Connect with us

ನೆಲದನಿ

ನುಡಿಯ ಒಡಲು – 22 | ವಚನ ಸಾಹಿತ್ಯ : ನುಡಿಯೊಳಗಾಗಿ ನಡೆ

Published

on

  • ಡಾ. ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ವಚನ ಸಾಹಿತ್ಯ ಕುರಿತು ಎಷ್ಟೋ ಸಾವಿರ ಪುಟಗಳ ಬರಹ ಈಗಾಗಲೇ ಬಂದಿದೆ. ಆ ಎಲ್ಲ ಬರಹವನ್ನು ಈಗ ಯಾವುದೇ ಬಗೆಯಲ್ಲಿ ಮತ್ತೆ ಇಲ್ಲಿ ಚರ್ಚಿಸುವ ಇರಾದೆ ನನ್ನದಲ್ಲ. ಇನ್ನೂ ಅದಕ್ಕೆ ಬದಲಾಗಿ ಏನೆಲ್ಲ ಬರೆಯಲು ಇಲ್ಲಿ ಅವಕಾಶವಿದೆ ಎಂಬುದನ್ನು ಮಾತ್ರ ಸೂಚಿಸಲು ಈ ಮಾತನ್ನು ಹೇಳಲಾಗಿದೆ. ಅಂದರೆ ಸಂಸ್ಕೃತಿಯೊಂದನ್ನು ಕುರಿತ ಇಲ್ಲವೇ ಆಯಾ ಸಂಸ್ಕೃತಿಯೊಳಗೆ ನಡೆದು ಹೋಗಿರುವ ಚಳವಳಿ, ಹೋರಾಟ, ಸಂಘರ್ಷಗಳನ್ನು ಕುರಿತು ಮತ್ತೆ ಮತ್ತೆ ಚಿಂತಿಸುವ ಜರೂರಿನ ಬಗೆಗೆ ವಾದಗಳು ಮುಂಚೂಣೆಗೆ ಬರುತ್ತವೆ.

ಇದಕ್ಕೆ ಬಲವಾದ ಕಾರಣಗಳಿರುತ್ತವೆ. ಅವುಗಳೆಂದರೆ, ಇಂತಹ ಚಳವಳಿಗಳು ಆಯಾ ಸಮುದಾಯಗಳ ಮೇಲೆ ಬೀರಿರುವ ಪರಿಣಾಮ, ಅದಕ್ಕೆ ಸಿಕ್ಕಿರುವ ಸಾಂಸ್ಕೃತಿಕ ಮಹತ್ವ, ಅದರಿಂದ ರೂಪುಗೊಳ್ಳುವ ಯಜಮಾನಿಕೆಯ ಪರ ಹಾಗೂ ವಿರೋಧ ನೆಲೆಗಳು ಎಂತಹವು ಎಂಬಿತ್ಯಾದಿ ಸಂಗತಿಗಳನ್ನು ಚರ್ಚಿಸಬೇಕಾಗುತ್ತದೆ. ಆದರೆ ಇಂತಹ ಚರ್ಚೆಗೆ ಯಾವುದೇ ರೀತಿಯ ಕೊನೆಯಿರುವುದಿಲ್ಲ ಎಂಬುದು ಮಾತ್ರ ಗಮನಾರ್ಹ. ಆದರೆ ಯಾವ ನೆಲೆಯಿಂದ? ಏನನ್ನು? ಯಾರಿಗಾಗಿ? ಇಂತಹ ಚರ್ಚೆಗಳನ್ನು ಬೆಳಸಬೇಕು ಎಂಬ ಕೇಳ್ವಿಯನ್ನು ಎದುರಿಗಿಟ್ಟುಕೊಂಡೇ ಈ ವಚನ ಸಾಹಿತ್ಯದ ಬಗೆಗೆ ಯೋಚಿಸಬೇಕಾಗಿದೆ. ಆದರೆ ಇದೇ ಸನ್ನಿವೇಶದಲ್ಲಿ ಈ ವಚನ ಚಳವಳಿಯು ಮಂಡಿಸುತ್ತಿರುವ ತಿಳಿವು ಎಂತಹದು ಎಂಬುದನ್ನು ಅರಿಯಲು ನಾವು ಅನುಸರಿಸುವ ವಿಧಾನಗಳು ಯಾವವು ಎಂಬುದನ್ನೂ ಈಗಲೇ ತೀರ್ಮಾನಿಸುವ ಅಗತ್ಯವಿದೆ.

ಇಂತಹ ವಿಧಾನಗಳು ಅನುಭವ ಹಾಗೂ ನುಡಿಯೊಳಗಿನ ನಡೆಗಳ ನಡುವಣ ನಂಟನ್ನು ಹೇಗೆ ರೂಪಿಸುತ್ತವೆ ಎಂಬುದನ್ನು ನೆಮ್ಮಿಕೊಂಡಿರುತ್ತವೆ.
ನುಡಿಯೊಳಗೆಯೇ ಸಂಸ್ಕೃತಿಗಳ ಚಹರೆಗಳು ಹೇಗೆ ಮೈಪಡೆದಿರುತ್ತವೆ. ಹಾಗೂ ಅವುಗಳು ನುಡಿಯ ಯಾವ ಆಯಾಮದಿಂದ ಇಂತಹವೊಂದು ನೆಲೆಯನ್ನು ತಲುಪಿರುತ್ತವೆ.

ಸಂಸ್ಕೃತಿಗಳು ಈಗಾಗಲೇ ಮೈಗೂಡಿಸಿಕೊಂಡಿರುವ ನಿಗದಿತ ಆಲೋಚನೆಯ ಮಾದರಿಗಳನ್ನು ಒಡೆದು ಕಟ್ಟಲು ಮತ್ತು ಅಂತಹ ಮಾದರಿಗಳಲ್ಲಿ ಸಾಂಸ್ಕೃತಿಕ ಪಲ್ಲಟವನ್ನುಂಟು ಮಾಡಲು, ಆಯಾ ಸಾಂಸ್ಕೃತಿಕ ಸಮೂಹಗಳನ್ನು ಪ್ರತಿನಿಧಿಸುವ ನುಡಿಯೊಂದು ತನ್ನೊಳಗೆಯೇ ಏನೆಲ್ಲ ನಡೆಗಳನ್ನು ನೆಲೆಗೊಳಿಸಬೇಕಾಗುತ್ತದೆ ಎಂಬುದನ್ನು ಅರಿಯಬೇಕಾಗಿರುವುದು ಇವತ್ತು ಅತ್ಯಂತ ಮಹತ್ವದ ಸಂಗತಿಯಾಗಿದೆ.

ಇಂತಹ ನಡೆಗಳು ಆಯಾ ಸಮುದಾಯಗಳ ಮೂಲ ತತ್ವಗಳನ್ನೇ ಬದಲಾಯಿಸುವ ಬಗೆಗಳಾಗಿರುತ್ತವೋ? ಇಲ್ಲವೇ ಅಂತಹ ಮೂಲತತ್ವಗಳಿಗೆ ಬದಲಿಯಾದ ತತ್ವಗಳನ್ನು ರೂಪಿಸುವ ಇರಾದೆಯನ್ನು ಹೊಂದಿರುತ್ತವೋ? ಎಂಬ ಮೆಥಾಡಾಲಜಿಯ ಇಕ್ಕಟ್ಟುಗಳನ್ನು ಕುರಿತು ಚರ್ಚಿಸಬೇಕಾಗುತ್ತದೆ. ಏಕೆಂದರೆ ಈ ಬದಲಾವಣೆ ಕೇವಲ ನುಡಿ ನಿರೂಪಣೆಗಳಲ್ಲಿ ಉಂಟಾಗುವ ಬದಲಾವಣೆ ಮಾತ್ರವಾಗದೇ, ಆಯಾ ಸಮೂಹಗಳ ಗ್ರಹಿಕೆ ಹಾಗೂ ಅಭಿವ್ಯಕ್ತಿಯ ಮಾದರಿಗಳನ್ನು ಹೊಸದಾಗಿ ಕಟ್ಟುವ ನಿಲುವುಗಳೇ ಆಗಿರುತ್ತವೆಂದು ಹೇಳಬೇಕಾಗುತ್ತದೆ.

ಕನ್ನಡ ಸಾಂಸ್ಕೃತಿಕ ಪರಂಪರೆಯಲ್ಲಿ ವಚನ ಸಾಹಿತ್ಯಕ್ಕೆ ಒಂದು ಹಿರಿಮೆಯ ಜಾಗವನ್ನು ಕೊಡಲಾಗಿದೆ. ಇದಕ್ಕೆ ಸಾಕಷ್ಟು ಕಾರಣಗಳಿವೆ. ಇಂತಹ ಕಾರಣಗಳನ್ನು ಕೇವಲ ಜಾತಿ, ಧರ್ಮ, ಸಾಮಾಜಿಕ ಸಮಾನತೆ, ಮಾತಿನ ಸ್ವಾತಂತ್ರ್ಯ, ಲಿಂಗ ಸಮಾನತೆಗೆ ಪೂರಕವಾದ ಭಾಷಿಕ ನಿರೂಪಣೆಗಳ ಆಧಾರದ ಮೇಲೆ ಇಲ್ಲವೇ ಎಷ್ಟು ಪ್ರತಿಶತದಲ್ಲಿ ಇಂತಹ ಸಂಗತಿಗಳು ವಚನ ಸಾಹಿತ್ಯದಲ್ಲಿ ಸಿಗುತ್ತವೆ ಅನ್ನುವ ಕಾರಣಕ್ಕೆ ಮಾತ್ರ ಇವತ್ತಿನ ಚರ್ಚೆಗಳನ್ನು ಸೀಮಿತಗೊಳಿ ನೋಡಲು ಸಾಧ್ಯವಿಲ್ಲ. ವಚನ ಸಾಹಿತ್ಯ ಆಂದೋಲನದ ಒಟ್ಟು ಕ್ರಿಯಾವರ್ತುಲದಲ್ಲಿ ಏನೆಲ್ಲ ಅಜೆಂಡಗಳು ಅಡಕವಾಗಿದ್ದವು ಅನ್ನುವ ಸಂಗತಿಯನ್ನೇ ಈ ಚರ್ಚೆಗಳು ಮರೆಮಾಚುತ್ತವೆ. ಹಾಗೂ ವಚನ ಚಳವಳಿ ಎಷ್ಟರಮಟ್ಟಿಗೆ ಸೋಲು ಇಲ್ಲವೇ ಗೆಲವು ಕಂಡಿದೆ ಎನ್ನುವ ಕಾರಣಕ್ಕಾಗಿಯೂ ವಚನ ಚಳವಳಿಗೆ ಈಗಾಗಲೇ ಕನ್ನಡ ಪರಂಪರೆಯಲ್ಲಿ ಸಿಕ್ಕಿರುವ ಈ ಜಾಗವನ್ನು ಯಾರಿಂದಲೂ ಕದಲಿಸಲು ಆಗುವುದಿಲ್ಲ.

ಏಕೆಂದರೆ ವಚನ ಸಾಹಿತ್ಯ ಪರಂಪರೆ ಪೂರ್ವವಾಸನೆಯ ಜಾಡನ್ನು ಬದಲಿಸಿಕೊಂಡು, ನಡೆ-ನುಡಿಗಳ ನಡುವಣ ನೈತಿಕತೆಯ ಹೊಂದಾಣಿಕೆಯನ್ನು ಮರುಮಂಡಿಸುವ ಅಭಿವ್ಯಕ್ತಿಯೇ ಈ ವಚನ ಸಾಹಿತ್ಯದ ಉದ್ದೇಶವಾಗಿದೆ.

ವಚನ, ಮಾತು ಹಾಗೂ ಭಾಷೆ ಈ ಮೂರು ಅರಿಮೆ ಪದಗಳು ಕನ್ನಡ ಸಂಸ್ಕೃತಿಯೊಳಗೆ ಒಂದು ಹೆಚ್ಚುಗಾರಿಕೆಯನ್ನು ಪಡೆದಿವೆ. ಅಂದರೆ ಈ ಮೂರು ಪದಗಳು ವ್ಯಕ್ತಿಗಳಿಗೆ ಇರುವ ಉತ್ತರದಾಯಿತ್ವ ಮತ್ತು ಹೊಣೆಗಾರಿಕೆಯನ್ನು ಸೂಚಿಸುತ್ತವೆ. ಪ್ರತಿ ಸಮುದಾಯದ ತಳಹದಿಯಾಗಿರುವುದು ಮಾತು. ಮಾತಿನ ನಂಬಿಕೆಗೆ ಮತ್ತು ಹೊಣೆಗಾರಿಕೆಗೆ ಬಿಕ್ಕಟ್ಟು ಎದುರಾದರೆ, ಇಡೀ ಸಾಮಾಜಿಕತೆ, ನೈತಿಕತೆ ಹಾಗೂ ತಾತ್ವಿಕತೆಗಳ ವಿನ್ಯಾಸಗಳ ಬಗೆಗೆ ಅಪನಂಬಿಕೆ ಮೂಡುತ್ತದೆ.

ಮಾತುಗಳು ಅಪಾರ್ಥದ ಮೂಲಗಳಾದರೆ ಇಡೀ ಬದುಕಿನ ಮುನ್ನೋಟವೇ ದಾರಿ ತಪ್ಪುತ್ತದೆ. ಹಾಗಾಗಿ ಮಾತನ್ನು ಒಂದು ಅಸ್ತ್ರವನ್ನಾಗಿ, ತಿಳಿವಿನ ನೆಲೆಯಾಗಿ ಮತ್ತು ಸಾಮಾಜಿಕ-ರಾಜಕೀಯ ಮೇಲಾಟದ ಮಾಧ್ಯಮವನ್ನಾಗಿ ರೂಪಿಸಲಾಗಿದೆ. ಮಾತನ್ನು ಶಾಪವನ್ನಾಗಿಯೂ, ಮಂತ್ರವನ್ನಾಗಿಯೂ ಬಳಸುತ್ತಲೇ ಬಂದಿದ್ದೇವೆ. ಹಾಗೂ ತಿಳುವಳಿಕೆಯ ಅನುಭವ ಮತ್ತು ಅನುಭವದ ತಿಳುವಳಿಕೆ ನಮಗೆ ದೊರಕುವುದು ಕೂಡ ಮಾತಿನ ಮೂಲಕವೇ.

ಅನುಭವ ಮತ್ತು ತಿಳಿವು ಎರಡೂ ಒಟ್ಟಿಗೆ ಮೂಡುವುದಿಲ್ಲ. ಒಂದು ಇನ್ನೊಂದನ್ನು ಅರಿಯುವುದಕ್ಕೆ ಭಾಷೆ ಹೇಗೆ ಪೂರಕವಾಗಿ ಕೆಲಸ ಮಾಡುತ್ತದೆ ಎನ್ನುವುದು ವಿಶೇಷ. ಆಲೋಚನೆಯ ಇಡೀ ಸ್ವರೂಪವು ಒಡಮೂಡುವುದು ಕೂಡ ನುಡಿಯೊಳಗೆ ಮಾತ್ರ. ಪ್ರತಿಯೊಂದು ಸಂಸ್ಕೃತಿಯು ವಿಕಾಸಗೊಳ್ಳುವಾಗ ತನ್ನದೇ ನುಡಿಯೊಂದನ್ನು ಗುರುತಿಸಿಕೊಳ್ಳುತ್ತದೆ. ಈ ನುಡಿಯ ಮೂಲಕವೇ ತನ್ನ ಬದುಕಿನ ಅಂತಸತ್ವವನ್ನು, ಬದುಕಿನ ಸಾಕ್ಷಾತ್ಕಾರವನ್ನು ಕಂಡರಿಸುವ ದಾರಿಗಳನ್ನು ಕಂಡುಕೊಳ್ಳುತ್ತದೆ.

ಪರಂಪರೆ ರೂಪುಗೊಳ್ಳುವಾಗ ಸಾಂಸ್ಕೃತಿಕ ಚಹರೆಗಳು ಮೈದಾಳುತ್ತವೆ. ಈ ಚಹರೆಗಳು ಬೇರೆ ಬೇರೆ ಸ್ವರೂಪದಲ್ಲಿ ಗೋಚರಿಸುತ್ತವೆ. ವಚನ ಸಾಹಿತ್ಯ ಕನ್ನಡನುಡಿ ಸಂಸ್ಕೃತಿಯನ್ನು ಪ್ರತಿನಿಧಿಸುವ ಚಹರೆಯಾಗಿದೆ. ಬದುಕಿನ ಎಲ್ಲ ವಿದ್ಯಮಾನಗಳು ನುಡಿಯೊಳಗೆ ಏರ್ಪಡುವ ಅರ್ಥಗಳ ಮೂಲಕ ನಮ್ಮೊಂದಿಗೆ ನಂಟನ್ನು ಪಡೆದುಕೊಳ್ಳುತ್ತವೆ. ವಾಸ್ತವವನ್ನು ನಿರ್ವಚಿಸುವ ನೆಲೆಗಳಿಗೂ ನಾವು ನುಡಿಯನ್ನು ಬಳಸಿಕೊಳ್ಳುತ್ತೇವೆ. ಒಟ್ಟಿನಲ್ಲಿ ನುಡಿಯ ಮೂಲಕವೇ ಬದುಕಿನ ಸತ್ಯವನ್ನು ಕಾಣುತ್ತೇವೆ ಎನ್ನುವ ನಂಬಿಕೆ ಬಲವಾಗಿದೆ.

ಈ ನಂಬಿಕೆಯನ್ನು ಸಾಬೀತುಪಡಿಸುವ ಪರಿಕರವಾಗಿ ವಚನಗಳನ್ನು ಪರಿಗಣಿಸಲಾಗಿದೆ. ಬದುಕಿನ ಸತ್ಯ ಮತ್ತು ಶಾಬ್ದಿಕ ಸತ್ಯಗಳ ನಡುವಣ ಹೊಂದಾಣಿಕೆಯನ್ನು ವಚನ ಸಾಹಿತ್ಯ ಗಟ್ಟಿಗೊಳಿಸಿದೆ. ಆದ್ದರಿಂದ ಮಾತು ಇಲ್ಲವೇ ನುಡಿಯನ್ನು ಕುರಿತ ವಚನಗಳನ್ನು ಮಾತ್ರವಷ್ಟೇ ಅಲ್ಲದೇ ಬದುಕಿನ ನಂಬಿಕೆ ಮತ್ತು ಅಪನಂಬಿಕೆಗಳ ಸ್ವರೂಪವನ್ನು ವಿವರಿಸುವುದಕ್ಕೂ ವಚನಗಳನ್ನು ಉಲ್ಲೇಖ ಮಾಡಲಾಗುತ್ತದೆ. ಬದುಕಿನ ಅರ್ಥಗಳನ್ನು ವಚನಗಳ ಭಾಷೆಯ ಮೂಲಕ ಸಾಕ್ಷಾತ್ಕಾರಗೊಳಿಸುವ ಬಗೆಯಂತೆ, ಭಾಷೆಯ ಸಾಕ್ಷಾತ್ಕಾರವನ್ನು ವಚನಗಳಲ್ಲಿ ಕಾಣುವುದನ್ನು ನೋಡುತ್ತೇವೆ. ಭಾಷೆಯನ್ನೇ ಇಲ್ಲಿ ಪ್ರಮಾಣವಾಗಿ ಗ್ರಹಿಸಲಾಗಿದೆ.

ಈ ಇಡೀ ತಾತ್ವಿಕ ವಿನ್ಯಾಸವನ್ನು ಭಾಷಾಶಾಸ್ತ್ರೀಯ ನೆಲೆಯಿಂದ ಅರಿಯಲು ನಮಗೆ ಸಾಕಷ್ಟು ಗೊಂದಲಗಳು ಎದುರಾಗುತ್ತವೆ. ಆದರೆ ಸಂಸ್ಕ್ರುತಿಯೊಳಗೆಯೇ ನೆಲೆಪಡೆಯುವ ವಿಚಾರ ಸ್ವರೂಪದ ಬಗೆಗಿನ ಚರ್ಚೆಗಳನ್ನು ತೀರಾ ಭಿನ್ನವಾಗಿ ನಿರ್ವಚಿಸಲಾಗಿದೆ. ಇದೊಂದು ರೀತಿಯಲ್ಲಿ ದೀಪ ಮತ್ತು ಬೆಳಕಿನ ಸಂಬಂಧವನ್ನು ಸೂಚಿಸುವಂತಿದೆ. ಅಂದರೆ ದೀಪದ ಬೆಳಕಿನಲ್ಲಿಯೇ ದೀಪವೂ ಕಾಣುವಂತೆ (ಕೆವಿಎನ್ ಅವರ ಮಾತು) ಭಾಷೆಯ ಬೆಳಕಿನಲ್ಲಿ ಸಂಸ್ಕ್ರುತಿ ಗೋಚರಿಸುತ್ತದೆ. ವಚನ ಮತ್ತು ಭಾಷೆಯ ಸಂಬಂಧವನ್ನು ಈ ರೂಪಕದ ಮೂಲಕ ನೋಡಿದರೆ ಸ್ಪಷ್ಟವಾಗುತ್ತದೆ.

ಆದ್ದರಿಂದ ವಚನ ಸಾಹಿತ್ಯ ಕೇವಲ ಸಾಹಿತ್ಯವಾಗಿ ಮಾತ್ರ ಕಾಣದೇ, ಅದೊಂದು ಸಮೂಹಗಳ ಬದುಕಿನ ಪ್ರಮಾಣ ಭಾಷೆಯಾಗಿ ಒಪ್ಪಿಗೆಯನ್ನು ಪಡೆದಿದೆ. ಜಾತಿ, ಲಿಂಗ ಹಾಗೂ ಆಹಾರಭೇದದ ವಿಷಮತೆಯ ತೀವ್ರತೆಯನ್ನು ಟೀಕಿಸುವ ವಚನಗಳು ನಮ್ಮ ಆತ್ಮವಿಶ್ವಾದ ಮಾತುಗಳಾಗಿ ಹಾಗೂ ಬದುಕಿನ ಸ್ಥಿರತೆಯನ್ನು ಕಲ್ಪಿಸುವ ಭರವಸೆಯ ಪ್ರಮಾಣದ ‘ಭಾಷೆಯಾಗಿಯೂ ಒಡಮೂಡಿವೆ. ವಚನ ಭಾಷೆಯಾಗುವಂತೆ, ಭಾಷೆಯೂ ವಚನವಾಗುತ್ತದೆ. ಈ ಆಗುವಿಕೆಯಲ್ಲಿ ವೈಚಾರಿಕ ನಿಲುಗಳನ್ನು ವಚನ ಸಾಹಿತ್ಯ ಹೇಗೆ ಅನುಸಂಧಾನಗೊಳ್ಳುತ್ತದೆ ಅನ್ನುವುದನ್ನು ಕಾಣಬಹುದು.

ನೈತಿಕ ವ್ಯಕ್ತಿತ್ವವನ್ನು ವಚನಗಳು ಪ್ರತಿನಿಧಿಸುತ್ತವೆ. ಧರ್ಮ ಮತ್ತು ನೀತಿ, ವ್ಯಕ್ತಿ ಮತ್ತು ನೈತಿಕತೆ, ಸಮೂಹ ಮತ್ತು ಲೋಕಾನುಭವ ಇವುಗಳು ಒಂದರಿಂದೊಂದು ಬೇರೆಯಲ್ಲ. ಈ ನಿಲುವು ವಚನಗಳಿಂದ ಒಡಮೂಡುವ ದಾರ್ಶಿನಿಕತೆಯಾಗಿದೆ. ಮಾತು ಬದುಕಿನ ಯಾವ ಆಯಾಮವನ್ನು ಶಾಶ್ವತಗೊಳಿಸುತ್ತದೆ ಎಂಬ ವಾಸ್ತವವನ್ನು ವಚನಗಳಲ್ಲಿ ಕಾಣುತ್ತೇವೆ. ಮಾತು ಮಾಣಿಕ್ಯ, ಮಾತು ಜೋತಿರ್ಲಿಂಗ, ಮಾತು ಸ್ಫಟಿಕವಾಗುವ ಪ್ರಕ್ರಿಯೆ ಶಬ್ದ ಮತ್ತು ಅರ್ಥಗಳ ನಡುವಣ ನಂಟನ್ನು ಬೆಸೆಯುವ ನೆಲೆ ಮಾತ್ರವಲ್ಲ. ಬದಲಾಗಿ ನಡೆ ಮತ್ತು ನುಡಿಗಳ ನಡುವೆ ಏರ್ಪಡುವ ಸತ್ಯದ ಸಾಕ್ಷಾತ್ಕಾರವಾಗಿದೆ.

ಅದಕ್ಕೆ ಅಲ್ಲಮನ ನಡೆಯಿಂದ ನುಡಿಗೆಟ್ಟು, ನುಡಿಯಿಂದ ನಡೆಗೆಟ್ಟು ಎಂಬೀ ಮಾತು ಜೋತಿರ್ಲಿಂಗವಾಗುವ ಪ್ರಕ್ರಿಯೆಯನ್ನು ಸೂಚಿಸುತ್ತದೆ. ವಚನಗಳಲ್ಲಿ ಮಾತು ಮತ್ತು ಅರ್ಥಗಳ ಗುರಿ ನಿಜಾನುಭವದ ದರ್ಶನವಾಗಿದೆ. ಅದಕ್ಕಾಗಿಯೇ ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ಶರಣ ನಡೆದರೆ ನಿರ್ಗಮನಿ, ನುಡಿದರೆ ನಿಶ್ಯಬ್ದ ಎಂಬೆಲ್ಲ ಮಾತುಗಳ ಪರಿಣಾಮವಾಗಿ ಭಾಷೆಯನ್ನು ಅರಿವಿನ ವಾಸ್ತವವನ್ನಾಗಿ ಪರಿವರ್ತಿಸುವ ಇರಾದೆಯನ್ನು ವಚನಗಳಲ್ಲಿ ಕಾಣುತ್ತೇವೆ.

ಹಾಗಾಗಿ ಅರಿವೇ ಗುರು ಎಂಬ ಮಾತು ಭಾಷೆಯ ಪರಧಿಯನ್ನು ಮೀರಿದ ನೆಲೆಯನ್ನು ಸೂಚಿಸುತ್ತದೆ. ಭಾಷೆಯ ಪರಧಿಯನ್ನು ಮೀರುವುದೆಂದರೆ, ಭಾಷೆಯನ್ನೇ ಮೀರುವುದೆಂದಲ್ಲ ಬದಲಾಗಿ ಮಾತನ್ನು ನಡೆಯಾಗಿ, ಆಲೋಚನೆಯಾಗಿ, ನೈತಿಕ ನೆಲೆಯನ್ನಾಗಿ ಅರಿಯುವ ಬಗೆಯಾಗಿದೆ. ಅಂದರೆ ವ್ಯಾಕರಣದ ಸಾಂಪ್ರದಾಯಿಕ ನಿಯಮಗಳ ಚೌಕಟ್ಟನ್ನು ಮೀರುವ ಬಗೆಯಾಗಿ ಇದನ್ನು ನೋಡಬೇಕು. ಅದಕ್ಕಾಗಿಯೇ ಶಬ್ದಸಂದಣಿಯ ಮಾತು ಸಯವಲ್ಲ ನೋಡಾ ಪ್ರಭು ಎಂಬ ಮಾತನ್ನು ಮುಕ್ತಾಯಕ್ಕ ಅಲ್ಲಮನಿಗೆ ಹೇಳುತ್ತಾಳೆ.

ಮಾತುಗಳು ಕೇವಲ ಭಾಷಿಕ ಸೂಚಕಗಳಾಗುವ ಅಪಾಯದ ಎಚ್ಚರವನ್ನು ಮುಕ್ತಾಯಕ್ಕನ ಈ ಮಾತುಗಳಲ್ಲಿ ಕಾಣುತ್ತೇವೆ. ಅಲ್ಲಮ, ಬಸವ, ಮುಕ್ತಾಯಕ್ಕ, ಅಕ್ಕ ಮೊದಲಾದವರ ವಚನಗಳನ್ನು ತಲಸ್ಪರ್ಶಿಯಾಗಿ ಓದಿದರೆ, ನುಡಿಯೊಳಗಣ ನಿಶ್ಯಬ್ದ ಹಾಗೂ ನುಡಿಯೊಳಗಣ ಅರ್ಥ ಇವುಗಳ ನಡುವಿನ ವ್ಯತ್ಯಾಸ ಭಾಷಿಕ ಸೂಕ್ಷ್ಮಗಳನ್ನೇ ಪ್ರತಿನಿಧಿಸುತ್ತವೆ ಎಂಬುದು ಗಮನಾರ್ಹ.

ಅನುಭಾವದ ಅಮೂರ್ತತೆಯನ್ನು ಮೀರಿ ಅನುಭವದ ವಿನ್ಯಾಸಗಳನ್ನು ಆಧರಿಸಿಕೊಂಡು ಸಮೂಹಗಳ ನಡೆ-ನುಡಿಗಳ ನಡುವಣ ನೈತಿಕತೆಯನ್ನು ನಿರೂಪಿಸುವ ಈ ವಚನ ಸಾಹಿತ್ಯ ವಿಮೋಚನೆಯ ಭಾಷೆಯಾಗಿದೆ. ಈ ವಿಮೋಚನೆ ಎನ್ನುವುದು ಭಾವ ಬಂಧನಗಳನ್ನು ಮಾತ್ರ ಮೀರುವುದಲ್ಲ. ವೇದ ಮತ್ತು ಆಗಮಗಳು ಸಾಮಾಜಿಕ-ಸಾಂಸ್ಕೃತಿಕವಾಗಿ ಹೇರಿದ ನಿರ್ಬಂಧಗಳನ್ನೂ ಮೀರುವ ಬಗೆಯಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕವಿತೆ | ನೆನಪು

Published

on

ಕವಿ | ರುದ್ರಪ್ಪ ಹನಗವಾಡಿ
  • ರುದ್ರಪ್ಪ ಹನಗವಾಡಿ

ಅಪ್ಪನನ್ನು ಒಪ್ಪ ಮಾಡಿ
ವರ್ಷಗಳೇ ಕಳೆದವು ಮುವ್ವತ್ತೇಳು
ಇಂದಿರಾಗಾಂಧಿಯ ತುರ್ತು ಪರಿಸ್ಥಿತಿ
ಅರಸರ ಮೀಸಲಾತಿ
ಬಸವಲಿಂಗಪ್ಪನವರ ಬೂಸಾ ಖ್ಯಾತಿ
ಮಲ ಹೊತ್ತು
ಮಲಗಿದ್ದ ಕಾಲಕ್ಕೆ
ಚುರುಕು ಮುಟ್ಟಿಸಿದ ಕಾಲ

ಹರೆಯದ ನನಗೆ
ಕಾಲೇಜ ಮೇಷ್ಟರ ಕೆಲಸ
ಸೂಟು ಬೂಟಿನ ವೇಷ
ಆ ಮೇಲೆ ಅಮಲದಾರಿಕೆ
ಎಲ್ಲ ನಡೆದಾಗಲೇ ಅವ್ವನನ್ನು
ಆಸ್ಪತ್ರೆಗೆ ಸೇರಿಸಿದ್ದು
ಕಾಲ ಕಳೆದು ಕೊಂಡು
ಕೋಲ ಹಿಡಿದದ್ದು
ನಿನ್ನೆ ಮೊನ್ನೆಯಂತೆ
ಬಾಲ್ಯವಿನ್ನು ಉಂಟೆಂಬಂತೆ
ಭಾವಿಸುವಾಗಲೇ ಅವ್ವನ ಸಾವು

ಅದರೊಟ್ಟಿಗೆ ಕಾಯದಾಯಾಸ ತೀರಿಸಲು
ಬಂದರೆ ಬೆಂಗಳೂರಿಗೆ
ರೌಡಿಗಳ ಕಾಟ
ಅಂಬೇಡ್ಕರ್ ಪಟದ ಕೆಳಗೆ
ದೌರ್ಜನ್ಯದ ದಂಡು

ಅಮಾಯಕರಿಗೆ ಗುಂಡು
ಕಂಡುಂಡ ಹಾದಿಯ ಗುಡಿಸಲುಗಳಲ್ಲೀಗ
ಮುಗಿಲು ಮುಟ್ಟೋ ಮಹಲುಗಳು
ಅಂತಲ್ಲಿ
ದೇಶ ವಿದೇಶಗಳ
ಅಹವಾಲುಗಳು
ಅವಿವೇಕಗಳು
ನೋಡ ನೋಡುತ್ತಿದ್ದಂತೆ
ಉಸಿರು ಬಿಗಿಹಿಡಿದ ಜನರ ಒಳಗೆ
ಒಳಪದರಗಳೊಳಗೆ ಕನಸ ಬಿತ್ತಿ
ಹಸಿರ ಹೊನ್ನು ಬಾಚಲು ಹವಣಿಸಿದ
ಬಿಳಿ ಜನರ ಆಟ
ಅರ್ಥವಾಗುವುದೇ ಎಲ್ಲ
ಗೋಣ ನೀಡುವರೆ
ಹೂತಿಟ್ಟ ಗೂಟಕ್ಕೆ ?

( ಚಿಂತಕ ರುದ್ರಪ್ಪ ಹನಗವಾಡಿ ಅವರ ‘ಊರು – ಬಳಗ’ ಕವನ ಸಂಕಲನದಿಂದ ‘ ನೆನಪು ‘ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕೃತಿಯನ್ನು ಫ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ 2013 ರಲ್ಲಿ ಪ್ರಕಿಸಿದೆ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ; ಒಂದು ಚಿಂತನೆ

Published

on

  • ಮಹಾಂತೇಶ್.ಬಿ.ನಿಟ್ಟೂರು, ದಾವಣಗೆರೆ

ನಿಜ ಶರಣ ಶ್ರೀ ಅಂಬಿಗರ ಚೌಡಯ್ಯನವರ ಜೀವಿತ ಕಾಲ 12 ನೇ ಶತಮಾನದ ಬಸವಾದಿ ಶರಣರ ಕಾಲದಲ್ಲೇ ಇತ್ತು ಎಂಬುದು ಇತಿಹಾಸಕಾರರ ಸಂಶೋಧನೆಯಿಂದ ತಿಳಿದು ಬರುತ್ತದೆ. ಅವರ ಹುಟ್ಟೂರು ಹಾವೇರಿ ಜಿಲ್ಲೆಯ ಆಗಿನ ಶಿವಪುರ, ಈಗಿನ ಚೌಡಯ್ಯದಾನಪುರ. ಅವರ ತಂದೆಯ ಹೆಸರು ಶ್ರೀ ವಿರೂಪಾಕ್ಷ, ತಾಯಿಯ ಹೆಸರು ಪಂಪಾಂಭಿಕೆ, ಹೆಂಡತಿಯ ಹೆಸರು ಸುಲೋಚನಾ ಹಾಗೂ ಮಗನ ಹೆಸರು ಪುರವಂತ.

ಅಂಬಿಗ ವೃತ್ತಿಯ ಚೌಡಯ್ಯನವರು ಅಲ್ಲಮ ಪ್ರಭು ಮತ್ತು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಇದ್ದ ಒಬ್ಬ ಕ್ರಾಂತಿಕಾರಿ, ದಿಟ್ಟ, ನೇರ, ನಿಷ್ಠುರ ನುಡಿಯ ವಚನಕಾರ. ಕಲ್ಯಾಣ ಕ್ರಾಂತಿಯ ನಂತರ ಇವರು ತಮ್ಮ ವಚನಗಳ ಗಂಟನ್ನು ಹೊತ್ತು ಉಳವಿಗೆ ನಂತರ ತಮ್ಮ ಗ್ರಾಮವಾದ ತುಂಗಭದ್ರಾ ನದಿಯ ದಡದ ಮೇಲಿರುವ ಶಿವಪುರಕ್ಕೆ ಬಂದು ದೋಣಿ ನಡೆಸುವ ವೃತ್ತಿಯಲ್ಲಿ ನಿರತರಾಗಿ ವಚನ ರಚನೆ ಮಾಡಿರುವುದು ತಿಳಿದು ಬರುತ್ತದೆ.

ಚೌಡಯ್ಯನವರು ತಮ್ಮ ಜೀವಿತಾವಧಿಯಲ್ಲಿ ಅನೇಕ ಪವಾಡಗಳನ್ನು ಮಾಡಿರುತ್ತಾರೆ. ಗಿಡಮೂಲಿಕೆ ಔಷಧಿಗಳಿಂದ ಕ್ಷಯ ರೋಗ, ಕುಷ್ಠರೋಗ ಗುಣಪಡಿಸುವುದು, ಹಾವು ಕಚ್ಚಿದವರನ್ನು

ಬದುಕಿಸುವುದು ಇತ್ಯಾದಿ..

ಒಮ್ಮೆ ಗುತ್ತಲದ ಅರಸನು ಬೇಟೆಗಾಗಿ ಈ ಪ್ರದೇಶದಲ್ಲಿ ಸಂಚರಿಸುತ್ತಿದ್ದಾಗ, ಆತನ ಸೇನಾಧಿಪತಿಯು ಹಾವು ಕಚ್ಚಿ ಮೃತಪಟ್ಟನು. ಇದರಿಂದಾಗಿ ಅರಸನಿಗೆ ಅತೀವ ದುಃಖವುಂಟಾಗಿ ರೋಧಿಸತೊಡಗಿದನು. ಆಗ ಆತನ ಸೈನಿಕನೊಬ್ಬನು ಶ್ರೀ ಚೌಡಯ್ಯನವರ ಪವಾಡಗಳ ಬಗ್ಗೆ ವಿವರಿಸಿ ಹೇಳಲಾಗಿ, ಅರಸನು ತನ್ನ ಮೃತ ಸೇನಾಧಿಪತಿಯ ಶರೀರವನ್ನು ಚೌಡಯ್ಯನವರಲ್ಲಿಗೆ ತಂದು ಆತನನ್ನು ಬದುಕಿಸುವಂತೆ ಕೇಳಿಕೊಂಡರು, ಆಗ ಚೌಡಯ್ಯನವರು ಸೇನಾಧಿಪತಿಯನ್ನು ಬದುಕಿಸುತ್ತಾರೆ. ಇದರಿಂದ ಸಂತುಷ್ಟನಾದ ಅರಸನು ಶಿವಪುರದ ಸುತ್ತಲಿನ ಪೂರ್ವ – ಪಶ್ಚಿಮಕ್ಕೆ 14 ಮೈಲು ಹಾಗೂ ಉತ್ತರ – ದಕ್ಷಿಣಕ್ಕೆ 7 ಮೈಲು ಸುತ್ತಳತೆಯ ಭೂಮಿಯನ್ನು ಚೌಡಯ್ಯನವರಿಗೆ ದಾನವಾಗಿ ನೀಡಿದನು.

ಆದರೆ ಚೌಡಯ್ಯನರು ವೈರಾಗ್ಯಶಾಲಿಯು, ಲೌಕಿಕದಲ್ಲಿ ನಿರಾಸಕ್ತಿ ಹೊಂದಿದವರು ಆಗಿದ್ದರಿಂದ, ಅರಸನು ಕೊಡಮಾಡಿದ್ದ ಸಂಪೂರ್ಣ ಜಮೀನನ್ನು ತನ್ನ ಗುರುಗಳಾದ ಶ್ರೀ ಶಿವದೇವರಿಗೆ ದಾನವಾಗಿ ನೀಡಿದರು ಎಂಬ ಉಲ್ಲೇಖವಿದೆ. ಅಂದಿನಿಂದ ಶಿವಪುರ ಗ್ರಾಮಕ್ಕೆ ‘ಚೌಡಯ್ಯದಾನಪುರ’ ಎಂದು ಹೆಸರು ಬರುತ್ತದೆ. ಮುಂದೆ ಚೌಡಯ್ಯನರು ಅಲ್ಲಿ ದೇಹ ತ್ಯಾಗ ಮಾಡಿದ್ದರಿಂದ ತುಂಗಭದ್ರಾ ನದಿಯ ದಡದಲ್ಲಿ ಈಗಲೂ ಚೌಡಯ್ಯನವರ ಸಮಾಧಿ ಗದ್ದುಗೆ ಇದೆ.

ಭ್ರಮಾಲೋಕದಲ್ಲಿ ವಿಹರಿಸುತ್ತಾ ಕುಳಿತ, ಆಡಂಬರದಲ್ಲಿ ಅಡ್ಡಾದಿಡ್ಡಿ ಅಡ್ಡಾಡುವ ಮಂದಿಯ ಕಪಾಳಕ್ಕೆ ಹೊಡೆದು ಎಚ್ಚರಿಸುವಂತಿವೆ ಚೌಡಯ್ಯನವರ ವಚನಗಳು. ಧಾರ್ಮಿಕ ಮೂಢನಂಬಿಕೆ ಬಿತ್ತುವವರಿಗೆ, ಸ್ವಾರ್ಥಿಗಳಾಗಿ ಬದುಕುವವರಿಗೆ, ಮುಖವಾಡ ಹಾಕಿ ಮಂಕು ಬೂದಿ ಎರಚುವವರಿಗೆ ಸಿಂಹ ಸ್ವಪ್ನದಂತೆ ಬೆಚ್ಚಿ ಬೀಳಿಸುತ್ತವೆ ನಿಜ ಶರಣ ಅಂಬಿಗರ ಚೌಡಯ್ಯನವರ ವಚನಗಳು. ಇದಕ್ಕೆ ತಾತ್ಪೂರ್ತಿಕವಾಗಿ ಕೆಲವು ವಚನಗಳು ಈ ಕೆಳಗಿನಂತಿವೆ;

“ಅಂಬಿಗ ಅಂಬಿಗ ಎಂದು ಕುಂದ ನುಡಿಯದಿರು/ನಂಬಿದರೆ ಒಂದೇ ಹುಟ್ಟಲಿ/ಕಡೆಯ ಹಾಯಿಸುವೆನೆಂದಾತನಂಬಿಗರ/ಚೌಡಯ್ಯ ನಿಜಶರಣನು”

ಈ ಮೇಲಿನ ವಚನ ಶ್ರೀ ಅಂಬಿಗರ ಚೌಡಯ್ಯನವರ ಸ್ವಾಭಿಮಾನ, ಧೈರ್ಯ, ನೇರ, ನಿರ್ಭಿಡೆಯ ವ್ಯಕ್ತಿತ್ವದ ಪ್ರತೀಕವಾಗಿದೆ.

ಹನ್ನೆರಡನೇ ಶತಮಾನದ ಸಂದರ್ಭದಲ್ಲಿ ಜಾತಿ ಮತ್ತು ವರ್ಗ ವ್ಯವಸ್ಥೆ ಎಷ್ಟರಮಟ್ಟಿಗಿತ್ತು ಎಂಬುದನ್ನು ಈ ವಚನ ಸೂಚಿಸುತ್ತದೆ. ಅಂತಹ ವಿಚಿತ್ರ, ವಿಕ್ಷಿಪ್ತ ಸನ್ನಿವೇಶದಲ್ಲಿ ಬಸವಾದಿ ಶರಣರು ಜಾತೀಯತೆ, ವರ್ಗ – ವರ್ಣ ವ್ಯವಸ್ಥೆಯ ವಿರುದ್ಧ ಬೃಹತ್ ಚಳುವಳಿಯನ್ನು ಕೈಗೊಂಡಾಗ ಅಂಬಿಗರ ಚೌಡಯ್ಯನವರ ಸತ್ಯನಿಷ್ಠೆ, ಪ್ರಾಮಾಣಿಕತೆಯ ವಚನಗಳು ಪ್ರಖರವಾಗಿ ಕಾಣಿಸುತ್ತವೆ. ಕೆಲವು ಢೋಂಗಿ ಭಕ್ತರಿಗೆ, ಕಪಟ ಸನ್ಯಾಸಿಗಳಿಗೆ ತನ್ನ ಖಾರವಾದ ವಚನಗಳ ಮೂಲಕ ಚುರುಕು ಮುಟ್ಟಿಸುತ್ತಾರೆ.

ಆಡಂಬರ ಮತ್ತು ದುರಾಸೆಯ ಜನರ ಮನಸ್ಥಿತಿ ಕಂಡು ಕೆಂಡಾಮಂಡಲವಾಗಿ ಪ್ರಸ್ತುತ ಪಡಿಸಿದ ಒಂದು ವಚನ ಇಂತಿದೆ;

“ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಕಾಳೋಗರನ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹಾರುವ ಪಕ್ಷಿಯನು/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೆಬ್ಬುಲಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೊಯ್ವ ಹೆಮ್ಮಾರಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಬರುವ ಉರಿ ಬಾಣವನು/ಇಂತೆಲ್ಲವನು ಒಂದೇ ಮಂತ್ರದಲ್ಲಿ ನಿಲ್ಲಿಸಬಹುದು;/ಲೋಭವೆಂಬ ಗ್ರಹಣ ಹಿಡಿದವರ ಏತರಿಂದಲೂ/ನಿಲ್ಲಿಸಲಾಗದು/ಈ ಲೋಭಕ್ಕೆ ದಾರಿದ್ರ್ಯವೇ ಔಷಧವು;/ಹೇಳಿದರೆ ಕೇಳರು, ತಾವು ತಿಳಿಯರು/ಶಾಸ್ತ್ರವ ನೋಡರು, ಭಕ್ತಿಯ ಹಿಡಿಯರು/ಇಂತಹ ಗೊಡ್ಡು ಮೂಳ ಹೊಲೆಯರಿಗೆ/ಕರ್ಮವೆಂಬ ಶರದ್ಧಿಯಲ್ಲಿ ಬಿದ್ದು ಹೊರಳಾಡುವುದೇ/ಸತ್ಯವೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು”

ಸಂಸಾರದ ಜಂಜಾಟದಲ್ಲಿ ಬಿದ್ದು ಒದ್ದಾಡುತ್ತಾ ಶಿವನನ್ನು ಮರೆತು ಹತ್ತು ಹಲವು ಚಿಂತೆಯಲ್ಲಿ ಮುಳುಗಿರುವ ಶವ ಮುಖದ ಜನರ ಸ್ಥಿತಿ-ಗತಿಯನ್ನು ಅರ್ಥಗರ್ಭಿತವಾಗಿ ಸಾದರಪಡಿಸುವ ಒಂದು ವಚನ ಇಂತಿದೆ;

“ಬಡತನಕೆ ಉಂಬುವ ಚಿಂತೆ/ಉಣಲಾದಡೆ ಉಡುವ ಚಿಂತೆ/ಉಡಲಾದಡೆ ಇಡುವ ಚಿಂತೆ/ಇಡಲಾದಡೆ ಹೆಂಡಿರ ಚಿಂತೆ/ಹೆಂಡಿರಾದರೆ ಮಕ್ಕಳ ಚಿಂತೆ/ಮಕ್ಕಳಾದಡೆ ಬದುಕಿನ ಚಿಂತೆ/ಬದುಕಾದಡೆ ಕೇಡಿನ ಚಿಂತೆ/ಕೇಡಾದಡೆ ಮರಣದ ಚಿಂತೆ/ಇಂತೀ ಹಲವು ಚಿಂತೆಯಲ್ಲಿಪ್ಪವರ ಕಂಡೆನು/ಶಿವನ ಚಿಂತೆಯಲ್ಲಿದ್ದಾತರೊಬ್ಬರನೂ ಕಾಣೆನೆಂದಾತ/ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು!”

ಸಮಯದ ಸದ್ಬಳಕೆ ಮಾಡಿಕೊಂಡು ಕಾಯಕ ಮಾಡುತ್ತಾ ಶಿವಭಕ್ತರಾಗಿ, ಜೀವನ ಪಾವನವಾಗಿಸುವಂತೆ ಕರೆ ನೀಡುವ ಒಂದು ವಚನ ಇಂತಿದೆ;

“ಗಾಳಿ ಬಿಟ್ಟಾಗ ತೂರಿಕೊಳ್ಳಿರಯ್ಯ/ಗಾಳಿ ನಿಮ್ಮ ಅಧೀನವಲ್ಲ ಕಂಡಯ್ಯ/ನಾಳೆ ತೂರಿಹೆನೆಂದಡಿಲ್ಲ ಕಂಡಯ್ಯ/ಶಿವಶರಣೆ ಎಂಬುದೊಂದು ಗಾಳಿ ಬಿಟ್ಟಲ್ಲಿ/ಬೇಗ ತೂರೆಂದನಂಬಿಗರ ಚೌಡಯ್ಯ”

ಕಾವಿ ಬಟ್ಟೆ ತೊಟ್ಟು, ಭಿಕ್ಷೆಗಾಗಿ ಜೋಳಿಗೆ ಹಾಕಿದವರೆಲ್ಲರೂ ಜಂಗಮರು, ಗುರುಗಳಾಗಲಾರರು ಎಂಬುದನ್ನು ವಿಡಂಬಿಸುವ ಒಂದು ವಚನ ಇಂತಿದೆ;

“ಕಂಥೆ ತೊಟ್ಟವ ಗುರುವಲ್ಲ/ಕಾವಿ ಹೊದ್ದವ ಜಂಗಮನಲ್ಲ/ಶೀಲ ಕಟ್ಟಿದವ ಶಿವಭಕ್ತನಲ್ಲ/ನೀರು ತೀರ್ಥವಲ್ಲ/ಕೂಳು ಪ್ರಸಾದವಲ್ಲ/ಹೌದೆಂಬವನ ಬಾಯ ಮೇಲೆ/ಅರ್ಧ ಮಣದ ಪಾದರಕ್ಷೆಯ ತೆಗೆದುಕೊಂಡು/ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ/ಟೊಕ ಟೊಕನೆ ಹೊಡೆ ಎಂದಾತ/ನಮ್ಮ ಅಂಬಿಗರ ಚೌಡಯ್ಯ”

ಹೀಗೆ ಬಸವಾದಿ ಶರಣರ ಸಮಾಜ ಸುಧಾರಣಾ ಚಳವಳಿಯಲ್ಲಿ ತಮ್ಮ ಅಮೂಲ್ಯ ಸೇವೆಯನ್ನು ಮುಡುಪಾಗಿಟ್ಟ ಶ್ರೀ ಅಂಬಿಗರ ಚೌಡಯ್ಯನವರು ತಮ್ಮ ಬದುಕಿನ ನೀತಿಯಿಂದ, ನಿಷ್ಠೆಯಿಂದ, ತೀಕ್ಷ್ಣ ಖಂಡನೆಯ ಬಂಡಾಯ ವಚನಗಳಿಂದ ಗಮನ ಸೆಳೆದು, ಅವರು ರಚಿಸಿದ ವಚನಗಳಿಗೆ ತಮ್ಮ ಹೆಸರನ್ನೇ ಅಂಕಿತವನ್ನಾಗಿಟ್ಟಿರುವದು ವಿಶೇಷವಾಗಿದೆ. ಸಮಾಜದ ಕೊಳೆಯನ್ನು ತೊಳೆಯುವ ನಿಟ್ಟಿನಲ್ಲಿ ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ಎದ್ದು ಕಾಣುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮ್ಯಾಸ ನಾಯಕ ಬುಡಕಟ್ಟನಲ್ಲಿ ದೀಪಾವಳಿ ಹಬ್ಬದ ಆಚರಣೆ

Published

on

ಭಾರತ ತನ್ನ ಭೌಗೋಳಿಕ ಸ್ವರೂಪದಲ್ಲಿ ವೈವಿಧ್ಯತೆಯನ್ನು ಹೊಂದಿರುವಂತೆ ಅನೇಕ ಬಗೆಯ ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿದೆ.

ದೇಶದ ಪ್ರತಿಯೊಂದು ಸಮುದಾಯವು ಬದುಕಿನ ಕ್ರಮದಲ್ಲಿ ತನ್ನದೇ ಆದ ವೈವಿಧ್ಯತೆಯನ್ನು ಹೊಂದಿದ್ದು ಹಬ್ಬಗಳ ಆಚರಣೆಯಲ್ಲಿಯೂ ಈ ಭಿನ್ನತೆಯನ್ನು ಕಾಣಬಹುದಾಗಿದೆ. ಈಗ ನಡೆಯುತ್ತಿರುವ ದೀಪಾವಳಿ ಹಬ್ಬದ ಆಚರಣೆಯೂ ಇದರಿಂದ ಹೊರತಾಗಿಲ್ಲ. ಇಡೀ ಭಾರತ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸುತ್ತಿದೆ ಎಂಬುದು ಸಾಮಾನ್ಯವಾದ ಹೇಳಿಕೆಯಾಗಿರುತ್ತದೆ.

ದೀಪಾವಳಿ ಎಂದರೆ ದೀಪವನ್ನು ಬೆಳಗಿಸುವ ಹಬ್ಬ. ಜಗದ ಕತ್ತಲೆಯನ್ನು, ಮನದ ಕತ್ತಲೆಯನ್ನು, ಕಳೆಯುವ ಹಬ್ಬ ಎಂಬುದು ಒಂದು ನಂಬಿಕೆಯಾದರೆ ಬಲಿಚಕ್ರರ‍್ತಿಯನ್ನು ವರ್ಷಕೊಮ್ಮೆ ನೆನಪಿಸಿಕೊಳ್ಳುವುದು, ನರಕಾಸುರನನ್ನು ಶ್ರೀ ಕೃಷ್ಣ ಪರಮಾತ್ಮ ಕೊಂದು ಆತನ ಸೆರೆಯಲ್ಲಿದ್ದ ಅಸಂಖ್ಯಾತ ಮಹಿಳೆಯರಿಗೆ ಬಿಡುಗಡೆ ದೊರಕಿಸಿದ ದಿನವಿದು ಎಂದು ನೆನೆಪಿಸಿಕೊಳ್ಳುವುದು ಹೀಗೆಲ್ಲಾ ಪ್ರಚಲಿತ ಪುರಾಣಮೂಲಗಳಿಂದ ಈ ಹಬ್ಬದ ಆಚರಣೆಯ ಸಾಂಕೇತಿಕತೆಯನ್ನು ಅರ್ಥೈಸಲಾಗುತ್ತದೆ.

ಈ ಎರಡೂ ಘಟನೆಗಳನ್ನು ಕುರಿತು ಬೇರೆ ಬೇರೆ ನೆಲೆಯಿಂದ ಯೋಚಿಸಿದಾಗ ಇದನ್ನು ದೇಶದಾದ್ಯಂತ ಎಲ್ಲರೂ ಸಡಗರಿಸಬೇಕೆ? ಆಳುವವರ ಸಡಗರ ಎಲ್ಲರ ಸಡಗರವಾಗಲೇಬೇಕಾದ ಅನಿವಾರ್ಯವೇ? ಎಂಬ ನೆಲೆಗಳಿಂದ ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕಾಗುತ್ತದೆ.

ನಿಸರ್ಗಮೂಲ ಸಿದ್ದಾಂತವನ್ನು ಅನ್ವಯಿಸಿಕೊಂಡರೇ ಬಹುಶಃ ಈ ದೀಪಾವಳಿಯ ತಿಂಗಳು, ಅಂದರೇ ಕಾರ್ತಿಕ ಮಾಸದ ಹವಾಮಾನದಲ್ಲಿ ವಿಶೇಷತೆಯಿದೆ. ಕಾರ್-ಅಂದರೇ ಮಳೆ ಸುರಿಯುವುದು. ಕರ‍್ತೀಕ ಅಂದರೇ ಮಳೆಗಾಲದ ಕೊನೆಯ ದಿನಗಳಿವು, ಹಿಂಗಾರಿನ ಕೊನೆಯ ಮಳೆಗಳು ಸುರಿಯುವ ಮತ್ತು ಇದರೊಂದಿಗೆ ಚಳಿಗಾಲವೂ ಆರಂಭವಾಗುವುದರಿಂದ ಮಂಜುಮುಸುಕಿದ ವಾತಾವರಣವೂ ಜೊತೆಗೂಡಿ ಕತ್ತಲೆಯ ಆಧಿಕ್ಯ ಹೆಚ್ಚು. ಬಹುಶಃ ಈ ಕತ್ತಲೆಯನ್ನು ನಿವಾರಿಸಿಕೊಳ್ಳಲು ಮನೆಮನೆಯ ಮುಂದೆ ದೀಪಗಳನ್ನು ಹಚ್ಚಿ ಬೆಳಕನ್ನು ಕಂಡುಕೊಳ್ಳುವ ಉದ್ದೇಶವೂ ಇರಬಹುದೆನ್ನಿಸುತ್ತದೆ. ಒಟ್ಟಾರೆ ನಾಡಿನಾದ್ಯಂತ ಆಚರಿಸಲಾಗುವ ಈ ದೀಪಾವಳಿ ಹಬ್ಬವನ್ನು ಮ್ಯಾಸಮಂಡಲದಲ್ಲಿಯೂ ಆಚರಿಸಲಾಗುತ್ತದೆ.

ಮ್ಯಾಸಬುಡಕಟ್ಟಿನ ದೇವರು ಕಾಣದ ಲೋಕದವರಲ್ಲ. ಪ್ರಕೃತಿಯ ವಿಶಿಷ್ಟತೆಯನ್ನೇ ದೈವ ಎಂದು ಭಾವಿಸಿ ಪೂಜಿಸುವುದು, ಸೃಷ್ಟಿಗೆ ಕಾರಣವಾಗುವ ತಾಯಿಯನ್ನೇ ಮೊದಲ ದೈವ ಎಂದು ಪೂಜಿಸುವುದು, ತಮಗೆ ಬದುಕನ್ನು ಕಟ್ಟಿಕೊಟ್ಟು ತಮ್ಮನ್ನು ಮುನ್ನಡೆಸಿದ ಹಿರಿಯರನ್ನೇ, ನಾಯಕರನ್ನೇ ತಮ್ಮದೇವರು ಎಂದು ಪೂಜಿಸುವುದು, ಮತ್ತು ತಮ್ಮ ಬದುಕಿಗೆ ಆಧಾರವಾಗಿದ್ದ ಪಶುಸಂಪತ್ತನ್ನೇ ತಮ್ಮ ಹಿರಿಯರೊಂದಿಗೆ ಸಮೀಕರಿಸಿ ದೈವಗಳೆಂದು ಭಾವಿಸಿ ಪೂಜಿಸುವುದು ಈ ಬುಡಕಟ್ಟಿನ ವಿಶೇಷತೆ. ತಮ್ಮ ನಾಯಕ ಅಥವಾ ನಾಯಕಿ ಬಳಸುತ್ತಿದ್ದ ವಸ್ತುವನ್ನು ಬಿದಿರಿನ ಬುಟ್ಟಿಯಲ್ಲಿಟ್ಟು, ಕೆಲವು ಕಡೆ ಸಾಲಿಗ್ರಾಮಗಳನ್ನು ಮತ್ತು ನಾಯಕ/ನಾಯಕಿ ಬಳಸುತ್ತಿದ್ದ ಬಿಲ್ಲು, ಬಾಣ/ ಖಡ್ಗವನ್ನೇ ದೇವರೆಂದು ನಂಬಿ ಪೂಜಿಸುವ ಸಮುದಾಯದಲ್ಲಿ ದೀಪಾವಳಿಯನ್ನು ಇವುಗಳಿಗೆ ಪೂಜೆ ಸಲ್ಲಿಸುವ ಮೂಲಕವೇ ಆಚರಿಸಲಾಗುತ್ತದೆ.

ಮ್ಯಾಸಮಂಡಲದ ಎಲ್ಲಾ ಗುಡಿಕಟ್ಟುಗಳಲ್ಲಿಯೂ ಮತ್ತು ಇದಕ್ಕೆ ಸಂಬಂಧಿಸಿದ ಎತ್ತಿನಗೂಡುಗಳಲ್ಲಿ ಈ ಹಬ್ಬದ ಆಚರಣೆ ನಡೆಯುತ್ತದೆ. ದೀಪಾವಳಿ ಅಮಾವಾಸ್ಯೆಕಳೆದು ಪಾಡ್ಯದ ಸೋಮವಾರ ಹೀರೆಹಳ್ಳಿಯ ದಡ್ಡಿಸೂರನಾಯಕನ ಗುಡಿಗೆ ಈತನಿಂದ ಸಂರಕ್ಷಿಸಲ್ಪಟ್ಟ ದನಕರುಗಳ ಪರಂಪರೆಯಿಂದ ಇಂದಿಗೂ ಉಳಿದು ಬಂದಿರುವ ಆಕಳ ಗೂಡಿನಿಂದ (ಗುಡೇಕೋಟಿ ಬಳಿ ಇರುವ} ಕಿಲಾರಿಗಳು ಮೊಸರು,ತುಪ್ಪವನ್ನು ತಂದು ಸೋಮವಾರ ಸಂಜೆ ಗುಡಿಗೆ ಒಪ್ಪಿಸುತ್ತಾರೆ. ತಮ್ಮ ಹೊಲಗಳಲ್ಲಿ ಬೆಳೆದ ಹಸನಾದ ಸಜ್ಜೆಯತೆನೆಗಳನ್ನು ತಂದು ಒಪ್ಪಿಸುವ ವಾಡಿಕೆಯೂ ಇದೆ. ರಾತ್ರಿಯಿಡಿ ಎಲ್ಲರೂ ಸೇರಿ ಗುಡಿಯಲ್ಲಿ ಹುರುಳಿ, ಗುಗ್ಗರಿ ಬೇಯಿಸಿ ಜೋಳ ಅಥವಾ ಸಜ್ಜೆಯ ಅನ್ನ ಮಾಡಿ ಗೂಡಿನಿಂದ ತಂದ ಮೊಸರನ್ನು ಸೇರಿಸಿ ಬೆಳಗಿನಜಾವ ದಡ್ಡಿಸೂರನಾಯಕನಿಗೆ ನೈವೇದ್ಯ ಮಾಡಲಾಗುತ್ತದೆ.

ರಾತ್ರಿಯಿಡೀ ಉರುಮೆ ವಾದ್ಯದ ಸೇವೆ, ನಾಯಕನನ್ನು ಕುರಿತು ಪದ ಹೇಳುವುದು ನಡೆಯುತ್ತದೆ, ಹೀಗೆ ಗುಡಿಯಲ್ಲಿ ನಡೆಯುವ ಪೂಜೆಯೇ ತಮಗೆ ದೀಪಾವಳಿ ಹಬ್ಬದ ಆಚರಣೆಯಾಗಿದ್ದು ಮನೆ ಮನೆಯ ಮುಂದೆ ದೀಪ ಬೆಳಗಿಸುವ, ರಂಗೋಲಿ ಹಾಕುವ, ಪಟಾಕಿ ಸಿಡಿಸುವ ಆಚರಣೆಗಳು ಇಲ್ಲಿ ಇರುವುದಿಲ್ಲ.
ಕಂಪಳ ದೇವರ ಹಟ್ಟಿಯಲ್ಲಿ ಇದಕ್ಕಿಂತ ಸ್ವಲ್ಪ ಭಿನ್ನವಾಗಿ ಹಬ್ಬದ ಆಚರಣೆ ನಡೆಯುತ್ತದೆ. ಮಾಘ ಮಾಸದಲ್ಲಿ ನಡೆಯುವ ಗುಗ್ಗರಿ ಹಬ್ಬದಲ್ಲಿ ಮಾಡುವಂತೆ ಈ ಸಮಯದಲ್ಲಿಯೂ ಅಮಾವಾಸ್ಯೆ ನಂತರದ ಶುಕ್ರವಾರದಂದು ಪೆಟ್ಟಿ ದೇವರನ್ನು ಗುಡಿಯಿಂದ ತಂದು ಹಟ್ಟಿಯ ಹೊರವಲಯದಲ್ಲಿ ಹೊಸ ಉದಿ/ಪದಿಯನ್ನು ಕಟ್ಟಿ ಇದರಲ್ಲಿ ಕೂರಿಸಿ ಮೂರು ದಿನಗಳ ಹಬ್ಬದ ಆಚರಣೆ ನಡೆಸಲಾಗುತ್ತದೆ.

ತೆಲುಗಿನಲ್ಲಿ ಇದನ್ನು ‘ದುಯಿಲಪಂಡುವ’ ಎಂದು ಕರೆಯಲಾಗುತ್ತದೆ. ಕಂಪಳ ದೇವರ ಪೆಟ್ಟಿಯೊಂದಿಗೆ ಜಗಲೂರು ಪಾಪನಾಯಕನನ್ನು ಸಂಕೇತಿಸುವ ಬಿಲ್ಲು ದೇವರನ್ನೂ ತಂದು ಪೂಜಿಸಲಾಗುತ್ತದೆ. ಆಕಳಗೂಡಿನ ಮೀಸಲು ಮೊಸರು ಮತ್ತು ಬೆಣ್ಣೆಯನ್ನು ಅರ್ಪಿಸುವುದು ಇಲ್ಲಿ ಬಹಳ ವಿಶೇಷವಾದುದು. ಗತಿಸಿದ ಎತ್ತು ಮತ್ತು ಆಕಳಿಂದ ಸಂಗ್ರಹಿಸಿದ ಕೊಂಬನ್ನು ಇಲ್ಲಿ ಬೆಣ್ಣೆಯನ್ನು ಶೇಕರಿಸಲು ಬಳಸಲಾಗುತ್ತದೆ.ಬುಡಕಟ್ಟಿನ ಜನತೆ ತಮಗೆ ಸಿಗುವ ವಸ್ತುಗಳನ್ನೇ ಸಲಕರಣೆಗಳನ್ನಾಗಿ ಬಳಸುವ ವಿಧಾನ ಇಲ್ಲಿ ಗಮನ ಸೆಳೆಯುತ್ತದೆ. ಹೀಗೆ ಸಂಗ್ರಹಿಸಿದ ಬೆಣ್ಣೆಯನ್ನು ಕಾಯಿಸಿ ತುಪ್ಪ ಮಾಡಿ ಪದಿಯಲ್ಲಿ ದೀಪವನ್ನು ಉರಿಸಲಾಗುತ್ತದೆ.ಮೊಸರು,ಜೋಳದ/ಸಜ್ಜೆಯ ಅನ್ನ,ಬಾಳೆಹಣ್ಣು,ಬೆಲ್ಲವನ್ನು ಬೆಳಗಿನಜಾವದಲ್ಲಿ ನೈವೇದ್ಯ,ಮಾಡಲಾಗುತ್ತದೆ.

ಇದರೊಂದಿಗೆ ಎತ್ತುಗಳನ್ನೂ ಹರಿಯಿಸುವುದು, ಮಣೇವು, ಉರಿಯುವ ಪಂಜುಗಳನ್ನೇ ನುಂಗುವುದು ಈ ಹಬ್ಬದ ಪ್ರಮುಖ ಆಚರಣೆಗಳಾಗಿವೆ. ನನ್ನಿವಾಳದ ಕಟ್ಟಿಮನೆಗೆ ಸೇರಿದ ಬಂಗಾರುದೇವರ ಹಟ್ಟಿಯಲ್ಲಿ ದೇವರುಗಳನ್ನು ಮತ್ತು ಬೆಳಗಟ್ಟದ ಸೂರೆಯರಗಾಟನಾಯಕನಿಗೆ ಸಂಬಂಧಿಸಿದಂತೆ, ಬೋಸೇದೇವರ ಹಟ್ಟಿಯ ಬೋಸೇರಂಗಯ್ಯನ ಪೆಟ್ಟಿಯನ್ನು, ದೊಣಮಂಡಲಹಟ್ಟಿಯ ಮಂಡಬೊಮ್ಮದೇವರನ್ನು ಹಟ್ಟಿಯಿಂದ ಹೊರಗೆ ತಂದು ಊರ ಹೊರಗೆ ಹೊಸ ಪದಿಯನ್ನು ಕಟ್ಟಿ, ಗೂಡಿನಿಂದ ಎತ್ತುಗಳನ್ನು ಕರೆಸಿ ಗೌರವಿಸಿ ಪೂಜಿಸುವ ಕ್ರಮವಿದೆ.

ಒಟ್ಟಾರೆ ಈಮ್ಯಾಸಮಂಡಲದ ದೀಪಾವಳಿ ಹಬ್ಬಕ್ಕೆ ಆಯಾ ಗುಂಪಿನವರೆಲ್ಲರೂ ಕಾಸು,ಹಾಲು, ಮೊಸರನ್ನು ಅರ್ಪಿಸಿ ಪಾಲ್ಗೊಳ್ಳುವಿಕೆಯೇ ಇಲ್ಲಿ ಸಾಮುದಾಯಿಕತೆಯ ಮಹತ್ವವನ್ನು ಪಡೆಯುತ್ತದೆ. ಈ ದೀಪಾವಳಿ ಹಬ್ಬದ ಆಚರಣೆಯಲ್ಲಿಎಲ್ಲಾ ಪದಿಗಳಲ್ಲಯೂ ದಾಸೋಹ ವಿಶೇಷವಾಗಿ ನಡೆಯುತ್ತದೆ. ಮುಂಗಾರು ಮಳೆ ಸುರಿದು ಸೊಂಪಾಗಿ ಬೆಳೆದ ಹುಲ್ಲನ್ನು ತಿಂದು ಹಸುಗಳು ಸಾಕಷ್ಟು ಹಾಲನ್ನು ಕೊಡುವುದರಿಂದ ಸಮೃದ್ಧವಾದ ಹಾಲು,ಮೊಸರು ಈ ಹಬ್ಬಕ್ಕೆ ಒದಗುತ್ತದೆ.ಇದನ್ನು ಎಡೆ ಮಾಡಿದ ನಂತರ ಎಲ್ಲರಿಗೂ ದಾಸೋಹದಲ್ಲಿ ನೀಡಲಾಗುತ್ತದೆ.

ಈ ಬುಡಕಟ್ಟಿನ ದೀಪಾವಳಿ ಹಬ್ಬದ ಆಚರಣೆಯ ಹಿಂದೆ ನಮ್ಮ ಭಾರತದ ಪೌರಾಣಿಕ ಕಥನಗಳಾವುವು ಕೇಳಿ ಬರುವುದಿಲ್ಲ.ಮನೆ ಮನೆಯ ಮುಂದೆ ದೀಪಗಳನ್ನು ಹಚ್ಚಿ ಸಡಗರಿಸುವುದು ಇಲ್ಲಿಲ್ಲ. ರಂಗೋಲಿ ಹಾಕುವುದಂತೂ ಬುಡಕಟ್ಟಿನ ನಿಶೇಧಗಳಲ್ಲಿ ಒಂದಾಗಿರುವುದರಿಂದ ಆ ಪ್ರಸ್ತಾಪವೇ ಇಲ್ಲಿಲ್ಲ. ಬದಲಾಗಿ ತಮ್ಮ ಮನೆ ದೇವರಾದ ಪೆಟ್ಟಿಗೆ ದೇವರು/ಬಿಲ್ಲು ದೇವರು/ಎತ್ತುಗಳನ್ನು ಗೌರವಿಸಿ ಪೂಜಿಸುವುದು. ಈ ಮೂಲಕವಾಗಿಯೇ ತಮ್ಮ ಮುಂದಿನ ಬದುಕಿಗೆ ಬೇಕಾದ ಬೆಳಕನ್ನು, ಚೈತನ್ಯವನ್ನು ಕೋರುವುದು ಇಲ್ಲಿ ಮುಖ್ಯವಾಗಿರುತ್ತದೆ.

ತಾನು ಬದುಕಿರುವ ಪರಿಸರ, ತಮಗೆ ಬದುಕನ್ನು ಕಟ್ಟಿಕೊಡುವ ಪ್ರಾದೇಶಿಕತೆ ಮತ್ತು ಭೌತಿಕ ಪ್ರಪಂಚ ಮತ್ತು ತನಗೆ ನೈತಿಕ ಬೆಂಬಲವಾಗಿ ನಿಂತ ತನ್ನ ಸಾಂಸ್ಕೃತಿಕ ಜಗತ್ತು ಈ ಎಲ್ಲವುಗಳ ಮೂಲಕ ಒಡಮೂಡುವ ದೇಸಿತನ ಆಯಾ ಬುಡಕಟ್ಟಿನ ಆಚರಣೆಗಳಿಗೆ ಸೈದ್ಧಾಂತಿಕತೆಯನ್ನು ಒದಗಿಸಿಕೊಡುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಮ್ಯಾಸಬೇಡ ಬುಡಕಟ್ಟಿನ ಈ ದೀಪಾವಳಿ ಆಚರಣೆಯಲ್ಲಿ ಈ ದೇಸಿತನವೇ ಒಡಮೂಡಿರುವುದನ್ನು ಕಾಣಬಹುದಾಗಿದೆ.ಆದಿವಾಸಿಗಳ ಧರ‍್ಮಿಕ ಜಗತ್ತಿನಲ್ಲಿ ಸರ‍್ಪಣಾಭಾವ ಮತ್ತು ಪಾರಂಪರಿಕ ಸಂಬಂಧ ಮುಖ್ಯವಾಗಿರುತ್ತದೆ. ಈ ಆಚರಣೆಗಳನ್ನು ಸಮುದಾಯದ ಸಾಂಸ್ಕೃತಿಕ ಅಸ್ಮಿತೆಗಳು ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending