Connect with us

ಬಹಿರಂಗ

ಬಣ್ಣ, ರುಚಿ ಮತ್ತು ಶಕ್ತಿ

Published

on

  • ಡಾ.ಎನ್.ಕೆ.ಪದ್ಮನಾಭ,ಸಹಾಯಕ ಪ್ರಾಧ್ಯಾಪಕರು,ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,ಎಸ್.ಡಿ.ಎಂ ಸ್ನಾತಕೊತ್ತರ ಕೇಂದ್ರ,ಉಜಿರೆ

ಬರಹದ ಶೀರ್ಷಿಕೆಯ ಮೂರೂ ಪದಗಳು ಹಲವರ ನೆನಪಿನ ಪುಟಗಳಲ್ಲಿ ದಾಖಲಾಗಿರಬಹುದು. ಚಹಾಪುಡಿಯನ್ನು ಜನಜನಿತವಾಗಿಸಲು ಟಿ.ವಿ ಮೂಲಕ ತಲುಪಿಕೊಳ್ಳುತ್ತಿದ್ದ ಜಾಹಿರಾತು ಈ ಪದಗಳನ್ನು ನಮ್ಮ ನೆನಪಿನ ಕೋಶದೊಂದಿಗೆ ಬೆರೆಸುವಲ್ಲಿ ಯಶಸ್ವಿಯಾಗಿತ್ತು. ಅದಷ್ಟೇ ಆಗಿದ್ದಿದ್ದರೆ ಈ ಪದಗಳನ್ನು ಪ್ರಸ್ತಾಪಿಸುವುದರ ಮೂಲಕ ಈ ಲೇಖನವನ್ನು ಪ್ರಾರಂಭಿಸುವ ಪ್ರಮೇಯವೇ ಬರುತ್ತಿರಲಿಲ್ಲ.

ವರ್ತಮಾನದ ಸುದ್ದಿಯ ಟ್ರೆಂಡ್ ಮತ್ತು ಆ ಮೂಲಕ ವಿಜೃಂಭಿಸುತ್ತಿರುವ ವಿಕೃತಿಗಳ ಸ್ವರೂಪ ಅರಿತುಕೊಳ್ಳುವುದಕ್ಕೆ ಸಹಾಯಕ ಪದಗಳಾಗಿ ಇವು ನನಗೆ ಮುಖ್ಯವೆನ್ನಿಸುತ್ತಿವೆ. ಸುದ್ದಿ ಮಾಧ್ಯಮದವರು ತಾವು ಮಾಹಿತಿ, ಶಿಕ್ಷಣ ಮತ್ತು ಮನರಂಜನೆಯ ಕಟ್ಟಾ ವಾರಸುದಾರರು ಎಂದು ಬೀಗಿಕೊಂಡು ಅಹಂಕಾರದ ಬೃಹತ್ ರೂಪ ತಾಳಿರುವಾಗ ಈ ಮೂರೂ ಪದಗಳ ಒಳಗೇ ಅಣಕವಾಡುವ ಬಹುದೊಡ್ಡ ಅರ್ಥವಿನ್ಯಾಸ ಅಡಗಿದೆಯೇನೋ ಎಂದೆನ್ನಿಸುತ್ತದೆ.

ಈಗಾಗಲೇ ಅಗಿಹೋದ ದಶಕಗಳಲ್ಲಿನ ಜನಬದುಕಿನಲ್ಲಿ ಆದ್ಯತೆ ಪಡೆದುಕೊಂಡ ಉತ್ಪನ್ನವೊಂದು ಅನಿವಾರ್ಯ ಅವಿಭಾಜ್ಯ ಅಂಶವಾಗಿ ಮಾರ್ಪಟ್ಟಿದ್ದಷ್ಟೇ ಅಲ್ಲದೇ ಪ್ರತಿಷ್ಠೆಯ ಮಾಪಕವಾಗಿಯೂ ಬಳಕೆಯಾದ ಕ್ರಮಾನುಗತ ಇತಿಹಾಸದ ವಿವರಗಳನ್ನೂ ಈ ಮೂರೂ ಪದಗಳು ಅನಾವರಣಗೊಳಿಸುತ್ತವೆ. ಮನೆಗೆ ಬಂದವರಿಗೆ ನೀರು, ನಿಂಬೆಹಣ್ಣಿನ ಪಾನಕ ಅಥವಾ ಮಜ್ಜಿಗೆಯನ್ನು ನೀಡುತ್ತಿದ್ದ ಆತಿಥ್ಯದ ಪರಿಕಲ್ಪನೆಗೆ ಈ ಮೂರು ಪದಗಳೊಂದಿಗೆ ಬಿಂಬಿತವಾದ ಚಹಾಪುಡಿ ಉತ್ಪನ್ನದ ಜಾಹಿರಾತು ಸವಾಲೆಸೆದಿತ್ತು. ಇದರೊಂದಿಗೆ ಇದೇ ತೆರನಾದ ಪಾನೀಯ ಉತ್ಪನ್ನದ ಜಾಹಿರಾತುಗಳು ದೇಶೀ ಆತಿಥ್ಯದಲ್ಲಿ ಪ್ರಾಮುಖ್ಯತೆ ವಹಿಸಿದ್ದ ಪಾನೀಯಗಳನ್ನು ಹಿನ್ನೆಲೆಗೆ ಸರಿಸಿದ್ದವು.

ತದನಂತರದ ತರಹೇವಾರಿ ಜಾಹಿರಾತುಗಳು ನಮ್ಮದಲ್ಲದ ಜೀವನಶೈಲಿಯ ಉತ್ಪನ್ನಗಳ ಬಗೆಗಿನ ವ್ಯಾಮೋಹವನ್ನು ಹಂತಹಂತವಾಗಿ ಹೆಚ್ಚಿಸುತ್ತಲೇ ಬಂದವು. ದೇಶೀಯ ಪಾನೀಯಗಳಿಗೆ ಬಣ್ಣವೂ ಇತ್ತು. ರುಚಿಯೂ ಇತ್ತು. ಶಕ್ತಿಯೂ ಇತ್ತು. ಅವೆಲ್ಲವನ್ನೂ ಅಲ್ಲಗಳೆದು ಹೊಸ ಉತ್ಪನ್ನದ ಕಡೆಗೆ ಆಕರ್ಷಣೆಯಾದದ್ದಕ್ಕೆ ಟೆಲಿವಿಷನ್ ಮಾಧ್ಯಮದ ಪ್ರಭಾವ ಕಾರಣವಾಗಿತ್ತು.

ಇದೇ ಬಗೆಯ ಮಾಧ್ಯಮ ಪ್ರಭಾವವೇ ಈಗ ಜನಜೀವನದ ಕ್ರಮಗಳನ್ನು, ಆಲೋಚನೆಯ ಧಾಟಿಯನ್ನು ನಿಯಂತ್ರಿಸುವಷ್ಟರ ಮಟ್ಟಿಗೆ ಬೆಳೆದುನಿಂತಿದೆ. ಈಗಿನ ನವಮಾಧ್ಯಮಗಳ ಪ್ರಭಾವಳಿಯಂತೂ ಜನರಿಂದ ವಿವೇಚನೆಯನ್ನು ಕಸಿದುಕೊಂಡು ಬಣ್ಣ, ರುಚಿ ಮತ್ತು ಶಕ್ತಿಯ ಕುರಿತ ಅಪವ್ಯಾಖ್ಯಾನಗಳನ್ನು ಮುನ್ನೆಲೆಗೆ ತಂದಿದ್ದಲ್ಲದೇ ಅವೇ ಅಂತಿಮ ಎಂಬ ಭ್ರಮೆಯನ್ನೂ ಬಿತ್ತಿದೆ.

ಬಣ್ಣ, ರುಚಿ ಮತ್ತು ಶಕ್ತಿ ಎಂಬ ಪದಗಳು ಸ್ವತಃ ತಾವೇ ಮುಜುಗರಕ್ಕೊಳಗಾಗುವಂತೆ ಅವುಗಳನ್ನು ಸತ್ವಹೀನ ಸರಕುಗಳಿಗೆ ಅನ್ವಯಿಸುವ ಜಾಯಮಾನ ವ್ಯಾಪಕವಾಗಿದೆ. ಈ ವ್ಯಾಪ್ತಿಯಲ್ಲಿಯೇ ನಾವು ‘ಸುದ್ದಿ’ಯನ್ನಿಟ್ಟು ನೋಡಬೇಕು. ಸುದ್ದಿ ಮಾಧ್ಯಮಗಳನ್ನು ಗ್ರಹಿಸಬೇಕು.

ಈಗ ಸುದ್ದಿಯು ಬರೀ ಸುದ್ದಿಯಾಗಷ್ಟೇ ಉಳಿದಿಲ್ಲ. ಇದಕ್ಕೀಗ ಬಣ್ಣಗಳ ಹಂಗು ಹೆಚ್ಚಾಗಿದೆ. ಸದಭಿರುಚಿಯ ಮನಸ್ಥಿತಿಯನ್ನು ಹಿಂಸೆ, ಸಂಕುಚಿತತೆ ಮತ್ತು ದ್ವೇಷದ ವಿಕೃತಿಗಳ ಕಡೆಗೆ ತಿರುಗಿಸುವ ಅಪಾಯಕಾರಿ ರುಚಿಯ ವ್ಯಾಮೋಹವನ್ನು ಮೂಡಿಸುತ್ತಿದೆ. ಇವೆರಡರೊಂದಿಗೇ ಗುರುತಿಸಿಕೊಳ್ಳುವ ಹಾಗೆಯೇ ನೋಡಿಕೊಂಡು ಅದೇ ವ್ಯಕ್ತಿಯ ನಿಜವಾದ ಶಕ್ತಿ ಎಂಬುದನ್ನು ಭಾವುಕ ವಿಜೃಂಭಣೆಯಲ್ಲಿ ಮಿನುಗಿಸುತ್ತಿದೆ.

ಮಾಹಿತಿ ನೀಡುವ ಮೂಲಕ ಸುಶಿಕ್ಷಿತ ಪರಂಪರೆಗೆ ಕೊಡುಗೆ ನೀಡಿ ರಂಜನೆಗೆ ವಿವೇಚನಾತ್ಮಕ ಆಯಾಮ ನೀಡುತ್ತಿದ್ದ ಸುದ್ದಿಯ ಪಾತ್ರವು ಇದೀಗ ವಿಷದ ಸೋಂಕಿಗೀಡಾಗಿದೆ.‌ ಕೋವಿಡ್-19 ಸೃಷ್ಟಿಸಿದ ಬಿಕ್ಕಟ್ಟಿನ ಅವಧಿಯಲ್ಲಿ ಚರ್ಚಿತವಾದ ಅಮೆರಿಕ ಪೊಲೀಸರ ದ್ವೇಷಕ್ಕೆ ಬಲಿಯಾದ ಜಾರ್ಜ್ ಫ್ಲಾಯ್ಡ್‍ನ ಕುರಿತ ಸುದ್ದಿ ವ್ಯಕ್ತವಾದಾಗ ಖಂಡನೆಯ ಮಹಾಪೂರವೇ ಸೋಷಿಯಲ್ ಮೀಡಿಯಾದಲ್ಲಿ ಹರಡಿತ್ತು.

ಬಣ್ಣದ ಕಾರಣಕ್ಕಾಗಿಯೇ ನಿರ್ಲಕ್ಷಿತರಾಗುಳಿದು ಆಗಾಗ ಶೋಷಣೆಗೆ ಒಳಗಾಗುತ್ತಲೇ ದುಃಖದುಮ್ಮಾನಗಳನ್ನೆಲ್ಲಾ ಒಡಲೊಳಗಿರಿಸಿಕೊಂಡೇ ಬದುಕು ದೂಡುವ ಜನರ ನಿತ್ಯ ಯಾತನೆಯ ಸುದ್ದಿಬಿಂಬಗಳು ತಾರ್ಕಿಕ ಪರಿಹಾರದ ನಿರೀಕ್ಷೆಯ ಬದ್ಧತೆಯ ಬೆಂಬಲದ ಸ್ಪರ್ಶದೊಂದಿಗೆ ಕಾಣಿಸಿಕೊಳ್ಳುವುದೇ ಇಲ್ಲ. ಬಿಂಬಿತವಾದರೂ ಅನುಕಂಪ ಹುಟ್ಟಿಸುವ ಮತ್ತು ಬದಲಾವಣೆ ಆಗಬೇಕು ಎಂಬ ನಿಲುವುಗಳನ್ನು ಕೃತಕವಾಗಿ ದಾಖಲಿಸಿಬಿಡುವ ಭಾವಗಳನ್ನಷ್ಟೇ ಬಿತ್ತುವುದಕ್ಕಷ್ಟೇ ಸೀಮಿತವಾಗುತ್ತವೆ.

ನನ್ನದೇ ಮನೆಯ ಪಕ್ಕದ ಅಥವಾ ಸಮೀಪದ ಗುಡಿಸಿಲಿನವರನ್ನು ಇನ್ನುಮೇಲೆಯಾದರೂ ಮನುಷ್ಯರನ್ನಾಗಿ ನೋಡಬೇಕು ಎಂಬ ದೃಷ್ಟಿಕೋನವನ್ನು ಬಿತ್ತುವಲ್ಲಿ ಇವು ಸೋಲುತ್ತವೆ. ಅಲ್ಲಿಗೇ ಬಣ್ಣದ ನೆಲೆಯಲ್ಲಿಯೇ ರೂಪುಗೊಳ್ಳುವ ಅಸಮಾನತೆಯ ಜಗತ್ತಿನ ವಿಕೃತ ಸ್ವರೂಪದ ಬೇರು ಇನ್ನಷ್ಟು ಗಟ್ಟಿಯಾಗಿಯೇ ಉಳಿದುಕೊಂಡುಬಿಡುವ ಲಕ್ಷಣಗಳು ದಟ್ಟವಾಗಿಬಿಡುತ್ತವೆ.

ರೈತನ ಆತ್ಮಹತ್ಯೆಗೆ ಸುದ್ದಿ ಮಾಧ್ಯಮಗಳು ಬಳಿಯುವ ಬಣ್ಣ ಕೃತಕವಾದುದು. ಮುದ್ರಿತ ದಿನಪತ್ರಿಕೆಗಳ ಪುಟಗಳ ಬ್ಲಾಕ್ ಆ್ಯಂಡ್ ವೈಟ್ ಬಣ್ಣದಲ್ಲಿ ಕಾಣಿಸಿಕೊಳ್ಳುವ ಸುದ್ದಿ ಓದುಗನಲ್ಲಿ ಆ ಕ್ಷಣಕ್ಕೆ ಅಯ್ಯೋ ಎಂಬ ಭಾವವನ್ನು ಮೂಡಿಸುತ್ತದೆ. ಇತ್ತೀಚೆಗೆ ಕೆಲವು ಪತ್ರಿಕೆಗಳು ಇದೇ ತರಹದ ಸುದ್ದಿಯನ್ನು ವರ್ಣಮುದ್ರಣದೊಂದಿಗೆ ಕಟ್ಟಿಕೊಟ್ಟಾಗ ಅಯ್ಯೋ ಎನ್ನುವ ಆಂತರಿಕ ಭಾವ ಇನ್ನಷ್ಟು ತೀವ್ರಗೊಳಿಸಬಹುದು ಎಂಬ ನಿರೀಕ್ಷೆಯಿರಿಸಿಕೊಂಡಿರುತ್ತವೆ. ‘ದಿ ಹಿಂದೂ’ ಸೇರಿದಂತೆ ಕೆಲವೇ ಕೆಲವು ಪತ್ರಿಕೆಗಳು ರೈತನ ಆತ್ಮಹತ್ಯೆಗೆ ಸಂಬಂಧಿಸಿದಂತೆ ವಾಸ್ತವಿಕವಾದ ಯಥಾವತ್ ವಿವರಗಳನ್ನು ಯಾವುದೇ ಬಗೆಯ ವರ್ಣರಂಜಿತ ನಿರೂಪಣೆ ಇಲ್ಲದೇ ನಮ್ಮ ವಿವೇಚನೆಯ ಅಂತರಿಕ ಶಕ್ತಿಯನ್ನು ವಿಸ್ತರಿಸುವ ರೀತಿಯಲ್ಲಿ ಪ್ರಸ್ತಾಪಿಸುತ್ತವೆ. ಇದೇ ಸುದ್ದಿ ಟೆಲಿವಿಷನ್ ಮಾಧ್ಯಮದ ಮೂಲಕ ಬಂದರೆ ಮಣಭಾರದ ಮೇಕಪ್ ಹೊರೆ ಹೊತ್ತುಕೊಂಡ ಆ್ಯಂಕರ್‍ಗಳ ಧ್ವನಿಯಲ್ಲಿ ಕೃತಕತೆಯನ್ನು ಪಡೆದುಕೊಂಡುಬಿಡುತ್ತದೆ.

ಹಿಂಸೆ, ಸೆಕ್ಸ್, ರಾಜಕೀಯ ವೈಚಿತ್ರ್ಯಗಳನ್ನು ಬಿಂಬಿಸುವಾಗ ಬಳಸುವ ಧ್ವನಿಶೈಲಿಯನ್ನೇ ರೈತನ ಆತ್ಮಹತ್ಯೆ, ನೈಸರ್ಗಿಕ ವಿಕೋಪ ಸಂದರ್ಭದ ಸಾವು-ನೋವುಗಳನ್ನು ಬಿಂಬಿಸುವಾಗ ಬಳಸುತ್ತಾರೆ. ಅನೇಕ ಅತಿಥಿ ಉಪನ್ಯಾಸಕರು ಕೋವಿಡ್-19 ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ತೊಂದರೆಗೀಡಾಗಿದ್ದಾರೆ. ಕೆಲವರು ಆತ್ಮಹತ್ಯೆಯನ್ನೇ ಪರಿಹಾರವಾಗಿಸಿಕೊಂಡರು.

ಈ ಬಿಂಬಗಳು ರೋಚಕ ರೀತಿಯಲ್ಲಿಯೇ ಇರುತ್ತವೆ. ಪತ್ರಿಕೆಗಳಲ್ಲಿ ಕಂಡುಬರುವ ವೈಚಾರಿಕ ನೋಟಗಳೊಂದಿಗಿನ ವಿಶ್ಲೇಷಣೆಯ ಮಾದರಿ ದೃಶ್ಯಮಾಧ್ಯಮದಲ್ಲಿ ಕಾಣಿಸಿಕೊಳ್ಳುವುದೇ ಇಲ್ಲ. ಕಾಣಿಸುವ ಇರಾದೆಯೂ ಸುದ್ದಿ ಚಾನಲ್‍ಗಳವರಿಗೆ ಇರುವುದಿಲ್ಲ. ಆತ್ಮಹತ್ಯೆ ಮತ್ತು ಸಾವು ಕೂಡಾ ಅವರಿಗೆ ಉತ್ಪನ್ನಗಳ ಹಾಗೆಯೇ ಮಾರಾಟ ಮಾಡಬಹುದಾದ ಅಂಶಗಳು. ಹಾಗಾಗಿಯೇ ಸುದ್ದಿಬಿಂಬಿಸುವಿಕೆಯ ವೇಳೆ ಕೃತಕತೆಯ ಬಣ್ಣ ಆವರಿಸಿಕೊಂಡುಬಿಡುತ್ತದೆ. ಈ ರೀತಿಯ ವರ್ಣರಂಜಿತ ಸುದ್ದಿಬಿಂಬಗಳು ಪ್ರಭುತ್ವವನ್ನು ಎಚ್ಚರಿಸುವುದು ಒತ್ತಟ್ಟಿಗಿರಲಿ, ಜನರೊಳಗೆ ಪ್ರತಿರೋಧದ ಯಾವ ಆಲೋಚನೆಯನ್ನೂ ನೆಲೆಗೊಳಿಸುವುದಿಲ್ಲ.

ಒಬ್ಬರು ಮತ್ತೊಬ್ಬರನ್ನು ಟೀಕಿಸುತ್ತಾರೆ, ಅಮಾಯಕರೊಬ್ಬರು ಅತ್ಯಾಚಾರಕ್ಕೀಡಾಗುತ್ತಾರೆ, ಯಾರದೋ ಮನೆಯ ಕೋಟಿಗಟ್ಟಲೆ ಹಣ ದೋಚಲ್ಪಡುತ್ತದೆ, ವಿಕೃತನೊಬ್ಬ ಹಲವರನ್ನು ಕೊಲೆಗೈದು ಅಟ್ಟಹಾಸಗೈಯ್ಯುತ್ತಾನೆ, ಯಾರೋ ಮತ್ತಿನ್ಯಾರಿಗೂ ಕಿರುಕುಳವನ್ನು ನೀಡುತ್ತಾರೆ, ಒಬ್ಬರು ಮತ್ತೊಬ್ಬರಿಗೆ ಕೊಲೆಗೈಯ್ಯುವ ಧಮ್ಕಿ ಹಾಕುತ್ತಾರೆ, ಇನ್ನೂ ಅದ್ಭುತ ಭವಿಷ್ಯವಿರುವ ಖ್ಯಾತ ನಟ ಅಕಾಲಿಕ ಮರಣಕ್ಕೀಡಾಗುತ್ತಾನೆ, ಕೊರೊನಾ ವೈರಸ್ ಜಗತ್ತನ್ನು ಸ್ತಬ್ದಗೊಳಿಸಿ ಜನಜೀವನದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತದೆ – ಇವೆಲ್ಲ ಸಂದರ್ಭಗಳಲ್ಲಿ ಅತ್ಯಂತ ಸಂಯಮದ ಧಾಟಿಯಲ್ಲಿ ಸುದ್ದಿ ನಿರೂಪಣೆ ಇರಬೇಕಾಗುತ್ತದೆ. ಆದರೆ, ಸುದ್ದಿ ಮಾಧ್ಯಮಗಳು ಅದರ ಬದಲು ಸುದ್ದಿಗಿರುವ ಸದಭಿರುಚಿಯ ಸ್ವರೂಪಕ್ಕೆ ಕೊಡಲಿಪೆಟ್ಟು ನೀಡುವ ಹಾಗೆ ನಡೆದುಕೊಳ್ಳುತ್ತವೆ.

ಇದನ್ನು ದೃಢಪಡಿಸುವಂತೆಯೇ ಸುದ್ದಿ ಚಾನಲ್‍ಗಳು ಕೋವಿಡ್-19 ಬಿಕ್ಕಟ್ಟು ತೀವ್ರವಾಗಿದ್ದ ದಿನಗಳಲ್ಲಿ ನಡೆದುಕೊಂಡಿವೆ. ಈಗಲೂ ಅವುಗಳದ್ದು ಅದೇ ಧಾಟಿ. ಹೀಗಾಗಿಯೇ ಸೋಷಿಯಲ್ ಮೀಡಿಯಾ ಮೂಲಕ ಸುದ್ದಿ ಚಾನಲ್‍ಗಳ ವಿಚಿತ್ರ ನಡಾವಳಿಗಳನ್ನು ವ್ಯಂಗ್ಯಕ್ಕೀಡು ಮಾಡುವ ಮಾತು, ಚರ್ಚೆಗಳು ವ್ಯಕ್ತವಾಗುತ್ತಲೇ ಇವೆ. ವೈರಸ್‍ವೊಂದು ಜಗತ್ತನ್ನೇ ತಲ್ಲಣಗೊಳಿಸಿದ ಸಂದರ್ಭದಲ್ಲಿ ಮನುಷ್ಯಸಹಜ ವಿಕೃತಿಗಳು ಬೇರೆ ಬೇರೆ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ.

ನಾವಿರುವ ದೇಶ, ಇಲ್ಲಿಯ ಧರ್ಮ, ಧರ್ಮವನ್ನು ಅಪಭ್ರಂಶಗೊಳಿಸಿದ ಶಕ್ತಿಗಳು, ಅವುಗಳ ನೆರವಿನೊಂದಿಗೇ ಪ್ರಭುತ್ವವನ್ನು ಪ್ರತಿನಿಧಿಸುವ ವರ್ಗ, ಸಮಾನತೆಯ ಸದಾಶಯಗಳನ್ನೇ ನೆಚ್ಚಿಕೊಂಡು ಅಧಿಕಾರಕ್ಕೆ ಬಂದವರ ವಲಯ – ಎಲ್ಲರೂ ಅವರವರ ಮೂಗಿನ ನೇರಕ್ಕೆ ಯೋಚಿಸುತ್ತಾ ವಿತಂಡವಾದಗಳನ್ನು ಮಂಡಿಸುವ ಉತ್ಸಾಹ ವ್ಯಕ್ತಪಡಿಸುತ್ತಾರೆ.

ಅವರ ಈ ವಿಚಿತ್ರ ಉತ್ಸಾಹವನ್ನು ಹೆಚ್ಚಿಸುವ ಹಾಗೆ ಸುದ್ದಿಯ ಕಂಟೆಂಟ್ ಪ್ರಸ್ತುತಪಡಿಸಲ್ಪಟ್ಟರೆ ಪ್ರಯೋಜನವಿಲ್ಲ ಎಂದು ಸುದ್ದಿಮಾಧ್ಯಮಗಳು ಯೋಚಿಸುವ ಆಶಾದಾಯಕ ವಾತಾವರಣ ಈಗಿಲ್ಲ ಎಂಬುದೇ ಆತಂಕಕಾರಿ ಸಂಗತಿ. ಇದರ ಮಧ್ಯೆ ಕೆಲವರಾದರೂ ಅಗತ್ಯವಿದ್ದವರಿಗೆ ಚಾನಲ್‍ನ ವೇದಿಕೆಯ ಮೂಲಕ ನೆರವಾದರು ಎಂಬ ಸಮಾಧಾನವಿದ್ದರೂ ಅದೇ ತೆರನಾದ ಸಹಾಯಕ ಪಾತ್ರ ಬಹುಸಂಖ್ಯಾತ ಸುದ್ದಿಮಾಧ್ಯಮಗಳಿಂದ ಏಕೆ ಆಗಲಿಲ್ಲ ಎಂಬ ಪ್ರಶ್ನೆಗೆ ಮತ್ತದೇ ಬಣ್ಣ-ರುಚಿಯ ಕುರಿತದ ಅಪವ್ಯಾಖ್ಯಾನದ ವ್ಯಾಮೋಹದ ಕಾರಣವೇ ಉತ್ತರವಾಗುತ್ತದೆ.

ಮಾಹಿತಿ ಮತ್ತು ಶಿಕ್ಷಣ ಇವೆರಡೂ ಜನಬದುಕಿಗೆ ಹೊಸ ಹೊಳಪು ನೀಡುವ, ಹೊಸ ಬಗೆಯ ಅಭಿರುಚಿಯನ್ನು ನೆಲೆಗೊಳಿಸುವಂಥವು. ಬದಲಾವಣೆಗೆ ಕಾರಣವಾಗುವಂಥವು. ಹೀಗೆಯೇ ಅವುಗಳು ಸುದ್ದಿಯಲ್ಲಿ ಪ್ರತಿಫಲನಗೊಳ್ಳಬೇಕಿತ್ತು. ಅದೇ ಆಧಾರದಲ್ಲಿಯೇ ಸುದ್ದಿಯು ಜೀವಪರವಾಗಿ ಯೋಚಿಸುವ ಶಕ್ತಿಯಾಗಿ ಪರಿವರ್ತಿತವಾಗಬೇಕಿತ್ತು.

ಆದರೆ, ಭ್ರಮೆಗಳನ್ನು ಬಿತ್ತುವ ಕೃತಕತೆಯ ಬಣ್ಣ, ದೇಹ-ಮನಸ್ಸನ್ನು ಕಲುಷಿತಗೊಳಿಸಿ ಅಪಾಯಕಾರಿಯಾಗುವ ರುಚಿ ಮತ್ತು ಬಲವೇ ಇಲ್ಲದ ನಿಶ್ಯಕ್ತ ತಾತ್ಪೂರ್ತಿಕ ಶಕ್ತಿಯನ್ನೇ ಮುಖ್ಯ ಎಂದು ಬಿಂಬಿಸುವ ಸರಕು ವಿಕೃತಿಯ ಜಾಡ್ಯ ಸುದ್ದಿಗೂ ಅಂಟಿಕೊಂಡಿರುವುದು ಅಪಾಯಕಾರಿ ಎಂದೆನ್ನಿಸುತ್ತದೆ.

ಓದುಗ, ನೋಡುಗ ಮತ್ತು ಕೇಳುಗ ಸಮೂಹಕ್ಕೆ ಇರುವ ಒಂದೇ ಒಂದು ದಾರಿ ಎಂದರೆ ಬಣ್ಣ, ರುಚಿ ಮತ್ತು ಶಕ್ತಿಯಲ್ಲದ ಶಕ್ತಿಯ ಹುಸಿಬಿಂಬಗಳಿಗೆ ಮಾರುಹೋಗದೇ ಇರುವುದು. ಹಾಗೆ ಮಾರುಹೋಗದೇ ನಮ್ಮನ್ನು ದಾರಿತಪ್ಪಿಸುವ ಹುನ್ನಾರಗಳನ್ನು ಬಹುಬೇಗ ಅರ್ಥೈಸಿಕೊಳ್ಳುವುದು. ಸದ್ಯಕ್ಕೆ ಮತ್ತು ಭವಿಷ್ಯಕ್ಕೆ ಬೇಕಾಗುವ ಬದಲಾವಣೆಯನ್ನು ತಂದುಕೊಳ್ಳುವುದು ಹೇಗೆ ಎಂದು ರಚನಾತ್ಮಕವಾಗಿ ಯೋಚಿಸುವುದು.

ಈ ದಾರಿಯಲ್ಲಿ ಇಡೀ ಜನಸಮೂಹ ನಡೆದರೆ ಸುದ್ದಿ ಮಾಧ್ಯಮಗಳ ಮೇಲೆ ಸಕಾರಾತ್ಮಕ ಒತ್ತಡ ಬೀಳುತ್ತದೆ. ಅಂತರಂಗದ ವಿವೇಚನಾತ್ಮಕ ಹೊಂಬಣ್ಣವನ್ನು ಹೆಚ್ಚಿಸಿಕೊಳ್ಳುವ, ಬೌದ್ಧಿಕ ಸದಭಿರುಚಿಯನ್ನು ನೆಲೆಗೊಳಿಸಿಕೊಳ್ಳುವ ಮತ್ತು ಆ ಕಾರಣಕ್ಕಾಗಿಯೇ ನಮ್ಮ ಕಾಲವನ್ನು ಎಲ್ಲ ತಲ್ಲಣಗಳಿಂದ ವಿಮುಕ್ತಗೊಳಿಸುವ ಸ್ವಯಂಶಕ್ತಿಯನ್ನು ಜಾಗೃತಗೊಳಿಸಿಕೊಳ್ಳುವ ಮನೆಮದ್ದಾಗಿ ಸುದ್ದಿ ರೂಪುಗೊಳ್ಳುತ್ತದೆ ಎಂದು ನಿರೀಕ್ಷಿಸುವ ಆಶಾಭಾವ ಚಿಗುರೊಡೆಯುತ್ತದೆ. ಬಣ್ಣ, ರುಚಿ ಮತ್ತು ಶಕ್ತಿಯ ಅಪವ್ಯಾಖ್ಯಾನ ತಪ್ಪುತ್ತದೆ. ಪ್ರತಿವರ್ಷವೂ ಆಚರಿಸಲ್ಪಡುವ ‘ಪತ್ರಿಕಾ ದಿನಾಚರಣೆ’ಯು ಹಳೆಯದ್ದರ ಆರಾಧನಾ ಮಹೋತ್ಸವವಾಗದೇ ಅರ್ಥಪೂರ್ಣತೆ ದಕ್ಕಿಸಿಕೊಳ್ಳುತ್ತದೆ.

ತಂತ್ರಜ್ಞಾನವೊಂದು ಆವಿಷ್ಕøತವಾಗುತ್ತದೆ. ಆ ಕಾರಣಕ್ಕಾಗಿಯೇ ಪ್ರಯೋಗಶೀಲರೊಬ್ಬರು ಹೊಸದೊಂದನ್ನು ಪ್ರತಿಷ್ಠಾಪಿಸುತ್ತಾರೆ. ಆ ಪ್ರತಿಷ್ಠಾಪನೆಯ ಸುಸಂದರ್ಭವನ್ನು ಸ್ಮರಣೀಯವಾಗಿಸಿಕೊಳ್ಳುವ ಮತ್ತು ಆಯಾ ಕಾಲದಲ್ಲಿ ಹೊಸ ಆಯಾಮ ಪಡೆದುಕೊಳ್ಳುವ ಸಾಧ್ಯತೆಗಳು ವಿಸ್ತಾರವಾಗುತ್ತಾ ಹೋಗುತ್ತವೆ. ಮುದ್ರಣ ತಂತ್ರಜ್ಞಾನ ಭಾರತಕ್ಕೆ ಕಾಲಿಟ್ಟ ನಂತರ ಕನ್ನಡದ್ದೇ ಆದ ಸುದ್ದಿ ಪರಂಪರೆ ಶುರುವಾದ ಐತಿಹಾಸಿಕತೆಯ ಮೆಲುಕಿನ ಸಂದರ್ಭವಾಗಿ ಮಾತ್ರ ಪತ್ರಿಕಾ ದಿನಾಚರಣೆ ಗ್ರಹಿಸಲ್ಪಡಬಾರದು.

ಬದಲಾಗಿ ಸದ್ಯದ ಬಿಕ್ಕಟ್ಟು, ಭವಿಷ್ಯದ ಸವಾಲುಗಳನ್ನು ಎದುರಿಸುವ ಮನೋಸ್ಥೈರ್ಯವನ್ನು ಕನ್ನಡದ ಸುದ್ದಿ ಮಾಧ್ಯಮಗಳು ರೂಢಿಸಿಕೊಳ್ಳಬಹುದಾದ ಸದಭಿರುಚಿಯ ಸಾಧ್ಯತೆಗಳ ಅನ್ವೇಷಣೆಯೊಂದಿಗೆ ಸ್ವಯಂಮೌಲ್ಯಮಾಪನದ ಮಹತ್ವದ ಅವಕಾಶವಾಗಿ ಪ್ರೇರಣೆಯಾಗಬೇಕು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಭಾರತದ ಜನಸಂಖ್ಯೆ ವರವೋ..? ಶಾಪವೋ..?

Published

on

ಸಾಂದರ್ಭಿಕ ಚಿತ್ರ

 

  • ಅಂಬಿಕಾ. ಕೆ
    ಎಂ.ಎ. ಪ್ರಥಮ ವರ್ಷದ ವಿದ್ಯಾರ್ಥಿನಿ
    ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
    ಬೆಂಗಳೂರು ವಿಶ್ವವಿದ್ಯಾಲಯ

 

ವಿಶ್ವ ಸಂಸ್ಥೆಯು ಪಾಪುಲೇಷನ್ ಫಂಡ್ ಮಾಡಿರುವ ಅಂದಾಜಿನ ಪ್ರಕಾರ ಭಾರತವು ಜಗತ್ತಿನ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಎನಿಸಿಕೊಂಡಿದೆ.

ದೇಶದ ಒಟ್ಟು ಜನಸಂಖ್ಯೆಯು 142.86 ಕೋಟಿಗೆ ಏರಿಕೆಯಾಗಿದ್ದು, ಚೀನಾ ಎರಡನೇ ಸ್ಥಾನಕ್ಕೆ ಇಳಿದಿದೆ, ಇಂತಹದೊಂದು ಹಿರಿಮೆಗೆ ಭಾರತವು ಪಾತ್ರವಾಗಲಿದೆ ಎಂಬುದರ ಅರಿವು ಹಿಂದೆಯೇ ಇತ್ತು. ಹೊಸ ಭಾರತದ ಜನಸಂಖ್ಯೆಯ ಸ್ವರೂಪವೇನು ಮತ್ತು ಯಾವ ವಯೋ ಮಾನದವರು ಎಷ್ಟಿದ್ದಾರೆ. ಆದಾಯ ಮಟ್ಟ ಹೇಗಿದೆ, ಆದಾಯ ಹಂಚಿಕೆ ಹೇಗಿದೆ ಎಂಬುದರ ಕುರಿತು ಕೂಡ ಚರ್ಚೆಗಳು ನಡೆಯುತ್ತಿವೆ. ಒಟ್ಟು ಜನಸಂಖ್ಯೆಯ ಜತೆಗೆ ಈ ಎಲ್ಲಾ ಅಂಶಗಳು ಕೂಡ ಸರ್ಕಾರದ ನೀತಿಗಳು ಮತ್ತು ಕಾರ್ಯಕ್ರಮ ರೂಪಿಸುವಿಕೆ ಮೇಲೆ ಪ್ರಭಾವ ಬೀರುತ್ತವೆ. ರಾಜಕೀಯ ಪಕ್ಷಗಳು ಮತ್ತು ಗುಂಪುಗಳು ರಾಜಕೀಯ ಹಾಗೂ ಸಾಮಾಜಿಕ ಸ್ಥಾನಗಳನ್ನು ನಿರ್ಧರಿಸುವಲ್ಲಿಯೂ ಈ ಅಂಶಗಳು ಪಾತ್ರವಹಿಸುತ್ತವೆ ಭಾರತದಲ್ಲಿ ಗರಿಷ್ಠ ಸಂಖ್ಯೆಯು ಯುವ ಜನರಿದ್ದಾರೆ.

ಹಾಗೆಯೇ ಮುಂದುವರೆಯಲಿದೆ 15 ರಿಂದ 24 ವರ್ಷದೊಳಗಿನವರ ಸಂಖ್ಯೆಯು 25.4 ಕೋಟಿ ಎಂದು ಅಂದಾಜಿಸಲಾಗಿದೆ ಇನ್ನು ದೀರ್ಘಕಾಲ ಭಾರತವು ಈ ಸ್ಥಿತಿ ಕಾಯ್ದುಕೊಳ್ಳಲಿದೆ ಎಂಬುದರಲ್ಲಿಯೂ ಅನುಮಾನ ಇಲ್ಲ ಜನಸಂಖ್ಯೆಯಲ್ಲಿ ಜಗತ್ತಿನಲ್ಲಿ ಮೊದಲ ಸ್ಥಾನಕ್ಕೆ ಏರುವುದು, ಗೌರವ ಏನು ಅಲ್ಲ ಬದಲಿಗೆ ಇದು ದೇಶಕ್ಕೆ ಹಲವು ಸವಾಲುಗಳನ್ನು ಹುಟ್ಟುತ್ತದೆ ಜತೆಗೆ ಅವಕಾಶಗಳ ಬಾಗಿಗಳನ್ನು ತೆರೆಯುತ್ತದೆ ಆದರೆ, ಜನರನ್ನು ಸಕಾಲಿಕವಾಗಿ ಮತ್ತು ಪರಿಣಾಮಕಾರಿಯಾಗಿ ಬಲಿಸಿಕೊಳ್ಳದೆ ಇದ್ದರೆ ಜನಸಂಖ್ಯೆಯೇ ಶಾಪವಾಗಿ ದೊಡ್ಡ ಸವಾಲಾಗಿ ಪರಿಣಮಿಸಬಹುದು. ದೇಶ ಪ್ರತಿ ವರ್ಷವೂ ಹೆಚ್ಚು ಹೆಚ್ಚು ಜನರಿಗೆ ಆಹಾರ ಬಟ್ಟೆ ಶಿಕ್ಷಣ ಆರೋಗ್ಯ ಸೇವೆ ಉದ್ಯೋಗಾವಕಾಶಗಳನ್ನು ಒದಗಿಸಬೇಕಾಗುತ್ತದೆ.

ಅಂಬಿಕಾ. ಕೆ

ಹೀಗೆ ಮುಂದುವರೆದರೆ ಉದ್ಯೋಗಾವಕಾಶಗಳು ದೊರೆಯದೆ ಜನರ ಜೀವನ ಮಟ್ಟ ಸುಧಾರಿಸಿಕೊಳ್ಳುವುದು ಕಷ್ಟವೇ ಸರಿ ಕೆಲಸ ಮಾಡುವ ವಯೋಮಾನದ ಜನರನ್ನು ಸಮಂಜಸವಾಗಿ ಬಳಸಿಕೊಂಡರೇ ಮಾತ್ರ ಜನಸಂಖ್ಯೆಯು ದೇಶದ ಅಭಿವೃದ್ಧಿಗೆ ಪೂರಕವಾಗಿ ಪರಿಣಮಿಸುತ್ತದೆ. ದೇಶದಲ್ಲಿ ದೊಡ್ಡ ಸಂಖ್ಯೆಯ ಜನರಿಗೆ ಈಗಲೂ ಮೂಲ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗಿಲ್ಲ ಆದ್ದರಿಂದ ಎಲ್ಲಾ ಕ್ಷೇತ್ರಗಳಲ್ಲಿಯೂ ಸಂಬಂಧಿಸಿದ ನೀತಿಗಳು ಮತ್ತು ಕಾರ್ಯತಂತ್ರ ಗಳಿಗೆ ಸಂಬಂಧಿಸಿದ ಪ್ರಯತ್ನಗಳನ್ನು ನಡೆಸದೇ ಇದ್ದರೆ ಜನಸಂಖ್ಯೆ ಹೆಚ್ಚಳದ ಲಾಭವು ದೊರೆಯದೆ ಹೋಗಬಹುದು ಇದರ ಪರಿಣಾಮವಾಗಿ ಲಾಭದ ಹೆಸರಿನಲ್ಲಿ ನಷ್ಟವೇ ಹೆಚ್ಚು ಅದುವೇ ಒಂದು ಹೊರೆಯುವಾಗಬಹುದು.

ಯುವ ಜನರಿಗೆ ಸೌಲಭ್ಯಗಳು ಮತ್ತು ಅವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ಹೆಚ್ಚುತ್ತಲೇ ಇರುವ ಹಿರಿಯ ನಾಗರಿಕರ ಹಾರೈಕೆಯು ವ್ಯವಸ್ಥೆ ಮಾಡಬೇಕಿದೆ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುವುದು ಮತ್ತು ಸವಾಲುಗಳನ್ನು ಎದುರಿಸುವುದು ಭಾರತೀಯರ ಹೊರೆಗಾರಿಕೆ ದೇಶದ ಜನರ ಅಗತ್ಯಗಳನ್ನು ಪೂರೈಸಲು ವಿಫಲವಾದರೆ, ಸಾಮಾಜಿಕ ಸಂಘರ್ಷ ಮತ್ತು ರಾಜಕೀಯ ದೃಷ್ಟಿ ಉಂಟಾಗಿ ಅದು ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು. ಮುಂದೆ ಜನಸಂಖ್ಯಾ ಸ್ಫೋಟವಾದರೂ ಆಶ್ಚರ್ಯ ಪಡಬೇಕಾಗಿಲ್ಲ ಈಗಿನ ಸನ್ನಿವೇಶದಲ್ಲಿ ದೊರಕುತ್ತಿರುವ ಸಂಪನ್ಮೂಲಗಳ ಗರಿಷ್ಠ ಬಳಕೆ ಮತ್ತು ಪರಿಣಾಮಕಾರಿ ಬಳಕೆ ಬಹಳ ಮಹತ್ವವಾಗಿದೆ.

ಮೀಸಲಾತಿ, ವಲಸೆ , ರಾಜಕೀಯ ಪ್ರಾತಿನಿಧ್ಯ ಸಂಪನ್ಮೂಲಗಳ ಹಂಚಿಕೆ ಮತ್ತು ಇದರ ವಿಚಾರಗಳು ಚರ್ಚೆಗೆ ಒಳಗಾಗುವ ಸಾಧ್ಯತೆ ಇದೆ ಸಮಾಜದ ಎಲ್ಲಾ ವರ್ಗಗಳನ್ನು ಸಮಾನವಾಗಿ ಒಳಗೊಳ್ಳುವ ಆರ್ಥಿಕ ಪ್ರಗತಿಯು ಸಾಧ್ಯವಾದರೆ ಜನಸಂಖ್ಯೆ ಏರಿಕೆ ಸವಾಲಾಗಿ ಪರಿಣಮಿಸಬಹುದು ಮಾನವ ಅಭಿವೃದ್ಧಿಯೇ ಅತ್ಯುತ್ತಮ ಕುಟುಂಬ ಕಲ್ಯಾಣ ಯೋಜನೆ ಇದರಿಂದ ಜನಸಂಖ್ಯೆಯ ಏರಿಕೆಯನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬಹುದು ಜನಸಂಖ್ಯೆ ಹೆಚ್ಚಳ ಯಾವುದೋ ಒಂದು ಸಮುದಾಯ ಕಾರಣ ಎಂದು ದೂಷಿಸುವ ಪ್ರವೃತ್ತಿಗೆ ಜ್ಞಾನದಾದ ಆಧಾರ ಇಲ್ಲದ ಪೂರ್ವಗ್ರಹ ಕಾರಣದಿಂದ ಮತ್ತು ಇದು ತಪ್ಪು ನಡವಳಿಕೆಯ ಜನಸಂಖ್ಯೆಗೆ ಸಂಬಂಧಿಸಿದ ಸವಾಲುಗಳನ್ನು ಉತ್ತಮವಾಗಿ ಮತ್ತು ಜಾಣ್ಮೆಯಿಂದ ನಿರ್ವಹಿಸಿದರೆ ಈ ಶತಮಾನವನ್ನು ಭಾರತದ ಶತಮಾನವನ್ನಾಗಿ ಪರಿವರ್ತಿಸುವ ಅವಕಾಶ ನಮ್ಮ ಮುಂದೆ ಇದೆ ಜನರೇ ನಮ್ಮ ದೇಶದ ಸಂಪನ್ಮೂಲವನ್ನಾಗಿ ಮಾರ್ಪಾಡು ಮಾಡಿಕೊಳ್ಳುವ ಅವಕಾಶ ನಮ್ಮ ನಿಮ್ಮೆಲ್ಲರ ಮೇಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬಾಬಾ ಸಾಹೇಬ ಅಂಬೇಡ್ಕರರ ‘ಧ್ಯಾನ’ ಗಾಯನ ; ವಿನೂತನ

Published

on

 

  • ವೆನ್ನೆಲಾ ಕೆ.
    ಎಂ.ಎ. ಪ್ರಥಮ ವರ್ಷದ ವಿದ್ಯಾರ್ಥಿನಿ,
    ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,
    ಬೆಂಗಳೂರು ವಿಶ್ವವಿದ್ಯಾಲಯ,ಬೆಂಗಳೂರು

ತ್ತೀಚೆಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಅನನ್ಯ ಮಾಧ್ಯಮ ಮತ್ತು ಬೆಳ್ಳಿತೆರೆ ಸಂಸ್ಥೆಯ ವತಿಯಿಂದ ಆಯೋಜಿಸಿದ 132ನೇ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರ ಜನುಮ ನಿಮಿತ್ತವಾಗಿ “ಧಾನ್ಯ” ‘ಗಾಯನವು’ ವಿನೂತನವಾದ ಈ ಕಾರ್ಯಕ್ರಮವು 5 ಘಂಟೆ, 1ನಿಮಿಷ, 14 ಸೆಕೆಂಡ್ ಗೆ ಆರಂಭವಾಗಿದ್ದು ಅವಿಸ್ಮರಣೀಯವಾದ ದಿನ, ಇದೊಂದು ಭಾರತ ಇತಿಹಾಸದ ಪುಟದ ಚರಿತ್ರೆಯಲ್ಲೇ ಹೊಸ ದಾಖಲೆಯೂ ಅಂತ ಹೇಳಬಹುದು.

ಈ ಕಾರ್ಯಕ್ರಮವನ್ನು ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ವು ಇಡೀ ಭಾರತದಲ್ಲೇ ಯಾರು ಮಾಡಿರದ ಈ ವಿನೂತವಾದ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಬೆಂಗಳೂರು ನಗರದಲ್ಲಿರುವ ಗಾಂಧಿ ಭವನದ ಆವರಣದಲ್ಲಿ ‘ಅನನ್ಯ ಸಂಸ್ಥೆ’ ವತಿಯಿಂದ 132 ನೇ ‘ವಿಶ್ವದ ವೀರ ವಿದ್ಯಾರ್ಥಿ ಹುಟ್ಟಿದ ದಿನ’ ಹಾಗೂ ‘ರಾಷ್ಟ್ರದ ಸ್ಫೂರ್ತಿಯ ದಿನ’ ‘ಸರ್ವ ಸಮುದಾಯದ ಶಕ್ತಿಯ ದಿನ’ ಇದೊಂದು ನಮ್ಮೆಲ್ಲರ ಹಬ್ಬದ ದಿನ ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಇಂತಹ ಮೇರು ಶಿಖರ ಟ್ಯಾಗ್ ಲೈನ್ ಗಳಿಂದ ಅದ್ಭುತವಾಗಿ
ಆಯೋಜಿಸಿದ ಕಾರ್ಯಕ್ರಮಕ್ಕೆ ರಾಜ್ಯ ಕಂಡ ಪ್ರಸಿದ್ಧ ಐಪಿಎಸ್ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು, ಸಿನಿಮಾ ಸೆಲೆಬ್ರಿಟಿಗಳು, ಸಮಸ್ತ ವಿದ್ಯಾರ್ಥಿ ಸಮೂಹ, ಸಾಮಾಜಿಕ ನ್ಯಾಯದ ವಿಚಾರಶೀಲರು, ಬರಹಗಾರರು, ಪತ್ರಕರ್ತರು ಇನ್ನೂ ಅನೇಕ ಮುಂತಾದವರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಇದಕ್ಕೆ ಮುಖ್ಯ ಕಾರಣಕರ್ತರಾದ ಅನನ್ಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶ್ರೀ ರಾಂಪುರ ರಾಜೇಶ್ ರವರ ನಿರ್ದೇಶನದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿದ್ದು ಹೆಮ್ಮೆಯ ವಿಷಯ.

ಇದರ ಹಿನ್ನೆಲೆ: ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ದಲ್ಲಿ ಅತ್ಯುತ್ತಮ ಹಾಗೂ ಅತ್ಯಂತ ತುಂಬಾ ಮನಸ್ಸಿನಿಂದಲ್ಲೇ ವಿಶೇಷವಾದ ಆಸಕ್ತಿಯನ್ನು ಅಂಬೇಡ್ಕರ್ ರವರು ಸಂಗೀತ ಪ್ರಿಯರು ಹಾಗೂ ಅಂಬೇಡ್ಕರ್ ರವರು ಸುಶ್ರಾವ್ಯವಾಗಿ ವಯಲಿನ್ ನುಡಿಸುತ್ತಿದ್ದರು. ಹಾಗೇಯೆ ಇವರಿಗೆ ಚಿತ್ರಕಲೆಯೂ ಸಹ ಒಲಿದಿತ್ತು ಎಂಬುದು ಗಮನಾರ್ಹ ಸಂಗತಿ. ಇಂತಹ ವಿಷಯವನ್ನು ಯಾರು ಸಹ ಬೆಳಕು ಚೆಲ್ಲುವ ಸಾಹಸಕ್ಕೆ ಕೈ ಹಾಕಿ ಇರಲಿಲ್ಲ. ಇದೊಂದು ಅನನ್ಯ ಸಂಸ್ಥೆ ವತಿಯಿಂದ ಇಂತಹ ಕಾರ್ಯಕ್ರಮ ನಡೆಸಿಕೊಟ್ಟಿದ್ದು ಐತಿಹಾಸಿಕ ಚರಿತ್ರೆಗೆ ಮುನ್ನುಡಿವಾಗಿದೆ.

ಅಂಬೇಡ್ಕರ್ ರವರಿಗೆ ತಮ್ಮ ಬಿಡುವಿನ ವೇಳೆಯಲ್ಲಿ ಅದ್ಭುತವಾದ ಒಬ್ಬ ಸಂಗೀತ ಪ್ರಿಯರಾಗಿದ್ದರು. ಇವರು ಸುಶ್ರಾವ್ಯವಾಗಿ ವಯಲಿನ್ ನುಡಿಸುತ್ತಿದ್ದರು ಹಾಗೂ ವಿಶೇಷವಾಗಿ ಚಿತ್ರಕಲೆ ಸಹ ಸರಳವಾಗಿ ಮಾಡುವ ಮೂಲಕ ತಮ್ಮ ಮನದಲ್ಲಿ ಆಸಕ್ತಿ ಹೊಂದಿದ್ದರು. ಇನ್ನು ಹಲವಾರು ವಿಷಯದಲ್ಲಿ ಅಂದರೆ ಅಂಬೇಡ್ಕರ್ ರವರಿಗೆ ವಿಶೇಷವಾದ ಇವುಗಳಲ್ಲಿ ಆಸಕ್ತಿ ಮತ್ತು ಅಭಿರುಚಿಯನ್ನು ಹೊಂದಿದ್ದರು ಎಂಬುದನ್ನು ಮನಗಂಡ ಅನನ್ಯ ಸಂಸ್ಥೆಯ ವತಿಯಿಂದ ಆಯೋಜಿಸಿದ ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮವು ಅತ್ಯುತ್ತಮವಾಗಿ ಮೂಡಿಬಂದಿದೆ.

ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮದಲ್ಲಿ ವಿಶೇಷವಾಗಿ ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕರು ಹಾಗೂ ಚಿತ್ರ ಸಾಹಿತ್ಯಗಳು, ಅಂಬೇಡ್ಕರ್ ವಾದಿಗಳು ಮತ್ತು ಚಿತ್ರರಂಗದ ಬಹುಮುಖ ಪ್ರತಿಭೆ, ಮಹಾಗುರುಗಳಾದ ಡಾ. ಹಂಸಲೇಖ ರವರು ಹೊಸದಾಗಿ ಹಾಡನ್ನು ಬರೆದದ್ದು ತುಂಬಾ ಅವಿಸ್ಮರಣೀಯ ಅಂತ ಹೇಳಬಹುದು. ಇವರು ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪ್ರೊತ್ಸಾಹ ನೀಡಿದ್ದು, ಸರ್ವ ಸಮುದಾಯದಕ್ಕೆ ಹೊಸ ಶಕ್ತಿ ತುಂಬಿದ್ದು ಮೇರು ವ್ಯಕ್ತಿಯಾಗಿದ್ದಾರೆ.

ವೆನ್ನೆಲಾ ಕೆ.

ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮದಲ್ಲಿ ಮುಖ್ಯವಾದ ಅಂಶವೆಂದರೆ ಇದರಲ್ಲಿ ಒಟ್ಟು ನಾಲ್ಕು ಭಗವಾನ್ ಬುದ್ಧ, ಅಂಬೇಡ್ಕರ್, ಬಸವೇಶ್ವರ ಮುಂತಾದರವರನ್ನು ವಿಷಯಗಳನ್ನು ಪರಿಗಣಿಸಿ ಅಂಬೇಡ್ಕರ್ ಧ್ಯಾನ ಹಾಡುಗಳ ರಚಿಸಿವುದರಲ್ಲಿ ಪ್ರಮುಖವಾಗಿ ರಾಜ್ಯದ ಹೆಸರಾಂತ ಸಾಹಿತಿ, ಪ್ರಗತಿಪರ ಚಿಂತಕರು ಹಾಗೂ ಮಾಜಿ ಅಧ್ಯಕ್ಷರಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರಿನ ಪ್ರೊ.ಎಸ್.ಜಿ.ಸಿದ್ದರಾಮಯ್ಯನವರ
‘ಧೀ ಶಕ್ತಿಯೇ … ಜ್ಞಾನ ಪರ್ವತದ … ಧೀಮಂತ ಧೀಶಕ್ತಿಯೇ …
ಇಂತಹ ಸಾಲುಗಳನ್ನು, ಡಾ. ಕೈ.ವೈ.ನಾರಾಯಣಸ್ವಾಮಿರವರ ದೀಪಾ …. ಎಲ್ಲರೆದೆಯಲಿ … ಹಚ್ಚಿದ ದೀಪಾ .. ಭೂಪಾ … ಭೂಪಾ … ಭೀಮಾ ಭೂಪಾ .. ಬಾಬಾ .. ಸಾಹೇಬ್.. ಜೀವಸ್ವರವೇ … ಬಾಬಾ.. ಹಾಗೂ ರವಿ ಮರಿಯಪ್ಪರವರ ಹತ್ತು ಸಾವಿರ ವಯಲಿನನ್ನು … ವೀಣೆಗಳು ನೂರೆಂಟು … ಕೋಟಿ ಕೋಟಿ ಎದೆ ಸದ್ದಿನ ಡೊಳ್ಳು … ಸಂಯೋಜಿಸಿದರೇ .. ಸಂವಿಧಾನಾ … ಮತ್ತು ಚಿತ್ರ ಸಾಹಿತಿ, ಹೆಸರಾಂತ ಸಂಗೀತ ನಿರ್ದೇಶಕರು ಡಾ. ಹಂಸಲೇಖ ರವರು ನಿನ್ನ ಮೌನಾ … ದೀನ ಗಾನಾ… ನಿನ್ನ ಧ್ಯಾನಾ .. ಸಂವಿಧಾನಾ … ಈ ನಾಲ್ಕು ಅಂಬೇಡ್ಕರ್ ಧ್ಯಾನ ರಚನೆಗೆ ಇವರುಗಳ ಬರೆದಿರುವ ಅದ್ಭುತವಾದ ಅಂಬೇಡ್ಕರ್ ರವರ ಧ್ಯಾನ ಹಾಡುಗಳನ್ನು ನಮ್ಮ ಹಿಂದುಸ್ತಾನಿ ಸಂಗೀತ ಹಾಡುಗಳ ಮೂಲಕ ಕನ್ವರ್ಟ್ ಮಾಡುವ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿತು.

ಹಾಗೆಯೇ ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮವು ಬಹಳಷ್ಟು ಯಶಸ್ವಿಯಾಗಬೇಕಾದರೆ ಈ ಮೊದಲು ಪುಟ್ಟರಾಜ ಗವಾಯಿಗಳ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ಶ್ರೀ ಡಿ. ಕುಮಾರ್ ದಾಸ್ ಅವರ ವಿದ್ವತ್ ಶರೀರದಲ್ಲಿ ‘ಧ್ಯಾನ ಗಾಯನ’ ಹಾಗೂ ಇವರ ತಂಡದ ವತಿಯಿಂದ ನಡೆಸಿಕೊಟ್ಟ ಅದ್ಭತವಾದ ಅಂಬೇಡ್ಕರ್ ರವರ ಧ್ಯಾನವು ಹಿಂದುಸ್ತಾನಿ ಸಂಗೀತದ ಕನ್ವರ್ಟ್ ಮಾಡುವ ಮುಖಾಂತರ ಈ ಹಾಡುಗಳನ್ನು ಬಹಳ ಸೊಗಸಾಗಿ ಮೂಡಿಬಂದಿದ್ದು ಹೊಸ ದಾಖಲೆಗೆ ಸೇರ್ಪಡೆಯಾಗಿದೆ.

ಇನ್ನು ಮುಂಬರುವ ದಿನಗಳಲ್ಲಿ ಅದಷ್ಟು ಹಲವಾರು ವಿನೂತನವಾದ ಭಗವಾನ್ ಬುದ್ಧರ, ಬಸವೇಶ್ವರರ ಹಾಗೂ ವಿಶ್ವದ ವೀರ ವಿದ್ಯಾರ್ಥಿಯಾದ ಮೇರು ರಾಷ್ಟ್ರದ
ನಾಯಕರಾದ ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ರವರ ಹಲವಾರು ಹಾಡುಗಳನ್ನು
ಅನನ್ಯ ಮಾಧ್ಯಮ ಮತ್ತು ಬೆಳ್ಳಿತೆರೆ ಸಂಸ್ಥೆಯ ವತಿಯಿಂದ ಆಯೋಜಿಸಿದರೆ ಇನ್ನುಷ್ಟು ಭಾರತದ ಇತಿಹಾಸದ ಪುಟಗಳಲ್ಲಿ ಮರೆತು ಹೋಗಿರುವ ಹಲವು ಬಗ್ಗೆ ದಾಖಲೆ ಇಲ್ಲದ ನೈಜ ಸಂಗತಿಗಳನ್ನು ಪುನಃ ಹೊಸ ದಾಖಲೆಗೆ ಉಪಯುಕ್ತವಾದ ವಿಶಿಷ್ಟವಾದ ಮೇರು ನಾಯಕನ
ಅಂಬೇಡ್ಕರ್ ರವರ ವಿಚಾರ ಧಾರೆಗಳು ತಾವು ಅನುಭವಿಸಿದ ನೋವು, ನಲಿವು, ಭಾರತದ ರಾಜ್ಯಾಂಗದ ಶಿಲ್ಪಿಯನ್ನು ಮುಂಬರುವ ದಿನಗಳಲ್ಲಿ ಹೊಸ ಪೀಳಿಗೆಯ ಪರಿಚಯಿಸುವ ಕೀರ್ತಿದಾಯಿಕವಾಗಲಿ ಮತ್ತು ಅದಷ್ಟು ಮುಂಬರುವ ದಿನಗಳಲ್ಲಿ ಅಂಬೇಡ್ಕರ್ ರವರ ಆಸಕ್ತಿದಾಯಕ ವಿಚಾರಗಳು ಹಾಗೂ ಸಂಗೀತದ ಬಗ್ಗೆ ಹಲವಾರು ಮಾಹಿತಿಗಳು ಸಮಸಮಸಮಾಜಕ್ಕೆ ತಲುಪುವ ವ್ಯವಸ್ಥೆಗೆ ಸಾಕ್ಷಿಯಾಗಲಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ರಷ್ಯಾದಲ್ಲಿ ಓಂ – ಭರತಾಸ್- ರಾಮ – ರಾವಣ ಲಂಕೇಶ – ಮಾರೀಚ – ಸೀತ ನದಿಗಳು..!

Published

on

  • ಲಕ್ಷ್ಮೀಪತಿ ಕೋಲಾರ, ಸಂಶೋಧಕರು, ಸಂಸ್ಕೃತಿ‌ ಚಿಂತಕರು, ಬೆಂಗಳೂರು

ಸ್ಲಾವ್ ಸಮುದಾಯದ ಲಿತುವೇನಿಯ, ಲಾತ್ವಿಯ, ಬೆಲಾರಸ್,ಉಕ್ರೇನ್ ಮತ್ತು ರಷಿಯಾದಂತಹ ದೇಶಗಳ ನದಿ,ನಗರಗಳು ಸಂಸ್ಕೃತ ಮೂಲದ ಹೆಸರುಗಳನ್ನೆ ಇಂದಿಗು ಉಳಿಸಿಕೊಂಡಿರುವುದು ಆ ಭಾಷೆ ಮತ್ತು ಸಂಬಂಧಿತ ಸಂಸ್ಕೃತಿಯೊಂದಿಗೆ ಅವು ಹಿಂದೊಮ್ಮೆ ಹೊಂದಿದ್ದ ಬಲವಾದ ನಂಟಿಗೆ ಸಾಕ್ಷಿಯಾಗಬಲ್ಲವು.

ಇದರೊಂದಿಗೆ ಉತ್ತರ ಭಾರತದ ಆರ್ಯ ವೈದಿಕರ ಭಾಷೆ ಸಂಸ್ಕೃತಿಯೊಂದಿಗೆ ಸ್ಲಾವ್ ಸಮುದಾಯಕ್ಕೆ ಎಷ್ಟು ನಿಕಟ ಸಂಬಂಧವಿತ್ತೆಂಬುದನ್ನು ಮತ್ತು ನಾಲ್ಕೈದು ಸಾವಿರ ವರ್ಷಗಳ ಹಿಂದೆ ಈ ಎಲ್ಲ ಆರ್ಯ ಸಮುದಾಯಗಳು ಒಟ್ಟಿಗೆ ಒಂದೆಡೆಯೇ ಕಳ್ಳುಬಳ್ಳಿಗಳಾಗಿ ಜೀವಿಸಿದ್ದರೆಂಬುದನ್ನ ಈ ಹಿನ್ನೆಲೆಯಲ್ಲಿ ನಾವು ಗ್ರಹಿಸಬಹುದಾಗಿದೆ.

ಅದರಲ್ಲು ವಿಶೇಷವಾಗಿ ಲಿತುವೇನಿಯ ಮತ್ತು ರಷಿಯಾದ ನದಿಗಳ ಹೆಸರುಗಳು ಎಷ್ಟು ಸಂಸ್ಕೃತಮಯವು (ಇಂಡೋ – ಯುರೋಪಿಯನ್ ಭಾಷಾಮೂಲದ) ಮತ್ತು ವೈದಿಕರ ಪುರಾಣ ಮೂಲದವು ಆಗಿವೆ ಎಂದರೆ, ನಂಬಲಿಕ್ಕು ಅಸಾಧ್ಯ ಎಂಬಂತಿವೆ. ಇದರರ್ಥ ಸ್ಲಾವ್ ಜನರು ವೈದಿಕರ ಪುರಾಣಗಳಿಂದ ಪ್ರೇರಿತಗೊಂಡಿದ್ದಾರೆ ಎಂಬುದಲ್ಲ.

ಬದಲಿಗೆ ವೈದಿಕರ ಇಂದಿನ ಪುರಾಣ – ಸಂಸ್ಕೃತಿ – ಭಾಷೆಗಳು ವೈದಿಕರಿಗೆ ಎಷ್ಟು ಸಂಬಂಧಿಸಿದ್ದೋ ಅದಕ್ಕು ಹೆಚ್ಚಿನದಾಗಿ ಸ್ಲಾವ್ ಸಮುದಾಯಕ್ಕೂ ಸಂಬಂಧಿಸಿದ್ದಾಗಿದ್ದವು. ಹಾಗೆ ನೋಡಿದರೆ ಬ್ರಹ್ಮ – ವೇದ ಮೂಲವು ಕೂಡ ಸ್ಲಾವ್ ಸಮುದಾಯದ ಉತ್ತರ ಧ್ರುವ ಪ್ರದೇಶಕ್ಕೆ ಹೋಗಿ ನಿಲ್ಲುತ್ತದೆ ಎಂಬುದು ಸೋಜಿಗವಾದರು ನಿರ್ವಿವಾದವಾಗಿ ಚಾರಿತ್ರಿಕ ಸತ್ಯವಾಗಿದೆ. 12 – 13 ನೇ ಶತಮಾನಗಳಲ್ಲಿ ಸ್ಲಾವ್ ಜನರು ಕ್ರೈಸ್ತರಾಗಿ ಪರಿವರ್ತಿತರಾಗುವವರೆಗು ಅವರು ಶತಾಂಶ ಮತ್ತು ಥೇಟ್ ಶ್ರೇಷ್ಟ ಆರ್ಯ ವೈದಿಕರೆ ಆಗಿದ್ದರು.

ರಷ್ಯ ಮತ್ತು ಲಿತುವೇನಿಯಾಗಳಲ್ಲಿ ಭರತಾಸ್, ಓಂ, ರಾಮ, ಸೀತ, ಲಂಕೇಶ, ರಾವಣ, ಮಾರೀಚ, ನೆಮುನ (ಯಮುನ), ಕಾಮ, ಯಂತ್ರ, ಶ್ವೇತೆ, ದ್ರವ, ಮೋಕ್ಷ, ಋಗ್ವೇದದ ದಾನವ ಮಾತೆ ದನು ನೆನಪಿನ ದನುಬೆ ಮುಂತಾದ ನದಿಗಳು ಮತ್ತು ನಾರದ (ಈಗ ನರೋದ್ನಯ ಎಂದಿದ್ದರು ಸ್ಥಳೀಯರು ನಾರದ ಬೆಟ್ಟ ಎಂದೇ ಕರೆಯುತ್ತಾರೆ) ಹೆಸರಿನ ಬೆಟ್ಟವು ಇವೆ ಎಂದರೆ ಯಾರೂ ಅಚ್ಚರಿಪಡುವಂತದ್ದೆ.

ಯಾರಿಗಾದರು ಈ ಸಂಗತಿಗಳಲ್ಲಿ ಅನುಮಾನ ಹುಟ್ಟುವುದು ಸಹಜವೆ. ಯಾಕೆಂದರೆ ಸ್ಲಾವ್ – ವೈದಿಕ ಆರ್ಯರ ಮೂಲ ಪ್ರದೇಶವೆ ಉತ್ತರ ದ್ರುವ ಪ್ರದೇಶವಾಗಿತ್ತು ಎಂಬ ಚರಿತ್ರೆಯನ್ನೇ ನಮ್ಮಿಂದ ಮರೆಮಾಚಲಾಗಿತ್ತು ಮತ್ತು ಅದು ಬಹುದೊಡ್ಡ ಸಾಂಸ್ಕೃತಿಕ ರಾಜಕಾರಣವೂ ಆಗಿತ್ತು. ಆದರೆ ತಿಲಕರು ತಮ್ಮ “Arctic Home In the Vedas” ಎಂಬ ಪುಸ್ತಕದಲ್ಲಿ ಉತ್ತರ ಭಾರತದ ವೈದಿಕ ಆರ್ಯರ ತವರು ನೆಲ ಉತ್ತರ ದ್ರುವ ಪ್ರದೇಶವೆ, ಅಂದರೆ ಇಂದಿನ ಲಿತುವೇನಿಯ, ಲಾತ್ವಿಯ, ಬೆಲಾರಸ್ ಪ್ರದೇಶಗಳೇ ಆಗಿದ್ದವು ಎಂದು ಸಮರ್ಥ ಸಾಕ್ಷಾಧಾರಗಳೊಂದಿಗೆ ನಿರೂಪಿಸಿದ್ದಾರೆ.

ರಷ್ಯಾದಲ್ಲಿ ಸಂಸ್ಕೃತ ಭಾಷಾಮೂಲದ ನೂರಾರು ನದಿಗಳಿವೆ. ಭಾರತದಲ್ಲಿ ಕೆಲವು ನದಿಗಳನ್ನ ಹೊರತುಪಡಿಸಿದರೆ ಆ ಪ್ರಮಾಣದ ವೈದಿಕ ಪುರಾಣ ಮೂಲದ ನದಿ ಹೆಸರುಗಳು ಈ ನೆಲದಲ್ಲಿ ಇಲ್ಲವೆಂಬುದು ಪ್ರಾಚೀನ ಕಾಲದಿಂದಲು ಆರ್ಯ ವೈದಿಕರು ಇಲ್ಲಿರಲಿಲ್ಲವೆಂಬುದನ್ನೇ ಸೂಚಿಸುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending