ಭಾವ ಭೈರಾಗಿ
#Second Hand ಹುಡುಗ್ರು ಅಂದ್ರೆ ಅಷ್ಟೊಂದು ಸದರ ಆಗೋಯ್ತಾ..!

ಲೋ ನಾಯಿ, ಹಂದಿ, ಕಪ್ಪೆರಾಯ, ಕತ್ತೆ, ಕೋತಿ, ಹೋತಿಕ್ಯಾತ, ಹಲ್ಲಿ, ಲೋಫರ್, ಪಾಪರ್, ಸಿಗೋ ನನ್ ಕೈಗೆ. ಆಹಾ… ನನ್ ಬಂಗಾರ,,,, ಅದೆಷ್ಟು ಮುದ್ದಾಗ್ ಬಯ್ತಿಯೆ ನನ್ ಗಿಣಿ. ನನ್ನ ಬಯ್ಯೋದ್ರಲ್ಲಿ ಅದೇನ್ ಖುಷಿನೆ ನಿಂಗೆ. ನಂಗೊತ್ತು ಕಣೆ ನಿಂಗ್ ಇದ್ಕಿಂತ ಜಾಸ್ತಿ ಬಯ್ಯೊಕ್ ಬರಲ್ಲ ಅಂತ. ಇನ್ನೊಮ್ಮೆ ಸಿಕ್ಕಾಗ ಬಯ್ಗುಳದ ಬಗ್ಗೆ ಒಂದ್ ಕ್ಲಾಸ್ ಮಾಡ್ತಿನಿ ಕೇಳು ಸರೀನಾ…
ಕಾಲ್ ರಿಸೀವ್ ಮಾಡ್ಲಿಲ್ಲ ಅನ್ನೊ ಒಂದೇ ಕಾರಣಕ್ಕೆ ನೀನು ಶಿರಸಿ ಮಾರಿಕಾಂಬೆ ಅವತಾರ ತಗೊತಿಯಲ್ಲ ಇದು ಸರಿನಾ.. ಅಲ್ವೆ ಬಂಗಾರ ನಿನ್ ಬರ್ತಡೆಗೆ ಏನ್ ಗಿಫ್ಟ್ ಕೊಡೋದು ಅಂತ ರಾತ್ರಿಯಿಡೀ ಯೋಚಿಸಿ ಬೆಳೆಗ್ಗೆ ಎದ್ದು ಅನಾಥಾಶ್ರಮಕ್ಕೆ ಹೋಗಿ ನಿನ್ ಹೆಸರಲ್ಲಿ ಒಂದು ಮಗೂನ ದತ್ತು ತಗೊಂಡೆ. ಇಡೀ ಆಶ್ರಮವನ್ನೆ ತಗೊಳೊ ಮನಸು, but ಏನ್ ಮಾಡ್ಲಿ ನಿನ್ ಭಾವಿ ಗಂಡ ದುಡಿಯೋದು ಜೇಬಿನ ತುಂಬಾನೆ ಹೊರತು ಬ್ಯಾಗಿನ ತುಂಬಾ ಅಲ್ವಲ್ಲ. ಚಿಂತೆ ಮಾಡ್ಬೇಡ ಇನ್ ಹತ್ತು ವರ್ಷ ಕಾಯಿ ಅಮ್ಮನ ಹೆಸರಲ್ಲಿ ಒಂದು ಆಶ್ರಮ ಕಟ್ತೇನೆ ಅದರ ಎಲ್ಲ ಮಕ್ಕಳಿಗೂ ನೀನೆ ಅಮ್ಮ. ಅದ್ಬಿಡು ಈ ದತ್ತು ತಗೊಳೋಕ್ ಹೋದಾಗ ಅಲ್ಲಿ ನಿನ್ ಥರಾನೆ ನಗೊ ಒಬ್ಬ ಮುದ್ದು ಹುಡುಗಿ ಸಿಕ್ಳು ಅವಳ ಇಡೀ ವರ್ಷದ ಸ್ಕೂಲ್ ಫೀಸು, ಊಟದ ಖರ್ಚು, ಬಟ್ಟೆಬರೆ ಎಲ್ಲದಕ್ಕೂ ಸೇರಿ ಹಣ ಕೊಟ್ಟು , ಅವಳಿಗೆ ನಾನು ನಿನ್ ಅಪ್ಪ ಕಣೊ ಅಮ್ಮನ ಬರ್ತಡೇಗೆ ವಿಶ್ ಮಾಡು ಅಂತ ವಿಶ್ ಮಾಡಿಸಿ ಅದನ್ನ ವಿಶ್ ಮಾಡಿಸಿ ನಿನಗೆ ತೋರ್ಸೋಕೆ ವಿಡಿಯೋ ಮಾಡಿಕೊಳ್ತಿದ್ದೆ. ಆಗ ನಿನ್ನ ಮೂರು ಮಿಸ್ಡ್ ಕಾಲ್ಸ್ ಬಂದಿದೆ. ತಿರುಗಿ ಕಾಲ್ ಮಾಡಿದ್ರೆ ಅಮ್ಮಾವ್ರಿಗೆ ಕೋಪ. ಈಗ ಹೇಳು ನಾನ್ ಮಾಡಿದ್ದು ತಪ್ಪಾ..?
ನಂಗೊತ್ತುಕಣೆ ನಿನಗೆ ನನ್ನ ಬಿಟ್ಟಿರೋಕಾಗಲ್ಲ ಅದಕ್ಕೆ ನಾನು ಅರ್ಧಗಂಟೆ ಮಾತಡದೆ ಇದ್ರು ಒದ್ದಾಡ್ತಿಯ, ಮೂರು ಮಿಸ್ಡ್ ಕಾಲ್ ಇದೆ, ನೋಡಿದ್ರೆ ಆರುಬಾರಿ ಕಾಲ್ ಮಾಡಿದಿನಿ ಅಂತ ಸುಳ್ಳು ಹೇಳ್ತಿಯ. ಅದ್ಯಾಕೆ ನಿನಗೆ ನಾನ್ ಹಾಕಿಸೋ ಯಾವ ಕಾಲರ್ ಟ್ಯೂನ್ ಕೂಡ ಇಷ್ಟ ಆಗಲ್ಲ, ಯಾವ್ದನ್ನೆ ಹಾಕಿದ್ರು ಬಯ್ತಿಯ. ಹೀಗೆ ಆಡ್ತಿರು ಅದೇ ಹಳೇ ಟ್ರೀಣ್ ಟ್ರಿಣ್ ಕೇಳೋತರ ಮಾಡ್ತಿನಿ. ಏನೊ ನನ್ ಹುಡುಗಿಗೆ ಮ್ಯೂಸಿಕ್ ಇಷ್ಟ ಅಂತ ಹಾಗ್ ಹಾಕ್ಸಿದೆ ತಪ್ಪಾ,,?
ಏನಾದ್ರು ಒಂದ್ ಕ್ಯಾತೆ ತೆಗೆದು ನನ್ನ ಬಯ್ಲಿಲ್ಲ ಅಂದ್ರೆ ನಿನಗೆ ಊಟ ಸೇರಲ್ಲ ಅಂತ ಗೊತ್ತು, ಹೀಗೆ ಬಯ್ತಿರು ಪ್ರಾಣಿದಯಾ ಸಂಘಕ್ಕೆ ಕಂಪ್ಲೆಂಟ್ ಕೊಡ್ತಿನಿ. ವೆಜಿಟೇರಿಯನ್ ಆಗಿನೇ ಈ ಮಟ್ಟಕ್ಕೆ ನನ್ ತಲೆ ತಿನ್ನೊ ನೀನು ನಾನ್ ವೆಜಿಟೇರಿಯನ್ ಆಗಿದ್ರೆ ನನ್ನ ಹಂಗಂಗೆ ನುಂಗಿ ಬಿಡ್ತಿದ್ಯೇನೊ. ನೀನ್ ಯಾವ ಸೀಮೆ ವೆಜಿಟೇರಿಯನ್ ನಾನೂ ವೆಜಿಟೇರಿಯನ್ ಆಗಿರೋದಕ್ಕೆ ನಿನ್ ತಲೆ ತಿನ್ನದೆ ಸುಮ್ನಿರ್ತೀನಿ ನೋಡಿ ಕಲಿ ಹೀಗಿರ್ಬೇಕು ಸಸ್ಯಾಹಾರಿಗಳು. ನನ್ ಬೊಂಬೆ ಎಷ್ಟೇ ಕೋಪ ಮಾಡ್ಕೊಂಡ್ರು ನಾನ್ sorry ಕೇಳೋಕೆ ಮಧ್ಯರಾತ್ರಿನೆ ಕಾಲ್ ಮಾಡ್ತಿನಿ ಯಾಕೆ ಗೊತ್ತಾ ಅವಾಗಾದ್ರೆ ನೀನ್ ಮನೆಲಿರ್ತಿಯ ಬಯ್ಯಲ್ಲ ಅನ್ನೋ ಧೈರ್ಯ. ನೀನ್ ಮಾತಾಡದೆ ಇದ್ರೂ ನನ್ ಮಾತು ಕೇಳೋಕೆ ಕಾಲ್ ರಿಸೀವ್ ಮಾಡೇ ಮಾಡ್ತಿಯ ಅನ್ನೊ ನಂಬಿಕೆ ಕಣೊ.
ಮಾತಿಗೊಂದ್ಸಲ ನನ್ನ ಸೆಕೆಂಡ್ ಹ್ಯಾಂಡ್ ಹುಡುಗ ಅಂತ ಚುಡಾಯ್ಸೋದೆ ಆಯ್ತು. ನಿಂಗೊತ್ತ ಲವ್ ಫೇಲ್ವರ್ ಹುಡುಗ್ರು ಯಾವತ್ತು ಪ್ರೀತ್ಸಿದ್ ಹುಡುಗಿ ಮನಸಿಗೆ ನೋವು ಮಾಡಲ್ಲ ಕಣೊ. ಅಷ್ಟಕ್ಕೂ ಅವಳೆ ನನ್ ಹಿಂದೆ ಬಿದ್ದಿದ್ದು ನಾನಲ್ಲ. ಕೊನೆಗೆ ಎರಡು ವರ್ಷ ರಿಜೆಕ್ಟ್ ಮಾಡ್ತಾನೆ ಬಂದೆ. ಅದೊಂದಿನ ಅವಳ ಪ್ರೀತಿಗೆ ಮನಸು ಕರಗದೆ ಇರೋಕಾಗಲಿಲ್ಲ. ಒಪ್ಕೊಂಡೆ ಆದ್ರೆ ಅವತ್ತೆ ವಿಷಯ ಅವರಪ್ಪನಿಗೆ ಗೊತ್ತಾಗಿ ಅವಳನ್ನ ಮೂಡಬುದ್ರೆಯ ಆಳ್ವಾಸ್ ಗೆ ಸೇರಿಸಿದ್ರು. ಇನ್ಮೇಲೆ ಅವಳನ್ನ ಮೀಟ್ ಮಾಡೋ ಪ್ರಯತ್ನ ಮಾಡಿದ್ರೆ ಅವಳಮ್ಮನನ್ನು ಕೊಂದು ಆತ್ಮಹತ್ಯೆ ಮಾಡಿಕೊಳ್ತೇನೆ ಅಂದ್ರು. ನನ್ ಪ್ರೀತಿಗಾಗಿ ನಾನ್ ಪ್ರೀತಿಸಿದ ಹುಡುಗಿ ಅಪ್ಪ ಅಮ್ಮ ಸಾಯ್ಬೇಕಾ… ಬೇಡ ಅನಿಸ್ತು ಕಣೊ ಅದಕ್ಕೆ ಅಲ್ಲಿಂದ ದೂರ ಬಂದೆ. ಅದಾದ ಒಂದೇ ವರ್ಷದಲ್ಲಿ ಗೊತ್ತಾಯ್ತು ಆಕ್ಸಿಡೆಂಟ್ ಒಂದರಲ್ಲಿ ಆ ದೇವರು ಅವಳನ್ನ ಕರ್ಕೊಂಡ್ ಬಿಟ್ಟ ಅಂತ. ಮೂರು ವರ್ಷದ ನಂತರ ನೀನ್ ಸಿಕ್ಕೆ. ಫಸ್ಟ್ ಟೈಮ್ ನನಗೆ ಹೊಟ್ಟೆಲಿ ಚಿಟ್ಟೆ ಬಿಟ್ಟ ಹಾಗಾಯ್ತು. ಅಮ್ಮನ ವಾರಸುದಾರಿಣಿ ನೀನೆ ಅನಿಸ್ತು. ನೀನ್ ಸಿಕ್ಕ ಮೇಲೆ ನನಗೆ ಜಗತ್ತು ಪ್ರತಿದಿನ ಹೊಸದಾಗಿ ಕಾಣ್ಸತ್ತೆ ಕಣೊ. ನಾನು ನಿನಗಿಂತ ನಿನ್ ಅಪ್ಪ ಅಮ್ಮನ್ನ ಜಾಸ್ತಿ ಪ್ರೀತಿ ಮಾಡ್ತಿನಿ. ಅವರಿಗೆ ನೋವಾದ್ರೆ ನಿನಗೂ ನೋವಾಗುತ್ತೆ ಅನ್ನೊ ಸತ್ಯ ಗೊತ್ತು. ಈಗ ಹೇಳು ಈ ಸೆಕೆಂಡ್ ಹ್ಯಾಂಡ್ ಹುಡುಗ ಬೆಸ್ಟ್ ಅಲ್ವಾ..
ನನ್ ಮೇಲೆ ಕೋಪ ಬಂದ್ರೆ ನಾನ್ ಕೊಡಿಸಿರೋ ಟೆಡ್ಡಿಬೇರ್ ಗೆ ನಾಲಕ್ ಏಟು ಹೆಚ್ಚಾಗೆ ಕೊಡ್ತಿಯ ಅಂತ ಗೊತ್ತು. ಹೊಡಿ ನನಗೇನು ಬೇಜಾರಿಲ್ಲ. ಅವನ ಮೇಲೆ ನನಗೂ ಹೊಟ್ಟೆಕಿಚ್ಚಿದೆ. ನನ್ ಹೊಟ್ಟೆ ಉರ್ಸೋಕೆ ಅಂತ ಅದೆಷ್ಟುದಿನ ನೀನ್ ಅವನನ್ನ ಹಿಡಿದು ಮುದ್ದಾಡಿಲ್ಲ, ಈಗ ಹೊಡಿ ಅವನಿಗೆ ಬುದ್ದಿ ಬರಲಿ.
ನಂಗೊತ್ತು ನೀನು ಇಷ್ಟರಲ್ಲಿ ಕೋಪ ತಣ್ಣಗಾಗಿ ನೂರಾ ಒಂದು ಬಾರಿ ನಿನ್ ಮೊಬೈಲ್ ನೋಡಿರ್ತಿಯ ಅಂತ. ಕಾಲ್ ಮಾಡೋಕೆ ಮೇಡಮ್ಮವರಿಗೆ ಸ್ವಾಭಿಮಾನ ಅಡ್ಡ ಬರುತ್ತೆ. ರಾತ್ರಿ ನಾನ್ ಕಾಲ್ ಮಾಡೇ ಮಾಡ್ತೇನೆ ಅಂತ ನಿಂಗೊತ್ತು. ಅದಕ್ಕೆ ಬೇಜಾನ್ ಬಿಲ್ಡಪ್ ಕೊಡ್ತಿದಿಯ. ಇರಲಿ ಬಿಡು ನಾನೆ ಸೋಲ್ತೇನೆ. ನಿನ್ ಮುಂದೆ ಸೋಲೋದ್ರಲ್ಲಿ ನನಗೊಂಥರಾ ಧನ್ಯತಾ ಭಾವ ಕಣೆ. ಅಂದಹಾಗೆ ಈ ಗ್ಯಾಪಲ್ಲಿ ಹೊಸದಾಗಿ ಎರಡು ಪದ್ಯ ಬರ್ದಿದಿನಿ. ನನ್ ಕವಿತೆ ಅಂದ್ರೆ ನಿನಗೆಷ್ಟು ಇಷ್ಟ ಅಂತ ಗೊತ್ತು ಸರಿರಾತ್ರಿ ಕಾಲ್ ಮಾಡಿದಾಗ ಒಂದನ್ನ ಫೋನಲ್ಲಿ ಓದಿ ಹೇಳ್ತೇನೆ. ಮತ್ತೊಂದನ್ನ ಫೋನಿಡುವ ಕೊನೆಯಲ್ಲಿ ಫೋನಿಗೆ ಕೊಡ್ತೇನೆ ಇಸ್ಕೊ.
ಒಂದ್ ವಿಷಯ ತಿಳ್ಕೊ ನೀನ್ ಹಿಂಗೆಲ್ಲ ಮುದ್ ಮದ್ದಾಗಿ ಪೆದ್ ಪದ್ದಾಗಿ ಆಡೋದಕ್ಕೆ ನೀನಂದ್ರೆ ನನಗೆ ಸಾಯೊವಷ್ಟ್ ಇಷ್ಟ ಕಣೆ.
Bye ಪುಟ್ಟಕ್ಕ
-ಇಂತಿ ಎಂದೆಂದಿಗೂ ನಿನ್ನವನು

ಭಾವ ಭೈರಾಗಿ
ಕವಿತೆ | ಕಿಚನ್ ವಕ್ತ್

- ಸಂಘಮಿತ್ರೆ ನಾಗರಘಟ್ಟ
ಎದ್ದ ತಕ್ಷಣ
ಎದ್ದೋ ಬಿದ್ದೋ ಎಂದು
ಫ್ರೆಶ್ ಆಗಲು ಬಾತ್ ರೂಂ
ನತ್ತ ಹೋಗುವುದೇ ತಡ
ಅಲ್ಲಿನ ಪುಟ್ಟ ಕನ್ನಡಿಯಲ್ಲಿ
ಹಿಡಿ ಮಾತ್ರದ ನನ್ನ ಮುಖ
ಥೇಟ್ ಆಟದ ರೋಬೋಟ್
ನಂತೆಯೇ ಕಾಣುತ್ತಿತ್ತು
ಒಳಗಿನಿಂದ ಕದ ತೆಗೆದು
ಆಚೆ ಹೆಜ್ಜೆಯಿಡುವ ಹೊತ್ತಿಗಾಗಲೇ
ಕಿಚನ್ ನಲ್ಲಿ ಆರ್ಡರ್ ಸಿದ್ಧ
ಬಿಸಿ ನೀರು ಒಬ್ಬರಿಗಾದರೆ
ಸ್ಟ್ರಾಂಗ್ ಕಾಫಿ ಇನ್ನೊಬ್ಬರಿಗೆ
ಅದನ್ನು ಕೊಡುವ ಗ್ಲಾಸ್
ಗಾಜಿನದೋ ಸ್ಟೀಲ್ ನದೋ
ಎಂಬ ಗೊಂದಲದಲ್ಲೇ
ಸ್ಟವ್ ಮೇಲಿನ ಹಾಲು
ಉಕ್ಕಿ ತನ್ನ ಹಿತ ಶತ್ರು
ಗ್ಯಾಸ್ ಟ್ಯುಬ್ ನತ್ತ ಹರಿಯುತ್ತಿತ್ತು
ಅದನ್ನು ಉಜ್ಜಿ ಕ್ಲೀನ್ ಮಾಡಿ
ಸಿಂಕ್ ನತ್ತ ನೋಡುತ್ತಿದ್ದಂತೆ
ಎಲ್ಲಾ ಪಾತ್ರೆ ಸೌಟು ಬಾಣಲೆಯಲ್ಲಿ
ತೇಲುತ್ತಿದ್ದ ಅನ್ನದ ಅಗುಳು
ಇನ್ನು ಅರೆಬರೆ ಖಾಲಿ ಆಗಿದ್ದ
ಹೊಟ್ಟೆ ಒಳಗಿನ ಕಲ್ಮಶದಂತಿತ್ತು
ರಾತ್ರಿ ,ಹಗಲು ಮಾಡುವ
ತಿಂಡಿ -ಕೆಲಸಗಳ ಚಿಂತೆಯಲ್ಲೇ
ನಿದ್ದೆ ಹೀರಿಕೊಂಡು ಮುಖ
ಹುಳಿ ಹಿಂಡಿದಂತಾಗಿತ್ತು….
ಇನ್ನೇನು ಎಲ್ಲಾ ಕೆಲಸ ಮುಗಿಸಿ
ಸೋಫಾ ದಲ್ಲಿ ಕುಳಿತು
ಸುದ್ದಿ ಫೀಡ್ ನೋಡುತ್ತಿದ್ದೆ
ಅಕ್ಕಿ ರಾಗಿಯ ಬೆಲೆ ಪಟ್ಟಿ ಏರಿತ್ತು
ಯಾಕೋ ಈಗಲೂ ದಾಸರಿರಬೇಕಿತ್ತು
ಸಮ ತೂಕ ಮಾಡಿ ಎರಡನ್ನೂ ಅಳೆದು
ನಮ್ಮವರ ಹೊಟ್ಟೆಯನ್ನೂ ತುಂಬಿಸಬೇಕೆನಿಸಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾವ ಭೈರಾಗಿ
ಕವಿತೆ | ರೇಖೆಗಳು

- ಡಾ.ಪುಷ್ಪಲತ ಸಿ ಭದ್ರಾವತಿ
ಗಡಿ ದೇಶಗಳೇನೊ ಹಂಚಿಕೊಂಡಿರಿ
ಆದರೆ,
ಸೂರ್ಯ ಚಂದ್ರರ ಗತಿಯೇನು
ಉಸಿರಾಡುವ ಗಾಳಿಯು ಒಂದಿರುವಾಗ
ಪ್ರಾಣವಾಯುವಿಗೆ ಬಂಧನದಲ್ಲಿರಿಸಲಾದಿತೆ
ಹರಿಯುವ ನದಿಗಳಿಗೆ ನಾಮಕರಣವೇನೋ ಮಾಡಿದಿರಿ
ಆದರೆ,
ಜರಿಗಳು, ಹಳ್ಳಕೊಳ್ಳಗಳು ಮಾಡಿದಾದರೂ ಏನು
ಪೂಜಾರಿ ಕೊಟ್ಟಿದ್ದು ತೀರ್ಥವೆ
ಆಬೆಜಂಜಂ, ಹಾಲಿ ವಾಟರ್ ಎಲ್ಲವೂ ಜಲ
ಫಾದರ್,ಪೂಜಾರಿ,ಮೌಲ್ವಿ
ಎಲ್ಲರೂ ಕುಡಿದದ್ದು ನೀರು
ಕೊನೆಗೂ ಅದರ ಮೂಲರೂಪ ಬದಲಾಗಲಿಲ್ಲ
ಮನುಷ್ಯ ,ಪ್ರಾಣಿ,ಮರಗಿಡಗಳ
ತಳಿಗಳನ್ನು ಬೇರ್ಪಡಿಸುವವನು ಮೂರ್ಖನೇ ಇರಬೇಕು .
ದೇಹದಲ್ಲಿರುವ ನರಮಂಡಲವನೊಮ್ಮೆ ಬೇರ್ಪಡಿಸಿ
ಬದುಕಲಾದಿತೆ
ಏನು?
ಕ್ರಿಸ್ತನೇನಾದರು ಬಂದು ಮತಾಂತರ ಮಾಡಿದನೇ
ಅಲ್ಲಾನೇನಾದರು ಬಂದು ರಾಮಮಂದಿರ ಕೆಡವಿದನೇ
ಶಿವನೇನಾದರು ಬಂದು ಮಸೀದಿಯನ್ನು ಹೊಡೆದುರುಳಿಸಿದನೇ..!?
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಇರುಳ ತಾರೆಗಳಂತೆ ಬೆಳಕೊಂದು ಮಿನುಗುವುದು..!

- ಪ್ರೀತಿ.ಟಿ.ಎಸ್, ದಾವಣಗೆರೆ
ಬೇಂದ್ರೆಯವರು “ಇರುಳ ತಾರೆಗಳಂತೆ ಬೆಳಕೊಂದು ಮಿನುಗುವುದು, ಕಳೆದ ದುಃಖಗಳಲ್ಲಿ ನೆನೆದಂತೆಯೆ” ಎಂದು ತಮ್ಮ ಸಖೀ ಗೀತದಲ್ಲಿ ಹಾಡುತ್ತಾರೆ. ಆದರೆ ಈ ಹೊಸ ವರ್ಷದಲ್ಲಿ ಕಹಿದಿನಗಳ ನೆನಪೇ ಬೇಡ, ಸಿಹಿ ಕಹಿ ಕನಸುಗಳನ್ನು ಕಂಡಂತಹ ಎಳೆತನದ, ಕೆಳೆತನದ ದಿನಗಳ ನೆನಪೇ ಸ್ಥಿರವಾಗಿರಲಿ; ಕಾಲನ ಹೊಡೆತಕ್ಕೆ ಆ ಕನಸುಗಳ ನೆನಪು ಮರೆಯಾಗದಿರಲಿ.
ಹೊಸ ವರ್ಷದಲ್ಲಿ ಇದೆಂತ ಬರಿತ್ತಿದ್ದಾರೆ ಅಂತೀರ! ನಿಮಗಿಂದು ಬರೀ ಹೊಸ ವರುಷ. ಆದರೆ ನನಗೋ ನನ್ನ ಜೀವನ ಪಾವನವಾಗಿಸುವ ದಿನ. ಯಾಕೇ ಗೊತ್ತಾ? ನನ್ನ ಸಾಹಿತ್ಯ ಕ್ಷೇತ್ರಕ್ಕೆ ಅನುಕರಿಣಿಸಿ, ಸಮಾಜ ಕ್ಷೇತ್ರದಲ್ಲಿ ನನ್ನನ್ನ ತೊಡಗುವಂತೆ ಮಾಡಿ, ಕಿಂಚಿತಾದರೂ ನನ್ನಲ್ಲಿ ದಯೆ, ಕರುಣೆ, ವಿಶ್ವಾಸ, ಪ್ರೀತಿ ಹೀಗೆ ಅನೇಕ ಭಾವಗಳನ್ನ ಚಿಕ್ಕಂದಿನಿಂದ ತಿದ್ದಿ ತೀಡಿದ ನನ್ನ ತಂದೆ ತಾಯಿಯ ಜನುಮ ದಿನ.
ಹೊಸ ವರುಷಕ್ಕಿಂತ ಇವರೀರ್ವರ ಜನುಮವೇ ಅದೇನೋ ಸಂಭ್ರಮ. ಅದೇನೋ ಸಡಗರ. ಹಳೆಯ ನೆನಪಿನ ಬುತ್ತಿಯನ್ನು ಮುಚ್ಚಿಟ್ಟು ಹೊಸ ಜೀವನದ ಪಯಣಕ್ಕೆ ಅದೇನೋ ಕಾತುರದಿಂದ ಗಡಿಬಿಡಿಯಾಗುವಾಗ ಅಪ್ಪಾಜಿ ಬಂದು ಹಾದಿಯಲ್ಲಿ ಕಲ್ಲು- ಮುಳ್ಳುಗಳಿರಬಹುದು ಎಚ್ಚರ! ಆದರೆ ಅದನ್ನು ಎದುರಿಸಿ ಮುನ್ನಡೆದಾಗಲೇ ಸುಖ ಸಾಗರ ಎಂಬ ಅವರ ಆಶಯದ ನುಡಿ ಮಾತುಗಳು ಬಹುಶಃ ಇಂದು ನನ್ನನ್ನು ಇಲ್ಲಿಯವರೆಗೂ ತಂದು ನಿಲ್ಲಿಸಿದೆ.
ಮಾಮೂಲೀ ವಾಟ್ಸ್ಆ್ಯಪ್, ಫೇಸ್ಬುಕ್, ಇನ್ಸ್ಟಾಗ್ರಾಮ್ ನಲ್ಲಿ ತಂದೆ-ತಾಯಿಯ ಪೋಸ್ಟ್ ಹಾಕಿ ವಿಶ್ ಮಾಡಿದ್ರೆ ಮುಗಿತಿತ್ತು. ಆದರೆ ಈ ಭಾರಿ, ನನಗಾಗುತ್ತಿರುವುದು ವಿಚಿತ್ರ ಅನುಭವ. ಸಾವಿರ ನೋವು, ದುಃಖ-ದುಮ್ಮಾನಗಳು ಎದೆಯಲ್ಲಿದ್ರು ನಮ್ಮ ಮುಂದೆ ತೋರಿಸದೆ ಮನಸ್ಸಲ್ಲೇ ಇಟ್ಟು ಕೊರಗುತ್ತ ಒಳ್ಳೆಯ ವಿದ್ಯಾಭ್ಯಾಸ ನೀಡಿ, ಸಂಸ್ಕೃತಿ, ನಾಡು-ನುಡಿ, ಸಂಸ್ಕಾರವನ್ನು ಭಿತ್ತುತ್ತ ಬಂದಿದ್ದಾರೆ. ಸುಖದಲ್ಲೆ ಬೆಳೆದ ನಮಗೆ ಕಹಿ ಜೀವನದ ಅನುಭವ ಕಡಿಮೆಯೇ!
ಅಪ್ಪಜಿ-ಅಮ್ಮನ ಆಸೆಯಂತೆ ಮಾಸ್ಟರ್ ಆಫ್ ಜರ್ನಲಿಸಂ ಅಲ್ಲಿ ಎರಡು ಬಂಗಾರದ ಪದಕ ಗೆದ್ದು ಅವರಿಗೆ ನೀಡಿ ಆಸೆ ತೀರಿಸಿದ ನಂತರವಷ್ಟೇ ತಿಳಿದ್ದದ್ದು. ಜೀವನದ ಆಳವೆಷ್ಟು ಎಂದು? ಅಪ್ಪಾಜಿ ಅಮ್ಮನನ್ನು ಬಿಟ್ಟು ಕೆಲಸ ಹುಡುಕುತ್ತ ಬೆಂಗಳೂರಿಗೆ ಬಂದಾಗ ನಿಜವಾದ ರೋಧನೆ, ನೋವು, ಒಂಟಿತನ, ಕಷ್ಟ, ಉಪವಾಸ, ಅನ್ನದ ಬೆಲೆ ಹೀಗೆ ಬದುಕಿನ ಅಷ್ಟು ಪಾಠಗಳು ತಿಳಿಯುತ್ತ ಹೋದದ್ದು. ಎಂತಹ ಒದ್ದಾಟದಲ್ಲೂ ನನ್ನ ತಂದೆ-ತಾಯಿಗೆ ತಿಳಿಸದೆ ನಗ್ತ ನಗ್ತ ಮಾತಾಡಿದ್ರು ಕ್ಷಣಮಾತ್ರದಲ್ಲಿ ಅಪ್ಪಜಿ ಮಾತ್ರ ನನ್ನ ನಗುವಿನ ಹಿಂದಿನ ದುಃಖನ ಗುರುತಿಸಿ, ಮತ್ತಷ್ಟು ಬಲ ತುಂಬುತ್ತ ಬಂದವರು.
ಜನವರಿ 1 ಬಂತೆಂದರೆ ಅಪ್ಪಾಜಿ ಅಮ್ಮನ ಹುಟ್ಟು ಹಬ್ಬ. ಈ ಭಾರಿ ನಾನು ನಿಮಗೆನೂ ಮಾಡಿದೇನು? ಕಡೆಪಕ್ಷ ಅವರ ಮುಂದೆ ಹೋಗಿ ನಿಂತು ಶುಭಾಶಯ ತಿಳಿಸಿ ಬಂದು ಬಿಡಲೇ ಎಂದರೆ ಕೈಯಲ್ಲಿ ಕಾಸಿಲ್ಲ. ಇಲ್ಲಿಂದಲೇ ಶುಭಾಶಯ ತಿಳಿಸಿ ಸುಮ್ಮನಾಗಿ ಬಿಡಲೇ ಎಂದರೆ ಮನಸ್ಸು ಒಪ್ಪುತ್ತಿಲ್ಲ. ಇದೀಗ ದುಡಿತ್ತಿದ್ದಿನಾದರು ಕಣ್ಣ ಮುಂದಿರುವ ಅಷ್ಟು ಹೊಣೆಗಾರಿಕೆಗಳು ನನ್ನನ್ನ ಕಟ್ಟಿಹಾಕ್ತಿದೆ. ಈ ಗೊಂದಲದ ನಡುವೇ ಈ ಲೇಖನ ನಿಮಗಾಗಿ.
ಅಪ್ಪಜಿ-ಅಮ್ಮ ಈ ಭಾರಿ ಹೊಸ ವರುಷದ ಹೊಸ ಆಚರಣೆ ಸಾಧ್ಯವಾಗದಿದ್ದರು ಬೇಸರಿಸದಿರಿ. ಯಾಕೆಂದರೆ ನಿಮಗಾಗಿ ನೀವು ಕಂಡ ಹೊಸ ಕನಸಿನ ಗೂಡೊಂದನ್ನ ಹೊತ್ತು ತರುತ್ತಿದ್ದೇನೆ. ತಂದ ದಿನವೇ ನಿಮ್ಮ ಈ ಜನುಮೋತ್ಸವವನ್ನು ಆಚರಿಸ್ತೇನೆ. ಇದನ್ನ ನಿಮ್ಮೊಡನೇ ಹೇಳಬಹುದಿತ್ತಾದರು, ನನ್ನ ಸಹಪಯಣಿಗರೊಡನೆ ಹಂಚಿಕೊಂಡ ಈ ಕನಸುಗಳು ನಮ್ಮ ಬಾಳಿನ ಮುಂದಿನ ಪಯಣದ ಬುತ್ತಿಯಾಗುತ್ತದೆ ಎಂಬುದು ನನ್ನ ಭಾವನೆ.
ಇಂತಹ ಅದೆಷ್ಟೋ ಅನುಭವಗಳು ಮನೆ ಬಿಟ್ಟು, ತಂದೆ ತಾಯಿಯ ಆಶಯವನ್ನು ನೆನಸಾಗಿಸೋ ಸಾವಿರ ಕನಸುಗಳನ್ನು ಹೊತ್ತು ಬಂದ ಅದೆಷ್ಟೋ ಮನಸ್ಸುಗಳಿಗೆ ಆಗಿರುತ್ತೆ. ಇನ್ನು ಕೆಲವರಿಗೆ ಇಡೀ ವರ್ಷದ ಶ್ರಮದಾಯಕ ದುಡಿಮೆ ಬಳಿಕ ಮನಸ್ಸು ಸ್ವಲ್ಪ ವಿಶ್ರಾಂತಿಯನ್ನು, ಮನೋರಂಜನೆಯನ್ನು ಬಯಸುತ್ತದೆ. ಕುಟುಂಬದ ಬಂಧವನ್ನು ಗಟ್ಟಿಗೊಳಿಸಲು ಮತ್ತು ಪ್ರೀತಿ, ಅನುಬಂಧವನ್ನು ಬಿತ್ತಲು ಹೊಸವರ್ಷವೊಂದು ಸುವರ್ಣಾವಕಾಶ. ನಮ್ಮ ಎಲ್ಲ ಕೆಲಸಕ್ಕೆ ಸ್ವಲ್ಪ ಸಮಯ ವಿಶ್ರಾಂತಿ ಕೊಟ್ಟು ರಿಲ್ಯಾಕ್ಸ್ ಮಾಡುವ ಮೂಲಕ ಸಂಭ್ರಮ, ಸಡಗರಕ್ಕೆ ಅಣಿಯಾಗೋಣ. ನಿಮ್ಮೆಲ್ಲರ ಆಸೆ, ನಿರೀಕ್ಷೆಗಳು ನೆರವೇರಲಿ ಎಂದು ಮನಸ್ಸಲ್ಲೆ ಪ್ರಾರ್ಥಿಸುತ್ತಾ, ಮುಸ್ಸಂಜೆ ಕವಿಯುತ್ತಿರುವಾಗಲೂ ಮರುದಿನದ ಬೆಳಗು ಆಶಾಕಿರಣವನ್ನು ಹೊತ್ತು ತರಲಿ ಎಂದು ಹಾರೈಸುತ್ತೇನೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
