Connect with us

ನೆಲದನಿ

ತತ್ವಪದಕಾರ ಡಿ.ಬಿ.ಓಬಯ್ಯ ಅವರ ದಾರ್ಶನಿಕ ನೆಲೆಯಲ್ಲಿ ಕನ್ನಡ ನೆಲದ ಸೊಗಡು

Published

on

ತ್ವಪದ ಸಾಹಿತ್ಯ ಪ್ರಕಾರವು ಜಾನಪದದ ಒಂದು ಸ್ವತಂತ್ರ ಭಾಗವಾಗಿ ಬೆಳೆದುಬಂದಿದೆ. ತತ್ವಪದಕಾರರು ತಾವು ಕಂಡುಂಡ ನೋವು, ನಲಿವು ಹಾಗೂ ಬದುಕಿನ ಹತಾಶೆಗಳನ್ನು ತಮ್ಮ ಅನುಭಾವಿಕ ದರ್ಶನದ ಮೂಲಕ ಪದಕಟ್ಟಿ ಹಾಡುತ್ತ ಬಂದಿದ್ದಾರೆ. ಕರ್ನಾಟಕದಲ್ಲಿ ತತ್ವಪದ ಪರಂಪರೆಯು ಉಲುಸಾಗಿ ಬೆಳೆದು ಬಂದಿರುವುದು ಉತ್ತರ ಕರ್ನಾಟಕದಲ್ಲಿ.

ಈ ಭಾಗದಲ್ಲಿ ಇದು ತನ್ನ ನೆಲೆಯನ್ನು ಕಂಡುಕೊಳ್ಳುವುದಕ್ಕೆ ಹಲವಾರು ಕಾರಣಗಳಿವೆ. ಇದನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ, ಈ ಪ್ರಾಂತ್ಯವು ಅತ್ಯಂತ ಹಿಂದುಳಿದ ಭಾಗವಾಗಿದ್ದು ಸಾಮಾನ್ಯ ಜನತೆ ಹಾಗೂ ದೀನ ದಲಿತರ ಬದುಕು ತುಂಬ ದುಸ್ತರದಲ್ಲಿತ್ತು. ಹಾಗೆಯೇ “14ನೇ ಶತಮಾನದಿಂದ ಕರ್ನಾಟಕದ ಉತ್ತರ ಭಾಗದಲ್ಲಿ ಇಸ್ಲಾಮ್ ಮೂಲದ ಬಹಮನಿ ರಾಜ್ಯವು ಹುಟ್ಟಿಕೊಂಡು ನೆಲೆಯೂರಲು ಸ್ಥಳೀಯ ಜನಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡವು. ಉತ್ತರದಿಂದ ಬಂದ ಸೂಫಿ ಪಂಥದ ಸಂತರು ಜನಸಾಮಾನ್ಯರ ಸಮುದಾಯಗಳಲ್ಲಿ ಬೆರೆತರು. ತಮ್ಮ ಸರಳ ಜೀವನ ಕ್ರಮದಿಂದ ಅನುಭಾವದಿಂದ ಜನರಿಗೆ ಹತ್ತಿರವಾದರು.

ಧರ್ಮ ಹೊರತಾಗಿ ಧಾರ್ಮಿಕ ನೆಲೆಯಿಂದ ತಮ್ಮ ಸರಳ ತತ್ವಗಳನ್ನು ಪ್ರಸಾರ ಮಾಡಿದರು. ಸ್ಥಳೀಯ ಜನಸಮುದಾಯಗಳಲ್ಲಿ ಯೋಗ, ಧ್ಯಾನ ಅನುಭಾವದ ಜೀವನ ಇತ್ತು. ಅವುಗಳ ಜೊತೆಗೆ ಸೂಫಿ ಪಂಥವು ಸೇರಿಕೊಂಡಿತು.” (ಅಮರೇಶ ನುಗಡೋಣ , ತತ್ವಪದ ಸಾಹಿತ್ಯ, ಪು-20) ಹಾಗೆಯೇ ಶರಣ ಚಳವಳಿಯು ರೂಪ ತಳೆದದ್ದು ಕೂಡ ಉತ್ತರ ಕರ್ನಾಟಕದ ಭೌಗೋಳಿಕ ಪರಿಸರದಲ್ಲಿ. ಹೀಗಾಗಿ ಈ ಭಾಗದ ಜನತೆಯ ಸಂವೇದನೆಯನ್ನು ಜಾನಪದ ನೆಲೆಗಟ್ಟಿನಲ್ಲಿ ತತ್ವಪದಕಾರರು ಪದಕಟ್ಟಿ ಹಾಡುತ್ತ ಬಂದಿದ್ದಾರೆ. ಈ ತತ್ವಪದಕಾರರು ತಮ್ಮ ಆರಾಧ್ಯ ದೈವ ಅಥವಾ ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿನ ಸ್ಥಳೀಯ ಗುರುವಿನ ಮುಖಾಂತರ ದೀಕ್ಷೆ ಪಡೆದು ಇಲ್ಲವೇ ಅವರ ಶಿಷ್ಯನಾಗಿ ತತ್ವಪದ ಪರಂಪರೆಯನ್ನು ಬೆಳೆಸಿಕೊಂಡು ಬಂದಿದ್ದಾರೆ. ಈ ತತ್ವಪದಕಾರರು ಜನ ಬದುಕಿನ ಒಂದು ಭಾಗವಾಗಿಯೂ ಸ್ವತಂತ್ರ ನೆಲೆಯಲ್ಲಿ ತತ್ವಪದಗಳನ್ನು ರಚಿಸಿಕೊಂಡು ಹಾಡು ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ.

ಇಂತಹ ತತ್ವಪದಕಾರರಲ್ಲಿ ಡಿ.ಬಿ.ಓಬಯ್ಯನವರು ಒಬ್ಬರಾಗಿದ್ದಾರೆ. ಶ್ರೀಯುತರು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಚಿನ್ನೋಬನಹಳ್ಳಿ ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ಇವರು ‘ಕುಡತಿನಿ ಶಂಕ್ರಪ್ಪತಾತ’ನವರ ಅನುಯಾಯಿ ಪಂಥದಿಂದ ದೀಕ್ಷೆಯನ್ನು ಪಡೆದುಕೊಂಡು ತತ್ವಪದ ಪರಂಪರೆಯಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.
ನಮ್ಮ ಸಮಾಜದಲ್ಲಿ ದಲಿತ ತತ್ವಪದಕಾರರನ್ನು ತೃತಿಯ ಜಗತ್ತನ ತತ್ವಪದಕಾರರು ಎಂಬುದಾಗಿ ಗುರುತಿಸಲಾಗಿದೆ. ಇವರು ಸಮಾಜದಲ್ಲಿ ಅತ್ಯಂತ ತಿರಸ್ಕಾರಕ್ಕೆ ಗುರಿಯಾಗಿರುವ ಕಾರಣದಿಂದ ಇವರನ್ನು ತೃತಿಯ ಜಗತ್ತಿನ ತತ್ವಪದಕಾರರೆಂದು ಕರೆಯಲಾಗಿದೆ. ಈ ವರ್ಗದ ಅನುಭಾವಿಗಳು ಜಾತಿ, ಮತ, ಪಂಥಗಳನ್ನು ಮೆಟ್ಟಿನಿಂತು ಸಮಾಜದ ಎಲ್ಲ ವಲಯಗಳನ್ನು ಕುರಿತು ಪದಕಟ್ಟಿ ಹಾಡಿದ್ದಾರೆ. “ತೃತಿಯ ಜಗತ್ತಿನ ತತ್ವಪದಕಾರರು ಇತರೆ ತತ್ವಪದಕಾರರಿಗಿಂತ ಕಡಿಮೆ ಇಲ್ಲವೆಂಬ ಸತ್ವವನ್ನು ಮನನ ಮಾಡಿಕೊಟ್ಟಿದ್ದಾರೆ. ಈ ಹೊತ್ತಿನ ದಲಿತ ಬಂಡಾಯದ ಸ್ಮøತಿ ಪಟಲಗಳಿರಲಿಲ್ಲ. ಆಕ್ರೋಶದ ಅಲೆಗ ಇರಲಿಲ್ಲ. ಕಠೋರತೆಯ ವ್ಯಾಕುಲತೆ ಇಲ್ಲ. ಇವರು ‘ದೇಶಿ’ಯಲ್ಲಿ ಪ್ರಾದೇಶಿಕತೆಯೊಳಗೆ ತಿರಸ್ಕøತ ಜನರ ಜೀವಂತ ಪರದೆಯಲ್ಲಿ ಹೊಸತನ್ನು ಆ ಕಾಲಘಟ್ಟದಲ್ಲಿ ಕಟ್ಟಿ ಹಾಡಿದ್ದಾರೆ. ಇವರ ತತ್ವಪದಗಳ ಒಳಸುಳಿಯೊಳಗೆ ಮುಟ್ಟಿಸಿಕೊಳ್ಳಲಾರದ ಅಳಲು, ದಾಸ್ಯತ್ವ ದಿನನಿತ್ಯದ ಜ್ವಲಂತ ಅಸ್ಪøಶ್ಯತೆ, ಬದುಕಿನ ಜಂಜಾಟ, ಕಂಡುಂಡ ನೋವು, ಅನುಭವಿಸಿದ ಭಯಂಕರವಾದ ಗುಲಾಮತ್ವ, ಶತಶತಮಾನ ಗಳಿಂದಲೂ ಶೋಷಣೆಗೆ ಬಲಿಯಾಗಿ ಬೆಳಕನ್ನು ಕಾಣದ ಪರಿಸರದಲ್ಲಿ ಜೀವಿಸುವ ಜೀವಂತ ಬದುಕಿನ ಬವಣೆಗಳ ಚಿತ್ರಣವನ್ನು ಕೊಟ್ಟಿದ್ದಾರೆ. ಇವರ ವೈಚಾರಿಕ ತಾತ್ವಿಕತೆಯು ತತ್ವಪದಗಳಲ್ಲಿ ಅಡಗಿಕೊಂಡಿದೆ. ಅಲ್ಲಿ ಭ್ರಷ್ಟತೆ, ಮೋಸ, ದಗ, ವಂಚನೆ, ತಲೆಹಿಡುಕತನ, ಅನ್ಯಾಯದ ವಿರುದ್ಧ ಕಿಡಿಕಾರುವುದು ಕಂಡುಬರುತ್ತದೆ.” (ಹೆಬ್ಬಾಲೆ. ಕೆ. ನಾಗೇಶ್, ಬಿಂಬದೊಳಗಣ ಪ್ರಾಣ, ಪು-65) ಇಂತಹ ದಲಿತ ತತ್ವಪದಕಾರರ ಪರಂಪರೆಯ ಮುಂದುವರೆದ ರೂಪವಾಗಿ ಕಾಣುವ ಡಿ.ಬಿ.ಓಬಯ್ಯನವರು ಸಮಾಜಿಕ ತಲ್ಲಣಗಳನ್ನು ಕುರಿತ ತತ್ವಪದಗಳನ್ನು ಹಾಡುತ್ತ ಹಾಗೂ ಸ್ವತಃ ತತ್ವಪದಗಳನ್ನು ರಚಿಸುವ ಮೂಲಕ ಈ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ.

ಇವರು ಹಲವು ಕಡೆಗಳಲ್ಲಿ ನಡೆಸುವ ಯುವಜನೋತ್ಸವ, ಧಾರ್ಮಿಕ ಕಾರ್ಯಗಳು ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕವಾಗಿ ತತ್ವಪದ ಪ್ರಕಾರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಜಾನಪದದ ಶ್ರೀಮಂತ ಸೆಲೆಯಾಗಿರುವ ಚಿನ್ನೋಬನಹಳ್ಳಿ ಗ್ರಾಮಕ್ಕೆ ಇವರ ಈ ಕೊಡುಗೆಯು ಕೂಡ ಮಹತ್ತರವಾದ ಮೈಲಿಗಲ್ಲನ್ನು ನಿರ್ಮಿಸಿದೆ. ಜಾನಪದ ಕ್ಷೇತ್ರದ ಬಗೆಗಿನ ನನ್ನ ವೈಯಕ್ತಿಕ ಆಸಕ್ತಿ ಹಾಗೂ ಕುತುಹಲದಿಂದಾಗಿ ಈ ಗ್ರಾಮದ ದಲಿತ ಸಮುದಾಯದ ಆರಾಧ್ಯ ದೈವವಾದ ಕಂಚೋಬಳೇಶ್ವರ ದೇವರ ಮೇಲೆ ಜಾನಪದ ಹಾಡುಗಾರ್ತಿಯರು ಸೋಬಾನೆ ಪದಗಳನ್ನು ಹಾಡುತ್ತಾರೆಂಬ ಜಾಡುಹಿಡಿದು ಹೋದಾಗ ಈ ಕ್ಷೇತ್ರದಲ್ಲಿ ಪರಿಣ ತಿ ಇರುವ ಡಿ.ಬಿ.ಓಬಯ್ಯನವರ ಹೆಂಡತಿಯಾದ ಮಾರಕ್ಕನವರ ಹೆಸರು ಸೂಚಿಸಿದರು. ಸಂಜೆಯ ವೇಳೆ ಬಿಡುವಿನ ವೇಳೆಯನ್ನು ಗುರುತಿಸಿಕೊಂಡು ಅವರ ಒಂದು ಸಂಚಿಕೆಯ ಧಾರವಾಯಿ ದಿನಕ್ಕೆ ಕನ್ನಹಾಕಿ, ದೇವರ ಮೇಲಿನ ಸೋಬಾನೆ ಹಾಡುಗಳನ್ನು ಹಾಡುವಂತೆ ಕೇಳಿಕೊಂಡೆವು. ಕ್ಷಣಾರ್ಧದಲ್ಲಿ ನಾವು ಮಾರಕ್ಕ ಓಬಯ್ಯ ದಂಪತಿಗಳ ಕುಟುಂಬದ ಸದಸ್ಯರಾಗಿ ಮಾರಕ್ಕನವರ ತಂಡದಿಂದ ದೇವರ ಮೇಲಿನ ಸೋಬಾನೆ ಹಾಡುಗಳನ್ನು ಹಾಡಿಸಿ ಅವುಗಳನ್ನು ದಾಖಲಿಕರಿಸಿಕೊಂಡೆವು.

ಈ ಸಂದರ್ಭಕ್ಕಾಗಲೇ ಮಾರಕ್ಕನ ಗಂಡನಾದ ಡಿ.ಬಿ.ಓಬಯ್ಯನವರು ತತ್ವಪದಕಾರರೆಂಬ ವಿಚಾರ ತಿಳಿದು ಅವರಿಂದ ಕೆಲವು ತತ್ವಪದ ಹಾಡುಗಳನ್ನು ಕೇಳಬೇಕೆಂಬ ಕುತುಹಲ ಉಂಟಾಯಿತು. ಆ ವೇಳೆಗಾಗಲೇ ರಾತ್ರಿ ತುಂಬ ಸಮಯವಾದ ಕಾರಣ ಅಳುಕಿನಿಂದಲೇ ಒಂದಿಷ್ಟು ತತ್ವಪದಗಳನ್ನು ಹಾಡುವಂತೆ ಕೇಳಿಕೊಂಡೆವು. ಆ ವೇಳೆಗಾಗಲೇ ನಮ್ಮನ್ನು ಕುಟುಂಬದ ಸದಸ್ಯರಂತೆ ನೋಡಿಕೊಂಡಿದ್ದ ಅವರು ತುಂಬು ಮನಸ್ಸಿನಿಂದ ಹಾಡುವುದಕ್ಕೆ ಮುಂದಾದರು. ಅಂದು ಓಬಯ್ಯನವರು ಹಾಡಿದ ತತ್ವಪದ ಹಾಡುಗಳಲ್ಲಿ ಕನ್ನಡ ನಾಡಿನ ಸಾಂಸ್ಕøತಿಕ ಹಿರಿಮೆಯನ್ನು ಸಾರುವ ‘ಚೆಲುವ ಕನ್ನಡ’ ನಾಡು ಎಂಬ ತತ್ವಪದವು ಪ್ರಾದೇಶಿಕ ಹಿರಿಮೆಯನ್ನು ಸಾರುವ ಬಗೆಯನ್ನು ಕುರಿತು ಪ್ರಸ್ತುತ ಲೇಖನದ ಅಡಿಯಲ್ಲಿ ಸಂಕ್ಷಿಪ್ತವಾಗಿ ವಿಶ್ಲೇಷಣೆಗೆ ಒಳಪಡಿಸಲಾಗುವುದು. ಈ ಕನ್ನಡ ನಾಡಿನ ಹಿರಿಮೆಯನ್ನು ಸಾರುವ ತತ್ವಪದವು ಈ ಮುಂದಿನಂತಿದೆ.

ಇದೇ ನಮ್ಮ ನಾಡು | ಚೆಲುವ ಕನ್ನಡನಾಡು
ಶಿವಶರಣರಾಳಿದಂತ ನಾಡು ದೇವಾ…s | ಶಿವಶರಣರಾಳಿದಂತ ನಾಡು ||ಪ||
ನಾಯಕನಟ್ಟಿ ತಿಪ್ಪೇಸ್ವಾಮಿ | ಕಾನಮಡುಗು ಶಿವಶರಣೇಶ ||
ಉಜ್ಜನಿ ಮರುಳಸಿದ್ಧೇಶ ಅವತರಿಸಿದ ಕನ್ನಡನಾಡು ||
ಇದೇ ನಮ್ಮ ನಾಡು | ಚೆಲುವ ಕನ್ನಡನಾಡು
ಶಿವಶರಣರಾಳಿದಂತ ನಾಡು ದೇವಾ…s | ಶಿವಶರಣರಾಳಿದಂತ ನಾಡು ||ಪ||
ಕುಡತಿನಿ ಶಂಕ್ರಪ್ಪ ತಾತ | ಕೊಟ್ಟೂರು ಗುರುಬಸವೇಶ ||
ತಿಪ್ಪಗಿರಿ ಬೊಂ ಬೊಂ ತಾತ ಅವತರಿಸಿದ ಕನ್ನಡನಾಡು ||2||
ಇದೇ ನಮ್ಮ ನಾಡು | ಚೆಲುವ ಕನ್ನಡನಾಡು
ಶಿವಶರಣರಾಳಿದಂತ ನಾಡು ದೇವಾ…s | ಶಿವಶರಣರಾಳಿದಂತ ನಾಡು ||ಪ||
ತಿರುಪತಿ ವೆಂಕಟೇಶ | ರಾಯದುರ್ಗ ಶೇಕಬ್ದುಲ್ಲ ತಾತ ||
ಪಾವಗಡದ ಶನಿಮಾತ್ಮ ಅವತರಿಸಿದ ಕನ್ನಡನಾಡು ||2||
ಇದೇ ನಮ್ಮ ನಾಡು | ಚೆಲುವ ಕನ್ನಡನಾಡು
ಶಿವಶರಣರಾಳಿದಂತ ನಾಡು ದೇವಾ…s | ಶಿವಶರಣರಾಳಿದಂತ ನಾಡು ||ಪ||
ಶೃಗೇರಿ ಶಾರದಾಂಬ | ಕೊಲ್ಲೂರು ಮೂಕಾಂಭಿಕೆ ||
ಬೆಟ್ಟದ ಚಾಮುಂಡೇಶ್ವರಿ ಅವತರಿಸಿದ ಕನ್ನಡನಾಡು ||2||
ಇದೇ ನಮ್ಮ ನಾಡು | ಚೆಲುವ ಕನ್ನಡನಾಡು
ಶಿವಶರಣರಾಳಿದಂತ ನಾಡು ದೇವಾ…s | ಶಿವಶರಣರಾಳಿದಂತ ನಾಡು ||ಪ||
ಓಂ ಶಿವಾಯಃ ಓಂ ನಮಃ ಶಿವಾಯಃ ||
ಓಂ ಶಿವಾಯಃ ಓಂ ನಮಃ ಶಿವಾಯಃ || (ಡಿ.ಬಿ.ಓಬಯ್ಯ, ವಯಸ್ಸು 70, ಚಿಕ್ಕೋಬನಹಳ್ಳಿ, ಮೊಳಕಾಲ್ಮೂರು).

ತತ್ವಪದಕಾರರು ಸ್ಥಾಪಿತ ನೆಲೆಯಲ್ಲಿ ನಿಂತು ಕನಿಷ್ಟ ಭಾವನೆಗಳನ್ನು ಸೃಷ್ಟಿಮಾಡುವುದಿಲ್ಲ. ಸರ್ವರನ್ನು ಸಮಾನ ನೆಲೆಯಲ್ಲಿಯೇ ಗ್ರಹಿಸುವ ಅನುಭಾವಿಕ ಮಾರ್ಗವನ್ನು ಅನುಸರಿಸಿಕೊಂಡು ಬಂದಿದ್ದಾರೆ. “ಈ ತತ್ವಪದಕಾರರಿಗೆ ಸಮಾಜದಲ್ಲಿರುವ ವಿವಿಧ ವರ್ಗಗಳ ದೈವಗಳ ಮೇಲೆ ದ್ವೇಷವಾಗಲಿ, ವಿರೋಧವಾಗಲಿ ಕಂಡುಬರುವುದಿಲ್ಲ. ಎಲ್ಲ ದೇವಕ್ಕೂ ವಿಧೇಯರಾಗಿ ಅವುಗಳನ್ನು ಸಮೀಕರಿಸಿಕೊಂಡು ಬಂದಿದ್ದಾರೆ. ತತ್ವಪದಕಾರರು ತಮ್ಮ ಅನುಭಾವಿಕತೆಯಿಂದ ‘ಮೇಲು-ಕೀಳು’ಗಳ ನಡುವೆ ಬೆಳೆದಿರುವ ಮೌಢ್ಯತೆಯನ್ನು ಬಯಲಿಗೆ ಹಾಕುವ ನೆಲೆಯಲ್ಲಿ ತಮ್ಮ ವಿಚಾರಗಳನ್ನು ವ್ಯಕ್ತಪಡಿಸುತ್ತ ಬಂದಿದ್ದಾರೆ. ಈ ತತ್ವಪದಕಾರರು ವಸಾಹತುಶಾಹಿ ಸೃಷ್ಟಿಸಿರುವ ಮತ್ತು ಸೃಷ್ಟಿಸುತ್ತಿರುವ ತಲ್ಲಣಗಳಿಗೆ ಪ್ರತಿಕ್ರಿಯೆ ನೀಡುವಂತೆ, ಸಮಾಜದಲ್ಲಿ ಪುರೋಹಿತಶಾಹಿಯು ಸೃಷ್ಟಿಸಿರುವ ಜಾತಿಯತೆಯ ಕಟ್ಟಳೆಗಳಿಗೂ ತಮ್ಮ ಪ್ರತಿಕ್ರಿಯೆ ನೀಡಿರುವುದನ್ನು ದಲಿತ ತತ್ವಪದಕಾರರಲ್ಲಿ ಗುರುತಿಸಬಹುದಾಗಿದೆ.” (ಕೆ. ಎ ಓಬಳೇಶ್, ಅಸ್ಮಿತೆ ಮತ್ತು ಆತ್ಮವಿಮರ್ಶೆ, ಪು-112, 113) ಅದೇ ರೀತಿ ಇಲ್ಲಿ ಓಬಯ್ಯನವರು ಹಾಡಿರುವ ಕನ್ನಡ ನಾಡು ನುಡಿಯೊಂದಿಗೆ ಜನಮನದಲ್ಲಿ ಬೆರೆತುಹೋಗಿರುವ ವಿವಿಧ ವರ್ಗವನ್ನು ಪ್ರತಿನಿಧಿಸುವ ದೈವಗಳು ಹಾಗೂ ಅವಧೂತರನ್ನು ಅಖಂಡ ಕರ್ನಾಟಕದ ಭಾಗವಾಗಿ ಬೆಸೆಯುವ ವಿಶಿಷ್ಟ ಬಗೆಯೊಂದು ಇಲ್ಲಿ ಕಂಡುಬರುತ್ತದೆ.

ಭಾರತದಲ್ಲಿ ಅಸಮಾನತೆಯನ್ನು ಧಾರ್ಮಿಕ ನೆಲೆಯಲ್ಲಿ ಕಾಪಾಡಿಕೊಂಡು ಬಂದಿರುವ ಪುರೋಹಿತಶಾಹಿಗೆ ಲೋಕವನ್ನು ಒಡೆದು ನೋಡುವ ಗುಣ ಪರಂಪರಾಗತವಾಗಿ ಬೆಳೆದುಬಂದಿದೆ. ಇಲ್ಲಿ ಸಮಾನತೆ, ಸಹಕಾರ, ಸಹಭಾಳ್ವೆಯಂತಹ ಉದಾರವಾದಿ ಮಾನವೀಯ ತತ್ವಗಳಿಗೆ ಅವಕಾಶವಿಲ್ಲ. ಈ ಶಿಷ್ಟ ಪರಂಪರೆಯವರಿಗೆ ಮಡಿ ಮೈಲಿಗೆಯನ್ನು ಕಾಪಾಡಿಕೊಳ್ಳುವುದೆ ಸಾಮಾಜಿಕ ಮೌಲ್ಯ ಹಾಗೂ ಘನತೆಯ ಪ್ರಶ್ನೆಯಾಗಿದೆ. ಆದರೆ ಲೋಕದ ಪ್ರತಿಯೊಂದು ಜೀವ ಸಂಕುಲವನ್ನು ಕಾರುಣ್ಯದ ನೆಲೆಯಲ್ಲಿ ನೋಡುವ ಗುಣವು ಮೌಖಿಕ ಪರಂಪರೆಯ ಜಾನಪದರಲ್ಲಿ ಕಂಡುಬರುತ್ತದೆ. ಇಲ್ಲಿ ತತ್ವಪದಕಾರರು ಚೆಲುವ ಕನ್ನಡನಾಡಿನ ಅಡಿಯಲ್ಲಿ ಆರಾಧನ ನೆಲೆಯಲ್ಲಿ ಪದಕಟ್ಟಿ ಹಾಡಿರುವ ದೈವಗಳು ಹಾಗೂ ಸಾಂಸ್ಕøತಿಕ ನಾಯಕರುಗಳು ವಿವಿಧ ಸಮುದಾಯಗಳಿಂದ ಬಂದವರಾದರು ಸಹ ಇವರನ್ನು ತಮ್ಮ ಬದುಕಿನ ಬಂದು ಭಾಗವಾಗಿ ಸ್ವೀಕರಿಸಿಕೊಂಡು ಬಂದಿದ್ದಾರೆ. ಇಲ್ಲಿ ಚಿತ್ರತವಾಗಿರುವ ಸ್ಥಳೀಯ ಆರಾಧ್ಯ ದೈವಗಳಾದ ನಾಯಕನಹಟ್ಟಿ ತಿಪ್ಪೇಸ್ವಾಮಿ, ಕಾನಮಡುಗು ಶಿವಶರಣ, ಉಜ್ಜನಿ ಮರುಳಸಿದ್ಧ, ಕುಡತಿನಿ ಶಂಕ್ರಪ್ಪ ತಾತ, ಕೊಟ್ಟೂರು ಗುರುಬಸವೇಶ, ತಿಪ್ಪಗಿರಿ ಬೊಂ ಬೊಂ ತಾತ, ರಾಯದುರ್ಗ ಶೇಕಬ್ದುಲ್ಲ ತಾತ ಇವರುಗಳು ಸಮಾಜ ಸುಧಾರಣೆಗಾಗಿ ಜನ್ಮವೆತ್ತ ಬಂದ ಅವಧೂತರಾಗಿದ್ದಾರೆ. ಇವರೆಲ್ಲರೂ ಸಮಸಮಾಜದ ಕನಸೊತ್ತು ತಮ್ಮ ಹೋರಾಟವನ್ನು ಮುಂದುವರೆಸಿಕೊಂಡು ಬಂದಿದ್ದಾರೆ.

ಇವರಿಗೆ ‘ಮೇಲು-ಕೀಳು’ ಎಂಬ ಎಂಬ ಯಾವುದೇ ತರತಮ ಭಾವವಿಲ್ಲ. ಶರಣ ಚಳವಳಿಯ ಆಶಯಗಳನ್ನು ಪುನರ್ ಸ್ಥಾಪಿಸುವ ನೆಲೆಗಟ್ಟಿನಲ್ಲಿ ಇವರೆಲ್ಲ ತಮ್ಮ ಹೋರಾಟವನ್ನು ಕೈಗೊಂಡವರು. ಈ ಮೇಲೆ ಉಲ್ಲೇಖಿಸಿರುವ ಕ್ರಾಂತಿಪುರುಷರು ವಿವಿಧ ಜಾತಿ, ಸಮುದಾಯದಿಂದ ಬಂದವರಾದರು ಸಹ ಇವರ ಹೋರಾಟದ ಗುರಿ ಮಾತ್ರ ಜಾತಿ, ಮತ, ಪಂಥವನ್ನು ಮೀರಿದ ಸಮಾನತೆಯನ್ನು ಪ್ರತಿಪಾದಿಸುವುದಾಗಿತ್ತು. ಆದರೆ ತಳವರ್ಗಗಳ ಪ್ರಗತಿಗಾಗಿ ವಿವಿಧ ವರ್ಗಗಳಲ್ಲಿ ಜನ್ಮವೆತ್ತಿ ಬಂದ ಇವರನ್ನು ಮೂಲಭೂತವಾದಿಗಳು ಆಯಾ ಜಾತಿ, ಮತ, ಪಂಥಗಳ ಪ್ರತಿಮೆಗಳಾಗಿಸಿ ಮೂಲಭೂತವಾದವನ್ನು ಪ್ರತಿಪಾದಿಸುತ್ತ ಬಂದಿದ್ದಾರೆ. ಆದರೆ ತಳವರ್ಗಗಳ ಪರವಾಗಿ ತುಡಿದ ಈ ಶಕ್ತಿಗಳನ್ನು ದಲಿತ ಹಾಗೂ ತಳ ವರ್ಗಗಳ ತತ್ವಪದಕಾರರು ಮಾತ್ರ ಅವರ ಮೂಲ ಆಶಯಗಳ ಅಡಿಯಲ್ಲಿ ಇವರನ್ನು ಆಶ್ರಯಿಸಿ ಮುನ್ನಡೆಯುತ್ತಿದ್ದಾರೆ. ಹಾಗೆಯೇ ವೈದಿಕರ ಪಿತ್ರಾರ್ಜಿತ ಆಸ್ತಿಯೆಂಬಂತೆ ಕಂಡುಬರುವ ತಿರುಪತಿ ವೆಂಕಟೇಶ, ಶೃಂಗೇರಿ ಶಾರದೆ, ಕೊಲ್ಲೂರು ಮೂಕಾಂಬಿಕೆ ಹಾಗೂ ಮೈಸೂರು ಬೆಟ್ಟದ ಚಾಮುಂಡಿಯನ್ನು ದೈವಿಕ ನೆಲೆಯಲ್ಲಿ ಆರಾಧಿಸುತ್ತ ಬಂದ ನಮ್ಮ ತತ್ವಪದಕಾರರು ಇವರನ್ನು ಕನ್ನಡ ನಾಡಿನ ಹಿರಿಮೆ ಗರಿಮೆಯ ಪ್ರತೀಕವಾಗಿಸುತ್ತಾರೆ. ಜಾತಿ, ಮತ, ಭೇದವನ್ನು ಮರೆತು ಇವರು ಅಖಂಡ ನೆಲೆಯಲ್ಲಿ ಸಮಾಜವನ್ನು ಗ್ರಹಿಸುವ ವಿಶ್ವಮಾನವರಾಗಿ ಕಂಡುಬರುತ್ತಾರೆ. ಜೀವಸಂಕುಲಕ್ಕೆ ಪ್ರಧಾನತೆಯನ್ನು ಕೊಡುವ ತತ್ವಪದಕಾರರು ಜೀವ ಕಾರಣ್ಯದ ಸೆಲೆಯನ್ನು ತಮ್ಮಲ್ಲಿ ಗರ್ಭಿಕರಿಸಿಕೊಂಡು ಬಂದಿದ್ದಾರೆ.

ಮಾನವ ಸಮಾಜದಲ್ಲಿ ‘ಮೇಲು-ಕೀಳು’ ಎಂಬ ತರತಮ ಭಾವನೆಗಳನ್ನು ಸೃಷ್ಟಿಸಿಕೊಂಡು ಬಂದಿರುವ ವೈದಿಕತೆಯ ಸ್ಥಾಪಿತ ಮೌಲ್ಯಗಳಿಗೆ ಪ್ರತಿರೋಧದ ನೆಲೆಯಲ್ಲಿ ಪರ್ಯಾಯವಾದ ಜೀವಪರ ಮಾರ್ಗವನ್ನು ರೂಪಿಸಿಕೊಂಡು ಬಂದ ಕೀರ್ತಿಯು ನಮ್ಮ ತಳವರ್ಗದ ತತ್ವಪದಕಾರರಿಗೆ ಸಲ್ಲುತ್ತದೆ. ಇವರು ಸಮಾಜದ ತರತಮ ಭಾವಗಳಿಂದ ನೊಂದವರು. ಈ ನೋವಿಗೆ ಪ್ರತಿಯಾಗಿ ಅವರ ಆಂತರ್ಯದಲ್ಲಿ ಒಡಮೂಡಿದ ಜೀವಕಾರುಣ್ಯದ ಸೆಲೆಗಳೆ ತತ್ವಪದದ ನೆಲೆಯಲ್ಲಿ ಪದಗಳಾಗಿ ಹೊರಹೊಮ್ಮಿವೆ. ವೈದಿಕತೆಯು ಯಾವುದನ್ನು ತುಚ್ಚಿಕರಿಸುತ್ತ ಬಂದಿತೊ ಅದರಲ್ಲಿಯೇ ಸತ್ವ ಹಾಗೂ ಮೌಲ್ಯಗಳನ್ನು ಗುರುತಿಸಿದವರು ಈ ತತ್ವಪದಕಾರರು. ಹೀಗಾಗಿಯೇ ವೈದಿಕತೆಯು ಒಡೆದು ನೋಡುವ ದೇವಾನುದೇವತೆಗಳನ್ನು ಅಖಂಡ ನಾಡಿನ ಭಾಗವಾಗಿ ಗುರುತಿಸುವ ಕೀರ್ತಿಯು ನಮ್ಮ ತತ್ವಪದಕಾರರಿಗೆ ಸಲ್ಲುತ್ತದೆ. ತಮ್ಮ ಸ್ಥಳೀಯ ಪರಿಸರದಲ್ಲಿ ಕಂಡುಬರುವ ಅವಧೂತರಿಂದ ದೀಕ್ಷೆ ಪಡೆದು ಗುರುವಿನ ಮಾರ್ಗದಲ್ಲಿ ಮುನ್ನಡೆಯುತ್ತ ಬಂದಿರುವ ಈ ತತ್ವಪದಕಾರರು ಸಮಕಾಲೀನ ಸಮಾಜದ ಡಂಭಾಚಾರಗಳನ್ನು ವಿಮರ್ಶೆಗೊಳಪಡಿಸುತ್ತ ಮುನ್ನಡೆಯುತ್ತಿದ್ದಾರೆ.

ಇಂತಹ ಅವಧೂತ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿರುವ ಡಿ.ಬಿ.ಓಬಯ್ಯ ನವರ ತತ್ವಪದ ಹಾಡಿನಲ್ಲಿ ಕನ್ನಡನಾಡಿನ ನಾಡು ನುಡಿಯ ಬಗೆಗೆ ಪ್ರಶಂಸೆಯಿದೆ. ಇದರೊಂದಿಗೆ ಕನ್ನಡನಾಡಿನಲ್ಲಿ ನೆಲೆಸಿರುವ ದೇವತೆಗಳೆಲ್ಲ ಒಂದೆ ಎಂಬ ನೀತಿ ತತ್ವವಿದೆ. ಹೀಗಾಗಿ ಜನಪದರ ಬದುಕಲ್ಲಿ ಬೆರೆತು ಹೋಗಿರುವ ತತ್ವಪದ ಸಾಹಿತ್ಯದಲ್ಲಿ ಅಡಗಿರುವ ವಿಶ್ವದೃಷ್ಟಿಯನ್ನು ಎತ್ತಿಹಿಡಿಯುವುದು ಪ್ರಸ್ತುತ ಲೇಖನದ ಉದ್ದೇಶವಾಗಿದೆ. ರಾಷ್ಟ್ರೀಯತೆಯನ್ನು ರಾಜಕೀಯ ಅಜೆಂಡವಾಗಿ ಬಳಸಿಕೊಂಡು ತಮ್ಮ ಸ್ವಾರ್ಥ ಸಾಧನೆಯನ್ನು ಪೂರೈಸಿಕೊಳ್ಳವವರು ಒಂದು ಕಡೆಯಲ್ಲಿ ಸಮಾಜದ ಶಾಂತಿಯನ್ನು ಕದಡುತ್ತಿದ್ದಾರೆ. ಆದರೆ ನಿಜವಾದ ರಾಷ್ಟ್ರೀಯತೆ, ನಾಡು ನುಡಿಯ ಬಗೆಗಿನ ಅಭಿಮಾನವನ್ನು ಹೊಂದಿರುವ ವರ್ಗವೊಂದು ಎಲೆ ಮರೆಯ ಕಾಯಿಯಂತಿದ್ದು, ಮಾನವತ್ವದ ನೆಲೆಯಲ್ಲಿ ಸಮಾಜವನ್ನು ನಿರ್ಮಿಸುವ ಆಶಯವೊತ್ತು ಮುನ್ನಡೆಯುತ್ತಿದೆ. ನಮ್ಮ ಮುಂದಿರುವ ಈ ಎರಡು ವರ್ಗಗಳಲ್ಲಿ ಯಾವುದು ಮಹತ್ವದ ಪಾತ್ರವನ್ನು ನಿರ್ವಹಿಸಿಕೊಂಡು ಬಂದಿದೆ ಎಂಬುದನ್ನು ನಾವು ಆಲೋಚಿಸಬೇಕಿದೆ, ಅದನ್ನು ಅಳವಡಿಸಿಕೊಳ್ಳಬೇಕಿದೆ. ಆ ಮೂಲಕ ಶಾಂತಿಯುತ ಸಮಾನತೆಯ ಸಮಾಜವನ್ನು ಕಟ್ಟಬೇಕಾದ ಅನಿವಾರ್ಯತೆ ಇದೆ.

ದಿನದ ಸುದ್ದಿ

ಕವಿತೆ | ನೆನಪು

Published

on

ಕವಿ | ರುದ್ರಪ್ಪ ಹನಗವಾಡಿ
  • ರುದ್ರಪ್ಪ ಹನಗವಾಡಿ

ಅಪ್ಪನನ್ನು ಒಪ್ಪ ಮಾಡಿ
ವರ್ಷಗಳೇ ಕಳೆದವು ಮುವ್ವತ್ತೇಳು
ಇಂದಿರಾಗಾಂಧಿಯ ತುರ್ತು ಪರಿಸ್ಥಿತಿ
ಅರಸರ ಮೀಸಲಾತಿ
ಬಸವಲಿಂಗಪ್ಪನವರ ಬೂಸಾ ಖ್ಯಾತಿ
ಮಲ ಹೊತ್ತು
ಮಲಗಿದ್ದ ಕಾಲಕ್ಕೆ
ಚುರುಕು ಮುಟ್ಟಿಸಿದ ಕಾಲ

ಹರೆಯದ ನನಗೆ
ಕಾಲೇಜ ಮೇಷ್ಟರ ಕೆಲಸ
ಸೂಟು ಬೂಟಿನ ವೇಷ
ಆ ಮೇಲೆ ಅಮಲದಾರಿಕೆ
ಎಲ್ಲ ನಡೆದಾಗಲೇ ಅವ್ವನನ್ನು
ಆಸ್ಪತ್ರೆಗೆ ಸೇರಿಸಿದ್ದು
ಕಾಲ ಕಳೆದು ಕೊಂಡು
ಕೋಲ ಹಿಡಿದದ್ದು
ನಿನ್ನೆ ಮೊನ್ನೆಯಂತೆ
ಬಾಲ್ಯವಿನ್ನು ಉಂಟೆಂಬಂತೆ
ಭಾವಿಸುವಾಗಲೇ ಅವ್ವನ ಸಾವು

ಅದರೊಟ್ಟಿಗೆ ಕಾಯದಾಯಾಸ ತೀರಿಸಲು
ಬಂದರೆ ಬೆಂಗಳೂರಿಗೆ
ರೌಡಿಗಳ ಕಾಟ
ಅಂಬೇಡ್ಕರ್ ಪಟದ ಕೆಳಗೆ
ದೌರ್ಜನ್ಯದ ದಂಡು

ಅಮಾಯಕರಿಗೆ ಗುಂಡು
ಕಂಡುಂಡ ಹಾದಿಯ ಗುಡಿಸಲುಗಳಲ್ಲೀಗ
ಮುಗಿಲು ಮುಟ್ಟೋ ಮಹಲುಗಳು
ಅಂತಲ್ಲಿ
ದೇಶ ವಿದೇಶಗಳ
ಅಹವಾಲುಗಳು
ಅವಿವೇಕಗಳು
ನೋಡ ನೋಡುತ್ತಿದ್ದಂತೆ
ಉಸಿರು ಬಿಗಿಹಿಡಿದ ಜನರ ಒಳಗೆ
ಒಳಪದರಗಳೊಳಗೆ ಕನಸ ಬಿತ್ತಿ
ಹಸಿರ ಹೊನ್ನು ಬಾಚಲು ಹವಣಿಸಿದ
ಬಿಳಿ ಜನರ ಆಟ
ಅರ್ಥವಾಗುವುದೇ ಎಲ್ಲ
ಗೋಣ ನೀಡುವರೆ
ಹೂತಿಟ್ಟ ಗೂಟಕ್ಕೆ ?

( ಚಿಂತಕ ರುದ್ರಪ್ಪ ಹನಗವಾಡಿ ಅವರ ‘ಊರು – ಬಳಗ’ ಕವನ ಸಂಕಲನದಿಂದ ‘ ನೆನಪು ‘ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕೃತಿಯನ್ನು ಫ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ 2013 ರಲ್ಲಿ ಪ್ರಕಿಸಿದೆ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ; ಒಂದು ಚಿಂತನೆ

Published

on

  • ಮಹಾಂತೇಶ್.ಬಿ.ನಿಟ್ಟೂರು, ದಾವಣಗೆರೆ

ನಿಜ ಶರಣ ಶ್ರೀ ಅಂಬಿಗರ ಚೌಡಯ್ಯನವರ ಜೀವಿತ ಕಾಲ 12 ನೇ ಶತಮಾನದ ಬಸವಾದಿ ಶರಣರ ಕಾಲದಲ್ಲೇ ಇತ್ತು ಎಂಬುದು ಇತಿಹಾಸಕಾರರ ಸಂಶೋಧನೆಯಿಂದ ತಿಳಿದು ಬರುತ್ತದೆ. ಅವರ ಹುಟ್ಟೂರು ಹಾವೇರಿ ಜಿಲ್ಲೆಯ ಆಗಿನ ಶಿವಪುರ, ಈಗಿನ ಚೌಡಯ್ಯದಾನಪುರ. ಅವರ ತಂದೆಯ ಹೆಸರು ಶ್ರೀ ವಿರೂಪಾಕ್ಷ, ತಾಯಿಯ ಹೆಸರು ಪಂಪಾಂಭಿಕೆ, ಹೆಂಡತಿಯ ಹೆಸರು ಸುಲೋಚನಾ ಹಾಗೂ ಮಗನ ಹೆಸರು ಪುರವಂತ.

ಅಂಬಿಗ ವೃತ್ತಿಯ ಚೌಡಯ್ಯನವರು ಅಲ್ಲಮ ಪ್ರಭು ಮತ್ತು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಇದ್ದ ಒಬ್ಬ ಕ್ರಾಂತಿಕಾರಿ, ದಿಟ್ಟ, ನೇರ, ನಿಷ್ಠುರ ನುಡಿಯ ವಚನಕಾರ. ಕಲ್ಯಾಣ ಕ್ರಾಂತಿಯ ನಂತರ ಇವರು ತಮ್ಮ ವಚನಗಳ ಗಂಟನ್ನು ಹೊತ್ತು ಉಳವಿಗೆ ನಂತರ ತಮ್ಮ ಗ್ರಾಮವಾದ ತುಂಗಭದ್ರಾ ನದಿಯ ದಡದ ಮೇಲಿರುವ ಶಿವಪುರಕ್ಕೆ ಬಂದು ದೋಣಿ ನಡೆಸುವ ವೃತ್ತಿಯಲ್ಲಿ ನಿರತರಾಗಿ ವಚನ ರಚನೆ ಮಾಡಿರುವುದು ತಿಳಿದು ಬರುತ್ತದೆ.

ಚೌಡಯ್ಯನವರು ತಮ್ಮ ಜೀವಿತಾವಧಿಯಲ್ಲಿ ಅನೇಕ ಪವಾಡಗಳನ್ನು ಮಾಡಿರುತ್ತಾರೆ. ಗಿಡಮೂಲಿಕೆ ಔಷಧಿಗಳಿಂದ ಕ್ಷಯ ರೋಗ, ಕುಷ್ಠರೋಗ ಗುಣಪಡಿಸುವುದು, ಹಾವು ಕಚ್ಚಿದವರನ್ನು

ಬದುಕಿಸುವುದು ಇತ್ಯಾದಿ..

ಒಮ್ಮೆ ಗುತ್ತಲದ ಅರಸನು ಬೇಟೆಗಾಗಿ ಈ ಪ್ರದೇಶದಲ್ಲಿ ಸಂಚರಿಸುತ್ತಿದ್ದಾಗ, ಆತನ ಸೇನಾಧಿಪತಿಯು ಹಾವು ಕಚ್ಚಿ ಮೃತಪಟ್ಟನು. ಇದರಿಂದಾಗಿ ಅರಸನಿಗೆ ಅತೀವ ದುಃಖವುಂಟಾಗಿ ರೋಧಿಸತೊಡಗಿದನು. ಆಗ ಆತನ ಸೈನಿಕನೊಬ್ಬನು ಶ್ರೀ ಚೌಡಯ್ಯನವರ ಪವಾಡಗಳ ಬಗ್ಗೆ ವಿವರಿಸಿ ಹೇಳಲಾಗಿ, ಅರಸನು ತನ್ನ ಮೃತ ಸೇನಾಧಿಪತಿಯ ಶರೀರವನ್ನು ಚೌಡಯ್ಯನವರಲ್ಲಿಗೆ ತಂದು ಆತನನ್ನು ಬದುಕಿಸುವಂತೆ ಕೇಳಿಕೊಂಡರು, ಆಗ ಚೌಡಯ್ಯನವರು ಸೇನಾಧಿಪತಿಯನ್ನು ಬದುಕಿಸುತ್ತಾರೆ. ಇದರಿಂದ ಸಂತುಷ್ಟನಾದ ಅರಸನು ಶಿವಪುರದ ಸುತ್ತಲಿನ ಪೂರ್ವ – ಪಶ್ಚಿಮಕ್ಕೆ 14 ಮೈಲು ಹಾಗೂ ಉತ್ತರ – ದಕ್ಷಿಣಕ್ಕೆ 7 ಮೈಲು ಸುತ್ತಳತೆಯ ಭೂಮಿಯನ್ನು ಚೌಡಯ್ಯನವರಿಗೆ ದಾನವಾಗಿ ನೀಡಿದನು.

ಆದರೆ ಚೌಡಯ್ಯನರು ವೈರಾಗ್ಯಶಾಲಿಯು, ಲೌಕಿಕದಲ್ಲಿ ನಿರಾಸಕ್ತಿ ಹೊಂದಿದವರು ಆಗಿದ್ದರಿಂದ, ಅರಸನು ಕೊಡಮಾಡಿದ್ದ ಸಂಪೂರ್ಣ ಜಮೀನನ್ನು ತನ್ನ ಗುರುಗಳಾದ ಶ್ರೀ ಶಿವದೇವರಿಗೆ ದಾನವಾಗಿ ನೀಡಿದರು ಎಂಬ ಉಲ್ಲೇಖವಿದೆ. ಅಂದಿನಿಂದ ಶಿವಪುರ ಗ್ರಾಮಕ್ಕೆ ‘ಚೌಡಯ್ಯದಾನಪುರ’ ಎಂದು ಹೆಸರು ಬರುತ್ತದೆ. ಮುಂದೆ ಚೌಡಯ್ಯನರು ಅಲ್ಲಿ ದೇಹ ತ್ಯಾಗ ಮಾಡಿದ್ದರಿಂದ ತುಂಗಭದ್ರಾ ನದಿಯ ದಡದಲ್ಲಿ ಈಗಲೂ ಚೌಡಯ್ಯನವರ ಸಮಾಧಿ ಗದ್ದುಗೆ ಇದೆ.

ಭ್ರಮಾಲೋಕದಲ್ಲಿ ವಿಹರಿಸುತ್ತಾ ಕುಳಿತ, ಆಡಂಬರದಲ್ಲಿ ಅಡ್ಡಾದಿಡ್ಡಿ ಅಡ್ಡಾಡುವ ಮಂದಿಯ ಕಪಾಳಕ್ಕೆ ಹೊಡೆದು ಎಚ್ಚರಿಸುವಂತಿವೆ ಚೌಡಯ್ಯನವರ ವಚನಗಳು. ಧಾರ್ಮಿಕ ಮೂಢನಂಬಿಕೆ ಬಿತ್ತುವವರಿಗೆ, ಸ್ವಾರ್ಥಿಗಳಾಗಿ ಬದುಕುವವರಿಗೆ, ಮುಖವಾಡ ಹಾಕಿ ಮಂಕು ಬೂದಿ ಎರಚುವವರಿಗೆ ಸಿಂಹ ಸ್ವಪ್ನದಂತೆ ಬೆಚ್ಚಿ ಬೀಳಿಸುತ್ತವೆ ನಿಜ ಶರಣ ಅಂಬಿಗರ ಚೌಡಯ್ಯನವರ ವಚನಗಳು. ಇದಕ್ಕೆ ತಾತ್ಪೂರ್ತಿಕವಾಗಿ ಕೆಲವು ವಚನಗಳು ಈ ಕೆಳಗಿನಂತಿವೆ;

“ಅಂಬಿಗ ಅಂಬಿಗ ಎಂದು ಕುಂದ ನುಡಿಯದಿರು/ನಂಬಿದರೆ ಒಂದೇ ಹುಟ್ಟಲಿ/ಕಡೆಯ ಹಾಯಿಸುವೆನೆಂದಾತನಂಬಿಗರ/ಚೌಡಯ್ಯ ನಿಜಶರಣನು”

ಈ ಮೇಲಿನ ವಚನ ಶ್ರೀ ಅಂಬಿಗರ ಚೌಡಯ್ಯನವರ ಸ್ವಾಭಿಮಾನ, ಧೈರ್ಯ, ನೇರ, ನಿರ್ಭಿಡೆಯ ವ್ಯಕ್ತಿತ್ವದ ಪ್ರತೀಕವಾಗಿದೆ.

ಹನ್ನೆರಡನೇ ಶತಮಾನದ ಸಂದರ್ಭದಲ್ಲಿ ಜಾತಿ ಮತ್ತು ವರ್ಗ ವ್ಯವಸ್ಥೆ ಎಷ್ಟರಮಟ್ಟಿಗಿತ್ತು ಎಂಬುದನ್ನು ಈ ವಚನ ಸೂಚಿಸುತ್ತದೆ. ಅಂತಹ ವಿಚಿತ್ರ, ವಿಕ್ಷಿಪ್ತ ಸನ್ನಿವೇಶದಲ್ಲಿ ಬಸವಾದಿ ಶರಣರು ಜಾತೀಯತೆ, ವರ್ಗ – ವರ್ಣ ವ್ಯವಸ್ಥೆಯ ವಿರುದ್ಧ ಬೃಹತ್ ಚಳುವಳಿಯನ್ನು ಕೈಗೊಂಡಾಗ ಅಂಬಿಗರ ಚೌಡಯ್ಯನವರ ಸತ್ಯನಿಷ್ಠೆ, ಪ್ರಾಮಾಣಿಕತೆಯ ವಚನಗಳು ಪ್ರಖರವಾಗಿ ಕಾಣಿಸುತ್ತವೆ. ಕೆಲವು ಢೋಂಗಿ ಭಕ್ತರಿಗೆ, ಕಪಟ ಸನ್ಯಾಸಿಗಳಿಗೆ ತನ್ನ ಖಾರವಾದ ವಚನಗಳ ಮೂಲಕ ಚುರುಕು ಮುಟ್ಟಿಸುತ್ತಾರೆ.

ಆಡಂಬರ ಮತ್ತು ದುರಾಸೆಯ ಜನರ ಮನಸ್ಥಿತಿ ಕಂಡು ಕೆಂಡಾಮಂಡಲವಾಗಿ ಪ್ರಸ್ತುತ ಪಡಿಸಿದ ಒಂದು ವಚನ ಇಂತಿದೆ;

“ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಕಾಳೋಗರನ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹಾರುವ ಪಕ್ಷಿಯನು/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೆಬ್ಬುಲಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೊಯ್ವ ಹೆಮ್ಮಾರಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಬರುವ ಉರಿ ಬಾಣವನು/ಇಂತೆಲ್ಲವನು ಒಂದೇ ಮಂತ್ರದಲ್ಲಿ ನಿಲ್ಲಿಸಬಹುದು;/ಲೋಭವೆಂಬ ಗ್ರಹಣ ಹಿಡಿದವರ ಏತರಿಂದಲೂ/ನಿಲ್ಲಿಸಲಾಗದು/ಈ ಲೋಭಕ್ಕೆ ದಾರಿದ್ರ್ಯವೇ ಔಷಧವು;/ಹೇಳಿದರೆ ಕೇಳರು, ತಾವು ತಿಳಿಯರು/ಶಾಸ್ತ್ರವ ನೋಡರು, ಭಕ್ತಿಯ ಹಿಡಿಯರು/ಇಂತಹ ಗೊಡ್ಡು ಮೂಳ ಹೊಲೆಯರಿಗೆ/ಕರ್ಮವೆಂಬ ಶರದ್ಧಿಯಲ್ಲಿ ಬಿದ್ದು ಹೊರಳಾಡುವುದೇ/ಸತ್ಯವೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು”

ಸಂಸಾರದ ಜಂಜಾಟದಲ್ಲಿ ಬಿದ್ದು ಒದ್ದಾಡುತ್ತಾ ಶಿವನನ್ನು ಮರೆತು ಹತ್ತು ಹಲವು ಚಿಂತೆಯಲ್ಲಿ ಮುಳುಗಿರುವ ಶವ ಮುಖದ ಜನರ ಸ್ಥಿತಿ-ಗತಿಯನ್ನು ಅರ್ಥಗರ್ಭಿತವಾಗಿ ಸಾದರಪಡಿಸುವ ಒಂದು ವಚನ ಇಂತಿದೆ;

“ಬಡತನಕೆ ಉಂಬುವ ಚಿಂತೆ/ಉಣಲಾದಡೆ ಉಡುವ ಚಿಂತೆ/ಉಡಲಾದಡೆ ಇಡುವ ಚಿಂತೆ/ಇಡಲಾದಡೆ ಹೆಂಡಿರ ಚಿಂತೆ/ಹೆಂಡಿರಾದರೆ ಮಕ್ಕಳ ಚಿಂತೆ/ಮಕ್ಕಳಾದಡೆ ಬದುಕಿನ ಚಿಂತೆ/ಬದುಕಾದಡೆ ಕೇಡಿನ ಚಿಂತೆ/ಕೇಡಾದಡೆ ಮರಣದ ಚಿಂತೆ/ಇಂತೀ ಹಲವು ಚಿಂತೆಯಲ್ಲಿಪ್ಪವರ ಕಂಡೆನು/ಶಿವನ ಚಿಂತೆಯಲ್ಲಿದ್ದಾತರೊಬ್ಬರನೂ ಕಾಣೆನೆಂದಾತ/ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು!”

ಸಮಯದ ಸದ್ಬಳಕೆ ಮಾಡಿಕೊಂಡು ಕಾಯಕ ಮಾಡುತ್ತಾ ಶಿವಭಕ್ತರಾಗಿ, ಜೀವನ ಪಾವನವಾಗಿಸುವಂತೆ ಕರೆ ನೀಡುವ ಒಂದು ವಚನ ಇಂತಿದೆ;

“ಗಾಳಿ ಬಿಟ್ಟಾಗ ತೂರಿಕೊಳ್ಳಿರಯ್ಯ/ಗಾಳಿ ನಿಮ್ಮ ಅಧೀನವಲ್ಲ ಕಂಡಯ್ಯ/ನಾಳೆ ತೂರಿಹೆನೆಂದಡಿಲ್ಲ ಕಂಡಯ್ಯ/ಶಿವಶರಣೆ ಎಂಬುದೊಂದು ಗಾಳಿ ಬಿಟ್ಟಲ್ಲಿ/ಬೇಗ ತೂರೆಂದನಂಬಿಗರ ಚೌಡಯ್ಯ”

ಕಾವಿ ಬಟ್ಟೆ ತೊಟ್ಟು, ಭಿಕ್ಷೆಗಾಗಿ ಜೋಳಿಗೆ ಹಾಕಿದವರೆಲ್ಲರೂ ಜಂಗಮರು, ಗುರುಗಳಾಗಲಾರರು ಎಂಬುದನ್ನು ವಿಡಂಬಿಸುವ ಒಂದು ವಚನ ಇಂತಿದೆ;

“ಕಂಥೆ ತೊಟ್ಟವ ಗುರುವಲ್ಲ/ಕಾವಿ ಹೊದ್ದವ ಜಂಗಮನಲ್ಲ/ಶೀಲ ಕಟ್ಟಿದವ ಶಿವಭಕ್ತನಲ್ಲ/ನೀರು ತೀರ್ಥವಲ್ಲ/ಕೂಳು ಪ್ರಸಾದವಲ್ಲ/ಹೌದೆಂಬವನ ಬಾಯ ಮೇಲೆ/ಅರ್ಧ ಮಣದ ಪಾದರಕ್ಷೆಯ ತೆಗೆದುಕೊಂಡು/ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ/ಟೊಕ ಟೊಕನೆ ಹೊಡೆ ಎಂದಾತ/ನಮ್ಮ ಅಂಬಿಗರ ಚೌಡಯ್ಯ”

ಹೀಗೆ ಬಸವಾದಿ ಶರಣರ ಸಮಾಜ ಸುಧಾರಣಾ ಚಳವಳಿಯಲ್ಲಿ ತಮ್ಮ ಅಮೂಲ್ಯ ಸೇವೆಯನ್ನು ಮುಡುಪಾಗಿಟ್ಟ ಶ್ರೀ ಅಂಬಿಗರ ಚೌಡಯ್ಯನವರು ತಮ್ಮ ಬದುಕಿನ ನೀತಿಯಿಂದ, ನಿಷ್ಠೆಯಿಂದ, ತೀಕ್ಷ್ಣ ಖಂಡನೆಯ ಬಂಡಾಯ ವಚನಗಳಿಂದ ಗಮನ ಸೆಳೆದು, ಅವರು ರಚಿಸಿದ ವಚನಗಳಿಗೆ ತಮ್ಮ ಹೆಸರನ್ನೇ ಅಂಕಿತವನ್ನಾಗಿಟ್ಟಿರುವದು ವಿಶೇಷವಾಗಿದೆ. ಸಮಾಜದ ಕೊಳೆಯನ್ನು ತೊಳೆಯುವ ನಿಟ್ಟಿನಲ್ಲಿ ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ಎದ್ದು ಕಾಣುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮ್ಯಾಸ ನಾಯಕ ಬುಡಕಟ್ಟನಲ್ಲಿ ದೀಪಾವಳಿ ಹಬ್ಬದ ಆಚರಣೆ

Published

on

ಭಾರತ ತನ್ನ ಭೌಗೋಳಿಕ ಸ್ವರೂಪದಲ್ಲಿ ವೈವಿಧ್ಯತೆಯನ್ನು ಹೊಂದಿರುವಂತೆ ಅನೇಕ ಬಗೆಯ ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿದೆ.

ದೇಶದ ಪ್ರತಿಯೊಂದು ಸಮುದಾಯವು ಬದುಕಿನ ಕ್ರಮದಲ್ಲಿ ತನ್ನದೇ ಆದ ವೈವಿಧ್ಯತೆಯನ್ನು ಹೊಂದಿದ್ದು ಹಬ್ಬಗಳ ಆಚರಣೆಯಲ್ಲಿಯೂ ಈ ಭಿನ್ನತೆಯನ್ನು ಕಾಣಬಹುದಾಗಿದೆ. ಈಗ ನಡೆಯುತ್ತಿರುವ ದೀಪಾವಳಿ ಹಬ್ಬದ ಆಚರಣೆಯೂ ಇದರಿಂದ ಹೊರತಾಗಿಲ್ಲ. ಇಡೀ ಭಾರತ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸುತ್ತಿದೆ ಎಂಬುದು ಸಾಮಾನ್ಯವಾದ ಹೇಳಿಕೆಯಾಗಿರುತ್ತದೆ.

ದೀಪಾವಳಿ ಎಂದರೆ ದೀಪವನ್ನು ಬೆಳಗಿಸುವ ಹಬ್ಬ. ಜಗದ ಕತ್ತಲೆಯನ್ನು, ಮನದ ಕತ್ತಲೆಯನ್ನು, ಕಳೆಯುವ ಹಬ್ಬ ಎಂಬುದು ಒಂದು ನಂಬಿಕೆಯಾದರೆ ಬಲಿಚಕ್ರರ‍್ತಿಯನ್ನು ವರ್ಷಕೊಮ್ಮೆ ನೆನಪಿಸಿಕೊಳ್ಳುವುದು, ನರಕಾಸುರನನ್ನು ಶ್ರೀ ಕೃಷ್ಣ ಪರಮಾತ್ಮ ಕೊಂದು ಆತನ ಸೆರೆಯಲ್ಲಿದ್ದ ಅಸಂಖ್ಯಾತ ಮಹಿಳೆಯರಿಗೆ ಬಿಡುಗಡೆ ದೊರಕಿಸಿದ ದಿನವಿದು ಎಂದು ನೆನೆಪಿಸಿಕೊಳ್ಳುವುದು ಹೀಗೆಲ್ಲಾ ಪ್ರಚಲಿತ ಪುರಾಣಮೂಲಗಳಿಂದ ಈ ಹಬ್ಬದ ಆಚರಣೆಯ ಸಾಂಕೇತಿಕತೆಯನ್ನು ಅರ್ಥೈಸಲಾಗುತ್ತದೆ.

ಈ ಎರಡೂ ಘಟನೆಗಳನ್ನು ಕುರಿತು ಬೇರೆ ಬೇರೆ ನೆಲೆಯಿಂದ ಯೋಚಿಸಿದಾಗ ಇದನ್ನು ದೇಶದಾದ್ಯಂತ ಎಲ್ಲರೂ ಸಡಗರಿಸಬೇಕೆ? ಆಳುವವರ ಸಡಗರ ಎಲ್ಲರ ಸಡಗರವಾಗಲೇಬೇಕಾದ ಅನಿವಾರ್ಯವೇ? ಎಂಬ ನೆಲೆಗಳಿಂದ ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕಾಗುತ್ತದೆ.

ನಿಸರ್ಗಮೂಲ ಸಿದ್ದಾಂತವನ್ನು ಅನ್ವಯಿಸಿಕೊಂಡರೇ ಬಹುಶಃ ಈ ದೀಪಾವಳಿಯ ತಿಂಗಳು, ಅಂದರೇ ಕಾರ್ತಿಕ ಮಾಸದ ಹವಾಮಾನದಲ್ಲಿ ವಿಶೇಷತೆಯಿದೆ. ಕಾರ್-ಅಂದರೇ ಮಳೆ ಸುರಿಯುವುದು. ಕರ‍್ತೀಕ ಅಂದರೇ ಮಳೆಗಾಲದ ಕೊನೆಯ ದಿನಗಳಿವು, ಹಿಂಗಾರಿನ ಕೊನೆಯ ಮಳೆಗಳು ಸುರಿಯುವ ಮತ್ತು ಇದರೊಂದಿಗೆ ಚಳಿಗಾಲವೂ ಆರಂಭವಾಗುವುದರಿಂದ ಮಂಜುಮುಸುಕಿದ ವಾತಾವರಣವೂ ಜೊತೆಗೂಡಿ ಕತ್ತಲೆಯ ಆಧಿಕ್ಯ ಹೆಚ್ಚು. ಬಹುಶಃ ಈ ಕತ್ತಲೆಯನ್ನು ನಿವಾರಿಸಿಕೊಳ್ಳಲು ಮನೆಮನೆಯ ಮುಂದೆ ದೀಪಗಳನ್ನು ಹಚ್ಚಿ ಬೆಳಕನ್ನು ಕಂಡುಕೊಳ್ಳುವ ಉದ್ದೇಶವೂ ಇರಬಹುದೆನ್ನಿಸುತ್ತದೆ. ಒಟ್ಟಾರೆ ನಾಡಿನಾದ್ಯಂತ ಆಚರಿಸಲಾಗುವ ಈ ದೀಪಾವಳಿ ಹಬ್ಬವನ್ನು ಮ್ಯಾಸಮಂಡಲದಲ್ಲಿಯೂ ಆಚರಿಸಲಾಗುತ್ತದೆ.

ಮ್ಯಾಸಬುಡಕಟ್ಟಿನ ದೇವರು ಕಾಣದ ಲೋಕದವರಲ್ಲ. ಪ್ರಕೃತಿಯ ವಿಶಿಷ್ಟತೆಯನ್ನೇ ದೈವ ಎಂದು ಭಾವಿಸಿ ಪೂಜಿಸುವುದು, ಸೃಷ್ಟಿಗೆ ಕಾರಣವಾಗುವ ತಾಯಿಯನ್ನೇ ಮೊದಲ ದೈವ ಎಂದು ಪೂಜಿಸುವುದು, ತಮಗೆ ಬದುಕನ್ನು ಕಟ್ಟಿಕೊಟ್ಟು ತಮ್ಮನ್ನು ಮುನ್ನಡೆಸಿದ ಹಿರಿಯರನ್ನೇ, ನಾಯಕರನ್ನೇ ತಮ್ಮದೇವರು ಎಂದು ಪೂಜಿಸುವುದು, ಮತ್ತು ತಮ್ಮ ಬದುಕಿಗೆ ಆಧಾರವಾಗಿದ್ದ ಪಶುಸಂಪತ್ತನ್ನೇ ತಮ್ಮ ಹಿರಿಯರೊಂದಿಗೆ ಸಮೀಕರಿಸಿ ದೈವಗಳೆಂದು ಭಾವಿಸಿ ಪೂಜಿಸುವುದು ಈ ಬುಡಕಟ್ಟಿನ ವಿಶೇಷತೆ. ತಮ್ಮ ನಾಯಕ ಅಥವಾ ನಾಯಕಿ ಬಳಸುತ್ತಿದ್ದ ವಸ್ತುವನ್ನು ಬಿದಿರಿನ ಬುಟ್ಟಿಯಲ್ಲಿಟ್ಟು, ಕೆಲವು ಕಡೆ ಸಾಲಿಗ್ರಾಮಗಳನ್ನು ಮತ್ತು ನಾಯಕ/ನಾಯಕಿ ಬಳಸುತ್ತಿದ್ದ ಬಿಲ್ಲು, ಬಾಣ/ ಖಡ್ಗವನ್ನೇ ದೇವರೆಂದು ನಂಬಿ ಪೂಜಿಸುವ ಸಮುದಾಯದಲ್ಲಿ ದೀಪಾವಳಿಯನ್ನು ಇವುಗಳಿಗೆ ಪೂಜೆ ಸಲ್ಲಿಸುವ ಮೂಲಕವೇ ಆಚರಿಸಲಾಗುತ್ತದೆ.

ಮ್ಯಾಸಮಂಡಲದ ಎಲ್ಲಾ ಗುಡಿಕಟ್ಟುಗಳಲ್ಲಿಯೂ ಮತ್ತು ಇದಕ್ಕೆ ಸಂಬಂಧಿಸಿದ ಎತ್ತಿನಗೂಡುಗಳಲ್ಲಿ ಈ ಹಬ್ಬದ ಆಚರಣೆ ನಡೆಯುತ್ತದೆ. ದೀಪಾವಳಿ ಅಮಾವಾಸ್ಯೆಕಳೆದು ಪಾಡ್ಯದ ಸೋಮವಾರ ಹೀರೆಹಳ್ಳಿಯ ದಡ್ಡಿಸೂರನಾಯಕನ ಗುಡಿಗೆ ಈತನಿಂದ ಸಂರಕ್ಷಿಸಲ್ಪಟ್ಟ ದನಕರುಗಳ ಪರಂಪರೆಯಿಂದ ಇಂದಿಗೂ ಉಳಿದು ಬಂದಿರುವ ಆಕಳ ಗೂಡಿನಿಂದ (ಗುಡೇಕೋಟಿ ಬಳಿ ಇರುವ} ಕಿಲಾರಿಗಳು ಮೊಸರು,ತುಪ್ಪವನ್ನು ತಂದು ಸೋಮವಾರ ಸಂಜೆ ಗುಡಿಗೆ ಒಪ್ಪಿಸುತ್ತಾರೆ. ತಮ್ಮ ಹೊಲಗಳಲ್ಲಿ ಬೆಳೆದ ಹಸನಾದ ಸಜ್ಜೆಯತೆನೆಗಳನ್ನು ತಂದು ಒಪ್ಪಿಸುವ ವಾಡಿಕೆಯೂ ಇದೆ. ರಾತ್ರಿಯಿಡಿ ಎಲ್ಲರೂ ಸೇರಿ ಗುಡಿಯಲ್ಲಿ ಹುರುಳಿ, ಗುಗ್ಗರಿ ಬೇಯಿಸಿ ಜೋಳ ಅಥವಾ ಸಜ್ಜೆಯ ಅನ್ನ ಮಾಡಿ ಗೂಡಿನಿಂದ ತಂದ ಮೊಸರನ್ನು ಸೇರಿಸಿ ಬೆಳಗಿನಜಾವ ದಡ್ಡಿಸೂರನಾಯಕನಿಗೆ ನೈವೇದ್ಯ ಮಾಡಲಾಗುತ್ತದೆ.

ರಾತ್ರಿಯಿಡೀ ಉರುಮೆ ವಾದ್ಯದ ಸೇವೆ, ನಾಯಕನನ್ನು ಕುರಿತು ಪದ ಹೇಳುವುದು ನಡೆಯುತ್ತದೆ, ಹೀಗೆ ಗುಡಿಯಲ್ಲಿ ನಡೆಯುವ ಪೂಜೆಯೇ ತಮಗೆ ದೀಪಾವಳಿ ಹಬ್ಬದ ಆಚರಣೆಯಾಗಿದ್ದು ಮನೆ ಮನೆಯ ಮುಂದೆ ದೀಪ ಬೆಳಗಿಸುವ, ರಂಗೋಲಿ ಹಾಕುವ, ಪಟಾಕಿ ಸಿಡಿಸುವ ಆಚರಣೆಗಳು ಇಲ್ಲಿ ಇರುವುದಿಲ್ಲ.
ಕಂಪಳ ದೇವರ ಹಟ್ಟಿಯಲ್ಲಿ ಇದಕ್ಕಿಂತ ಸ್ವಲ್ಪ ಭಿನ್ನವಾಗಿ ಹಬ್ಬದ ಆಚರಣೆ ನಡೆಯುತ್ತದೆ. ಮಾಘ ಮಾಸದಲ್ಲಿ ನಡೆಯುವ ಗುಗ್ಗರಿ ಹಬ್ಬದಲ್ಲಿ ಮಾಡುವಂತೆ ಈ ಸಮಯದಲ್ಲಿಯೂ ಅಮಾವಾಸ್ಯೆ ನಂತರದ ಶುಕ್ರವಾರದಂದು ಪೆಟ್ಟಿ ದೇವರನ್ನು ಗುಡಿಯಿಂದ ತಂದು ಹಟ್ಟಿಯ ಹೊರವಲಯದಲ್ಲಿ ಹೊಸ ಉದಿ/ಪದಿಯನ್ನು ಕಟ್ಟಿ ಇದರಲ್ಲಿ ಕೂರಿಸಿ ಮೂರು ದಿನಗಳ ಹಬ್ಬದ ಆಚರಣೆ ನಡೆಸಲಾಗುತ್ತದೆ.

ತೆಲುಗಿನಲ್ಲಿ ಇದನ್ನು ‘ದುಯಿಲಪಂಡುವ’ ಎಂದು ಕರೆಯಲಾಗುತ್ತದೆ. ಕಂಪಳ ದೇವರ ಪೆಟ್ಟಿಯೊಂದಿಗೆ ಜಗಲೂರು ಪಾಪನಾಯಕನನ್ನು ಸಂಕೇತಿಸುವ ಬಿಲ್ಲು ದೇವರನ್ನೂ ತಂದು ಪೂಜಿಸಲಾಗುತ್ತದೆ. ಆಕಳಗೂಡಿನ ಮೀಸಲು ಮೊಸರು ಮತ್ತು ಬೆಣ್ಣೆಯನ್ನು ಅರ್ಪಿಸುವುದು ಇಲ್ಲಿ ಬಹಳ ವಿಶೇಷವಾದುದು. ಗತಿಸಿದ ಎತ್ತು ಮತ್ತು ಆಕಳಿಂದ ಸಂಗ್ರಹಿಸಿದ ಕೊಂಬನ್ನು ಇಲ್ಲಿ ಬೆಣ್ಣೆಯನ್ನು ಶೇಕರಿಸಲು ಬಳಸಲಾಗುತ್ತದೆ.ಬುಡಕಟ್ಟಿನ ಜನತೆ ತಮಗೆ ಸಿಗುವ ವಸ್ತುಗಳನ್ನೇ ಸಲಕರಣೆಗಳನ್ನಾಗಿ ಬಳಸುವ ವಿಧಾನ ಇಲ್ಲಿ ಗಮನ ಸೆಳೆಯುತ್ತದೆ. ಹೀಗೆ ಸಂಗ್ರಹಿಸಿದ ಬೆಣ್ಣೆಯನ್ನು ಕಾಯಿಸಿ ತುಪ್ಪ ಮಾಡಿ ಪದಿಯಲ್ಲಿ ದೀಪವನ್ನು ಉರಿಸಲಾಗುತ್ತದೆ.ಮೊಸರು,ಜೋಳದ/ಸಜ್ಜೆಯ ಅನ್ನ,ಬಾಳೆಹಣ್ಣು,ಬೆಲ್ಲವನ್ನು ಬೆಳಗಿನಜಾವದಲ್ಲಿ ನೈವೇದ್ಯ,ಮಾಡಲಾಗುತ್ತದೆ.

ಇದರೊಂದಿಗೆ ಎತ್ತುಗಳನ್ನೂ ಹರಿಯಿಸುವುದು, ಮಣೇವು, ಉರಿಯುವ ಪಂಜುಗಳನ್ನೇ ನುಂಗುವುದು ಈ ಹಬ್ಬದ ಪ್ರಮುಖ ಆಚರಣೆಗಳಾಗಿವೆ. ನನ್ನಿವಾಳದ ಕಟ್ಟಿಮನೆಗೆ ಸೇರಿದ ಬಂಗಾರುದೇವರ ಹಟ್ಟಿಯಲ್ಲಿ ದೇವರುಗಳನ್ನು ಮತ್ತು ಬೆಳಗಟ್ಟದ ಸೂರೆಯರಗಾಟನಾಯಕನಿಗೆ ಸಂಬಂಧಿಸಿದಂತೆ, ಬೋಸೇದೇವರ ಹಟ್ಟಿಯ ಬೋಸೇರಂಗಯ್ಯನ ಪೆಟ್ಟಿಯನ್ನು, ದೊಣಮಂಡಲಹಟ್ಟಿಯ ಮಂಡಬೊಮ್ಮದೇವರನ್ನು ಹಟ್ಟಿಯಿಂದ ಹೊರಗೆ ತಂದು ಊರ ಹೊರಗೆ ಹೊಸ ಪದಿಯನ್ನು ಕಟ್ಟಿ, ಗೂಡಿನಿಂದ ಎತ್ತುಗಳನ್ನು ಕರೆಸಿ ಗೌರವಿಸಿ ಪೂಜಿಸುವ ಕ್ರಮವಿದೆ.

ಒಟ್ಟಾರೆ ಈಮ್ಯಾಸಮಂಡಲದ ದೀಪಾವಳಿ ಹಬ್ಬಕ್ಕೆ ಆಯಾ ಗುಂಪಿನವರೆಲ್ಲರೂ ಕಾಸು,ಹಾಲು, ಮೊಸರನ್ನು ಅರ್ಪಿಸಿ ಪಾಲ್ಗೊಳ್ಳುವಿಕೆಯೇ ಇಲ್ಲಿ ಸಾಮುದಾಯಿಕತೆಯ ಮಹತ್ವವನ್ನು ಪಡೆಯುತ್ತದೆ. ಈ ದೀಪಾವಳಿ ಹಬ್ಬದ ಆಚರಣೆಯಲ್ಲಿಎಲ್ಲಾ ಪದಿಗಳಲ್ಲಯೂ ದಾಸೋಹ ವಿಶೇಷವಾಗಿ ನಡೆಯುತ್ತದೆ. ಮುಂಗಾರು ಮಳೆ ಸುರಿದು ಸೊಂಪಾಗಿ ಬೆಳೆದ ಹುಲ್ಲನ್ನು ತಿಂದು ಹಸುಗಳು ಸಾಕಷ್ಟು ಹಾಲನ್ನು ಕೊಡುವುದರಿಂದ ಸಮೃದ್ಧವಾದ ಹಾಲು,ಮೊಸರು ಈ ಹಬ್ಬಕ್ಕೆ ಒದಗುತ್ತದೆ.ಇದನ್ನು ಎಡೆ ಮಾಡಿದ ನಂತರ ಎಲ್ಲರಿಗೂ ದಾಸೋಹದಲ್ಲಿ ನೀಡಲಾಗುತ್ತದೆ.

ಈ ಬುಡಕಟ್ಟಿನ ದೀಪಾವಳಿ ಹಬ್ಬದ ಆಚರಣೆಯ ಹಿಂದೆ ನಮ್ಮ ಭಾರತದ ಪೌರಾಣಿಕ ಕಥನಗಳಾವುವು ಕೇಳಿ ಬರುವುದಿಲ್ಲ.ಮನೆ ಮನೆಯ ಮುಂದೆ ದೀಪಗಳನ್ನು ಹಚ್ಚಿ ಸಡಗರಿಸುವುದು ಇಲ್ಲಿಲ್ಲ. ರಂಗೋಲಿ ಹಾಕುವುದಂತೂ ಬುಡಕಟ್ಟಿನ ನಿಶೇಧಗಳಲ್ಲಿ ಒಂದಾಗಿರುವುದರಿಂದ ಆ ಪ್ರಸ್ತಾಪವೇ ಇಲ್ಲಿಲ್ಲ. ಬದಲಾಗಿ ತಮ್ಮ ಮನೆ ದೇವರಾದ ಪೆಟ್ಟಿಗೆ ದೇವರು/ಬಿಲ್ಲು ದೇವರು/ಎತ್ತುಗಳನ್ನು ಗೌರವಿಸಿ ಪೂಜಿಸುವುದು. ಈ ಮೂಲಕವಾಗಿಯೇ ತಮ್ಮ ಮುಂದಿನ ಬದುಕಿಗೆ ಬೇಕಾದ ಬೆಳಕನ್ನು, ಚೈತನ್ಯವನ್ನು ಕೋರುವುದು ಇಲ್ಲಿ ಮುಖ್ಯವಾಗಿರುತ್ತದೆ.

ತಾನು ಬದುಕಿರುವ ಪರಿಸರ, ತಮಗೆ ಬದುಕನ್ನು ಕಟ್ಟಿಕೊಡುವ ಪ್ರಾದೇಶಿಕತೆ ಮತ್ತು ಭೌತಿಕ ಪ್ರಪಂಚ ಮತ್ತು ತನಗೆ ನೈತಿಕ ಬೆಂಬಲವಾಗಿ ನಿಂತ ತನ್ನ ಸಾಂಸ್ಕೃತಿಕ ಜಗತ್ತು ಈ ಎಲ್ಲವುಗಳ ಮೂಲಕ ಒಡಮೂಡುವ ದೇಸಿತನ ಆಯಾ ಬುಡಕಟ್ಟಿನ ಆಚರಣೆಗಳಿಗೆ ಸೈದ್ಧಾಂತಿಕತೆಯನ್ನು ಒದಗಿಸಿಕೊಡುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಮ್ಯಾಸಬೇಡ ಬುಡಕಟ್ಟಿನ ಈ ದೀಪಾವಳಿ ಆಚರಣೆಯಲ್ಲಿ ಈ ದೇಸಿತನವೇ ಒಡಮೂಡಿರುವುದನ್ನು ಕಾಣಬಹುದಾಗಿದೆ.ಆದಿವಾಸಿಗಳ ಧರ‍್ಮಿಕ ಜಗತ್ತಿನಲ್ಲಿ ಸರ‍್ಪಣಾಭಾವ ಮತ್ತು ಪಾರಂಪರಿಕ ಸಂಬಂಧ ಮುಖ್ಯವಾಗಿರುತ್ತದೆ. ಈ ಆಚರಣೆಗಳನ್ನು ಸಮುದಾಯದ ಸಾಂಸ್ಕೃತಿಕ ಅಸ್ಮಿತೆಗಳು ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ1 hour ago

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮಡಿಕೇರಿಯಲ್ಲಿ...

ದಿನದ ಸುದ್ದಿ4 days ago

ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ

ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ...

ದಿನದ ಸುದ್ದಿ1 week ago

ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್‍ಗೆ ರೂ.10 ಪಡೆದ ಶಾಪಿಂಗ್ ಮಾಲ್‍ಗೆ ದಂಡ

ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499...

ದಿನದ ಸುದ್ದಿ1 week ago

ವಿವಿಧ ಜಿಲ್ಲೆಗಳಲ್ಲಿ ಡಾ. ಬಾಬು ಜಗಜೀವನ್ ರಾಮ್ 117ನೇ ಜನ್ಮ ದಿನಾಚರಣೆ

ಸುದ್ದಿದಿನ ಡೆಸ್ಕ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಾ. ಬಾಬು ಜಗಜೀವನ್ ರಾಮ್ ಅವರ 117ನೇ ಜನ್ಮ ದಿನಾಚರಣೆ ಪ್ರಯುಕ್ತ ವಿಧಾನ ಸೌದದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿ...

ದಿನದ ಸುದ್ದಿ1 week ago

ಇಂದು ಚುನಾವಣಾ ಆಯೋಗ ಸಮಾವೇಶ

ಸುದ್ದಿದಿನ ಡೆಸ್ಕ್ : ಕಳೆದ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ 11 ರಾಜ್ಯಗಳ ನಗರ ಪಾಲಿಕೆ ಆಯುಕ್ತರು ಮತ್ತು ಆಯ್ದ ಜಿಲ್ಲಾ ಚುನಾವಣಾ ಅಧಿಕಾರಿಗಳೊಂದಿಗೆ ಕೇಂದ್ರ ಚುನಾವಣಾ...

ದಿನದ ಸುದ್ದಿ1 week ago

ತಂತ್ರಜ್ಞಾನ ಮೋಡಿ : ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ

ಡಾ. ಚಂದ್ರಪ್ಪ ಎಚ್, ಸಹಾಯಕ ಪ್ರಾಧ್ಯಾಪಕರು, ಭೌತವಿಜ್ಞಾನ ವಿಭಾಗ, ಸರ್ಕಾರಿ ವಿಜ್ಞಾನ ಕಾಲೇಜು, ಚಿತ್ರದುರ್ಗ 90ರ ದಶಕದಿಂದೀಚೆಗೆ, ಎಲ್ಲೆಡೆ ಸದ್ದಿಲ್ಲದೇ ಕ್ರಮೇಣ ಒಕ್ಕರಿಸತೊಡಗಿದೆ ಆಧುನಿಕ ಯಾಂತ್ರಿಕೃತ ಬದುಕು....

ದಿನದ ಸುದ್ದಿ1 week ago

ಔಷಧಗಳ ದರ ಗಣನೀಯ ಏರಿಕೆ ಕುರಿತ ಮಾಧ್ಯಮಗಳ ವರದಿ ಸತ್ಯಕ್ಕೆ ದೂರವಾದ ಸಂಗತಿ ; ಕೇಂದ್ರ ಸರ್ಕಾರ ಸ್ಪಷ್ಟನೆ

ಸುದ್ದಿದಿನ ಡೆಸ್ಕ್ : ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವ ವಿವಿಧ ಔಷಧಿಗಳ ದರ ಗಣನೀಯವಾಗಿ ಏರಿಕೆ ಮಾಡಲಾಗಿದೆ ಎಂಬ ಮಾಧ್ಯಮಗಳ ವರದಿ ಸತ್ಯಕ್ಕೆ ದೂರವಾದ ಸಂಗತಿ ಮತ್ತು ಜನರನ್ನು...

ದಿನದ ಸುದ್ದಿ1 week ago

ರಾಜ್ಯದಲ್ಲಿ ಬಿಸಿಲ ತಾಪ ಇನ್ನೂ ಹೆಚ್ಚಾಗಲಿದೆ ; ಹವಾಮಾನ ಇಲಾಖೆ ಮುನ್ಸೂಚನೆ

ಸುದ್ದಿದಿನ ಡೆಸ್ಕ್ : ರಾಜ್ಯದಲ್ಲಿ ಮುಂದಿನ 7 ದಿನಗಳಲ್ಲಿ ಬಿಸಿಲ ತಾಪ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಅವಧಿಯಲ್ಲಿ ಜನರುಕೆಲವು ಮುನ್ನೆಚ್ಚರಿಕೆ...

ದಿನದ ಸುದ್ದಿ1 week ago

ಜಿಲ್ಲೆಯ ರಾಜಕಾರಣದಲ್ಲಿ ನನಗೆ ಅನ್ಯಾಯ; ರಾಜಕೀಯ ಕುತಂತ್ರ ವ್ಯವಸ್ಥೆ ವಿರುದ್ಧ ನನ್ನ ಹೋರಾಟ : ವಿನಯ್ ಕುಮಾರ್

ಸುದ್ದಿದಿನ,ದಾವಣಗೆರೆ : ಜಿಲ್ಲೆಯ ರಾಜಕಾರಣದಲ್ಲಿ ಚೆನ್ನಯ್ಯ ಒಡಿಯರ್ ಅವರಿಗೆ ಆದ ಅನ್ಯಾಯ ನನಗೂ ಆಗಿದೆ. ನನ್ನ ಹೋರಾಟ ನನ್ನ ಸ್ವಾಭಿಮಾನದ ಹೋರಾಟ ಒಬ್ಬ ವ್ಯಕ್ತಿ ಪಕ್ಷದ ವಿರುದ್ಧ...

ದಿನದ ಸುದ್ದಿ1 week ago

ಲೋಕಸಭೆ ಚುನಾವಣೆ; ರಾಜ್ಯದ 14 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಲು ಇಂದು ಕೊನೆ ದಿನ

ಸುದ್ದಿದಿನ ಡೆಸ್ಕ್ : 18ನೇ ಲೋಕಸಭೆ ಸಾರ್ವತ್ರಿಕ ಚುನಾವಣೆಗೆ, ದೇಶಾದ್ಯಂತ ಎರಡನೇ ಹಂತದ 89 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ. ರಾಜ್ಯದಲ್ಲಿ ನಡೆಯುತ್ತಿರುವ ಮೊದಲ...

Trending