ದಿನದ ಸುದ್ದಿ
ತೊಂಬತ್ತರ ದಶಕದ ದುರಂತಗಳು..!
- ಸುರೇಶ ಎನ್ ಶಿಕಾರಿಪುರ
ಇವತ್ತು ವಿಶ್ವ ಗುಬ್ಬಿಗಳ ದಿನಾಚರಣೆ… ಜಗತ್ತಿನಲ್ಲಿ ದಿನಕ್ಕೊಂದು ದಿನಾಚರಣೆ ಇದ್ದೇ ಇರುತ್ತದೆ… ಸಾವಿರಾರು ವರ್ಷ ಕಾಲದಿಂದ ಮನುಷ್ಯನ ಜೊತೆ ಜೊತೆಗೇ ಗುಬ್ಬಿಗಳು ಜೀವಿಸುತ್ತಾ ಬಂದಿವೆ.
ಅವನು ಮನೆ ಕಟ್ಟಿದಲ್ಲೇ ತಾವೂ ಮನೆ ಕಟ್ಟಿ ಅವನ ಸಂಸಾರದ ಜೊತೆಗೇ ತಾವೂ ಸಂಸಾರ ಹೂಡಿ ಪ್ರೇಮ ಪ್ರಣಯ ಸಂಸಾರ ಪಾಠ ಹೇಳುತ್ತ ಜಗತ್ತಿನ ಎಲ್ಲಾ ಜಾನಪದದ ಕತೆ ಕಾವ್ಯ ಮಹಾ ಕಾವ್ಯ ಗಾದೆ ಒಗಟುಗಳಲ್ಲಿ ರೂಪಕ ಉಪಮೆ ಪ್ರತಿಮೆಗಳಾಗಿ ಸ್ಥಾನಪಡೆದು ಮನುಷ್ಯ ಬದುಕಿನ ಅವಿಭಾಜ್ಯ ಅಂಗಗಳಾಗಿ.
ನಮ್ಮ ಮಕ್ಕಳು ಅತ್ತ ಗೋಲಿ ಬುಗುರಿ ಲಗೋರಿ ಆಡುತ್ತಿದ್ದರೆ ಇತ್ತ ಗುಂಪು ಗೂಡಿ ಕುಪ್ಪಳಿಸುತ್ತಾ ಚಿಂವ್ ಚೀಂವ್ ಚಿಟಾಂವ್ ಎಂದು ಗುಬ್ಬಲೆಬ್ಬಿಸಿ ಆಡುತ್ತಾ ಕಸಕಡ್ಡಿ ಕಾಳುಕಡಿ ಹೆಕ್ಕುತ್ತಾ ಬದುಕಿನ ಭಾಗವಾಗಿ ಜೀವಿಸುತ್ತಿದ್ದ ಗುಬ್ಬಿಗಳು ಜಾಗತೀಕರಣ ಪ್ರವೇಷವಾದ ತೊಂಬತ್ತರ ದಶಕದಲ್ಲಿ ಇದ್ದಕ್ಕಿದ್ದಂತೆ ಮಂಗಳ ಮಾಯವಾಗತೊಡಗಿದವು.
ಒಂದೋ ನಾವು ಪಾರಂಪರಿಕ ಮನೆ ಕಟ್ಟಡಗಳ ವಾಸ್ತು ಬದಲಾಯಿಸಿ ಪಾಶ್ಚಾತ್ಯ ಮಾದರಿಯ ತಾರಸಿ ಮನೆ ಬೃಹತ್ ಕಟ್ಟಡಗಳ ನಿರ್ಮಾಣದಲ್ಲಿ ತೊಡಗಿದ್ದು. ಮತ್ತೊಂದು ಮೊಬೈಲ್ ಮತ್ತಿತರೆ ಅಂತರ್ಜಾಲದ ಎಲೆಕ್ಟ್ರಾನಿಕ್ ಅಲೆಗಳು ವಾತಾವರಣದಲ್ಲಿ ಟ್ರಾಫಿಕ್ ಜಾಮ್ ಮಾಡಲು ಆರಂಭಿಸಿದ್ದು.
ಇದೆಲ್ಲದಕ್ಕಿಂತ ಮುಖ್ಯವಾದ ಮತ್ತೊಂದು ಸಂಗತಿ ಕೃಷಿ ಸಂಸ್ಕೃತಿ ಮಾರ್ಪಾಡಾಗಿ ಕಾಳು ಕಡಿ ಒಕ್ಕುವ ಪದ್ಧತಿಯಲ್ಲಿ ಬದಲಾವಣೆ ಕಣಜಗಳಿಲ್ಲದ ಮನೆಗಳು, ಕಮರ್ಷಿಯಲ್ ಬೆಳೆಗಳು ಇವೆಲ್ಲದರ ಜೊತೆಗೆ ಕಾಳು ಕಡಿ ಬಿದ್ದಿರುತ್ತಿದ್ದ ಮನೆಯ ಮುಂದಿನ ಕಸದ ಗುಡ್ಡೆಗೆ ಗುಳಿಗೆ ಟಾನಿಕ್ಕು ಸಿರಪ್ ಪೇಷ್ಟ್ ಗಾಜಿನ ಚೂರು ಬೀಳ ತೊಡಗಿದುದು.
ನಾವು ಬಳಸುವ ಮೈ ಸೋಪು ಶಾಂಪು ಬಟ್ಟೆ ಸೋಪು ಬ್ಲೀಚಿಂಗ್ ಪೌಡರ್, ಪೆನೋಯಿಲ್, ಮನೆಗಳಿಗೆ ಸಿಪಡಿಸುವ ಬಣ್ಣ, ಚರಂಡಿಗೆ ಹಾಕುತ್ತಿದ್ದ ಡಿಡಿಟಿ ಪೌಡರ್ ಎಲ್ಲವೂ ಬೆರೆತ ನೀರನ್ನೇ ಅವು ಕುಡಿಯಬೇಕಾದುದರಿಂದ ಅವುಗಳ ಜೀವದ ಮೇಲೆ ನೂರಾರು ಬಗೆಯ ಮಾರಣಾಂತಿಕ ಪರಿಣಾಮಗಳಾಗಿ ಅವುಗಳ ಸಂತತಿ ದಿಡೀರನೆ ಇಳಿಮುಖವಾಯಿತು.
ಬಹುಷಃ ಯಾವ ಪ್ರಾಣಿ ಅಥವಾ ಪಕ್ಷಿಯ ಜಗತ್ತಿನಿಂದ ಕಣ್ಮರೆಯಾದಾಗಲೂ ಜಗತ್ತು ಅಷ್ಟೊಂದು ಕಳವಳಗೊಂಡಿತ್ತೋ ಇಲ್ಲವೋ ಕಾಣೆ. ಗುಬ್ಬಿಗಳು ಕಣ್ಮರೆಯಾಗ ತೊಡಗಿದ ಕೂಡಲೇ ಎಲ್ಲೆಡೆಯಲ್ಲೂ ಜನ ಮನ ಮಿಡಿಯಿತು. ಗುಬ್ಬಿಗಳ ರಕ್ಷಣೆಗಾಗಿ ಪರಿಸರವಾದಿಗಳು ಪರಿಸರ ಪ್ರೇಮಿಗಳು ಪಕ್ಷಿ ಪ್ರೇಮಿಗಳು ಛಾಯಾಗ್ರಾಹಕರು ಎಲ್ಲರೂ ದನಿ ಎತ್ತಿದರು. ಹೋರಾಟ ಜರುಗಿದವು, ಲೇಖನಗಳು ಸಾಕ್ಷ್ಯಚಿತ್ರಗಳು ಚಿಂತನಮಂಥನಗಳು ರಾಷ್ಟ್ರೀಯ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಜರುಗಿದವು.
ಅನೇಕ ಸಂಸ್ಥೆಗಳು ಸಚಿವಾಲಯಗಳು ಗುಬ್ಬಿಗಳ ದಿಢೀರ್ ಕಣ್ಮರೆಯ ಕುರಿತು ಸಮೀಕ್ಷೆ ಸಂಶೋಧನೆ ಅಧ್ಯಯನಗಳ ಮೂಲಕ ವರದಿಗಳನ್ನು ಸಿದ್ದಪಡಿಸಿದರು. ಹೀಗೆ ಜಗತ್ತಿನ ದನಿ ಒಂದಾಗಿ ಗುಬ್ಬಿಗಳ ರಕ್ಷಣೆಗೆ ಮುಂದಾಯಿತು. ಅದರ ಪರಿಣಾಮವೇ ಪ್ರತಿವರ್ಷ ಗುಬ್ಬಿಗಳ ರಕ್ಷಣೆಗಾಗಿ ಜಗತ್ತಿಗೆ ಅರಿವು ಮೂಡಿಸಲು ಮಾರ್ಚ್ 20 ವಿಶ್ವ ಗುಬ್ಬಿಗಳ ದಿನಾಚರಣೆ ಆಚರಿಸಲಾಗುತ್ತಿದೆ.
ಗುಬ್ಬಿಗಳು ಮಾತ್ರವಲ್ಲ ತೊಂಬತ್ತರ ದಶಕ ಅನೇಕ ಜೀವಿಗಳನ್ನು ನುಂಗಿ ನೀರು ಕುಡಿದ ದಶಕ. ಅದು ನಿಲ್ಲದೇ ಕಾಡ್ಗಿಚ್ಚಿನಂತೆ ಮುಂದುವರೆದೇ ಇದೆ. ಪರಿಸರದ ಜಾಡಮಾಲಿಗಳು ಎಂದೇ ಕರೆಯಲಾಗುವ ರಣಹದ್ದು (Indian valture)ಗಳೂ ಡೈಕ್ಲೊಫೆನಾಕ್ ಸೋಡಿಯಂ ಎಂಬ ಲಸಿಕೆ ಚುಚ್ಚಿದ್ದ ಸತ್ತ ದನಗಳನ್ನು ತಿಂದು ಈಗ ಎಲ್ಲೆಲ್ಲೂ ಕಾಣಸಿಗದಂತೆ ನಾಶವಾದವು.
ರಾಮನಗರ ಜಿಲ್ಲೆಯಲ್ಲಿ ಒಂದು ರಣಹದ್ದು ಧಾಮವಿದೆ ಬಿಟ್ಟರೆ ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ಬೆರಳೆಣಿಕೆಯ ರಣಹದ್ದುಗಳು ಕಾಣಸಿಗುತ್ತವೆ. ಸತ್ತವರಿಗೆ ಮೂರು ದಿನದ ಕೂಳು ಹಾಕಿದರೆ ಬಂದು ಕೂಳು ತಿನ್ನಲು ಕಾಗೆಗಳಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಕಾಗೆಗಳ ಬದಲಿಗೆ ಉಣ್ಣೆಗೊರವಗಳು ಕೂಳು ಮುಟ್ಟಿದರೆ ತೃಪ್ತಿಪಟ್ಟುಕೊಳ್ಳಬೇಕಾದ ಸ್ಥಿತಿ ಬಂದಿದೆ. ಅಷ್ಟೇ ಅಲ್ಲ ರಣಹದ್ದುಗಳು ಕಣ್ಮರೆಯಾದದ್ದರಿಂದ ಪಾರ್ಸಿಗಳು ತಮ್ಮ ಶವಸಂಸ್ಕಾರ ಪದ್ಧತಿಯನ್ನೇ ಬದಲಾಯಿಸಿಕೊಳ್ಳಬೇಕಾದ ಸ್ಥಿತಿ ಬಂದೊದಗಿದೆ.
ಇದನ್ನೂ ಓದಿ | ಮಾರ್ಚ್ 20 ಗುಬ್ಬಿ ದಿನ ವಿಶೇಷ |ಚೀಂವ್ ಚೀಂವ್ ಗುಬ್ಬಚ್ಚಿಯ ನೆನೆಯುವ ಸಮಯ
ಶವಸಂಸ್ಕಾರದ ಬಗ್ಗೆ ಅವರಲ್ಲಿ ಗಂಭೀರ ಚಿಂತನೆ ನಡೆದಿದೆ. ಹೀಗೆ ನಾವು ಬದುಕುತ್ತಿರುವ ಈ ಕಾಲಘಟ್ಟ ತುಂಬ ವಿನಾಶಕಾರಿಯಾದುದು. ನೀರು ಗಾಳಿ ಆಹಾರ ಮಣ್ಣು ಎಲ್ಲದರಲ್ಲೂ ರಾಸಾಯನಿಕ ತುಂಬಿದ್ದರಿಂದಲೋ ಏನೋ ನಮ್ಮ ಮೈಯ್ಯಿಗೂ ಆ ವಿಷ ಸೇರಿ ಮನಸ್ಸೂ ವಿಷವೇ ಆಗಿ ಎಲ್ಲರೂ ವಿಷಕಂಠರಲ್ಲ, ವಿಷಘಾತುಕರಾಗಿದ್ದೇವೆ.
ದೇವರು ಧರ್ಮದಾಚೆಗೆ ನಾವು ಬದುಕಲು ಬೇಕಾದ ನಮ್ಮ ಹೊರತೂ ಇರುವ ಅಗಾಧ ಜೀವಜಗತ್ತನ್ನು ಇನ್ನಿಲ್ಲದಂತೆ ಅಲಕ್ಷಿಸಿದ್ದೇವೆ. ಹಕ್ಕಿಗಳಿಗಾಗಿ ಮನೆಯ ಮಹಡಿಯ ಮೇಲೆ ಒಂದಿಷ್ಟು ನೀರು ಒಂದಷ್ಟು ಕಾಳುಕಡಿ ಇಡಲಾರದ ಮಟ್ಟಿಗೆ, ಮನೆಯ ಸುತ್ತಮುತ್ತ ಸ್ವಚ್ಚತೆಯನ್ನು ಕಾಪಾಡಿಕೊಳ್ಳಲಾರದ ಮಟ್ಟಿಗೆ ಬೇಜವಾಬ್ದಾರಿಗಳಾಗಿದ್ದೇವೆ.
ನಾವು ತಲೆ ಎತ್ತಿ ನೋಡಿದರೆ ಆಕಾಶದ ನೇಲಿಯಲ್ಲಿ ಅರಳೆ ತುಪ್ಪಳದಂತಹಾ ಬಿಳಿಮೋಡದ ತಳದಲ್ಲಿ ಗಿರಕಿಹೊಡೆಯುತ್ತಿದ್ದ ರಣಹದ್ದು ಒಂದಗುಳ ಕಂಡರೆ ತನ್ನ ಬಳಗವನೆಲ್ಲವ ಕರೆದು ಶೂನ್ಯಸಂಪಾದನೆಯ ಪಾಠ ಹೇಳಿ ಸಮಾನವಾಗಿ ಹಂಚಿಕೊಂಡು ತಿನ್ನಿರಿ ಎಂಬ ಸಮತಾವಾದದ ಪಾಠ ಒಗ್ಗಟ್ಟಿನ ಪಾಠ ತನ್ನವರು ನೊಂದರೆ ಸತ್ತರೆ ನಾವು ಹೇಗೆ ಮಿಡಿಯಬೇಕೆಂಬ ಸಂಬಂಧದ ಪಾಠ ಹೇಳಿಕೊಡುತ್ತಿದ್ದ ಕಾಗೆಗಳು ಮರೆಯಾಗುತ್ತಿವೆ.
ನಮ್ಮನ್ನು ನಂಬುತ್ತಾ ನಮ್ಮ ಮನೆಯ ಮಕ್ಕಳೇ ಆಗಿ ನಮ್ಮೊಡನೆ ಬಾಳುತ್ತಿದ್ದ ಗುಬಚ್ಚಿಗಳ ಬದುಕು ಅಪ್ಪಚ್ಚಿಯಾಗಿದೆ. ಇನ್ನೇನುಳಿಯಲಿದೆ ಈ ಜಗತ್ತಿನಲ್ಲಿ. ಮನುಷ್ಯತ್ವವೇ ಮರೆಯಾಗುತ್ತಿರುವಾಗ…
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ
ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.
ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.
ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಡಿಕೇರಿಯಲ್ಲಿ ನಡೆದ ಜನಧ್ವನಿ-2 ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದೆ.
ಸಂವಿಧಾನಕ್ಕೆ ಅಪಾಯ ಎಂದರೆ ದೇಶದ ಮಹಿಳೆಯರು, ಬಡವರು, ಮಧ್ಯಮ ವರ್ಗದವರು, ಶೂದ್ರರು, ಶ್ರಮಿಕರ ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ.
ಭಾರತದಲ್ಲಿ ಪ್ರಜಾತಂತ್ರ ಅಪಾಯದಲ್ಲಿದೆ. ಇದನ್ನು ಉಳಿಸುವ ಅನಿವಾರ್ಯತೆ ನಮ್ಮೆಲ್ಲರ ಮುಂದಿದೆ. ಈ ಲೋಕಸಭಾ ಚುನಾವಣೆ ನಮಗೊಂದು… pic.twitter.com/UapeRxBcZP
— Siddaramaiah (@siddaramaiah) April 14, 2024
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ
ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ 82.01 ರಷ್ಟು ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.
ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಏಪ್ರಿಲ್ 10 ರಂದು ಫಲಿತಾಂಶ ಪ್ರಕಟವಾಗಿದ್ದು ಹೆಚ್ಚಿನ ವಿವರಗಳು ಬರಬೇಕಾಗಿದೆ. ಈ ವರ್ಷ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು 19644 ರೆಗ್ಯುಲರ್, 422 ಖಾಸಗಿ ಸೇರಿ 20066 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಇದರಲ್ಲಿ 15904 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 80.96 ರಷ್ಟು ಫಲಿತಾಂಶ ಪಡೆದಿದ್ದಾರೆ.
ಕಳೆದ ವರ್ಷ ಶೇ 75.72 ರಷ್ಟು ಫಲಿತಾಂಶ ಬಂದಿತ್ತು, ಈ ವರ್ಷ ಶೇ 5.24 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಜಿಲ್ಲೆಗೆ ಟಾಪ್ ಬಂದವರಲ್ಲಿ ಕಲಾ ವಿಭಾಗದಲ್ಲಿ ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಮಹಿಳಾ ಪದವಿ ಪೂರ್ವ ಕಾಲೇಜಿನ ಹೀನಬಾನು ಪಿ.ಕೆ. 591 ಅಂಕ ಪಡೆದು ಶೇ 98.5, ವಾಣಿಜ್ಯ; ದಾವಣಗೆರೆ ತಾ; ಗೋಪನಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೇಷ್ಮಾ ಬಾನು 589 ಅಂಕ ಪಡೆದು ಶೇ 98.16 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಲೋಕಿಕೆರೆ ರಸ್ತೆಯಲ್ಲಿನ ಸರ್ಎಂವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೊಹಮ್ಮದ್ ಸುಹೇಲ್, ಅಮೃತ ದೊಡ್ಡ ಬಸಪ್ಪನವರ್, ಅನನ್ಯ ಹೆಚ್.ಎಸ್, ಆಕಾಶ್ ಸಿ.ಪಾಟೀಲ್ ಇವರು 593 ಅಂಕ ಶೇ 98.83 ರಷ್ಟು ಸಮನಾದ ಫಲಿತಾಂಶ ಹಂಚಿಕೊಂಡಿದ್ದಾರೆ ಎಂದರು.
ವಿಭಾಗವಾರು ಫಲಿತಾಂಶ; ಕಲಾ ವಿಭಾಗದಲ್ಲಿ ಶೇ 57.83 ರಷ್ಟು ಫಲಿತಾಂಶ ಬಂದಿದ್ದು ಇದರಲ್ಲಿ ಗಂಡು ಶೇ 45, ಹೆಣ್ಣು ಶೇ 66.46 ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 76.22 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 65.5, ಹೆಣ್ಣು ಶೇ 80.8, ವಿಜ್ಞಾನ ವಿಭಾಗದಲ್ಲಿ ಶೇ 91.13 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 91.39 ಹಾಗೂ ಹೆಣ್ಣು ಶೇ 88.69 ರಷ್ಟು ಫಲಿತಾಂಶ ಬಂದಿದೆ.
ನಗರಕ್ಕಿಂತ ಗ್ರಾಮೀಣರ ಮೇಲುಗೈ; ಫಲಿತಾಂಶದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಶೇ 1.1 ರಷ್ಟು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 73.65 ಗಂಡು, ಶೇ 84.6 ಹೆಣ್ಣು ಉತ್ತೀರ್ಣರಾದರೆ ನಗರ ಪ್ರದೇಶದ ಒಟ್ಟು ಫಲಿತಾಂಶ ಶೇ 80.75 ರಲ್ಲಿ ಗಂಡು ಶೇ 74.41, ಹೆಣ್ಣು ಶೇ 81.37 ರಷ್ಟು ಫಲಿತಾಂಶ ಪಡೆದಿದ್ದಾರೆ.
ಶೇ 100 ರಷ್ಟು ಫಲಿತಾಂಶ ಪಡೆದ ಶಾಲೆಗಳು; ದಾವಣಗೆರೆ ಅಂಜುಂ ಪದವಿ ಪೂರ್ವ ಕಾಲೇಜು, ಲೇಬರ್ ಕಾಲೋನಿ, ಜೈನ್ ಟ್ರಿನಿಟಿ ಪದವಿ ಪೂರ್ವ ಕಾಲೇಜು, ಅನ್ಮೋಲ್ ಪದವಿ ಪೂರ್ವ ಕಾಲೇಜು, ಶ್ರೀ ಗೀತಂ ಪದವಿ ಪೂರ್ವ ಕಾಲೇಜು, ದಾವಣಗೆರೆ ಇವು ಶೇ 100 ರಷ್ಟು ಫಲಿತಾಂಶ ಪಡೆದ ಕಾಲೇಜುಗಳಾಗಿವೆ.
ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂರ್, ಶಾಲಾ ಶಿಕ್ಷಣ, ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್ಗೆ ರೂ.10 ಪಡೆದ ಶಾಪಿಂಗ್ ಮಾಲ್ಗೆ ದಂಡ
ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499 ಪಾವತಿಸಿ, ಡೆನಿವಾ ಪ್ಯಾಂಟ್ ಖರೀದಿಸಿದರು. ಈ ವೇಳೆಯಲ್ಲಿ ಇಲ್ಲಿಯೇ ಲೈಫ್ ಸ್ಟೈಲ್ ಇಂಟರ್ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್ ಮಾರಾಟದ ವೇಳೆ ಹೆಚ್ಚುವರಿಯಾಗಿ ರೂ.10/- ಪೇಪರ್ ಬ್ಯಾಗ್ಗೆ ಪಡೆಯಲಾಯಿತು.
ಗ್ರಾಹಕರಾದ ಆರ್. ಬಸವರಾಜ್ ಇವರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ದಾಖಲಿಸಿ ವಾಣಿಜ್ಯ ಸಂಸ್ಥೆ ವಿರುದ್ದ ರೂ.50,000 ಮಾನಸಿಕ ಕಿರುಕುಳ ಹಾಗೂ ದೂರು ದಾಖಲಿಸಲು ಖರ್ಚು ಮಾಡಿದ ಮೊ ರೂ.10,000 ಗಳನ್ನು ಪಾವತಿಸುವಂತೆ ದೂರನ್ನು ದಾಖಲಿಸಿದರು.
ವಾಣಿಜ್ಯ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದು ಈ ಸಂಸ್ಥೆ ವಕೀಲರ ಮುಖಾಂತರ ಹಾಜರಾಗಿ ಬ್ಯಾಗ್ಗೆ ಹೆಚ್ಚುವರಿಯಾಗಿ ಪಡೆದ ಹಣಕ್ಕೆ ಸಮರ್ಥಿಸಿಕೊಂಡಿತ್ತು. ಆದರೆ ಗ್ರಾಹಕರ ಆಯೋಗ ಈ ಮೊದಲು ರಾಷ್ಟ್ರೀಯ ಗ್ರಾಹಕರ ಆಯೋಗ ಬಿಗ್ ಬಜಾರ್ ವಿರುದ್ಧ ಸಾಯಲ್ ದಾವ ಪ್ರಕರಣದ ನ್ಯಾಯ ನಿರ್ಣಯದ ತೀರ್ಪಿನ ಅನುಗುಣವಾಗಿ ವಾಣಿಜ್ಯ ಸಂಸ್ಥೆಗಳು ಕ್ಯಾರಿ ಬ್ಯಾಗ್ಗಳಿಗೆ ಹೆಚ್ಚಿನ ಹಣವನ್ನು ಪಡೆಯುವಂತಿಲ್ಲ ಎಂಬ ತೀರ್ಪನ್ನು ಉಲ್ಲೇಖಿಸಿ ಹೆಚ್ಚುವರಿಯಾಗಿ ರೂ.10 ಪಡೆದ ಸಂಸ್ಥೆಯ ಕ್ರಮವು ಗ್ರಾಹಕರ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅನುಚಿತ ವ್ಯಾಪಾರ ಪದ್ದತಿಯೆಂದು ಪರಿಗಣಿಸಿ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಶ್ರೀಮತಿ ಬಿ.ಯು. ಗೀತಾ ಇವರು ವಾಣಿಜ್ಯ ಸಂಸ್ಥೆಗೆ ರೂ.7000 ದಂಡವಿದಿಸಿ ಆದೇಶಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243