ಭಾವ ಭೈರಾಗಿ
ಬ್ಯುಸಿ ಅನ್ನೋ ಭ್ರಮೆ ಜೀವನವನ್ನೇ ತಿಂದುಬಿಡುತ್ತೆ !

ನಾವಂತೂ ತುಂಬಾ ಬ್ಯುಸಿನಪ್ಪಾ ಯಾರಿಗೂ ಫೋನ್ ಮಾಡೋಕಾಗಲ್ಲ, ಊರಿಗೆ ಹೋಗೋಕಂತೂ ಟೈಮೇ ಇಲ್ಲ, ಮೊದಲೆಲ್ಲಾ ಗೆಳೆಯರೊಂದಿಗೆ ಗಂಟೆಗಟ್ಟಲೆ ಮಾತಾಡ್ತಿದ್ವಿ ಈಗ ಅದು ಸಾಧ್ಯವೇ ಇಲ್ಲ, ಪುಸ್ತಕ ಓದುವುದು ದೂರದ ಮಾತು, ಹವ್ಯಾಸಗಳೇನಾದ್ರೂ ಉಳಿದುಕೊಂಡಿದ್ಯಾ ಅಂತ ನೋಡಿದ್ರೆ ಹುಡುಕಿದರೂ ಒಂದೂ ಉಳಿದಿಲ್ಲ. ವಾಕ್ ಹೋಗಲ್ಲ, ವ್ಯಾಯಾಮ ಮಾಡಲ್ಲ, ಜಾತ್ರೆ ನೋಡಲ್ಲ, ಪಕ್ಕದ ಮನೆಯಲ್ಲಿ ಯಾರಾದ್ರೂ ಸತ್ತರೆ ಹೋಗಿ ಒಂದರ್ಧ ಗಂಟೆ ನೋಡಿಕೊಂಡು ಬರೋಕಾಗಲ್ಲ, ಹಳೇ ಗೆಳೆಯ ಗೆಳತಿಯರ ಮದುವೆಗೂ ಹೋಗುವಷ್ಟು ಟೈಮಿಲ್ಲ, ಮಕ್ಕಳ ಜೊತೆಯಂತೂ ಆಟವಾಡೋದು ದೂರದ ಮಾತು, ಹೀಗೆ ಏನು ಮಾಡೋಕು ಟೈಮಿಲ್ಲ. ಅಸಲಿಗೆ ಊಟ ತಿಂಡಿ ಮಾಡೋಕು ಆಗ್ತಿಲ್ಲ, ಎಷ್ಟೋ ಜನ ಅವರವರ ಹೆಂಡತಿ ಮಕ್ಕಳ ಮುಖ ನೋಡಿ ಕಣ್ಣಲ್ಲಿ ಕಣ ್ಣಟ್ಟು ಮಾತಾಡಿ ಅದೆಷ್ಟೋ ದಿನವಾಗಿದೆ. ಯಾಕಂದ್ರೆ ನಾವು ತುಂಬಾ ಬ್ಯುಸಿ.
ನನಗೆ ಒಂದು ಸಣ್ಣ ಪ್ರಶ್ನೆ ಕಾಡ್ತಿದೆ. ಹೌದು ಇದ್ಯಾವುದೂ ಮಾಡೋಕೆ ಟೈಮಿಲ್ಲ ಅಂದ್ರೆ ಇರೋ ಸಮಯದಲ್ಲಿ ನಾವು ಏನು ಮಾಡ್ತಿದ್ದೇವೆ. ಊಟ ತಿಂಡಿ ಕೆಲಸ , ಹವ್ಯಾಸ, ಯಾವುದೂ ಮಾಡ್ತಿಲ್ಲ ಆದರೂ ನಮಗೆ ಸಮಯವಿಲ್ಲ ಎಂಥ ಮಾತು ಅಲ್ವಾ. ಅಸಲಿಗೆ ನಾವು ಮಾಡ್ತಿರೋದಾದ್ರೂ ಏನು ಅಂತ ನೋಡಿದ್ರೆ ಬರೀ ಕೆಲಸ ಅದು ನಮಗೆ ಸಂಬಳ ಕೊಡಬಲ್ಲ ಒಂದು ಕೆಲಸ ಅಷ್ಟೇ. ಅದನ್ನು ಮಾಡ್ತಿರೋದೆ ಜೀವನ ನಿರ್ವಹಣೆಗೆ ಅಂತಲ್ವಾ,,, ನಮಗೆ ನಮ್ಮದೇ ಆದ ಒಂದು ಜೀವನವಿದೆ ಆ ಜೀವನವನ್ನ ಅದೆಷ್ಟು ಚೆಂದಗೆ ರೂಪಿಸಿಕೊಳ್ಳಬಹುದೋ ಅಷ್ಟು ಚೆಂದವಾಗಿ ರೂಪಿಸಿಕೊಳ್ಳಬೇಕಿದೆ. ಹೀಗಾಗಿಯೇ ಆ ಚೆಂದದ ಬದುಕಿಗೆ ಏನೆಲ್ಲಾ ಬೇಕೋ ಅದನ್ನು ಕೊಂಡುಕೊಳ್ಳಲು ನಾವು ಹಾಗೂ ನಮ್ಮವರು ಸಂತೋಷವಾಗಿರಲು ಏನೆನು ಬೇಕೋ ಅದನ್ನು ಕೊಂಡುಕೊಳ್ಳಲು ಹಣ ಬೇಕು ಆ ಹಣಕ್ಕಾಗಿ ನಾವು ಕೆಲಸ ಮಾಡ್ತಿದ್ದೇವೆ, ಆದರೆ ಮೂಲ ಉದ್ದೇಶವನ್ನೇ ಮರೆತು ಎಲ್ಲವನ್ನೂ ಬಿಟ್ಟು ಬರೀ ಕೆಲಸವನ್ನೇ ಇಪ್ಪತ್ನಾಲ್ಕು ಗಂಟೆ ಮಾಡ್ತಿದ್ರೆ ಏನು ಬಂತು ಭಾಗ್ಯ ಅಲ್ವಾ..
ಹಾಗಂತ ನಾವು ಮಾಡೋ ಕೆಲಸದ ಉದ್ದೇಶ ಕೇವಲ ಹಣಗಳಿಕೆ ಅತಲ್ಲ. ಸಾಕಷ್ಟು ಮಂದಿ ಹಣ ಇದ್ದರೂ ಪ್ಯಾಷನ್ ಗಾಗಿ ಕೆಲಸ ಮಾಡುವವರಿದ್ದಾರೆ. ಹಾಗೇ ಸಾಧಿಸುವ ಛಲಕ್ಕಾಗಿ ಏನಾದರೂ ಮಾಡುವವರಿದ್ದಾರೆ. ಅದೆಲ್ಲವೂ ಸರಿ ಆದರೆ ಅದರ ಜೊತೆಗೆ ಈ ಮೇಲೆ ಹೇಳಿದ ಅಷ್ಟೂ ವಿಚಾರಗಳೂ ಮುಖ್ಯ ಅನ್ನೋದನ್ನ ನಾವು ಮರೆತೇ ಬಿಟ್ಟಿದ್ದೇವೆ. ಅದೆಷ್ಟೋ ಜನ ಉದ್ಯಮಿಗಳಿಗೆ ಮನೆ ಯಾವುದು ಆಫೀಸು ಯಾವುದು ಎಂದೇ ಸರಿಯಾಗಿ ನೆನಪಿರುವುದಿಲ್ಲ ಮನೆಯಲ್ಲೂ ವ್ಯವಹಾರದ್ದೇ ಚಿಂತೆ, ಇನ್ನು ಆಫೀಸಿನ ತಲೆನೋವನ್ನು ಮನೆವರೆಗೂ ತಂದು ಮನೆಯವರಿಗೂ ಹಂಚುವ ಮಂದಿಗೇನೂ ಕಡಿಮೆ ಇಲ್ಲ. ಇನ್ನು ಎಲ್ಲವೂ ಸರಿಯಿದ್ದರೂ ಸುಮ್ಮನೇ ಟಿವಿ ನೋಡಿ ಟೈಂ ವೇಸ್ಟ್ ಮಾಡುವ ಮಂದಿಗೂ ಮೇಲಿನ ಎಲ್ಲಾ ವಿಚಾರಗಳೂ ಅನ್ವಯಿಸುತ್ತವೆ.
ಹೌದು ಮಾಡುವ ಕೆಲಸವನ್ನ ಅದೆಷ್ಟು ಶ್ರದ್ಧೆಯಿಂದ ಮಾಡಲು ಸಾಧ್ಯವೋ ಅಷ್ಟು ಶ್ರದ್ದೆಯಿಂದ ಅಷ್ಟು ಅಚ್ಚುಕಟ್ಟಾಗಿ ಮಾಡುವುದರಿಂದ ಏನಾದರೂ ಮಾಡಲು ಸಾಧ್ಯವಿದೆ. ತಪಸ್ಸಿನಂತೆ ಕೆಲಸ ಮಾಡದೆ ಯಾರೂ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಆದರೆ ಬದುಕನ್ನು ಕಂಪಾರ್ಟ್ಮೆಂಟ್ ಆಗಿ ವಿಂಗಡಿಸಿಕೊಳ್ಳುವುದು ಅಷ್ಟೇ ಮುಖ್ಯವಾಗಿರುತ್ತೆ. ನಾವು ಮಾಡುವ ಅಷ್ಟೂ ಕೆಲಸವನ್ನೂ ಅಷ್ಟೇ ಶ್ರದ್ದೆಯಿಂದ ಮಾಡಬೇಕಲ್ಲವೇ, ನಾವು ಗಾಡಿ ಓಡಿಸುವಾಗ ಶುಧ್ಧ ಡ್ರೈವರ್ ಆಗಿ ಕಾರ್ಯ ನಿರ್ವಹಿಸಬೇಕಿದೆ, ಮನೆಯಲ್ಲಿದ್ದಾಗ ಒಬ್ಬ ಯಶಸ್ವೀ ಮಗನಾಗಿ, ತಾಯಿಯೊಂದಿಗಿದ್ದಾಗ ಒಬ್ಬ ಒಳ್ಳೆಯ ಮಗನಾಗಿ, ಮಗಳೊಂದಿಗಿದ್ದಾಗ ಒಬ್ಬ ಸಕ್ಸಸ್ ಫುಲ್ ತಂದೆಯಾಗಿ, ಗೆಳೆಯರೊಂದಿಗಿದ್ದಾಗ ಗೆಳೆಯನಾಗಿ, ಆಫೀಸಿನಲ್ಲಿದ್ದಾಗ ಉತ್ತಮ ಉದ್ಯೋಗಿಯಾಗಿ ಹೀಗೆ ಪ್ರತಿ ಹಂತದಲ್ಲೂ ಅದೇ ಆಗಿ ಕಾರ್ಯ ನಿರ್ವಹಿಸಬೇಕಿದೆ ಇದೆಲ್ಲವನ್ನೂ ಸರಿದೂಗಿಸಿಕೊಂಡು ಹೋಗುವುದರಲ್ಲೇ ನಮ್ಮ ಶಕ್ತಿ ಅಡಗಿರುತ್ತೆ. ಆಫೀಸಿನಲ್ಲಿ ಟೆನ್ಷನ್ ಅಂತ ಮನೆಯಲ್ಲಿ ಹೆಂಡತಿ ಮೇಲೆ ಕೂಗಾಡಿದರೆ ಏನಾದರೂ ಬಗೆಹರಿಯಲು ಸಾಧ್ಯವಾ,,, ಈ ಪಾತ್ರ ನಿರ್ವಹಣೆಯಲ್ಲಿ ಪಾಸಾದವರು ಜೀವನದಲ್ಲು ಪಾಸಾಗಬಹುದು, ಇಲ್ಲಿ ವಿಫಲರಾದವರು ಜೀವನದಲ್ಲೂ ವಿಫ¯ರಾಗುವ ಅಪಾಯವಿದೆ.
ನಾವು ಹೇಳ್ತೀವಿ ನಮಗೆ ಸಮಯವಿಲ್ಲ ಅಂತ. ಆದರೆ ನಾವೆಲ್ಲರೂ ನೆನಪಿನಲ್ಲಿಡಬೇಕಾದ್ದು ಎಲ್ಲ ದೊಡ್ಡ ದೊಡ್ಡ ಸಾಧಕರಿಗೂ ಇದ್ದದ್ದು ನಮ್ಮಷ್ಟೆ ಸಮಯ. ಒಂದು ಸಣ್ಣ ಉದಾಹರಣೆ ಹೇಳಬೇಕೆಂದರೆ ನಮ್ಮೆಲ್ಲರ ಸ್ಪೂರ್ತಿ ಪೂರ್ಣ ಚಂದ್ರ ತೇಜಸ್ವಿ. ಅವರು ಎಂದಿಗೂ ಒಂದಕ್ಕೊಂದು ಬೆರೆಸಿ ಬ್ಯುಸಿ ಲೈಫ್ ಎಂದವರಲ್ಲ. ಆದರೆ ಈ ಮೇಲೆ ಹೇಳಿದ ಕಂಪಾರ್ಟ್ಮೆಂಟ್ ಮಾಡಿಕೊಳ್ಳುವುದನ್ನು ಚೆನ್ನಾಗಿ ರೂಢಿಸಿಕೊಂಡಿದ್ದರು. ಅವರು ಬರೆಯಲು ಕುಳಿತರೆಂದರೆ ಯಾರೂ ಅವರನ್ನು ಡಿಸ್ಟರ್ಬ್ ಮಾಡುತ್ತಿರಲಿಲ್ಲ. ಕಂಪ್ಯೂಟರ್ ರಿಪೇರಿ ಮಾಡುವಾಗಲೂ ಅವರಿಗೆ ಅಷ್ಟೆ ತಲ್ಲೀನತೆ. ಒಮ್ಮೆ ಮನಸು ಮಾಡಿ ಮೀನು ಹಿಡಿಯಲು ಕುಳಿತರೆಂದರೆ ಮನೆಯಲ್ಲಿ ಏನಾಯ್ತು ಯಾಕಾಯ್ತು ಎಂಬ ಚಿಂತೆ ಮಾಡುತ್ತಿರಲಿಲ್ಲ, ಯಾವುದೋ ಹಕ್ಕಿಯ ಜಾಡು ಹಿಡಿದು ಫೋಟೋ ತೆಗೆಯಲು ನಿರ್ಧರಿಸಿದರೆಂದರೆ ಇತ್ತ ಸರ್ಕಾರವೇ ಉರುಳಿಹೋಗುತ್ತಿದೆ ಎಂದರೂ ತಲೆಕೆಡಿಸಿಕೊಂಡವರಲ್ಲ. ಹೀಗೆ ಯಾವುದನ್ನು ಮಾಡಿದರು ಅಷ್ಟೇ ತಲ್ಲೀನತೆ ಅವರಿಗಿತ್ತು. ಒಮ್ಮೆ ಉದಯ ಟಿವಿಯವರು ಸಂದರ್ಶನವೊಂದಕ್ಕಾಗಿ ಕಷ್ಟಪಟ್ಟು ಒಪ್ಪಿಸಿದ್ದರು. ಶೂಟಿಂಗ್ ಗಾಗಿ ಒಂದು ಗಂಟೆ ಕಾಲಾವಕಾಶವನ್ನೂ ಪಡೆದರು. ಅದಕ್ಕೂ ಮೊದಲೆ ಅಲ್ಲಿ ಹೋಗಿ ತೇಜಸ್ವಿ ದಂಪತಿಯವರನ್ನು ಕಂಡು ಮಾತನಾಡಿಸಿ ಕೆಲಸ ಆರಂಭಿಸಿದರು. ಇವರು ಲೈಟ್ ಸೆಟ್ ಮಾಡಿಕೊಂಡು ಹಾಗೆ ಹೀಗೆ ಮಾಡುವುದರೊಳಗೆ ಇವರು ಪಡೆದಿದ್ದ ಸಮಯ ಮುಗಿದೇ ಹೋಗಿತ್ತು. ತೇಜಸ್ವಿಯವರು ತಮ್ಮಪಾಡಿಗೆ ತಾವು ಏನೂ ಹೇಳದೆ ಪಕ್ಕದ ಕೋಣೆಗೆ ಹೋಗಿ ಬರೆಯಲಾರಂಭಿಸಿದರು. ಎಲ್ಲ ಸಿದ್ಧತೆ ಮುಗಿದ ನಂತರ ಎಸ್,ಎಲ್,ಎನ್ ಸ್ವಾಮಿಯವರು ತೇಜಸ್ವಿಯವರನ್ನು ಕರೆಯಲು ಹೋದರು. ಅತ್ತಕಡೆಯಿಂದ ಬಂದ ಉತ್ತರ ಯಾರು ನೀವು?,,,,, ಅಷ್ಟೇ ಸ್ವಾಮಿಯವರು ಬೆವೆತು ಹೋಗಿದ್ದರು. ಮತ್ತೆ ಪರಿಚಯ ಹೇಳಿಕೊಂಡು ಕರೆದಾಗ ನಿಮಗೆ ಕೊಟ್ಟ ಸಮಯ ಮುಗಿದಿದೆ, ನನಗೀಗ ಬೇರೆ ಕೆಲಸವಿದೆ ಎಂದರು ಆನಂತರ ಶೂಟಿಂಗ್ ಗಾಗಿ ಗೋಗರೆಯಬೇಕಾಯ್ತು.
ಇಲ್ಲಿ ನಾವು ಗಮನಿಸಬೇಕಿರುವುದು, ತೇಜಸ್ವಿಯವರು ಬರೆಯಲು ಕುಳಿತ ನಂತರ ಈ ಗುಂಪು ಅಲ್ಲಿ ಏನು ಮಾಡುತ್ತಿದೆ ಎಂಬುದೇ ಅವರ ಗಮನಕ್ಕಿರಲಿಲ್ಲ. ಸ್ವಾಮಿಯವರನ್ನು ಸ್ವಾಭಾವಿಕವಾಗಿಯೇ ನೀವ್ಯಾರು ಎಂದು ಕೇಳಿದ್ದರು. ಅಷ್ಟರಮಟ್ಟಿಗೆ ಅವರು ಸಮಯವನ್ನು ವಿಭಾಗಿಸಿಕೊಳ್ಳುತ್ತಿದ್ದರು. ಅವರು ಸಕ್ಸಸ್ಫುಲ್ ತಂದೆ, ಒಳ್ಳೆಯ ಗಂಡ ಉತ್ತಮ ಪ್ರಜೆ , ಸಾಧಕ ಎಲ್ಲವೂ ಆಗಿದ್ದೂ ಅವರಿಗೆ ಗುದ್ದಲಿ ಹಿಡಿದು ತೋಟದಲ್ಲಿ ಕೆಲಸ ಮಾಡುವಷ್ಟು ಸಮಯವಿತ್ತು. ಪಂಚರ್ ಅಂಗಡಿಯ ಹುಡುಗನೊಂದಿಗೆ ಹರಟೆಹೊಡೆದು ಇಂಟ್ರೆಸ್ಟಿಂಗ್ ವಿಷಯಗಳನ್ನು ತಿಳಿದುಕೊಳ್ಳುವ ಕುತೂಹಲವಿತ್ತು. ಈಗ ಯೋಚಿಸಿ ನಮಗೆ ಯಾಕೆ ಸಮಯವಿಲ್ಲ.
ಬದುಕೇ ಹಾಗೆ ಇಲ್ಲಿ ಯಾವುದು ಮುಖ್ಯ ಎಂಬ ಪ್ರಶ್ನೆಯ ಮೇಲೆ ನಾವು ಮಾಡುವ ಕೆಲಸ ನಿರ್ಧರಿತವಾಗುತ್ತದೆ. ಹೀಗೆ ಬ್ಯುಸಿಲೈಫ್ ಲೀಡ್ ಮಾಡ್ತಾ ಹೋದವರು ಯಾವತ್ತೋ ಒಂದುದಿನ ಹಿಂದೆ ತಿರುಗಿ ನೋಡಿದರೆ ಎಲ್ಲವೂ ಖಾಲಿ ಖಾಲಿ ಅನ್ನಿಸಬಹುದು, ಯಾತಕ್ಕಾಗಿ ಇದೆಲ್ಲವನ್ನೂ ಮಾಡುತ್ತೇವೆಯೋ ಅದನ್ನೇ ಕಳೆದುಕೊಂಡಿರುತ್ತೇವೆ. ಯಾವುದೋ ಕಂಪಡನಿಗಾಗಿ ಹಗಲು ರಾತ್ರಿ ದುಡಿದವನು ಕಂಪನಿಯಿಂದ ಹೊರಬಂದಾಗ ಕಂಪನಿಗೆ ಆತ ಯಾರೆಂದು ನೋಡುವಷ್ಟೂ ಸಮಯವಿರಲ್ಲ, ಶ್ರಧ್ದೆಯಿಂದ ಸರ್ಕಾರಿ ಕೆಲಸಮಾಡಿದವರು ನಿವೃತ್ತರಾದ ನಂತರ ಅವರಿಗೊಂದು ಥ್ಯಾಂಕ್ಸ್ ಹೇಳುವವರೂ ಇರುವುದಿಲ್ಲ ಹಾಗಾದರೆ ಇದೆಲ್ಲವನ್ನೂ ಯಾರಿಗಾಗಿ ಮಾಡಿದೆಎನಿಸದೇ ಇರಲಾರದು. ಕಳೆದುಕೊಂಡ ಸಮಯಕ್ಕಾಗಿ ಎಂದೋ ಪರಿತಪಿಸುವುದಕ್ಕಿಂತ ಇಂದೇ ಎಚ್ಚೆತ್ತುಕೊಂಡ್ರೆ ಒಳ್ಳೇದಲ್ವಾ, ಎಷ್ಟೋ ಬಾರಿ ನಾವು ತಲುಪುವ ಗುರಿಗಿಂತ ನಾವು ಕ್ರಮಿಸುವ ದಾರಿಯೂ ಮುಖ್ಯವಾಗುತ್ತೆ, ನಾನು ಹೇಳಬೇಕಾದುದು ಇಷ್ಟೆ ಮುಂದಿನದು ನಿಮಗೆ ಬಿಟ್ಟದ್ದು . ಇದು ನನ್ನನ್ನೂ ಸೇರಿದಂತೆ ಹಲವರ ಆತ್ಮವಿಮರ್ಶೆಯಾಗಿರಬಹುದು.
( ಲೇಖಕರು : ದರ್ಶನ್ ಆರಾಧ್ಯ-8495980857)

ಭಾವ ಭೈರಾಗಿ
ಕವಿತೆ | ಕಿಚನ್ ವಕ್ತ್

- ಸಂಘಮಿತ್ರೆ ನಾಗರಘಟ್ಟ
ಎದ್ದ ತಕ್ಷಣ
ಎದ್ದೋ ಬಿದ್ದೋ ಎಂದು
ಫ್ರೆಶ್ ಆಗಲು ಬಾತ್ ರೂಂ
ನತ್ತ ಹೋಗುವುದೇ ತಡ
ಅಲ್ಲಿನ ಪುಟ್ಟ ಕನ್ನಡಿಯಲ್ಲಿ
ಹಿಡಿ ಮಾತ್ರದ ನನ್ನ ಮುಖ
ಥೇಟ್ ಆಟದ ರೋಬೋಟ್
ನಂತೆಯೇ ಕಾಣುತ್ತಿತ್ತು
ಒಳಗಿನಿಂದ ಕದ ತೆಗೆದು
ಆಚೆ ಹೆಜ್ಜೆಯಿಡುವ ಹೊತ್ತಿಗಾಗಲೇ
ಕಿಚನ್ ನಲ್ಲಿ ಆರ್ಡರ್ ಸಿದ್ಧ
ಬಿಸಿ ನೀರು ಒಬ್ಬರಿಗಾದರೆ
ಸ್ಟ್ರಾಂಗ್ ಕಾಫಿ ಇನ್ನೊಬ್ಬರಿಗೆ
ಅದನ್ನು ಕೊಡುವ ಗ್ಲಾಸ್
ಗಾಜಿನದೋ ಸ್ಟೀಲ್ ನದೋ
ಎಂಬ ಗೊಂದಲದಲ್ಲೇ
ಸ್ಟವ್ ಮೇಲಿನ ಹಾಲು
ಉಕ್ಕಿ ತನ್ನ ಹಿತ ಶತ್ರು
ಗ್ಯಾಸ್ ಟ್ಯುಬ್ ನತ್ತ ಹರಿಯುತ್ತಿತ್ತು
ಅದನ್ನು ಉಜ್ಜಿ ಕ್ಲೀನ್ ಮಾಡಿ
ಸಿಂಕ್ ನತ್ತ ನೋಡುತ್ತಿದ್ದಂತೆ
ಎಲ್ಲಾ ಪಾತ್ರೆ ಸೌಟು ಬಾಣಲೆಯಲ್ಲಿ
ತೇಲುತ್ತಿದ್ದ ಅನ್ನದ ಅಗುಳು
ಇನ್ನು ಅರೆಬರೆ ಖಾಲಿ ಆಗಿದ್ದ
ಹೊಟ್ಟೆ ಒಳಗಿನ ಕಲ್ಮಶದಂತಿತ್ತು
ರಾತ್ರಿ ,ಹಗಲು ಮಾಡುವ
ತಿಂಡಿ -ಕೆಲಸಗಳ ಚಿಂತೆಯಲ್ಲೇ
ನಿದ್ದೆ ಹೀರಿಕೊಂಡು ಮುಖ
ಹುಳಿ ಹಿಂಡಿದಂತಾಗಿತ್ತು….
ಇನ್ನೇನು ಎಲ್ಲಾ ಕೆಲಸ ಮುಗಿಸಿ
ಸೋಫಾ ದಲ್ಲಿ ಕುಳಿತು
ಸುದ್ದಿ ಫೀಡ್ ನೋಡುತ್ತಿದ್ದೆ
ಅಕ್ಕಿ ರಾಗಿಯ ಬೆಲೆ ಪಟ್ಟಿ ಏರಿತ್ತು
ಯಾಕೋ ಈಗಲೂ ದಾಸರಿರಬೇಕಿತ್ತು
ಸಮ ತೂಕ ಮಾಡಿ ಎರಡನ್ನೂ ಅಳೆದು
ನಮ್ಮವರ ಹೊಟ್ಟೆಯನ್ನೂ ತುಂಬಿಸಬೇಕೆನಿಸಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾವ ಭೈರಾಗಿ
ಕವಿತೆ | ರೇಖೆಗಳು

- ಡಾ.ಪುಷ್ಪಲತ ಸಿ ಭದ್ರಾವತಿ
ಗಡಿ ದೇಶಗಳೇನೊ ಹಂಚಿಕೊಂಡಿರಿ
ಆದರೆ,
ಸೂರ್ಯ ಚಂದ್ರರ ಗತಿಯೇನು
ಉಸಿರಾಡುವ ಗಾಳಿಯು ಒಂದಿರುವಾಗ
ಪ್ರಾಣವಾಯುವಿಗೆ ಬಂಧನದಲ್ಲಿರಿಸಲಾದಿತೆ
ಹರಿಯುವ ನದಿಗಳಿಗೆ ನಾಮಕರಣವೇನೋ ಮಾಡಿದಿರಿ
ಆದರೆ,
ಜರಿಗಳು, ಹಳ್ಳಕೊಳ್ಳಗಳು ಮಾಡಿದಾದರೂ ಏನು
ಪೂಜಾರಿ ಕೊಟ್ಟಿದ್ದು ತೀರ್ಥವೆ
ಆಬೆಜಂಜಂ, ಹಾಲಿ ವಾಟರ್ ಎಲ್ಲವೂ ಜಲ
ಫಾದರ್,ಪೂಜಾರಿ,ಮೌಲ್ವಿ
ಎಲ್ಲರೂ ಕುಡಿದದ್ದು ನೀರು
ಕೊನೆಗೂ ಅದರ ಮೂಲರೂಪ ಬದಲಾಗಲಿಲ್ಲ
ಮನುಷ್ಯ ,ಪ್ರಾಣಿ,ಮರಗಿಡಗಳ
ತಳಿಗಳನ್ನು ಬೇರ್ಪಡಿಸುವವನು ಮೂರ್ಖನೇ ಇರಬೇಕು .
ದೇಹದಲ್ಲಿರುವ ನರಮಂಡಲವನೊಮ್ಮೆ ಬೇರ್ಪಡಿಸಿ
ಬದುಕಲಾದಿತೆ
ಏನು?
ಕ್ರಿಸ್ತನೇನಾದರು ಬಂದು ಮತಾಂತರ ಮಾಡಿದನೇ
ಅಲ್ಲಾನೇನಾದರು ಬಂದು ರಾಮಮಂದಿರ ಕೆಡವಿದನೇ
ಶಿವನೇನಾದರು ಬಂದು ಮಸೀದಿಯನ್ನು ಹೊಡೆದುರುಳಿಸಿದನೇ..!?
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಇರುಳ ತಾರೆಗಳಂತೆ ಬೆಳಕೊಂದು ಮಿನುಗುವುದು..!

- ಪ್ರೀತಿ.ಟಿ.ಎಸ್, ದಾವಣಗೆರೆ
ಬೇಂದ್ರೆಯವರು “ಇರುಳ ತಾರೆಗಳಂತೆ ಬೆಳಕೊಂದು ಮಿನುಗುವುದು, ಕಳೆದ ದುಃಖಗಳಲ್ಲಿ ನೆನೆದಂತೆಯೆ” ಎಂದು ತಮ್ಮ ಸಖೀ ಗೀತದಲ್ಲಿ ಹಾಡುತ್ತಾರೆ. ಆದರೆ ಈ ಹೊಸ ವರ್ಷದಲ್ಲಿ ಕಹಿದಿನಗಳ ನೆನಪೇ ಬೇಡ, ಸಿಹಿ ಕಹಿ ಕನಸುಗಳನ್ನು ಕಂಡಂತಹ ಎಳೆತನದ, ಕೆಳೆತನದ ದಿನಗಳ ನೆನಪೇ ಸ್ಥಿರವಾಗಿರಲಿ; ಕಾಲನ ಹೊಡೆತಕ್ಕೆ ಆ ಕನಸುಗಳ ನೆನಪು ಮರೆಯಾಗದಿರಲಿ.
ಹೊಸ ವರ್ಷದಲ್ಲಿ ಇದೆಂತ ಬರಿತ್ತಿದ್ದಾರೆ ಅಂತೀರ! ನಿಮಗಿಂದು ಬರೀ ಹೊಸ ವರುಷ. ಆದರೆ ನನಗೋ ನನ್ನ ಜೀವನ ಪಾವನವಾಗಿಸುವ ದಿನ. ಯಾಕೇ ಗೊತ್ತಾ? ನನ್ನ ಸಾಹಿತ್ಯ ಕ್ಷೇತ್ರಕ್ಕೆ ಅನುಕರಿಣಿಸಿ, ಸಮಾಜ ಕ್ಷೇತ್ರದಲ್ಲಿ ನನ್ನನ್ನ ತೊಡಗುವಂತೆ ಮಾಡಿ, ಕಿಂಚಿತಾದರೂ ನನ್ನಲ್ಲಿ ದಯೆ, ಕರುಣೆ, ವಿಶ್ವಾಸ, ಪ್ರೀತಿ ಹೀಗೆ ಅನೇಕ ಭಾವಗಳನ್ನ ಚಿಕ್ಕಂದಿನಿಂದ ತಿದ್ದಿ ತೀಡಿದ ನನ್ನ ತಂದೆ ತಾಯಿಯ ಜನುಮ ದಿನ.
ಹೊಸ ವರುಷಕ್ಕಿಂತ ಇವರೀರ್ವರ ಜನುಮವೇ ಅದೇನೋ ಸಂಭ್ರಮ. ಅದೇನೋ ಸಡಗರ. ಹಳೆಯ ನೆನಪಿನ ಬುತ್ತಿಯನ್ನು ಮುಚ್ಚಿಟ್ಟು ಹೊಸ ಜೀವನದ ಪಯಣಕ್ಕೆ ಅದೇನೋ ಕಾತುರದಿಂದ ಗಡಿಬಿಡಿಯಾಗುವಾಗ ಅಪ್ಪಾಜಿ ಬಂದು ಹಾದಿಯಲ್ಲಿ ಕಲ್ಲು- ಮುಳ್ಳುಗಳಿರಬಹುದು ಎಚ್ಚರ! ಆದರೆ ಅದನ್ನು ಎದುರಿಸಿ ಮುನ್ನಡೆದಾಗಲೇ ಸುಖ ಸಾಗರ ಎಂಬ ಅವರ ಆಶಯದ ನುಡಿ ಮಾತುಗಳು ಬಹುಶಃ ಇಂದು ನನ್ನನ್ನು ಇಲ್ಲಿಯವರೆಗೂ ತಂದು ನಿಲ್ಲಿಸಿದೆ.
ಮಾಮೂಲೀ ವಾಟ್ಸ್ಆ್ಯಪ್, ಫೇಸ್ಬುಕ್, ಇನ್ಸ್ಟಾಗ್ರಾಮ್ ನಲ್ಲಿ ತಂದೆ-ತಾಯಿಯ ಪೋಸ್ಟ್ ಹಾಕಿ ವಿಶ್ ಮಾಡಿದ್ರೆ ಮುಗಿತಿತ್ತು. ಆದರೆ ಈ ಭಾರಿ, ನನಗಾಗುತ್ತಿರುವುದು ವಿಚಿತ್ರ ಅನುಭವ. ಸಾವಿರ ನೋವು, ದುಃಖ-ದುಮ್ಮಾನಗಳು ಎದೆಯಲ್ಲಿದ್ರು ನಮ್ಮ ಮುಂದೆ ತೋರಿಸದೆ ಮನಸ್ಸಲ್ಲೇ ಇಟ್ಟು ಕೊರಗುತ್ತ ಒಳ್ಳೆಯ ವಿದ್ಯಾಭ್ಯಾಸ ನೀಡಿ, ಸಂಸ್ಕೃತಿ, ನಾಡು-ನುಡಿ, ಸಂಸ್ಕಾರವನ್ನು ಭಿತ್ತುತ್ತ ಬಂದಿದ್ದಾರೆ. ಸುಖದಲ್ಲೆ ಬೆಳೆದ ನಮಗೆ ಕಹಿ ಜೀವನದ ಅನುಭವ ಕಡಿಮೆಯೇ!
ಅಪ್ಪಜಿ-ಅಮ್ಮನ ಆಸೆಯಂತೆ ಮಾಸ್ಟರ್ ಆಫ್ ಜರ್ನಲಿಸಂ ಅಲ್ಲಿ ಎರಡು ಬಂಗಾರದ ಪದಕ ಗೆದ್ದು ಅವರಿಗೆ ನೀಡಿ ಆಸೆ ತೀರಿಸಿದ ನಂತರವಷ್ಟೇ ತಿಳಿದ್ದದ್ದು. ಜೀವನದ ಆಳವೆಷ್ಟು ಎಂದು? ಅಪ್ಪಾಜಿ ಅಮ್ಮನನ್ನು ಬಿಟ್ಟು ಕೆಲಸ ಹುಡುಕುತ್ತ ಬೆಂಗಳೂರಿಗೆ ಬಂದಾಗ ನಿಜವಾದ ರೋಧನೆ, ನೋವು, ಒಂಟಿತನ, ಕಷ್ಟ, ಉಪವಾಸ, ಅನ್ನದ ಬೆಲೆ ಹೀಗೆ ಬದುಕಿನ ಅಷ್ಟು ಪಾಠಗಳು ತಿಳಿಯುತ್ತ ಹೋದದ್ದು. ಎಂತಹ ಒದ್ದಾಟದಲ್ಲೂ ನನ್ನ ತಂದೆ-ತಾಯಿಗೆ ತಿಳಿಸದೆ ನಗ್ತ ನಗ್ತ ಮಾತಾಡಿದ್ರು ಕ್ಷಣಮಾತ್ರದಲ್ಲಿ ಅಪ್ಪಜಿ ಮಾತ್ರ ನನ್ನ ನಗುವಿನ ಹಿಂದಿನ ದುಃಖನ ಗುರುತಿಸಿ, ಮತ್ತಷ್ಟು ಬಲ ತುಂಬುತ್ತ ಬಂದವರು.
ಜನವರಿ 1 ಬಂತೆಂದರೆ ಅಪ್ಪಾಜಿ ಅಮ್ಮನ ಹುಟ್ಟು ಹಬ್ಬ. ಈ ಭಾರಿ ನಾನು ನಿಮಗೆನೂ ಮಾಡಿದೇನು? ಕಡೆಪಕ್ಷ ಅವರ ಮುಂದೆ ಹೋಗಿ ನಿಂತು ಶುಭಾಶಯ ತಿಳಿಸಿ ಬಂದು ಬಿಡಲೇ ಎಂದರೆ ಕೈಯಲ್ಲಿ ಕಾಸಿಲ್ಲ. ಇಲ್ಲಿಂದಲೇ ಶುಭಾಶಯ ತಿಳಿಸಿ ಸುಮ್ಮನಾಗಿ ಬಿಡಲೇ ಎಂದರೆ ಮನಸ್ಸು ಒಪ್ಪುತ್ತಿಲ್ಲ. ಇದೀಗ ದುಡಿತ್ತಿದ್ದಿನಾದರು ಕಣ್ಣ ಮುಂದಿರುವ ಅಷ್ಟು ಹೊಣೆಗಾರಿಕೆಗಳು ನನ್ನನ್ನ ಕಟ್ಟಿಹಾಕ್ತಿದೆ. ಈ ಗೊಂದಲದ ನಡುವೇ ಈ ಲೇಖನ ನಿಮಗಾಗಿ.
ಅಪ್ಪಜಿ-ಅಮ್ಮ ಈ ಭಾರಿ ಹೊಸ ವರುಷದ ಹೊಸ ಆಚರಣೆ ಸಾಧ್ಯವಾಗದಿದ್ದರು ಬೇಸರಿಸದಿರಿ. ಯಾಕೆಂದರೆ ನಿಮಗಾಗಿ ನೀವು ಕಂಡ ಹೊಸ ಕನಸಿನ ಗೂಡೊಂದನ್ನ ಹೊತ್ತು ತರುತ್ತಿದ್ದೇನೆ. ತಂದ ದಿನವೇ ನಿಮ್ಮ ಈ ಜನುಮೋತ್ಸವವನ್ನು ಆಚರಿಸ್ತೇನೆ. ಇದನ್ನ ನಿಮ್ಮೊಡನೇ ಹೇಳಬಹುದಿತ್ತಾದರು, ನನ್ನ ಸಹಪಯಣಿಗರೊಡನೆ ಹಂಚಿಕೊಂಡ ಈ ಕನಸುಗಳು ನಮ್ಮ ಬಾಳಿನ ಮುಂದಿನ ಪಯಣದ ಬುತ್ತಿಯಾಗುತ್ತದೆ ಎಂಬುದು ನನ್ನ ಭಾವನೆ.
ಇಂತಹ ಅದೆಷ್ಟೋ ಅನುಭವಗಳು ಮನೆ ಬಿಟ್ಟು, ತಂದೆ ತಾಯಿಯ ಆಶಯವನ್ನು ನೆನಸಾಗಿಸೋ ಸಾವಿರ ಕನಸುಗಳನ್ನು ಹೊತ್ತು ಬಂದ ಅದೆಷ್ಟೋ ಮನಸ್ಸುಗಳಿಗೆ ಆಗಿರುತ್ತೆ. ಇನ್ನು ಕೆಲವರಿಗೆ ಇಡೀ ವರ್ಷದ ಶ್ರಮದಾಯಕ ದುಡಿಮೆ ಬಳಿಕ ಮನಸ್ಸು ಸ್ವಲ್ಪ ವಿಶ್ರಾಂತಿಯನ್ನು, ಮನೋರಂಜನೆಯನ್ನು ಬಯಸುತ್ತದೆ. ಕುಟುಂಬದ ಬಂಧವನ್ನು ಗಟ್ಟಿಗೊಳಿಸಲು ಮತ್ತು ಪ್ರೀತಿ, ಅನುಬಂಧವನ್ನು ಬಿತ್ತಲು ಹೊಸವರ್ಷವೊಂದು ಸುವರ್ಣಾವಕಾಶ. ನಮ್ಮ ಎಲ್ಲ ಕೆಲಸಕ್ಕೆ ಸ್ವಲ್ಪ ಸಮಯ ವಿಶ್ರಾಂತಿ ಕೊಟ್ಟು ರಿಲ್ಯಾಕ್ಸ್ ಮಾಡುವ ಮೂಲಕ ಸಂಭ್ರಮ, ಸಡಗರಕ್ಕೆ ಅಣಿಯಾಗೋಣ. ನಿಮ್ಮೆಲ್ಲರ ಆಸೆ, ನಿರೀಕ್ಷೆಗಳು ನೆರವೇರಲಿ ಎಂದು ಮನಸ್ಸಲ್ಲೆ ಪ್ರಾರ್ಥಿಸುತ್ತಾ, ಮುಸ್ಸಂಜೆ ಕವಿಯುತ್ತಿರುವಾಗಲೂ ಮರುದಿನದ ಬೆಳಗು ಆಶಾಕಿರಣವನ್ನು ಹೊತ್ತು ತರಲಿ ಎಂದು ಹಾರೈಸುತ್ತೇನೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ನಿತ್ಯ ಭವಿಷ್ಯ7 days ago
ಸೋಮವಾರ- ರಾಶಿ ಭವಿಷ್ಯ ಜನವರಿ-23,2023 : ಈ ರಾಶಿಯವರಿಗೆ ಸಾಡೇ ಸಾತಿ ಶನಿಯಿಂದ ಮುಕ್ತಿ,ಎಲ್ಲಾ ನಿಮ್ಮ ಕೆಲಸಗಳು ನೆರವೇರಲಿ
-
ದಿನದ ಸುದ್ದಿ5 days ago
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ
-
ದಿನದ ಸುದ್ದಿ20 hours ago
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
-
ದಿನದ ಸುದ್ದಿ19 hours ago
ನಟ ಮನದೀಪ್ ರಾಯ್ ನಿಧನ