ದಿನದ ಸುದ್ದಿ
2.5 ಕೋಟಿ ಖರೀದಿಯಲ್ಲಿ ಅವ್ಯವಹಾರ ; ಆಯುಕ್ತೆ ಮಂಜುಶ್ರೀ ಸೇರಿ 6 ಅಧಿಕಾರಿಗಳ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ:ಕಾಲೇಜು ಶಿಕ್ಷಣ ಇಲಾಖೆಯ 19 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಐ.ಡಿ.ಪಿ ಅನುದಾನದ ಅಡಿಯಲ್ಲಿ ನಡೆದಿರುವ ರೂ. 2,59,89,250/-ಗಳ ಖರೀದಿ ವ್ಯವಹಾರದಲ್ಲಿ ನಡೆದಿರುವ ಅವ್ಯವಹಾರವನ್ನು ತನಿಖೆಗೆ ಒಳಪಡಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಯುಕ್ತೆ ಮಂಜುಶ್ರೀ ಸೇರಿ 6 ಜನ ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಐ.ಡಿ.ಪಿ ಅನುದಾನವನ್ನು ಅಗತ್ಯಕ್ಕೆ ಅನುಗುಣವಾಗಿ ಆಯಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರುಗಳೇ ನಿಯಮಾನುಸಾರ ಖರೀದಿ ವ್ಯವಹಾರ ನಡೆಸಬೇಕೆಂಬ ನಿಯಮವಿದ್ದರೂ, ಕಮೀಷನ್ ಆಸೆಗಾಗಿ ಕಾಲೇಜು ಶಿಕ್ಷಣ ಇಲಾಖೆ ಕೇಂದ್ರ ಕಛೇರಿಯ ಅಧಿಕಾರಿಗಳು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರುಗಳ ಅಧಿಕಾರವನ್ನು ಕಿತ್ತುಕೊಂಡು 2024-25ನೇ ಸಾಲಿನಲ್ಲಿ ರೂ. 2,59,89,250/-ಗಳ ಖರೀದಿ ಪ್ರಕ್ರಿಯೆಗೆ ಮುಂದಾಗಿರುತ್ತಾರೆ. ಐ.ಡಿ.ಪಿ ಅನುದಾನದಲ್ಲಿ 19 ಕಾಲೇಜುಗಳಿಗೆ ಅಗತ್ಯವಿರುವ ಡೆಸ್ಕ್ಟಾಪ್, ಲ್ಯಾಪ್ಟಾಪ್, ಯು.ಪಿ.ಎಸ್ ಮತ್ತು ಪ್ರಿಂಟರ್ಗಳ ಖರೀದಿಯಲ್ಲಿ ಸಾಕಷ್ಟು ಲೋಪಗಳಿದ್ದು, ನಿಯಮಾನುಸಾರ ಟೆಂಡರ್ ಪ್ರಕ್ರಿಯೆ ನಡೆಸದೆ ಇರುವುದು, ಖರೀದಿಸಿದ ಸಾಮಾಗ್ರಿಗಳಿಗೆ ಮಾರುಕಟ್ಟೆಗಿಂತ ಅಧಿಕ ಬೆಲೆ ನೀಡಿರುವುದು ಸೇರಿ ಹಲವಾರು ಅಂಶಗಳನ್ನು ಗುರುತಿಸಿ ಹೆಚ್ಚಿನ ತನಿಖೆ ನಡೆಸುವಂತೆ ದೂರು ಅರ್ಜಿಯಲ್ಲಿ ತಿಳಿಸಿದ್ದಾರೆ.
ಇಷ್ಟೆ ಅಲ್ಲದೆ ಇದೇ ಸಮಯದಲ್ಲಿ ರೂಸಾ ಅನುದಾನದ ಅಡಿಯಲ್ಲಿ ನಡೆದ ಖರೀದಿ ವ್ಯವಹಾರ ಹಾಗೂ ಕಾಲೇಜುಗಳಿಗೆ ವಿಜ್ಞಾನ ಪರಿಕರಗಳ ಖರೀದಿ ವ್ಯವಹಾರವನ್ನು ನಡೆಸಿದ್ದು, ಇದರಲ್ಲಿಯೂ ಕೋಟ್ಯಾಂತರ ರೂಪಾಯಿಗಳ ಅವ್ಯವಹಾರ ನಡೆದಿದ್ದು, ಈ ಎಲ್ಲಾ ಖರೀದಿ ವ್ಯವಹಾರಗಳಲ್ಲಿ ಭಾಗಿಯಾಗಿರುವ ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಡಾ.ಶೋಭಾ ಜಿ, ನಿರ್ದೇಶಕರು. ಶ್ರೀ ಚೇತನ್ ಕುಮಾರ್ ಎನ್, ಲೆಕ್ಕಾಧಿಕಾರಿಗಳು, ಡಾ.ನಂದಿತಾ ಪ್ರಸಾದ್, ಮಾಹಿತಿ ತಂತ್ರಜ್ಞಾನ ಅಧಿಕಾರಿಗಳು. ಡಾ.ಶ್ರೀಕಾಂತ್ ಆರ್, ಸಮನ್ವಯಾಧಿಕಾರಿಗಳು. ಡಾ.ಸುಮ ಎಸ್, ರೂಸಾ ಸಮನ್ವಯಾಧಿಕಾರಿಗಳು ಇವರುಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆರೋಪಿಸಿರುವುದಾಗಿ ತಿಳಿಸಿದ್ದಾರೆ.
2023ನೇ ಸಾಲಿನಲ್ಲಿ ಅಂದಾಜು 23 ಕೋಟಿ ರೂಪಾಯಿಗಳ ಖರೀದಿ ವ್ಯವಹಾರವನ್ನು ಕೇಂದ್ರ ಕಛೇರಿಯಿಂದ ನಡೆಸಿದ್ದು, ಇದಕ್ಕೆ ಸಂಬಂಧಿಸಿದ ಅಧಿಕೃತ ಮಾಹಿತಿಯನ್ನು ನೀಡದ ಕಾರಣ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಿಗೆ ದೂರು ನೀಡಿ, ಇಲಾಖಾ ತನಿಖೆ ನಡೆಸುವಂತೆ ಕೋರಲಾಗಿದ್ದು, ನಿಗಧಿತ ಅವಧಿಯಲ್ಲಿ ಯಾವುದೇ ಪ್ರತ್ಯುತ್ತರ ಬಂದಿರುವುದಿಲ್ಲ. ಮುಂದಿನ ದಿನಗಳಲ್ಲಿ ಅಂದಾಜು 23 ಕೋಟಿ ಮೊತ್ತದ ಖರೀದಿ ವ್ಯವಹಾರವನ್ನು ತನಿಖೆ ನಡೆಸುವಂತೆ ದೂರು ನೀಡಲಾಗುವುದು ಎಂಬುದಾಗಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243