Connect with us

ನೆಲದನಿ

ನುಡಿಯ ಒಡಲು | ಭಾಷಿಕ ಕ್ರಿಯೆ ಮತ್ತು ಮನುಷ್ಯ ಘನತೆ

Published

on

  • ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕ, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ನುಷ್ಯ ಘನತೆ ಎಂಬೀ ಪರಿಕಲ್ಪನೆಯು ಹಲವು ಭಾಷಿಕ ಕ್ರಿಯೆಗಳನ್ನು ಸೂಚಿಸುತ್ತದೆ. ಇದು ಗ್ರಹಿಕೆಯ ಹಲವು ಸಾಧ್ಯತೆಗಳನ್ನು ಏಕಕಾಲಕ್ಕೆ ಪ್ರಚುರಪಡಿಸುತ್ತದೆ. ವಿವಿಧ ಸಂದರ್ಭಗಳಲ್ಲಿ ವಿಭಿನ್ನ ಮತ್ತು ವೈವಿಧ್ಯಮಯ ಅರ್ಥಗಳನ್ನು ಇದು ಕಂಡರಿಸುತ್ತದೆ. ವಿಟ್ಗೆನ್‌ಸ್ಟೈನ್ ತನ್ನ ಫಿಲಾಸಫಿಕಲ್ ಇನ್ವೆಸ್ಟಿಗೇಷನ್‌ನಲ್ಲಿ ಚರ್ಚಿಸಿದಂತೆ, ಒಂದು ಪದ ಅಥವಾ ಪರಿಕಲ್ಪನೆಯ ಅರ್ಥವನ್ನು ಅರ್ಥಮಾಡಿಕೊಳ್ಳಲು ‘ಆವೊಂದು ಪದವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತನ್ನಷ್ಟಕ್ಕೆ ಗ್ರಹಿಸಲು ಸಾಧ್ಯವಿಲ್ಲ.ಅಂದರೆ ಒಂದೊಂದು ಪದವು ಆಯಾ ಭಾಷಿಕ ಸಮುದಾಯದಲ್ಲಿ ಹೇಗೆ ಬಳಕೆಯಾಗುತ್ತದೆ ಮತ್ತು ಸಾಂದರ್ಭಿಕವಾಗಿ ಅರ್ಥಗಳು ಹೇಗೆ ವಿಕಾಸಗೊಳ್ಳುತ್ತವೆ ಎಂಬುದನ್ನು ಅನುಸರಿಸುವುದು ಅವಶ್ಯ ಎಂದು ಹೇಳುತ್ತಾನೆ’. ಪ್ರತಿಯೊಬ್ಬ ಭಾಷಿಕನ ಪದ, ಧ್ವನಿಗಳ ಉಚ್ಚಾರಣೆ, ಮಾತಿನ ವರಸೆಗಳಲ್ಲಿ ಉಂಟಾಗುವ ವ್ಯತ್ಯಾಸಗಳು, ಅವುಗಳಿಗೆ ಅರ್ಥಗಳನ್ನು ರೂಪಿಸುವಲ್ಲಿ ಇಷ್ಟೊಂದು ಪ್ರಮಾಣದಲ್ಲಿ ವ್ಯತ್ಯಾಸಗಳು ಉಂಟಾಗುವುದಿಲ್ಲ. ಹಾಗಾಗಿ ಒಬ್ಬ ವ್ಯಕ್ತಿಯ ಭಾಷಿಕ ಸನ್ನಿವೇಶ ಮತ್ತು ಅದರ ಬಳಕೆಯನ್ನು ನೋಡಿ ಇದರಿಂದ ಮತ್ತೊಬ್ಬ ವ್ಯಕ್ತಿಯು ಕಲಿಯಬೇಕು ಎಂಬ ಅಭಿಮತವು ಇಲ್ಲಿ ವ್ಯಕ್ತವಾಗುತ್ತದೆ.

ಈ ವಾದವು ಕೇವಲ ಅರ್ಥ ವಿಕಾಸಗೊಳ್ಳುವ ಬಗೆಗೆ ಮತ್ತು ಅದರ ವ್ಯಾಪ್ತಿಗೆ ಮಾತ್ರ ಸಂಬಂಧಿಸಿದೆ ಹೊರತು ಇಡಿಯಾಗಿ ಭಾಷೆಯ ಕಲಿಕೆ ಮತ್ತು ಗ್ರಹಿಕೆಯ ನೆಲೆಗಳಲ್ಲಿ ಈ ‘ಅರ್ಥ’ ಎನ್ನುವ ಪರಿಕಲ್ಪನೆ ಭಿನ್ನವಾಗಿರುತ್ತದೆ ಎನ್ನುವುದು ಗಮನಾರ್ಹ. ಇರಲಿ ‘ಈ ಟಿಪ್ಪಣಿಯಲ್ಲಿ ವಿಟ್ಗೆನ್‌ಸ್ಟೈನಿಯನ್ ವಿಧಾನವನ್ನು ಅನ್ವಯಿಸುವ ಮೂಲಕ, ಮನುಷ್ಯ ಘನತೆ ಎನ್ನುವ ಈ ಪರಿಕಲ್ಪನೆಯು ಹೇಗೆ ವಿಭಿನ್ನ ಅರ್ಥಗಳನ್ನು ಹೊಂದಿರುತ್ತದೆ ಹಾಗೂ ಆ ವಿಭಿನ್ನ ಭಾಷಿಕ ನೆಲೆಗಳನ್ನು ಮನಗಾಣಲು ಮತ್ತು ಪರಿಕಲ್ಪಿಸಲು ಹೇಗೆ ಸಾಧ್ಯ ಎನ್ನುವುದನ್ನು ಬಿಡಿಸಿನೋಡುವ ಪ್ರಯತ್ನವನ್ನು ಮಾಡಲಾಗುತ್ತದೆ.

ಈ ಮೇಲೆ ಹೇಳಿದ ಮಾತುಗಳು ಕೆಲವೊಮ್ಮೆ ವಿರೋಧಾಭಾಸವಾಗಿ ಕಾಣಬಹುದು. ಆದರೆ ಭಾಷಾತತ್ವಶಾಸ್ತ್ರೀಯ ಹಿನ್ನಲೆಯಲ್ಲಿ ಈ ಕುರಿತು, ಘನತೆಯ ಜಿಜ್ಞಾಸೆಯನ್ನು ಸಾಮಾಜಿಕ ವಿವೇಕದ ನೆಲೆಯನ್ನಾಗಿ ಪರಿಭಾವಿಸುವ ಜರೂರು ಏನೆಂಬುದು ಇಲ್ಲಿ ಮಹತ್ವದ ನಿಲುವು ಆಗುತ್ತದೆ.

ಆದ್ದರಿಂದ ಮನುಷ್ಯ ಘನತೆಯ ವಿನ್ಯಾಸಕ್ಕೆ ಸಂಬಂಧಿಸಿದ ಬಿಕ್ಕಟ್ಟುಗಳು ನಮಗೇಕೆ ಮುಖ್ಯವಾಗುತ್ತವೆ ಅಂದರೆ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಸ್ವಾಯತ್ತತೆ, ಅಭಿವ್ಯಕ್ತಿ ಸ್ವಾತಂತ್ರ್ಯ, ಅಸ್ಮಿತೆಯ ಹಕ್ಕುಗಳು ಹಾಗೂ ಸಂಪನ್ಮೂಲಗಳಲ್ಲಿ ಪಾಲುದಾರಿಕೆ, ಜ್ಞಾನ ಪ್ರಸಾರಣ ಹಾಗೂ ಜ್ಞಾನ ಉತ್ಪಾದನೆ ಮೊದಲಾದವು ಈ ಘನತೆ ಎಂಬ ವಿದ್ಯಮಾನಕ್ಕೆ ಸಂಬಂಧಿಸಿರುತ್ತವೆ.

ಯಾವುದೇ ಒಂದು ಪದದ ಸಂದರ್ಭವನ್ನು ಬದಲಾಯಿಸುವುದರಿಂದ ಅದು ತನ್ನ ಅರ್ಥದ ಆಯಾಮವನ್ನು ಬದಲಿಸುತ್ತದೆ. ಇದು ಬಹುತೇಕ ಸನ್ನಿವೇಶದಲ್ಲಿ ತಪ್ಪು ತಿಳಿವಳಿಕೆಯನ್ನು ಉಂಟುಮಾಡುವುದು ದಿಟ. ಆದರೆ ಈ ಬದಲಾವಣೆ ಆಯಾ ವ್ಯಕ್ತಿ ಇಲ್ಲವೇ ಸಮುದಾಯದ ಆಶೋತ್ತರಗಳನ್ನು ಎತ್ತಿಹಿಡಿಯುವುದಕ್ಕೆ ಒತ್ತಾಸೆಯಾಗಿರುವುದಿಲ್ಲ. ಬದಲಾಗಿ ಸಾಮಾಜಿಕ ಕಳಂಕವನ್ನು ಆರೋಪಿಸುವ, ಕೀಳರಿಮೆಯನ್ನು ಮೂಡಿಸುವ ಹಾಗೂ ಆತ್ಮಬಲಬನ್ನು ಕುಗ್ಗಿಸುವ ಹುನ್ನಾರವನ್ನೂ ಪ್ರಚೋದಿಸುತ್ತವೆ.

ಆದ್ದರಿಂದ ಭಾಷಿಕ ಬಳಕೆಯ ಬಗೆಗಳು ನಿರ್ದಿಷ್ಟ ಉದ್ದೇಶಕ್ಕೆ ಪೂರಕವಾಗಿಯೇ ನೆಲೆಗೊಳ್ಳುತ್ತವೆ ಎಂದು ಹೇಳುವುದು ದುಸ್ತರ. ಅರ್ಥಗಳನ್ನು ಹೇಗೆ ಪ್ರಚುರಪಡಿಸಲಾಗುತ್ತದೆ ಎನ್ನುವುದೇ ಭಾಷಾತತ್ವಶಾಸ್ತ್ರೀಯ ಬಹುಮುಖ್ಯ ಬಿಕ್ಕಟ್ಟಾಗಿರುತ್ತದೆ. ವಸ್ತುಸ್ಥಿತಿ, ಸತ್ಯ, ಸುಳ್ಳು, ವಾಸ್ತವ, ಆರೋಪ, ಪ್ರತ್ಯಾರೋಪ, ಮುಖಸ್ತುತಿ, ಮುಖಹೀನತೆ ಇತ್ಯಾದಿ ವಿಭಿನ್ನ ಭಾಷಿಕ ಕ್ರಿಯೆಗಳು ನೆಲೆಗೊಳ್ಳುವುದು ಕೇವಲ ಸಾಮಾಜಿಕ ರಚನೆ ಇಲ್ಲವೇ ಕಟ್ಟೋಣಗಳಾಗಿ ಮಾತ್ರ. ಸೂಚಕ ಹಾಗೂ ಸೂಚಿತಗಳ ನಡುವಣ ಸಂಘರ್ಷವನ್ನು ತಾತ್ವಿಕವಾಗಿ ವಿಶ್ಲೇಷಿಸಲು ಸಾಧ್ಯವಿಲ್ಲದ ಸನ್ನಿವೇಶದಲ್ಲಿ, ಆಯಾ ಸನ್ನಿವೇಶಕ್ಕೆ ತೋಚಿದಂತೆ ವ್ಯಾಖ್ಯಾನಿಸಲಾಗುವುದು.

ಇವತ್ತಿನ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ನಿರೂಪಣೆಗಳನ್ನು ವ್ಯಾಖ್ಯಾನಿಸುವ ಮಹನೀಯರು ಬಹುತೇಕವಾಗಿ ತಮ್ಮ ಮೂಗಿನ ನೇರಕ್ಕೆ ನಿರ್ದಿಷ್ಟಗೊಳಿಸಿ ಅರ್ಥೈಸುತ್ತಾರೆ. ಅದನ್ನೇ ವಸ್ತುನಿಷ್ಠವೆಂದೋ, ತಾತ್ವಿಕವೆಂದೋ ಇಲ್ಲವೇ ಸಾಮಾಜಮುಖಿಯೆಂದೋ ಬಿಂಬಿಸಿ, ತಮ್ಮೀ ನಿಲುವುಗಳಿಗೆ ಸಮ್ಮತಿಸದವರನ್ನು ಅಪಹಾಸ್ಯ ಮಾಡುವ ಹಾಗೂ ಅವರು ನಂಬಿದ ತತ್ವಗಳನ್ನೇ ಅನೈತಿಕಗೊಳಿಸುವ ದಾರ್ಷ್ಟ್ಯತನವನ್ನು ತೋರಿಸುತ್ತಾರೆ. ಸಮುದಾಯದ ಪರವಾಗಿರುವುದೆಂದರೆ, ತಮ್ಮದೇ ನಿಲುವುಗಳನ್ನು ತಾವೇ ಮಾನ್ಯಮಾಡಿಕೊಂಡು, ಇತರರು ನಂಬಿದ ಮೌಲ್ಯಗಳನ್ನು ಅಪಮೌಲ್ಯಗೊಳಿಸುವುದಲ್ಲ.

ಬದಲಾಗಿ ಯಾವುದು ಸಮಾಜಕ್ಕೆ ಒಳಿತನ್ನು ಬಯಸುವ ವಿನ್ಯಾಸವಾಗಿದೆ ಅನ್ನುವುದನ್ನು ಬಿಡಿಸಿ ಹೇಳುವ ವಿಧಾನವಾಗಿರುತ್ತದೆ. ಹಾಗೂ ಈ ವಿದ್ಯಮಾನದ ನೆಲೆಗಳನ್ನು ಪುಷ್ಟಿಕರಿಸುವ ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಭಿನ್ನತೆಗಳನ್ನೂ ಮೀರಿ ಪರಸ್ಪರ ಸಹಮತವನ್ನು ಹೊಂದಿರಬೇಕಾಗುತ್ತದೆ. ಇಂತಹ ಒಂದೊಂದು ಚಿಂತನೆಗೆ ಘನತೆಯು ಸಿಗಬೇಕೆಂದರೆ, ಸಾಮಾಜಿಕ, ಸಾಂಸ್ಕೃತಿಕ ಸಹಭಾಗಿತ್ವದ ಅವಶ್ಯಕತೆ ಇರುತ್ತದೆ. ಏಕೆಂದರೆ ಭಾರತದಂತಹ ದೇಶಗಳು ಏಕಕಾಲದಲ್ಲಿಯೇ ಹಲವು ಕಾಲಗಳಲ್ಲಿ ಬದುಕಿರುತ್ತಾರೆ.

ಇವರ ಲೋಕಗ್ರಹಿಕೆ, ಬದುಕಿನ ಮುನ್ನೋಟಗಳು ಮತ್ತು ಸಮಸಮಾಜ ಕಟ್ಟುವ ಯೋಚನಾಲಹರಿ ಒಂದೇ ಆಗಿರುವುದಿಲ್ಲ. ಹಾಗಾಗಿಯೇ ಕುವೆಂಪು, ಬೇಂದ್ರೆ, ಮಾಸ್ತಿ, ಪುತಿನ ಮೊದಲಾದವರು ಒಂದು ತಲೆಮಾರಿನ ಸಂವೇದನೆಯೊಳಗಿನ ಬಹುತ್ವವನ್ನು ನಿರೂಪಿಸಿದರೆ, ಲಂಕೇಶ್, ತೇಜಸ್ವಿ ಹಾಗೂ ಅನಂತಮೂರ್ತಿ ಇವರೆಲ್ಲರೂ ಸಮಕಾಲೀನವಾಗಿದ್ದರೂ, ಅವರ ಲೋಕಗ್ರಹಿಕೆ ಮತ್ತು ಸಾಮಾಜಿಕ ಭಾಷಾಶಾಸ್ತ್ರೀಯ ನಿಲುವುಗಳು ಪರಸ್ಪರ ಭಿನ್ನವಾಗಿವೆ. ಇವುಗಳನ್ನು ದೇವನೂರ ಅಥವಾ ಸಿದ್ದಲಿಂಗಯ್ಯ ಅವರುಗಳಿಗೆ ಮುಖಾಮುಖಿ ಮಾಡಿ, ಮೌಲ್ಯನಿರ್ಣಯಗಳನ್ನು ಕೈಗೊಂಡರೆ, ಏನೆಲ್ಲ ಅಪಚಾರಗಳು ಘಟಿಸಬಹುದು.

ವಚನಕಾರರ ಗ್ರಹಿಕೆಗಳನ್ನು ಪರಿಶೀಲಿಸಿದರೆ ಭಾರತದ ಸಮುದಾಯಗಳ ಬಹುಳತೆಯ ವಿನ್ಯಾಸಗಳು ನಮಗೆ ಮನನವಾಗುತ್ತವೆ. ಇದೇ ಬಗೆಯ ವಿಭಿನ್ನ ನಿಲುವುಗಳನ್ನು ವೈದೇಹಿ, ಗೀತಾ ನಾಗಭೂಷಣ, ನಾಗವೇಣಿ ಅವರ ಸಾಹಿತ್ಯಕ ನಿರೂಪಣೆಗಳಲ್ಲಿ ಕಾಣಬಹುದು. ಘನತೆಯ ಪ್ರಶ್ನೆಯಿರುವುದು ಈ ವೈವಿಧ್ಯತೆಗಳನ್ನು ಮಾನ್ಯಮಾಡುವ ರಾಜಕಾರಣದ ಪರಿಣಾಮಗಳ ಆಧಾರದ ಮೇಲೆ ಇತ್ಯರ್ಥವಾಗುತ್ತದೆ.

ಚರ್ಚೆ, ಸಂವಾದ, ದಿನನಿತ್ಯದ ಮಾತುಕತೆ ಹಾಗೂ ಅಭಿಪ್ರಾಯಗಳ ಮಂಡನೆಯಲ್ಲಿ ಪ್ರಯೋಗಿಸುವ ಭಾಷಿಕ ಸಂಗತಿಗಳು ನಮ್ಮನ್ನು ಗೊಂದಲಕ್ಕೀಡುಮಾಡುತ್ತವೆ. ಇದಕ್ಕೆ ಬಹುಮುಖ್ಯ ಕಾರಣವೇ ಪದ ಬಳಕೆಯ ನೆಲೆಗಳು. ಅಂದರೆ ನಾವು ನೇರವಾಗಿ ಮಾತನಾಡುವಾಗ ಅಥವಾ ಭೇಟಿಯಾದಾಗ ಅವುಗಳ ಅರ್ಥ ಸಾಧ್ಯತೆಗಳು ಏಕರೂಪವಾಗಿ ಕಾಣಿಸಿಕೊಳ್ಳುವುದು ಸಹಜ. ಆದರೆ ಈ ಸಹಜತೆಯನ್ನು ಗ್ರಹಿಕೆಯ ಸಾಧ್ಯತೆಯನ್ನಾಗಿ ತಿಳಿಯಲು ಆಗುವುದಿಲ್ಲ. ಏಕೆಂದರೆ, ಅರ್ಥದ ನೆಲೆಗಳು ಮಾತ್ರ ಏಕರೂಪಿಯಾಗಿರುವುದಿಲ್ಲ. ಜೊತೆಗೆ ಅವುಗಳನ್ನು ಗ್ರಹಿಸುವ ವಿಧಾನಗಳು ಕೂಡ ಇದಕ್ಕೆ ಒತ್ತಾಸೆಯಾಗುತ್ತವೆ.

ಒಂದು ಪದದ ಅರ್ಥ ನಿಶ್ಚಿತವಾಗಿರುವುದಿಲ್ಲ ಎಂದರೆ ಆ ಪದದ ಮೂಲಕ ಸಾಧಿತವಾಗುವ ಅರ್ಥವೂ ನಿಶ್ಚಿತವಾಗಿರುವುದಿಲ್ಲ. ಆಯಾ ಸನ್ನಿವೇಶಗಳ ಆಧಾರದ ಮೇಲೆ ಇವುಗಳ ಅರ್ಥ ಸಾಧ್ಯತೆಗಳು ಮೈದಾಳುತ್ತವೆ. ಸೂಚಕ (ಸಿಗ್ನಿಫೈರ್) ಮತ್ತು ಸೂಚಿತಗಳ (ಸಿಗ್ನಿಫೈಯ್ಡ್) ನಡುವಣ ನಂಟಸ್ತಿಕೆ ನೇರವಾಗಿರುವುದಿಲ್ಲ. ಅದು ನಿರಂತರವಾಗಿ ವಿಕಾಸಶೀಲವಾಗಿರುತ್ತದೆ. ಇದೊಂದು ಬಗೆಯಲ್ಲಿ ಅನಂತಲೀಲೆ. ಬರಹದ ಸನ್ನಿವೇಶದಲ್ಲಿ ಅರ್ಥದ ಅನಿಶ್ಚಿತತೆ ಇನ್ನೂ ವ್ಯಾಪಕವಾಗಿರುತ್ತದೆ. ಹಾಗಾಗಿ ಬರಹದ ನಿರೂಪಣೆಗಳಲ್ಲಿ ಸನ್ನಿವೇಶಗಳನ್ನು ನಿರ್ಧರಿಸುವ ಮೂಲಕ ಅರ್ಥಗಳನ್ನು ನಿಶ್ಚಯಿಸಲಾಗುತ್ತದೆ.

ಬರಹದಲ್ಲಿ ಮೈದಾಳಿದ ನಿರೂಪಣೆಗಳು ಅತ್ಯಂತ ಸಂದಿಗ್ದವೂ ಹಾಗೂ ಅಸ್ಪಷ್ಟವೂ ಆಗಿರುತ್ತವೆ. ಈ ಬಿಕ್ಕಟ್ಟಿನಲ್ಲಿ ಸೂಕ್ತ ಅರ್ಥಗಳು ಮೈದಾಳದೇ ಹೋದರೆ ಅಪಚಾರ ಮತ್ತು ಅಪಾಯಗಳೂ ತಲೆಯೆತ್ತುತ್ತವೆ. ಅರ್ಥಗಳ ಏಕರೂಪಿತನವೇ ಇಂತಹ ಸಾಮಾಜಿಕ ಅಪಚಾರ ಹಾಗೂ ಸಾಂಸ್ಕೃತಿಕ ಅಪಾಯಕ್ಕೆ ದಾರಿ ಮಾಡಿಕೊಡುತ್ತವೆ ಎಂದು ಸುಲಭವಾಗಿ ಹೇಳಬಹುದು ಆದರೆ ಇದು ವಾಸ್ತವವಲ್ಲ. ಈ ಅರ್ಥಗಳನ್ನು ರೂಪಿಸುವ ಸಾಮಾಜಿಕ ಹೊಣೆಗಾರಿಕೆ ಯಾರಿಗೂ ಸೇರದಿದ್ದರೂ, ಅದನ್ನು ತಮ್ಮ ಕೈವಸಮಾಡಿಕೊಳ್ಳುವ ಹಿತಾಸಕ್ತಿ ಕೆಲವು ವರ್ಗ, ಜಾತಿ ಹಾಗೂ ಧರ್ಮದವರಿಗೆ ಇರುತ್ತದೆ.

ಅರ್ಥದ ವಿಭಿನ್ನತೆ ಭಾಷೆಯಲ್ಲಿ ನೆಲೆನಿಂತಿರುವುದಿಲ್ಲ. ಅದು ಆಯಾ ಭಾಷೆಯ ಜನರ ಗ್ರಹಿಕೆಯಲ್ಲಿ ಅಂತಸ್ಥವಾಗಿರುತ್ತದೆ. ಯಾವ ನುಡಿ ಸಮುದಾಯವೂ ಈ ಗ್ರಹಿಕೆಯನ್ನು ಪ್ರಜಾಸತ್ತಾತ್ಮಕಗೊಳಿಸುವ ತುಡಿತವನ್ನು ಹೊಂದಿರಲಾವು. ಸಾಮಾಜಿಕ ಮತ್ತು ರಾಜಕಿಯ ಪ್ರಾಬಲ್ಯ ಹೊಂದಿದ ಜಾತಿ ವರ್ಗಗಳು, ಈ ಅರ್ಥೈಸುವಿಕೆಯನ್ನು ನಿಯಂತ್ರಿಸುತ್ತವೆ. ಈ ವಾಸ್ತವವನ್ನು ಅರಿಯದ ಹಿಪೋಕ್ರ್ಯಾಟ್ ಚಿಂತಕರೂ, ಇದೇ ಟ್ರ್ಯಾಪ್ನಿಲ್ಲಿ ಬಿದ್ದುಕೊಂಡು, ಯಾರ ಪರವಾಗಿರಬೇಕಿತ್ತೋ, ಅವರನ್ನೇ ಅಪಮಾನಿಸುವ ಹುನ್ನಾರದಲ್ಲಿ ಭಾಗಿಯಾಗುತ್ತಾರೆ. ಯಾವುದು ಮನುಷ್ಯ ಘನತೆಯನ್ನು ಎತ್ತಿಹಿಡಿಯುವ ಸಾಧನವಾಗಬೇಕಿತ್ತೋ, ಅದನ್ನೇ ತಮ್ಮ ಕೀಳಭಿರುಚಿಗೆ ಬಳಸಿಕೊಂಡು, ಸಮುದಾಯಗಳ ಹಿತವನ್ನು ನಿರ್ಲಕ್ಷಿಸಿ, ತಮ್ಮ ಹಿರಿಮೆಯನ್ನು ಮೆರೆಯುತ್ತಾರೆ.

ಸಾಹಿತ್ಯ ಪಠ್ಯಗಳ ವಿಶ್ಲೇಷಣೆಯನ್ನೇ, ಸಾಮಾಜಿಕ ವಿಜ್ಞಾನಗಳ ಸನ್ನಿವೇಶದಲ್ಲಿ ಅನುಸರಿಸಲು ಸಾಧ್ಯವಿಲ್ಲ. ಅಥವಾ ಸಾಮಾಜಿಕ ವಿಜ್ಞಾನಗಳ ವಿಶ್ಲೇಷಣಾ ಪರಿಕರಗಳನ್ನು ನೇರವಾಗಿ ಸಾಹಿತ್ಯಕ್ಕೆ ಒಗ್ಗಿಸಿಕೊಂಡು, ಸಾಹಿತ್ಯವನ್ನು ಅರಿಯುವುದು ಸೂಕ್ತವಲ್ಲ. ಕಾರಣವಿಷ್ಟೆ, ಅರ್ಥದ ವ್ಯಾಪ್ತಿ ಮತ್ತು ಆಯಾಮಗಳು ಆಯಾ ತಿಳಿವಿನ ವಲಯಗಳಿಗೆ ತಕ್ಕಂತೆ ಭಿನ್ನವಾಗಿರುತ್ತವೆ. ಈ ಭಿನ್ನತೆಯೇ ಘನತೆಯ ವೈಶಿಷ್ಟ್ಯವಾಗಿದೆ. ಭಿನ್ನತೆಯೆಂಬುದು ಮೇಲು-ಕೀಳುಗಳನ್ನು ತೀರ್ಮಾನಿಸುವ ಬಗೆಯಲ್ಲ.

ಹಾಗೂ ಬೈನರಿ ಇಲ್ಲವೇ ಡೈಕಾಟಮಿಗಳನ್ನು ರೂಪಿಸುವ ತಂತ್ರವೂ ಅಲ್ಲ. ಇದುವೇ ವ್ಯಕ್ತಿ, ಸಮೂಹ ಹಾಗೂ ದೇಶಗಳ ಘನತೆಯನ್ನು ಅರಿಯುವ ಕ್ರಮವಾಗಿದೆ. ಯಾವುದೇ ವ್ಯಕ್ತಿಯ ಇಲ್ಲವೇ ಸಮೂಹದ ಘನತೆಯನ್ನು ಕೇವಲ ಸಾಪೇಕ್ಷಿತವಾಗಿ ತೀರ್ಮಾನಿಸಿದರೆ, ಘನತೆಯೆಂಬ ವಿದ್ಯಮಾನವೇ ನಗೆಪಾಟಲಿಗೆ ಈಡಾಗುತ್ತದೆ. ಉದಾಹರಣೆಗೆ ಒಡಲಾಳದಲ್ಲಿ ಬರುವ ಕಡಲೆಕಾಯಿ ಪ್ರಸಂಗ, ಕುಸಮಬಾಲೆಯ ಎಳೆನೀರಿನ ಪ್ರಸಂಗವನ್ನು ಸರಳರೇಖಾತ್ಮಕ ಗ್ರಹಿಕೆಯಲ್ಲಿ ವಿಶ್ಲೇಷಿಸಿದರೆ, ಆ ಪಾತ್ರಗಳು ಕೇವಲ ಅನೈತಿಕತೆಯ ರೂಪಕವಾಗಿ ಕಾಣುತ್ತವೆ.

ಈ ಎರಡೂ ಪ್ರಸಂಗಗಳ ಹಿಂದಿನ ಸಾಮಾಜಿಕ, ರಾಜಕೀಯ ಹುನ್ನಾರಗಳು ಏನೆಂದು ಬಿಡಿಸಿನೋಡದೇ, ಅವುಗಳನ್ನು ಸಮ್ಮತಿಸುವ ಇಲ್ಲವೇ ಅವುಗಳೊಟ್ಟಿಗೆ ಒಂದು ಬಗೆಯ ತಾದ್ಯಾತ್ಮತೆಯನ್ನು ಹೊಂದಲು ಸಾಧ್ಯವಿಲ್ಲ. ಆದರೆ ಸಾಮಾಜಿಕ ವಿಜ್ಞಾನಗಳ ಹಿನ್ನಲೆಯಲ್ಲಿ ಇವೆರಡೂ ಪ್ರಸಂಗಗಳನ್ನು ವಿಶ್ಲೇಷಣೆ ಮಾಡಿದರೆ, ಗ್ರಹಿಕೆಯ ಸಾಧ್ಯತೆಗಳು ಬೇರೆಯಾಗಿರುತ್ತವೆ.

ಸಾಹಿತ್ಯ ಮತ್ತು ಸಮಾಜ ವಿಜ್ಞಾನಗಳ ನಡುವಿನ ಈ ವಿಶ್ಲೇಷಣೆಯ ಶೈಲಿ ಮತ್ತು ಮಾದರಿ ಬದಲಾದ ತಕ್ಷಣ ಮನುಷ್ಯ ಘನತೆಯ ಕಲ್ಪನೆ ಬದಲಾಗುವುದಿಲ್ಲ. ಆದರೆ ಈ ಘನತೆಯನ್ನು ಅರಿಯುವ ಸಾಧ್ಯತೆ ಇನ್ನಷ್ಟು ವಿಸ್ತಾರಗೊಳ್ಳುತ್ತದೆ. ಅಂಬೇಡ್ಕರ್, ಟ್ಯಾಗೋರ್, ಟಾಲ್ಸ್ಟಾಯ್, ಕುವೆಂಪು ಮತ್ತು ಗಾಂಧಿ ಅವರ ಚಿಂತನೆಗಳಲ್ಲಿ ಮೈದಾಳುವ ಮನುಷ್ಯ ಘನತೆಯ ನೆಲೆಗಳು ಹೀಗೆ ಸಾಹಿತ್ಯ, ಸಮಾಜವಿಜ್ಞಾನಗಳ ಸಾಧ್ಯತೆಗಳಿಂದ ಪ್ರಕಟಗೊಂಡಿವೆ.

ತಾತ್ವಿಕವಾಗಿ ಇಲ್ಲವೇ ತತ್ವಶಾಸ್ತ್ರೀಯ ನೆಲೆಯಲ್ಲಿ ಮನುಷ್ಯ ಘನತೆಯನ್ನು ಕುರಿತು ಚರ್ಚಿಸುವಾಗ, ಎರಡು ಬಗೆಯ ಸಮಸ್ಯೆಗಳನ್ನು ಎದುರಿಸುತ್ತೇವೆ. ಮನುಷ್ಯ ಘನತೆಯಂತಹ ಪರಿಕಲ್ಪನೆಗಳು ಸಹಜವಾಗಿ ಅಸ್ಪಷ್ಟವೂ ಹಾಗೂ ಸಂದಿಗ್ದವೂ ಆಗಿರುತ್ತವೆ. ಈ ಅಸ್ಪಷ್ಟ ಮತ್ತು ಸಂದಿಗ್ದತೆ ಇವೆರಡೂ ಭಾಷಿಕ ಕ್ರಿಯೆಯಲ್ಲಿ ನೆಲೆಗೊಳ್ಳುತ್ತವೆ. ಹಾಗಾಗಿ ಘನತೆಯನ್ನು ವ್ಯಾಖ್ಯಾನಿಸುವುದು ಅತ್ಯಂತ ದುಸ್ತರವಾದ ಕೆಲಸವಾಗಿದೆ.

ಯಾವುದನ್ನು ನಿಖರವಾಗಿ ಮತ್ತು ಸ್ಪಷ್ಟವಾಗಿ ಭಾಷೆಯೊಳಗೆ ವ್ಯಾಖ್ಯಾನಿಸಲು ಸಾಧ್ಯವೋ, ಅದು ಬಹುತೇಕವಾಗಿ ನಮ್ಮ ಗ್ರಹಿಕೆ ಮತ್ತು ಸಾಮಾಜಿಕ ಅನುಭವದಲ್ಲಿ ಸಹಜ ನಡೆಯಾಗಿರುತ್ತದೆ. ನಮ್ಮ ಗ್ರಹಿಕೆಗೆ ಎಟುಕದ ಯಾವುದೇ ಕಲ್ಪನೆ, ಪರಿಕಲ್ಪನೆ ಅಥವಾ ಅನುಭವು ಭಾಷೆಯಲ್ಲಿ ಸ್ಪಷ್ಟವಾಗಿಯೂ ಮತ್ತು ನಿಖರವಾಗಿಯೂ ವ್ಯಕ್ತವಾಗಲಾರದು. ಮನುಷ್ಯನ ಘನತೆಯ ಕಲ್ಪನೆ ಯಾಕೇ ಇಷ್ಟೊಂದು ಸಂಕೀರ್ಣವಾಗಿ ತೋರುತ್ತದೆ? ಈ ಸಂಕೀರ್ಣತೆಗೆ ಒತ್ತಾಸೆಯಾಗುವ ಭಾಷಿಕ ಮತ್ತು ಸಾಂಸ್ಕೃತಿಕ ಸವಾಲುಗಳಾವವು? ಎನ್ನುವುದಾದರೆ, ಮನುಷ್ಯ ತನ್ನ ಬದುಕಿನಲ್ಲಿ ರೂಪಿಸಿಕೊಳ್ಳುವ ಅನುಭವ ಮತ್ತು ಗ್ರಹಿಕೆ, ಇವುಗಳ ನಡುವೇ ಸಂಘರ್ಷವೊಂದು ಏರ್ಪಟ್ಟರೆ, ಇವೆರಡೂ ವಿದ್ಯಮಾನಗಳನ್ನು ಪ್ರತಿನಿಧಿಸುವ ಹಾಗೂ ಸಂಕಥನಗೊಳಿಸುವ ವಿನ್ಯಾಸಗಳು ಸ್ಪಷ್ಟವಾಗಿ ನೆಲೆನಿಲ್ಲಲಾರವು.

ಏಕೆಂದರೆ, ಮನುಷ್ಯ ಘನತೆಯನ್ನು ಪರಿಕಲ್ಪಿಸುವ ಹಾಗೂ ವ್ಯಾಖ್ಯಾನಿಸುವ ಭಾಷಿಕ ಕ್ರಿಯೆಗಳು ಮುಖ್ಯವಾಗಿ, ಗ್ರಹಿಕೆ ಮತ್ತು ಅಭಿವ್ಯಕ್ತಿಯ ವಿನ್ಯಾಸಗಳನ್ನು ಹೇಗೆ ಮಾನಸಿಕ ನಕ್ಷೆಯಲ್ಲಿ ಸಾಕಾರಗೊಳಿಸಲಾಗುತ್ತದೆ ಮತ್ತು ಅರ್ಥ ಸಾಧ್ಯತೆಗಳನ್ನು ನೆಲೆಗೊಳಿಸಲಾಗುತ್ತದೆ ಎಂಬ ಮಾನಸಿಕ ಪ್ರಕ್ರಿಯೆಗಳನ್ನು ಆಧರಿಸಿರುತ್ತವೆ. ಭಾಷಿಕ ಕ್ರಿಯೆ ಮತ್ತು ಮಾನಸಿಕ ನಕ್ಷೆಗಳ ನಡುವೆ ಪರಸ್ಪರ ಹೊಂದಾಣಿಕೆ ಏರ್ಪಡದಿದ್ದರೆ, ಸಂವಹನ ಕ್ರಿಯೆ ಸುಲಲಿತವಾಗಿ ನೆರವೇರಲಾರದು.

ಭಾಷೆ ಮತ್ತು ಮನಸ್ಸುಗಳ ನಡುವಿನ ವಿನ್ಯಾಸಗಳು ಹೇಗೆ ವ್ಯವಹರಿಸುತ್ತವೆ ಎನ್ನುವ ತಿಳಿವಳಿಕೆ ದಕ್ಕಿದರೆ ಮಾತ್ರ, ಸಾಮಾಜಿಕ ಸಾಂಗತ್ಯ ಮತ್ತು ನಂಟಸ್ತಿಕೆ ಸುಲಭವಾಗುತ್ತದೆ. ಪದಗಳ ಅರ್ಥದ ವಿನ್ಯಾಸಗಳು ಸೂಪ್ತವಾಗಿ ನಮ್ಮ ಮಾನಸಿಕ ರಚನೆಗಳಾಗಿ ಕಾರ್ಯನಿರ್ವಹಿಸಿದರೂ, ಅವುಗಳು ಅಭಿವ್ಯಕ್ತಿಗೊಳ್ಳುವಾಗೆಲ್ಲ ಕೇವಲ ಮಾನಸಿಕ ಸೂಪ್ತರಚನೆಯ ಭಾಗವಾಗಿ ಮಾತ್ರ ಇರುವುದಿಲ್ಲ. ಬದಲಾಗಿ ನಮ್ಮ ಜಾಗ್ರತ ಪ್ರಜ್ಞೆಯನ್ನು ಪ್ರತಿನಿಧಿಸುವ ಸೂಚಕಗಳಾಗುತ್ತವೆ. ಈ ಸೂಚಕಗಳು ತಮ್ಮೊಳಗೆಯೇ ಸೂಚಿತಗಳನ್ನೂ ಹೊಂದಿರುತ್ತವೆ. ಆದರೆ ರಾಜಕೀಯ ಆಯಾಮಗಳನ್ನು ಬಲವಾಗಿ ನೆಮ್ಮಿರುವ, ಯಾವುದೇ ಪರಿಕಲ್ಪನೆ ಅಥವಾ ಪರಿಭಾಷೆ ಬಹುತೇಕವಾಗಿ ಅಸ್ಪಷ್ಟ ಕಲ್ಪನೆಯಾಗಿರುತ್ತದೆ ಎಂದು ಇಲ್ಲಿ ವಾದಿಸಬಹುದು.

ಮನುಷ್ಯ ಘನತೆಯ ಈ ಪರಿಕಲ್ಪನೆಯು ಕಾನೂನು, ನೈತಿಕ ಮತ್ತು ಸಾಮಾಜಿಕ ಹೊಣೆಗಾರಿಕೆಯ ನೆಲೆಯಾಗಿ ಹೆಚ್ಚು ಹೆಚ್ಚು ಪ್ರಚಲಿತಗೊಳ್ಳುತ್ತದೆ. ತಾತ್ವಿಕ ಸಂಕಥನಗಳಲ್ಲಿ ಘನತೆ ಎನ್ನುವುದು ಒಂದು ಮಂತ್ರದಂತೆ ಕಾಣಿಸುತ್ತದೆ. ಆದರೆ, ಇಂತಹ ಪರಿಕಲ್ಪನೆಯನ್ನು ಸೃಜಿಸುವ ಹಾಗೂ ನೆಲೆಗೊಳಿಸುವ ಭಾಷಿಕ ಕ್ರಿಯೆಗಳು ಎಷ್ಟು ವ್ಯಾಪಕವಾಗಿ ವ್ಯಾಖ್ಯಾನಿಸಲ್ಪಡುತ್ತವೋ ಅಷ್ಟೊಂದು ಸಂಕೀರ್ಣತೆಗೆ ಒಳಗಾಗುತ್ತವೆ.

ಡಾ.ಮೇಟಿ ಮಲ್ಲಿಕಾರ್ಜುನ್, ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ಹಾಗಾಗಿ ಅದರ ಅರ್ಥಗಳು ಅಸ್ಪಷ್ಟ ಮತ್ತು ಮಸುಕಾಗಿ ತೋರುತ್ತವೆ. ಈ ಟಿಪ್ಪಣಿಯ ಉದ್ದೇಶವೇನೆಂದರೆ, ಮನುಷ್ಯ ಘನತೆ ಎಂಬೀ ಪರಿಕಲ್ಪನೆಯನ್ನು ಪರಿಭಾವಿಸುವ ವಿಧಾನಗಳು ಹೇಗೆ ಭಾಷೆಯ ನಿರೂಪಣೆಗಳಲ್ಲಿ ವಿಕಾಸಗೊಳ್ಳುತ್ತವೆ ಹಾಗೂ ಅರ್ಥಗಳನ್ನು ಮಾನಸಿಕ ನಕ್ಷೆಯ ಸಾಧ್ಯತೆಗಳನ್ನಾಗಿಸುವ ಬಗೆಗಳಾವವು? ಎಂಬ ತಾತ್ವಿಕ ಚರ್ಚೆಯನ್ನು ಬೆಳೆಸುವುದಾಗಿದೆ. ಪರಿಭಾಷೆ ಮತ್ತು ಅದರ ವ್ಯಾಖ್ಯಾನಕ್ಕೆ ಸಂಬಂಧಿಸಿದಂತೆ, ಘನತೆ ಎನ್ನುವುದು ನೈತಿಕ, ದಾರ್ಶನಿಕ ಮತ್ತು ಸಂವಿಧಾನಾತ್ಮಕ ಗ್ರಹಿಕೆಯಾಗಿದೆ. ವಿಭಿನ್ನ ಭಾಷಾ ಬಳಕೆಯ ವಲಯಗಳಲ್ಲಿ ವಿಭಿನ್ನ ಅರ್ಥಗಳು ಈ ಪರಿಕಲ್ಪನೆಯನ್ನು ಸುತ್ತುವರೆದಿವೆ.

ಇದುವರೆಗೂ ಮಾಡಿದ ವಿಶ್ಲೇಷಣೆಗಳ ಪ್ರಕಾರ ಮನುಷ್ಯ ಘನತೆಯ ಅರ್ಥಗಳನ್ನು ಸಾಮಾಜಿಕ ರಚನೆ ಎಂದು ಹೇಳಬಹುದು. ಇಲ್ಲಿ ಸಾಂಸ್ಕೃತಿಕ ಮತ್ತು ಐತಿಹಾಸಿಕ ಸಂದರ್ಭಗಳು ಪ್ರಧಾನ ಪಾತ್ರವನ್ನು ವಹಿಸುತ್ತವೆ. ವಾಸ್ತವದಲ್ಲಿ ಮನುಷ್ಯ ಘನತೆಗೆ ಯಾವುದೇ “ನಿಜವಾದ” ಅರ್ಥವಿಲ್ಲ. ವಿಭಿನ್ನಸ್ತರಗಳಲ್ಲಿ ಈ ಪರಿಕಲ್ಪನೆಯ ಅರ್ಥವು ನಿರ್ಧಾರವಾಗುತ್ತದೆ. ಆದರೆ ಆಯಾ ಸಾಮಾಜಿಕ ಸ್ತರಗಳಿಗೆ ಅನುಗುಣವಾಗಿ ಈ ವಿಭಿನ್ನತೆಯು ಕೆಲವುಸಲ ಗಹನವಾಗಿ ಮತ್ತೇ ಕೆಲವುಸಲ ಅತ್ಯಂತ ತೆಳುವಾಗಿ ನಮಗೆ ತೋರುತ್ತದೆ.

ಈ ವಿನ್ಯಾಸಗಳು ಸಾಮಾಜಿಕ-ಸಾಂಸ್ಕೃತಿಕವಾಗಿ ನಿರ್ಧರಿಸಲಾಗುತ್ತವೆ. ಕಾನೂನುಬದ್ಧ ಪರಿಭಾಷೆಯಲ್ಲಿ ‘ಘನತೆ’ ಎಂಬೀ ಪದ ಬಳಕೆಯು ಮಾನವಹಕ್ಕು ಮತ್ತು ಕಾನೂನುಗಳ ಚೌಕಟ್ಟನ್ನು ಪಡೆದುಕೊಳ್ಳುತ್ತದೆ. ಇದೊಂದು ಬಗೆಯಲ್ಲಿ ಸಮರ್ಥನೀಯ ನಿಲುವು ಆಗಿರುತ್ತದೆ. ನೈತಿಕ-ತಾತ್ವಿಕ ಪರಿಭಾಷೆಗೆ ಹೋಲಿಸಿ ನೋಡಿದರೆ, ಒಂದು ಕಡೆ ದೃಷ್ಟಿಕೋನಕ್ಕೆ ಸಂಬಂಧಿಸಿದ ನಿಲುವಾಗಿ ಕಾಣುತ್ತದೆ. ಮತ್ತೊಂದಡೆ ಅಪಮಾನಕ್ಕೆ ಸಂಬಂಧಿಸಿದ ವಿನ್ಯಾಸವಾಗಿ ಕಾಣಿಸುತ್ತದೆ. ಏಕೆಂದರೆ ಅಪಮಾನದ ಚರಿತ್ರೆಯನ್ನು ಹೊಂದಿದವರಲ್ಲಿ ಮಾತ್ರ ಘನತೆಯ ಬಯಕೆ ದೊಡ್ಡಾಗಿರುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980234243

ದಿನದ ಸುದ್ದಿ

ಕವಿತೆ | ನೆನಪು

Published

on

ಕವಿ | ರುದ್ರಪ್ಪ ಹನಗವಾಡಿ
  • ರುದ್ರಪ್ಪ ಹನಗವಾಡಿ

ಅಪ್ಪನನ್ನು ಒಪ್ಪ ಮಾಡಿ
ವರ್ಷಗಳೇ ಕಳೆದವು ಮುವ್ವತ್ತೇಳು
ಇಂದಿರಾಗಾಂಧಿಯ ತುರ್ತು ಪರಿಸ್ಥಿತಿ
ಅರಸರ ಮೀಸಲಾತಿ
ಬಸವಲಿಂಗಪ್ಪನವರ ಬೂಸಾ ಖ್ಯಾತಿ
ಮಲ ಹೊತ್ತು
ಮಲಗಿದ್ದ ಕಾಲಕ್ಕೆ
ಚುರುಕು ಮುಟ್ಟಿಸಿದ ಕಾಲ

ಹರೆಯದ ನನಗೆ
ಕಾಲೇಜ ಮೇಷ್ಟರ ಕೆಲಸ
ಸೂಟು ಬೂಟಿನ ವೇಷ
ಆ ಮೇಲೆ ಅಮಲದಾರಿಕೆ
ಎಲ್ಲ ನಡೆದಾಗಲೇ ಅವ್ವನನ್ನು
ಆಸ್ಪತ್ರೆಗೆ ಸೇರಿಸಿದ್ದು
ಕಾಲ ಕಳೆದು ಕೊಂಡು
ಕೋಲ ಹಿಡಿದದ್ದು
ನಿನ್ನೆ ಮೊನ್ನೆಯಂತೆ
ಬಾಲ್ಯವಿನ್ನು ಉಂಟೆಂಬಂತೆ
ಭಾವಿಸುವಾಗಲೇ ಅವ್ವನ ಸಾವು

ಅದರೊಟ್ಟಿಗೆ ಕಾಯದಾಯಾಸ ತೀರಿಸಲು
ಬಂದರೆ ಬೆಂಗಳೂರಿಗೆ
ರೌಡಿಗಳ ಕಾಟ
ಅಂಬೇಡ್ಕರ್ ಪಟದ ಕೆಳಗೆ
ದೌರ್ಜನ್ಯದ ದಂಡು

ಅಮಾಯಕರಿಗೆ ಗುಂಡು
ಕಂಡುಂಡ ಹಾದಿಯ ಗುಡಿಸಲುಗಳಲ್ಲೀಗ
ಮುಗಿಲು ಮುಟ್ಟೋ ಮಹಲುಗಳು
ಅಂತಲ್ಲಿ
ದೇಶ ವಿದೇಶಗಳ
ಅಹವಾಲುಗಳು
ಅವಿವೇಕಗಳು
ನೋಡ ನೋಡುತ್ತಿದ್ದಂತೆ
ಉಸಿರು ಬಿಗಿಹಿಡಿದ ಜನರ ಒಳಗೆ
ಒಳಪದರಗಳೊಳಗೆ ಕನಸ ಬಿತ್ತಿ
ಹಸಿರ ಹೊನ್ನು ಬಾಚಲು ಹವಣಿಸಿದ
ಬಿಳಿ ಜನರ ಆಟ
ಅರ್ಥವಾಗುವುದೇ ಎಲ್ಲ
ಗೋಣ ನೀಡುವರೆ
ಹೂತಿಟ್ಟ ಗೂಟಕ್ಕೆ ?

( ಚಿಂತಕ ರುದ್ರಪ್ಪ ಹನಗವಾಡಿ ಅವರ ‘ಊರು – ಬಳಗ’ ಕವನ ಸಂಕಲನದಿಂದ ‘ ನೆನಪು ‘ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕೃತಿಯನ್ನು ಫ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ 2013 ರಲ್ಲಿ ಪ್ರಕಿಸಿದೆ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ; ಒಂದು ಚಿಂತನೆ

Published

on

  • ಮಹಾಂತೇಶ್.ಬಿ.ನಿಟ್ಟೂರು, ದಾವಣಗೆರೆ

ನಿಜ ಶರಣ ಶ್ರೀ ಅಂಬಿಗರ ಚೌಡಯ್ಯನವರ ಜೀವಿತ ಕಾಲ 12 ನೇ ಶತಮಾನದ ಬಸವಾದಿ ಶರಣರ ಕಾಲದಲ್ಲೇ ಇತ್ತು ಎಂಬುದು ಇತಿಹಾಸಕಾರರ ಸಂಶೋಧನೆಯಿಂದ ತಿಳಿದು ಬರುತ್ತದೆ. ಅವರ ಹುಟ್ಟೂರು ಹಾವೇರಿ ಜಿಲ್ಲೆಯ ಆಗಿನ ಶಿವಪುರ, ಈಗಿನ ಚೌಡಯ್ಯದಾನಪುರ. ಅವರ ತಂದೆಯ ಹೆಸರು ಶ್ರೀ ವಿರೂಪಾಕ್ಷ, ತಾಯಿಯ ಹೆಸರು ಪಂಪಾಂಭಿಕೆ, ಹೆಂಡತಿಯ ಹೆಸರು ಸುಲೋಚನಾ ಹಾಗೂ ಮಗನ ಹೆಸರು ಪುರವಂತ.

ಅಂಬಿಗ ವೃತ್ತಿಯ ಚೌಡಯ್ಯನವರು ಅಲ್ಲಮ ಪ್ರಭು ಮತ್ತು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಇದ್ದ ಒಬ್ಬ ಕ್ರಾಂತಿಕಾರಿ, ದಿಟ್ಟ, ನೇರ, ನಿಷ್ಠುರ ನುಡಿಯ ವಚನಕಾರ. ಕಲ್ಯಾಣ ಕ್ರಾಂತಿಯ ನಂತರ ಇವರು ತಮ್ಮ ವಚನಗಳ ಗಂಟನ್ನು ಹೊತ್ತು ಉಳವಿಗೆ ನಂತರ ತಮ್ಮ ಗ್ರಾಮವಾದ ತುಂಗಭದ್ರಾ ನದಿಯ ದಡದ ಮೇಲಿರುವ ಶಿವಪುರಕ್ಕೆ ಬಂದು ದೋಣಿ ನಡೆಸುವ ವೃತ್ತಿಯಲ್ಲಿ ನಿರತರಾಗಿ ವಚನ ರಚನೆ ಮಾಡಿರುವುದು ತಿಳಿದು ಬರುತ್ತದೆ.

ಚೌಡಯ್ಯನವರು ತಮ್ಮ ಜೀವಿತಾವಧಿಯಲ್ಲಿ ಅನೇಕ ಪವಾಡಗಳನ್ನು ಮಾಡಿರುತ್ತಾರೆ. ಗಿಡಮೂಲಿಕೆ ಔಷಧಿಗಳಿಂದ ಕ್ಷಯ ರೋಗ, ಕುಷ್ಠರೋಗ ಗುಣಪಡಿಸುವುದು, ಹಾವು ಕಚ್ಚಿದವರನ್ನು

ಬದುಕಿಸುವುದು ಇತ್ಯಾದಿ..

ಒಮ್ಮೆ ಗುತ್ತಲದ ಅರಸನು ಬೇಟೆಗಾಗಿ ಈ ಪ್ರದೇಶದಲ್ಲಿ ಸಂಚರಿಸುತ್ತಿದ್ದಾಗ, ಆತನ ಸೇನಾಧಿಪತಿಯು ಹಾವು ಕಚ್ಚಿ ಮೃತಪಟ್ಟನು. ಇದರಿಂದಾಗಿ ಅರಸನಿಗೆ ಅತೀವ ದುಃಖವುಂಟಾಗಿ ರೋಧಿಸತೊಡಗಿದನು. ಆಗ ಆತನ ಸೈನಿಕನೊಬ್ಬನು ಶ್ರೀ ಚೌಡಯ್ಯನವರ ಪವಾಡಗಳ ಬಗ್ಗೆ ವಿವರಿಸಿ ಹೇಳಲಾಗಿ, ಅರಸನು ತನ್ನ ಮೃತ ಸೇನಾಧಿಪತಿಯ ಶರೀರವನ್ನು ಚೌಡಯ್ಯನವರಲ್ಲಿಗೆ ತಂದು ಆತನನ್ನು ಬದುಕಿಸುವಂತೆ ಕೇಳಿಕೊಂಡರು, ಆಗ ಚೌಡಯ್ಯನವರು ಸೇನಾಧಿಪತಿಯನ್ನು ಬದುಕಿಸುತ್ತಾರೆ. ಇದರಿಂದ ಸಂತುಷ್ಟನಾದ ಅರಸನು ಶಿವಪುರದ ಸುತ್ತಲಿನ ಪೂರ್ವ – ಪಶ್ಚಿಮಕ್ಕೆ 14 ಮೈಲು ಹಾಗೂ ಉತ್ತರ – ದಕ್ಷಿಣಕ್ಕೆ 7 ಮೈಲು ಸುತ್ತಳತೆಯ ಭೂಮಿಯನ್ನು ಚೌಡಯ್ಯನವರಿಗೆ ದಾನವಾಗಿ ನೀಡಿದನು.

ಆದರೆ ಚೌಡಯ್ಯನರು ವೈರಾಗ್ಯಶಾಲಿಯು, ಲೌಕಿಕದಲ್ಲಿ ನಿರಾಸಕ್ತಿ ಹೊಂದಿದವರು ಆಗಿದ್ದರಿಂದ, ಅರಸನು ಕೊಡಮಾಡಿದ್ದ ಸಂಪೂರ್ಣ ಜಮೀನನ್ನು ತನ್ನ ಗುರುಗಳಾದ ಶ್ರೀ ಶಿವದೇವರಿಗೆ ದಾನವಾಗಿ ನೀಡಿದರು ಎಂಬ ಉಲ್ಲೇಖವಿದೆ. ಅಂದಿನಿಂದ ಶಿವಪುರ ಗ್ರಾಮಕ್ಕೆ ‘ಚೌಡಯ್ಯದಾನಪುರ’ ಎಂದು ಹೆಸರು ಬರುತ್ತದೆ. ಮುಂದೆ ಚೌಡಯ್ಯನರು ಅಲ್ಲಿ ದೇಹ ತ್ಯಾಗ ಮಾಡಿದ್ದರಿಂದ ತುಂಗಭದ್ರಾ ನದಿಯ ದಡದಲ್ಲಿ ಈಗಲೂ ಚೌಡಯ್ಯನವರ ಸಮಾಧಿ ಗದ್ದುಗೆ ಇದೆ.

ಭ್ರಮಾಲೋಕದಲ್ಲಿ ವಿಹರಿಸುತ್ತಾ ಕುಳಿತ, ಆಡಂಬರದಲ್ಲಿ ಅಡ್ಡಾದಿಡ್ಡಿ ಅಡ್ಡಾಡುವ ಮಂದಿಯ ಕಪಾಳಕ್ಕೆ ಹೊಡೆದು ಎಚ್ಚರಿಸುವಂತಿವೆ ಚೌಡಯ್ಯನವರ ವಚನಗಳು. ಧಾರ್ಮಿಕ ಮೂಢನಂಬಿಕೆ ಬಿತ್ತುವವರಿಗೆ, ಸ್ವಾರ್ಥಿಗಳಾಗಿ ಬದುಕುವವರಿಗೆ, ಮುಖವಾಡ ಹಾಕಿ ಮಂಕು ಬೂದಿ ಎರಚುವವರಿಗೆ ಸಿಂಹ ಸ್ವಪ್ನದಂತೆ ಬೆಚ್ಚಿ ಬೀಳಿಸುತ್ತವೆ ನಿಜ ಶರಣ ಅಂಬಿಗರ ಚೌಡಯ್ಯನವರ ವಚನಗಳು. ಇದಕ್ಕೆ ತಾತ್ಪೂರ್ತಿಕವಾಗಿ ಕೆಲವು ವಚನಗಳು ಈ ಕೆಳಗಿನಂತಿವೆ;

“ಅಂಬಿಗ ಅಂಬಿಗ ಎಂದು ಕುಂದ ನುಡಿಯದಿರು/ನಂಬಿದರೆ ಒಂದೇ ಹುಟ್ಟಲಿ/ಕಡೆಯ ಹಾಯಿಸುವೆನೆಂದಾತನಂಬಿಗರ/ಚೌಡಯ್ಯ ನಿಜಶರಣನು”

ಈ ಮೇಲಿನ ವಚನ ಶ್ರೀ ಅಂಬಿಗರ ಚೌಡಯ್ಯನವರ ಸ್ವಾಭಿಮಾನ, ಧೈರ್ಯ, ನೇರ, ನಿರ್ಭಿಡೆಯ ವ್ಯಕ್ತಿತ್ವದ ಪ್ರತೀಕವಾಗಿದೆ.

ಹನ್ನೆರಡನೇ ಶತಮಾನದ ಸಂದರ್ಭದಲ್ಲಿ ಜಾತಿ ಮತ್ತು ವರ್ಗ ವ್ಯವಸ್ಥೆ ಎಷ್ಟರಮಟ್ಟಿಗಿತ್ತು ಎಂಬುದನ್ನು ಈ ವಚನ ಸೂಚಿಸುತ್ತದೆ. ಅಂತಹ ವಿಚಿತ್ರ, ವಿಕ್ಷಿಪ್ತ ಸನ್ನಿವೇಶದಲ್ಲಿ ಬಸವಾದಿ ಶರಣರು ಜಾತೀಯತೆ, ವರ್ಗ – ವರ್ಣ ವ್ಯವಸ್ಥೆಯ ವಿರುದ್ಧ ಬೃಹತ್ ಚಳುವಳಿಯನ್ನು ಕೈಗೊಂಡಾಗ ಅಂಬಿಗರ ಚೌಡಯ್ಯನವರ ಸತ್ಯನಿಷ್ಠೆ, ಪ್ರಾಮಾಣಿಕತೆಯ ವಚನಗಳು ಪ್ರಖರವಾಗಿ ಕಾಣಿಸುತ್ತವೆ. ಕೆಲವು ಢೋಂಗಿ ಭಕ್ತರಿಗೆ, ಕಪಟ ಸನ್ಯಾಸಿಗಳಿಗೆ ತನ್ನ ಖಾರವಾದ ವಚನಗಳ ಮೂಲಕ ಚುರುಕು ಮುಟ್ಟಿಸುತ್ತಾರೆ.

ಆಡಂಬರ ಮತ್ತು ದುರಾಸೆಯ ಜನರ ಮನಸ್ಥಿತಿ ಕಂಡು ಕೆಂಡಾಮಂಡಲವಾಗಿ ಪ್ರಸ್ತುತ ಪಡಿಸಿದ ಒಂದು ವಚನ ಇಂತಿದೆ;

“ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಕಾಳೋಗರನ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹಾರುವ ಪಕ್ಷಿಯನು/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೆಬ್ಬುಲಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೊಯ್ವ ಹೆಮ್ಮಾರಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಬರುವ ಉರಿ ಬಾಣವನು/ಇಂತೆಲ್ಲವನು ಒಂದೇ ಮಂತ್ರದಲ್ಲಿ ನಿಲ್ಲಿಸಬಹುದು;/ಲೋಭವೆಂಬ ಗ್ರಹಣ ಹಿಡಿದವರ ಏತರಿಂದಲೂ/ನಿಲ್ಲಿಸಲಾಗದು/ಈ ಲೋಭಕ್ಕೆ ದಾರಿದ್ರ್ಯವೇ ಔಷಧವು;/ಹೇಳಿದರೆ ಕೇಳರು, ತಾವು ತಿಳಿಯರು/ಶಾಸ್ತ್ರವ ನೋಡರು, ಭಕ್ತಿಯ ಹಿಡಿಯರು/ಇಂತಹ ಗೊಡ್ಡು ಮೂಳ ಹೊಲೆಯರಿಗೆ/ಕರ್ಮವೆಂಬ ಶರದ್ಧಿಯಲ್ಲಿ ಬಿದ್ದು ಹೊರಳಾಡುವುದೇ/ಸತ್ಯವೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು”

ಸಂಸಾರದ ಜಂಜಾಟದಲ್ಲಿ ಬಿದ್ದು ಒದ್ದಾಡುತ್ತಾ ಶಿವನನ್ನು ಮರೆತು ಹತ್ತು ಹಲವು ಚಿಂತೆಯಲ್ಲಿ ಮುಳುಗಿರುವ ಶವ ಮುಖದ ಜನರ ಸ್ಥಿತಿ-ಗತಿಯನ್ನು ಅರ್ಥಗರ್ಭಿತವಾಗಿ ಸಾದರಪಡಿಸುವ ಒಂದು ವಚನ ಇಂತಿದೆ;

“ಬಡತನಕೆ ಉಂಬುವ ಚಿಂತೆ/ಉಣಲಾದಡೆ ಉಡುವ ಚಿಂತೆ/ಉಡಲಾದಡೆ ಇಡುವ ಚಿಂತೆ/ಇಡಲಾದಡೆ ಹೆಂಡಿರ ಚಿಂತೆ/ಹೆಂಡಿರಾದರೆ ಮಕ್ಕಳ ಚಿಂತೆ/ಮಕ್ಕಳಾದಡೆ ಬದುಕಿನ ಚಿಂತೆ/ಬದುಕಾದಡೆ ಕೇಡಿನ ಚಿಂತೆ/ಕೇಡಾದಡೆ ಮರಣದ ಚಿಂತೆ/ಇಂತೀ ಹಲವು ಚಿಂತೆಯಲ್ಲಿಪ್ಪವರ ಕಂಡೆನು/ಶಿವನ ಚಿಂತೆಯಲ್ಲಿದ್ದಾತರೊಬ್ಬರನೂ ಕಾಣೆನೆಂದಾತ/ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು!”

ಸಮಯದ ಸದ್ಬಳಕೆ ಮಾಡಿಕೊಂಡು ಕಾಯಕ ಮಾಡುತ್ತಾ ಶಿವಭಕ್ತರಾಗಿ, ಜೀವನ ಪಾವನವಾಗಿಸುವಂತೆ ಕರೆ ನೀಡುವ ಒಂದು ವಚನ ಇಂತಿದೆ;

“ಗಾಳಿ ಬಿಟ್ಟಾಗ ತೂರಿಕೊಳ್ಳಿರಯ್ಯ/ಗಾಳಿ ನಿಮ್ಮ ಅಧೀನವಲ್ಲ ಕಂಡಯ್ಯ/ನಾಳೆ ತೂರಿಹೆನೆಂದಡಿಲ್ಲ ಕಂಡಯ್ಯ/ಶಿವಶರಣೆ ಎಂಬುದೊಂದು ಗಾಳಿ ಬಿಟ್ಟಲ್ಲಿ/ಬೇಗ ತೂರೆಂದನಂಬಿಗರ ಚೌಡಯ್ಯ”

ಕಾವಿ ಬಟ್ಟೆ ತೊಟ್ಟು, ಭಿಕ್ಷೆಗಾಗಿ ಜೋಳಿಗೆ ಹಾಕಿದವರೆಲ್ಲರೂ ಜಂಗಮರು, ಗುರುಗಳಾಗಲಾರರು ಎಂಬುದನ್ನು ವಿಡಂಬಿಸುವ ಒಂದು ವಚನ ಇಂತಿದೆ;

“ಕಂಥೆ ತೊಟ್ಟವ ಗುರುವಲ್ಲ/ಕಾವಿ ಹೊದ್ದವ ಜಂಗಮನಲ್ಲ/ಶೀಲ ಕಟ್ಟಿದವ ಶಿವಭಕ್ತನಲ್ಲ/ನೀರು ತೀರ್ಥವಲ್ಲ/ಕೂಳು ಪ್ರಸಾದವಲ್ಲ/ಹೌದೆಂಬವನ ಬಾಯ ಮೇಲೆ/ಅರ್ಧ ಮಣದ ಪಾದರಕ್ಷೆಯ ತೆಗೆದುಕೊಂಡು/ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ/ಟೊಕ ಟೊಕನೆ ಹೊಡೆ ಎಂದಾತ/ನಮ್ಮ ಅಂಬಿಗರ ಚೌಡಯ್ಯ”

ಹೀಗೆ ಬಸವಾದಿ ಶರಣರ ಸಮಾಜ ಸುಧಾರಣಾ ಚಳವಳಿಯಲ್ಲಿ ತಮ್ಮ ಅಮೂಲ್ಯ ಸೇವೆಯನ್ನು ಮುಡುಪಾಗಿಟ್ಟ ಶ್ರೀ ಅಂಬಿಗರ ಚೌಡಯ್ಯನವರು ತಮ್ಮ ಬದುಕಿನ ನೀತಿಯಿಂದ, ನಿಷ್ಠೆಯಿಂದ, ತೀಕ್ಷ್ಣ ಖಂಡನೆಯ ಬಂಡಾಯ ವಚನಗಳಿಂದ ಗಮನ ಸೆಳೆದು, ಅವರು ರಚಿಸಿದ ವಚನಗಳಿಗೆ ತಮ್ಮ ಹೆಸರನ್ನೇ ಅಂಕಿತವನ್ನಾಗಿಟ್ಟಿರುವದು ವಿಶೇಷವಾಗಿದೆ. ಸಮಾಜದ ಕೊಳೆಯನ್ನು ತೊಳೆಯುವ ನಿಟ್ಟಿನಲ್ಲಿ ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ಎದ್ದು ಕಾಣುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮ್ಯಾಸ ನಾಯಕ ಬುಡಕಟ್ಟನಲ್ಲಿ ದೀಪಾವಳಿ ಹಬ್ಬದ ಆಚರಣೆ

Published

on

ಭಾರತ ತನ್ನ ಭೌಗೋಳಿಕ ಸ್ವರೂಪದಲ್ಲಿ ವೈವಿಧ್ಯತೆಯನ್ನು ಹೊಂದಿರುವಂತೆ ಅನೇಕ ಬಗೆಯ ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿದೆ.

ದೇಶದ ಪ್ರತಿಯೊಂದು ಸಮುದಾಯವು ಬದುಕಿನ ಕ್ರಮದಲ್ಲಿ ತನ್ನದೇ ಆದ ವೈವಿಧ್ಯತೆಯನ್ನು ಹೊಂದಿದ್ದು ಹಬ್ಬಗಳ ಆಚರಣೆಯಲ್ಲಿಯೂ ಈ ಭಿನ್ನತೆಯನ್ನು ಕಾಣಬಹುದಾಗಿದೆ. ಈಗ ನಡೆಯುತ್ತಿರುವ ದೀಪಾವಳಿ ಹಬ್ಬದ ಆಚರಣೆಯೂ ಇದರಿಂದ ಹೊರತಾಗಿಲ್ಲ. ಇಡೀ ಭಾರತ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸುತ್ತಿದೆ ಎಂಬುದು ಸಾಮಾನ್ಯವಾದ ಹೇಳಿಕೆಯಾಗಿರುತ್ತದೆ.

ದೀಪಾವಳಿ ಎಂದರೆ ದೀಪವನ್ನು ಬೆಳಗಿಸುವ ಹಬ್ಬ. ಜಗದ ಕತ್ತಲೆಯನ್ನು, ಮನದ ಕತ್ತಲೆಯನ್ನು, ಕಳೆಯುವ ಹಬ್ಬ ಎಂಬುದು ಒಂದು ನಂಬಿಕೆಯಾದರೆ ಬಲಿಚಕ್ರರ‍್ತಿಯನ್ನು ವರ್ಷಕೊಮ್ಮೆ ನೆನಪಿಸಿಕೊಳ್ಳುವುದು, ನರಕಾಸುರನನ್ನು ಶ್ರೀ ಕೃಷ್ಣ ಪರಮಾತ್ಮ ಕೊಂದು ಆತನ ಸೆರೆಯಲ್ಲಿದ್ದ ಅಸಂಖ್ಯಾತ ಮಹಿಳೆಯರಿಗೆ ಬಿಡುಗಡೆ ದೊರಕಿಸಿದ ದಿನವಿದು ಎಂದು ನೆನೆಪಿಸಿಕೊಳ್ಳುವುದು ಹೀಗೆಲ್ಲಾ ಪ್ರಚಲಿತ ಪುರಾಣಮೂಲಗಳಿಂದ ಈ ಹಬ್ಬದ ಆಚರಣೆಯ ಸಾಂಕೇತಿಕತೆಯನ್ನು ಅರ್ಥೈಸಲಾಗುತ್ತದೆ.

ಈ ಎರಡೂ ಘಟನೆಗಳನ್ನು ಕುರಿತು ಬೇರೆ ಬೇರೆ ನೆಲೆಯಿಂದ ಯೋಚಿಸಿದಾಗ ಇದನ್ನು ದೇಶದಾದ್ಯಂತ ಎಲ್ಲರೂ ಸಡಗರಿಸಬೇಕೆ? ಆಳುವವರ ಸಡಗರ ಎಲ್ಲರ ಸಡಗರವಾಗಲೇಬೇಕಾದ ಅನಿವಾರ್ಯವೇ? ಎಂಬ ನೆಲೆಗಳಿಂದ ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕಾಗುತ್ತದೆ.

ನಿಸರ್ಗಮೂಲ ಸಿದ್ದಾಂತವನ್ನು ಅನ್ವಯಿಸಿಕೊಂಡರೇ ಬಹುಶಃ ಈ ದೀಪಾವಳಿಯ ತಿಂಗಳು, ಅಂದರೇ ಕಾರ್ತಿಕ ಮಾಸದ ಹವಾಮಾನದಲ್ಲಿ ವಿಶೇಷತೆಯಿದೆ. ಕಾರ್-ಅಂದರೇ ಮಳೆ ಸುರಿಯುವುದು. ಕರ‍್ತೀಕ ಅಂದರೇ ಮಳೆಗಾಲದ ಕೊನೆಯ ದಿನಗಳಿವು, ಹಿಂಗಾರಿನ ಕೊನೆಯ ಮಳೆಗಳು ಸುರಿಯುವ ಮತ್ತು ಇದರೊಂದಿಗೆ ಚಳಿಗಾಲವೂ ಆರಂಭವಾಗುವುದರಿಂದ ಮಂಜುಮುಸುಕಿದ ವಾತಾವರಣವೂ ಜೊತೆಗೂಡಿ ಕತ್ತಲೆಯ ಆಧಿಕ್ಯ ಹೆಚ್ಚು. ಬಹುಶಃ ಈ ಕತ್ತಲೆಯನ್ನು ನಿವಾರಿಸಿಕೊಳ್ಳಲು ಮನೆಮನೆಯ ಮುಂದೆ ದೀಪಗಳನ್ನು ಹಚ್ಚಿ ಬೆಳಕನ್ನು ಕಂಡುಕೊಳ್ಳುವ ಉದ್ದೇಶವೂ ಇರಬಹುದೆನ್ನಿಸುತ್ತದೆ. ಒಟ್ಟಾರೆ ನಾಡಿನಾದ್ಯಂತ ಆಚರಿಸಲಾಗುವ ಈ ದೀಪಾವಳಿ ಹಬ್ಬವನ್ನು ಮ್ಯಾಸಮಂಡಲದಲ್ಲಿಯೂ ಆಚರಿಸಲಾಗುತ್ತದೆ.

ಮ್ಯಾಸಬುಡಕಟ್ಟಿನ ದೇವರು ಕಾಣದ ಲೋಕದವರಲ್ಲ. ಪ್ರಕೃತಿಯ ವಿಶಿಷ್ಟತೆಯನ್ನೇ ದೈವ ಎಂದು ಭಾವಿಸಿ ಪೂಜಿಸುವುದು, ಸೃಷ್ಟಿಗೆ ಕಾರಣವಾಗುವ ತಾಯಿಯನ್ನೇ ಮೊದಲ ದೈವ ಎಂದು ಪೂಜಿಸುವುದು, ತಮಗೆ ಬದುಕನ್ನು ಕಟ್ಟಿಕೊಟ್ಟು ತಮ್ಮನ್ನು ಮುನ್ನಡೆಸಿದ ಹಿರಿಯರನ್ನೇ, ನಾಯಕರನ್ನೇ ತಮ್ಮದೇವರು ಎಂದು ಪೂಜಿಸುವುದು, ಮತ್ತು ತಮ್ಮ ಬದುಕಿಗೆ ಆಧಾರವಾಗಿದ್ದ ಪಶುಸಂಪತ್ತನ್ನೇ ತಮ್ಮ ಹಿರಿಯರೊಂದಿಗೆ ಸಮೀಕರಿಸಿ ದೈವಗಳೆಂದು ಭಾವಿಸಿ ಪೂಜಿಸುವುದು ಈ ಬುಡಕಟ್ಟಿನ ವಿಶೇಷತೆ. ತಮ್ಮ ನಾಯಕ ಅಥವಾ ನಾಯಕಿ ಬಳಸುತ್ತಿದ್ದ ವಸ್ತುವನ್ನು ಬಿದಿರಿನ ಬುಟ್ಟಿಯಲ್ಲಿಟ್ಟು, ಕೆಲವು ಕಡೆ ಸಾಲಿಗ್ರಾಮಗಳನ್ನು ಮತ್ತು ನಾಯಕ/ನಾಯಕಿ ಬಳಸುತ್ತಿದ್ದ ಬಿಲ್ಲು, ಬಾಣ/ ಖಡ್ಗವನ್ನೇ ದೇವರೆಂದು ನಂಬಿ ಪೂಜಿಸುವ ಸಮುದಾಯದಲ್ಲಿ ದೀಪಾವಳಿಯನ್ನು ಇವುಗಳಿಗೆ ಪೂಜೆ ಸಲ್ಲಿಸುವ ಮೂಲಕವೇ ಆಚರಿಸಲಾಗುತ್ತದೆ.

ಮ್ಯಾಸಮಂಡಲದ ಎಲ್ಲಾ ಗುಡಿಕಟ್ಟುಗಳಲ್ಲಿಯೂ ಮತ್ತು ಇದಕ್ಕೆ ಸಂಬಂಧಿಸಿದ ಎತ್ತಿನಗೂಡುಗಳಲ್ಲಿ ಈ ಹಬ್ಬದ ಆಚರಣೆ ನಡೆಯುತ್ತದೆ. ದೀಪಾವಳಿ ಅಮಾವಾಸ್ಯೆಕಳೆದು ಪಾಡ್ಯದ ಸೋಮವಾರ ಹೀರೆಹಳ್ಳಿಯ ದಡ್ಡಿಸೂರನಾಯಕನ ಗುಡಿಗೆ ಈತನಿಂದ ಸಂರಕ್ಷಿಸಲ್ಪಟ್ಟ ದನಕರುಗಳ ಪರಂಪರೆಯಿಂದ ಇಂದಿಗೂ ಉಳಿದು ಬಂದಿರುವ ಆಕಳ ಗೂಡಿನಿಂದ (ಗುಡೇಕೋಟಿ ಬಳಿ ಇರುವ} ಕಿಲಾರಿಗಳು ಮೊಸರು,ತುಪ್ಪವನ್ನು ತಂದು ಸೋಮವಾರ ಸಂಜೆ ಗುಡಿಗೆ ಒಪ್ಪಿಸುತ್ತಾರೆ. ತಮ್ಮ ಹೊಲಗಳಲ್ಲಿ ಬೆಳೆದ ಹಸನಾದ ಸಜ್ಜೆಯತೆನೆಗಳನ್ನು ತಂದು ಒಪ್ಪಿಸುವ ವಾಡಿಕೆಯೂ ಇದೆ. ರಾತ್ರಿಯಿಡಿ ಎಲ್ಲರೂ ಸೇರಿ ಗುಡಿಯಲ್ಲಿ ಹುರುಳಿ, ಗುಗ್ಗರಿ ಬೇಯಿಸಿ ಜೋಳ ಅಥವಾ ಸಜ್ಜೆಯ ಅನ್ನ ಮಾಡಿ ಗೂಡಿನಿಂದ ತಂದ ಮೊಸರನ್ನು ಸೇರಿಸಿ ಬೆಳಗಿನಜಾವ ದಡ್ಡಿಸೂರನಾಯಕನಿಗೆ ನೈವೇದ್ಯ ಮಾಡಲಾಗುತ್ತದೆ.

ರಾತ್ರಿಯಿಡೀ ಉರುಮೆ ವಾದ್ಯದ ಸೇವೆ, ನಾಯಕನನ್ನು ಕುರಿತು ಪದ ಹೇಳುವುದು ನಡೆಯುತ್ತದೆ, ಹೀಗೆ ಗುಡಿಯಲ್ಲಿ ನಡೆಯುವ ಪೂಜೆಯೇ ತಮಗೆ ದೀಪಾವಳಿ ಹಬ್ಬದ ಆಚರಣೆಯಾಗಿದ್ದು ಮನೆ ಮನೆಯ ಮುಂದೆ ದೀಪ ಬೆಳಗಿಸುವ, ರಂಗೋಲಿ ಹಾಕುವ, ಪಟಾಕಿ ಸಿಡಿಸುವ ಆಚರಣೆಗಳು ಇಲ್ಲಿ ಇರುವುದಿಲ್ಲ.
ಕಂಪಳ ದೇವರ ಹಟ್ಟಿಯಲ್ಲಿ ಇದಕ್ಕಿಂತ ಸ್ವಲ್ಪ ಭಿನ್ನವಾಗಿ ಹಬ್ಬದ ಆಚರಣೆ ನಡೆಯುತ್ತದೆ. ಮಾಘ ಮಾಸದಲ್ಲಿ ನಡೆಯುವ ಗುಗ್ಗರಿ ಹಬ್ಬದಲ್ಲಿ ಮಾಡುವಂತೆ ಈ ಸಮಯದಲ್ಲಿಯೂ ಅಮಾವಾಸ್ಯೆ ನಂತರದ ಶುಕ್ರವಾರದಂದು ಪೆಟ್ಟಿ ದೇವರನ್ನು ಗುಡಿಯಿಂದ ತಂದು ಹಟ್ಟಿಯ ಹೊರವಲಯದಲ್ಲಿ ಹೊಸ ಉದಿ/ಪದಿಯನ್ನು ಕಟ್ಟಿ ಇದರಲ್ಲಿ ಕೂರಿಸಿ ಮೂರು ದಿನಗಳ ಹಬ್ಬದ ಆಚರಣೆ ನಡೆಸಲಾಗುತ್ತದೆ.

ತೆಲುಗಿನಲ್ಲಿ ಇದನ್ನು ‘ದುಯಿಲಪಂಡುವ’ ಎಂದು ಕರೆಯಲಾಗುತ್ತದೆ. ಕಂಪಳ ದೇವರ ಪೆಟ್ಟಿಯೊಂದಿಗೆ ಜಗಲೂರು ಪಾಪನಾಯಕನನ್ನು ಸಂಕೇತಿಸುವ ಬಿಲ್ಲು ದೇವರನ್ನೂ ತಂದು ಪೂಜಿಸಲಾಗುತ್ತದೆ. ಆಕಳಗೂಡಿನ ಮೀಸಲು ಮೊಸರು ಮತ್ತು ಬೆಣ್ಣೆಯನ್ನು ಅರ್ಪಿಸುವುದು ಇಲ್ಲಿ ಬಹಳ ವಿಶೇಷವಾದುದು. ಗತಿಸಿದ ಎತ್ತು ಮತ್ತು ಆಕಳಿಂದ ಸಂಗ್ರಹಿಸಿದ ಕೊಂಬನ್ನು ಇಲ್ಲಿ ಬೆಣ್ಣೆಯನ್ನು ಶೇಕರಿಸಲು ಬಳಸಲಾಗುತ್ತದೆ.ಬುಡಕಟ್ಟಿನ ಜನತೆ ತಮಗೆ ಸಿಗುವ ವಸ್ತುಗಳನ್ನೇ ಸಲಕರಣೆಗಳನ್ನಾಗಿ ಬಳಸುವ ವಿಧಾನ ಇಲ್ಲಿ ಗಮನ ಸೆಳೆಯುತ್ತದೆ. ಹೀಗೆ ಸಂಗ್ರಹಿಸಿದ ಬೆಣ್ಣೆಯನ್ನು ಕಾಯಿಸಿ ತುಪ್ಪ ಮಾಡಿ ಪದಿಯಲ್ಲಿ ದೀಪವನ್ನು ಉರಿಸಲಾಗುತ್ತದೆ.ಮೊಸರು,ಜೋಳದ/ಸಜ್ಜೆಯ ಅನ್ನ,ಬಾಳೆಹಣ್ಣು,ಬೆಲ್ಲವನ್ನು ಬೆಳಗಿನಜಾವದಲ್ಲಿ ನೈವೇದ್ಯ,ಮಾಡಲಾಗುತ್ತದೆ.

ಇದರೊಂದಿಗೆ ಎತ್ತುಗಳನ್ನೂ ಹರಿಯಿಸುವುದು, ಮಣೇವು, ಉರಿಯುವ ಪಂಜುಗಳನ್ನೇ ನುಂಗುವುದು ಈ ಹಬ್ಬದ ಪ್ರಮುಖ ಆಚರಣೆಗಳಾಗಿವೆ. ನನ್ನಿವಾಳದ ಕಟ್ಟಿಮನೆಗೆ ಸೇರಿದ ಬಂಗಾರುದೇವರ ಹಟ್ಟಿಯಲ್ಲಿ ದೇವರುಗಳನ್ನು ಮತ್ತು ಬೆಳಗಟ್ಟದ ಸೂರೆಯರಗಾಟನಾಯಕನಿಗೆ ಸಂಬಂಧಿಸಿದಂತೆ, ಬೋಸೇದೇವರ ಹಟ್ಟಿಯ ಬೋಸೇರಂಗಯ್ಯನ ಪೆಟ್ಟಿಯನ್ನು, ದೊಣಮಂಡಲಹಟ್ಟಿಯ ಮಂಡಬೊಮ್ಮದೇವರನ್ನು ಹಟ್ಟಿಯಿಂದ ಹೊರಗೆ ತಂದು ಊರ ಹೊರಗೆ ಹೊಸ ಪದಿಯನ್ನು ಕಟ್ಟಿ, ಗೂಡಿನಿಂದ ಎತ್ತುಗಳನ್ನು ಕರೆಸಿ ಗೌರವಿಸಿ ಪೂಜಿಸುವ ಕ್ರಮವಿದೆ.

ಒಟ್ಟಾರೆ ಈಮ್ಯಾಸಮಂಡಲದ ದೀಪಾವಳಿ ಹಬ್ಬಕ್ಕೆ ಆಯಾ ಗುಂಪಿನವರೆಲ್ಲರೂ ಕಾಸು,ಹಾಲು, ಮೊಸರನ್ನು ಅರ್ಪಿಸಿ ಪಾಲ್ಗೊಳ್ಳುವಿಕೆಯೇ ಇಲ್ಲಿ ಸಾಮುದಾಯಿಕತೆಯ ಮಹತ್ವವನ್ನು ಪಡೆಯುತ್ತದೆ. ಈ ದೀಪಾವಳಿ ಹಬ್ಬದ ಆಚರಣೆಯಲ್ಲಿಎಲ್ಲಾ ಪದಿಗಳಲ್ಲಯೂ ದಾಸೋಹ ವಿಶೇಷವಾಗಿ ನಡೆಯುತ್ತದೆ. ಮುಂಗಾರು ಮಳೆ ಸುರಿದು ಸೊಂಪಾಗಿ ಬೆಳೆದ ಹುಲ್ಲನ್ನು ತಿಂದು ಹಸುಗಳು ಸಾಕಷ್ಟು ಹಾಲನ್ನು ಕೊಡುವುದರಿಂದ ಸಮೃದ್ಧವಾದ ಹಾಲು,ಮೊಸರು ಈ ಹಬ್ಬಕ್ಕೆ ಒದಗುತ್ತದೆ.ಇದನ್ನು ಎಡೆ ಮಾಡಿದ ನಂತರ ಎಲ್ಲರಿಗೂ ದಾಸೋಹದಲ್ಲಿ ನೀಡಲಾಗುತ್ತದೆ.

ಈ ಬುಡಕಟ್ಟಿನ ದೀಪಾವಳಿ ಹಬ್ಬದ ಆಚರಣೆಯ ಹಿಂದೆ ನಮ್ಮ ಭಾರತದ ಪೌರಾಣಿಕ ಕಥನಗಳಾವುವು ಕೇಳಿ ಬರುವುದಿಲ್ಲ.ಮನೆ ಮನೆಯ ಮುಂದೆ ದೀಪಗಳನ್ನು ಹಚ್ಚಿ ಸಡಗರಿಸುವುದು ಇಲ್ಲಿಲ್ಲ. ರಂಗೋಲಿ ಹಾಕುವುದಂತೂ ಬುಡಕಟ್ಟಿನ ನಿಶೇಧಗಳಲ್ಲಿ ಒಂದಾಗಿರುವುದರಿಂದ ಆ ಪ್ರಸ್ತಾಪವೇ ಇಲ್ಲಿಲ್ಲ. ಬದಲಾಗಿ ತಮ್ಮ ಮನೆ ದೇವರಾದ ಪೆಟ್ಟಿಗೆ ದೇವರು/ಬಿಲ್ಲು ದೇವರು/ಎತ್ತುಗಳನ್ನು ಗೌರವಿಸಿ ಪೂಜಿಸುವುದು. ಈ ಮೂಲಕವಾಗಿಯೇ ತಮ್ಮ ಮುಂದಿನ ಬದುಕಿಗೆ ಬೇಕಾದ ಬೆಳಕನ್ನು, ಚೈತನ್ಯವನ್ನು ಕೋರುವುದು ಇಲ್ಲಿ ಮುಖ್ಯವಾಗಿರುತ್ತದೆ.

ತಾನು ಬದುಕಿರುವ ಪರಿಸರ, ತಮಗೆ ಬದುಕನ್ನು ಕಟ್ಟಿಕೊಡುವ ಪ್ರಾದೇಶಿಕತೆ ಮತ್ತು ಭೌತಿಕ ಪ್ರಪಂಚ ಮತ್ತು ತನಗೆ ನೈತಿಕ ಬೆಂಬಲವಾಗಿ ನಿಂತ ತನ್ನ ಸಾಂಸ್ಕೃತಿಕ ಜಗತ್ತು ಈ ಎಲ್ಲವುಗಳ ಮೂಲಕ ಒಡಮೂಡುವ ದೇಸಿತನ ಆಯಾ ಬುಡಕಟ್ಟಿನ ಆಚರಣೆಗಳಿಗೆ ಸೈದ್ಧಾಂತಿಕತೆಯನ್ನು ಒದಗಿಸಿಕೊಡುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಮ್ಯಾಸಬೇಡ ಬುಡಕಟ್ಟಿನ ಈ ದೀಪಾವಳಿ ಆಚರಣೆಯಲ್ಲಿ ಈ ದೇಸಿತನವೇ ಒಡಮೂಡಿರುವುದನ್ನು ಕಾಣಬಹುದಾಗಿದೆ.ಆದಿವಾಸಿಗಳ ಧರ‍್ಮಿಕ ಜಗತ್ತಿನಲ್ಲಿ ಸರ‍್ಪಣಾಭಾವ ಮತ್ತು ಪಾರಂಪರಿಕ ಸಂಬಂಧ ಮುಖ್ಯವಾಗಿರುತ್ತದೆ. ಈ ಆಚರಣೆಗಳನ್ನು ಸಮುದಾಯದ ಸಾಂಸ್ಕೃತಿಕ ಅಸ್ಮಿತೆಗಳು ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending