Connect with us

ನೆಲದನಿ

ನೆಲಮೂಲ ಬದುಕಿನ ತತ್ವಾನುಸಂಧಾನ: ನಾಗತಿಹಳ್ಳಿ ರಮೇಶ್ ಅವರ ‘ಜೀವಜೀವದ ಹಾಡು’

Published

on

ಸಾಹಿತ್ಯವು ನಿಂತ ನೀರಲ್ಲ, ಅದು ಸದಾ ಪ್ರವಹಿಸುವ ನದಿಯಿದ್ದಂತೆ. ಅದು ವಿವಿಧ ಪ್ರಕಾರದಲ್ಲಿ ತನ್ನ ಅಸ್ಮಿತೆಯನ್ನು ಪ್ರದರ್ಶಿಸುತ್ತ ಬಂದಿರುವುದು ಚಾರಿತ್ರಿಕ ಸತ್ಯ. ಇಂತಹ ಸಾಹಿತ್ಯವನ್ನು ಪ್ರಮುಖ ಕೇಂದ್ರವಾಗಿಟ್ಟುಕೊಂಡು ಹಲವರು ಕೃಷಿ ಮಾಡಿದ್ದಾರೆ. ಕನ್ನಡ ಸಾಹಿತ್ಯ ಪ್ರಕಾರದಲ್ಲಿ ಬಹುಬೇಗ ಜನತೆಯ ಮನತಟ್ಟುವ, ಅತ್ಯಂತ ವೇಗವಾಗಿ ಮನ ಮಿಡಿಯುವ ಕಾವ್ಯ ಪ್ರಕಾರವನ್ನು ಮುಖ್ಯವಾಗಿಟ್ಟುಕೊಂಡು ಹಲವು ಕವಿ ಮನಸುಗಳು ಕಾವ್ಯ ಪ್ರಯೋಗ ಮಾಡಿವೆ. ಇದಕ್ಕೆ ಕನ್ನಡ ಕಾವ್ಯ ಶ್ರೀಮಂತಿಕೆಯು ಜ್ವಲಂತ ಸಾಕ್ಷಿಯಾಗಿ ಕಂಡುಬರುತ್ತದೆ.

ಇಂತಹ ಕಾವ್ಯದ ಮರೆಯಲ್ಲಿ ಸಮಕಾಲೀನ ಸಂದರ್ಭದ ತುಡಿತ ಮಿಡಿತ, ಸಹಬಾಳ್ವೆ ಸಹಕಾರ, ಶಾಂತಿ ಸಹನೆ, ಕರುಣೆ ಅಹಿಂಸೆಯಂತಹ ಜೀವಕಾರುಣ್ಯವನ್ನು ಸಾರುವ ಕವಿಗಳ ಸಾಲಿನಲ್ಲಿ ಗುರುತಿಸಿಕೊಂಡವರು ನಾಗತಿಹಳ್ಳಿ ರಮೇಶ್ ಅವರು ಒಬ್ಬರಾಗಿದ್ದಾರೆ. ಇವರ ಕಾವ್ಯ ಸೊಗಡು ಶ್ರಮಮೂಲ ಬದುಕಿನ ಜೀವಂತಿಕೆಯಿಂದ ಕೂಡಿದೆ. ಈ ಶ್ರಮಮೂಲ ಬದುಕಿನ ಸಂವೇದನೆಗಳನ್ನು ಸೆರೆಹಿಡಿಯುವ ಇವರ ಪ್ರಯತ್ನ ಕೇವಲ ನೋಡಿ ಕಲಿತದ್ದಲ್ಲ. ಸ್ವತಃ ಅನುಭವ ಕಥನವಾಗಿ ಭಾವಗಳನ್ನು ತೆರೆದುಕೊಳ್ಳುತ್ತದೆ. ಆ ಮೂಲಕ ಬದುಕಿನ ವಿವಿಧ ಸ್ತರಗಳನ್ನು ಇವರ ಕಾವ್ಯಗಳು ಬಿಚ್ಚಿಕೊಳ್ಳುತ್ತವೆ.

ಕಾವ್ಯ ಕೇವಲ ಅಕ್ಷರ ರೂಪದಲ್ಲಿದ್ದಾಗ ಸಾಹಿತ್ಯಾಸಕ್ತ ಓದುಗ ವರ್ಗ ಮಾತ್ರ ಅದನ್ನು ಸವಿಯಬಹುದು. ಇಂದಿನ ಯಾಂತ್ರಿಕ ಮತ್ತು ಜಾಗತಿಕ ಒತ್ತಡದ ಕಾರಣದಿಂದಾಗಿ ಓದುವವರ ಪ್ರಮಾಣವು ಕಡಿಮೆಯಾಗಿದೆ. ಇದಕ್ಕೆ ಹಲವು ಕಾರಣಗಳಿವೆ. ಆದರೆ ಕಾವ್ಯವನ್ನು ಆಸ್ವಾಧಿಸುವ ಮನಸುಗಳಿಗೆ ಬರವಂತು ಇಲ್ಲ. ಬಹುಮುಖಿ ಪ್ರತಿಭೆಯಾಗಿರುವ ನಾಗತಿಹಳ್ಳಿ ರಮೇಶ್ ಅವರು ಈ ವಾಸ್ತವವನ್ನು ಅರಿತು, ತಮ್ಮ ಕಾವ್ಯಕ್ಕೆ ಸಂಗೀತ ಮತ್ತು ರಾಗ ಸಂಯೋಜನೆಯೊಂದಿಗೆ ಹೊಸದೊಂದು ಸ್ವರೂಪವನ್ನು ನೀಡಿ ಸಮಾಜಕ್ಕೆ ಸಮರ್ಪಿಸಿದ್ದಾರೆ. ಇದುವೆ ‘ಜೀವಜೀವದ ಹಾಡು’. ಎಂಬ ಧ್ವನಿ ಹೊತ್ತಿಗೆ. ಈ ಜೀವಜೀವದ ಹಾಡಿನ ಅಡಿಯಲ್ಲಿ ವ್ಯಕ್ತವಾಗಿರುವ ಕವಿತೆಗಳು ಬರೀ ಪ್ರೇಮ ಕವಿತೆಗಳಲ್ಲ, ಸರಸ ಸಲ್ಲಾಪ, ಪ್ರಣಯ ಪ್ರಸಂಗಗಳನ್ನು ಸೆರೆಹಿಡಿದ ಪದಗುಚ್ಚವಲ್ಲ. ಈ ನಾಡಿನ ಶ್ರಮಿಕ ವರ್ಗವು ತನ್ನ ದಿನನಿತ್ಯದ ಜೀವನದಲ್ಲಿ ಅನುಭವಿಸುವ ಸಂಕಷ್ಟ, ನೋವು, ಯಾತನೆ, ಶೋಷಣೆ ದಬ್ಬಾಳಿಕೆಗಳಿಂದ ಆರಂಭವಾಗಿ, ಈ ಎಲ್ಲಾ ವೇದನೆಗಳಾಚೆಗಿನ ಸಂವೇದನೆಗಳನ್ನು ಚಿತ್ರಿಸುವ ಕಾವ್ಯಗುಚ್ಚ ಜೀವಜೀವದ ಹಾಡು. ಶ್ರಮಿಕ ಬದುಕು ಮತ್ತು ಪ್ರಾಕೃತಿಕ ತತ್ವಗಳನ್ನು ಅನುಸಂಧಾನಗೊಳಿಸುವ ಈ ಕಾವ್ಯಗುಚ್ಚವು ಬರುಡ ನೆಲೆದಲ್ಲಿ ಚಿಗುರಿದ ಗರಿಕೆಯಂತೆ ಹೊಸ ಬದುಕಿಗೆ ನಾಂದಿಯಾಡುತ್ತದೆ. ಇಲ್ಲಿ ಕಡುಕಷ್ಟದ ನಡುವೆಯೂ ತನ್ನ ಕನಸುಗಳನ್ನು ಜೀವಂತಗೊಳಿಸುವ ಮನುಷ್ಯನ ಬದುಕಿನ ಚಿತ್ರಣವನ್ನು ಸಾರುವ ಕವಿತೆಯೊಂದು ಹೀಗಿದೆ:

ಸುಡುವ ಭೂಮಿಯ ಮೇಲೆ

ಮೋಡ ಕಣ್ಣ ಹಾಯಿಸಿ

ಹೊಲಗದ್ದೆ ಬಯಲಲ್ಲಿ

ಜೀವ ಜೀವದ ಹಾಡು

ಎಂದು ಆರಂಭವಾಗುವ ಕವಿತೆಯು ಮಾನವನ ಬದುಕಿನ ವಿವಿಧ ಸ್ತರಗಳನ್ನು ಅನುಸಂಧಾನಗೊಳಿಸುತ್ತ, ಯಾಂತ್ರಿಕೃತ ವಲಯದಲ್ಲಿ ಮಾನವ ಸಂಬಂಧಗಳು ತನ್ನ ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವ ಸ್ವರೂಪವನ್ನು ಅನಾವರಣಗೊಳಿಸುತ್ತಲೆ, ಹೊಸ ಕನಸೊಂದಕ್ಕೆ ಮುನ್ನುಡಿಯನ್ನು ಬರೆಯುವ ಕ್ರಮವೊಂದು ಹೀಗಿದೆ;

ಮನುಜ ಮನುಜರ ನಡುವೆ

ಕೊಳೆತಿರುವ ಪ್ರೀತಿ ಬೇರೂರಿ

ಚಿಗುರೊಡೆದು ಜೀವ ಜೀವದ ಹಾಡು

ಎಂಬಲ್ಲಿ ಹೊಸ ಬದುಕಿನ ಆಶಾ ಗೋಪುರದ ನಿರ್ಮಾಣದ ಕನವರಿಕೆ ಈ ಕವಿತೆಯಲ್ಲಿ ವೇದ್ಯವಾಗುತ್ತದೆ. ಇಲ್ಲಿನ ಬಹುತೇಕ ಕವಿತೆಗಳಲ್ಲಿ ತಳಸಮುದಾಯದ ಶ್ರಮಿಕರ ಬದುಕನ್ನು ಪ್ರಕೃತಿಯೊಂದಿಗೆ ಅನುಸಾಂಧಾನಗೊಳಿಸುವ ಕ್ರಮವು ವಿಶಿಷ್ಟಯಿಂದ ಕೂಡಿದೆ. ಆ ಮೂಲಕ ಜೀವಪರ ನಿಲುವುಗಳನ್ನು ಪ್ರತಿಪಾದಿಸುವುದು ಕಂಡುಬರುತ್ತದೆ. ಪ್ರಕೃತಿಯ ಮಡಿಲಿನಲ್ಲಿ ಶ್ರೇಷ್ಟ ಕನಿಷ್ಟವೆಂಬ ಪರಿಕಲ್ಪನೆಗಳು ಎದುರಾಗುವುದಿಲ್ಲ. ಇದು ಮಾನವ ನಿರ್ಮಿತ ತಂತ್ರ. ಈ ತಂತ್ರಗಾರಿಕೆಯನ್ನು ಪ್ರಾಕೃತಿಕ ತತ್ವದ ಅಡಿಯಲ್ಲಿ ಮೀರುವ ಪ್ರಯತ್ನವೊಂದು ಜೀವಜಲದಂತೆ ಕವಿತೆಯ ಮೂಲಕ ಪ್ರವಹಿಸುತ್ತದೆ.

ಯಾರು ಬಡವ ಯಾರು ದನಿಕ

ಹುಟ್ಟು ಸಾವಿನೆದುರಲಿ

ಗಾಳಿ ಬೆಳಕು ಯಾರ ಸ್ವತ್ತು

ಎಂದು ಪ್ರಶ್ನೆ ಮಾಡುವ ಕವಿ, ಪ್ರಕೃತಿಯ ಮಡಿಲಿನಲ್ಲಿ ಮಾನವ ಜಗತ್ತೆಲ್ಲ ಒಂದೆ ಎಂಬುದನ್ನು ಪ್ರತಿಪಾದಿಸಲು ಮುಂದಾಗಿದ್ದಾರೆ. ಗಾಳಿ ಅಲೆಯುವುದಕ್ಕಾಗಲಿ, ನೀರು ಹರಿಯುವುದಕ್ಕಾಗಿ ಹಾಗೆಯೇ ಬೆಂಕಿ ಉರಿಯುವುದಕ್ಕೆ ಯಾರ ಅಪ್ಪಣೆಯ ಅಗತ್ಯವಿಲ್ಲ ಎಂಬ ಸಾರ್ವತ್ರಿಕ ಸತ್ಯವನ್ನು ಪ್ರತಿಪಾದಿಸುವಾಗ ಒಬ್ಬ ಸಂತನಾಗಿ, ತತ್ವಪದಕಾರನಾಗಿ ಲೋಕ ನೀತಿಯನ್ನು ಎತ್ತಿಹಿಡಿಯುವ ಪ್ರಯತ್ನ ಮಾಡುತ್ತಾರೆ. ಹಾಗೆಯೇ ಪ್ರಕೃತಿ ಮತ್ತು ಮಾನವ ಸಂಬಂಧದ ಸರಪಳಿಯು ವಿವಿಧ ಆಯಾಮಗಳಲ್ಲಿ ಕಾವ್ಯ ಸ್ವರೂಪವನ್ನು ಪಡೆದುಕೊಂಡಿದೆ. “ಆ ಬೆಟ್ಟದ ಮೇಲೆ ಕಾಡೆಲ್ಲ ಬರಡು, ಹೊಂಗೆಯ ಹೂವರಳಿ ಕೆಳಗೆ ಚೆಲ್ಲಿದೆ ನೆರಳು” ಎಂದು ಆರಂಭವಾಗುವ ಕವಿತೆಯು ಬೆಟ್ಟ ಗುಡ್ಡ, ನದಿ ಕಣಿವೆಗಳಲ್ಲಿ ಜೀವತಳೆದ ಜೀವರಾಶಿಗಳ ಜೀವನ ಕ್ರಮವನ್ನು ದರ್ಶಿಸುತ್ತಲೆ, ಆ ಪರಿಸರದಲ್ಲಿನ ಪರಸ್ಪರಾವಲಂಭಿ ಆಹಾರ ಕ್ರಮದಲ್ಲಿ “ಹಾವು ಕಪ್ಪೆಯ ಹಿಡಿದು ನುಂಗಲು ಕಾಯುತಿದೆ, ಕಪ್ಪೆಯು ತಲೆಯ ಮೇಲಿನ ನೊಣಕೆ ಬೇಸರಿಸಿದೆ” ಎಂಬ ಪ್ರಾಕೃತಿಕ ತತ್ವವನ್ನು ಅನಾವರಣಗೊಳಿಸುತ್ತದೆ.

ಜೀವ ಭಾವಗಳ ಬೆಸೆಯುವ ಸೇತುವೆಯಂತೆ ಸಿದ್ಧಗೊಂಡ ನಾಗತಿಹಳ್ಳಿ ರಮೇಶ್ ಅವರ ಕಾವ್ಯಗಳು ಸದಾ ತುಡಿತ ಮಿಡಿತವನ್ನು ಹೊರ ಸೂಸುತ್ತವೆ. ಎರಡು ಜೀವಗಳ ಭಾವಸೆಲೆಗಳನ್ನು “ನಾನೊಂದು ಮರ ನೀನೊಂದು ಮರ, ಒಂದೆ ತಾವು ನಮಗೆ” ಎಂಬ ಕವಿತೆಯ ಮೂಲಕ ಬೆಸೆಯುವ ಪ್ರಯತ್ನ ಮಾಡಿದ್ದಾರೆ. ಬಿಸಿಲ ಬೇಗೆಗೆ ಧಣಿದ ಮನಗಳೆರಡು ಮಳೆ ಹನಿಯಿಂದ ತಂಪಾಗುವ ಕ್ರಿಯೆಗೆ ಪರಿತಪಿಸುವ ಬಗೆಯು ಜೀವ ಕಾರುಣ್ಯದಿಂದ ಕೂಡಿದೆ. “ಯಾಕೊ ಹನಿಯ ಸುಳಿವಿಲ್ಲ, ಮುಗಿಲೆಡೆಗೆ ನಮ ಧ್ಯಾನ” ಎಂಬ ಕಾತರದ ನುಡಿಗಳು ಹಸಿವು ಮತ್ತು ಹಂಬಲಿಕೆಯ ಪ್ರತಿರೂಪವಾಗಿ ಕಂಡುಬರುತ್ತವೆ. ಹೀಗೆ ಪರಿತಪಿಸುವ ಮನಗಳಿಗೆ ಯಾರೋ ಇಬ್ಬರು ಬಂದು ನೀರೆರೆಯುವ ಬಗೆಯನ್ನು ಜ್ಯಾತ್ಯಾತೀತ ನೆಲೆಯ ಮೂಲಕ ವ್ಯಕ್ತಪಡಿಸುತ್ತಾರೆ. ‘ಯಾರೋ’ ಎನ್ನುವ ರೂಪಕವೆ ಜಾತಿ, ಮತ, ಪಂಥಗಳನ್ನು ಮೀರಿದ ಜೀವ ಜಗತ್ತಾಗಿದೆ. ಮಣ್ಣು, ನೀರು ಮಿಲನವಾಗಿ ಪ್ರಕೃತಿಯು ಮರುಜೀವ ಪಡೆಯುವ ದೃಷ್ಟಿಕೋನ ಇಲ್ಲಿ ಜೀವಂತಿಕೆಯಿಂದ ಕೂಡಿದೆ. ಈ ಮಿಲನದ ಅಡಿಯಲ್ಲಿ ಜೀವ ಭಾವಗಳು ಅನುಸಂಧಾನಗೊಳ್ಳುವ ಕ್ರಮ ಹೀಗೆ ಮುಂದುವರೆಯುತ್ತದೆ;

ಮುತ್ತು ಮುತ್ತಿಗೂ ಅರಳಿದೆ ಮಡಿಲು

ಬೆವರು ಮಳೆಯಾಗಿ ಸೇರಿದೆ ಕಡಲು

ತುಟಿಯಲಿ ಬೆಸೆದ ಆ ಕನಸು

ಚಿಪ್ಪಲಿ ಮುತ್ತಾಯ್ತು, ಮುತ್ತೆಲ್ಲ ಒಲವಾಯ್ತು

ಹೀಗೆ ಹಸಿವಿನಿಂದ ಬರಡಾದ ಜೀವಗಳೆರಡನ್ನು ಸಾಮರಸ್ಯದ ನೆಲೆಯಲ್ಲಿ ಬೆಸೆಯುವ ಮತ್ತು ಪ್ರಕೃತಿಯೊಂದಿಗೆ ಅನುಸಂಧಾನಗೊಳಿಸುವ ವಿಶಿಷ್ಟ ಆಯಾಮವೊಂದು ಇಲ್ಲಿ ಜೀವ ಭಾವಗಳ ಬಂಧವಾಗಿ ಮುಂದುವರೆಯುತ್ತದೆ.

‘ಜೀವಜೀವದ ಹಾಡು’ ಎಂಬ ಈ ಕಾವ್ಯಗುಚ್ಚದ ಮೂಲಕವಾಗಿ ಸಿದ್ಧಗೊಂಡ ಗಾನ ಸುರುಳಿಯು ಶ್ರಮ ಮತ್ತು ಹಸಿವಿನ ಸಂಕಥನವನ್ನು ಅನಾವರಣಗೊಳಿಸುತ್ತ ಮುಂದೆ ಸಾಗುತ್ತದೆ. ನಾಗತಿಹಳ್ಳಿ ರಮೇಶ್ ಅವರು ತಮ್ಮ ಬಾಲ್ಯ ಜೀವನದಲ್ಲಿ ಅನುಭವಿಸಿದ ಹಸಿವಿನ ಕಥನವನ್ನು ಕಾವ್ಯವಾಗಿಸಿದ ಬಗೆ ಗಮನಾರ್ಹವಾಗಿದೆ. ಬದುಕಿನ ಮುಮ್ಮುಖ ಚಲನೆಯಲ್ಲಿ ಸಾಗಿದ ವ್ಯಕ್ತಿಯೊಬ್ಬ, ತನ್ನ ಹಿಂದಿನ ದಿನಗಳನ್ನು ಹಿಂತಿರುಗಿ ನೋಡಿದಾಗ ಉಂಟಾಗುವ ಸಂವೇದನೆಗಳ ಭಾವಲಹರಿಯು ಇದಾಗಿದೆ. ಇದು ಪ್ರತಿಯೊಬ್ಬ ವ್ಯಕ್ತಿಯನ್ನು ಅವರ ಬಾಲ್ಯದ ಸಂವೇದನೆಗಳೊಂದಿಗೆ ಮುಖಾಮುಖಿಯಾಗಿಸುತ್ತದೆ. “ಎಲ್ಲಿರುವನು ಅವನು” ಎಂದು ತನ್ನ ಬಾಲ್ಯದ ಸಂಕಷ್ಟವನ್ನು ಅನುಭವಿಸಿದ ತನ್ನೊಳಗಿನ ತನ್ನನ್ನು ಹುಡುಕಿಕೊಳ್ಳು ಮೂಲಕವಾಗಿ, ಮಡಿಕೆಯ ತಳದ ಇಟ್ಟಿನ ಸೀಕಿಗೆ ಕಿತ್ತಾಡಿದ ದಿನಗಳನ್ನು ನೆನಪಿಸಿಕೊಳ್ಳುವ ಬಗೆಯು ಓದುಗ ಮತ್ತು ಕೇಳುಗರನ್ನು ಮಂತ್ರಮುಗ್ದರನ್ನಾಗಿಸುತ್ತದೆ. ಬಟ್ಟೆಯನ್ನು ನೀರೊಳಗಾಡಿಸಿ ಬಾರದ ಮೀನಿಗಾಗಿ ಕಾದಿದ್ದು, ತನ್ನೊಡಲ ಹಸಿವನ್ನು ನೀಗಿಸಲು ಬೇರೆಯವರ ಹೊಲದಲ್ಲಿ ಕದ್ದು ತಂದು ಸುಟ್ಟು ತಿನ್ನುವ ಬಡತನದ ವಿಶಿಷ್ಟ ಅನುಭವಗಳು ಮತ್ತೇ ನನ್ನನ್ನು ಇಪ್ಪತೈದು ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ಯುತ್ತಿವೆ. ನಮ್ಮೂರಿನ ಕಾಲುವೆಯಲ್ಲಿ ಅವ್ವ ಬಟ್ಟೆ ತೊಳೆಯುವಾಗ, ನಾನು ಮತ್ತು ನನ್ನ ಅಕ್ಕಂದಿರು ಬಟ್ಟೆಯನ್ನು ನೀರಿನ ತಳದಲ್ಲಿ ಹಾಸಿ, ಮೀನಿಗೆ ಆಮೀಷ ತೋರಿಸುವ ನೆಪದಲ್ಲಿ ಬಟ್ಟೆಯ ಮೇಲೆ ಮಧ್ಯಾಹ್ನದ ಊಟಕ್ಕೆಂದು ತಂದ ಅನ್ನವನ್ನು ಹಾಕಿ, ಮಿಸುಕಾಡದಂತೆ ಮೀನಿನ ಬರುವಿಕೆಗಾಗಿ ಕಾದುಕುಳಿತಿದ್ದ ನೆನಪುಗಳೆಲ್ಲ ಮಾಸಿ ಹೋಗಿದ್ದವು. ನಾನು ಹುಟ್ಟುವ ವೇಳೆಗೆ ನನ್ನಪ್ಪ ಇಟ್ಟು ಬಟ್ಟೆ ಸರಿಸಮಾನವಾದ ಜೀವನವನ್ನು ರೂಪಿಸಿಕೊಂಡಿದ್ದರು. ಹಾಗಾಗಿ ನಾನು ಇಟ್ಟಿನ ಬರದಿಂದ ದೂರವಿದ್ದವನು. ಆದರೆ ನನ್ನಪ್ಪ ಅವ್ವ ಹಾಗೂ ನನ್ನ ಅಕ್ಕಂದಿರು ಮೆಲುಕು ಹಾಕುತ್ತಿದ್ದ ಹಸಿವಿನ ಕಥನವು ಮಾತ್ರ ಮನದ ಮೂಲೆಯಲ್ಲಿತ್ತು. ಅಂತಹ ಮಾಸಿದ ನೆನೆಪುಗಳ ಪುಟವನ್ನು ಮತ್ತೇ ತೆರೆಸಿದ ನಾಗತಿಹಳ್ಳಿ ರಮೇಶ್ ಅವರ ಕಾವ್ಯಶಕ್ತಿಗೆ ನಾನು ತಲೆಭಾಗಿ ನಮಿಸುತ್ತೇನೆ. ಅವರ ಕೊಡುಗೆ ಹೀಗೆ ಮುಂದುವರೆಯಲ್ಲಿ ಎಂದು ಮನತುಂಬಿ ಹಾರೈಸುತ್ತೇನೆ.

ನಾಗತಿಹಳ್ಳಿ ರಮೇಶ್ ಅವರು ಸದಾ ಕ್ರಿಯಾಶೀಲರಾಗಿ ಒಂದಿಲ್ಲೊಂದು ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ದೇಶ ಸುತ್ತುವ ಮೂಲಕ ಸಂವೇದನೆಗಳನ್ನು ಸೆರೆಹಿಡಿಯುವ ಮೋಡಿಗಾರ. ಇವರದು ನನ್ನದು ಸಾಮಾಜಿಕ ಜಾಲತಾಣದ ಸಂಬಂಧ. ಮುಖಪುಟದಲ್ಲಿ ಗೆಳೆಯನಾಗಿ ಅವರ ಎಲ್ಲಾ ಜೀವಪರ ಕಾಳಜಿಯನ್ನು ಸೂಕ್ಷ್ಮವಾಗಿ ಅರಿತಿದ್ದೇನೆ. ಅವರ ಈ ಜೀವಪರ ಮತ್ತು ಜೀವ ಕಾರುಣ್ಯದ ತುಡಿತ ಹೀಗೆ ಸಾಗಲಿ. ‘ಜೀವಜೀವದ ಹಾಡು’ ಮಾಧುರ್ಯದಿಂದ ಹೊರಬರಲು ಕಾರಣೀಭೂತರಾದ ಸಂಗೀತ ನಿರ್ದೇಶಕರಾದ ಎಸ್.ಆರ್.ರಾಮಕೃಷ್ಣ ಹಾಗೂ ಎಲ್ಲಾ ಹಿನ್ನೆಲೆ ಗಾಯಕರ ಶ್ರಮವು ಮಹತ್ವದ್ದಾಗಿದೆ. ಎಸ್.ಆರ್.ರಾಮಕೃಷ್ಣ ಬಹುಮುಖಿ ಕಲಾವಿದರಾಗಿದ್ದು ಒಬ್ಬ ನಿಷ್ಠಾವಂತ ಪತ್ರಕರ್ತರು, ಚಿಂತಕರು, ಭಾಷಾಂತರಕಾರರಾಗಿಯೂ ಸೇವೆ ಸಲ್ಲಿಸಿದ್ದು, ಸದಾ ಜೀವಪರವಾಗಿ ತುಡಿಯುವ ಸ್ವಭಾವದವರಾಗಿದ್ದಾರೆ. ಇವರ ಒತ್ತಾಸೆಯ ಫಲವಾಗಿ ನಾಗತಿಹಳ್ಳಿ ರಮೇಶ್ ಅವರ ಕವಿತೆಗಳು ಸಂಗೀತ ಮಾಧುರ್ಯದೊಂದಿಗೆ ಮರುಹುಟ್ಟು ಪಡೆದುಕೊಂಡಿವೆ. ಹಾಗೆಯೇ ನಾಗತಿಹಳ್ಳಿ ರಮೇಶ್ ಅವರ ಧ್ವನಿ ಹೊತ್ತಿಗೆಯು ಸಿದ್ಧಗೊಳ್ಳಲು ಅವರ ಆಪ್ತ ವಲಯವು ಹೆಗಲೊಡ್ಡಿ ದುಡಿದಿದೆ. ಇಲ್ಲಿ ಬಹು ಮನುಸುಗಳ ಶ್ರಮವಿದೆ.  ಆ ಮನಸುಗಳು ಈ ಸಮಾಜಕ್ಕೊಂದು ಮಹತ್ತರವಾದ, ಜೀವಪರವಾದ ಸಂದೇಶವನ್ನು ನೀಡಬೇಕೆಂಬ ತುಡಿತವನ್ನು ವ್ಯಕ್ತಪಡಿಸಿವೆ. ಈ ಎಲ್ಲ ಜೀವಪರ ಮನಸುಗಳು ಜೇನುಗೂಡಿನಂತೆ ಕಾರ್ಯನಿರ್ವಹಿಸಿ ಕನ್ನಡ ಸಾಹಿತ್ಯ ಹಾಗೂ ಸಂಗೀತ ಲೋಕಕ್ಕೆ ಮತ್ತಷ್ಟು ಕೊಡುಗೆಗಳನ್ನು ನೀಡುವಂತಾಗಲಿ ಎಂದು ಭಾವನೆಗಳನ್ನು ಬಡಿದೆಬ್ಬಿಸುವ ಈ ಧ್ವನಿ ಹೊತ್ತಿಗೆಯನ್ನು ನೀಡಿದ ಎಲ್ಲರಿಗೂ ಕನ್ನಡ ಸಹೃದಯರ ಪರವಾಗಿ ನಮಿಸುತ್ತೇನೆ.

(ಲೇಖಕರು: ಡಾ.ಕೆ.ಎ. ಓಬಳೇಶ್, ಸಂಶೋಧಕರು. ಇಮೇಲ್: eakantagiri@gmail.com. ಮೊ:
9538345639/ 9591420216 )

ದಿನದ ಸುದ್ದಿ

ಕವಿತೆ | ನೆನಪು

Published

on

ಕವಿ | ರುದ್ರಪ್ಪ ಹನಗವಾಡಿ
  • ರುದ್ರಪ್ಪ ಹನಗವಾಡಿ

ಅಪ್ಪನನ್ನು ಒಪ್ಪ ಮಾಡಿ
ವರ್ಷಗಳೇ ಕಳೆದವು ಮುವ್ವತ್ತೇಳು
ಇಂದಿರಾಗಾಂಧಿಯ ತುರ್ತು ಪರಿಸ್ಥಿತಿ
ಅರಸರ ಮೀಸಲಾತಿ
ಬಸವಲಿಂಗಪ್ಪನವರ ಬೂಸಾ ಖ್ಯಾತಿ
ಮಲ ಹೊತ್ತು
ಮಲಗಿದ್ದ ಕಾಲಕ್ಕೆ
ಚುರುಕು ಮುಟ್ಟಿಸಿದ ಕಾಲ

ಹರೆಯದ ನನಗೆ
ಕಾಲೇಜ ಮೇಷ್ಟರ ಕೆಲಸ
ಸೂಟು ಬೂಟಿನ ವೇಷ
ಆ ಮೇಲೆ ಅಮಲದಾರಿಕೆ
ಎಲ್ಲ ನಡೆದಾಗಲೇ ಅವ್ವನನ್ನು
ಆಸ್ಪತ್ರೆಗೆ ಸೇರಿಸಿದ್ದು
ಕಾಲ ಕಳೆದು ಕೊಂಡು
ಕೋಲ ಹಿಡಿದದ್ದು
ನಿನ್ನೆ ಮೊನ್ನೆಯಂತೆ
ಬಾಲ್ಯವಿನ್ನು ಉಂಟೆಂಬಂತೆ
ಭಾವಿಸುವಾಗಲೇ ಅವ್ವನ ಸಾವು

ಅದರೊಟ್ಟಿಗೆ ಕಾಯದಾಯಾಸ ತೀರಿಸಲು
ಬಂದರೆ ಬೆಂಗಳೂರಿಗೆ
ರೌಡಿಗಳ ಕಾಟ
ಅಂಬೇಡ್ಕರ್ ಪಟದ ಕೆಳಗೆ
ದೌರ್ಜನ್ಯದ ದಂಡು

ಅಮಾಯಕರಿಗೆ ಗುಂಡು
ಕಂಡುಂಡ ಹಾದಿಯ ಗುಡಿಸಲುಗಳಲ್ಲೀಗ
ಮುಗಿಲು ಮುಟ್ಟೋ ಮಹಲುಗಳು
ಅಂತಲ್ಲಿ
ದೇಶ ವಿದೇಶಗಳ
ಅಹವಾಲುಗಳು
ಅವಿವೇಕಗಳು
ನೋಡ ನೋಡುತ್ತಿದ್ದಂತೆ
ಉಸಿರು ಬಿಗಿಹಿಡಿದ ಜನರ ಒಳಗೆ
ಒಳಪದರಗಳೊಳಗೆ ಕನಸ ಬಿತ್ತಿ
ಹಸಿರ ಹೊನ್ನು ಬಾಚಲು ಹವಣಿಸಿದ
ಬಿಳಿ ಜನರ ಆಟ
ಅರ್ಥವಾಗುವುದೇ ಎಲ್ಲ
ಗೋಣ ನೀಡುವರೆ
ಹೂತಿಟ್ಟ ಗೂಟಕ್ಕೆ ?

( ಚಿಂತಕ ರುದ್ರಪ್ಪ ಹನಗವಾಡಿ ಅವರ ‘ಊರು – ಬಳಗ’ ಕವನ ಸಂಕಲನದಿಂದ ‘ ನೆನಪು ‘ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕೃತಿಯನ್ನು ಫ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ 2013 ರಲ್ಲಿ ಪ್ರಕಿಸಿದೆ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ; ಒಂದು ಚಿಂತನೆ

Published

on

  • ಮಹಾಂತೇಶ್.ಬಿ.ನಿಟ್ಟೂರು, ದಾವಣಗೆರೆ

ನಿಜ ಶರಣ ಶ್ರೀ ಅಂಬಿಗರ ಚೌಡಯ್ಯನವರ ಜೀವಿತ ಕಾಲ 12 ನೇ ಶತಮಾನದ ಬಸವಾದಿ ಶರಣರ ಕಾಲದಲ್ಲೇ ಇತ್ತು ಎಂಬುದು ಇತಿಹಾಸಕಾರರ ಸಂಶೋಧನೆಯಿಂದ ತಿಳಿದು ಬರುತ್ತದೆ. ಅವರ ಹುಟ್ಟೂರು ಹಾವೇರಿ ಜಿಲ್ಲೆಯ ಆಗಿನ ಶಿವಪುರ, ಈಗಿನ ಚೌಡಯ್ಯದಾನಪುರ. ಅವರ ತಂದೆಯ ಹೆಸರು ಶ್ರೀ ವಿರೂಪಾಕ್ಷ, ತಾಯಿಯ ಹೆಸರು ಪಂಪಾಂಭಿಕೆ, ಹೆಂಡತಿಯ ಹೆಸರು ಸುಲೋಚನಾ ಹಾಗೂ ಮಗನ ಹೆಸರು ಪುರವಂತ.

ಅಂಬಿಗ ವೃತ್ತಿಯ ಚೌಡಯ್ಯನವರು ಅಲ್ಲಮ ಪ್ರಭು ಮತ್ತು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಇದ್ದ ಒಬ್ಬ ಕ್ರಾಂತಿಕಾರಿ, ದಿಟ್ಟ, ನೇರ, ನಿಷ್ಠುರ ನುಡಿಯ ವಚನಕಾರ. ಕಲ್ಯಾಣ ಕ್ರಾಂತಿಯ ನಂತರ ಇವರು ತಮ್ಮ ವಚನಗಳ ಗಂಟನ್ನು ಹೊತ್ತು ಉಳವಿಗೆ ನಂತರ ತಮ್ಮ ಗ್ರಾಮವಾದ ತುಂಗಭದ್ರಾ ನದಿಯ ದಡದ ಮೇಲಿರುವ ಶಿವಪುರಕ್ಕೆ ಬಂದು ದೋಣಿ ನಡೆಸುವ ವೃತ್ತಿಯಲ್ಲಿ ನಿರತರಾಗಿ ವಚನ ರಚನೆ ಮಾಡಿರುವುದು ತಿಳಿದು ಬರುತ್ತದೆ.

ಚೌಡಯ್ಯನವರು ತಮ್ಮ ಜೀವಿತಾವಧಿಯಲ್ಲಿ ಅನೇಕ ಪವಾಡಗಳನ್ನು ಮಾಡಿರುತ್ತಾರೆ. ಗಿಡಮೂಲಿಕೆ ಔಷಧಿಗಳಿಂದ ಕ್ಷಯ ರೋಗ, ಕುಷ್ಠರೋಗ ಗುಣಪಡಿಸುವುದು, ಹಾವು ಕಚ್ಚಿದವರನ್ನು

ಬದುಕಿಸುವುದು ಇತ್ಯಾದಿ..

ಒಮ್ಮೆ ಗುತ್ತಲದ ಅರಸನು ಬೇಟೆಗಾಗಿ ಈ ಪ್ರದೇಶದಲ್ಲಿ ಸಂಚರಿಸುತ್ತಿದ್ದಾಗ, ಆತನ ಸೇನಾಧಿಪತಿಯು ಹಾವು ಕಚ್ಚಿ ಮೃತಪಟ್ಟನು. ಇದರಿಂದಾಗಿ ಅರಸನಿಗೆ ಅತೀವ ದುಃಖವುಂಟಾಗಿ ರೋಧಿಸತೊಡಗಿದನು. ಆಗ ಆತನ ಸೈನಿಕನೊಬ್ಬನು ಶ್ರೀ ಚೌಡಯ್ಯನವರ ಪವಾಡಗಳ ಬಗ್ಗೆ ವಿವರಿಸಿ ಹೇಳಲಾಗಿ, ಅರಸನು ತನ್ನ ಮೃತ ಸೇನಾಧಿಪತಿಯ ಶರೀರವನ್ನು ಚೌಡಯ್ಯನವರಲ್ಲಿಗೆ ತಂದು ಆತನನ್ನು ಬದುಕಿಸುವಂತೆ ಕೇಳಿಕೊಂಡರು, ಆಗ ಚೌಡಯ್ಯನವರು ಸೇನಾಧಿಪತಿಯನ್ನು ಬದುಕಿಸುತ್ತಾರೆ. ಇದರಿಂದ ಸಂತುಷ್ಟನಾದ ಅರಸನು ಶಿವಪುರದ ಸುತ್ತಲಿನ ಪೂರ್ವ – ಪಶ್ಚಿಮಕ್ಕೆ 14 ಮೈಲು ಹಾಗೂ ಉತ್ತರ – ದಕ್ಷಿಣಕ್ಕೆ 7 ಮೈಲು ಸುತ್ತಳತೆಯ ಭೂಮಿಯನ್ನು ಚೌಡಯ್ಯನವರಿಗೆ ದಾನವಾಗಿ ನೀಡಿದನು.

ಆದರೆ ಚೌಡಯ್ಯನರು ವೈರಾಗ್ಯಶಾಲಿಯು, ಲೌಕಿಕದಲ್ಲಿ ನಿರಾಸಕ್ತಿ ಹೊಂದಿದವರು ಆಗಿದ್ದರಿಂದ, ಅರಸನು ಕೊಡಮಾಡಿದ್ದ ಸಂಪೂರ್ಣ ಜಮೀನನ್ನು ತನ್ನ ಗುರುಗಳಾದ ಶ್ರೀ ಶಿವದೇವರಿಗೆ ದಾನವಾಗಿ ನೀಡಿದರು ಎಂಬ ಉಲ್ಲೇಖವಿದೆ. ಅಂದಿನಿಂದ ಶಿವಪುರ ಗ್ರಾಮಕ್ಕೆ ‘ಚೌಡಯ್ಯದಾನಪುರ’ ಎಂದು ಹೆಸರು ಬರುತ್ತದೆ. ಮುಂದೆ ಚೌಡಯ್ಯನರು ಅಲ್ಲಿ ದೇಹ ತ್ಯಾಗ ಮಾಡಿದ್ದರಿಂದ ತುಂಗಭದ್ರಾ ನದಿಯ ದಡದಲ್ಲಿ ಈಗಲೂ ಚೌಡಯ್ಯನವರ ಸಮಾಧಿ ಗದ್ದುಗೆ ಇದೆ.

ಭ್ರಮಾಲೋಕದಲ್ಲಿ ವಿಹರಿಸುತ್ತಾ ಕುಳಿತ, ಆಡಂಬರದಲ್ಲಿ ಅಡ್ಡಾದಿಡ್ಡಿ ಅಡ್ಡಾಡುವ ಮಂದಿಯ ಕಪಾಳಕ್ಕೆ ಹೊಡೆದು ಎಚ್ಚರಿಸುವಂತಿವೆ ಚೌಡಯ್ಯನವರ ವಚನಗಳು. ಧಾರ್ಮಿಕ ಮೂಢನಂಬಿಕೆ ಬಿತ್ತುವವರಿಗೆ, ಸ್ವಾರ್ಥಿಗಳಾಗಿ ಬದುಕುವವರಿಗೆ, ಮುಖವಾಡ ಹಾಕಿ ಮಂಕು ಬೂದಿ ಎರಚುವವರಿಗೆ ಸಿಂಹ ಸ್ವಪ್ನದಂತೆ ಬೆಚ್ಚಿ ಬೀಳಿಸುತ್ತವೆ ನಿಜ ಶರಣ ಅಂಬಿಗರ ಚೌಡಯ್ಯನವರ ವಚನಗಳು. ಇದಕ್ಕೆ ತಾತ್ಪೂರ್ತಿಕವಾಗಿ ಕೆಲವು ವಚನಗಳು ಈ ಕೆಳಗಿನಂತಿವೆ;

“ಅಂಬಿಗ ಅಂಬಿಗ ಎಂದು ಕುಂದ ನುಡಿಯದಿರು/ನಂಬಿದರೆ ಒಂದೇ ಹುಟ್ಟಲಿ/ಕಡೆಯ ಹಾಯಿಸುವೆನೆಂದಾತನಂಬಿಗರ/ಚೌಡಯ್ಯ ನಿಜಶರಣನು”

ಈ ಮೇಲಿನ ವಚನ ಶ್ರೀ ಅಂಬಿಗರ ಚೌಡಯ್ಯನವರ ಸ್ವಾಭಿಮಾನ, ಧೈರ್ಯ, ನೇರ, ನಿರ್ಭಿಡೆಯ ವ್ಯಕ್ತಿತ್ವದ ಪ್ರತೀಕವಾಗಿದೆ.

ಹನ್ನೆರಡನೇ ಶತಮಾನದ ಸಂದರ್ಭದಲ್ಲಿ ಜಾತಿ ಮತ್ತು ವರ್ಗ ವ್ಯವಸ್ಥೆ ಎಷ್ಟರಮಟ್ಟಿಗಿತ್ತು ಎಂಬುದನ್ನು ಈ ವಚನ ಸೂಚಿಸುತ್ತದೆ. ಅಂತಹ ವಿಚಿತ್ರ, ವಿಕ್ಷಿಪ್ತ ಸನ್ನಿವೇಶದಲ್ಲಿ ಬಸವಾದಿ ಶರಣರು ಜಾತೀಯತೆ, ವರ್ಗ – ವರ್ಣ ವ್ಯವಸ್ಥೆಯ ವಿರುದ್ಧ ಬೃಹತ್ ಚಳುವಳಿಯನ್ನು ಕೈಗೊಂಡಾಗ ಅಂಬಿಗರ ಚೌಡಯ್ಯನವರ ಸತ್ಯನಿಷ್ಠೆ, ಪ್ರಾಮಾಣಿಕತೆಯ ವಚನಗಳು ಪ್ರಖರವಾಗಿ ಕಾಣಿಸುತ್ತವೆ. ಕೆಲವು ಢೋಂಗಿ ಭಕ್ತರಿಗೆ, ಕಪಟ ಸನ್ಯಾಸಿಗಳಿಗೆ ತನ್ನ ಖಾರವಾದ ವಚನಗಳ ಮೂಲಕ ಚುರುಕು ಮುಟ್ಟಿಸುತ್ತಾರೆ.

ಆಡಂಬರ ಮತ್ತು ದುರಾಸೆಯ ಜನರ ಮನಸ್ಥಿತಿ ಕಂಡು ಕೆಂಡಾಮಂಡಲವಾಗಿ ಪ್ರಸ್ತುತ ಪಡಿಸಿದ ಒಂದು ವಚನ ಇಂತಿದೆ;

“ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಕಾಳೋಗರನ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹಾರುವ ಪಕ್ಷಿಯನು/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೆಬ್ಬುಲಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೊಯ್ವ ಹೆಮ್ಮಾರಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಬರುವ ಉರಿ ಬಾಣವನು/ಇಂತೆಲ್ಲವನು ಒಂದೇ ಮಂತ್ರದಲ್ಲಿ ನಿಲ್ಲಿಸಬಹುದು;/ಲೋಭವೆಂಬ ಗ್ರಹಣ ಹಿಡಿದವರ ಏತರಿಂದಲೂ/ನಿಲ್ಲಿಸಲಾಗದು/ಈ ಲೋಭಕ್ಕೆ ದಾರಿದ್ರ್ಯವೇ ಔಷಧವು;/ಹೇಳಿದರೆ ಕೇಳರು, ತಾವು ತಿಳಿಯರು/ಶಾಸ್ತ್ರವ ನೋಡರು, ಭಕ್ತಿಯ ಹಿಡಿಯರು/ಇಂತಹ ಗೊಡ್ಡು ಮೂಳ ಹೊಲೆಯರಿಗೆ/ಕರ್ಮವೆಂಬ ಶರದ್ಧಿಯಲ್ಲಿ ಬಿದ್ದು ಹೊರಳಾಡುವುದೇ/ಸತ್ಯವೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು”

ಸಂಸಾರದ ಜಂಜಾಟದಲ್ಲಿ ಬಿದ್ದು ಒದ್ದಾಡುತ್ತಾ ಶಿವನನ್ನು ಮರೆತು ಹತ್ತು ಹಲವು ಚಿಂತೆಯಲ್ಲಿ ಮುಳುಗಿರುವ ಶವ ಮುಖದ ಜನರ ಸ್ಥಿತಿ-ಗತಿಯನ್ನು ಅರ್ಥಗರ್ಭಿತವಾಗಿ ಸಾದರಪಡಿಸುವ ಒಂದು ವಚನ ಇಂತಿದೆ;

“ಬಡತನಕೆ ಉಂಬುವ ಚಿಂತೆ/ಉಣಲಾದಡೆ ಉಡುವ ಚಿಂತೆ/ಉಡಲಾದಡೆ ಇಡುವ ಚಿಂತೆ/ಇಡಲಾದಡೆ ಹೆಂಡಿರ ಚಿಂತೆ/ಹೆಂಡಿರಾದರೆ ಮಕ್ಕಳ ಚಿಂತೆ/ಮಕ್ಕಳಾದಡೆ ಬದುಕಿನ ಚಿಂತೆ/ಬದುಕಾದಡೆ ಕೇಡಿನ ಚಿಂತೆ/ಕೇಡಾದಡೆ ಮರಣದ ಚಿಂತೆ/ಇಂತೀ ಹಲವು ಚಿಂತೆಯಲ್ಲಿಪ್ಪವರ ಕಂಡೆನು/ಶಿವನ ಚಿಂತೆಯಲ್ಲಿದ್ದಾತರೊಬ್ಬರನೂ ಕಾಣೆನೆಂದಾತ/ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು!”

ಸಮಯದ ಸದ್ಬಳಕೆ ಮಾಡಿಕೊಂಡು ಕಾಯಕ ಮಾಡುತ್ತಾ ಶಿವಭಕ್ತರಾಗಿ, ಜೀವನ ಪಾವನವಾಗಿಸುವಂತೆ ಕರೆ ನೀಡುವ ಒಂದು ವಚನ ಇಂತಿದೆ;

“ಗಾಳಿ ಬಿಟ್ಟಾಗ ತೂರಿಕೊಳ್ಳಿರಯ್ಯ/ಗಾಳಿ ನಿಮ್ಮ ಅಧೀನವಲ್ಲ ಕಂಡಯ್ಯ/ನಾಳೆ ತೂರಿಹೆನೆಂದಡಿಲ್ಲ ಕಂಡಯ್ಯ/ಶಿವಶರಣೆ ಎಂಬುದೊಂದು ಗಾಳಿ ಬಿಟ್ಟಲ್ಲಿ/ಬೇಗ ತೂರೆಂದನಂಬಿಗರ ಚೌಡಯ್ಯ”

ಕಾವಿ ಬಟ್ಟೆ ತೊಟ್ಟು, ಭಿಕ್ಷೆಗಾಗಿ ಜೋಳಿಗೆ ಹಾಕಿದವರೆಲ್ಲರೂ ಜಂಗಮರು, ಗುರುಗಳಾಗಲಾರರು ಎಂಬುದನ್ನು ವಿಡಂಬಿಸುವ ಒಂದು ವಚನ ಇಂತಿದೆ;

“ಕಂಥೆ ತೊಟ್ಟವ ಗುರುವಲ್ಲ/ಕಾವಿ ಹೊದ್ದವ ಜಂಗಮನಲ್ಲ/ಶೀಲ ಕಟ್ಟಿದವ ಶಿವಭಕ್ತನಲ್ಲ/ನೀರು ತೀರ್ಥವಲ್ಲ/ಕೂಳು ಪ್ರಸಾದವಲ್ಲ/ಹೌದೆಂಬವನ ಬಾಯ ಮೇಲೆ/ಅರ್ಧ ಮಣದ ಪಾದರಕ್ಷೆಯ ತೆಗೆದುಕೊಂಡು/ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ/ಟೊಕ ಟೊಕನೆ ಹೊಡೆ ಎಂದಾತ/ನಮ್ಮ ಅಂಬಿಗರ ಚೌಡಯ್ಯ”

ಹೀಗೆ ಬಸವಾದಿ ಶರಣರ ಸಮಾಜ ಸುಧಾರಣಾ ಚಳವಳಿಯಲ್ಲಿ ತಮ್ಮ ಅಮೂಲ್ಯ ಸೇವೆಯನ್ನು ಮುಡುಪಾಗಿಟ್ಟ ಶ್ರೀ ಅಂಬಿಗರ ಚೌಡಯ್ಯನವರು ತಮ್ಮ ಬದುಕಿನ ನೀತಿಯಿಂದ, ನಿಷ್ಠೆಯಿಂದ, ತೀಕ್ಷ್ಣ ಖಂಡನೆಯ ಬಂಡಾಯ ವಚನಗಳಿಂದ ಗಮನ ಸೆಳೆದು, ಅವರು ರಚಿಸಿದ ವಚನಗಳಿಗೆ ತಮ್ಮ ಹೆಸರನ್ನೇ ಅಂಕಿತವನ್ನಾಗಿಟ್ಟಿರುವದು ವಿಶೇಷವಾಗಿದೆ. ಸಮಾಜದ ಕೊಳೆಯನ್ನು ತೊಳೆಯುವ ನಿಟ್ಟಿನಲ್ಲಿ ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ಎದ್ದು ಕಾಣುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮ್ಯಾಸ ನಾಯಕ ಬುಡಕಟ್ಟನಲ್ಲಿ ದೀಪಾವಳಿ ಹಬ್ಬದ ಆಚರಣೆ

Published

on

ಭಾರತ ತನ್ನ ಭೌಗೋಳಿಕ ಸ್ವರೂಪದಲ್ಲಿ ವೈವಿಧ್ಯತೆಯನ್ನು ಹೊಂದಿರುವಂತೆ ಅನೇಕ ಬಗೆಯ ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿದೆ.

ದೇಶದ ಪ್ರತಿಯೊಂದು ಸಮುದಾಯವು ಬದುಕಿನ ಕ್ರಮದಲ್ಲಿ ತನ್ನದೇ ಆದ ವೈವಿಧ್ಯತೆಯನ್ನು ಹೊಂದಿದ್ದು ಹಬ್ಬಗಳ ಆಚರಣೆಯಲ್ಲಿಯೂ ಈ ಭಿನ್ನತೆಯನ್ನು ಕಾಣಬಹುದಾಗಿದೆ. ಈಗ ನಡೆಯುತ್ತಿರುವ ದೀಪಾವಳಿ ಹಬ್ಬದ ಆಚರಣೆಯೂ ಇದರಿಂದ ಹೊರತಾಗಿಲ್ಲ. ಇಡೀ ಭಾರತ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸುತ್ತಿದೆ ಎಂಬುದು ಸಾಮಾನ್ಯವಾದ ಹೇಳಿಕೆಯಾಗಿರುತ್ತದೆ.

ದೀಪಾವಳಿ ಎಂದರೆ ದೀಪವನ್ನು ಬೆಳಗಿಸುವ ಹಬ್ಬ. ಜಗದ ಕತ್ತಲೆಯನ್ನು, ಮನದ ಕತ್ತಲೆಯನ್ನು, ಕಳೆಯುವ ಹಬ್ಬ ಎಂಬುದು ಒಂದು ನಂಬಿಕೆಯಾದರೆ ಬಲಿಚಕ್ರರ‍್ತಿಯನ್ನು ವರ್ಷಕೊಮ್ಮೆ ನೆನಪಿಸಿಕೊಳ್ಳುವುದು, ನರಕಾಸುರನನ್ನು ಶ್ರೀ ಕೃಷ್ಣ ಪರಮಾತ್ಮ ಕೊಂದು ಆತನ ಸೆರೆಯಲ್ಲಿದ್ದ ಅಸಂಖ್ಯಾತ ಮಹಿಳೆಯರಿಗೆ ಬಿಡುಗಡೆ ದೊರಕಿಸಿದ ದಿನವಿದು ಎಂದು ನೆನೆಪಿಸಿಕೊಳ್ಳುವುದು ಹೀಗೆಲ್ಲಾ ಪ್ರಚಲಿತ ಪುರಾಣಮೂಲಗಳಿಂದ ಈ ಹಬ್ಬದ ಆಚರಣೆಯ ಸಾಂಕೇತಿಕತೆಯನ್ನು ಅರ್ಥೈಸಲಾಗುತ್ತದೆ.

ಈ ಎರಡೂ ಘಟನೆಗಳನ್ನು ಕುರಿತು ಬೇರೆ ಬೇರೆ ನೆಲೆಯಿಂದ ಯೋಚಿಸಿದಾಗ ಇದನ್ನು ದೇಶದಾದ್ಯಂತ ಎಲ್ಲರೂ ಸಡಗರಿಸಬೇಕೆ? ಆಳುವವರ ಸಡಗರ ಎಲ್ಲರ ಸಡಗರವಾಗಲೇಬೇಕಾದ ಅನಿವಾರ್ಯವೇ? ಎಂಬ ನೆಲೆಗಳಿಂದ ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕಾಗುತ್ತದೆ.

ನಿಸರ್ಗಮೂಲ ಸಿದ್ದಾಂತವನ್ನು ಅನ್ವಯಿಸಿಕೊಂಡರೇ ಬಹುಶಃ ಈ ದೀಪಾವಳಿಯ ತಿಂಗಳು, ಅಂದರೇ ಕಾರ್ತಿಕ ಮಾಸದ ಹವಾಮಾನದಲ್ಲಿ ವಿಶೇಷತೆಯಿದೆ. ಕಾರ್-ಅಂದರೇ ಮಳೆ ಸುರಿಯುವುದು. ಕರ‍್ತೀಕ ಅಂದರೇ ಮಳೆಗಾಲದ ಕೊನೆಯ ದಿನಗಳಿವು, ಹಿಂಗಾರಿನ ಕೊನೆಯ ಮಳೆಗಳು ಸುರಿಯುವ ಮತ್ತು ಇದರೊಂದಿಗೆ ಚಳಿಗಾಲವೂ ಆರಂಭವಾಗುವುದರಿಂದ ಮಂಜುಮುಸುಕಿದ ವಾತಾವರಣವೂ ಜೊತೆಗೂಡಿ ಕತ್ತಲೆಯ ಆಧಿಕ್ಯ ಹೆಚ್ಚು. ಬಹುಶಃ ಈ ಕತ್ತಲೆಯನ್ನು ನಿವಾರಿಸಿಕೊಳ್ಳಲು ಮನೆಮನೆಯ ಮುಂದೆ ದೀಪಗಳನ್ನು ಹಚ್ಚಿ ಬೆಳಕನ್ನು ಕಂಡುಕೊಳ್ಳುವ ಉದ್ದೇಶವೂ ಇರಬಹುದೆನ್ನಿಸುತ್ತದೆ. ಒಟ್ಟಾರೆ ನಾಡಿನಾದ್ಯಂತ ಆಚರಿಸಲಾಗುವ ಈ ದೀಪಾವಳಿ ಹಬ್ಬವನ್ನು ಮ್ಯಾಸಮಂಡಲದಲ್ಲಿಯೂ ಆಚರಿಸಲಾಗುತ್ತದೆ.

ಮ್ಯಾಸಬುಡಕಟ್ಟಿನ ದೇವರು ಕಾಣದ ಲೋಕದವರಲ್ಲ. ಪ್ರಕೃತಿಯ ವಿಶಿಷ್ಟತೆಯನ್ನೇ ದೈವ ಎಂದು ಭಾವಿಸಿ ಪೂಜಿಸುವುದು, ಸೃಷ್ಟಿಗೆ ಕಾರಣವಾಗುವ ತಾಯಿಯನ್ನೇ ಮೊದಲ ದೈವ ಎಂದು ಪೂಜಿಸುವುದು, ತಮಗೆ ಬದುಕನ್ನು ಕಟ್ಟಿಕೊಟ್ಟು ತಮ್ಮನ್ನು ಮುನ್ನಡೆಸಿದ ಹಿರಿಯರನ್ನೇ, ನಾಯಕರನ್ನೇ ತಮ್ಮದೇವರು ಎಂದು ಪೂಜಿಸುವುದು, ಮತ್ತು ತಮ್ಮ ಬದುಕಿಗೆ ಆಧಾರವಾಗಿದ್ದ ಪಶುಸಂಪತ್ತನ್ನೇ ತಮ್ಮ ಹಿರಿಯರೊಂದಿಗೆ ಸಮೀಕರಿಸಿ ದೈವಗಳೆಂದು ಭಾವಿಸಿ ಪೂಜಿಸುವುದು ಈ ಬುಡಕಟ್ಟಿನ ವಿಶೇಷತೆ. ತಮ್ಮ ನಾಯಕ ಅಥವಾ ನಾಯಕಿ ಬಳಸುತ್ತಿದ್ದ ವಸ್ತುವನ್ನು ಬಿದಿರಿನ ಬುಟ್ಟಿಯಲ್ಲಿಟ್ಟು, ಕೆಲವು ಕಡೆ ಸಾಲಿಗ್ರಾಮಗಳನ್ನು ಮತ್ತು ನಾಯಕ/ನಾಯಕಿ ಬಳಸುತ್ತಿದ್ದ ಬಿಲ್ಲು, ಬಾಣ/ ಖಡ್ಗವನ್ನೇ ದೇವರೆಂದು ನಂಬಿ ಪೂಜಿಸುವ ಸಮುದಾಯದಲ್ಲಿ ದೀಪಾವಳಿಯನ್ನು ಇವುಗಳಿಗೆ ಪೂಜೆ ಸಲ್ಲಿಸುವ ಮೂಲಕವೇ ಆಚರಿಸಲಾಗುತ್ತದೆ.

ಮ್ಯಾಸಮಂಡಲದ ಎಲ್ಲಾ ಗುಡಿಕಟ್ಟುಗಳಲ್ಲಿಯೂ ಮತ್ತು ಇದಕ್ಕೆ ಸಂಬಂಧಿಸಿದ ಎತ್ತಿನಗೂಡುಗಳಲ್ಲಿ ಈ ಹಬ್ಬದ ಆಚರಣೆ ನಡೆಯುತ್ತದೆ. ದೀಪಾವಳಿ ಅಮಾವಾಸ್ಯೆಕಳೆದು ಪಾಡ್ಯದ ಸೋಮವಾರ ಹೀರೆಹಳ್ಳಿಯ ದಡ್ಡಿಸೂರನಾಯಕನ ಗುಡಿಗೆ ಈತನಿಂದ ಸಂರಕ್ಷಿಸಲ್ಪಟ್ಟ ದನಕರುಗಳ ಪರಂಪರೆಯಿಂದ ಇಂದಿಗೂ ಉಳಿದು ಬಂದಿರುವ ಆಕಳ ಗೂಡಿನಿಂದ (ಗುಡೇಕೋಟಿ ಬಳಿ ಇರುವ} ಕಿಲಾರಿಗಳು ಮೊಸರು,ತುಪ್ಪವನ್ನು ತಂದು ಸೋಮವಾರ ಸಂಜೆ ಗುಡಿಗೆ ಒಪ್ಪಿಸುತ್ತಾರೆ. ತಮ್ಮ ಹೊಲಗಳಲ್ಲಿ ಬೆಳೆದ ಹಸನಾದ ಸಜ್ಜೆಯತೆನೆಗಳನ್ನು ತಂದು ಒಪ್ಪಿಸುವ ವಾಡಿಕೆಯೂ ಇದೆ. ರಾತ್ರಿಯಿಡಿ ಎಲ್ಲರೂ ಸೇರಿ ಗುಡಿಯಲ್ಲಿ ಹುರುಳಿ, ಗುಗ್ಗರಿ ಬೇಯಿಸಿ ಜೋಳ ಅಥವಾ ಸಜ್ಜೆಯ ಅನ್ನ ಮಾಡಿ ಗೂಡಿನಿಂದ ತಂದ ಮೊಸರನ್ನು ಸೇರಿಸಿ ಬೆಳಗಿನಜಾವ ದಡ್ಡಿಸೂರನಾಯಕನಿಗೆ ನೈವೇದ್ಯ ಮಾಡಲಾಗುತ್ತದೆ.

ರಾತ್ರಿಯಿಡೀ ಉರುಮೆ ವಾದ್ಯದ ಸೇವೆ, ನಾಯಕನನ್ನು ಕುರಿತು ಪದ ಹೇಳುವುದು ನಡೆಯುತ್ತದೆ, ಹೀಗೆ ಗುಡಿಯಲ್ಲಿ ನಡೆಯುವ ಪೂಜೆಯೇ ತಮಗೆ ದೀಪಾವಳಿ ಹಬ್ಬದ ಆಚರಣೆಯಾಗಿದ್ದು ಮನೆ ಮನೆಯ ಮುಂದೆ ದೀಪ ಬೆಳಗಿಸುವ, ರಂಗೋಲಿ ಹಾಕುವ, ಪಟಾಕಿ ಸಿಡಿಸುವ ಆಚರಣೆಗಳು ಇಲ್ಲಿ ಇರುವುದಿಲ್ಲ.
ಕಂಪಳ ದೇವರ ಹಟ್ಟಿಯಲ್ಲಿ ಇದಕ್ಕಿಂತ ಸ್ವಲ್ಪ ಭಿನ್ನವಾಗಿ ಹಬ್ಬದ ಆಚರಣೆ ನಡೆಯುತ್ತದೆ. ಮಾಘ ಮಾಸದಲ್ಲಿ ನಡೆಯುವ ಗುಗ್ಗರಿ ಹಬ್ಬದಲ್ಲಿ ಮಾಡುವಂತೆ ಈ ಸಮಯದಲ್ಲಿಯೂ ಅಮಾವಾಸ್ಯೆ ನಂತರದ ಶುಕ್ರವಾರದಂದು ಪೆಟ್ಟಿ ದೇವರನ್ನು ಗುಡಿಯಿಂದ ತಂದು ಹಟ್ಟಿಯ ಹೊರವಲಯದಲ್ಲಿ ಹೊಸ ಉದಿ/ಪದಿಯನ್ನು ಕಟ್ಟಿ ಇದರಲ್ಲಿ ಕೂರಿಸಿ ಮೂರು ದಿನಗಳ ಹಬ್ಬದ ಆಚರಣೆ ನಡೆಸಲಾಗುತ್ತದೆ.

ತೆಲುಗಿನಲ್ಲಿ ಇದನ್ನು ‘ದುಯಿಲಪಂಡುವ’ ಎಂದು ಕರೆಯಲಾಗುತ್ತದೆ. ಕಂಪಳ ದೇವರ ಪೆಟ್ಟಿಯೊಂದಿಗೆ ಜಗಲೂರು ಪಾಪನಾಯಕನನ್ನು ಸಂಕೇತಿಸುವ ಬಿಲ್ಲು ದೇವರನ್ನೂ ತಂದು ಪೂಜಿಸಲಾಗುತ್ತದೆ. ಆಕಳಗೂಡಿನ ಮೀಸಲು ಮೊಸರು ಮತ್ತು ಬೆಣ್ಣೆಯನ್ನು ಅರ್ಪಿಸುವುದು ಇಲ್ಲಿ ಬಹಳ ವಿಶೇಷವಾದುದು. ಗತಿಸಿದ ಎತ್ತು ಮತ್ತು ಆಕಳಿಂದ ಸಂಗ್ರಹಿಸಿದ ಕೊಂಬನ್ನು ಇಲ್ಲಿ ಬೆಣ್ಣೆಯನ್ನು ಶೇಕರಿಸಲು ಬಳಸಲಾಗುತ್ತದೆ.ಬುಡಕಟ್ಟಿನ ಜನತೆ ತಮಗೆ ಸಿಗುವ ವಸ್ತುಗಳನ್ನೇ ಸಲಕರಣೆಗಳನ್ನಾಗಿ ಬಳಸುವ ವಿಧಾನ ಇಲ್ಲಿ ಗಮನ ಸೆಳೆಯುತ್ತದೆ. ಹೀಗೆ ಸಂಗ್ರಹಿಸಿದ ಬೆಣ್ಣೆಯನ್ನು ಕಾಯಿಸಿ ತುಪ್ಪ ಮಾಡಿ ಪದಿಯಲ್ಲಿ ದೀಪವನ್ನು ಉರಿಸಲಾಗುತ್ತದೆ.ಮೊಸರು,ಜೋಳದ/ಸಜ್ಜೆಯ ಅನ್ನ,ಬಾಳೆಹಣ್ಣು,ಬೆಲ್ಲವನ್ನು ಬೆಳಗಿನಜಾವದಲ್ಲಿ ನೈವೇದ್ಯ,ಮಾಡಲಾಗುತ್ತದೆ.

ಇದರೊಂದಿಗೆ ಎತ್ತುಗಳನ್ನೂ ಹರಿಯಿಸುವುದು, ಮಣೇವು, ಉರಿಯುವ ಪಂಜುಗಳನ್ನೇ ನುಂಗುವುದು ಈ ಹಬ್ಬದ ಪ್ರಮುಖ ಆಚರಣೆಗಳಾಗಿವೆ. ನನ್ನಿವಾಳದ ಕಟ್ಟಿಮನೆಗೆ ಸೇರಿದ ಬಂಗಾರುದೇವರ ಹಟ್ಟಿಯಲ್ಲಿ ದೇವರುಗಳನ್ನು ಮತ್ತು ಬೆಳಗಟ್ಟದ ಸೂರೆಯರಗಾಟನಾಯಕನಿಗೆ ಸಂಬಂಧಿಸಿದಂತೆ, ಬೋಸೇದೇವರ ಹಟ್ಟಿಯ ಬೋಸೇರಂಗಯ್ಯನ ಪೆಟ್ಟಿಯನ್ನು, ದೊಣಮಂಡಲಹಟ್ಟಿಯ ಮಂಡಬೊಮ್ಮದೇವರನ್ನು ಹಟ್ಟಿಯಿಂದ ಹೊರಗೆ ತಂದು ಊರ ಹೊರಗೆ ಹೊಸ ಪದಿಯನ್ನು ಕಟ್ಟಿ, ಗೂಡಿನಿಂದ ಎತ್ತುಗಳನ್ನು ಕರೆಸಿ ಗೌರವಿಸಿ ಪೂಜಿಸುವ ಕ್ರಮವಿದೆ.

ಒಟ್ಟಾರೆ ಈಮ್ಯಾಸಮಂಡಲದ ದೀಪಾವಳಿ ಹಬ್ಬಕ್ಕೆ ಆಯಾ ಗುಂಪಿನವರೆಲ್ಲರೂ ಕಾಸು,ಹಾಲು, ಮೊಸರನ್ನು ಅರ್ಪಿಸಿ ಪಾಲ್ಗೊಳ್ಳುವಿಕೆಯೇ ಇಲ್ಲಿ ಸಾಮುದಾಯಿಕತೆಯ ಮಹತ್ವವನ್ನು ಪಡೆಯುತ್ತದೆ. ಈ ದೀಪಾವಳಿ ಹಬ್ಬದ ಆಚರಣೆಯಲ್ಲಿಎಲ್ಲಾ ಪದಿಗಳಲ್ಲಯೂ ದಾಸೋಹ ವಿಶೇಷವಾಗಿ ನಡೆಯುತ್ತದೆ. ಮುಂಗಾರು ಮಳೆ ಸುರಿದು ಸೊಂಪಾಗಿ ಬೆಳೆದ ಹುಲ್ಲನ್ನು ತಿಂದು ಹಸುಗಳು ಸಾಕಷ್ಟು ಹಾಲನ್ನು ಕೊಡುವುದರಿಂದ ಸಮೃದ್ಧವಾದ ಹಾಲು,ಮೊಸರು ಈ ಹಬ್ಬಕ್ಕೆ ಒದಗುತ್ತದೆ.ಇದನ್ನು ಎಡೆ ಮಾಡಿದ ನಂತರ ಎಲ್ಲರಿಗೂ ದಾಸೋಹದಲ್ಲಿ ನೀಡಲಾಗುತ್ತದೆ.

ಈ ಬುಡಕಟ್ಟಿನ ದೀಪಾವಳಿ ಹಬ್ಬದ ಆಚರಣೆಯ ಹಿಂದೆ ನಮ್ಮ ಭಾರತದ ಪೌರಾಣಿಕ ಕಥನಗಳಾವುವು ಕೇಳಿ ಬರುವುದಿಲ್ಲ.ಮನೆ ಮನೆಯ ಮುಂದೆ ದೀಪಗಳನ್ನು ಹಚ್ಚಿ ಸಡಗರಿಸುವುದು ಇಲ್ಲಿಲ್ಲ. ರಂಗೋಲಿ ಹಾಕುವುದಂತೂ ಬುಡಕಟ್ಟಿನ ನಿಶೇಧಗಳಲ್ಲಿ ಒಂದಾಗಿರುವುದರಿಂದ ಆ ಪ್ರಸ್ತಾಪವೇ ಇಲ್ಲಿಲ್ಲ. ಬದಲಾಗಿ ತಮ್ಮ ಮನೆ ದೇವರಾದ ಪೆಟ್ಟಿಗೆ ದೇವರು/ಬಿಲ್ಲು ದೇವರು/ಎತ್ತುಗಳನ್ನು ಗೌರವಿಸಿ ಪೂಜಿಸುವುದು. ಈ ಮೂಲಕವಾಗಿಯೇ ತಮ್ಮ ಮುಂದಿನ ಬದುಕಿಗೆ ಬೇಕಾದ ಬೆಳಕನ್ನು, ಚೈತನ್ಯವನ್ನು ಕೋರುವುದು ಇಲ್ಲಿ ಮುಖ್ಯವಾಗಿರುತ್ತದೆ.

ತಾನು ಬದುಕಿರುವ ಪರಿಸರ, ತಮಗೆ ಬದುಕನ್ನು ಕಟ್ಟಿಕೊಡುವ ಪ್ರಾದೇಶಿಕತೆ ಮತ್ತು ಭೌತಿಕ ಪ್ರಪಂಚ ಮತ್ತು ತನಗೆ ನೈತಿಕ ಬೆಂಬಲವಾಗಿ ನಿಂತ ತನ್ನ ಸಾಂಸ್ಕೃತಿಕ ಜಗತ್ತು ಈ ಎಲ್ಲವುಗಳ ಮೂಲಕ ಒಡಮೂಡುವ ದೇಸಿತನ ಆಯಾ ಬುಡಕಟ್ಟಿನ ಆಚರಣೆಗಳಿಗೆ ಸೈದ್ಧಾಂತಿಕತೆಯನ್ನು ಒದಗಿಸಿಕೊಡುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಮ್ಯಾಸಬೇಡ ಬುಡಕಟ್ಟಿನ ಈ ದೀಪಾವಳಿ ಆಚರಣೆಯಲ್ಲಿ ಈ ದೇಸಿತನವೇ ಒಡಮೂಡಿರುವುದನ್ನು ಕಾಣಬಹುದಾಗಿದೆ.ಆದಿವಾಸಿಗಳ ಧರ‍್ಮಿಕ ಜಗತ್ತಿನಲ್ಲಿ ಸರ‍್ಪಣಾಭಾವ ಮತ್ತು ಪಾರಂಪರಿಕ ಸಂಬಂಧ ಮುಖ್ಯವಾಗಿರುತ್ತದೆ. ಈ ಆಚರಣೆಗಳನ್ನು ಸಮುದಾಯದ ಸಾಂಸ್ಕೃತಿಕ ಅಸ್ಮಿತೆಗಳು ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ1 day ago

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮಡಿಕೇರಿಯಲ್ಲಿ...

ದಿನದ ಸುದ್ದಿ5 days ago

ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ

ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ...

ದಿನದ ಸುದ್ದಿ1 week ago

ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್‍ಗೆ ರೂ.10 ಪಡೆದ ಶಾಪಿಂಗ್ ಮಾಲ್‍ಗೆ ದಂಡ

ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499...

ದಿನದ ಸುದ್ದಿ1 week ago

ವಿವಿಧ ಜಿಲ್ಲೆಗಳಲ್ಲಿ ಡಾ. ಬಾಬು ಜಗಜೀವನ್ ರಾಮ್ 117ನೇ ಜನ್ಮ ದಿನಾಚರಣೆ

ಸುದ್ದಿದಿನ ಡೆಸ್ಕ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಾ. ಬಾಬು ಜಗಜೀವನ್ ರಾಮ್ ಅವರ 117ನೇ ಜನ್ಮ ದಿನಾಚರಣೆ ಪ್ರಯುಕ್ತ ವಿಧಾನ ಸೌದದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿ...

ದಿನದ ಸುದ್ದಿ1 week ago

ಇಂದು ಚುನಾವಣಾ ಆಯೋಗ ಸಮಾವೇಶ

ಸುದ್ದಿದಿನ ಡೆಸ್ಕ್ : ಕಳೆದ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ 11 ರಾಜ್ಯಗಳ ನಗರ ಪಾಲಿಕೆ ಆಯುಕ್ತರು ಮತ್ತು ಆಯ್ದ ಜಿಲ್ಲಾ ಚುನಾವಣಾ ಅಧಿಕಾರಿಗಳೊಂದಿಗೆ ಕೇಂದ್ರ ಚುನಾವಣಾ...

ದಿನದ ಸುದ್ದಿ2 weeks ago

ತಂತ್ರಜ್ಞಾನ ಮೋಡಿ : ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ

ಡಾ. ಚಂದ್ರಪ್ಪ ಎಚ್, ಸಹಾಯಕ ಪ್ರಾಧ್ಯಾಪಕರು, ಭೌತವಿಜ್ಞಾನ ವಿಭಾಗ, ಸರ್ಕಾರಿ ವಿಜ್ಞಾನ ಕಾಲೇಜು, ಚಿತ್ರದುರ್ಗ 90ರ ದಶಕದಿಂದೀಚೆಗೆ, ಎಲ್ಲೆಡೆ ಸದ್ದಿಲ್ಲದೇ ಕ್ರಮೇಣ ಒಕ್ಕರಿಸತೊಡಗಿದೆ ಆಧುನಿಕ ಯಾಂತ್ರಿಕೃತ ಬದುಕು....

ದಿನದ ಸುದ್ದಿ2 weeks ago

ಔಷಧಗಳ ದರ ಗಣನೀಯ ಏರಿಕೆ ಕುರಿತ ಮಾಧ್ಯಮಗಳ ವರದಿ ಸತ್ಯಕ್ಕೆ ದೂರವಾದ ಸಂಗತಿ ; ಕೇಂದ್ರ ಸರ್ಕಾರ ಸ್ಪಷ್ಟನೆ

ಸುದ್ದಿದಿನ ಡೆಸ್ಕ್ : ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವ ವಿವಿಧ ಔಷಧಿಗಳ ದರ ಗಣನೀಯವಾಗಿ ಏರಿಕೆ ಮಾಡಲಾಗಿದೆ ಎಂಬ ಮಾಧ್ಯಮಗಳ ವರದಿ ಸತ್ಯಕ್ಕೆ ದೂರವಾದ ಸಂಗತಿ ಮತ್ತು ಜನರನ್ನು...

ದಿನದ ಸುದ್ದಿ2 weeks ago

ರಾಜ್ಯದಲ್ಲಿ ಬಿಸಿಲ ತಾಪ ಇನ್ನೂ ಹೆಚ್ಚಾಗಲಿದೆ ; ಹವಾಮಾನ ಇಲಾಖೆ ಮುನ್ಸೂಚನೆ

ಸುದ್ದಿದಿನ ಡೆಸ್ಕ್ : ರಾಜ್ಯದಲ್ಲಿ ಮುಂದಿನ 7 ದಿನಗಳಲ್ಲಿ ಬಿಸಿಲ ತಾಪ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಅವಧಿಯಲ್ಲಿ ಜನರುಕೆಲವು ಮುನ್ನೆಚ್ಚರಿಕೆ...

ದಿನದ ಸುದ್ದಿ2 weeks ago

ಜಿಲ್ಲೆಯ ರಾಜಕಾರಣದಲ್ಲಿ ನನಗೆ ಅನ್ಯಾಯ; ರಾಜಕೀಯ ಕುತಂತ್ರ ವ್ಯವಸ್ಥೆ ವಿರುದ್ಧ ನನ್ನ ಹೋರಾಟ : ವಿನಯ್ ಕುಮಾರ್

ಸುದ್ದಿದಿನ,ದಾವಣಗೆರೆ : ಜಿಲ್ಲೆಯ ರಾಜಕಾರಣದಲ್ಲಿ ಚೆನ್ನಯ್ಯ ಒಡಿಯರ್ ಅವರಿಗೆ ಆದ ಅನ್ಯಾಯ ನನಗೂ ಆಗಿದೆ. ನನ್ನ ಹೋರಾಟ ನನ್ನ ಸ್ವಾಭಿಮಾನದ ಹೋರಾಟ ಒಬ್ಬ ವ್ಯಕ್ತಿ ಪಕ್ಷದ ವಿರುದ್ಧ...

ದಿನದ ಸುದ್ದಿ2 weeks ago

ಲೋಕಸಭೆ ಚುನಾವಣೆ; ರಾಜ್ಯದ 14 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಲು ಇಂದು ಕೊನೆ ದಿನ

ಸುದ್ದಿದಿನ ಡೆಸ್ಕ್ : 18ನೇ ಲೋಕಸಭೆ ಸಾರ್ವತ್ರಿಕ ಚುನಾವಣೆಗೆ, ದೇಶಾದ್ಯಂತ ಎರಡನೇ ಹಂತದ 89 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ. ರಾಜ್ಯದಲ್ಲಿ ನಡೆಯುತ್ತಿರುವ ಮೊದಲ...

Trending