ಭಾವ ಭೈರಾಗಿ
ಕವಿತೆ | ಕುಡುಕ ಸೂಳೆಮಗನೊಬ್ಬನ ಭಕ್ತಿಗೀತೆ

ನನ್ನ ಬೇವಾರ್ಸಿ ಮಾತು ಬಿಡಿ,
ಸೂಫಿ ಸಂತರನ್ನು ಕೇಳಿ
ನಾಗಾ ಸಾಧುಗಳನೂ
ಡಿವಿಜಿಯಂಥ ಡಿವಿಜಿಯೆ ಮಿಕ್ಸ್ ಮಾಡಿದ
ಉಮರನ ಒಸಗೆಯ ಕೇಳಿ
ತರದೂದಿದ್ದರೆ ಆಮೇಲೆ ತಕರಾರ ಥಕಥೈ ಹೇಳಿ.
ಆ ಹಕ್ಕಿಯ ಆ ಕಾನಿನ ಆ ಬಾನಿನ ಆ ಹಾಡಿನ
ಆ ಜಾಡಿನ ಆ ನಾಡಿನ ಅಮಲೇರಿರಲು
ಕಡಿಯುವ ಈ ಬಾಳ ಕುಡಿಯುವೆ, ಬಿಸುಡವೆನದ ಕುಡಿದು ತೊಟ್ಟು ಕೊನೆಯ ತೊಟ್ಟೂ
ಕದ್ದೋಡುವೆನಿಲ್ಲಿಂದ ಈ ದರಿದ್ರ ಮರ್ತ್ಯದಿಂದ
ಆ ಸುಖ ಸುಂದರ ಅಮರ್ತ್ಯಕೆ
ದಿನದಿನದೀ ಗಾಣ-ನರಕದಿಂದ ಅನುದಿನದ ನಾಕಕೆ.
ಹೇಳಿ ಏನಿದೆ ಈ ತಾವಿನಲ್ಲಿ
ನೋವು ಸಾವು ಸಂಕಟದೊಂದೆ ಏಕತಾರಿ ಗೊಗ್ಗರು ಭೂಮಿಗೀತವಿಲ್ಲಿ
ಕ್ಷಣವೊಂದರ ಇಂದಿನೀ ಸೌಂದರ್ಯ ಸೊರಗಿ ಕರಗಿ ಪ್ರೇತವಾಗಿ
ನಾಳೆಗೇನು ಉಳಿಯಿತಿಲ್ಲಿ
ನನಗೇನಿದೆ ಹೇಳಿ ಕೆಲಸವಿಲ್ಲಿ.
ಎಲ್ಲಿ ಎಲ್ಲಿ ಹಳೆ ಹುಳಿ ಹೆಂಡವೆಲ್ಲಿ
ಅದನು ಕುಡಿಯಲಾರೆನೇ
ಕುಡಿದು ಮತ್ತನಾಗಿ ಕತ್ತಲಲ್ಲಿ ಕಾಣದಿರೆನೆ ಆ ಅಗೋಚರ ದಿವ್ಯವ
ಮದ್ಯ ಕುಡಿದ ಮಧ್ಯ ರಾತ್ರಿ ನಿದ್ದೆಯಲ್ಲಿ ಹಾಗೇ ಸುಮ್ಮನೆ ಬರಲಿ ಸೊಗದ ಕನಸಿನಂತೆ ಸುಖ ಮರಣ
ಎಂದು ಹಾರೈಸಿದ್ದದೆಷ್ಟು ದಿನ.
ಆದರೂ ನಾನು ಸತ್ತರೂ ಕತ್ತರಿಸುವ ಬಾಳು ಉಳಿದೆ ಉಳಿವುದಲ್ಲ ;
ನಮ್ಮನಣಕಿಸುವುದಲ್ಲ
ಅಮಲೆ ನನಗೆ ಪಾಠ ಕಲಿಸಿತಲ್ಲ
ಬೇಡ ಈ ಸಾವ ಪಯಣ
ಜೀವಿಸುವುದೆ ಸಾವ ಸೋಲಿಸುವ ಅಮಲು
ಇದೆ ನನ್ನ ಹೊಸ ಠರಾವು
ಎಂಬ ಕೀಟ್ಸನನ್ನೂ ಕೇಳಿರಲ್ಲ.
ಮದ್ಯ ಮಾರ್ಗ ಹಿಡಿಯಿರಲ್ಲ
ಅವಿವೇಕದತಿರೇಕದ ಅಮಲುಗಳ್ಯಾವುವೂ ಬಾಟ್ಲಿಗಳಂತಿರುವುದಿಲ್ಲ
ಬಾಟ್ಲಿ ಒಡೆದು, ಪಕ್ಕಕೆ ಮದ್ಯದಂಗಡಿಯ ನೂಕಿ
ಕೊಲೆ ಸುಲಿಗೆ ಮಾನಭಂಗ ಭ್ರಷ್ಟಾಚಾರ ನೀಗಿದೆವೆಂಬ
ನಶೆಯಿಂದ ಬೇಗ ಹೊರಬನ್ನಿರಲ್ಲ.
-ಪ್ರೊ. ಎಚ್.ಪಟ್ಟಾಭಿರಾಮ ಸೋಮಯಾಜಿ
ಮಂಗಳೂರು
ಸುದ್ದಿದಿನ.ಕಾಂ|ವಾಟ್ಸಾಪ್|9986715401

ಭಾವ ಭೈರಾಗಿ
ಕವಿತೆ | ಯುಗಾದಿ ಪುರುಷ

- ಡಾ.ಕೆ.ಎ.ಓಬಳೇಶ್
ಯುಗ ಯುಗದಾಚೆಗಿನ
ಬಂಧನದ ಬದುಕಿಗೆ
ಬಿಡುಗಡೆಯ ಹಾದಿ ತೋರಿ
ಹೊಸ ಯುಗದತ್ತ ಕೊಂಡೊಯ್ದ
ಯುಗಪುರುಷ ನೀನಾದೆ.
ಯುಗ ಯುಗದಾದಿಯಾಗಿ
ಸಾಗುತ್ತಲೆ ಇತ್ತು
ಸ್ವಾಭಿಮಾನವಿರದ ಯುಗಾದಿ
ನಿಮ್ಮ ಜ್ಞಾನವೇ ನಮಗಾಯ್ತು
ಹೊಸ ಸಂವತ್ಸರಕೆ ನಾಂದಿ.
ಸ್ವಾಭಿಮಾನಿ ಹೋರಾಟದಲಿ
ಕಹಿಯ ತಾನುಂಡು
ಸಿಹಿಯ ನಮಗಂಚಿ
ನಮಗೊಂದು ಹೊಸ ಯುಗವ
ಕರುಣಿಸಿದ ಕರುಣಾಳು ನೀನಾದೆ.
ನಿಮ್ಮ ಹೊರತು ಸ್ವಾಭಿಮಾನದ ಯುಗವೇ ಇಲ್ಲ
ನೀವೆ ಈ ಜಗದ ಹಾದಿ
ನೀವೆ ಯುಗದ ಆದಿ
ನೀವೆ ನಮ್ಮ ಯುಗಾದಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾವ ಭೈರಾಗಿ
ಕವಿತೆ | ಅವಳು ಮಸಣ ಕಾಯುವ ಪಾರ್ವತಿ..!

- ಪದ್ಮಶ್ರೀ ಗೋವಿಂದರಾಜು,ಭದ್ರಾವತಿ
ಹುಂ!!
ಅವಳ ಪರಶಿವನು ಅದೇ ಮಸಣದಲಿ ಐಕ್ಯವಾಗಿಹನು
ಅದಕೇ ಅವಳು ಹಲವು ನಿರ್ಜೀವ ಅನಾಥ ದೇಹಗಳ
ಹಗಲು ರಾತ್ರಿಯೇನ್ನದೆ ಕಾಯುವಳು
ಅನಾಥವಾದ ದೇಹಕೆ ಅವಳಿಂದಲೇ ಮೋಕ್ಷ
ಅವಳೇ ವಂಶವಿಲ್ಲದ ದೇಹಕೆ ವಾರಸುದಾರಳು!!
ಚಿತೆಯ ಅಗ್ನಿ ಸ್ಪರ್ಶ ಮಾಡಿ ತಿರುಗಿ
ನೋಡದೆ ಹೋದ ನೆಂಟರು,
ಉಳಿಸಿ ಹೋದ ಬೆಂಕಿಯ
ಅರದಂತೆ ಉರಿಸುವಳು ಅವಳು.
ಮಕ್ಕಳು ಮರಿಯ ಸಂಸಾರವೇ
ಇಲ್ಲದ ಅವಳಿಗೆ ಆಗಾಗ ಬರುವ
ದೇಹಗಳ ಜೊತೆ ಬಂದ ಜನರು
ನಡೆದಾಡುವ ಶವಗಳಂತೆ ಕಾಣುವರು
ಕಾರಣ
ಮಸಣವೊಂದೇ ಕೊನೆಯ ಮನೆ
ಆಕೆ ಅರಿತಿದ್ದಾಳೆ
ಅದಕೇ
ಆಕೆ ಮಸಣ ಕಾಯುವ ಪಾರ್ವತಿ!!
(ಸುಮಾರು ವರ್ಷಗಳಿಂದ ಶಿವಮೊಗ್ಗ ಸ್ಮಶಾನ ಕಾಯುವುದು ಒಬ್ಬ ಹೆಣ್ಣು.
ಆಕೆಯ ಛಲದ ಬದುಕಿಗೆ ಒಂದು ಪ್ರಣಾಮ )
ಸುದ್ದಿದಿನ.ಕಾಂ | ವಾಟ್ಸಾಪ್ | 9980346243

ಭಾವ ಭೈರಾಗಿ
ಕಾದಂಬರಿ ವಿಮರ್ಶೆ | ಸ್ವಪ್ನದಲ್ಲಿ ಸೊರಗಿದ ಪ್ರೀತಿ

- ಸಿಂಪಲ್ ಸಿಂಚು
ಇತ್ತೀಚಿಗಷ್ಟೇ ಕರುನಾಡ ಹಣತೆ ಕವಿ ಬಳಗದ ಮೂಲಕ ಪರಿಚಿತರಾದ ಕೆ.ಸಿರಿ (ಗ್ರಾಮ ಲೆಕ್ಕಿಗರು) ಚಾಮರಾಜನಗರ. ಇವರು ಪರಿಚಯವಾದ ಹತ್ತು ನಿಮಿಷದಲ್ಲಿಯೇ ಇವರ ಕಾದಂಬರಿ ನನ್ನ ಕೈಗೆ ತಲುಪಿತು. “ಸ್ವಪ್ನದಲ್ಲಿ ಸೊರಗಿದ ಪ್ರೀತಿ”. ಅತ್ಯದ್ಭುತವಾದ ಶೀರ್ಷಿಕೆ ಹೊಂದಿದೆ. ನಾನು ಒಬ್ಬಳು ಬರಹಗಾರ್ತಿಯಾಗಿ ಶೀರ್ಷಿಕೆ ನೋಡಿ ನನ್ನದೇ ಆದಂತಹ ಒಂದು ಕಲ್ಪನೆಯಲ್ಲಿ ನಾನು ಮುಳುಗಿದಾಗ.
ಪ್ರೀತಿಯೆಂದರೆ, ಪ್ರೇಮ ಅಷ್ಟೇ ಅಂದುಕೊಂಡಿದ್ದೆ ಆದರೆ ಕುತೂಹಲದಿಂದ ಕಾದಂಬರಿಯನ್ನು ಓದುತ್ತಿರುವಾಗ ಅರ್ಥವಾಯಿತು, ಪ್ರೀತಿಯೆಂದರೆ ಹೆಸರು ಹಾಗೆಯೇ ಪ್ರೇಮ ಅನ್ನೋದು ಕೂಡ ಹೆಸರು, ಅಂತ. ಸಮಾಜದಲ್ಲಿ ಪ್ರೇಮ ನಿವೇದನೆಯನ್ನು ಮೊದಲಿಗೆ ಹುಡುಗರು ಮಾಡಬೇಕು, ಅದಕ್ಕೂ ಮೊದಲು ಪ್ರೇಮ ನಿವೇದನೆಯನ್ನು ಹುಡುಗಿ ಮಾಡಿದರೆ ತಪ್ಪು.
ಎಂಬುದು ವಿಶ್ವವಿಖ್ಯಾತಿ ಅಭಿಪ್ರಾಯ. ಅದು ಇನ್ನು ಹಲವಾರು ಜನರ ಅಭಿಪ್ರಾಯವೂ ಹೌದು. ಹೆಣ್ಣಾದವಳು ತನ್ನೊಳಗಿನ ಭಾವನೆಗಳನ್ನು, ನನ್ನೊಳಗಿನ ತಲ್ಲಣಗಳನ್ನು ಹೊರಹಾಕಲು ಸಮಾಜದಲ್ಲಿ ಸರಿಯಾದ ರೀತಿಯ ಸ್ವತಂತ್ರ ಕೂಡ ಇಲ್ಲ ಅಂತಹ ಕಟ್ಟುಪಾಡುಗಳಿಗೆ ಸ್ವಪ್ನದಲ್ಲಿ ಸೊರಗಿದ ಪ್ರೀತಿಯು ಪರಿಹಾರವಾಗಿದೆ.
ಇದನ್ನೂ ಓದಿ | ಪುಸ್ತಕ ವಿಮರ್ಶೆ | ಮೋಹದ ಮೋಡಗಳು
ಈ ಕಾದಂಬರಿಯನ್ನೂ ಪೂರ್ತಿಯಾಗಿ ಇದರಲ್ಲಿ ಮುಳುಗಿ ಓದಿದಾಗ ಮಧ್ಯದಿಂದ ಹಿಡಿದು ಕೊನೆಯವರೆಗೂ ದುಃಖ ನನ್ನನ್ನು ಅವರಿಸುತ್ತದೆ. ಪ್ರೀತಿ ಪ್ರೇಮ್ ಎಂಬ ಹೆಸರಿನ ಹೊಂದಾಣಿಕೆ ತುಂಬಾ ಅದ್ಭುತವಾಗಿದೆ. ಪ್ರೀತಿ ಪ್ರೇಮ್ ನಾ ಹುಟ್ಟಿದ ದಿನ, ಕೆಂಪುಬಣ್ಣದ ಅಭಿರುಚಿ, ಪ್ರೀತಿ ಪ್ರೇಮಿಗಳ ದಿನವನ್ನು ಆಚರಿಸುತ್ತಿದಂತಹ ಪದ್ಧತಿ.
ಎಲ್ಲವೂ ಕೂಡ ತುಂಬಾ ಮನಸ್ಸಿಗೆ ಇಷ್ಟವಾಯಿತು. ಹಾಗೆಯೇ ಪ್ರೀತಿ ಎಷ್ಟು ವರ್ಷಗಳ ಕಾಲವಾದರೂ ತನ್ನ ಪ್ರೀತಿಯನ್ನು ಉಳಿಸಿಕೊಂಡು ಹೋಗುವ ರೀತಿ. ನಮ್ಮಂತಹ ಹೂಮನಸ್ಸಿಗರಿಗೆ ಸ್ಫೂರ್ತಿದಾಯಕವಾಗಿದೆ. ಈ ಕಾದಂಬರಿಯಲ್ಲಿ ಹುಚ್ಚುಕೋಡಿ ಮನಸ್ಸಿನ ಚಿತ್ರಣವನ್ನು ಮತ್ತು ನಿಯಂತ್ರಣವನ್ನು, ಪ್ರೇಮ್ನಾ ಮೂಲಕ ಬಣ್ಣಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪ್ರೀತಿ-ಪ್ರೇಮವೆಂದು ಆವೇಶ ಪಟ್ಟು ಆತ್ಮಹತ್ಯೆ, ಸಾವಿನ ಕೃತ್ಯಗಳನ್ನು ಕೈಗೊಳ್ಳುವ ಯುವಜನರಿಗೆ ಜೀವನದ ಗುರಿ ಮುಖ್ಯ ಎಂಬುದನ್ನು ತಿಳಿಸುತ್ತದೆ. ಮುಂದುವರೆದು ಕನ್ನಡ ದೇಸಿ ಪದಗಳ ಸಂಭಾಷಣೆ, ನಿರ್ಗಳತೆಯಿಂದ ಕಾದಂಬರಿ ಓದುವವರಿಗೆ ಪ್ರಯಾಣದಲ್ಲಿ ನಿಲ್ದಾಣಗಳಂತೆ ಸರಳವಾಗಿ ಅರ್ಥವಾಗುವ ಕವನಗಳು ಕಾದಂಬರಿಯ ವಿಶೇಷತೆಯಾಗಿದೆ.
ಅಪ್ಪ-ಅಮ್ಮನ ಮಾತಿಗೆ ಬೆಲೆ ಕೊಡದಿರುವ ಯುವಜನಾಂಗಕ್ಕೆ ಮಾದರಿ ಪ್ರೇಮ್ ಒಂದೆಡೆ ಆದರೆ, ಇನ್ನೊಂದೆಡೆ ಅದೇ ಪ್ರೇಮ್ ಪ್ರೀತಿಯ ಪ್ರೀತಿಯನ್ನು ನಿಭಾಯಿಸಲು ಬರದೆ, ತನಗೆ ತಾನು ಮೋಸ ಮಾಡಿಕೊಂಡಿದ್ದು ತುಂಬಾ ದುಃಖಕರ ವಿಚಾರ. ಅತಿ ಹೆಚ್ಚು ಭಾವುಕರಾದ ಕ್ಷಣ ಪ್ರೇಮ್ ತನ್ನ ಅಪ್ಪನನ್ನು ಪ್ರೀತಿಯ ಗೋರಿಯ ಹತ್ತಿರ ಕರೆದುಕೊಂಡು ಹೋಗಿ.
ತನ್ನ ದುಃಖವನ್ನು ಹೇಳಿಕೊಂಡು ಅಪ್ಪ-ಮಗ ಇಬ್ಬರೂ ಪಶ್ಚತಾಪ ಪಡುವ ಕ್ಷಣ.ಪ್ರೀತಿಯ ಬದಲಿಗೆ ಪಾರ್ವತಿ ಬಂದಾಗ, ಪ್ರೀತಿಯನ್ನು ಪಾರ್ವತಿಯಲ್ಲಿ ಕಾಣುವುದು!! ಇಲ್ಲದಿರುವ ವ್ಯಕ್ತಿಗಳನ್ನು ಇರುವ ವ್ಯಕ್ತಿಗಳೊಂದಿಗೆ ಕಲ್ಪಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಅಂತಹ ಸಂದರ್ಭವನ್ನು ತುಂಬಾ ಸೂಕ್ಷ್ಮವಾಗಿ ವರ್ಣಿಸಿದ್ದಾರೆ.
ನಾನು ಪಿಯುಸಿ ನಲ್ಲಿರುವಾಗ ವಿನಿತ್ ಎಂಬ ಹುಡುಗ ದ್ವಿತೀಯ ಪಿಯುಸಿ ಪರೀಕ್ಷೆಯ ಸಮಯದಲ್ಲಿ ಪ್ರೇಮ ನಿವೇದನೆಯನ್ನು ತನ್ನ ಗೆಳೆಯರೊಂದಿಗೆ ಹೇಳಿಕಳಿಸಿದ್ದ ನಾನು ಮೊದಲು ಪರೀಕ್ಷೆ ಬರೆದು ಪಾಸ್ ಆಗಲಿಕ್ಕೆ ಹೇಳು ಎಂದು ಬೈದು ಕಳಿಸಿದ ಕ್ಷಣ ನೆನಪಾಗಿ ನಕ್ಕಿದೆ.
ಈ ಕಾದಂಬರಿಯನ್ನು ಓದಿದ ಕ್ಷಣಗಳು ನನ್ನನ್ನು ತುಂಬಾ ಯೋಚನೆ, ತುಂಬಾ ಭ್ರಮೆಗಳಿಗೆ, ತುಂಬಾ ಪ್ರಶ್ನೆಗಳಿಗೆ ಅನುವು ಮಾಡಿ ಎಲ್ಲದಕ್ಕೂ ಕೊನೆಯಲ್ಲಿ ಉತ್ತರ ಹುಡುಕುವಲ್ಲಿ ವಿಶಾಲವಾದ ಮನಸ್ಥಿತಿಯನ್ನು ತಂದುಕೊಟ್ಟಂತಹ “ಕೆ. ಸಿರಿಯವರ ಸ್ವಪ್ನದಲ್ಲಿ ಸೊರಗಿದ ಪ್ರೀತಿಗೆ ಸದಾಕಾಲ ಚಿರಋಣಿ”. ಶುಭವಾಗಲಿ ಶ್ರೀಧರ್ ಸರ್. ಇನ್ನು ಹಲವಾರು ವಿಶೇಷ ವಿಭಿನ್ನ ಕಾದಂಬರಿಗಾಳಿಗಾಗಿ ಕಾಯುತ್ತಿರುವ ಆಶಾ ಜೀವಿ ನಿಮ್ಮ ಅನುಯಾಯಿ. ಸಿಂಪಲ್ ಸಿಂಚು. ಧನ್ಯವಾದಗಳು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಬಹಿರಂಗ7 days ago
ಸಂವಿಧಾನ ನಿತ್ಯದ ಪಾಠವಾಗಲಿ..!
-
ಅಂತರಂಗ7 days ago
ಮಹಾ ಮಾನವತಾವಾದಿ ಅಂಬೇಡ್ಕರ್ ನೆನಪಿನಲ್ಲಿ..!
-
ಭಾವ ಭೈರಾಗಿ6 days ago
ಕವಿತೆ | ಯುಗಾದಿ ಪುರುಷ
-
ಲೈಫ್ ಸ್ಟೈಲ್5 days ago
ತರಕಾರಿ ಸಿಪ್ಪೆಯಿಂದ ಪೇಪರ್ ತಯಾರಿಸಿದ ಹತ್ತರ ಬಾಲೆ ಮಾನ್ಯ ಹರ್ಷ..!
-
ನಿತ್ಯ ಭವಿಷ್ಯ7 days ago
ಈ ರಾಶಿಯವರಿಗೆ ಶುಭಕಾರ್ಯ ನೆರವೇರಲಿದೆ..! ಬುಧವಾರ- ರಾಶಿ ಭವಿಷ್ಯ ಏಪ್ರಿಲ್-14,2021
-
ನಿತ್ಯ ಭವಿಷ್ಯ7 days ago
ಜನ್ಮ ಕುಂಡಲಿಯಲ್ಲಿ ಈ ಗ್ರಹಗಳು ಇದ್ದರೆ ಆಗರ್ಭ ಶ್ರೀಮಂತರು ; ಧನ ಯೋಗ ಪ್ರಾಪ್ತಿ
-
ನಿತ್ಯ ಭವಿಷ್ಯ6 days ago
ಈ ರಾಶಿಯವರು ಹೊಸ ಮನೆ ನಿರ್ಮಾಣ ಮಾಡಿ,ಮದುವೆ ಕಾರ್ಯ ಮಾಡುವಿರಿ..! ಗುರುವಾರ- ರಾಶಿ ಭವಿಷ್ಯ ಏಪ್ರಿಲ್-15,2021
-
ನಿತ್ಯ ಭವಿಷ್ಯ5 days ago
ಈ ರಾಶಿಯವರು ಕುಟುಂಬ ಸದಸ್ಯರೊಂದಿಗೆ “ಸಂತಾನದ” ಸಿಹಿಸುದ್ದಿ ಕೇಳಿ ಸಂತಸ ಹಂಚಿಕೊಳ್ಳುವಿರಿ! ಶುಕ್ರವಾರ-ಏಪ್ರಿಲ್-16,2021