ನೆಲದನಿ
ನುಡಿಯ ಒಡಲು -07 : ಭಾಷಿಕ ಕ್ರಿಯೆ ಮತ್ತು ಮನುಷ್ಯ ಘನತೆ
- ಡಾ.ಮೇಟಿ ಮಲ್ಲಿಕಾರ್ಜುನ,ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಭಾಗ – 03
ಮನುಷ್ಯ ಘನತೆ ಎಂಬುದು ನೈತಿಕ ಮತ್ತು ತಾತ್ವಿಕ ನಿಲುವಾಗಿದೆ. ಇದು ಹಲವು ನೆಲೆಯ ತಿರುಳುಗಳನ್ನು ಪಡೆದಿಕೊಂಡಿದೆ. ಪ್ರತೀ ತಿರುಳಿನೊಂದಿಗೆ ವಿಭಿನ್ನ ಭಾಷಿಕ ಕ್ರಿಯೆಗಳು ಪ್ರಚೂರಗೊಳ್ಳುತ್ತವೆ. ಮನುಷ್ಯ ಘನತೆ ಎಂಬೀ ಪರಿಕಲ್ಪನೆಗೆ ಪ್ರಾಪ್ತವಾಗುವ ಘನವಾದ ಅರ್ಥವು ಲೋಕಗ್ರಹಿಕೆಯನ್ನು ನೆಲೆಯಾಗಿಸಿಕೊಂಡಿರುತ್ತದೆ.
ಒಂದು ನಿರ್ದಿಷ್ಟ ಸಾಂಸ್ಕೃತಿಕ-ಸಾಮಾಜಿಕ ಗ್ರಹಿಕೆಯೊಂದು ಇಲ್ಲಿ ನೆಲೆಗೊಂಡಿರುತ್ತದೆ. ಅಂದರೆ ಸಮಾಜ/ಸಮುದಾಯದೊಂದಿಗೆ ವ್ಯಕ್ತಿಯೊಬ್ಬ ಹೊಂದಿರುವ ನೈತಿಕತೆಯ ನಿಲುವು ಇದಾಗಿರುತ್ತದೆ. ವ್ಯಕ್ತಿಯ ನೈತಿಕ ಸ್ಥೈರ್ಯವು ಎರಡು ನೆಲೆಯಲ್ಲಿ ವರ್ತಿಸುತ್ತದೆ. ಒಂದು ವೈಯಕ್ತಿಕ ನೆಲೆ ಇದನ್ನು ಬಿಡಿನೆಲೆ ಎನ್ನೋಣ. ಎರಡನೆಯದು ಸಾಮುದಾಯಿಕ ನೆಲೆ ಇದನ್ನು ಇಡಿನೆಲೆ ಎಂದು ಕರೆಯೋಣ. ಈ ಇಡಿ ಮತ್ತು ಬಿಡಿ ನೆಲೆಗಳ ನಡುವಣ ನಂಟಸ್ತಿಕೆ ಪರಸ್ಪರವಾಗಿ ಕಾರ್ಯನಿರ್ವಹಿಸುತ್ತವೆ.
ಹೀಗೆ ಪರಸ್ಪರ ವರ್ತಿಸುವ ಪ್ರಕ್ರಿಯೆಯಲ್ಲಿ ನೈತಿಕ ಮತ್ತು ತಾತ್ವಿಕ ನಿಲುವುಗಳನ್ನು ಒಂದು ಸಮುದಾಯ ಮತ್ತು ಒಬ್ಬ ವ್ಯಕ್ತಿ ಹೇಗೆ ಅನುಸರಿಸಲಾಗುತ್ತದೆ ಎನ್ನುವುದನ್ನು ಮನಗಾಣಬಹುದು. ಘನವಾದ ಅರ್ಥ ಎನ್ನುವುದು ಮಾನವೀಯ ಮೌಲ್ಯಗಳ ಮೂಲಗ್ರಹಿಕೆಗಳಿಂದ ಸಂಚಿತವಾಗಿರುತ್ತದೆ. ನಮ್ಮ ಸಾಮಾಜೀಕರಣ ಪ್ರಕ್ರಿಯೆಯೊಳಗೆಯೇ ಮೈದೆರೆಯುವ ಈ ಗ್ರಹಿಕೆಗಳು, ನಮ್ಮ ಪ್ರಜ್ಞೆಯ ಮೂಲ ನೈತಿಕ ತತ್ವಗಳಾಗಿ ಹೊರಹೊಮ್ಮುತ್ತವೆ.
ಇದು ಇಡಿಯಾಗಿ ಅನಾವರಣಗೊಳ್ಳುವ ನೈತಿಕತೆಯ ವಿನ್ಯಾಸವಾಗಿದೆ. ಈ ಮುಖೇನ ಬಿಡಿನೆಲೆಯ ನೈತಿಕ ದೃಷ್ಟಿಕೋನಗಳು ಏರ್ಪಡುತ್ತವೆ. ಪರಿಣಾಮವಾಗಿ ವ್ಯಕ್ತಿ ಘನತೆಯ ಚಹರೆಗಳನ್ನು ನಿರ್ವಚಿಸುವ ಇಲ್ಲವೇ ಅರ್ಥೈಸುವ ನಡೆಗಳು ಮುನ್ನೆಲೆಗೆ ಬರುತ್ತವೆ. ಇದನ್ನು ಬೇರು ಕಾಂಡ ಮತ್ತು ಚಿಗುರುಗಳ ನಡುವಣ ಸಾವಯವ ಸಂಬಂಧದ ರೂಪಕವನ್ನಾಗಿ ನೋಡಬಹುದು. ಇವುಗಳಿಗೆ ಮಾತೃಕೆಯಾಗಿರುವ ಭೂಮಿ ಇಲ್ಲಿ ಮಹತ್ವವನ್ನು ಪಡೆಯುತ್ತದೆ. ಏಕೆಂದರೆ ವಿಚಾರ ಮತ್ತು ಆಚಾರಗಳು ಕೆಲಸ ಮಾಡುವುದು ಬೀಜ ಮತ್ತು ಮಣ್ಣುಗಳ ನಡುವಿನ ಹದವಾದ ಹೊಂದಾಣಿಕೆ ಎಷ್ಟು ಬಲವಾಗಿರುತ್ತದೆಯೋ ಅದಕ್ಕೆ ಪೂರಕವಾಗಿ ಅದು ಅಷ್ಟೇ ಗಟ್ಟಿಯಾಗಿ ಬೇರೂರುತ್ತದೆ.
ನಾವು ಮಾತ್ನಾಡುವ ಬಹುತೇಕ ಸನ್ನಿವೇಶಗಳಲ್ಲಿ, ವ್ಯಕ್ತಿಗಳ ಮಾತು, ಧೋರಣೆ ಮತ್ತು ವರ್ತನೆಗಳನ್ನು ಕುರಿತು ಟೀಕೆಗಳನ್ನು ಮಾಡುತ್ತೇವೆ ಇಲ್ಲವೇ ಒಂದು ಬಗೆಯ ಹಪಾಹಪಿತನವನ್ನು ತೋರುತ್ತೇವೆ. ನಮ್ಮ ಬದುಕಿನ ಇಡೀ ನುಡಿಗಟ್ಟುಗಳು ಅಂದರೆ ನಮ್ಮ ನಡೆ ನುಡಿಗಳನ್ನು ಬಣ್ಣಿಸುವ ಅಭಿವ್ಯಕ್ತಿಯ ಮಾದರಿಗಳು ಮಾನವೀಯತೆ ಮತ್ತು ಮನುಷ್ಯ ಘನತೆಗೆ ಬಹುದೊಡ್ಡ ಕುತ್ತನ್ನು ತಂದಿವೆ ಎಂದು ಕೊರಗುತ್ತೇವೆ.
ಹಾಗಾಗಿ ನಮ್ಮ ಗತದ ಕೆಲವು ನಿರ್ದಿಷ್ಟ ನಿದರ್ಶನಗಳ ಮೂಲಕ ಈ ಹೊತ್ತಿನ ಆಪತ್ತುಗಳನ್ನು ನಿವಾರಿಸಿಕೊಳ್ಳುವ ಇರಾದೆಯನ್ನು ಹೊಂದುತ್ತೇವೆ. ಕನ್ನಡದ ಸಂದರ್ಭದಲ್ಲಿ ವಚನ ಸಾಹಿತ್ಯ, ದಾಸ ಸಾಹಿತ್ಯ ಹಾಗೂ ಇತ್ಯಾದಿ ನೆಲೆಗಳ ಉಲ್ಲೇಖಗಳ ಮೂಲಕ ವರ್ತಮಾನದ ಓರೆಕೋರೆಗಳನ್ನು ತಿದ್ದುವ ತೀಡುವ ಬಯಕೆಯನ್ನು ವ್ಯಕ್ತಪಡಿಸುತ್ತೇವೆ. ಅತ್ಯಂತ ಸುಲಲಿತವಾಗಿ ನಿರರ್ಗಳವಾಗಿ ವಚನಗಳನ್ನು ದಾಸರ ಪದಗಳನ್ನು ಹಾಗೂ ಗಾದೆ ಮಾತುಗಳನ್ನು ವ್ಯಕ್ತಮಾಡುತ್ತೇವೆ. ಅಂದರೇನಾಯಿತು, ಸದ್ಯದ ಬಿಕ್ಕಟ್ಟುಗಳಿಗೆ ನಮ್ಮ ಗತದಲ್ಲಿ ಪರಿಹಾರಗಳಿವೆ ಎಂದು ನಂಬಲಾಗುತ್ತದೆ.
ಈ ನಂಬಿಕೆಯ ಬೇರುಗಳು ನೆಲೆನಿಂತ ಇದೇ ವಾತಾವರಣದಲ್ಲಿ ನಾವು ಇವತ್ತು ಆರೋಪಿಸುವ ಈ ಸಮೂಹ ವಿರೋಧಿ ಎಂದು ಹೇಳಲಾಗುವ ನಡೆ ನುಡಿಗಳು ಹೇಗೆ ಮೈದಾಳಿದವು ಎಂಬ ಮೂಲಭೂತ ಪ್ರಶ್ನೆಯನ್ನು ನಾವು ಕೇಳುವುದಿಲ್ಲ. ನಮ್ಮ ಸದ್ಯದ ಮಾನವೀಯ ಸಂಬಂಧಗಳ ಫತನಕ್ಕೆ ಕಾರಣವಾಗಿರುವ ಎಲ್ಲ ಬಗೆಯ ನಿರೂಪಣೆಗಳು ಮೈದಾಳುವುದಕ್ಕೆ ಏನೆಲ್ಲ ಪುರಾವೆಗಳನ್ನು ನಾವು ಈಗ ಒದಗಿಸುತ್ತೆವೋ, ಅವುಗಳು ಕೂಡ ನಮ್ಮ ಬೇರುಗಳಲ್ಲಿಯೇ ಅಂತಸ್ಥವಾಗಿರುವ ಅವಗುಣಗಳಾಗಿವೆ. ಈ ಆಯಾಮವನ್ನು ಪರಿಶೀಲಿಸಲು ನಾವು ಕನ್ನಡ ಸಾಹಿತ್ಯದ ಬೇರೆ ಬೇರೆ ಪಠ್ಯಗಳು ಹಾಗೂ ಇತರೆ ನಿರೂಪಣೆಗಳನ್ನು ಆಶ್ರಯಿಸಬೇಕಾಗುತ್ತದೆ.
ಯಾವುದೇ ಗುಣವೊಂದನ್ನು ಬಣ್ಣಿಸುವ ಇಲ್ಲವೇ ವ್ಯಾಖ್ಯಾನಿಸುವ ನಮ್ಮ ತಾತ್ವಿಕ ಚೌಕಟ್ಟುಗಳು ಬಹುತೇಕವಾಗಿ ಸಾಪೇಕ್ಷಿತ ಇಲ್ಲವೇ ಬೈನರಿಯಾಗಿರುತ್ತವೆ. ಈ ಗುಣ ಅವಗುಣಗಳನ್ನು ಬೇರ್ಪಡಿಸುವ ಇರಾದೆಯಿಂದಲೇ ವಚನ, ದಾಸಪದ, ತತ್ವಪದಗಳು ಹಾಗೂ ಗಾದೆ ಮಾತು ಮತ್ತು ಉಕ್ತಿಗಳು ತಲೆಯೆತ್ತಿರುತ್ತವೆ ಎನ್ನುವ ವಾಸ್ತವವನ್ನು ಮರೆತುಬಿಡುತ್ತೇವೆ. ಯಾವುದೇ ಸಾಮಾಜಿಕ ನಡೆ ಹಾಗೂ ಸಾಂಸ್ಕೃತಿಕ ಆಚರಣೆ ಹಲವು ಬಗೆಗಳಲ್ಲಿ ಕಾಲ ಮತ್ತು ದೇಶಗಳಿಗೆ ಅನುಗುಣವಾಗಿ ಬದಲಾಗುತ್ತವೆ.
ಉದಾ.ಗೆ ಮೌಢ್ಯತೆ ಎನ್ನುವ ಪದವನ್ನು ನೆಗೆಟ್ ಮಾಡಲು ವೈಜ್ಞಾನಿಕ ಮನೋಭಾವ ಎಂಬ ಪರಿಕಲ್ಪನೆಯನ್ನು ಬಳಸುತ್ತೇವೆ. ಆದರೆ ಅಚ್ಚರಿಯ ಸಂಗತಿ ಏನೆಂದರೆ, ಯಾವ ವೈಜ್ಞಾನಿಕ ಮನೋಭಾವದಿಂದ ಮೌಢ್ಯತೆಯನ್ನು ನಿರಾಕರಿಸುವ ನಿರ್ಧಾಗಳನ್ನು ಮಾಡುತ್ತೇವೆಯೋ, ಅದರ ಬುಡದಲ್ಲಿಯೇ ಮೌಢ್ಯತೆಯ ಬೀಜಗಳನ್ನು ಹೊಸದಾದ ರೂಪದಲ್ಲಿ ಬಿತ್ತುತ್ತೇವೆ.
ಬಂಡವಾಳಶಾಹಿ ಮತ್ತು ಕಾರ್ಪೊರೇಟ್ ಶಕ್ತಿಗಳು ಪ್ರಾಯೋಜಿಸುವ ಯಾವುದೇ ಜಾಹಿರಾತಿಗೆ ಯಾವ ಬಗೆಯ ವೈಜ್ಞಾನಿಕ ದೃಷ್ಟಿಕೋನಗಳನ್ನು ಲಗತ್ತಿಸಲು ಸಾಧ್ಯ. ಯಾವ ಬಗೆಯ ವೈಚಾರಿಕ ಸ್ಪಷ್ಟೀಕರಣವನ್ನು ನೀಡಲು ಸಾಧ್ಯ. ಅಂದರೆ ಪ್ರಜಾಪ್ರಭುತ್ವ ನೀತಿಗಳ ಮೂಲಕ ವ್ಯಕ್ತಿ ಮತ್ತು ಸಮೂಹಗಳ ಘನತೆಯನ್ನು ಬಲಪಡಿಸುವ ಕೈಂಕರ್ಯದಲ್ಲಿ ತೊಡಗಿರುವಾಗಲೇ, ಬಂಡವಾಳಶಾಹಿ ಪ್ರೇರಿತ ಜಾಹಿರಾತುಗಳು ರಾರಾಜಿಸುತ್ತವೆ.
ಗತದಲ್ಲಿ ಮೈಪಡೆದ ನಡೆ ನುಡಿಗಳ ಕುರಿತ ಉಪದೇಶಗಳು ಯಾವ ಬಗೆಯ ಬಿಕ್ಕಟ್ಟನ್ನು ನಿವಾರಿಸಲು ಇವತ್ತು ಬಳಕೆಯಾಗುತ್ತವೆ. ಹೀಗೆ ಅವುಗಳನ್ನು ಮರುಉಚ್ಚರಿಸುವ ಮೂಲಕ ಯಾವ ಬಗೆಯ ಮನುಷ್ಯ ಮತ್ತು ಸಮೂಹಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆ. ಹಾಗೂ ಈ ನಿರೂಪಣೆಗಳಿಗೆ ನಾವು ಆರೋಪಿಸುವ ಅರ್ಥಗಳು ಎಂತಹವು ಹಾಗೂ ಇವುಗಳ ಮೂಲಕ ಏರ್ಪಡುವ ಸಾಮಾಜಿಕ ಕ್ರಿಯೆಗೂ ಮತ್ತು ಭಾಷಿಕ ಸಂವಹನಕ್ಕೂ ನಡುವೆ ಎಂತಹ ನಂಟಸ್ತಿಕೆ ಉಂಟಾಗುತ್ತದೆ ಅನ್ನುವುದೇ ಈಗಿನ ಸವಾಲು.
ಈ ಮಾತುಗಳ ಮೂಲಕ ಕೇವಲ ಒಂದು ಜಿಜ್ಞಾಸೆಯನ್ನು ಹುಟ್ಟು ಹಾಕುವುದಕ್ಕಾಗಿ ಇಲ್ಲಿ ಮಂಡಿಸುತ್ತಿಲ್ಲ. ಬದಲಾಗಿ ನಮ್ಮ ಬದುಕಿನ ಕ್ರಿಯಾವರ್ತುಲದೊಳಗೆ ಏರ್ಪಡುವ ಬಿಕ್ಕಟ್ಟುಗಳ ಸ್ವರೂಪವನ್ನು ಅರಿಯುವ ದಾರಿಗಳನ್ನು ಕಂಡುಕೊಳ್ಳಬೇಕಿದೆ. ಆ ಮೂಲಕ ಮನುಷ್ಯ ಘನತೆ ಮತ್ತು ಅದನ್ನು ನೆಲೆಯಾಗಿಸಿಕೊಂಡಿರುವ ನಿರೂಪಣೆಗಳ ತಾತ್ಪರ್ಯವನ್ನು ಘನಾರ್ಥದಲ್ಲಿ ಪರಿಭಾವಿಸುವುದಕ್ಕೆ ಸಾಧ್ಯವಾಗುತ್ತದೆ. ಇಲ್ಲವಾದರೆ ನಮ್ಮೀ ಇಡೀ ಬದುಕಿನ ತಾತ್ಪರ್ಯಗಳು ಕೇವಲ ಸಂಕುಚಿತ ಅರ್ಥಗಳ ಆಗರವಾಗುತ್ತದೆ.
ಘನತೆಯ ಸ್ವರೂಪ ಇರುವುದೇ ಬದುಕಿನ ವ್ಯವಹಾರಗಳು ಘನವಾದ ಅರ್ಥವನ್ನು ಪಡೆದುಕೊಳ್ಳುವ ಬಗೆಯಲ್ಲಿ. ಸಮಾನತೆ, ಗೌರವ ಮತ್ತು ಮಾತುಗಳ ನಡುವಿನ ಹೊಂದಾಣಿಕೆ ವಿಚಿತ್ರ ಸ್ವರೂಪದಲ್ಲಿರುತ್ತದೆ. ಉದಾ.ಗೆ ಗಂಡು ಹೆಣ್ಣುಗಳ ನಡುವೆ ಸಮಾನತೆಯನ್ನು ಬಯಸುವವರು ಮಾತುಕತೆಯ ವಿವರಗಳನ್ನು ಬಿಡಿಸಿನೋಡಿದರೆ, ಅಸಮಾನತೆ ಕಣ್ಣಿಗೆ ರಾಚುತ್ತದೆ.
ಪರಸ್ಪರವಾಗಿ ಗೌರವಿಸುವ ವಿಧಾನಗಳು ಹೇಗೆ ಕೆಲಸ ಮಾಡುತ್ತವೆ, ಈ ವಿಧಾನದಲ್ಲಿಯೇ ಅಸಮಾನತೆಯನ್ನು ಹೇಗೆ ಸಮ್ಮತಿಸಲಾಗುತ್ತದೆ ಎಂಬಿತ್ಯಾದಿ ನಿಲುವುಗಳನ್ನು ವಿಶ್ಲೇಷಿಸಿದರೆ, ನಡೆ ನುಡಿಗಳ ಆಳದಲ್ಲಿ ಹುದುಗಿರುವ ಕಂದಕಗಳು ನಿಚ್ಚಳವಾಗಿ ಗೋಚರಿಸುತ್ತೇವೆ. ಇಂತಹ ಕಂದಕಗಳನ್ನು ನಿವಾರಿಸುವ ಹೆಬ್ಬಯಕೆಯಿಂದ ಅವತರಿಸಿದ ವಚನ ಸಾಹಿತ್ಯದಲ್ಲಿಯೂ ಈ ಕಂದಕಗಳು ಹಾಗೇ ಮುಂದುವರೆದಿವೆ.
ಜಾತಿ, ಲಿಂಗ, ಧರ್ಮ ಮೊದಲಾದ ಸಾಮಾಜಿಕ ವಿನ್ಯಾಸಗಳನ್ನು ಕುರಿತಾದ ನಿರೂಪಣೆಗಳು ಇವತ್ತು ನಮಗೆ ಆದರ್ಶದ ವಿನ್ಯಾಸಗಳಾಗಿ ಕಾಣಿಸುತ್ತವೆ. ಹಾಗೂ ವಚನ ಸಾಹಿತ್ಯದ ಶರಣ ಪರಿಕಲ್ಪನೆಯನ್ನು ವಿವರಿಸುವುದು ಹೇಗೆ? ಸಾಮಾಜಿಕ-ಸಾಂಸ್ಕೃತಿಕ ನಿರ್ದಿಷ್ಟತೆಗಳನ್ನು ಮನಗಾಣದೇ, ಅವುಗಳನ್ನು ಕೇವಲ ಆದರ್ಶದ ಮಾದರಿಗಳನ್ನಾಗಿ ಬಿಂಬಿಸುವುದೇ, ಸಂಕುಚಿತಾರ್ಥದ ನಿಲುವುಗಳಾಗಿವೆ.
ಈಗಾಗಲೇ ಹೇಳಿದಂತೆ ಯಾವುದು ವಿಶಾಲ ಮತ್ತು ಘನವಾದ ಅರ್ಥವನ್ನು ಪಡೆಯಲಾರದೋ, ಅಂತಹ ಸನ್ನಿವೇಶಗಳಲ್ಲಿ ಮನಷ್ಯ ಅಥವಾ ಸಮೂಹ ಘನತೆಯ ಚಹರೆಗಳು ಗೌಣವಾಗುತ್ತವೆ. ನೋಡಿ ಯಾವ ಪರಂಪರೆಯನ್ನು ನಾವು ಗೌರವಿಸುತ್ತೇವೆಯೋ, ಆ ಪರಂಪರೆಯಲ್ಲಿಯೇ ಅಪಮಾನದ, ಅಸ್ಪೃಶ್ಯತೆ, ಜಾತೀಯತೆ, ಲೈಂಗಿಕತೆಯ ಕುರಿತ ನಿರೂಪಣೆಗಳು ಯಾಕೇ ಮೈದಾಳುತ್ತವೆ? ಒಂದುಪಕ್ಷ, ಮನುಷ್ಯ ಘನತೆಗೆ ಕುತ್ತು ತರುವ ಇಂತಹ ಅಪಚಾರಗಳನ್ನು ನಿವಾರಿಸಲು ರೂಪಿಸಿದ ತಾತ್ವಿಕ-ನೈತಿಕ ನಿರೂಪಣೆಗಳು ಯಾಕೆ ಫಲಿಸಲಿಲ್ಲ? ಅನ್ನುವ ಪ್ರಶ್ನೆಯನ್ನೂ ಇವತ್ತು ಬಲವಾಗಿಯೇ ಕೇಳುವ ಜರೂರಿದೆ.
ಅಂದರೆ ಮನುಷ್ಯ ಘನತೆಯನ್ನು ರೂಪಿಸುವಂತಹದಲ್ಲ ಬದಲಾಗಿ ನಮ್ಮಲ್ಲಿ ಅಂತಸ್ಥವಾಗಿರುವ ಮಾನವೀಯ ಮೌಲ್ಯಗಳನ್ನು ನಿರಂತರಗೊಳಿಸುವ ಬಗೆಗೆ ಯೋಚಿಸಬೇಕಿದೆ. ಅದಕ್ಕಾಗಿಯೇ ಕುವೆಂಪು ಅವರು ಹೇಳಿದಂತೆ ‘ಹುಟ್ಟುತ್ತ ವಿಶ್ವಮಾನವ ಬೆಳೆಯುತ್ತ ಅಲ್ಪ ಮಾನವ’, ‘ಮಾನವ ಜನುಮ ದೊಡ್ಡದು ಹುಚ್ಚಪ್ಪಗಳಿರಾ ಹಾನಿ ಮಾಡಬೇಡಿ’ ಎಂದು ಹೇಳಿದ ದಾಸರ ಮಾತು ಹಾಗೂ ವಚನಕಾರರು ನೆಲೆಗೊಳಿಸಿದ ‘ಅರಿವೇ ಗುರು’ ಎಂಬ ತತ್ವಗಳು ಏನನ್ನು ಉದ್ದೇಶಿಸಿವೆ ಅಂದರೆ ಮನುಷ್ಯ ಘನತೆ ಎಂಬುದು ನಮ್ಮಲ್ಲಿ ಅಂತಸ್ಥವಾಗಿರುವ ವಿದ್ಯಮಾನವೇ ಹೊರತು ಅದು ಹೊರಗಿನ ಒತ್ತಾಯಗಳಿಂದ ಮಾತ್ರ ನೆಲೆಗೊಳ್ಳುವ ಪ್ರಕ್ರಿಯೆಯಲ್ಲ. ಹಾಗಾಗಿ ನಮ್ಮೊಳಗೆ ಅಂತಸ್ಥಗೊಂಡ ಈ (ಇನ್ನರ್ ಡಿಗ್ನಿಟಿ) ಮೌಲ್ಯವನ್ನು ನಿರಂತರವಾಗಿ ಸಜ್ಜುಗೊಳಿಸುವ ಅವಶ್ಯಕತೆ ಇದ್ದೇ ಇರುತ್ತದೆ.
ಮಾನವ ಮೌಲ್ಯವನ್ನು ಕುರಿತ ಈ ಮೂಲಗ್ರಹಿಕೆಗಳ ಮೂಲಕ ಹೊರಹೊಮ್ಮಿದ ಒಂದು ವ್ಯಾಪಕ ನೈತಿಕ ದೃಷ್ಟಿಕೋನವು ಮನುಷ್ಯ ಘನತೆಯ ಮತ್ತಿತರ ಮೂರು ಪ್ರಮುಖ ಪರಿಕಲ್ಪನೆಗಳಾದ ‘ಹಕ್ಕು, ಕರ್ತವ್ಯ ಮತ್ತು ಗೌರವ’ಗಳನ್ನು ವ್ಯಾಖ್ಯಾನಿಸಬೇಕಾಗುತ್ತದೆ. ಆದರೆ, ವಿಶೇಷವಾಗಿ ಭಾರತದ ಸನ್ನಿವೇಶದಲ್ಲಿ ಈ ಹಕ್ಕು, ಕರ್ತವ್ಯ ಮತ್ತು ಗೌರವಗಳನ್ನು ವ್ಯಾಖ್ಯಾನಿಸುವಾಗ ಸಾಕಷ್ಟು ಅಪಚಾರಗಳು ನಡೆದಿವೆ.
ವರ್ಣ ವ್ಯವಸ್ಥೆ ಮತ್ತು ಜಾತಿ ಶ್ರೇಣೀಕರಣಗಳ ಆಧಾರದ ಮೇಲೆ ಕಾಯಕ ಪರಿಕಲ್ಪನೆಯ ಅರ್ಥದ ಕ್ರಿಯೆಗಳು ಏರ್ಪಡುತ್ತವೆ. ಉದಾ.ಗೆ ‘ಕಾಯಕವೇ ಕೈಲಾಸ’ ಎಂಬೀ ಹೇಳಿಕೆಯ ತಾತ್ಪರ್ಯವೇನು? ಕಾಯಕದ ವ್ಯಾಖ್ಯಾನವೇನು? ಯುರೋಪಿನ ಸಂದರ್ಭದಲ್ಲಿ ಹೇಳಿದ ಡಿಗ್ನಿಟಿ ಆಫ್ ಲೇಬರ್ ಪರಿಕಲ್ಪನೆಯನ್ನು ನಾವು ಹೇಗೆ ಪರಿಭಾವಿಸಿಕೊಂಡಿದ್ದೇವೆ? ಏಕೆಂದರೆ ಕಾಯಕ, ಕೆಲಸ ಇಲ್ಲವೇ ಕಸುಬು ಮೊದಲಾದ ಪರಿಭಾಷೆಗಳನ್ನು ವಿವರಿಸುವಲ್ಲಿ ಸಾಮಾಜಿಕ ಅಂತಸ್ತಿನ ಪ್ರಶ್ನೆಗಳು ಮುನ್ನೆಲೆಗೆ ಬರುತ್ತವೆ. ಅಂದರೆ ಕಾಯಕ ಅನ್ನುವುದು ಕೇವಲ ಶ್ರಮದ ಪರಿಕಲ್ಪನೆ ಮಾತ್ರವಾಗದೇ, ಶ್ರಮ ವಿಭಜನೆಯ ತತ್ವವಾಗಿದೆ.
ಕರಕುಶಲ, ವಾಸ್ತುಶಿಲ್ಪ, ಕೃಷಿ, ನಿರ್ಮಾಣ, ಉತ್ಪಾದನೆಯ ಸ್ವರೂಪ ಇತ್ಯಾದಿ ವಲಯಗಳಲ್ಲಿ ನಾವು ಯಾವ ತಾತ್ವಿಕ ಮತ್ತು ನೈತಿಕ ನಿಲುವುಗಳನ್ನು ಆಧರಿಸಿ ಈ ಶ್ರಮ ವಿಭಜನೆಯನ್ನು ಮಾಡುತ್ತೇವೆ. ಅಂದರೆ, ಜಾತಿ, ಧರ್ಮ, ಲಿಂಗಗಳಂತಹ ಸಾಮಾಜಿಕ ರಚನೆಗಳ ಮೂಲಕ ಶ್ರಮ ಮತ್ತು ಕಾಯಕಗಳ ಸಂಬಂಧವನ್ನು ನಿರ್ವಚಿಸುತ್ತೇವೆ. ಈ ನಿರ್ವಚನೆಯಲ್ಲಿ ಬರೀ ವೈಶಿಷ್ಟ್ಯಗಳನ್ನು ಮಾತ್ರ ಪರಿಗಣಿಸದೇ, ಸಾಮಾಜಿಕ ಕಳಂಕಗಳಾಗಿರುವ ಈ ಜಾತಿ, ಧರ್ಮ ಮತ್ತು ಲಿಂಗಗಳನ್ನು ನೆಲೆಯಾಗಿಸುತ್ತೇವೆ.
ಇವುಗಳಿಗೆ ಅಂಟಿದ ಇದೇ ಕಳಂಕವೇ ಈ ಜಾತಿ, ಧರ್ಮ ಮತ್ತು ಲಿಂಗಗಳಿಗೆ ಅನುಗುಣವಾಗಿ ಆಯಾ ಕಾಯಕಗಳಿಗೆ ಆರೋಪಿಸಲಾಗುತ್ತದೆ. ಡಿಗ್ನಿಟಿ ಆಫ್ ಲೇಬರ್ ಇರಬಹುದು ಇಲ್ಲವೇ ಕಾಯಕವೇ ಕೈಲಾಸ ಇರಬಹುದು, ಮನುಷ್ಯರೊಳಗೆ ಅಂತರ್ನಿಹಿತವಾಗಿರುವ ಘನತೆಯನ್ನು ಮರೆಮಾಚಿ, ನಮ್ಮ ಕಾಯಕವನ್ನು ಕಸುಬುಗಳನ್ನಾಗಿ ರೂಪಿಸಲಾಗುತ್ತದೆ. ಕಸುಬುಗಳೆಂದು ಹೇಳಲು ಕಾರಣ ಈ ಪದವನ್ನು ಸಂಕುಚಿತ ನೆಲೆಯ ರೂಪಕವನ್ನಾಗಿಯೂ ಬಳಸಲಾಗುತ್ತದೆ.
ಈ ಇಡೀ ವಿನ್ಯಾಸವನ್ನು ಸಾಮಾಜಿಕ ಅಸಮಾನ ಅಂತಸ್ತುಗಳನ್ನು ಆಧರಿಸಿಕೊಂಡು ರೂಪಿಸಲಾಗುತ್ತದೆ. ಒಟ್ಟಿನಲ್ಲಿ ಈ ಸಾಮಾಜಿಕ ನಕ್ಷೆಯು ಅಸಮಾನತೆಯನ್ನೇ ತನ್ನ ಮೂಲತತ್ವವನ್ನಾಗಿಸಿಕೊಂಡಿದೆ. ಆದ್ದರಿಂದ ವ್ಯಕ್ತಿಗಳ ಘನತೆ ಅವರ ಅಸ್ತಿತ್ವದಿಂದ ಏರ್ಪಡದೇ, ಕೇವಲ ಸಾಮಾಜಿಕ ಅಸಮಾನ ನೀತಿಯಿಂದ ಉಂಟಾಗುತ್ತವೆ. ಸಹಜವಾಗಿ ನಮ್ಮ ಸಂವಹನ ಕ್ರಿಯೆ, ಮಾತುಕತೆಗಳ ವರಸೆ, ವರ್ತನೆ ಹಾಗೂ ನಾವು ಪರಸ್ಪರ ವ್ಯವಹರಿಸುವಾಗ ಈ ಅಸಮಾನ (ಸಾಮಾಜಿಕ) ವಿನ್ಯಾಸಗಳನ್ನೇ ಪ್ರಧಾನ ತತ್ವಗಳನ್ನಾಗಿಸಿಕೊಂಡು, ನಮ್ಮ ಭಾಷಿಕ ಅರ್ಥ ನಿರ್ವಚನೆಗಳನ್ನು ರೂಪಿಸುತ್ತೇವೆ ಇಲ್ಲವೇ ಅವುಗಳೇ ಘಟಿಸುತ್ತವೆ.
ಪುರುಷಪ್ರಧಾನ ಇಲ್ಲವೇ ಪಿತೃ ಪ್ರಧಾನ ಎನ್ನುವುದು ಸಮಾಜದ ಮೇಲ್ವರ್ಗಗಳ ಪ್ರಾಬಲ್ಯವೇ ಆಗಿರುತ್ತದೆ. ಹಾಗಾಗಿ ಶ್ರಮದ ಮೌಲ್ಯವನ್ನು ನಿರ್ಧರಿಸುವಲ್ಲಿ ಸಾಮಾಜಿಕ ತರತಮ ನೀತಿಗಳು ಬಹುಮುಖ್ಯ ಪರಿಕರಗಳು ಆಗುತ್ತವೆ. ಯಾವ ಕಸುಬಿಗೆ ಯಾವ ಸ್ಥಾನ, ಯಾವ ಜಾತಿಗೆ ಯಾವ ಹಕ್ಕು ಹಾಗೂ ಯಾವ ಸಮೂಹಕ್ಕೆ ಯಾವ ಬಗೆಯ ಗೌರವ ಎಂಬುದನ್ನೆಲ್ಲ ನಿರ್ವಚಿಸಿದ್ದು ಕೇವಲ ವರ್ಣ ವ್ಯವಸ್ಥೆಯ ಪ್ರಭಾವ ಮತ್ತು ಪರಿಣಾಮದಿಂದ.
ಭಾಷೆಯು ನಿರ್ವಾತದಲ್ಲಿ ವ್ಯವಹರಿಸುವುದಿಲ್ಲ ಅದು ಕೂಡ ಇಂತಹ ತರತಮದಿಂದ ಕೂಡಿದ ಸನ್ನಿವೇಶದಲ್ಲಿ ತನ್ನ ಅರ್ಥಗಳನ್ನು ಪ್ರಕಟಿಸುವುದರಿಂದ, ಆಯಾ ಸಾಮಾಜಿಕ ಮನ್ನೆಣೆಗೆ ಅನುಗುಣವಾಗಿ ಅರ್ಥಗಳು ಪ್ರಾಪ್ತವಾಗುತ್ತವೆ. ಪ್ರಜಾಸತ್ತಾತ್ಮಕ ಸವಲತ್ತುಗಳು ಯಾರಿಗೆ? ಹೇಗೆ? ಎಲ್ಲಿ? ಯಾವಾಗ? ಸಿಗುತ್ತವೆ ಎಂಬ ಪ್ರಶ್ನೆಯನ್ನು ಕೇಳಿದಾಗ, ನಮ್ಮ ಹಕ್ಕು, ಕರ್ತವ್ಯ ಮತ್ತು ಗೌರವಗಳೂ ಹಾಗೇ ಅವರವರ ಯೋಗ್ಯತೆ, ಅಂತಸ್ತುಗಳಿಗೆ ಪೂರಕವಾಗಿ ಲಭಿಸುತ್ತವೆ.
ಮತ್ತೇ ಇಲ್ಲಿ ಈ ಯೋಗ್ಯತೆ ಮತ್ತು ಅಂತಸ್ತು ಅನ್ನುವುದು ನಿರ್ಧಾರವಾಗುವುದು ಅದೇ ಸಾಮಾಜಿಕತೆಯ ನಿಲುವುಗಳಿಂದ. ಆದ್ದರಿಂದ ವಿಭಿನ್ನ ಸಮೂಹಗಳ ನಡುವೇ ಅವರವರ ಕಸುಬುಗಳಿಗೆ ಹೊರತಾಗಿ ಕೇವಲ ಮನುಷ್ಯನ ಅಸ್ತಿತ್ವದ ಆಧಾರದ ಮೇಲೆ ಸಾಮಾಜಿಕ ಐಕ್ಯತೆ ಮತ್ತು ಸಾಂಗತ್ಯ ಏರ್ಪಡುವುದಿಲ್ಲ. ಹಕ್ಕು, ಕಾಯಕ (ಕರ್ತವ್ಯ) ಮತ್ತು ಗೌರವಗಳ ನಡುವಣ ಸಂಬಂಧವು ಸಾವಯವ ಸಂಬಂಧವಾಗಬೇಕು. ಅಂದರೆ ಬೇರು ಕಾಂಡ ಮತ್ತು ಚಿಗುರುಗಳ ನಡುವಿನ ಸಾವಯವ ಸಂಬಂಧವೂ ಇಲ್ಲಿ ಏರ್ಪಡಬೇಕು. ಆವಾಗ ಮಾತ್ರ ಸಾಮಾಜಿಕ-ಸಾಂಸ್ಕೃತಿಕ ಸಾಮರಸ್ಯ ಸಾಧ್ಯ.
ಇಂತಹ ಸನ್ನಿವೇಶದಲ್ಲಿ ಪ್ರಕಟವಾಗುವ ಅರ್ಥಗಳು ಸಹಜವಾಗಿ ಸಾಮಾಜಿಕ ಸಾಂಗತ್ಯದ ರೂಪಕವಾಗುತ್ತವೆ. ಇಲ್ಲವಾದಲ್ಲಿ ವಾಕ್ ಮತ್ತು ಅರ್ಥಗಳ ಅಂತರ ಇನ್ನಷ್ಟು ಬಿಗಡಾಯಿಸುತ್ತದೆ. ಕಾಳಿದಾಸ ಇದನ್ನು ‘ವಾಗಾರ್ಥ’ ಎಂಬ ಐಕ್ಯಪದವನ್ನು ಬಳಸಿದ್ದರೂ ವಾಕ್ (ರೂಪು) ಹೆಣ್ಣಾಗಿಯೂ ಮತ್ತು ಅರ್ಥ (ನಿರ್ಧಾರ/ನಿರ್ಣಯ) ಗಂಡಾಗಿಯೂ ಇಲ್ಲಿ ಧ್ವನಿಸುತ್ತದೆ. ಅದಕ್ಕಾಗಿಯೇ ಈ ವಾಗಾರ್ಥವನ್ನು ಪಾರ್ವತಿ ಮತ್ತು ಪರಮೇಶ್ವರರ ಒಗ್ಗಟ್ಟಿನ ರೂಪಕವನ್ನಾಗಿ ಕೊಟ್ಟಿರುವುದು. ಭಾಷಿಕ ರೂಪಗಳಿಗೆ ಸ್ವಾಯತ್ತ ಅಸ್ತಿತ್ವ ಇರುವುದಿಲ್ಲ, ಅವುಗಳ ಅಸ್ತಿತ್ವ ಅರ್ಥ ನಿರ್ಣಯದಲ್ಲಿರುತ್ತದೆ.
ಈ ಅರ್ಥ ನಿರ್ಣಯವನ್ನು ಮಾಡುವುದು ಪುರುಷಪ್ರಧಾನ ವ್ಯವಸ್ಥೆಯಲ್ಲಿಯೇ ನಡೆಯುತ್ತದೆ. ಭಾಷಿಕ/ವಾಕ್ (ಪಾರ್ವತಿ) ರೂಪಗಳಿಗೆ ಅರ್ಥ (ಪರಮೇಶ್ವರ)ಗಳು ಏರ್ಪಡುವುದೇ ಗಂಡು ಕೇಂದ್ರಿತ ಚಿಂತನೆಯಾಗಿದೆ. ಆದ್ದರಿಂದ ಹಕ್ಕು, ಕರ್ತವ್ಯ ಮತ್ತು ಗೌರಗಳು ಪರಸ್ಪರವಾಗಿ ವ್ಯವಹರಿಸದೇ ಸಾಮಾಜಿಕ ಅಧಿಕಾರ ಸಂಬಂಧಗಳ ಮೂಲಕ ಘಟಿಸುತ್ತವೆ. ಇವುಗಳ ನಡುವೇ ಯಾವುದೇ ಸಾವಯವ ಸಂಬಂಧವನ್ನು ನೋಡಲು ಸಾಧ್ಯವಿಲ್ಲ. ಬೇರು, ಕಾಂಡ ಮತ್ತು ಚಿಗುರುಗಳು ಇಲ್ಲಿ ವಿಘಟನೆಯ ರೂಪಕಗಳಾಗಿ ನೆಲೆನಿಂತಿವೆ.
ದಿಟ ಮರದ ಯಾವುದೇ ಒಂದು ಭಾಗಕ್ಕೆ ಪೆಟ್ಟು ಬಿದ್ದರೆ ಇಡೀ ಮರದ ಅಸ್ತಿತ್ವವನ್ನು ನಾಶಪಡಿಸಲಾರದು. ಆದರೆ ಸಾಂಗತ್ಯ ಮತ್ತು ಐಕ್ಯತೆಯ ಪ್ರಶ್ನೆ ಇರುವುದು ಕೇವಲ ಯಾವುದೇ ಒಂದು ಅಂಗದಲ್ಲಿ ಅಲ್ಲ ಅದು ಅಖಂಡತೆಯ ರೂಪಕವಾಗಿದೆ. ಸಮಾಜದ ಅಖಂಡತೆಯನ್ನು ಕಾಪಾಡುವುದೆಂದರೆ, ಅರ್ಥಗಳ ಅಖಂಡತೆಯನ್ನೂ ಕಾಪಾಡುವುದು ಆಗಿರುತ್ತದೆ. ಮನುಷ್ಯ ಘನತೆಯನ್ನು ನಿರೂಪಿಸುವ ಇಲ್ಲವೇ ನಿರ್ವಚಿಸುವ ವಿಧಾನಗಳು ಸಾಮಾಜಿಕ ಅಖಂಡತ್ವದಿಂದ ಘಟಿಸುತ್ತವೆ.
ಇದೇನೂ ಸಾಮಾಜಿಕ ಸಮೀಕರಣದ ಮಾದರಿಯಲ್ಲ ಬದಲಾಗಿ ನಮ್ಮ ನಮ್ಮ ಅಸ್ಮಿತೆ ಮತ್ತು ಅಸ್ತಿತ್ವಗಳ ನಡುವಣ ಸಾಮರಸ್ಯದ ಬಗೆಯಾಗಿದೆ. ಈ ಸಾಮರಸ್ಯವು ಹಕ್ಕು, ಕರ್ತವ್ಯ ಮತ್ತು ಗೌರವಗಳ ನಡುವಿನ ಡಿಸ್ಟಿಂಗ್ಸೆನ್ ಆಗಿರುತ್ತದೆ. ಇದು ಮರದ ಬೇರುಗಳನ್ನು ಬಲಪಡಿಸುವ ಬಗೆಯಾಗಿದೆ. ಈ ಮೂಲಕ ಮನುಷ್ಯ ಘನತೆಯ ಘನವಾದ/ ಇಡಿಯಾದ ಅರ್ಥಗಳು ಮುನ್ನೆಲೆಗೆ ಬರುತ್ತವೆ. ಹಾಗಾಗಿ ಡಿಸ್ಟಿಂಗ್ಸೆನ್ ಎನ್ನುವುದು ಡೈಕಾಟಮಿಯಲ್ಲ ಬದಲಾಗಿ ಅವುಗಳಿಗೆ ಆರೋಪಿಸಲಾಗುವ ಅರ್ಥಗಳ ನಡುವೇ ಅಸಮಾನತೆ ಇರಕೂಡದು ಅಷ್ಟೇ.
ಅಂದರೆ ಸಾಮಾಜಿಕ ಸಾಂಸ್ಕೃತಿಕ ಸಮತೋಲವನ್ನು ಕಾಪಾಡುವ ಬಗೆಯಲ್ಲಿ ವ್ಯಾಖ್ಯಾನಗಳು, ಅರ್ಥ ಸಾಧ್ಯತೆಗಳು ಏರ್ಪಡಬೇಕು. ಹೌದು ಈ ಯಾವ ಪರಿಕಲ್ಪನೆಯೂ ಕೂಡ ಆತ್ಯಂತಿಕವಲ್ಲ ಆದರೆ ಅವುಗಳಿಗೆ ದೊರೆಯಬಹುದಾದ ಸಾಮಾಜಿಕ-ಸಾಂಸ್ಕೃತಿಕ ಮಾನ್ಯತೆಯಲ್ಲಿ ಸಮತೋಲನ ಇರಬೇಕೆಂಬ ಒತ್ತಾಯ ಮಾತ್ರ. ಈ ನಡೆ ಕೇವಲ ರಾಜಕೀಯ ಸರಿತನದ ವಿನ್ಯಾಸವಲ್ಲ. ಇದು ವಾಸ್ತವದಲ್ಲಿ ಸಾಂಸ್ಕೃತಿಕ ಸರಿತನದ ನಿಲುವೂ ಆಗಿದೆ. ಮನುಷ್ಯ ಘನತೆ ಎನ್ನುವುದು ಸಾಂಸ್ಕೃತಿಕ ಸಮತೋಲನ ಮತ್ತು ಸರಿತನದ ವಿದ್ಯಮಾನವಾಗಿದೆ. ಹೊರತು ಅದು ರಾಜಕೀಯ ಮೇಲಾಟದ ವಿನ್ಯಾಸವನ್ನಾಗಿ ಮಾತ್ರ ನೋಡ ಕೂಡದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕವಿತೆ | ನೆನಪು
- ರುದ್ರಪ್ಪ ಹನಗವಾಡಿ
ಅಪ್ಪನನ್ನು ಒಪ್ಪ ಮಾಡಿ
ವರ್ಷಗಳೇ ಕಳೆದವು ಮುವ್ವತ್ತೇಳು
ಇಂದಿರಾಗಾಂಧಿಯ ತುರ್ತು ಪರಿಸ್ಥಿತಿ
ಅರಸರ ಮೀಸಲಾತಿ
ಬಸವಲಿಂಗಪ್ಪನವರ ಬೂಸಾ ಖ್ಯಾತಿ
ಮಲ ಹೊತ್ತು
ಮಲಗಿದ್ದ ಕಾಲಕ್ಕೆ
ಚುರುಕು ಮುಟ್ಟಿಸಿದ ಕಾಲ
ಹರೆಯದ ನನಗೆ
ಕಾಲೇಜ ಮೇಷ್ಟರ ಕೆಲಸ
ಸೂಟು ಬೂಟಿನ ವೇಷ
ಆ ಮೇಲೆ ಅಮಲದಾರಿಕೆ
ಎಲ್ಲ ನಡೆದಾಗಲೇ ಅವ್ವನನ್ನು
ಆಸ್ಪತ್ರೆಗೆ ಸೇರಿಸಿದ್ದು
ಕಾಲ ಕಳೆದು ಕೊಂಡು
ಕೋಲ ಹಿಡಿದದ್ದು
ನಿನ್ನೆ ಮೊನ್ನೆಯಂತೆ
ಬಾಲ್ಯವಿನ್ನು ಉಂಟೆಂಬಂತೆ
ಭಾವಿಸುವಾಗಲೇ ಅವ್ವನ ಸಾವು
ಅದರೊಟ್ಟಿಗೆ ಕಾಯದಾಯಾಸ ತೀರಿಸಲು
ಬಂದರೆ ಬೆಂಗಳೂರಿಗೆ
ರೌಡಿಗಳ ಕಾಟ
ಅಂಬೇಡ್ಕರ್ ಪಟದ ಕೆಳಗೆ
ದೌರ್ಜನ್ಯದ ದಂಡು
ಅಮಾಯಕರಿಗೆ ಗುಂಡು
ಕಂಡುಂಡ ಹಾದಿಯ ಗುಡಿಸಲುಗಳಲ್ಲೀಗ
ಮುಗಿಲು ಮುಟ್ಟೋ ಮಹಲುಗಳು
ಅಂತಲ್ಲಿ
ದೇಶ ವಿದೇಶಗಳ
ಅಹವಾಲುಗಳು
ಅವಿವೇಕಗಳು
ನೋಡ ನೋಡುತ್ತಿದ್ದಂತೆ
ಉಸಿರು ಬಿಗಿಹಿಡಿದ ಜನರ ಒಳಗೆ
ಒಳಪದರಗಳೊಳಗೆ ಕನಸ ಬಿತ್ತಿ
ಹಸಿರ ಹೊನ್ನು ಬಾಚಲು ಹವಣಿಸಿದ
ಬಿಳಿ ಜನರ ಆಟ
ಅರ್ಥವಾಗುವುದೇ ಎಲ್ಲ
ಗೋಣ ನೀಡುವರೆ
ಹೂತಿಟ್ಟ ಗೂಟಕ್ಕೆ ?
( ಚಿಂತಕ ರುದ್ರಪ್ಪ ಹನಗವಾಡಿ ಅವರ ‘ಊರು – ಬಳಗ’ ಕವನ ಸಂಕಲನದಿಂದ ‘ ನೆನಪು ‘ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕೃತಿಯನ್ನು ಫ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ 2013 ರಲ್ಲಿ ಪ್ರಕಿಸಿದೆ.)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ; ಒಂದು ಚಿಂತನೆ
- ಮಹಾಂತೇಶ್.ಬಿ.ನಿಟ್ಟೂರು, ದಾವಣಗೆರೆ
ನಿಜ ಶರಣ ಶ್ರೀ ಅಂಬಿಗರ ಚೌಡಯ್ಯನವರ ಜೀವಿತ ಕಾಲ 12 ನೇ ಶತಮಾನದ ಬಸವಾದಿ ಶರಣರ ಕಾಲದಲ್ಲೇ ಇತ್ತು ಎಂಬುದು ಇತಿಹಾಸಕಾರರ ಸಂಶೋಧನೆಯಿಂದ ತಿಳಿದು ಬರುತ್ತದೆ. ಅವರ ಹುಟ್ಟೂರು ಹಾವೇರಿ ಜಿಲ್ಲೆಯ ಆಗಿನ ಶಿವಪುರ, ಈಗಿನ ಚೌಡಯ್ಯದಾನಪುರ. ಅವರ ತಂದೆಯ ಹೆಸರು ಶ್ರೀ ವಿರೂಪಾಕ್ಷ, ತಾಯಿಯ ಹೆಸರು ಪಂಪಾಂಭಿಕೆ, ಹೆಂಡತಿಯ ಹೆಸರು ಸುಲೋಚನಾ ಹಾಗೂ ಮಗನ ಹೆಸರು ಪುರವಂತ.
ಅಂಬಿಗ ವೃತ್ತಿಯ ಚೌಡಯ್ಯನವರು ಅಲ್ಲಮ ಪ್ರಭು ಮತ್ತು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಇದ್ದ ಒಬ್ಬ ಕ್ರಾಂತಿಕಾರಿ, ದಿಟ್ಟ, ನೇರ, ನಿಷ್ಠುರ ನುಡಿಯ ವಚನಕಾರ. ಕಲ್ಯಾಣ ಕ್ರಾಂತಿಯ ನಂತರ ಇವರು ತಮ್ಮ ವಚನಗಳ ಗಂಟನ್ನು ಹೊತ್ತು ಉಳವಿಗೆ ನಂತರ ತಮ್ಮ ಗ್ರಾಮವಾದ ತುಂಗಭದ್ರಾ ನದಿಯ ದಡದ ಮೇಲಿರುವ ಶಿವಪುರಕ್ಕೆ ಬಂದು ದೋಣಿ ನಡೆಸುವ ವೃತ್ತಿಯಲ್ಲಿ ನಿರತರಾಗಿ ವಚನ ರಚನೆ ಮಾಡಿರುವುದು ತಿಳಿದು ಬರುತ್ತದೆ.
ಚೌಡಯ್ಯನವರು ತಮ್ಮ ಜೀವಿತಾವಧಿಯಲ್ಲಿ ಅನೇಕ ಪವಾಡಗಳನ್ನು ಮಾಡಿರುತ್ತಾರೆ. ಗಿಡಮೂಲಿಕೆ ಔಷಧಿಗಳಿಂದ ಕ್ಷಯ ರೋಗ, ಕುಷ್ಠರೋಗ ಗುಣಪಡಿಸುವುದು, ಹಾವು ಕಚ್ಚಿದವರನ್ನು
ಬದುಕಿಸುವುದು ಇತ್ಯಾದಿ..
ಒಮ್ಮೆ ಗುತ್ತಲದ ಅರಸನು ಬೇಟೆಗಾಗಿ ಈ ಪ್ರದೇಶದಲ್ಲಿ ಸಂಚರಿಸುತ್ತಿದ್ದಾಗ, ಆತನ ಸೇನಾಧಿಪತಿಯು ಹಾವು ಕಚ್ಚಿ ಮೃತಪಟ್ಟನು. ಇದರಿಂದಾಗಿ ಅರಸನಿಗೆ ಅತೀವ ದುಃಖವುಂಟಾಗಿ ರೋಧಿಸತೊಡಗಿದನು. ಆಗ ಆತನ ಸೈನಿಕನೊಬ್ಬನು ಶ್ರೀ ಚೌಡಯ್ಯನವರ ಪವಾಡಗಳ ಬಗ್ಗೆ ವಿವರಿಸಿ ಹೇಳಲಾಗಿ, ಅರಸನು ತನ್ನ ಮೃತ ಸೇನಾಧಿಪತಿಯ ಶರೀರವನ್ನು ಚೌಡಯ್ಯನವರಲ್ಲಿಗೆ ತಂದು ಆತನನ್ನು ಬದುಕಿಸುವಂತೆ ಕೇಳಿಕೊಂಡರು, ಆಗ ಚೌಡಯ್ಯನವರು ಸೇನಾಧಿಪತಿಯನ್ನು ಬದುಕಿಸುತ್ತಾರೆ. ಇದರಿಂದ ಸಂತುಷ್ಟನಾದ ಅರಸನು ಶಿವಪುರದ ಸುತ್ತಲಿನ ಪೂರ್ವ – ಪಶ್ಚಿಮಕ್ಕೆ 14 ಮೈಲು ಹಾಗೂ ಉತ್ತರ – ದಕ್ಷಿಣಕ್ಕೆ 7 ಮೈಲು ಸುತ್ತಳತೆಯ ಭೂಮಿಯನ್ನು ಚೌಡಯ್ಯನವರಿಗೆ ದಾನವಾಗಿ ನೀಡಿದನು.
ಆದರೆ ಚೌಡಯ್ಯನರು ವೈರಾಗ್ಯಶಾಲಿಯು, ಲೌಕಿಕದಲ್ಲಿ ನಿರಾಸಕ್ತಿ ಹೊಂದಿದವರು ಆಗಿದ್ದರಿಂದ, ಅರಸನು ಕೊಡಮಾಡಿದ್ದ ಸಂಪೂರ್ಣ ಜಮೀನನ್ನು ತನ್ನ ಗುರುಗಳಾದ ಶ್ರೀ ಶಿವದೇವರಿಗೆ ದಾನವಾಗಿ ನೀಡಿದರು ಎಂಬ ಉಲ್ಲೇಖವಿದೆ. ಅಂದಿನಿಂದ ಶಿವಪುರ ಗ್ರಾಮಕ್ಕೆ ‘ಚೌಡಯ್ಯದಾನಪುರ’ ಎಂದು ಹೆಸರು ಬರುತ್ತದೆ. ಮುಂದೆ ಚೌಡಯ್ಯನರು ಅಲ್ಲಿ ದೇಹ ತ್ಯಾಗ ಮಾಡಿದ್ದರಿಂದ ತುಂಗಭದ್ರಾ ನದಿಯ ದಡದಲ್ಲಿ ಈಗಲೂ ಚೌಡಯ್ಯನವರ ಸಮಾಧಿ ಗದ್ದುಗೆ ಇದೆ.
ಭ್ರಮಾಲೋಕದಲ್ಲಿ ವಿಹರಿಸುತ್ತಾ ಕುಳಿತ, ಆಡಂಬರದಲ್ಲಿ ಅಡ್ಡಾದಿಡ್ಡಿ ಅಡ್ಡಾಡುವ ಮಂದಿಯ ಕಪಾಳಕ್ಕೆ ಹೊಡೆದು ಎಚ್ಚರಿಸುವಂತಿವೆ ಚೌಡಯ್ಯನವರ ವಚನಗಳು. ಧಾರ್ಮಿಕ ಮೂಢನಂಬಿಕೆ ಬಿತ್ತುವವರಿಗೆ, ಸ್ವಾರ್ಥಿಗಳಾಗಿ ಬದುಕುವವರಿಗೆ, ಮುಖವಾಡ ಹಾಕಿ ಮಂಕು ಬೂದಿ ಎರಚುವವರಿಗೆ ಸಿಂಹ ಸ್ವಪ್ನದಂತೆ ಬೆಚ್ಚಿ ಬೀಳಿಸುತ್ತವೆ ನಿಜ ಶರಣ ಅಂಬಿಗರ ಚೌಡಯ್ಯನವರ ವಚನಗಳು. ಇದಕ್ಕೆ ತಾತ್ಪೂರ್ತಿಕವಾಗಿ ಕೆಲವು ವಚನಗಳು ಈ ಕೆಳಗಿನಂತಿವೆ;
“ಅಂಬಿಗ ಅಂಬಿಗ ಎಂದು ಕುಂದ ನುಡಿಯದಿರು/ನಂಬಿದರೆ ಒಂದೇ ಹುಟ್ಟಲಿ/ಕಡೆಯ ಹಾಯಿಸುವೆನೆಂದಾತನಂಬಿಗರ/ಚೌಡಯ್ಯ ನಿಜಶರಣನು”
ಈ ಮೇಲಿನ ವಚನ ಶ್ರೀ ಅಂಬಿಗರ ಚೌಡಯ್ಯನವರ ಸ್ವಾಭಿಮಾನ, ಧೈರ್ಯ, ನೇರ, ನಿರ್ಭಿಡೆಯ ವ್ಯಕ್ತಿತ್ವದ ಪ್ರತೀಕವಾಗಿದೆ.
ಹನ್ನೆರಡನೇ ಶತಮಾನದ ಸಂದರ್ಭದಲ್ಲಿ ಜಾತಿ ಮತ್ತು ವರ್ಗ ವ್ಯವಸ್ಥೆ ಎಷ್ಟರಮಟ್ಟಿಗಿತ್ತು ಎಂಬುದನ್ನು ಈ ವಚನ ಸೂಚಿಸುತ್ತದೆ. ಅಂತಹ ವಿಚಿತ್ರ, ವಿಕ್ಷಿಪ್ತ ಸನ್ನಿವೇಶದಲ್ಲಿ ಬಸವಾದಿ ಶರಣರು ಜಾತೀಯತೆ, ವರ್ಗ – ವರ್ಣ ವ್ಯವಸ್ಥೆಯ ವಿರುದ್ಧ ಬೃಹತ್ ಚಳುವಳಿಯನ್ನು ಕೈಗೊಂಡಾಗ ಅಂಬಿಗರ ಚೌಡಯ್ಯನವರ ಸತ್ಯನಿಷ್ಠೆ, ಪ್ರಾಮಾಣಿಕತೆಯ ವಚನಗಳು ಪ್ರಖರವಾಗಿ ಕಾಣಿಸುತ್ತವೆ. ಕೆಲವು ಢೋಂಗಿ ಭಕ್ತರಿಗೆ, ಕಪಟ ಸನ್ಯಾಸಿಗಳಿಗೆ ತನ್ನ ಖಾರವಾದ ವಚನಗಳ ಮೂಲಕ ಚುರುಕು ಮುಟ್ಟಿಸುತ್ತಾರೆ.
ಆಡಂಬರ ಮತ್ತು ದುರಾಸೆಯ ಜನರ ಮನಸ್ಥಿತಿ ಕಂಡು ಕೆಂಡಾಮಂಡಲವಾಗಿ ಪ್ರಸ್ತುತ ಪಡಿಸಿದ ಒಂದು ವಚನ ಇಂತಿದೆ;
“ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಕಾಳೋಗರನ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹಾರುವ ಪಕ್ಷಿಯನು/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೆಬ್ಬುಲಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೊಯ್ವ ಹೆಮ್ಮಾರಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಬರುವ ಉರಿ ಬಾಣವನು/ಇಂತೆಲ್ಲವನು ಒಂದೇ ಮಂತ್ರದಲ್ಲಿ ನಿಲ್ಲಿಸಬಹುದು;/ಲೋಭವೆಂಬ ಗ್ರಹಣ ಹಿಡಿದವರ ಏತರಿಂದಲೂ/ನಿಲ್ಲಿಸಲಾಗದು/ಈ ಲೋಭಕ್ಕೆ ದಾರಿದ್ರ್ಯವೇ ಔಷಧವು;/ಹೇಳಿದರೆ ಕೇಳರು, ತಾವು ತಿಳಿಯರು/ಶಾಸ್ತ್ರವ ನೋಡರು, ಭಕ್ತಿಯ ಹಿಡಿಯರು/ಇಂತಹ ಗೊಡ್ಡು ಮೂಳ ಹೊಲೆಯರಿಗೆ/ಕರ್ಮವೆಂಬ ಶರದ್ಧಿಯಲ್ಲಿ ಬಿದ್ದು ಹೊರಳಾಡುವುದೇ/ಸತ್ಯವೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು”
ಸಂಸಾರದ ಜಂಜಾಟದಲ್ಲಿ ಬಿದ್ದು ಒದ್ದಾಡುತ್ತಾ ಶಿವನನ್ನು ಮರೆತು ಹತ್ತು ಹಲವು ಚಿಂತೆಯಲ್ಲಿ ಮುಳುಗಿರುವ ಶವ ಮುಖದ ಜನರ ಸ್ಥಿತಿ-ಗತಿಯನ್ನು ಅರ್ಥಗರ್ಭಿತವಾಗಿ ಸಾದರಪಡಿಸುವ ಒಂದು ವಚನ ಇಂತಿದೆ;
“ಬಡತನಕೆ ಉಂಬುವ ಚಿಂತೆ/ಉಣಲಾದಡೆ ಉಡುವ ಚಿಂತೆ/ಉಡಲಾದಡೆ ಇಡುವ ಚಿಂತೆ/ಇಡಲಾದಡೆ ಹೆಂಡಿರ ಚಿಂತೆ/ಹೆಂಡಿರಾದರೆ ಮಕ್ಕಳ ಚಿಂತೆ/ಮಕ್ಕಳಾದಡೆ ಬದುಕಿನ ಚಿಂತೆ/ಬದುಕಾದಡೆ ಕೇಡಿನ ಚಿಂತೆ/ಕೇಡಾದಡೆ ಮರಣದ ಚಿಂತೆ/ಇಂತೀ ಹಲವು ಚಿಂತೆಯಲ್ಲಿಪ್ಪವರ ಕಂಡೆನು/ಶಿವನ ಚಿಂತೆಯಲ್ಲಿದ್ದಾತರೊಬ್ಬರನೂ ಕಾಣೆನೆಂದಾತ/ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು!”
ಸಮಯದ ಸದ್ಬಳಕೆ ಮಾಡಿಕೊಂಡು ಕಾಯಕ ಮಾಡುತ್ತಾ ಶಿವಭಕ್ತರಾಗಿ, ಜೀವನ ಪಾವನವಾಗಿಸುವಂತೆ ಕರೆ ನೀಡುವ ಒಂದು ವಚನ ಇಂತಿದೆ;
“ಗಾಳಿ ಬಿಟ್ಟಾಗ ತೂರಿಕೊಳ್ಳಿರಯ್ಯ/ಗಾಳಿ ನಿಮ್ಮ ಅಧೀನವಲ್ಲ ಕಂಡಯ್ಯ/ನಾಳೆ ತೂರಿಹೆನೆಂದಡಿಲ್ಲ ಕಂಡಯ್ಯ/ಶಿವಶರಣೆ ಎಂಬುದೊಂದು ಗಾಳಿ ಬಿಟ್ಟಲ್ಲಿ/ಬೇಗ ತೂರೆಂದನಂಬಿಗರ ಚೌಡಯ್ಯ”
ಕಾವಿ ಬಟ್ಟೆ ತೊಟ್ಟು, ಭಿಕ್ಷೆಗಾಗಿ ಜೋಳಿಗೆ ಹಾಕಿದವರೆಲ್ಲರೂ ಜಂಗಮರು, ಗುರುಗಳಾಗಲಾರರು ಎಂಬುದನ್ನು ವಿಡಂಬಿಸುವ ಒಂದು ವಚನ ಇಂತಿದೆ;
“ಕಂಥೆ ತೊಟ್ಟವ ಗುರುವಲ್ಲ/ಕಾವಿ ಹೊದ್ದವ ಜಂಗಮನಲ್ಲ/ಶೀಲ ಕಟ್ಟಿದವ ಶಿವಭಕ್ತನಲ್ಲ/ನೀರು ತೀರ್ಥವಲ್ಲ/ಕೂಳು ಪ್ರಸಾದವಲ್ಲ/ಹೌದೆಂಬವನ ಬಾಯ ಮೇಲೆ/ಅರ್ಧ ಮಣದ ಪಾದರಕ್ಷೆಯ ತೆಗೆದುಕೊಂಡು/ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ/ಟೊಕ ಟೊಕನೆ ಹೊಡೆ ಎಂದಾತ/ನಮ್ಮ ಅಂಬಿಗರ ಚೌಡಯ್ಯ”
ಹೀಗೆ ಬಸವಾದಿ ಶರಣರ ಸಮಾಜ ಸುಧಾರಣಾ ಚಳವಳಿಯಲ್ಲಿ ತಮ್ಮ ಅಮೂಲ್ಯ ಸೇವೆಯನ್ನು ಮುಡುಪಾಗಿಟ್ಟ ಶ್ರೀ ಅಂಬಿಗರ ಚೌಡಯ್ಯನವರು ತಮ್ಮ ಬದುಕಿನ ನೀತಿಯಿಂದ, ನಿಷ್ಠೆಯಿಂದ, ತೀಕ್ಷ್ಣ ಖಂಡನೆಯ ಬಂಡಾಯ ವಚನಗಳಿಂದ ಗಮನ ಸೆಳೆದು, ಅವರು ರಚಿಸಿದ ವಚನಗಳಿಗೆ ತಮ್ಮ ಹೆಸರನ್ನೇ ಅಂಕಿತವನ್ನಾಗಿಟ್ಟಿರುವದು ವಿಶೇಷವಾಗಿದೆ. ಸಮಾಜದ ಕೊಳೆಯನ್ನು ತೊಳೆಯುವ ನಿಟ್ಟಿನಲ್ಲಿ ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ಎದ್ದು ಕಾಣುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಮ್ಯಾಸ ನಾಯಕ ಬುಡಕಟ್ಟನಲ್ಲಿ ದೀಪಾವಳಿ ಹಬ್ಬದ ಆಚರಣೆ
ಭಾರತ ತನ್ನ ಭೌಗೋಳಿಕ ಸ್ವರೂಪದಲ್ಲಿ ವೈವಿಧ್ಯತೆಯನ್ನು ಹೊಂದಿರುವಂತೆ ಅನೇಕ ಬಗೆಯ ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿದೆ.
ದೇಶದ ಪ್ರತಿಯೊಂದು ಸಮುದಾಯವು ಬದುಕಿನ ಕ್ರಮದಲ್ಲಿ ತನ್ನದೇ ಆದ ವೈವಿಧ್ಯತೆಯನ್ನು ಹೊಂದಿದ್ದು ಹಬ್ಬಗಳ ಆಚರಣೆಯಲ್ಲಿಯೂ ಈ ಭಿನ್ನತೆಯನ್ನು ಕಾಣಬಹುದಾಗಿದೆ. ಈಗ ನಡೆಯುತ್ತಿರುವ ದೀಪಾವಳಿ ಹಬ್ಬದ ಆಚರಣೆಯೂ ಇದರಿಂದ ಹೊರತಾಗಿಲ್ಲ. ಇಡೀ ಭಾರತ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸುತ್ತಿದೆ ಎಂಬುದು ಸಾಮಾನ್ಯವಾದ ಹೇಳಿಕೆಯಾಗಿರುತ್ತದೆ.
ದೀಪಾವಳಿ ಎಂದರೆ ದೀಪವನ್ನು ಬೆಳಗಿಸುವ ಹಬ್ಬ. ಜಗದ ಕತ್ತಲೆಯನ್ನು, ಮನದ ಕತ್ತಲೆಯನ್ನು, ಕಳೆಯುವ ಹಬ್ಬ ಎಂಬುದು ಒಂದು ನಂಬಿಕೆಯಾದರೆ ಬಲಿಚಕ್ರರ್ತಿಯನ್ನು ವರ್ಷಕೊಮ್ಮೆ ನೆನಪಿಸಿಕೊಳ್ಳುವುದು, ನರಕಾಸುರನನ್ನು ಶ್ರೀ ಕೃಷ್ಣ ಪರಮಾತ್ಮ ಕೊಂದು ಆತನ ಸೆರೆಯಲ್ಲಿದ್ದ ಅಸಂಖ್ಯಾತ ಮಹಿಳೆಯರಿಗೆ ಬಿಡುಗಡೆ ದೊರಕಿಸಿದ ದಿನವಿದು ಎಂದು ನೆನೆಪಿಸಿಕೊಳ್ಳುವುದು ಹೀಗೆಲ್ಲಾ ಪ್ರಚಲಿತ ಪುರಾಣಮೂಲಗಳಿಂದ ಈ ಹಬ್ಬದ ಆಚರಣೆಯ ಸಾಂಕೇತಿಕತೆಯನ್ನು ಅರ್ಥೈಸಲಾಗುತ್ತದೆ.
ಈ ಎರಡೂ ಘಟನೆಗಳನ್ನು ಕುರಿತು ಬೇರೆ ಬೇರೆ ನೆಲೆಯಿಂದ ಯೋಚಿಸಿದಾಗ ಇದನ್ನು ದೇಶದಾದ್ಯಂತ ಎಲ್ಲರೂ ಸಡಗರಿಸಬೇಕೆ? ಆಳುವವರ ಸಡಗರ ಎಲ್ಲರ ಸಡಗರವಾಗಲೇಬೇಕಾದ ಅನಿವಾರ್ಯವೇ? ಎಂಬ ನೆಲೆಗಳಿಂದ ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕಾಗುತ್ತದೆ.
ನಿಸರ್ಗಮೂಲ ಸಿದ್ದಾಂತವನ್ನು ಅನ್ವಯಿಸಿಕೊಂಡರೇ ಬಹುಶಃ ಈ ದೀಪಾವಳಿಯ ತಿಂಗಳು, ಅಂದರೇ ಕಾರ್ತಿಕ ಮಾಸದ ಹವಾಮಾನದಲ್ಲಿ ವಿಶೇಷತೆಯಿದೆ. ಕಾರ್-ಅಂದರೇ ಮಳೆ ಸುರಿಯುವುದು. ಕರ್ತೀಕ ಅಂದರೇ ಮಳೆಗಾಲದ ಕೊನೆಯ ದಿನಗಳಿವು, ಹಿಂಗಾರಿನ ಕೊನೆಯ ಮಳೆಗಳು ಸುರಿಯುವ ಮತ್ತು ಇದರೊಂದಿಗೆ ಚಳಿಗಾಲವೂ ಆರಂಭವಾಗುವುದರಿಂದ ಮಂಜುಮುಸುಕಿದ ವಾತಾವರಣವೂ ಜೊತೆಗೂಡಿ ಕತ್ತಲೆಯ ಆಧಿಕ್ಯ ಹೆಚ್ಚು. ಬಹುಶಃ ಈ ಕತ್ತಲೆಯನ್ನು ನಿವಾರಿಸಿಕೊಳ್ಳಲು ಮನೆಮನೆಯ ಮುಂದೆ ದೀಪಗಳನ್ನು ಹಚ್ಚಿ ಬೆಳಕನ್ನು ಕಂಡುಕೊಳ್ಳುವ ಉದ್ದೇಶವೂ ಇರಬಹುದೆನ್ನಿಸುತ್ತದೆ. ಒಟ್ಟಾರೆ ನಾಡಿನಾದ್ಯಂತ ಆಚರಿಸಲಾಗುವ ಈ ದೀಪಾವಳಿ ಹಬ್ಬವನ್ನು ಮ್ಯಾಸಮಂಡಲದಲ್ಲಿಯೂ ಆಚರಿಸಲಾಗುತ್ತದೆ.
ಮ್ಯಾಸಬುಡಕಟ್ಟಿನ ದೇವರು ಕಾಣದ ಲೋಕದವರಲ್ಲ. ಪ್ರಕೃತಿಯ ವಿಶಿಷ್ಟತೆಯನ್ನೇ ದೈವ ಎಂದು ಭಾವಿಸಿ ಪೂಜಿಸುವುದು, ಸೃಷ್ಟಿಗೆ ಕಾರಣವಾಗುವ ತಾಯಿಯನ್ನೇ ಮೊದಲ ದೈವ ಎಂದು ಪೂಜಿಸುವುದು, ತಮಗೆ ಬದುಕನ್ನು ಕಟ್ಟಿಕೊಟ್ಟು ತಮ್ಮನ್ನು ಮುನ್ನಡೆಸಿದ ಹಿರಿಯರನ್ನೇ, ನಾಯಕರನ್ನೇ ತಮ್ಮದೇವರು ಎಂದು ಪೂಜಿಸುವುದು, ಮತ್ತು ತಮ್ಮ ಬದುಕಿಗೆ ಆಧಾರವಾಗಿದ್ದ ಪಶುಸಂಪತ್ತನ್ನೇ ತಮ್ಮ ಹಿರಿಯರೊಂದಿಗೆ ಸಮೀಕರಿಸಿ ದೈವಗಳೆಂದು ಭಾವಿಸಿ ಪೂಜಿಸುವುದು ಈ ಬುಡಕಟ್ಟಿನ ವಿಶೇಷತೆ. ತಮ್ಮ ನಾಯಕ ಅಥವಾ ನಾಯಕಿ ಬಳಸುತ್ತಿದ್ದ ವಸ್ತುವನ್ನು ಬಿದಿರಿನ ಬುಟ್ಟಿಯಲ್ಲಿಟ್ಟು, ಕೆಲವು ಕಡೆ ಸಾಲಿಗ್ರಾಮಗಳನ್ನು ಮತ್ತು ನಾಯಕ/ನಾಯಕಿ ಬಳಸುತ್ತಿದ್ದ ಬಿಲ್ಲು, ಬಾಣ/ ಖಡ್ಗವನ್ನೇ ದೇವರೆಂದು ನಂಬಿ ಪೂಜಿಸುವ ಸಮುದಾಯದಲ್ಲಿ ದೀಪಾವಳಿಯನ್ನು ಇವುಗಳಿಗೆ ಪೂಜೆ ಸಲ್ಲಿಸುವ ಮೂಲಕವೇ ಆಚರಿಸಲಾಗುತ್ತದೆ.
ಮ್ಯಾಸಮಂಡಲದ ಎಲ್ಲಾ ಗುಡಿಕಟ್ಟುಗಳಲ್ಲಿಯೂ ಮತ್ತು ಇದಕ್ಕೆ ಸಂಬಂಧಿಸಿದ ಎತ್ತಿನಗೂಡುಗಳಲ್ಲಿ ಈ ಹಬ್ಬದ ಆಚರಣೆ ನಡೆಯುತ್ತದೆ. ದೀಪಾವಳಿ ಅಮಾವಾಸ್ಯೆಕಳೆದು ಪಾಡ್ಯದ ಸೋಮವಾರ ಹೀರೆಹಳ್ಳಿಯ ದಡ್ಡಿಸೂರನಾಯಕನ ಗುಡಿಗೆ ಈತನಿಂದ ಸಂರಕ್ಷಿಸಲ್ಪಟ್ಟ ದನಕರುಗಳ ಪರಂಪರೆಯಿಂದ ಇಂದಿಗೂ ಉಳಿದು ಬಂದಿರುವ ಆಕಳ ಗೂಡಿನಿಂದ (ಗುಡೇಕೋಟಿ ಬಳಿ ಇರುವ} ಕಿಲಾರಿಗಳು ಮೊಸರು,ತುಪ್ಪವನ್ನು ತಂದು ಸೋಮವಾರ ಸಂಜೆ ಗುಡಿಗೆ ಒಪ್ಪಿಸುತ್ತಾರೆ. ತಮ್ಮ ಹೊಲಗಳಲ್ಲಿ ಬೆಳೆದ ಹಸನಾದ ಸಜ್ಜೆಯತೆನೆಗಳನ್ನು ತಂದು ಒಪ್ಪಿಸುವ ವಾಡಿಕೆಯೂ ಇದೆ. ರಾತ್ರಿಯಿಡಿ ಎಲ್ಲರೂ ಸೇರಿ ಗುಡಿಯಲ್ಲಿ ಹುರುಳಿ, ಗುಗ್ಗರಿ ಬೇಯಿಸಿ ಜೋಳ ಅಥವಾ ಸಜ್ಜೆಯ ಅನ್ನ ಮಾಡಿ ಗೂಡಿನಿಂದ ತಂದ ಮೊಸರನ್ನು ಸೇರಿಸಿ ಬೆಳಗಿನಜಾವ ದಡ್ಡಿಸೂರನಾಯಕನಿಗೆ ನೈವೇದ್ಯ ಮಾಡಲಾಗುತ್ತದೆ.
ರಾತ್ರಿಯಿಡೀ ಉರುಮೆ ವಾದ್ಯದ ಸೇವೆ, ನಾಯಕನನ್ನು ಕುರಿತು ಪದ ಹೇಳುವುದು ನಡೆಯುತ್ತದೆ, ಹೀಗೆ ಗುಡಿಯಲ್ಲಿ ನಡೆಯುವ ಪೂಜೆಯೇ ತಮಗೆ ದೀಪಾವಳಿ ಹಬ್ಬದ ಆಚರಣೆಯಾಗಿದ್ದು ಮನೆ ಮನೆಯ ಮುಂದೆ ದೀಪ ಬೆಳಗಿಸುವ, ರಂಗೋಲಿ ಹಾಕುವ, ಪಟಾಕಿ ಸಿಡಿಸುವ ಆಚರಣೆಗಳು ಇಲ್ಲಿ ಇರುವುದಿಲ್ಲ.
ಕಂಪಳ ದೇವರ ಹಟ್ಟಿಯಲ್ಲಿ ಇದಕ್ಕಿಂತ ಸ್ವಲ್ಪ ಭಿನ್ನವಾಗಿ ಹಬ್ಬದ ಆಚರಣೆ ನಡೆಯುತ್ತದೆ. ಮಾಘ ಮಾಸದಲ್ಲಿ ನಡೆಯುವ ಗುಗ್ಗರಿ ಹಬ್ಬದಲ್ಲಿ ಮಾಡುವಂತೆ ಈ ಸಮಯದಲ್ಲಿಯೂ ಅಮಾವಾಸ್ಯೆ ನಂತರದ ಶುಕ್ರವಾರದಂದು ಪೆಟ್ಟಿ ದೇವರನ್ನು ಗುಡಿಯಿಂದ ತಂದು ಹಟ್ಟಿಯ ಹೊರವಲಯದಲ್ಲಿ ಹೊಸ ಉದಿ/ಪದಿಯನ್ನು ಕಟ್ಟಿ ಇದರಲ್ಲಿ ಕೂರಿಸಿ ಮೂರು ದಿನಗಳ ಹಬ್ಬದ ಆಚರಣೆ ನಡೆಸಲಾಗುತ್ತದೆ.
ತೆಲುಗಿನಲ್ಲಿ ಇದನ್ನು ‘ದುಯಿಲಪಂಡುವ’ ಎಂದು ಕರೆಯಲಾಗುತ್ತದೆ. ಕಂಪಳ ದೇವರ ಪೆಟ್ಟಿಯೊಂದಿಗೆ ಜಗಲೂರು ಪಾಪನಾಯಕನನ್ನು ಸಂಕೇತಿಸುವ ಬಿಲ್ಲು ದೇವರನ್ನೂ ತಂದು ಪೂಜಿಸಲಾಗುತ್ತದೆ. ಆಕಳಗೂಡಿನ ಮೀಸಲು ಮೊಸರು ಮತ್ತು ಬೆಣ್ಣೆಯನ್ನು ಅರ್ಪಿಸುವುದು ಇಲ್ಲಿ ಬಹಳ ವಿಶೇಷವಾದುದು. ಗತಿಸಿದ ಎತ್ತು ಮತ್ತು ಆಕಳಿಂದ ಸಂಗ್ರಹಿಸಿದ ಕೊಂಬನ್ನು ಇಲ್ಲಿ ಬೆಣ್ಣೆಯನ್ನು ಶೇಕರಿಸಲು ಬಳಸಲಾಗುತ್ತದೆ.ಬುಡಕಟ್ಟಿನ ಜನತೆ ತಮಗೆ ಸಿಗುವ ವಸ್ತುಗಳನ್ನೇ ಸಲಕರಣೆಗಳನ್ನಾಗಿ ಬಳಸುವ ವಿಧಾನ ಇಲ್ಲಿ ಗಮನ ಸೆಳೆಯುತ್ತದೆ. ಹೀಗೆ ಸಂಗ್ರಹಿಸಿದ ಬೆಣ್ಣೆಯನ್ನು ಕಾಯಿಸಿ ತುಪ್ಪ ಮಾಡಿ ಪದಿಯಲ್ಲಿ ದೀಪವನ್ನು ಉರಿಸಲಾಗುತ್ತದೆ.ಮೊಸರು,ಜೋಳದ/ಸಜ್ಜೆಯ ಅನ್ನ,ಬಾಳೆಹಣ್ಣು,ಬೆಲ್ಲವನ್ನು ಬೆಳಗಿನಜಾವದಲ್ಲಿ ನೈವೇದ್ಯ,ಮಾಡಲಾಗುತ್ತದೆ.
ಇದರೊಂದಿಗೆ ಎತ್ತುಗಳನ್ನೂ ಹರಿಯಿಸುವುದು, ಮಣೇವು, ಉರಿಯುವ ಪಂಜುಗಳನ್ನೇ ನುಂಗುವುದು ಈ ಹಬ್ಬದ ಪ್ರಮುಖ ಆಚರಣೆಗಳಾಗಿವೆ. ನನ್ನಿವಾಳದ ಕಟ್ಟಿಮನೆಗೆ ಸೇರಿದ ಬಂಗಾರುದೇವರ ಹಟ್ಟಿಯಲ್ಲಿ ದೇವರುಗಳನ್ನು ಮತ್ತು ಬೆಳಗಟ್ಟದ ಸೂರೆಯರಗಾಟನಾಯಕನಿಗೆ ಸಂಬಂಧಿಸಿದಂತೆ, ಬೋಸೇದೇವರ ಹಟ್ಟಿಯ ಬೋಸೇರಂಗಯ್ಯನ ಪೆಟ್ಟಿಯನ್ನು, ದೊಣಮಂಡಲಹಟ್ಟಿಯ ಮಂಡಬೊಮ್ಮದೇವರನ್ನು ಹಟ್ಟಿಯಿಂದ ಹೊರಗೆ ತಂದು ಊರ ಹೊರಗೆ ಹೊಸ ಪದಿಯನ್ನು ಕಟ್ಟಿ, ಗೂಡಿನಿಂದ ಎತ್ತುಗಳನ್ನು ಕರೆಸಿ ಗೌರವಿಸಿ ಪೂಜಿಸುವ ಕ್ರಮವಿದೆ.
ಒಟ್ಟಾರೆ ಈಮ್ಯಾಸಮಂಡಲದ ದೀಪಾವಳಿ ಹಬ್ಬಕ್ಕೆ ಆಯಾ ಗುಂಪಿನವರೆಲ್ಲರೂ ಕಾಸು,ಹಾಲು, ಮೊಸರನ್ನು ಅರ್ಪಿಸಿ ಪಾಲ್ಗೊಳ್ಳುವಿಕೆಯೇ ಇಲ್ಲಿ ಸಾಮುದಾಯಿಕತೆಯ ಮಹತ್ವವನ್ನು ಪಡೆಯುತ್ತದೆ. ಈ ದೀಪಾವಳಿ ಹಬ್ಬದ ಆಚರಣೆಯಲ್ಲಿಎಲ್ಲಾ ಪದಿಗಳಲ್ಲಯೂ ದಾಸೋಹ ವಿಶೇಷವಾಗಿ ನಡೆಯುತ್ತದೆ. ಮುಂಗಾರು ಮಳೆ ಸುರಿದು ಸೊಂಪಾಗಿ ಬೆಳೆದ ಹುಲ್ಲನ್ನು ತಿಂದು ಹಸುಗಳು ಸಾಕಷ್ಟು ಹಾಲನ್ನು ಕೊಡುವುದರಿಂದ ಸಮೃದ್ಧವಾದ ಹಾಲು,ಮೊಸರು ಈ ಹಬ್ಬಕ್ಕೆ ಒದಗುತ್ತದೆ.ಇದನ್ನು ಎಡೆ ಮಾಡಿದ ನಂತರ ಎಲ್ಲರಿಗೂ ದಾಸೋಹದಲ್ಲಿ ನೀಡಲಾಗುತ್ತದೆ.
ಈ ಬುಡಕಟ್ಟಿನ ದೀಪಾವಳಿ ಹಬ್ಬದ ಆಚರಣೆಯ ಹಿಂದೆ ನಮ್ಮ ಭಾರತದ ಪೌರಾಣಿಕ ಕಥನಗಳಾವುವು ಕೇಳಿ ಬರುವುದಿಲ್ಲ.ಮನೆ ಮನೆಯ ಮುಂದೆ ದೀಪಗಳನ್ನು ಹಚ್ಚಿ ಸಡಗರಿಸುವುದು ಇಲ್ಲಿಲ್ಲ. ರಂಗೋಲಿ ಹಾಕುವುದಂತೂ ಬುಡಕಟ್ಟಿನ ನಿಶೇಧಗಳಲ್ಲಿ ಒಂದಾಗಿರುವುದರಿಂದ ಆ ಪ್ರಸ್ತಾಪವೇ ಇಲ್ಲಿಲ್ಲ. ಬದಲಾಗಿ ತಮ್ಮ ಮನೆ ದೇವರಾದ ಪೆಟ್ಟಿಗೆ ದೇವರು/ಬಿಲ್ಲು ದೇವರು/ಎತ್ತುಗಳನ್ನು ಗೌರವಿಸಿ ಪೂಜಿಸುವುದು. ಈ ಮೂಲಕವಾಗಿಯೇ ತಮ್ಮ ಮುಂದಿನ ಬದುಕಿಗೆ ಬೇಕಾದ ಬೆಳಕನ್ನು, ಚೈತನ್ಯವನ್ನು ಕೋರುವುದು ಇಲ್ಲಿ ಮುಖ್ಯವಾಗಿರುತ್ತದೆ.
ತಾನು ಬದುಕಿರುವ ಪರಿಸರ, ತಮಗೆ ಬದುಕನ್ನು ಕಟ್ಟಿಕೊಡುವ ಪ್ರಾದೇಶಿಕತೆ ಮತ್ತು ಭೌತಿಕ ಪ್ರಪಂಚ ಮತ್ತು ತನಗೆ ನೈತಿಕ ಬೆಂಬಲವಾಗಿ ನಿಂತ ತನ್ನ ಸಾಂಸ್ಕೃತಿಕ ಜಗತ್ತು ಈ ಎಲ್ಲವುಗಳ ಮೂಲಕ ಒಡಮೂಡುವ ದೇಸಿತನ ಆಯಾ ಬುಡಕಟ್ಟಿನ ಆಚರಣೆಗಳಿಗೆ ಸೈದ್ಧಾಂತಿಕತೆಯನ್ನು ಒದಗಿಸಿಕೊಡುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಮ್ಯಾಸಬೇಡ ಬುಡಕಟ್ಟಿನ ಈ ದೀಪಾವಳಿ ಆಚರಣೆಯಲ್ಲಿ ಈ ದೇಸಿತನವೇ ಒಡಮೂಡಿರುವುದನ್ನು ಕಾಣಬಹುದಾಗಿದೆ.ಆದಿವಾಸಿಗಳ ಧರ್ಮಿಕ ಜಗತ್ತಿನಲ್ಲಿ ಸರ್ಪಣಾಭಾವ ಮತ್ತು ಪಾರಂಪರಿಕ ಸಂಬಂಧ ಮುಖ್ಯವಾಗಿರುತ್ತದೆ. ಈ ಆಚರಣೆಗಳನ್ನು ಸಮುದಾಯದ ಸಾಂಸ್ಕೃತಿಕ ಅಸ್ಮಿತೆಗಳು ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ6 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ6 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ6 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ಕವಿತೆ | ನೆನಪು
-
ದಿನದ ಸುದ್ದಿ3 days ago
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
-
ದಿನದ ಸುದ್ದಿ2 days ago
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ