ದಿನದ ಸುದ್ದಿ
ಕೇರಳದಲ್ಲಿ ದಲಿತರಿಂದ ಊಟ ನಿರಾಕರಿಸಿದ ‘ಸುದ್ದಿ ಸತ್ಯ’ : ಇದು ‘ಸುದ್ದಿದಿನ’ ರಿಯಾಲಿಟಿ ಚೆಕ್..!

ಸುದ್ದಿದಿನ ಡೆಸ್ಕ್ | ದಲಿತರ ಧ್ವನಿ ಅಡಗಿಸಲಾಗುತ್ತಿದೆ, ಮಾಧ್ಯಮಗಳು ದಲಿತರಿಗೆ ಅನ್ಯಾಯವಾದ ಸುದ್ದಿಗಳನ್ನು ಪ್ರಕಟಿಸುತ್ತಿಲ್ಲ ಎಂಬ ಒಂದು ಆರೋಪವಿದೆ. ಇದನ್ನು ದಿಟ್ಟವಾಗಿ ಎದುರಿಸಿದ ಸುದ್ದಿದಿನಕ್ಕೆ ತುಳಿತಕ್ಕೊಳಗಾದವರ ನೋವನ್ನು ಪ್ರಪಂಚಕ್ಕೆ ಮುಟ್ಟಿಸುವುದು ಹೇಗೆಂಬ ಆತಂಕ ಎದುರಾಗಿದೆ.
ಭಾನುವಾರ ಬೆಳ್ಳಂಬೆಳಗ್ಗೆ ಇಂಡಿಯಾ ಟುಡೆ ವೆಬ್ ಪೋರ್ಟಲ್ ಕೇರಳದ ಅಲಪ್ಪುಳ ಜಿಲ್ಲೆಯ ನಿರಾಶ್ರಿತರ ಕೇಂದ್ರದಲ್ಲಿ ದಲಿತರು ಮಾಡಿದ ಅಡುಗೆಯನ್ನು ಮೇಲ್ಜಾತಿಯವರು ತಿನ್ನುತ್ತಿಲ್ಲ. ಸವರ್ಣೀಯರು ಪ್ರತ್ಯೇಕ ಕ್ಯಾಂಪ್ ಮಾಡಿಕೊಂಡು ಪರಿಹಾರವಾಗಿ ಬಂದ ಅರ್ಧಕ್ಕೂ ಹೆಚ್ಚು ದಿನಸಿಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿಯನ್ನು ಭಾವಾನುವಾದ ಮಾಡಿ ಕನ್ನಡಿಗರಿಗೆ ತಲುಪಿಸಲಾಗಿತ್ತು.
ಈ ಸುದ್ದಿ ಬರೆದ ಕೆಲವೇ ನಿಮಿಷಗಳಲ್ಲಿ ಫೇಸ್ಬುಕ್ ಪೇಜ್ನಲ್ಲಿ ಶೇರ್ ಮಾಡಿದ್ದೆವು. ಹಾಗೆಯೇ ನಮ್ಮ ಪೋರ್ಟಲ್ನ ಸಿಬ್ಬಂದಿಯೂ ಅದನ್ನು ತಮ್ಮ ಖಾತೆಗಳ ಮೂಲಕ ಶೇರ್ ಮಾಡಿದ್ದರು. ಬರಹ ಹೆಸರಿನ ಖಾತೆಯಿಂದ ಗಂಟೆಗಳಲ್ಲಿ ಸಾವಿರಾರು ಮಂದಿ ತಲುಪಿದ ಪೋಸ್ಟ್ ವೈರಲ್ ಆಗಿತ್ತು. ಸದ್ಯ ಧಮನಿತರ ಧ್ವನಿ ಎಲ್ಲರಿಗೂ ತಲುಪಿತಲ್ಲ ಎಂದು ನಿರಾತಂಕವಾದೆವು. ಆದರೆ, ನಮ್ಮ ನಿರೀಕ್ಷೆ ಕೆಲವೇ ನಿಮಿಷಗಳಲ್ಲಿ ಸುಳ್ಳಾಯಿತು.
ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ದಲಿತ ವಿರೋಧಿಗಳು ಈ ಸುದ್ದಿಯನ್ನು ಫೇಕ್ ಎಂದು ಕಮೆಂಟ್ ಮಾಡಿದರು. ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟು ರಿಪೋರ್ಟ್ ಮಾಡಿದರು. ಪರಿಣಾಮವಾಗಿ ಈ ಖಾತೆಯು ಬ್ಲಾಕ್ ಆಯಿತು. ಅಷ್ಟಕ್ಕೂ ನಾವು ಬರೆದ ಸುದ್ದಿ ಸುಳ್ಳಾಗಿರಲಿಲ್ಲ. ಇಂಡಿಯಾ ಟುಡೆ ಪೋರ್ಟಲ್ನಲ್ಲಿ ಬಂದ ಇದೇ ಸುದ್ದಿಯು ಟೈಮ್ಸ್ ಆಫ್ ಇಂಡಿಯಾ ಕೂಡ ಅಪ್ಲೋಡ್ ಮಾಡಿತ್ತು.
ಈ ಎರಡೂ ಪೋರ್ಟಲ್ನಲ್ಲಿ ಬಂದ ಸುದ್ದಿಯನ್ನು ಆಧಾರವಾಗಿಟ್ಟುಕೊಂಡು ಸುದ್ದಿ ಬರೆದಿದ್ದರೂ ನಾವೇ ಎಡವಿದೆವಾ ಎಂಬ ಅನುಮಾನದಿಂದ ಸುದ್ದಿಯನ್ನು ಖಚಿತಪಡಿಸಿಕೊಳ್ಳಲು ನಿರ್ಧರಿಸಿದೆವು. ಇದಕ್ಕಾಗಿ ಕೇರಳದ ಅಲಪ್ಪುಳ ಜಿಲ್ಲೆಯ ಜಿಲ್ಲಾಧಿಕಾರಿ ಸುಹಾಸ್ ಅವರನ್ನು ಸುದ್ದಿದಿನ ತಂಡ ಸಂಪರ್ಕಿಸಿತು. ಈ ವಿಷಯವನ್ನು ಅವರು ಖಚಿತಪಡಿಸಿದರೂ, ಹೆಚ್ಚು ಹೈಲೈಟ್ ಮಾಡದಂತೆ ಸುಹಾಸ್ ಸಲಹೆ ನೀಡಿದರೆ. ನಾವು ಅದನ್ನು ಗೌರವಿಸುತ್ತೇವೆ. ಆದರೆ, ಪ್ರವಾಹದಂಥ ಭೀಕರ ಪರಿಸ್ಥಿತಿಯಲ್ಲೂ ದಲಿತರನ್ನು ತುಳಿಯುವ ಮನೋಭಾವನೆಗೆ ನಮ್ಮ ವಿರೋಧವಿದೆ. ಖಾತೆ ಬ್ಲಾಕ್ ಆದರೆ, ಅದನ್ನು ಮತ್ತೆ ಪಡೆಯಬಹುದು. ನಮ್ಮನ್ನು ಫೇಸ್ಬುಕ್ನಿಂದ ಹೊರಗೆ ತಳ್ಳಿ ಸತ್ಯವನ್ನು ಬಚ್ಚಿಡುವ ಯತ್ನಕ್ಕೆ ನಾವು ಹೆದರುವುದಿಲ್ಲ. ಸಮಾಜದ ಮೂರನೇ ವರ್ಗದವರಿಗೂ ಧನಿಯಾಗುವುದು ಪತ್ರಿಕೋದ್ಯಮದ ಮೂಲ ಉದ್ದೇಶ. ಅದಕ್ಕೆ ಸುದ್ದಿದಿನ ಸದಾ ಬೆಂಬಲಿಸುತ್ತದೆ.
-ಸುದ್ದಿದಿನ

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243
