Connect with us

ಭಾವ ಭೈರಾಗಿ

ಕವಿತೆ | ಕಿರಿಯ ಕವಿಗೆ‌ ೧ – ೨

Published

on

  • ಕೆ.ಎಸ್. ನರಸಿಂಹ ಸ್ವಾಮಿ

‌ ‌‌‌‌                   
ನುಭವವೆ ನೆನಪಾಗಿ ಹೆಪ್ಪುಗಟ್ಟುವ ತನಕ
ನೀನು ಕವಿತೆಗೆ ಕೈಯ ಹಾಕಬೇಡ;
ಮಳೆಯಿರದ ಮೋಡಗಳ ಚೆಲುವ ವರ್ಣಿಸಬೇಡ,
ಇಲ್ಲದುದ ಇಹುದೆಂದು ಹಾಡಬೇಡ.

ಬೆಟ್ಟಗಳ ಹತ್ತಿ ಬಾ, ನದಿಗಳನು ದಾಟಿ ಬಾ
ಆಗುವಾಯಾಸಕ್ಕೆ ಹೆದರಬೇಡ;
ಅಗ್ಗಿಷ್ಟಿಕೆಯ ಕೆಂಡ ಹೊತ್ತಿಕೊಳ್ಳುವ ತನಕ
ಒಲೆಯ ಮೇಗಡೆ ಪಾತ್ರೆ ಇರಿಸಬೇಡ.

ಎಲೆ ಮರೆಯ ಕೋಗಿಲೆಯ ಹಾಡು ಕೇಳುತ ನಿಂತ ನೀನದನು ವರ್ಣಿಸಲು ತೊಡಗಬೇಡ;
ಚಿಂತಾಗ್ನಿಯಲ್ಲಿ ಚಿನ್ನ ಕರಗುವುದ ಕಂಡಿಹೆಯ?-
ಭಾಷೆ ಒದಗಲಿ, ಹೊಳಪು ಕಂಡುಬರಲಿ.

ಭಾವಗೀತೆಯಲಿ ಸಂಕೀರ್ಣತೆಯನಳವಡಿಸು,
ಬೆಂಕಿ ಕಲ್ಮಷಗಳನು ಸುಟ್ಟುಬಿಡಲಿ;
ಹಸೆಯ ಮೇಲಿನ ಹೆಣ್ಣು ಗಂಡುಗಳ ರೀತಿಯಲಿ
ಮಾತು ಮಾತಿನ ಜೊತೆಗೆ ಸೇರಿಕೊಳಲಿ.

ಒಂದೊಂದು ಪದ್ಯವೂ ಒಂದು ಮೆರವಣಿಗೆ ಕಣಾ,
ಅಂಕಗಣಿತದ ಹಾಗೆ ಹಾಕು ತಾಳ;
ಅರಿತವನು ಅಪ್ಪುವನು ಭಾವದೊಲುಮೆಯ ಹೆಣ್ಣ,
ಅರಿಯದವರಿಗೆ ಅದುವೆ ಬರಿಯ ಚಿತ್ರ!

ಹಸಿದ ಒಡಲಿಗೆ ಬೇಕು ಅನ್ನ, ಬರಿ ಹಾಡಲ್ಲ
ಬಾಯಾರಿಕೆಗೆ ಬೇಕು ತಂಪು ನೀರು;
ಚಳಿಗಾಲ ಕಳೆಯುತ್ತ ಜೀವ ನಡೆದಿದೆ ಮುಂದೆ,
ಒಂದು ಶಾಲೇ ಅದರ ಚಳಿಗೆ ಸಾಕು.

ಮಾತಿಗೂ ಮೌನಕೂ ಇರುವ ಅಂತರದಲ್ಲಿ
ಮೂಡುವುದು ಬಾನಾಡಿಯಳತೆ ಭಾವ;
ನೊಂದ ಬದುಕಿಗೆ ಬೇಕು ಸಾವಿರ ಸಮಾಧಾನ,
ಅದರ ಜೊತೆಗೂ ಬರಲಿ ನಿನ್ನ ಕವನ!

ನಿನ್ನಹಂಕಾರಕ್ಕು ಒಂದು ಮಿತಿಯಿರಬೇಕು,
ಸ್ಥಿತಿಗತಿಗಳಿರಬೇಕು ನಿನ್ನ ಕೃತಿಗೆ;
ಕವನವೇ ಒಂದು ನಂದಾದೀಪ, ನುಡಿಯಲ್ಲಿ
ಮಾಡಲೇಬೇಕು ಆನಂದಲಹರಿ!

ಕೊಡು ಅದನು ಜನಕೆ, ಕೈಬಿಡು ವ್ಯರ್ಥ ಪದಗಳನು
ಕೇವಲ ಅಲಂಕಾರ ಕವಿತೆಯಲ್ಲ:
ಬರಿ ಮಾತ ಮಿಂಚುಗಳು ಬಂದು ಹೋಗಲಿ, ಬಳಿಕ
ನಿನ್ನ ಬದಕೇ ಒಂದು ಹಾಡಾಗಲಿ!

ಕವಿತೆ | ಕಿರಿಯ ಕವಿಗೆ – ೨

ಒಂದೆರಡು ಹೂಗಳನು ಗಿಡದ ಮೇಲೆಯೆ ಬಿಟ್ಟು
ಉಳಿದವನು ಕಿತ್ತುಕೋ ಎನುವೆ ನಾನು;
ಎಲ್ಲವೂ ಅರ್ಥವಾಯಿತು ಎಂದು ಹೇಳದಿರು,
ಕವಿತೆಗಸ್ಪಷ್ಟತೆಯು ಒಂದು ಚೆಲುವು.

ನೀನು ಹುಟ್ಟುವ ಮುನ್ನ ಲೋಕ ಹೇಗಿತ್ತೆಂದು
ಹೇಗೆ ಹೇಳಲಿ ನಾನು, ಅರಿಯದವನು;
ಇಲ್ಲಿ ಯಾವುದು ಪೂರ್ತಿ, ಯಾವುದರೆ ಗೊತ್ತಿಲ್ಲ
ಅರಕೆಯಿಂದಲೆ ಕವಿತೆ ಹುಟ್ಟಬಹುದು.

ಅಷ್ಟಿಷ್ಟು ಲೋಪವಿಲ್ಲದ ಕೃತಿಯನೇ ಕಾಣೆ,
ಮುಖದ ಚೆಲುವಿಗೆ ಬೇಕು ಯಾವುದೊ ಕಲೆ;
ಮಿಂಚಿಗಾಸರೆ ಮುಗಿಲು, ಸೂರ್ಯಸಾರಥಿ ಹೆವಳ
ಬಿಸಿಲಲ್ಲೆ ಆಡುವನು ತುಂಟ ಹುಡುಗ.

ತಕ್ಕಡಿಯೆ ಏರುಪೇರಾಗುವುದು ಎನ್ನುವರು,
ಇನ್ನೊಂದರಲಿ ದೋಷ ಒಂದರ ಗುಣ;
ಯಾರು ಯಾರೋ ಕುಳಿತು ಕೊಟ್ಟ ತೀರ್ಪೆಂತಿರಲಿ,
ಕೃತಿಯ ಬೆಲೆಯೇ ಅಲ್ಲ ನೀಡಿದ ಹಣ.

ಶಾಸ್ತ್ರಗಾರರ ಬೀದಿಯಲ್ಲಿ ಓಡಾಡದಿರು,
ಶಾಸ್ತ್ರವನು ಮೀರುವುದು ಕವಿತೆಯ ಕಲೆ,
ಕವಿಹೃದಯ ಕಂಡುಕೊಳ್ಳುವುದು ಕವಿತೆಯ ಚೆಲುವು,
ನಿನ್ನ ತಲೆಯಲ್ಲಿಲ್ಲ ಕವನದ ಸೆಲೆ.

ಉಪಹಾರ ಮಂದಿರದ ಮೂಲೆ ಕುರ್ಚಿಗಳಲ್ಲಿ
ವಿಪರೀತ ಚರ್ಚೆಗಳು ನಡೆಯುತಿಹವು;
ಸಿಗರೇಟಿನ ಹೊಗೆಯಲ್ಲಿ ಎದ್ದು ಹೋಗುವ ಮಂದಿ
ಕವಿತೆಯ ವಿಮರ್ಶೆಯನು ಮಾಡುತಿಹರು!

(‘ಎದೆ ತುಂಬ ನಕ್ಷತ್ರ’ ಕವನ ಸಂಕಲನದಿಂದ ಆಯ್ದ ಕವಿತೆಗಳು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕವಿತೆ | ನೆನಪು

Published

on

ಕವಿ | ರುದ್ರಪ್ಪ ಹನಗವಾಡಿ
  • ರುದ್ರಪ್ಪ ಹನಗವಾಡಿ

ಅಪ್ಪನನ್ನು ಒಪ್ಪ ಮಾಡಿ
ವರ್ಷಗಳೇ ಕಳೆದವು ಮುವ್ವತ್ತೇಳು
ಇಂದಿರಾಗಾಂಧಿಯ ತುರ್ತು ಪರಿಸ್ಥಿತಿ
ಅರಸರ ಮೀಸಲಾತಿ
ಬಸವಲಿಂಗಪ್ಪನವರ ಬೂಸಾ ಖ್ಯಾತಿ
ಮಲ ಹೊತ್ತು
ಮಲಗಿದ್ದ ಕಾಲಕ್ಕೆ
ಚುರುಕು ಮುಟ್ಟಿಸಿದ ಕಾಲ

ಹರೆಯದ ನನಗೆ
ಕಾಲೇಜ ಮೇಷ್ಟರ ಕೆಲಸ
ಸೂಟು ಬೂಟಿನ ವೇಷ
ಆ ಮೇಲೆ ಅಮಲದಾರಿಕೆ
ಎಲ್ಲ ನಡೆದಾಗಲೇ ಅವ್ವನನ್ನು
ಆಸ್ಪತ್ರೆಗೆ ಸೇರಿಸಿದ್ದು
ಕಾಲ ಕಳೆದು ಕೊಂಡು
ಕೋಲ ಹಿಡಿದದ್ದು
ನಿನ್ನೆ ಮೊನ್ನೆಯಂತೆ
ಬಾಲ್ಯವಿನ್ನು ಉಂಟೆಂಬಂತೆ
ಭಾವಿಸುವಾಗಲೇ ಅವ್ವನ ಸಾವು

ಅದರೊಟ್ಟಿಗೆ ಕಾಯದಾಯಾಸ ತೀರಿಸಲು
ಬಂದರೆ ಬೆಂಗಳೂರಿಗೆ
ರೌಡಿಗಳ ಕಾಟ
ಅಂಬೇಡ್ಕರ್ ಪಟದ ಕೆಳಗೆ
ದೌರ್ಜನ್ಯದ ದಂಡು

ಅಮಾಯಕರಿಗೆ ಗುಂಡು
ಕಂಡುಂಡ ಹಾದಿಯ ಗುಡಿಸಲುಗಳಲ್ಲೀಗ
ಮುಗಿಲು ಮುಟ್ಟೋ ಮಹಲುಗಳು
ಅಂತಲ್ಲಿ
ದೇಶ ವಿದೇಶಗಳ
ಅಹವಾಲುಗಳು
ಅವಿವೇಕಗಳು
ನೋಡ ನೋಡುತ್ತಿದ್ದಂತೆ
ಉಸಿರು ಬಿಗಿಹಿಡಿದ ಜನರ ಒಳಗೆ
ಒಳಪದರಗಳೊಳಗೆ ಕನಸ ಬಿತ್ತಿ
ಹಸಿರ ಹೊನ್ನು ಬಾಚಲು ಹವಣಿಸಿದ
ಬಿಳಿ ಜನರ ಆಟ
ಅರ್ಥವಾಗುವುದೇ ಎಲ್ಲ
ಗೋಣ ನೀಡುವರೆ
ಹೂತಿಟ್ಟ ಗೂಟಕ್ಕೆ ?

( ಚಿಂತಕ ರುದ್ರಪ್ಪ ಹನಗವಾಡಿ ಅವರ ‘ಊರು – ಬಳಗ’ ಕವನ ಸಂಕಲನದಿಂದ ‘ ನೆನಪು ‘ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕೃತಿಯನ್ನು ಫ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ 2013 ರಲ್ಲಿ ಪ್ರಕಿಸಿದೆ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕವಿತೆ | ಮಣ್ಣ ಮಕ್ಕಳು

Published

on

ಸಿ.ಕೃಷ್ಣನಾಯಕ್, ಆಡಳಿತಾಧಿಕಾರಿ, ಐಟಿಐ ಕಾಲೇಜು ದಾವಣಗೆರೆ
  • ಸಿ.ಕೃಷ್ಣನಾಯಕ್, ಆಡಳಿತಾಧಿಕಾರಿ, ಐಟಿಐ ಕಾಲೇಜು ದಾವಣಗೆರೆ

ಮಣ್ಣ ಮಕ್ಕಳು ನಾವು
ಹಗಳಿರುಳೆನ್ನದೆ ಬೆವರು ಬಸಿದು
ಹಸಿದ ಹೊಟ್ಟೆಯಲಿ ಉಸಿರು ಹಿಡಿದವರು
ಕಸದಲಿ ರಸ ತೆಗದು ಬದುಕಿನುದ್ದಕ್ಕೂ ಉಳ್ಳವರ
ಕಸುಬಿಗೆ ಆಳಾದವರು ಸವಳು ನೀರಲಿ ಮೈತೊಳೆದು
ಚಿಂದಿ ಅಂಗಿಯಲಿ ಶಾಲೆಗೆ ದಾಖಲಾದವರು.

ಬರಿಗಾಲಲಿ ಕಾಡು ದಾರಿಯಲಿ ಮೈಲು ದೂರ ನಡೆದು
ನೆಗ್ಗಿಲ ಮುಳ್ಳು ತುಳಿದವರು ; ನಿಬ್ಬು ನೆಗ್ಗಿದ ಪೆನ್ನಿನಲಿ
ಹೆಸರು ಬರೆಯಲು ಕಲಿತವರು ಹರಿದ ಪಠ್ಯದಲಿ ಅಕ್ಷರ ಹುಡುಕಿ ಒಡೆದ ಪ್ಲೇಟಿನಲಿ ಬರೆದವರು.

ತೂತು ಬಿದ್ದ ಸೂರಿನಲಿ ಇಣುಕಿದ ಚುಕ್ಕಿ ಚಂದ್ರಮರ ನೋಡಿ
ವಿದ್ಯುತ್ ದೀಪದ ಕನಸು ಕಂಡವರು
ಮೋಸ ವಂಚನೆಗೆ ಬಗ್ಗದೆ ಶೋಷಣೆಗೆ ಸಿಡಿದವರು
ಮಣ್ಣ ಮಕ್ಕಳು ನಾವು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ದಿನದ ಸುದ್ದಿ

ಬಿ.ಶ್ರೀನಿವಾಸ ಅವರ ‘ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು’ ಕೃತಿಯ ಕುರಿತು

Published

on


ಸಂಡೂರಿನ ಜನರ ಮುದುಡಿದ ಅಂಗಿಯ ಮೇಲೆ,ಹೆಂಗಸರು ಮಾಸಿದ ಸೀರೆಯ ಸೆರಗಿನ ಮೇಲೆ ಬಿ.ಶ್ರೀನಿವಾಸ ಅಕ್ಷರ ಬಿಡಿಸುತ್ತಾರೆ.

ಅನ್ನದ ಅಗುಳು,ಧೂಳು,ಕಾಗದದ ಚೂರು,ಆಟಿಕೆ ಸಾಮಾನು,ಕಿಡ್ನಿ,ಈ ಸಣ್ಣವು ಗಳಲ್ಲಿ ಜೀವಸಾಕ್ಷಿ ಹುಡುಕುವ ಕಥೆಗಳಿವು.ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಅನ್ನದ ಅಗಳು,ಕಾಗದದ ಚೂರನ್ನು ಎತ್ತಿಹಿಡಿಯುವ ಗೆಳೆಯ ಶ್ರೀನಿವಾಸ *ಧೂಳನ್ನೇ ಅಕ್ಷರಗಳನ್ನಾಗಿಸಿದ ಲೇಖಕ.

  • ಬಸವರಾಜ ಹೂಗಾರ

ಇಲ್ಲಿನ ಹುಚ್ಚರ ಕತೆಗಳನ್ನು ಓದುವಾಗ ಕುಂ.ವೀ.ಯವರ ಹಾಗೂ ಸಾದತ್ ಹಸನ್ ಮಾಂಟೋ ಅವರ ಹುಚ್ಚರ ಕತೆಗಳು ನೆನಪಾಗುತ್ತವೆ.ಇಲ್ಲಿನ ನತದೃಷ್ಟರ ಬದುಕನ್ನು ಹಿಡಿದಿಡಲು ಲೇಖಕರು ಕಂಡುಕೊಂಡಿರುವ ಅಭಿವ್ಯಕ್ತಿ ವಿನ್ಯಾಸ ವಿಶಿಷ್ಟವಾಗಿದೆ. ಬರಹಗಳು ದೀರ್ಘವಾಗಿಲ್ಲ. ಚುಟುಕಾಗಿವೆ. ಕವನಗಳೊ, ಗದ್ಯಗಳೊ ಎಂದು ಹೇಳಲಾಗದ ರೂಪದಲ್ಲಿವೆ.

ಗಾಢವಾದ ಅರ್ಥವನ್ನು ಕೆಲವೇ ಸಾಲುಗಳಲ್ಲಿ ವ್ಯಂಗ್ಯ ಮತ್ತು ವಿಡಂಬನೆಗಳಲ್ಲಿ ಹಿಡಿಯಲು ಯತ್ನಿಸುತ್ತವೆ.
ಇಲ್ಲಿರುವ ಲೋಕದ ನೋವಿಗೆ ಮಿಡಿವ ಸಂವೇದನೆ,ಓದುವ ಓದುಗರನ್ನೂ ಆವರಿಸಿಕೊಂಡು,ಚಿಂತನೆಗೆ ಹಚ್ಚುತ್ತದೆ.ಓದುತ್ತ,ಓದುತ್ತಾ ನಿಟ್ಟುಸಿರು ಹೊಮ್ಮುತ್ತದೆ.ಮನಸ್ಸು ಮಂಕಾಗುತ್ತದೆ.ಇಂತಹ ಬರಹಗಳನ್ನು ಕೊಟ್ಟಿರುವ ಶ್ರೀನಿವಾಸ ತಮ್ಮ ಅಂತಃಕರಣ ,ಚೂಪಾದ ಗ್ರಹಿಕೆ,ಆಳವಾದ ಸಂವೇದನೆಗಳನ್ನು ಇತರೆ ಪ್ರಕಾರಗಳಲ್ಲಿಯೂ ಪ್ರಕಟಿಸುವ ಜರೂರಿಯಿದೆ.

  • ಡಾ.ರಹಮತ್ ತರೀಕೆರೆ

ಒಬ್ಬ ಮನುಷ್ಯ ಮತ್ತೊಬ್ಬನನ್ನು ಕಿತ್ತು ತಿನ್ನಬಾರದು.ಹೊಟ್ಟೆಪಾಡಿಗಾಗಿ ನಿರ್ವಹಿಸುವ ಪ್ರತಿ ಕೆಲಸವೂ ಸೃಜನಶೀಲವಾಗಿರಬೇಕು-ಎಂಬ ಧಾವಂತದಲ್ಲಿ ಹುಟ್ಟಿದ ಮನದ ಪ್ರಕ್ರಿಯೆಗಳಿಗೆಲ್ಲ ಇಲ್ಲಿ ಹರಡಿಕೊಂಡಿವೆ.

  • ಬಿ.ಶ್ರೀನಿವಾಸ,ಕೃತಿ ಲೇಖಕ

ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು ನೊಂದವರ ಮನದಲ್ಲಿ ಅಲ್ಪಾವಧಿ ಗುರುತು ಮೂಡಿಸಬಹುದು ನಿಮ್ಮ ಈ ಪುಸ್ತಕ ಮತ್ತು ಅದರಲ್ಲಿರುವ ಎಷ್ಟೋ ವಿಚಾರಗಳು ನನ್ನನ್ನು ಡಿಸ್ಟರ್ಬ್ ಮಾಡಿವೆ. ಕೇವಲ ವಾಟ್ಸಾಪ್ ಲೈನ್ ಸಾಕಾಗಲ್ಲ ಎದುರುಗಡೆ ಕುಳಿತು ಇನ್ನು ಹೆಚ್ಚು ತಿಳಿದುಕೊಳ್ಳಬೇಕೇನಿಸುತ್ತದೆ. ಸಂಡೂರಿನ ದಾರುಣ ಚಿತ್ರಗಳನ್ನು,ಕೋರ್ಟಿನ ಚಿತ್ರಗಳನ್ನು,ಬದುಕಿನ ಚಿತ್ರಗಳನ್ನು ಕಣ್ಣಿಗೆ ರಾಚುವಂತೆ ಮೂಡಿಸಿದ್ದೀರಿ.

ಸಾವಿಗಿಂತ ಹಸಿವು ಬಹಳ ಕ್ರೂರಿ ಎನ್ನುವುದು: ನೋವಿನ ಬದಲು ಹಸಿವಿನ ಏಟುಗಳು ಬೀಳಬೇಕಿತ್ತು ಎನ್ನುವ ಸಾಲುಗಳಂತೂ Geographical Hungrey ಪುಸ್ತಕ ನೆನಪಿಸುತ್ತವೆ. ಸೊಂಡೂರಿನ ಚಿತ್ರಗಳ ಮೂಡಿಸಿದೆ ಗಾಢ ವಿಷಾದತೆ, ನನ್ನನ್ನು ಹೊರಬರಲು ಬಿಡುತ್ತಿಲ್ಲ.

“ಉಳ್ಳವರು ಹೊತ್ತ ಮೂಟೆಗಳಲ್ಲಿ ಬಡವರ ಹಸಿವಿನದ್ದೇ ಭಾರ”ಇವೆಲ್ಲ ಹಸಿವನ್ನು ಅನುಭವಿಸಿದವರಿಗೆ ಮಾತ್ರ ಸರಿಯಾಗಿ ಅರ್ಥವಾಗುವ ಸಾಲುಗಳು.

ಇನ್ನು ,ಕೋರ್ಟಿನ ಚಿತ್ರಗಳು, ಎಷ್ಟು ಜನ ಇರ್ತಾರೆ ಇವನ್ನೆಲ್ಲ ಸೂಕ್ಷ್ಮ ವಾಗಿ ತಿಳಿದುಕೊಳ್ಳುವವರು ?
ಶಾಲೆ ಹಿಂದೆ ತಿರುಗಬಾರದು ಕೋರ್ಟ್ ಕಚೇರಿ ಮುಂದೆ ತಿರುಗಬಾರದು ಎಂದು ನಮ್ಮ ಜನಪದರು ಹೇಳ್ವ ಮಾತು ಎಷ್ಟೋ ಸಲ ಸತ್ಯ ಎನಿಸುತ್ತದೆ.

ನೀವು ಹಿಡಿದಿಟ್ಟ ಬದುಕಿನ ಚಿತ್ರಗಳಲ್ಲಿನ “ಶವಪೆಟ್ಟಿಗೆ ಸಣ್ಣದಿದ್ದಷ್ಟು ಹೊರುವುದು ಬಹಳ ಕಷ್ಟ “ಎಂಬ ಮಾತಂತೂ ಚಿಕ್ಕಮಕ್ಕಳ ತಂದೆತಾಯಿಯರ ಕಣ್ಣಲ್ಲಿ ನೀರು ತರಿಸುವುದು.

ತಲೆ ಮ್ಯಾಲೆ ಮಲ ಸುರುವಿಕೊಂಡೆವಲ್ಲ ಸರ್ ಅವತ್ತೇ… ನಾವ್ ಹುಟ್ಟಿದ್ದು ಎನ್ನುವ ಸವಣೂರಿನ ಭಂಗಿಯ ಮಾತನ್ನು ಎಷ್ಟು ಅರ್ಥಗರ್ಭಿತವಾಗಿ ಸೋ ಕಾಲ್ಡ್ ಸೊಸೈಟಿಗೆ ಮುಟ್ಟಿ ನೋಡಿಕೊಳ್ಳುವಂತೆ ಬರೆದಿದ್ದೀರಿ. ಆಕೆ ಏನನ್ನೋ ಆಯ್ಕೆ ಮಾಡಿಕೊಂಡಿದ್ದಾಳೆ ಎಂಬ ವಿಚಾರಗಳು ಕೇವಲ ವಿಚಾರಗಳಲ್ಲ ,ಬದುಕಿನ ಸತ್ಯ ಚಿತ್ರಣಗಳು ದಿನ ನಿತ್ಯ ನಮ್ಮ ನಡುವೆ ನಡೆಯುವಂತವು.ಅವನ್ನು ಕಾಣುವಂತ ದೃಷ್ಟಿ ಇದ್ದವರಿಗೆ ಮಾತ್ರ ಇವು ಕಾಣುತ್ತವೆ ಸರ್ .
ನಿಮ್ಮ ನೈಜ ದೃಷ್ಟಿಗೆ ದನ್ಯವಾದಗಳು ಸರ್, ಉಳಿದದ್ದು ಎದುರು ಬದುರು ಕುಳಿತು ಮಾತಾಡೋಣ

  • ಡಾ.ರಾಮಚಂದ್ರ ಹಂಸನೂರು, ಬೆಟಗೇರಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

Trending