಬ ಪುಸ್ತಕದ ರಾಶಿ (ಹೆಚ್ಚಿನವು ಇಂಗ್ಲೀಶ್ ಬಂಗಾಳಿ ಅಸ್ಸಾಮಿ). ನಟ್ಟನಡುವಿರುವ ಹಾಲಿನ ಮೂಲೆಯಲ್ಲಿ ಬೀದಿಗೆ ಬೆನ್ನುಕೊಟ್ಟಂತೆ ಕೂತು, ಲ್ಯಾಪ್‌ಟಾಪಿನಲ್ಲಿ ಬರೆಯುತ್ತ, ವೆಬ್‌ಸೈಟುಗಳನ್ನು ಜಾಲಾಡುತ್ತ, ಬ್ಲಾಗುಗಳನ್ನೋದುತ್ತ ಪ್ರಭಾಕರ ಕುಳಿತಿರುತ್ತಾರೆ.

ಅವರ ಮನಗೆ ಹೋದಾಗಲೆಲ್ಲ ನನಗೆ ರಾಗಿಮುದ್ದೆ ಸೊಪ್ಪಿನ ಸಾರಿನ ಊಟ ಸಿಗುತ್ತದೆ. ಅವರು ಉಣ್ಣುವುದೊಂದು ಅಪೂರ್ವ ದೃಶ್ಯ. ತಣಿಗೆಯ ನಡುವೆ ಹದವಾಗಿ ಬೆಂದು ಕಂಪು ಬೀರುವ ಗೋಂದಿನಂತಹ ಕೆಂಗಪ್ಪು ಬಣ್ಣದ ಬಿಸಿಮುದ್ದೆಯನ್ನಿಟ್ಟು, ಅದರ ತಲೆಯ ಮೇಲೆ ಶಿಖರವನ್ನು ಹಿಮವು ಅಲಂಕರಿಸುವಂತೆ ಬೆಣ್ಣೆಯ ಚೂರನ್ನಿಡುತ್ತಾರೆ; ಬೆಣ್ಣೆಯು ಮುದ್ದೆ ಕಾವಿಗೆ ಕರಗಿ ಇಡೀ ಚೆಂಡನ್ನು ಆವರಿಸಿ ಅಭಿಷೇಕ ಮಾಡಿಸಿಕೊಂಡ ಮೂರುತಿಯಂತೆ ಥಳಥಳ ಹೊಳೆಯುತ್ತದೆ. ಆಗ ಘಮಿಸುವ ಮುದ್ದೆಯನ್ನು ಚೆನ್ನಾಗಿ ಮಿದ್ದು, ಒಂದು ಬದಿಯಿಂದ ಇಷ್ಟಿಷ್ಟೇ ಮುರಿದು ತುತ್ತು ಮಾಡಿ, ಸೊಪ್ಪಿನ ಗಟ್ಟಿಸಾರಲ್ಲಿ ಹೊರಳಾಡಿಸಿ ಗುಕ್ಕನೆ ನುಂಗಿ ಕಣ್ಮುಚ್ಚಿ ಕೊಳ್ಳುತ್ತಾರೆ. ತರುವಾಯ ಶ್ರೀಯುತರು ಜ್ಞಾನೋದಯವಾದ ಸಿದ್ಧನಂತೆ ಅವರ ಮುಖದಲ್ಲಿ ಪರಮಾನಂದದ ಒಂದು ಕಳೆ ಆವಿರ್ಭವಿಸುತ್ತದೆ. ಇದನ್ನೆಲ್ಲ ಕಾಣುವಾಗ, ಲೋಕವನ್ನೆಲ್ಲ ಸುತ್ತಾಡಿರುವ ಇವರು ಕೋಲಾರಕ್ಕೆ ಮುದ್ದೆಸುಖಕ್ಕಾಗಿಯೆ ಬಂದರೇನೊ ಎಂದು ಶಂಕೆ ಬರುತ್ತದೆ. ಪ್ರಭಾಕರ ಅವರಿಗೆ ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಅನೇಕ ದೂರುಗಳಿವೆ. ಅವುಗಳಲ್ಲಿ ಆಹಾರ ತಯಾರಿಕೆ ಮತ್ತು ಸೇವನೆ ಕುರಿತು ಅದರಲ್ಲಿ ವಿವರಗಳೇ ಇಲ್ಲ ಎಂಬುದೂ ಒಂದು.

ಕನ್ನಡದ ಅತಿಹಿರಿಯ ಮತ್ತು ಹೆಚ್ಚು ಬರೆಯದ ಲೇಖಕರಲ್ಲಿ ಪ್ರಭಾಕರ ಅವರೂ ಒಬ್ಬರು. ನಾನು ಅವರ ‘ಕುದುರೆಮೊಟ್ಟೆ’ ಕಾದಂಬರಿಯನ್ನೂ ‘ಒಂದು ತೊಲ ಪುನುಗು ಮತ್ತು ಇತರ ಕತೆಗಳು’ ಸಂಕಲನವನ್ನೂ ಓದಿದ್ದೆ. ಇವುಗಳಲ್ಲಿ ‘ಕುದುರೆ ಮೊಟ್ಟೆ’ ಈಗಲೂ ಪ್ರಿಯವಾದ ಪುಸ್ತಕ. ಅದರಲ್ಲಿರುವ ಕೆಲವು ಪಾತ್ರಗಳು ಕೊಂಚ ವಿಕ್ಷಿಪ್ತವಾಗಿವೆ; ಅಲ್ಲಿನ ಬಾಳಿನ ಸನ್ನಿವೇಶಗಳೂ ಅನಿರೀಕ್ಷಿತವಾಗಿವೆ. ಆದರೆ ಎಲ್ಲಿಯೂ ಹುಸಿ ಅನಿಸದಂತೆ, ಒಂದೇ ಶಬ್ದ ಅಪವ್ಯಯವಾಗದಂತೆ ಅದನ್ನು ಬರೆಯಲಾಗಿದೆ. ಪಾತ್ರಗಳನ್ನು ತಮ್ಮ ಸಿದ್ಧಾಂತಕ್ಕೆ ತಕ್ಕಂತೆ ಮಣಿಸಿ ಕೈಗೊಂಬೆಯಂತೆ ಆಡಿಸುತ್ತ, ಕೆಲವನ್ನು ಮುದ್ದಾಮಾಗಿ ದುರುಳಗೊಳಿಸಿ ಕಲೆಯ ಜಾಣಮುಸುಕಿನಲ್ಲಿ ಅಡಗಿಸುತ್ತ, ಕೆಲವು ಕಾದಂಬರಿಗಳು ಕನ್ನಡದಲ್ಲಿ ಪ್ರಕಟವಾಗುತ್ತಿವೆ. ಇಂತಹ ಹೊತ್ತಲ್ಲಿ ಅರ್ಧ ಶತಮಾನದ ಹಿಂದೆ ಪ್ರಕಟವಾದ ಈ ಕಾದಂಬರಿ, ಬಾಳನ್ನು ಕುರಿತು ತೋರುವ ಕಕ್ಕುಲಾತಿ ಕಂಡು ಖುಶಿಯಾಗುತ್ತದೆ. ಕತೆಗಾರರಿಗೆ ತಾವು ಸೃಷ್ಟಿಸುವ ಕೆಲವು ಪಾತ್ರಗಳ ಮೇಲೆ ಕೊಂಚ ಭಾವ ಪಕ್ಷಪಾತವಿರುತ್ತದೆ. ಆದರೆ ತಾವು ಸೃಜಿಸುವ ಎಲ್ಲ ಪಾತ್ರಗಳನ್ನು ತಾಯಿಯಂತೆ ನೋಡುವುದು ಬರೆಹದ ನೈತಿಕತೆ. ಈ ಸಂಗತಿ ಕುವೆಂಪು ಮತ್ತು ಟಾಲ್ ಸ್ಟಾಯ್ ಕಾದಂಬರಿ ಓದಿದವರಿಗೆ ಗೊತ್ತಿದೆ.

ಕಾಮವನ್ನು ಇಟ್ಟುಕೊಂಡು ಜೀವನದ ಸತ್ಯಗಳನ್ನು ಶೋಧಿಸುವ ವಿಷಯದಲ್ಲಿ ಕಾಮರೂಪಿಯವರು, ಒಬ್ಬ ಟಿಪಿಕಲ್ ನವ್ಯಲೇಖಕರೇ. ಆದರೆ ನವ್ಯದ ಕೆಲವು ಲೇಖಕರಲ್ಲಿ ಕಾಣುವಂತೆ, ಅದಕ್ಕವರು ಅನಗತ್ಯ ಪ್ರಾಮುಖ್ಯ ಕೊಡುವುದಿಲ್ಲ. ಅದನ್ನು ಚಪ್ಪರಿಸುವುದಿಲ್ಲ. ವೈಭವೀಕರಿಸುವುದಿಲ್ಲ. ಬದಲಿಗೆ, ಮನುಷ್ಯರಾದವರು ಜೀವನದ ಇಕ್ಕಟ್ಟುಗಳಲ್ಲಿ ಸಿಲುಕಿ ಅನಿವಾರ್ಯವಾಗಿ ವರ್ತಿಸುವ ಪರಿಯನ್ನು ತಣ್ಣಗೆ ವ್ಯಂಗ್ಯವಾಗಿ ಚಿತ್ರಿಸುತ್ತಾ ಹೋಗುತ್ತಾರೆ. ಸತ್ಯಕ್ಕಿರುವ ಹಲವು ಮುಖಗಳನ್ನು ಹಿಡಿಯುವಂತಹ ಕುರುಸೋವಾನ ‘ರಶೋಮನ್’ ಸಿನಿಮಾ ನೆನಪಿಸುವ ಈ ಕಾದಂಬರಿ, ಮತ್ತೆಮತ್ತೆ ಓದಬೇಕು ಎನಿಸುವಷ್ಟು ತಾಜಾ ಆಗಿದೆ. ‘ಉಪಪತ್ತಿಯೋಗ’ ಎಂಬುದನ್ನು ಬಿಟ್ಟರೆ, ಉಳಿದಂತೆ ವ್ಯಕ್ತಿವಾದವನ್ನು ಅತಿಯಾಗಿ ಬಿಂಬಿಸುವ ತಂತ್ರದ ಬಿಗಿತದಲ್ಲಿರುವ ಅವರ ಕತೆಗಳು ಅಷ್ಟು ಆಪ್ತವೆನಿಸಿಲ್ಲ.

ನನಗೆ ಪ್ರಭಾಕರ್ ಕುರಿತು ಆಸಕ್ತಿ ಮೂಡಿಸಿದವರು ಮಾರ್ಕ್ಸ್‌ವಾದಿ ಚಿಂತಕ ಕೆ.ರಾಘವೇಂದ್ರರಾವ್ ಅವರು. ಅಮೆರಿಕೆಯ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಿದ್ದ ಎ.ಕೆ.ರಾಮಾನುಜನರ ಹೊಂದಾಣಿಕೆಯ ಗುಣವನ್ನು ಕಟುವಾಗಿ ವಿಮರ್ಶಿಸುತ್ತ, ಅಲ್ಲಿನ ಶೈಕ್ಷಣಿಕ ಕ್ಷೇತ್ರದಲ್ಲಿರುವ ಬಿಳಿಯರ ಯಜಮಾನಿಕೆಗೆ ಬಾಗದೆ ಹೊರಬಂದ ಪ್ರಭಾಕರ ಅವರ ದಿಟ್ಟ ಸ್ವಭಾವವನ್ನು ಅವರು ತಮ್ಮ ಸಂದರ್ಶನದಲ್ಲಿ ಪ್ರಸ್ತಾಪಿಸಿದ್ದರು. ಪ್ರಭಾಕರ ಅವರನ್ನು ಭೇಟಿಯಾಗಬೇಕು ಎಂದು ಅನಿಸುತ್ತಿತ್ತು. ಅದರಲ್ಲೂ ಭಾರತದ ಶಾಕ್ತಪೀಠಗಳಲ್ಲಿ ಮುಖ್ಯವಾಗಿರುವ ಅಸ್ಸಾಮಿನ ಕಾಮಾಖ್ಯಕ್ಕೆ ಹೋಗಲು ಯತ್ನಿಸುತ್ತಿದ್ದ ನಾನು, ಅಲ್ಲೇ ಸಮೀಪದ ಗೌಹಾತಿಯಲ್ಲಿರುವ ಅವರನ್ನು ಕಾಣಲು ಹವಣಿಕೆ ಮಾಡಿಕೊಂಡಿದ್ದೆ. ಆದರೆ ಸಾರ್ವಜನಿಕ ವ್ಯಕ್ತಿಯಾಗಲು ನಿರಾಕರಿಸಿ ಅಜ್ಞಾತವಾಗಿಯೇ ಬಾಳುವ ಅವರು ಸುಲಭವಾಗಿ ಸಿಗುತ್ತಿರಲಿಲ್ಲ.

ನನ್ನ ತವಕವನ್ನರಿತಿದ್ದ ಕೆ.ರಾಮಯ್ಯ, ‘ಪ್ರಭಾಕರ್ ಕರ್ನಾಟಕಕ್ಕೆ ಬಂದಿದ್ದಾರೆ. ಬನ್ನಿ’ ಎಂದು ಅವರ ಮನೆಗೆ ಕರೆದುಕೊಂಡು ಹೋದರು. ಮಧ್ಯಾಹ್ನದ ಸುಡುಹೊತ್ತು. ಪ್ರಭಾಕರ ಪ್ರೀತಿಯಿಂದ ಬರಮಾಡಿಕೊಂಡು ನೊರೆ ತುಂಬಿದ ಒಗರು ಬೀರಿನ ಮಗ್ಗನ್ನು ಕೈಗೆ ಕೊಟ್ಟು, ಕಾಮಾಖ್ಯದ ಬಗ್ಗೆಯೂ ತಂತ್ರ ಪಂಥದ ಬಗ್ಗೆಯೂ ಇರುವ ಕೃತಿಗಳನ್ನು ತೋರಿಸುತ್ತ, ಗಂಟೆಗಟ್ಟಳೆ ಮಾತಾಡಿದರು. ಅರಿವಿನ ಕಿಡಿಗಳು ಹಾರುವ ಅದೊಂದು ವಿದ್ವತ್‌ಪೂರ್ಣ ಹರಟೆ.

ನಾನು ಅವರಲ್ಲಿ ಶಿಷ್ಯವೃತ್ತಿ ಸ್ವೀಕರಿಸಿ ಹಲವಾರು ಸಲ ಕೋಲಾರಕ್ಕೆ ಹೋಗಿ ಬಂದಿದ್ದೇನೆ. ಅವರ ಮಾತುಕತೆಗಳಲ್ಲಿ ನನಗೆ ಮುಖ್ಯವಾಗಿ ಕಂಡಿದ್ದು, ಜಾತ್ಯತೀತವಾದ ಮನಸ್ಸು; ಸಣ್ಣಪುಟ್ಟ ಸಂಗತಿಗಳ ಮೇಲೂ ಕಾಳಜಿಯಿಂದ ಸೂಕ್ಷ್ಮವಾಗಿ ಚಿಂತಿಸುವ ಮಾನವೀಯತೆ; ಗತಕಾಲದ ಬಗ್ಗೆ ಹಳಹಳಿಕೆಯಿಲ್ಲದೆ ವರ್ತಮಾನದ ಸಮಸ್ಯೆಗಳನ್ನು ಕುರಿತು ಚಿಂತಿಸುವ ಪ್ರಖರವೂ ನಿಷ್ಠುರವೂ ಆದ ರಾಜಕೀಯ ಪ್ರಜ್ಞೆ. ಸಾರ್ವಜನಿಕ ಬದುಕಿನಲ್ಲಿ ಜಾತಿಪದ್ಧತಿ ಎಲ್ಲೆಮೀರಿ ನಿರತವಾಗಿರುವ ಕುರಿತ ಹೇವರಿಕೆ. ಹಿರಿಯ ಲೇಖಕರಲ್ಲಿ ಸಾಮಾನ್ಯವಾಗಿ ಎರಡು ಸ್ವಭಾವಗಳಿರುತ್ತವೆ. ಒಂದು- ಕಳೆದುಹೋದ ಕಾಲದ ಬಗ್ಗೆ ಭಾವುಕ ಮರುಕಳಿಕೆ. ಎರಡು-ವರ್ತಮಾನದ ಸಾಮಾಜಿಕ ರಾಜಕೀಯ ವೈರುಧ್ಯಗಳನ್ನು ಉದಾರವಾಗಿ ನೋಡುತ್ತ, ಚಿಂತನೆಯ ಮೊನಚನ್ನು ಕಳೆದುಕೊಳ್ಳುವುದು. ಆದರೆ ಆತ್ಮಕ್ಕೆ ಸದಾ ಬೆಂಕಿ ಹತ್ತಿಸಿಕೊಂಡಂತೆ ಉರಿಯುವ ಕೆಲವರಿದ್ದಾರೆ. ಕೋಚೆ, ಕುಸುಮಾಕರ ದೇವರಗೆಣ್ಣೂರ, ಎಂ.ಡಿ. ನಂಜುಂಡಸ್ವಾಮಿ, ನೀಲಗಂಗಯ್ಯ ಪೂಜಾರ, ಕೆ.ರಾಘವೇಂದ್ರರಾವ್, ಅಬ್ಬಿಗೇರಿ ವಿರೂಪಾಕ್ಷಪ್ಪ, ಸಾರಾ ಅಬೂಬಕರ್, ಕಾಮರೂಪಿ ಪ್ರಭಾಕರ-ಇವರೆಲ್ಲ ಇಂತಹವರು. ಈ ಹಿರಿಯರ ಜತೆ ಮಾತಾಡುವಾಗ ಇವರ ಹಠಮಾರಿತನ, ಜಗಳಗಂಟಿತನ, ಆದರ್ಶವಾದ, ನೈತಿಕ ಪ್ರಜ್ಞೆ ಹಾಗೂ ಭಿನ್ನಮತ ಇಷ್ಟವಾಗುತ್ತದೆ.

ಕರ್ನಾಟಕದಿಂದ ಬಹುಕಾಲ ದೂರವಿದ್ದ ಕಾರಣದಿಂದ ಏರ್ಪಟ್ಟಿರುವ ಅಪರಿಚಿತತೆಯಿಂದಲೊ ಅಥವಾ ಕರ್ನಾಟಕದ ಒಳಗೇ ಇದ್ದೂಇದ್ದೂ ನಮಗೆ ಕಾಣದಂತಾಗಿರುವ ವೈರುಧ್ಯಗಳು ‘ಹೊರಗಿನಿಂದ’ ಬಂದಿರುವ ಅವರಿಗೆ ಒಡೆದು ಕಾಣುತ್ತಿರುವುದರಿಂದಲೊ, ಪ್ರಭಾಕರ ಕರ್ನಾಟಕದ ಸಮಕಾಲೀನ ಸಾಂಸ್ಕೃತಿಕ ರಾಜಕಾರಣದ ವೈರುಧ್ಯಗಳ ಬಗ್ಗೆ ತೀಕ್ಷ್ಣವಾದ ಟಿಪ್ಪಣಿ ಮಾಡುತ್ತಿರುತ್ತಾರೆ; ಕನ್ನಡಿಗರ ಸ್ವಭಾವದಲ್ಲೇ ವ್ಯಕ್ತಿನಿಷ್ಠೆಗಾಗಿ ವಿಮರ್ಶೆಯ ನಿಷ್ಠುರತೆ ಬಿಟ್ಟುಕೊಡುವ, ಸಜ್ಜನಿಕೆಯ ಭಾಷೆಯಲ್ಲಿ ವಾಸ್ತವವನ್ನು ಅಡಗಿಸುವ ಪ್ರವೃತ್ತಿಯಿದೆ ಎಂದು ಹೇಳುತ್ತಿರುತ್ತಾರೆ. ಸಂಘಟಕರೊಬ್ಬರು ಕಾರ್ಯಕ್ರಮವೊಂದಕ್ಕೆ ಕರೆಸಿಕೊಂಡು ಪರಿಚಯ ಭಾಷಣದಲ್ಲಿ ತಮ್ಮನ್ನು ಅತಿಯಾಗಿ ಹೊಗಳಿದ್ದನ್ನು ನೆನೆಯುತ್ತ ಅವರೊಮ್ಮೆ ಹೇಳಿದರು: “ಏನ್ ಸ್ವಾಮಿ ಕನ್ನಡಿಗರು? ಎಷ್ಟು ಉದಾರತೆ! ನನ್ನ ಬಗ್ಗೆ ಅವರಿಗೆ ಏನೂ ಗೊತ್ತಿಲ್ಲ. ನಾನು ಎಲ್ಲ ಸೇರಿದರೆ ನೂರೈವತ್ತು ಪುಟಗಳನ್ನೂ ಬರೆದಿಲ್ಲ. ಕನ್ನಡಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟಿಲ್ಲ. ಆದರೂ ವಾಚಾಮಗೋಚರ ಹೊಗಳಿಬಿಟ್ಟರು. ಕರ್ನಾಟಕದಲ್ಲಿ ಮಾತಿಗೆ ಬೆಲೆಯೇ ಇದ್ದಂತಿಲ್ಲ.’’

ಇದನ್ನು ಕೇಳುವಾಗ ಈಚೆಗೆ ಕಲ್ಕತ್ತಾದಲ್ಲಿ ನಾನು ಕಂಡ, ಹಿರಿಯ ಲೇಖಕ ರುದ್ರಪ್ರತಾಪ ಸೇನರ ಸನ್ಮಾನ ಕಾರ್ಯಕ್ರಮ ನೆನಪಾಯಿತು. ಸೇನರಿಗೆ 75ವರ್ಷ ತುಂಬಿದ ನೆಪದಲ್ಲಿ ಇರಿಸಿಕೊಂಡಿದ್ದ ಆ ಕಾರ್ಯಕ್ರಮ ಎಷ್ಟು ವಿಮರ್ಶಾತ್ಮಕವಾಗಿತ್ತು ಎಂದರೆ, ಅವರ ಶಿಷ್ಯರು ತಮ್ಮ ಗುರುವಿನ ಜತೆ ಕೋರ್ಟ್ಮಾರ್ಶಲ್ ನಡೆಸುವವರ ಹಾಗೆ ಪ್ರಶ್ನೆ ಕೇಳುತ್ತಿದ್ದರು. ಸೇನರು ಆ ಕಟುತರ ಪ್ರಶ್ನೆಗಳಿಗೆಲ್ಲ ಪ್ರಾಮಾಣಿಕವಾಗಿ ದ್ವಂದ್ವವಿಲ್ಲದೆ ಉತ್ತರಿಸುತ್ತಿದ್ದರು. ಹಿರಿಯರ ತಲೆಗೆ ಅಭಿನಂದನ ಗ್ರಂಥಗಳ ಸರಮಾಲೆಯನ್ನು ತಂದು ಕಟ್ಟಿ, ಎಗ್ಗಿಲದೆ ಹೊಗಳಿ ವೈಭವೀಕರಿಸುವ ಪದ್ಧತಿಯಿರುವ ಕರ್ನಾಟಕದಲ್ಲಿ, ಈ ಪರಿಯ ನಿಷ್ಠುರತೆ ಕಲ್ಪಿಸಿಕೊಳ್ಳುವುದೇ ಕಷ್ಟ.

ತೋರುಗಾಣಿಕೆಯನ್ನು ಸದಾ ನಿರಾಕರಿಸುವ ಪ್ರಭಾಕರ ಅವರಲ್ಲಿ, ಅವರ ಖಂಡಿತವಾದಿ ನಿಲುವಿಗೆ ಅಷ್ಟೊಂದು ತಾಳೆಯಾಗದ ಇನ್ನೊಂದು ಮುಖವಿದೆ. ಅದೆಂದರೆ, ಜೀವನಪ್ರೀತಿಯ ಸಂಕೇತದಂತಿರುವ ತಮಾಶೆ ಮತ್ತು ಪೋಲಿತನ. ಈ ತಮಾಶೆಯ ಗುಣ ಅದ್ಭುತ ನಾಟಕೀಯ ಶೈಲಿಯಾಗಿ ಅವರ ಕಥೆ ಕಾದಂಬರಿಗಳಲ್ಲೆಲ್ಲ ಆವರಿಸಿಕೊಂಡಿದೆ. ತಮಗೆ ಪಾಠ ಹೇಳಿದ ಗುರುಗಳ ವೈಯಕ್ತಿಕ ಬದುಕಿನಲ್ಲಿದ್ದ ಸನಾತನವಾದ ಮತ್ತು ತರಗತಿಗಳಲ್ಲಿ ಕನ್ನಡ ಬಳಸದ ಅವರ ಇಂಗ್ಲಿಷಿನ ವ್ಯಾಮೋಹ ಕುರಿತಂತೆ, ಅವರಲ್ಲಿ ಸ್ವಾರಸ್ಯಕರ ಮಾಹಿತಿಗಳಿವೆ. ಪ್ರಭಾಕರ ಅವರು ಆಪ್ತರ ಎದುರು ತಾವು ಬರೆದಿರುವ ಅಪ್ರಕಟಿತ ಪೋಲಿ ಪದ್ಯಗಳನ್ನು ವಾಚಿಸುವುದುಂಟು. ಬಹುಶಃ ಇದು ಅವರ ಗೆಳೆಯರಾಗಿದ್ದ ಎಚ್.ಎಸ್. ಬಿಳಿಗಿರಿಯವರ ಸಹವಾಸ ಫಲವಿರಬೇಕು.

ಒಂದೇ ವ್ಯಕ್ತಿತ್ವದಲ್ಲಿ ಒಟ್ಟಿಗೇ ಇರಲು ಕಷ್ಟವೆನಿಸಬಹುದಾದ ಇನ್ನೂ ಅನೇಕ ಸಂಗತಿಗಳು ಅವರಲ್ಲಿ ಸಹಜವಾಗಿ ನಿರಾಳವಾಗಿ ಇವೆ. ಉದಾ.ಗೆ, ಬಹುಭಾಷಿಕರಾದ ಅವರ ಮನೆಮಾತು ತಮಿಳುಗನ್ನಡ; ಬರವಣಿಗೆ ಕನ್ನಡ ಮತ್ತು ಇಂಗ್ಲೀಶಿನಲ್ಲಿ; ಸಂಸ್ಕೃತ ಅಸ್ಸಾಮಿ ಬಂಗಾಳಿ ಭಾಷೆಗಳಲ್ಲಿ ದೊಡ್ಡ ವಿದ್ವತ್ತು. (ಅವರ ಅಸ್ಸಾಮಿ ಬಂಗಾಳಿ ತಿಳಿವಳಿಕೆಯಿಂದ ಕನ್ನಡಕ್ಕೆ ಪ್ರಯೋಜನವಿನ್ನೂ ಆಗಿಲ್ಲ). ಪಂಪ ಅವರ ಇಷ್ಟದ ಕವಿ. ಮೂಲತಃ ಇಂಗ್ಲೀಶ್ ಸಾಹಿತ್ಯದ ವಿದ್ಯಾರ್ಥಿಯಾದರೂ ಸಾಹಿತ್ಯಕ್ಕಿಂತ ಹೆಚ್ಚಾಗಿ ಅಂತರಾಷ್ಟ್ರೀಯ ರಾಷ್ಟ್ರೀಯ ರಾಜಕಾರಣದ ಮೇಲೆ ಹೆಚ್ಚು ಬರೆವಣಿಗೆ. ಅದರಲ್ಲೂ ಈಶಾನ್ಯ ಭಾರತದ ರಾಜಕಾರಣ ಭಾಷೆ ಧರ್ಮ ಸಂಸ್ಕೃತಿ ಕುರಿತ ಅವರ ತಿಳಿವಳಿಕೆ ಅಪರೂಪದ್ದು. ಇವನ್ನೆಲ್ಲ ಒಟ್ಟಿಗೆ ಹೇಗೆ ಕಲ್ಪಿಸಿಕೊಳ್ಳುವುದು? ಪ್ರಭಾಕರ ತಮ್ಮ ಕಾದಂಬರಿಯ ಒಂದು ಪಾತ್ರದ ಹಾಗೇ ಬದುಕಿದ್ದಾರೆ.

ಅವರು ಈಚೆಗೆ ಮಾತಾಡುತ್ತ ಕೊಂಚ ದಣಿದ ದನಿಯಲ್ಲಿ “ಸ್ವಾಮಿ, ಕರ್ನಾಟಕ ನನಗೆ ಸಾಕಾಗಿದೆ. ಗೌಹಾಟಿಗೆ ಹೋಗಬೇಕು ಅನಿಸುತ್ತಿದೆ’ ಎಂದು ಗೊಣಗಿದರು. “ಹೋಗಿ. ಆದರೆ ಮತ್ತೆಬನ್ನಿ’’ ಎಂದೆ. ಅವರಲ್ಲಿ ಕೋಲಾರ-ಗೌಹಾತಿಗಳ ನಡುವೆ ವಿಚಿತ್ರವಾದ ಆಕರ್ಷಣೆ ವಿಕರ್ಷಣೆಯಿದೆ. ಇದು ಬಹುಕಾಲ ಬೇರೆಡೆ ಬೆಳೆದ ಮರ ತನ್ನ ಮೂಲನೆಲಕ್ಕೆ ಬಂದು ನಾಟಿಗೊಂಡರೆ ಬೇರೂರುವ ಕಷ್ಟ. ಮರಳಿ ಹುಟ್ಟಿದೂರಿಗೆ ಬರುವಿಕೆ ಬಾಲ್ಯದ ನೆನಪುಗಳನ್ನು ಎಚ್ಚರಿಸಿ ಸುಖ ಕೊಡುತ್ತದೆ; ಆದರೆ ಹೊಚ್ಚ ಹೊಸತೆೆನಿಸುವಷ್ಟು ಬದಲಾಗಿರುವ ಪರಿಸರವು, ಕಾಡುವ ಏಕಾಂಗಿತನವನ್ನೂ ತಂದಿಡುತ್ತದೆ. ಯಾರ ಮರುಕವನ್ನೂ ಬಯಸದೆ ಏಕಾಂತದಲ್ಲಿ ಘನತೆಯಿಂದ ಕೊನೆಯ ದಿನಗಳನ್ನು ಕಳೆಯ ಬಯಸುವ ಇಂತಹ ಹಠಮಾರಿ ಜೀವಗಳು, ಒಳಗೇ ಮೃದ್ವಂಗಿಗಳಾಗಿ ಆಪ್ತಸಂಗಾತಕ್ಕೆ ಹಾತೊರೆಯುತ್ತಿರುತ್ತವೆ.

ಆ ಸಂಗಾತದ ಸ್ವರೂಪ ಎಂತಹುದು ಎಂದು ಸ್ಪಷ್ಟವಾಗುವುದಿಲ್ಲ. ನಾನು ‘ಕಾಮರೂಪಕ್ಕೆ ಯಾವಾಗ ಹೋಗುತ್ತೀರಿ’ ಎಂದು ಕೇಳಿದೆ: ‘ಆದಿಮದ 50ನೇ ಬೆಳುದಿಂಗಳ ಕಾರ್ಯಕ್ರಮ ಮುಗಿಸಿಕೊಂಡು’ ಎಂದರು.
ಪ್ರತಿಯೊಬ್ಬರಿಗೂ ಬಾಳಿನಲ್ಲಿ ಬಹುರೂಪಧಾರಣೆ ಮಾಡಬೇಕಾದ ಒತ್ತಡಗಳು ಎದುರಾಗಬಹುದು. ಆದರೆ ಈ ರೂಪಧಾರಣೆಗೆ ಕಾರಣ, ನಮ್ಮ ಇಚ್ಛಾನಿಚ್ಛೆಗಳು ಮಾತ್ರವಲ್ಲ, ಬಾಳಿನ ಅನೂಹ್ಯ ಒತ್ತಡಗಳು ಸಹ. ಈ ಒತ್ತಡಗಳು ಬರೆಹ ಇಲ್ಲವೇ ಮಾತಿನ ವ್ಯಾಖ್ಯಾನಕ್ಕೆ ಕೆಲವೊಮ್ಮೆ ನಿಲುಕುವಂತೆ ಇರುವುದಿಲ್ಲ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending