ಭಾವ ಭೈರಾಗಿ
ಬ್ಯುಸಿ ಅನ್ನೋ ಭ್ರಮೆ ಜೀವನವನ್ನೇ ತಿಂದುಬಿಡುತ್ತೆ !
ನಾವಂತೂ ತುಂಬಾ ಬ್ಯುಸಿನಪ್ಪಾ ಯಾರಿಗೂ ಫೋನ್ ಮಾಡೋಕಾಗಲ್ಲ, ಊರಿಗೆ ಹೋಗೋಕಂತೂ ಟೈಮೇ ಇಲ್ಲ, ಮೊದಲೆಲ್ಲಾ ಗೆಳೆಯರೊಂದಿಗೆ ಗಂಟೆಗಟ್ಟಲೆ ಮಾತಾಡ್ತಿದ್ವಿ ಈಗ ಅದು ಸಾಧ್ಯವೇ ಇಲ್ಲ, ಪುಸ್ತಕ ಓದುವುದು ದೂರದ ಮಾತು, ಹವ್ಯಾಸಗಳೇನಾದ್ರೂ ಉಳಿದುಕೊಂಡಿದ್ಯಾ ಅಂತ ನೋಡಿದ್ರೆ ಹುಡುಕಿದರೂ ಒಂದೂ ಉಳಿದಿಲ್ಲ. ವಾಕ್ ಹೋಗಲ್ಲ, ವ್ಯಾಯಾಮ ಮಾಡಲ್ಲ, ಜಾತ್ರೆ ನೋಡಲ್ಲ, ಪಕ್ಕದ ಮನೆಯಲ್ಲಿ ಯಾರಾದ್ರೂ ಸತ್ತರೆ ಹೋಗಿ ಒಂದರ್ಧ ಗಂಟೆ ನೋಡಿಕೊಂಡು ಬರೋಕಾಗಲ್ಲ, ಹಳೇ ಗೆಳೆಯ ಗೆಳತಿಯರ ಮದುವೆಗೂ ಹೋಗುವಷ್ಟು ಟೈಮಿಲ್ಲ, ಮಕ್ಕಳ ಜೊತೆಯಂತೂ ಆಟವಾಡೋದು ದೂರದ ಮಾತು, ಹೀಗೆ ಏನು ಮಾಡೋಕು ಟೈಮಿಲ್ಲ. ಅಸಲಿಗೆ ಊಟ ತಿಂಡಿ ಮಾಡೋಕು ಆಗ್ತಿಲ್ಲ, ಎಷ್ಟೋ ಜನ ಅವರವರ ಹೆಂಡತಿ ಮಕ್ಕಳ ಮುಖ ನೋಡಿ ಕಣ್ಣಲ್ಲಿ ಕಣ ್ಣಟ್ಟು ಮಾತಾಡಿ ಅದೆಷ್ಟೋ ದಿನವಾಗಿದೆ. ಯಾಕಂದ್ರೆ ನಾವು ತುಂಬಾ ಬ್ಯುಸಿ.
ನನಗೆ ಒಂದು ಸಣ್ಣ ಪ್ರಶ್ನೆ ಕಾಡ್ತಿದೆ. ಹೌದು ಇದ್ಯಾವುದೂ ಮಾಡೋಕೆ ಟೈಮಿಲ್ಲ ಅಂದ್ರೆ ಇರೋ ಸಮಯದಲ್ಲಿ ನಾವು ಏನು ಮಾಡ್ತಿದ್ದೇವೆ. ಊಟ ತಿಂಡಿ ಕೆಲಸ , ಹವ್ಯಾಸ, ಯಾವುದೂ ಮಾಡ್ತಿಲ್ಲ ಆದರೂ ನಮಗೆ ಸಮಯವಿಲ್ಲ ಎಂಥ ಮಾತು ಅಲ್ವಾ. ಅಸಲಿಗೆ ನಾವು ಮಾಡ್ತಿರೋದಾದ್ರೂ ಏನು ಅಂತ ನೋಡಿದ್ರೆ ಬರೀ ಕೆಲಸ ಅದು ನಮಗೆ ಸಂಬಳ ಕೊಡಬಲ್ಲ ಒಂದು ಕೆಲಸ ಅಷ್ಟೇ. ಅದನ್ನು ಮಾಡ್ತಿರೋದೆ ಜೀವನ ನಿರ್ವಹಣೆಗೆ ಅಂತಲ್ವಾ,,, ನಮಗೆ ನಮ್ಮದೇ ಆದ ಒಂದು ಜೀವನವಿದೆ ಆ ಜೀವನವನ್ನ ಅದೆಷ್ಟು ಚೆಂದಗೆ ರೂಪಿಸಿಕೊಳ್ಳಬಹುದೋ ಅಷ್ಟು ಚೆಂದವಾಗಿ ರೂಪಿಸಿಕೊಳ್ಳಬೇಕಿದೆ. ಹೀಗಾಗಿಯೇ ಆ ಚೆಂದದ ಬದುಕಿಗೆ ಏನೆಲ್ಲಾ ಬೇಕೋ ಅದನ್ನು ಕೊಂಡುಕೊಳ್ಳಲು ನಾವು ಹಾಗೂ ನಮ್ಮವರು ಸಂತೋಷವಾಗಿರಲು ಏನೆನು ಬೇಕೋ ಅದನ್ನು ಕೊಂಡುಕೊಳ್ಳಲು ಹಣ ಬೇಕು ಆ ಹಣಕ್ಕಾಗಿ ನಾವು ಕೆಲಸ ಮಾಡ್ತಿದ್ದೇವೆ, ಆದರೆ ಮೂಲ ಉದ್ದೇಶವನ್ನೇ ಮರೆತು ಎಲ್ಲವನ್ನೂ ಬಿಟ್ಟು ಬರೀ ಕೆಲಸವನ್ನೇ ಇಪ್ಪತ್ನಾಲ್ಕು ಗಂಟೆ ಮಾಡ್ತಿದ್ರೆ ಏನು ಬಂತು ಭಾಗ್ಯ ಅಲ್ವಾ..
ಹಾಗಂತ ನಾವು ಮಾಡೋ ಕೆಲಸದ ಉದ್ದೇಶ ಕೇವಲ ಹಣಗಳಿಕೆ ಅತಲ್ಲ. ಸಾಕಷ್ಟು ಮಂದಿ ಹಣ ಇದ್ದರೂ ಪ್ಯಾಷನ್ ಗಾಗಿ ಕೆಲಸ ಮಾಡುವವರಿದ್ದಾರೆ. ಹಾಗೇ ಸಾಧಿಸುವ ಛಲಕ್ಕಾಗಿ ಏನಾದರೂ ಮಾಡುವವರಿದ್ದಾರೆ. ಅದೆಲ್ಲವೂ ಸರಿ ಆದರೆ ಅದರ ಜೊತೆಗೆ ಈ ಮೇಲೆ ಹೇಳಿದ ಅಷ್ಟೂ ವಿಚಾರಗಳೂ ಮುಖ್ಯ ಅನ್ನೋದನ್ನ ನಾವು ಮರೆತೇ ಬಿಟ್ಟಿದ್ದೇವೆ. ಅದೆಷ್ಟೋ ಜನ ಉದ್ಯಮಿಗಳಿಗೆ ಮನೆ ಯಾವುದು ಆಫೀಸು ಯಾವುದು ಎಂದೇ ಸರಿಯಾಗಿ ನೆನಪಿರುವುದಿಲ್ಲ ಮನೆಯಲ್ಲೂ ವ್ಯವಹಾರದ್ದೇ ಚಿಂತೆ, ಇನ್ನು ಆಫೀಸಿನ ತಲೆನೋವನ್ನು ಮನೆವರೆಗೂ ತಂದು ಮನೆಯವರಿಗೂ ಹಂಚುವ ಮಂದಿಗೇನೂ ಕಡಿಮೆ ಇಲ್ಲ. ಇನ್ನು ಎಲ್ಲವೂ ಸರಿಯಿದ್ದರೂ ಸುಮ್ಮನೇ ಟಿವಿ ನೋಡಿ ಟೈಂ ವೇಸ್ಟ್ ಮಾಡುವ ಮಂದಿಗೂ ಮೇಲಿನ ಎಲ್ಲಾ ವಿಚಾರಗಳೂ ಅನ್ವಯಿಸುತ್ತವೆ.
ಹೌದು ಮಾಡುವ ಕೆಲಸವನ್ನ ಅದೆಷ್ಟು ಶ್ರದ್ಧೆಯಿಂದ ಮಾಡಲು ಸಾಧ್ಯವೋ ಅಷ್ಟು ಶ್ರದ್ದೆಯಿಂದ ಅಷ್ಟು ಅಚ್ಚುಕಟ್ಟಾಗಿ ಮಾಡುವುದರಿಂದ ಏನಾದರೂ ಮಾಡಲು ಸಾಧ್ಯವಿದೆ. ತಪಸ್ಸಿನಂತೆ ಕೆಲಸ ಮಾಡದೆ ಯಾರೂ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಆದರೆ ಬದುಕನ್ನು ಕಂಪಾರ್ಟ್ಮೆಂಟ್ ಆಗಿ ವಿಂಗಡಿಸಿಕೊಳ್ಳುವುದು ಅಷ್ಟೇ ಮುಖ್ಯವಾಗಿರುತ್ತೆ. ನಾವು ಮಾಡುವ ಅಷ್ಟೂ ಕೆಲಸವನ್ನೂ ಅಷ್ಟೇ ಶ್ರದ್ದೆಯಿಂದ ಮಾಡಬೇಕಲ್ಲವೇ, ನಾವು ಗಾಡಿ ಓಡಿಸುವಾಗ ಶುಧ್ಧ ಡ್ರೈವರ್ ಆಗಿ ಕಾರ್ಯ ನಿರ್ವಹಿಸಬೇಕಿದೆ, ಮನೆಯಲ್ಲಿದ್ದಾಗ ಒಬ್ಬ ಯಶಸ್ವೀ ಮಗನಾಗಿ, ತಾಯಿಯೊಂದಿಗಿದ್ದಾಗ ಒಬ್ಬ ಒಳ್ಳೆಯ ಮಗನಾಗಿ, ಮಗಳೊಂದಿಗಿದ್ದಾಗ ಒಬ್ಬ ಸಕ್ಸಸ್ ಫುಲ್ ತಂದೆಯಾಗಿ, ಗೆಳೆಯರೊಂದಿಗಿದ್ದಾಗ ಗೆಳೆಯನಾಗಿ, ಆಫೀಸಿನಲ್ಲಿದ್ದಾಗ ಉತ್ತಮ ಉದ್ಯೋಗಿಯಾಗಿ ಹೀಗೆ ಪ್ರತಿ ಹಂತದಲ್ಲೂ ಅದೇ ಆಗಿ ಕಾರ್ಯ ನಿರ್ವಹಿಸಬೇಕಿದೆ ಇದೆಲ್ಲವನ್ನೂ ಸರಿದೂಗಿಸಿಕೊಂಡು ಹೋಗುವುದರಲ್ಲೇ ನಮ್ಮ ಶಕ್ತಿ ಅಡಗಿರುತ್ತೆ. ಆಫೀಸಿನಲ್ಲಿ ಟೆನ್ಷನ್ ಅಂತ ಮನೆಯಲ್ಲಿ ಹೆಂಡತಿ ಮೇಲೆ ಕೂಗಾಡಿದರೆ ಏನಾದರೂ ಬಗೆಹರಿಯಲು ಸಾಧ್ಯವಾ,,, ಈ ಪಾತ್ರ ನಿರ್ವಹಣೆಯಲ್ಲಿ ಪಾಸಾದವರು ಜೀವನದಲ್ಲು ಪಾಸಾಗಬಹುದು, ಇಲ್ಲಿ ವಿಫಲರಾದವರು ಜೀವನದಲ್ಲೂ ವಿಫ¯ರಾಗುವ ಅಪಾಯವಿದೆ.
ನಾವು ಹೇಳ್ತೀವಿ ನಮಗೆ ಸಮಯವಿಲ್ಲ ಅಂತ. ಆದರೆ ನಾವೆಲ್ಲರೂ ನೆನಪಿನಲ್ಲಿಡಬೇಕಾದ್ದು ಎಲ್ಲ ದೊಡ್ಡ ದೊಡ್ಡ ಸಾಧಕರಿಗೂ ಇದ್ದದ್ದು ನಮ್ಮಷ್ಟೆ ಸಮಯ. ಒಂದು ಸಣ್ಣ ಉದಾಹರಣೆ ಹೇಳಬೇಕೆಂದರೆ ನಮ್ಮೆಲ್ಲರ ಸ್ಪೂರ್ತಿ ಪೂರ್ಣ ಚಂದ್ರ ತೇಜಸ್ವಿ. ಅವರು ಎಂದಿಗೂ ಒಂದಕ್ಕೊಂದು ಬೆರೆಸಿ ಬ್ಯುಸಿ ಲೈಫ್ ಎಂದವರಲ್ಲ. ಆದರೆ ಈ ಮೇಲೆ ಹೇಳಿದ ಕಂಪಾರ್ಟ್ಮೆಂಟ್ ಮಾಡಿಕೊಳ್ಳುವುದನ್ನು ಚೆನ್ನಾಗಿ ರೂಢಿಸಿಕೊಂಡಿದ್ದರು. ಅವರು ಬರೆಯಲು ಕುಳಿತರೆಂದರೆ ಯಾರೂ ಅವರನ್ನು ಡಿಸ್ಟರ್ಬ್ ಮಾಡುತ್ತಿರಲಿಲ್ಲ. ಕಂಪ್ಯೂಟರ್ ರಿಪೇರಿ ಮಾಡುವಾಗಲೂ ಅವರಿಗೆ ಅಷ್ಟೆ ತಲ್ಲೀನತೆ. ಒಮ್ಮೆ ಮನಸು ಮಾಡಿ ಮೀನು ಹಿಡಿಯಲು ಕುಳಿತರೆಂದರೆ ಮನೆಯಲ್ಲಿ ಏನಾಯ್ತು ಯಾಕಾಯ್ತು ಎಂಬ ಚಿಂತೆ ಮಾಡುತ್ತಿರಲಿಲ್ಲ, ಯಾವುದೋ ಹಕ್ಕಿಯ ಜಾಡು ಹಿಡಿದು ಫೋಟೋ ತೆಗೆಯಲು ನಿರ್ಧರಿಸಿದರೆಂದರೆ ಇತ್ತ ಸರ್ಕಾರವೇ ಉರುಳಿಹೋಗುತ್ತಿದೆ ಎಂದರೂ ತಲೆಕೆಡಿಸಿಕೊಂಡವರಲ್ಲ. ಹೀಗೆ ಯಾವುದನ್ನು ಮಾಡಿದರು ಅಷ್ಟೇ ತಲ್ಲೀನತೆ ಅವರಿಗಿತ್ತು. ಒಮ್ಮೆ ಉದಯ ಟಿವಿಯವರು ಸಂದರ್ಶನವೊಂದಕ್ಕಾಗಿ ಕಷ್ಟಪಟ್ಟು ಒಪ್ಪಿಸಿದ್ದರು. ಶೂಟಿಂಗ್ ಗಾಗಿ ಒಂದು ಗಂಟೆ ಕಾಲಾವಕಾಶವನ್ನೂ ಪಡೆದರು. ಅದಕ್ಕೂ ಮೊದಲೆ ಅಲ್ಲಿ ಹೋಗಿ ತೇಜಸ್ವಿ ದಂಪತಿಯವರನ್ನು ಕಂಡು ಮಾತನಾಡಿಸಿ ಕೆಲಸ ಆರಂಭಿಸಿದರು. ಇವರು ಲೈಟ್ ಸೆಟ್ ಮಾಡಿಕೊಂಡು ಹಾಗೆ ಹೀಗೆ ಮಾಡುವುದರೊಳಗೆ ಇವರು ಪಡೆದಿದ್ದ ಸಮಯ ಮುಗಿದೇ ಹೋಗಿತ್ತು. ತೇಜಸ್ವಿಯವರು ತಮ್ಮಪಾಡಿಗೆ ತಾವು ಏನೂ ಹೇಳದೆ ಪಕ್ಕದ ಕೋಣೆಗೆ ಹೋಗಿ ಬರೆಯಲಾರಂಭಿಸಿದರು. ಎಲ್ಲ ಸಿದ್ಧತೆ ಮುಗಿದ ನಂತರ ಎಸ್,ಎಲ್,ಎನ್ ಸ್ವಾಮಿಯವರು ತೇಜಸ್ವಿಯವರನ್ನು ಕರೆಯಲು ಹೋದರು. ಅತ್ತಕಡೆಯಿಂದ ಬಂದ ಉತ್ತರ ಯಾರು ನೀವು?,,,,, ಅಷ್ಟೇ ಸ್ವಾಮಿಯವರು ಬೆವೆತು ಹೋಗಿದ್ದರು. ಮತ್ತೆ ಪರಿಚಯ ಹೇಳಿಕೊಂಡು ಕರೆದಾಗ ನಿಮಗೆ ಕೊಟ್ಟ ಸಮಯ ಮುಗಿದಿದೆ, ನನಗೀಗ ಬೇರೆ ಕೆಲಸವಿದೆ ಎಂದರು ಆನಂತರ ಶೂಟಿಂಗ್ ಗಾಗಿ ಗೋಗರೆಯಬೇಕಾಯ್ತು.
ಇಲ್ಲಿ ನಾವು ಗಮನಿಸಬೇಕಿರುವುದು, ತೇಜಸ್ವಿಯವರು ಬರೆಯಲು ಕುಳಿತ ನಂತರ ಈ ಗುಂಪು ಅಲ್ಲಿ ಏನು ಮಾಡುತ್ತಿದೆ ಎಂಬುದೇ ಅವರ ಗಮನಕ್ಕಿರಲಿಲ್ಲ. ಸ್ವಾಮಿಯವರನ್ನು ಸ್ವಾಭಾವಿಕವಾಗಿಯೇ ನೀವ್ಯಾರು ಎಂದು ಕೇಳಿದ್ದರು. ಅಷ್ಟರಮಟ್ಟಿಗೆ ಅವರು ಸಮಯವನ್ನು ವಿಭಾಗಿಸಿಕೊಳ್ಳುತ್ತಿದ್ದರು. ಅವರು ಸಕ್ಸಸ್ಫುಲ್ ತಂದೆ, ಒಳ್ಳೆಯ ಗಂಡ ಉತ್ತಮ ಪ್ರಜೆ , ಸಾಧಕ ಎಲ್ಲವೂ ಆಗಿದ್ದೂ ಅವರಿಗೆ ಗುದ್ದಲಿ ಹಿಡಿದು ತೋಟದಲ್ಲಿ ಕೆಲಸ ಮಾಡುವಷ್ಟು ಸಮಯವಿತ್ತು. ಪಂಚರ್ ಅಂಗಡಿಯ ಹುಡುಗನೊಂದಿಗೆ ಹರಟೆಹೊಡೆದು ಇಂಟ್ರೆಸ್ಟಿಂಗ್ ವಿಷಯಗಳನ್ನು ತಿಳಿದುಕೊಳ್ಳುವ ಕುತೂಹಲವಿತ್ತು. ಈಗ ಯೋಚಿಸಿ ನಮಗೆ ಯಾಕೆ ಸಮಯವಿಲ್ಲ.
ಬದುಕೇ ಹಾಗೆ ಇಲ್ಲಿ ಯಾವುದು ಮುಖ್ಯ ಎಂಬ ಪ್ರಶ್ನೆಯ ಮೇಲೆ ನಾವು ಮಾಡುವ ಕೆಲಸ ನಿರ್ಧರಿತವಾಗುತ್ತದೆ. ಹೀಗೆ ಬ್ಯುಸಿಲೈಫ್ ಲೀಡ್ ಮಾಡ್ತಾ ಹೋದವರು ಯಾವತ್ತೋ ಒಂದುದಿನ ಹಿಂದೆ ತಿರುಗಿ ನೋಡಿದರೆ ಎಲ್ಲವೂ ಖಾಲಿ ಖಾಲಿ ಅನ್ನಿಸಬಹುದು, ಯಾತಕ್ಕಾಗಿ ಇದೆಲ್ಲವನ್ನೂ ಮಾಡುತ್ತೇವೆಯೋ ಅದನ್ನೇ ಕಳೆದುಕೊಂಡಿರುತ್ತೇವೆ. ಯಾವುದೋ ಕಂಪಡನಿಗಾಗಿ ಹಗಲು ರಾತ್ರಿ ದುಡಿದವನು ಕಂಪನಿಯಿಂದ ಹೊರಬಂದಾಗ ಕಂಪನಿಗೆ ಆತ ಯಾರೆಂದು ನೋಡುವಷ್ಟೂ ಸಮಯವಿರಲ್ಲ, ಶ್ರಧ್ದೆಯಿಂದ ಸರ್ಕಾರಿ ಕೆಲಸಮಾಡಿದವರು ನಿವೃತ್ತರಾದ ನಂತರ ಅವರಿಗೊಂದು ಥ್ಯಾಂಕ್ಸ್ ಹೇಳುವವರೂ ಇರುವುದಿಲ್ಲ ಹಾಗಾದರೆ ಇದೆಲ್ಲವನ್ನೂ ಯಾರಿಗಾಗಿ ಮಾಡಿದೆಎನಿಸದೇ ಇರಲಾರದು. ಕಳೆದುಕೊಂಡ ಸಮಯಕ್ಕಾಗಿ ಎಂದೋ ಪರಿತಪಿಸುವುದಕ್ಕಿಂತ ಇಂದೇ ಎಚ್ಚೆತ್ತುಕೊಂಡ್ರೆ ಒಳ್ಳೇದಲ್ವಾ, ಎಷ್ಟೋ ಬಾರಿ ನಾವು ತಲುಪುವ ಗುರಿಗಿಂತ ನಾವು ಕ್ರಮಿಸುವ ದಾರಿಯೂ ಮುಖ್ಯವಾಗುತ್ತೆ, ನಾನು ಹೇಳಬೇಕಾದುದು ಇಷ್ಟೆ ಮುಂದಿನದು ನಿಮಗೆ ಬಿಟ್ಟದ್ದು . ಇದು ನನ್ನನ್ನೂ ಸೇರಿದಂತೆ ಹಲವರ ಆತ್ಮವಿಮರ್ಶೆಯಾಗಿರಬಹುದು.
( ಲೇಖಕರು : ದರ್ಶನ್ ಆರಾಧ್ಯ-8495980857)
ದಿನದ ಸುದ್ದಿ
ಕವಿತೆ | ನೆನಪು
- ರುದ್ರಪ್ಪ ಹನಗವಾಡಿ
ಅಪ್ಪನನ್ನು ಒಪ್ಪ ಮಾಡಿ
ವರ್ಷಗಳೇ ಕಳೆದವು ಮುವ್ವತ್ತೇಳು
ಇಂದಿರಾಗಾಂಧಿಯ ತುರ್ತು ಪರಿಸ್ಥಿತಿ
ಅರಸರ ಮೀಸಲಾತಿ
ಬಸವಲಿಂಗಪ್ಪನವರ ಬೂಸಾ ಖ್ಯಾತಿ
ಮಲ ಹೊತ್ತು
ಮಲಗಿದ್ದ ಕಾಲಕ್ಕೆ
ಚುರುಕು ಮುಟ್ಟಿಸಿದ ಕಾಲ
ಹರೆಯದ ನನಗೆ
ಕಾಲೇಜ ಮೇಷ್ಟರ ಕೆಲಸ
ಸೂಟು ಬೂಟಿನ ವೇಷ
ಆ ಮೇಲೆ ಅಮಲದಾರಿಕೆ
ಎಲ್ಲ ನಡೆದಾಗಲೇ ಅವ್ವನನ್ನು
ಆಸ್ಪತ್ರೆಗೆ ಸೇರಿಸಿದ್ದು
ಕಾಲ ಕಳೆದು ಕೊಂಡು
ಕೋಲ ಹಿಡಿದದ್ದು
ನಿನ್ನೆ ಮೊನ್ನೆಯಂತೆ
ಬಾಲ್ಯವಿನ್ನು ಉಂಟೆಂಬಂತೆ
ಭಾವಿಸುವಾಗಲೇ ಅವ್ವನ ಸಾವು
ಅದರೊಟ್ಟಿಗೆ ಕಾಯದಾಯಾಸ ತೀರಿಸಲು
ಬಂದರೆ ಬೆಂಗಳೂರಿಗೆ
ರೌಡಿಗಳ ಕಾಟ
ಅಂಬೇಡ್ಕರ್ ಪಟದ ಕೆಳಗೆ
ದೌರ್ಜನ್ಯದ ದಂಡು
ಅಮಾಯಕರಿಗೆ ಗುಂಡು
ಕಂಡುಂಡ ಹಾದಿಯ ಗುಡಿಸಲುಗಳಲ್ಲೀಗ
ಮುಗಿಲು ಮುಟ್ಟೋ ಮಹಲುಗಳು
ಅಂತಲ್ಲಿ
ದೇಶ ವಿದೇಶಗಳ
ಅಹವಾಲುಗಳು
ಅವಿವೇಕಗಳು
ನೋಡ ನೋಡುತ್ತಿದ್ದಂತೆ
ಉಸಿರು ಬಿಗಿಹಿಡಿದ ಜನರ ಒಳಗೆ
ಒಳಪದರಗಳೊಳಗೆ ಕನಸ ಬಿತ್ತಿ
ಹಸಿರ ಹೊನ್ನು ಬಾಚಲು ಹವಣಿಸಿದ
ಬಿಳಿ ಜನರ ಆಟ
ಅರ್ಥವಾಗುವುದೇ ಎಲ್ಲ
ಗೋಣ ನೀಡುವರೆ
ಹೂತಿಟ್ಟ ಗೂಟಕ್ಕೆ ?
( ಚಿಂತಕ ರುದ್ರಪ್ಪ ಹನಗವಾಡಿ ಅವರ ‘ಊರು – ಬಳಗ’ ಕವನ ಸಂಕಲನದಿಂದ ‘ ನೆನಪು ‘ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕೃತಿಯನ್ನು ಫ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ 2013 ರಲ್ಲಿ ಪ್ರಕಿಸಿದೆ.)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕವಿತೆ | ಮಣ್ಣ ಮಕ್ಕಳು
- ಸಿ.ಕೃಷ್ಣನಾಯಕ್, ಆಡಳಿತಾಧಿಕಾರಿ, ಐಟಿಐ ಕಾಲೇಜು ದಾವಣಗೆರೆ
ಮಣ್ಣ ಮಕ್ಕಳು ನಾವು
ಹಗಳಿರುಳೆನ್ನದೆ ಬೆವರು ಬಸಿದು
ಹಸಿದ ಹೊಟ್ಟೆಯಲಿ ಉಸಿರು ಹಿಡಿದವರು
ಕಸದಲಿ ರಸ ತೆಗದು ಬದುಕಿನುದ್ದಕ್ಕೂ ಉಳ್ಳವರ
ಕಸುಬಿಗೆ ಆಳಾದವರು ಸವಳು ನೀರಲಿ ಮೈತೊಳೆದು
ಚಿಂದಿ ಅಂಗಿಯಲಿ ಶಾಲೆಗೆ ದಾಖಲಾದವರು.
ಬರಿಗಾಲಲಿ ಕಾಡು ದಾರಿಯಲಿ ಮೈಲು ದೂರ ನಡೆದು
ನೆಗ್ಗಿಲ ಮುಳ್ಳು ತುಳಿದವರು ; ನಿಬ್ಬು ನೆಗ್ಗಿದ ಪೆನ್ನಿನಲಿ
ಹೆಸರು ಬರೆಯಲು ಕಲಿತವರು ಹರಿದ ಪಠ್ಯದಲಿ ಅಕ್ಷರ ಹುಡುಕಿ ಒಡೆದ ಪ್ಲೇಟಿನಲಿ ಬರೆದವರು.
ತೂತು ಬಿದ್ದ ಸೂರಿನಲಿ ಇಣುಕಿದ ಚುಕ್ಕಿ ಚಂದ್ರಮರ ನೋಡಿ
ವಿದ್ಯುತ್ ದೀಪದ ಕನಸು ಕಂಡವರು
ಮೋಸ ವಂಚನೆಗೆ ಬಗ್ಗದೆ ಶೋಷಣೆಗೆ ಸಿಡಿದವರು
ಮಣ್ಣ ಮಕ್ಕಳು ನಾವು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಬಿ.ಶ್ರೀನಿವಾಸ ಅವರ ‘ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು’ ಕೃತಿಯ ಕುರಿತು
ಸಂಡೂರಿನ ಜನರ ಮುದುಡಿದ ಅಂಗಿಯ ಮೇಲೆ,ಹೆಂಗಸರು ಮಾಸಿದ ಸೀರೆಯ ಸೆರಗಿನ ಮೇಲೆ ಬಿ.ಶ್ರೀನಿವಾಸ ಅಕ್ಷರ ಬಿಡಿಸುತ್ತಾರೆ.
ಅನ್ನದ ಅಗುಳು,ಧೂಳು,ಕಾಗದದ ಚೂರು,ಆಟಿಕೆ ಸಾಮಾನು,ಕಿಡ್ನಿ,ಈ ಸಣ್ಣವು ಗಳಲ್ಲಿ ಜೀವಸಾಕ್ಷಿ ಹುಡುಕುವ ಕಥೆಗಳಿವು.ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಅನ್ನದ ಅಗಳು,ಕಾಗದದ ಚೂರನ್ನು ಎತ್ತಿಹಿಡಿಯುವ ಗೆಳೆಯ ಶ್ರೀನಿವಾಸ *ಧೂಳನ್ನೇ ಅಕ್ಷರಗಳನ್ನಾಗಿಸಿದ ಲೇಖಕ.
- ಬಸವರಾಜ ಹೂಗಾರ
ಇಲ್ಲಿನ ಹುಚ್ಚರ ಕತೆಗಳನ್ನು ಓದುವಾಗ ಕುಂ.ವೀ.ಯವರ ಹಾಗೂ ಸಾದತ್ ಹಸನ್ ಮಾಂಟೋ ಅವರ ಹುಚ್ಚರ ಕತೆಗಳು ನೆನಪಾಗುತ್ತವೆ.ಇಲ್ಲಿನ ನತದೃಷ್ಟರ ಬದುಕನ್ನು ಹಿಡಿದಿಡಲು ಲೇಖಕರು ಕಂಡುಕೊಂಡಿರುವ ಅಭಿವ್ಯಕ್ತಿ ವಿನ್ಯಾಸ ವಿಶಿಷ್ಟವಾಗಿದೆ. ಬರಹಗಳು ದೀರ್ಘವಾಗಿಲ್ಲ. ಚುಟುಕಾಗಿವೆ. ಕವನಗಳೊ, ಗದ್ಯಗಳೊ ಎಂದು ಹೇಳಲಾಗದ ರೂಪದಲ್ಲಿವೆ.
ಗಾಢವಾದ ಅರ್ಥವನ್ನು ಕೆಲವೇ ಸಾಲುಗಳಲ್ಲಿ ವ್ಯಂಗ್ಯ ಮತ್ತು ವಿಡಂಬನೆಗಳಲ್ಲಿ ಹಿಡಿಯಲು ಯತ್ನಿಸುತ್ತವೆ.
ಇಲ್ಲಿರುವ ಲೋಕದ ನೋವಿಗೆ ಮಿಡಿವ ಸಂವೇದನೆ,ಓದುವ ಓದುಗರನ್ನೂ ಆವರಿಸಿಕೊಂಡು,ಚಿಂತನೆಗೆ ಹಚ್ಚುತ್ತದೆ.ಓದುತ್ತ,ಓದುತ್ತಾ ನಿಟ್ಟುಸಿರು ಹೊಮ್ಮುತ್ತದೆ.ಮನಸ್ಸು ಮಂಕಾಗುತ್ತದೆ.ಇಂತಹ ಬರಹಗಳನ್ನು ಕೊಟ್ಟಿರುವ ಶ್ರೀನಿವಾಸ ತಮ್ಮ ಅಂತಃಕರಣ ,ಚೂಪಾದ ಗ್ರಹಿಕೆ,ಆಳವಾದ ಸಂವೇದನೆಗಳನ್ನು ಇತರೆ ಪ್ರಕಾರಗಳಲ್ಲಿಯೂ ಪ್ರಕಟಿಸುವ ಜರೂರಿಯಿದೆ.
- ಡಾ.ರಹಮತ್ ತರೀಕೆರೆ
ಒಬ್ಬ ಮನುಷ್ಯ ಮತ್ತೊಬ್ಬನನ್ನು ಕಿತ್ತು ತಿನ್ನಬಾರದು.ಹೊಟ್ಟೆಪಾಡಿಗಾಗಿ ನಿರ್ವಹಿಸುವ ಪ್ರತಿ ಕೆಲಸವೂ ಸೃಜನಶೀಲವಾಗಿರಬೇಕು-ಎಂಬ ಧಾವಂತದಲ್ಲಿ ಹುಟ್ಟಿದ ಮನದ ಪ್ರಕ್ರಿಯೆಗಳಿಗೆಲ್ಲ ಇಲ್ಲಿ ಹರಡಿಕೊಂಡಿವೆ.
- ಬಿ.ಶ್ರೀನಿವಾಸ,ಕೃತಿ ಲೇಖಕ
ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು ನೊಂದವರ ಮನದಲ್ಲಿ ಅಲ್ಪಾವಧಿ ಗುರುತು ಮೂಡಿಸಬಹುದು ನಿಮ್ಮ ಈ ಪುಸ್ತಕ ಮತ್ತು ಅದರಲ್ಲಿರುವ ಎಷ್ಟೋ ವಿಚಾರಗಳು ನನ್ನನ್ನು ಡಿಸ್ಟರ್ಬ್ ಮಾಡಿವೆ. ಕೇವಲ ವಾಟ್ಸಾಪ್ ಲೈನ್ ಸಾಕಾಗಲ್ಲ ಎದುರುಗಡೆ ಕುಳಿತು ಇನ್ನು ಹೆಚ್ಚು ತಿಳಿದುಕೊಳ್ಳಬೇಕೇನಿಸುತ್ತದೆ. ಸಂಡೂರಿನ ದಾರುಣ ಚಿತ್ರಗಳನ್ನು,ಕೋರ್ಟಿನ ಚಿತ್ರಗಳನ್ನು,ಬದುಕಿನ ಚಿತ್ರಗಳನ್ನು ಕಣ್ಣಿಗೆ ರಾಚುವಂತೆ ಮೂಡಿಸಿದ್ದೀರಿ.
ಸಾವಿಗಿಂತ ಹಸಿವು ಬಹಳ ಕ್ರೂರಿ ಎನ್ನುವುದು: ನೋವಿನ ಬದಲು ಹಸಿವಿನ ಏಟುಗಳು ಬೀಳಬೇಕಿತ್ತು ಎನ್ನುವ ಸಾಲುಗಳಂತೂ Geographical Hungrey ಪುಸ್ತಕ ನೆನಪಿಸುತ್ತವೆ. ಸೊಂಡೂರಿನ ಚಿತ್ರಗಳ ಮೂಡಿಸಿದೆ ಗಾಢ ವಿಷಾದತೆ, ನನ್ನನ್ನು ಹೊರಬರಲು ಬಿಡುತ್ತಿಲ್ಲ.
“ಉಳ್ಳವರು ಹೊತ್ತ ಮೂಟೆಗಳಲ್ಲಿ ಬಡವರ ಹಸಿವಿನದ್ದೇ ಭಾರ”ಇವೆಲ್ಲ ಹಸಿವನ್ನು ಅನುಭವಿಸಿದವರಿಗೆ ಮಾತ್ರ ಸರಿಯಾಗಿ ಅರ್ಥವಾಗುವ ಸಾಲುಗಳು.
ಇನ್ನು ,ಕೋರ್ಟಿನ ಚಿತ್ರಗಳು, ಎಷ್ಟು ಜನ ಇರ್ತಾರೆ ಇವನ್ನೆಲ್ಲ ಸೂಕ್ಷ್ಮ ವಾಗಿ ತಿಳಿದುಕೊಳ್ಳುವವರು ?
ಶಾಲೆ ಹಿಂದೆ ತಿರುಗಬಾರದು ಕೋರ್ಟ್ ಕಚೇರಿ ಮುಂದೆ ತಿರುಗಬಾರದು ಎಂದು ನಮ್ಮ ಜನಪದರು ಹೇಳ್ವ ಮಾತು ಎಷ್ಟೋ ಸಲ ಸತ್ಯ ಎನಿಸುತ್ತದೆ.
ನೀವು ಹಿಡಿದಿಟ್ಟ ಬದುಕಿನ ಚಿತ್ರಗಳಲ್ಲಿನ “ಶವಪೆಟ್ಟಿಗೆ ಸಣ್ಣದಿದ್ದಷ್ಟು ಹೊರುವುದು ಬಹಳ ಕಷ್ಟ “ಎಂಬ ಮಾತಂತೂ ಚಿಕ್ಕಮಕ್ಕಳ ತಂದೆತಾಯಿಯರ ಕಣ್ಣಲ್ಲಿ ನೀರು ತರಿಸುವುದು.
ತಲೆ ಮ್ಯಾಲೆ ಮಲ ಸುರುವಿಕೊಂಡೆವಲ್ಲ ಸರ್ ಅವತ್ತೇ… ನಾವ್ ಹುಟ್ಟಿದ್ದು ಎನ್ನುವ ಸವಣೂರಿನ ಭಂಗಿಯ ಮಾತನ್ನು ಎಷ್ಟು ಅರ್ಥಗರ್ಭಿತವಾಗಿ ಸೋ ಕಾಲ್ಡ್ ಸೊಸೈಟಿಗೆ ಮುಟ್ಟಿ ನೋಡಿಕೊಳ್ಳುವಂತೆ ಬರೆದಿದ್ದೀರಿ. ಆಕೆ ಏನನ್ನೋ ಆಯ್ಕೆ ಮಾಡಿಕೊಂಡಿದ್ದಾಳೆ ಎಂಬ ವಿಚಾರಗಳು ಕೇವಲ ವಿಚಾರಗಳಲ್ಲ ,ಬದುಕಿನ ಸತ್ಯ ಚಿತ್ರಣಗಳು ದಿನ ನಿತ್ಯ ನಮ್ಮ ನಡುವೆ ನಡೆಯುವಂತವು.ಅವನ್ನು ಕಾಣುವಂತ ದೃಷ್ಟಿ ಇದ್ದವರಿಗೆ ಮಾತ್ರ ಇವು ಕಾಣುತ್ತವೆ ಸರ್ .
ನಿಮ್ಮ ನೈಜ ದೃಷ್ಟಿಗೆ ದನ್ಯವಾದಗಳು ಸರ್, ಉಳಿದದ್ದು ಎದುರು ಬದುರು ಕುಳಿತು ಮಾತಾಡೋಣ
- ಡಾ.ರಾಮಚಂದ್ರ ಹಂಸನೂರು, ಬೆಟಗೇರಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243