Connect with us

ನೆಲದನಿ

ನುಡಿಯ ಒಡಲು-06 : ಭಾಷಿಕ ಕ್ರಿಯೆ ಮತ್ತು ಮನುಷ್ಯ ಘನತೆ

Published

on

  • ಡಾ‌. ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ಭಾಗ-02

ಬರಹದ ಮೊದಲ ಭಾಗದಲ್ಲಿ ಮನುಷ್ಯ ಘನತೆ ಮತ್ತು ಭಾಷಿಕ ಕ್ರಿಯೆ ಎಂಬೀ ಎರಡೂ ಪರಿಕಲ್ಪನೆಗಳ ನಡುವಣ ನಂಟಸ್ತಿಕೆಯನ್ನು ಕುರಿತು ಕೆಲವು ತಾತ್ವಿಕ ಸಂಗತಿಗಳನ್ನು ಚರ್ಚಿಸಲಾಗಿದೆ. ಈ ಭಾಗದಲ್ಲಿ ಮನುಷ್ಯ ಘನತೆಯ ಪ್ರಾಥಮಿಕ ನೆಲೆಗಳನ್ನು ಭಾಷಿಕ ಆಯಾಮಗಳ ಮೂಲಕ ವಿಶ್ಲೇಷಿಸುವ ಪ್ರಯತ್ನವನ್ನು ಮಾಡೋಣ.

ಮನುಷ್ಯ ಘನತೆಯ ಪ್ರಶ್ನೆ ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ವ್ಯಾಪಕವಾಗಿ ಚರ್ಚೆಯಾಗುವುದು, ಪ್ರಮುಖವಾಗಿ ಕಾನೂನು ದಾಖಲೆಗಳಲ್ಲಿ. ಅಂದರೆ ಕಾನೂನು ಪರಿಭಾಷೆ ಮತ್ತು ಪರಿಕಲ್ಪನೆಗಳಲ್ಲಿ ಪ್ರಕಟಗೊಳ್ಳುತ್ತದೆ. ಕೆಲವು ನಿರ್ದಿಷ್ಟ ಕಾನೂನಾತ್ಮಕ ವಿವರಗಳ ಮೂಲಕ ಈ ಮನುಷ್ಯ ಘನತೆ ಎನ್ನುವ ಪರಿಕಲ್ಪನೆಯನ್ನು ಯಾವುದೇ ಒಂದು ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಸಮರ್ಥನೆಗಳನ್ನು ಮಂಡಿಸಲು ಬಳಸಲಾಗುತ್ತದೆ.

ಸಹಜವಾಗಿಯೇ ಆಯಾ ಸಂದರ್ಭಕ್ಕೆ ಅನುಸಾರವಾಗಿ ಈ ಪರಿಕಲ್ಪನೆಯ ವಿನ್ಯಾಸಗಳು ಕಾನೂನಾತ್ಮಕ ದಾಖಲೆಗಳಲ್ಲಿ ವ್ಯತ್ಯಾಸವಾಗುತ್ತವೆ. ಆದರೆ ಈ ಎಲ್ಲ ನಿಬಂಧನೆಗಳಿಗೆ ಮನುಷ್ಯ ಘನತೆಯನ್ನು ಎತ್ತಿಹಿಡಿಯುವ ಉದ್ದೇಶವೇ ಮುಖ್ಯವಾಗುತ್ತದೆ. ಉದಾಹರಣೆಗಾಗಿ ರಾಷ್ಟ್ರ-ಅಂತರ್ರಾಷ್ಟ್ರ ಮಟ್ಟದ ಕಾನೂನು ಪರಿಕರ ಮತ್ತು ದಾಖಲೆಗಳ ಪರಿಭಾಷೆ ಹಾಗೂ ಭಾಷಿಕ ಕ್ರಿಯೆಯನ್ನು ಪರಿಶೀಲಿಸಿದರೆ, ಭಾಷಿಕ ಕ್ರಿಯೆಯ ವ್ಯಾಪಕತೆ ಎಂತಹದು ಅನ್ನುವುದು ನಮಗೆಲ್ಲ ಅರ್ಥವಾಗುತ್ತದೆ.

ನಮ್ಮ ಸಂವಿಧಾನದ ಪೀಠಿಕೆಯಲ್ಲಿ ಉಲ್ಲೇಖಿಸಿರುವ ‘ನಾವು ಭಾರತೀಯರು...’ ಎಂಬ ಉದ್ಗಾರದಿಂದ ಶುರುವಾಗುವ ಈ ಹೇಳಿಕೆಯ ಮೊದಲ ಉದ್ದೇಶವೇ ನಮ್ಮೆಲ್ಲರ ನಡುವಣ ಘನತೆ ಮತ್ತು ಸಂಬಂಧವನ್ನು ಸೂಚಿಸುವುದಾಗಿದೆ. ಹಾಗಾಗಿ ಜಾತ್ಯತೀತತೆ, ಧರ್ಮನಿರಪೇಕ್ಷತೆ ಎಂಬೆಲ್ಲ ಪದಗಳನ್ನು ನೆಲೆಗೊಳಿಸಲು ಕಾರಣವೇ ಮನುಷ್ಯ ಘನತೆಯನ್ನು ಮನಗಾಣಲು ನಮಗೆ ಬೇಕಾಗಿರುವುದು ಕೇವಲ ನಾವು ಮನುಷ್ಯರು ಮತ್ತು ಆ ಅಸ್ತಿತ್ವದಲ್ಲಿ ಯಾವುದೇ ಭೇದಭಾವ ಇರಕೂಡದು ಎಂಬ ತಿಳಿವಳಿಕೆ ಮಾತ್ರ ಸಾಕು ಅನ್ನುವುದಾಗಿದೆ.

ಹೊರತು ನಮ್ಮ ಅಸ್ತಿತ್ವ, ಅಸ್ಮಿತೆ, ಘನತೆಗಳನ್ನು ಅರಿಯಲು ಯಾವುದೇ ಜಾತಿ, ಧರ್ಮ, ಪ್ರದೇಶ, ಭಾಷೆ, ಲಿಂಗ ಇತ್ಯಾದಿ ಸಂಗತಿಗಳ ಮಹತ್ವದ ಮೇಲೆ ವ್ಯಕ್ತಿಗಳ ಘನತೆಯನ್ನು ಅಳಿಯುವುದಾಗಲೀ ಇಲ್ಲವೇ ಮೌಲ್ಯನಿರ್ಣಯ ಮಾಡುವುದಾಗಲೀ ಕೊನೆಯಪಕ್ಷ ಪ್ರಜಾಸತ್ತಾತ್ಮಕ ಸನ್ನಿವೇಶದಲ್ಲಿ ಪರಿಭಾವಿಸಕೂಡದು ಅನ್ನುವ ತಾತ್ಪರ್ಯವನ್ನು ಇಲ್ಲಿ ಕಾಣುತ್ತೇವೆ.

ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಮನುಷ್ಯ ಘನತೆಯನ್ನು ಪ್ರತಿಪಾದಿಸುವ ದಾಖಲೆಗಾಗಿ, ದಿ ಚಾರ್ಟರ್ ಆಫ್ ಯುನೈಟೆಡ್ ನೇಶನ್ಸ್ (1945) ಪೀಠಿಕೆಯಲ್ಲಿ ನಿರೂಪಿಸಲಾದ ಹೇಳಿಕೆಗಳನ್ನು ಇಲ್ಲಿ ಗಮನಿಸಬಹುದು. ‘ಮುಂಬರುವ ಪೀಳಿಗೆಗಳನ್ನು ಯುದ್ಧದ ಭೀಕರತೆ ಮತ್ತು ದುಖದಿಂದ ರಕ್ಷಿಸಬೇಕು.
ಇಂತಹ ಯುದ್ಧಗಳಿಂದ ಈಗಾಗಲೇ ನಾವು ಕೇಳರಿಯದ ದುಖವನ್ನು ನಮ್ಮ ಬದುಕಿನವಧಿಯಲ್ಲಿ ಎರಡುಸಲ ಕಂಡಿದ್ದೇವೆ. ಮಾನವ ಹಕ್ಕು ಮತ್ತು ಮನುಷ್ಯ ಘನತೆಯಲ್ಲಿ ನಂಬಿಕೆಯನ್ನು ಮರುಪ್ರತಿಪಾದಿಸಬೇಕಿದೆ.ಯಾವುದರ ಮೂಲಕ ಮನುಷ್ಯ ಘನತೆ, ಗಂಡು-ಹೆಣ್ಣುಗಳ ನಡುವಣ ಸಮಾನ ಹಕ್ಕುಗಳು ಹಾಗೂ ದೊಡ್ಡ ಮತ್ತು ಚಿಕ್ಕ ದೇಶಗಳು ಎಂಬ ಭೇದವಿಲ್ಲದ ವಾತಾವರಣವನ್ನು ಸೃಷ್ಟಿಸಬೇಕೆಂದು ನಾವು ಯುನೈಟೆಡ್ ರಾಷ್ಟ್ರಗಳ ಜನತೆ ನಿರ್ಧರಿಸಿದ್ದೇವೆ’. ಈ ಘೋಷಣೆಯ ಹಿಂದಿನ ತಾತ್ವಿಕ ಮತ್ತು ನೈತಿಕ ಹೊಣೆಗಾರಿಕೆಯನ್ನು ಇಲ್ಲಿ ಬಳಸಲಾದ ಪದಗಳ ಮೂಲಕ ಅರಿಯಲು ಸಾಧ್ಯ.

ಇಲ್ಲಿಯ ಯಾವುದೇ ಪದವು ನಿಶ್ಚಿತವೂ ಮತ್ತು ನಿರಂತರವೂ ಆಗಿರುವ ಅರ್ಥವನ್ನು ಹೊಂದಿರುವುದಿಲ್ಲ. ಆದರೆ ಆಯಾ ಸನ್ನಿವೇಶಗಳ ಮೂಲಕ ನಾವು ಘನವಾದ ಮತ್ತು ತೆಳುವಾದ ಅರ್ಥಗಳನ್ನು ಪರಿಭಾವಿಸುತ್ತೇವೆ. ಇದು ಕೇವಲ ಯಾದೃಚ್ಛಿಕವಾಗಿ (ದಿಟ, ಪ್ರಾಥಿಮಿಕ ಅರ್ಥಗಳು ಯಾದೃಚ್ಛಿಕವಾಗಿಯೇ ಇರುತ್ತವೆ) ನಡೆಯುವುದಲ್ಲ. ಸನ್ನವೇಶಗಳು ಅಗಾಧವಾದ ಪಾತ್ರವನ್ನು ವಹಿಸುತ್ತವೆ. ಇದಕ್ಕೆ ಪ್ರಮುಖ ಕಾರಣವೇ ಭಾಷಿಕ ಕ್ರಿಯೆಗಳು ಎಂಬುದು ಇಲ್ಲಿ ನಿರ್ವಿವಿವಾದ.

ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ (1948) ಪೀಠಿಕೆಯಲ್ಲಿಯೂ ಈ ಬಗೆಯ ಸಂಗತಿಗಳನ್ನೇ ಪ್ರಮುಖವಾಗಿ ಉಲ್ಲೇಖಿಸಲಾಗಿದೆ. ಅಂದರೆ ಈ ಜಗತ್ತಿನ ಮನುಷ್ಯರೆಲ್ಲರಲ್ಲಿ ಅಂತರ್ನಿಹಿತವಾದ ಘನತೆ ಮತ್ತು ಮನುಷ್ಯ ಸಮೂಹಗಳಿಗೆ ಸಮಾನ ಮತ್ತು ಆತ್ಯಂತಿಕವಾದ ಹಕ್ಕುಗಳನ್ನು ಮಾನ್ಯಗೊಳಿಸಬೇಕು.

ಈ ಜಗತ್ತಿನಲ್ಲಿ ಸ್ವಾತಂತ್ರ್ಯ, ನ್ಯಾಯ ಹಾಗೂ ಶಾಂತಿಯನ್ನು ನೆಲೆಗೊಳಿಸಲು ಇವುಗಳು ಅಡಿಪಾಯವಾಗಿವೆ. ಆದರೆ ಈ ಮಾನವ ಹಕ್ಕುಗಳ ಬಗೆಗೆ ನಿರ್ಲಕ್ಷ್ಯ ಹಾಗೂ ತಿರಸ್ಕಾರವು ಅನಾಗರಿಕ ಕೃತ್ಯಗಳಿಗೆ ಕಾರಣವಾಗಿವೆ. ಇದು ಮಾನವಕುಲದ ಆತ್ಮಸಾಕ್ಷಿಯನ್ನೇ ಕೆರಳಿಸಿದೆ. ಇಡೀ ಜಗತ್ತಿನ ಮನುಷ್ಯರಲ್ಲಿ ವಾಕ್ ಸ್ವಾತಂತ್ರ್ಯ ಮತ್ತು ನಂಬಿಕೆ ಹಾಗೂ ಭಯದಿಂದ ಬಿಡುಗಡೆಯನ್ನು ನೆಲೆಗೊಳಿಸಲು ಇದು ಒತ್ತಾಸೆಯಾಗುತ್ತದೆ.

ಸಾಮಾನ್ಯ ಜನರ ಆಶೋತ್ತರಗಳನ್ನು ಎತ್ತಿಹಿಡಿಯುವ ಮಹತ್ತರವಾದ ಘೋಷಣೆ ಇದಾಗಿದೆ. ಮನುಷ್ಯ ಘನತೆ ಮತ್ತು ಮಾನವ ಹಕ್ಕುಗಳು ಎಂಬೀ ಎರಡೂ ಪರಿಕಲ್ಪನೆಗಳು ಪ್ರತ್ಯೇಕ ಮತ್ತು ಪರಸ್ಪರ ಅವಲಂಬಿತವೆಂದು ಯಾರಾದರೂ ಹೇಳಬಹುದು. ಆದರೆ ಇದುವರೆಗೂ ಯಾರು ಕೂಡ ಈ ಎರಡೂ ಪರಿಕಲ್ಪನೆಗಳ ನಡುವಣ ಪರಸ್ಪರ ಅವಲಂಬನೆಯನ್ನು ಯಾವುದೇ ವ್ಯವಸ್ಥಿತ ಮತ್ತು ಸ್ಪಷ್ಟ ಸೂತ್ರಗಳ ಮೂಲಕ ವ್ಯಾಖ್ಯಾನಿಸಿಲ್ಲ ಅನ್ನುವುದು ಗಮನಾರ್ಹ.

ವಿಶ್ವಸಂಸ್ಥೆಯ ಇನ್ನೆರಡು ನಡೆಗಳನ್ನು ಅವಲೋಕಿಸಿದರೆ, ಈ ಪರಿಕಲ್ಪನೆಗಳ ನಡುವಿನ ನಂಟಸ್ತಿಕೆಯನ್ನು ಇನ್ನಷ್ಟು ನಿಚ್ಚಳಗೊಳಿಸುತ್ತವೆ. ವಿಶ್ವಸಂಸ್ಥೆಯ ಚಾರ್ಟರ್ನಲ್ಲಿ ಘೋಷಿಸಲಾದ ತತ್ವಗಳಿಗೆ ಪೂರಕವಾಗಿ, ಮನುಷ್ಯನ ಅಂತರ್ಗತ ಘನತೆಯನ್ನು ಮತ್ತು ಇಡೀ ಜಗತ್ತಿನ ಮನುಷ್ಯರಲ್ಲಿ ಸಮಾನ ಹಾಗೂ ಆತ್ಯಂತಿಕ ಹಕ್ಕುಗಳನ್ನು ಮಾನ್ಯ ಮಾಡುವುದರಿಂದ ಈ ಲೋಕದ ಜನರ ಸ್ವಾತಂತ್ರ್ಯ, ನ್ಯಾಯ ಮತ್ತು ಶಾಂತಿಯನ್ನು ನಿರಂತರಗೊಳಿಸುವಲ್ಲಿ ಇವು ಅಡಿಪಾಯವಾಗುತ್ತವೆ.

ಮನುಷ್ಯನ ಅಂತರ್ಗತ ಘನತೆಯಿಂದಲೇ ರೂಪಿಸಲಾಗುವ ಈ ಹಕ್ಕುಗಳನ್ನು ಮಾನ್ಯಗೊಳಿಸುವುದು ಮುಖ್ಯ. ವಿಶ್ವಸಂಸ್ಥೆಯ ಈ ದಾಖಲೆಗಳು ಹೇಳುವಂತೆ, ಮನುಷ್ಯ ಘನತೆ ಎಂಬುದು ಅತ್ಯಂತ ಶ್ರೇಷ್ಠವಾದ ಮೌಲ್ಯವಾಗಿದೆ ಎಂದು ಪರಿಗಣಿಸುತ್ತವೆ. ಇದು ಮಾನವ ಹಕ್ಕುಗಳಿಂದ ಮಾತ್ರ ಪ್ರತ್ಯೇಕಗೊಳ್ಳುವುದಷ್ಟೆಯಲ್ಲ, ಆ ಪರಿಕಲ್ಪನೆಯನ್ನೇ ಪಲ್ಲಟಗೊಳಿಸಿದೆ. ಮನುಷ್ಯ ಘನತೆಯಿಂದಲೇ ಮೈದಾಳಿದ ಈ ಮಾನವ ಹಕ್ಕುಗಳ ಪರಿಕಲ್ಪನೆ ಆ ನಂತರದಲ್ಲಿ ತನ್ನದೆಯಾದ ಗುಣಲಕ್ಷಣಗಳನ್ನು ಮೈಗೂಡಿಸಿಕೊಂಡಿದೆ.

ಎಷ್ಟೋ ಸನ್ನಿವೇಶಗಳಲ್ಲಿ ಈ ಮನುಷ್ಯ ಘನತೆಯ ಗುಣಗಳು ಎಂತಹವು ಎನ್ನುವುದನ್ನು ಸ್ಪಷ್ಟಪಡಿಸದೇ ಕೇವಲ ಒಂದು ಕಾನೂನಿನ ಪದವನ್ನಾಗಿ ಬಳಸಲಾಗುತ್ತದೆ. ಮನುಷ್ಯ ಘನತೆಯ ಮೂಲತತ್ವಗಳಾವವು? ಅನ್ನುವುದನ್ನು ಈ ಕಾನೂನು ಪದಕೋಶವು ನಿಚ್ಚಳಗೊಳಿಸದು. ಹಾಗಾಗಿ ಭಾಷಿಕ ನಿರೂಪಣೆಗಳು ನಮ್ಮ ಸಾಮಾಜಿಕ ವಿವೇಕವನ್ನು ಹೇಗೆ ಪ್ರಕಟಿಸುತ್ತವೆ ಎಂಬ ಸಂವೇದನೆಯನ್ನು ಹೊಂದುವುದು ಅವಶ್ಯ.

ಸಾಮಾಜಿಕ ಅಂತಸ್ತಿಗೆ ಅನುಗುಣವಾಗಿ ಮನುಷ್ಯ ಘನತೆಯನ್ನು ಸೂಚಿಸುವ ಭಾಷಿಕ ಕ್ರಿಯೆಗಳೇ ನಮ್ಮನಮ್ಮ ಕರ್ತವ್ಯ ಮತ್ತು ಹೊಣೆಗಾರಿಕೆಯನ್ನು ಸಮರ್ಥಿಸುತ್ತವೆ. ಹೀಗೆ ಏರ್ಪಡುವ ಅಸಮಾನತೆ ಇಲ್ಲವೇ ತಾರತಮ್ಯವನ್ನು ಅಳಿಸಲು ಬೇಕಾಗುವ ಪರಿಕರವೇ, ಈ ಮನುಷ್ಯ ಘನತೆ.

ಆದ್ದರಿಂದ ಭಾರತೀಯ ಸಂವಿಧಾನವು ತನ್ನೆಲ ನಾಗರಿಕರಲ್ಲಿ ಸಹೋದರತ್ವ/ಭ್ರಾತೃತ್ವವನ್ನು ಉತ್ತೇಜಿಸುವ ಮೂಲಕ ವ್ಯಕ್ತಿಯ ಘನತೆ ಮತ್ತು ರಾಷ್ಟ್ರದ ಏಕತೆ ಹಾಗೂ ಐಕ್ಯತೆಯನ್ನು ಸಾಧಿಸಲು ಆಶಿಸುತ್ತದೆ. ಹಾಗಾಗಿಯೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ವ್ಯಕ್ತಿ ಘನತೆಯ ಮಹತ್ವವನ್ನು ಆಳವಾಗಿ ಬಲ್ಲವರಾದ್ದರಿಂದ, ಸ್ವಾತಂತ್ರ್ಯ (ಲಿಬರ್ಟಿ), ಸಮಾನತೆ (ಇಕ್ವಿಟಿ) ಹಾಗೂ ಸಹೋದರತ್ವ (ಫ್ರೆಟರ್ನಿಟಿ) ಎಂಬೀ ತ್ರಿಕೂಟ (ಟ್ರಿನಿಟಿ) ಪರಿಕಲ್ಪನೆಗಳನ್ನು ರೂಪಿಸಿದರು ಹಾಗೂ ಅವುಗಳಿಗೆ ಸಂವಿಧಾನಾತ್ಮಕ ಮಾನ್ಯತೆಯನ್ನೂ ಕೊಟ್ಟರು.

ಒಟ್ಟಿನಲ್ಲಿ ಈ ತ್ರಿಕೂಟ ಪರಿಕಲ್ಪನೆಗಳ ತಾತ್ಪರ್ಯವೇನೆಂದರೆ, ಮನುಷ್ಯ ಘನತೆಯನ್ನು ಉಲ್ಲಂಘಿಸಲಾಗದು ಅನ್ನುವುದಾಗಿದೆ. ಈ ಎಲ್ಲ ವಿಶ್ಲೇಷಣೆಗಳ ಮೂಲಕ ಸ್ವಾತಂತ್ರ್ಯ, ದೇಶದ ಐಕ್ಯತೆ, ನ್ಯಾಯಸಮ್ಮತ ಸಮಾಜ, ಒಗ್ಗಟ್ಟು ಮೊದಲಾದ ಶ್ರೇಷ್ಠ ಮೌಲ್ಯಗಳ ಜೊತೆಗೆ ಮನುಷ್ಯ ಘನತೆಯನ್ನು ಅತ್ಯಂತ ಶ್ರೇಷ್ಠ ಮೌಲ್ಯವೆಂದು ಮನಗಾಣಲಾಗಿದೆ. ನೈತಿಕತೆಯ ಪ್ರಶ್ನೆಯೂ ಇಲ್ಲಿ ಮುಖ್ಯವಾಗುತ್ತದೆ. ಸಂವಿಧಾನದ ಆಶಯವೇ ಇದಾಗಿರುತ್ತದೆ.

ಆದರೆ ಈ ಎಲ್ಲ ಮೌಲ್ಯಗಳನ್ನು ಕೇವಲ ಕಾನೂನಾತ್ಮಕ ಪದಕೋಶದಂತೆ ಪರಿಗಣಿಸಿದಾಗ, ನೈತಿಕತೆಯೂ ಇರುವುದಿಲ್ಲ ಹಾಗೂ ಮನುಷ್ಯ ಘನತೆ ಎಂಬುದು ನೆಲೆಗೊಳ್ಳಲು ಸಾಧ್ಯವಾಗುವುದಿಲ್ಲ. ಆವಾಗ ನಮ್ಮ ಸಂವಿಧಾನದ ಆದರ್ಶ ಮತ್ತು ಆಚರಣೆಗಳ ನಡುವೆ ಅಗಾಧವಾದ ಕಂದಕ ಏರ್ಪಡುತ್ತದೆ.

ಇದುವರೆಗೂ ಗಮನಿಸಿದಂತೆ, ಮನುಷ್ಯ ಘನತೆಯ ಭಾಷಿಕ ರೂಪಗಳು ಕಾನೂನಾತ್ಮಕ ಪರಿಕರಗಳಲ್ಲಿ ಕರ್ತವ್ಯ ಮತ್ತು ಹೊಣೆಗಾರಿಕೆಯನ್ನು ಹೇಗೆ ಸಮರ್ಥಿಸುವ ಕ್ರಿಯೆಯಾಗಿದೆ ಅನ್ನುವುದನ್ನು ನೋಡಿದೆವು. ಅಂದರೆ ಮನುಷ್ಯ ಘನತೆ ಎನ್ನುವುದು ಕೇವಲ ಕಾನೂನಾತ್ಮಕ ಪರಿಕಲ್ಪನೆಯಲ್ಲ ಬದಲಾಗಿ ಬದುಕಿನ ಕೆಲವು ನಿರ್ದಿಷ್ಟ ತತ್ವಗಳನ್ನು ವ್ಯಕ್ತಪಡಿಸುತ್ತದೆ.

ವಾಸ್ತವದಲ್ಲಿ, ಈ ಮನುಷ್ಯ ಘನತೆ ಎಂಬುದು ನೈತಿಕ-ತಾತ್ವಿಕ ಪರಿಕಲ್ಪನೆಯೂ ಆಗಿರುತ್ತದೆ. ಇತರೆ ನೈತಿಕ ಪರಿಕಲ್ಪನೆಗಳಿಗೆ ಇರುವಂತೆ ಹಲವು ಬಗೆಯ ಅರ್ಥ ವಿನ್ಯಾಸ ಹಾಗೂ ಸಾಧ್ಯತೆಗಳು ಸಂದರ್ಭಕ್ಕೆ ಅನುಗುಣವಾಗಿ ಈ ಪರಿಕಲ್ಪನೆಯ ಸನ್ನಿವೇಶದಲ್ಲಿಯೂ ಹಲವು ಭಾಷಿಕ ಕ್ರಿಯೆಗಳ ಮೂಲಕ ಏರ್ಪಡುತ್ತವೆ. ಹಾಗಾಗಿ ಈ ಪರಿಭಾಷೆಯನ್ನು ಘನವಾದ ಮತ್ತು ತೆಳುವಾದ ಅರ್ಥಗಳಲ್ಲಿ ಬಳಸಲಾಗುತ್ತದೆ. ‘ನೈತಿಕ ಪದಗಳು ಸಂಕುಚಿತ ಮತ್ತು ವ್ಯಾಪಕವಾದ ಅರ್ಥಗಳನ್ನು ಹೊಂದಿರುತ್ತವೆ.ಆಯಾ ಸನ್ನಿವೇಶಗಳ ಪ್ರಮಾಣಕ್ಕೆ ಅನುಗುಣವಾಗಿ ಈ ಎರಡೂ ಸಾಂದರ್ಭಿಕ ಅರ್ಥಗಳನ್ನು ನಾವು ಬಳಸುತ್ತೇವೆ. ವಿಭಿನ್ನ ಸನ್ನಿವೇಶದಲ್ಲಿ ಇವುಗಳು ಅತ್ಯಂತ ಸೂಕ್ತವಾಗಿರುತ್ತವೆ ಮತ್ತು ವಿಭಿನ್ನ ಉದ್ದೇಶಗಳನ್ನು ಪೊರೈಸುತ್ತವೆ’ (1994,2) ಎಂದು ಮೈಕಲ್ ವಾಲ್ಜರ್ ಸ್ಪಷ್ಟವಾಗಿ ಹೇಳುತ್ತಾರೆ. ಇದನ್ನು ಇನ್ನಷ್ಟು ವಿಷದೀಕರಿಸಿ ನೋಡಿದರೆ, ಮನುಷ್ಯ ಘನತೆಯೊಂದಿಗೆ ಹೆಣೆದುಕೊಂಡಿರುವ ಭಾಷಿಕ ಕ್ರಿಯೆಗಳ ನಡುವಣ ಮುಖ್ಯವಾದ ವ್ಯತ್ಯಾಸಗಳನ್ನು ಈ ನೈತಿಕ ಅರ್ಥಗಳು ಪ್ರತಿಬಿಂಬಿಸುತ್ತವೆ.

ವ್ಯಾಪಕ ಅರ್ಥದಲ್ಲಿ ಇದನ್ನೊಂದು ನೈತಿಕ ಪರಿಕಲ್ಪನೆಯನ್ನಾಗಿ ಬಳಸಿದರೆ, ಮನುಷ್ಯ ಘನತೆಯು ‘ಮಾನವ’ ಮತ್ತು ‘ಘನತೆ’ ಎಂಬ ಎರಡೂ ಮೂಲಭೂತ ಹಾಗೂ ಪರಸ್ಪರ ಅಂತರ್ಸಂಬಂಧವನ್ನು ಹೊಂದಿರುವ ಆಯಾಮಗಳನ್ನು ಸೂಚಿಸುತ್ತದೆ. ವಾಸ್ತವದಲ್ಲಿ ಘನತೆಯ ಪ್ರಜ್ಞೆಯು ಈ ಲೋಕ ಮತ್ತು ಲೋಕದ ಜನರನ್ನು ನಾವು ಪರಿಭಾವಿಸುವ ವಿಧಾನದಲ್ಲಿಯೇ ಅಂತರ್ಗತವಾಗಿರುತ್ತದೆ.

ಡಾ.ಮೇಟಿ ಮಲ್ಲಿಕಾರ್ಜುನ್, ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ಆದರೆ ಮಾನವ ಎಂಬ ಪದವು ನಮ್ಮ ಪ್ರಜ್ಞೆ ಇಲ್ಲವೇ ಸೂಪ್ತಪ್ರಜ್ಞೆಯ ಮೂಲಕ ಮನುಷ್ಯ ಸ್ವಭಾವದ ಗ್ರಹಿಕೆಗಳಿಗೆ ಸಂಬಂಧಿಸಿರುತ್ತದೆ. ಲೋಕದ ವರ್ತನೆ, ಮೌಲ್ಯ ಹಾಗೂ ಪ್ರಾಪಂಚಿಕ ಬದುಕಿನ ಗುಣಲಕ್ಷಣಗಳನ್ನು ಮೌಲ್ಯ ನಿರ್ಣಯವನ್ನು ಮಾಡುವಲ್ಲಿ ಈ ಪ್ರಜ್ಞೆಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ.

ಒಟ್ಟಂದದಲ್ಲಿ ಮನುಷ್ಯ ಘನತೆ ಎಂಬೀ ವ್ಯಾಪಕ ಅರ್ಥವು ನೈತಿಕ ದೃಷ್ಟಿಕೋನಗಳನ್ನು ರೂಪಿಸುತ್ತದೆ. ಅಂದರೆ ಮನುಷ್ಯ ಬದುಕಿನ ಅಸ್ತಿತ್ವವೇ ಪ್ರಧಾನ ವಿನ್ಯಾಸವಾಗಿ, ಜಾತಿ, ಮತ, ಧರ್ಮ, ಭಾಷೆ, ಲಿಂಗ, ಪ್ರದೇಶಗಳು ಕೇವಲ ಸಾಮಾಜಿಕ ಭಿನ್ನತೆಯ ವಿನ್ಯಾಸಗಳಾಗುತ್ತವೆ.

ಮನುಷ್ಯ ಸಮೂಹದ ಘನತೆಯನ್ನು ಎತ್ತಿಹಿಡಿಯುವ ಇಂತಹ ಹಲವು ಸನ್ನಿವೇಶಗಳನ್ನು ನಮ್ಮ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪರಂಪರೆಗಳಲ್ಲಿಯೂ ಕಾಣುತ್ತೇವೆ. ಉದಾ.ಗೆ ಕುವೆಂಪು ಅವರು ತಮ್ಮ ಮಲೆಗಳಲ್ಲಿ ಮದುಮಗಳು ಕಾದಂಬರಿಯ ಪೀಠಿಕೆಯನ್ನಾಗಿ ಬಳಸಿಕೊಂಡಿರುವ ಈ ಮಾತುಗಳ ತಾತ್ಪರ್ಯವೂ ಮನುಷ್ಯ ಘನತೆಯ ಮಹತ್ವವನ್ನು ಕಂಡರಿಯುವ ಬಗೆಯಾಗಿದೆ.

ಯಾರೂ ಮುಖ್ಯರಲ್ಲ ಅಮುಖ್ಯರೂ ಅಲ್ಲ,

ಯಾವುದೂ ಯಃಕಷ್ಚಿತವಲ್ಲ

ಯಾವುದಕ್ಕೂ ಮೊದಲಿಲ್ಲ

ಯಾವುದಕ್ಕೂ ತುದಿಯಿಲ್ಲ

ಯಾವುದೂ ಎಲ್ಲಿಯೂ ನಿಲ್ಲುವುದೂ ಇಲ್ಲ

ಕೊನೆ ಮುಟ್ಟುವುದೂ ಇಲ್ಲ,

ಕೊನೆ ಮುಟ್ಟುವುದೂ ಇಲ್ಲ,

ಎಲ್ಲಕ್ಕೂ ಇದೆ ಅರ್ಥ
ಯಾವುದೂ ಅಲ್ಲ ವ್ಯರ್ಥ
ನೀರೆಲ್ಲ ಊ ತೀರ್ಥ”.

ಕುವೆಂಪು

ಈ ಪೀಠಿಕೆಯ ಮೂಲಕ ಮೈದಾಳಬಹುದಾದ ಭಾಷಿಕ ಕ್ರಿಯೆಗಳು ಮತ್ತು ಅರ್ಥಗಳನ್ನು ಯಾವುದೇ ಸೀಮಿತ ಸನ್ನಿವೇಶಕ್ಕೆ ಮಾತ್ರ ಸಂಬಂಧಿಸಿ ಹೇಳಲು ಸಾಧ್ಯವಿಲ್ಲ. ಆದರೆ ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ನಿರೂಪಿಸಿದ ಪಾತ್ರಗಳನ್ನು ಇಡೀಯಾಗಿ ಅವಲೋಕಿಸಿದರೆ, ಕುವೆಂಪು ಅವರ ಈ ಮಾತುಗಳಿಗೆ ನಿಶ್ಚಿತವಾಗಿಯೂ ಒಂದು ಮಹತ್ವ ದೊರೆಯುತ್ತದೆ.

ಅಂದರೆ ಇಡಿಯಾಗಿ ಮನುಷ್ಯ ಘನತೆಯ ಮಹತ್ವವನ್ನು ಸಾರುವ ನುಡಿಗಳಾಗಿ ಈ ಮಾತುಗಳು ಇಲ್ಲಿ ಸಾಕ್ಷಿಯಾಗುತ್ತವೆ. ಇದಕ್ಕೆ ಪೂರಕವಾಗಿ ಸರ್ವರಿಗೂ ಸಮಪಾಲು, ಸಮಬಾಳು ಎಂಬ ಸಮಾಜವಾದಿ ತತ್ವವನ್ನು ಕುವೆಂಪು ಅವರು ಅತ್ಯಂತ ಬಲವಾಗಿ ನಂಬಿದ್ದರು.

ಇವರ ಗ್ರಹಿಕೆ ಮತ್ತು ಅಭಿವ್ಯಕ್ತಿಯಲ್ಲಿ ನೈತಿಕ ಮತ್ತು ತಾತ್ವಿಕ ಸ್ಪಷ್ಟತೆಯನ್ನು ನೋಡುತ್ತೇವೆ ಹಾಗೂ ಮನುಷ್ಯ ಘನತೆಯನ್ನು ಪರಿಪೂರ್ಣವಾಗಿ ನಂಬಿದ್ದ, ಕುವೆಂಪು ಅವರ ಕಾದಂಬರಿಗಳ ಬಗೆಗೆ ಪ್ರೊ. ಬಿ ಕೃಷ್ಣಪ್ಪನವರು ‘ಕುವೆಂಪು ಕಾದಂಬರಿಗಳಲ್ಲಿ ದಲಿತ ಜೀವನಕ್ರಮ’ ಎಂಬ ಮಹತ್ವದ ಲೇಖನವನ್ನು ಬರೆದಿರುವರು. ಈ ಲೇಖನದಲ್ಲಿ ಇವರು ಎತ್ತಿರುವ ಪ್ರಶ್ನೆಗಳು ತಾತ್ವಿಕವಾಗಿ, ಸಾಮಾಜಿಕ ನ್ಯಾಯ ಮತ್ತು ಸಾಂಸ್ಕೃತಿಕ ನ್ಯಾಯದ ಪ್ರಶ್ನೆಗಳಾಗಿ ಸರಿಯಾಗಿವೆ.

ಏಕೆಂದರೆ ಮನುಷ್ಯ ಘನತೆಯ ಪ್ರಶ್ನೆಯನ್ನೇ ವಿಶೇಷವಾಗಿ ದಲಿತ ಮತ್ತು ವಂಚಿತ ಸಮುದಾಯಗಳನ್ನು ಕೇಂದ್ರವಾಗಿಟ್ಟುಕೊಂಡ ಈ ಘನತೆಯ ಪ್ರಶ್ನೆಗಳು ಇಲ್ಲಿ ಮಹತ್ವವನ್ನು ಪಡೆಯುತ್ತವೆ. ಹಾಗಾದರೆ ಮನುಷ್ಯ ಘನತೆ ಕುರಿತ ಕುವೆಂಪು ಮತ್ತು ಕೃಷ್ಣಪ್ಪನವರ ನಡುವಣ ಗ್ರಹಿಕೆಗಳು ಪರಸ್ಪರ ಭಿನ್ನವಾಗಿವೆಯೇ? ಅಥವಾ ಸಾಹಿತ್ಯ ನಿರೂಪಣೆಗಳ ಬಗೆಗೆ ಈ ತರಹದ ಪ್ರಶ್ನೆಯನ್ನು ಕೇಳುವುದೇ ತಪ್ಪೇ? ಎನ್ನುವ ಅನುಮಾನಗಳೂ ಇಲ್ಲಿ ತಲೆಯೆತ್ತುತ್ತವೆ.

ಕನ್ನಡ ಸಾಹಿತ್ಯ ವಿಮರ್ಶೆಯ ಲೋಕ ಕೃಷ್ಣಪ್ಪವರ ಪ್ರಶ್ನೆಯೊಳಗೆ ಅಂತರ್ಗತವಾಗಿರುವ ಮನುಷ್ಯ ಘನತೆಯ ಪ್ರಶ್ನೆಯನ್ನೇ ನಗಣ್ಯಗೊಳಿಸಿವೆ. ಸಮಾಜ ವಿಜ್ಞಾನದ ಪ್ರಶ್ನೆಯನ್ನಾಗಿ ಪರಿಗಣಿಸಿ ಕೃಷ್ಣಪ್ಪನವರ ಪ್ರಶ್ನೆಯ ಘನತೆಯನ್ನು ಸಾಹಿತ್ಯ ವಿಮರ್ಶೆಯಲ್ಲಿ ತಳ್ಳಿಹಾಕಲಾಗಿದೆಯೇ? ಕುವೆಂಪು ಮತ್ತು ಕೃಷ್ಣಪ್ಪನವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾಳಜಿಗಳ ನಡುವೆ ಇಂತಹದೊಂದು ಕಂದಕವನ್ನು ಸಾಹಿತ್ಯ ವಿಮರ್ಶೆಯಲ್ಲಿ ಯಾಕೇ ಸೃಷ್ಟಿಸಲಾಗಿದೆ? ಅಂದರೆ ಕೃಷ್ಣಪ್ಪನವರ ಪ್ರಶ್ನೆಯನ್ನು ಕನ್ನಡ ವಿಮರ್ಶೆ ನಿಭಾಯಿಸಿದ ಬಗೆಯಲ್ಲಿಯೇ ಸಮಸ್ಯೆಗಳಿವೆ ಎನ್ನುವುದನ್ನು, ಈ ಕುರಿತ ವಾಗ್ವಾದಗಳಿಂದ ಗ್ರಹಿಸಬಹುದು. ಒಟ್ಟಿನಲ್ಲಿ ಮನುಷ್ಯ ಘನತೆಯನ್ನು ನಿರ್ವಹಿಸಿದ ಚರ್ಚೆಗಳೂ ಒಂದು ಸಾರ್ವತ್ರಿಕ ತಾತ್ವಿಕ ಚೌಕಟ್ಟನ್ನು ರೂಪಿಸಿ ಆ ಮೂಲಕ ಮನುಷ್ಯ ಘನತೆಯ ಸವಾಲುಗಳನ್ನು ನಾವು ಎದುರುಗೊಂಡಿಲ್ಲ ಅನ್ನುವುದು ಈಗಲಾದರೂ ನಮಗೆ ಮನವರಿಯಾಗುತ್ತದೆ ಅಂದುಕೊಂಡಿರುವೆ.

ಈ ಸಮಸ್ಯೆಗಳನ್ನು ಅತ್ಯಂತ ವ್ಯಾಪಕವಾಗಿ ಕನ್ನಡ ಸಾಹಿತ್ಯ ಪರಂಪರೆಯಲ್ಲಿಯೇ ನೋಡುತ್ತೇವೆ. ಉದಾ.ಗೆ ನಡೆ, ನುಡಿ, ಉಡಿಗೆ, ಆಹಾರ, ಜಾತಿ, ಧರ್ಮ, ಲಿಂಗ ಮೊದಲಾದ ವಿದ್ಯಮಾನಗಳನ್ನು ಕುರಿತ ವಚನಕಾರರ ನಿಲುವುಗಳ ಆಶಯವು ಮನುಷ್ಯ ಘನತೆಯನ್ನು ನೆಲೆಗೊಳಿಸುವುದೇ ಆಗಿರುತ್ತದೆ. ಇಲ್ಲಿಯೂ ಇಂತಹದೇ ಕಂದಕವನ್ನು ಹಲವು ವಚನಕಾರರಲ್ಲಿ ಕಾಣುತ್ತೇವೆ.

ಕಾರಣವೇನೆಂದರೆ, ವಚನಕಾರರ ಪೂರ್ವಾಶ್ರಮದ ವಾಸನೆ ಮತ್ತು ಕಳಂಕ, ಈ ಮನುಷ್ಯ ಘನತೆಯನ್ನು ಪಡೆದುಕೊಳ್ಳುವಲ್ಲಿ ಹೇಗೆ ಬಿಕ್ಕಟ್ಟುಗಳನ್ನು ರೂಪಿಸಿವೆ ಅನ್ನುವುದನ್ನು ವಚನ ವಾಂಜ್ಞಮಯದಲ್ಲಿ ಕಾಣುತ್ತೇವೆ. ಈ ಕುರಿತು ಸಾಕಷ್ಟು ಚರ್ಚೆಗಳನ್ನು ಬೆಳಸಬಹುದು ಆದರೆ ಈ ಬರಹದ ವ್ಯಾಪ್ತಿಯಲ್ಲಿ ಅದು ಸಾಧ್ಯವಾಗುತ್ತಿಲ್ಲ.

ಈ ಟಿಪ್ಪಣಿಯ ಚರ್ಚೆಗಳ ತಲೆಬರಹವು ‘ಭಾಷಿಕ ಕ್ರಿಯೆ ಮತ್ತು ಮನುಷ್ಯ ಘನತೆ’ ಎಂದಾಗಿದೆ. ಆದರೆ ಪಗಗಳನ್ನೋ ಇಲ್ಲವೇ ವಾಕ್ಯಗಳನ್ನೋ ಉಲ್ಲೇಖಿಸಿ ಪ್ರತಿಯೊಂದಕ್ಕೂ ಇದು ಈ ಅರ್ಥ ಅದು ಆ ಅರ್ಥ ಎಂದು ವಿವರಣಾತ್ಮಕ ನಿದರ್ಶನಗಳನ್ನು ಕೊಡದೆ, ಇಡೀ ಭಾಷಿಕ ಸಂಕಥನದಲ್ಲಿ ಹಾಗೂ ನಾವು ನಮ್ಮ ಬದುಕಿನಲ್ಲಿ ರೂಪಿಸುವ ಸಂಕಥನಗಳ ಮೂಲಕ ಮನುಷ್ಯ ಘನತೆಯ ಪ್ರಶ್ನೆಯನ್ನು ಹೇಗೆ ನಿರ್ವಹಿಸುತ್ತೇವೆ? ಮತ್ತು ನಿಭಾಯಿಸಿದ್ದೇವೆ? ಪರಿಣಾಮವಾಗಿ ಸಾಮಾಜಿಕ-ಸಾಂಸ್ಕೃತಿಕ ಬಿಕ್ಕಟ್ಟುಗಳನ್ನು ಇಂದಿನ ಪ್ರಜಾಸತ್ತಾತ್ಮಕ ಸನ್ನಿವೇಶದಲ್ಲಿಯೂ ನಾವು ಹೇಗೆ ಅನುಭವಿಸುತ್ತೇವೆ.

ಹಾಗೂ ಮನುಷ್ಯ ಅಸ್ತಿತ್ವ ಮತ್ತು ಸ್ವಭಾವಗಳೊಡನೆ ತಳುಕು ಹಾಕಿಕೊಂಡಿರುವ ಈ “ಮನುಷ್ಯ ಘನತೆ”ಯೆಂಬ ಮೂಲಭೂತ ಪರಿಕಲ್ಪನೆಯನ್ನು ಅರಿಯದೇ, ಅದು ಹೇಗೆ ಪ್ರಜಾಸತ್ತಾತ್ಮಕ ಹಾಗೂ ನ್ಯಾಯಸಮ್ಮತ ಬದುಕನ್ನು ನಾವು ಬದುಕಲು ಸಾಧ್ಯ?

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕವಿತೆ | ನೆನಪು

Published

on

ಕವಿ | ರುದ್ರಪ್ಪ ಹನಗವಾಡಿ
  • ರುದ್ರಪ್ಪ ಹನಗವಾಡಿ

ಅಪ್ಪನನ್ನು ಒಪ್ಪ ಮಾಡಿ
ವರ್ಷಗಳೇ ಕಳೆದವು ಮುವ್ವತ್ತೇಳು
ಇಂದಿರಾಗಾಂಧಿಯ ತುರ್ತು ಪರಿಸ್ಥಿತಿ
ಅರಸರ ಮೀಸಲಾತಿ
ಬಸವಲಿಂಗಪ್ಪನವರ ಬೂಸಾ ಖ್ಯಾತಿ
ಮಲ ಹೊತ್ತು
ಮಲಗಿದ್ದ ಕಾಲಕ್ಕೆ
ಚುರುಕು ಮುಟ್ಟಿಸಿದ ಕಾಲ

ಹರೆಯದ ನನಗೆ
ಕಾಲೇಜ ಮೇಷ್ಟರ ಕೆಲಸ
ಸೂಟು ಬೂಟಿನ ವೇಷ
ಆ ಮೇಲೆ ಅಮಲದಾರಿಕೆ
ಎಲ್ಲ ನಡೆದಾಗಲೇ ಅವ್ವನನ್ನು
ಆಸ್ಪತ್ರೆಗೆ ಸೇರಿಸಿದ್ದು
ಕಾಲ ಕಳೆದು ಕೊಂಡು
ಕೋಲ ಹಿಡಿದದ್ದು
ನಿನ್ನೆ ಮೊನ್ನೆಯಂತೆ
ಬಾಲ್ಯವಿನ್ನು ಉಂಟೆಂಬಂತೆ
ಭಾವಿಸುವಾಗಲೇ ಅವ್ವನ ಸಾವು

ಅದರೊಟ್ಟಿಗೆ ಕಾಯದಾಯಾಸ ತೀರಿಸಲು
ಬಂದರೆ ಬೆಂಗಳೂರಿಗೆ
ರೌಡಿಗಳ ಕಾಟ
ಅಂಬೇಡ್ಕರ್ ಪಟದ ಕೆಳಗೆ
ದೌರ್ಜನ್ಯದ ದಂಡು

ಅಮಾಯಕರಿಗೆ ಗುಂಡು
ಕಂಡುಂಡ ಹಾದಿಯ ಗುಡಿಸಲುಗಳಲ್ಲೀಗ
ಮುಗಿಲು ಮುಟ್ಟೋ ಮಹಲುಗಳು
ಅಂತಲ್ಲಿ
ದೇಶ ವಿದೇಶಗಳ
ಅಹವಾಲುಗಳು
ಅವಿವೇಕಗಳು
ನೋಡ ನೋಡುತ್ತಿದ್ದಂತೆ
ಉಸಿರು ಬಿಗಿಹಿಡಿದ ಜನರ ಒಳಗೆ
ಒಳಪದರಗಳೊಳಗೆ ಕನಸ ಬಿತ್ತಿ
ಹಸಿರ ಹೊನ್ನು ಬಾಚಲು ಹವಣಿಸಿದ
ಬಿಳಿ ಜನರ ಆಟ
ಅರ್ಥವಾಗುವುದೇ ಎಲ್ಲ
ಗೋಣ ನೀಡುವರೆ
ಹೂತಿಟ್ಟ ಗೂಟಕ್ಕೆ ?

( ಚಿಂತಕ ರುದ್ರಪ್ಪ ಹನಗವಾಡಿ ಅವರ ‘ಊರು – ಬಳಗ’ ಕವನ ಸಂಕಲನದಿಂದ ‘ ನೆನಪು ‘ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕೃತಿಯನ್ನು ಫ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ 2013 ರಲ್ಲಿ ಪ್ರಕಿಸಿದೆ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ; ಒಂದು ಚಿಂತನೆ

Published

on

  • ಮಹಾಂತೇಶ್.ಬಿ.ನಿಟ್ಟೂರು, ದಾವಣಗೆರೆ

ನಿಜ ಶರಣ ಶ್ರೀ ಅಂಬಿಗರ ಚೌಡಯ್ಯನವರ ಜೀವಿತ ಕಾಲ 12 ನೇ ಶತಮಾನದ ಬಸವಾದಿ ಶರಣರ ಕಾಲದಲ್ಲೇ ಇತ್ತು ಎಂಬುದು ಇತಿಹಾಸಕಾರರ ಸಂಶೋಧನೆಯಿಂದ ತಿಳಿದು ಬರುತ್ತದೆ. ಅವರ ಹುಟ್ಟೂರು ಹಾವೇರಿ ಜಿಲ್ಲೆಯ ಆಗಿನ ಶಿವಪುರ, ಈಗಿನ ಚೌಡಯ್ಯದಾನಪುರ. ಅವರ ತಂದೆಯ ಹೆಸರು ಶ್ರೀ ವಿರೂಪಾಕ್ಷ, ತಾಯಿಯ ಹೆಸರು ಪಂಪಾಂಭಿಕೆ, ಹೆಂಡತಿಯ ಹೆಸರು ಸುಲೋಚನಾ ಹಾಗೂ ಮಗನ ಹೆಸರು ಪುರವಂತ.

ಅಂಬಿಗ ವೃತ್ತಿಯ ಚೌಡಯ್ಯನವರು ಅಲ್ಲಮ ಪ್ರಭು ಮತ್ತು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಇದ್ದ ಒಬ್ಬ ಕ್ರಾಂತಿಕಾರಿ, ದಿಟ್ಟ, ನೇರ, ನಿಷ್ಠುರ ನುಡಿಯ ವಚನಕಾರ. ಕಲ್ಯಾಣ ಕ್ರಾಂತಿಯ ನಂತರ ಇವರು ತಮ್ಮ ವಚನಗಳ ಗಂಟನ್ನು ಹೊತ್ತು ಉಳವಿಗೆ ನಂತರ ತಮ್ಮ ಗ್ರಾಮವಾದ ತುಂಗಭದ್ರಾ ನದಿಯ ದಡದ ಮೇಲಿರುವ ಶಿವಪುರಕ್ಕೆ ಬಂದು ದೋಣಿ ನಡೆಸುವ ವೃತ್ತಿಯಲ್ಲಿ ನಿರತರಾಗಿ ವಚನ ರಚನೆ ಮಾಡಿರುವುದು ತಿಳಿದು ಬರುತ್ತದೆ.

ಚೌಡಯ್ಯನವರು ತಮ್ಮ ಜೀವಿತಾವಧಿಯಲ್ಲಿ ಅನೇಕ ಪವಾಡಗಳನ್ನು ಮಾಡಿರುತ್ತಾರೆ. ಗಿಡಮೂಲಿಕೆ ಔಷಧಿಗಳಿಂದ ಕ್ಷಯ ರೋಗ, ಕುಷ್ಠರೋಗ ಗುಣಪಡಿಸುವುದು, ಹಾವು ಕಚ್ಚಿದವರನ್ನು

ಬದುಕಿಸುವುದು ಇತ್ಯಾದಿ..

ಒಮ್ಮೆ ಗುತ್ತಲದ ಅರಸನು ಬೇಟೆಗಾಗಿ ಈ ಪ್ರದೇಶದಲ್ಲಿ ಸಂಚರಿಸುತ್ತಿದ್ದಾಗ, ಆತನ ಸೇನಾಧಿಪತಿಯು ಹಾವು ಕಚ್ಚಿ ಮೃತಪಟ್ಟನು. ಇದರಿಂದಾಗಿ ಅರಸನಿಗೆ ಅತೀವ ದುಃಖವುಂಟಾಗಿ ರೋಧಿಸತೊಡಗಿದನು. ಆಗ ಆತನ ಸೈನಿಕನೊಬ್ಬನು ಶ್ರೀ ಚೌಡಯ್ಯನವರ ಪವಾಡಗಳ ಬಗ್ಗೆ ವಿವರಿಸಿ ಹೇಳಲಾಗಿ, ಅರಸನು ತನ್ನ ಮೃತ ಸೇನಾಧಿಪತಿಯ ಶರೀರವನ್ನು ಚೌಡಯ್ಯನವರಲ್ಲಿಗೆ ತಂದು ಆತನನ್ನು ಬದುಕಿಸುವಂತೆ ಕೇಳಿಕೊಂಡರು, ಆಗ ಚೌಡಯ್ಯನವರು ಸೇನಾಧಿಪತಿಯನ್ನು ಬದುಕಿಸುತ್ತಾರೆ. ಇದರಿಂದ ಸಂತುಷ್ಟನಾದ ಅರಸನು ಶಿವಪುರದ ಸುತ್ತಲಿನ ಪೂರ್ವ – ಪಶ್ಚಿಮಕ್ಕೆ 14 ಮೈಲು ಹಾಗೂ ಉತ್ತರ – ದಕ್ಷಿಣಕ್ಕೆ 7 ಮೈಲು ಸುತ್ತಳತೆಯ ಭೂಮಿಯನ್ನು ಚೌಡಯ್ಯನವರಿಗೆ ದಾನವಾಗಿ ನೀಡಿದನು.

ಆದರೆ ಚೌಡಯ್ಯನರು ವೈರಾಗ್ಯಶಾಲಿಯು, ಲೌಕಿಕದಲ್ಲಿ ನಿರಾಸಕ್ತಿ ಹೊಂದಿದವರು ಆಗಿದ್ದರಿಂದ, ಅರಸನು ಕೊಡಮಾಡಿದ್ದ ಸಂಪೂರ್ಣ ಜಮೀನನ್ನು ತನ್ನ ಗುರುಗಳಾದ ಶ್ರೀ ಶಿವದೇವರಿಗೆ ದಾನವಾಗಿ ನೀಡಿದರು ಎಂಬ ಉಲ್ಲೇಖವಿದೆ. ಅಂದಿನಿಂದ ಶಿವಪುರ ಗ್ರಾಮಕ್ಕೆ ‘ಚೌಡಯ್ಯದಾನಪುರ’ ಎಂದು ಹೆಸರು ಬರುತ್ತದೆ. ಮುಂದೆ ಚೌಡಯ್ಯನರು ಅಲ್ಲಿ ದೇಹ ತ್ಯಾಗ ಮಾಡಿದ್ದರಿಂದ ತುಂಗಭದ್ರಾ ನದಿಯ ದಡದಲ್ಲಿ ಈಗಲೂ ಚೌಡಯ್ಯನವರ ಸಮಾಧಿ ಗದ್ದುಗೆ ಇದೆ.

ಭ್ರಮಾಲೋಕದಲ್ಲಿ ವಿಹರಿಸುತ್ತಾ ಕುಳಿತ, ಆಡಂಬರದಲ್ಲಿ ಅಡ್ಡಾದಿಡ್ಡಿ ಅಡ್ಡಾಡುವ ಮಂದಿಯ ಕಪಾಳಕ್ಕೆ ಹೊಡೆದು ಎಚ್ಚರಿಸುವಂತಿವೆ ಚೌಡಯ್ಯನವರ ವಚನಗಳು. ಧಾರ್ಮಿಕ ಮೂಢನಂಬಿಕೆ ಬಿತ್ತುವವರಿಗೆ, ಸ್ವಾರ್ಥಿಗಳಾಗಿ ಬದುಕುವವರಿಗೆ, ಮುಖವಾಡ ಹಾಕಿ ಮಂಕು ಬೂದಿ ಎರಚುವವರಿಗೆ ಸಿಂಹ ಸ್ವಪ್ನದಂತೆ ಬೆಚ್ಚಿ ಬೀಳಿಸುತ್ತವೆ ನಿಜ ಶರಣ ಅಂಬಿಗರ ಚೌಡಯ್ಯನವರ ವಚನಗಳು. ಇದಕ್ಕೆ ತಾತ್ಪೂರ್ತಿಕವಾಗಿ ಕೆಲವು ವಚನಗಳು ಈ ಕೆಳಗಿನಂತಿವೆ;

“ಅಂಬಿಗ ಅಂಬಿಗ ಎಂದು ಕುಂದ ನುಡಿಯದಿರು/ನಂಬಿದರೆ ಒಂದೇ ಹುಟ್ಟಲಿ/ಕಡೆಯ ಹಾಯಿಸುವೆನೆಂದಾತನಂಬಿಗರ/ಚೌಡಯ್ಯ ನಿಜಶರಣನು”

ಈ ಮೇಲಿನ ವಚನ ಶ್ರೀ ಅಂಬಿಗರ ಚೌಡಯ್ಯನವರ ಸ್ವಾಭಿಮಾನ, ಧೈರ್ಯ, ನೇರ, ನಿರ್ಭಿಡೆಯ ವ್ಯಕ್ತಿತ್ವದ ಪ್ರತೀಕವಾಗಿದೆ.

ಹನ್ನೆರಡನೇ ಶತಮಾನದ ಸಂದರ್ಭದಲ್ಲಿ ಜಾತಿ ಮತ್ತು ವರ್ಗ ವ್ಯವಸ್ಥೆ ಎಷ್ಟರಮಟ್ಟಿಗಿತ್ತು ಎಂಬುದನ್ನು ಈ ವಚನ ಸೂಚಿಸುತ್ತದೆ. ಅಂತಹ ವಿಚಿತ್ರ, ವಿಕ್ಷಿಪ್ತ ಸನ್ನಿವೇಶದಲ್ಲಿ ಬಸವಾದಿ ಶರಣರು ಜಾತೀಯತೆ, ವರ್ಗ – ವರ್ಣ ವ್ಯವಸ್ಥೆಯ ವಿರುದ್ಧ ಬೃಹತ್ ಚಳುವಳಿಯನ್ನು ಕೈಗೊಂಡಾಗ ಅಂಬಿಗರ ಚೌಡಯ್ಯನವರ ಸತ್ಯನಿಷ್ಠೆ, ಪ್ರಾಮಾಣಿಕತೆಯ ವಚನಗಳು ಪ್ರಖರವಾಗಿ ಕಾಣಿಸುತ್ತವೆ. ಕೆಲವು ಢೋಂಗಿ ಭಕ್ತರಿಗೆ, ಕಪಟ ಸನ್ಯಾಸಿಗಳಿಗೆ ತನ್ನ ಖಾರವಾದ ವಚನಗಳ ಮೂಲಕ ಚುರುಕು ಮುಟ್ಟಿಸುತ್ತಾರೆ.

ಆಡಂಬರ ಮತ್ತು ದುರಾಸೆಯ ಜನರ ಮನಸ್ಥಿತಿ ಕಂಡು ಕೆಂಡಾಮಂಡಲವಾಗಿ ಪ್ರಸ್ತುತ ಪಡಿಸಿದ ಒಂದು ವಚನ ಇಂತಿದೆ;

“ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಕಾಳೋಗರನ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹಾರುವ ಪಕ್ಷಿಯನು/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೆಬ್ಬುಲಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೊಯ್ವ ಹೆಮ್ಮಾರಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಬರುವ ಉರಿ ಬಾಣವನು/ಇಂತೆಲ್ಲವನು ಒಂದೇ ಮಂತ್ರದಲ್ಲಿ ನಿಲ್ಲಿಸಬಹುದು;/ಲೋಭವೆಂಬ ಗ್ರಹಣ ಹಿಡಿದವರ ಏತರಿಂದಲೂ/ನಿಲ್ಲಿಸಲಾಗದು/ಈ ಲೋಭಕ್ಕೆ ದಾರಿದ್ರ್ಯವೇ ಔಷಧವು;/ಹೇಳಿದರೆ ಕೇಳರು, ತಾವು ತಿಳಿಯರು/ಶಾಸ್ತ್ರವ ನೋಡರು, ಭಕ್ತಿಯ ಹಿಡಿಯರು/ಇಂತಹ ಗೊಡ್ಡು ಮೂಳ ಹೊಲೆಯರಿಗೆ/ಕರ್ಮವೆಂಬ ಶರದ್ಧಿಯಲ್ಲಿ ಬಿದ್ದು ಹೊರಳಾಡುವುದೇ/ಸತ್ಯವೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು”

ಸಂಸಾರದ ಜಂಜಾಟದಲ್ಲಿ ಬಿದ್ದು ಒದ್ದಾಡುತ್ತಾ ಶಿವನನ್ನು ಮರೆತು ಹತ್ತು ಹಲವು ಚಿಂತೆಯಲ್ಲಿ ಮುಳುಗಿರುವ ಶವ ಮುಖದ ಜನರ ಸ್ಥಿತಿ-ಗತಿಯನ್ನು ಅರ್ಥಗರ್ಭಿತವಾಗಿ ಸಾದರಪಡಿಸುವ ಒಂದು ವಚನ ಇಂತಿದೆ;

“ಬಡತನಕೆ ಉಂಬುವ ಚಿಂತೆ/ಉಣಲಾದಡೆ ಉಡುವ ಚಿಂತೆ/ಉಡಲಾದಡೆ ಇಡುವ ಚಿಂತೆ/ಇಡಲಾದಡೆ ಹೆಂಡಿರ ಚಿಂತೆ/ಹೆಂಡಿರಾದರೆ ಮಕ್ಕಳ ಚಿಂತೆ/ಮಕ್ಕಳಾದಡೆ ಬದುಕಿನ ಚಿಂತೆ/ಬದುಕಾದಡೆ ಕೇಡಿನ ಚಿಂತೆ/ಕೇಡಾದಡೆ ಮರಣದ ಚಿಂತೆ/ಇಂತೀ ಹಲವು ಚಿಂತೆಯಲ್ಲಿಪ್ಪವರ ಕಂಡೆನು/ಶಿವನ ಚಿಂತೆಯಲ್ಲಿದ್ದಾತರೊಬ್ಬರನೂ ಕಾಣೆನೆಂದಾತ/ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು!”

ಸಮಯದ ಸದ್ಬಳಕೆ ಮಾಡಿಕೊಂಡು ಕಾಯಕ ಮಾಡುತ್ತಾ ಶಿವಭಕ್ತರಾಗಿ, ಜೀವನ ಪಾವನವಾಗಿಸುವಂತೆ ಕರೆ ನೀಡುವ ಒಂದು ವಚನ ಇಂತಿದೆ;

“ಗಾಳಿ ಬಿಟ್ಟಾಗ ತೂರಿಕೊಳ್ಳಿರಯ್ಯ/ಗಾಳಿ ನಿಮ್ಮ ಅಧೀನವಲ್ಲ ಕಂಡಯ್ಯ/ನಾಳೆ ತೂರಿಹೆನೆಂದಡಿಲ್ಲ ಕಂಡಯ್ಯ/ಶಿವಶರಣೆ ಎಂಬುದೊಂದು ಗಾಳಿ ಬಿಟ್ಟಲ್ಲಿ/ಬೇಗ ತೂರೆಂದನಂಬಿಗರ ಚೌಡಯ್ಯ”

ಕಾವಿ ಬಟ್ಟೆ ತೊಟ್ಟು, ಭಿಕ್ಷೆಗಾಗಿ ಜೋಳಿಗೆ ಹಾಕಿದವರೆಲ್ಲರೂ ಜಂಗಮರು, ಗುರುಗಳಾಗಲಾರರು ಎಂಬುದನ್ನು ವಿಡಂಬಿಸುವ ಒಂದು ವಚನ ಇಂತಿದೆ;

“ಕಂಥೆ ತೊಟ್ಟವ ಗುರುವಲ್ಲ/ಕಾವಿ ಹೊದ್ದವ ಜಂಗಮನಲ್ಲ/ಶೀಲ ಕಟ್ಟಿದವ ಶಿವಭಕ್ತನಲ್ಲ/ನೀರು ತೀರ್ಥವಲ್ಲ/ಕೂಳು ಪ್ರಸಾದವಲ್ಲ/ಹೌದೆಂಬವನ ಬಾಯ ಮೇಲೆ/ಅರ್ಧ ಮಣದ ಪಾದರಕ್ಷೆಯ ತೆಗೆದುಕೊಂಡು/ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ/ಟೊಕ ಟೊಕನೆ ಹೊಡೆ ಎಂದಾತ/ನಮ್ಮ ಅಂಬಿಗರ ಚೌಡಯ್ಯ”

ಹೀಗೆ ಬಸವಾದಿ ಶರಣರ ಸಮಾಜ ಸುಧಾರಣಾ ಚಳವಳಿಯಲ್ಲಿ ತಮ್ಮ ಅಮೂಲ್ಯ ಸೇವೆಯನ್ನು ಮುಡುಪಾಗಿಟ್ಟ ಶ್ರೀ ಅಂಬಿಗರ ಚೌಡಯ್ಯನವರು ತಮ್ಮ ಬದುಕಿನ ನೀತಿಯಿಂದ, ನಿಷ್ಠೆಯಿಂದ, ತೀಕ್ಷ್ಣ ಖಂಡನೆಯ ಬಂಡಾಯ ವಚನಗಳಿಂದ ಗಮನ ಸೆಳೆದು, ಅವರು ರಚಿಸಿದ ವಚನಗಳಿಗೆ ತಮ್ಮ ಹೆಸರನ್ನೇ ಅಂಕಿತವನ್ನಾಗಿಟ್ಟಿರುವದು ವಿಶೇಷವಾಗಿದೆ. ಸಮಾಜದ ಕೊಳೆಯನ್ನು ತೊಳೆಯುವ ನಿಟ್ಟಿನಲ್ಲಿ ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ಎದ್ದು ಕಾಣುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮ್ಯಾಸ ನಾಯಕ ಬುಡಕಟ್ಟನಲ್ಲಿ ದೀಪಾವಳಿ ಹಬ್ಬದ ಆಚರಣೆ

Published

on

ಭಾರತ ತನ್ನ ಭೌಗೋಳಿಕ ಸ್ವರೂಪದಲ್ಲಿ ವೈವಿಧ್ಯತೆಯನ್ನು ಹೊಂದಿರುವಂತೆ ಅನೇಕ ಬಗೆಯ ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿದೆ.

ದೇಶದ ಪ್ರತಿಯೊಂದು ಸಮುದಾಯವು ಬದುಕಿನ ಕ್ರಮದಲ್ಲಿ ತನ್ನದೇ ಆದ ವೈವಿಧ್ಯತೆಯನ್ನು ಹೊಂದಿದ್ದು ಹಬ್ಬಗಳ ಆಚರಣೆಯಲ್ಲಿಯೂ ಈ ಭಿನ್ನತೆಯನ್ನು ಕಾಣಬಹುದಾಗಿದೆ. ಈಗ ನಡೆಯುತ್ತಿರುವ ದೀಪಾವಳಿ ಹಬ್ಬದ ಆಚರಣೆಯೂ ಇದರಿಂದ ಹೊರತಾಗಿಲ್ಲ. ಇಡೀ ಭಾರತ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸುತ್ತಿದೆ ಎಂಬುದು ಸಾಮಾನ್ಯವಾದ ಹೇಳಿಕೆಯಾಗಿರುತ್ತದೆ.

ದೀಪಾವಳಿ ಎಂದರೆ ದೀಪವನ್ನು ಬೆಳಗಿಸುವ ಹಬ್ಬ. ಜಗದ ಕತ್ತಲೆಯನ್ನು, ಮನದ ಕತ್ತಲೆಯನ್ನು, ಕಳೆಯುವ ಹಬ್ಬ ಎಂಬುದು ಒಂದು ನಂಬಿಕೆಯಾದರೆ ಬಲಿಚಕ್ರರ‍್ತಿಯನ್ನು ವರ್ಷಕೊಮ್ಮೆ ನೆನಪಿಸಿಕೊಳ್ಳುವುದು, ನರಕಾಸುರನನ್ನು ಶ್ರೀ ಕೃಷ್ಣ ಪರಮಾತ್ಮ ಕೊಂದು ಆತನ ಸೆರೆಯಲ್ಲಿದ್ದ ಅಸಂಖ್ಯಾತ ಮಹಿಳೆಯರಿಗೆ ಬಿಡುಗಡೆ ದೊರಕಿಸಿದ ದಿನವಿದು ಎಂದು ನೆನೆಪಿಸಿಕೊಳ್ಳುವುದು ಹೀಗೆಲ್ಲಾ ಪ್ರಚಲಿತ ಪುರಾಣಮೂಲಗಳಿಂದ ಈ ಹಬ್ಬದ ಆಚರಣೆಯ ಸಾಂಕೇತಿಕತೆಯನ್ನು ಅರ್ಥೈಸಲಾಗುತ್ತದೆ.

ಈ ಎರಡೂ ಘಟನೆಗಳನ್ನು ಕುರಿತು ಬೇರೆ ಬೇರೆ ನೆಲೆಯಿಂದ ಯೋಚಿಸಿದಾಗ ಇದನ್ನು ದೇಶದಾದ್ಯಂತ ಎಲ್ಲರೂ ಸಡಗರಿಸಬೇಕೆ? ಆಳುವವರ ಸಡಗರ ಎಲ್ಲರ ಸಡಗರವಾಗಲೇಬೇಕಾದ ಅನಿವಾರ್ಯವೇ? ಎಂಬ ನೆಲೆಗಳಿಂದ ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕಾಗುತ್ತದೆ.

ನಿಸರ್ಗಮೂಲ ಸಿದ್ದಾಂತವನ್ನು ಅನ್ವಯಿಸಿಕೊಂಡರೇ ಬಹುಶಃ ಈ ದೀಪಾವಳಿಯ ತಿಂಗಳು, ಅಂದರೇ ಕಾರ್ತಿಕ ಮಾಸದ ಹವಾಮಾನದಲ್ಲಿ ವಿಶೇಷತೆಯಿದೆ. ಕಾರ್-ಅಂದರೇ ಮಳೆ ಸುರಿಯುವುದು. ಕರ‍್ತೀಕ ಅಂದರೇ ಮಳೆಗಾಲದ ಕೊನೆಯ ದಿನಗಳಿವು, ಹಿಂಗಾರಿನ ಕೊನೆಯ ಮಳೆಗಳು ಸುರಿಯುವ ಮತ್ತು ಇದರೊಂದಿಗೆ ಚಳಿಗಾಲವೂ ಆರಂಭವಾಗುವುದರಿಂದ ಮಂಜುಮುಸುಕಿದ ವಾತಾವರಣವೂ ಜೊತೆಗೂಡಿ ಕತ್ತಲೆಯ ಆಧಿಕ್ಯ ಹೆಚ್ಚು. ಬಹುಶಃ ಈ ಕತ್ತಲೆಯನ್ನು ನಿವಾರಿಸಿಕೊಳ್ಳಲು ಮನೆಮನೆಯ ಮುಂದೆ ದೀಪಗಳನ್ನು ಹಚ್ಚಿ ಬೆಳಕನ್ನು ಕಂಡುಕೊಳ್ಳುವ ಉದ್ದೇಶವೂ ಇರಬಹುದೆನ್ನಿಸುತ್ತದೆ. ಒಟ್ಟಾರೆ ನಾಡಿನಾದ್ಯಂತ ಆಚರಿಸಲಾಗುವ ಈ ದೀಪಾವಳಿ ಹಬ್ಬವನ್ನು ಮ್ಯಾಸಮಂಡಲದಲ್ಲಿಯೂ ಆಚರಿಸಲಾಗುತ್ತದೆ.

ಮ್ಯಾಸಬುಡಕಟ್ಟಿನ ದೇವರು ಕಾಣದ ಲೋಕದವರಲ್ಲ. ಪ್ರಕೃತಿಯ ವಿಶಿಷ್ಟತೆಯನ್ನೇ ದೈವ ಎಂದು ಭಾವಿಸಿ ಪೂಜಿಸುವುದು, ಸೃಷ್ಟಿಗೆ ಕಾರಣವಾಗುವ ತಾಯಿಯನ್ನೇ ಮೊದಲ ದೈವ ಎಂದು ಪೂಜಿಸುವುದು, ತಮಗೆ ಬದುಕನ್ನು ಕಟ್ಟಿಕೊಟ್ಟು ತಮ್ಮನ್ನು ಮುನ್ನಡೆಸಿದ ಹಿರಿಯರನ್ನೇ, ನಾಯಕರನ್ನೇ ತಮ್ಮದೇವರು ಎಂದು ಪೂಜಿಸುವುದು, ಮತ್ತು ತಮ್ಮ ಬದುಕಿಗೆ ಆಧಾರವಾಗಿದ್ದ ಪಶುಸಂಪತ್ತನ್ನೇ ತಮ್ಮ ಹಿರಿಯರೊಂದಿಗೆ ಸಮೀಕರಿಸಿ ದೈವಗಳೆಂದು ಭಾವಿಸಿ ಪೂಜಿಸುವುದು ಈ ಬುಡಕಟ್ಟಿನ ವಿಶೇಷತೆ. ತಮ್ಮ ನಾಯಕ ಅಥವಾ ನಾಯಕಿ ಬಳಸುತ್ತಿದ್ದ ವಸ್ತುವನ್ನು ಬಿದಿರಿನ ಬುಟ್ಟಿಯಲ್ಲಿಟ್ಟು, ಕೆಲವು ಕಡೆ ಸಾಲಿಗ್ರಾಮಗಳನ್ನು ಮತ್ತು ನಾಯಕ/ನಾಯಕಿ ಬಳಸುತ್ತಿದ್ದ ಬಿಲ್ಲು, ಬಾಣ/ ಖಡ್ಗವನ್ನೇ ದೇವರೆಂದು ನಂಬಿ ಪೂಜಿಸುವ ಸಮುದಾಯದಲ್ಲಿ ದೀಪಾವಳಿಯನ್ನು ಇವುಗಳಿಗೆ ಪೂಜೆ ಸಲ್ಲಿಸುವ ಮೂಲಕವೇ ಆಚರಿಸಲಾಗುತ್ತದೆ.

ಮ್ಯಾಸಮಂಡಲದ ಎಲ್ಲಾ ಗುಡಿಕಟ್ಟುಗಳಲ್ಲಿಯೂ ಮತ್ತು ಇದಕ್ಕೆ ಸಂಬಂಧಿಸಿದ ಎತ್ತಿನಗೂಡುಗಳಲ್ಲಿ ಈ ಹಬ್ಬದ ಆಚರಣೆ ನಡೆಯುತ್ತದೆ. ದೀಪಾವಳಿ ಅಮಾವಾಸ್ಯೆಕಳೆದು ಪಾಡ್ಯದ ಸೋಮವಾರ ಹೀರೆಹಳ್ಳಿಯ ದಡ್ಡಿಸೂರನಾಯಕನ ಗುಡಿಗೆ ಈತನಿಂದ ಸಂರಕ್ಷಿಸಲ್ಪಟ್ಟ ದನಕರುಗಳ ಪರಂಪರೆಯಿಂದ ಇಂದಿಗೂ ಉಳಿದು ಬಂದಿರುವ ಆಕಳ ಗೂಡಿನಿಂದ (ಗುಡೇಕೋಟಿ ಬಳಿ ಇರುವ} ಕಿಲಾರಿಗಳು ಮೊಸರು,ತುಪ್ಪವನ್ನು ತಂದು ಸೋಮವಾರ ಸಂಜೆ ಗುಡಿಗೆ ಒಪ್ಪಿಸುತ್ತಾರೆ. ತಮ್ಮ ಹೊಲಗಳಲ್ಲಿ ಬೆಳೆದ ಹಸನಾದ ಸಜ್ಜೆಯತೆನೆಗಳನ್ನು ತಂದು ಒಪ್ಪಿಸುವ ವಾಡಿಕೆಯೂ ಇದೆ. ರಾತ್ರಿಯಿಡಿ ಎಲ್ಲರೂ ಸೇರಿ ಗುಡಿಯಲ್ಲಿ ಹುರುಳಿ, ಗುಗ್ಗರಿ ಬೇಯಿಸಿ ಜೋಳ ಅಥವಾ ಸಜ್ಜೆಯ ಅನ್ನ ಮಾಡಿ ಗೂಡಿನಿಂದ ತಂದ ಮೊಸರನ್ನು ಸೇರಿಸಿ ಬೆಳಗಿನಜಾವ ದಡ್ಡಿಸೂರನಾಯಕನಿಗೆ ನೈವೇದ್ಯ ಮಾಡಲಾಗುತ್ತದೆ.

ರಾತ್ರಿಯಿಡೀ ಉರುಮೆ ವಾದ್ಯದ ಸೇವೆ, ನಾಯಕನನ್ನು ಕುರಿತು ಪದ ಹೇಳುವುದು ನಡೆಯುತ್ತದೆ, ಹೀಗೆ ಗುಡಿಯಲ್ಲಿ ನಡೆಯುವ ಪೂಜೆಯೇ ತಮಗೆ ದೀಪಾವಳಿ ಹಬ್ಬದ ಆಚರಣೆಯಾಗಿದ್ದು ಮನೆ ಮನೆಯ ಮುಂದೆ ದೀಪ ಬೆಳಗಿಸುವ, ರಂಗೋಲಿ ಹಾಕುವ, ಪಟಾಕಿ ಸಿಡಿಸುವ ಆಚರಣೆಗಳು ಇಲ್ಲಿ ಇರುವುದಿಲ್ಲ.
ಕಂಪಳ ದೇವರ ಹಟ್ಟಿಯಲ್ಲಿ ಇದಕ್ಕಿಂತ ಸ್ವಲ್ಪ ಭಿನ್ನವಾಗಿ ಹಬ್ಬದ ಆಚರಣೆ ನಡೆಯುತ್ತದೆ. ಮಾಘ ಮಾಸದಲ್ಲಿ ನಡೆಯುವ ಗುಗ್ಗರಿ ಹಬ್ಬದಲ್ಲಿ ಮಾಡುವಂತೆ ಈ ಸಮಯದಲ್ಲಿಯೂ ಅಮಾವಾಸ್ಯೆ ನಂತರದ ಶುಕ್ರವಾರದಂದು ಪೆಟ್ಟಿ ದೇವರನ್ನು ಗುಡಿಯಿಂದ ತಂದು ಹಟ್ಟಿಯ ಹೊರವಲಯದಲ್ಲಿ ಹೊಸ ಉದಿ/ಪದಿಯನ್ನು ಕಟ್ಟಿ ಇದರಲ್ಲಿ ಕೂರಿಸಿ ಮೂರು ದಿನಗಳ ಹಬ್ಬದ ಆಚರಣೆ ನಡೆಸಲಾಗುತ್ತದೆ.

ತೆಲುಗಿನಲ್ಲಿ ಇದನ್ನು ‘ದುಯಿಲಪಂಡುವ’ ಎಂದು ಕರೆಯಲಾಗುತ್ತದೆ. ಕಂಪಳ ದೇವರ ಪೆಟ್ಟಿಯೊಂದಿಗೆ ಜಗಲೂರು ಪಾಪನಾಯಕನನ್ನು ಸಂಕೇತಿಸುವ ಬಿಲ್ಲು ದೇವರನ್ನೂ ತಂದು ಪೂಜಿಸಲಾಗುತ್ತದೆ. ಆಕಳಗೂಡಿನ ಮೀಸಲು ಮೊಸರು ಮತ್ತು ಬೆಣ್ಣೆಯನ್ನು ಅರ್ಪಿಸುವುದು ಇಲ್ಲಿ ಬಹಳ ವಿಶೇಷವಾದುದು. ಗತಿಸಿದ ಎತ್ತು ಮತ್ತು ಆಕಳಿಂದ ಸಂಗ್ರಹಿಸಿದ ಕೊಂಬನ್ನು ಇಲ್ಲಿ ಬೆಣ್ಣೆಯನ್ನು ಶೇಕರಿಸಲು ಬಳಸಲಾಗುತ್ತದೆ.ಬುಡಕಟ್ಟಿನ ಜನತೆ ತಮಗೆ ಸಿಗುವ ವಸ್ತುಗಳನ್ನೇ ಸಲಕರಣೆಗಳನ್ನಾಗಿ ಬಳಸುವ ವಿಧಾನ ಇಲ್ಲಿ ಗಮನ ಸೆಳೆಯುತ್ತದೆ. ಹೀಗೆ ಸಂಗ್ರಹಿಸಿದ ಬೆಣ್ಣೆಯನ್ನು ಕಾಯಿಸಿ ತುಪ್ಪ ಮಾಡಿ ಪದಿಯಲ್ಲಿ ದೀಪವನ್ನು ಉರಿಸಲಾಗುತ್ತದೆ.ಮೊಸರು,ಜೋಳದ/ಸಜ್ಜೆಯ ಅನ್ನ,ಬಾಳೆಹಣ್ಣು,ಬೆಲ್ಲವನ್ನು ಬೆಳಗಿನಜಾವದಲ್ಲಿ ನೈವೇದ್ಯ,ಮಾಡಲಾಗುತ್ತದೆ.

ಇದರೊಂದಿಗೆ ಎತ್ತುಗಳನ್ನೂ ಹರಿಯಿಸುವುದು, ಮಣೇವು, ಉರಿಯುವ ಪಂಜುಗಳನ್ನೇ ನುಂಗುವುದು ಈ ಹಬ್ಬದ ಪ್ರಮುಖ ಆಚರಣೆಗಳಾಗಿವೆ. ನನ್ನಿವಾಳದ ಕಟ್ಟಿಮನೆಗೆ ಸೇರಿದ ಬಂಗಾರುದೇವರ ಹಟ್ಟಿಯಲ್ಲಿ ದೇವರುಗಳನ್ನು ಮತ್ತು ಬೆಳಗಟ್ಟದ ಸೂರೆಯರಗಾಟನಾಯಕನಿಗೆ ಸಂಬಂಧಿಸಿದಂತೆ, ಬೋಸೇದೇವರ ಹಟ್ಟಿಯ ಬೋಸೇರಂಗಯ್ಯನ ಪೆಟ್ಟಿಯನ್ನು, ದೊಣಮಂಡಲಹಟ್ಟಿಯ ಮಂಡಬೊಮ್ಮದೇವರನ್ನು ಹಟ್ಟಿಯಿಂದ ಹೊರಗೆ ತಂದು ಊರ ಹೊರಗೆ ಹೊಸ ಪದಿಯನ್ನು ಕಟ್ಟಿ, ಗೂಡಿನಿಂದ ಎತ್ತುಗಳನ್ನು ಕರೆಸಿ ಗೌರವಿಸಿ ಪೂಜಿಸುವ ಕ್ರಮವಿದೆ.

ಒಟ್ಟಾರೆ ಈಮ್ಯಾಸಮಂಡಲದ ದೀಪಾವಳಿ ಹಬ್ಬಕ್ಕೆ ಆಯಾ ಗುಂಪಿನವರೆಲ್ಲರೂ ಕಾಸು,ಹಾಲು, ಮೊಸರನ್ನು ಅರ್ಪಿಸಿ ಪಾಲ್ಗೊಳ್ಳುವಿಕೆಯೇ ಇಲ್ಲಿ ಸಾಮುದಾಯಿಕತೆಯ ಮಹತ್ವವನ್ನು ಪಡೆಯುತ್ತದೆ. ಈ ದೀಪಾವಳಿ ಹಬ್ಬದ ಆಚರಣೆಯಲ್ಲಿಎಲ್ಲಾ ಪದಿಗಳಲ್ಲಯೂ ದಾಸೋಹ ವಿಶೇಷವಾಗಿ ನಡೆಯುತ್ತದೆ. ಮುಂಗಾರು ಮಳೆ ಸುರಿದು ಸೊಂಪಾಗಿ ಬೆಳೆದ ಹುಲ್ಲನ್ನು ತಿಂದು ಹಸುಗಳು ಸಾಕಷ್ಟು ಹಾಲನ್ನು ಕೊಡುವುದರಿಂದ ಸಮೃದ್ಧವಾದ ಹಾಲು,ಮೊಸರು ಈ ಹಬ್ಬಕ್ಕೆ ಒದಗುತ್ತದೆ.ಇದನ್ನು ಎಡೆ ಮಾಡಿದ ನಂತರ ಎಲ್ಲರಿಗೂ ದಾಸೋಹದಲ್ಲಿ ನೀಡಲಾಗುತ್ತದೆ.

ಈ ಬುಡಕಟ್ಟಿನ ದೀಪಾವಳಿ ಹಬ್ಬದ ಆಚರಣೆಯ ಹಿಂದೆ ನಮ್ಮ ಭಾರತದ ಪೌರಾಣಿಕ ಕಥನಗಳಾವುವು ಕೇಳಿ ಬರುವುದಿಲ್ಲ.ಮನೆ ಮನೆಯ ಮುಂದೆ ದೀಪಗಳನ್ನು ಹಚ್ಚಿ ಸಡಗರಿಸುವುದು ಇಲ್ಲಿಲ್ಲ. ರಂಗೋಲಿ ಹಾಕುವುದಂತೂ ಬುಡಕಟ್ಟಿನ ನಿಶೇಧಗಳಲ್ಲಿ ಒಂದಾಗಿರುವುದರಿಂದ ಆ ಪ್ರಸ್ತಾಪವೇ ಇಲ್ಲಿಲ್ಲ. ಬದಲಾಗಿ ತಮ್ಮ ಮನೆ ದೇವರಾದ ಪೆಟ್ಟಿಗೆ ದೇವರು/ಬಿಲ್ಲು ದೇವರು/ಎತ್ತುಗಳನ್ನು ಗೌರವಿಸಿ ಪೂಜಿಸುವುದು. ಈ ಮೂಲಕವಾಗಿಯೇ ತಮ್ಮ ಮುಂದಿನ ಬದುಕಿಗೆ ಬೇಕಾದ ಬೆಳಕನ್ನು, ಚೈತನ್ಯವನ್ನು ಕೋರುವುದು ಇಲ್ಲಿ ಮುಖ್ಯವಾಗಿರುತ್ತದೆ.

ತಾನು ಬದುಕಿರುವ ಪರಿಸರ, ತಮಗೆ ಬದುಕನ್ನು ಕಟ್ಟಿಕೊಡುವ ಪ್ರಾದೇಶಿಕತೆ ಮತ್ತು ಭೌತಿಕ ಪ್ರಪಂಚ ಮತ್ತು ತನಗೆ ನೈತಿಕ ಬೆಂಬಲವಾಗಿ ನಿಂತ ತನ್ನ ಸಾಂಸ್ಕೃತಿಕ ಜಗತ್ತು ಈ ಎಲ್ಲವುಗಳ ಮೂಲಕ ಒಡಮೂಡುವ ದೇಸಿತನ ಆಯಾ ಬುಡಕಟ್ಟಿನ ಆಚರಣೆಗಳಿಗೆ ಸೈದ್ಧಾಂತಿಕತೆಯನ್ನು ಒದಗಿಸಿಕೊಡುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಮ್ಯಾಸಬೇಡ ಬುಡಕಟ್ಟಿನ ಈ ದೀಪಾವಳಿ ಆಚರಣೆಯಲ್ಲಿ ಈ ದೇಸಿತನವೇ ಒಡಮೂಡಿರುವುದನ್ನು ಕಾಣಬಹುದಾಗಿದೆ.ಆದಿವಾಸಿಗಳ ಧರ‍್ಮಿಕ ಜಗತ್ತಿನಲ್ಲಿ ಸರ‍್ಪಣಾಭಾವ ಮತ್ತು ಪಾರಂಪರಿಕ ಸಂಬಂಧ ಮುಖ್ಯವಾಗಿರುತ್ತದೆ. ಈ ಆಚರಣೆಗಳನ್ನು ಸಮುದಾಯದ ಸಾಂಸ್ಕೃತಿಕ ಅಸ್ಮಿತೆಗಳು ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending